ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮದುವೆ ಸದಾ ‘ಮೂರು ಹುರಿಯ ಹಗ್ಗದಂತೆ’ ಇರಲಿ

ನಿಮ್ಮ ಮದುವೆ ಸದಾ ‘ಮೂರು ಹುರಿಯ ಹಗ್ಗದಂತೆ’ ಇರಲಿ

ನಿಮ್ಮ ಮದುವೆ ಸದಾ ‘ಮೂರು ಹುರಿಯ ಹಗ್ಗದಂತೆ’ ಇರಲಿ

“ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲವಷ್ಟೆ.”—ಪ್ರಸಂ. 4:12.

ಸಸ್ಯಗಳನ್ನೂ ಪ್ರಾಣಿಗಳನ್ನೂ ಸೃಷ್ಟಿಸಿದ ಬಳಿಕ ಯೆಹೋವ ದೇವರು ಪ್ರಥಮ ಮಾನವನಾದ ಆದಾಮನನ್ನು ಉಂಟುಮಾಡಿದನು. ಕಾಲಾನಂತರ ಆತನು ಆದಾಮನಿಗೆ ಗಾಢ ನಿದ್ರೆ ಬರಿಸಿ, ಅವನ ಪಕ್ಕೆಲುಬುಗಳಲ್ಲಿ ಒಂದನ್ನು ತೆಗೆದು ಅವನಿಗಾಗಿ ಒಂದು ಪರಿಪೂರ್ಣ ಸಹಕಾರಿಣಿಯನ್ನು ಮಾಡಿದನು. ಆಕೆಯನ್ನು ನೋಡಿದಾಕ್ಷಣ ಆದಾಮನು, “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ” ಎಂದು ಹೇಳಿದನು. (ಆದಿ. 1:27; 2:18, 21-23) ಈಕೆ ಆದಾಮನಿಗೆ ತಕ್ಕ ಸಂಗಾತಿಯೆಂದು ನಿರ್ಣಯಿಸುತ್ತಾ, ಯೆಹೋವನು ಈ ಪ್ರಥಮ ಮಾನವ ಜೋಡಿಯನ್ನು ವಿವಾಹಬಂಧದಲ್ಲಿ ಐಕ್ಯಗೊಳಿಸಿ, ಅವರನ್ನು ಹರಸಿದನು.—ಆದಿ. 1:28; 2:24.

2 ದುಃಖದ ಸಂಗತಿಯೇನೆಂದರೆ, ಇದಾದ ಸ್ವಲ್ಪ ಸಮಯದೊಳಗೆಯೇ ವಿವಾಹವೆಂಬ ದೈವಿಕ ಏರ್ಪಾಡಿನ ಮೇಲೆ ದಾಳಿ ನಡೆಯಿತು. ಹೇಗೆ? ಸೈತಾನನೆಂದು ಬಳಿಕ ಕುಖ್ಯಾತನಾದ ಒಬ್ಬ ದುಷ್ಟ ಆತ್ಮಜೀವಿಯು, ಆ ದಂಪತಿಗೆ ತಿನ್ನಲು ನಿಷೇಧಿಸಲಾಗಿದ್ದ ಮರದ ಫಲವನ್ನು ತಿನ್ನುವಂತೆ ಹವ್ವಳನ್ನು ಮೋಸಗೊಳಿಸಿದನು. ನಂತರ ಆದಾಮನು ಸಹ ಅವಿಧೇಯನಾದನು ಮತ್ತು ಹೀಗೆ ಅವರಿಬ್ಬರು ದೇವರ ನ್ಯಾಯಯುತ ಆಳ್ವಿಕೆ ಹಾಗೂ ಒಳ್ಳೇ ನಿರ್ದೇಶನದ ವಿರುದ್ಧ ದಂಗೆಯೆದ್ದರು. (ಆದಿ. 3:1-7) ಈ ಕುರಿತು ಯೆಹೋವನು ಅವರನ್ನು ಪ್ರಶ್ನಿಸಿದಾಗ, ಆದಾಮನು ತನ್ನ ಪತ್ನಿಯನ್ನು ದೂರುತ್ತಾ ಹೇಳಿದ್ದು: “ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು.” ಅವರ ವೈವಾಹಿಕ ಸಂಬಂಧವು ಆಗಲೇ ಹಳಸಲಾರಂಭಿಸಿತೆಂಬುದು ವ್ಯಕ್ತವಾಯಿತು.—ಆದಿ. 3:11-13.

3 ಅಂದಿನಿಂದ ಗತಿಸಿರುವ ಹಲವಾರು ಶತಮಾನಗಳಲ್ಲಿ ಸೈತಾನನು ವೈವಾಹಿಕ ಕಲಹವನ್ನು ಹೆಚ್ಚಿಸಲು ವೈವಿಧ್ಯಮಯ ಕುಟಿಲ ವಿಧಾನಗಳನ್ನು ಬಳಸಿದ್ದಾನೆ. ದೃಷ್ಟಾಂತಕ್ಕಾಗಿ, ವಿವಾಹದ ಕುರಿತ ಅಶಾಸ್ತ್ರೀಯ ನೋಟವನ್ನು ಪ್ರವರ್ಧಿಸಲು ಕೆಲವೊಮ್ಮೆ ಅವನು ಧಾರ್ಮಿಕ ಮುಖಂಡರನ್ನೇ ಬಳಸಿದ್ದಾನೆ. ಕೆಲವು ಯೆಹೂದಿ ಮುಖಂಡರು ದೇವರ ಮಟ್ಟಗಳು ಅಷ್ಟೇನೂ ಮಹತ್ತ್ವದ್ದಲ್ಲವೆಂಬ ಅಭಿಪ್ರಾಯ ಮೂಡಿಸಿದರು. ಊಟಕ್ಕೆ ಜಾಸ್ತಿ ಉಪ್ಪು ಹಾಕಿದಳು ಎಂಬಂಥ ಕ್ಷುಲ್ಲಕ ಕಾರಣಗಳಿಗೂ ಗಂಡನು ಹೆಂಡತಿಗೆ ವಿಚ್ಛೇದಕೊಡುವುದನ್ನು ಅವರು ಸಮ್ಮತಿಸುತ್ತಿದ್ದರು. ಆದರೆ ಯೇಸು ಹೇಳಿದ್ದು: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆ.”—ಮತ್ತಾ. 19:9.

4 ವೈವಾಹಿಕ ಬಂಧವನ್ನು ಮುರಿಯುವ ಪ್ರಯತ್ನದಲ್ಲಿ ಸೈತಾನನು ಈಗಲೂ ನಿರತನಾಗಿದ್ದಾನೆ. ಇದರಲ್ಲಿ ಅವನಿಗೆ ಅಪಾರ ಯಶಸ್ಸು ಸಿಗುತ್ತಿದೆಯೆಂಬುದನ್ನು ಸಲಿಂಗಕಾಮಿಗಳ ವಿವಾಹಗಳು, ಮದುವೆಯಾಗದೇ ಒಂದೇ ಸೂರಿನಡಿ ಜೀವಿಸುತ್ತಿರುವ ಜೋಡಿಗಳು ಮತ್ತು ಕ್ಷುಲ್ಲಕ ಕಾರಣಗಳಿಗೂ ಸುಲಭವಾಗಿ ವಿಚ್ಛೇದವನ್ನು ಪಡೆಯಬಹುದಾದ ಸೌಲಭ್ಯಗಳು ಸಾಬೀತುಪಡಿಸುತ್ತಿವೆ. (ಇಬ್ರಿಯ 13:4 ಓದಿ.) ಆದರೆ ಕ್ರೈಸ್ತರಾಗಿರುವ ನಾವು, ವಿವಾಹದ ಕುರಿತ ಚಾಲ್ತಿಯಲ್ಲಿರುವ ವಕ್ರ ನೋಟದಿಂದ ಪ್ರಭಾವಿತರಾಗದಂತೆ ಏನು ಮಾಡಸಾಧ್ಯವಿದೆ? ಒಂದು ಸಂತೋಷಭರಿತ, ಯಶಸ್ವಿ ವಿವಾಹದ ಕೆಲವೊಂದು ಗುಣಲಕ್ಷಣಗಳನ್ನು ಪರಿಗಣಿಸೋಣ.

ಯೆಹೋವನು ನಿಮ್ಮ ವಿವಾಹಬಂಧದಲ್ಲಿರಲಿ

5 ಒಂದು ವಿವಾಹವು ಸಫಲವಾಗಬೇಕಾದರೆ, ಯೆಹೋವನು ಆ ಬಂಧದ ಭಾಗವಾಗಿರಬೇಕು. ಆತನ ವಾಕ್ಯ ಹೇಳುವುದು: “ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲವಷ್ಟೆ.” (ಪ್ರಸಂ. 4:12) “ಮೂರು ಹುರಿಯ ಹಗ್ಗ” ಎಂಬುದು ಒಂದು ಸಾಂಕೇತಿಕ ಅಭಿವ್ಯಕ್ತಿ. ಈ ದೃಷ್ಟಾಂತವನ್ನು ವಿವಾಹಕ್ಕೆ ಅನ್ವಯಿಸುವಾಗ, ಗಂಡಹೆಂಡತಿ ಮೊದಲ ಎರಡು ಎಳೆಗಳಾಗಿದ್ದು, ಅವರು ಮೂರನೇ ಮುಖ್ಯ ಎಳೆಯಾದ ಯೆಹೋವ ದೇವರೊಂದಿಗೆ ಹೆಣೆದುಕೊಂಡಿರಬೇಕು. ದಂಪತಿಯು ದೇವರೊಂದಿಗೆ ಐಕ್ಯವಾಗಿರುವುದರಿಂದ ಸಮಸ್ಯೆಗಳನ್ನು ಎದುರಿಸಲು ಬೇಕಾದ ಆಧ್ಯಾತ್ಮಿಕ ಬಲ ಪಡೆಯುತ್ತಾರೆ. ಇದು ತಾನೇ, ವಿವಾಹಜೀವನದಲ್ಲಿ ಹೆಚ್ಚಿನ ಸಂತೋಷಕ್ಕೆ ಮುಖ್ಯ ಕಾರಣವಾಗಿದೆ.

6 ಒಂದು ದಂಪತಿ ತಮ್ಮ ಮದುವೆ ಆ ಮೂರು ಹುರಿಯ ಹಗ್ಗದಂತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಕೀರ್ತನೆಗಾರ ದಾವೀದನು ಹೀಗೆ ಹಾಡಿದನು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” (ಕೀರ್ತ. 40:8) ಅದೇ ರೀತಿಯಲ್ಲಿ ದೇವರ ಮೇಲಣ ನಮ್ಮ ಪ್ರೀತಿಯು ಸಹ ನಾವಾತನನ್ನು ಸಂಪೂರ್ಣ ಹೃದಯದಿಂದ ಸೇವಿಸುವಂತೆ ಪ್ರಚೋದಿಸುತ್ತದೆ. ಈ ಕಾರಣದಿಂದ ಗಂಡಹೆಂಡತಿ ಇಬ್ಬರೂ ಯೆಹೋವನೊಂದಿಗೆ ಅತ್ಯಾಪ್ತ ಸಂಬಂಧವನ್ನು ಬೆಳೆಸಿಕೊಂಡು, ಆತನ ಚಿತ್ತವನ್ನು ಮಾಡುವುದರಲ್ಲಿ ಸಂತೋಷ ಕಂಡುಕೊಳ್ಳಬೇಕು. ವಿವಾಹಿತರು, ತಮ್ಮ ಸಂಗಾತಿ ದೇವರ ಮೇಲಿನ ಪ್ರೀತಿಯನ್ನು ಬಲಪಡಿಸಿಕೊಳ್ಳುವಂತೆ ಪರಸ್ಪರ ಸಹಾಯಮಾಡಬೇಕು.—ಜ್ಞಾನೋ. 27:17.

7 ಧರ್ಮೋಪದೇಶ ಇಲ್ಲವೇ ದೇವರ ನಿಯಮಗಳು ನಿಜವಾಗಿಯೂ ನಮ್ಮ ಅಂತರಂಗದಲ್ಲಿದ್ದರೆ ನಾವು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯಂಥ ಗುಣಗಳನ್ನು ತೋರಿಸುವೆವು ಮತ್ತು ಇವು ವಿವಾಹ ಬಂಧವನ್ನು ಬಲಪಡಿಸುವವು. (1 ಕೊರಿಂ. 13:13) 50 ವರ್ಷಗಳ ವೈವಾಹಿಕ ಜೀವನ ನಡೆಸಿರುವ ಸ್ಯಾಂಡ್ರ ಎಂಬ ಕ್ರೈಸ್ತ ಸ್ತ್ರೀಯೊಬ್ಬಳು ಹೇಳುವುದು: “ನನ್ನ ಗಂಡನಲ್ಲಿ ನಾನು ಬಹುವಾಗಿ ಮೆಚ್ಚುವಂಥ ವಿಷಯಗಳು, ಅವರು ನನಗೆ ಕೊಡುವ ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಸಲಹೆ ಮತ್ತು ಯೆಹೋವನ ಮೇಲೆ ಅವರಿಗಿರುವ ಪ್ರೀತಿಯೇ. ಈ ಪ್ರೀತಿಯು, ಅವರಿಗೆ ನನ್ನ ಮೇಲಿರುವ ಪ್ರೀತಿಗಿಂತಲೂ ಹೆಚ್ಚು ಬಲವಾಗಿದೆ.” ಗಂಡಂದಿರೇ, ನಿಮ್ಮ ಬಗ್ಗೆಯೂ ಹೀಗೆ ಹೇಳಲಾದೀತೆ?

8 ದಂಪತಿಯಾಗಿ ನೀವು ಆಧ್ಯಾತ್ಮಿಕ ವಿಷಯಗಳನ್ನು ಮತ್ತು ರಾಜ್ಯಾಭಿರುಚಿಗಳನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿಡುತ್ತೀರೋ? ಅಲ್ಲದೆ, ನಿಮ್ಮ ಸಂಗಾತಿ ವಿವಾಹದಲ್ಲಿ ಮಾತ್ರವಲ್ಲ ಯೆಹೋವನ ಸೇವೆಯಲ್ಲೂ ನಿಮಗೆ ಸಂಗಾತಿಯೆಂದು ನಿಜವಾಗಿ ಪರಿಗಣಿಸುತ್ತೀರೋ? (ಆದಿ. 2:24) ಬುದ್ಧಿವಂತ ರಾಜ ಸೊಲೊಮೋನನು ಬರೆದದ್ದು: “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ.” (ಪ್ರಸಂ. 4:9) ಹೌದು, ದೇವರ ಆಶೀರ್ವಾದವಿರುವ ಪ್ರೀತಿತುಂಬಿದ ಹಾಗೂ ಬಾಳುವ ವಿವಾಹಬಂಧವೆಂಬ “ಒಳ್ಳೆಯ ಲಾಭ” ಪಡೆಯಲು ಗಂಡಹೆಂಡತಿ ಪ್ರಯಾಸಪಡಬೇಕು.

9 ಗಂಡಹೆಂಡತಿ ಇಬ್ಬರೂ ದೇವರೇನನ್ನು ಅವಶ್ಯಪಡಿಸುತ್ತಾನೋ ಅದನ್ನು ಪೂರೈಸಲು ಪಡುವ ಶ್ರಮದಿಂದ ಅವರ ವಿವಾಹಬಂಧದಲ್ಲಿ ದೇವರಿದ್ದಾನೆ ಎಂಬುದು ತಿಳಿದುಬರುತ್ತದೆ. ಉದಾಹರಣೆಗೆ, ಕುಟುಂಬದ ಭೌತಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಪ್ರಮುಖ ಕರ್ತವ್ಯ ಗಂಡಂದಿರಿಗಿದೆ. (1 ತಿಮೊ. 5:8) ಹೆಂಡತಿಯ ಭಾವನಾತ್ಮಕ ಅಗತ್ಯಗಳನ್ನು ಪೂರೈಸುವಂತೆಯೂ ಅವರನ್ನು ಪ್ರೋತ್ಸಾಹಿಸಲಾಗಿದೆ. ಕೊಲೊಸ್ಸೆ 3:19 ಹೀಗೆ ತಿಳಿಸುತ್ತದೆ: “ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ.” ಇಲ್ಲಿ ‘ನಿಷ್ಠುರವಾಗಿರುವುದು’ ಎಂದರೆ, “ಕಠೋರ ಮಾತುಗಳನ್ನಾಡುವುದು ಇಲ್ಲವೇ ಹೊಡೆಯುವುದು, ಅವರಿಗೆ ಸಿಗಬೇಕಾದ ಪ್ರೀತಿ, ಆರೈಕೆ, ಪೋಷಣೆ, ಸಂರಕ್ಷಣೆ ಮತ್ತು ನೆರವನ್ನು ಕೊಡದೇ ಇರುವುದು” ಎಂದು ಒಬ್ಬ ಬೈಬಲ್‌ ವಿದ್ವಾಂಸನು ವಿವರಿಸುತ್ತಾನೆ. ಒಂದು ಕ್ರೈಸ್ತ ಕುಟುಂಬದಲ್ಲಿ ಈ ರೀತಿಯ ವರ್ತನೆಯು ಸೂಕ್ತವಲ್ಲ ಎಂಬುದು ಸುಸ್ಪಷ್ಟ. ಗಂಡನು ತನ್ನ ತಲೆತನವನ್ನು ಪ್ರೀತಿಯಿಂದ ನಿರ್ವಹಿಸುವಲ್ಲಿ ಹೆಂಡತಿ ಅವನಿಗೆ ಮನಸಾರೆ ಅಧೀನಳಾಗುವಳು.

10 ಯೆಹೋವನು ತಮ್ಮ ವಿವಾಹಬಂಧದಲ್ಲಿ ಇರಬೇಕೆಂದು ಬಯಸುವ ಕ್ರೈಸ್ತ ಹೆಂಡತಿಯರು ಸಹ ದೇವರೇನನ್ನು ಅವಶ್ಯಪಡಿಸುತ್ತಾನೋ ಅದನ್ನು ಪೂರೈಸಬೇಕು. ಅಪೊಸ್ತಲ ಪೌಲನು ಬರೆದದ್ದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” (ಎಫೆ. 5:22, 23) ದೇವರಿಂದ ಸ್ವತಂತ್ರರಾದರೆ ನಿತ್ಯ ಸಂತೋಷ ಸಿಗುವುದೆಂಬ ಸುಳ್ಳನ್ನು ಹೇಳಿ, ಸೈತಾನನು ಹವ್ವಳನ್ನು ವಂಚಿಸಿದನು. ಇಂದು ಸಹ ವಿವಾಹಗಳಲ್ಲಿ ಸ್ವತಂತ್ರಭಾವನೆಯು ತಲೆದೋರುತ್ತಿದೆ. ಆದರೆ ದೇವಭಕ್ತ ಸ್ತ್ರೀಯರಿಗೆ, ತಮ್ಮ ಪ್ರೀತಿಯ ಶಿರಸ್ಸಿಗೆ ಅಧೀನತೆ ತೋರಿಸುವುದು ಒಂದು ಅಪ್ರಿಯ ಸಂಗತಿಯಾಗಿರುವುದಿಲ್ಲ. ಗಂಡನಿಗೆ “ಸಹಕಾರಿ” ಆಗಿರುವಂತೆ ಯೆಹೋವನು ಹವ್ವಳನ್ನು ನೇಮಿಸಿದ್ದನೆಂಬುದನ್ನು ಅವರು ಮನಸ್ಸಿನಲ್ಲಿಡುತ್ತಾರೆ. ಇದರಿಂದ, ಹೆಂಡತಿಯ ಸ್ಥಾನ ದೇವರ ದೃಷ್ಟಿಯಲ್ಲಿ ಸನ್ಮಾನ್ಯವಾದದ್ದು ಎಂಬುದು ಸುವ್ಯಕ್ತ. (ಆದಿ. 2:18) ಈ ಏರ್ಪಾಡಿನೊಂದಿಗೆ ಸಂತೋಷದಿಂದ ಸಹಕರಿಸುವ ಕ್ರೈಸ್ತ ಹೆಂಡತಿಯು ಗಂಡನಿಗೆ ನಿಜವಾಗಿಯೂ “ಕಿರೀಟ”ವಾಗಿದ್ದಾಳೆ.—ಜ್ಞಾನೋ. 12:4.

11 ದೇವರನ್ನು ತಮ್ಮ ವಿವಾಹಬಂಧದಲ್ಲಿರಿಸಲು ಒಂದು ದಂಪತಿಗೆ ನೆರವಾಗುವ ಇನ್ನೊಂದು ವಿಷಯ, ದೇವರ ವಾಕ್ಯವನ್ನು ಜೊತೆಯಾಗಿ ಅಧ್ಯಯನಮಾಡುವುದು ಆಗಿದೆ. 55 ವರ್ಷಗಳ ಸುಖೀ ದಾಂಪತ್ಯಜೀವನ ನಡೆಸಿರುವ ಜೆರಲ್ಡ್‌ ಎಂಬವರು ಹೇಳುವುದು: “ವಿವಾಹದ ಯಶಸ್ಸಿಗೆ ನಡೆಸುವ ಅತಿ ಮುಖ್ಯ ಸೂತ್ರ, ಬೈಬಲನ್ನು ಜೊತೆಯಾಗಿ ಓದುವುದು ಮತ್ತು ಅಧ್ಯಯನಮಾಡುವುದು ಆಗಿದೆ.” ಅವನು ಕೂಡಿಸಿ ಹೇಳಿದ್ದು: “ಬೇರೆಲ್ಲ ಕೆಲಸಗಳಲ್ಲದೆ ಆಧ್ಯಾತ್ಮಿಕ ವಿಷಯಗಳನ್ನೂ ಜೊತೆಗೂಡಿ ಮಾಡುವುದರಿಂದ ವಿವಾಹ ಸಂಗಾತಿಗಳು ಪರಸ್ಪರ ಹಾಗೂ ಯೆಹೋವನಿಗೆ ತುಂಬ ಆಪ್ತರಾಗುತ್ತಾರೆ.” ಬೈಬಲನ್ನು ಒಟ್ಟಿಗೆ ಅಧ್ಯಯನ ಮಾಡುವುದರಿಂದ ಕುಟುಂಬ ಸದಸ್ಯರ ಮನಸ್ಸಿನಲ್ಲಿ ಯೆಹೋವನ ಮಟ್ಟಗಳು ಸ್ಪಷ್ಟವಾಗಿರುತ್ತವೆ, ಅವರ ಆಧ್ಯಾತ್ಮಿಕತೆ ಹೆಚ್ಚಾಗುತ್ತದೆ ಮತ್ತು ಅವರು ಇನ್ನಷ್ಟು ಪ್ರಗತಿ ಮಾಡಲು ಸಾಧ್ಯವಾಗುತ್ತದೆ.

12 ಸುಖೀ ದಂಪತಿಗಳು ಒಟ್ಟಿಗೆ ಪ್ರಾರ್ಥನೆಯನ್ನೂ ಮಾಡುತ್ತಾರೆ. ನಿರ್ದಿಷ್ಟವಾಗಿ ತಮ್ಮ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ವಿನಂತಿಗಳನ್ನು ಮಾಡುತ್ತಾ ಗಂಡನು ಯೆಹೋವನ ‘ಮುಂದೆ ತನ್ನ ಹೃದಯವನ್ನು ಬಿಚ್ಚುವಾಗ’ ವಿವಾಹಬಂಧವು ನಿಶ್ಚಯವಾಗಿ ಬಲಗೊಳ್ಳುತ್ತದೆ. (ಕೀರ್ತ. 62:8) ಉದಾಹರಣೆಗೆ, ನೀವಿಬ್ಬರೂ ಜೊತೆಯಾಗಿ ಸರ್ವಶಕ್ತನ ಮಾರ್ಗದರ್ಶನವನ್ನು ಕೋರಿದ ಬಳಿಕ, ನಿಮ್ಮ ಮಧ್ಯೆ ಇರುವ ಮನಸ್ತಾಪವನ್ನು ಬಗೆಹರಿಸುವುದು ನಿಜವಾಗಿಯೂ ಹೆಚ್ಚು ಸುಲಭವಾಗುತ್ತದೆ. (ಮತ್ತಾ. 6:14, 15) ನಿಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ನೀವಿಬ್ಬರೂ ಪರಸ್ಪರರಿಗೆ ಸಹಾಯಮಾಡುವ ದೃಢಸಂಕಲ್ಪಮಾಡಿ, ‘ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸುವುದು’ ಸೂಕ್ತವಲ್ಲವೇ? (ಕೊಲೊ. 3:13) ಪ್ರಾರ್ಥನೆಯು, ನಾವು ದೇವರ ಮೇಲೆ ಆತುಕೊಂಡಿರುವುದನ್ನು ತೋರಿಸುತ್ತದೆಂಬುದನ್ನು ಮನಸ್ಸಿನಲ್ಲಿಡಿ. ರಾಜ ದಾವೀದನು ಹೇಳಿದ್ದು: “ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ.” (ಕೀರ್ತ. 145:15) ನಾವು ಪ್ರಾರ್ಥನೆಯ ಮೂಲಕ ದೇವರೆಡೆಗೆ ನೋಡುವಾಗ ನಮ್ಮ ಚಿಂತೆಗಳು ಕಡಿಮೆಯಾಗುತ್ತವೆ. ಏಕೆಂದರೆ ಆತನು ‘ನಮಗೋಸ್ಕರ ಚಿಂತಿಸುತ್ತಾನೆ’ ಎಂದು ನಮಗೆ ತಿಳಿದಿದೆ.—1 ಪೇತ್ರ 5:7.

13 ಯೆಹೋವನನ್ನು ನಿಮ್ಮ ವಿವಾಹಬಂಧದಲ್ಲಿರಿಸುವ ಇನ್ನೊಂದು ಮುಖ್ಯ ವಿಧಾನವು, ಸಭಾ ಕೂಟಗಳನ್ನು ಹಾಜರಾಗುವುದು ಮತ್ತು ಜೊತೆಯಾಗಿ ಶುಶ್ರೂಷೆಯಲ್ಲಿ ಕೆಲಸಮಾಡುವುದೇ ಆಗಿದೆ. ಕುಟುಂಬಗಳನ್ನು ಒಡೆದುಹಾಕಲು ಸೈತಾನನು ಬಳಸುವ “ತಂತ್ರೋಪಾಯಗಳ” ವಿರುದ್ಧ ಹೇಗೆ ಹೋರಾಡುವುದು ಎಂಬುದನ್ನು ದಂಪತಿಗಳು ಸಭಾ ಕೂಟಗಳಲ್ಲಿ ಕಲಿಯುತ್ತಾರೆ. (ಎಫೆ. 6:11) ಕ್ರಮವಾಗಿ ಶುಶ್ರೂಷೆಯಲ್ಲಿ ಒಟ್ಟಿಗೆ ಕೆಲಸಮಾಡುವ ಗಂಡಹೆಂಡತಿ, ‘ಸ್ಥಿರಚಿತ್ತರೂ ನಿಶ್ಚಲರೂ’ ಆಗುವುದು ಹೇಗೆಂಬುದನ್ನು ಕಲಿಯುತ್ತಾರೆ.—1 ಕೊರಿಂ. 15:58.

ಸಮಸ್ಯೆಗಳು ಉದ್ಭವಿಸುವಾಗ

14 ಮೇಲೆ ಕೊಡಲಾಗಿರುವ ಸಲಹೆಸೂಚನೆಗಳು ನಿಮಗೆ ಹೊಸದಾಗಿರಲಿಕ್ಕಿಲ್ಲ. ಹಾಗಿದ್ದರೂ, ನಿಮ್ಮ ಸಂಗಾತಿಯೊಡನೆ ಕೂತುಕೊಂಡು ಅವುಗಳ ಕುರಿತು ಮನಬಿಚ್ಚಿ ಮಾತಾಡಬಾರದೇಕೆ? ಆ ಸಲಹೆಸೂಚನೆಗಳನ್ನು ಇನ್ನೂ ಹೆಚ್ಚಾಗಿ ಪಾಲಿಸಲಿಕ್ಕಾಗಿ ನೀವೇನಾದರೂ ಹೊಂದಾಣಿಕೆಗಳನ್ನು ಮಾಡಬೇಕೋ ಎಂಬುದನ್ನು ಪರಿಶೀಲಿಸಿ. ಯಾರ ವಿವಾಹಬಂಧದಲ್ಲಿ ದೇವರಿದ್ದಾನೋ ಅವರಿಗೂ “ಶರೀರಸಂಬಂಧವಾಗಿ ಕಷ್ಟ” ಇರುವುದೆಂದು ಬೈಬಲ್‌ ಒಪ್ಪಿಕೊಳ್ಳುತ್ತದೆ. (1 ಕೊರಿಂ. 7:28) ಮಾನವ ಅಪರಿಪೂರ್ಣತೆ, ಅಧರ್ಮ ತುಂಬಿರುವ ಈ ಲೋಕದ ಕೆಟ್ಟ ಪ್ರಭಾವ ಮತ್ತು ಪಿಶಾಚನ ಪಾಶಗಳಿಂದಾಗಿ ದೇವರ ನಂಬಿಗಸ್ತ ಸೇವಕರ ವಿವಾಹ ಜೀವನವೂ ತುಂಬ ಒತ್ತಡಕ್ಕೊಳಗಾಗಿದೆ. (2 ಕೊರಿಂ. 2:11) ಆದರೆ ಇಂಥ ಒತ್ತಡವನ್ನು ನಿಭಾಯಿಸಲು ಯೆಹೋವನು ನಮ್ಮನ್ನು ಶಕ್ತಗೊಳಿಸುತ್ತಾನೆ. ಹೌದು, ಅದನ್ನು ಖಂಡಿತ ನಿಭಾಯಿಸಸಾಧ್ಯವಿದೆ. ನಂಬಿಗಸ್ತ ಪುರುಷನಾದ ಯೋಬನು ತನ್ನ ಜಾನುವಾರುಗಳನ್ನು, ಆಳುಗಳನ್ನು ಮತ್ತು ಮಕ್ಕಳನ್ನು ಕಳೆದುಕೊಂಡನು. ಆದರೂ, “ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ” ಎಂದು ಬೈಬಲ್‌ ಹೇಳುತ್ತದೆ.—ಯೋಬ 1:13-22.

15 ಯೋಬನ ಹೆಂಡತಿಯಾದರೋ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ” ಎಂದು ಅವನಿಗೆ ಹೇಳಿದಳು. (ಯೋಬ 2:9) ದುರಂತಗಳು ಇಲ್ಲವೇ ಇತರ ಕಷ್ಟಕರ ಪರಿಸ್ಥಿತಿಗಳಿಂದ ಉಂಟಾಗುವ ಭಾವನಾತ್ಮಕ ಏರುಪೇರು, ಒಬ್ಬ ವ್ಯಕ್ತಿ ಯೋಚಿಸದೇ ವರ್ತಿಸುವಂತೆ ಮಾಡಬಲ್ಲದು. ‘ಬಲಾತ್ಕಾರವು ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ’ ಎಂದು ಬುದ್ಧಿವಂತ ಸೊಲೊಮೋನನು ಹೇಳಿದನು. (ಪ್ರಸಂ. 7:7, NIBV) ಇಂಥ ಕಷ್ಟಗಳು ಇಲ್ಲವೇ “ಬಲಾತ್ಕಾರ”ದಿಂದಾಗಿ ನಿಮ್ಮ ಸಂಗಾತಿ ಸಿಟ್ಟಿನಿಂದ ಬಿರುಸಾಗಿ ಮಾತಾಡಿದರೆ, ಶಾಂತರಾಗಿರಲು ಪ್ರಯತ್ನಿಸಿ. ನೀವು ಸಹ ಹಾಗೆಯೇ ಪ್ರತಿಕ್ರಿಯಿಸಿದರೆ, ನಿಮ್ಮಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ಹೇಳುವ ಯಾವುದೋ ಮಾತಿನಿಂದ ಸನ್ನಿವೇಶ ಇನ್ನಷ್ಟು ಬಿಗಡಾಯಿಸಬಹುದು. (ಕೀರ್ತನೆ 37:8 ಓದಿ.) ಆದುದರಿಂದ ಹತಾಶೆ ಇಲ್ಲವೇ ನಿರುತ್ತೇಜನದಿಂದಾಗಿ ಹೊರಡುವ ಯಾವುದೇ ‘ಆತುರದ ಮಾತನ್ನು’ ಅಲಕ್ಷಿಸಿಬಿಡಿ.—ಯೋಬ 6:3.

16 ವಿವಾಹ ಸಂಗಾತಿಗಳು ವಾಸ್ತವಿಕ ನಿರೀಕ್ಷಣೆಗಳನ್ನಿಡಬೇಕು. ನಿಮ್ಮ ಸಂಗಾತಿಯ ನಿರ್ದಿಷ್ಟ ವೈಲಕ್ಷಣಗಳನ್ನು ಗಮನಿಸಿ, ‘ಅವನನ್ನು (ಅಥವಾ ಅವಳನ್ನು) ಬದಲಾಯಿಸಬಲ್ಲೆ’ ಎಂದು ನೀವು ನೆನಸಬಹುದು. ಪ್ರೀತಿ ಹಾಗೂ ತಾಳ್ಮೆಯಿಂದ ನೀವು ನಿಮ್ಮ ಸಂಗಾತಿಗೆ ಕ್ರಮೇಣ ಬದಲಾಗುವಂತೆ ನೆರವಾಗಬಹುದು. ಆದರೆ ಯೇಸು, ಇನ್ನೊಬ್ಬನ ಚಿಕ್ಕಪುಟ್ಟ ದೋಷಗಳನ್ನು ಎತ್ತಿಹಿಡಿಯುವವನನ್ನು, ತನ್ನ ಸಹೋದರನ ಕಣ್ಣಿನಲ್ಲಿ “ರವೆಯನ್ನು” ಪತ್ತೆಹಚ್ಚುವ ಆದರೆ ಸ್ವಂತ ಕಣ್ಣಿನಲ್ಲಿರುವ “ತೊಲೆಯನ್ನು” ಅಲಕ್ಷಿಸುವವನಿಗೆ ಹೋಲಿಸಿದ್ದನ್ನು ಮರೆಯಬೇಡಿ. ಆತನು ನಮ್ಮನ್ನು ಉತ್ತೇಜಿಸಿದ್ದು: “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ.” (ಮತ್ತಾಯ 7:1-5 ಓದಿ.) ಇದರರ್ಥ, ಗಂಭೀರ ದೋಷಗಳ ಕುರಿತೂ ಕಣ್ಣುಮುಚ್ಚಿಕೊಂಡಿರಬೇಕು ಎಂದಲ್ಲ. ಮದುವೆಯಾಗಿ ಸುಮಾರು 40 ವರ್ಷಗಳಾಗಿರುವ ರಾಬರ್ಟ್‌ ಎಂಬವರು ಹೇಳಿದ್ದು: “ಇಬ್ಬರೂ ಮುಚ್ಚುಮರೆಯಿಲ್ಲದೆ ಮಾತಾಡಿ, ಸಂಗಾತಿಯು ಗಮನಿಸಿ ಹೇಳಿದ ಸಮಂಜಸ ವಿಷಯಗಳನ್ನು ಸ್ವೀಕರಿಸಲು ಸಿದ್ಧರಾಗಿರಲಿಕ್ಕಾಗಿ, ವಿವಾಹ ಸಂಗಾತಿಗಳು ತಮ್ಮ ಮನೋಭಾವವನ್ನು ಬದಲಾಯಿಸಬೇಕಾದೀತು.” ಆದುದರಿಂದ ಸಮತೋಲನದಿಂದಿರ್ರಿ. ನಿಮ್ಮ ಸಂಗಾತಿಯಲ್ಲಿ ಇರಬೇಕೆಂದು ನೀವು ಅಪೇಕ್ಷಿಸುವ ಗುಣಗಳು ಇಲ್ಲವೆಂದು ಹಲುಬುವ ಬದಲು, ಅವನಲ್ಲಿ ಇಲ್ಲವೇ ಅವಳಲ್ಲಿ ಈಗ ಇರುವ ಉತ್ತಮ ಗುಣಗಳನ್ನು ಗಣ್ಯಮಾಡಿ, ಸಂತೋಷಪಡಿ.—ಪ್ರಸಂ. 9:9.

17 ಬದುಕಿನಲ್ಲಿ ಪರಿಸ್ಥಿತಿಗಳು ಬದಲಾಗುವಾಗ ಪರೀಕ್ಷೆಗಳು ಬರಬಲ್ಲವು. ಮಕ್ಕಳಾಗುವಾಗ ದಂಪತಿಗೆ ಸವಾಲುಗಳನ್ನು ಎದುರಿಸಲಿಕ್ಕಿರುವುದು. ಸಂಗಾತಿ ಇಲ್ಲವೇ ಮಕ್ಕಳು ಗಂಭೀರವಾಗಿ ಅಸ್ವಸ್ಥರಾಗಬಹುದು. ವೃದ್ಧ ಹೆತ್ತವರಿಗೆ ವಿಶೇಷ ಆರೈಕೆ ನೀಡಬೇಕಾದೀತು. ಮಕ್ಕಳು ಬೆಳೆದು ದೊಡ್ಡವರಾಗಿ ತಮ್ಮ ತಮ್ಮ ಹಾದಿ ಹಿಡಿದು ಮನೆಯಿಂದ ದೂರ ಹೋಗಿರಬಹುದು. ದೇವಪ್ರಭುತ್ವಾತ್ಮಕ ಸುಯೋಗಗಳು ಹಾಗೂ ಜವಾಬ್ದಾರಿಗಳಿಂದಾಗಿ ಇತರ ಬದಲಾವಣೆಗಳಾಗಬಹುದು. ಇವೆಲ್ಲವೂ, ವಿವಾಹಜೀವನದಲ್ಲಿ ಒಂದಲ್ಲ ಒಂದು ವಿಧದ ಒತ್ತಡ ಹಾಗೂ ವ್ಯಾಕುಲತೆಗೆ ಕಾರಣವಾಗಬಹುದು.

18 ವಿವಾಹಜೀವನದ ಈ ಎಲ್ಲ ಒತ್ತಡಗಳಿಂದ ನೀವು ಮುಳುಗಿಹೋಗುತ್ತಿದ್ದೀರಿ ಎಂದು ನಿಮಗನಿಸುವಲ್ಲಿ ಏನು ಮಾಡಬಲ್ಲಿರಿ? (ಜ್ಞಾನೋ. 24:10) ಬಿಟ್ಟುಕೊಡಬೇಡಿ! ದೇವರ ಸೇವಕನೊಬ್ಬನು ಶುದ್ಧಾರಾಧನೆಯನ್ನು ಬಿಡಬೇಕೆಂಬುದೇ ಸೈತಾನನ ಕಡುಬಯಕೆ. ಅದರಲ್ಲೂ, ಇಬ್ಬರು ಅಂದರೆ ಒಂದು ದಂಪತಿಯೇ ಹಾಗೆ ಮಾಡಿದರಂತೂ ಅವನು ಅತ್ಯಾನಂದಪಡುವನು. ಆದುದರಿಂದ, ನಿಮ್ಮ ಮದುವೆ ಸದಾ ಮೂರು ಹುರಿಯ ಹಗ್ಗದಂತೆ ಇರುವಂತೆ ಕೈಲಾದದ್ದೆಲ್ಲವನ್ನೂ ಮಾಡಿ. ತೀವ್ರ ಕಷ್ಟಗಳಿದ್ದರೂ ನಂಬಿಗಸ್ತರಾಗಿ ಉಳಿದವರ ಕುರಿತ ಅನೇಕ ವೃತ್ತಾಂತಗಳು ಬೈಬಲ್‌ನಲ್ಲಿವೆ. ಉದಾಹರಣೆಗೆ ಒಂದು ಸಂದರ್ಭದಲ್ಲಿ ದಾವೀದನು ಯೆಹೋವನ ಮುಂದೆ ತನ್ನ ಹೃದಯ ಬಿಚ್ಚಿ ಹೇಳಿದ್ದು: “ದೇವರೇ, ಕರುಣಿಸು; ನರರು ನನ್ನನ್ನು . . . ಬಾಧಿಸುತ್ತಾರೆ.” (ಕೀರ್ತ. 56:1) ನಿಮಗೆಂದಾದರೂ ಹೀಗೆ ಅನಿಸಿದೆಯೋ? ಈ ರೀತಿಯ ಒತ್ತಡವು ನಿಮಗೆ ಸಂಬಂಧವೇ ಇಲ್ಲದವರಿಂದ ಬರುತ್ತಿರಲಿ ಇಲ್ಲವೇ ನಿಮಗೆ ತುಂಬ ಆಪ್ತರಾದವರಿಂದಲೇ ಬರಲಿ ಇದನ್ನಂತೂ ನೆನಪಿಡಿ: ದಾವೀದನಿಗೆ ತಾಳಿಕೊಳ್ಳಲು ಶಕ್ತಿ ಸಿಕ್ಕಿತು, ನಿಮಗೂ ಸಿಗಬಲ್ಲದು. ಅವನಂದದ್ದು: “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.”—ಕೀರ್ತ. 34:4.

ಹೆಚ್ಚಿನ ಆಶೀರ್ವಾದಗಳು

19 ಈ ಅಂತ್ಯಕಾಲದಲ್ಲಿ ವಿವಾಹ ಸಂಗಾತಿಗಳು “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ” ಇರುವ ಅಗತ್ಯವಿದೆ. (1 ಥೆಸ. 5:11) ನಮ್ಮ ಸ್ವಾರ್ಥಕ್ಕಾಗಿಯೇ ನಾವು ಯೆಹೋವನಿಗೆ ನಿಷ್ಠೆ ತೋರಿಸುತ್ತೇವೆಂಬುದು ಸೈತಾನನ ವಾದವೆಂಬುದನ್ನು ಮರೆಯದಿರ್ರಿ. ದೇವರೆಡೆಗಿನ ನಮ್ಮ ಸಮಗ್ರತೆಯನ್ನು ಮುರಿಯಲು ಯಾವುದೇ ಅಸ್ತ್ರ ಬಳಸಲು ಸಿದ್ಧನಿರುವ ಸೈತಾನನು ನಮ್ಮ ವಿವಾಹವನ್ನು ಮುರಿಯಲೂ ಹೇಸನು. ಸೈತಾನನ ಆಕ್ರಮಣಗಳನ್ನು ಪ್ರತಿರೋಧಿಸಲು, ನಾವು ಯೆಹೋವನ ಮೇಲೆ ಪೂರ್ಣ ಭರವಸೆಯನ್ನಿಡಬೇಕು. (ಜ್ಞಾನೋ. 3:5, 6) ಪೌಲನು ಬರೆದದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿ. 4:13.

20 ದೇವರನ್ನು ವಿವಾಹಬಂಧದಲ್ಲಿಡುವುದರಿಂದ ಅನೇಕ ಆಶೀರ್ವಾದಗಳು ಫಲಿಸುತ್ತವೆ. ಇದು 51 ವರ್ಷಗಳಿಂದ ದಾಂಪತ್ಯ ನಡೆಸಿರುವ ಜೋಯೆಲ್‌ ಮತ್ತು ಆತನ ಪತ್ನಿಯ ವಿಷಯದಲ್ಲಿ ಸತ್ಯವಾಗಿದೆ. ಆತನು ಹೇಳುವುದು: “ಈಕೆಯನ್ನು ನನಗೆ ಹೆಂಡತಿಯಾಗಿ ಕೊಟ್ಟದ್ದಕ್ಕಾಗಿ ಮತ್ತು ನಮ್ಮ ಸುಖಮಯ ಸಾಂಗತ್ಯಕ್ಕಾಗಿ ನಾನು ಯಾವಾಗಲೂ ಯೆಹೋವನಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಆಕೆ ನನಗೆ ಉತ್ತಮ ಸಂಗಾತಿಯಾಗಿದ್ದಾಳೆ.” ಅವರ ಸುಖೀ ದಾಂಪತ್ಯದ ಗುಟ್ಟೇನು? “ನಾವು ಯಾವಾಗಲೂ ಪರಸ್ಪರರಿಗೆ ದಯೆ, ತಾಳ್ಮೆ ಮತ್ತು ಪ್ರೀತಿ ತೋರಿಸಲು ಪ್ರಯತ್ನಿಸಿದ್ದೇವೆ.” ಈ ವಿಷಯಗಳ ವ್ಯವಸ್ಥೆಯಲ್ಲಿ ನಮ್ಮಲ್ಲಿ ಯಾರೂ ಈ ಗುಣಗಳನ್ನು ಪರಿಪೂರ್ಣವಾಗಿ ತೋರಿಸಲಿಕ್ಕಾಗದಿದ್ದರೂ, ಬೈಬಲ್‌ ಮಟ್ಟಗಳನ್ನು ಅನ್ವಯಿಸಿಕೊಳ್ಳಲು ಮತ್ತು ಯೆಹೋವನನ್ನು ನಮ್ಮ ವಿವಾಹಬಂಧದಲ್ಲಿಡಲು ಶ್ರಮಿಸೋಣ. ಹಾಗೆ ಮಾಡುವಲ್ಲಿ, ನಮ್ಮ ಮದುವೆ ‘ಕಿತ್ತುಹೋಗದ ಮೂರು ಹುರಿಯ ಹಗ್ಗದಂತೆ’ ಇರುವುದು.—ಪ್ರಸಂ. 4:12.

ನಿಮಗೆ ನೆನಪಿದೆಯೋ?

• ಯೆಹೋವನನ್ನು ವಿವಾಹಬಂಧದಲ್ಲಿಡುವುದರ ಅರ್ಥವೇನು?

• ಕಷ್ಟಗಳೇಳುವಾಗ ವಿವಾಹ ಸಂಗಾತಿಗಳು ಏನು ಮಾಡಬೇಕು?

• ದೇವರು ವಿವಾಹಬಂಧದಲ್ಲಿದ್ದಾನೆಂದು ಹೇಗೆ ತಿಳಿದುಕೊಳ್ಳಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1. ಪ್ರಥಮ ಮಾನವ ಜೋಡಿಗೆ ಮದುವೆಮಾಡಿಸಿದವನು ಯಾರು?

2. ಸೈತಾನನು ಆದಾಮಹವ್ವರ ಸಂಬಂಧಕ್ಕೆ ಹುಳಿ ಹಿಂಡಿದ್ದು ಹೇಗೆ?

3. ಕೆಲವು ಯೆಹೂದ್ಯರು ಯಾವ ತಪ್ಪಾದ ನೋಟವನ್ನು ಬೆಳೆಸಿಕೊಂಡರು?

4. ವಿವಾಹದ ಏರ್ಪಾಡು ಇಂದು ಯಾವ ಆಕ್ರಮಣಕ್ಕೊಳಗಾಗಿದೆ?

5. ವಿವಾಹದ ವಿಷಯದಲ್ಲಿ “ಮೂರು ಹುರಿಯ ಹಗ್ಗ” ಎಂಬ ಅಭಿವ್ಯಕ್ತಿಯ ಅರ್ಥವೇನು?

6, 7. (ಎ) ತಮ್ಮ ವಿವಾಹಬಂಧದಲ್ಲಿ ದೇವರಿದ್ದಾನೆ ಎಂಬುದನ್ನು ಕ್ರೈಸ್ತರು ಹೇಗೆ ಖಚಿತಪಡಿಸಿಕೊಳ್ಳಬಲ್ಲರು? (ಬಿ) ಒಬ್ಬ ಸಹೋದರಿಯು ತನ್ನ ಗಂಡನಲ್ಲಿ ಏನನ್ನು ಮೆಚ್ಚುತ್ತಾಳೆ?

8. ವಿವಾಹದಲ್ಲಿ “ಒಳ್ಳೆಯ ಲಾಭ” ಪಡೆಯಲು ಏನು ಅಗತ್ಯ?

9. (ಎ) ಗಂಡಂದಿರಿಗೆ ಯಾವ ಜವಾಬ್ದಾರಿಗಳಿವೆ? (ಬಿ) ಕೊಲೊಸ್ಸೆ 3:19ಕ್ಕನುಸಾರ, ಗಂಡನು ಹೆಂಡತಿಯೊಂದಿಗೆ ಹೇಗೆ ವರ್ತಿಸಬೇಕು?

10. ಕ್ರೈಸ್ತ ಹೆಂಡತಿಯರು ಯಾವ ಮನೋಭಾವ ತೋರಿಸತಕ್ಕದ್ದು?

11. ಒಬ್ಬ ಸಹೋದರನು ತನ್ನ ವಿವಾಹಬಂಧವನ್ನು ಯಾವುದು ಬಲಪಡಿಸಿದೆ ಎಂದು ಹೇಳುತ್ತಾನೆ?

12, 13. (ಎ) ದಂಪತಿಗಳು ಜೊತೆಯಾಗಿ ಪ್ರಾರ್ಥಿಸುವುದು ತುಂಬ ಪ್ರಾಮುಖ್ಯವೇಕೆ? (ಬಿ) ವಿವಾಹಬಂಧವನ್ನು ಬಲಪಡಿಸುವ ಇತರ ಆಧ್ಯಾತ್ಮಿಕ ಚಟುವಟಿಕೆಗಳು ಯಾವುವು?

14. ವೈವಾಹಿಕ ಜೀವನದಲ್ಲಿನ ಒತ್ತಡಕ್ಕೆ ಕಾರಣಗಳು ಯಾವುವು?

15. ಒತ್ತಡದಿಂದಾಗಿ ಒಬ್ಬ ವ್ಯಕ್ತಿ ಹೇಗೆ ವರ್ತಿಸಬಹುದು, ಮತ್ತು ನಿಮ್ಮ ಸಂಗಾತಿ ಹೀಗೆ ವರ್ತಿಸಿದರೆ ನೀವು ಹೇಗೆ ಪ್ರತಿವರ್ತಿಸಬೇಕು?

16. (ಎ) ಮತ್ತಾಯ 7:1-5ರಲ್ಲಿರುವ ಯೇಸುವಿನ ಮಾತುಗಳು ವಿವಾಹಜೀವನಕ್ಕೆ ಹೇಗೆ ಅನ್ವಯಿಸುತ್ತವೆ? (ಬಿ) ವಿವಾಹಜೀವನದಲ್ಲಿ ಸಮತೋಲನವು ಏಕೆ ತುಂಬ ಪ್ರಾಮುಖ್ಯ?

17, 18. ಕಷ್ಟಗಳು ಹೆಚ್ಚಾದಂತೆ ನಾವು ಸಹಾಯಕ್ಕಾಗಿ ಎತ್ತ ತಿರುಗಬಲ್ಲೆವು?

19. ನಾವು ಸೈತಾನನ ಆಕ್ರಮಣಗಳನ್ನು ಯಾವ ವಿಧದಲ್ಲಿ ಪ್ರತಿರೋಧಿಸಬಲ್ಲೆವು?

20. ದೇವರನ್ನು ವಿವಾಹಬಂಧದಲ್ಲಿಡುವುದರಿಂದ ಯಾವ ಆಶೀರ್ವಾದಗಳು ಫಲಿಸುತ್ತವೆ?

[ಪುಟ 18ರಲ್ಲಿರುವ ಚಿತ್ರಗಳು]

ಒಟ್ಟಿಗೆ ಪ್ರಾರ್ಥನೆಮಾಡುವುದು ದಂಪತಿಗಳಿಗೆ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಲು ಸಹಾಯಮಾಡುತ್ತದೆ