ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ವಿಷಯಗಳಲ್ಲಿ ಚೈತನ್ಯವನ್ನು ಪಡೆದುಕೊಳ್ಳಿ

ಆಧ್ಯಾತ್ಮಿಕ ವಿಷಯಗಳಲ್ಲಿ ಚೈತನ್ಯವನ್ನು ಪಡೆದುಕೊಳ್ಳಿ

ಆಧ್ಯಾತ್ಮಿಕ ವಿಷಯಗಳಲ್ಲಿ ಚೈತನ್ಯವನ್ನು ಪಡೆದುಕೊಳ್ಳಿ

‘ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ; ಆಗ ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ.’—ಮತ್ತಾ. 11:29.

1. ಸೀನಾಯಿಬೆಟ್ಟದಲ್ಲಿ ದೇವರು ಯಾವ ಏರ್ಪಾಡನ್ನು ಮಾಡಿಕೊಟ್ಟನು, ಮತ್ತು ಏಕೆ?

ಸೀನಾಯಿಬೆಟ್ಟದಲ್ಲಿ ಧರ್ಮಶಾಸ್ತ್ರದ ಒಡಂಬಡಿಕೆಯು ಜಾರಿಗೆ ತರಲ್ಪಟ್ಟಾಗ ಅದರಲ್ಲಿ ಸಾಪ್ತಾಹಿಕ ಸಬ್ಬತ್‌ ಏರ್ಪಾಡು ಸೇರಿತ್ತು. ತನ್ನ ಪ್ರತಿನಿಧಿ ಮೋಶೆಯ ಮೂಲಕ ಯೆಹೋವನು ಇಸ್ರಾಯೇಲ್‌ ಜನಾಂಗಕ್ಕೆ, “ಆರು ದಿವಸಗಳು ನಿಮ್ಮ ಕೆಲಸವನ್ನು ನಡಿಸಿ ಏಳನೆಯ ದಿನದಲ್ಲಿ ಯಾವ ಕೆಲಸವನ್ನೂ ಮಾಡದೆ ಇರಬೇಕು. ಆ ಹೊತ್ತು ನಿಮ್ಮ ಎತ್ತುಗಳೂ ಕತ್ತೆಗಳೂ ದಾಸದಾಸಿಯರೂ ಪರದೇಶಸ್ಥರೂ ವಿಶ್ರಮಿಸಿಕೊಳ್ಳಲಿ” ಎಂದು ಆಜ್ಞೆಯಿತ್ತನು. (ವಿಮೋ. 23:12) ಹೌದು, ಧರ್ಮಶಾಸ್ತ್ರದ ಕೆಳಗಿದ್ದ ಜನರ ಮೇಲೆ ಯೆಹೋವನಿಗೆ ಪರಿಗಣನೆಯಿದ್ದ ಕಾರಣ ಅವರಿಗೆ ವಿಶ್ರಾಂತಿಯ ದಿನದ ಏರ್ಪಾಡನ್ನು ಪ್ರೀತಿಯಿಂದ ಮಾಡಿಕೊಟ್ಟನು. ಹೀಗೆ ಅವನ ಜನರು ‘ವಿಶ್ರಮಿಸಿಕೊಳ್ಳಸಾಧ್ಯವಿತ್ತು.’

2. ಸಬ್ಬತ್ತನ್ನು ಆಚರಿಸುವುದರಿಂದ ಇಸ್ರಾಯೇಲ್‌ ಜನಾಂಗ ಹೇಗೆ ಪ್ರಯೋಜನ ಹೊಂದಿತು?

2 ಸಬ್ಬತ್‌ ಬರೇ ವಿಶ್ರಮಿಸಿಕೊಳ್ಳುವ ದಿನವಾಗಿತ್ತೊ? ಇಲ್ಲ. ಅದು ಇಸ್ರಾಯೇಲ್ಯರು ಯೆಹೋವನಿಗೆ ಸಲ್ಲಿಸಿದ ಆರಾಧನೆಯ ಅವಿಭಾಜ್ಯ ಅಂಗವಾಗಿತ್ತು. ಸಬ್ಬತ್ತನ್ನು ಆಚರಿಸುವುದರಿಂದ ತಮ್ಮ ಕುಟುಂಬಗಳಿಗೆ “ನ್ಯಾಯನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು” ಕಲಿಸಲು ಕುಟುಂಬದ ತಲೆಗಳಿಗೆ ಸಮಯ ಸಿಗುತ್ತಿತ್ತು. (ಆದಿ. 18:19) ಕುಟುಂಬದವರೂ ಸ್ನೇಹಿತರೂ ಒಟ್ಟುಗೂಡಿಬಂದು ಯೆಹೋವನ ಕ್ರಿಯೆಗಳ ಬಗ್ಗೆ ಪರ್ಯಾಲೋಚಿಸಲು ಮತ್ತು ಸಂತೋಷಭರಿತ ಸಹವಾಸದಲ್ಲಿ ಆನಂದಿಸಲು ಸಹ ಅವಕಾಶ ಸಿಗುತ್ತಿತ್ತು. (ಯೆಶಾ. 58:13, 14) ಇದಕ್ಕಿಂತ ಮುಖ್ಯವಾಗಿ, ಮುಂದೆ ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ನಿಜ ಚೈತನ್ಯವನ್ನು ಪಡೆದುಕೊಳ್ಳಲಿಕ್ಕಿರುವ ಸಮಯವನ್ನು ಸಬ್ಬತ್‌ ಪ್ರವಾದನಾತ್ಮಕವಾಗಿ ಮುನ್‌ಚಿತ್ರಿಸಿತು. (ರೋಮ. 8:21) ಆದರೆ ನಮ್ಮ ದಿನದ ಕುರಿತಾಗಿ ಏನು? ಯೆಹೋವನ ಮಾರ್ಗಗಳಲ್ಲಿ ಆಸಕ್ತರಾಗಿರುವ ನಿಜ ಕ್ರೈಸ್ತರು ಎಲ್ಲಿ ಮತ್ತು ಹೇಗೆ ಚೈತನ್ಯವನ್ನು ಪಡೆದುಕೊಳ್ಳಬಲ್ಲರು?

ಕ್ರೈಸ್ತ ಸಹವಾಸದ ಮೂಲಕ ಚೈತನ್ಯ ಪಡೆದುಕೊಳ್ಳಿ

3. ಪ್ರಥಮ ಶತಮಾನದ ಕ್ರೈಸ್ತರು ಹೇಗೆ ಒಬ್ಬರಿಗೊಬ್ಬರು ಆಧಾರವಾಗಿದ್ದರು, ಮತ್ತು ಯಾವ ಫಲಿತಾಂಶದೊಂದಿಗೆ?

3 ಕ್ರೈಸ್ತ ಸಭೆಯು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿದೆ ಎಂದು ಅಪೊಸ್ತಲ ಪೌಲನು ತಿಳಿಸಿದನು. (1 ತಿಮೊ. 3:15) ಆದಿ ಕ್ರೈಸ್ತರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಮೂಲಕ ಮತ್ತು ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಅಭಿವೃದ್ಧಿಪಡಿಸುವ ಮೂಲಕ ಹೆಚ್ಚು ಆಧಾರವನ್ನು ಪಡೆದುಕೊಂಡರು. (ಎಫೆ. 4:11, 12, 16) ಪೌಲನು ಎಫೆಸದಲ್ಲಿದ್ದಾಗ ಕೊರಿಂಥ ಸಭೆಯ ಸದಸ್ಯರಿಂದ ಅವನಿಗೆ ಒಂದು ಉತ್ತೇಜನೀಯ ಭೇಟಿ ಸಿಕ್ಕಿತು. ಅದರಿಂದಾದ ಪರಿಣಾಮವನ್ನು ಗಮನಿಸಿ: ‘ಸ್ತೆಫನಸನು, ಫೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು; ಏಕೆಂದರೆ ಅವರು ನನ್ನ ಹೃದಯವನ್ನು ಚೈತನ್ಯಗೊಳಿಸಿದ್ದಾರೆ’ ಎಂದನು ಪೌಲನು. (1 ಕೊರಿಂ. 16:17, 18) ತದ್ರೀತಿಯಲ್ಲಿ ತೀತನು ಕೊರಿಂಥದಲ್ಲಿದ್ದ ಸಹೋದರರ ಸೇವೆಮಾಡಲಿಕ್ಕಾಗಿ ಹೋದಾಗ ಪೌಲನು ಆ ಸಭೆಗೆ, ‘ನಿಮ್ಮೆಲ್ಲರಿಂದ ತೀತನ ಮನಸ್ಸು ಚೈತನ್ಯಗೊಂಡಿದೆ’ ಎಂದು ತನ್ನ ಎರಡನೇ ಪತ್ರದಲ್ಲಿ ತಿಳಿಸಿದನು. (2 ಕೊರಿಂ. 7:13) ತದ್ರೀತಿಯಲ್ಲಿ ಇಂದು ಯೆಹೋವನ ಸಾಕ್ಷಿಗಳು ಭಕ್ತಿವೃದ್ಧಿಮಾಡುವ ಕ್ರೈಸ್ತ ಸಹವಾಸದ ಮೂಲಕ ನಿಜ ಚೈತನ್ಯವನ್ನು ಪಡೆದುಕೊಳ್ಳುತ್ತಾರೆ.

4. ಕ್ರೈಸ್ತ ಕೂಟಗಳು ನಮ್ಮನ್ನು ಹೇಗೆ ಚೈತನ್ಯಗೊಳಿಸುತ್ತವೆ?

4 ಕ್ರೈಸ್ತ ಕೂಟಗಳು ಮಹಾ ಆನಂದದ ಮೂಲವಾಗಿವೆ ಎಂಬುದು ನಿಮಗೆ ನಿಮ್ಮ ಸ್ವಂತ ಅನುಭವದಿಂದ ತಿಳಿದಿದೆ. ಅಲ್ಲಿ ನಾವು ‘ಒಬ್ಬರು ಇನ್ನೊಬ್ಬರ ನಂಬಿಕೆಯಿಂದ ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು’ ಸಾಧ್ಯವಾಗುತ್ತದೆ. (ರೋಮ. 1:12) ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ಬರೇ ಮೇಲುಮೇಲಿನ ಪರಿಚಯಸ್ಥರಲ್ಲ, ಅಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ಸಂಗಡಿಗರಂತೂ ಅಲ್ಲ. ಅವರು ನಿಜ ಸ್ನೇಹಿತರು. ಅವರನ್ನು ನಾವು ಪ್ರೀತಿಸಿ ಗೌರವಿಸುತ್ತೇವೆ. ನಮ್ಮ ಕೂಟಗಳಲ್ಲಿ ಅವರೊಂದಿಗೆ ಕ್ರಮವಾಗಿ ಕೂಡಿಬರುವ ಮೂಲಕ ನಾವು ಬಹಳ ಆನಂದ ಮತ್ತು ಸಾಂತ್ವನವನ್ನು ಪಡೆದುಕೊಳ್ಳುತ್ತೇವೆ.—ಫಿಲೆ. 7.

5. ಅಧಿವೇಶನಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ನಾವು ಒಬ್ಬರನ್ನೊಬ್ಬರು ಹೇಗೆ ಚೈತನ್ಯಗೊಳಿಸಬಲ್ಲೆವು?

5 ನಾವು ಇನ್ನೊಂದು ಮೂಲದಿಂದಲೂ ಚೈತನ್ಯವನ್ನು ಪಡೆದುಕೊಳ್ಳುತ್ತೇವೆ. ನಮ್ಮ ವಾರ್ಷಿಕ ಅಧಿವೇಶನಗಳು ಮತ್ತು ಸಮ್ಮೇಳನಗಳೇ ಆ ಮೂಲ. ದೇವರ ವಾಕ್ಯವಾದ ಬೈಬಲಿನಿಂದ ಸತ್ಯದ ಜೀವದಾಯಕ ಜಲವನ್ನು ಒದಗಿಸುವುದರೊಂದಿಗೆ ಈ ದೊಡ್ಡ ಕೂಟಗಳು ನಮ್ಮ ಸಹವಾಸಗಳನ್ನೂ ‘ವಿಶಾಲಮಾಡಿಕೊಳ್ಳಲು’ ಅವಕಾಶ ಕೊಡುತ್ತವೆ. (2 ಕೊರಿಂ. 6:12, 13) ಆದರೆ ನಾವು ಸಂಕೋಚ ಸ್ವಭಾವದವರಾಗಿದ್ದು ಜನರನ್ನು ಮಾತಾಡಿಸಲು ಕಷ್ಟಪಡುವುದಾದರೆ ಆಗೇನು? ನಮ್ಮ ಸಹೋದರ ಸಹೋದರಿಯರ ಪರಿಚಯ ಮಾಡಿಕೊಳ್ಳಲಿಕ್ಕಾಗಿರುವ ಒಂದು ವಿಧವು ಅಧಿವೇಶನದ ಸಮಯದಲ್ಲಿ ಸ್ವಯಂ ಸೇವೆಗಾಗಿ ನೀಡಿಕೊಳ್ಳುವುದಾಗಿದೆ. ಒಂದು ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಸ್ವಯಂಸೇವೆಯ ಸಹಾಯ ನೀಡಿದ ಬಳಿಕ ಸಹೋದರಿಯೊಬ್ಬಳು ಹೇಳಿದ್ದು: “ಅಲ್ಲಿ ನನ್ನ ಕುಟುಂಬದವರು ಮತ್ತು ಕೆಲವೇ ಸ್ನೇಹಿತರನ್ನು ಬಿಟ್ಟರೆ ಹೆಚ್ಚಿನವರ ಪರಿಚಯ ನನಗಿರಲಿಲ್ಲ. ಆದರೆ ಕ್ಲೀನಿಂಗ್‌ ವಿಭಾಗದಲ್ಲಿ ಸಹಾಯಹಸ್ತ ನೀಡಿದಾಗ ನನಗೆ ಅನೇಕ ಸಹೋದರ ಸಹೋದರಿಯರ ಪರಿಚಯವಾಯಿತು. ಅದು ನನಗೆ ತುಂಬ ಖುಷಿ ಕೊಟ್ಟಿತು!”

6. ರಜೆಯಲ್ಲಿರುವಾಗ ನಾವು ಚೈತನ್ಯವನ್ನು ಪಡೆದುಕೊಳ್ಳಬಲ್ಲ ಒಂದು ವಿಧ ಯಾವುದು?

6 ಇಸ್ರಾಯೇಲ್ಯರು ವರ್ಷದಲ್ಲಿ ಮೂರು ಹಬ್ಬಗಳ ಸಮಯದಲ್ಲಿ ಆರಾಧನೆಗಾಗಿ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದರು. (ವಿಮೋ. 34:23) ಅನೇಕವೇಳೆ ತಮ್ಮ ಹೊಲಗಳನ್ನೂ ಅಂಗಡಿಗಳನ್ನೂ ಬಿಟ್ಟು ಹಲವಾರು ದಿನಗಳ ತನಕ ಧೂಳುತುಂಬಿದ ರಸ್ತೆಗಳಲ್ಲಿ ಕಾಲ್ನಡೆಯಾಗಿ ಹೋಗಬೇಕಾಗಿತ್ತು. ಆದರೂ ದೇವಾಲಯಕ್ಕೆ ಹೋಗುವುದು ‘ಮಹಾ ಸಂತೋಷವನ್ನು’ ತಂದಿತ್ತು. ಏಕೆಂದರೆ ಅಲ್ಲಿ ಹಾಜರಾಗುವವರೆಲ್ಲರೂ ‘ಯೆಹೋವನನ್ನು ಕೀರ್ತಿಸುತ್ತಾ ಇದ್ದರು.’ (2 ಪೂರ್ವ. 30:21) ಇಂದಿನ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಸಹ ತಮ್ಮ ಕುಟುಂಬದೊಂದಿಗೆ ಸೇರಿ ಸಮೀಪದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಸೌಕರ್ಯಗಳಿರುವ ಬೆತೆಲನ್ನು ಸಂದರ್ಶಿಸುವುದರಲ್ಲಿ ಮಹಾ ಸಂತೋಷವನ್ನು ಕಂಡುಕೊಳ್ಳುತ್ತಾರೆ. ನಿಮ್ಮ ಮುಂದಿನ ಕೌಟುಂಬಿಕ ರಜೆಯಲ್ಲಿ ಬೆತೆಲನ್ನು ಸಂದರ್ಶಿಸಲು ಯೋಜಿಸಬಲ್ಲಿರೊ?

7. (ಎ) ಸಂತೋಷ ಗೋಷ್ಠಿಗಳು ಹೇಗೆ ಪ್ರಯೋಜನಕರವಾಗಿರಬಲ್ಲವು? (ಬಿ) ಸ್ಮರಣೀಯವಾದ ಭಕ್ತಿವೃದ್ಧಿಗೊಳಿಸುವ ಒಂದು ಗೋಷ್ಠಿಗೆ ಯಾವುದು ನೆರವಾಗಬಲ್ಲದು?

7 ಮನೆಮಂದಿ ಮತ್ತು ಸ್ನೇಹಿತರೊಂದಿಗೆ ಸಂತೋಷ ಗೋಷ್ಠಿಗಳಿಗಾಗಿ ಒಟ್ಟುಗೂಡುವುದು ಸಹ ಪ್ರೋತ್ಸಾಹನೀಯ. ವಿವೇಕಿ ರಾಜ ಸೊಲೊಮೋನನು ಹೇಳಿದ್ದು: “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.” (ಪ್ರಸಂ. 2:24) ಸಂತೋಷ ಗೋಷ್ಠಿಗಳು ನಮ್ಮನ್ನು ಚೈತನ್ಯಗೊಳಿಸುವವು ಮಾತ್ರವಲ್ಲದೆ ನಮ್ಮ ಜೊತೆ ಕ್ರೈಸ್ತರ ಉತ್ತಮ ಪರಿಚಯವನ್ನು ಮಾಡಿಕೊಳ್ಳುವಾಗ ನಮ್ಮ ಮಧ್ಯೆಯಿರುವ ಪ್ರೀತಿಯ ಬಂಧವನ್ನೂ ಬಲಗೊಳಿಸುತ್ತವೆ. ಸ್ಮರಣೀಯವಾದ ಭಕ್ತಿವೃದ್ಧಿಗೊಳಿಸುವ ಒಂದು ಒಕ್ಕೂಟಕ್ಕೆ ನೆರವಾಗಲು ಸಂತೋಷ ಗೋಷ್ಠಿಗಳನ್ನು ಸಣ್ಣದಾಗಿಡುವುದು ಒಳ್ಳೇದು. ಮಾತ್ರವಲ್ಲದೆ ಅವುಗಳ ಮೇಲೆ ಯೋಗ್ಯ ಉಸ್ತುವಾರಿ ವಹಿಸತಕ್ಕದ್ದು. ವಿಶೇಷವಾಗಿ ಮದ್ಯಪಾನವನ್ನು ನೀಡುವ ಏರ್ಪಾಡು ಇರುವುದಾದರೆ ಹೆಚ್ಚಿನ ಜಾಗ್ರತೆ ಅಗತ್ಯ.

ಶುಶ್ರೂಷೆ ಚೈತನ್ಯವನ್ನು ಕೊಡುತ್ತದೆ

8, 9. (ಎ) ಯೇಸುವಿನ ಸಂದೇಶ ಮತ್ತು ಶಾಸ್ತ್ರಿಗಳೂ ಫರಿಸಾಯರೂ ಕೊಟ್ಟ ಸಂದೇಶದ ನಡುವಣ ವ್ಯತ್ಯಾಸವನ್ನು ತಿಳಿಸಿ. (ಬಿ) ಬೈಬಲ್‌ ಸತ್ಯಗಳನ್ನು ಹಂಚಿಕೊಳ್ಳುವ ಮೂಲಕ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

8 ಯೇಸು ಶುಶ್ರೂಷೆಯಲ್ಲಿ ಹುರುಪುಳ್ಳವನಾಗಿದ್ದನು. ತನ್ನ ಶಿಷ್ಯರು ಸಹ ಹುರುಪುಳ್ಳವರಾಗಿರಬೇಕೆಂದು ಪ್ರೋತ್ಸಾಹಿಸಿದನು. ಇದು ಅವನ ಈ ಮಾತುಗಳಲ್ಲಿ ವ್ಯಕ್ತ: “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” (ಮತ್ತಾ. 9:37, 38) ಯೇಸು ಕಲಿಸಿದ ಸಂದೇಶವು ನಿಜವಾಗಿಯೂ ಚೈತನ್ಯದಾಯಕವಾಗಿತ್ತು. ಏಕೆಂದರೆ ಅದು “ಸುವಾರ್ತೆ” ಆಗಿತ್ತು. (ಮತ್ತಾ. 4:23; 24:14) ಫರಿಸಾಯರು ಜನರ ಮೇಲೆ ಹೇರಿದ ಭಾರವಾದ ನೇಮನಿಷ್ಠೆಗಳಿಗೆ ಇದು ತೀರ ವ್ಯತಿರಿಕ್ತವಾಗಿತ್ತು.—ಮತ್ತಾಯ 23:4, 23, 24 ಓದಿ.

9 ರಾಜ್ಯ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ನಾವು ಅವರಿಗೆ ಆಧ್ಯಾತ್ಮಿಕ ಚೈತನ್ಯವನ್ನು ನೀಡುತ್ತೇವೆ. ಅದೇ ಸಮಯದಲ್ಲಿ ನಾವು ನಮ್ಮ ಹೃದಮನಗಳಲ್ಲೂ ಬೈಬಲ್‌ ಸತ್ಯಗಳನ್ನು ಆಳವಾಗಿ ಬೇರೂರಿಸುತ್ತೇವೆ. ಕೀರ್ತನೆಗಾರನು ಸೂಕ್ತವಾಗಿ ಹೇಳಿದ್ದು: “ಯಾಹುವಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವದು ಒಳ್ಳೇದೂ ಸಂತೋಷಕರವೂ ಆಗಿದೆ.” (ಕೀರ್ತ. 147:1) ನೀವು ನಿಮ್ಮ ನೆರೆಯವರ ಮುಂದೆ ಯೆಹೋವನನ್ನು ಸ್ತುತಿಸುವಾಗ ಸಿಗುವ ಸಂತೋಷವನ್ನು ಹೆಚ್ಚಿಸಿಕೊಳ್ಳಬಲ್ಲಿರೊ?

10. ನಮ್ಮ ಸಂದೇಶಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವುದರ ಮೇಲೆ ಶುಶ್ರೂಷೆಯಲ್ಲಿನ ನಮ್ಮ ಯಶಸ್ಸು ಹೊಂದಿಕೊಂಡಿದೆಯೊ? ವಿವರಿಸಿ.

10 ಕೆಲವು ಕ್ಷೇತ್ರಗಳಲ್ಲಿ ಜನರು ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ತೋರಿಸುವಾಗ ಬೇರೆ ಕ್ಷೇತ್ರಗಳಲ್ಲಿರುವ ಜನರು ಹಾಗೆ ಪ್ರತಿಕ್ರಿಯಿಸುವುದಿಲ್ಲ ಎಂಬುದು ಸತ್ಯ. (ಅ. ಕಾರ್ಯಗಳು 18:1, 5-8 ಓದಿ.) ಜನರು ರಾಜ್ಯ ಸಂದೇಶಕ್ಕೆ ಉತ್ತಮ ಪ್ರತಿಕ್ರಿಯೆ ತೋರಿಸದ ಒಂದು ಕ್ಷೇತ್ರದಲ್ಲಿ ನೀವಿರುವುದಾದರೆ ಶುಶ್ರೂಷೆಯಲ್ಲಿ ನೀವು ಸಾಧಿಸುತ್ತಿರುವ ಒಳ್ಳಿತಿನ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿ. ಯೆಹೋವನ ನಾಮವನ್ನು ಪ್ರಚುರಪಡಿಸುವುದರಲ್ಲಿ ನಿಮ್ಮ ಸತತ ಪ್ರಯತ್ನವು ವ್ಯರ್ಥವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ. (1 ಕೊರಿಂ. 15:58) ಮಾತ್ರವಲ್ಲದೆ ಜನರು ಸುವಾರ್ತೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನಮ್ಮ ಯಶಸ್ಸನ್ನು ಅಳೆಯುವುದಿಲ್ಲ. ಸಹೃದಯದ ವ್ಯಕ್ತಿಗಳಿಗೆ ರಾಜ್ಯ ಸಂದೇಶಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸುವ ಸಂದರ್ಭವು ಕೊಡಲ್ಪಡುವಂತೆ ಯೆಹೋವನು ನೋಡಿಕೊಳ್ಳುವನು ಎಂಬ ಖಾತ್ರಿ ನಮಗಿರಬಲ್ಲದು.—ಯೋಹಾ. 6:44.

ಕುಟುಂಬ ಆರಾಧನೆ ಚೈತನ್ಯದಾಯಕ

11. ಯೆಹೋವನು ಹೆತ್ತವರಿಗೆ ಯಾವ ಜವಾಬ್ದಾರಿಯನ್ನು ಕೊಟ್ಟಿದ್ದಾನೆ, ಮತ್ತು ಅವರದನ್ನು ಹೇಗೆ ಪೂರೈಸಬಲ್ಲರು?

11 ಯೆಹೋವನ ಮತ್ತು ಆತನ ಮಾರ್ಗಗಳ ಬಗ್ಗೆ ತಮ್ಮ ಮಕ್ಕಳಿಗೆ ಬೋಧಿಸುವ ಜವಾಬ್ದಾರಿ ದೇವಭಕ್ತ ಹೆತ್ತವರಿಗಿದೆ. (ಧರ್ಮೋ. 11:18, 19) ನೀವೊಬ್ಬ ಹೆತ್ತವರಾಗಿರುವಲ್ಲಿ ನಿಮ್ಮ ಮಕ್ಕಳಿಗೆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಬಗ್ಗೆ ಕಲಿಸಲು ನಿಶ್ಚಿತ ಸಮಯವನ್ನು ಬದಿಗಿಡುತ್ತೀರೊ? ನೀವು ಈ ಗಂಭೀರ ಜವಾಬ್ದಾರಿಯನ್ನು ಪೂರೈಸಲು ಮತ್ತು ಕುಟುಂಬ ಅಗತ್ಯಗಳಿಗೆ ಗಮನಕೊಡಲು ನೆರವಾಗುವ ಸಲುವಾಗಿ ಯೆಹೋವನು ಹಲವಾರು ಪುಸ್ತಕಗಳು, ಪತ್ರಿಕೆಗಳು, ವಿಡಿಯೋಗಳು ಮತ್ತು ಧ್ವನಿ ಮುದ್ರಿಕೆಗಳ ಮೂಲಕ ಯಥೇಷ್ಟ ಪೌಷ್ಟಿಕ ಆಧ್ಯಾತ್ಮಿಕ ಆಹಾರವನ್ನು ಒದಗಿಸಿದ್ದಾನೆ.

12, 13. (ಎ) ಕುಟುಂಬ ಆರಾಧನೆಯ ಸಂಜೆಯಿಂದ ಕುಟುಂಬಗಳು ಹೇಗೆ ಪ್ರಯೋಜನ ಪಡೆಯಬಲ್ಲವು? (ಬಿ) ತಮ್ಮ ಕುಟುಂಬ ಆರಾಧನೆ ಚೈತನ್ಯದ ಮೂಲವಾಗಿದೆ ಎಂಬುದನ್ನು ಹೆತ್ತವರು ಹೇಗೆ ಖಚಿತಪಡಿಸಬಲ್ಲರು?

12 ಅಷ್ಟಲ್ಲದೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗ ಕುಟುಂಬ ಆರಾಧನೆ ಸಂಜೆಯ ಏರ್ಪಾಡನ್ನು ಮಾಡಿದೆ. ಇದು ಪ್ರತಿ ವಾರ ಕುಟುಂಬವಾಗಿ ಬೈಬಲಧ್ಯಯನ ಮಾಡಲು ಒಂದು ಸಂಜೆಯನ್ನು ಬದಿಗಿಡುವುದಾಗಿದೆ. ಈ ಏರ್ಪಾಡು ತಾವು ಪರಸ್ಪರ ಪ್ರೀತಿಯಲ್ಲಿ ಹತ್ತಿರವಾಗುವಂತೆ ಸಹಾಯಮಾಡಿದೆ ಮತ್ತು ಯೆಹೋವನೊಂದಿಗಿನ ಸಂಬಂಧವನ್ನು ಬಲಪಡಿಸಿದೆ ಎಂದು ಅನೇಕರು ಕಂಡುಕೊಂಡಿದ್ದಾರೆ. ಆದರೆ ತಮ್ಮ ಕುಟುಂಬ ಆರಾಧನೆಯು ಆಧ್ಯಾತ್ಮಿಕ ಚೈತನ್ಯದ ಮೂಲವಾಗಿದೆ ಎಂಬುದನ್ನು ಹೆತ್ತವರು ಹೇಗೆ ಖಚಿತಪಡಿಸಬಲ್ಲರು?

13 ಕುಟುಂಬ ಆರಾಧನೆಯ ಸಂಜೆಯು ನೀರಸವೂ ಅತಿ ಗಂಭೀರವೂ ಆದ ಅವಧಿಯಾಗಿರಬಾರದು. ಎಷ್ಟೆಂದರೂ ನಾವು ‘ಸಂತೋಷದ ದೇವರನ್ನು’ ಆರಾಧಿಸುವವರಾಗಿದ್ದೇವೆ ಮತ್ತು ನಾವು ಆನಂದದಿಂದ ಆತನ ಆರಾಧನೆ ಮಾಡಬೇಕೆಂದು ಆತನು ಬಯಸುತ್ತಾನೆ. (1 ತಿಮೊ. 1:11; ಫಿಲಿ. 4:4) ಬೈಬಲಿನಲ್ಲಿರುವ ಆಧ್ಯಾತ್ಮಿಕ ರತ್ನಗಳ ಕುರಿತು ಚರ್ಚಿಸಲು ಹೆಚ್ಚಿನ ಸಂಜೆಯೊಂದನ್ನು ಹೊಂದಿರುವುದು ದೊಡ್ಡ ಆಶೀರ್ವಾದವೇ ಸರಿ. ಹೆತ್ತವರು ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಬಳಸುತ್ತಾ ತಮ್ಮ ಬೋಧನಾ ವಿಧಾನಗಳನ್ನು ಅಗತ್ಯಕ್ಕನುಸಾರ ಹೊಂದಿಸಿಕೊಳ್ಳಸಾಧ್ಯವಿದೆ. ಉದಾಹರಣೆಗೆ, ಒಂದು ಕುಟುಂಬವು ಬ್ರ್ಯಾಂಡನ್‌ ಎಂಬ ತಮ್ಮ ಹತ್ತು ವರ್ಷದ ಮಗನಿಗೆ ಒಂದು ವರದಿಯನ್ನು ಬರೆಯುವಂತೆ ಹೇಳಿತು. ಅದರ ಶೀರ್ಷಿಕೆ “ಸೈತಾನನನ್ನು ಪ್ರತಿನಿಧಿಸಲು ಯೆಹೋವನು ಒಂದು ಹಾವನ್ನು ಏಕೆ ಉಪಯೋಗಿಸಿದನು?” ಎಂದಾಗಿತ್ತು. ಈ ವಿಚಾರ ಬ್ರ್ಯಾಂಡನ್‌ ಅನ್ನು ಈ ಮುಂಚೆಯೇ ಚಿಂತೆಗೆ ಈಡುಮಾಡಿತ್ತು, ಏಕೆಂದರೆ ಅವನಿಗೆ ಹಾವುಗಳೆಂದರೆ ಬಲು ಇಷ್ಟ. ಅವನ್ನು ಸೈತಾನನಿಗೆ ಸಂಬಂಧಿಸಿ ಮಾತಾಡಿರುವುದು ಅವನಿಗೆ ಇಷ್ಟವಾಗಿರಲಿಲ್ಲ. ಕೆಲವು ಕುಟುಂಬಗಳು ಕೆಲವೊಮ್ಮೆ ಬೈಬಲ್‌ ಡ್ರಾಮಗಳನ್ನು ಅಭಿನಯಿಸಿವೆ. ಅದರಲ್ಲಿ ಪ್ರತಿ ಸದಸ್ಯನು ಒಂದು ಪಾತ್ರವನ್ನು ಅಭಿನಯಿಸುತ್ತಾ ತನ್ನ ಆಯಾ ಭಾಗವನ್ನು ಬೈಬಲಿನಿಂದ ಓದುತ್ತಿದ್ದನು ಅಥವಾ ಒಂದು ಘಟನೆಯನ್ನು ನಟಿಸಿ ತೋರಿಸುತ್ತಿದ್ದನು. ಈ ಬೋಧನಾ ವಿಧಾನಗಳು ತುಂಬ ಖುಷಿಯನ್ನು ತರುವುದಲ್ಲದೆ ನಿಮ್ಮ ಮಕ್ಕಳನ್ನೂ ಅದರಲ್ಲಿ ತಲ್ಲೀನರಾಗಿಸುತ್ತವೆ. ಇದರಿಂದಾಗಿ ಬೈಬಲ್‌ ಮೂಲತತ್ತ್ವಗಳು ಅವರ ಹೃದಯಗಳನ್ನೂ ಸ್ಪರ್ಶಿಸಬಲ್ಲವು. *

ನಿಮ್ಮನ್ನು ಕುಗ್ಗಿಸಬಲ್ಲ ವಿಷಯಗಳನ್ನು ವರ್ಜಿಸಿ

14, 15. (ಎ) ಕಡೇ ದಿವಸಗಳಲ್ಲಿ ಒತ್ತಡ ಮತ್ತು ಅಭದ್ರತೆಯು ಹೆಚ್ಚಾಗಿರುವುದು ಹೇಗೆ? (ಬಿ) ನಾವು ಯಾವ ಹೆಚ್ಚಿನ ಒತ್ತಡವನ್ನು ಎದುರಿಸಬಹುದು?

14 ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಒತ್ತಡ ಮತ್ತು ಅಭದ್ರತೆಯು ಹೆಚ್ಚಾಗಿದೆ. ನಿರುದ್ಯೋಗ ಮತ್ತು ಇತರ ಆರ್ಥಿಕ ಬಿಕ್ಕಟ್ಟುಗಳು ಲಕ್ಷಾಂತರ ಮಂದಿಯನ್ನು ಬಾಧಿಸುತ್ತವೆ. ಕೆಲಸವಿರುವವರಿಗೆ ಸಹ ತಮ್ಮ ಸಂಬಳವು ತೂತುಗಳುಳ್ಳ ಚೀಲದಲ್ಲಿ ಹಾಕಲ್ಪಟ್ಟಿದೆಯೋ ಎಂಬಂತೆ ಅನಿಸುತ್ತದೆ. ಸಂಪಾದನೆಯು ಮನೆಯ ಖರ್ಚಿಗೆ ಏನೂ ಸಾಕಾಗುವುದಿಲ್ಲ. (ಹಗ್ಗಾಯ 1:4-6 ಹೋಲಿಸಿ.) ರಾಜಕಾರಣಿಗಳು ಮತ್ತು ಇತರ ನಾಯಕರು ಭಯೋತ್ಪಾದನೆ ಮತ್ತು ದುಷ್ಟತೆಯ ಇತರ ಮೂಲಗಳೊಂದಿಗೆ ನಿಭಾಯಿಸಲು ಹೋರಾಡುತ್ತಿರುವಾಗ ಸಹಾಯಶೂನ್ಯರಾಗಿ ಕಾಣುತ್ತಾರೆ. ಅನೇಕ ಜನರು ತಮ್ಮ ಸ್ವಂತ ಕುಂದುಕೊರತೆಗಳಿಂದ ಬಾಧೆಯನ್ನು ಅನುಭವಿಸುತ್ತಿದ್ದಾರೆ.—ಕೀರ್ತ. 38:4.

15 ಸೈತಾನನ ವಿಷಯಗಳ ವ್ಯವಸ್ಥೆಯು ತರುವ ಸಮಸ್ಯೆಗಳು ಮತ್ತು ಒತ್ತಡಗಳ ಪ್ರಭಾವದಿಂದ ಸತ್ಯ ಕ್ರೈಸ್ತರು ವಿಮುಕ್ತರೇನಲ್ಲ. (1 ಯೋಹಾ. 5:19) ಕೆಲವು ವಿದ್ಯಮಾನಗಳಲ್ಲಿ, ಕ್ರಿಸ್ತನ ಶಿಷ್ಯರು ಯೆಹೋವನಿಗೆ ನಂಬಿಗಸ್ತರಾಗಿರಲು ಶ್ರಮಿಸುವುದರಿಂದ ಹೆಚ್ಚಿನ ಒತ್ತಡವನ್ನು ಎದುರಿಸಬಹುದು. “ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು” ಎಂದು ಯೇಸು ಹೇಳಿದನು. (ಯೋಹಾ. 15:20) ಆದರೂ ನಾವು ‘ಹಿಂಸಿಸಲ್ಪಟ್ಟರೂ ಕೈಬಿಡಲ್ಪಟ್ಟವರಲ್ಲ.’ (2 ಕೊರಿಂ. 4:9) ಅದು ಹೇಗೆ?

16. ನಮ್ಮ ಆನಂದವನ್ನು ಕಾಪಾಡಿಕೊಳ್ಳಲು ಯಾವುದು ನಮಗೆ ಸಹಾಯಮಾಡಬಲ್ಲದು?

16 “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು” ಎಂದನು ಯೇಸು. (ಮತ್ತಾ. 11:28) ಕ್ರಿಸ್ತನ ವಿಮೋಚನಾ ಮೌಲ್ಯ ಒದಗಿಸುವಿಕೆಯಲ್ಲಿ ಪೂರ್ಣ ನಂಬಿಕೆಯನ್ನು ಹೊಂದಿರುವ ಮೂಲಕ ನಾವು ಯೆಹೋವನ ಹಸ್ತಕ್ಕೆ ನಮ್ಮನ್ನು ಒಪ್ಪಿಸುತ್ತೇವೆ. ಹೀಗೆ ನಾವು ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಪಡೆದುಕೊಳ್ಳುತ್ತೇವೆ. (2 ಕೊರಿಂ. 4:7) ‘ಸಹಾಯಕನಾದ’ ದೇವರ ಪವಿತ್ರಾತ್ಮವು ನಾವು ಎದುರಿಸುವ ಪರೀಕ್ಷೆಗಳು ಮತ್ತು ಪ್ರಲೋಭನೆಗಳನ್ನು ತಾಳಿಕೊಳ್ಳಲು ನಮ್ಮ ನಂಬಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಾವು ಆನಂದದಿಂದಿರಲು ಸಹ ಸಹಾಯಮಾಡುತ್ತದೆ.—ಯೋಹಾ. 14:26; ಯಾಕೋ. 1:2-4.

17, 18. (ಎ) ನಾವು ಯಾವ ಮನೋಭಾವದ ವಿರುದ್ಧ ಜಾಗ್ರತೆ ವಹಿಸಬೇಕು? (ಬಿ) ಲೌಕಿಕ ಸುಖಭೋಗಗಳಿಗೆ ಆದ್ಯತೆಯನ್ನು ನೀಡುವುದರಿಂದ ಏನಾಗಬಲ್ಲದು?

17 ಇಂದು ಪ್ರಾಮಾಣಿಕ ಕ್ರೈಸ್ತರು ಈ ಭೋಗಪ್ರಿಯ ಲೋಕದ ಮನೋಭಾವದಿಂದ ಅನುಚಿತ ಪ್ರಭಾವಕ್ಕೊಳಗಾಗುವುದರ ಬಗ್ಗೆ ಎಚ್ಚರ ವಹಿಸಬೇಕು. (ಎಫೆಸ 2:2-5 ಓದಿ.) ಇಲ್ಲವಾದರೆ ನಾವು “ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ” ಇವುಗಳಿಂದ ಮೋಸಹೋಗಸಾಧ್ಯವಿದೆ. (1 ಯೋಹಾ. 2:16) ಅಥವಾ ಶರೀರದಾಶೆಗಳಿಗೆ ಮಣಿಯುವುದರಿಂದ ನಮಗೆ ಚೈತನ್ಯ ಸಿಗಬಹುದು ಎಂದು ನಾವು ತಪ್ಪಾಗಿ ನೆನಸಬಹುದು. (ರೋಮ. 8:6) ಉದಾಹರಣೆಗೆ, ಇಂದ್ರಿಯ ಸುಖಭೋಗವನ್ನು ತೃಪ್ತಿಗೊಳಿಸುವ ಪ್ರಯತ್ನದಲ್ಲಿ ಕೆಲವರು ಅಮಲೌಷಧ ಮತ್ತು ಮದ್ಯಪಾನದ ದುರುಪಯೋಗ, ಕಾಮಪ್ರಚೋದಕ ಸಾಹಿತ್ಯ, ಅಪಾಯಕರ ಕ್ರೀಡೆಗಳು ಅಥವಾ ವಿವಿಧ ನಿಷಿದ್ಧ ಚಟುವಟಿಕೆಗಳ ಕಡೆ ತಿರುಗಿದ್ದಾರೆ. ಸೈತಾನನ ಈ ‘ತಂತ್ರೋಪಾಯಗಳು’ ಚೈತನ್ಯವನ್ನು ಪಡೆದುಕೊಳ್ಳುವುದರ ಬಗ್ಗೆ ಒಬ್ಬನಿಗೆ ತಿರುಚಲ್ಪಟ್ಟ ದೃಷ್ಟಿಕೋನವನ್ನು ನೀಡಿ ದಾರಿತಪ್ಪಿಸಲು ಉದ್ದೇಶಿಸಲ್ಪಟ್ಟಿವೆ.—ಎಫೆ. 6:11.

18 ತಿನ್ನುವುದು, ಕುಡಿಯುವುದು ಮತ್ತು ಹಿತಕರವಾದ ಮನೋರಂಜನೆಗಳಲ್ಲಿ ತೊಡಗುವುದರಲ್ಲಿ ತಪ್ಪೇನಿಲ್ಲ ನಿಜ. ಆದರೆ ಅವನ್ನು ಮಿತಪ್ರಮಾಣದಲ್ಲಿಡಬೇಕು. ಆದರೂ ಇಂಥ ವಿಷಯಗಳು ನಮ್ಮ ಜೀವನದ ಪ್ರಮುಖ ವಿಷಯಗಳಾಗುವಂತೆ ನಾವು ಬಿಡುವುದಿಲ್ಲ. ವಿಶೇಷವಾಗಿ ನಾವು ಜೀವಿಸುತ್ತಿರುವ ಸಮಯದ ನೋಟದಲ್ಲಿ ಸಮತೋಲನೆ ಮತ್ತು ಸ್ವನಿಯಂತ್ರಣ ಅಗತ್ಯ. ವೈಯಕ್ತಿಕ ಬೆನ್ನಟ್ಟುವಿಕೆಗಳು ನಮ್ಮನ್ನು ಎಷ್ಟು ಕುಗ್ಗಿಸಿಬಿಡಬಲ್ಲವೆಂದರೆ ನಾವು “ಕರ್ತನಾದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ಸಂಬಂಧದಲ್ಲಿ . . . ನಿಷ್ಕ್ರಿಯರು ಅಥವಾ ನಿಷ್ಫಲರು” ಆಗಿಬಿಡಬಲ್ಲೆವು.—2 ಪೇತ್ರ 1:8.

19, 20. ನಿಜ ಚೈತನ್ಯವನ್ನು ಹೇಗೆ ಪಡೆಯಸಾಧ್ಯವಿದೆ?

19 ನಾವು ಯೆಹೋವನ ನಿಬಂಧನೆಗಳಿಗೆ ಅನುಸಾರವಾಗಿ ನಮ್ಮ ಯೋಚನಾಧಾಟಿಯನ್ನು ಹೊಂದಿಸಿಕೊಳ್ಳುವಾಗ ಈ ಲೋಕವು ನೀಡುವ ಯಾವುದೇ ಸುಖಾಭಿಲಾಷೆಗಳು ತಾತ್ಕಾಲಿಕವಾಗಿವೆ ಎಂಬುದನ್ನು ಗ್ರಹಿಸುತ್ತೇವೆ. ಮೋಶೆ ಅದನ್ನು ಗ್ರಹಿಸಿಕೊಂಡನು. ನಾವೂ ಅದನ್ನು ಅರ್ಥಮಾಡಿಕೊಳ್ಳುತ್ತೇವೆ. (ಇಬ್ರಿ. 11:25) ಸತ್ಯಾಂಶವೇನೆಂದರೆ ಗಾಢವಾದ ದೀರ್ಘಕಾಲಿಕ ಆನಂದ ಮತ್ತು ಸಂತೃಪ್ತಿಯನ್ನು ತರಬಲ್ಲ ನಿಜ ಚೈತನ್ಯವು ನಮ್ಮ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡುವುದರಿಂದಲೇ ಸಿಗುತ್ತದೆ.—ಮತ್ತಾ. 5:6.

20 ನಾವು ಆಧ್ಯಾತ್ಮಿಕ ವಿಷಯಗಳಲ್ಲಿ ಚೈತನ್ಯ ಪಡೆದುಕೊಳ್ಳುತ್ತಾ ಇರೋಣ. ಹೀಗೆ ಮಾಡುವ ಮೂಲಕ ನಾವು ‘ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಸಂತೋಷಕರವಾದ ನಿರೀಕ್ಷೆಯನ್ನೂ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಮಹಿಮಾಯುತ ಪ್ರತ್ಯಕ್ಷತೆಯನ್ನೂ ಕಾಯುತ್ತಿರುತ್ತೇವೆ.’ (ತೀತ 2:12, 13) ಆದುದರಿಂದ ಕ್ರಿಸ್ತನ ಅಧಿಕಾರ ಮತ್ತು ಮಾರ್ಗದರ್ಶನೆಗೆ ಅಧೀನರಾಗುವ ಮೂಲಕ ಅವನ ನೊಗದಡಿಯಲ್ಲೇ ಉಳಿಯುವ ದೃಢತೀರ್ಮಾನ ಮಾಡೋಣ. ಹೀಗೆ ಮಾಡುವಾಗ ನಾವು ನಿಜ ಸಂತೋಷ ಮತ್ತು ಚೈತನ್ಯವನ್ನು ಪಡೆದುಕೊಳ್ಳುವೆವು!

[ಪಾದಟಿಪ್ಪಣಿ]

^ ಪ್ಯಾರ. 13 ಕುಟುಂಬ ಅಧ್ಯಯನವನ್ನು ಆಸಕ್ತಿಕರವೂ ಬೋಧಪ್ರದವೂ ಆಗಿ ಮಾಡುವುದು ಹೇಗೆ ಎಂಬುದರ ಹೆಚ್ಚಿನ ಮಾಹಿತಿಗಾಗಿ 1991ರ ಜನವರಿ ತಿಂಗಳ ನಮ್ಮ ರಾಜ್ಯ ಸೇವೆಯ ಪುಟ 1ನ್ನು ನೋಡಿ.

ನಿಮ್ಮ ಉತ್ತರವೇನು?

• ಇಂದು ಯೆಹೋವನ ಜನರು ಹೇಗೆ ಚೈತನ್ಯವನ್ನು ಪಡೆದುಕೊಳ್ಳುತ್ತಾರೆ?

• ಶುಶ್ರೂಷೆಯು ನಮ್ಮನ್ನು ಮತ್ತು ನಾವು ಮಾತಾಡುವ ಜನರನ್ನು ಯಾವ ವಿಧದಲ್ಲಿ ಚೈತನ್ಯಗೊಳಿಸುತ್ತದೆ?

• ಕುಟುಂಬ ಆರಾಧನೆ ಚೈತನ್ಯವನ್ನು ತರುತ್ತದೆ ಎಂಬುದನ್ನು ಖಚಿತಪಡಿಸಲು ಕುಟುಂಬ ತಲೆಗಳು ಏನು ಮಾಡಬಲ್ಲರು?

• ಯಾವ ವಿಷಯಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಕುಗ್ಗಿಸುತ್ತವೆ

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚಿತ್ರಗಳು]

ಯೇಸುವಿನ ನೊಗವನ್ನು ತೆಗೆದುಕೊಳ್ಳುವ ಮೂಲಕ ನಾವು ಚೈತನ್ಯದ ಅನೇಕ ಮೂಲಗಳನ್ನು ಕಂಡುಕೊಳ್ಳುತ್ತೇವೆ