ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತ—ಒಬ್ಬ ಮಹಾನ್‌ ಮಿಷನೆರಿ

ಯೇಸು ಕ್ರಿಸ್ತ—ಒಬ್ಬ ಮಹಾನ್‌ ಮಿಷನೆರಿ

ಯೇಸು ಕ್ರಿಸ್ತ—ಒಬ್ಬ ಮಹಾನ್‌ ಮಿಷನೆರಿ

‘ನಾನು ಆತನ ಕಡೆಯಿಂದ ಬಂದವನಾಗಿದ್ದೇನೆ, ನನ್ನನ್ನು ಆತನೇ ಕಳುಹಿಸಿದನು.’—ಯೋಹಾನ 7:29.

“ಮಿಷನೆರಿ” ಎಂಬ ಪದ ಕೇಳಿದೊಡನೆ ನೀವೇನು ಯೋಚಿಸುತ್ತೀರಿ? ಕೆಲವರು, ತಾವಿರುವ ದೇಶಗಳ ರಾಜಕೀಯ ಮತ್ತು ಆರ್ಥಿಕ ವಿಷಯಗಳಲ್ಲಿ ತಲೆಹಾಕುವ ಕ್ರೈಸ್ತ ಪ್ರಪಂಚದ ಮಿಷನೆರಿಗಳನ್ನು ನೆನಸಿಕೊಳ್ಳುತ್ತಾರೆ. ಆದರೆ ಯೆಹೋವನ ಸಾಕ್ಷಿಗಳಾದ ನೀವು, ಭೂಸುತ್ತಲು ವಿವಿಧ ದೇಶಗಳಲ್ಲಿ ಶುಭವರ್ತಮಾನವನ್ನು ಸಾರಿಹೇಳಲು ಆಡಳಿತ ಮಂಡಲಿಯು ಕಳುಹಿಸಿದ ಮಿಷನೆರಿಗಳ ಬಗ್ಗೆ ಯೋಚಿಸಬಹುದು. (ಮತ್ತಾ. 24:14) ಈ ಮಿಷನೆರಿಗಳು, ಜನರು ಯೆಹೋವ ದೇವರ ಸಮೀಪಕ್ಕೆ ಬಂದು ಆತನೊಂದಿಗೆ ಅಮೂಲ್ಯ ಸಂಬಂಧವನ್ನು ಇಟ್ಟುಕೊಳ್ಳುವಂತೆ ಸಹಾಯಮಾಡುವ ಗೌರವಪೂರ್ಣ ಕೆಲಸದಲ್ಲಿ ತಮ್ಮ ಸಮಯ ಮತ್ತು ಶಕ್ತಿಯನ್ನು ನಿಸ್ವಾರ್ಥದಿಂದ ವ್ಯಯಿಸುತ್ತಾರೆ.—ಯಾಕೋ. 4:8.

2 “ಮಿಷನೆರಿ” ಮತ್ತು “ಮಿಷನೆರಿಗಳು” ಎಂಬ ಪದಗಳು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನ ಮುಖ್ಯ ಗ್ರಂಥಪಾಠದಲ್ಲಿ ಕಂಡುಬರುವುದಿಲ್ಲ. ಆದರೂ, ರೆಫರೆನ್ಸ್‌ ಬೈಬಲ್‌ ತನ್ನ ಪಾದಟಿಪ್ಪಣಿಯಲ್ಲಿ, ಎಫೆಸ 4:11ರಲ್ಲಿರುವ ‘ಸೌವಾರ್ತಿಕರು’ ಎಂದು ಭಾಷಾಂತರವಾಗಿರುವ ಗ್ರೀಕ್‌ ಪದವನ್ನು “ಮಿಷನೆರಿಗಳು” ಎಂದೂ ಭಾಷಾಂತರಿಸಸಾಧ್ಯವಿದೆ ಎಂಬುದಾಗಿ ಸೂಚಿಸುತ್ತದೆ. ಮಿಷನೆರಿ ಎಂಬ ಪದವು ಸಾರಲು ಕಳುಹಿಸಲ್ಪಟ್ಟವನು ಎಂಬ ಅರ್ಥವನ್ನು ಕೊಡುತ್ತದೆ. ಯೆಹೋವನು ಮಹಾನ್‌ ಸೌವಾರ್ತಿಕನಾಗಿದ್ದರೂ ಆತನನ್ನು ಮಹಾನ್‌ ಮಿಷನೆರಿಯೆಂದು ಕರೆಯಲಾಗುವುದಿಲ್ಲ. ಏಕೆಂದರೆ ಆತನು ಯಾರಿಂದಲೂ ಕಳುಹಿಸಲ್ಪಡಲಿಲ್ಲ. ಆದರೆ ತನ್ನ ಸ್ವರ್ಗೀಯ ತಂದೆಯ ವಿಷಯದಲ್ಲಿ ಯೇಸು ಕ್ರಿಸ್ತನು, ‘ನಾನು ಆತನ ಕಡೆಯಿಂದ ಬಂದವನಾಗಿದ್ದೇನೆ, ನನ್ನನ್ನು ಆತನೇ ಕಳುಹಿಸಿದನು’ ಎಂದು ಹೇಳಿದನು. (ಯೋಹಾ. 7:29) ಯೆಹೋವನು ಮಾನವಲೋಕದ ಮೇಲಿನ ತನ್ನ ಗಾಢ ಪ್ರೀತಿಯನ್ನು ತೋರಿಸುತ್ತಾ ತನ್ನ ಏಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದನು. (ಯೋಹಾ. 3:16) ಯೇಸುವನ್ನು ಮಹಾನ್‌ ಮಿಷನೆರಿ ಅಂದರೆ ಸರ್ವೋತ್ಕೃಷ್ಟ ಮಿಷನೆರಿ ಎಂದು ಕರೆಯಸಾಧ್ಯವಿದೆ. ಏಕೆಂದರೆ ಅವನನ್ನು ಭೂಮಿಗೆ ಕಳುಹಿಸಿದ್ದರ ಒಂದು ಕಾರಣವೇ “ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ”ವಾಗಿತ್ತು. (ಯೋಹಾ. 18:37) ಅವನು ರಾಜ್ಯದ ಸುವಾರ್ತೆ ಸಾರುವುದರಲ್ಲಿ ಪೂರ್ಣ ಯಶಸ್ಸು ಪಡೆದನು ಮತ್ತು ಅವನ ಶುಶ್ರೂಷೆಯ ಪ್ರಯೋಜನಗಳು ನಮಗೆ ಈಗಲೂ ಲಭ್ಯವಿವೆ. ದೃಷ್ಟಾಂತಕ್ಕೆ, ನಾವು ಮಿಷನೆರಿಗಳಾಗಿರಲಿ ಇಲ್ಲದಿರಲಿ ನಮ್ಮ ಶುಶ್ರೂಷೆಯಲ್ಲಿ ಆತನ ಬೋಧನಾ ವಿಧಾನಗಳನ್ನು ನಾವು ಅಳವಡಿಸಿಕೊಳ್ಳಬಲ್ಲೆವು.

3 ರಾಜ್ಯಘೋಷಕನಾದ ಯೇಸುವಿನ ಪಾತ್ರ ಈ ಕೆಳಗಿನ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಯೇಸುವಿಗೆ ತನ್ನ ಭೂಶುಶ್ರೂಷೆಯಲ್ಲಿ ಯಾವ ಅನುಭವವಾಯಿತು? ಅವನ ಬೋಧನೆ ಏಕೆ ತುಂಬ ಪರಿಣಾಮಕಾರಿಯಾಗಿತ್ತು? ಅವನ ಶುಶ್ರೂಷೆಯಲ್ಲಿನ ಯಶಸ್ಸಿಗೆ ಕಾರಣವೇನು?

ನೂತನ ಪರಿಸರದಲ್ಲೂ ಸಿದ್ಧಮನಸ್ಸು

4 ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಪ್ರದೇಶಗಳಿಗೆ ಸ್ಥಳಾಂತರಿಸುವ ಇಂದಿನ ಮಿಷನೆರಿಗಳು ಮತ್ತು ಕೆಲವು ಮಂದಿ ಕ್ರೈಸ್ತರು ತಮ್ಮ ಹಿಂದಿನ ಜೀವನಮಟ್ಟಕ್ಕಿಂತ ಕಡಿಮೆ ಸೌಕರ್ಯಗಳಿರುವ ಜೀವನಮಟ್ಟಕ್ಕೆ ಒಗ್ಗಿಕೊಳ್ಳಬೇಕಾಗಬಹುದು. ಆದರೆ ಯೇಸು ಭೂಮಿಯಲ್ಲಿದ್ದಾಗ ಇದ್ದ ಪರಿಸ್ಥಿತಿಗಳಿಗೂ ಸ್ವರ್ಗದಲ್ಲಿ ಅನುಭವಿಸಿದ ಪರಿಸ್ಥಿತಿಗಳಿಗೂ ನಡುವೆಯಿದ್ದ ಅಜಗಜಾಂತರವನ್ನು ನಮ್ಮಿಂದ ಊಹಿಸಲೂ ಸಾಧ್ಯವಿಲ್ಲ. ಸ್ವರ್ಗದಲ್ಲಿ ಅವನು ತನ್ನ ತಂದೆಯಾದ ಯೆಹೋವನೊಂದಿಗೂ ಆತನನ್ನು ನಿರ್ಮಲ ಉದ್ದೇಶದಿಂದ ಸೇವಿಸುತ್ತಿದ್ದ ದೇವದೂತರೊಂದಿಗೂ ಜೀವಿಸುತ್ತಿದ್ದನು. (ಯೋಬ 38:6) ಈ ಭ್ರಷ್ಟ ಲೋಕದಲ್ಲಿ ಪಾಪಪೂರ್ಣ ಮಾನವರೊಂದಿಗೆ ಜೀವಿಸುವುದು ನಿಜಕ್ಕೂ ಅದಕ್ಕಿಂತ ತುಂಬ ಭಿನ್ನವಾಗಿತ್ತಲ್ಲವೇ! (ಮಾರ್ಕ 7:20-23) ಯೇಸುವಿಗೆ, ತನ್ನ ಅತಿ ಆಪ್ತ ಶಿಷ್ಯರ ಮಧ್ಯೆ ನಡೆಯುತ್ತಿದ್ದ ಪ್ರತಿಸ್ಪರ್ಧೆಯನ್ನೂ ನಿಭಾಯಿಸಬೇಕಾಗಿತ್ತು. (ಲೂಕ 20:46; 22:24) ಆದರೂ ಭೂಮಿಯಲ್ಲಿ ಎದುರಿಸಿದ ಪ್ರತಿಯೊಂದು ವಿಷಯಕ್ಕೂ ಅವನು ಪರಿಪೂರ್ಣ ರೀತಿಯಲ್ಲಿ ಪ್ರತಿಕ್ರಿಯಿಸಿದನು.

5 ಯೇಸು ಅದ್ಭುತವಾಗಿ ಮಾನವ ಭಾಷೆಯೊಂದನ್ನು ಮಾತಾಡಲು ಆರಂಭಿಸಲಿಲ್ಲ. ಅವನು ಶಿಶುವಾಗಿದ್ದಾಗ ಅದನ್ನು ಕಲಿಯಲು ಆರಂಭಿಸಿದನು. ಸ್ವರ್ಗದಲ್ಲಿ ದೇವದೂತರನ್ನು ಆಜ್ಞಾಪಿಸುತ್ತಿದ್ದವನಿಗೆ ಇದೆಂಥ ಬದಲಾವಣೆ! ಯೇಸು ಭೂಮಿಯಲ್ಲಿದ್ದಾಗ ‘ಮನುಷ್ಯರ ಭಾಷೆಗಳಲ್ಲಿ’ ಕಡಮೆಪಕ್ಷ ಒಂದನ್ನಾದರೂ ಮಾತಾಡಿದನು. ಅದು ‘ದೇವದೂತರ ಭಾಷೆಗಳಿಗಿಂತ’ ಸಂಪೂರ್ಣ ಭಿನ್ನವಾಗಿತ್ತು. (1 ಕೊರಿಂ. 13:1) ಆದರೆ ಇಂಪಾದ ಮಾತುಗಳನ್ನು ಆಡಿದರಲ್ಲಿ ಯೇಸುವಿಗೆ ಸಮಾನನಾದ ಇನ್ನೊಬ್ಬ ಮನುಷ್ಯ ಇರಲಿಲ್ಲ.—ಲೂಕ 4:22.

6 ದೇವಪುತ್ರನು ಭೂಮಿಗೆ ಬಂದಾಗ ಅನುಭವಿಸಿದ ಇತರ ಮಹತ್ತಾದ ಬದಲಾವಣೆಗಳನ್ನು ಪರಿಗಣಿಸಿ. ಯೇಸು ಆದಾಮನಿಂದ ಪಾಪವನ್ನು ಬಾಧ್ಯತೆಯಾಗಿ ಪಡೆಯದಿದ್ದರೂ, ತನ್ನ ಭಾವೀ ‘ಸಹೋದರರು’ ಅಥವಾ ಅಭಿಷಿಕ್ತ ಅನುಯಾಯಿಗಳಂತೆ ಒಬ್ಬ ಮನುಷ್ಯನಾಗಿದ್ದನು. (ಇಬ್ರಿಯ 2:17, 18ನ್ನು ಓದಿ.) ತನ್ನ ಭೂಜೀವಿತದ ಕೊನೆಯ ರಾತ್ರಿಯಲ್ಲಿ, “ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು” ಕಳುಹಿಸಿ ಕೊಡುವಂತೆ ಯೇಸು ತನ್ನ ತಂದೆಯನ್ನು ಕೇಳಿಕೊಳ್ಳಲಿಲ್ಲ. ಆದರೆ ಪ್ರಧಾನ ದೇವದೂತನಾದ ಮೀಕಾಯೇಲನಾಗಿ ಅವನಿಗೆ ದೇವದೂತರ ಮೇಲಿದ್ದ ಅಧಿಕಾರದ ಕುರಿತು ತುಸು ಯೋಚಿಸಿ! (ಮತ್ತಾ. 26:53; ಯೂದ 9) ಯೇಸು ಅದ್ಭುತಗಳನ್ನು ಮಾಡಿದನು ನಿಜ, ಆದರೆ ಭೂಮಿಯಲ್ಲಿದ್ದಾಗ ಅವನೇನು ಮಾಡಿದನೋ ಅದನ್ನು, ಅವನು ಸ್ವರ್ಗದಲ್ಲಿದ್ದು ಮಾಡಶಕ್ತನಾಗಿದ್ದ ವಿಷಯದೊಂದಿಗೆ ಹೋಲಿಸುವಾಗ ತುಂಬಾ ಸೀಮಿತವಾಗಿತ್ತು.

7 “ವಾಕ್ಯವಾಗಿ” ತನ್ನ ಮಾನವಪೂರ್ವ ಅಸ್ತಿತ್ವದಲ್ಲಿದ್ದಾಗ ಯೇಸು ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ನಡೆಸಿದ ದೇವರ ವಕ್ತಾರನಾಗಿದ್ದಿರಬಹುದು. (ಯೋಹಾ. 1:1; ವಿಮೋ. 23:20-23) ಆ ಇಸ್ರಾಯೇಲ್ಯರು “ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು . . . ಹೊಂದಿದವರಾದರೂ” ಅದನ್ನು ಅನುಸರಿಸಿರಲಿಲ್ಲ. (ಅ. ಕೃ. 7:53; ಇಬ್ರಿ. 2:2, 3) ಒಂದನೆಯ ಶತಮಾನದ ಯೆಹೂದಿ ಧಾರ್ಮಿಕ ಮುಖಂಡರು ಸಹ ಧರ್ಮಶಾಸ್ತ್ರದ ನಿಜ ಉದ್ದೇಶವನ್ನು ಗ್ರಹಿಸಲಿಲ್ಲ. ಉದಾಹರಣೆಗೆ, ಸಬ್ಬತ್‌ ನಿಯಮವನ್ನು ತೆಗೆದುಕೊಳ್ಳಿ. (ಮಾರ್ಕ 3:4-6ನ್ನು ಓದಿ.) ಶಾಸ್ತ್ರಿಗಳೂ ಫರಿಸಾಯರೂ “ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ” ಬಿಟ್ಟುಬಿಟ್ಟಿದ್ದರು. (ಮತ್ತಾ. 23:23) ಹೀಗಿದ್ದರೂ, ಯೇಸು ಅವರಿಗೆ ಸಹಾಯ ಮಾಡುವುದನ್ನೂ ಸತ್ಯವನ್ನು ಪ್ರಕಟಿಸುವುದನ್ನೂ ನಿಲ್ಲಿಸಲಿಲ್ಲ.

8 ಯೇಸುವಿಗೆ ಸಿದ್ಧ ಮನಸ್ಸಿತ್ತು. ಅವನು ಜನರ ಮೇಲಿನ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು ಅವರಿಗೆ ಸಹಾಯಮಾಡಲು ತೀವ್ರಾಸಕ್ತನಾಗಿದ್ದನು. ಅವನೆಂದೂ ಸೌವಾರ್ತಿಕ ಹುರುಪನ್ನು ಕಳೆದುಕೊಳ್ಳಲಿಲ್ಲ. ಮಾತ್ರವಲ್ಲ, ಅವನು ಭೂಮಿಯಲ್ಲಿದ್ದಾಗ ಯೆಹೋವನಿಗೆ ನಂಬಿಗಸ್ತನಾಗಿದ್ದದರಿಂದ, “ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು.” ಇದಲ್ಲದೆ, ಅವನು “ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ [ನಮ್ಮ ಹಾಗೆ] ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.”—ಇಬ್ರಿ. 2:18; 5:8, 9.

ಒಳ್ಳೇ ತರಬೇತಿ ಪಡೆದ ಬೋಧಕ

9 ಇಂದಿನ ಕ್ರೈಸ್ತರನ್ನು ಮಿಷನೆರಿಗಳಾಗಿ ಕಳುಹಿಸುವ ಮೊದಲು ಅವರಿಗೆ ತರಬೇತಿ ನೀಡಲು ಆಡಳಿತ ಮಂಡಲಿಯು ಏರ್ಪಾಡು ಮಾಡುತ್ತದೆ. ಯೇಸು ಕ್ರಿಸ್ತನಿಗೂ ತರಬೇತಿ ಸಿಕ್ಕಿತ್ತೊ? ಹೌದು, ಆದರೆ ಅವನು ಮೆಸ್ಸೀಯನಾಗಿ ಅಭಿಷೇಕಿಸಲ್ಪಡುವ ಮೊದಲು ರಬ್ಬಿಗಳ ಶಾಲೆಗಳಿಗೆ ಹೋಗಿರಲೂ ಇಲ್ಲ, ಯಾವುದೇ ಪ್ರಸಿದ್ಧ ಧಾರ್ಮಿಕ ಮುಖಂಡರ ಸನ್ನಿಧಿಯಲ್ಲಿ ಕಲಿತದ್ದೂ ಇಲ್ಲ. (ಯೋಹಾ. 7:15; ಅ. ಕೃತ್ಯಗಳು 22:3ನ್ನು ಹೋಲಿಸಿ.) ಹೀಗಿರಲಾಗಿ, ಯೇಸು ಬೋಧಿಸಲು ಅಷ್ಟು ಅರ್ಹನಾದದ್ದು ಏಕೆ?

10 ಯೇಸು ತನ್ನ ತಾಯಿಯಾದ ಮರಿಯಳಿಂದ ಮತ್ತು ದತ್ತುತಂದೆಯಾಗಿದ್ದ ಯೋಸೇಫನಿಂದ ಏನನ್ನೇ ಕಲಿತಿರಬಹುದಾದರೂ, ಶುಶ್ರೂಷೆಗಾಗಿ ಅತಿ ಪ್ರಾಮುಖ್ಯ ತರಬೇತಿಯನ್ನು ಅತ್ಯುನ್ನತ ಮೂಲದಿಂದಲೇ ಪಡೆದನು. ಇದರ ಕುರಿತು ಯೇಸು ಹೇಳಿದ್ದು: “ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿ ಕೊಟ್ಟ ತಂದೆಯೇ—ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆಕೊಟ್ಟಿದ್ದಾನೆ.” (ಯೋಹಾ. 12:49) ಏನನ್ನು ಬೋಧಿಸಬೇಕೆಂದು ಈ ಪುತ್ರನಿಗೆ ಸ್ಪಷ್ಟ ಮಾಹಿತಿ ಕೊಡಲಾಗಿತ್ತು ಎಂಬುದನ್ನು ಗಮನಿಸಿರಿ. ಯೇಸು ಭೂಮಿಗೆ ಬರುವ ಮೊದಲು ತನ್ನ ತಂದೆಯ ಶಿಕ್ಷಣವನ್ನು ಆಲಿಸಲು ಹೆಚ್ಚು ಸಮಯವನ್ನು ಕಳೆದಿದ್ದನು ಎಂಬುದು ನಿಸ್ಸಂದೇಹ. ಇದಕ್ಕಿಂತಲೂ ಉತ್ತಮವಾದ ತರಬೇತಿಯನ್ನು ಅವನು ಪಡೆಯಸಾಧ್ಯವಿತ್ತೋ?

11 ಈ ಮಗನಿಗೆ ತನ್ನ ಸೃಷ್ಟಿಯಾದಂದಿನಿಂದ ತಂದೆಯೊಂದಿಗೆ ಅತ್ಯಾಪ್ತ ಸಂಬಂಧವಿತ್ತು. ಯೇಸು ತನ್ನ ಮಾನವಪೂರ್ವ ಅಸ್ತಿತ್ವದ ಸಮಯದಲ್ಲಿ, ಯೆಹೋವನು ಮಾನವರೊಂದಿಗೆ ವ್ಯವಹರಿಸಿದ ವಿಧವನ್ನು ಅವಲೋಕಿಸಿದನು. ಈ ಮೂಲಕ ಮಾನವರ ಕಡೆಗೆ ದೇವರಿಗಿದ್ದ ಮನೋಭಾವವನ್ನು ಅವನು ವಿವೇಚಿಸಿ ತಿಳಿದುಕೊಂಡನು. ದೇವರಿಗೆ ಮಾನವಕುಲದ ಮೇಲಿದ್ದ ಪ್ರೀತಿ ಈ ಪುತ್ರನಲ್ಲಿ ಎಷ್ಟು ಹೆಚ್ಚಾಗಿ ಪ್ರತಿಫಲಿಸಿತೆಂದರೆ, ಅವನು ಹೀಗೆ ಹೇಳಸಾಧ್ಯವಾಯಿತು: “[ನಾನು] ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.”—ಜ್ಞಾನೋ. 8:22, 31.

12 ಈ ಪುತ್ರನು ಪಡೆದ ತರಬೇತಿಯಲ್ಲಿ ತನ್ನ ತಂದೆಯು ಕಷ್ಟ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿನೆಂಬುದನ್ನು ಅವಲೋಕಿಸುವುದೂ ಸೇರಿತ್ತು. ದೃಷ್ಟಾಂತಕ್ಕೆ, ಅವಿಧೇಯರಾಗಿದ್ದ ಇಸ್ರಾಯೇಲ್ಯರೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯನ್ನು ಪರಿಗಣಿಸಿರಿ. ನೆಹೆಮೀಯ 9:28 ಹೇಳುವುದು: ‘ಉಪಶಮನವನ್ನು ಪಡೆದ ಮೇಲೆ ಅವರು ತಿರಿಗಿ ದ್ರೋಹಿಗಳಾಗಿ ನಡೆಯುತ್ತಿರುವದನ್ನು ನೀನು [ಯೆಹೋವನು] ಕಂಡು ಅವರ ಮೇಲೆ ದೊರೆತನನಡಿಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದಿ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿದಿ.’ ಯೆಹೋವನೊಂದಿಗೆ ಕೆಲಸಮಾಡುತ್ತಾ ಆತನನ್ನು ಅವಲೋಕಿಸಿದ ಯೇಸು ತನ್ನ ಕ್ಷೇತ್ರದಲ್ಲಿದ್ದ ಜನರಿಗೂ ಅದೇ ರೀತಿಯ ಕನಿಕರವನ್ನು ತೋರಿಸಿದನು.—ಯೋಹಾ. 5:19.

13 ಯೇಸು ತನ್ನ ಶಿಷ್ಯರೊಂದಿಗೆ ಕನಿಕರದಿಂದ ವ್ಯವಹರಿಸಿದಾಗ ತನಗೆ ಸಿಕ್ಕಿದ ತರಬೇತಿಯನ್ನು ಕಾರ್ಯರೂಪಕ್ಕೆ ಹಾಕಿದನು. ಅವನ ಮರಣಕ್ಕೆ ಮುಂಚಿನ ರಾತ್ರಿ, ಅವನು ಗಾಢವಾಗಿ ಪ್ರೀತಿಸಿದ ಅಪೊಸ್ತಲರೆಲ್ಲರೂ “ಆತನನ್ನು ಬಿಟ್ಟು ಓಡಿಹೋದರು.” (ಮತ್ತಾ. 26:56; ಯೋಹಾ. 13:1) ಅಲ್ಲದೆ, ಅಪೊಸ್ತಲ ಪೇತ್ರನು ಸಹ ಕ್ರಿಸ್ತನನ್ನು ಮೂರು ಬಾರಿ ಅಲ್ಲಗಳೆದನು! ಹೀಗಿದ್ದರೂ, ತನ್ನ ಅಪೊಸ್ತಲರು ತನ್ನ ಬಳಿಗೆ ಹಿಂದಿರುಗಿ ಬರುವಂತೆ ಯೇಸು ದಾರಿಯನ್ನು ತೆರೆದಿಟ್ಟನು. ಅವನು ಪೇತ್ರನಿಗೆ ಹೇಳಿದ್ದು: “ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು.” (ಲೂಕ 22:32) ಆಧ್ಯಾತ್ಮಿಕ ಇಸ್ರಾಯೇಲನ್ನು “ಅಪೊಸ್ತಲರೂ ಪ್ರವಾದಿಗಳೂ” ಎಂಬ ಅಸ್ತಿವಾರದ ಮೇಲೆ ಏಳಿಗೆ ಹೊಂದುವಂತೆ ಕಟ್ಟಲಾಗಿದೆ ಮತ್ತು ನೂತನ ಯೆರೂಸಲೇಮಿನ ಗೋಡೆಯ ಅಸ್ತಿವಾರದ ಕಲ್ಲುಗಳು ಕುರಿಮರಿಯಾದ ಯೇಸು ಕ್ರಿಸ್ತನ 12 ಮಂದಿ ನಂಬಿಗಸ್ತ ಅಪೊಸ್ತಲರ ಹೆಸರುಗಳನ್ನು ಹೊಂದಿವೆ. ಇಂದಿನ ವರೆಗೂ ಅಭಿಷಿಕ್ತ ಕ್ರೈಸ್ತರು ಸಮರ್ಪಿತರಾಗಿರುವ ತಮ್ಮ ಒಡನಾಡಿಗಳಾದ ‘ಬೇರೆ ಕುರಿಗಳೊಂದಿಗೆ’ ರಾಜ್ಯ ಸಾರುವ ಸಂಘಟನೆಯಾಗಿ ಏಳಿಗೆ ಹೊಂದುತ್ತ ಇದ್ದಾರೆ. ದೇವರ ಬಲಾಢ್ಯ ಹಸ್ತದ ಕೆಳಗೆ ಮತ್ತು ಆತನ ಪ್ರಿಯ ಕುಮಾರನ ನಾಯಕತ್ವದಡಿಯಲ್ಲಿ ಅವರು ಹಾಗೆ ಏಳಿಗೆ ಹೊಂದುತ್ತಿದ್ದಾರೆ.—ಎಫೆ. 2:20; ಯೋಹಾ. 10:16; ಪ್ರಕ. 21:14.

ಯೇಸು ಬೋಧಿಸಿದ ರೀತಿ

14 ಯೇಸು ತನಗೆ ದೊರೆತಿದ್ದ ತರಬೇತಿಯನ್ನು ತನ್ನ ಶಿಷ್ಯರಿಗೆ ಬೋಧಿಸುವಾಗ ಹೇಗೆ ಕಾರ್ಯರೂಪಕ್ಕೆ ಹಾಕಿದನು? ಯೇಸುವಿನ ಬೋಧನೆಯನ್ನು ಯೆಹೂದಿ ಧಾರ್ಮಿಕ ಮುಖಂಡರೊಂದಿಗೆ ಹೋಲಿಸುವಾಗ ಅವನ ಬೋಧನಾ ರೀತಿಯು ಎಷ್ಟು ಶ್ರೇಷ್ಠವೆಂಬುದನ್ನು ನಾವು ಸ್ಪಷ್ಟವಾಗಿ ನೋಡುತ್ತೇವೆ. ಶಾಸ್ತ್ರಿಗಳೂ ಫರಿಸಾಯರೂ ತಮ್ಮ ‘ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದರು.’ ತದ್ವಿರುದ್ಧವಾಗಿ, ಯೇಸು ತನ್ನ ಸ್ವಂತ ಮಾತುಗಳನ್ನು ಆಡದೆ ಯಾವಾಗಲೂ ದೇವರ ವಾಕ್ಯಕ್ಕೆ ಅಥವಾ ಸಂದೇಶಕ್ಕೆ ಅಂಟಿಕೊಂಡನು. (ಮತ್ತಾ. 15:6; ಯೋಹಾ. 14:10) ನಾವು ಸಹ ಇದನ್ನೇ ಮಾಡಬೇಕು.

15 ಇನ್ನೊಂದು ಸಂಗತಿಯು ಯೇಸುವನ್ನು ಧಾರ್ಮಿಕ ಮುಖಂಡರಿಂದ ಪೂರ್ತಿಯಾಗಿ ಭಿನ್ನವಾಗಿರಿಸಿತು. ಶಾಸ್ತ್ರಿಗಳ ಮತ್ತು ಫರಿಸಾಯರ ಬಗ್ಗೆ ಅವನು ಹೇಳಿದ್ದು: “ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.” (ಮತ್ತಾ. 23:3) ಯೇಸು ತಾನು ಬೋಧಿಸಿದ್ದನ್ನು ಕಾರ್ಯರೂಪಕ್ಕೆ ಹಾಕಿದನು. ಇದು ಸತ್ಯವೆಂದು ರುಜುಮಾಡುವ ಒಂದು ಉದಾಹರಣೆಯನ್ನು ನಾವು ಪರಿಗಣಿಸೋಣ.

16 “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ” ಎಂದು ಯೇಸು ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು. (ಮತ್ತಾಯ 6:19-21ನ್ನು ಓದಿ.) ಯೇಸು ತಾನೇ ಆ ಬುದ್ಧಿವಾದಕ್ಕೆ ಹೊಂದಿಕೆಯಾಗಿ ಜೀವಿಸಿದನೋ? ಹೌದು, ಏಕೆಂದರೆ ಅವನು ತನ್ನ ವಿಷಯದಲ್ಲಿ ಪ್ರಾಮಾಣಿಕವಾಗಿ ಹೀಗೆ ಹೇಳಶಕ್ತನಾಗಿದ್ದನು: “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” (ಲೂಕ 9:58) ಯೇಸು ಸರಳ ಜೀವನ ನಡೆಸಿದನು. ಅವನು ಪ್ರಧಾನವಾಗಿ ರಾಜ್ಯ ಸುವಾರ್ತೆಯ ಘೋಷಣೆಯಲ್ಲಿ ತೊಡಗಿದ್ದನು. ಮಾತ್ರವಲ್ಲ, ಭೂಮಿಯಲ್ಲಿ ಗಂಟನ್ನು ಕೂಡಿಸಿಡುವುದರಿಂದ ಬರುವ ನಾನಾ ಚಿಂತೆಗಳಿಂದ ಹೇಗೆ ಮುಕ್ತರಾಗಿರುವುದೆಂದು ಅವನು ತೋರಿಸಿದನು. ಎಲ್ಲಿ ಗಂಟು, ‘ನುಸಿಹಿಡಿದು ಕಿಲುಬುಹತ್ತಿ ಕೆಟ್ಟು ಹೋಗುವುದಿಲ್ಲವೊ’ ಮತ್ತು ‘ಕಳ್ಳರು ಕನ್ನಾಕೊರೆದು ಕದಿಯುವುದಿಲ್ಲವೊ’ ಅಲ್ಲಿ ಅಂದರೆ ಪರಲೋಕದಲ್ಲಿ ಅವುಗಳನ್ನು ಶೇಖರಿಸುವುದು ಎಷ್ಟೋ ಉತ್ತಮವೆಂದು ಅವನು ತೋರಿಸಿದನು. ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ ಎಂಬ ಯೇಸುವಿನ ಬುದ್ಧಿವಾದವನ್ನು ನೀವು ಅನುಸರಿಸುತ್ತಿದ್ದೀರೋ?

ಜನರ ಪ್ರೀತಿಗೆ ಪಾತ್ರವಾದ ಯೇಸುವಿನ ಗುಣಗಳು

17 ಯೇಸುವನ್ನು ಒಬ್ಬ ಅತಿಶ್ರೇಷ್ಠ ಸೌವಾರ್ತಿಕನನ್ನಾಗಿ ಮಾಡಿದ ಗುಣಗಳಾವುವು? ತಾನು ಸಹಾಯ ಮಾಡಿದ ಜನರ ಕಡೆಗೆ ಅವನಿಗಿದ್ದ ಮನೋಭಾವ ಇವುಗಳಲ್ಲಿ ಒಂದಾಗಿತ್ತು. ದೈನ್ಯಭಾವ, ಪ್ರೀತಿ, ಕನಿಕರ, ಇವು ಯೇಸು ಪ್ರತಿಬಿಂಬಿಸಿದ ಯೆಹೋವನ ಅತ್ಯುತ್ತಮ ಗುಣಗಳಲ್ಲಿ ಕೆಲವಾಗಿದ್ದವು. ಈ ಗುಣಗಳು ಅನೇಕರನ್ನು ಯೇಸುವಿನ ಬಳಿಗೆ ಹೇಗೆ ಆಕರ್ಷಿಸಿದವೆಂಬುದನ್ನು ಗಮನಿಸಿರಿ.

18 ಭೂಮಿಗೆ ಬರುವ ನೇಮಕವನ್ನು ಅಂಗೀಕರಿಸಿದ ಯೇಸು, “ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು.” (ಫಿಲಿ. 2:7) ಅದು ದೈನ್ಯಭಾವದ ಕ್ರಿಯೆಯಾಗಿತ್ತು. ಇದಲ್ಲದೆ, ಯೇಸು ಜನರನ್ನು ಎಂದೂ ತುಚ್ಛವಾಗಿ ಕಾಣಲಿಲ್ಲ. ‘ನಾನು ಸ್ವರ್ಗದಿಂದ ಇಳಿದು ಬಂದಿದ್ದೇನೆ, ನಾನು ಹೇಳಿದ್ದನ್ನು ನೀವು ಕೇಳಬೇಕು’ ಎಂಬ ಮನೋಭಾವ ಅವನಿಗಿರಲಿಲ್ಲ. ಸ್ವಯಂಘೋಷಿತ ಸುಳ್ಳು ಮೆಸ್ಸೀಯರಂತೆ, ನಾನೇ ನಿಜ ಮೆಸ್ಸೀಯನೆಂದು ಅವನು ಊರೆಲ್ಲಾ ಡಂಗೂರ ಸಾರಲಿಲ್ಲ. ಕೆಲವೊಮ್ಮೆ, ತಾನು ಯಾರು ಅಥವಾ ಏನೆಲ್ಲಾ ಮಾಡಿದ್ದೇನೆ ಎಂದು ಯಾರಿಗೂ ಹೇಳಬಾರದೆಂದು ಅವನು ಜನರಿಗೆ ತಿಳಿಸಿದನು. (ಮತ್ತಾ. 12:15-21) ಜನರು ತಾವೇ ನೋಡಿರುವಂಥ ವಿಷಯಗಳ ಆಧಾರದ ಮೇರೆಗೆ ಅವನನ್ನು ಹಿಂಬಾಲಿಸುವ ನಿರ್ಧಾರವನ್ನು ಮಾಡಬೇಕೆಂದು ಅವನು ಬಯಸಿದನು. ಸ್ವರ್ಗದಲ್ಲಿ ತನ್ನ ಒಡನಾಡಿಗಳಾಗಿದ್ದ ಪರಿಪೂರ್ಣ ದೇವದೂತರಂತೆಯೇ ತನ್ನ ಶಿಷ್ಯರೂ ಇರಬೇಕೆಂದು ಯೇಸು ಬಯಸಲಿಲ್ಲ. ಇದರಿಂದ ಅವನ ಶಿಷ್ಯರು ಎಷ್ಟು ಮಹತ್ತರ ಪ್ರಯೋಜನ ಪಡೆದರು!

19 ಯೇಸು ತನ್ನ ಸ್ವರ್ಗೀಯ ತಂದೆಯ ಒಂದು ಪ್ರಧಾನ ಗುಣವಾದ ಪ್ರೀತಿಯನ್ನೂ ತೋರಿಸಿದನು. (1 ಯೋಹಾ. 4:8) ಅವನು ತನ್ನ ಸಭಿಕರಿಗೆ ಪ್ರೀತಿಯಿಂದ ಬೋಧಿಸಿದನು. ಉದಾಹರಣೆಗೆ, ಒಬ್ಬ ಯುವ ಅಧಿಕಾರಿಯ ಕಡೆಗೆ ಅವನಿಗಿದ್ದ ಭಾವನೆಗಳನ್ನು ಪರಿಗಣಿಸಿರಿ. (ಮಾರ್ಕ 10:17-22ನ್ನು ಓದಿ.) ಯೇಸು ಅವನನ್ನು “ಪ್ರೀತಿಸಿ” ಅವನಿಗೆ ಸಹಾಯಮಾಡಲು ಬಯಸಿದನು. ಆದರೆ, ಆ ಯುವ ಅಧಿಕಾರಿಯು ಕ್ರಿಸ್ತನ ಹಿಂಬಾಲಕನಾಗಲು ತನ್ನ ಅನೇಕ ಸ್ವತ್ತುಗಳನ್ನು ತ್ಯಜಿಸಲಿಲ್ಲ.

20 ಯೇಸುವಿನ ಪ್ರೀತಿಪಾತ್ರ ಗುಣಗಳಲ್ಲಿ ಒಂದು ಕನಿಕರವಾಗಿತ್ತು. ಅವನ ಬೋಧನೆಗೆ ಪ್ರತಿಕ್ರಿಯಿಸಿದವರು ಎಲ್ಲ ಅಪರಿಪೂರ್ಣ ಮಾನವರಂತೆ ಸಮಸ್ಯೆಗಳಿಂದ ಕುಗ್ಗಿಹೋದವರಾಗಿದ್ದರು. ಇದನ್ನು ಅರಿತಿದ್ದ ಯೇಸು, ಅವರಿಗೆ ಕನಿಕರ ಮತ್ತು ಕರುಣೆಯಿಂದ ಬೋಧಿಸಿದನು. ದೃಷ್ಟಾಂತಕ್ಕಾಗಿ, ಒಮ್ಮೆ ಯೇಸು ಮತ್ತು ಅವನ ಅಪೊಸ್ತಲರು ಎಷ್ಟು ಕಾರ್ಯಮಗ್ನರಾಗಿದ್ದರೆಂದರೆ ಊಟ ಮಾಡಲೂ ಅವರಿಗೆ ಬಿಡುವಿರಲಿಲ್ಲ. ಆದರೂ, ನೆರೆದು ಬಂದಿದ್ದ ಜನಸಮೂಹವನ್ನು ನೋಡಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ‘ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶಮಾಡಿದನು.’ (ಮಾರ್ಕ 6:34) ತಾನು ಸಾರುತ್ತಿದ್ದ ಕ್ಷೇತ್ರದಲ್ಲಿದ್ದ ಜನರ ಕರುಣಾಜನಕ ಸ್ಥಿತಿಯನ್ನು ಯೇಸು ಗಮನಿಸಿ, ಅವರಿಗೆ ಬೋಧಿಸಲು ಮತ್ತು ಅವರ ಪ್ರಯೋಜನಾರ್ಥವಾಗಿ ಅದ್ಭುತಗಳನ್ನು ಮಾಡಲು ತನ್ನ ಶಕ್ತಿಯನ್ನು ಬಳಸಿದನು. ಕೆಲವರು ಅವನ ಉತ್ತಮ ಗುಣಗಳ ಕಾರಣ ಆಕರ್ಷಿತರಾಗಿ, ಅವನ ಮಾತುಗಳಿಂದ ಪ್ರಚೋದಿತರಾಗಿ, ಅವನ ಶಿಷ್ಯರಾದರು.

21 ಮುಂದಿನ ಲೇಖನ ತೋರಿಸುವಂತೆ, ಯೇಸುವಿನ ಭೂಶುಶ್ರೂಷೆಯ ಬಗ್ಗೆ ಕಲಿಯಲು ನಮಗೆ ಇನ್ನೂ ಎಷ್ಟೋ ವಿಷಯಗಳಿವೆ. ಮಹಾನ್‌ ಮಿಷನೆರಿಯಾದ ಯೇಸು ಕ್ರಿಸ್ತನನ್ನು ನಾವು ಇನ್ನಾವ ವಿಧಗಳಲ್ಲಿ ಅನುಕರಿಸಬಲ್ಲೆವು?

ನಿಮ್ಮ ಉತ್ತರವೇನು?

• ಯೇಸು ಭೂಮಿಗೆ ಬರುವ ಮೊದಲು ಯಾವ ತರಬೇತಿಯನ್ನು ಪಡೆದಿದ್ದನು?

• ಯೇಸುವಿನ ಬೋಧನಾರೀತಿ ಶಾಸ್ತ್ರಿಗಳ ಮತ್ತು ಫರಿಸಾಯರ ಬೋಧನೆಗಿಂತ ಹೇಗೆ ಶ್ರೇಷ್ಠ ರೀತಿಯದ್ದಾಗಿತ್ತು?

• ಯಾವ ಗುಣಗಳು ಯೇಸುವನ್ನು ಜನರ ಪ್ರೀತಿಗೆ ಪಾತ್ರನನ್ನಾಗಿಸಿತು?

[ಅಧ್ಯಯನ ಪ್ರಶ್ನೆಗಳು]

1, 2. ಮಿಷನೆರಿ ಅಂದರೇನು ಮತ್ತು ಮಹಾನ್‌ ಮಿಷನೆರಿ ಎಂದು ಯಾರನ್ನು ಕರೆಯಸಾಧ್ಯವಿದೆ?

3. ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

4-6. ಭೂಮಿಗೆ ಕಳುಹಿಸಲ್ಪಟ್ಟಾಗ ಯೇಸು ಎದುರಿಸಿದ ಕೆಲವು ಬದಲಾವಣೆಗಳು ಯಾವುವು?

7. ಧರ್ಮಶಾಸ್ತ್ರದ ಸಂಬಂಧದಲ್ಲಿ ಯೆಹೂದ್ಯರ ವರ್ತನೆ ಏನಾಗಿತ್ತು?

8. ಯೇಸು ನಮಗೆ ಸಹಾಯಮಾಡಲು ಏಕೆ ಶಕ್ತನಾಗಿದ್ದಾನೆ?

9, 10. ಭೂಮಿಗೆ ಕಳುಹಿಸಲ್ಪಡುವುದಕ್ಕೆ ಮುಂಚೆ ಯೇಸು ಯಾವ ರೀತಿಯ ತರಬೇತಿಯನ್ನು ಪಡೆದನು?

11. ಮಾನವಕುಲದ ಕಡೆಗೆ ತನ್ನ ತಂದೆಗಿದ್ದ ಮನೋಭಾವವನ್ನು ಯೇಸು ಎಷ್ಟರ ಮಟ್ಟಿಗೆ ಪ್ರತಿಫಲಿಸಿದನು?

12, 13. (ಎ) ತನ್ನ ತಂದೆ ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದ ರೀತಿಯನ್ನು ಅವಲೋಕಿಸುವ ಮೂಲಕ ಯೇಸು ಹೇಗೆ ಕಲಿತುಕೊಂಡನು? (ಬಿ) ಯೇಸು ತನಗೆ ದೊರೆತ ತರಬೇತಿಯನ್ನು ಹೇಗೆ ಬಳಸಿದನು?

14, 15. ಯೇಸುವಿನ ಬೋಧನೆಯು ಶಾಸ್ತ್ರಿಗಳ ಮತ್ತು ಫರಿಸಾಯರ ಬೋಧನೆಗಿಂತ ಯಾವ ವಿಧಗಳಲ್ಲಿ ಭಿನ್ನವಾಗಿತ್ತು?

16. ಮತ್ತಾಯ 6:19-21ರ ಮಾತುಗಳಿಗೆ ಅನುಸಾರವಾಗಿ ಯೇಸು ಜೀವಿಸಿದನೆಂದು ನೀವೇಕೆ ಹೇಳುವಿರಿ?

17. ಯಾವ ಗುಣಗಳು ಯೇಸುವನ್ನು ಒಬ್ಬ ಅತಿಶ್ರೇಷ್ಠ ಸೌವಾರ್ತಿಕನನ್ನಾಗಿ ಮಾಡಿದವು?

18. ಯೇಸು ದೀನನಾಗಿದ್ದನೆಂದು ಏಕೆ ಹೇಳಸಾಧ್ಯವಿದೆ?

19, 20. ಪ್ರೀತಿ ಮತ್ತು ಕನಿಕರ ಜನರಿಗೆ ಸಹಾಯಮಾಡುವಂತೆ ಯೇಸುವನ್ನು ಹೇಗೆ ಪ್ರೇರಿಸಿತು?

21. ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?

[ಪುಟ 15ರಲ್ಲಿರುವ ಚಿತ್ರ]

ಯೇಸು ಜನರ ಗುಂಪಿಗೆ ಹೇಗೆ ಬೋಧಿಸಿದನು?