ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟವನ್ನು ತಾಳಿಕೊಳ್ಳುವ ಮೂಲಕ ಪ್ರಯೋಜನ ಹೊಂದಬಲ್ಲೆವು

ಕಷ್ಟವನ್ನು ತಾಳಿಕೊಳ್ಳುವ ಮೂಲಕ ಪ್ರಯೋಜನ ಹೊಂದಬಲ್ಲೆವು

ಕಷ್ಟವನ್ನು ತಾಳಿಕೊಳ್ಳುವ ಮೂಲಕ ಪ್ರಯೋಜನ ಹೊಂದಬಲ್ಲೆವು

“ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ.”—ಯಾಕೋಬ 5:11.

ಯಾವನೇ ಮಾಮೂಲಿ ವ್ಯಕ್ತಿಯು ಕಷ್ಟವನ್ನು ಅನುಭವಿಸಲು ಅಪೇಕ್ಷಿಸುವುದಿಲ್ಲ. ಮಾನವರು ಕಷ್ಟಾನುಭವಿಸುವಂತೆ ನಮ್ಮ ಸೃಷ್ಟಿಕರ್ತನಾದ ಯೆಹೋವನು ಸಹ ಬಯಸುವುದಿಲ್ಲ. ಆತನ ಪ್ರೇರಿತ ವಾಕ್ಯವನ್ನು ಪರೀಕ್ಷಿಸುವಾಗ ಮತ್ತು ಪುರುಷ ಹಾಗೂ ಸ್ತ್ರೀಯ ನಿರ್ಮಾಣದ ಬಳಿಕ ಸಂಭವಿಸಿದ ಸಂಗತಿಗಳನ್ನು ಗಮನಿಸುವಾಗ ನಾವಿದನ್ನು ಕಾಣಬಲ್ಲೆವು. ಮೊದಲಾಗಿ ದೇವರು ಪುರುಷನನ್ನು ಉಂಟುಮಾಡಿದನು. “ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು.” (ಆದಿಕಾಂಡ 2:7) ಆದಾಮನು ಶರೀರದಲ್ಲಿ ಮತ್ತು ಮನಸ್ಸಿನಲ್ಲಿ ಪರಿಪೂರ್ಣನಾಗಿದ್ದನು, ಅವನು ಕಾಯಿಲೆಬೀಳುವ ಇಲ್ಲವೇ ಸಾಯುವ ಅಗತ್ಯವಿರಲಿಲ್ಲ.

2 ಆದಾಮನು ಜೀವಿಸುತ್ತಿದ್ದ ಪರಿಸ್ಥಿತಿಗಳ ಕುರಿತೇನು? “ಯೆಹೋವ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್‌ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು. ಮತ್ತು ಯೆಹೋವದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯಮಾಡಿದನು.” (ಆದಿಕಾಂಡ 2:8, 9) ಹೌದು, ಆದಾಮನಿಗೆ ಒಂದು ವಿಸ್ಮಯಕರವಾದ ನಿವಾಸವಿತ್ತು. ಏದೆನ್‌ ತೋಟದಲ್ಲಿ ಯಾವ ಕಷ್ಟಾನುಭವವೂ ಇರಲಿಲ್ಲ.

3ಆದಿಕಾಂಡ 2:18 ನಮಗೆ ತಿಳಿಸುವುದು: “ಯೆಹೋವದೇವರು—ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು.” ಹೀಗೆ ಯೆಹೋವನು ಆದಾಮನಿಗೆ ಪರಿಪೂರ್ಣಳಾದ ಪತ್ನಿಯೊಬ್ಬಳನ್ನು ಉಂಟುಮಾಡಿ ಸಂತೋಷಭರಿತ ಕುಟುಂಬ ಜೀವನದ ಪ್ರತೀಕ್ಷೆಯನ್ನು ಶಕ್ಯವನ್ನಾಗಿ ಮಾಡಿದನು. (ಆದಿಕಾಂಡ 2:21-23) ಬೈಬಲ್‌ ಇನ್ನೂ ನಮಗೆ ತಿಳಿಸುವುದು: “ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ . . . ಅಂದನು.” (ಆದಿಕಾಂಡ 1:28) ಆ ಮೊದಲನೇ ಮಾನವ ಜೊತೆಗೆ ಏದೆನ್‌ ಪರದೈಸವನ್ನು ವಿಸ್ತರಿಸುವ ಮತ್ತು ತಕ್ಕ ಸಮಯದಲ್ಲಿ ಅದನ್ನು ಭೂಮಿಯಲ್ಲೆಲ್ಲಾ ಹಬ್ಬಿಸಿ ಭೌಗೋಲಿಕ ಪರದೈಸವನ್ನಾಗಿ ಮಾಡುವ ಆಶ್ಚರ್ಯಕರ ಅವಕಾಶವಿತ್ತು. ಮತ್ತು ಅವರು ಹುಟ್ಟಿಸಲಿದ್ದ ಸಂತೋಷಭರಿತ ಸಂತಾನವು ಕಷ್ಟಾನುಭವದಿಂದ ಮುಕ್ತವಾಗಿರಲಿಕ್ಕಿತ್ತು. ಎಂಥ ಉಜ್ವಲ ಆರಂಭ!—ಆದಿಕಾಂಡ 1:31.

ಕಷ್ಟಾನುಭವದ ಆರಂಭ

4 ಆದರೂ ಮಾನವ ಕುಟುಂಬದ ಪರಿಸ್ಥಿತಿಯನ್ನು ನಾವು ಇತಿಹಾಸದಾದ್ಯಂತ ನೋಡುವಾಗ ಏನೋ ಭೀಕರವಾದ ತಪ್ಪು ನಡೆದಿತ್ತೆಂಬುದು ಸುವ್ಯಕ್ತ. ಕೆಟ್ಟ ಸಂಗತಿಗಳು ಸಂಭವಿಸಿವೆ ಮತ್ತು ಮಾನವ ಕುಟುಂಬವು ಅತಿಯಾಗಿ ಕಷ್ಟವನ್ನು ಅನುಭವಿಸಿದೆ. ಶತಮಾನಗಳಿಂದ ಆದಾಮಹವ್ವರ ಸಂತತಿಯವರೆಲ್ಲರು ಕಾಯಿಲೆಬಿದ್ದಿದ್ದಾರೆ, ಮುದುಕರಾಗಿದ್ದಾರೆ ಮತ್ತು ಸತ್ತಿದ್ದಾರೆ. ನಿಶ್ಚಯವಾಗಿಯೂ ಇಂದು ಭೂಮಿಯು ಸಂತೋಷದ ಜನರಿಂದ ತುಂಬಿರುವ ಒಂದು ಪರದೈಸ್‌ ಆಗಿರುವುದಿಲ್ಲ. ರೋಮಾಪುರ 8:22ರಲ್ಲಿ ಈ ಪರಿಸ್ಥಿತಿಯನ್ನು ನಿಖರವಾಗಿ ವರ್ಣಿಸಲಾಗಿದೆ: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.”

5 ಬಹು ಸಮಯದಿಂದ ಅಸ್ತಿತ್ವದಲ್ಲಿರುವ ಈ ಅಪಾರ ಕಷ್ಟಾನುಭವಕ್ಕೆ ಯೆಹೋವನು ದೋಷಿಯಲ್ಲ. (2 ಸಮುವೇಲ 22:31) ಅಂಶಿಕವಾಗಿ ಮಾನವರ ಮೇಲೆಯೇ ದೋಷವನ್ನು ಹೊರಿಸಬೇಕು. “ಅವರು ಕೆಟ್ಟುಹೋದವರು; ಹೇಯಕೃತ್ಯಗಳನ್ನು ನಡಿಸುತ್ತಾರೆ.” (ಕೀರ್ತನೆ 14:1) ನಮ್ಮ ಆದಿ ಹೆತ್ತವರಿಗೆ ಅತ್ಯುತ್ತಮವಾದ ಆರಂಭವನ್ನು ಕೊಡಲಾಯಿತು. ಆ ಒಳ್ಳೇ ಆರಂಭದಲ್ಲಿ ಮುಂದರಿಯಲಿಕ್ಕಾಗಿ ಅವರಿಂದ ಕೇಳಲ್ಪಟ್ಟದ್ದು ಕೇವಲ ದೇವರಿಗೆ ವಿಧೇಯತೆ ಮಾತ್ರ. ಆದರೆ ಆದಾಮಹವ್ವರು ಯೆಹೋವನಿಗೆ ಅವಿಧೇಯರಾಗಿ ಸ್ವತಂತ್ರವಾದ ಮಾರ್ಗವನ್ನು ಬೆನ್ನಟ್ಟಲು ಆರಿಸಿಕೊಂಡರು. ನಮ್ಮ ಆದಿ ಹೆತ್ತವರು ಯೆಹೋವನನ್ನು ತಿರಸ್ಕರಿಸಿದ ಕಾರಣ ಅವರು ಇನ್ನು ಮುಂದೆ ಪರಿಪೂರ್ಣರಾಗಿರಲು ಸಾಧ್ಯವಿರಲಿಲ್ಲ. ಮರಣಾಧೀನರಾಗಿ ಹೋಗುವ ತನಕ ಅವರು ಕ್ಷಯಿಸುತ್ತಾ ಹೋಗಲಿದ್ದರು. ಆ ಅಪರಿಪೂರ್ಣತೆಗೆ ನಾವು ಬಾಧ್ಯರಾದೆವು.—ಆದಿಕಾಂಡ 3:17-19; ರೋಮಾಪುರ 5:12.

6 ಸಕಲ ಕಷ್ಟಾನುಭವವನ್ನು ಆರಂಭಿಸುವುದರಲ್ಲಿ ಪಿಶಾಚನಾದ ಸೈತಾನನೆಂದು ಕರೆಯಲ್ಪಟ್ಟ ಆತ್ಮಜೀವಿ ಕೂಡ ಸೇರಿದ್ದನು. ಅವನಿಗೆ ಇಚ್ಛಾಸ್ವಾತಂತ್ರ್ಯವನ್ನು ಅನುಗ್ರಹಿಸಲಾಗಿತ್ತು. ಆದರೆ ಆರಾಧನೆಯು ತನಗೆ ಸಲ್ಲಬೇಕೆಂಬ ಪ್ರಯತ್ನದಲ್ಲಿ ಅವನು ತನ್ನ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಿದನು. ಆರಾಧನೆಯಾದರೊ ಯೆಹೋವನಿಗೆ ಮಾತ್ರ ಸಲ್ಲಬೇಕು, ಆತನು ಸೃಷ್ಟಿಸಿದ ಜೀವಿಗಳಿಗಲ್ಲ. ಆದಾಮಹವ್ವರು “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗಲು” ಸಾಧ್ಯವಿತ್ತೊ ಎಂಬಂತೆ ದೇವರನ್ನು ಬಿಟ್ಟು ಸ್ವತಂತ್ರರಾಗಲು ಅವರನ್ನು ಪ್ರೇರೇಪಿಸಿದವನು ಸೈತಾನನೇ.—ಆದಿಕಾಂಡ 3:5.

ಆಳಲು ಹಕ್ಕುಳ್ಳಾತನು ಯೆಹೋವನು ಮಾತ್ರ

7 ಆ ದಂಗೆಯ ದುಷ್ಪರಿಣಾಮಗಳು ತೋರಿಸುತ್ತವೇನಂದರೆ ವಿಶ್ವದ ಪರಮಾಧಿಕಾರಿಯಾದ ಯೆಹೋವನಿಗೆ ಮಾತ್ರ ಆಳುವ ಹಕ್ಕಿದೆ ಮತ್ತು ಅವನ ಆಳಿಕೆಯೊಂದೇ ನೀತಿಯದ್ದು. ದುಷ್ಟತನ, ಅನೀತಿ, ಹಿಂಸಾಚಾರ ತುಂಬಿರುವ ತೀರ ಅತೃಪ್ತಿಕರ ಆಳ್ವಿಕೆಯನ್ನು “ಇಹಲೋಕಾಧಿಪತಿ”ಯಾದ ಸೈತಾನನು ವಿಕಸಿಸಿದ್ದಾನೆಂದು ಕಳೆದ ಸಾವಿರಾರು ವರ್ಷಗಳು ಪ್ರದರ್ಶಿಸಿವೆ. (ಯೋಹಾನ 12:31) ಸೈತಾನನ ಕೈಕೆಳಗಿನ ಈ ದೀರ್ಘಕಾಲದ ಸಂಕಟಕರ ಮಾನವಾಳಿಕೆಯು, ನೀತಿಯಿಂದಾಳುವ ಸಾಮರ್ಥ್ಯ ಮನುಷ್ಯರಿಗಿಲ್ಲವೆಂದೂ ತೋರಿಸಿಕೊಟ್ಟಿದೆ. (ಯೆರೆಮೀಯ 10:23) ಹೀಗಿರುವುದರಿಂದ ಯೆಹೋವನ ಹೊರತಾಗಿ ಮನುಷ್ಯರು ಕಲ್ಪಿಸಬಹುದಾದ ಪ್ರತಿಯೊಂದು ರೀತಿಯ ಆಳ್ವಿಕೆಯು ಸೋತುಹೋಗಲೇಬೇಕು ನಿಶ್ಚಯ. ಈ ಮಾತನ್ನು ಇತಿಹಾಸವು ಅತಿ ಸ್ಪಷ್ಟವಾಗಿ ರುಜುಪಡಿಸಿದೆ.

8 ಮಾನವರು ತನ್ನಿಂದ ಸ್ವತಂತ್ರವಾಗಿ ಆಳ್ವಿಕೆ ನಡಿಸುವಂತೆ ಈಗ ಸಾವಿರಾರು ವರ್ಷಗಳಿಂದ ಯೆಹೋವನು ಬಿಟ್ಟಿದ್ದಾನೆ. ಹೀಗಿರಲಾಗಿ ಅಂಥ ಆಳ್ವಿಕೆಗಳನ್ನು ಭೂಮಿಯಿಂದ ತೆಗೆದುಹಾಕಿ ತನ್ನ ಸ್ವಂತ ಸರಕಾರವನ್ನು ಆತನು ಸ್ಥಾಪಿಸುವುದು ನ್ಯಾಯವೆಂದು ರುಜುವಾಗುತ್ತದೆ. ಇದರ ಕುರಿತು ಒಂದು ಪ್ರವಾದನೆಯು ಹೇಳುವುದು: “ಆ ರಾಜರ ಕಾಲದಲ್ಲಿ [ಮಾನವ ಆಳ್ವಿಕೆಗಳು] ಪರಲೋಕದೇವರು ಒಂದು ರಾಜ್ಯವನ್ನು [ಕ್ರಿಸ್ತನ ಕೈಕೆಳಗಿನ ಸ್ವರ್ಗೀಯ ಸರಕಾರ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು. . . . ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಆಗ ದೆವ್ವಗಳ ಮತ್ತು ಮಾನವರ ಆಳ್ವಿಕೆಯು ಇಲ್ಲದೆ ಹೋಗುವುದು. ದೇವರ ಸ್ವರ್ಗೀಯ ಸರಕಾರ ಮಾತ್ರ ಅಸ್ತಿತ್ವದಲ್ಲಿದ್ದು ಭೂಮಿಯನ್ನಾಳುವುದು. ಕ್ರಿಸ್ತನು ಅರಸನಾಗಿರುವನು ಮತ್ತು ಭೂಮಿಯಿಂದ ಆರಿಸಲ್ಪಟ್ಟ 1,44,000 ಮಂದಿ ನಂಬಿಗಸ್ತ ಮಾನವರು ಅವನ ಜೊತೆ ಅರಸರಾಗಿರುವರು.—ಪ್ರಕಟನೆ 14:1.

ಕಷ್ಟಾನುಭವವು ಪ್ರಯೋಜನಗಳನ್ನು ತರಬಲ್ಲದು

9 ಆ ಸ್ವರ್ಗೀಯ ರಾಜ್ಯದಲ್ಲಿ ಆಳಲಿರುವವರ ಅರ್ಹತೆಗಳನ್ನು ಪರಿಶೀಲಿಸುವುದು ಕುತೂಹಲಕಾರಿ. ಮೊದಲನೆಯದಾಗಿ, ಕ್ರಿಸ್ತ ಯೇಸುವು ಅರಸನ ಪಾತ್ರಕ್ಕೆ ತಾನೆಷ್ಟು ಉತ್ತಮವಾಗಿ ಅರ್ಹನೆಂಬುದನ್ನು ತೋರಿಸಿಕೊಟ್ಟನು. ತನ್ನ ತಂದೆಯ ಚಿತ್ತವನ್ನು ಮಾಡುತ್ತಾ ಆತನ “ಕುಶಲ ಶಿಲ್ಪಿಯಾಗಿ” ಅಗಣಿತ ಯುಗಗಳಿಂದ ಯೆಹೋವನ ಸಂಗಡ ಅವನಿದ್ದನು. (ಜ್ಞಾನೋಕ್ತಿ 8:22-31, NIBV) ಯೇಸುವು ಭೂಮಿಗೆ ಬರುವಂತೆ ಯೆಹೋವನು ಏರ್ಪಡಿಸಿದಾಗ ಅವನು ಮನಃಪೂರ್ವಕವಾಗಿ ಸಿದ್ಧನಾದನು. ಭೂಮಿಯಲ್ಲಿದ್ದಾಗ ಯೆಹೋವನ ಪರಮಾಧಿಕಾರ ಮತ್ತು ರಾಜ್ಯದ ಕುರಿತು ಜನರಿಗೆ ತಿಳಿಸುವುದರ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಿದನು. ಆ ಪರಮಾಧಿಕಾರಕ್ಕೆ ಸಂಪೂರ್ಣವಾಗಿ ಅಧೀನನಾಗಿರುವ ಮೂಲಕ ಯೇಸುವು ನಮಗೆಲ್ಲರಿಗೆ ಒಂದು ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾನೆ.—ಮತ್ತಾಯ 4:17; 6:9.

10 ಯೇಸುವನ್ನು ಹಿಂಸಿಸಲಾಯಿತು ಮತ್ತು ಕೊನೆಗೆ ಕೊಲ್ಲಲಾಯಿತು. ಅವನ ಶುಶ್ರೂಷೆಯ ಸಮಯದಲ್ಲಿ ಸುತ್ತಮುತ್ತಲಿದ್ದ ಮಾನವರ ಸಂಕಟಕರ ಸ್ಥಿತಿಯನ್ನು ಅವನು ಅವಲೋಕಿಸಲು ಶಕ್ತನಾಗಿದ್ದನು. ಅವನು ಅದನ್ನು ಗಮನಿಸಿದ್ದು ಹಾಗೂ ವೈಯಕ್ತಿಕವಾಗಿ ಕಷ್ಟವನ್ನು ಅನುಭವಿಸಿದ್ದು ಅವನಿಗೇನಾದರೂ ಪ್ರಯೋಜನ ಕೊಟ್ಟಿತೊ? ಹೌದು ಕೊಟ್ಟಿತು. ಇಬ್ರಿಯ 5:8 ಹೇಳುವುದು: “ಹೀಗೆ ಆತನು [ದೇವರ] ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.” ಭೂಮಿಯಲ್ಲಿ ಯೇಸುವಿನ ಅನುಭವವು ಅವನನ್ನು ಹೆಚ್ಚು ಅನುಕಂಪ ಉಳ್ಳವನನ್ನಾಗಿ ಹಾಗೂ ಹೆಚ್ಚು ಕನಿಕರವುಳ್ಳವನನ್ನಾಗಿ ಮಾಡಿತು. ಮನುಷ್ಯ ಕುಟುಂಬದ ದಾರುಣ ಪರಿಸ್ಥಿತಿಯನ್ನು ಅವನು ಸಾಕ್ಷಾತ್ತಾಗಿ ಅನುಭವಿಸಿದನು. ಹೀಗೆ ಕಷ್ಟವನ್ನು ಅನುಭವಿಸುತ್ತಿದ್ದವರಿಗೆ ಅನುತಾಪ ತೋರಿಸಲು ಅವನಿಗೆ ಸಾಧ್ಯವಾಯಿತು ಮಾತ್ರವಲ್ಲ ಅವರಿಗೆ ಸಹಾಯಮಾಡುವ ತನ್ನ ಪಾತ್ರವನ್ನು ಉತ್ತಮವಾಗಿ ಅರಿತುಕೊಳ್ಳಲು ಶಕ್ತನಾದನು. ಇಬ್ರಿಯರಿಗೆ ಬರೆದ ಪತ್ರಿಕೆಯಲ್ಲಿ ಅಪೊಸ್ತಲ ಪೌಲನು ಇದನ್ನು ಹೇಗೆ ಎತ್ತಿಹೇಳುತ್ತಾನೆ ಎಂಬುದನ್ನು ಗಮನಿಸಿರಿ: “ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣಮಾಡುವದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು. ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.” “ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ. ಆದುದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.”—ಇಬ್ರಿಯ 2:17, 18; 4:14-16; ಮತ್ತಾಯ 9:36; 11:28-30.

11 ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಜೊತೆ ರಾಜರಾಗಿ ಆಳಲು ಭೂಮಿಯಿಂದ “ಕೊಂಡುಕೊಳ್ಳಲ್ಪಟ್ಟ” 1,44,000 ಮಂದಿಯ ಕುರಿತಾಗಿಯೂ ಹೆಚ್ಚುಕಡಿಮೆ ಇದನ್ನೇ ಹೇಳಸಾಧ್ಯವಿದೆ. (ಪ್ರಕಟನೆ 14:4) ಅವರೆಲ್ಲರೂ ಭೂಮಿಯಲ್ಲಿ ಮನುಷ್ಯರಾಗಿ ಜನಿಸಿದವರು, ಕಷ್ಟಸಂಕಟಗಳಿಂದ ಸುತ್ತುವರಿಯಲ್ಪಟ್ಟ ಲೋಕದಲ್ಲಿ ಬೆಳೆದವರು ಹಾಗೂ ಸ್ವತಃ ಕಷ್ಟಾನುಭವಕ್ಕೆ ಒಳಗಾದವರು. ಅವರಲ್ಲಿ ಅನೇಕರು ಹಿಂಸೆಗೊಳಗಾದರು, ಯೆಹೋವನಿಗೆ ಸಮಗ್ರತೆಯನ್ನು ತೋರಿಸಿದಕ್ಕಾಗಿ ಮತ್ತು ಯೇಸುವನ್ನು ಹಿಂಬಾಲಿಸಲು ಸಿದ್ಧರಾಗಿದ್ದಕ್ಕಾಗಿ ಕೆಲವರು ಕೊಲ್ಲಲ್ಪಟ್ಟರು ಸಹ. ಹೀಗಿದ್ದರೂ ಅವರು ತಮ್ಮ ‘ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಿ ನಾಚಿಕೆಪಡದೆ ಸುವಾರ್ತೆಗೋಸ್ಕರ ಶ್ರಮೆಯನ್ನು’ ಅನುಭವಿಸಿದರು. (2 ತಿಮೊಥೆಯ 1:8) ಸ್ವರ್ಗದಿಂದ ಮಾನವ ಕುಟುಂಬಕ್ಕೆ ನ್ಯಾಯ ತೀರಿಸಲು ಭೂಮಿಯಲ್ಲಿನ ಅವರ ಅನುಭವವು ಅವರನ್ನು ವಿಶೇಷವಾಗಿ ಅರ್ಹರನ್ನಾಗಿ ಮಾಡುತ್ತದೆ. ಅವರು ಹೆಚ್ಚು ಅನುತಾಪ ಉಳ್ಳವರೂ ದಯಾಪರರೂ ಮತ್ತು ಜನರಿಗೆ ಸಹಾಯಮಾಡಲು ಆತುರವುಳ್ಳವರೂ ಆಗಿರಲು ಕಲಿತಿದ್ದಾರೆ.—ಪ್ರಕಟನೆ 5:10; 14:2-5; 20:6.

ಭೂನಿರೀಕ್ಷೆಯುಳ್ಳವರ ಸಂತೋಷ

12 ಅಸ್ವಸ್ಥತೆ, ದುಃಖ ಮತ್ತು ಮರಣದಿಂದ ಮುಕ್ತವಾದ ಪರದೈಸ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯುಳ್ಳವರಿಗೆ ಇಂದಿನ ಕಷ್ಟಾನುಭವವು ಏನಾದರೂ ಪ್ರಯೋಜನ ಕೊಡಬಲ್ಲದೋ? ಕಷ್ಟಸಂಕಟಗಳು ತರುವ ನೋವು ಮತ್ತು ಬೇಗುದಿಯು ನಿಶ್ಚಯವಾಗಿಯೂ ಅಪೇಕ್ಷಣೀಯವಲ್ಲ ನಿಜ. ಆದರೆ ಅಂಥ ಕಷ್ಟಗಳನ್ನು ನಾವು ತಾಳಿಕೊಳ್ಳುವಾಗ, ವೈಯಕ್ತಿಕ ಸದ್ಗುಣಗಳು ವರ್ಧಿಸಬಲ್ಲವು ಮತ್ತು ಸಂತೋಷವು ಫಲಿಸಬಲ್ಲದು.

13 ಇದರ ಕುರಿತು ಪ್ರೇರಿತ ವಾಕ್ಯವು ಏನು ಹೇಳುತ್ತದೆಂಬುದನ್ನು ಗಮನಿಸಿರಿ: “ಒಂದು ವೇಳೆ ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ.” “ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರೇ.” (1 ಪೇತ್ರ 3:14; 4:14) “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು.” (ಮತ್ತಾಯ 5:11, 12) “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು.”—ಯಾಕೋಬ 1:12.

14 ನಾವು ತಾಳಿಕೊಳ್ಳಬಹುದಾದ ಕಷ್ಟಸಂಕಟಗಳು ತಾವೇ ನಮಗೆ ಸಂತೋಷ ತರುವುದಿಲ್ಲ ಖಂಡಿತ. ಯೆಹೋವನ ಚಿತ್ತವನ್ನು ಮಾಡುವ ಮತ್ತು ಯೇಸುವಿನ ಮಾದರಿಯನ್ನು ಅನುಸರಿಸುವ ಕಾರಣದಿಂದ ಕಷ್ಟ ಅನುಭವಿಸುತ್ತಿದ್ದೇವೆಂಬ ಅರಿವೇ ನಮಗೆ ನಿಜ ಸಂತೋಷ ಮತ್ತು ಸಂತೃಪ್ತಿಯನ್ನು ತರುತ್ತದೆ. ಉದಾಹರಣೆಗೆ, ಒಂದನೇ ಶತಮಾನದಲ್ಲಿ ಯೇಸು ಕ್ರಿಸ್ತನ ಕುರಿತು ಸಾರಿದುದಕ್ಕಾಗಿ ಕೆಲವು ಅಪೊಸ್ತಲರನ್ನು ಸೆರೆಮನೆಗೆ ಹಾಕಲಾಯಿತು, ಯೆಹೂದಿ ಮುಖ್ಯ ನ್ಯಾಯಾಲಯದ ಮುಂದೆ ತರಲಾಯಿತು ಮತ್ತು ಗದರಿಸಲಾಯಿತು. ಅವರನ್ನು ಚಡಿಗಳಿಂದ ಹೊಡೆದು ಅನಂತರ ಬಿಟ್ಟುಬಿಡಲಾಯಿತು. ಆಗ ಅವರ ಪ್ರತಿಕ್ರಿಯೆ ಏನಾಗಿತ್ತು? ಅಪೊಸ್ತಲರು “ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀ ಸಭೆಯ ಎದುರಿನಿಂದ ಹೊರಟು” ಹೋದರು ಎಂದು ಬೈಬಲ್‌ ವೃತ್ತಾಂತವು ತಿಳಿಸುತ್ತದೆ. (ಅ. ಕೃತ್ಯಗಳು 5:17-41) ಅವರು ಸಂತೋಷಿಸಿದ್ದು ಆ ಚಡಿಯೇಟುಗಳಿಂದಲ್ಲ ಹಾಗೂ ಅದರಿಂದ ಉಂಟಾದ ನೋವಿನಿಂದಾಗಿ ಅಲ್ಲ. ಯೆಹೋವನಿಗೆ ಸಮಗ್ರತೆ ತೋರಿಸಿದ್ದಕ್ಕಾಗಿ ಮತ್ತು ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆದದ್ದಕ್ಕಾಗಿ ಹಾಗಾಯಿತೆಂಬ ಅರಿವಿನಿಂದಲೇ ಅವರು ಸಂತೋಷಪಟ್ಟರು.—ಅ. ಕೃತ್ಯಗಳು 16:25; 2 ಕೊರಿಂಥ 12:10; 1 ಪೇತ್ರ 4:13.

15 ನಾವು ವಿರೋಧ ಮತ್ತು ಹಿಂಸೆಯನ್ನು ಯೋಗ್ಯ ಮನೋಭಾವದಿಂದ ತಾಳಿಕೊಳ್ಳುವುದಾದರೆ ಅದು ನಮ್ಮಲ್ಲಿ ತಾಳ್ಮೆಯನ್ನು ಬೆಳೆಸಬಲ್ಲದು. ಭವಿಷ್ಯತ್ತಿನಲ್ಲಿ ಬರುವ ಕಷ್ಟಾನುಭವಗಳನ್ನು ತಾಳಿಕೊಳ್ಳುವಂತೆ ಇದು ನಮಗೆ ಸಹಾಯಮಾಡುವುದು. ಬೈಬಲು ಹೇಳುವುದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” (ಯಾಕೋಬ 1:2, 3) ಅದೇ ರೀತಿ ರೋಮಾಪುರ 5:3-5 ನಮಗೆ ತಿಳಿಸುವುದು: “ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ [“ಸಂಕಟಗಳಲ್ಲಿಯೂ,” NIBV] ಉಲ್ಲಾಸವಾಗಿದ್ದೇವೆ. ಯಾಕಂದರೆ ಉಪದ್ರವದಿಂದ [‘ಸಂಕಟದಿಂದ’] ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.” ಹೀಗೆ, ಕ್ರೈಸ್ತ ಜೀವನಕ್ರಮದ ಕಾರಣ ನಾವೀಗ ಕಷ್ಟಗಳನ್ನು ಎಷ್ಟು ಹೆಚ್ಚಾಗಿ ತಾಳಿಕೊಳ್ಳುತ್ತೇವೊ ಅಷ್ಟು ಹೆಚ್ಚಾಗಿ ಈ ದುಷ್ಟ ವಿಷಯ ವ್ಯವಸ್ಥೆಯಲ್ಲಿ ಮುಂದಿರುವ ಅಧಿಕ ಸಂಕಟಗಳನ್ನು ತಾಳಿಕೊಳ್ಳಲು ಹೆಚ್ಚು ಉತ್ತಮವಾಗಿ ಸನ್ನದ್ಧರಾಗಿರುವೆವು.

ಯೆಹೋವನು ಪ್ರತಿಫಲ ಕೊಡುವನು

16 ಕ್ರೈಸ್ತ ಜೀವನ ಮಾರ್ಗವನ್ನು ಪಾಲಿಸುತ್ತಿರುವ ಕಾರಣ ಬರುವ ಹಿಂಸೆ ಮತ್ತು ವಿರೋಧದಿಂದಾಗಿ ನಾವು ನಮ್ಮ ಐಹಿಕ ಸ್ವತ್ತುಗಳನ್ನು ಕಳೆದುಕೊಂಡಾಗಲೂ ಯೆಹೋವನು ಪೂರ್ಣ ಪ್ರತಿಫಲಕೊಡುವನೆಂದು ತಿಳಿಯುವುದರಲ್ಲಿ ಸಂತೃಪ್ತಿಯನ್ನು ಹೊಂದಬಲ್ಲೆವು. ಉದಾಹರಣೆಗಾಗಿ, ಸ್ವರ್ಗಕ್ಕೆ ಹೋಗುವ ನಿರೀಕ್ಷೆಯಿದ್ದ ಕೆಲವರಿಗೆ ಅಪೊಸ್ತಲ ಪೌಲನು ಹೇಳಿದ್ದು: “ನೀವು . . . ನಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ [ದೇವರ ರಾಜ್ಯದಲ್ಲಿ ರಾಜರಾಗಿ ಆಳುವ] ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟಿರಿ.” (ಇಬ್ರಿಯ 10:34) ಯೆಹೋವನ ಹಾಗೂ ಕ್ರಿಸ್ತನ ಮಾರ್ಗದರ್ಶನೆಯ ಕೆಳಗೆ ಹೊಸ ಲೋಕದಲ್ಲಿ ಭೂನಿವಾಸಿಗಳಿಗೆ ವಿಸ್ಮಯಕರ ಆಶೀರ್ವಾದಗಳನ್ನು ಕೊಡುವುದರಲ್ಲಿ ಪಾಲ್ಗೊಳ್ಳುವಾಗ ಅವರಿಗೆ ಆಗಲಿರುವ ಸಂತೋಷವನ್ನು ಊಹಿಸಿಕೊಳ್ಳಿರಿ. ನಂಬಿಗಸ್ತ ಕ್ರೈಸ್ತರಿಗೆ ಅಪೊಸ್ತಲ ಪೌಲನ ಈ ಮಾತುಗಳು ಅದೆಷ್ಟು ಸತ್ಯವಾಗಿವೆ: “ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ.”—ರೋಮಾಪುರ 8:18.

17 ತದ್ರೀತಿಯಲ್ಲಿ ಭೂನಿರೀಕ್ಷೆಯಿರುವವರು ಸಹ ಯೆಹೋವನ ಸೇವೆಮಾಡುವುದರಿಂದ ಈಗ ಏನನ್ನೇ ಕಳೆದುಕೊಳ್ಳಲಿ ಅಥವಾ ತಾವಾಗಿಯೆ ಏನನ್ನೇ ಬಿಟ್ಟುಕೊಟ್ಟಿರಲಿ, ಭವಿಷ್ಯದಲ್ಲಿ ಆತನು ಮಾಡಲಿರುವ ಸಂಗತಿಗಳಿಂದ ಅವರಿಗೆ ಅಪರಿಮಿತವಾದ ಪ್ರತಿಫಲವನ್ನು ಕೊಡುವನು. ಆತನು ಅವರಿಗೆ ಪರದೈಸ ಭೂಮಿಯಲ್ಲಿ ಅಂತ್ಯವಿಲ್ಲದ ಪರಿಪೂರ್ಣ ಜೀವನವನ್ನು ಖಂಡಿತ ಕೊಡುವನು. ಆ ಹೊಸ ಲೋಕದಲ್ಲಿ ಯೆಹೋವನು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಎಂಥ ಆಶ್ಚರ್ಯಕರ ವಾಗ್ದಾನವು! ಯೆಹೋವನಿಗಾಗಿ ಈ ಲೋಕದಲ್ಲಿ ನಾವೇನನ್ನೇ ತ್ಯಾಗಮಾಡಿರಲಿ ಕಷ್ಟವನ್ನು ತಾಳಿಕೊಳ್ಳುವ ತನ್ನ ನಂಬಿಗಸ್ತ ಸೇವಕರಿಗೆ ಆತನು ಕೊಡಲಿರುವ ಆ ವಿಸ್ಮಯಕರ ನಿತ್ಯಜೀವಕ್ಕೆ ಅದು ಸರಿಸಾಟಿಯಾಗಸಾಧ್ಯವಿಲ್ಲ.

18 ನಾವು ಇನ್ನೂ ತಾಳಿಕೊಳ್ಳಲು ಇರಬಹುದಾದ ಯಾವುದೇ ಕಷ್ಟಾನುಭವವು ನಾವು ದೇವರ ಹೊಸ ಲೋಕದಲ್ಲಿ ನಿತ್ಯಜೀವವನ್ನು ಆನಂದಿಸುವುದಕ್ಕೆ ನಿಶ್ಚಯವಾಗಿಯೂ ಅಡ್ಡಬರಲಾರದು. ಎಲ್ಲ ಕಷ್ಟಾನುಭವಗಳನ್ನು ಹೊಸ ಲೋಕದ ಉಜ್ವಲವಾದ ಪರಿಸ್ಥಿತಿಗಳು ಪೂರ್ಣವಾಗಿ ನಷ್ಟಭರ್ತಿ ಮಾಡುವವು. ಯೆಶಾಯ 65:17, 18 ನಮಗನ್ನುವುದು: “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.” ಆದುದರಿಂದ ಯೇಸುವಿನ ಮಲತಮ್ಮ ಯಾಕೋಬನು ಹೀಗೆ ಹೇಳಿದ್ದು ತಕ್ಕದಾಗಿತ್ತು: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ.” (ಯಾಕೋಬ 5:11) ಹೌದು, ಸದ್ಯದ ಕಷ್ಟಾನುಭವವನ್ನು ನಂಬಿಗಸ್ತಿಕೆಯಿಂದ ತಾಳಿಕೊಂಡರೆ ಈಗಲೂ ಭವಿಷ್ಯತ್ತಿನಲ್ಲೂ ನಾವು ಪ್ರಯೋಜನ ಹೊಂದಬಲ್ಲೆವು. (w07 8/15)

ನೀವು ಹೇಗೆ ಉತ್ತರಿಸುವಿರಿ?

• ಮನುಷ್ಯರು ಕಷ್ಟಗಳನ್ನು ಅನುಭವಿಸಲು ಆರಂಭಿಸಿದ್ದು ಹೇಗೆ?

• ಕಷ್ಟಾನುಭವವು ಭೂಮಿಯ ಭಾವೀ ಅರಸರಿಗೆ ಮತ್ತು ನಿವಾಸಿಗಳಿಗೆ ಯಾವ ಪ್ರಯೋಜನ ತರಬಹುದು?

• ಕಷ್ಟಗಳ ಮಧ್ಯೆಯೂ ಈಗ ನಾವೇಕೆ ಸಂತೋಷದಿಂದಿರಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. ಮನುಷ್ಯನು ಕಷ್ಟಾನುಭವಿಸುವಂತೆ ಯೆಹೋವನು ಉದ್ದೇಶಿಸಿರಲಿಲ್ಲವೆಂದು ಯಾವುದು ತೋರಿಸುತ್ತದೆ?

3. ಪ್ರಥಮ ಮಾನವ ದಂಪತಿಗೆ ಯಾವ ಪ್ರತೀಕ್ಷೆಗಳಿದ್ದವು?

4. ಇತಿಹಾಸವನ್ನು ನೋಡುವುದಾದರೆ ಮಾನವಕುಲದ ಕುರಿತು ಯಾವುದು ಸುಸ್ಪಷ್ಟ?

5. ಮಾನವ ಕುಟುಂಬದೊಳಗೆ ಕಷ್ಟಾನುಭವವನ್ನು ಆರಂಭಿಸುವುದರಲ್ಲಿ ನಮ್ಮ ಆದಿ ಹೆತ್ತವರು ಹೇಗೆ ಒಳಗೂಡಿದ್ದರು?

6. ಕಷ್ಟಾನುಭವವನ್ನು ಆರಂಭಿಸಿದ್ದರಲ್ಲಿ ಸೈತಾನನ ಪಾತ್ರವೇನಾಗಿತ್ತು?

7. ಯೆಹೋವನ ವಿರುದ್ಧವಾದ ದಂಗೆಯ ದುಷ್ಪರಿಣಾಮಗಳು ಏನನ್ನು ಪ್ರದರ್ಶಿಸುತ್ತವೆ?

8. ಎಲ್ಲ ರೀತಿಯ ಮಾನವ ಆಳ್ವಿಕೆಯ ಸಂಬಂಧದಲ್ಲಿ ಯೆಹೋವನ ಉದ್ದೇಶವೇನು, ಮತ್ತು ಆ ಉದ್ದೇಶವನ್ನು ಆತನು ಪೂರೈಸುವುದು ಹೇಗೆ?

9, 10. ತಾನು ಅನುಭವಿಸಿದ ಕಷ್ಟಗಳಿಂದ ಯೇಸು ಪ್ರಯೋಜನ ಹೊಂದಿದ್ದು ಹೇಗೆ?

11. ಭವಿಷ್ಯತ್ತಿನ ರಾಜ-ಯಾಜಕರು ಭೂಮಿಯಲ್ಲಿ ಗಳಿಸುವ ಅನುಭವವು ಅಧಿಪತಿಗಳಾಗುವ ಅವರಿಗೆ ಹೇಗೆ ಪ್ರಯೋಜನಕರವಾಗಲಿದೆ?

12, 13. ಭೂನಿರೀಕ್ಷೆ ಇರುವವರು ಕಷ್ಟಾನುಭವದಿಂದ ಹೇಗೆ ಪ್ರಯೋಜನ ಹೊಂದಬಲ್ಲರು?

14. ಕಷ್ಟಾನುಭವಗಳು ಯೆಹೋವನ ಆರಾಧಕರನ್ನು ಸಂತೋಷಪಡಿಸುವುದು ಯಾವ ಅರ್ಥದಲ್ಲಿ?

15. ನಾವೀಗ ಕಷ್ಟಗಳನ್ನು ತಾಳಿಕೊಳ್ಳುವುದು ಭವಿಷ್ಯತ್ತಿನಲ್ಲಿ ಹೇಗೆ ನಮಗೆ ಪ್ರಯೋಜನಕಾರಿಯಾಗಬಲ್ಲದು?

16. ಭವಿಷ್ಯತ್ತಿನಲ್ಲಿ ರಾಜ ಮತ್ತು ಯಾಜಕರಾಗುವವರು ಹಿಂದೆ ಅನುಭವಿಸಿದ್ದ ಕಷ್ಟಾನುಭವಕ್ಕಾಗಿ ಪ್ರತಿಫಲ ನೀಡಲು ಯೆಹೋವನು ಏನು ಮಾಡುವನು?

17. ಈಗ ಯೆಹೋವನನ್ನು ನಿಷ್ಠೆಯಿಂದ ಸೇವಿಸುವ ಭೂನಿರೀಕ್ಷೆಯುಳ್ಳ ಜನರಿಗೆ ಆತನು ಏನು ಕೊಡಲಿರುವನು?

18. ಸಾಂತ್ವನ ನೀಡುವ ಯಾವ ವಾಗ್ದಾನವನ್ನು ಯೆಹೋವನು ತನ್ನ ವಾಕ್ಯದಲ್ಲಿ ನಮಗೆ ಕೊಡುತ್ತಾನೆ?

[ಪುಟ 13ರಲ್ಲಿರುವ ಚಿತ್ರ]

ನಮ್ಮ ಆದಿ ಹೆತ್ತವರ ಮುಂದೆ ಒಂದು ಆಶ್ಚರ್ಯಕರವಾದ ಭವಿಷ್ಯವಿತ್ತು

[ಪುಟ 15ರಲ್ಲಿರುವ ಚಿತ್ರ]

ಯೇಸು ಕಷ್ಟಾನುಭವವನ್ನು ಗಮನಿಸಿದ್ದು ಅವನೊಬ್ಬ ಒಳ್ಳೇ ರಾಜ ಮತ್ತು ಮಹಾಯಾಜಕನಾಗಲು ಸಿದ್ಧನಾಗುವಂತೆ ನೆರವಾಯಿತು

[ಪುಟ 17ರಲ್ಲಿರುವ ಚಿತ್ರ]

ಅಪೊಸ್ತಲರು ‘ತಮ್ಮ ನಂಬಿಕೆಯ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸಿದರು’