ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಜ್ಞಾನೋಕ್ತಿ 24:27ರಲ್ಲಿ ಯಾವ ಪಾಠವಿದೆ?

ಒಬ್ಬ ಯೌವನಸ್ಥನಿಗೆ ಬುದ್ಧಿವಾದ ಕೊಡುತ್ತಾ ಜ್ಞಾನೋಕ್ತಿಗಳ ಲೇಖಕನು ಹೇಳುವುದು: “ನಿನ್ನ ಕೆಲಸದ ಸಾಮಾನುಗಳನ್ನು ಸುತ್ತಲು ಅಣಿಮಾಡು, ನಿವೇಶನದಲ್ಲಿ ಸಿದ್ಧಪಡಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು.” ಈ ದೇವಪ್ರೇರಿತ ಜ್ಞಾನೋಕ್ತಿಯಲ್ಲಿ ಯಾವ ಅಂಶವನ್ನು ಒತ್ತಿಹೇಳಲಾಗಿದೆ? ಒಬ್ಬ ಪುರುಷನು ಮದುವೆಯಾಗಿ ತನ್ನ ಸ್ವಂತ ಕುಟುಂಬವನ್ನು ಆರಂಭಿಸುವ ಮುಂಚೆ, ಅಂಥ ಬದ್ಧತೆಯಿಂದ ಬರುವ ಜವಾಬ್ದಾರಿಗಳನ್ನು ಅಂಗೀಕರಿಸುತ್ತಾ ಸರಿಯಾಗಿ ಸಿದ್ಧನಾಗಬೇಕು.

ಈ ಹಿಂದೆ ಈ ವಚನವನ್ನು, ಗಂಡನೂ ತಂದೆಯೂ ಆಗಿರುವವನು ತನ್ನ ಐಹಿಕ ಕೆಲಸವನ್ನು ಮಾತ್ರ ನೋಡಿಕೊಳ್ಳಬಾರದು ಬದಲಾಗಿ ಆಧ್ಯಾತ್ಮಿಕ ಶಿಕ್ಷಣವನ್ನು ಕೊಡುವ ಮೂಲಕ ತನ್ನ ಕುಟುಂಬವನ್ನು ಕಟ್ಟಲು ಇಲ್ಲವೇ ಉತ್ತೇಜಿಸಲು ಸಹ ದುಡಿಯಬೇಕೆಂದು ವಿವರಿಸಲಾಗಿತ್ತು. ಈ ವಿಚಾರವು ಖಂಡಿತವಾಗಿಯೂ ಸತ್ಯ ಹಾಗೂ ಶಾಸ್ತ್ರಾಧಾರಿತ. ಹಾಗಿದ್ದರೂ, ಈ ಜ್ಞಾನೋಕ್ತಿಯ ಅರ್ಥ ಅದಲ್ಲವೆಂದು ತೋರುತ್ತದೆ. ಯಾಕಲ್ಲ? ಎರಡು ಕಾರಣಗಳನ್ನು ಪರಿಗಣಿಸಿರಿ.

ಮೊದಲನೆಯದಾಗಿ ಈ ವಚನವು, ಈಗಾಗಲೇ ಇರುವ ಒಂದು ಕುಟುಂಬವನ್ನು ಉತ್ತೇಜಿಸುವ ಇಲ್ಲವೇ ಬಲಪಡಿಸುವ ಅರ್ಥದಲ್ಲಿ ಕಟ್ಟುವುದರ ಕುರಿತು ಮಾತಾಡುತ್ತಿಲ್ಲ. ಬದಲಾಗಿ ಅದು ಒಂದು ಅಕ್ಷರಶಃ ಮನೆಯನ್ನು ಕಟ್ಟುವುದಕ್ಕೆ ಸೂಚಿಸುತ್ತಿದೆ. “ಕಟ್ಟು” ಎಂಬ ಪದವನ್ನು, ಮದುವೆಯಾಗಿ ಮಕ್ಕಳನ್ನು ಪಡೆಯುವ ಮೂಲಕ ಒಂದು ಮನೆವಾರ್ತೆಯನ್ನು ಕಟ್ಟುವುದು ಇಲ್ಲವೇ ಸ್ಥಾಪಿಸುವುದು ಎಂಬುದಾಗಿ ಸಾಂಕೇತಿಕವಾಗಿಯೂ ಅರ್ಥಮಾಡಿಕೊಳ್ಳಬಹುದು.

ಎರಡನೆಯದಾಗಿ, ಈ ವಚನವು “ಮೊದಲು ಇದನ್ನು ಮಾಡಿ, ನಂತರ ಇದನ್ನು ಮಾಡಿ” ಎಂದು ಹೇಳುತ್ತಿರುವಂತಿದೆ. ಹೀಗೆ ಅದು ಕೆಲಸಗಳನ್ನು ಸರಿಯಾದ ಕ್ರಮದಲ್ಲಿ ಮಾಡುವುದಕ್ಕೆ ಒತ್ತುಕೊಡುತ್ತಿದೆ. ಹಾಗಾದರೆ, ಆಧ್ಯಾತ್ಮಿಕ ಜವಾಬ್ದಾರಿಗಳಿಗಿಂತ ಐಹಿಕ ಜವಾಬ್ದಾರಿಗಳಿಗೆ ಪ್ರಾಶಸ್ತ್ಯ ಕೊಡಬೇಕೆಂದು ಈ ಜ್ಞಾನೋಕ್ತಿ ಹೇಳುತ್ತಿದೆಯೋ? ಖಂಡಿತ ಇಲ್ಲ!

ಬೈಬಲ್‌ ಕಾಲಗಳಲ್ಲಿ ಒಬ್ಬ ಪುರುಷನು ‘ತನ್ನ ಮನೆಯನ್ನು ಕಟ್ಟಲು’ ಅಂದರೆ ಮದುವೆಯಾಗಿ ಒಂದು ಕುಟುಂಬವನ್ನು ಪಡೆಯಲು ಬಯಸುವಲ್ಲಿ, ಅವನು ತನ್ನನ್ನೇ ಹೀಗೆ ಕೇಳಿಕೊಳ್ಳಬೇಕಾಗಿತ್ತು: ‘ಹೆಂಡತಿಯನ್ನೂ, ಮುಂದೆ ಹುಟ್ಟಬಹುದಾದ ಮಕ್ಕಳನ್ನೂ ನೋಡಿಕೊಳ್ಳಲು ನಾನು ಸಿದ್ಧನಿದ್ದೇನೋ?’ ಒಂದು ಕುಟುಂಬವನ್ನು ಆರಂಭಿಸುವ ಮುಂಚೆ ಅವನು ಕೆಲಸ ಮಾಡಬೇಕಿತ್ತು. ಅವನು ತನ್ನ ಹೊಲಗಳನ್ನು ನೋಡಿಕೊಳ್ಳಬೇಕಿತ್ತು. ಹೀಗಿರುವುದರಿಂದಲೇ ಟುಡೇಸ್‌ ಇಂಗ್ಲಿಷ್‌ ವರ್ಷನ್‌ ಈ ವಚನವನ್ನು ಸ್ಪಷ್ಟವಾಗಿ ಹೀಗೆ ಭಾಷಾಂತರಿಸುತ್ತದೆ: “ನಿನ್ನ ಹೊಲಗಳು ಸಿದ್ಧವಾಗುವವರೆಗೂ, ಸಂಪಾದನೆ ಮಾಡಿ ಜೀವನಸಾಗಿಸಬಹುದೆಂದು ನಿನಗೆ ಖಾತ್ರಿಯಾಗುವವರೆಗೂ ನಿನ್ನ ಮನೆಯನ್ನು ಕಟ್ಟಬೇಡ, ಸಂಸಾರ ಹೂಡಬೇಡ.” ಇದೇ ಮೂಲತತ್ತ್ವ ಇಂದಿಗೂ ಅನ್ವಯವಾಗುತ್ತದೋ?

ಹೌದು. ಮದುವೆಯಾಗಲು ಇಚ್ಛಿಸುವ ಪುರುಷನು ಆ ಜವಾಬ್ದಾರಿಯನ್ನು ಹೊರಲು ಸರಿಯಾಗಿ ಸಿದ್ಧನಾಗಬೇಕು. ಅವನು ದೈಹಿಕವಾಗಿ ಸಮರ್ಥನಾಗಿರುವಲ್ಲಿ ಕೆಲಸಮಾಡಲೇಬೇಕು. ತನ್ನ ಕುಟುಂಬವನ್ನು ನೋಡಿಕೊಳ್ಳಲು ಕಠಿನ ಶ್ರಮಪಡುವುದರಲ್ಲಿ ಕೇವಲ ಶಾರೀರಿಕ ವಿಷಯಗಳನ್ನು ನೋಡಿಕೊಳ್ಳುವುದು ಮಾತ್ರ ಒಳಗೂಡಿರುವುದಿಲ್ಲ. ತನ್ನ ಕುಟುಂಬದ ಶಾರೀರಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸದ ಪುರುಷನು ನಂಬಿಕೆಯಿಲ್ಲದವನಿಗಿಂತಲೂ ಕಡೆಯಾದವನು ಎಂದು ದೇವರ ವಾಕ್ಯ ಹೇಳುತ್ತದೆ. (1 ತಿಮೊ. 5:8) ಹೀಗಿರುವುದರಿಂದ, ಮದುವೆ ಮತ್ತು ಸಾಂಸಾರಿಕ ಜೀವನಕ್ಕೆ ಸಿದ್ಧನಾಗುತ್ತಿರುವ ಯುವ ವ್ಯಕ್ತಿಯು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸಲು ನಾನು ತಕ್ಕಮಟ್ಟಿಗೆ ಸಿದ್ಧನಾಗಿದ್ದೇನೋ? ಕುಟುಂಬದ ಆಧ್ಯಾತ್ಮಿಕ ಶಿರಸ್ಸಾಗಿರಲು ಸಿದ್ಧನಿದ್ದೇನೋ? ನನ್ನ ಹೆಂಡತಿ ಮಕ್ಕಳೊಂದಿಗೆ ಕ್ರಮವಾದ ಬೈಬಲ್‌ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಪೂರೈಸುವೆನೋ?’ ದೇವರ ವಾಕ್ಯ ಖಂಡಿತವಾಗಿಯೂ ಅಂಥ ಅತ್ಯಾವಶ್ಯಕ ಜವಾಬ್ದಾರಿಗಳನ್ನು ಒತ್ತಿಹೇಳುತ್ತದೆ.—ಧರ್ಮೋ. 6:6-8; ಎಫೆ. 6:4.

ಆದುದರಿಂದ ಮದುವೆಯಾಗಲು ಬಯಸುವ ಯುವ ಪುರುಷನು ಜ್ಞಾನೋಕ್ತಿ 24:27ರಲ್ಲಿರುವ ಮೂಲತತ್ತ್ವದ ಬಗ್ಗೆ ಜಾಗರೂಕತೆಯಿಂದ ಯೋಚಿಸಬೇಕು. ಅದೇ ರೀತಿಯಲ್ಲಿ ಒಬ್ಬ ಯುವ ಸ್ತ್ರೀ, ತಾನು ಹೆಂಡತಿ ಹಾಗೂ ತಾಯಿಯಾಗುವ ಜವಾಬ್ದಾರಿಗಳಿಗಾಗಿ ಸಿದ್ಧಳಿದ್ದೇನೋ ಎಂದು ಕೇಳಿಕೊಳ್ಳುವುದು ಉತ್ತಮ. ಇತ್ತೀಚೆಗೆ ವಿವಾಹವಾದವರು ಮತ್ತು ವಿವಾಹವಾಗಲಿಕ್ಕಿರುವವರು ಮಕ್ಕಳನ್ನು ಪಡೆಯಬೇಕೋ ಇಲ್ಲವೋ ಎಂಬುದರ ಬಗ್ಗೆ ಯೋಚಿಸುವಾಗಲೂ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. (ಲೂಕ 14:28) ಇಂಥ ದೇವಪ್ರೇರಿತ ಮಾರ್ಗದರ್ಶನವನ್ನು ಪಾಲಿಸುವಲ್ಲಿ, ದೇವಜನರು ಬಹಳಷ್ಟು ಮನೋವೇದನೆಯಿಂದ ತಪ್ಪಿಸಿಕೊಳ್ಳಲು ಮತ್ತು ತೃಪ್ತಿದಾಯಕ ಕುಟುಂಬ ಜೀವನವನ್ನು ಆನಂದಿಸಲು ಶಕ್ತರಾಗುವರು.

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಬ್ಬ ಯುವ ಪುರುಷನು ವಿವಾಹದ ಬಗ್ಗೆ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?