ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಇರಿ

ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಇರಿ

ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಇರಿ

“ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ [“ಅಮೂಲ್ಯವಾಗಿವೆ,” NW]; ಅವುಗಳ ಒಟ್ಟು ಅಸಂಖ್ಯವಾಗಿದೆ.”​—⁠ಕೀರ್ತನೆ 139:​17.

ಅದೊಂದು ಆಶ್ಚರ್ಯಕರವಾದ ಆವಿಷ್ಕಾರ! ಯೆರೂಸಲೇಮಿನಲ್ಲಿ ಯೆಹೋವನ ಆಲಯದ ದುರಸ್ತಿಕಾರ್ಯವು ನಡೆಯುತ್ತಿದ್ದಾಗ ಮಹಾಯಾಜಕ ಹಿಲ್ಕೀಯನಿಗೆ ಸಿಕ್ಕಿದ ಗ್ರಂಥವೇ ಅದು. ‘ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶದ ಗ್ರಂಥ’ ಅದಾಗಿತ್ತು. ಆ ಮೂಲ ಪ್ರತಿಯು ಸುಮಾರು 800 ವರುಷಗಳ ಹಿಂದೆ ಬರೆದು ಮುಗಿಸಲ್ಪಟ್ಟಿತು ಎಂಬುದರಲ್ಲಿ ಸಂದೇಹವಿರಲಿಲ್ಲ! ಅದನ್ನು ದೇವಭಯವಿದ್ದ ಅರಸ ಯೋಷೀಯನ ಮುಂದೆ ತಂದಿಡಲಾದಾಗ ಅವನಿಗೆ ಹೇಗನಿಸಿದ್ದಿರಬೇಕೆಂದು ಯೋಚಿಸಿ ನೋಡಿ. ಹೌದು, ಅವನು ಅದನ್ನು ಅಮೂಲ್ಯವಾಗಿ ಎಣಿಸಿದನು. ಅಷ್ಟೇ ಅಲ್ಲ, ಆ ಕೂಡಲೇ ಅದನ್ನು ಲೇಖಕ ಶಾಫಾನನಿಂದ ಗಟ್ಟಿಯಾಗಿ ಓದಿಸಿದನು.​—⁠2 ಪೂರ್ವಕಾಲ 34:​14-18.

2 ಇಂದು ಕೋಟ್ಯಂತರ ಜನರು ದೇವರ ವಾಕ್ಯವನ್ನು ಪೂರ್ತಿಯಾಗಿಯೊ ಆಂಶಿಕವಾಗಿಯೊ ಓದಬಲ್ಲರು. ಇದರಿಂದ ಬೈಬಲಿನ ಮೌಲ್ಯ, ಮಹತ್ವ ಕಡಿಮೆಯಾಗಿದೆ ಎಂದು ಹೇಳಸಾಧ್ಯವಿದೆಯೇ? ನಿಶ್ಚಯವಾಗಿ ಹಾಗೆ ಹೇಳಸಾಧ್ಯವಿಲ್ಲ! ಏಕೆಂದರೆ ಅದರಲ್ಲಿ ಅಡಕವಾಗಿರುವುದು ಸರ್ವಶಕ್ತನ ಆಲೋಚನೆಗಳಾಗಿವೆ. ಅವು ನಮ್ಮ ಪ್ರಯೋಜನಕ್ಕಾಗಿ ಬರೆಯಲ್ಪಟ್ಟಿವೆ. (2 ತಿಮೊಥೆಯ 3:16) ದೇವರ ವಾಕ್ಯದ ಬಗ್ಗೆ ತನಗಿರುವ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತ ಕೀರ್ತನೆಗಾರ ದಾವೀದನು ಬರೆದುದು: “ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ [“ಅಮೂಲ್ಯವಾಗಿವೆ,” NW]; ಅವುಗಳ ಒಟ್ಟು ಅಸಂಖ್ಯವಾಗಿದೆ.”​—⁠ಕೀರ್ತನೆ 139:17.

3 ಯೆಹೋವನಿಗಾಗಿ, ಆತನ ವಾಕ್ಯಕ್ಕಾಗಿ ಮತ್ತು ಸತ್ಯಾರಾಧನೆಗೆ ಆತನು ಮಾಡಿದ ಏರ್ಪಾಡಿಗಾಗಿ ದಾವೀದನಿಗಿದ್ದ ಕೃತಜ್ಞತೆ ಎಂದೂ ಕುಂದಿಹೋಗಲೇ ಇಲ್ಲ. ದಾವೀದನು ರಚಿಸಿದ ಅನೇಕ ಸೊಗಸಾದ ಕೀರ್ತನೆಗಳೇ ಅವನ ಆ ಅನಿಸಿಕೆಗಳನ್ನು ವ್ಯಕ್ತಪಡಿಸಿದವು. ಉದಾಹರಣೆಗೆ, ಕೀರ್ತನೆ 27:4ರಲ್ಲಿ ಅವನು ಬರೆದುದು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನೂ ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ [ಮಂದಿರವನ್ನು ಕೃತಜ್ಞತೆಯಿಂದ ನೋಡುವುದಕ್ಕೂ, NW] ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು.” ಮೂಲ ಹೀಬ್ರು ಭಾಷೆಯಲ್ಲಿ, ‘ಕೃತಜ್ಞತೆಯಿಂದ ನೋಡುವುದು’ ಎಂದರೆ ಧ್ಯಾನದಲ್ಲಿ ಕಾಲ ಕಳೆಯುವುದು, ಪರಿಶೀಲಿಸುವುದು, ಆಹ್ಲಾದ, ಮಹದಾನಂದ ಮತ್ತು ಶ್ಲಾಘನೆಯಿಂದ ನೋಡುವುದು ಎಂದರ್ಥ. ದಾವೀದನು ಆಧ್ಯಾತ್ಮಿಕವಾಗಿ ಗಾಢ ತಿಳುವಳಿಕೆಯುಳ್ಳವನು ಆಗಿದ್ದನೆಂಬುದು ವ್ಯಕ್ತ. ಅವನು ಯೆಹೋವನ ಆಧ್ಯಾತ್ಮಿಕ ಏರ್ಪಾಡುಗಳಿಗೆ ನಿಜವಾಗಿಯೂ ಕೃತಜ್ಞನಾಗಿದ್ದನು. ದೇವರು ತಿಳಿಯಪಡಿಸಿದ ಆಧ್ಯಾತ್ಮಿಕ ಸತ್ಯದ ಪ್ರತಿಯೊಂದು ತುತ್ತನ್ನೂ ಆನಂದದಿಂದ ಸವಿದವನಾಗಿದ್ದನು. ಕೃತಜ್ಞತೆ ತೋರಿಸುವುದರಲ್ಲಿ ಅವನಿಟ್ಟ ಮಾದರಿಯು ಅನುಕರಣಾರ್ಹವಾಗಿದೆ.​—⁠ಕೀರ್ತನೆ 19:​7-11.

ಬೈಬಲ್‌ ಸತ್ಯವನ್ನು ತಿಳಿದುಕೊಳ್ಳುವ ಸದವಕಾಶಕ್ಕಾಗಿ ಕೃತಜ್ಞರಾಗಿರಿ

4 ದೇವರ ವಾಕ್ಯದ ಸೂಕ್ಷ್ಮಪರಿಜ್ಞಾನವನ್ನು ಪಡೆದುಕೊಳ್ಳುವುದು, ಹೆಮ್ಮೆಯಿಂದ ಉಬ್ಬಿಕೊಳ್ಳುವಂತೆ ಮಾಡುವ ನಮ್ಮ ಬುದ್ಧಿಶಕ್ತಿಯ ಮೇಲಾಗಲಿ ಲೌಕಿಕ ಶಿಕ್ಷಣದ ಮೇಲಾಗಲಿ ಹೊಂದಿಕೊಂಡಿಲ್ಲ. ಬದಲಾಗಿ, ಅದು ಯೆಹೋವನು ತೋರಿಸುವ ಅಪಾತ್ರ ದಯೆಯ ಮೇಲೆ ಹೊಂದಿಕೊಂಡಿದೆ. ಅದನ್ನು ಆತನು ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯಿರುವ ಪ್ರಾಮಾಣಿಕ ಹೃದಯದ ದೀನ ಜನರಿಗೆ ಕೊಡುತ್ತಾನೆ. (ಮತ್ತಾಯ 5:3; 1 ಯೋಹಾನ 5:20) ಕೆಲವು ಮಂದಿ ಅಪರಿಪೂರ್ಣ ಮಾನವರ ಹೆಸರುಗಳು ಸ್ವರ್ಗದಲ್ಲಿ ಬರೆಯಲ್ಪಟ್ಟಿವೆ ಎಂಬ ನಿಜತ್ವದ ಕುರಿತು ಯೇಸು ಯೋಚಿಸಿದಾಗ, ‘ಆತನು ಪವಿತ್ರಾತ್ಮದ ಪ್ರೇರಣೆಯಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ​—⁠ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವದೇ ಒಳ್ಳೇದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.’​—⁠ಲೂಕ 10:​17-21.

5 ಯೇಸು ಹಾಗೆ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು. ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ ಎಂಬದಾಗಿ ನಿಮಗೆ ಹೇಳುತ್ತೇನೆ.” ಹೌದು, ತನ್ನ ನಂಬಿಗಸ್ತ ಹಿಂಬಾಲಕರಿಗೆ ತಿಳಿಯಪಡಿಸಲಾದ ರಾಜ್ಯ ಸತ್ಯಗಳನ್ನು ಅವರು ಹಗುರವಾಗಿ ತೆಗೆದುಕೊಳ್ಳಬಾರದೆಂದು ಯೇಸು ಪ್ರೋತ್ಸಾಹಿಸಿದನು. ಏಕೆಂದರೆ ಈ ಸತ್ಯಗಳನ್ನು ಮುಂಚೆ ಇದ್ದ ದೇವರ ಸೇವಕರಿಗೆ ತಿಳಿಯಪಡಿಸಿರಲಿಲ್ಲ. ಯೇಸುವಿನ ಸಮಯದಲ್ಲಿದ್ದ “ಜ್ಞಾನಿಗಳಿಗೂ ಬುದ್ಧಿವಂತರಿಗೂ” ತಿಳಿಯಪಡಿಸಿರಲಿಲ್ಲ.​—⁠ಲೂಕ 10:​23, 24.

6 ನಮ್ಮ ಈ ದಿನಗಳಲ್ಲಿ ದೈವಿಕ ಸತ್ಯಕ್ಕಾಗಿ ಕೃತಜ್ಞರಾಗಿರುವುದಕ್ಕೆ ನಮಗೆ ಇನ್ನೂ ಹೆಚ್ಚು ಕಾರಣಗಳಿವೆ. ಏಕೆಂದರೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮುಖೇನ ಯೆಹೋವನು ತನ್ನ ಜನರಿಗೆ ತನ್ನ ವಾಕ್ಯದ ಹೆಚ್ಚು ಗಹನವಾದ ಒಳನೋಟವನ್ನು ಕೊಟ್ಟಿರುತ್ತಾನೆ. (ಮತ್ತಾಯ 24:​45; ದಾನಿಯೇಲ 12:10) ಅಂತ್ಯಕಾಲದ ಕುರಿತು ಪ್ರವಾದಿ ದಾನಿಯೇಲನು, “ಬಹು ಜನರು ಅತ್ತಿತ್ತ ತಿರುಗುವರು, [ನಿಜ] ತಿಳುವಳಿಕೆಯು ಹೆಚ್ಚುವದು” ಎಂದು ಬರೆದನು. (ದಾನಿಯೇಲ 12:⁠4) ಇಂದು ದೇವರ ಜ್ಞಾನವು ‘ಹೆಚ್ಚಾಗಿದೆ’ ಮತ್ತು ಯೆಹೋವನ ಸೇವಕರು ಆಧ್ಯಾತ್ಮಿಕವಾಗಿ ಚೆನ್ನಾಗಿ ಉಣಿಸಲ್ಪಡುತ್ತಿದ್ದಾರೆ ಎಂಬುದನ್ನು ನೀವು ಒಪ್ಪುವುದಿಲ್ಲವೆ?

7 ದೇವಜನರ ಆಧ್ಯಾತ್ಮಿಕ ಸಮೃದ್ಧಿ ಹಾಗೂ ಮಹಾ ಬಾಬೆಲಿನಲ್ಲಿರುವ ಧಾರ್ಮಿಕ ಗಲಿಬಿಲಿಯ ಮಧ್ಯೆ ಎಷ್ಟೊಂದು ವೈದೃಶ್ಯವಿರುವುದನ್ನು ನಾವು ನೋಡುತ್ತೇವೆ! ಇದರ ಪರಿಣಾಮವಾಗಿ, ಸುಳ್ಳುಧರ್ಮದಲ್ಲಿ ಹತಾಶೆಗೊಂಡವರು ಇಲ್ಲವೆ ಅದನ್ನು ಹೇಸುವವರು ಸತ್ಯಾರಾಧನೆಯ ಕಡೆ ತಿರುಗುತ್ತಿದ್ದಾರೆ. ಅವರು, ‘[ಮಹಾ ಬಾಬೆಲಿನ] ಪಾಪಗಳಲ್ಲಿ ಪಾಲುಗಾರರಾಗಬಯಸದ’ ಅಥವಾ ‘ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಯಸದ’ ಕುರಿಸದೃಶರಾಗಿದ್ದಾರೆ. ಯೆಹೋವನೂ ಆತನ ಸೇವಕರೂ ಇಂಥವರೆಲ್ಲರನ್ನು ನಿಜ ಕ್ರೈಸ್ತ ಸಭೆಯೊಳಗೆ ಬರುವಂತೆ ಆಮಂತ್ರಿಸುತ್ತಾರೆ.​—⁠ಪ್ರಕಟನೆ 18:​2-4; 22:17.

ಕೃತಜ್ಞತಾಭಾವದವರು ದೇವರ ಬಳಿಗೆ ಹಿಂಡುಹಿಂಡಾಗಿ ಸೇರಿಬರುತ್ತಾರೆ

8 ಯೆಹೋವನು ತನ್ನ ಆಧ್ಯಾತ್ಮಿಕ ಆರಾಧನಾಲಯದ ಕುರಿತು ಹೀಗೆ ಮುಂತಿಳಿಸಿದನು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.” (ಹಗ್ಗಾಯ 2:⁠7) ಈ ಪ್ರವಾದನೆಯ ಒಂದು ಆಶ್ಚರ್ಯಕರವಾದ ನೆರವೇರಿಕೆಯು ಹಗ್ಗಾಯನ ದಿನಗಳಲ್ಲಾಯಿತು. ಆಗ ದೇವಜನರ ಪುನಸ್ಥಾಪಿತ ಜನಶೇಷವೊಂದು ಯೆರೂಸಲೇಮಿನಲ್ಲಿ ದೇವಾಲಯವನ್ನು ಪುನರ್ನಿರ್ಮಾಣ ಮಾಡಿತು. ಇಂದು ಹಗ್ಗಾಯನ ಮಾತುಗಳು ಯೆಹೋವನ ಮಹಾ ಆಧ್ಯಾತ್ಮಿಕಾಲಯದ ಸಂಬಂಧದಲ್ಲಿ ಇನ್ನೊಂದು ನೆರವೇರಿಕೆಯನ್ನು ಹೊಂದುತ್ತಿದೆ.

9 ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸಲು ಈಗಾಗಲೇ ಲಕ್ಷಾಂತರ ಜನರು ಕೂಡಿಬಂದಿರುತ್ತಾರೆ. ಪ್ರತಿ ವರ್ಷ ಎರಡು ಲಕ್ಷಗಳಿಗೂ ಅಧಿಕವಾಗಿ “ಸಮಸ್ತಜನಾಂಗಗಳ ಇಷ್ಟವಸ್ತುಗಳು” ಸೇರಿಬರುತ್ತಿದ್ದಾರೆ. (ಯೋಹಾನ 4:​23, 24, ಪರಿಶುದ್ಧ ಬೈಬಲ್‌) ಉದಾಹರಣೆಗೆ, 2006ನೇ ಸೇವಾ ವರ್ಷದ ಲೋಕವ್ಯಾಪಕ ವರದಿಯು 2,48,327 ಮಂದಿ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡದ್ದರ ಸಂಕೇತವಾಗಿ ದೀಕ್ಷಾಸ್ನಾನ ಹೊಂದಿದರೆಂದು ತೋರಿಸುತ್ತದೆ. ಅಂದರೆ ಪ್ರತಿದಿನ 680 ಮಂದಿ ಹೊಸಬರು ಬರುತ್ತಿದ್ದಾರೆ! ಸತ್ಯದ ಮೇಲೆ ಅವರಿಗಿರುವ ಪ್ರೀತಿ ಮತ್ತು ರಾಜ್ಯಘೋಷಕರಾಗಿ ಯೆಹೋವನನ್ನು ಸೇವಿಸುವ ಅವರ ಬಯಕೆಯು ನಿಜವಾಗಿಯೂ ಅವರನ್ನು ಆತನು ತನ್ನೆಡೆಗೆ ಸೆಳೆದಿದ್ದಾನೆಂಬುದಕ್ಕೆ ರುಜುವಾತನ್ನು ಕೊಡುತ್ತದೆ.​—⁠ಯೋಹಾನ 6:​44, 65.

10 ಇಷ್ಟು ಮಂದಿ ಪ್ರಾಮಾಣಿಕ ಹೃದಯದ ಜನರು ಸತ್ಯಕ್ಕೆ ಆಕರ್ಷಿತರಾದುದು ಏಕೆ? ಏಕೆಂದರೆ ಅವರು “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು” ಗ್ರಹಿಸಿದ ಕಾರಣವೇ. (ಮಲಾಕಿಯ 3:18) ವೇನ್‌ ಮತ್ತು ವರ್ಜಿನ್ಯ ಎಂಬ ದಂಪತಿಗಳ ಅನುಭವವನ್ನು ಪರಿಗಣಿಸಿರಿ. ಇವರು ಪ್ರಾಟೆಸ್ಟಂಟ್‌ ಚರ್ಚ್‌ಗೆ ಸೇರಿದವರಾಗಿದ್ದರು. ಅವರಿಗಿದ್ದ ಅನೇಕ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳೇ ಸಿಕ್ಕಿರಲಿಲ್ಲ. ಅವರು ಯುದ್ಧದ್ವೇಷಿಗಳು ಆಗಿದ್ದರಿಂದ ಪಾದ್ರಿ ವರ್ಗ ಸೈನಿಕರನ್ನೂ ಆಯುಧಗಳನ್ನೂ ಆಶೀರ್ವದಿಸುತ್ತಿದ್ದುದನ್ನು ನೋಡಿ ಗಲಿಬಿಲಿಗೊಂಡರು. ಇದು ಅವರ ಮನಸ್ಸನ್ನು ಕದಡಿತು. ಇವರಿಗೆ ವಯಸ್ಸಾದಂತೆ, ಚರ್ಚಿನವರು ತಮ್ಮನ್ನು ಅಲಕ್ಷಮಾಡುತ್ತಿದ್ದಾರೆಂದು ಗೊತ್ತಾಯಿತು. ವರ್ಜಿನ್ಯ ಅನೇಕ ವರ್ಷಕಾಲ ಚರ್ಚಿನಲ್ಲಿ ಸಂಡೇಸ್ಕೂಲ್‌ ಬೋಧಕಿಯಾಗಿದ್ದರೂ ಹೀಗಾಯಿತು. ಅವರು ಹೇಳಿದ್ದು: “ಯಾರೂ ನಮ್ಮನ್ನು ಬಂದು ನೋಡಲಿಲ್ಲ. ನಮ್ಮ ಆಧ್ಯಾತ್ಮಿಕ ಹಿತಕ್ಷೇಮದ ಬಗ್ಗೆ ಸಹ ಆಸಕ್ತಿನೇ ವಹಿಸಲಿಲ್ಲ. ಅವರಿಗೆ ಬೇಕಾಗಿದದ್ದು ನಮ್ಮ ಹಣ ಮಾತ್ರ. ನಮಗೆ ದಿಕ್ಕೇ ತೋಚದಂತಾಯಿತು.” ಅವರ ಚರ್ಚ್‌ ಸಲಿಂಗೀಕಾಮದ ವಿಷಯವನ್ನು ಸಹಿಸಿಕೊಂಡಾಗಲಂತೂ ಅವರಿಗೆ ಇನ್ನಷ್ಟೂ ಗಲಿಬಿಲಿಯಾಯಿತು.

11 ಈ ನಡುವೆ ವೇನ್‌ ಮತ್ತು ವರ್ಜಿನ್ಯರ ಮೊಮ್ಮಗಳು, ಬಳಿಕ ಮಗಳು ಸಹ ಯೆಹೋವನ ಸಾಕ್ಷಿಗಳಾದರು. ಆರಂಭದಲ್ಲಿ ಇದರ ಬಗ್ಗೆ ವೇನ್‌ ಮತ್ತು ವರ್ಜಿನ್ಯ ಅಸಮಾಧಾನಪಟ್ಟರು. ಬಳಿಕ ಅವರು ತಮ್ಮ ಮನಸ್ಸು ಬದಲಾಯಿಸಿ ಬೈಬಲ್‌ ಅಧ್ಯಯನಕ್ಕೆ ಸಮ್ಮತಿಸಿದರು. ವೇನ್‌ ಹೇಳುವುದು: “ಕಳೆದ 70 ವರುಷಗಳಲ್ಲಿ ನಾವು ಬೈಬಲಿನ ಕುರಿತು ಏನು ಕಲಿತುಕೊಂಡೆವೊ ಅದಕ್ಕಿಂತ ಎಷ್ಟೋ ಹೆಚ್ಚನ್ನು ಬರಿ ಮೂರೇ ತಿಂಗಳುಗಳಲ್ಲಿ ಕಲಿತುಕೊಂಡೆವು! ದೇವರ ಹೆಸರು ಯೆಹೋವ ಎಂದು ನಮಗೆ ತಿಳಿದಿರಲೇ ಇಲ್ಲ. ದೇವರ ರಾಜ್ಯ ಮತ್ತು ಪರದೈಸ್‌ ಭೂಮಿಯ ಕುರಿತಾಗಿಯೂ ನಮಗೇನೂ ತಿಳಿದಿರಲಿಲ್ಲ.” ಸ್ವಲ್ಪದರಲ್ಲಿ, ಈ ಯಥಾರ್ಥ ಮನಸ್ಸಿನ ದಂಪತಿಗಳು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಮತ್ತು ಶುಶ್ರೂಷೆಯಲ್ಲಿ ಭಾಗವಹಿಸಲು ತೊಡಗಿದರು. ವರ್ಜಿನ್ಯ ಹೇಳಿದ್ದು: “ಸತ್ಯವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂಬುದೇ ನಮ್ಮ ಆಶೆ.” ತಮ್ಮ 80ರ ವಯಸ್ಸಿನಲ್ಲಿರುವ ಇವರಿಬ್ಬರೂ 2005ರಲ್ಲಿ ದೀಕ್ಷಾಸ್ನಾನ ಹೊಂದಿದರು. “ನಾವು ಒಂದು ನಿಜ ಕ್ರೈಸ್ತ ಕುಟುಂಬವನ್ನು ಕಂಡುಕೊಂಡೆವು” ಎಂದರವರು.

‘ಸಕಲಸತ್ಕಾರ್ಯಕ್ಕೆ ಸನ್ನದ್ಧರು’ ಆಗಿರುವುದಕ್ಕೆ ಕೃತಜ್ಞತೆ ತೋರಿಸಿರಿ

12 ತನ್ನ ಚಿತ್ತವನ್ನು ಮಾಡಲಿಕ್ಕಾಗಿ ಯೆಹೋವನು ಸದಾ ತನ್ನ ಸೇವಕರಿಗೆ ಸಹಾಯ ನೀಡುತ್ತಾನೆ. ಉದಾಹರಣೆಗೆ, ನಾವೆಯನ್ನು ಹೇಗೆ ನಿರ್ಮಿಸಬೇಕೆಂದು ನಿರ್ದಿಷ್ಟವಾದ ಸ್ಪಷ್ಟ ಮಾಹಿತಿಯನ್ನು ನೋಹನು ಪಡೆದುಕೊಂಡನು. ಅದು ಪ್ರಥಮ ಬಾರಿಯಲ್ಲಿಯೇ ಕರಾರುವಕ್ಕಾಗಿ ಕಟ್ಟಬೇಕಾಗಿದ್ದ ಒಂದು ಕಾರ್ಯಯೋಜನೆಯಾಗಿತ್ತು! ಅದನ್ನು ಹಾಗೆಯೇ ಕರಾರುವಕ್ಕಾಗಿ ನಿರ್ಮಿಸಲಾಯಿತು. ಏಕೆ? ಏಕೆಂದರೆ, “ದೇವರು ಅಪ್ಪಣೆ ಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:​14-22) ಇಂದು ಕೂಡ ಯೆಹೋವನು ತನ್ನ ಚಿತ್ತವನ್ನು ಮಾಡಲು ತನ್ನ ಸೇವಕರನ್ನು ಪೂರ್ಣವಾಗಿ ಸಜ್ಜುಗೊಳಿಸುತ್ತಾನೆ. ಹೌದು, ನಮ್ಮ ಪ್ರಧಾನ ಕೆಲಸವು ದೇವರ ಸ್ಥಾಪಿತವಾದ ರಾಜ್ಯದ ಸುವಾರ್ತೆಯನ್ನು ಸಾರಿ, ಯೋಗ್ಯರಾದವರು ಯೇಸು ಕ್ರಿಸ್ತನ ಶಿಷ್ಯರಾಗುವಂತೆ ಸಹಾಯ ಮಾಡುವುದೇ ಆಗಿದೆ. ನೋಹನ ವಿಷಯದಲ್ಲಿ ನಿಜವಾದಂತೆ, ನಮ್ಮ ಯಶಸ್ವಿಯು ಸಹ ವಿಧೇಯತೆಯ ಮೇಲೆ ಹೊಂದಿಕೊಂಡಿರುತ್ತದೆ. ಆದುದರಿಂದ, ಯೆಹೋವನು ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ ಒದಗಿಸುವ ನಿರ್ದೇಶನವನ್ನು ನಾವು ವಿಧೇಯತೆಯಿಂದ ಪಾಲಿಸಬೇಕು.​—⁠ಮತ್ತಾಯ 24:14; 28:​19, 20.

13 ಆ ಪ್ರಧಾನ ಕೆಲಸವನ್ನು ನೆರವೇರಿಸಲು ನಮ್ಮ ಮುಖ್ಯ ಸಾಧನವಾದ ದೇವರ ವಾಕ್ಯವನ್ನು ನಾವು “ಸರಿಯಾಗಿ” ಉಪಯೋಗಿಸಲು ಕಲಿಯಬೇಕು. ದೇವರ ವಾಕ್ಯವು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 2:15; 3:​16, 17) ಪ್ರಥಮ ಶತಮಾನದಲ್ಲಿ ಅಮೂಲ್ಯ ತರಬೇತನ್ನು ಒದಗಿಸಿದಂತೆಯೇ ಯೆಹೋವನು ಇಂದು ಕ್ರೈಸ್ತ ಸಭೆಯ ಮುಖಾಂತರ ಅಮೂಲ್ಯ ತರಬೇತನ್ನು ನಮಗೆ ಕೊಡುತ್ತಿದ್ದಾನೆ. ಇಂದು, ನಮಗೆ ಶುಶ್ರೂಷೆಯಲ್ಲಿ ಸಹಾಯ ಮಾಡಲು ಲೋಕವ್ಯಾಪಕವಾಗಿರುವ 99,770 ಸಭೆಗಳಲ್ಲಿ ಪ್ರತಿವಾರವೂ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾಕೂಟಗಳನ್ನು ನಡೆಸಲಾಗುತ್ತದೆ. ನೀವು ಈ ಪ್ರಮುಖ ಕೂಟಗಳಿಗೆ ಕ್ರಮವಾಗಿ ಹಾಜರಾಗಿ ಅಲ್ಲಿ ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನಿಮ್ಮ ಕೃತಜ್ಞತೆಯನ್ನು ತೋರಿಸುತ್ತೀರೋ?​—⁠ಇಬ್ರಿಯ 10:​24, 25.

14 ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ದೇವಜನರು ಶ್ರಮಪಟ್ಟು ಶುಶ್ರೂಷೆಯನ್ನು ಮಾಡುತ್ತಾ ತಾವು ಪಡೆದುಕೊಳ್ಳುವ ತರಬೇತಿಗೆ ಕೃತಜ್ಞತೆಯನ್ನು ತೋರಿಸುತ್ತಿದ್ದಾರೆ. ಉದಾಹರಣೆಗೆ, 2006ರ ಸೇವಾ ವರ್ಷದಲ್ಲಿ 67,41,444 ಮಂದಿ ರಾಜ್ಯ ಪ್ರಚಾರಕರು ಒಟ್ಟು 133,39,66,199 ತಾಸುಗಳನ್ನು ಸೇವೆಯ ಎಲ್ಲ ವೈಶಿಷ್ಟ್ಯಗಳಲ್ಲಿ ಕಳೆದರು. ಇದರಲ್ಲಿ 62,86,618 ಮನೆ ಬೈಬಲ್‌ ಅಧ್ಯಯನಗಳ ನಡೆಸುವಿಕೆಯು ಸೇರಿದೆ. ಇವು ಲೋಕವ್ಯಾಪಕವಾಗಿ ಸಾಧಿಸಲಾದ ಕೆಲವು ವಿಷಯಗಳಾಗಿವೆ. ಪ್ರಥಮ ಶತಮಾನದಲ್ಲಿ ಸಾರುವ ಕೆಲಸ ವಿಸ್ತರಣೆಗೊಂಡ ವರದಿಗಳು ನಮ್ಮ ಸಹೋದರರನ್ನು ಪ್ರೋತ್ಸಾಹಿಸಿದಂತೆಯೇ ಇವು ನಮ್ಮನ್ನು ಪ್ರೋತ್ಸಾಹಿಸುತ್ತವೆ.​—⁠ಅ. ಕೃತ್ಯಗಳು 1:15; 2:​5-11, 41, 47; 4:4; 6:⁠7.

15 ಪ್ರತಿ ವರುಷವೂ ಯೆಹೋವನಿಗೆ ಪ್ರಚಂಡ ಸ್ತುತಿಘೋಷವು ಸಲ್ಲಿಸಲ್ಪಡುತ್ತಿದೆ. ಇದು, ಯೆಹೋವನನ್ನು ತಿಳಿದುಕೊಂಡು ಆತನ ಕುರಿತು ಸಾಕ್ಷಿ ನೀಡುವ ಸುಯೋಗಕ್ಕಾಗಿ ಆತನ ಸೇವಕರು ನಿಜವಾಗಿಯೂ ಕೃತಜ್ಞರಾಗಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. (ಯೆಶಾಯ 43:10) ವೃದ್ಧರಾಗಿರುವ, ಅಸ್ವಸ್ಥರಾಗಿರುವ ಅಥವಾ ದುರ್ಬಲರಾಗಿರುವ ನಮ್ಮ ಕೆಲವು ಸೋದರಸೋದರಿಯರು ಮಾಡುವ ಸ್ತೋತ್ರಯಜ್ಞಗಳನ್ನು ಆ ವಿಧವೆಯ ಎರಡು ಕಾಸಿಗೆ ಹೋಲಿಸಬಹುದು ನಿಜ. ಆದರೆ ತಮ್ಮಿಂದ ಸಾಧ್ಯವಾದುದನ್ನು ಮಾಡುತ್ತಾ ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವವರೆಲ್ಲರನ್ನು ಆತನು ಮತ್ತು ಆತನ ಕುಮಾರನು ನಿಜವಾಗಿಯೂ ಮಾನ್ಯಮಾಡುತ್ತಾರೆಂಬುದನ್ನು ನಾವು ಎಂದಿಗೂ ಮರೆಯದಿರೋಣ.​—⁠ಲೂಕ 21:​1-4; ಗಲಾತ್ಯ 6:⁠4.

16 ಯೆಹೋವನು ಇಂದು ನಮಗೆ ಶುಶ್ರೂಷೆಗಾಗಿ ತರಬೇತನ್ನು ಕೊಡುತ್ತಿದ್ದಾನೆ ಮಾತ್ರವಲ್ಲ ತನ್ನ ಸಂಘಟನೆಯ ಮೂಲಕ ನಮ್ಮನ್ನು ಉತ್ಕೃಷ್ಟ ಬೋಧನೋಪಕರಣಗಳಿಂದಲೂ ಸಜ್ಜುಗೊಳಿಸುತ್ತಿದ್ದಾನೆ. ಇತ್ತೀಚೆಗಿನ ದಶಕಗಳಲ್ಲಿ ಪಡೆದುಕೊಂಡ ನಿತ್ಯಜೀವಕ್ಕೆ ನಡೆಸುವ ಸತ್ಯ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಮತ್ತು ಇತ್ತೀಚಿಗಿನ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕಗಳು ಇದರಲ್ಲಿ ಸೇರಿವೆ. ಈ ಒದಗಿಸುವಿಕೆಗಳಿಗೆ ನಿಜವಾಗಿಯೂ ಕೃತಜ್ಞತೆ ತೋರಿಸುವವರು ಇವನ್ನು ಶುಶ್ರೂಷೆಯಲ್ಲಿ ಸದುಪಯೋಗಿಸುತ್ತಾರೆ.

ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಸದುಪಯೋಗಿಸಿರಿ

17ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ 19 ಅಧ್ಯಾಯಗಳು ಮತ್ತು ಸವಿವರವಾದ ಪರಿಶಿಷ್ಟವಿದೆ. ಈ ಸ್ಪಷ್ಟ ಮತ್ತು ಸರಳ ಭಾಷೆಯ ಪುಸ್ತಕವು ಶುಶ್ರೂಷೆಗಾಗಿ ನಿಜವಾಗಿಯೂ ಒಂದು ವರವಾಗಿದೆ. ಉದಾಹರಣೆಗೆ, 12ನೆಯ ಅಧ್ಯಾಯವು “ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು” ಎಂಬ ವಿಷಯವನ್ನು ಚರ್ಚಿಸುತ್ತದೆ. ಈ ಅಧ್ಯಾಯವು ವಿದ್ಯಾರ್ಥಿಗೆ ಅವನು ಹೇಗೆ ದೇವರ ಸ್ನೇಹಿತನಾಗಬಲ್ಲನು ಎಂದು ವಿವರಿಸುತ್ತದೆ. ಇದು ಅನೇಕರು ಹಿಂದೆಂದು ಯೋಚಿಸಿರದ ಇಲ್ಲವೆ ಸಾಧ್ಯವೆಂದು ನೆನಸಿರದ ವಿಷಯವಾಗಿದೆ. (ಯಾಕೋಬ 2:23) ಈ ಬೈಬಲ್‌ ಅಧ್ಯಯನ ಸಹಾಯಕದೆಡೆಗೆ ಜನರ ಪ್ರತಿಕ್ರಿಯೆ ಏನು?

18 ಆಸ್ಟ್ರೇಲಿಯದ ಸರ್ಕಿಟ್‌ ಮೇಲ್ವಿಚಾರಕರೊಬ್ಬರು ಹೇಳುವುದೇನಂದರೆ ಬೈಬಲ್‌ ಬೋಧಿಸುತ್ತದೆ ಪುಸ್ತಕಕ್ಕೆ “ಒಡನೆ ಮನೆಯವನನ್ನು ಸಂಭಾಷಣೆಗೆ ಸೆಳೆಯುವ ಗುಣವಿದೆ.” ಈ ಪುಸ್ತಕವನ್ನು ಬಳಸುವುದು ಎಷ್ಟು ಸುಲಭವೆಂದರೆ, “ಅದು ಅನೇಕ ರಾಜ್ಯ ಪ್ರಚಾರಕರಿಗೆ ಶುಶ್ರೂಷೆಯಲ್ಲಿನ ಭರವಸೆಯನ್ನು ನವೀಕರಿಸಿದೆ ಮತ್ತು ಆನಂದವನ್ನು ಕೊಟ್ಟಿದೆ. ಇದನ್ನು ಕೆಲವರು ಚಿನ್ನದ ಗಟ್ಟಿ ಎಂದು ಕರೆಯುವುದು ಆಶ್ಚರ್ಯವಲ್ಲ!” ಎನ್ನುತ್ತಾರೆ ಅವರು.

19 ಗಯಾನದ ಒಬ್ಬ ಸ್ತ್ರೀ ಆಕೆಯ ಮನೆಗೆ ಬಂದ ಪಯನೀಯರನಿಗೆ, “ದೇವರೇ ನಿಮ್ಮನ್ನು ಕಳುಹಿಸಿರಬೇಕು” ಎಂದು ಹೇಳಿದಳು. ಆಕೆಯೊಂದಿಗೆ ಜೀವಿಸುತ್ತಿದ್ದವನು ಇತ್ತೀಚೆಗೆ ಆಕೆಯನ್ನೂ ಆಕೆಯ ಇಬ್ಬರು ಮಕ್ಕಳನ್ನೂ ಬಿಟ್ಟುಹೋಗಿದ್ದನು. ಆಗ ಪಯನೀಯರನು ಬೈಬಲ್‌ ಬೋಧಿಸುತ್ತದೆ ಪುಸ್ತಕದ 1ನೆಯ ಅಧ್ಯಾಯವನ್ನು ತೆರೆದು, “ನಾವು ಎದುರಿಸುವ ಅನ್ಯಾಯಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ?” ಎಂಬ ಉಪಶೀರ್ಷಿಕೆಯ ಕೆಳಗಿನ 11ನೆಯ ಪ್ಯಾರವನ್ನು ಗಟ್ಟಿಯಾಗಿ ಓದಿದನು. ಆ ಪಯನೀಯರನು ಹೇಳುವುದು: “ಈ ವಿಷಯಗಳು ಆಕೆಯನ್ನು ಆಳವಾಗಿ ಸ್ಪರ್ಶಿಸಿದವು. ಎಷ್ಟೆಂದರೆ, ಆಕೆ ಎದ್ದು ಅಂಗಡಿಯ ಹಿಂಭಾಗಕ್ಕೆ ಹೋಗಿ ಜೋರಾಗಿ ಅತ್ತಳು.” ಬಳಿಕ ಆ ಸ್ತ್ರೀ ಸ್ಥಳಿಕ ಸಹೋದರಿಯೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಮಾಡಲು ಒಪ್ಪಿಕೊಂಡಳು. ಈಗ ಪ್ರಗತಿ ಹೊಂದುತ್ತ ಇದ್ದಾಳೆ.

20 ಸ್ಪೇನ್‌ನಲ್ಲಿ ಜೀವಿಸುತ್ತಿರುವ ಹೋಸೇ ಒಂದು ವಾಹನ ಅಪಘಾತದಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡನು. ಅವನು ಅಮಲೌಷಧಗಳ ಮೂಲಕ ಸಾಂತ್ವನ ಪಡೆಯಲು ಪ್ರಯತ್ನಿಸಿದನು. ಮನಶ್ಶಾಸ್ತ್ರಜ್ಞರ ಸಹಾಯವನ್ನೂ ಪಡೆದನು. ಅವನು ಅವರಿಗೆ “ನನ್ನ ಪತ್ನಿ ಸಾಯುವಂತೆ ದೇವರು ಬಿಟ್ಟದ್ದೇಕೆ?” ಎಂದು ಪ್ರಶ್ನಿಸಿದನು. ಹೋಸೇಯನ್ನು ಅತಿಯಾಗಿ ಗೊಂದಲಗೊಳಿಸಿದ ಈ ಪ್ರಶ್ನೆಗೆ ಅವರಿಗೆ ಉತ್ತರಿಸಲಾಗಲಿಲ್ಲ. ಒಂದು ದಿನ ಹೋಸೇ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಫ್ರಾಂಚೆಸ್ಕ್‌ನನ್ನು ಭೇಟಿಯಾದನು. ಆಗ ಫ್ರಾಂಚೆಸ್ಕ್‌, ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ “ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?” ಎಂಬ ಶೀರ್ಷಿಕೆಯುಳ್ಳ 11ನೇ ಅಧ್ಯಾಯವನ್ನು ಚರ್ಚಿಸುವಂತೆ ಸೂಚಿಸಿದನು. ಆ ಶಾಸ್ತ್ರೀಯ ವಿವರಣೆ, ಉಪಾಧ್ಯಾಯ ಮತ್ತು ವಿದ್ಯಾರ್ಥಿಯ ದೃಷ್ಟಾಂತವು ಹೋಸೇಯ ಮೇಲೆ ಆಳವಾಗಿ ಪ್ರಭಾವ ಬೀರಿತು. ಅವನು ಆಗ ಮನಃಪೂರ್ವಕವಾಗಿ ಅಧ್ಯಯನ ಮಾಡಲು ಆರಂಭಿಸಿದನು. ಅವನು ಸರ್ಕಿಟ್‌ ಸಮ್ಮೇಳನಕ್ಕೂ ಹಾಜರಾದನು. ಈಗ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುತ್ತಿದ್ದಾನೆ.

21 ಪೋಲೆಂಡ್‌ನ 40 ವಯಸ್ಸಿನ ರೋಮಾನ್‌ ಎಂಬ ವ್ಯಾಪಾರಿಗೆ ಯಾವಾಗಲೂ ದೇವರ ವಾಕ್ಯದ ಮೇಲೆ ಗೌರವವಿತ್ತು. ಆದರೆ ಅವನು ತನ್ನ ಕೆಲಸದಲ್ಲಿಯೇ ತೀರ ಕಾರ್ಯಮಗ್ನನಾಗಿದ್ದುದರಿಂದ ಅವನು ಒಂದು ನಿದಿಷ್ಟ ಹಂತದ ತನಕ ಮಾತ್ರ ಪ್ರಗತಿ ಮಾಡಿದನು. ಅವನು ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದಾಗ ಬೈಬಲ್‌ ಬೋಧಿಸುತ್ತದೆ ಪುಸ್ತಕದ ಒಂದು ಪ್ರತಿ ಅವನಿಗೆ ಸಿಕ್ಕಿತು. ಆ ಬಳಿಕ ಅವನು ಬಹಳವಾಗಿ ಪ್ರಗತಿಯನ್ನು ಮಾಡಿದನು. ಅವನು ಹೇಳುವುದು: “ಈ ಪುಸ್ತಕದಲ್ಲಿ ಬೈಬಲಿನ ಎಲ್ಲ ಮೂಲ ಬೋಧನೆಗಳು ಒಂದುಗೂಡಿ ಒಂದು ಜಿಗ್‌ ಚಿತ್ರಬಂಧದ ಹಾಗೆ ಪೂರ್ಣ ಚಿತ್ರವಾಗಿ ಪರಿಣಮಿಸುತ್ತದೆ.” ಈಗ ರೋಮಾನ್‌ ಕ್ರಮವಾಗಿ ಬೈಬಲ್‌ ಅಧ್ಯಯನ ಮಾಡಿ, ಉತ್ತಮ ರೀತಿಯಲ್ಲಿ ಪ್ರಗತಿ ಹೊಂದುತ್ತಿದ್ದಾನೆ.

ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಇರಿ

22 “ಬಿಡುಗಡೆಯು ಸಮೀಪವಿದೆ!” ಎಂಬ ರೋಮಾಂಚಕವಾದ ಜಿಲ್ಲಾ ಅಧಿವೇಶನಗಳಲ್ಲಿ ವಿವರಿಸಲಾದಂತೆ ನಿಜಕ್ರೈಸ್ತರು ದೇವರು ವಾಗ್ದಾನಿಸಿರುವ ಮತ್ತು ಯೇಸು ಕ್ರಿಸ್ತನ ಸುರಿಸಲ್ಪಟ್ಟ ರಕ್ತದ ಮೂಲಕ ಸಾಧ್ಯವಾಗಿರುವ “ನಿತ್ಯವಿಮೋಚನೆ”ಗಾಗಿ ಹಂಬಲಿಸುತ್ತಾರೆ. ಈ ಅಮೂಲ್ಯ ನಿರೀಕ್ಷೆಗಾಗಿ ನಮ್ಮ ಮನಃಪೂರ್ವಕ ಕೃತಜ್ಞತೆಯನ್ನು ಹೇಗೆ ತೋರಿಸಸಾಧ್ಯವಿದೆ? ಇದಕ್ಕಿರುವ ಉತ್ತಮ ಮಾರ್ಗವೆಂದರೆ, “ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ” ಶುದ್ಧೀಕರಿಸಲ್ಪಡುತ್ತ ಹೋಗುವುದೇ ಆಗಿದೆ.​—⁠ಇಬ್ರಿಯ 9:​12, 14.

23 ಸ್ವಾರ್ಥಿಗಳಾಗಿರುವಂತೆ ಬಾರಿ ಒತ್ತಡವು ಹೇರಲ್ಪಡುವ ಸಮಯವು ಇದಾಗಿದೆ. ಆದರೂ, ಈ ಸಮಯದಲ್ಲಿ ಅರವತ್ತು ಲಕ್ಷಗಳಿಗೂ ಹೆಚ್ಚು ಮಂದಿ ರಾಜ್ಯ ಘೋಷಕರು ತಾಳಿಕೊಳ್ಳುತ್ತಾ ದೇವರ ಸೇವೆಮಾಡುತ್ತಿರುವುದು ನಿಜವಾಗಿಯೂ ಒಂದು ಅದ್ಭುತ. ಯೆಹೋವನನ್ನು ಸೇವಿಸುವ ಗೌರವಕ್ಕೆ ಆತನ ಸೇವಕರು ಆಳವಾದ ಕೃತಜ್ಞತೆಯನ್ನು ತೋರಿಸುತ್ತಾರೆ ಮತ್ತು ಅವರು “ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು” ಅರಿತವರಾಗಿದ್ದಾರೆ ಎಂಬುದಕ್ಕೂ ಇದು ರುಜುವಾತಾಗಿದೆ. ಈ ಕೃತಜ್ಞತಾ ಮನೋಭಾವವನ್ನು ಸದಾ ಬೆಳಿಸಿಕೊಳ್ಳುತ್ತಾ ಇರಿ!​—⁠1 ಕೊರಿಂಥ 15:​58, ಕೀರ್ತನೆ 110:⁠3. (w07 2/1)

ನೀವು ಹೇಗೆ ಉತ್ತರಿಸುವಿರಿ?

• ದೇವರಿಗೂ ಆತನ ಆಧ್ಯಾತ್ಮಿಕ ಒದಗಿಸುವಿಕೆಗಳಿಗೂ ಕೃತಜ್ಞತೆ ತೋರಿಸುವ ವಿಷಯದಲ್ಲಿ ಕೀರ್ತನೆಗಾರನು ನಮಗೇನನ್ನು ಕಲಿಸುತ್ತಾನೆ?

ಹಗ್ಗಾಯ 2:7ರ ನುಡಿಗಳು ಇಂದು ಹೇಗೆ ನೆರವೇರುತ್ತಿವೆ?

• ತನ್ನನ್ನು ಕಾರ್ಯಸಾಧಕವಾಗಿ ಸೇವಿಸುವಂತೆ ಯೆಹೋವನು ತನ್ನ ಸೇವಕರನ್ನು ಹೇಗೆ ಸಜ್ಜುಗೊಳಿಸಿದ್ದಾನೆ?

• ಯೆಹೋವನ ಒಳ್ಳೇತನಕ್ಕೆ ಕೃತಜ್ಞತೆ ತೋರಿಸಲಿಕ್ಕಾಗಿ ನೀವೇನು ಮಾಡಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1, 2. ದೇವರ ವಾಕ್ಯಕ್ಕೆ ನಾವು ಏಕೆ ಕೃತಜ್ಞರಾಗಿರಬೇಕು ಮತ್ತು ಕೀರ್ತನೆಗಾರನು ತನ್ನ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಿದನು?

3. ದಾವೀದನು ಆಧ್ಯಾತ್ಮಿಕವಾಗಿ ಗಾಢ ತಿಳುವಳಿಕೆಯಿದ್ದ ವ್ಯಕ್ತಿಯೆಂಬುದನ್ನು ಯಾವುದು ತೋರಿಸುತ್ತದೆ?

4. ಯೇಸು ‘ಪವಿತ್ರಾತ್ಮದ ಪ್ರೇರಣೆಯಿಂದ ಉಲ್ಲಾಸಗೊಳ್ಳುವಂತೆ’ ಮಾಡಿದ್ದು ಯಾವುದು?

5. ಯೇಸುವಿನ ಶಿಷ್ಯರಿಗೆ ತಿಳಿಯಪಡಿಸಲಾದ ರಾಜ್ಯ ಸತ್ಯಗಳನ್ನು ಅವರೇಕೆ ಹಗುರವಾಗಿ ತೆಗೆದುಕೊಳ್ಳಬಾರದಿತ್ತು?

6, 7. (ಎ) ದೈವಿಕ ಸತ್ಯಕ್ಕಾಗಿ ಕೃತಜ್ಞರಾಗಿರುವುದಕ್ಕೆ ನಮಗೆ ಯಾವ ಕಾರಣಗಳಿವೆ? (ಬಿ) ಸತ್ಯ ಮತ್ತು ಸುಳ್ಳು ಧರ್ಮಗಳ ಮಧ್ಯೆ ಇಂದು ಯಾವ ವ್ಯತ್ಯಾಸವನ್ನು ಕಾಣಲಾಗುತ್ತದೆ?

8, 9. ಹಗ್ಗಾಯ 2:7ರ ಮಾತುಗಳು ಇಂದು ಹೇಗೆ ನೆರವೇರುತ್ತಿವೆ?

10, 11. ಜನರು ಬೈಬಲ್‌ ಸತ್ಯವನ್ನು ಮಾನ್ಯಮಾಡುತ್ತಿರುವುದರ ಬಗ್ಗೆ ಒಂದು ಅನುಭವವನ್ನು ತಿಳಿಸಿರಿ.

12. ಯೆಹೋವನು ತನ್ನ ಸೇವಕರಿಗೆ ಸದಾ ಏನನ್ನು ಒದಗಿಸುತ್ತಾನೆ ಮತ್ತು ಅದರಿಂದ ಪ್ರಯೋಜನ ಪಡೆಯಲು ನಾವೇನು ಮಾಡತಕ್ಕದ್ದು?

13. ಯಾವುದರ ಮೂಲಕ ಯೆಹೋವನು ನಮ್ಮನ್ನು ತರಬೇತುಗೊಳಿಸುತ್ತಿದ್ದಾನೆ?

14. ಯೆಹೋವನನ್ನು ಸೇವಿಸುವ ಸುಯೋಗಕ್ಕಾಗಿ ಆತನ ಸೇವಕರು ಹೇಗೆ ಕೃತಜ್ಞತೆಯನ್ನು ತೋರಿಸುತ್ತಿದ್ದಾರೆ?

15. ಯೆಹೋವನಿಗೆ ಸಲ್ಲಿಸುವ ತಮ್ಮ ಪೂರ್ಣಪ್ರಾಣದ ಸೇವೆಯ ಕುರಿತು ಯಾರೂ ನಿರುತ್ತೇಜನಗೊಳ್ಳಬಾರದೇಕೆ?

16. ಇತ್ತೀಚಿನ ಸಮಯಗಳಲ್ಲಿ ದೇವರು ಯಾವ ಬೋಧನೋಪಕರಣಗಳನ್ನು ಒದಗಿಸಿದ್ದಾನೆ?

17, 18. (ಎ) ನೀವು ನಿಮ್ಮ ಶುಶ್ರೂಷೆಯಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕದ ಯಾವ ಭಾಗವನ್ನು ಎತ್ತಿ ತೋರಿಸಬಯಸುತ್ತೀರಿ? (ಬಿ) ಬೈಬಲ್‌ ಬೋಧಿಸುತ್ತದೆ ಪುಸ್ತಕದ ವಿಷಯದಲ್ಲಿ ಒಬ್ಬ ಸರ್ಕಿಟ್‌ ಮೇಲ್ವಿಚಾರಕರು ಹೇಳಿದ್ದೇನು?

19-21. ಬೈಬಲ್‌ ಬೋಧಿಸುತ್ತದೆ ಪುಸ್ತಕದ ಮೌಲ್ಯವನ್ನು ಎತ್ತಿತೋರಿಸುವ ಕೆಲವು ಅನುಭವಗಳನ್ನು ತಿಳಿಸಿರಿ.

22, 23. ನಮ್ಮ ಮುಂದೆ ಇಡಲ್ಪಟ್ಟಿರುವ ನಿರೀಕ್ಷೆಗಾಗಿ ನಾವು ಹೇಗೆ ಸದಾ ಕೃತಜ್ಞತೆಯನ್ನು ತೋರಿಸಬಲ್ಲೆವು?

[ಪುಟ 29ರಲ್ಲಿರುವ ಚಿತ್ರಗಳು]

ನಾವು ಯೆಹೋವನ ಚಿತ್ತವನ್ನು ಮಾಡುವಂತೆ ಆತನು ನಮ್ಮನ್ನು ಪೂರ್ಣವಾಗಿ ಸಜ್ಜುಗೊಳಿಸುತ್ತಾನೆ