ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಲಾಪಗಳು ಪುಸ್ತಕದ ಮುಖ್ಯಾಂಶಗಳು

ಪ್ರಲಾಪಗಳು ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಪ್ರಲಾಪಗಳು ಪುಸ್ತಕದ ಮುಖ್ಯಾಂಶಗಳು

ಪ್ರವಾದಿ ಯೆರೆಮೀಯನು 40 ವರ್ಷಗಳ ತನಕ ಹೇಳುತ್ತಿದ್ದ ನ್ಯಾಯತೀರ್ಪಿನ ಸಂದೇಶವು ನೆರವೇರುವುದನ್ನು ಸ್ವತಃ ನೋಡಿದನು. ತನ್ನ ಪ್ರಿಯ ನಗರದ ನಾಶನವನ್ನು ಕಣ್ಣಾರೆ ನೋಡಿದಾಗ ಪ್ರವಾದಿಗೆ ಹೇಗನಿಸಿದ್ದಿರಬಹುದು? ಗ್ರೀಕ್‌ ಸೆಪ್ಟ್ಯುಅಜಿಂಟ್‌ ಬೈಬಲ್‌ನಲ್ಲಿ ಪ್ರಲಾಪಗಳು ಪುಸ್ತಕದ ಮುನ್ನುಡಿ ಹೀಗನ್ನುತ್ತದೆ: ‘ಯೆರೆಮೀಯನು ಅಳುತ್ತ ಕುಳಿತುಕೊಂಡು ಯೆರೂಸಲೇಮಿನ ಕುರಿತು ಹೀಗೆ ಪ್ರಲಾಪಿಸಿದನು.’ ಯೆರೆಮೀಯನು ಸಾ.ಶ.ಪೂ. 607ರಲ್ಲಿ ಇದನ್ನು ಬರೆದಾಗ, 18 ತಿಂಗಳುಗಳಷ್ಟು ದೀರ್ಘಾವಧಿಯ ತನಕ ನಡೆದ ಯೆರೂಸಲೇಮ್‌ನ ಮುತ್ತಿಗೆ ಮತ್ತು ಅದನ್ನು ಹಿಂಬಾಲಿಸಿದ ನಾಶನದ ನೆನಪು ಪ್ರವಾದಿಯ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರಾಗಿತ್ತು. ಪ್ರಲಾಪಗಳು ಪುಸ್ತಕವು ಯೆರೆಮೀಯನು ನಿಜವಾಗಿಯೂ ಅನುಭವಿಸಿದ ಬೇಗುದಿಯನ್ನು ಕಣ್ಣಿಗೆಕಟ್ಟುವಂಥ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. (ಯೆರೆಮೀಯ 52:3-5, 12-14) ಇತಿಹಾಸವು ಬೇರಾವುದೇ ನಗರದ ವಿಷಯದಲ್ಲೂ ಇಷ್ಟೊಂದು ಮನಕರಗಿಸುವ ಮತ್ತು ಹೃದಯವಿದ್ರಾವಕ ಪ್ರಲಾಪವನ್ನು ದಾಖಲಿಸಿಲ್ಲ.

ಪ್ರಲಾಪಗಳು ಪುಸ್ತಕವು ಐದು ಭಾವಗೀತೆಗಳ ಸಂಗ್ರಹವಾಗಿದೆ. ಇವುಗಳಲ್ಲಿ ಮೊದಲ ನಾಲ್ಕು ಭಾವಗೀತೆಗಳು ಪ್ರಲಾಪಗಳಾಗಿದ್ದು, ಐದನೆಯದ್ದು ಬೇಡಿಕೆ ಅಥವಾ ಪ್ರಾರ್ಥನೆಯಾಗಿದೆ. ಮೊದಲನೆಯ ನಾಲ್ಕು ಗೀತೆಗಳು ಪದ್ಯಬಂಧಗಳಾಗಿವೆ. ಅಂದರೆ ಪ್ರತಿ ಶ್ಲೋಕವು ಹೀಬ್ರು ಅಕ್ಷರಮಾಲೆಯ 22 ಅಕ್ಷರಗಳಲ್ಲಿ ಒಂದರಿಂದ ಅನುಕ್ರಮವಾಗಿ ಆರಂಭಗೊಳ್ಳುತ್ತದೆ. ಐದನೆಯ ಗೀತೆಯಲ್ಲಿ 22 ಶ್ಲೋಕಗಳಿದ್ದರೂ ಅದು ಪದ್ಯಬಂಧವಲ್ಲ. ಏಕೆಂದರೆ ಇವು ಹೀಬ್ರು ಅಕ್ಷರಮಾಲೆಯ ಅಕ್ಷರಗಳ ಸಂಖ್ಯೆಗೆ ಸರಿಬೀಳುವುದಾದರೂ ಅಕ್ಷರಮಾಲೆಯ ಕ್ರಮದಲ್ಲಿಲ್ಲ.

‘ನೀರು ಸುರಿದು ಸುರಿದು ನನ್ನ ಕಣ್ಣು ಇಂಗಿಹೋಗಿದೆ’

(ಪ್ರಲಾಪಗಳು 1:1-2:22)

“ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕೂತುಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಬಿಟ್ಟಿಯಾಳಾದಳು.” ಈ ರೀತಿ ಪ್ರವಾದಿ ಯೆರೆಮೀಯನು ಯೆರೂಸಲೇಮಿನ ಕುರಿತಾದ ಪ್ರಲಾಪಗಳ ಪುಸ್ತಕವನ್ನು ಆರಂಭಿಸುತ್ತಾನೆ. ಈ ಆಪತ್ತಿಗೆ ಕಾರಣವನ್ನು ಕೊಡುತ್ತಾ ಪ್ರವಾದಿ ಹೇಳುವುದು: “ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ.”​—⁠ಪ್ರಲಾಪಗಳು 1:1, 5.

ಗಂಡನನ್ನು ಮತ್ತು ಮಕ್ಕಳನ್ನು ಕಳೆದುಕೊಂಡ ವಿಧವೆಯಂತೆ ಯೆರೂಸಲೇಮ್‌ ಪ್ರಶ್ನಿಸುವುದು: “ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ”? ದೇವರಿಗೆ ಪ್ರಾರ್ಥಿಸುತ್ತಾ ತನ್ನ ವೈರಿಗಳ ಕುರಿತು ಆಕೆ ಹೇಳುವುದು: “ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿದೆ.”​—⁠ಪ್ರಲಾಪಗಳು 1:12, 22.

ತೀವ್ರ ವೇದನೆಗೊಳಗಾದ ಯೆರೆಮೀಯನು ಹೇಳುವುದು: “ಆತನು [ಯೆಹೋವನು] ಶತ್ರುವಿನ ಮೇಲೆತ್ತಿದ ಬಲಗೈಯನ್ನು ಹಿಂದೆಗೆದು ಇಸ್ರಾಯೇಲಿನ ಕೊಂಬನ್ನು ರೋಷಾಗ್ನಿಯಿಂದ ತೀರಾ ಕಡಿದುಹಾಕಿ ಸುತ್ತುಮುತ್ತಲೂ ನುಂಗುವ ಅಗ್ನಿಜ್ವಾಲೆಯಂತೆ ಯಾಕೋಬನ್ನು ದಹಿಸಿಬಿಟ್ಟಿದ್ದಾನೆ.” ತನಗಾದ ಅಪಾರ ದುಃಖವನ್ನು ವರ್ಣಿಸುತ್ತಾ ಪ್ರವಾದಿಯು ಪ್ರಲಾಪಿಸುವುದು: “ನೀರು ಸುರಿದು ಸುರಿದು ನನ್ನ ಕಣ್ಣು ಇಂಗಿಹೋಗಿದೆ, ನನ್ನ ಕರುಳು ಕುದಿಯುತ್ತದೆ.” ದಾರಿಯಲ್ಲಿ ಹಾದುಹೋಗುವವರು ಸಹ ಅಚ್ಚರಿಪಡುತ್ತಾ ತಮ್ಮ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸುವರು: “ಆಹಾ, ಪರಿಪೂರ್ಣಸುಂದರಿ, ಸಮಸ್ತಲೋಕಸಂತೋಷಿಣಿ ಎನಿಸಿಕೊಳ್ಳುತ್ತಿದ್ದ ಪುರಿಯು ಇದೇಯೋ?”​—⁠ಪ್ರಲಾಪಗಳು 2:3, 11, 15.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:​15​—⁠ಯೆಹೋವನು ಹೇಗೆ “ಯೆಹೂದವೆಂಬ ಯುವತಿಯನ್ನು ತೊಟ್ಟಿಯಲ್ಲಿನ ದ್ರಾಕ್ಷೆಯ ಹಾಗೆ ತುಳಿದಿದ್ದಾನೆ”? ಯುವತಿ ಎಂದು ವರ್ಣಿಸಲಾಗಿರುವ ಯೆರೂಸಲೇಮ್‌ ಪಟ್ಟಣವನ್ನು ನಾಶಮಾಡುವಾಗ ಬಾಬೆಲಿನವರು ಎಷ್ಟರಮಟ್ಟಿಗೆ ರಕ್ತವನ್ನು ಸುರಿಸಿದರೆಂದರೆ ಅದು ದ್ರಾಕ್ಷೆ ತೊಟ್ಟಿಯಲ್ಲಿನ ದ್ರಾಕ್ಷೆಯನ್ನು ಹಿಂಡುವುದಕ್ಕೆ ಸಮಾನವಾಗಿತ್ತು. ಇದನ್ನು ಮುಂತಿಳಿಸಿದವನು ಮತ್ತು ಹಾಗಾಗುವಂತೆ ಅನುಮತಿಸಿದವನು ಯೆಹೋವನಾಗಿದ್ದನು. ಆದ್ದರಿಂದಲೇ ಆತನು ‘ತೊಟ್ಟಿಯಲ್ಲಿನ ದ್ರಾಕ್ಷೆಯನ್ನು ತುಳಿದಿದ್ದಾನೆ’ ಅನ್ನಬಹುದು.

2:1​—⁠‘ಇಸ್ರಾಯೇಲಿನ ಶಿರೋಮಣಿ ಆಕಾಶದಿಂದ ಭೂಮಿಗೆ ತಳ್ಳಿಬಿಡಲ್ಪಟ್ಟದ್ದು’ ಹೇಗೆ? “ಭೂಮಿಯ ಮೇಲೆ ಆಕಾಶವು . . . ಉನ್ನತ”ವಾಗಿರುವುದರಿಂದ ‘ಆಕಾಶದಿಂದ ಭೂಮಿಗೆ ತಳ್ಳಿಬಿಡಲ್ಪಟ್ಟದ್ದು’ ಎಂಬ ಅಭಿವ್ಯಕ್ತಿಯು, ಉನ್ನತ ಸ್ಥಾನದಲ್ಲಿದ್ದ ವಿಷಯಗಳು ಹೀನಾಯಸ್ಥಿತಿಗೆ ತರಲ್ಪಡುವುದನ್ನು ಕೆಲವೊಮ್ಮೆ ಚಿತ್ರಿಸುತ್ತದೆ. “ಇಸ್ರಾಯೇಲಿನ ಶಿರೋಮಣಿ” ಅಂದರೆ ಯೆಹೋವನ ಆಶೀರ್ವಾದ ಅದರ ಮೇಲಿದ್ದಾಗ ಇಸ್ರಾಯೇಲಿಗಿದ್ದ ಮಹಿಮೆ ಮತ್ತು ಅಧಿಕಾರವು, ಯೆರೂಸಲೇಮಿನ ನಾಶನ ಮತ್ತು ಯೆಹೂದದ ಹಾಳುಗೆಡಹುವಿಕೆಯ ಸಮಯದಲ್ಲಿ ತಳ್ಳಿಬಿಡಲ್ಪಟ್ಟಿತು.​—⁠ಯೆಶಾಯ 55:⁠9.

2:​1, 6​—⁠ಯೆಹೋವನ “ಪಾದಪೀಠ” ಮತ್ತು ಆತನ “ಗುಡಾರ” ಏನಾಗಿದೆ? ಕೀರ್ತನೆಗಾರನು ಹಾಡಿದ್ದು: “ಬನ್ನಿರಿ, ಆತನ ಮಂದಿರಕ್ಕೆ ಹೋಗಿ ಆತನ ಪಾದಪೀಠದ ಮುಂದೆ ಅಡ್ಡಬೀಳೋಣ.” (ಕೀರ್ತನೆ 132:⁠7) ಆದುದರಿಂದ ಪ್ರಲಾಪಗಳು 2:1ರಲ್ಲಿರುವ “ಪಾದಪೀಠ” ಯೆಹೋವನ ಆರಾಧನಾಲಯ ಅಥವಾ ಆತನ ಆಲಯವನ್ನು ಸೂಚಿಸುತ್ತದೆ. ಬಾಬೆಲಿನವರು ‘ಯೆಹೋವನ ಆಲಯವನ್ನು,’ ಒಂದು ಗುಡಾರ ಅಥವಾ ತೋಟದ ಗುಡಿಸಲನ್ನೋ ಎಂಬಂತೆ ‘ಸುಟ್ಟುಬಿಟ್ಟರು.’​—⁠ಯೆರೆಮೀಯ 52:12, 13.

2:​16, 17​—⁠ಹೀಬ್ರು ಅಕ್ಷರಮಾಲೆಯ ಕ್ರಮವನ್ನು ಅನುಸರಿಸಲಿಕ್ಕಾಗಿ 16ನೇ ವಚನವು ಅಯಿನ್‌ ಎಂಬ ಅಕ್ಷರದೊಂದಿಗೂ, 17ನೇ ವಚನವು ಪೇ ಎಂಬ ಅಕ್ಷರದೊಂದಿಗೂ ಪ್ರಾರಂಭವಾಗಬೇಕಲ್ಲವೋ? ದೈವಪ್ರೇರಿತ ಲೇಖಕರು ಇಂತಹ ಶೈಲಿಯ ಗೀತೆಗಳನ್ನು ಬರೆಯುವಾಗ ಸಾಮಾನ್ಯವಾಗಿ ಅಕ್ಷರಮಾಲೆಯ ಕ್ರಮವನ್ನು ಅನುಸರಿಸಿದರು. ಆದರೆ ಈ ಕ್ರಮವು ಅಸ್ವಾಭಾವಿಕವೆನಿಸುವಾಗೆಲ್ಲ ಇದನ್ನು ಬಳಸುತ್ತಿರಲಿಲ್ಲ. ನೆನಪಿನಲ್ಲಿಡಲು ಸಹಾಯ ಮಾಡುತ್ತಿದ್ದ ಈ ಸಾಹಿತ್ಯಿಕ ವಿಧಾನಕ್ಕೆ ಅಂಟಿಕೊಳ್ಳುವ ಬದಲು ವಸ್ತುವಿಷಯದ ಅರ್ಥಪೂರ್ಣತೆಗೆ ಹೆಚ್ಚಿನ ಮಹತ್ವ ಕೊಡಲಾಗುತ್ತಿತ್ತು. ಪ್ರಲಾಪಗಳು ಪುಸ್ತಕದ 3 ಮತ್ತು 4ನೇ ಗೀತೆಗಳಲ್ಲೂ ಅದೇ ಎರಡು ಅಕ್ಷರಗಳು ಹಿಂದುಮುಂದಾಗಿರುವುದನ್ನು ಗಮನಿಸಬಹುದು.​—⁠ಪ್ರಲಾಪಗಳು 3:46, 49; 4:16, 17.

2:​17​—⁠ಯೆರೂಸಲೇಮಿನ ಸಂಬಂಧದಲ್ಲಿ ಯೆಹೋವನು ಯಾವ ಗಮನಾರ್ಹ “ಮಾತನ್ನು” ಪೂರೈಸಿದನು? ಈ ಉಲ್ಲೇಖವು ಯಾಜಕಕಾಂಡ 26:17ರದ್ದಾಗಿದೆ. ಅದು ತಿಳಿಸುವುದು: “ನಾನು ನಿಮ್ಮ ಮೇಲೆ ಉಗ್ರಕೋಪವನ್ನು ಮಾಡುವದರಿಂದ ನೀವು ನಿಮ್ಮ ಶತ್ರುಗಳ ಎದುರಿನಿಂದ ಸೋತು ಬೀಳುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು; ಯಾರೂ ಹಿಂದಟ್ಟದೆ ಇರುವಾಗಲೂ ನೀವು ಹೆದರಿ ಓಡುವಿರಿ.”

ನಮಗಾಗಿರುವ ಪಾಠಗಳು:

1:​1-9. ಯೆರೂಸಲೇಮ್‌ ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಇರುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ. ಅದರ ಬಾಗಿಲುಗಳೆಲ್ಲಾ ಹಾಳುಬಿದ್ದಿವೆ, ಯಾಜಕರು ನರಳಾಡುತ್ತಿದ್ದಾರೆ. ಅಲ್ಲಿನ ಯುವತಿಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕಿಸುತ್ತದೆ. ಏಕೆ? ಏಕೆಂದರೆ ಯೆರೂಸಲೇಮ್‌ ಪಾಪಮಾಡಿದ್ದಾಳೆ. ಆಕೆಯ ನೆರಿಗೆಯು ಹೊಲಸಾಗಿತ್ತು. ಖಂಡಿತವಾಗಿಯೂ ನಿಯಮೋಲ್ಲಂಘನೆಯ ಫಲವು ಹರ್ಷದಾಯಕವಾಗಿರುವುದಿಲ್ಲ. ಬದಲಾಗಿ ಅದು ಕಣ್ಣೀರು, ನರಳಾಟ, ವ್ಯಥೆ ಮತ್ತು ವೇದನೆಗೆ ನಡಿಸುತ್ತದೆ.

1:​18. ಯೆಹೋವನು ಯಾವಾಗಲೂ ನ್ಯಾಯವಂತನಾಗಿರುವುದರಿಂದ ತಪ್ಪಿತಸ್ಥರನ್ನು ಶಿಕ್ಷಿಸುತ್ತಾನೆ.

2:​20. ಒಂದುವೇಳೆ ಇಸ್ರಾಯೇಲ್ಯರು ಯೆಹೋವನ ಮಾತನ್ನು ಕೇಳದಿರುವುದಾದರೆ ಅಶುಭಗಳು ಪ್ರಾಪ್ತವಾಗುವವೆಂದು ಅವರನ್ನು ಎಚ್ಚರಿಸಲಾಗಿತ್ತು. ಈ ಅಶುಭಗಳಲ್ಲಿ ಒಂದು, ಅವರು ತಮ್ಮ ‘ಗಂಡು ಹೆಣ್ಣು ಮಕ್ಕಳ ಮಾಂಸ’ವನ್ನು ತಿನ್ನುವುದಾಗಿತ್ತು. (ಧರ್ಮೋಪದೇಶಕಾಂಡ 28:15, 45, 53) ಯೆಹೋವನಿಗೆ ಅವಿಧೇಯರಾಗುವ ಮಾರ್ಗಕ್ರಮವನ್ನು ಆರಿಸುವುದು ಎಷ್ಟೊಂದು ಮೂರ್ಖತನವಾಗಿದೆ!

‘ನನ್ನ ನಿಟ್ಟುಸುರಿಗೆ ಕಿವಿಯನ್ನು ಮರೆಮಾಡಿಕೊಳ್ಳಬೇಡ’

(ಪ್ರಲಾಪಗಳು 3:1-5:22)

ಪ್ರಲಾಪಗಳು ಅಧ್ಯಾಯ 3ರಲ್ಲಿ ಇಸ್ರಾಯೇಲ್‌ ಜನಾಂಗವು ಒಬ್ಬ ಮನುಷ್ಯನಾಗಿದ್ದಾನೋ ಎಂಬಂತೆ ಮಾತಾಡಲಾಗಿದೆ. ಸಂಕಷ್ಟಗಳ ಹೊರತೂ ಈ ಮನುಷ್ಯನು ಹಾಡುವುದು: “ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.” ಸತ್ಯ ದೇವರಿಗೆ ಪ್ರಾರ್ಥಿಸುವಾಗ ಅವನು ವಿನಂತಿಸಿಕೊಳ್ಳುವುದು: “ನೀನು ನನ್ನ ಧ್ವನಿಯನ್ನು ಕೇಳಿದಿ; (ನನ್ನ ನಿಟ್ಟುಸುರಿಗೂ ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!).” ಶತ್ರುಗಳ ನಿಂದೆಗೆ ಗಮನಕೊಡುವಂತೆ ಕೇಳಿಕೊಳ್ಳುತ್ತಾ ಅವನು ಯೆಹೋವನಲ್ಲಿ ಹೇಳುವುದು: “ಯೆಹೋವನೇ, ಅವರ ದುಷ್ಕೃತ್ಯಗಳಿಗೆ ಸರಿಯಾದ ಪ್ರತಿಫಲವನ್ನು ನೀನು ಅವರಿಗೆ ಕೊಡುವಿ.”​—⁠ಪ್ರಲಾಪಗಳು 3:1, 25, 56, 64.

ಯೆರೂಸಲೇಮಿನ 18 ತಿಂಗಳಾವಧಿಯ ಮುತ್ತಿಗೆಯ ಭೀಕರ ಪರಿಣಾಮಗಳ ಬಗ್ಗೆ ಮರುಕಪಡುತ್ತಾ ಯೆರೆಮೀಯನು ಪ್ರಲಾಪಿಸುವುದು: “ಯಾರ ಕೈಯೂ ಸೋಕದೆ ಕ್ಷಣಮಾತ್ರದಲ್ಲಿ ಹಾಳಾದ ಸೊದೋಮಿನ ಪಾಪಕ್ಕಿಂತಲೂ ನನ್ನ ಪ್ರಜೆಯ ಅಧರ್ಮವು ಹೆಚ್ಚಾಯಿತಲ್ಲಾ.” ಅವನು ಮುಂದುವರಿಸುವುದು: “ಹಸಿವೆಯಿಂದ ಹತರಾದವರ ಗತಿಗಿಂತಲೂ ಖಡ್ಗದಿಂದ ಹತರಾದವರ ಗತಿಯೇ ಲೇಸು; ಭೂಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದವರು ಕ್ಷಯಿಸುತ್ತಾ ಬರುತ್ತಾರಲ್ಲಾ.”​—⁠ಪ್ರಲಾಪಗಳು 4:6, 9.

ಐದನೆಯ ಭಾವಗೀತೆಯು ಯೆರೂಸಲೇಮಿನ ನಿವಾಸಿಗಳು ಮಾತಾಡುತ್ತಿದ್ದಾರೋ ಎಂಬಂಥ ಚಿತ್ರಣವನ್ನು ಕೊಡುತ್ತದೆ. ಅವರು ಹೇಳುವುದು: “ಯೆಹೋವನೇ, ನಮಗಾದ ದುರ್ಗತಿಯನ್ನು ಚಿತ್ತಕ್ಕೆ ತಂದುಕೋ; ನಾವು ಗುರಿಯಾಗಿರುವ ದೂಷಣೆಯನ್ನು ದೃಷ್ಟಿಸಿನೋಡು.” ತಮಗಾದ ಕಡುಸಂಕಟವನ್ನು ವಿವರಿಸುತ್ತಾ ಅವರು ಮೊರೆಯಿಡುವುದು: “ಯೆಹೋವನೇ, ನೀನು ಶಾಶ್ವತವಾಗಿ ನೆಲೆಗೊಂಡಿದ್ದೀ, ತಲತಲಾಂತರಕ್ಕೂ ನಿನ್ನ ಸಿಂಹಾಸನವು ಸ್ಥಿರವಾಗಿರುವದು. ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ನೀನು ತಿರುಗಿಸಿದ ಹಾಗೆ ತಿರುಗುವೆವು; ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು.”​—⁠ಪ್ರಲಾಪಗಳು 5:1, 19, 22.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

3:​16​—⁠“ನನ್ನ ಹಲ್ಲುಗಳನ್ನು ನುರುಜುಗಲ್ಲಿನಿಂದ ಮುರಿದು” ಬಿಟ್ಟಿದ್ದಾನೆ ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ? ಒಂದು ಪರಾಮರ್ಶೆ ಕೃತಿ ತಿಳಿಸುವುದು: “ಯೆಹೂದ್ಯರು ಸೆರೆಗೆ ಹೋಗುತ್ತಿದ್ದಾಗ, ದಾರಿಯಲ್ಲಿ ಗುಂಡಿಗಳನ್ನು ಅಗೆದು ಅದರಲ್ಲಿ ರೊಟ್ಟಿಯನ್ನು ಸುಡಬೇಕಾಗುತ್ತಿತ್ತು. ಇದರಿಂದ ಅವರ ರೊಟ್ಟಿಯಲ್ಲಿ ಮರಳಿನ ಕಣಗಳು ಸೇರುತ್ತಿದ್ದವು.” ಅಂತಹ ರೊಟ್ಟಿಯನ್ನು ತಿನ್ನುವಾಗ ಒಬ್ಬನ ಹಲ್ಲುಗಳು ಮುರಿದು ಹೋಗಸಾಧ್ಯವಿತ್ತು.

4:​3, 10​—⁠ಯೆರೆಮೀಯನು ದೇವರ “ಜನವೆಂಬಾಕೆ”ಯನ್ನು ‘ಕಾಡಿನ ಉಷ್ಟ್ರಪಕ್ಷಿಗೆ’ ಏಕೆ ಹೋಲಿಸಿದನು? ಯೋಬ 39:16 ತಿಳಿಸುವುದು: ಉಷ್ಟ್ರಪಕ್ಷಿಯು “ತನ್ನ ಮರಿಗಳನ್ನು ತನ್ನವುಗಳೆಂದೆಣಿಸದೆ ಬಾಧೆಗೊಳಪಡಿಸುವದು.” ದೃಷ್ಟಾಂತಕ್ಕಾಗಿ, ಹೆಣ್ಣುಹಕ್ಕಿಯು ಮೊಟ್ಟೆಯೊಡೆದು ಮರಿಮಾಡಿದ ಮೇಲೆ ಗೂಡನ್ನು ಬಿಟ್ಟು ಇತರ ಹೆಣ್ಣುಹಕ್ಕಿಗಳೊಂದಿಗೆ ಕಾಲ ಕಳೆಯುತ್ತದೆ. ಈ ಸಂದರ್ಭದಲ್ಲಿ ಗಂಡುಹಕ್ಕಿ ಮರಿಗಳನ್ನು ನೋಡಿಕೊಳ್ಳುತ್ತದೆ. ಅಪಾಯವು ಎದುರಾದಾಗ ಏನು ಸಂಭವಿಸುತ್ತದೆ? ಗಂಡು ಮತ್ತು ಹೆಣ್ಣುಹಕ್ಕಿಗಳೆರಡೂ ಮರಿಗಳನ್ನು ತೊರೆದು ಗೂಡಿನಿಂದ ಹಾರಿಹೋಗುತ್ತವೆ. ಬಾಬೆಲಿನವರ ಮುತ್ತಿಗೆಯ ಸಮಯದಲ್ಲಿ ಯೆರೂಸಲೇಮ್‌ನಲ್ಲಿ ಬರವು ಎಷ್ಟು ಘೋರವಾಗಿತ್ತೆಂದರೆ, ಸಾಮಾನ್ಯವಾಗಿ ಕನಿಕರದಿಂದ ವರ್ತಿಸುವ ತಾಯಂದಿರು ಸಹ ಕಾಡಿನ ಉಷ್ಟ್ರಪಕ್ಷಿಯಂತೆ ತಮ್ಮ ಮಕ್ಕಳನ್ನು ಕ್ರೂರವಾಗಿ ಉಪಚರಿಸಿದರು. ಇದು ನರಿಗಳು ತಮ್ಮ ಮರಿಗಳಿಗೆ ತೋರಿಸುವ ಕಾಳಜಿಗೆ ಸಂಪೂರ್ಣ ವ್ಯತಿರಿಕ್ತವಾಗಿತ್ತು.

5:7​—⁠ಯೆಹೋವನು ಜನರನ್ನು ಅವರ ಪಿತೃಗಳ ತಪ್ಪಿಗೆ ಜವಾಬ್ದಾರರನ್ನಾಗಿ ಮಾಡುತ್ತಾನೋ? ಇಲ್ಲ, ಯೆಹೋವನು ಜನರನ್ನು ಅವರ ಪೂರ್ವಿಕರ ಪಾಪಗಳಿಗಾಗಿ ನೇರವಾಗಿ ಶಿಕ್ಷಿಸುವುದಿಲ್ಲ. ಬೈಬಲ್‌ ಹೇಳುವುದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ರೋಮಾಪುರ 14:12) ಆದರೂ ಪಾಪದ ಪರಿಣಾಮಗಳು ಉಳಿದುಕೊಂಡು ಮುಂದಿನ ಸಂತತಿಗಳು ಅದನ್ನು ಅನುಭವಿಸುವ ಸಾಧ್ಯತೆಯಿದೆ. ದೃಷ್ಟಾಂತಕ್ಕಾಗಿ, ಪುರಾತನ ಇಸ್ರಾಯೇಲ್‌ ಜನಾಂಗವು ವಿಗ್ರಹಾರಾಧನೆ ನಡೆಸಿದ್ದ ಕಾರಣ ತದನಂತರದ ಸಮಯಗಳಲ್ಲಿದ್ದ ನಂಬಿಗಸ್ತ ಇಸ್ರಾಯೇಲ್ಯರಿಗೂ ನೀತಿಯ ಮಾರ್ಗಕ್ಕೆ ಅಂಟಿಕೊಳ್ಳಲು ತುಂಬ ಕಷ್ಟಪಡಬೇಕಾಯಿತು.​—⁠ವಿಮೋಚನಕಾಂಡ 20:⁠5.

ನಮಗಾಗಿರುವ ಪಾಠಗಳು:

3:​8, 43, 44. ಯೆರೂಸಲೇಮಿಗೆ ವಿಪತ್ತು ಸಂಭವಿಸಿದಾಗ ನಗರದ ನಿವಾಸಿಗಳು ಸಹಾಯಕ್ಕಾಗಿ ಮೊರೆಯಿಟ್ಟರೂ ಯೆಹೋವನು ಅದನ್ನು ಕೇಳಲು ನಿರಾಕರಿಸಿದನು. ಏಕೆ? ಏಕೆಂದರೆ ಆ ಜನರು ಅವಿಧೇಯರೂ, ಪಶ್ಚಾತ್ತಾಪಪಡದವರೂ ಆಗಿದ್ದರು. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡಬೇಕೆಂದು ನಾವು ಒಂದುವೇಳೆ ಬಯಸುವಲ್ಲಿ ನಾವಾತನಿಗೆ ವಿಧೇಯರಾಗಿರಬೇಕು.​—⁠ಜ್ಞಾನೋಕ್ತಿ 28:⁠9.

3:​21-​26, 28-​33. ತೀವ್ರ ಕಷ್ಟಗಳನ್ನು ಸಹ ನಾವು ಹೇಗೆ ಸಹಿಸಿಕೊಳ್ಳಬಹುದು? ಯೆರೆಮೀಯನು ಇದಕ್ಕೆ ಉತ್ತರ ನೀಡುತ್ತಾನೆ. ಯೆಹೋವನು ಪ್ರೀತಿಪೂರ್ವಕ ದಯೆಯಲ್ಲಿ ಸಮೃದ್ಧನು ಮತ್ತು ಆತನ ಕರುಣೆಯು ಅಪಾರ ಎಂಬುದನ್ನು ನಾವೆಂದಿಗೂ ಮರೆಯಬಾರದು. ಅಲ್ಲದೆ, ನಾವು ಬದುಕಿ ಉಳಿದಿರುವುದು ತಾನೇ ನಿರೀಕ್ಷೆಯನ್ನು ಬಿಟ್ಟುಬಿಡದಿರಲು ಸಾಕಷ್ಟು ಒಳ್ಳೇ ಕಾರಣವಾಗಿದೆ ಮತ್ತು ನಾವು ತಾಳ್ಮೆಯಿಂದಿರಬೇಕು ಹಾಗೂ ದೂರದೇ ಯೆಹೋವನ ರಕ್ಷಣಾಕಾರ್ಯಕ್ಕಾಗಿ ಶಾಂತವಾಗಿ ಕಾದುಕೊಂಡಿರಬೇಕೆಂದು ನೆನಪಿನಲ್ಲಿಡಬೇಕು. ಅಲ್ಲದೆ ನಮ್ಮ ‘ಬಾಯಿಯನ್ನು ದೂಳಿಗೆ ಮುಟ್ಟಿಸಬೇಕು’ ಅಂದರೆ ದೀನತೆಯಿಂದ ಪರೀಕ್ಷೆಗಳಿಗೆ ಮಣಿದು, ದೇವರು ಒಳ್ಳೇ ಉದ್ದೇಶಕ್ಕಾಗಿಯೇ ಅವುಗಳನ್ನು ಅನುಮತಿಸಿದ್ದಾನೆ ಎನ್ನುವುದನ್ನು ಗ್ರಹಿಸಬೇಕು.

3:​27. ಯೌವನದಲ್ಲಿ ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವುದೆಂದರೆ ಕಷ್ಟಗಳನ್ನು ಮತ್ತು ಅಪಹಾಸ್ಯವನ್ನು ಎದುರಿಸುವುದಾಗಿದೆ. ಆದರೆ “ಯೌವನದಲ್ಲಿ ನೊಗಹೊರುವದು ಮನುಷ್ಯನಿಗೆ ಲೇಸು” ಏಕೆ? ಏಕೆಂದರೆ ಒಬ್ಬ ವ್ಯಕ್ತಿ ಯೌವನದಲ್ಲೇ ಕಷ್ಟವೆಂಬ ನೊಗವನ್ನು ಹೊತ್ತುಕೊಳ್ಳಲು ಕಲಿಯುವುದು ಅವನು ನಂತರದ ವರ್ಷಗಳಲ್ಲಿ ಬರಬಹುದಾದ ಸವಾಲುಗಳನ್ನು ಎದುರಿಸುವಂತೆ ಸಿದ್ಧಗೊಳಿಸುವುದು.

3:​39-​42. ನಮ್ಮ ಪಾಪಗಳ ನಿಮಿತ್ತ ಕಷ್ಟಾನುಭವಿಸುವಾಗ ‘ಗುಣುಗುಟ್ಟು’ವುದು ವಿವೇಕಯುತವಲ್ಲ. ನಮ್ಮ ತಪ್ಪಿನ ಫಲಿತಾಂಶಗಳನ್ನು ಅನುಭವಿಸುತ್ತಿರುವುದಕ್ಕಾಗಿ ಗುಣುಗುಟ್ಟದೆ “ನಮ್ಮ ನಡತೆಯನ್ನು ಶೋಧಿಸಿ ಪರೀಕ್ಷಿಸಿ ಯೆಹೋವನ ಕಡೆಗೆ ತಿರುಗಿಕೊಳ್ಳೋಣ.” ಪಶ್ಚಾತ್ತಾಪಪಟ್ಟು, ನಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವ ಮೂಲಕ ವಿವೇಕಿಗಳಾಗಿರೋಣ.

ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿ

ಬಾಬೆಲಿನವರು ಯೆರೂಸಲೇಮ್‌ ಪಟ್ಟಣವನ್ನು ಸುಟ್ಟುಹಾಕಿ ಯೆಹೂದ ದೇಶವನ್ನು ನಿರ್ಜನಾವಸ್ಥೆಗೆ ತಂದಾಗ ಯೆಹೋವನು ಅದನ್ನು ಹೇಗೆ ವೀಕ್ಷಿಸಿದನು ಎನ್ನುವುದನ್ನು ಬೈಬಲ್‌ನ ಪ್ರಲಾಪಗಳು ಪುಸ್ತಕವು ತೋರಿಸಿಕೊಡುತ್ತದೆ. ಪಾಪಗಳನ್ನು ಅಂಗೀಕರಿಸುವ ಕುರಿತು ಅದರಲ್ಲಿ ದಾಖಲಿಸಲ್ಪಟ್ಟ ಅಭಿವ್ಯಕ್ತಿಗಳು ಸ್ಪಷ್ಟಪಡಿಸುವುದೇನಂದರೆ ಜನರು ತಪ್ಪುಮಾಡಿದ್ದರಿಂದಲೇ ವಿಪತ್ತು ಬಂದೆರಗಿತೆಂಬುದು ಯೆಹೋವನ ದೃಷ್ಟಿಕೋನವಾಗಿತ್ತು. ಈ ಪುಸ್ತಕದ ದೈವಪ್ರೇರಿತ ಗೀತೆಗಳಲ್ಲಿ, ಯೆಹೋವನಲ್ಲಿನ ನಿರೀಕ್ಷೆ ಮತ್ತು ಸರಿಯಾದ ಮಾರ್ಗದ ಕಡೆಗೆ ತಿರುಗುವ ಬಯಕೆಯನ್ನು ವ್ಯಕ್ತಪಡಿಸುವ ಪದಗಳೂ ಇವೆ. ಇವು, ಯೆರೆಮೀಯನ ದಿನಗಳಲ್ಲಿದ್ದ ಹೆಚ್ಚಿನ ಜನರ ಭಾವನೆಗಳಾಗಿರಲಿಲ್ಲವಾದರೂ ಅವು ಯೆರೆಮೀಯ ಮತ್ತು ಪಶ್ಚಾತ್ತಾಪಪಟ್ಟ ಶೇಷ ಜನರ ಭಾವನೆಗಳನ್ನು ಸಂಕೇತಿಸಿದವು.

ಯೆರೂಸಲೇಮ್‌ನ ಸ್ಥಿತಿಗತಿಯ ಕುರಿತು ಯೆಹೋವನ ನೋಟವನ್ನು ವ್ಯಕ್ತಪಡಿಸುವ ಪ್ರಲಾಪಗಳು ಪುಸ್ತಕವು ನಮಗೆ ಎರಡು ಪ್ರಾಮುಖ್ಯ ಪಾಠಗಳನ್ನು ಕಲಿಸುತ್ತದೆ. ಮೊದಲನೆಯದಾಗಿ, ಯೆರೂಸಲೇಮ್‌ನ ನಾಶನ ಮತ್ತು ಯೆಹೂದದ ನಿರ್ಜನಾವಸ್ಥೆಯು ಯೆಹೋವನಿಗೆ ನಾವು ವಿಧೇಯರಾಗುವಂತೆ ಪ್ರಚೋದಿಸುತ್ತದೆ. ಅಷ್ಟುಮಾತ್ರವಲ್ಲ, ದೈವಿಕ ಚಿತ್ತವನ್ನು ಅಸಡ್ಡೆಮಾಡದಂತೆ ಅದೊಂದು ಎಚ್ಚರಿಕೆಯೋಪಾದಿ ಕಾರ್ಯನಡಿಸುತ್ತದೆ. (1 ಕೊರಿಂಥ 10:11) ಎರಡನೇ ಪಾಠ ಯೆರೆಮೀಯನ ಮಾದರಿಯಿಂದ ಸಿಗುತ್ತದೆ. (ರೋಮಾಪುರ 15:4) ಆಳವಾಗಿ ದುಃಖಿತನಾದ ಪ್ರವಾದಿಯು ನಿರೀಕ್ಷಾಹೀನ ಪರಿಸ್ಥಿತಿಗಳಲ್ಲಿಯೂ ರಕ್ಷಣೆಗಾಗಿ ಯೆಹೋವನ ಕಡೆಗೆ ನೋಡಿದನು. ಆದ್ದರಿಂದ ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಸಂಪೂರ್ಣ ನಂಬಿಕೆಯನ್ನಿಟ್ಟು, ಆತನನ್ನು ನಮ್ಮ ಭರವಸವನ್ನಾಗಿ ಮಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯ!​—⁠ಇಬ್ರಿಯ 4:12. (w07 6/1)

[ಪುಟ 9ರಲ್ಲಿರುವ ಚಿತ್ರ]

ಪ್ರವಾದಿ ಯೆರೆಮೀಯನು ತಾನು ನೀಡಿದ ನ್ಯಾಯತೀರ್ಪಿನ ಸಂದೇಶವು ನೆರವೇರುವುದನ್ನು ಕಣ್ಣಾರೆ ನೋಡಿದನು

[ಪುಟ 10ರಲ್ಲಿರುವ ಚಿತ್ರ]

ಕ್ರೈಸ್ತ ತಾಟಸ್ಥ್ಯದ ವಿಷಯದಲ್ಲಿ ಕೊರಿಯದ ಈ ಸಾಕ್ಷಿಗಳ ನಂಬಿಕೆ ಪರೀಕ್ಷಿಸಲ್ಪಟ್ಟಿತು