ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವು ನಿಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಲಿ

ದೇವರ ವಾಕ್ಯವು ನಿಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಲಿ

ದೇವರ ವಾಕ್ಯವು ನಿಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಲಿ

“ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.”​—⁠ಕೀರ್ತನೆ 119:105.

ನೀವು ಹೋಗಬೇಕಾಗಿದ್ದ ಸ್ಥಳಕ್ಕೆ ಹೇಗೆ ತಲಪುವುದೆಂದು ನಿರ್ದೇಶನಗಳನ್ನು ಕೇಳಬೇಕಾಗಿ ಬಂದ ಯಾವುದೇ ಸಂದರ್ಭ ನಿಮ್ಮ ನೆನಪಿಗೆ ಬರುತ್ತದೋ? ಬಹುಶಃ ನೀವು ಆ ಸಂದರ್ಭದಲ್ಲಿ, ತಲಪಬೇಕಾದ ಸ್ಥಳದ ಹತ್ತಿರದಲ್ಲಿದ್ದರೂ ಕೊನೆಯ ಕೆಲವೊಂದು ತಿರುವುಗಳ ಬಗ್ಗೆ ನಿಮಗೆ ಖಾತ್ರಿ ಇದ್ದಿರಲಿಕ್ಕಿಲ್ಲ. ಇಲ್ಲವೇ, ನೀವು ಪೂರ್ತಿಯಾಗಿ ದಾರಿತಪ್ಪಿಹೋಗಿ ನಿಮ್ಮ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸಬೇಕಾದ ಸಂದರ್ಭ ಅದಾಗಿದ್ದಿರಬಹುದು. ಆ ಎರಡೂ ಸಂದರ್ಭಗಳಲ್ಲಿ ಆ ಸ್ಥಳದ ಬಗ್ಗೆ ಒಳ್ಳೇ ಪರಿಚಯವಿದ್ದ ಒಬ್ಬ ವ್ಯಕ್ತಿ ನೀಡಿದ ನಿರ್ದೇಶನವನ್ನು ನೀವು ಪಾಲಿಸಿದ್ದಿರಬಹುದು. ಇದು ವಿವೇಕದ ಸಂಗತಿ ಆಗಿತ್ತು, ಅಲ್ಲವೇ? ಏಕೆಂದರೆ ನೀವು ಹೋಗಬೇಕಾಗಿದ್ದ ಸ್ಥಳವನ್ನು ತಲಪಲು ಅಂಥ ವ್ಯಕ್ತಿ ಮಾತ್ರ ನಿಮಗೆ ಸಹಾಯಮಾಡಲು ಶಕ್ತನಾಗಿದ್ದನು.

2 ಸಾವಿರಾರು ವರ್ಷಗಳಿಂದ ಮಾನವಕುಲದಲ್ಲಿ ಹೆಚ್ಚಿನವರು, ದೇವರ ಸಹಾಯವಿಲ್ಲದೆ ತಮ್ಮ ಜೀವನದಲ್ಲಿ ಮುಂದೆಸಾಗಲು ಪ್ರಯತ್ನಿಸಿದ್ದಾರೆ. ಆದರೆ ಮಾನವರು ಅಪರಿಪೂರ್ಣರಾಗಿರುವುದರಿಂದ ಅವರು ಯಾವುದೇ ಸಹಾಯವಿಲ್ಲದೆ, ತಮ್ಮಷ್ಟಕ್ಕೇ ಮುಂದೆ ಸಾಗುವಾಗ ಪೂರ್ತಿಯಾಗಿ ದಾರಿತಪ್ಪಿಹೋಗುತ್ತಾರೆ. ಮಾನವಕುಲದ ಗಮ್ಯಸ್ಥಾನವಾದ ನಿಜ ಸುಖಶಾಂತಿಗೆ ನಡೆಸುವ ಮಾರ್ಗವನ್ನು ಅವರು ಕಂಡುಕೊಳ್ಳಲಿಕ್ಕೇ ಶಕ್ತರಾಗಿಲ್ಲ. ಏಕೆ? ಇದರ ಕಾರಣವನ್ನು, ಪ್ರವಾದಿ ಯೆರೆಮೀಯನು ಸುಮಾರು 2,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಹೇಳಿದ ಮಾತುಗಳಲ್ಲಿ ಕಂಡುಕೊಳ್ಳಬಹುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಸಮರ್ಥ ಸಹಾಯವನ್ನು ಸ್ವೀಕರಿಸದೆ ತನ್ನಷ್ಟಕ್ಕೆ ಹೆಜ್ಜೆಯನ್ನಿಡಲು ಪ್ರಯತ್ನಿಸುವ ಯಾವುದೇ ಮನುಷ್ಯನು ಅನಿವಾರ್ಯವಾಗಿ ಆಶಾಭಂಗಗೊಳ್ಳುವನು. ಆದುದರಿಂದಲೇ ಮಾನವಕುಲಕ್ಕೆ ಖಂಡಿತವಾಗಿಯೂ ನಿರ್ದೇಶನದ ಅಗತ್ಯವಿದೆ!

3 ಅಂಥ ನಿರ್ದೇಶನವನ್ನು ಒದಗಿಸಲು ಯೆಹೋವ ದೇವರೇ ಅತ್ಯುನ್ನತ ರೀತಿಯಲ್ಲಿ ಸಮರ್ಥನು. ಏಕೆ? ಏಕೆಂದರೆ ಬೇರಾವನಿಗಿಂತಲೂ ಆತನೇ ಮಾನವರ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಶಕ್ತನು. ಅಲ್ಲದೆ, ಮಾನವಕುಲವು ಸರಿಯಾದ ಮಾರ್ಗದಿಂದ ಹೇಗೆ ಪಕ್ಕಕ್ಕೆ ಸರಿದು ದಾರಿತಪ್ಪಿಹೋಯಿತು ಎಂಬುದನ್ನು ಸಹ ಆತನು ಪೂರ್ಣವಾಗಿ ಅರಿತವನಾಗಿದ್ದಾನೆ. ಮಾನವರನ್ನು ಪುನಃ ಸರಿಯಾದ ಮಾರ್ಗಕ್ಕೆ ತರಲು ಏನು ಆವಶ್ಯಕ ಎಂಬುದೂ ಆತನಿಗೆ ತಿಳಿದಿದೆ. ಅಷ್ಟುಮಾತ್ರವಲ್ಲದೆ, ಯೆಹೋವನೇ ಸೃಷ್ಟಿಕರ್ತನಾಗಿರುವುದರಿಂದ ನಮಗೆ ಯಾವುದು ಅತ್ಯುತ್ತಮ ಎಂಬುದು ಆತನಿಗೆ ಯಾವಾಗಲೂ ತಿಳಿದಿದೆ. (ಯೆಶಾಯ 48:17) ಈ ಕಾರಣದಿಂದ ಕೀರ್ತನೆ 32:8ರಲ್ಲಿ ದಾಖಲಾಗಿರುವ ಆತನ ಈ ವಾಗ್ದಾನದಲ್ಲಿ ನಾವು ಪೂರ್ಣವಾಗಿ ಭರವಸೆಯಿಡಬಲ್ಲೆವು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” ಯೆಹೋವನೇ ಅತ್ಯುತ್ತಮ ನಿರ್ದೇಶನವನ್ನು ಕೊಡುತ್ತಾನೆ ಎಂಬ ವಿಷಯದಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಆದರೆ ಆತನು ನಮ್ಮನ್ನು ಮಾರ್ಗದರ್ಶಿಸುವುದು ಹೇಗೆ?

4 ಕೀರ್ತನೆಗಾರನೊಬ್ಬನು ಯೆಹೋವನಿಗೆ ಪ್ರಾರ್ಥನೆಯಲ್ಲಿ ಹೀಗಂದನು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಕೀರ್ತನೆ 119:105) ದೇವರ ಮಾತುಗಳು ಮತ್ತು ಮರುಜ್ಞಾಪನಗಳು ಬೈಬಲಿನಲ್ಲಿವೆ ಮತ್ತು ಇವು, ನಮ್ಮ ಜೀವನಮಾರ್ಗದಲ್ಲಿ ಎದುರಾಗುವ ತಡೆಗಳನ್ನು ದಾಟಲು ನಮಗೆ ಸಹಾಯಮಾಡಬಲ್ಲವು. ವಾಸ್ತವದಲ್ಲಿ, ನಾವು ಬೈಬಲನ್ನು ಓದಿ ಅದು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡುವಾಗ, ಯೆಶಾಯ 30:21ರಲ್ಲಿ ಏನನ್ನು ವರ್ಣಿಸಲಾಗಿದೆಯೋ ಅದನ್ನು ಸ್ವತಃ ಅನುಭವಿಸುತ್ತೇವೆ. ಆ ವಚನವು ಹೀಗನ್ನುತ್ತದೆ: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”

5 ದೇವರ ವಾಕ್ಯವು ಮಾಡುವಂಥ, ಪರಸ್ಪರ ಸಂಬಂಧವಿರುವ ಎರಡು ಕೆಲಸಗಳಿಗೆ ಕೀರ್ತನೆ 119:105 ಸೂಚಿಸುತ್ತದೆ ಎಂಬುದನ್ನು ಗಮನಿಸಿರಿ. ಮೊದಲನೆಯದಾಗಿ, ಅದು ನಮ್ಮ ಕಾಲಿಗೆ ದೀಪವಾಗಿದೆ. ಪ್ರತಿದಿನದ ಸಮಸ್ಯೆಗಳನ್ನು ನಾವು ಎದುರಿಸುವಾಗ, ಬೈಬಲಿನಲ್ಲಿರುವ ಮೂಲತತ್ತ್ವಗಳು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ಬಿಡಬೇಕು. ಆಗ ನಾವು ವಿವೇಕಭರಿತ ನಿರ್ಣಯಗಳನ್ನು ಮಾಡಬಲ್ಲೆವು ಮತ್ತು ಈ ಲೋಕದ ಪಾಶಗಳಿಂದ ತಪ್ಪಿಸಿಕೊಳ್ಳಬಲ್ಲೆವು. ಎರಡನೆಯದಾಗಿ, ದೇವರ ಮರುಜ್ಞಾಪನಗಳು ನಮ್ಮ ದಾರಿಗೆ ಬೆಳಕಾಗಿವೆ. ದೇವರ ವಾಗ್ದತ್ತ ಪರದೈಸಿನಲ್ಲಿ ಸದಾಕಾಲ ಜೀವಿಸುವ ನಮ್ಮ ನಿರೀಕ್ಷೆಗೆ ಹೊಂದಿಕೆಯಲ್ಲಿರುವಂಥ ಆಯ್ಕೆಗಳನ್ನು ಮಾಡಲು ಅವು ನಮಗೆ ಸಹಾಯಮಾಡುವವು. ನಮ್ಮ ಮುಂದಿರುವ ದಾರಿಯು ಬೆಳಗಿಸಲ್ಪಟ್ಟಿರುವುದರಿಂದ, ನಾವು ತೆಗೆದುಕೊಳ್ಳುವ ಒಂದು ನಿರ್ದಿಷ್ಟ ಹೆಜ್ಜೆಯ ಮುಂದಿನ ಪರಿಣಾಮಗಳು ಒಳ್ಳೇದಾಗಿರುವವೋ ಕೆಟ್ಟದ್ದಾಗಿರುವವೋ ಎಂಬುದನ್ನು ನಾವು ವಿವೇಚಿಸಲು ಶಕ್ತರಾಗಿರುವೆವು. (ರೋಮಾಪುರ 14:21; 1 ತಿಮೊಥೆಯ 6:9; ಪ್ರಕಟನೆ 22:12) ಬೈಬಲಿನಲ್ಲಿರುವ ದೇವರ ಮಾತುಗಳು ನಮ್ಮ ಕಾಲಿಗೆ ದೀಪವೂ ನಮ್ಮ ದಾರಿಗೆ ಬೆಳಕೂ ಆಗಿರುವುದು ಹೇಗೆ ಎಂಬುದನ್ನು ನಾವು ಹೆಚ್ಚು ವಿವರವಾಗಿ ನೋಡೋಣ.

“ನನ್ನ ಕಾಲಿಗೆ ದೀಪ”

6 ಪ್ರತಿದಿನವೂ ನಾವು ನಿರ್ಣಯಗಳನ್ನು ಮಾಡುತ್ತೇವೆ. ಕೆಲವು ನಿರ್ಣಯಗಳು ಚಿಕ್ಕಪುಟ್ಟದ್ದಾಗಿ ತೋರಬಹುದು. ಆದರೆ ಕೆಲವೊಮ್ಮೆ ನಮ್ಮ ನೈತಿಕತೆ, ನಮ್ಮ ಪ್ರಾಮಾಣಿಕತೆ ಅಥವಾ ನಮ್ಮ ತಟಸ್ಥ ನಿಲುವಿಗೆ ಸವಾಲೊಡ್ಡುವಂಥ ಒಂದು ಸನ್ನಿವೇಶವು ನಮಗೆ ಎದುರಾಗಬಹುದು. ಅಂಥ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲಿಕ್ಕಾಗಿ ನಾವು ನಮ್ಮ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದ”ವರಾಗಿರಬೇಕು. (ಇಬ್ರಿಯ 5:14) ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಗಳಿಸುವ ಮೂಲಕ ಮತ್ತು ಅದರ ಮೂಲತತ್ತ್ವಗಳ ತಿಳುವಳಿಕೆಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುತ್ತೇವೆ. ಇದರಿಂದಾಗಿ, ನಾವು ಯೆಹೋವನಿಗೆ ಮೆಚ್ಚಿಕೆಯಾಗುವಂಥ ನಿರ್ಣಯಗಳನ್ನು ಮಾಡಲು ಶಕ್ತರಾಗುತ್ತೇವೆ.​—⁠ಜ್ಞಾನೋಕ್ತಿ 3:⁠21.

7 ಒಂದು ಉದಾಹರಣೆ ತೆಗೆದುಕೊಳ್ಳಿ. ಯೆಹೋವನ ಮನಸ್ಸನ್ನು ಸಂತೋಷಪಡಿಸಲು ಯಥಾರ್ಥಮನಸ್ಸಿನಿಂದ ಪ್ರಯತ್ನಿಸುತ್ತಿರುವ ಒಬ್ಬ ವಯಸ್ಕರು ನೀವಾಗಿದ್ದೀರೋ? (ಜ್ಞಾನೋಕ್ತಿ 27:11) ಹಾಗಿರುವಲ್ಲಿ ನಿಮ್ಮನ್ನು ಶ್ಲಾಘಿಸುತ್ತೇವೆ. ಆದರೆ ಒಂದು ಕ್ಷಣ ಯೋಚಿಸಿ: ನಿಮ್ಮ ಕೆಲವು ಜೊತೆಕೆಲಸಗಾರರು ನೀವು ಅವರೊಂದಿಗೆ ಒಂದು ಕ್ರೀಡಾ ಸಮಾರಂಭಕ್ಕೆ ಬರುವಂತೆ ಆಮಂತ್ರಿಸುತ್ತಾ ಒಂದು ಟಿಕೇಟನ್ನು ಕೊಡುತ್ತಾರೆ. ಕೆಲಸದ ಸ್ಥಳದಲ್ಲಿನ ನಿಮ್ಮ ಒಡನಾಟ ಅವರಿಗೆ ತುಂಬ ಇಷ್ಟವಾಗುತ್ತದೆ, ಆದುದರಿಂದ ಹೊರಗೂ ನಿಮ್ಮೊಟ್ಟಿಗೆ ಕಾಲಕಳೆಯಲು ಬಯಸುತ್ತಾರೆ. ಇವರು ಕೆಟ್ಟ ಜನರಲ್ಲ ಎಂಬ ಬಲವಾದ ಅಭಿಪ್ರಾಯ ನಿಮಗಿರಬಹುದು. ಅವರಲ್ಲಿ ಒಳ್ಳೇ ಆದರ್ಶಗಳೂ ಇರಬಹುದು. ಆದುದರಿಂದ ಅವರು ನಿಮ್ಮನ್ನು ಆಮಂತ್ರಿಸುವಾಗ ನೀವೇನು ಮಾಡುವಿರಿ? ಅವರ ಆಮಂತ್ರಣವನ್ನು ಸ್ವೀಕರಿಸುವುದರಲ್ಲಿ ಏನಾದರೂ ಅಪಾಯವಿದೆಯೋ? ಈ ವಿಷಯದಲ್ಲಿ ನೀವು ಉತ್ತಮ ನಿರ್ಣಯ ಮಾಡುವಂತೆ ದೇವರ ವಾಕ್ಯ ಹೇಗೆ ಸಹಾಯಮಾಡಬಲ್ಲದು?

8 ಕೆಲವೊಂದು ಶಾಸ್ತ್ರಾಧಾರಿತ ಮೂಲತತ್ತ್ವಗಳನ್ನು ಪರಿಗಣಿಸಿರಿ. ಮನಸ್ಸಿಗೆ ಬರಬಹುದಾದ ಮೊದಲನೇ ಮೂಲತತ್ತ್ವವು 1 ಕೊರಿಂಥ 15:33ರಲ್ಲಿದೆ. ಅದನ್ನುವುದು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಈ ಮೂಲತತ್ತ್ವಕ್ಕೆ ಅಂಟಿಕೊಳ್ಳಲು ನೀವು ಎಲ್ಲ ಅವಿಶ್ವಾಸಿಗಳಿಂದ ಸಂಪೂರ್ಣವಾಗಿ ದೂರವಿರಬೇಕೋ? ‘ಇಲ್ಲ’ ಎಂಬುದು ಇದಕ್ಕೆ ಶಾಸ್ತ್ರಾಧಾರಿತ ಉತ್ತರವಾಗಿದೆ. ಸ್ವತಃ ಅಪೊಸ್ತಲ ಪೌಲನೇ ಅವಿಶ್ವಾಸಿಗಳನ್ನು ಒಳಗೂಡಿಸಿ ‘ಎಲ್ಲರಿಗೂ’ ಪ್ರೀತಿಪರ ಪರಿಗಣನೆಯನ್ನು ತೋರಿಸಿದನು. (1 ಕೊರಿಂಥ 9:⁠22, NIBV) ನಾವು ಇತರರಲ್ಲಿ, ಅಂದರೆ ನಾವೇನನ್ನು ನಂಬುತ್ತೇವೊ ಅದನ್ನು ನಂಬದ ಜನರಲ್ಲೂ ಆಸಕ್ತಿ ತೋರಿಸುವುದನ್ನು ಕ್ರೈಸ್ತತ್ವದ ಸತ್ತ್ವವು ಕೇಳಿಕೊಳ್ಳುತ್ತದೆ. (ರೋಮಾಪುರ 10:​13-15) ಸಹಾಯದ ಅಗತ್ಯವಿರುವ ಜನರಿಂದ ನಾವು ನಮ್ಮನ್ನೇ ದೂರವಿರಿಸಿಕೊಂಡರೆ, “ಎಲ್ಲರಿಗೆ ಒಳ್ಳೇದನ್ನು ಮಾಡೋಣ” ಎಂಬ ಸಲಹೆಯನ್ನು ಹೇಗೆ ತಾನೇ ಪಾಲಿಸಸಾಧ್ಯ?​—⁠ಗಲಾತ್ಯ 6:⁠10.

9 ಆದರೆ ಒಬ್ಬ ಜೊತೆಕೆಲಸಗಾರನೊಂದಿಗೆ ಸ್ನೇಹಪರರಾಗಿರುವುದು ಮತ್ತು ಅವನ ಆಪ್ತ ಒಡನಾಡಿಯಾಗಿರುವುದರ ಮಧ್ಯೆ ಬಹಳಷ್ಟು ವ್ಯತ್ಯಾಸವಿದೆ. ಇದರಲ್ಲಿ ಇನ್ನೊಂದು ಬೈಬಲ್‌ ಮೂಲತತ್ತ್ವವು ಒಳಗೂಡಿದೆ. ಅಪೊಸ್ತಲ ಪೌಲನು ಕ್ರೈಸ್ತರನ್ನು ಎಚ್ಚರಿಸಿದ್ದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ.” (2 ಕೊರಿಂಥ 6:14) “ಇಜ್ಜೋಡಾಗಬೇಡಿರಿ” ಎಂಬ ಪದದ ಅರ್ಥವೇನು? ಕೆಲವು ಬೈಬಲ್‌ ಭಾಷಾಂತರಗಳು ಈ ಪದವನ್ನು, “ಅವರ ಬಳಗದಲ್ಲಿ ಒಬ್ಬರಾಗಬೇಡಿ,” “ಅವರೊಂದಿಗೆ ಒಂದಾಗಬೇಡಿ,” ಅಥವಾ “ಅವರೊಂದಿಗೆ ಅನುಚಿತ ಸಂಬಂಧಗಳನ್ನು ರಚಿಸುವುದನ್ನು ನಿಲ್ಲಿಸಿ” ಎಂದು ಭಾಷಾಂತರಿಸುತ್ತವೆ. ಒಬ್ಬ ಜೊತೆಕೆಲಸಗಾರನೊಂದಿಗಿನ ಸಂಬಂಧವು ಯಾವ ಹಂತದಲ್ಲಿ ಅನುಚಿತವಾಗುತ್ತದೆ? ಅದು ಮೇರೆಯನ್ನು ದಾಟಿ ಇಜ್ಜೋಡಾಗುವಿಕೆ ಅಂದರೆ ಹೊಂದಿಕೆಯಿಲ್ಲದ ಜೋಡಣೆ ಆಗುವುದು ಯಾವಾಗ? ಈ ಸನ್ನಿವೇಶದಲ್ಲಿ ದೇವರ ವಾಕ್ಯವಾದ ಬೈಬಲ್‌ ನಿಮ್ಮ ಹೆಜ್ಜೆಯನ್ನು ಮಾರ್ಗದರ್ಶಿಸಬಲ್ಲದು.

10 ಯೇಸುವಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಮನುಷ್ಯರ ಸೃಷ್ಟಿಯಾದಂದಿನಿಂದ ಯೇಸು ಅವರಿಗಾಗಿ ಪ್ರೀತಿಯನ್ನು ಬೆಳೆಸಿಕೊಂಡಿದ್ದನು. (ಜ್ಞಾನೋಕ್ತಿ 8:31) ಭೂಮಿಯ ಮೇಲಿದ್ದಾಗ ಅವನು ತನ್ನ ಹಿಂಬಾಲಕರೊಂದಿಗೆ ಒಂದು ಆಪ್ತ ಬಂಧವನ್ನು ಬೆಸೆದನು. (ಯೋಹಾನ 13:⁠1) ಧಾರ್ಮಿಕವಾಗಿ ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ಸಹ ಅವನು ‘ಪ್ರೀತಿಸಿದನು.’ (ಮಾರ್ಕ 10:​17-22) ಆದರೆ, ಯಾರು ತನ್ನ ಆಪ್ತ ಒಡನಾಡಿಗಳಾಗಿರಬೇಕೆಂಬ ವಿಷಯದಲ್ಲಿ ಯೇಸು ಸ್ಪಷ್ಟವಾದ ಮೇರೆಗಳನ್ನೂ ಇಟ್ಟನು. ತನ್ನ ತಂದೆಯ ಚಿತ್ತವನ್ನು ಮಾಡುವ ವಿಷಯದಲ್ಲಿ ಯಥಾರ್ಥ ಆಸಕ್ತಿಯಿಲ್ಲದಿದ್ದ ಜನರೊಂದಿಗೆ ಅವನು ಯಾವುದೇ ಆಪ್ತ ಬಂಧಗಳನ್ನು ರಚಿಸಲಿಲ್ಲ. ಒಂದು ಸಂದರ್ಭದಲ್ಲಿ ಯೇಸು ತಿಳಿಸಿದ್ದು: “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು.” (ಯೋಹಾನ 15:14) ನೀವು ಒಬ್ಬ ನಿರ್ದಿಷ್ಟ ಜೊತೆಕೆಲಸಗಾರನೊಟ್ಟಿಗೆ ಸ್ನೇಹಪರರಾಗಿರಬಹುದು ನಿಜ. ಆದರೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯೇಸು ಏನನ್ನು ಆಜ್ಞಾಪಿಸಿದ್ದಾನೋ ಅದನ್ನು ಮಾಡಲು ಈ ವ್ಯಕ್ತಿ ಸಿದ್ಧನಿದ್ದಾನೋ? ಅವನಿಗೆ ಅಥವಾ ಅವಳಿಗೆ, ನಾವು ಯಾರನ್ನು ಆರಾಧಿಸಬೇಕೆಂದು ಯೇಸು ಹೇಳಿದನೋ ಆ ಯೆಹೋವ ದೇವರ ಬಗ್ಗೆ ಕಲಿಯುವ ಬಯಕೆ ಇದೆಯೋ? ಒಬ್ಬ ಕ್ರೈಸ್ತನಾಗಿ ನನಗಿರುವ ನೈತಿಕ ಮಟ್ಟಗಳೇ ಅವನಿಗೆ ಅಥವಾ ಅವಳಿಗಿದೆಯೋ?’ (ಮತ್ತಾಯ 4:10) ಈ ಪ್ರಶ್ನೆಗಳಿಗೆ ಉತ್ತರಗಳು, ನೀವು ನಿಮ್ಮ ಜೊತೆಕೆಲಸಗಾರರೊಂದಿಗೆ ಮಾತಾಡುವಾಗ ಮತ್ತು ಬೈಬಲ್‌ ಮಟ್ಟಗಳನ್ನು ಅನ್ವಯಿಸಿಕೊಳ್ಳಲು ಪಟ್ಟುಹಿಡಿಯುವಾಗ ಅವರು ತೋರಿಸುವ ಪ್ರತಿಕ್ರಿಯೆಯಿಂದ ಸ್ಪಷ್ಟವಾಗಿ ತೋರಿಬರುವವು.

11 ದೇವರ ಮಾತುಗಳು ನಮ್ಮ ಕಾಲಿಗೆ ದೀಪದಂತೆ ಇರಬಲ್ಲ ಇನ್ನೂ ಅನೇಕ ಸನ್ನಿವೇಶಗಳಿವೆ. ಉದಾಹರಣೆಗಾಗಿ, ಉದ್ಯೋಗವಿಲ್ಲದ ಒಬ್ಬ ಕ್ರೈಸ್ತನಿಗೆ ತುರ್ತಾಗಿ ಒಂದು ಉದ್ಯೋಗದ ಅಗತ್ಯವಿದೆ. ಅವನಿಗೊಂದು ಉದ್ಯೋಗವಕಾಶವೂ ಸಿಗುತ್ತದೆ, ಆದರೆ ಆ ಕೆಲಸವು ಅವನ ಎಲ್ಲ ಸಮಯ ಹಾಗೂ ಶಕ್ತಿಯನ್ನು ಕಬಳಿಸುವಂಥದ್ದಾಗಿದೆ. ಒಂದುವೇಳೆ ಅವನು ಆ ಉದ್ಯೋಗವನ್ನು ಸ್ವೀಕರಿಸುವಲ್ಲಿ ಅವನು ಅನೇಕ ಕ್ರೈಸ್ತ ಕೂಟಗಳನ್ನು ತಪ್ಪಿಸಬೇಕಾದೀತು ಮತ್ತು ಸತ್ಯಾರಾಧನೆಗೆ ಸಂಬಂಧಪಟ್ಟ ಇನ್ನಿತರ ಚಟುವಟಿಕೆಗಳಲ್ಲಿ ಅವನಿಗೆ ಪಾಲ್ಗೊಳ್ಳಲೂ ಸಾಧ್ಯವಾಗಲಿಕ್ಕಿಲ್ಲ. (ಕೀರ್ತನೆ 37:25) ಇನ್ನೊಬ್ಬ ಕ್ರೈಸ್ತನಿಗೆ, ಬೈಬಲ್‌ ಮೂಲತತ್ತ್ವಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವಂಥ ಮನೋರಂಜನೆಯನ್ನು ನೋಡುವ ಪ್ರಬಲವಾದ ಶೋಧನೆ ಬರಬಹುದು. (ಎಫೆಸ 4:​17-19) ಮತ್ತೊಬ್ಬನಿಗೆ ತನ್ನ ಜೊತೆ ವಿಶ್ವಾಸಿಗಳ ಅಪರಿಪೂರ್ಣತೆಗಳಿಂದಾಗಿ ಕೂಡಲೇ ಅಸಮಾಧಾನಗೊಳ್ಳುತ್ತಿರಬಹುದು. (ಕೊಲೊಸ್ಸೆ 3:13) ಈ ಎಲ್ಲ ಸನ್ನಿವೇಶಗಳಲ್ಲಿ ದೇವರ ವಾಕ್ಯವು ನಮ್ಮ ಕಾಲಿಗೆ ದೀಪವಾಗಿರುವಂತೆ ನಾವು ಅನುಮತಿಸಬೇಕು. ಬೈಬಲಿನ ಮೂಲತತ್ತ್ವಗಳನ್ನು ಅನುಸರಿಸುವ ಮೂಲಕ ನಾವು ಜೀವನದಲ್ಲಿ ಯಾವುದೇ ಸವಾಲನ್ನು ನಿಜವಾಗಿಯೂ ಯಶಸ್ವಿಯಾಗಿ ಎದುರಿಸಬಲ್ಲೆವು. ಏಕೆಂದರೆ ದೇವರ ವಾಕ್ಯವು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.”​—⁠2 ತಿಮೊಥೆಯ 3:⁠16.

‘ನನ್ನ ದಾರಿಗೆ ಬೆಳಕು’

12 ದೇವರ ಮಾತುಗಳು ನಮ್ಮ ದಾರಿಗೆ ಬೆಳಕಾಗಿರಬಲ್ಲವು, ಅಂದರೆ ನಮ್ಮ ಮುಂದಿನ ಹಾದಿಯನ್ನು ಬೆಳಗಿಸಬಲ್ಲವೆಂದೂ ಕೀರ್ತನೆ 119:105 ತಿಳಿಸುತ್ತದೆ. ಭವಿಷ್ಯದ ವಿಷಯದಲ್ಲಿ ನಾವು ಅಂಧಕಾರದಲ್ಲಿಲ್ಲ, ಏಕೆಂದರೆ ಲೋಕದ ಸಂಕಷ್ಟಕರ ಪರಿಸ್ಥಿತಿಗಳಿಗೆ ಕಾರಣವೇನು ಮತ್ತು ಅದರ ಫಲಿತಾಂಶ ಏನಾಗಿರುವುದೆಂದು ಬೈಬಲ್‌ ವಿವರಿಸುತ್ತದೆ. ಹೌದು, ಈ ದುಷ್ಟ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂಬುದನ್ನು ನಾವು ಮನಗಂಡಿದ್ದೇವೆ. (2 ತಿಮೊಥೆಯ 3:​1-5) ಮುಂದೆ ಏನು ಕಾದಿದೆ ಎಂಬುದರ ಬಗ್ಗೆ ನಮಗಿರುವ ಜ್ಞಾನವು, ನಾವು ಈಗ ಹೇಗೆ ಜೀವಿಸುತ್ತಿದ್ದೇವೆ ಎಂಬುದರ ಮೇಲೆ ಗಾಢ ಪರಿಣಾಮ ಬೀರಬೇಕು. ಅಪೊಸ್ತಲ ಪೇತ್ರನು ಬರೆದುದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.”​—⁠2 ಪೇತ್ರ 3:11, 12.

13 ನಮ್ಮ ಯೋಚನಾ ರೀತಿ ಮತ್ತು ಜೀವನಶೈಲಿಯು, “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ” ಎಂದು ನಮಗಿರುವ ದೃಢ ನಿಶ್ಚಿತಾಭಿಪ್ರಾಯವನ್ನು ಪ್ರತಿಬಿಂಬಿಸಬೇಕು. (1 ಯೋಹಾನ 2:17) ಬೈಬಲಿನ ನಿರ್ದೇಶನಗಳನ್ನು ಅನ್ವಯಿಸುವುದರಿಂದ, ನಮ್ಮ ಭವಿಷ್ಯದ ಗುರಿಗಳ ಬಗ್ಗೆ ವಿವೇಕಯುತ ನಿರ್ಣಯಗಳನ್ನು ಮಾಡಲು ನಮಗೆ ಸಹಾಯಸಿಗುವುದು. ಉದಾಹರಣೆಗಾಗಿ, ಯೇಸು ತಿಳಿಸಿದ್ದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ಅನೇಕ ಯುವಜನರು ಯೇಸುವಿನ ಈ ಮಾತುಗಳಲ್ಲಿ ನಂಬಿಕೆಯನ್ನು ತೋರಿಸುತ್ತಾ, ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ! ಇತರರು​—⁠ಕೆಲವೊಮ್ಮೆ ಇಡೀ ಕುಟುಂಬಗಳೇ​—⁠ರಾಜ್ಯ ಘೋಷಕರು ತುರ್ತಾಗಿ ಅಗತ್ಯವಿರುವ ಪ್ರದೇಶಗಳಿಗೆ ಸ್ಥಳಾಂತರಿಸಲು ಮುಂದೆಬಂದಿದ್ದಾರೆ.

14 ಉದಾಹರಣೆಗೆ, ನಾಲ್ಕು ಮಂದಿ ಸದಸ್ಯರುಳ್ಳ ಯುನೈಟೆಡ್‌ ಸ್ಟೇಟ್ಸ್‌ನ ಒಂದು ಕುಟುಂಬವನ್ನು ಪರಿಗಣಿಸಿರಿ. ಅವರು, ಡೊಮಿನಿಕನ್‌ ರಿಪಬ್ಲಿಕ್‌ ದೇಶಕ್ಕೆ ಸ್ಥಳಾಂತರಿಸಿ, 50,000 ಜನಸಂಖ್ಯೆಯಿರುವ ಒಂದು ಪಟ್ಟಣದಲ್ಲಿನ ಸಭೆಯೊಂದಿಗೆ ಸೇವೆಮಾಡಿದರು. ಈ ಸಭೆಯಲ್ಲಿ ಸುಮಾರು 130 ರಾಜ್ಯ ಪ್ರಚಾರಕರಿದ್ದಾರೆ. ಆದರೆ 2006ರ ಏಪ್ರಿಲ್‌ 12ರಂದು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾದವರ ಸಂಖ್ಯೆ 1,300 ಆಗಿತ್ತು! ಆ ಕ್ಷೇತ್ರದಲ್ಲಿರುವ ಹೊಲವು “ಬೆಳ್ಳಗಾಗಿ ಕೊಯ್ಲಿಗೆ” ಬಂದಿದೆ. ಎಷ್ಟರ ಮಟ್ಟಿಗೆ ಅಂದರೆ, ಕೇವಲ ಐದು ತಿಂಗಳಲ್ಲಿ ಈ ತಂದೆ, ತಾಯಿ, ಮಗ ಮತ್ತು ಮಗಳೂ ಸೇರಿ 30 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದರು. (ಯೋಹಾನ 4:35) ತಂದೆ ವಿವರಿಸುವುದು: “ಈ ಸಭೆಯಲ್ಲಿ ಬೇರೆ ಸ್ಥಳಗಳಿಂದ ಸಹಾಯಮಾಡಲಿಕ್ಕಾಗಿ ಬಂದಿರುವ 30 ಮಂದಿ ಸಹೋದರ ಸಹೋದರಿಯರಿದ್ದಾರೆ. ಇವರಲ್ಲಿ 20 ಮಂದಿ ಯುನೈಟೆಡ್‌ ಸ್ಟೇಟ್ಸ್‌ನಿಂದ ಬಂದಿದ್ದಾರೆ. ಉಳಿದವರು ಇಟಲಿ, ಕೆನಡ, ಬಹಾಮಾಸ್‌, ನ್ಯೂ ಸೀಲೆಂಡ್‌ ಮತ್ತು ಸ್ಪೆಯ್ನ್‌ನಿಂದ ಬಂದಿದ್ದಾರೆ. ಅವರು ಶುಶ್ರೂಷೆಯಲ್ಲಿ ತೊಡಗಲಿಕ್ಕಾಗಿ ಉತ್ಸುಕತೆಯಿಂದ ಬರುತ್ತಾರೆ, ಮತ್ತು ಸ್ಥಳಿಕ ಸಹೋದರರ ಉತ್ಸಾಹಕ್ಕೆ ಬಹಳಷ್ಟು ಪುಷ್ಟಿಯನ್ನು ಕೊಟ್ಟಿದ್ದಾರೆ.”

15 ರಾಜ್ಯ ಘೋಷಕರ ಅಗತ್ಯವಿರುವ ಬೇರೊಂದು ಸ್ಥಳಕ್ಕೆ ಹೋಗಿ ಸೇವೆಮಾಡುವುದನ್ನು ಅನೇಕರ ಪರಿಸ್ಥಿತಿಗಳು ಅನುಮತಿಸುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಶುಶ್ರೂಷೆಯ ಈ ವೈಶಿಷ್ಟ್ಯದಲ್ಲಿ ಭಾಗವಹಿಸಲು ಶಕ್ತರಾಗಿರುವವರು​—⁠ಅಥವಾ ಹಾಗೆ ಮಾಡಲು ತಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳಲು ಶಕ್ತರಾಗಿರುವವರು​—⁠ಎಣಿಸಲಾಗದಷ್ಟು ಆಶೀರ್ವಾದಗಳನ್ನು ಖಂಡಿತವಾಗಿಯೂ ಅನುಭವಿಸುವರು. ಆದರೆ ನೀವು ಎಲ್ಲಿಯೇ ಸೇವೆಮಾಡುತ್ತಿರಲಿ, ನಿಮ್ಮ ಪೂರ್ಣ ಬಲದಿಂದ ಯೆಹೋವನ ಸೇವೆಮಾಡುವಾಗ ನಿಮಗೆ ಆನಂದ ಸಿಗಬಲ್ಲದು. ಈ ಆನಂದದಿಂದ ಎಂದೂ ವಂಚಿತರಾಗದಿರ್ರಿ. ನಿಮ್ಮ ಜೀವನದಲ್ಲಿ ರಾಜ್ಯ ಅಭಿರುಚಿಗಳನ್ನು ಪ್ರಥಮವಾಗಿಟ್ಟರೆ, ಯೆಹೋವನು “ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿ”ಯುವನೆಂಬ ಮಾತುಕೊಡುತ್ತಾನೆ.​—⁠ಮಲಾಕಿಯ 3:⁠10.

ಯೆಹೋವನ ಮಾರ್ಗದರ್ಶನದಿಂದ ಪ್ರಯೋಜನಹೊಂದುವುದು

16 ನಾವೀಗಲೇ ನೋಡಿರುವಂತೆ ಯೆಹೋವನ ಮಾತುಗಳು, ಪರಸ್ಪರ ಸಂಬಂಧವಿರುವ ಎರಡು ವಿಧಗಳಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತವೆ. ಅವು ನಮ್ಮ ಕಾಲಿಗೆ ದೀಪದಂತಿದ್ದು, ನಾವು ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗುವಂತೆ ಸಹಾಯಮಾಡುತ್ತವೆ ಮತ್ತು ನಾವು ನಿರ್ಣಯಗಳನ್ನು ಮಾಡಬೇಕಾದಾಗ ನಮ್ಮನ್ನು ಮಾರ್ಗದರ್ಶಿಸುತ್ತವೆ. ಅಲ್ಲದೆ, ಅವು ನಮ್ಮ ದಾರಿಯನ್ನು ಬೆಳಗಿಸುತ್ತಾ ಮುಂದೇನಿದೆ ಎಂಬುದನ್ನು ಸ್ಪಷ್ಟವಾಗಿ ನೋಡುವಂತೆ ನಮ್ಮನ್ನು ಶಕ್ತಗೊಳಿಸುತ್ತವೆ. ಇದು, ನಾವು ಪೇತ್ರನ ಬುದ್ಧಿಮಾತನ್ನು ಪಾಲಿಸುವಂತೆ ಸಹಾಯಮಾಡುತ್ತದೆ: “ನೀವು ಮನಸ್ಸಿನ ನಡುವನ್ನು ಕಟ್ಟಿಕೊಂಡು ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಭಾಗ್ಯದ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.”​—⁠1 ಪೇತ್ರ 1:⁠13.

17 ಯೆಹೋವನು ಮಾರ್ಗದರ್ಶನವನ್ನು ಒದಗಿಸುತ್ತಾನೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಪ್ರಶ್ನೆಯೇನೆಂದರೆ, ನೀವು ಅದರಂತೆ ನಡೆಯುವಿರೋ? ಯೆಹೋವನು ಒದಗಿಸುವಂಥ ನಿರ್ದೇಶನವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಬೈಬಲಿನ ಒಂದು ಭಾಗವನ್ನು ಪ್ರತಿದಿನ ಓದುವ ದೃಢಸಂಕಲ್ಪ ಮಾಡಿರಿ. ನೀವೇನು ಓದುತ್ತೀರೋ ಅದರ ಕುರಿತಾಗಿ ಧ್ಯಾನಿಸಿರಿ, ವಿಷಯಗಳ ಕುರಿತು ಯೆಹೋವನ ಚಿತ್ತವೇನಾಗಿದೆ ಎಂಬುದನ್ನು ಗ್ರಹಿಸಲು ಪ್ರಯತ್ನಿಸಿ ಮತ್ತು ಆ ಮಾಹಿತಿಯನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಬಹುದಾದ ವಿಭಿನ್ನ ವಿಧಗಳ ಕುರಿತು ಯೋಚಿಸಿರಿ. (1 ತಿಮೊಥೆಯ 4:15) ತದನಂತರ, ಮಾಡಬೇಕಾದ ವೈಯಕ್ತಿಕ ನಿರ್ಣಯಗಳನ್ನು “ವಿವೇಕಪೂರ್ವಕ”ವಾಗಿ ಮಾಡಿರಿ.​—⁠ರೋಮಾಪುರ 12:⁠1.

18 ದೇವರ ವಾಕ್ಯದಲ್ಲಿರುವ ಮೂಲತತ್ತ್ವಗಳು ನಮ್ಮನ್ನು ಜ್ಞಾನೋದಯಗೊಳಿಸಿ, ನಾವು ಯಾವ ಮಾರ್ಗಕ್ರಮವನ್ನು ಅನುಸರಿಸಬೇಕೆಂಬುದರ ಬಗ್ಗೆ ನಿರ್ಣಯಗಳನ್ನು ಮಾಡಲಿಕ್ಕಾಗಿ ಅಗತ್ಯವಿರುವ ಮಾರ್ಗದರ್ಶನವನ್ನು ಕೊಡುವವು. ಆದರೆ ಅದು ಹಾಗೆ ಮಾಡುವಂತೆ ನಾವು ಅನುಮತಿಸಬೇಕು. ದಾಖಲಿಸಿಡಲಾಗಿರುವ ಯೆಹೋವನ ಮಾತುಗಳು “ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ” ಎಂಬ ವಿಷಯದಲ್ಲಿ ನಾವು ದೃಢಭರವಸೆಯಿಂದಿರಬಲ್ಲೆವು. (ಕೀರ್ತನೆ 19:7) ಬೈಬಲ್‌ ನಮ್ಮನ್ನು ಮಾರ್ಗದರ್ಶಿಸುವಂತೆ ನಾವು ಅನುಮತಿಸುವಾಗ, ನಮಗೊಂದು ಶುದ್ಧ ಮನಸ್ಸಾಕ್ಷಿ ಇರುವುದು ಮತ್ತು ಯೆಹೋವನನ್ನು ಸಂತೋಷಪಡಿಸುತ್ತಿದ್ದೇವೆ ಎಂಬ ತೃಪ್ತಿಯೂ ಇರುವುದು. (1 ತಿಮೊಥೆಯ 1:​18, 19) ದೇವರ ಮಾತುಗಳು ಪ್ರತಿದಿನವೂ ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ನಾವು ಅನುಮತಿಸುವಲ್ಲಿ, ಯೆಹೋವನು ನಮಗೆ ಕಟ್ಟಕಡೆಯ ಆಶೀರ್ವಾದವಾದ ನಿತ್ಯ ಜೀವವೆಂಬ ಪ್ರತಿಫಲ ಕೊಡುವನು.​—⁠ಯೋಹಾನ 17:⁠3. (w07 5/1)

ನಿಮಗೆ ಜ್ಞಾಪಕವಿದೆಯೋ?

• ಯೆಹೋವ ದೇವರು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ಬಿಡುವುದು ಏಕೆ ಪ್ರಾಮುಖ್ಯ?

• ದೇವರ ಮಾತುಗಳು ಹೇಗೆ ನಮ್ಮ ಕಾಲಿಗೆ ದೀಪವಾಗಿರಬಲ್ಲವು?

• ದೇವರ ಮಾತುಗಳು ಹೇಗೆ ನಮ್ಮ ದಾರಿಗೆ ಬೆಳಕಾಗಿರಬಲ್ಲವು?

• ನಾವು ದೇವರ ನಿರ್ದೇಶನವನ್ನು ಅನುಸರಿಸುವಂತೆ ಬೈಬಲಿನ ಅಧ್ಯಯನವು ಹೇಗೆ ಸಹಾಯಮಾಡುವುದು?

[ಅಧ್ಯಯನ ಪ್ರಶ್ನೆಗಳು]

1, 2. ಮಾನವರು ನಿಜ ಸುಖಶಾಂತಿಯನ್ನು ಏಕೆ ಕಂಡುಕೊಳ್ಳಲು ಶಕ್ತರಾಗಿಲ್ಲ?

3. ಮಾನವಕುಲಕ್ಕೆ ನಿರ್ದೇಶನವನ್ನು ಕೊಡಲು ಯೆಹೋವ ದೇವರು ಅತ್ಯುನ್ನತ ರೀತಿಯಲ್ಲಿ ಸಮರ್ಥನಾಗಿರುವುದು ಏಕೆ, ಮತ್ತು ಆತನು ಏನನ್ನು ವಾಗ್ದಾನಿಸಿದ್ದಾನೆ?

4, 5. ದೇವರ ಮಾತುಗಳು ನಮ್ಮನ್ನು ಹೇಗೆ ನಿರ್ದೇಶಿಸಬಲ್ಲವು?

6. ಯಾವ ಪರಿಸ್ಥಿತಿಗಳಲ್ಲಿ ದೇವರ ಮಾತುಗಳು ನಮ್ಮ ಕಾಲಿಗೆ ದೀಪವಾಗಿರಬಲ್ಲವು?

7. ಒಬ್ಬ ಕ್ರೈಸ್ತನು, ಅವಿಶ್ವಾಸಿ ಜೊತೆಕೆಲಸಗಾರರೊಂದಿಗೆ ಸಹವಾಸಮಾಡಲು ಪ್ರೇರಿಸಲ್ಪಡಬಹುದಾದ ಒಂದು ಸನ್ನಿವೇಶವನ್ನು ವರ್ಣಿಸಿರಿ.

8. ಸಹವಾಸದ ಕುರಿತಾಗಿ ವಿವೇಚಿಸುವಂತೆ ಯಾವ ಶಾಸ್ತ್ರಾಧಾರಿತ ಮೂಲತತ್ತ್ವಗಳು ನಮಗೆ ಸಹಾಯಮಾಡಬಲ್ಲವು?

9. ಜೊತೆಕೆಲಸಗಾರರೊಂದಿಗಿನ ನಮ್ಮ ಸಂಬಂಧದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಬೈಬಲಿನ ಯಾವ ಸಲಹೆ ಸಹಾಯಮಾಡುತ್ತದೆ?

10. (ಎ) ಯೇಸು ತನ್ನ ಒಡನಾಡಿಗಳನ್ನು ಹೇಗೆ ಆರಿಸಿಕೊಂಡನು? (ಬಿ) ಒಬ್ಬ ವ್ಯಕ್ತಿ ತನ್ನ ಸಹವಾಸಿಗಳ ಬಗ್ಗೆ ಒಳ್ಳೇ ನಿರ್ಣಯಗಳನ್ನು ಮಾಡುವಂತೆ ಯಾವ ಪ್ರಶ್ನೆಗಳು ಸಹಾಯಮಾಡಬಲ್ಲವು?

11. ದೇವರ ಮಾತುಗಳು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಬೇಕಾದ ಸನ್ನಿವೇಶಗಳ ಉದಾಹರಣೆಗಳನ್ನು ಕೊಡಿ.

12. ದೇವರ ಮಾತುಗಳು ನಮ್ಮ ದಾರಿಗೆ ಬೆಳಕಾಗಿರುವುದು ಹೇಗೆ?

13. ನಾವು ಜೀವಿಸುತ್ತಿರುವ ಈ ಸಮಯವು ತುರ್ತಿನದ್ದಾಗಿದೆಯೆಂಬ ಸಂಗತಿಯು ನಮ್ಮ ಯೋಚನಾ ರೀತಿ ಹಾಗೂ ಜೀವನಶೈಲಿಯನ್ನು ಹೇಗೆ ಪ್ರಭಾವಿಸಬೇಕು?

14. ಒಂದು ಕ್ರೈಸ್ತ ಕುಟುಂಬವು ಅದರ ಶುಶ್ರೂಷೆಯನ್ನು ಹೇಗೆ ವಿಸ್ತರಿಸಿತು?

15. ನಿಮ್ಮ ಜೀವನದಲ್ಲಿ ರಾಜ್ಯ ಅಭಿರುಚಿಗಳನ್ನು ಪ್ರಥಮವಾಗಿಟ್ಟ ಕಾರಣ ನೀವು ಯಾವ ಆಶೀರ್ವಾದಗಳನ್ನು ಆನಂದಿಸಿದ್ದೀರಿ?

16. ದೇವರ ಮಾತುಗಳು ನಮ್ಮನ್ನು ಮಾರ್ಗದರ್ಶಿಸುವಂತೆ ಅನುಮತಿಸುವ ಮೂಲಕ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?

17. ಬೈಬಲಿನ ಅಧ್ಯಯನವು ನಾವು ದೇವರ ನಿರ್ದೇಶನವನ್ನು ಅನುಸರಿಸುವಂತೆ ಹೇಗೆ ಸಹಾಯಮಾಡಬಲ್ಲದು?

18. ದೇವರ ವಾಕ್ಯವು ನಮ್ಮನ್ನು ಮಾರ್ಗದರ್ಶಿಸುವಂತೆ ನಾವು ಅನುಮತಿಸುವಾಗ ನಮಗೆ ಯಾವ ಆಶೀರ್ವಾದಗಳು ಸಿಗುವವು?

[ಪುಟ 19ರಲ್ಲಿರುವ ಚಿತ್ರ]

ಒಬ್ಬ ಅವಿಶ್ವಾಸಿಯೊಂದಿಗಿನ ಸಹವಾಸವು ಯಾವ ಹಂತದಲ್ಲಿ ವಿವೇಕಹೀನವಾಗುತ್ತದೆ?

[ಪುಟ 20ರಲ್ಲಿರುವ ಚಿತ್ರ]

ಯೇಸುವಿನ ಆಪ್ತ ಒಡನಾಡಿಗಳು ಯೆಹೋವನ ಚಿತ್ತವನ್ನು ಮಾಡುವವರಾಗಿದ್ದರು

[ಪುಟ 21ರಲ್ಲಿರುವ ಚಿತ್ರಗಳು]

ನಾವು ರಾಜ್ಯ ಅಭಿರುಚಿಗಳನ್ನು ಪ್ರಥಮವಾಗಿಡುತ್ತೇವೆ ಎಂದು ನಮ್ಮ ಜೀವನಶೈಲಿ ತೋರಿಸುತ್ತದೋ?