ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪವಿತ್ರಾತ್ಮದಿಂದ ಪ್ರಜ್ವಲಿಸಿರಿ”

“ಪವಿತ್ರಾತ್ಮದಿಂದ ಪ್ರಜ್ವಲಿಸಿರಿ”

“ಪವಿತ್ರಾತ್ಮದಿಂದ ಪ್ರಜ್ವಲಿಸಿರಿ”

“ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ. ಪವಿತ್ರಾತ್ಮದಿಂದ ಪ್ರಜ್ವಲಿಸಿರಿ. ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ.”—ರೋಮ. 12:11.

1. ಪ್ರಾಣಿ ಯಜ್ಞಗಳನ್ನು ಮತ್ತು ಇತರ ನೈವೇದ್ಯಗಳನ್ನು ಇಸ್ರಾಯೇಲ್ಯರು ಅರ್ಪಿಸಿದ್ದೇಕೆ?

ಯೆಹೋವನ ಸೇವಕರು ಆತನ ಮೇಲಿನ ಪ್ರೀತಿಯನ್ನು ತೋರಿಸಲು ಮತ್ತು ಆತನ ಚಿತ್ತಕ್ಕೆ ಅಧೀನತೆ ಸೂಚಿಸಲು ಸಿದ್ಧಮನಸ್ಸಿನಿಂದ ಕೊಡುವ ಯಜ್ಞಗಳನ್ನು ಆತನು ಗಣ್ಯಮಾಡುತ್ತಾನೆ. ಪುರಾತನ ಸಮಯಗಳಲ್ಲಿ, ಆತನು ವಿಭಿನ್ನ ಪ್ರಾಣಿ ಯಜ್ಞಗಳನ್ನೂ ಇತರ ನೈವೇದ್ಯಗಳನ್ನೂ ಸ್ವೀಕರಿಸಿದನು. ಪಾಪ ಕ್ಷಮೆಯನ್ನು ಪಡೆಯಲು ಮತ್ತು ಕೃತಜ್ಞತೆ ಸೂಚಿಸಲು ಇಸ್ರಾಯೇಲ್ಯರು ಅವುಗಳನ್ನು ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅರ್ಪಿಸುತ್ತಿದ್ದರು. ಕ್ರೈಸ್ತ ಸಭೆಯಲ್ಲಿ, ಯೆಹೋವನು ಔಪಚಾರಿಕವಾದ ಅಂಥ ಭೌತಿಕ ಯಜ್ಞಗಳನ್ನು ನಮ್ಮಿಂದ ಕೇಳಿಕೊಳ್ಳುವುದಿಲ್ಲ. ಆದಾಗ್ಯೂ, ರೋಮ್‌ನಲ್ಲಿನ ಕ್ರೈಸ್ತರಿಗೆ ಬರೆದ ಪತ್ರದ 12ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು, ನಮ್ಮಿಂದ ಈಗಲೂ ಯಜ್ಞಗಳನ್ನು ಕೇಳಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸುತ್ತಾನೆ. ಅದನ್ನು ಅರ್ಪಿಸುವುದು ಹೇಗೆಂಬುದನ್ನು ನಾವೀಗ ನೋಡೋಣ.

ಸಜೀವ ಯಜ್ಞ

2. ಕ್ರೈಸ್ತರೋಪಾದಿ ನಾವು ಯಾವ ರೀತಿಯ ಜೀವನ ನಡೆಸುತ್ತೇವೆ, ಮತ್ತು ಅದರಲ್ಲಿ ಏನು ಒಳಗೂಡಿದೆ?

2ರೋಮನ್ನರಿಗೆ 12:1, 2 ಓದಿ. ಅಭಿಷಿಕ್ತ ಕ್ರೈಸ್ತರು ಈ ಮುಂಚೆ ಯೆಹೂದ್ಯರಾಗಿದ್ದಿರಲಿ ಅನ್ಯರಾಗಿರಲಿ ಅವರು ದೇವರ ಮುಂದೆ ನೀತಿವಂತರೆಂದು ನಿರ್ಣಯಿಸಲ್ಪಡುವುದು ಕಾರ್ಯಗಳಿಂದಲ್ಲ ಬದಲಾಗಿ ನಂಬಿಕೆಯಿಂದಲೇ ಎಂಬುದನ್ನು ಪೌಲನು ತನ್ನ ಪತ್ರದ ಆರಂಭದ ಭಾಗದಲ್ಲಿ ಸ್ಪಷ್ಟವಾಗಿ ತೋರ್ಪಡಿಸಿದನು. (ರೋಮ. 1:16; 3:20-24) ಕ್ರೈಸ್ತರು ಸ್ವತ್ಯಾಗದ ಜೀವನದ ಮೂಲಕ ತಮ್ಮ ಕೃತಜ್ಞತೆಯನ್ನು ತೋರಿಸಬೇಕೆಂಬುದನ್ನು ಪೌಲನು 12ನೇ ಅಧ್ಯಾಯದಲ್ಲಿ ವಿವರಿಸುತ್ತಾನೆ. ಹಾಗೆ ಮಾಡಲು ನಾವು ನಮ್ಮ ಮನಸ್ಸನ್ನು ಮಾರ್ಪಡಿಸಬೇಕು. ಪಾಪವನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ ನಾವು ‘ಪಾಪ ಮತ್ತು ಮರಣದ ನಿಯಮಕ್ಕೆ’ ಒಳಗಾಗಿದ್ದೇವೆ. (ರೋಮ. 8:2) ಆದ್ದರಿಂದ ನಾವು ಮಾರ್ಪಡಿಸಲ್ಪಡಬೇಕು ಅಂದರೆ, ನಮ್ಮ ಪ್ರವೃತ್ತಿಗಳನ್ನು ಪೂರ್ಣವಾಗಿ ಬದಲಾಯಿಸುವ ಮೂಲಕ ‘ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು.’ (ಎಫೆ. 4:23) ದೇವರ ಮತ್ತು ಆತನ ಪವಿತ್ರಾತ್ಮದ ಸಹಾಯದಿಂದ ಮಾತ್ರ ಅಂಥ ಸಂಪೂರ್ಣ ಬದಲಾವಣೆ ಮಾಡಲು ಸಾಧ್ಯ. ನಮ್ಮ ‘ವಿವೇಚನಾಶಕ್ತಿಯನ್ನು’ ಉಪಯೋಗಿಸುತ್ತಾ ನಾವು ಕಠಿನ ಪ್ರಯತ್ನ ಮಾಡುವುದೂ ಅಗತ್ಯ. ಇದರರ್ಥ, ಈ ಲೋಕದ ಭ್ರಷ್ಟ ನೈತಿಕತೆ, ನೀಚಮಟ್ಟದ ಮನೋರಂಜನೆ ಮತ್ತು ವಿಕೃತ ಮನಸ್ಸಿನ ಸಮೇತ ‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡದಂತೆ’ ನಾವು ನಮ್ಮಿಂದಾದದ್ದೆಲ್ಲವನ್ನೂ ಮಾಡಬೇಕು.—ಎಫೆ. 2:1-3.

3. ನಾವು ಕ್ರೈಸ್ತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೇಕೆ?

3 “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು” ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳಲಿಕ್ಕಾಗಿಯೂ ನಮ್ಮ ‘ವಿವೇಚನಾಶಕ್ತಿಯನ್ನು’ ಉಪಯೋಗಿಸುವಂತೆ ಪೌಲನು ನಮ್ಮನ್ನು ಆಮಂತ್ರಿಸುತ್ತಾನೆ. ನಾವು ದಿನನಿತ್ಯ ಬೈಬಲನ್ನು ಓದುವುದು, ಓದಿದ್ದನ್ನು ಮನನಮಾಡುವುದು, ಪ್ರಾರ್ಥಿಸುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಭಾಗವಹಿಸುವುದು ಏಕೆ? ಸಭಾ ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆಂಬ ಕಾರಣಕ್ಕೋ? ಹಿರಿಯರು ಕೊಡುವ ಸಹಾಯಕರ ಮರುಜ್ಞಾಪನಗಳಿಗೆ ನಾವು ಆಭಾರಿಗಳು ಎಂಬುದೇನೋ ನಿಜ. ಆದರೆ ನಾವು ಕ್ರೈಸ್ತ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಯೆಹೋವನ ಮೇಲೆ ನಮಗಿರುವ ಹೃತ್ಪೂರ್ವಕ ಪ್ರೀತಿಯನ್ನು ಪ್ರದರ್ಶಿಸುವಂತೆ ದೇವರಾತ್ಮವು ನಮ್ಮನ್ನು ಪ್ರೇರಿಸುವುದರಿಂದಲೇ. ಅಷ್ಟೇ ಅಲ್ಲ, ಅಂಥ ಚಟುವಟಿಕೆಗಳಲ್ಲಿ ತೊಡಗುವುದೇ ನಮಗಾಗಿರುವ ದೇವರ ಚಿತ್ತ ಎಂದು ವೈಯಕ್ತಿಕವಾಗಿ ನಮಗೆ ಮನವರಿಕೆ ಆಗಿದೆ. (ಜೆಕ. 4:6; ಎಫೆ. 5:10) ಯಥಾರ್ಥ ಕ್ರೈಸ್ತ ಜೀವನವನ್ನು ನಡೆಸುವ ಮೂಲಕ ನಾವು ದೇವರಿಗೆ ಸ್ವೀಕೃತರಾಗುತ್ತೇವೆ ಎಂಬ ಸಂಗತಿಯು ನಮಗೆ ಹೆಚ್ಚಿನ ಸಂತೋಷ ಮತ್ತು ಸಂತೃಪ್ತಿ ತರುತ್ತದೆ.

ವಿಭಿನ್ನ ವರಗಳು

4, 5. ಕ್ರೈಸ್ತ ಹಿರಿಯರು ತಮ್ಮ ವರಗಳನ್ನು ಹೇಗೆ ಉಪಯೋಗಿಸಬೇಕು?

4ರೋಮನ್ನರಿಗೆ 12:6-8, 11 ಓದಿ. “ನಮಗೆ ಕೊಡಲ್ಪಟ್ಟಿರುವ ಅಪಾತ್ರ ದಯೆಗನುಸಾರ ನಾವು ವಿಭಿನ್ನವಾದ ವರಗಳನ್ನು ಹೊಂದಿದ್ದೇವೆ” ಎಂದು ಪೌಲನು ವಿವರಿಸುತ್ತಾನೆ. ಅವನು ತಿಳಿಸುವಂಥ ವರಗಳಲ್ಲಿ ಕೆಲವು, ಅಂದರೆ ಬುದ್ಧಿಹೇಳುವುದು ಮತ್ತು ಅಧ್ಯಕ್ಷತೆ ವಹಿಸುವುದು ವಿಶೇಷವಾಗಿ ಹಿರಿಯರಿಗೆ ಸಂಬಂಧಪಟ್ಟ ವರಗಳಾಗಿವೆ. ಅವರು ಅಧ್ಯಕ್ಷತೆ ವಹಿಸುವಾಗ ಅದನ್ನು “ನಿಜವಾದ ಶ್ರದ್ಧೆಯಿಂದ” ನಿರ್ವಹಿಸುವಂತೆ ಬುದ್ಧಿಹೇಳಲಾಗಿದೆ.

5 ಮೇಲ್ವಿಚಾರಕರು ಬೋಧಕರಾಗಿ ‘ಶುಶ್ರೂಷೆಯನ್ನು’ ಪೂರೈಸುವ ವಿಧದಲ್ಲೂ ಅದೇ ರೀತಿಯ ಶ್ರದ್ಧೆಯನ್ನು ತೋರಿಸಬೇಕೆಂದು ಪೌಲನು ಹೇಳುತ್ತಾನೆ. ಆಸುಪಾಸಿನ ವಚನಗಳನ್ನು ಪರಿಗಣಿಸುವುದಾದರೆ, ಪೌಲನು ಇಲ್ಲಿ ತಿಳಿಸುತ್ತಿರುವ ‘ಶುಶ್ರೂಷೆಯು’ ಸಭೆಯೊಳಗೆ ಅಥವಾ ‘ಒಂದೇ ದೇಹದಲ್ಲಿ’ ನಡೆಸಲ್ಪಡುತ್ತದೆಂದು ಸ್ಪಷ್ಟವಾಗುತ್ತದೆ. (ರೋಮ. 12:4, 5) ಈ ಶುಶ್ರೂಷೆಯು ಅಪೊಸ್ತಲರ ಕಾರ್ಯಗಳು 6:4ರಲ್ಲಿ ಪೌಲನು ಹೇಳಿದ ಶುಶ್ರೂಷೆಗೆ ಹೋಲಿಕೆಯಾಗುತ್ತದೆ. ಅಲ್ಲಿ ಅವನಂದದ್ದು: “ನಾವಾದರೋ ಪ್ರಾರ್ಥನೆಯಲ್ಲಿಯೂ ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿಯೂ ನಿರತರಾಗಿರುವೆವು.” ಅಂಥ ಶುಶ್ರೂಷೆಯಲ್ಲಿ ಏನು ಒಳಗೂಡಿದೆ? ಕ್ರೈಸ್ತ ಹಿರಿಯರು ಸಭೆಯ ಸದಸ್ಯರನ್ನು ಬಲಪಡಿಸಲು ತಮ್ಮ ವರಗಳನ್ನು ಉಪಯೋಗಿಸುತ್ತಾರೆ. ಅವರು ತಮ್ಮ ಪ್ರಾರ್ಥನಾಪೂರ್ವಕ ಅಧ್ಯಯನ, ಸಂಶೋಧನೆ, ಬೋಧಿಸುವಿಕೆ ಮತ್ತು ಪರಿಪಾಲನೆ ಮಾಡುವಾಗ ಶ್ರದ್ಧೆಯಿಂದ ಸಭೆಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ಒದಗಿಸಿ ಸ್ವತಃ ತಾವು “ಶುಶ್ರೂಷೆಯಲ್ಲಿ” ತೊಡಗಿದ್ದೇವೆಂಬುದನ್ನು ತೋರಿಸಿಕೊಡುತ್ತಾರೆ. ಮೇಲ್ವಿಚಾರಕರು ತಮ್ಮ ವರಗಳನ್ನು ಪ್ರಜ್ಞಾಪೂರ್ವಕವಾಗಿ ಉಪಯೋಗಿಸಬೇಕು ಮತ್ತು “ಉಲ್ಲಾಸದಿಂದ” ಕುರಿಗಳ ಆರೈಕೆ ಮಾಡಬೇಕು.—ರೋಮ. 12:7, 8; 1 ಪೇತ್ರ 5:1-3.

6. ಈ ಲೇಖನದ ಮುಖ್ಯವಚನವಾದ ರೋಮನ್ನರಿಗೆ 12:11ರಲ್ಲಿರುವ ಸಲಹೆಯನ್ನು ನಾವು ಹೇಗೆ ಪಾಲಿಸಬಹುದು?

6 ಪೌಲನು ಮುಂದಕ್ಕೆ ತಿಳಿಸುವುದು: “ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ. ಪವಿತ್ರಾತ್ಮದಿಂದ ಪ್ರಜ್ವಲಿಸಿರಿ. ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ.” ನಮ್ಮ ಶುಶ್ರೂಷೆಯ ವಿಷಯದಲ್ಲಿ ನಾವು ಸ್ವಲ್ಪ ಆಲಸ್ಯ ತೋರಿಸುತ್ತಿದ್ದೇವೆಂದು ನಮಗೆ ಗೊತ್ತಾಗುವಲ್ಲಿ, ನಮ್ಮ ಅಧ್ಯಯನದ ರೂಢಿಗಳನ್ನು ಸರಿಹೊಂದಿಸಬೇಕಾದೀತು ಮತ್ತು ಯೆಹೋವನ ಪವಿತ್ರಾತ್ಮಕ್ಕಾಗಿ ಹೆಚ್ಚು ಕಟ್ಟಾಸಕ್ತಿಯಿಂದ, ಹೆಚ್ಚೆಚ್ಚು ಬಾರಿ ಪ್ರಾರ್ಥಿಸಬೇಕಾದೀತು. ಇದು ನಮ್ಮಲ್ಲಿರುವ ಉಗುರು ಬೆಚ್ಚಗಿನ ಭಾವನೆಯನ್ನು ಹೋಗಲಾಡಿಸಿ ಹುರುಪನ್ನು ನವೀಕರಿಸಲು ಸಹಾಯ ಮಾಡುವುದು. (ಲೂಕ 11:9, 13; ಪ್ರಕ. 2:4; 3:14, 15, 19) “ದೇವರ ಮಹೋನ್ನತ ಕಾರ್ಯಗಳ ವಿಷಯವಾಗಿ” ಮಾತಾಡಲು ಪವಿತ್ರಾತ್ಮವು ಆರಂಭದ ಕ್ರೈಸ್ತರನ್ನು ಶಕ್ತಗೊಳಿಸಿತು. (ಅ. ಕಾ. 2:4, 11) ಹಾಗೆಯೇ, ಶುಶ್ರೂಷೆಯಲ್ಲಿ ಹುರುಪುಳ್ಳವರಾಗಿದ್ದು ‘ಪವಿತ್ರಾತ್ಮದಿಂದ ಪ್ರಜ್ವಲಿಸಲು’ ಅದು ನಮ್ಮನ್ನೂ ಪ್ರಚೋದಿಸಬಲ್ಲದು.

ದೀನಭಾವ

7. ನಾವೇಕೆ ದೀನಭಾವದಿಂದ ಸೇವೆಸಲ್ಲಿಸಬೇಕು?

7ರೋಮನ್ನರಿಗೆ 12:3, 16 ಓದಿ. ಯೆಹೋವನು “ಅಪಾತ್ರ ದಯೆಯಿಂದ” ನಮಗೆ ವರಗಳನ್ನು ಕೊಟ್ಟಿದ್ದಾನೆ. “ನಾವು ತಕ್ಕಷ್ಟು ಅರ್ಹರಾಗಿರುವುದು ದೇವರಿಂದಲೇ ಬಂದದ್ದು” ಎಂಬದಾಗಿ ಪೌಲನು ಇನ್ನೊಂದು ಕಡೆ ತಿಳಿಸುತ್ತಾನೆ. (2 ಕೊರಿಂ. 3:5) ಆದ್ದರಿಂದ ನಾವು ನಮ್ಮನ್ನೇ ಮೇಲೇರಿಸಿಕೊಳ್ಳಬಾರದು. ಶುಶ್ರೂಷೆಯಲ್ಲಿ ನಮಗೆ ಸಿಕ್ಕಿರುವ ಫಲಿತಾಂಶಗಳು, ನಮ್ಮ ಸ್ವಂತ ಯೋಗ್ಯತೆಯಿಂದಲ್ಲ ಬದಲಾಗಿ ದೇವರ ಆಶೀರ್ವಾದದಿಂದ ಸಿಕ್ಕಿವೆಯೆಂದು ನಾವು ದೀನತೆಯಿಂದ ಅಂಗೀಕರಿಸಬೇಕು. (1 ಕೊರಿಂ. 3:6, 7) ಇದಕ್ಕೆ ಹೊಂದಿಕೆಯಲ್ಲಿ ಪೌಲನು ಹೇಳುವುದು: “ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು.” ನಮಗೆ ಸ್ವಗೌರವವಿರಬೇಕು ಮತ್ತು ನಾವು ರಾಜ್ಯದ ಸೇವೆಯಲ್ಲಿ ಆನಂದ, ಸಂತೃಪ್ತಿಗಳನ್ನು ಕಂಡುಕೊಳ್ಳಬೇಕು ಎಂಬುದೇನೋ ನಿಜ. ಆದರೆ ನಾವು ದೀನರಾಗಿರುವಲ್ಲಿ ಅಥವಾ ನಮ್ಮ ಇತಿಮಿತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವಲ್ಲಿ, ಯಾವಾಗಲೂ ನಾನು ಹೇಳಿದ್ದೇ ಸರಿಯೆಂದು ಹಠಹಿಡಿಯದಿರುವೆವು. ಅದಕ್ಕೆ ಬದಲಾಗಿ ನಾವು ‘ಸ್ವಸ್ಥಬುದ್ಧಿಯುಳ್ಳವರಂತೆ’ ಯೋಚಿಸುವೆವು.

8. ನಾವು ಹೇಗೆ ‘ನಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳಾಗಿರದೇ’ ಇರಬಲ್ಲೆವು?

8 ಆಧ್ಯಾತ್ಮಿಕವಾಗಿ ನಾವೇನನ್ನು ಸಾಧಿಸಿದ್ದೇವೋ ಅದರ ಬಗ್ಗೆ ಜಂಬಕೊಚ್ಚಿಕೊಳ್ಳುವುದು ಮೂರ್ಖತನ. ಏಕೆಂದರೆ, ‘ಬೆಳೆಯುವಂತೆ ಮಾಡುವವನು ದೇವರೇ.’ (1 ಕೊರಿಂ. 3:7) ಸಭೆಯ ಪ್ರತಿಯೊಬ್ಬ ಸದಸ್ಯನಲ್ಲಿರುವ “ನಂಬಿಕೆಯ ಪರಿಮಾಣ” ದೇವರೇ ಹಂಚಿಕೊಟ್ಟದ್ದೆಂದು ಪೌಲನು ಹೇಳುತ್ತಾನೆ. ಹೀಗಿರುವುದರಿಂದ ನಮ್ಮನ್ನೇ ಇತರರಿಗಿಂತ ಶ್ರೇಷ್ಠರೆಂದು ಭಾವಿಸಿಕೊಳ್ಳುವ ಬದಲು, ಅವರು ತಮ್ಮಲ್ಲಿರುವ ನಂಬಿಕೆಯ ಪರಿಮಾಣಕ್ಕೆ ಅನುಸಾರವಾಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆಂಬುದನ್ನು ನಾವು ತಿಳಿದಿರಬೇಕು. ಪೌಲನು ಇನ್ನೂ ತಿಳಿಸುವುದು: “ನಿಮ್ಮ ಬಗ್ಗೆ ನಿಮಗಿರುವ ಮನೋಭಾವವನ್ನೇ ಇತರರ ಕಡೆಗೂ ತೋರಿಸಿರಿ.” ತನ್ನ ಇನ್ನೊಂದು ಪತ್ರದಲ್ಲಿ ಆ ಅಪೊಸ್ತಲನು ನಮಗನ್ನುವುದು: “ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.” (ಫಿಲಿ. 2:3) ಪ್ರತಿಯೊಬ್ಬ ಸಹೋದರ ಸಹೋದರಿಯೂ ಒಂದಲ್ಲ ಒಂದು ವಿಧದಲ್ಲಿ ನಮಗಿಂತ ಶ್ರೇಷ್ಠರು ಎಂದೆಣಿಸಲು ನಿಜ ದೀನಭಾವ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ಅಗತ್ಯ. ದೀನಭಾವವು ನಾವು ‘ನಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳಾಗಿರದಂತೆ’ ತಡೆಯುವುದು. ಕೆಲವೊಮ್ಮೆ ನಮ್ಮಲ್ಲಿ ಕೆಲವರು ತಮ್ಮ ವಿಶೇಷ ಸೇವಾ ಸುಯೋಗಗಳಿಂದಾಗಿ ಇತರರ ಗಮನಕ್ಕೆ ಪಾತ್ರರಾಗಬಹುದು. ಆದರೂ ನಾವೆಲ್ಲರೂ “ದೀನತೆಯಿಂದ,” ಅನೇಕವೇಳೆ ಯಾರ ಗಮನಕ್ಕೂ ಬಾರದ ಸಾಮಾನ್ಯ ಕೆಲಸಗಳನ್ನೂ ಮಾಡುವುದರಲ್ಲಿ ಮಹತ್ತಾದ ಆನಂದವನ್ನು ಕಂಡುಕೊಳ್ಳುತ್ತೇವೆ.—1 ಪೇತ್ರ 5:5.

ನಮ್ಮ ಕ್ರೈಸ್ತ ಐಕ್ಯ

9. ಪೌಲನು ಆತ್ಮಜಾತ ಕ್ರೈಸ್ತರನ್ನು ದೇಹದ ಅಂಗಗಳಿಗೆ ಹೋಲಿಸಿದ್ದೇಕೆ?

9ರೋಮನ್ನರಿಗೆ 12:4, 5, 9, 10 ಓದಿ. ಪೌಲನು ಅಭಿಷಿಕ್ತ ಕ್ರೈಸ್ತರನ್ನು ದೇಹದ ಅಂಗಗಳಿಗೆ ಹೋಲಿಸುತ್ತಾನೆ. ಅವರು ಕ್ರಿಸ್ತನೆಂಬ ಶಿರಸ್ಸಿನ ಕೆಳಗೆ ಐಕ್ಯವಾಗಿ ಸೇವೆಸಲ್ಲಿಸುತ್ತಾರೆ. (ಕೊಲೊ. 1:18) ದೇಹದಲ್ಲಿ ಬೇರೆಬೇರೆ ಕೆಲಸಗಳನ್ನು ಮಾಡುವ ಅನೇಕ ಅಂಗಗಳಿರುವಂತೆಯೇ ಆತ್ಮಜಾತ ಕ್ರೈಸ್ತರು “ಅನೇಕರಿರುವುದಾದರೂ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಒಂದೇ ದೇಹ”ವಾಗಿದ್ದಾರೆ ಎಂದು ಪೌಲನು ಅವರಿಗೆ ನೆನಪುಹುಟ್ಟಿಸುತ್ತಾನೆ. ಅದೇ ರೀತಿಯಲ್ಲಿ ಪೌಲನು ಎಫೆಸದಲ್ಲಿದ್ದ ಆತ್ಮಾಭಿಷಿಕ್ತ ಕ್ರೈಸ್ತರಿಗೆ ಹೇಳಿದ್ದು: “ಎಲ್ಲ ವಿಷಯಗಳಲ್ಲಿಯೂ ನಾವು ಶಿರಸ್ಸಾಗಿರುವ ಕ್ರಿಸ್ತನಲ್ಲಿ ಪ್ರೀತಿಯಿಂದ ಬೆಳೆಯೋಣ. ಅವನಿಂದ ಇಡೀ ದೇಹವು, ಅಗತ್ಯವಿರುವುದನ್ನು ಒದಗಿಸುವಂಥ ಪ್ರತಿಯೊಂದು ಕೀಲಿನ ಮೂಲಕ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಸಹಕರಿಸುವಂತೆ ಮಾಡಲ್ಪಟ್ಟಿದೆ ಮತ್ತು ಪ್ರತಿಯೊಂದು ಅಂಗವು ಸೂಕ್ತವಾದ ಪ್ರಮಾಣದಲ್ಲಿ ಅದರದರ ಕಾರ್ಯವನ್ನು ಮಾಡುವ ಮೂಲಕ ಪ್ರೀತಿಯಲ್ಲಿ ತನ್ನದೇ ಅಭಿವೃದ್ಧಿಗೋಸ್ಕರ ದೇಹದ ಬೆಳವಣಿಗೆಗೆ ನೆರವಾಗುತ್ತದೆ.”—ಎಫೆ. 4:15, 16.

10. ‘ಬೇರೆ ಕುರಿಗಳು’ ಯಾವ ಅಧಿಕಾರವನ್ನು ಅಂಗೀಕರಿಸಬೇಕು?

10 ‘ಬೇರೆ ಕುರಿಗಳು’ ಕ್ರಿಸ್ತನ ದೇಹದ ಭಾಗವಾಗಿಲ್ಲವಾದರೂ ಈ ಹೋಲಿಕೆಯಿಂದ ಅವರು ಬಹಳಷ್ಟನ್ನು ಕಲಿಯಬಲ್ಲರು. (ಯೋಹಾ. 10:16) ಯೆಹೋವನು, “ಎಲ್ಲವನ್ನೂ ಅವನ [ಕ್ರಿಸ್ತನ] ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದನು ಮತ್ತು ಸಭೆಯ ಒಳಿತಿಗಾಗಿ ಅವನನ್ನು ಎಲ್ಲವುಗಳ ಮೇಲೆ ಶಿರಸ್ಸಾಗಿ ನೇಮಿಸಿದನು” ಎಂದು ಪೌಲನು ಹೇಳುತ್ತಾನೆ. (ಎಫೆ. 1:22) ಇಂದು ಬೇರೆ ಕುರಿಗಳು, ಕ್ರಿಸ್ತನ ಶಿರಸ್ಸುತನದ ಕೆಳಗೆ ಯೆಹೋವನು ನೇಮಿಸಿರುವ “ಎಲ್ಲವುಗಳ” ಭಾಗವಾಗಿದ್ದಾರೆ. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಕ್ರಿಸ್ತನು ಒಪ್ಪಿಸಿರುವ ‘ಆಸ್ತಿಯಲ್ಲೂ’ ಅವರು ಒಳಗೂಡಿದ್ದಾರೆ. (ಮತ್ತಾ. 24:45-47) ಆದ್ದರಿಂದ ಭೂನಿರೀಕ್ಷೆಯಿರುವವರು ಕ್ರಿಸ್ತನನ್ನು ತಮ್ಮ ಶಿರಸ್ಸಾಗಿ ಅಂಗೀಕರಿಸಬೇಕು. ಅಲ್ಲದೇ, ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಹಾಗೂ ಅದರ ಆಡಳಿತ ಮಂಡಲಿಗೆ ಮತ್ತು ಸಭೆಯಲ್ಲಿ ಮೇಲ್ವಿಚಾರಕರಾಗಿ ನೇಮಿತರಾದ ಪುರುಷರಿಗೆ ಅಧೀನರಾಗಿರಬೇಕು. (ಇಬ್ರಿ. 13:7, 17) ಹೀಗೆ ಮಾಡುವುದರಿಂದ ಕ್ರೈಸ್ತ ಐಕ್ಯವು ವೃದ್ಧಿಯಾಗುತ್ತದೆ.

11. ನಮ್ಮ ಐಕ್ಯವು ಯಾವುದರ ಮೇಲಾಧರಿತವಾಗಿದೆ, ಮತ್ತು ಪೌಲನು ಕೊಟ್ಟ ಇತರ ಸಲಹೆಗಳಾವುವು?

11 ಈ ಐಕ್ಯವು, “ಐಕ್ಯದ ಪರಿಪೂರ್ಣ ಬಂಧ”ವಾಗಿರುವ ಪ್ರೀತಿಯ ಮೇಲಾಧರಿತವಾಗಿದೆ. (ಕೊಲೊ. 3:14) ಈ ವಿಷಯಕ್ಕೆ ಒತ್ತುಕೊಡುತ್ತಾ ಪೌಲನು ರೋಮನ್ನರಿಗೆ 12ನೇ ಅಧ್ಯಾಯದಲ್ಲಿ, ನಮ್ಮ ಪ್ರೀತಿಯು ‘ನಿಷ್ಕಪಟವಾಗಿರಬೇಕು’ ಮತ್ತು “ಸಹೋದರ ಪ್ರೀತಿಯಲ್ಲಿ” ನಾವು “ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿ” ಇರಬೇಕು ಎಂದು ಹೇಳುತ್ತಾನೆ. ಇದು ನಾವು ಒಬ್ಬರಿಗೊಬ್ಬರು ಗೌರವ ತೋರಿಸುವಂತೆ ಸಹಾಯ ಮಾಡುತ್ತದೆ. ಆ ಅಪೊಸ್ತಲನು ಹೇಳುವುದು: “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” ಆದರೆ ನಾವು ಪ್ರೀತಿಯನ್ನು ಅತಿಭಾವುಕತೆಯೆಂದು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಸಭೆಯನ್ನು ಶುದ್ಧವಾಗಿಡಲಿಕ್ಕಾಗಿ ನಾವು ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡತಕ್ಕದ್ದು. ಪ್ರೀತಿಯ ಕುರಿತು ಸಲಹೆ ಕೊಡುವಾಗ ಪೌಲನು ಇನ್ನೂ ಕೂಡಿಸಿ ಹೇಳಿದ್ದು: “ಕೆಟ್ಟದ್ದನ್ನು ಹೇಸಿರಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.”

ಅತಿಥಿಸತ್ಕಾರದ ಪಥ

12. ಹಂಚಿಕೊಳ್ಳುವ ವಿಷಯದಲ್ಲಿ ಪ್ರಾಚೀನ ಮಕೆದೋನ್ಯದಲ್ಲಿದ್ದ ಸಹೋದರರಿಂದ ನಾವೇನು ಕಲಿಯಬಲ್ಲೆವು?

12ರೋಮನ್ನರಿಗೆ 12:13 ಓದಿ. ಸಹೋದರರ ಕಡೆಗೆ ನಮಗಿರುವ ಪ್ರೀತಿಯು, “ಪವಿತ್ರ ಜನರ ಅಗತ್ಯಗಳಿಗನುಸಾರ” ಮತ್ತು ನಮ್ಮ ಶಕ್ತಿಗನುಸಾರ ‘ನಮಗಿರುವುದನ್ನು ಅವರೊಂದಿಗೆ ಹಂಚಿಕೊಳ್ಳಲು’ ಪ್ರಚೋದಿಸುತ್ತದೆ. ನಾವು ಬಡವರಾಗಿದ್ದರೂ ನಮ್ಮ ಬಳಿ ಏನಿದೆಯೋ ಅದನ್ನು ಇತರರೊಂದಿಗೆ ಹಂಚಿಕೊಳ್ಳಬಲ್ಲೆವು. ಮಕೆದೋನ್ಯದಲ್ಲಿನ ಕ್ರೈಸ್ತರ ಬಗ್ಗೆ ಪೌಲನಂದದ್ದು: “ಬಾಧೆಯ ಮಹಾ ಪರೀಕ್ಷೆಯ ಸಮಯದಲ್ಲಿ ಅವರಿಗಾದ ಹೇರಳ ಆನಂದವೂ ಕಡುಬಡತನವೂ ಅವರಲ್ಲಿದ್ದ ಔದಾರ್ಯದ ಸಿರಿತನವನ್ನು ಯಥೇಚ್ಛವಾಗಿಸಿತು. ಅವರು ತಮ್ಮ ಯಥಾರ್ಥ ಸಾಮರ್ಥ್ಯಕ್ಕನುಸಾರ, ಹೌದು, ಅವರ ಸಾಮರ್ಥ್ಯಕ್ಕೂ ಮೀರಿ ಕೊಟ್ಟಿದ್ದಾರೆಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ದಯೆಯಿಂದ ಕೊಡುವ ಸುಯೋಗಕ್ಕಾಗಿ ಮತ್ತು [ಯೂದಾಯದಲ್ಲಿದ್ದ] ಪವಿತ್ರ ಜನರಿಗೋಸ್ಕರ ಮೀಸಲಾಗಿಡಲ್ಪಟ್ಟಿರುವ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಅವರು ಸ್ವಂತ ಇಚ್ಛೆಯಿಂದ ನಮ್ಮನ್ನು ಬಹಳವಾಗಿ ಬೇಡಿಕೊಳ್ಳುತ್ತಾ ಇದ್ದರು.” (2 ಕೊರಿಂ. 8:2-4) ಮಕೆದೋನ್ಯದಲ್ಲಿದ್ದ ಕ್ರೈಸ್ತರು ಬಡವರಾಗಿದ್ದರೂ ಉದಾರಿಗಳಾಗಿದ್ದರು. ತಮ್ಮ ಬಳಿ ಏನಿದೆಯೋ ಅದನ್ನೇ ಯೂದಾಯದಲ್ಲಿದ್ದ ಸಹೋದರರೊಂದಿಗೆ ಹಂಚಿಕೊಳ್ಳುವುದನ್ನು ಅವರು ಸುಯೋಗವೆಂದೆಣಿಸಿದರು.

13. “ಅತಿಥಿಸತ್ಕಾರದ ಪಥವನ್ನು ಅನುಸರಿಸಿರಿ” ಎಂಬುದರ ಅರ್ಥವೇನು?

13 “ಅತಿಥಿಸತ್ಕಾರದ ಪಥವನ್ನು ಅನುಸರಿಸಿರಿ” ಎಂಬ ವಾಕ್ಯವು ಗ್ರೀಕ್‌ ಅಭಿವ್ಯಕ್ತಿಯೊಂದರ ಭಾಷಾಂತರವಾಗಿದ್ದು, ಅದು ಆ ಕಾರ್ಯವನ್ನು ಮಾಡಲು ಮೊದಲ ಹೆಜ್ಜೆ ತೆಗೆದುಕೊಳ್ಳುವುದನ್ನು ಸೂಚಿಸುತ್ತದೆ. ಇದನ್ನು ದ ನ್ಯೂ ಜೆರುಸಲೇಮ್‌ ಬೈಬಲ್‌, “ಅತಿಥಿಸತ್ಕಾರವನ್ನು ತೋರಿಸುವ ಅವಕಾಶಗಳಿಗಾಗಿ ಹುಡುಕಿ” ಎಂದು ಭಾಷಾಂತರಿಸುತ್ತದೆ. ಇತರರನ್ನು ಊಟಕ್ಕೆ ಕರೆಯುವ ಮೂಲಕ ಕೆಲವೊಮ್ಮೆ ಅತಿಥಿಸತ್ಕಾರವನ್ನು ತೋರಿಸಲಾಗುತ್ತದೆ ಮತ್ತು ಅದನ್ನು ಪ್ರೀತಿಯಿಂದ ಮಾಡುವಾಗಲಂತೂ ಅದು ನಿಜಕ್ಕೂ ಶ್ಲಾಘನೀಯ. ಆದರೆ ಅತಿಥಿಸತ್ಕಾರವನ್ನು ತೋರಿಸಲು ಮುಂತೊಡಗುವ ಸ್ವಭಾವ ನಮಗಿರುವಲ್ಲಿ ಅದನ್ನು ತೋರಿಸುವ ಇತರ ಅನೇಕ ಮಾರ್ಗಗಳನ್ನು ಕಂಡುಕೊಳ್ಳುವೆವು. ಒಂದುವೇಳೆ ಇತರರನ್ನು ಊಟಕ್ಕೆ ಕರೆಯುವಷ್ಟು ಹಣ ಅಥವಾ ದೈಹಿಕ ಶಕ್ತಿ ನಮಗಿಲ್ಲದಿರುವಲ್ಲಿ, ಅವರಿಗೆ ಒಂದು ಕಪ್‌ ಕಾಫಿ, ಟೀ ಅಥವಾ ಬೇರಾವುದೇ ಪಾನೀಯವನ್ನು ಕುಡಿಯಲು ಕೊಡುವುದು ಸಹ ಅತಿಥಿಸತ್ಕಾರ ತೋರಿಸುವ ವಿಧವಾಗಿದೆ.

14. (ಎ) “ಅತಿಥಿಸತ್ಕಾರ” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದವು ಯಾವ ಪದಗಳಿಂದ ರಚಿತವಾಗಿದೆ? (ಬಿ) ಶುಶ್ರೂಷೆಯಲ್ಲಿ ಅಪರಿಚಿತರ ಕಡೆಗಿನ ನಮ್ಮ ಕಳಕಳಿಯನ್ನು ಹೇಗೆ ತೋರಿಸಬಲ್ಲೆವು?

14 ಅತಿಥಿಸತ್ಕಾರ ತೋರಿಸುವುದರಲ್ಲಿ ನಮ್ಮ ಮನೋಭಾವ ಒಳಗೂಡಿದೆ. “ಅತಿಥಿಸತ್ಕಾರ” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದವು, “ಪ್ರೀತಿ” ಮತ್ತು “ಅಪರಿಚಿತ” ಎಂಬರ್ಥವಿರುವ ಎರಡು ಮೂಲ ಪದಗಳಿಂದ ರಚಿತವಾಗಿದೆ. ಅಪರಿಚಿತರು ಅಥವಾ ಪರಕೀಯರ ಬಗ್ಗೆ ನಮಗೆ ಯಾವ ಮನೋಭಾವವಿದೆ? ತಮ್ಮ ಸಭೆಯ ಟೆರಿಟೊರಿಯಲ್ಲಿ ಬಂದು ನೆಲೆಸಿರುವ ಪರವೂರಿನ ಜನರಿಗೆ ಸುವಾರ್ತೆ ಸಾರಲು ಇನ್ನೊಂದು ಭಾಷೆಯನ್ನು ಕಲಿಯಲೆತ್ನಿಸುವ ಕ್ರೈಸ್ತರು ನಿಜವಾಗಿಯೂ ಅತಿಥಿಸತ್ಕಾರದ ಪಥವನ್ನು ಅನುಸರಿಸುತ್ತಿದ್ದಾರೆಂದು ಹೇಳಬಹುದು. ಆದರೆ ನಮ್ಮಲ್ಲಿ ಅನೇಕರಿಗೆ ನಮ್ಮ ಪರಿಸ್ಥಿತಿಗಳಿಂದಾಗಿ ಇನ್ನೊಂದು ಭಾಷೆ ಕಲಿಯಲು ಸಾಧ್ಯವಿಲ್ಲದಿರಬಹುದು. ಹಾಗಿದ್ದರೂ, ಅನೇಕ ಭಾಷೆಗಳಲ್ಲಿ ಬೈಬಲ್‌ ಸಂದೇಶವನ್ನು ಒಳಗೊಂಡಿರುವ ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯ ಸದ್ಬಳಕೆ ಮಾಡುವ ಮೂಲಕ ನಾವೆಲ್ಲರೂ ಪರವೂರಿನ ಜನರಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡಬಲ್ಲೆವು. ನೀವು ಈ ಪುಸ್ತಿಕೆಯನ್ನು ಶುಶ್ರೂಷೆಯಲ್ಲಿ ಬಳಸಿ ಉತ್ತಮ ಫಲಿತಾಂಶಗಳನ್ನು ಪಡೆದಿದ್ದೀರೋ?

ಅನುಕಂಪ

15. ರೋಮನ್ನರಿಗೆ 12:15ರಲ್ಲಿರುವ ಸಲಹೆಯ ವಿಷಯದಲ್ಲಿ ಯೇಸು ಹೇಗೆ ಮಾದರಿಯಿಟ್ಟಿದ್ದಾನೆ?

15ರೋಮನ್ನರಿಗೆ 12:15 ಓದಿ. ಈ ವಚನದಲ್ಲಿರುವ ಪೌಲನ ಸಲಹೆಯನ್ನು ‘ಸಹಾನುಭೂತಿ ತೋರಿಸಿ’ ಎಂಬ ಎರಡು ಪದಗಳಲ್ಲೇ ಸಾರಾಂಶಿಸಬಹುದು. ಇನ್ನೊಬ್ಬ ವ್ಯಕ್ತಿಯ ಕಷ್ಟಸುಖಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳಲ್ಲಿ ಭಾಗಿಯಾಗಲು ನಾವು ಕಲಿಯಬೇಕು. ನಾವು ಒಂದುವೇಳೆ ಪವಿತ್ರಾತ್ಮದಿಂದ ಪ್ರಜ್ವಲಿಸುತ್ತಿರುವಲ್ಲಿ, ಇತರರ ಕಷ್ಟಸುಖಗಳಲ್ಲಿ ಭಾಗಿಯಾಗುವಾಗ ನಮ್ಮಲ್ಲುಂಟಾಗುವ ಆನಂದ ಅಥವಾ ಕರುಣೆಯ ಭಾವನೆಗಳು ಸ್ಪಷ್ಟವಾಗಿ ತೋರಿಬರುತ್ತವೆ. ಒಮ್ಮೆ ಕ್ರಿಸ್ತನ 70 ಮಂದಿ ಶಿಷ್ಯರು ಸಾರುವ ಕಾರ್ಯಾಚರಣೆಯನ್ನು ಮುಗಿಸಿ ಬಂದು, ತಮಗೆ ಸಿಕ್ಕಿದ ಉತ್ತಮ ಫಲಿತಾಂಶಗಳನ್ನು ಸಂತೋಷದಿಂದ ತಿಳಿಸಿದಾಗ ಯೇಸು ಸಹ ‘ಪವಿತ್ರಾತ್ಮದಿಂದ ಅತ್ಯಾನಂದಗೊಂಡನು.’ (ಲೂಕ 10:17-21) ಅವರ ಸಂತೋಷದಲ್ಲಿ ಅವನೂ ಭಾಗಿಯಾದನು. ಇನ್ನೊಂದು ಪಕ್ಕದಲ್ಲಿ, ಯೇಸು ‘ಅಳುವವರೊಂದಿಗೆ ಅತ್ತನು’ ಸಹ. ಉದಾಹರಣೆಗೆ, ತನ್ನ ಸ್ನೇಹಿತ ಲಾಜರನು ಮೃತಪಟ್ಟಾಗ ಅವನು ಅತ್ತನು.—ಯೋಹಾ. 11:32-35.

16. ನಾವು ಹೇಗೆ ಅನುಕಂಪ ತೋರಿಸಬಲ್ಲೆವು, ಮತ್ತು ವಿಶೇಷವಾಗಿ ಯಾರು ಅದನ್ನು ತೋರಿಸಬೇಕು?

16 ಸಹಾನುಭೂತಿ ತೋರಿಸುವುದರಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಸರಿಸಬೇಕು. ಒಬ್ಬ ಸಹೋದರ ಅಥವಾ ಸಹೋದರಿ ಸಂತೋಷಪಡುವಾಗ ನಮಗಾದ ಸಂತೋಷವನ್ನು ಮುಕ್ತಮನಸ್ಸಿನಿಂದ ತೋರಿಸಿಕೊಡಬೇಕು. ಅದೇ ಸಮಯದಲ್ಲಿ, ಸಹೋದರ ಸಹೋದರಿಯರು ಮನೋವ್ಯಥೆಗೀಡಾದಲ್ಲಿ ಅಥವಾ ದುಃಖದಲ್ಲಿರುವಲ್ಲಿ ನಾವು ಸಹಾನುಭೂತಿ ತೋರಿಸಬೇಕು. ನಾವು ಸಮಯ ಮಾಡಿಕೊಂಡು ನಿಜವಾದ ಸಹಾನುಭೂತಿಯಿಂದ ಕಿವಿಗೊಡುವಲ್ಲಿ ಭಾವನಾತ್ಮಕ ದುಃಖಕ್ಕೆ ಒಳಗಾಗಿರುವ ಜೊತೆ ವಿಶ್ವಾಸಿಗಳಿಗೆ ಉಪಶಮನ ಸಿಗುವುದು. ಕೆಲವೊಮ್ಮೆ ನಮ್ಮ ಹೃದಯ ಕರಗಿ, ನಮ್ಮ ಯಥಾರ್ಥ ಸಹಾನುಭೂತಿ ಕಂಬನಿ ರೂಪದಲ್ಲಿ ಹೊರಬರಬಹುದು. (1 ಪೇತ್ರ 1:22) ವಿಶೇಷವಾಗಿ ಹಿರಿಯರು, ಸಹಾನುಭೂತಿ ತೋರಿಸುವುದರ ಕುರಿತ ಪೌಲನ ಸಲಹೆಯನ್ನು ಅನುಸರಿಸಬೇಕು.

17. ರೋಮನ್ನರಿಗೆ 12ನೇ ಅಧ್ಯಾಯದಿಂದ ನಾವು ಈ ತನಕ ಏನನ್ನು ಕಲಿತಿದ್ದೇವೆ, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

17 ರೋಮನ್ನರಿಗೆ 12ನೇ ಅಧ್ಯಾಯದಲ್ಲಿ ನಾವು ಈಗಾಗಲೇ ಪರಿಗಣಿಸಿರುವ ವಚನಗಳು, ಕ್ರೈಸ್ತರೋಪಾದಿ ನಮ್ಮ ವೈಯಕ್ತಿಕ ಜೀವನದಲ್ಲಿ ಮತ್ತು ಸಹೋದರರೊಂದಿಗಿನ ಸಂಬಂಧದಲ್ಲಿ ನಾವು ಅನ್ವಯಿಸಿಕೊಳ್ಳಬಹುದಾದ ಸಲಹೆ ಕೊಟ್ಟವು. ಇನ್ನುಳಿದ ವಚನಗಳನ್ನು ಮುಂದಿನ ಲೇಖನದಲ್ಲಿ ಪರೀಕ್ಷಿಸುವೆವು. ಅದು, ವಿರೋಧಿಗಳು ಮತ್ತು ಹಿಂಸಕರನ್ನೂ ಸೇರಿಸಿ ಕ್ರೈಸ್ತ ಸಭೆಯ ಹೊರಗಿನ ಜನರನ್ನು ನಾವು ಹೇಗೆ ವೀಕ್ಷಿಸಬೇಕೆಂಬುದನ್ನು ಚರ್ಚಿಸುವುದು.

ಪುನರ್ವಿಮರ್ಶೆಗಾಗಿ

• ನಾವು ‘ಪವಿತ್ರಾತ್ಮದಿಂದ ಪ್ರಜ್ವಲಿಸುತ್ತಿದ್ದೇವೆ’ ಎಂಬುದನ್ನು ಹೇಗೆ ತೋರಿಸಬಲ್ಲೆವು?

• ನಾವು ದೇವರ ಸೇವೆಯನ್ನು ದೀನಭಾವದಿಂದ ಏಕೆ ಮಾಡಬೇಕು?

• ನಾವು ಜೊತೆ ವಿಶ್ವಾಸಿಗಳಿಗೆ ಯಾವ ವಿಧಗಳಲ್ಲಿ ಸಹಾನುಭೂತಿ ಮತ್ತು ಕರುಣೆ ತೋರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 4ರಲ್ಲಿರುವ ಚಿತ್ರಗಳು]

ಈ ಕ್ರೈಸ್ತ ಚಟುವಟಿಕೆಗಳಲ್ಲಿ ನಾವು ಪಾಲ್ಗೊಳ್ಳುವುದೇಕೆ?

[ಪುಟ 6ರಲ್ಲಿರುವ ಚಿತ್ರ]

ಪರವೂರಿನ ಜನರು ರಾಜ್ಯದ ಕುರಿತು ಕಲಿಯುವಂತೆ ನಮ್ಮಲ್ಲಿ ಪ್ರತಿಯೊಬ್ಬರೂ ಹೇಗೆ ಸಹಾಯ ಮಾಡಬಲ್ಲೆವು?