ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ಮೋಶೆಯನ್ನು ಮಾನ್ಯಮಾಡುವುದು

ಮಹಾ ಮೋಶೆಯನ್ನು ಮಾನ್ಯಮಾಡುವುದು

ಮಹಾ ಮೋಶೆಯನ್ನು ಮಾನ್ಯಮಾಡುವುದು

“ಯೆಹೋವ ದೇವರು ನಿಮ್ಮ ಸಹೋದರರ ಮಧ್ಯದಿಂದ ನಿಮಗಾಗಿ ನನ್ನಂಥ ಒಬ್ಬ ಪ್ರವಾದಿಯನ್ನು ಎಬ್ಬಿಸುವನು. ಅವನು ನಿಮಗೆ ತಿಳಿಸುವ ಎಲ್ಲ ವಿಷಯಗಳಿಗೆ ನೀವು ಕಿವಿಗೊಡಬೇಕು.”​—⁠ಅ. ಕಾ. 3:⁠22.

ಎರಡು ಸಾವಿರ ವರ್ಷಗಳ ಹಿಂದೆ ಒಂದು ಗಂಡು ಮಗು ಜನಿಸಿದಾಗ, ಪರಲೋಕದಲ್ಲಿದ್ದ ದೇವದೂತರ ಒಂದು ದೊಡ್ಡ ಗುಂಪು ದೇವರನ್ನು ಸ್ತುತಿಸಿತು. ಇದನ್ನು ಕೆಲವು ಮಂದಿ ಕುರುಬರು ಕೇಳಿಸಿಕೊಂಡರು. (ಲೂಕ 2:​8-14) ಅದೇ ಮಗು ದೊಡ್ಡವನಾಗಿ ಮೂವತ್ತರ ಪ್ರಾಯದಲ್ಲಿ ಶುಶ್ರೂಷೆಯನ್ನು ಆರಂಭಿಸಿತು. ಈ ಶುಶ್ರೂಷೆ ಬರೀ ಮೂರುವರೆ ವರ್ಷಗಳದ್ದಾಗಿದ್ದರೂ ಅದು ಮಾನವ ಇತಿಹಾಸದ ಪಥವನ್ನೇ ಬದಲಿಸಿತು. ಇವನ ಬಗ್ಗೆ 19ನೇ ಶತಮಾನದ ಪ್ರಸಿದ್ಧ ಇತಿಹಾಸಕಾರ ಫಿಲಿಪ್‌ ಶಾಫ್‌ ಹೀಗೆ ಹೇಳುವಂತೆ ಪ್ರಚೋದಿತನಾದನು: “ಸ್ವತಃ ಒಂದೇ ಒಂದು ಸಾಲನ್ನು ಬರೆಯದಿದ್ದರೂ, ಅನೇಕ ಲೇಖಕರು ಈತನಿಂದ ಸ್ಫೂರ್ತಿಪಡೆದರು. ಆತನು ಅನೇಕಾನೇಕ ಪುಸ್ತಕಗಳು, ಉಪದೇಶಗಳು, ಉಪನ್ಯಾಸಗಳು, ಚರ್ಚೆಗಳು, ಸಂಪುಟಗಳು, ಕಲಾಕೃತಿಗಳು ಮತ್ತು ಸ್ತುತಿಹಾಡುಗಳ ರಚನೆಗೆ ಕಾರಣನಾದನು. ಇದುವರೆಗೆ ಅನೇಕ ಮಹಾನ್‌ ಪುರುಷರು ಬಂದುಹೋದರೂ ಅವರೆಲ್ಲರೂ ಒಟ್ಟಾಗಿಯೂ ಇಷ್ಟೊಂದು ಪ್ರಭಾವ ಬೀರಿದ್ದಿಲ್ಲ.” ಆ ಅಸಾಧಾರಣ ಪುರುಷನು ಯಾರು? ಯೇಸು ಕ್ರಿಸ್ತನೇ!

2 ಅಪೊಸ್ತಲ ಯೋಹಾನನು ಯೇಸುವಿನ ಶುಶ್ರೂಷೆಯ ಬಗ್ಗೆ ಒಂದು ವೃತ್ತಾಂತವನ್ನು ಬರೆದು ಕೊನೆಯಲ್ಲಿ ಹೀಗಂದನು: “ಯೇಸು ಮಾಡಿದ ಇನ್ನೂ ಅನೇಕ ಸಂಗತಿಗಳಿವೆ; ಒಂದುವೇಳೆ ಅವುಗಳನ್ನು ಸವಿವರವಾಗಿ ಬರೆಯುವುದಾದರೆ ಬರೆಯಲ್ಪಟ್ಟ ಸುರುಳಿಗಳನ್ನು ಶೇಖರಿಸಿಡಲು ಲೋಕವೇ ಸಾಕಾಗದು ಎಂದು ನಾನು ನೆನಸುತ್ತೇನೆ.” (ಯೋಹಾ. 21:25) ಆ ಮೂರುವರೆ ವರ್ಷಗಳಲ್ಲಿ ಅನೇಕ ವಿಶೇಷ ಘಟನೆಗಳು ಕೂಡಿದ್ದವು. ಆ ಅವಧಿಯಲ್ಲಿ ಯೇಸು ಹೇಳಿದ ಮತ್ತು ಮಾಡಿದ ಎಲ್ಲ ವಿಷಯಗಳಲ್ಲಿ ತೀರ ಕೊಂಚವನ್ನೇ ದಾಖಲಿಸಸಾಧ್ಯವೆಂದು ಯೋಹಾನನಿಗೆ ತಿಳಿದಿತ್ತು. ಹಾಗಿದ್ದರೂ, ಅವನು ತನ್ನ ಸುವಾರ್ತಾ ಪುಸ್ತಕದಲ್ಲಿ ವರದಿಸಿರುವ ಐತಿಹಾಸಿಕ ಘಟನೆಗಳು ಬಹುಮೂಲ್ಯವಾಗಿವೆ.

3 ಪ್ರಮುಖವಾಗಿರುವ ನಾಲ್ಕು ಸುವಾರ್ತಾ ವೃತ್ತಾಂತಗಳಲ್ಲದೆ, ಬೈಬಲಿನ ಇತರ ಪುಸ್ತಕಗಳು ಸಹ ಯೇಸುವಿನ ಜೀವನದ ಬಗ್ಗೆ ನಂಬಿಕೆಯನ್ನು ಬಲಪಡಿಸುವ ವಿವರಗಳನ್ನು ಕೊಡುತ್ತವೆ. ಉದಾಹರಣೆಗೆ, ಯೇಸುವಿಗಿಂತ ಮುಂಚೆ ಜೀವಿಸಿದ್ದ ನಂಬಿಗಸ್ತ ಪುರುಷರಲ್ಲಿ ಕೆಲವರ ಬೈಬಲ್‌ ವೃತ್ತಾಂತಗಳು, ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರದ ಕುರಿತ ನಮ್ಮ ಒಳನೋಟವನ್ನು ಹೆಚ್ಚಿಸುತ್ತವೆ. ಕೆಲವೊಂದನ್ನು ನಾವೀಗ ಪರಿಗಣಿಸೋಣ.

ಕ್ರಿಸ್ತನ ಮುನ್‌ಛಾಯೆಯಾಗಿದ್ದ ದೇವಪುರುಷರು

4 ಮೋಶೆ, ದಾವೀದ, ಸೊಲೊಮೋನರು, ದೇವರ ಅಭಿಷಿಕ್ತನೂ ನೇಮಿತ ರಾಜನೂ ಆದ ಯೇಸುವಿನ ಮುನ್‌ಛಾಯೆಯಾಗಿದ್ದರೆಂದು ಯೋಹಾನ ಮತ್ತು ಉಳಿದ ಮೂರು ಸುವಾರ್ತಾ ಪುಸ್ತಕದ ಲೇಖಕರು ತೋರಿಸಿದರು. ದೇವರ ಆ ಪ್ರಾಚೀನ ಸೇವಕರು ಯೇಸುವಿನ ಮುನ್‌ಛಾಯೆಯಾಗಿದ್ದದ್ದು ಹೇಗೆ, ಮತ್ತು ಅವರ ವೃತ್ತಾಂತಗಳಿಂದ ನಾವೇನು ಕಲಿಯಬಲ್ಲೆವು?

5 ಚುಟುಕಾಗಿ ಹೇಳುವುದಾದರೆ, ಮೋಶೆ ಒಬ್ಬ ಪ್ರವಾದಿ, ಮಧ್ಯಸ್ಥ ಹಾಗೂ ವಿಮೋಚಕನಾಗಿದ್ದನೆಂದು ಬೈಬಲ್‌ ಹೇಳುತ್ತದೆ. ಯೇಸುವಿಗೂ ಅದೇ ಪಾತ್ರಗಳಿವೆ. ದಾವೀದನು ಒಬ್ಬ ಕುರುಬನೂ, ಇಸ್ರಾಯೇಲಿನ ಶತ್ರುಗಳನ್ನು ಜಯಿಸಿದ ರಾಜನೂ ಆಗಿದ್ದನು. ಯೇಸು ಸಹ ಒಬ್ಬ ಕುರುಬನು ಮತ್ತು ಜಯಶಾಲಿ ರಾಜನಾಗಿದ್ದಾನೆ. (ಯೆಹೆ. 37:​24, 25) ಸೊಲೊಮೋನನು ನಂಬಿಗಸ್ತನಾಗಿದ್ದಷ್ಟು ಸಮಯ ಒಬ್ಬ ವಿವೇಕಿ ಅರಸನಾಗಿದ್ದನು ಮತ್ತು ಅವನ ಆಳ್ವಿಕೆಯ ಸಮಯದಲ್ಲಿ ಇಸ್ರಾಯೇಲ್‌ ಜನರಿಗೆ ನೆಮ್ಮದಿಯಿತ್ತು. (1 ಅರ. 4:​25, 29) ಯೇಸು ಸಹ ಬಹು ವಿವೇಕಿಯಾಗಿದ್ದಾನೆ ಮತ್ತು ಅವನನ್ನು “ಸಮಾಧಾನದ ಪ್ರಭು” ಎಂದು ಕರೆಯಲಾಗಿದೆ. (ಯೆಶಾ. 9:⁠6) ಕ್ರಿಸ್ತ ಯೇಸುವಿನ ಪಾತ್ರಗಳಿಗೂ ಹಿಂದಿನ ಕಾಲದ ಆ ಪುರುಷರ ಪಾತ್ರಗಳಿಗೂ ಹೋಲಿಕೆಗಳಿದ್ದರೂ, ದೇವರ ಉದ್ದೇಶದಲ್ಲಿ ಯೇಸುವಿನ ಸ್ಥಾನವೇ ಅತ್ಯುನ್ನತ. ನಾವೀಗ ಮೊದಲಾಗಿ ಯೇಸು ಮತ್ತು ಮೋಶೆಯನ್ನು ಹೋಲಿಸಿ, ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರವನ್ನು ಗಣ್ಯಮಾಡಲು ಇದು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ನೋಡೋಣ.

ಯೇಸುವಿನ ಮುನ್‌ಛಾಯೆಯಾಗಿದ್ದ ಮೋಶೆ

6 ಸಾ.ಶ.33ರ ಪಂಚಾಶತ್ತಮದ ಸ್ವಲ್ಪ ಸಮಯಾನಂತರ ಪೇತ್ರಯೋಹಾನರು, ಹುಟ್ಟಿನಿಂದಲೇ ಕುಂಟನಾಗಿದ್ದ ಒಬ್ಬ ಭಿಕ್ಷುಕನನ್ನು ವಾಸಿಮಾಡಿದರು. ಇದರಿಂದ ‘ಆಶ್ಚರ್ಯಪಟ್ಟ’ ಜನರು ಅದು ಹೇಗಾಯಿತೆಂದು ತಿಳಿಯಲು ಅವರ ಬಳಿ ಓಡಿಬಂದರು. ಆಗ ಅಪೊಸ್ತಲ ಪೇತ್ರನು ಆಲಯದಲ್ಲಿದ್ದ ಆರಾಧಕರ ಸಮೂಹದ ಎದುರು ನಿಂತು, ಈ ಆಶ್ಚರ್ಯಕರ ಕೃತ್ಯವು ಯೇಸು ಕ್ರಿಸ್ತನ ಮೂಲಕ ಕೆಲಸಮಾಡುತ್ತಿರುವ ಯೆಹೋವನ ಪವಿತ್ರಾತ್ಮದ ಫಲಿತಾಂಶವೆಂದು ವಿವರಿಸಿದನು. ಬಳಿಕ ಅವನು, ಮೋಶೆ ನುಡಿದಿದ್ದ ಮತ್ತು ಯೇಸು ಕ್ರಿಸ್ತನಲ್ಲಿ ನೆರವೇರಿದ ಒಂದು ಪ್ರವಾದನೆಯನ್ನು ಹೀಬ್ರು ಶಾಸ್ತ್ರಗಳಿಂದ ಉಲ್ಲೇಖಿಸುತ್ತಾ ಅಂದದ್ದು: “ವಾಸ್ತವದಲ್ಲಿ ಮೋಶೆಯು, ‘ಯೆಹೋವ ದೇವರು ನಿಮ್ಮ ಸಹೋದರರ ಮಧ್ಯದಿಂದ ನಿಮಗಾಗಿ ನನ್ನಂಥ ಒಬ್ಬ ಪ್ರವಾದಿಯನ್ನು ಎಬ್ಬಿಸುವನು. ಅವನು ನಿಮಗೆ ತಿಳಿಸುವ ಎಲ್ಲ ವಿಷಯಗಳಿಗೆ ನೀವು ಕಿವಿಗೊಡಬೇಕು’ . . . ಎಂದು ಹೇಳಿದ್ದಾನೆ.”​—⁠ಅ. ಕಾ. 3:​11, 22, 23; ಧರ್ಮೋಪದೇಶಕಾಂಡ 18:​15, 18, 19 ಓದಿ.

7 ಮೋಶೆಯ ಆ ಮಾತುಗಳು ಪೇತ್ರನಿಗೆ ಕಿವಿಗೊಡುತ್ತಿದ್ದ ಜನರಿಗೆ ಚಿರಪರಿಚಿತವಾಗಿದ್ದಿರಬೇಕು. ಏಕೆಂದರೆ ಯೆಹೂದ್ಯರಾಗಿದ್ದ ಅವರು ಮೋಶೆಯನ್ನು ತುಂಬ ಗೌರವದಿಂದ ಕಾಣುತ್ತಿದ್ದರು. (ಧರ್ಮೋ. 34:​10, 12) ಮೋಶೆಗಿಂತಲೂ ಶ್ರೇಷ್ಠನಾದ ಪ್ರವಾದಿಯ ಬರೋಣವನ್ನು ಅವರು ಕಾತರದಿಂದ ಎದುರುನೋಡುತ್ತಿದ್ದರು. ಆ ಪ್ರವಾದಿಯು, ಮೋಶೆಯಂತೆ ದೇವರಿಂದ ಅಭಿಷಿಕ್ತನಾದವನು ಆಗಿರಲಿದ್ದನು ಮಾತ್ರವಲ್ಲ, “ದೇವರ ಕ್ರಿಸ್ತನು, ಆರಿಸಿಕೊಳ್ಳಲ್ಪಟ್ಟವನು” ಅಂದರೆ ಮೆಸ್ಸೀಯನೂ ಆಗಿರಲಿದ್ದನು.​—⁠ಲೂಕ 23:35; ಇಬ್ರಿ. 11:⁠26.

ಯೇಸು ಮತ್ತು ಮೋಶೆಗಿರುವ ಹೋಲಿಕೆಗಳು

8 ಯೇಸುವಿನ ಭೂಜೀವಿತವು ಕೆಲವೊಂದು ವಿಧಗಳಲ್ಲಿ ಮೋಶೆಯ ಜೀವನಕ್ಕೆ ಹೋಲುತ್ತಿತ್ತು. ದೃಷ್ಟಾಂತಕ್ಕೆ, ಮೋಶೆ ಹಾಗೂ ಯೇಸು ಕೂಸುಗಳಾಗಿದ್ದಾಗ ಅವರನ್ನು ಕೊಲ್ಲಪ್ರಯತ್ನಿಸಿದ ಕ್ರೂರ ಅಧಿಪತಿಗಳ ಕೈಯಿಂದ ಬಚಾವಾದರು. (ವಿಮೋ. 1:​22–2:10; ಮತ್ತಾ. 2:​7-14) ಅಲ್ಲದೆ, ಅವರಿಬ್ಬರನ್ನೂ ‘ಐಗುಪ್ತದೇಶದಿಂದ ಕರೆಯಲಾಯಿತು.’ ಪ್ರವಾದಿ ಹೋಶೇಯನು ಹೇಳಿದ್ದು: “ಇಸ್ರಾಯೇಲು ಕೇವಲ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿಯಿಟ್ಟು ಆ ನನ್ನ ಮಗನನ್ನು ಐಗುಪ್ತದೇಶದಿಂದ ಕರೆದೆನು.” (ಹೋಶೇ. 11:⁠1) ಹೋಶೇಯನ ಈ ಮಾತುಗಳು, ದೇವನೇಮಿತ ನಾಯಕನಾದ ಮೋಶೆಯ ನೇತೃತ್ವದ ಕೆಳಗೆ ಇಸ್ರಾಯೇಲ್‌ ಜನಾಂಗ ಐಗುಪ್ತದಿಂದ ಹೊರಬಂದ ಸಮಯಕ್ಕೆ ಸೂಚಿಸಿದವು. (ವಿಮೋ. 4:​22, 23; 12:​29-37) ಆದರೆ ಅವನ ಮಾತು ಕೇವಲ ಗತಕಾಲದ ಆ ಘಟನೆಗೆ ಸೂಚಿಸಿತು ಮಾತ್ರವಲ್ಲ, ಭವಿಷ್ಯದಲ್ಲಿ ನಡೆಯಲಿದ್ದ ಘಟನೆಯೊಂದರ ಪ್ರವಾದನೆಯೂ ಆಗಿತ್ತು. ಇದು, ರಾಜ ಹೆರೋದನ ಮರಣಾನಂತರ ಯೋಸೇಫ ಹಾಗೂ ಮರಿಯಳು ಐಗುಪ್ತದಿಂದ ಹಿಂದಿರುಗಿದಾಗ ನೆರವೇರಿತು.​—⁠ಮತ್ತಾ. 2:​15, 19-23.

9 ಮೋಶೆ ಹಾಗೂ ಯೇಸು, ಇಬ್ಬರೂ ಅದ್ಭುತಗಳನ್ನು ನಡೆಸಿದರು. ಇದು, ಅವರಿಗೆ ಯೆಹೋವನ ಬೆಂಬಲವಿದೆ ಎಂಬುದನ್ನು ತೋರಿಸಿತು. ದಾಖಲೆಗನುಸಾರ, ಅದ್ಭುತಗಳನ್ನು ನಡೆಸಿದ ಮಾನವರಲ್ಲಿ ಮೋಶೆಯೇ ಪ್ರಥಮ. (ವಿಮೋ. 4:​1-9) ಉದಾಹರಣೆಗೆ, ಮೋಶೆಯ ಅಪ್ಪಣೆಯ ಮೇರೆಗೆ ನೈಲ್‌ ನದಿ ಹಾಗೂ ಅದರ ಕೊಳಗಳಲ್ಲಿದ್ದ ನೀರು ರಕ್ತವಾಯಿತು, ಕೆಂಪು ಸಮುದ್ರ ಇಬ್ಭಾಗವಾಯಿತು ಮತ್ತು ಅರಣ್ಯದಲ್ಲಿ ಬಂಡೆಯಿಂದ ನೀರು ಹೊರಚಿಮ್ಮಿತು. ಇವೆಲ್ಲವೂ ನೀರಿಗೆ ಸಂಬಂಧಪಟ್ಟ ಅದ್ಭುತಗಳಾಗಿದ್ದವು. (ವಿಮೋ. 7:​19-21; 14:21; 17:​5-7) ಯೇಸು ಸಹ ನೀರಿಗೆ ಸಂಬಂಧಪಟ್ಟ ಅದ್ಭುತಗಳನ್ನು ನಡೆಸಿದನು. ಆತನ ಮೊದಲ ಅದ್ಭುತಕಾರ್ಯವೇ, ಮದುವೆ ಔತಣದಲ್ಲಿ ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸಿದ್ದಾಗಿತ್ತು. (ಯೋಹಾ. 2:​1-11) ತದನಂತರ ಅವನು, ಅಲ್ಲಕಲ್ಲೋಲವಾಗಿದ್ದ ಗಲಿಲಾಯ ಸಮುದ್ರವನ್ನು ಶಾಂತಗೊಳಿಸಿದನು. ಒಂದು ಸಂದರ್ಭದಲ್ಲಂತೂ ಅವನು ನೀರಿನ ಮೇಲೆ ನಡೆದನು ಸಹ! (ಮತ್ತಾ. 8:​23-27; 14:​23-25) ಮೋಶೆ ಮತ್ತು ಮಹಾ ಮೋಶೆಯಾದ ಯೇಸುವಿಗಿರುವ ಇನ್ನಿತರ ಹೋಲಿಕೆಗಳನ್ನು ಪುಟ 26ರಲ್ಲಿರುವ ಚೌಕದಲ್ಲಿ ನೋಡಬಹುದು.

ಕ್ರಿಸ್ತನನ್ನು ಪ್ರವಾದಿಯಾಗಿ ಮಾನ್ಯಮಾಡಿ

10 ಪ್ರವಾದಿ ಎಂದಾಕ್ಷಣ ಭವಿಷ್ಯದ ಕುರಿತಾಗಿ ಮುಂದಾಗಿ ತಿಳಿಸುವವನು ಎಂದು ಅನೇಕ ಜನರು ಯೋಚಿಸುತ್ತಾರೆ. ಆದರೆ ಇದು, ಒಬ್ಬ ಪ್ರವಾದಿಗಿರುವ ಜವಾಬ್ದಾರಿಯ ಒಂದಂಶ ಮಾತ್ರ. ನಿಜ ಪ್ರವಾದಿಯೊಬ್ಬನು ಯೆಹೋವನ ಪ್ರೇರಿತ ವಕ್ತಾರನಾಗಿದ್ದು “ದೇವರ ಮಹೋನ್ನತ ಕಾರ್ಯಗಳ ವಿಷಯವಾಗಿ” ಘೋಷಿಸುತ್ತಾನೆ. (ಅ. ಕಾ. 2:​11, 16, 17) ಅವನ ಪ್ರವಾದನಾ ಕೆಲಸದಲ್ಲಿ, ಭವಿಷ್ಯದ ಘಟನೆಗಳನ್ನು ಘೋಷಿಸುವುದು, ಯೆಹೋವನ ಉದ್ದೇಶಗಳಿಗೆ ಸಂಬಂಧಿಸಿರುವ ಮಾಹಿತಿಯನ್ನು ಪ್ರಕಟಿಸುವುದು ಇಲ್ಲವೇ ದೇವರ ತೀರ್ಪುಗಳನ್ನು ಸಾರುವುದು ಸೇರಿರುತ್ತದೆ. ಮೋಶೆ ಅಂಥ ಪ್ರವಾದಿಯಾಗಿದ್ದನು. ಅವನು ಐಗುಪ್ತದ ಮೇಲೆ ಬರಲಿದ್ದ ಹತ್ತು ಬಾಧೆಗಳಲ್ಲಿ ಒಂದೊಂದನ್ನೂ ಮುಂತಿಳಿಸಿದನು, ಸೀನಾಯಿ ಬೆಟ್ಟದ ಬಳಿ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಸಾದರಪಡಿಸಿದನು ಮತ್ತು ದೇವರ ಚಿತ್ತದ ಬಗ್ಗೆ ಇಸ್ರಾಯೇಲ್‌ ಜನಾಂಗಕ್ಕೆ ಬೋಧಿಸಿದನು. ಹಾಗಿದ್ದರೂ, ಕಟ್ಟಕಡೆಗೆ ಅವನಿಗಿಂತಲೂ ಶ್ರೇಷ್ಠ ಪ್ರವಾದಿ ಬರಲಿದ್ದನು.

11 ತದನಂತರ ಪ್ರಥಮ ಶತಮಾನದಲ್ಲಿ, ಜೆಕರ್ಯನು, ತನ್ನ ಮಗನಾದ ಯೋಹಾನನ ವಿಷಯದಲ್ಲಿ ದೇವರ ಉದ್ದೇಶವನ್ನು ಪ್ರಕಟಿಸುವ ಮೂಲಕ ಒಬ್ಬ ಪ್ರವಾದಿಯಾಗಿ ಕಾರ್ಯವೆಸಗಿದನು. (ಲೂಕ 1:76) ಆ ಮಗನು ಮುಂದೆ ಸ್ನಾನಿಕನಾದ ಯೋಹಾನನಾದನು. ಜನರು ದೀರ್ಘಕಾಲದಿಂದ ಕಾದುಕೊಂಡಿದ್ದ, ಮೋಶೆಗಿಂತ ಶ್ರೇಷ್ಠ ಪ್ರವಾದಿಯಾದ ಯೇಸು ಕ್ರಿಸ್ತನ ಆಗಮನವನ್ನು ಅವನು ಘೋಷಿಸಿದನು. (ಯೋಹಾ. 1:​23-36) ಯೇಸು ಒಬ್ಬ ಪ್ರವಾದಿಯಾಗಿ ಹಲವಾರು ಸಂಗತಿಗಳನ್ನು ಮುಂತಿಳಿಸಿದನು. ಉದಾಹರಣೆಗೆ, ಆತನು ತನ್ನ ಸ್ವಂತ ಮರಣದ ಬಗ್ಗೆ ಮಾತಾಡುತ್ತಾ, ಹೇಗೆ, ಎಲ್ಲಿ ಮತ್ತು ಯಾರ ಕೈಯಲ್ಲಿ ಸಾಯುವೆನೆಂಬುದನ್ನು ಮುಂತಿಳಿಸಿದನು. (ಮತ್ತಾ. 20:​17-19) ಯೇಸು ಯೆರೂಸಲೇಮ್‌ ಹಾಗೂ ಅದರ ಆಲಯದ ನಾಶನದ ಕುರಿತಾಗಿಯೂ ಮುಂತಿಳಿಸಿದನು ಮತ್ತು ಇದು ಆತನ ಕೇಳುಗರನ್ನು ಚಕಿತಗೊಳಿಸಿತು. (ಮಾರ್ಕ 13:​1, 2) ನಮ್ಮೀ ದಿನಗಳ ಕುರಿತಾಗಿಯೂ ಆತನ ಪ್ರವಾದನೆಗಳಿವೆ.​—⁠ಮತ್ತಾ. 24:​3-41.

12 ಯೇಸು ಒಬ್ಬ ಪ್ರವಾದಿ ಮಾತ್ರವಲ್ಲ ಒಬ್ಬ ಸೌವಾರ್ತಿಕನೂ ಬೋಧಕನೂ ಆಗಿದ್ದನು. ಆತನು ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು ಮತ್ತು ಆತನಷ್ಟು ಧೈರ್ಯದಿಂದ ಮಾತಾಡಿದವರು ಬೇರಾರೂ ಇಲ್ಲ. (ಲೂಕ 4:​16-21, 43) ಬೋಧಕನಾಗಿದ್ದ ಆತನಿಗೆ ಸರಿಸಾಟಿಯೇ ಇಲ್ಲ. ಅವನಿಗೆ ಕಿವಿಗೊಟ್ಟ ಕೆಲವರು, “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದು ಹೇಳಿದರು. (ಯೋಹಾ. 7:46) ಯೇಸು ಹುರುಪಿನಿಂದ ಸುವಾರ್ತೆ ಸಾರಿದನು ಮತ್ತು ತನ್ನ ಹಿಂಬಾಲಕರಲ್ಲೂ ರಾಜ್ಯಕ್ಕಾಗಿ ಅದೇ ಹುರುಪನ್ನು ತುಂಬಿಸಿದನು. ಹೀಗೆ, ಭೌಗೋಲಿಕವಾದ ಸಾರುವ ಹಾಗೂ ಬೋಧಿಸುವ ಕೆಲಸಕ್ಕಾಗಿ ಆತನು ಅಸ್ತಿವಾರವನ್ನು ಹಾಕಿದನು, ಮತ್ತು ಅದು ಈಗಲೂ ಮುಂದುವರಿಯುತ್ತಿದೆ. (ಮತ್ತಾ. 28:​18-20; ಅ. ಕಾ. 5:42) ಕಳೆದ ವರ್ಷ, ಕ್ರಿಸ್ತನ ಹಿಂಬಾಲಕರಲ್ಲಿ ಸುಮಾರು 70 ಲಕ್ಷ ಮಂದಿ, ರಾಜ್ಯದ ಸುವಾರ್ತೆಯನ್ನು ಸಾರಲು ಮತ್ತು ಆಸಕ್ತ ಜನರಿಗೆ ಬೈಬಲ್‌ ಸತ್ಯಗಳನ್ನು ಬೋಧಿಸಲು 150,00,00,000 ತಾಸುಗಳನ್ನು ಕಳೆದರು. ನೀವು ಈ ಕೆಲಸದಲ್ಲಿ ಸಾಧ್ಯವಾದದ್ದೆಲ್ಲವನ್ನು ಮಾಡುತ್ತಿದ್ದೀರೋ?

13 ಮೋಶೆಯಂಥ ಪ್ರವಾದಿಯನ್ನು ಎಬ್ಬಿಸುವುದರ ಕುರಿತ ಪ್ರವಾದನೆಯನ್ನು ಯೆಹೋವನು ನೆರವೇರಿಸಿದ್ದರಲ್ಲಿ ಸಂದೇಹವೇ ಇಲ್ಲ. ಇದರ ಕುರಿತ ಜ್ಞಾನವು ನಿಮ್ಮ ಮೇಲೆ ಯಾವ ಪರಿಣಾಮಬೀರುತ್ತದೆ? ಇದು, ನಿಕಟ ಭವಿಷ್ಯಕ್ಕೆ ಸಂಬಂಧಿಸಿದ ಪ್ರೇರಿತ ಪ್ರವಾದನೆಗಳಲ್ಲಿ ನಿಮ್ಮ ದೃಢಭರವಸೆಯನ್ನು ಹೆಚ್ಚಿಸುತ್ತದೋ? ಹೌದು, ಮಹಾ ಮೋಶೆಯ ಮಾದರಿಯನ್ನು ಹೆಚ್ಚೆಚ್ಚು ಧ್ಯಾನಿಸುವುದು, ದೇವರು ಬೇಗನೆ ಮಾಡಲಿರುವ ಸಂಗತಿಗಳ ಕುರಿತು ನಾವು “ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ” ಇರಲು ಸಹಾಯಮಾಡುತ್ತದೆ.​—⁠1 ಥೆಸ. 5:​2, 6.

ಕ್ರಿಸ್ತನನ್ನು ಮಧ್ಯಸ್ಥಗಾರನೆಂದು ಮಾನ್ಯಮಾಡಿ

14 ಮೋಶೆಯಂತೆ ಯೇಸುವೂ ಮಧ್ಯಸ್ಥಗಾರನಾಗಿದ್ದನು. ಒಬ್ಬ ಮಧ್ಯಸ್ಥಗಾರನು ಎರಡು ಪಕ್ಷಗಳ ನಡುವೆ ಸೇತುವೆಯಂತಿರುತ್ತಾನೆ. ಮೋಶೆಯು, ಯೆಹೋವ ಹಾಗೂ ಇಸ್ರಾಯೇಲ್ಯರ ಮಧ್ಯೆ ಏರ್ಪಟ್ಟ ಧರ್ಮಶಾಸ್ತ್ರದ ಒಡಂಬಡಿಕೆಯ ಮಧ್ಯಸ್ಥಗಾರನಾಗಿದ್ದನು. ಒಂದುವೇಳೆ ಇಸ್ರಾಯೇಲ್ಯರು ದೇವರ ನಿಯಮಗಳಿಗೆ ವಿಧೇಯರಾಗಿರುತ್ತಿದ್ದಲ್ಲಿ ದೇವರ ಸ್ವಕೀಯಜನರಾಗಿಯೂ ಆತನ ಸಭೆಯಾಗಿಯೂ ಉಳಿಯುತ್ತಿದ್ದರು. (ವಿಮೋ. 19:​3-8) ಆ ಒಡಂಬಡಿಕೆಯು ಸಾ.ಶ.ಪೂ. 1513ರಿಂದ ಸಾ.ಶ. ಒಂದನೇ ಶತಮಾನದ ತನಕ ಜಾರಿಯಲ್ಲಿತ್ತು.

15 ಸಾ.ಶ. 33ರಲ್ಲಿ ಯೆಹೋವನು ಹೊಸ ಇಸ್ರಾಯೇಲ್‌ ಅಂದರೆ ‘ದೇವರ ಇಸ್ರಾಯೇಲ್‌’ನೊಂದಿಗೆ ಇನ್ನಷ್ಟು ಉತ್ತಮವಾದ ಒಡಂಬಡಿಕೆಯನ್ನು ಮಾಡಿದನು. ಈ ದೇವರ ಇಸ್ರಾಯೇಲ್‌, ಅಭಿಷಿಕ್ತ ಕ್ರೈಸ್ತರಿಂದ ಕೂಡಿದ ಲೋಕವ್ಯಾಪಕ ಸಭೆಯಾಗಿ ಪರಿಣಮಿಸಿತು. (ಗಲಾ. 6:16) ಮೋಶೆಯು ಮಧ್ಯಸ್ಥಗಾರನಾಗಿದ್ದ ಒಡಂಬಡಿಕೆಯ ನಿಯಮಗಳನ್ನು ದೇವರು ಕಲ್ಲಿನ ಮೇಲೆ ಬರೆದಿದ್ದನು. ಆದರೆ ಯೇಸು ಮಧ್ಯಸ್ಥಗಾರನಾಗಿದ್ದ ಒಡಂಬಡಿಕೆಯು ಹೆಚ್ಚು ಶ್ರೇಷ್ಠವಾಗಿತ್ತು. ಅವುಗಳ ನಿಯಮಗಳನ್ನು ದೇವರು ಮಾನವರ ಹೃದಯಗಳಲ್ಲೇ ಬರೆದಿದ್ದಾನೆ. (1 ತಿಮೊಥೆಯ 2:5; ಇಬ್ರಿಯ 8:10 ಓದಿ.) ಹೀಗೆ ‘ದೇವರ ಇಸ್ರಾಯೇಲ್‌’ ಈಗ ದೇವರ ಸ್ವಕೀಯ ಜನವಾಗಿದ್ದು, ಮೆಸ್ಸೀಯ ರಾಜ್ಯದ “ಫಲಗಳನ್ನು ಕೊಡುವ ಜನಾಂಗ” ಆಗಿದೆ. (ಮತ್ತಾ. 21:43) ಆ ಆಧ್ಯಾತ್ಮಿಕ ಜನಾಂಗದ ಸದಸ್ಯರು, ಹೊಸ ಒಡಂಬಡಿಕೆಯ ಭಾಗಿಗಳಾಗಿದ್ದಾರೆ. ಆದರೆ ಅವರು ಮಾತ್ರ ಅದರಿಂದ ಪ್ರಯೋಜನ ಪಡೆಯುವುದಿಲ್ಲ. ಅಗಣಿತ ಸಂಖ್ಯೆಯ ಜನರು, ಮರಣದಲ್ಲಿ ನಿದ್ರಿಸಿರುವವರು ಸಹ, ಆ ಶ್ರೇಷ್ಠ ಒಡಂಬಡಿಕೆಯಿಂದ ನಿತ್ಯಾಶೀರ್ವಾದಗಳನ್ನು ಪಡೆಯುವರು.

ಕ್ರಿಸ್ತನನ್ನು ವಿಮೋಚಕನೆಂದು ಮಾನ್ಯಮಾಡಿ

16 ಐಗುಪ್ತವನ್ನು ಬಿಟ್ಟುಬರುವ ಹಿಂದಿನ ರಾತ್ರಿಯಂದು ಇಸ್ರಾಯೇಲ್ಯರ ಚೊಚ್ಚಲ ಮಕ್ಕಳು ಪ್ರಾಣಾಪಾಯದಲ್ಲಿದ್ದರು. ದೇವದೂತನೊಬ್ಬನು ಎಲ್ಲ ಚೊಚ್ಚಲು ಮಕ್ಕಳನ್ನು ಹತಿಸುತ್ತಾ ಐಗುಪ್ತ ದೇಶದ ನಡುವೆ ಹಾದುಹೋಗಲಿದ್ದನು. ಇಸ್ರಾಯೇಲ್ಯರು ಪಸ್ಕದ ಕುರಿಯ ರಕ್ತವನ್ನು ತಮ್ಮ ಮನೆಬಾಗಲಿನ ಮೇಲಣ ಪಟ್ಟಿಗೂ ಎರಡು ನಿಲುವುಕಂಬಗಳಿಗೂ ಹಚ್ಚುವಲ್ಲಿ ಅವರ ಚೊಚ್ಚಲ ಮಕ್ಕಳನ್ನು ಉಳಿಸುವೆನೆಂದು ಯೆಹೋವನು ಮೋಶೆಗೆ ಹೇಳಿದನು. (ವಿಮೋ. 12:​1-13, 21-23) ಹಾಗೆಯೇ ಆಯಿತು. ತದನಂತರ ಸ್ವಲ್ಪದರಲ್ಲೇ ಆ ಜನಾಂಗದವರೆಲ್ಲರ ಪ್ರಾಣ ಅಪಾಯದಲ್ಲಿತ್ತು. ಕೆಂಪು ಸಮುದ್ರ, ಮತ್ತು ಯುದ್ಧರಥಗಳಲ್ಲಿ ಅವರನ್ನು ಬೆನ್ನಟ್ಟುತ್ತಿದ್ದ ಐಗುಪ್ತ್ಯರ ನಡುವೆ ಅವರು ಸಿಕ್ಕಿಬಿದ್ದಿದ್ದರು. ಕೆಂಪು ಸಮುದ್ರದ ನೀರನ್ನು ಅದ್ಭುತಕರವಾಗಿ ಇಬ್ಭಾಗ ಮಾಡಿ, ಯೆಹೋವನು ಪುನಃ ಒಮ್ಮೆ ಮೋಶೆಯ ಮೂಲಕ ಅವರನ್ನು ವಿಮೋಚಿಸಿದನು.​—⁠ವಿಮೋ. 14:​13, 21.

17 ಈ ರಕ್ಷಣಾಕಾರ್ಯಗಳು ನಿಜಕ್ಕೂ ಮಹತ್ತಾದವುಗಳಾಗಿವೆ. ಆದರೆ ಯೆಹೋವನು ಯೇಸುವಿನ ಮೂಲಕ ನಡೆಸಿರುವ ವಿಮೋಚನೆಯಂತೂ ಇನ್ನಷ್ಟು ಶ್ರೇಷ್ಠವಾಗಿದೆ. ಯೇಸುವಿನ ಮೂಲಕ ವಿಧೇಯ ಮಾನವರು ಪಾಪದ ದಾಸತ್ವದಿಂದ ಬಿಡುಗಡೆ ಪಡೆಯುತ್ತಾರೆ. (ರೋಮ. 5:​12, 18) ಇದು “ನಿತ್ಯಬಿಡುಗಡೆ” ಆಗಿದೆ. (ಇಬ್ರಿ. 9:​11, 12) ಯೇಸುವಿನ ಹೆಸರಿನ ಅರ್ಥವೇ “ಯೆಹೋವನು ರಕ್ಷಣೆ” ಎಂದಾಗಿದೆ. ನಮ್ಮ ವಿಮೋಚಕ ಅಥವಾ ರಕ್ಷಕನಾದ ಯೇಸು ನಮ್ಮ ಪಾಪಗಳಿಂದ ನಮ್ಮನ್ನು ರಕ್ಷಿಸುತ್ತಾನೆ ಮಾತ್ರವಲ್ಲ ಉತ್ತಮ ಭವಿಷ್ಯತ್ತನ್ನು ಆನಂದಿಸಲಿಕ್ಕಾಗಿ ಮಾರ್ಗವನ್ನೂ ತೆರೆಯುತ್ತಾನೆ. ಯೇಸು ತನ್ನ ಹಿಂಬಾಲಕರನ್ನು ಪಾಪದ ದಾಸತ್ವದಿಂದ ಬಿಡಿಸುವ ಮೂಲಕ ಅವರನ್ನು ದೇವರ ಕೋಪದಿಂದ ರಕ್ಷಿಸುತ್ತಾನೆ ಮತ್ತು ಅವರನ್ನು ಯೆಹೋವನೊಂದಿಗೆ ಪ್ರೀತಿಪರ ಸಂಬಂಧದಲ್ಲಿ ತರುತ್ತಾನೆ.​—⁠ಮತ್ತಾ. 1:⁠21.

18 ಯೇಸು ಕೊಡುವ ಪಾಪವಿಮೋಚನೆಯಿಂದಾಗಿ ಸಕಾಲದಲ್ಲಿ ಪಾಪದ ಕರಾಳ ಪರಿಣಾಮಗಳಾದ ರೋಗ ಹಾಗೂ ಮರಣದಿಂದಲೂ ಮುಕ್ತಿ ಸಿಗುವುದು. ಇದು ಹೇಗಿರುವುದೆಂಬುದನ್ನು ಊಹಿಸಿಕೊಳ್ಳಲು, ಯೇಸು ಯಾಯೀರನ ಮನೆಗೆ ಹೋದಾಗ ನಡೆದ ಘಟನೆಯನ್ನು ಪರಿಗಣಿಸಿರಿ. 12 ವರ್ಷ ಪ್ರಾಯದ ಅವನ ಮಗಳು ಸಾವನ್ನಪ್ಪಿದ್ದಳು. ಆದರೆ ಯೇಸು ಯಾಯಿರನಿಗೆ ಆಶ್ವಾಸನೆ ಕೊಟ್ಟದ್ದು: “ಭಯಪಡಬೇಡ, ನಂಬಿಕೆ ಮಾತ್ರ ಇರಲಿ; ಅವಳು ಬದುಕುವಳು.” (ಲೂಕ 8:​41, 42, 49, 50) ಅವನ ಮಾತಿನಂತೆಯೇ ಆ ಮೃತ ಹುಡುಗಿ ಜೀವಿತಳಾದಳು! ಅವಳ ಹೆತ್ತವರಿಗಾದ ಆನಂದವನ್ನು ಊಹಿಸಿಕೊಳ್ಳಬಲ್ಲಿರೋ? ಹಾಗಿದ್ದರೆ, “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ [ಯೇಸುವಿನ] ಸ್ವರವನ್ನು ಕೇಳಿ ಹೊರಗೆ ಬರುವ ಕಾಲ”ದಲ್ಲಾಗುವ ಮಿಗಿಲಾದ ಆನಂದವನ್ನು ನೀವು ಕಲ್ಪಿಸಿಕೊಳ್ಳಬಹುದು. (ಯೋಹಾ. 5:​28, 29) ನಿಜವಾಗಿಯೂ ಯೇಸು ಒಬ್ಬ ರಕ್ಷಕನು, ನಮ್ಮ ವಿಮೋಚಕನು ಆಗಿದ್ದಾನೆ!​—⁠ಅ. ಕಾರ್ಯಗಳು 5:31 ಓದಿ; ತೀತ 1:4; ಪ್ರಕ. 7:⁠10.

19 ಯೇಸುವಿನ ರಕ್ಷಣಾಕಾರ್ಯಗಳಿಂದ ಜನರು ಪ್ರಯೋಜನ ಪಡೆಯುವಂತೆ ನಾವು ಸಹಾಯಮಾಡಬಲ್ಲೆವೆಂಬ ಅರಿವು, ನಾವು ಸಾರುವ ಹಾಗೂ ಬೋಧಿಸುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಕೊಡುತ್ತದೆ. (ಯೆಶಾ. 61:​1-3) ಅಷ್ಟುಮಾತ್ರವಲ್ಲದೆ, ಯೇಸುವಿಗಿರುವ ಮಹಾ ಮೋಶೆಯ ಪಾತ್ರದ ಕುರಿತು ಧ್ಯಾನಿಸುವುದರಿಂದ, ದುಷ್ಟರ ಮೇಲೆ ಆತನು ತೀರ್ಪನ್ನು ಜಾರಿಗೊಳಿಸುವಾಗ ತನ್ನ ಹಿಂಬಾಲಕರನ್ನು ವಿಮೋಚಿಸುವನೆಂಬ ನಮ್ಮ ಭರವಸೆ ಗಾಢವಾಗುತ್ತದೆ.​—⁠ಮತ್ತಾ. 25:​31-34, 41, 46; ಪ್ರಕ. 7:​9, 14.

20 ಹೌದು, ಯೇಸು ಮಹಾ ಮೋಶೆಯಾಗಿದ್ದಾನೆ. ಮೋಶೆಗೆ ಎಂದೂ ಮಾಡಲಾಗದ ಅನೇಕ ಅದ್ಭುತ ಸಂಗತಿಗಳನ್ನು ಅವನು ಮಾಡಿದನು. ಒಬ್ಬ ಪ್ರವಾದಿಯಾಗಿ ಯೇಸು ಆಡಿದ ಮಾತುಗಳು ಮತ್ತು ಮಧ್ಯಸ್ಥಗಾರನಾಗಿ ಅವನು ಮಾಡಿದ ಕೃತ್ಯಗಳು ಇಡೀ ಮಾನವಕುಲದ ಮೇಲೆ ಪರಿಣಾಮ ಬೀರುತ್ತವೆ. ವಿಮೋಚಕನಾಗಿ ಯೇಸು ಮಾನವಕುಲಕ್ಕೆ ಒದಗಿಸುವ ರಕ್ಷಣೆಯು ತಾತ್ಕಾಲಿಕವಲ್ಲ ಬದಲಾಗಿ ಶಾಶ್ವತವಾಗಿದೆ. ಆದರೆ ಹಿಂದಿನ ಕಾಲದ ನಂಬಿಗಸ್ತ ಪುರುಷರಿಂದ ಯೇಸುವಿನ ಕುರಿತು ಇನ್ನಷ್ಟನ್ನು ಕಲಿಯಲಿಕ್ಕಿದೆ. ಯೇಸು ಯಾವ ವಿಧಗಳಲ್ಲಿ ಮಹಾ ದಾವೀದ ಹಾಗೂ ಮಹಾ ಸೊಲೊಮೋನನಾಗಿದ್ದನು ಎಂಬುದನ್ನು ಮುಂದಿನ ಲೇಖನ ಚರ್ಚಿಸುವುದು.

ನೀವು ವಿವರಿಸಬಲ್ಲಿರೋ?

ಕೆಳಕಂಡ ಪಾತ್ರಗಳಲ್ಲಿ ಯೇಸು ಮೋಶೆಗಿಂತ ಶ್ರೇಷ್ಠನಾಗಿರುವುದು ಹೇಗೆ?

• ಪ್ರವಾದಿ

• ಮಧ್ಯಸ್ಥಗಾರ

• ವಿಮೋಚಕ

[ಅಧ್ಯಯನ ಪ್ರಶ್ನೆಗಳು]

1. ಯೇಸು ಕ್ರಿಸ್ತನು ಇತಿಹಾಸದ ಮೇಲೆ ಹೇಗೆ ಪ್ರಭಾವ ಬೀರಿದ್ದಾನೆ?

2. ಅಪೊಸ್ತಲ ಯೋಹಾನನು ಯೇಸು ಹಾಗೂ ಅವನ ಶುಶ್ರೂಷೆಯ ಬಗ್ಗೆ ಏನಂದನು?

3. ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರದ ಕುರಿತು ನಮಗಿರುವ ಒಳನೋಟವನ್ನು ಹೇಗೆ ಹೆಚ್ಚಿಸಬಲ್ಲೆವು?

4, 5. ಯಾರೆಲ್ಲ ಯೇಸುವಿನ ಮುನ್‌ಛಾಯೆಯಾಗಿದ್ದರು, ಮತ್ತು ಯಾವ ವಿಧಗಳಲ್ಲಿ?

6. ಯೇಸುವಿಗೆ ಕಿವಿಗೊಡುವುದು ಅಗತ್ಯವೆಂಬುದನ್ನು ಅಪೊಸ್ತಲ ಪೇತ್ರನು ಹೇಗೆ ವಿವರಿಸಿದನು?

7. ಮೋಶೆಗಿಂತಲೂ ಶ್ರೇಷ್ಠ ಪ್ರವಾದಿಯ ಕುರಿತ ಪೇತ್ರನ ಹೇಳಿಕೆಗಳನ್ನು ಅವನ ಕೇಳುಗರು ಅರ್ಥಮಾಡಿಕೊಳ್ಳಬಹುದಿತ್ತು ಏಕೆ?

8. ಮೋಶೆ ಹಾಗೂ ಯೇಸುವಿನ ಜೀವನದಲ್ಲಿ ಕಾಣಬಹುದಾದ ಕೆಲವೊಂದು ಹೋಲಿಕೆಗಳಾವುವು?

9. (ಎ) ಮೋಶೆ ಹಾಗೂ ಯೇಸು ಯಾವ ಅದ್ಭುತಗಳನ್ನು ನಡೆಸಿದರು? (ಬಿ) ಯೇಸು ಹಾಗೂ ಮೋಶೆಗಿರುವ ಇತರ ಹೋಲಿಕೆಗಳನ್ನು ತಿಳಿಸಿರಿ. (ಪುಟ 26ರಲ್ಲಿರುವ, “ಯೇಸು ಮತ್ತು ಮೋಶೆಗಿರುವ ಇನ್ನಿತರ ಹೋಲಿಕೆಗಳು” ಎಂಬ ಚೌಕ ನೋಡಿ.)

10. ಒಬ್ಬ ನಿಜ ಪ್ರವಾದಿಗೆ ಯಾವಾವ ಕೆಲಸಗಳಿರುತ್ತವೆ, ಮತ್ತು ಮೋಶೆ ಅಂಥ ಪ್ರವಾದಿಯಾಗಿದ್ದದ್ದು ಹೇಗೆ?

11. ಮೋಶೆಗಿಂತಲೂ ಶ್ರೇಷ್ಠ ಪ್ರವಾದಿಯ ಪಾತ್ರವನ್ನು ಯೇಸು ಪೂರೈಸಿದ್ದು ಹೇಗೆ?

12. (ಎ) ಯೇಸು ಒಂದು ಭೌಗೋಲಿಕ ಸಾರುವ ಕೆಲಸಕ್ಕೆ ಅಸ್ತಿವಾರ ಹಾಕಿದ್ದು ಹೇಗೆ? (ಬಿ) ಯೇಸುವಿನ ಮಾದರಿಯನ್ನು ನಾವೇಕೆ ಅನುಸರಿಸುತ್ತೇವೆ?

13. ‘ಎಚ್ಚರವಾಗಿರಲು’ ನಮಗೆ ಯಾವುದು ಸಹಾಯಮಾಡುವುದು?

14. ಇಸ್ರಾಯೇಲ್ಯರ ಹಾಗೂ ದೇವರ ನಡುವೆ ಮೋಶೆ ಹೇಗೆ ಮಧ್ಯಸ್ಥಗಾರನಾಗಿದ್ದನು?

15. ಯೇಸು ಒಬ್ಬ ಶ್ರೇಷ್ಠ ಮಧ್ಯಸ್ಥಗಾರನಾಗಿರುವುದು ಹೇಗೆ?

16. (ಎ) ಇಸ್ರಾಯೇಲ್ಯರನ್ನು ವಿಮೋಚಿಸಲಿಕ್ಕಾಗಿ ಯೆಹೋವನು ಮೋಶೆಯನ್ನು ಯಾವ ವಿಧಗಳಲ್ಲಿ ಉಪಯೋಗಿಸಿದನು? (ಬಿ) ವಿಮೋಚನಕಾಂಡ 14:13ಕ್ಕನುಸಾರ ರಕ್ಷಣೆಯ ಮೂಲನು ಯಾರು?

17, 18. ಯೇಸು ಯಾವ ವಿಧಗಳಲ್ಲಿ ಮೋಶೆಗಿಂತಲೂ ಶ್ರೇಷ್ಠ ವಿಮೋಚಕನಾಗಿದ್ದಾನೆ?

19, 20. (ಎ) ಮಹಾ ಮೋಶೆಯಾಗಿ ಯೇಸುವಿಗಿರುವ ಪಾತ್ರದ ಕುರಿತು ಧ್ಯಾನಿಸುವುದು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ? (ಬಿ) ಮುಂದಿನ ಲೇಖನ ಏನನ್ನು ಚರ್ಚಿಸುವುದು?

[ಪುಟ 26ರಲ್ಲಿರುವ ಚೌಕ/ಚಿತ್ರ]

ಯೇಸು ಮತ್ತು ಮೋಶೆಗಿರುವ ಇನ್ನಿತರ ಹೋಲಿಕೆಗಳು

◻ ಯೆಹೋವನ ಹಾಗೂ ಅವನ ಜನರ ಸೇವೆಮಾಡಲಿಕ್ಕಾಗಿ ಇಬ್ಬರೂ ಉನ್ನತ ಸ್ಥಾನಗಳನ್ನು ಬಿಟ್ಟುಬಂದರು.​—⁠2 ಕೊರಿಂ. 8:9; ಫಿಲಿ. 2:​5-8; ಇಬ್ರಿ. 11:​24-26.

◻ ಇಬ್ಬರೂ “ಕ್ರಿಸ್ತ”ರಾಗಿದ್ದರು, ಅಂದರೆ ಅಭಿಷಿಕ್ತರಾಗಿದ್ದರು.​—⁠ಮಾರ್ಕ 14:​61, 62; ಯೋಹಾ. 4:​25, 26; ಇಬ್ರಿ. 11:⁠26.

◻ ಇಬ್ಬರೂ ಯೆಹೋವನ ಹೆಸರಿನ ಪ್ರತಿನಿಧಿಗಳಾಗಿದ್ದರು.​—⁠ವಿಮೋ. 3:​13-16; ಯೋಹಾ. 5:43; 17:​4, 6, 26.

◻ ಇಬ್ಬರೂ ಸಾತ್ವಿಕರಾಗಿದ್ದರು.​—⁠ಅರ. 12:3; ಮತ್ತಾ. 11:​28-30.

◻ ಇಬ್ಬರೂ ಜನಸ್ತೋಮಗಳಿಗೆ ಉಣಿಸಿದರು.​—⁠ವಿಮೋ. 16:12; ಯೋಹಾ. 6:​48-51.

◻ ಇಬ್ಬರೂ ನ್ಯಾಯಸ್ಥಾಪಕರು ಹಾಗೂ ನಿಯಮದಾತರಾಗಿ ಸೇವೆಸಲ್ಲಿಸಿದರು.​—⁠ವಿಮೋ. 18:13; ಮಲಾ. 4:4; ಯೋಹಾ. 5:​22, 23; 15:⁠10.

◻ ಇಬ್ಬರಿಗೂ ದೇವರ ಮನೆತನದ ಉಸ್ತುವಾರಿಯನ್ನು ವಹಿಸಿಕೊಡಲಾಯಿತು.​—⁠ಅರ. 12:7; ಇಬ್ರಿ. 3:​2-6.

◻ ಇಬ್ಬರನ್ನೂ ಯೆಹೋವನ ನಂಬಿಗಸ್ತ ಸಾಕ್ಷಿಗಳೆಂದು ವರ್ಣಿಸಲಾಗಿದೆ.​—⁠ಇಬ್ರಿ. 11:​24-29; 12:1; ಪ್ರಕ. 1:⁠5.

◻ ಮೋಶೆ ಹಾಗೂ ಮಾನವನಾದ ಯೇಸುವಿನ ಮರಣಾನಂತರ ದೇವರು ಅವರ ದೇಹಗಳನ್ನು ಇಲ್ಲವಾಗಿಸಿದನು.​—⁠ಧರ್ಮೋ. 34:​5, 6; ಲೂಕ 24:​1-3; ಅ. ಕಾ. 2:31; 1 ಕೊರಿಂ. 15:50; ಯೂದ 9.