ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಇಸ್ರಾಯೇಲ್‌ ಜನವೆಲ್ಲಾ ರಕ್ಷಣೆಹೊಂದುವದು” ಎಂದು ಅಪೊಸ್ತಲ ಪೌಲನು ಹೇಳಿರುತ್ತಾನೆ. (ರೋಮಾ. 11:26) ಇದರ ಅರ್ಥವು, ಯೆಹೂದ್ಯರೆಲ್ಲರೂ ಒಂದು ಸಮಯದಲ್ಲಿ ಕ್ರೈಸ್ತತ್ವಕ್ಕೆ ಪರಿವರ್ತನೆ ಹೊಂದಲಿರುವರು ಎಂದಾಗಿದೆಯೋ?

ಇಲ್ಲ, ಪೌಲನು ಇಲ್ಲಿ ಆ ರೀತಿಯಾಗಿ ಹೇಳಿರುವುದಿಲ್ಲ. ಅಬ್ರಹಾಮನ ವಂಶಸ್ಥರು ಒಂದು ಜನಾಂಗವಾಗಿ ಯೇಸುವನ್ನು ಮೆಸ್ಸೀಯನಾಗಿ ಸ್ವೀಕರಿಸಲು ನಿರಾಕರಿಸಿದರು. ಅಲ್ಲದೆ, ಯೆಹೂದ್ಯರು ಇಡೀ ಜನಾಂಗವಾಗಿ ಕ್ರೈಸ್ತತ್ವಕ್ಕೆ ಪರಿವರ್ತನೆ ಹೊಂದಲಿಕ್ಕಿಲ್ಲವೆಂದು ಯೇಸುವಿನ ಮರಣದ ನಂತರದ ವರ್ಷಗಳಲ್ಲಿ ಸ್ಪಷ್ಟವಾಗಿ ತೋರಿಬಂತು. ಆದರೂ, “ಇಸ್ರಾಯೇಲ್‌ ಜನವೆಲ್ಲಾ ರಕ್ಷಣೆಹೊಂದುವದು” ಎಂಬ ಪೌಲನ ಹೇಳಿಕೆಯು ಒಂದು ರೀತಿಯಲ್ಲಿ ಸತ್ಯವಾಗಿತ್ತು. ಅದು ಹೇಗೆ?

ಯೇಸು ತನ್ನ ದಿನಗಳ ಯೆಹೂದಿ ಧಾರ್ಮಿಕ ಮುಖಂಡರಿಗೆ ಹೇಳಿದ್ದು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” (ಮತ್ತಾ. 21:43) ಇಸ್ರಾಯೇಲ್ಯರು ಇಡೀ ಜನಾಂಗದೋಪಾದಿ ಯೇಸುವನ್ನು ತಿರಸ್ಕರಿಸಿದ ಕಾರಣ, ಯೆಹೋವನು ತನ್ನ ಗಮನವನ್ನು ಒಂದು ಹೊಸ ಜನಾಂಗದ ಕಡೆಗೆ ಅಂದರೆ ಆಧ್ಯಾತ್ಮಿಕ ಜನಾಂಗದೆಡೆಗೆ ತಿರುಗಿಸಲಿಕ್ಕಿದ್ದನು. ಪೌಲನು ಈ ಜನಾಂಗವನ್ನು ‘ದೇವರ ಇಸ್ರಾಯೇಲ್‌’ ಎಂದು ಕರೆದನು.—ಗಲಾ. 6:16.

ಈ ‘ದೇವರ ಇಸ್ರಾಯೇಲ್‌ನಲ್ಲಿ’ 1,44,000 ಮಂದಿ ಆತ್ಮಾಭಿಷಿಕ್ತ ಕ್ರೈಸ್ತರಿದ್ದಾರೆಂದು ಗ್ರೀಕ್‌ ಶಾಸ್ತ್ರಗ್ರಂಥದಲ್ಲಿರುವ ಇತರ ವಚನಗಳು ರುಜುಪಡಿಸುತ್ತವೆ. (ರೋಮಾ. 8:15-17; ಪ್ರಕ. 7:4) ಈ ಗುಂಪಿನಲ್ಲಿ ಯೆಹೂದ್ಯೇತರರೂ ಸೇರಲಿದ್ದರೆಂಬುದನ್ನು ಪ್ರಕಟನೆ 5:9, 10 ದೃಢೀಕರಿಸುತ್ತಾ, ಅಭಿಷಿಕ್ತ ಕ್ರೈಸ್ತರು “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ಬರುವರೆಂದು ತೋರಿಸುತ್ತದೆ. ಆಧ್ಯಾತ್ಮಿಕ ಇಸ್ರಾಯೇಲ್ಯರ ಈ ಸದಸ್ಯರು ‘ರಾಜ್ಯವಾಗಿ ಯಾಜಕರಾಗಿ ಮತ್ತು ಭೂಮಿಯ ಮೇಲೆ [ರಾಜರಾಗಿ] ಆಳಲು’ ವಿಶೇಷವಾಗಿ ಆರಿಸಲ್ಪಟ್ಟಿರುತ್ತಾರೆ. ಯೆಹೋವನು ತಾನಾದುಕೊಂಡ ಜನಾಂಗವಾದ ಇಸ್ರಾಯೇಲನ್ನು ತೊರೆದುಬಿಟ್ಟರೂ, ಆ ಜನಾಂಗದ ಜನರು ವ್ಯಕ್ತಿಶಃ ಒಬ್ಬೊಬ್ಬರಾಗಿ ಆತನೊಂದಿಗೆ ಒಳ್ಳೇ ನಿಲುವಿಗೆ ಬರಬಹುದಿತ್ತು. ಅಪೊಸ್ತಲರೂ ಬೇರೆ ಅನೇಕ ಆದಿಕ್ರೈಸ್ತರೂ ಆ ರೀತಿಯಲ್ಲೇ ದೇವರೊಂದಿಗೆ ಒಳ್ಳೇ ನಿಲುವಿಗೆ ಬಂದರು. ಆದರೆ ಅಂಥ ಯೆಹೂದ್ಯರು, ಬೇರೆ ಎಲ್ಲ ಮಾನವರಂತೆಯೇ ಯೇಸು ಕ್ರಿಸ್ತನ ರಕ್ತದಿಂದ ಕ್ರಯಕ್ಕೆ ಕೊಂಡುಕೊಳ್ಳಲ್ಪಡಬೇಕಿತ್ತು.—1 ತಿಮೋ. 2:5, 6; ಇಬ್ರಿ. 2:9; 1 ಪೇತ್ರ 1:17-19.

ಒಂದನೆಯ ಶತಮಾನದಲ್ಲಿದ್ದ ಮಾಂಸಿಕ ಯೆಹೂದ್ಯರಲ್ಲಿ ಹೆಚ್ಚಿನವರು ಕ್ರಿಸ್ತನೊಂದಿಗೆ ಜೊತೆ ಅರಸರಾಗಿ ಆಳುವ ಸದವಕಾಶವನ್ನು ಕಳಕೊಂಡರೇನೋ ನಿಜ. ಆದರೆ ಆ ಕುರಿತ ದೇವರ ಉದ್ದೇಶವಾದರೋ ನಿಷ್ಪಲಗೊಳ್ಳಲಿಲ್ಲ. ದೇವರ ಉದ್ದೇಶವನ್ನು ನೆರವೇರದಂತೆ ತಡೆಯಸಾಧ್ಯವೂ ಇಲ್ಲ, ಯಾಕಂದರೆ ಯೆಹೋವನು ತನ್ನ ಪ್ರವಾದಿಯ ಮೂಲಕ ಹೇಳಿದ್ದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂತಿರುಗುವದಿಲ್ಲ.”—ಯೆಶಾ. 55:11.

ಇದು, ಪರಲೋಕದಲ್ಲಿ ತನ್ನ ಮಗನೊಂದಿಗೆ 1,44,000 ಜೊತೆ ಅರಸರನ್ನು ಪ್ರತಿಷ್ಠಾಪಿಸುವ ದೇವರ ಉದ್ದೇಶದ ವಿಷಯದಲ್ಲಿ ಸತ್ಯವಾಗಿದೆ. ದೇವರು ಎಲ್ಲ 1,44,000 ಮಂದಿಯನ್ನೂ ಅಭಿಷೇಕಿಸುವನೆಂದು ಬೈಬಲ್‌ ಸ್ಪಷ್ಟಪಡಿಸುತ್ತದೆ. ಅವರಲ್ಲಿ ಒಬ್ಬರಾದರೂ ಕಡಿಮೆಯಾಗರು!—ಪ್ರಕ. 14:1-5.

ಹೀಗೆ, ಪೌಲನು “ಇಸ್ರಾಯೇಲ್‌ ಜನವೆಲ್ಲಾ ರಕ್ಷಣೆಹೊಂದುವದು” ಎಂದು ಬರೆದಾಗ ಯೆಹೂದ್ಯರೆಲ್ಲರೂ ಕ್ರೈಸ್ತತ್ವಕ್ಕೆ ಪರಿವರ್ತನೆಗೊಳ್ಳುವರು ಎಂಬುದನ್ನು ಮುಂತಿಳಿಸುತ್ತಿರಲಿಲ್ಲ. ಬದಲಾಗಿ, ದೇವರ ಮಗನಾದ ಯೇಸು ಕ್ರಿಸ್ತನೊಂದಿಗೆ 1,44,000 ಮಂದಿ ಆಧ್ಯಾತ್ಮಿಕ ಇಸ್ರಾಯೇಲ್ಯರು ರಾಜರಾಗಿ ಆಳಲಿರುವ ದೇವರ ಉದ್ದೇಶವು ನೆರವೇರಲಿದೆ ಎಂಬರ್ಥದಲ್ಲಿ ಆ ಮಾತನ್ನು ಹೇಳಿದನು. ದೇವರ ಕ್ಲುಪ್ತಕಾಲದಲ್ಲಿ ಆ “ಇಸ್ರಾಯೇಲ್‌ ಜನವೆಲ್ಲಾ,” ಪೂರ್ಣ ಸಂಖ್ಯೆಯಲ್ಲಿ ರಕ್ಷಣೆಹೊಂದುವ ಸ್ಥಿತಿಯಲ್ಲಿರುವರು ಹೇಗಂದರೆ ಕಟ್ಟಕಡೆಗೆ ಮೆಸ್ಸೀಯನ ರಾಜ್ಯದಲ್ಲಿ ಅವರು ರಾಜರೂ ಯಾಜಕರೂ ಆಗಿ ಆಳುವರು.—ಎಫೆ. 2:8.

[ಪುಟ 28ರಲ್ಲಿರುವ ಚಿತ್ರಗಳು]

ಅಭಿಷಿಕ್ತರು “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ಬರುವರು