ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಶಿಕ್ಷಣದ ಅಪಾರ ಮೌಲ್ಯ

ದೈವಿಕ ಶಿಕ್ಷಣದ ಅಪಾರ ಮೌಲ್ಯ

ದೈವಿಕ ಶಿಕ್ಷಣದ ಅಪಾರ ಮೌಲ್ಯ

“ನನ್ನ ಕರ್ತನಾದ ಕ್ರಿಸ್ತ ಯೇಸುವಿನ ಕುರಿತಾದ ಜ್ಞಾನದ ಅಪಾರವಾದ ಮೌಲ್ಯದ ನಿಮಿತ್ತ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ.”—ಫಿಲಿ. 3:8.

1, 2. ಕೆಲವು ಕ್ರೈಸ್ತರು ಯಾವ ಆಯ್ಕೆಮಾಡಿದ್ದಾರೆ, ಮತ್ತು ಏಕೆ?

ರಾಬರ್ಟ್‌ ಚಿಕ್ಕಂದಿನಿಂದಲೇ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಅವನು ಕೇವಲ ಎಂಟು ವರ್ಷದವನಾಗಿದ್ದಾಗ ಶಿಕ್ಷಕಿಯೊಬ್ಬಳು ಅವನ ಮನೆಗೆ ವಿಶೇಷ ಭೇಟಿ ನೀಡಿ, ಅವನು ಮಾಡಬಹುದಾದ ಸಾಧನೆಗೆ ಮಿತಿಯೇ ಇಲ್ಲ, ಮುಂದೊಂದು ದಿನ ಅವನು ಖಂಡಿತ ಡಾಕ್ಟರನಾಗುತ್ತಾನೆಂದು ಹೇಳಿದಳು. ಪ್ರೌಢ ಶಾಲೆಯಲ್ಲಿನ ಶೈಕ್ಷಣಿಕ ಸಾಧನೆಗಳಿಂದಾಗಿ ಅವನು ದೇಶದಲ್ಲಿದ್ದ ಯಾವುದೇ ಒಳ್ಳೇ ವಿಶ್ವವಿದ್ಯಾನಿಲಯಕ್ಕೆ ದಾಖಲಾಗಲು ಅರ್ಹನಾದನು. ಆದರೆ ರಾಬರ್ಟ್‌, ಜೀವನದಲ್ಲೊಮ್ಮೆ ಮಾತ್ರ ಸಿಗುತ್ತದೆಂದು ಎಣಿಸಲಾಗುವ ಅವಕಾಶವನ್ನು ಕೈಬಿಟ್ಟನು ಯಾಕೆಂದರೆ ಅವನ ಗುರಿ ರೆಗ್ಯುಲರ್‌ ಪಯನೀಯರನಾಗಿ ಸೇವೆಸಲ್ಲಿಸುವುದಾಗಿತ್ತು.

2 ರಾಬರ್ಟ್‌ನಂತೆ ಆಬಾಲವೃದ್ಧರೆನ್ನದೆ ಅನೇಕ ಕ್ರೈಸ್ತರಿಗೆ, ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಏಳಿಗೆಹೊಂದುವ ಅವಕಾಶಗಳಿವೆ. ಆದರೆ ಕೆಲವರು ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟಲಿಕ್ಕಾಗಿ ಈ ಅವಕಾಶಗಳನ್ನು ಪೂರ್ಣವಾಗಿ ಬಳಸದಿರುವ ಆಯ್ಕೆಮಾಡುತ್ತಾರೆ. (1 ಕೊರಿಂ. 7:29-31) ಸಾರುವ ಕೆಲಸದಲ್ಲಿ ತಮ್ಮನ್ನೇ ದುಡಿಸಿಕೊಳ್ಳಲು ರಾಬರ್ಟ್‌ನಂತಿರುವ ಕ್ರೈಸ್ತರನ್ನು ಯಾವುದು ಪ್ರಚೋದಿಸುತ್ತದೆ? ಯೆಹೋವನ ಮೇಲೆ ಅವರಿಗಿರುವ ಪ್ರೀತಿಯೇ ಅದಕ್ಕೆ ಅತಿ ಪ್ರಧಾನ ಕಾರಣವಾಗಿದ್ದರೂ, ಅವರು ದೈವಿಕ ಶಿಕ್ಷಣದ ಅಪಾರ ಮೌಲ್ಯವನ್ನು ಗಣ್ಯಮಾಡುವುದರಿಂದಲೂ ಹಾಗೆ ಮಾಡುತ್ತಾರೆ. ಒಂದುವೇಳೆ ನಿಮಗೆ ಸತ್ಯದ ಜ್ಞಾನ ಸಿಗದೇ ಇದ್ದಿದ್ದರೆ ನಿಮ್ಮ ಜೀವನ ಹೇಗಿರುತ್ತಿತ್ತು ಎಂಬುದನ್ನು ಇತ್ತೀಚೆಗೆ ಎಂದಾದರೂ ಯೋಚಿಸಿ ನೋಡಿದ್ದೀರೋ? ಯೆಹೋವನಿಂದ ಶಿಕ್ಷಿತರಾಗಿರುವುದರ ಫಲವಾಗಿ ನಮಗೆ ಸಿಗುತ್ತಿರುವ ಮಹೋನ್ನತ ಆಶೀರ್ವಾದಗಳಲ್ಲಿ ಕೆಲವೊಂದನ್ನು ನಾವು ಮನನ ಮಾಡುವಲ್ಲಿ, ಸುವಾರ್ತೆಯನ್ನು ಯಾವಾಗಲೂ ಗಣ್ಯಮಾಡಲು ಹಾಗೂ ಅದನ್ನು ಹುರುಪಿನಿಂದ ಇತರರಿಗೆ ತಿಳಿಸಲು ಶಕ್ತರಾಗುವೆವು.

ದೇವರಿಂದ ಶಿಕ್ಷಿತರಾಗುವ ಸುಯೋಗ

3. ಯೆಹೋವನು ಅಪರಿಪೂರ್ಣ ಮಾನವರಿಗೆ ಬೋಧಿಸಲು ಸಿದ್ಧನಿದ್ದಾನೆಂಬ ಖಾತ್ರಿ ನಮಗೇಕೆ ಇರಬಲ್ಲದು?

3 ಯೆಹೋವನು ಒಳ್ಳೆಯವನಾಗಿರುವುದರಿಂದ ಆತನು ಅಪರಿಪೂರ್ಣ ಮಾನವರಿಗೆ ಬೋಧಿಸಲು ಸಿದ್ಧನಾಗಿದ್ದಾನೆ. ಅಭಿಷಿಕ್ತ ಕ್ರೈಸ್ತರ ಕುರಿತು ಪ್ರವಾದನಾತ್ಮಕವಾಗಿ ಮಾತಾಡುತ್ತಾ ಯೆಶಾಯ 54:13 ಹೇಳುವುದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” ಈ ಮಾತುಗಳು ತತ್ತ್ವತಃ ಕ್ರಿಸ್ತನ “ಬೇರೆ ಕುರಿ”ಗಳಿಗೂ ಅನ್ವಯವಾಗುತ್ತವೆ. (ಯೋಹಾ. 10:16) ಇದು ನಮ್ಮ ದಿನದಲ್ಲಿ ನೆರವೇರುತ್ತಿರುವ ಒಂದು ಪ್ರವಾದನೆಯಿಂದ ಸ್ಪಷ್ಟವಾಗುತ್ತದೆ. ಸಕಲದೇಶಗಳ ಜನರು ಪ್ರವಾಹದಂತೆ ಸತ್ಯಾರಾಧನೆಯ ಕಡೆಗೆ ಬರುತ್ತಿರುವುದನ್ನು ಯೆಶಾಯನು ಒಂದು ದರ್ಶನದಲ್ಲಿ ನೋಡಿದನು. ಆ ಜನರು, “ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಪರಸ್ಪರ ಹೇಳುತ್ತಿರುವುದನ್ನು ಅವನು ವರ್ಣಿಸುತ್ತಾನೆ. (ಯೆಶಾ. 2:1-3) ದೇವರಿಂದ ಶಿಕ್ಷಿತರಾಗುವುದು ಎಂಥ ಒಂದು ಸುಯೋಗ!

4. ಯೆಹೋವನು ತನ್ನಿಂದ ಶಿಕ್ಷಿತರಾಗಲು ಬಯಸುವವರಿಂದ ಏನನ್ನು ಅವಶ್ಯಪಡಿಸುತ್ತಾನೆ?

4 ದೈವಿಕ ಶಿಕ್ಷಣವನ್ನು ಪಡೆಯಲು ನಾವೇನು ಮಾಡತಕ್ಕದ್ದು? ಒಂದು ಪ್ರಧಾನ ಆವಶ್ಯಕತೆಯೇನೆಂದರೆ ಒಬ್ಬ ವ್ಯಕ್ತಿಯು ದೀನಭಾವದವನಾಗಿರಬೇಕು. “ಯೆಹೋವನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿದ್ದಾನೆ; . . . ದೀನರಿಗೆ ತನ್ನ ಮಾರ್ಗವನ್ನು ಬೋಧಿಸುವನು” ಎಂದು ಕೀರ್ತನೆಗಾರ ದಾವೀದನು ಬರೆದನು. (ಕೀರ್ತ. 25:8, 9, NIBV) “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, ನೀನು ವಿವೇಕಿಗಳಿಗೂ ಜ್ಞಾನಿಗಳಿಗೂ ಈ ವಿಷಯಗಳನ್ನು ಜಾಗರೂಕತೆಯಿಂದ ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿರುವುದರಿಂದ ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ” ಎಂದು ಯೇಸು ಸಹ ಹೇಳಿದನು. (ಲೂಕ 10:21) ‘ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುವ’ ದೇವರ ಕಡೆಗೆ ನೀವು ಆಕರ್ಷಿತರಾಗುವುದಿಲ್ಲವೋ?—1 ಪೇತ್ರ 5:5.

5. ನಾವು ದೇವಜ್ಞಾನವನ್ನು ಹೇಗೆ ಪಡೆದಿದ್ದೇವೆ?

5 ಯೆಹೋವನ ಸೇವಕರಾದ ನಾವು, ನಮ್ಮ ಸ್ವಂತ ಸಾಮರ್ಥ್ಯ ಅಥವಾ ಬುದ್ಧಿಯಿಂದ ಸತ್ಯವನ್ನು ಕಂಡುಕೊಂಡಿದ್ದೇವೋ? ಇಲ್ಲ. ಸತ್ಯಾಂಶವೇನೆಂದರೆ, ನಾವು ನಮ್ಮಷ್ಟಕ್ಕೆ ದೇವಜ್ಞಾನವನ್ನು ಎಂದೂ ಪಡೆಯಲಿಕ್ಕಾಗುತ್ತಿರಲಿಲ್ಲ. “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು” ಎಂದು ಯೇಸು ಹೇಳಿದನು. (ಯೋಹಾ. 6:44) ಸಾರುವ ಕೆಲಸ ಮತ್ತು ಪವಿತ್ರಾತ್ಮದ ಮುಖಾಂತರ ಯೆಹೋವನು ಕುರಿಸದೃಶ ವ್ಯಕ್ತಿಗಳನ್ನು, ಅಂದರೆ ‘ಸಮಸ್ತಜನಾಂಗಗಳ ಇಷ್ಟವಸ್ತುಗಳನ್ನು’ ಸೆಳೆಯುತ್ತಿದ್ದಾನೆ. (ಹಗ್ಗಾ. 2:7) ಯೆಹೋವನು ತನ್ನ ಪುತ್ರನೆಡೆಗೆ ಸೆಳೆದಿರುವವರಲ್ಲಿ ನೀವೂ ಒಬ್ಬರಾಗಿರುವುದರಿಂದ ನೀವು ಆತನಿಗೆ ಆಭಾರಿಗಳಾಗಿಲ್ಲವೋ?—ಯೆರೆಮೀಯ 9:23, 24 ಓದಿ.

ಬದುಕನ್ನು ಸುಧಾರಿಸುವ ಶಕ್ತಿ

6. ‘ಯೆಹೋವನ ಜ್ಞಾನವನ್ನು’ ತೆಗೆದುಕೊಳ್ಳುವುದು ಜನರ ಮೇಲೆ ಯಾವ ಗಮನಾರ್ಹ ಪರಿಣಾಮಬೀರಬಲ್ಲದು?

6 ಒಂದು ಸುಂದರವಾದ ಚಿತ್ರಣವನ್ನು ಬಳಸುತ್ತಾ ಯೆಶಾಯನ ಪ್ರವಾದನೆಯು, ನಮ್ಮ ಸಮಯದಲ್ಲಿ ನಡೆಯುತ್ತಿರುವ ಮಾನವ ವ್ಯಕ್ತಿತ್ವಗಳ ಪರಿವರ್ತನೆಯನ್ನು ವರ್ಣಿಸುತ್ತದೆ. ಹಿಂದೆ ಹಿಂಸಾತ್ಮಕರಾಗಿದ್ದ ಜನರು ಶಾಂತಿಶೀಲರಾಗಿದ್ದಾರೆ. (ಯೆಶಾಯ 11:6-9 ಓದಿ.) ಭಿನ್ನ ಜಾತಿ, ರಾಷ್ಟ್ರ, ಕುಲ ಇಲ್ಲವೇ ಇನ್ನಾವುದೋ ಸಾಂಸ್ಕೃತಿಕ ಹಿನ್ನಲೆಯ ಕಾರಣ ಹಿಂದೆ ವೈರಿಗಳಾಗಿದ್ದವರು ಈಗ ಒಗ್ಗಟ್ಟಿನಿಂದಿರಲು ಕಲಿತುಕೊಂಡಿದ್ದಾರೆ. ಸಾಂಕೇತಿಕವಾಗಿ ಹೇಳುವುದಾದರೆ ಅವರು ‘ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡಿದ್ದಾರೆ.’ (ಯೆಶಾ. 2:4) ಈ ಗಮನಾರ್ಹ ಬದಲಾವಣೆಗಳಿಗೆ ಕಾರಣವೇನು? ಜನರು ‘ಯೆಹೋವನ ಜ್ಞಾನವನ್ನು’ ತೆಗೆದುಕೊಂಡು ಅದನ್ನು ತಮ್ಮ ಜೀವನದಲ್ಲಿ ಅನ್ವಯಿಸಿಕೊಂಡಿದ್ದಾರೆ. ದೇವರ ಸೇವಕರು ಅಪರಿಪೂರ್ಣರಾಗಿದ್ದರೂ ಅವರು ಅಂತಾರಾಷ್ಟ್ರೀಯ, ನಿಜ ಸಹೋದರತ್ವದ ಭಾಗವಾಗಿದ್ದಾರೆ. ವಿಶ್ವದಾದ್ಯಂತ ಎಲ್ಲ ರೀತಿಯ ಜನರನ್ನು ಆಕರ್ಷಿಸುತ್ತಿರುವ ಸುವಾರ್ತೆ ಮತ್ತು ಅದು ಫಲಿಸುತ್ತಿರುವ ಉತ್ತಮ ಫಲಗಳು, ದೈವಿಕ ಶಿಕ್ಷಣದ ಅಪಾರ ಮೌಲ್ಯಕ್ಕೆ ಸಾಕ್ಷ್ಯವಾಗಿವೆ.—ಮತ್ತಾ. 11:19.

7, 8. (ಎ) ದೈವಿಕ ಶಿಕ್ಷಣವು ಜನರಲ್ಲಿ “ಬಲವಾಗಿ ಬೇರೂರಿರುವ” ಯಾವ ಕೆಲವೊಂದು ವಿಷಯಗಳನ್ನು ಕೆಡವಿಹಾಕಲು ಸಹಾಯ ಮಾಡುತ್ತದೆ? (ಬಿ) ದೈವಿಕ ಶಿಕ್ಷಣವು ಯೆಹೋವನಿಗೆ ಸ್ತುತಿ ತರುತ್ತದೆಂದು ಯಾವುದು ತೋರಿಸುತ್ತದೆ?

7 ಅಪೊಸ್ತಲ ಪೌಲನು ದೇವರ ಸೇವಕರ ಶುಶ್ರೂಷೆಯನ್ನು ಆಧ್ಯಾತ್ಮಿಕ ಯುದ್ಧಕ್ಕೆ ಹೋಲಿಸಿದನು. ಅವನು ಬರೆದದ್ದು: “ಯುದ್ಧಕ್ಕಾಗಿ ನಾವು ಉಪಯೋಗಿಸುವ ಆಯುಧಗಳು ಶಾರೀರಿಕವಾದವುಗಳಾಗಿರದೆ ಬಲವಾಗಿ ಬೇರೂರಿರುವ ವಿಷಯಗಳನ್ನು ಕೆಡವಿಹಾಕಲು ದೇವರಿಂದ ಶಕ್ತಿಯನ್ನು ಹೊಂದಿದವುಗಳಾಗಿವೆ. ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ನಾವು ಕೆಡವಿಹಾಕುವವರಾಗಿದ್ದೇವೆ.” (2 ಕೊರಿಂ. 10:4, 5) ದೈವಿಕ ಶಿಕ್ಷಣವು ಜನರಲ್ಲಿ “ಬಲವಾಗಿ ಬೇರೂರಿರುವ ವಿಷಯಗಳನ್ನು” ತೆಗೆದುಹಾಕುವ ಮೂಲಕ ಅವರನ್ನು ಬಿಡಿಸುತ್ತದೆ. ಅವುಗಳಲ್ಲಿ ಕೆಲವು ಯಾವುವು? ಹೊರೆಯಂತಿರುವ ಸುಳ್ಳು ಬೋಧನೆಗಳು, ಮೂಢನಂಬಿಕೆಗಳು ಮತ್ತು ಮಾನವ ತತ್ತ್ವಜ್ಞಾನಗಳು ಇವುಗಳಲ್ಲಿ ಕೆಲವು. (ಕೊಲೊ. 2:8) ಕೆಟ್ಟ ಆಚಾರಗಳನ್ನು ಬಿಟ್ಟು, ದೇವರಿಗೆ ಮೆಚ್ಚಿಕೆಯಾಗುವ ಗುಣಗಳನ್ನು ಬೆಳೆಸಿಕೊಳ್ಳುವಂತೆ ದೈವಿಕ ಶಿಕ್ಷಣ ಜನರಿಗೆ ಸಹಾಯಮಾಡುತ್ತದೆ. (1 ಕೊರಿಂ. 6:9-11) ಅದು ಕೌಟುಂಬಿಕ ಜೀವನವನ್ನು ಉತ್ತಮಗೊಳಿಸುತ್ತದೆ. ನಿರೀಕ್ಷಾಹೀನರಿಗೆ ಜೀವನದಲ್ಲಿ ನಿಜ ಉದ್ದೇಶವನ್ನು ಕೊಡುತ್ತದೆ. ಇಂದು ಅಗತ್ಯವಿರುವುದು ಈ ರೀತಿಯ ಶಿಕ್ಷಣವೇ.

8 ಜನರು ಬೆಳೆಸಿಕೊಳ್ಳುವಂತೆ ಯೆಹೋವನು ಸಹಾಯಮಾಡುವ ಗುಣಗಳಲ್ಲಿ ಒಂದು, ಪ್ರಾಮಾಣಿಕತೆ ಆಗಿದೆ. ಇದನ್ನೇ ಮುಂದಿನ ಅನುಭವ ತೋರಿಸುತ್ತದೆ. (ಇಬ್ರಿ. 13:18) ಭಾರತದ ಮಹಿಳೆಯೊಬ್ಬಳು ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಳು. ಕಾಲಾನಂತರ ಆಕೆ ಅಸ್ನಾತ ಪ್ರಚಾರಕಳಾದಳು. ಒಮ್ಮೆ ಆಕೆ ರಾಜ್ಯ ಸಭಾಗೃಹ ನಿರ್ಮಾಣಕಾರ್ಯದ ನಿವೇಶನದಲ್ಲಿ ಕೆಲಸಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ಬಸ್‌ ನಿಲ್ದಾಣದ ಬಳಿ ಆಕೆಗೆ ಸುಮಾರು 40,000 ರೂ. ಬೆಲೆಬಾಳುವ ಚಿನ್ನದ ಸರ ಸಿಕ್ಕಿತು. ಆಕೆ ಬಡವಳಾಗಿದ್ದರೂ ಅದನ್ನು ಪೊಲೀಸ್‌ ಠಾಣೆಗೆ ಹೋಗಿ ಕೊಟ್ಟುಬಿಟ್ಟಳು. ಅಲ್ಲಿದ್ದ ಪೊಲೀಸ್‌ ಅಧಿಕಾರಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ! ನಂತರ ಅವನು ಆಕೆಗೆ, ‘ನೀನೇಕೆ ಸರವನ್ನು ಇಟ್ಟುಕೊಳ್ಳಲಿಲ್ಲ’ ಎಂದು ಕೇಳಿದ. “ಬೈಬಲ್‌ ಸತ್ಯ ನನ್ನನ್ನು ಪರಿವರ್ತಿಸಿದೆ, ಆದುದರಿಂದ ನಾನೀಗ ಪ್ರಾಮಾಣಿಕ ವ್ಯಕ್ತಿಯಾಗಿದ್ದೇನೆ” ಎಂದಾಕೆ ವಿವರಿಸಿದಳು. ಇದರಿಂದ ಪ್ರಭಾವಿತನಾದ ಅವನು ಆಕೆಯೊಟ್ಟಿಗೆ ಠಾಣೆಗೆ ಬಂದಿದ್ದ ಕ್ರೈಸ್ತ ಹಿರಿಯನಿಗೆ, “ಈ ರಾಜ್ಯದಲ್ಲಿರುವ ಸುಮಾರು 4 ಕೋಟಿ ಜನರಲ್ಲಿ ನೀವು ಬರೀ ಹತ್ತು ಮಂದಿಯನ್ನು ಈ ಸ್ತ್ರೀಯಂತೆ ಮಾಡುವುದಾದರೂ ಅದೊಂದು ದೊಡ್ಡ ಸಾಧನೆಯೇ ಸರಿ.” ದೈವಿಕ ಶಿಕ್ಷಣದಿಂದ ಲಕ್ಷಾಂತರ ಮಂದಿಯ ಬದುಕಿನಲ್ಲಾಗಿರುವ ಸುಧಾರಣೆಯನ್ನು ನಾವು ಪರಿಗಣಿಸುವಾಗ, ಯೆಹೋವನಿಗೆ ಸ್ತುತಿ ಅರ್ಪಿಸಲು ನಮಗೆ ಹೇರಳ ಕಾರಣಗಳು ಸಿಗುತ್ತವಲ್ಲವೇ?

9. ಜನರು ತಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡಲು ಹೇಗೆ ಸಾಧ್ಯವಾಗಿದೆ?

9 ದೇವರ ವಾಕ್ಯಕ್ಕಿರುವ ರೂಪಾಂತರಿಸುವ ಶಕ್ತಿಯ ಜೊತೆಗೆ ಪವಿತ್ರಾತ್ಮದ ಮೂಲಕ ಯೆಹೋವನು ಕೊಡುವ ಸಹಾಯದಿಂದಾಗಿ, ಜನರು ತಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡಲು ಶಕ್ತರಾಗುತ್ತಾರೆ. (ರೋಮ. 12:2; ಗಲಾ. 5:22, 23) ಕೊಲೊಸ್ಸೆ 3:10 ಹೇಳುವುದು: “ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ; ಈ ವ್ಯಕ್ತಿತ್ವವು ಇದನ್ನು ಸೃಷ್ಟಿಸಿದಾತನ ಸ್ವರೂಪಕ್ಕನುಸಾರ ನಿಷ್ಕೃಷ್ಟ ಜ್ಞಾನದ ಮೂಲಕ ನೂತನಗೊಳಿಸಲ್ಪಡುತ್ತಿದೆ.” ದೇವರ ವಾಕ್ಯವಾದ ಬೈಬಲ್‌ನಲ್ಲಿರುವ ಸಂದೇಶಕ್ಕೆ ಒಬ್ಬ ವ್ಯಕ್ತಿಯು ಅಂತರಂಗದಲ್ಲಿ ಎಂಥವನಾಗಿದ್ದಾನೆ ಎಂಬುದನ್ನು ಬಯಲುಪಡಿಸುವ ಶಕ್ತಿಯಿದೆ. ಅದು, ಅವನು ಯೋಚಿಸುವ ರೀತಿಯನ್ನೂ, ಯಾವುದೇ ವಿಷಯದ ಕುರಿತ ಅವನ ಅನಿಸಿಕೆಯನ್ನೂ ಬದಲಾಯಿಸಬಲ್ಲದು. (ಇಬ್ರಿಯ 4:12 ಓದಿ.) ಬೈಬಲ್‌ನ ನಿಷ್ಕೃಷ್ಟ ಜ್ಞಾನವನ್ನು ಪಡೆದು, ತನ್ನ ಜೀವನವನ್ನು ಯೆಹೋವನ ನೀತಿಯುತ ಮಟ್ಟಗಳಿಗೆ ಹೊಂದಿಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ದೇವರ ಸ್ನೇಹಿತನಾಗಬಲ್ಲನು. ಆಗ ಅವನಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆಯೂ ಇರುವುದು.

ಭವಿಷ್ಯತ್ತಿಗಾಗಿ ಸಿದ್ಧತೆ

10. (ಎ) ಭವಿಷ್ಯತ್ತಿಗಾಗಿ ನಮ್ಮನ್ನು ಸಿದ್ಧಪಡಿಸಲು ಯೆಹೋವನಿಗೆ ಮಾತ್ರ ಸಾಧ್ಯ ಏಕೆ? (ಬಿ) ಯಾವ ನಾಟಕೀಯ ಬದಲಾವಣೆಗಳು ಬೇಗನೆ ಇಡೀ ಭೂಮಿಯನ್ನು ಬಾಧಿಸಲಿವೆ?

10 ಭವಿಷ್ಯತ್ತಿಗಾಗಿ ಸಿದ್ಧತೆಮಾಡಲು ನಮಗೆ ನೆರವುನೀಡಬಲ್ಲ ಏಕೈಕ ವ್ಯಕ್ತಿ ಯೆಹೋವನು. ಏಕೆಂದರೆ ಭವಿಷ್ಯತ್ತಿನಲ್ಲಿ ಏನಿದೆಯೆಂಬುದು ಆತನಿಗೆ ತಿಳಿದಿದೆ. ಮಾನವಕುಲದ ಭವಿಷ್ಯತ್ತು ಹೇಗಿರಬೇಕೆಂದು ನಿರ್ಧರಿಸುವವನು ಆತನೇ. (ಯೆಶಾ. 46:9, 10) “ಯೆಹೋವನ ಮಹಾದಿನವು ಹತ್ತಿರವಾಯಿತು” ಎಂದು ಬೈಬಲ್‌ ಪ್ರವಾದನೆ ಪ್ರಕಟಪಡಿಸುತ್ತದೆ. (ಚೆಫ. 1:14) ಆ ದಿನದ ಬಗ್ಗೆ ಜ್ಞಾನೋಕ್ತಿ 11:4ರ ಈ ಮಾತುಗಳು ಸತ್ಯವಾಗುವವು: “ಧನವು ಕೋಪದ ದಿನದಲ್ಲಿ ವ್ಯರ್ಥ; ಧರ್ಮವು ಮರಣವಿಮೋಚಕ.” ಸೈತಾನನ ಲೋಕದ ಮೇಲೆ ಯೆಹೋವನ ನ್ಯಾಯತೀರ್ಪು ಜಾರಿಗೊಳ್ಳುವ ಸಮಯ ಆಗಮಿಸುವಾಗ, ದೇವರ ಮುಂದೆ ನಮ್ಮ ನಿಲುವು ಏನಾಗಿದೆ ಎಂಬುದೇ ಮಹತ್ತ್ವದ ವಿಷಯವಾಗಿರುವುದು. ಹಣವು ನಿಷ್ಪ್ರಯೋಜಕವಾಗಿರುವುದು. ವಾಸ್ತವದಲ್ಲಿ ಯೆಹೆಜ್ಕೇಲ 7:19 ಹೇಳುವುದು: “ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧಪದಾರ್ಥದಂತಿರುವದು.” ಈ ಮುನ್ನರಿವು, ನಾವು ಈಗಲೇ ವಿವೇಕದಿಂದ ಕ್ರಿಯೆಗೈಯುವಂತೆ ಸಹಾಯ ಮಾಡಬಲ್ಲದು.

11. ದೈವಿಕ ಶಿಕ್ಷಣವು ನಮ್ಮನ್ನು ಭವಿಷ್ಯತ್ತಿಗಾಗಿ ಸಿದ್ಧಗೊಳಿಸುವ ಒಂದು ವಿಧ ಯಾವುದು?

11 ಆಗಮಿಸುತ್ತಿರುವ ಯೆಹೋವನ ದಿನಕ್ಕಾಗಿ ದೈವಿಕ ಶಿಕ್ಷಣವು ನಮ್ಮನ್ನು ಸಿದ್ಧಪಡಿಸುವ ಒಂದು ವಿಶಿಷ್ಟ ವಿಧ ಯಾವುದೆಂದರೆ, ಅದು ನಾವು ಸರಿಯಾದ ಆದ್ಯತೆಗಳನ್ನಿಡಲು ಸಹಾಯಮಾಡುತ್ತದೆ. ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದದ್ದು: “ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಐಶ್ವರ್ಯವಂತರಾಗಿರುವವರು ಅಹಂಕಾರಿಗಳಾಗಿರದೆ ತಮ್ಮ ನಿರೀಕ್ಷೆಯನ್ನು ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ, . . . ದೇವರ ಮೇಲೆ ಇಡುವಂತೆ . . . ಅವರಿಗೆ ಆಜ್ಞಾಪಿಸು.” ನಮ್ಮ ಬಳಿ ತುಂಬ ಹಣವಿಲ್ಲದಿದ್ದರೂ, ಈ ದೇವಪ್ರೇರಿತ ಸಲಹೆಯಿಂದ ನಮಗೂ ಒಳಿತಾಗುವುದು. ಈ ಸಲಹೆಯಲ್ಲಿ ಏನೆಲ್ಲ ಒಳಗೂಡಿದೆ? ಭೌತಿಕ ಐಶ್ವರ್ಯವನ್ನು ಕೂಡಿಸಿಡುವ ಬದಲು, ನಾವು “ಒಳ್ಳೇದನ್ನು ಮಾಡುವವರಾಗಿರುವಂತೆಯೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವಂತೆಯೂ” ಪ್ರಯಾಸಪಡಬೇಕು. ನಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಪ್ರಥಮವಾಗಿಡುವ ಮೂಲಕ ನಾವು ‘ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು ಶೇಖರಿಸಿಟ್ಟುಕೊಳ್ಳುತ್ತೇವೆ.’ (1 ತಿಮೊ. 6:17-19) ಇಂಥ ಸ್ವತ್ಯಾಗದ ಜೀವನಕ್ರಮವು ಪ್ರಾಯೋಗಿಕ ವಿವೇಕವನ್ನು ತೋರ್ಪಡಿಸುತ್ತದೆ. ಏಕೆಂದರೆ ಯೇಸು ಹೇಳಿದಂತೆ, “ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” (ಮತ್ತಾ. 16:26, 27) ಯೆಹೋವನ ದಿನವು ತೀರ ಹತ್ತಿರವಿರುವುದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ, ‘ನಾನು ಸಂಪತ್ತನ್ನು ಎಲ್ಲಿ ಕೂಡಿಸಿಡುತ್ತಿದ್ದೇನೆ? ನಾನು ದೇವರ ಸೇವೆ ಮಾಡುತ್ತಿದ್ದೇನೋ ಐಶ್ವರ್ಯದ ಸೇವೆ ಮಾಡುತ್ತಿದ್ದೇನೋ?’ ಎಂಬುದನ್ನು ಪರಿಗಣಿಸಬೇಕು.—ಮತ್ತಾ. 6:19, 20, 24.

12. ಕೆಲವರು ನಮ್ಮ ಶುಶ್ರೂಷೆಯನ್ನು ತುಚ್ಛವೆಂದೆಣಿಸಿದರೂ ನಾವೇಕೆ ನಿರುತ್ತೇಜಿತರಾಗಬಾರದು?

12 ದೇವರ ವಾಕ್ಯದಲ್ಲಿ ಕ್ರೈಸ್ತರಿಗಾಗಿ ತಿಳಿಸಲಾಗಿರುವ ‘ಸತ್ಕಾರ್ಯಗಳಲ್ಲಿ’ ಅತಿ ಪ್ರಧಾನವಾದದ್ದು, ರಾಜ್ಯ ಸಾರುವ ಹಾಗೂ ಶಿಷ್ಯರನ್ನು ಮಾಡುವ ಜೀವರಕ್ಷಕ ಕೆಲಸವಾಗಿದೆ. (ಮತ್ತಾ. 24:14; 28:19, 20) ಪ್ರಥಮ ಶತಮಾನದಲ್ಲಾದಂತೆ ಕೆಲವರು ನಮ್ಮ ಶುಶ್ರೂಷೆಯನ್ನು ತುಚ್ಛವೆಂದೆಣಿಸಬಹುದು. (1 ಕೊರಿಂಥ 1:18-21 ಓದಿ.) ಆದರೆ ಇದರಿಂದ ನಮ್ಮ ಸಂದೇಶದ ಮೌಲ್ಯವೇನೂ ಕಡಿಮೆಯಾಗುವುದಿಲ್ಲ. ಅಲ್ಲದೆ, ಕಾಲ ಮಿಂಚಿ ಹೋಗುವ ಮುಂಚೆ ಆ ಸಂದೇಶದಲ್ಲಿ ನಂಬಿಕೆಯಿಡುವಂತೆ ಎಲ್ಲರಿಗೂ ಅವಕಾಶವನ್ನು ಕೊಡುವುದರ ಮಹತ್ತ್ವವೂ ಕಡಿಮೆಯಾಗುವುದಿಲ್ಲ. (ರೋಮ. 10:13, 14) ದೈವಿಕ ಶಿಕ್ಷಣದಿಂದ ಪ್ರಯೋಜನ ಪಡೆಯುವಂತೆ ಇತರರಿಗೆ ಸಹಾಯ ಮಾಡುವಾಗ ನಾವು ಸಹ ಅನೇಕ ಆಶೀರ್ವಾದಗಳನ್ನು ಪಡೆಯುತ್ತೇವೆ.

ತ್ಯಾಗಗಳನ್ನು ಮಾಡಿದ್ದಕ್ಕಾಗಿ ಆಶೀರ್ವದಿತರು

13. ಅಪೊಸ್ತಲ ಪೌಲನು ಸುವಾರ್ತೆಗೋಸ್ಕರ ಯಾವ ತ್ಯಾಗಗಳನ್ನು ಮಾಡಿದನು?

13 ಅಪೊಸ್ತಲ ಪೌಲನು ಕ್ರೈಸ್ತನಾಗುವ ಮುಂಚೆ, ಯೆಹೂದಿ ವಿಷಯ ವ್ಯವಸ್ಥೆಯಲ್ಲಿ ಯಶಸ್ಸಿನ ಉತ್ತುಂಗಕ್ಕೇರಲು ತರಬೇತಿ ಪಡೆಯುತ್ತಿದ್ದನು. ಬಹುಶಃ 13 ವರ್ಷದವನಾಗಿದ್ದಾಗಲೇ, ಅತಿ ಗಣ್ಯ ಧರ್ಮೋಪದೇಶಕನಾದ ಗಮಲಿಯೇಲನಿಂದ ಕಲಿಯಲಿಕ್ಕಾಗಿ ಅವನು ತನ್ನ ಹುಟ್ಟೂರಾದ ತಾರ್ಸವನ್ನು ಬಿಟ್ಟು ಯೆರೂಸಲೇಮಿಗೆ ಬಂದಿದ್ದನು. (ಅ. ಕಾ. 22:3) ಕಾಲಾನಂತರ ಪೌಲನು, ತನ್ನ ಸಮಕಾಲೀನರಲ್ಲಿ ಎದ್ದುಕಾಣಲಾರಂಭಿಸಿದನು. ಅವನು ಅದೇ ಹಾದಿಯನ್ನು ಕ್ರಮಿಸುತ್ತಿದ್ದಲ್ಲಿ, ಮುಂದೊಂದು ದಿನ ಯೆಹೂದಿ ಮತದಲ್ಲಿ ಪ್ರತಿಷ್ಠಿತ ಸ್ಥಾನಕ್ಕೇರುತ್ತಿದ್ದನು. (ಗಲಾ. 1:13, 14) ಆದರೆ ಅವನು ಸುವಾರ್ತೆಯನ್ನು ಸ್ವೀಕರಿಸಿ, ಸಾರುವ ಕೆಲಸವನ್ನು ಕೈಗೆತ್ತಿಕೊಂಡಾಗ ಅದೆಲ್ಲವನ್ನೂ ಬಿಟ್ಟುಬಿಟ್ಟನು. ತನ್ನ ಈ ಆಯ್ಕೆಯ ಬಗ್ಗೆ ಪೌಲನು ಎಂದಾದರೂ ವಿಷಾದಪಟ್ಟನೋ? ಇಲ್ಲ. ಬದಲಾಗಿ ಅವನು ಬರೆದದ್ದು: “ನನ್ನ ಕರ್ತನಾದ ಕ್ರಿಸ್ತ ಯೇಸುವಿನ ಕುರಿತಾದ ಜ್ಞಾನದ ಅಪಾರವಾದ ಮೌಲ್ಯದ ನಿಮಿತ್ತ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ; ಅವನ ನಿಮಿತ್ತ ನಾನು ಎಲ್ಲವನ್ನೂ ನಷ್ಟವೆಂದು ಪರಿಗಣಿಸಿ ಅವುಗಳನ್ನು ಕಸವೆಂದೆಣಿಸುತ್ತೇನೆ.”—ಫಿಲಿ. 3:8.

14, 15. “ದೇವರ ಜೊತೆಕೆಲಸಗಾರರಾಗಿ” ನಾವು ಯಾವ ಆಶೀರ್ವಾದಗಳನ್ನು ಪಡೆಯುತ್ತೇವೆ?

14 ಪೌಲನಂತೆ, ಇಂದು ಕ್ರೈಸ್ತರು ಸುವಾರ್ತೆಗೋಸ್ಕರ ತ್ಯಾಗಗಳನ್ನು ಮಾಡುತ್ತಾರೆ. (ಮಾರ್ಕ 10:29, 30) ಹೀಗೆ ಮಾಡುವುದರಿಂದ ನಮಗೆ ಯಾವುದೇ ವಿಷಯದಲ್ಲಿ ಕೊರತೆಯಾಗುತ್ತದೋ? ಆರಂಭದಲ್ಲಿ ತಿಳಿಸಲಾಗಿರುವ ರಾಬರ್ಟ್‌ ವ್ಯಕ್ತಪಡಿಸಿರುವ ಅನಿಸಿಕೆಯೇ ಅನೇಕರಿಗಿದೆ. ಅವನನ್ನುವುದು: “ನನಗೆ ಸ್ವಲ್ಪವೂ ವಿಷಾದವಿಲ್ಲ. ಪೂರ್ಣ ಸಮಯದ ಶುಶ್ರೂಷೆಯು ನನಗೆ ಆನಂದ ಹಾಗೂ ತೃಪ್ತಿಯನ್ನು ಕೊಟ್ಟಿದೆ ಮತ್ತು ‘ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡುವಂತೆ’ ಅವಕಾಶಕೊಟ್ಟಿದೆ. ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟಲಿಕ್ಕೋಸ್ಕರ ನಾನು ಭೌತಿಕ ತ್ಯಾಗಗಳನ್ನು ಮಾಡಿದಾಗಲೆಲ್ಲ, ನಾನು ತ್ಯಾಗಮಾಡಿದ್ದಕ್ಕಿಂತಲೂ ಹೆಚ್ಚನ್ನು ಕೊಟ್ಟು ಯೆಹೋವನು ನನ್ನನ್ನು ಆಶೀರ್ವದಿಸಿದ್ದಾನೆ. ನಾನೇನೂ ತ್ಯಾಗ ಮಾಡಿಯೇ ಇಲ್ಲವೆಂಬಂತೆ ಅನಿಸುತ್ತದೆ. ನಾನು ಬರೀ ಗಳಿಸಿದ್ದೇನೆ ಅಷ್ಟೇ!”—ಕೀರ್ತ. 34:8; ಜ್ಞಾನೋ. 10:22.

15 ನೀವೀಗ ಬಹಳಷ್ಟು ಸಮಯದಿಂದ ಸಾರುವ ಹಾಗೂ ಬೋಧಿಸುವ ಕೆಲಸವನ್ನು ಮಾಡುತ್ತಿರುವಲ್ಲಿ, ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡುವ ಅವಕಾಶಗಳು ನಿಸ್ಸಂದೇಹವಾಗಿ ನಿಮಗೂ ಸಿಕ್ಕಿವೆ. ನೀವು ಸುವಾರ್ತೆಯನ್ನು ತಿಳಿಸುತ್ತಿರುವಾಗ ಆತನ ಆತ್ಮವು ಸಹಾಯ ಮಾಡುತ್ತಿರುವುದನ್ನು ಗ್ರಹಿಸಿದ್ದೀರೋ? ಇತರರು ಸಂದೇಶಕ್ಕೆ ಗಮನಕೊಡುವಂತೆ ಯೆಹೋವನು ಅವರ ಹೃದಯವನ್ನು ತೆರೆದಂತೆ ಅವರ ಕಣ್ಣುಗಳು ಬೆಳಗುವುದನ್ನು ನೋಡಿದ್ದೀರೋ? (ಅ. ಕಾ. 16:14) ತಡೆಗಳನ್ನು ದಾಟಲು ಮತ್ತು ನಿಮ್ಮ ಶುಶ್ರೂಷೆಯನ್ನು ಹೆಚ್ಚಿಸಲು ಮಾರ್ಗವನ್ನು ತೆರೆಯುವ ಮೂಲಕ ಯೆಹೋವನು ಸಹಾಯಮಾಡಿದ್ದಾನೋ? ಕಷ್ಟದ ಸಮಯಗಳಲ್ಲಿ, ನಿಮಗಿದ್ದ ಬಲವೆಲ್ಲ ಕ್ಷೀಣಿಸುತ್ತಿದೆಯೆಂದು ನಿಮಗನಿಸುತ್ತಿದ್ದಾಗ ಆತನನ್ನು ಸೇವಿಸುತ್ತಾ ಇರುವಂತೆ ಶಕ್ತಿಕೊಟ್ಟು ಆತನು ನಿಮ್ಮನ್ನು ಬೆಂಬಲಿಸಿದ್ದಾನೋ? (ಫಿಲಿ. 4:13) ನಮ್ಮ ಶುಶ್ರೂಷೆಯನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ನಾವು ವೈಯಕ್ತಿಕವಾಗಿ ಯೆಹೋವನ ಸಹಾಯವನ್ನು ಅನುಭವಿಸುವಾಗ, ಆತನು ನಮಗೆ ಹೆಚ್ಚು ನೈಜನಾಗುತ್ತಾನೆ ಮತ್ತು ನಾವು ಆತನಿಗೆ ಹೆಚ್ಚು ಆಪ್ತರಾಗುತ್ತೇವೆ. (ಯೆಶಾ. 41:10) ದೈವಿಕ ಶಿಕ್ಷಣವೆಂಬ ಮಹತ್ತರ ಕೆಲಸದಲ್ಲಿ ‘ದೇವರ ಜೊತೆಕೆಲಸಗಾರರಲ್ಲಿ’ ಒಬ್ಬರಾಗಿರುವುದು ಎಂಥ ಒಂದು ಆಶೀರ್ವಾದವಲ್ಲವೇ?—1 ಕೊರಿಂ. 3:9.

16. ದೈವಿಕ ಶಿಕ್ಷಣದ ಸಂಬಂಧದಲ್ಲಿ ಮಾಡಲಾಗುವ ಪ್ರಯತ್ನಗಳು ಹಾಗೂ ತ್ಯಾಗಗಳ ಕುರಿತು ನಿಮಗೆ ಹೇಗನಿಸುತ್ತದೆ?

16 ಅನೇಕರು ತಮ್ಮ ಜೀವಮಾನದಲ್ಲಿ, ಚಿರಕಾಲಕ್ಕೂ ಉಳಿಯುವಂಥ ಸಾಧನೆ ಮಾಡಲು ಬಯಸುತ್ತಾರೆ. ಇಂದಿನ ಲೋಕದಲ್ಲಾದರೋ, ದೊಡ್ಡ ದೊಡ್ಡ ಸಾಧನೆಗಳನ್ನು ಸಹ ಬೇಗನೆ ಮರೆತುಬಿಡಲಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ, ಯೆಹೋವನು ತನ್ನ ಹೆಸರಿನ ಪವಿತ್ರೀಕರಣದ ಸಂಬಂಧದಲ್ಲಿ ಪೂರೈಸುತ್ತಿರುವ ಆಧುನಿಕ ದಿನದ ಕೆಲಸಗಳು, ದೇವಪ್ರಭುತ್ವಾತ್ಮಕ ಇತಿಹಾಸದ ಭಾಗವಾಗಿ ಕಾಯಂ ಆಗಿ ದಾಖಲೆಯಲ್ಲಿರುವವು. ಅವುಗಳನ್ನು ಸದಾಕಾಲ ಸ್ಮರಿಸಲಾಗುವುದು. (ಜ್ಞಾನೋ. 10:7; ಇಬ್ರಿ. 6:10) ಇತಿಹಾಸ ಸೃಷ್ಟಿಸಲಿರುವ ದೈವಿಕ ಶಿಕ್ಷಣದ ಈ ಕೆಲಸದಲ್ಲಿ ಪಾಲ್ಗೊಳ್ಳಲು ನಮಗಿರುವ ಸುಯೋಗವನ್ನು ನಾವು ಬಹುಮೂಲ್ಯವೆಂದೆಣಿಸೋಣ.

ನಿಮ್ಮ ಉತ್ತರವೇನು?

• ಯೆಹೋವನು ತನ್ನಿಂದ ಶಿಕ್ಷಿತರಾಗಲು ಬಯಸುವವರಿಂದ ಏನನ್ನು ಅವಶ್ಯಪಡಿಸುತ್ತಾನೆ?

• ದೈವಿಕ ಶಿಕ್ಷಣವು ಜನರ ಬದುಕನ್ನು ಹೇಗೆ ಸುಧಾರಿಸುತ್ತದೆ?

• ದೈವಿಕ ಶಿಕ್ಷಣದಿಂದ ಪ್ರಯೋಜನಹೊಂದುವಂತೆ ಇತರರಿಗೆ ಸಹಾಯ ಮಾಡುವುದರಿಂದ ಯಾವ ವಿಧಗಳಲ್ಲಿ ಆಶೀರ್ವದಿಸಲ್ಪಡುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರ]

ಯೆಹೋವನಿಂದ ಶಿಕ್ಷಿತರಾದವರು ನಿಜವಾಗಿಯೂ ಅಂತಾರಾಷ್ಟ್ರೀಯವಾದ ಸಹೋದರತ್ವದ ಭಾಗವಾಗಿದ್ದಾರೆ

[ಪುಟ 24ರಲ್ಲಿರುವ ಚಿತ್ರ]

‘ದೇವರ ಜೊತೆಕೆಲಸಗಾರರಲ್ಲಿ’ ಒಬ್ಬರಾಗಿರುವುದು ಒಂದು ಆಶೀರ್ವಾದವಲ್ಲವೋ?