ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನ್ಯಾಯವನ್ನು ಪ್ರೀತಿಸುವವನು

ಯೆಹೋವನು ನ್ಯಾಯವನ್ನು ಪ್ರೀತಿಸುವವನು

ಯೆಹೋವನು ನ್ಯಾಯವನ್ನು ಪ್ರೀತಿಸುವವನು

“ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ.”—ಯೆಶಾಯ 61:8.

ನ್ಯಾಯವನ್ನು ‘ಪಕ್ಷಪಾತವಿಲ್ಲದ, ಪ್ರಾಮಾಣಿಕವಾದ, ನೈತಿಕವಾಗಿ ಉದಾತ್ತವೂ ಯೋಗ್ಯವೂ ಆಗಿರುವುದಕ್ಕೆ ಹೊಂದಿಕೆಯಲ್ಲಿ ಕಾರ್ಯವೆಸಗುವ ಗುಣ’ ಎಂದು ಅರ್ಥನಿರೂಪಿಸಲಾಗುತ್ತದೆ. ಅನ್ಯಾಯದಲ್ಲಾದರೊ ಅಪ್ರಾಮಾಣಿಕತೆ, ಪೂರ್ವಾಗ್ರಹ, ಕೆಟ್ಟತನ ಮತ್ತು ಇತರರಿಗೆ ನಿಷ್ಕಾರಣವಾಗಿ ಹಾನಿಯನ್ನುಂಟುಮಾಡುವ ಗುಣಗಳು ಸೇರಿರುತ್ತವೆ.

2 ವಿಶ್ವ ಪರಮಾಧಿಕಾರಿಯಾದ ಯೆಹೋವನ ಕುರಿತು ಸುಮಾರು 3,500 ವರ್ಷಗಳ ಹಿಂದೆ ಮೋಶೆಯು ಬರೆದದ್ದು: “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು.” (ಧರ್ಮೋಪದೇಶಕಾಂಡ 32:4) ಏಳು ಶತಮಾನಕ್ಕಿಂತಲೂ ಹೆಚ್ಚು ಸಮಯದ ತರುವಾಯ ಯೆಶಾಯನು ಈ ಮಾತುಗಳನ್ನು ದಾಖಲಿಸುವಂತೆ ದೇವರು ಪ್ರೇರೇಪಿಸಿದನು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ.” (ಯೆಶಾಯ 61:8) ಅನಂತರ ಒಂದನೆಯ ಶತಮಾನದಲ್ಲಿ ಪೌಲನು ಉದ್ಗಾರವೆತ್ತಿದ್ದು: “ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ.” (ರೋಮಾಪುರ 9:14) ಮತ್ತು ಅದೇ ಶತಮಾನದಲ್ಲಿ ಪೇತ್ರನು ಘೋಷಿಸಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” (ಅ. ಕೃತ್ಯಗಳು 10:34, 35) ಹೌದು, “ಯೆಹೋವನು ನ್ಯಾಯವನ್ನು ಪ್ರೀತಿಸುತ್ತಾನೆ.”—ಕೀರ್ತನೆ 37:28, NIBV; ಮಲಾಕಿಯ 3:6.

ಅನ್ಯಾಯದ ಮೇಲುಗೈ

3 ನ್ಯಾಯವು ಇಂದು ಮೇಲುಗೈ ಪಡೆದಿರುವುದಿಲ್ಲ. ಸಮಾಜದ ಎಲ್ಲಾ ಅಂತಸ್ತುಗಳಲ್ಲಿ ಅನ್ಯಾಯದ ಕೃತ್ಯಗಳಿಗೆ ನಾವು ಬಲಿಯಾಗಸಾಧ್ಯವಿದೆ. ನಮ್ಮ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಅಧಿಕಾರಿಗಳೊಂದಿಗಿನ ನಮ್ಮ ವ್ಯವಹಾರಗಳಲ್ಲಿ, ಮತ್ತಿತರ ವಿಧಗಳಲ್ಲಿ ಹಾಗೂ ನಮ್ಮ ಕುಟುಂಬ ಸಂಬಂಧಗಳಲ್ಲಿ ಸಹ ನಾವದಕ್ಕೆ ಗುರಿಯಾಗಬಹುದು. ಅಂಥ ಅನ್ಯಾಯದ ಕೃತ್ಯಗಳೇನೂ ಹೊಸತಲ್ಲ. ನಮ್ಮ ಪ್ರಥಮ ಹೆತ್ತವರು ದಂಗೆಯೆದ್ದು ಸ್ವೇಚ್ಛಾಚಾರಿಗಳಾದಾಗ ಅನ್ಯಾಯವು ಮನುಷ್ಯ ಕುಟುಂಬವನ್ನು ಹೊಕ್ಕಿತು. ಅದಕ್ಕೆ ಅವರನ್ನು ಪ್ರೇರಿಸಿದವನು ಪಿಶಾಚನಾದ ಸೈತಾನನಾಗಿ ಪರಿಣಮಿಸಿದ ದಂಗೆಕೋರ ಆತ್ಮಜೀವಿಯೇ ಆಗಿದ್ದನು. ಯೆಹೋವನು ಆದಾಮಹವ್ವರಿಗೆ ಮತ್ತು ಸೈತಾನನಿಗೆ ಅನುಗ್ರಹಿಸಿದ್ದ ಇಚ್ಛಾಸ್ವಾತಂತ್ರ್ಯವೆಂಬ ಆಶ್ಚರ್ಯಕರ ಕೊಡುಗೆಯನ್ನು ಅವರು ದುರುಪಯೋಗಿಸಿದ್ದು ನಿಶ್ಚಯವಾಗಿಯೂ ಅನ್ಯಾಯದ ಕೃತ್ಯವಾಗಿತ್ತು. ಅವರ ಆ ದುಷ್ಕ್ರಿಯೆಗಳು ಇಡೀ ಮಾನವ ಕುಟುಂಬಕ್ಕಾಗಿ ಅಪಾರವಾದ ಕಷ್ಟಾನುಭವ ಮತ್ತು ಮರಣವನ್ನು ಸಹ ತಂದವು.—ಆದಿಕಾಂಡ 3:1-6; ರೋಮಾಪುರ 5:12; ಇಬ್ರಿಯ 2:14.

4 ಏದೆನ್‌ ತೋಟದಲ್ಲಾದ ಆ ದಂಗೆಯಿಂದ ಹಿಡಿದು 6,000 ವರ್ಷಗಳಿಂದ ಮಾನವ ಸಮಾಜದಲ್ಲಿ ಅನ್ಯಾಯವು ಅಸ್ತಿತ್ವದಲ್ಲಿದೆ! ಇದನ್ನು ನಿಶ್ಚಯವಾಗಿಯೂ ನಿರೀಕ್ಷಿಸಸಾಧ್ಯವಿದೆ ಯಾಕೆಂದರೆ ಸೈತಾನನು ಈ ಲೋಕದ ದೇವರಾಗಿದ್ದಾನೆ. (2 ಕೊರಿಂಥ 4:4) ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದು ಯೆಹೋವನನ್ನು ನಿಂದಿಸುವವನೂ ವಿರೋಧಿಸುವವನೂ ಆಗಿದ್ದಾನೆ. (ಯೋಹಾನ 8:44) ಘೋರವಾದ ಅನ್ಯಾಯಗಳನ್ನು ಅವನು ಯಾವಾಗಲೂ ನಡೆಸಿದ್ದಾನೆ. ಉದಾಹರಣೆಗೆ, ನೋಹನ ದಿನದ ಜಲಪ್ರಳಯಕ್ಕೆ ಮುಂಚೆ, ಅಂಶಿಕವಾಗಿ ಸೈತಾನನ ದುಷ್ಟ ಪ್ರಭಾವದಿಂದಾಗಿ “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ” ಯೆಹೋವನು ಗಮನಿಸಿದನು. (ಆದಿಕಾಂಡ 6:5) ಆ ಸನ್ನಿವೇಶವು ಯೇಸುವಿನ ಕಾಲದಲ್ಲಿ ಇನ್ನೂ ಪ್ರಚಲಿತವಾಗಿತ್ತು. ಅವನಂದದ್ದು: “ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.” ಅಂದರೆ, ಅನ್ಯಾಯವೂ ಸೇರಿ ಪ್ರತಿದಿನ ಸಂಕಟಕರ ಸಮಸ್ಯೆಗಳಿರುತ್ತವೆ ಎಂದು ಯೇಸು ಸೂಚಿಸಿದನು. (ಮತ್ತಾಯ 6:34) ಅತಿ ನಿಷ್ಕೃಷ್ಟವಾಗಿಯೆ ಬೈಬಲ್‌ ಅನ್ನುವುದು: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.”—ರೋಮಾಪುರ 8:22.

5 ಹೀಗೆ ಕೆಟ್ಟ ವಿಷಯಗಳಿಂದಾಗಿ ಆಗುವ ಘೋರ ಅನ್ಯಾಯಗಳು ಮಾನವ ಇತಿಹಾಸದಾದ್ಯಂತ ಸಂಭವಿಸಿರುತ್ತವೆ. ಈಗಲಾದರೊ ಸನ್ನಿವೇಶವು ಎಂದಿಗಿಂತಲೂ ಕೆಟ್ಟದ್ದಾಗಿದೆ. ಏಕೆ? ಏಕೆಂದರೆ ಈ ಸದ್ಯದ ಭಕ್ತಿಹೀನ ವಿಷಯ ವ್ಯವಸ್ಥೆಯು ಅನೇಕ ದಶಕಗಳಿಂದ ತನ್ನ “ಕಡೇ ದಿವಸಗಳಲ್ಲಿ” ಇದೆ ಮತ್ತು ತನ್ನ ಅಂತ್ಯಕ್ಕೆ ಹತ್ತಿರವಾಗುತ್ತಾ ಬರುತ್ತಿರುವ ಈ ಸಮಯದಲ್ಲಿ “ಕಠಿನ ಕಾಲ”ಗಳನ್ನು ಅನುಭವಿಸುತ್ತಲಿದೆ. ಇತಿಹಾಸದ ಈ ಸಮಯದಲ್ಲಿ ಮನುಷ್ಯರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ . . . ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ” ಆಗಿರುವರೆಂದು ಬೈಬಲು ಮುಂತಿಳಿಸಿದೆ. (2 ತಿಮೊಥೆಯ 3:1-5) ಇಂತಹ ಕೆಟ್ಟ ಪ್ರವೃತ್ತಿಗಳು ಸಕಲ ಅನ್ಯಾಯದ ಕೃತ್ಯಗಳಿಗೆ ನಡೆಸುತ್ತವೆ.

6 ಕಳೆದ ನೂರು ವರ್ಷಗಳು ಕಂಡಷ್ಟು ಅನ್ಯಾಯದ ವೃದ್ಧಿ ಹಿಂದೆಂದೂ ಇರಲಿಲ್ಲ. ಇದಕ್ಕೆ ಒಂದು ಕಾರಣವು ಈ ವರ್ಷಗಳಲ್ಲಿ ಹೆಚ್ಚು ಯುದ್ಧಗಳು ನಡೆದಿರುವುದೇ ಆಗಿದೆ. ಉದಾಹರಣೆಗಾಗಿ, IIನೇ ಲೋಕ ಯುದ್ಧ ಒಂದರಲ್ಲಿಯೇ ಸುಮಾರು 5ರಿಂದ 6 ಕೋಟಿ ಜನರು ಸತ್ತರೆಂದು ಕೆಲವು ಚರಿತ್ರೆಗಾರರು ಅಂದಾಜು ಮಾಡುತ್ತಾರೆ. ಸತ್ತವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದು ನಿರ್ದೋಷಿಗಳಾದ ಸ್ತ್ರೀಪುರುಷರು ಮತ್ತು ಮಕ್ಕಳು ಆಗಿದ್ದರು. ಆ ಯುದ್ಧವು ಕೊನೆಗೊಂಡಂದಿನಿಂದ ನಡೆದ ಬೇರೆ ಹಲವಾರು ಯುದ್ಧಗಳಲ್ಲಿ ಇನ್ನು ಲಕ್ಷಾಂತರ ಜನರು ಸತ್ತಿರುತ್ತಾರೆ, ಇವರಲ್ಲೂ ಹೆಚ್ಚಿನವರು ನಾಗರಿಕರೇ ಆಗಿದ್ದರು. ಸೈತಾನನು ಇಂಥ ಅನ್ಯಾಯಗಳನ್ನು ಪ್ರವರ್ಧಿಸುವುದು ಅವನು ಬಹು ಕ್ರೋಧಿತನಾಗಿರುವ ಕಾರಣದಿಂದಲೇ. ಏಕೆ? ಏಕೆಂದರೆ ಯೆಹೋವನು ಬೇಗನೆ ಅವನನ್ನು ಸಂಪೂರ್ಣವಾಗಿ ನಾಶಮಾಡುವನೆಂದು ಅವನಿಗೆ ತಿಳಿದಿದೆ. ಬೈಬಲ್‌ ಪ್ರವಾದನೆಯು ಅದನ್ನು ಈ ರೀತಿಯಾಗಿ ಹೇಳಿದೆ: “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”—ಪ್ರಕಟನೆ 12:12.

7 ಭೌಗೋಲಿಕವಾಗಿ ಮಿಲಿಟರಿ ಇಲಾಖೆಯು ಈಗ ವರ್ಷಕ್ಕೆ ಸುಮಾರು ಒಂದು ಸಾವಿರ ಕೋಟಿ ಅಮೆರಿಕನ್‌ ಡಾಲರ್‌ಗಳನ್ನು ಖರ್ಚುಮಾಡುತ್ತಿದೆ. ಈ ಎಲ್ಲ ಹಣವನ್ನು ಶಾಂತಿಯ ಕಾರ್ಯಗಳಿಗೆ ಖರ್ಚುಮಾಡಿರುತ್ತಿದ್ದಲ್ಲಿ ಜೀವನದ ಆವಶ್ಯಕತೆಗಳಿಲ್ಲದೆ ಬಳಲುತ್ತಿರುವ ಕೋಟ್ಯಂತರ ಜನರಿಗೆ ಅದೆಷ್ಟು ಒಳಿತನ್ನು ತರುತ್ತಿತ್ತು! ಸುಮಾರು ಒಂದು ಶತಕೋಟಿ ಜನರಿಗೆ ಉಣ್ಣಲು ಸಾಕಷ್ಟು ಆಹಾರವಿಲ್ಲದಿರುವಾಗ, ಇತರರಾದರೊ ಐಷಾರಾಮದಲ್ಲಿ ಜೀವಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಒಂದು ಮೂಲಕ್ಕನುಸಾರ, ಸುಮಾರು 50 ಲಕ್ಷ ಮಕ್ಕಳು ಪ್ರತಿ ವರ್ಷ ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ. ಇದೆಷ್ಟು ಅನ್ಯಾಯ! ಇದಲ್ಲದೆ, ಗರ್ಭಪಾತಗಳಿಂದಾಗಿ ಕೊಲ್ಲಲ್ಪಡುವ ಅನೇಕಾನೇಕ ನಿರಪರಾಧಿ ಕೂಸುಗಳನ್ನು ಪರಿಗಣಿಸಿರಿ. ಲೋಕದಾದ್ಯಂತ ಪ್ರತಿವರ್ಷ ಅದರ ಸಂಖ್ಯೆ 4-6 ಕೋಟಿಯೆಂದು ಅಂದಾಜು ಮಾಡಲಾಗಿದೆ! ಎಂಥ ಘೋರ ಅನ್ಯಾಯ!

8 ಇಂದು ಮಾನವಕುಲವನ್ನು ಬಾಧಿಸುತ್ತಿರುವ ವ್ಯಾಪಕ ಸಮಸ್ಯೆಗಳಿಗೆ ಮಾನವ ಅಧಿಪತಿಗಳ ಬಳಿ ಪರಿಹಾರವಿಲ್ಲ. ಅಲ್ಲದೆ ಮನುಷ್ಯ ಪ್ರಯತ್ನಗಳಿಂದಾಗಿ ಪರಿಸ್ಥಿತಿಯು ಹೆಚ್ಚು ಸುಧಾರಿಸುವಂತಿಲ್ಲ. ನಮ್ಮ ಸಮಯದಲ್ಲಿ “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು” ಎಂಬುದಾಗಿ ದೇವರ ವಾಕ್ಯವು ಮುಂತಿಳಿಸಿಯದೆ. (2 ತಿಮೊಥೆಯ 3:13) ಅನ್ಯಾಯವು ದಿನನಿತ್ಯದ ಜೀವನದಲ್ಲಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ ಮನುಷ್ಯರು ಅದನ್ನು ತೆಗೆದುಹಾಕಲು ಶಕ್ತರಾಗಿಲ್ಲ. ನ್ಯಾಯವಂತನಾದ ದೇವರು ಮಾತ್ರವೇ ಅದನ್ನು ತೆಗೆದುಹಾಕಬಲ್ಲನು. ಸೈತಾನನನ್ನು, ದೆವ್ವಗಳನ್ನು ಮತ್ತು ದುಷ್ಟ ಮನುಷ್ಯರನ್ನು ನಾಶಗೊಳಿಸಲು ಶಕ್ತಿಯುಳ್ಳಾತನು ಆತನೊಬ್ಬನೇ.—ಯೆರೆಮೀಯ 10:23, 24.

ಅರ್ಥಮಾಡಬಹುದಾದ ಚಿಂತೆ

9 ದೇವರು ಮಾನವ ಕಾರ್ಯಾದಿಗಳಲ್ಲಿ ಈ ಮುಂಚೆಯೇ ಹಸ್ತಕ್ಷೇಪಮಾಡಿ ನಿಜ ನ್ಯಾಯವನ್ನೂ ನೀತಿಯನ್ನೂ ಯಾಕೆ ತಂದಿಲ್ಲ ಎಂಬದಾಗಿ ಗತಕಾಲದಲ್ಲೂ ಕೆಲವು ಬೈಬಲ್‌ ಲೇಖಕರು ಯೋಚಿಸಿದ್ದರು. ಉದಾಹರಣೆಗಾಗಿ ಬೈಬಲ್‌ ಕಾಲದಲ್ಲಿನ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ತೆಗೆದುಕೊಳ್ಳಿ. ಕೀರ್ತನೆ 73ರ ಮೇಲ್ಬರಹವು ಆಸಾಫ ಎಂಬ ಹೆಸರನ್ನು ತಿಳಿಸುತ್ತದೆ. ಅದು ಅರಸನಾದ ದಾವೀದನ ಆಳಿಕೆಯ ಸಮಯದಲ್ಲಿದ್ದ ಒಬ್ಬ ಪ್ರಧಾನ ಲೇವ್ಯ ಗಾಯಕನಿಗೆ ಇಲ್ಲವೆ ಅಸಾಫನು ಕುಟುಂಬಪ್ರಧಾನನಾಗಿದ್ದ ಮನೆತನದ ಗಾಯಕರಿಗೆ ನಿರ್ದೇಶಿಸಿದ್ದಿರಬಹುದು. ಬಹಿರಂಗ ಆರಾಧನೆಯಲ್ಲಿ ಬಳಸಲಾಗಿದ್ದ ಅನೇಕ ಸಂಗೀತಕೃತಿಗಳನ್ನು ಆಸಾಫ ಮತ್ತು ಅವನ ಸಂತತಿಯವರು ರಚಿಸಿದ್ದರು. ಆದರೂ ಈ ಕೀರ್ತನೆಯ ಲೇಖಕನು ಅವನ ಜೀವನದ ಒಂದು ಹಂತದಲ್ಲಿ ಆಧ್ಯಾತ್ಮಿಕವಾಗಿ ಮನಗುಂದಿದನು. ದುಷ್ಟರ ಐಹಿಕ ಸೌಭಾಗ್ಯವನ್ನು ಕಂಡು ಅವನು ನೊಂದುಕೊಂಡನು. ಅವರು ಜೀವನದಲ್ಲಿ ಸದಾ ಸುಖದಿಂದಿರುವಂತೆಯೂ ಮತ್ತು ತಮ್ಮ ಕೆಟ್ಟತನಕ್ಕಾಗಿ ಯಾವುದೇ ಶಿಕ್ಷೆಯನ್ನು ಅನುಭವಿಸದಿರುವಂತೆಯೂ ಅವನಿಗೆ ತೋರಿತು.

10 ನಾವು ಓದುವುದು: “ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. ಅವರ ಮರಣವು ನಿರ್ಬಾಧಕವಾಗಿದೆ; ಅವರ ಕಾಯವು ಕೊಬ್ಬುಳ್ಳದ್ದಾಗಿದೆ. ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವದಿಲ್ಲ.” (ಕೀರ್ತನೆ 73:2-8) ಆದರೆ ಅಂಥ ನಕಾರಾತ್ಮಕ ದೃಷ್ಟಿಕೋನವು ತಪ್ಪಾಗಿತ್ತೆಂದು ತಕ್ಕ ಸಮಯದಲ್ಲಿ ಆ ಬೈಬಲ್‌ ಲೇಖಕನಿಗೆ ಮನವರಿಕೆಯಾಯಿತು. (ಕೀರ್ತನೆ 73:15, 16) ಆ ಕೀರ್ತನೆಗಾರನು ತನ್ನ ಆಲೋಚನೆಗಳನ್ನು ಸರಿ ಹೊಂದಿಸಿಕೊಳ್ಳಲು ಪ್ರಯತ್ನಿಸಿದನು. ಆದರೂ, ಯೋಗ್ಯ ಪ್ರವೃತ್ತಿಯುಳ್ಳ ಜನರು ಆಗಿಂದಾಗ್ಗೆ ಕಷ್ಟವನ್ನು ಅನುಭವಿಸುವಾಗ ಕೆಟ್ಟವರಿಗಾದರೊ ಶಿಕ್ಷೆ ದೊರೆಯುವಂತೆ ಕಾಣುವುದಿಲ್ಲ ಏಕೆಂಬುದನ್ನು ಅವನು ಪೂರ್ಣವಾಗಿ ಗ್ರಹಿಸಿಕೊಳ್ಳದೆ ಹೋದನು.

11 ದುಷ್ಟರ ಅಂತ್ಯಾವಸ್ಥೆಯು ಏನಾಗಿರಲಿತ್ತೆಂದು ಪುರಾತನ ಕಾಲದ ಆ ನಂಬಿಗಸ್ತನಿಗೆ ಕೊನೆಗೆ ತಿಳಿದುಬಂತು. ಅದೇನಂದರೆ ಕಟ್ಟಕಡೆಗೆ ಯೆಹೋವನೇ ವಿಷಯಗಳನ್ನು ಸರಿಪಡಿಸಲಿದ್ದನು ಎಂಬದೇ. (ಕೀರ್ತನೆ 73:17-19) ದಾವೀದನು ಬರೆದದ್ದು: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.”—ಕೀರ್ತನೆ 37:9, 11, 34.

12 ಈ ಭೂಮಿಯಿಂದ ದುಷ್ಟತನವನ್ನೂ ಅದರಲ್ಲಿ ಜೊತೆಗೂಡಿರುವ ಅನ್ಯಾಯಗಳನ್ನೂ ತನ್ನ ಕ್ಲುಪ್ತ ಕಾಲದಲ್ಲಿ ನಿರ್ಮೂಲಗೊಳಿಸುವುದು ಯೆಹೋವನ ಉದ್ದೇಶವಾಗಿದೆ ಎಂಬುದು ನಿಶ್ಚಯ. ಈ ವಿಷಯವನ್ನು ನಿಷ್ಠಾವಂತರಾದ ಕ್ರೈಸ್ತರು ಕೂಡ ಆಗಿಂದಾಗ್ಗೆ ತಮಗೆ ನೆನಪು ಹುಟ್ಟಿಸಿಕೊಳ್ಳಬೇಕು. ತನ್ನ ಚಿತ್ತಕ್ಕೆ ವಿರೋಧವಾಗಿ ಹೋಗುವವರನ್ನು ಯೆಹೋವನು ಖಂಡಿತವಾಗಿಯೂ ತೆಗೆದುಬಿಡುವನು ಮತ್ತು ಯಾರು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಜೀವಿಸುತ್ತಾರೋ ಅವರಿಗೆ ಬಹುಮಾನವನ್ನು ಕೊಡುವನು. “ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ. ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ. ಆತನು ದುಷ್ಟರ ಮೇಲೆ ಪಾಶಗಳನ್ನು ಸುರಿಸಲಿ. ಬೆಂಕಿ ಗಂಧಕ ಉರಿಗಾಳಿ ಇವುಗಳನ್ನು ಅವರ ಪಾನವಾಗಮಾಡಲಿ. ಯಾಕಂದರೆ ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ.”—ಕೀರ್ತನೆ 11:4-7.

ನ್ಯಾಯಭರಿತ ಹೊಸ ಲೋಕ

13 ಸೈತಾನನ ಕೈಕೆಳಗಿರುವ ಈ ಅನ್ಯಾಯ ತುಂಬಿದ ವಿಷಯ ವ್ಯವಸ್ಥೆಯನ್ನು ಯೆಹೋವನು ನಾಶಗೊಳಿಸುವಾಗ, ಒಂದು ಮಹಿಮಾಭರಿತ ಹೊಸ ಲೋಕವನ್ನು ಆತನು ಒಳತರುವನು. ಅದು ದೇವರ ಸ್ವರ್ಗೀಯ ರಾಜ್ಯದ ಕೈಕೆಳಗಿರುವುದು. ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದ್ದು ಈ ರಾಜ್ಯಕ್ಕಾಗಿಯೇ. ದುಷ್ಟತನ ಮತ್ತು ಅನ್ಯಾಯದ ಸ್ಥಾನದಲ್ಲಿ ನೀತಿ ಮತ್ತು ನ್ಯಾಯವು ಬರುವಾಗ ಈ ಪ್ರಾರ್ಥನೆಯು ಪೂರ್ಣಾರ್ಥದಲ್ಲಿ ಉತ್ತರಿಸಲ್ಪಡುವುದು: “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:10.

14 ಯೋಗ್ಯ ಹೃದಯದ ವ್ಯಕ್ತಿಗಳು ಈಗ ಹಾತೊರೆಯುವಂಥ ಆಳ್ವಿಕೆಯನ್ನು ನಾವು ನಿರೀಕ್ಷಿಸಸಾಧ್ಯವಿದೆಯೆಂದು ಬೈಬಲು ನಮಗೆ ತಿಳಿಸುತ್ತದೆ. ಕೀರ್ತನೆ 145:16 ಆಗ ಸಂಪೂರ್ಣ ಅರ್ಥದಲ್ಲಿ ನೆರವೇರುವುದು: “ನೀನು [ಯೆಹೋವ ದೇವರು] ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” ಅದಲ್ಲದೆ ಯೆಶಾಯ 32:1 ಹೇಳುವುದು: “ಇಗೋ, ಒಬ್ಬ ರಾಜನು [ಪರಲೋಕದಲ್ಲಿ ಕ್ರಿಸ್ತ ಯೇಸು] ನೀತಿಗನುಸಾರವಾಗಿ ಆಳುವನು, ಅಧಿಪತಿಗಳು [ಕ್ರಿಸ್ತನ ಭೂಪ್ರತಿನಿಧಿಗಳು] ನ್ಯಾಯದಿಂದ ದೊರೆತನ ಮಾಡುವರು.” ರಾಜನಾದ ಯೇಸು ಕ್ರಿಸ್ತನ ಕುರಿತು ಯೆಶಾಯ 9:7 ಮುಂತಿಳಿಸುವುದು: “ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು; ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.” ಆ ನೀತಿನ್ಯಾಯದ ಆಳ್ವಿಕೆಯ ಕೆಳಗೆ ನೀವು ಜೀವಿಸುತ್ತಿರುವುದನ್ನು ಕಾಣಬಲ್ಲಿರೊ?

15 ದೇವರ ಹೊಸ ಲೋಕದಲ್ಲಿ ಪ್ರಸಂಗಿ 4:1ರ ಈ ಮಾತುಗಳನ್ನು ವ್ಯಕ್ತಪಡಿಸಲು ನಮಗೆಂದೂ ಯಾವ ಕಾರಣವೂ ಇರದು: “ಆ ಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.” ನೀತಿಭರಿತ ಹೊಸ ಲೋಕವು ಎಷ್ಟು ವಿಸ್ಮಯಕರವಾಗಿರಲಿದೆ ಎಂದು ಊಹಿಸಿಕೊಳ್ಳಲು ನಮ್ಮ ಅಪರಿಪೂರ್ಣ ಮನಸ್ಸುಗಳಿಗೆ ಕಷ್ಟಕರವೆಂಬುದು ನಿಜ. ಕೆಟ್ಟತನವು ಇನ್ನು ಮುಂದೆ ಅಸ್ತಿತ್ವದಲ್ಲಿರದು, ಬದಲಿಗೆ ಪ್ರತಿಯೊಂದು ದಿನವು ಒಳ್ಳೆಯ ವಿಷಯಗಳಿಂದ ತುಂಬಿರುವುದು. ಹೌದು, ಯೆಹೋವನು ಕೆಡುಕನ್ನೆಲ್ಲಾ ಸರಿಪಡಿಸುವನು. ನಾವು ನಿರೀಕ್ಷಿಸಿದಕ್ಕಿಂತಲೂ ಎಷ್ಟೋ ಮಿಗಿಲಾಗಿ ಅದನ್ನು ಮಾಡುವನು. ಯೆಹೋವ ದೇವರು ಅಪೊಸ್ತಲ ಪೇತ್ರನನ್ನು ಹೀಗೆ ಬರೆಯಲು ಪ್ರೇರೇಪಿಸಿದ್ದು ಎಷ್ಟು ತಕ್ಕದ್ದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.

16 ಕ್ರಿಸ್ತನ ಕೈಕೆಳಗಿರುವ ದೇವರ ಸ್ವರ್ಗೀಯ ಸರಕಾರವಾದ “ನೂತನಾಕಾಶಮಂಡಲ” ಈವಾಗಲೇ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆ. ಯೋಗ್ಯ ಪ್ರವೃತ್ತಿಯುಳ್ಳ ಜನರ ಹೊಸ ಭೂಸಮಾಜವಾದ ‘ನೂತನ ಭೂಮಂಡಲದ’ ಕೇಂದ್ರಭಾಗವಾಗಲಿರುವವರು ಈ ಅಂತ್ಯದ ದಿನಗಳಲ್ಲಿ ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಇವರು, ಈವಾಗಲೇ ಕಡಿಮೆಪಕ್ಷ 235 ದೇಶಗಳಲ್ಲಿ ಸುಮಾರು 70 ಲಕ್ಷ ಜನರಾಗಿದ್ದು 1,00,000ದಷ್ಟು ಸಭೆಗಳಲ್ಲಿ ಕಾರ್ಯನಡಿಸುತ್ತಿದ್ದಾರೆ. ಈ ಲಕ್ಷಾಂತರ ಜನರು ಯೆಹೋವನ ನೀತಿ ಮತ್ತು ನ್ಯಾಯದ ಮಾರ್ಗಗಳನ್ನು ಕಲಿಯುತ್ತಿದ್ದಾರೆ. ಫಲಿತಾಂಶವಾಗಿ ಅವರು ಲೋಕದಾದ್ಯಂತ ಪರಸ್ಪರ ಕ್ರೈಸ್ತ ಪ್ರೀತಿಯ ಬಂಧದಲ್ಲಿ ಐಕ್ಯರಾಗಿದ್ದಾರೆ. ಲೋಕದ ಇತಿಹಾಸದಲ್ಲೇ ಅತ್ಯಂತ ಎದ್ದುಕಾಣುವ ಹಾಗೂ ನೆಲೆನಿಂತಿರುವ ಐಕ್ಯವು ಅವರದ್ದಾಗಿದ್ದು ಸೈತಾನನ ಜನರು ಅನುಭವಿಸುವ ಯಾವುದೇ ಐಕ್ಯಕ್ಕಿಂತ ಅತ್ಯುತ್ಕೃಷ್ಟವಾಗಿದೆ. ಇಂಥ ಪ್ರೀತಿ ಮತ್ತು ಐಕ್ಯವು ನೀತಿ ಮತ್ತು ನ್ಯಾಯದಿಂದ ಆಳಲ್ಪಡಲಿರುವ ದೇವರ ಹೊಸ ಲೋಕದಲ್ಲಿರುವ ಆಶ್ಚರ್ಯಕರ ಸಮಯಗಳ ಮುನ್‌ಚಿತ್ರಣವಾಗಿದೆ.—ಯೆಶಾಯ 2:2-4; ಯೋಹಾನ 13:34, 35; ಕೊಲೊಸ್ಸೆ 3:14.

ಸೈತಾನನ ಆಕ್ರಮಣಕ್ಕೆ ಸೋಲು

17 ಯೆಹೋವನ ಆರಾಧಕರನ್ನು ನಾಶಮಾಡಿಬಿಡುವ ಪ್ರಯತ್ನದಲ್ಲಿ ಸೈತಾನನು ಮತ್ತು ಅವನ ಅನುಚರರು ಸ್ವಲ್ಪದರಲ್ಲೇ ಅವರ ಮೇಲೆ ಆಕ್ರಮಣ ನಡಿಸಲಿದ್ದಾರೆ. (ಯೆಹೆಜ್ಕೇಲ 38:14-23) ಅದು, “ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನೂ ಮೇಲೆಯೂ ಆಗುವದಿಲ್ಲ” ಎಂದು ಯೇಸು ಹೇಳಿದ್ದ ಮಹಾ ಸಂಕಟದ ಭಾಗವಾಗಿರುವುದು. (ಮತ್ತಾಯ 24:21) ಸೈತಾನನ ಆಕ್ರಮಣವು ಸಫಲಗೊಳ್ಳುವುದೋ? ಇಲ್ಲವೇ ಇಲ್ಲ! ದೇವರ ವಾಕ್ಯವು ನಮಗೆ ಆಶ್ವಾಸನೆ ಕೊಡುವುದು: “ಯೆಹೋವನು ನ್ಯಾಯವನ್ನು ಪ್ರೀತಿಸುತ್ತಾನೆ; ತನ್ನ ಭಕ್ತರನ್ನು ತೊರೆದುಬಿಡನು. ಅವರು ಯುಗಯುಗಕ್ಕೂ ಕಾಪಾಡಲ್ಪಡುವರು; ಆದರೆ ದುಷ್ಟರ ಸಂತತಿಯು ಕಡಿದುಹಾಕಲ್ಪಡುವುದು. ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.”—ಕೀರ್ತನೆ 37:28, 29, NIBV.

18 ಯೆಹೋವನ ಸೇವಕರ ಮೇಲೆ ಸೈತಾನನು ಮತ್ತು ಅವನ ದಂಡುಗಳ ಆಕ್ರಮಣವು ಕಟ್ಟಕಡೆಯ ಮೂದಲಿಕೆಯಾಗಿರುವುದು. ಜೆಕರ್ಯನು ಮುಂತಿಳಿಸಿದ್ದು: “ನಿಮ್ಮನ್ನು ತಾಕುವವನು ಯೆಹೋವನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.” (ಜೆಕರ್ಯ 2:8) ಅದು, ಯಾರಾದರೂ ಯೆಹೋವನ ಕಣ್ಣುಗುಡ್ಡೆಗೆ ಬೆರಳನ್ನು ಹಾಕುವಂತಿದೆ. ಆತನು ಒಡನೆಯೇ ಪ್ರತಿಕ್ರಿಯಿಸಿ ಆ ದುಷ್ಕರ್ಮಿಗಳನ್ನು ತೆಗೆದುಹಾಕುವನು. ಯೆಹೋವನ ಸೇವಕರಾದರೊ ಭೂಮಿಯಲ್ಲಿರುವ ಅತ್ಯಂತ ಪ್ರೀತಿಪರ, ಐಕ್ಯ, ಶಾಂತಿಪ್ರಿಯ, ನ್ಯಾಯಬದ್ಧ ಜನರಾಗಿರುತ್ತಾರೆ. ಆದುದರಿಂದ ಅವರ ವಿರುದ್ಧವಾಗಿ ಸೈತಾನನು ಮಾಡುವ ಆಕ್ರಮಣವು ಪೂರ್ತಿ ಅಯೋಗ್ಯವೂ ಅನ್ಯಾಯವೂ ಆಗಿರುತ್ತದೆ. ‘ನ್ಯಾಯವನ್ನು ಪ್ರೀತಿಸುವ’ ಯೆಹೋವನು ಅದನ್ನು ಸಹಿಸಿಕೊಳ್ಳುವಾತನಲ್ಲ. ತನ್ನ ಜನರ ಪರವಾಗಿ ಆತನು ನಡಿಸುವ ಕ್ರಿಯೆಯು ಅವರ ಶತ್ರುಗಳ ನಿತ್ಯನಾಶನದಲ್ಲಿ ಮತ್ತು ಒಬ್ಬನೇ ಸತ್ಯ ದೇವರ ಆರಾಧಕರ ರಕ್ಷಣೆಯಲ್ಲಿ ಹಾಗೂ ನ್ಯಾಯದ ವಿಜಯದಲ್ಲಿ ಕೊನೆಗೊಳ್ಳುವುದು. ಎಂಥ ವಿಸ್ಮಯಕರವಾದ ರೋಮಾಂಚಕ ಘಟನೆಗಳು ಶೀಘ್ರದಲ್ಲೇ ನಡೆಯಲಿವೆ!—ಜ್ಞಾನೋಕ್ತಿ 2:21, 22. (w07 8/15)

ನೀವು ಹೇಗೆ ಉತ್ತರಿಸುವಿರಿ?

• ಅನ್ಯಾಯವು ಮೇಲುಗೈ ಹೊಂದಿರುವುದು ಏಕೆ?

• ಭೂಮಿಯಲ್ಲಿರುವ ಅನ್ಯಾಯದ ಸಮಸ್ಯೆಯನ್ನು ಯೆಹೋವನು ಹೇಗೆ ಪರಿಹರಿಸುವನು?

• ನ್ಯಾಯಕ್ಕೆ ಜಯವಾಗುವ ಕುರಿತ ಈ ಅಧ್ಯಯನದಲ್ಲಿ ನಿಮ್ಮ ಮನಮುಟ್ಟಿದ ಸಂಗತಿ ಯಾವುದು?

[ಅಧ್ಯಯನ ಪ್ರಶ್ನೆಗಳು]

1, 2. (ಎ) “ನ್ಯಾಯ” ಮತ್ತು “ಅನ್ಯಾಯ” ಎಂಬ ಶಬ್ದಗಳ ಅರ್ಥವೇನು? (ಬಿ) ಯೆಹೋವ ಮತ್ತು ಆತನ ನ್ಯಾಯದ ಕುರಿತು ಬೈಬಲು ಏನನ್ನುತ್ತದೆ?

3. ಭೂಮಿಯ ಮೇಲೆ ಅನ್ಯಾಯವು ಆರಂಭಿಸಿದ್ದು ಹೇಗೆ?

4. ಅನ್ಯಾಯವು ಎಷ್ಟು ಸಮಯದಿಂದ ಮಾನವ ಇತಿಹಾಸದ ಭಾಗವಾಗಿದೆ?

5. ಹಿಂದಿನ ಕಾಲಕ್ಕಿಂತಲೂ ನಮ್ಮ ಕಾಲದಲ್ಲಿ ಹೆಚ್ಚು ಅನ್ಯಾಯಗಳು ನಡೆಯುತ್ತಿರುವುದೇಕೆ?

6, 7. ಯಾವ ಮಹಾ ಅನ್ಯಾಯಗಳು ಆಧುನಿಕ ಕಾಲದಲ್ಲಿ ಮಾನವ ಕುಟುಂಬವನ್ನು ಬಾಧಿಸಿವೆ?

8. ನಿಜ ನ್ಯಾಯವು ಮಾನವಕುಲಕ್ಕೆ ಹೇಗೆ ಮಾತ್ರವೇ ಸಿಗಬಲ್ಲದು?

9, 10. ಆಸಾಫನು ಮನಗುಂದಿದವನಾದದ್ದು ಯಾಕೆ?

11. ಕೀರ್ತನೆಗಾರನಾದ ಆಸಾಫನಿಗೆ ಕೊನೆಗೆ ಏನು ತಿಳಿದುಬಂತು?

12. (ಎ) ದುಷ್ಟತನ ಮತ್ತು ಅನ್ಯಾಯದ ವಿಷಯದಲ್ಲಿ ಯೆಹೋವನ ಉದ್ದೇಶ ಏನಾಗಿದೆ? (ಬಿ) ಅನ್ಯಾಯದ ಸಮಸ್ಯೆಗಿರುವ ಆ ಪರಿಹಾರದ ಕುರಿತು ನಿಮಗೆ ಹೇಗನಿಸುತ್ತದೆ?

13, 14. ಹೊಸ ಲೋಕದಲ್ಲಿ ನೀತಿ ಮತ್ತು ನ್ಯಾಯಗಳ ಮೇಲುಗೈ ಆಗುವುದು ಏಕೆ?

15. ಹೊಸ ಲೋಕದಲ್ಲಿ ಮಾನವಕುಲಕ್ಕಾಗಿ ಯೆಹೋವನು ಏನನ್ನು ಮಾಡಲಿರುವನು?

16. “ನೂತನಾಕಾಶಮಂಡಲ” ಹೇಗೆ ಈಗಾಗಲೇ ಸ್ಥಾಪನೆಯಾಗಿದೆ, ಮತ್ತು “ನೂತನ ಭೂಮಂಡಲ” ಇಂದು ಯಾವ ಅರ್ಥದಲ್ಲಿ ಸಿದ್ಧವಾಗುತ್ತಿದೆ?

17. ಯೆಹೋವನ ಜನರ ವಿರುದ್ಧವಾಗಿ ಸೈತಾನನ ಕೊನೆಯ ಆಕ್ರಮಣವು ನಿಶ್ಚಯವಾಗಿ ಸೋಲುವುದು ಏಕೆ?

18. (ಎ) ದೇವಜನರ ಮೇಲೆ ಮುಂದೆ ಆಗಲಿರುವ ಸೈತಾನನ ಆಕ್ರಮಣಕ್ಕೆ ದೇವರು ಹೇಗೆ ಪ್ರತಿಕ್ರಿಯಿಸುವನು? (ಬಿ) ನ್ಯಾಯಕ್ಕೆ ಜಯವಾಗುವ ಕುರಿತ ಈ ಬೈಬಲಾಧರಿತ ಮಾಹಿತಿಯು ನಿಮಗೆ ಏಕೆ ಪ್ರಯೋಜನಕರವಾಗಿದೆ?

[ಪುಟ 9ರಲ್ಲಿರುವ ಚಿತ್ರ]

ಜಲಪ್ರಳಯಕ್ಕೆ ಮುಂಚೆ ಕೆಟ್ಟತನವು ಹೆಚ್ಚಾಗಿತ್ತು ಮತ್ತು ಅದು ಈ “ಕಡೇ ದಿವಸಗಳಲ್ಲಿ” ಅತಿಯಾಗಿ ಹೆಚ್ಚಿದೆ

[ಪುಟ 10ರಲ್ಲಿರುವ ಚಿತ್ರ]

ದೇವರ ಹೊಸ ಲೋಕದಲ್ಲಿ ದುಷ್ಟತನದ ಸ್ಥಾನದಲ್ಲಿ ನ್ಯಾಯನೀತಿಗಳು ನೆಲೆಸುವುವು