ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನ ನಾಮವನ್ನು ಆಶ್ರಯಿಸಿ”

“ಯೆಹೋವನ ನಾಮವನ್ನು ಆಶ್ರಯಿಸಿ”

“ಯೆಹೋವನ ನಾಮವನ್ನು ಆಶ್ರಯಿಸಿ”

“ದೀನದರಿದ್ರಜನವನ್ನು . . . ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು.”—ಚೆಫ. 3:12.

1, 2. ಯಾವ ಸಾಂಕೇತಿಕ ಬಿರುಗಾಳಿಯು ಶೀಘ್ರದಲ್ಲೇ ಮಾನವರೆಲ್ಲರ ಮೇಲೆ ಎರಗಲಿದೆ?

ಧಾರಾಕಾರವಾಗಿ ಸುರಿಯುವ ಬಿರುಮಳೆ ಅಥವಾ ಕಲ್ಮಳೆಯಿಂದ ತಪ್ಪಿಸಿಕೊಳ್ಳಲು ನೀವೆಂದಾದರೂ ಒಂದು ಸೇತುವೆಯ ಅಡಿಯಲ್ಲಿ ಆಶ್ರಯಪಡೆಯಬೇಕಾಗಿತ್ತೋ? ಒಂದುವೇಳೆ ಸೇತುವೆಯು ಒಂದು ಬಿರುಮಳೆ ಅಥವಾ ಕಲ್ಮಳೆಯಿಂದ ನಿಮಗೆ ಸಾಕಷ್ಟು ಸುರಕ್ಷೆಯನ್ನು ನೀಡೀತು. ಆದರೆ ಪ್ರಚಂಡ ಬಿರುಗಾಳಿ ಅಥವಾ ತುಫಾನು ಏಳುವುದಾದರೆ ಅದು ನಿಮಗೆ ಕೊಂಚವೂ ಸುರಕ್ಷೆಯನ್ನು ನೀಡಲಾರದು.

2 ಆದರೆ ಮಾನವಕುಲವೇ ನಾಶವಾಗಿ ಹೋಗುವಂಥ ಬೆದರಿಕೆಯಿರುವ ಪ್ರಬಲ ಬಿರುಗಾಳಿಯೊಂದು ದಿಗಂತದಲ್ಲಿ ಧಾವಿಸುತ್ತಾ ಬರುತ್ತಿದೆ! ಅದು ಸಾಂಕೇತಿಕ ಬಿರುಗಾಳಿ ಅಥವಾ “ಹಾಳುಪಾಳುಮಾಡುವ ದಿನ” ಆಗಿದೆ. ‘ಯೆಹೋವನ ಮಹಾದಿನವಾದ’ ಇದು ಮಾನವರೆಲ್ಲರ ಮೇಲೂ ಪರಿಣಾಮಬೀರಲಿದೆ. ಆದರೂ ಆ ದಿನದಲ್ಲಿ ಬೇಕಾದ ಆಶ್ರಯವನ್ನು ನಾವು ಪಡೆಯಬಲ್ಲೆವು. (ಚೆಫನ್ಯ 1:14-18 ಓದಿ.) ಹಾಗಾದರೆ, ಈಗ ಶೀಘ್ರದಲ್ಲೇ ಬರಲಿರುವ ಆ “ಯೆಹೋವನ ರೌದ್ರದ ದಿನದಲ್ಲಿ” ನಾವು ಆಶ್ರಯವನ್ನು ಕಂಡುಕೊಳ್ಳುವುದು ಹೇಗೆ?

ಬೈಬಲ್‌ ಕಾಲದಲ್ಲಿ ಬಿರುಗಾಳಿ

3. ಇಸ್ರಾಯೇಲ್ಯರ ಹತ್ತುಕುಲಗಳ ಮೇಲೆ ‘ರಭಸವಾಗಿ ಸುರಿದ ಕಲ್ಮಳೆ’ ಯಾವುದು?

3 ಭೂಮಿಯಲ್ಲಿರುವ ಎಲ್ಲಾ ಸುಳ್ಳು ಧರ್ಮಗಳ ನಾಶನದೊಂದಿಗೆ ಯೆಹೋವನ ದಿನವು ಆರಂಭವಾಗುವುದು. ಆ ಸಮಯದಲ್ಲಿ ಆಶ್ರಯವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ದೇವರ ಪ್ರಾಚೀನ ಜನರ ಇತಿಹಾಸದಲ್ಲಿ ನಾವು ಕಂಡುಕೊಳ್ಳುತ್ತೇವೆ. ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಜೀವಿಸಿದ್ದ ಯೆಶಾಯನು ಧರ್ಮಭ್ರಷ್ಟ ಇಸ್ರಾಯೇಲ್ಯರ ಹತ್ತುಕುಲಗಳ ರಾಜ್ಯದ ಮೇಲೆ ಬಂದ ಯೆಹೋವನ ತೀರ್ಪನ್ನು “ರಭಸವಾಗಿ ಸುರಿಯುವ ಕಲ್ಮಳೆ,” ಬಿರುಗಾಳಿಗೆ ಹೋಲಿಸಿದ್ದಾನೆ. ಅದನ್ನು ಯಾರೂ ತಡೆದುಹಿಡಿಯಶಕ್ತರಲ್ಲ. (ಯೆಶಾಯ 28:1, 2 ಓದಿ.) ಆ ಪ್ರವಾದನೆಯು ಆರಂಭದ ನೆರವೇರಿಕೆಯನ್ನು ಪಡೆದದ್ದು ಹತ್ತುಕುಲಗಳ ರಾಜ್ಯವನ್ನು ಕ್ರಿ.ಪೂ. 740ರಲ್ಲಿ ಅಶ್ಶೂರ ಸಾಮ್ರಾಜ್ಯವು ಆಕ್ರಮಿಸಿದ್ದಾಗಲೇ. ಆ ಹತ್ತುಕುಲಗಳಲ್ಲಿ ಪ್ರಮುಖವಾದದ್ದು ಎಫ್ರಾಯೀಮ್‌ ಆಗಿದ್ದು ಬೈಬಲಿನಲ್ಲಿ ಇಸ್ರಾಯೇಲ್ಯರ ಹತ್ತುಕುಲಗಳ ರಾಜ್ಯವನ್ನು ಅದು ಸೂಚಿಸುತ್ತದೆ.

4. ಕ್ರಿ.ಪೂ. 607ರಲ್ಲಿ “ಯೆಹೋವನ ಮಹಾದಿನವು” ಯೆರೂಸಲೇಮಿಗೆ ಬಡಿದದ್ದು ಹೇಗೆ?

4 ಆ ಹತ್ತುಕುಲಗಳ ಮೇಲೆ ಬಂದ ತೀರ್ಪನ್ನು ಹಿಂಬಾಲಿಸಿ ಕ್ರಿ.ಪೂ. 607ರಲ್ಲಿ ಯೆರೂಸಲೇಮ್‌ ಮತ್ತು ಯೆಹೂದ ರಾಜ್ಯದ ವಿರುದ್ಧ “ಯೆಹೋವನ ಮಹಾದಿನವು” ಬಂತು. ಆ ಘಟನೆಯು ಸಂಭವಿಸಿದ್ದು ಯೆಹೂದದ ಜನರು ಸಹ ಧರ್ಮಭ್ರಷ್ಟರಾದ ಕಾರಣದಿಂದಲೇ. ರಾಜ ನೆಬೂಕದ್ನೆಚ್ಚರನ ಕೈಕೆಳಗೆ ಬಾಬಿಲೋನ್ಯರು ಯೆಹೂದಕ್ಕೂ ಅದರ ರಾಜಧಾನಿ ಯೆರೂಸಲೇಮಿಗೂ ಮುತ್ತಿಗೆ ಹಾಕಿದರು. ಯೂದಾಯದವರು ಸಹಾಯಕ್ಕಾಗಿ “ಅಸತ್ಯದ ಆಶ್ರಯವನ್ನು” ಅಂದರೆ ಈಜಿಪ್ಟಿನ ರಾಜಕೀಯ ಮೈತ್ರಿಯ ಆಶ್ರಯವನ್ನು ಕೋರಿದರು. ಆದಾಗ್ಯೂ ನಾಶಕಾರಕ ಕಲ್ಮಳೆಯು ಹೇಗೋ ಹಾಗೆ ಬಾಬಿಲೋನ್ಯರು ಆ “ಆಶ್ರಯವನ್ನು” ಬಡಿದುಕೊಂಡುಹೋದರು.—ಯೆಶಾ. 28:14, 17.

5. ಎಲ್ಲ ಸುಳ್ಳು ಧರ್ಮಗಳ ನಾಶನದ ಸಮಯದಲ್ಲಿ ದೇವಜನರು ಒಂದು ಸಮೂಹವಾಗಿ ಏನನ್ನು ಅನುಭವಿಸುತ್ತಾರೆ?

5 ಯೆರೂಸಲೇಮಿನ ಮೇಲೆ ಬಂದ ಯೆಹೋವನ ಮಹಾದಿನವು ನಮ್ಮ ಕಾಲದಲ್ಲಿನ ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಮೇಲೆ ಬರಲಿರುವ ದೇವರ ತೀರ್ಪಿನ ಒಂದು ಸೂಚನೆಯಾಗಿತ್ತು. ಅದಲ್ಲದೆ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲಿನ’ ಉಳಿದಿರುವ ಭಾಗವು ಕೂಡ ನಾಶವಾಗಲಿದೆ. ತದನಂತರ ಸೈತಾನನ ದುಷ್ಟ ಲೋಕದ ಉಳಿದ ಭಾಗಗಳು ಸಹ ನಿರ್ಮೂಲವಾಗಲಿವೆ. ಆದರೂ ದೇವಜನರು ಒಂದು ಸಮೂಹವಾಗಿ ಪಾರಾಗಿ ಉಳಿಯುವರು ಏಕೆಂದರೆ ಅವರು ಯೆಹೋವನನ್ನು ಆಶ್ರಯಿಸುತ್ತಿದ್ದಾರೆ.—ಪ್ರಕ. 7:14; 18:2, 8; 19:19-21.

ಆಧ್ಯಾತ್ಮಿಕ ಮತ್ತು ಶಾರೀರಿಕ ಆಶ್ರಯ

6. ಯೆಹೋವನ ಜನರು ಆಶ್ರಯವನ್ನು ಹೇಗೆ ಕಂಡುಕೊಳ್ಳಬಲ್ಲರು?

6 ಈ ಅಂತ್ಯಕಾಲದ ಪ್ರಸ್ತುತ ಸಮಯದಲ್ಲೂ ದೇವಜನರು ಆಶ್ರಯವನ್ನು ಹೇಗೆ ಕಂಡುಕೊಳ್ಳಬಲ್ಲರು? ನಮಗೆ ಆಧ್ಯಾತ್ಮಿಕ ಆಶ್ರಯವು ದೊರೆಯುವುದು ಹೇಗೆಂದರೆ ಪೂಜ್ಯಭಾವದಿಂದ “[ದೇವರ] ನಾಮಸ್ಮರಣೆ ಮಾಡುವ” ಮೂಲಕ ಹಾಗೂ ಹುರುಪಿನಿಂದ ಆತನ ಸೇವೆಮಾಡುವ ಮೂಲಕ. (ಮಲಾಕಿಯ 3:16-18 ಓದಿ.) ಆದರೂ ಕೇವಲ ಆತನ ನಾಮಸ್ಮರಣೆಗಿಂತ ಹೆಚ್ಚನ್ನು ಮಾಡುವ ಅಗತ್ಯವಿದೆಯೆಂದು ನಮಗೆ ತಿಳಿದಿದೆ. “ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು” ಎಂದು ನಾವು ಓದುತ್ತೇವಲ್ಲಾ. (ರೋಮ. 10:13) ಯೆಹೋವನ ನಾಮದಲ್ಲಿ ಕೋರುವುದಕ್ಕೂ ಮತ್ತು ಆತನಿಂದ ರಕ್ಷಣೆಯನ್ನು ಹೊಂದುವುದಕ್ಕೂ ನಿಕಟ ಸಂಬಂಧವಿದೆ. ಪೂಜ್ಯಭಾವದಿಂದ ದೇವರ ‘ನಾಮಸ್ಮರಣೆ ಮಾಡುತ್ತಾ’ ಆತನ ಸಾಕ್ಷಿಗಳಾಗಿ ಸೇವೆಮಾಡುವ ನಿಜ ಕ್ರೈಸ್ತರ ಮಧ್ಯೆ ಮತ್ತು ಆತನ ಸೇವೆಮಾಡದಿರುವ ಜನರ ಮಧ್ಯೆ ಇರುವ ವ್ಯತ್ಯಾಸವನ್ನು ಅನೇಕ ಪ್ರಾಮಾಣಿಕ ಜನರು ಕಾಣಬಲ್ಲರು.

7, 8. ಯಾವ ರೀತಿಯಲ್ಲಿ ಒಂದನೇ ಶತಮಾನದ ಕ್ರೈಸ್ತರು ಶಾರೀರಿಕ ರಕ್ಷಣೆಯನ್ನು ಅನುಭವಿಸಿದರು? ಅದಕ್ಕೆ ಇಂದು ಯಾವ ಹೋಲಿಕೆಯಿದೆ?

7 ಹಾಗಿದ್ದರೂ ನಮಗೆ ದೊರೆಯುವ ರಕ್ಷಣೆಯು ಆಧ್ಯಾತ್ಮಿಕ ಆಶ್ರಯವನ್ನು ಕಂಡುಕೊಳ್ಳುವುದಕ್ಕೆ ಮಾತ್ರ ಸೀಮಿತವಲ್ಲ. ಶಾರೀರಿಕ ರಕ್ಷಣೆ ಅಥವಾ ಆಶ್ರಯವು ಸಹ ದೇವಜನರಿಗೆ ವಾಗ್ದಾನಿಸಲ್ಪಟ್ಟಿದೆ. ಕ್ರಿ.ಶ. 66ರಲ್ಲಿ ಸೆಸ್ಟಿಯಸ್‌ ಗ್ಯಾಲಸ್‌ ಕೈಕೆಳಗೆ ರೋಮನ್‌ ಸೇನೆಗಳು ಯೆರೂಸಲೇಮನ್ನು ಮುತ್ತಿದಾಗ ಏನು ಸಂಭವಿಸಿತೊ ಅದರಲ್ಲಿ ನಾವಿದರ ಸೂಚನೆಯನ್ನು ಕಾಣುತ್ತೇವೆ. ಆ ಸಂಕಟದ ದಿನಗಳು “ಕಡಿಮೆಮಾಡಲ್ಪಡುವವು” ಎಂದು ಯೇಸು ಮುಂತಿಳಿಸಿದ್ದನು. (ಮತ್ತಾ. 24:15, 16, 21, 22) ರೋಮನ್‌ ಸೇನೆಗಳು ಪಟ್ಟಣಕ್ಕೆ ಹಾಕಿದ ಮುತ್ತಿಗೆಯನ್ನು ಅನಿರೀಕ್ಷಿತವಾಗಿ ಹಿಂತೆಗೆದಾಗ ಅದು ಸಂಭವಿಸಿತು. ಆಗ ನಿಜ ಕ್ರೈಸ್ತರಿಗೆ ಬದುಕುಳಿಯುವ ಅವಕಾಶಸಿಕ್ಕಿತು. ಅವರು ಪಟ್ಟಣವನ್ನೂ ಸುತ್ತಣ ಪ್ರದೇಶವನ್ನೂ ಬಿಟ್ಟು ಓಡಿಹೋಗಲು ಶಕ್ತರಾದರು. ಕೆಲವರು ಯೋರ್ದನ್‌ ಹೊಳೆಯನ್ನು ದಾಟಿ ಅದರ ಪೂರ್ವಕ್ಕಿರುವ ಬೆಟ್ಟಗಳಲ್ಲಿ ಆಶ್ರಯವನ್ನು ಪಡೆದುಕೊಂಡರು.

8 ಆ ಕ್ರೈಸ್ತರ ಮತ್ತು ಇಂದಿನ ದೇವಜನರ ನಡುವೆ ನಾವು ಒಂದು ಹೋಲಿಕೆಯನ್ನು ಮಾಡಬಲ್ಲೆವು. ಹಿಂದೆ ಒಂದನೇ ಶತಮಾನದ ಆ ಕ್ರೈಸ್ತರು ಆಶ್ರಯವನ್ನು ಹುಡುಕಿದರು. ಅಂತೆಯೇ ಇಂದಿನ ದೇವರ ಸೇವಕರು ಸಹ ಆಶ್ರಯವನ್ನು ಹುಡುಕುವರು. ಆದರೂ ಇಂದು ಅವರು ಒಂದು ನಿರ್ದಿಷ್ಟ ಸ್ಥಳಕ್ಕೆ ಓಡಿಹೋಗುವ ಅಗತ್ಯವಿಲ್ಲ. ಏಕೆಂದರೆ ನಿಜ ಕ್ರೈಸ್ತರು ಭೂಮಿಯಾದ್ಯಂತ ಜೀವಿಸುತ್ತಿದ್ದಾರೆ. ಆದರೆ ‘ಆಯ್ದುಕೊಳ್ಳಲ್ಪಟ್ಟವರು’ ಮತ್ತು ಅವರ ನಿಷ್ಠೆಯುಳ್ಳ ಸಂಗಡಿಗರು ಯೆಹೋವನಲ್ಲಿ ಮತ್ತು ಆತನ ಬೆಟ್ಟದಂಥ ಸಂಘಟನೆಯಲ್ಲಿ ಆಶ್ರಯವನ್ನು ತಕ್ಕೊಳ್ಳುವ ಮೂಲಕ ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಅಂತ್ಯವನ್ನು ಒಂದು ಗುಂಪಾಗಿ ಪಾರಾಗುತ್ತಾ ಶಾರೀರಿಕ ರಕ್ಷಣೆಯನ್ನು ಪಡೆಯುವರು.

9. ಯೆಹೋವನ ನಾಮವನ್ನು ಅಡಗಿಸಿಟ್ಟು ಮರೆಮಾಡಲು ಯಾರು ಪ್ರಯತ್ನಿಸಿದ್ದಾರೆ? ಉದಾಹರಣೆ ಕೊಡಿ.

9 ಇನ್ನೊಂದು ಕಡೆ, ಬರಲಿರುವ ನಾಶನಕ್ಕೆ ಕ್ರೈಸ್ತಪ್ರಪಂಚವು ಅರ್ಹವಾಗಿದೆ. ಏಕೆಂದರೆ ಚರ್ಚ್‌ ಸದಸ್ಯರ ನಡುವೆಯಿರುವ ಆಧ್ಯಾತ್ಮಿಕ ಅಜ್ಞಾನಕ್ಕೆ ಹಾಗೂ ದೇವರ ನಾಮವನ್ನು ದ್ವೇಷಿಸುವಂತೆ ಮಾಡಿರುವುದಕ್ಕೆ ಅದು ಕಾರಣೀಭೂತ. ಮಧ್ಯಯುಗಗಳಲ್ಲಿ ದೇವರ ವೈಯಕ್ತಿಕ ನಾಮವು ಯೂರೋಪ್‌ನಲ್ಲಿ ಸಾಕಷ್ಟು ವ್ಯಾಪಕವಾಗಿ ತಿಳಿದಿತ್ತು. ಆ ಹೆಸರು ಚತುರಕ್ಷರಿ ಎಂದು ಕರೆಯಲ್ಪಡುವ ನಾಲ್ಕು ಹೀಬ್ರು ಅಕ್ಷರಗಳಲ್ಲಿ ಸೂಚಿಸಲ್ಪಟ್ಟು ಸಾಮಾನ್ಯವಾಗಿ YHWH (ಅಥವಾ JHVH) ಎಂದು ಲಿಪ್ಯಂತರ ಹೊಂದಿತ್ತು. ನಾಣ್ಯಗಳ ಮೇಲೆ, ಮನೆಗಳ ಮುಂಭಾಗಗಳಲ್ಲಿ, ಹೆಚ್ಚಿನ ಪುಸ್ತಕ ಮತ್ತು ಬೈಬಲ್‌ಗಳಲ್ಲಿ ಹಾಗೂ ಕೆಲವು ಕ್ಯಾಥೊಲಿಕ್‌, ಪ್ರಾಟೆಸ್ಟಂಟ್‌ ಚರ್ಚುಗಳಲ್ಲೂ ಆ ಹೆಸರು ಕಂಡುಬರುತಿತ್ತು. ಆದರೂ ಇತ್ತೀಚಿನ ಸಮಯಗಳಲ್ಲಿ ದೇವರ ಆ ನಾಮವನ್ನು ಬೈಬಲ್‌ ಭಾಷಾಂತರಗಳಿಂದ, ಇತರ ಬಳಕೆಗಳಿಂದಲೂ ತೆಗೆದುಹಾಕುವ ಹೊಸ ಪ್ರವೃತ್ತಿ ಕಂಡುಬರುತ್ತಿದೆ. ಇದಕ್ಕೊಂದು ಉದಾಹರಣೆಯು 2008, ಜೂನ್‌ 29ರಲ್ಲಿ ಬಿಷಪರ ಸಮ್ಮೇಳನಕ್ಕೆ ಬರೆಯಲಾದ ‘ದೇವರ ನಾಮದ’ ಕುರಿತ ಒಂದು ಪತ್ರವೇ. ಇದು, ಡಿವೈನ್‌ ವರ್ಷಿಪ್‌ ಆ್ಯಂಡ್‌ ದ ಡಿಸಿಪ್ಲಿನ್‌ ಆಫ್‌ ದ ಸೇಕ್ರಮೆಂಟ್ಸ್‌ ಸಭೆಯು ಬರೆದದ್ದಾಗಿತ್ತು. ಇದರಲ್ಲಿ, ಚತುರಕ್ಷರಿಯನ್ನು “ಕರ್ತನು” ಎಂಬುದಾಗಿಯೇ ಅನುವಾದಿಸಬೇಕು ಎಂದು ರೋಮನ್‌ ಕ್ಯಾಥೊಲಿಕ್‌ ಚರ್ಚ್‌ ಸಲಹೆಯಿತ್ತಿತು; ಮಾತ್ರವಲ್ಲ ದೇವರ ವೈಯಕ್ತಿಕ ನಾಮವನ್ನು ಕ್ಯಾಥೊಲಿಕ್‌ ಧಾರ್ಮಿಕ ಸಂಸ್ಕಾರಗಳಲ್ಲಾಗಲಿ ಸ್ತುತಿಗೀತೆಗಳಲ್ಲಾಗಲಿ ಪ್ರಾರ್ಥನೆಗಳಲ್ಲಾಗಲಿ ಬಳಸಬಾರದು, ಉಚ್ಚರಿಸಲೂ ಬಾರದು ಎಂದು ಸಹ ವ್ಯಾಟಿಕನ್‌ ಅಪ್ಪಣೆಕೊಟ್ಟಿತು. ಅಲ್ಲದೆ ಕ್ರೈಸ್ತಪ್ರಪಂಚದ ಒಳಗಿನ ಮತ್ತು ಹೊರಗಿನ ಬೇರೆ ಧರ್ಮಗಳ ಮುಖಂಡರು ಸಹ ಸತ್ಯದೇವರು ಯಾರೆಂಬ ವಿಷಯವನ್ನು ಲಕ್ಷಲಕ್ಷಾಂತರ ಆರಾಧಕರಿಂದ ಅಡಗಿಸಿಟ್ಟು ಮರೆಮಾಡಿದ್ದಾರೆ.

ದೇವರ ನಾಮವನ್ನು ಪವಿತ್ರೀಕರಿಸುವವರಿಗೆ ರಕ್ಷಣೆ

10. ಇಂದು ದೇವರ ನಾಮವನ್ನು ಹೇಗೆ ಗೌರವಿಸಲಾಗುತ್ತದೆ?

10 ಬೇರೆ ಧರ್ಮಗಳು ಮಾಡುತ್ತಿರುವುದಕ್ಕೆ ಪೂರ್ತಿ ವ್ಯತಿರಿಕ್ತವಾಗಿ ಯೆಹೋವನ ಸಾಕ್ಷಿಗಳಾದರೋ ದೇವರ ನಾಮವನ್ನು ಗೌರವಿಸುತ್ತಾರೆ, ಮಹಿಮೆಪಡಿಸುತ್ತಾರೆ. ಅದನ್ನು ಅವರು ಗೌರವಾರ್ಹ ರೀತಿಯಲ್ಲಿ ಬಳಸುವ ಮೂಲಕ ಪವಿತ್ರೀಕರಿಸುತ್ತಾರೆ. ತನ್ನಲ್ಲಿ ಭರವಸೆಯಿಡುವವರಲ್ಲಿ ಯೆಹೋವನು ಉಲ್ಲಾಸಿಸುತ್ತಾನೆ. ಅವರನ್ನು ರಕ್ಷಿಸಲು ಮತ್ತು ಆಶೀರ್ವದಿಸಲು ತಾನು ಏನಾಗಬೇಕೋ ಹಾಗಾಗುತ್ತಾನೆ. ಆತನು “ತನ್ನ ಮರೆಹೊಕ್ಕವರನ್ನು ಬಲ್ಲನು.”—ನಹೂ. 1:7; ಅ. ಕಾ. 15:14.

11, 12. ಪುರಾತನ ಯೆಹೂದದಲ್ಲಿ ಯೆಹೋವನ ನಾಮವನ್ನು ಯಾರು ಘನಪಡಿಸಿದರು? ಆಧುನಿಕ ಸಮಯದಲ್ಲಿ ಹಾಗೆ ಮಾಡಿದವರು ಯಾರು?

11 ಪುರಾತನ ಯೆಹೂದದ ಹೆಚ್ಚಿನ ಜನರು ಧರ್ಮಭ್ರಷ್ಟರಾದರೂ ‘ಯೆಹೋವನ ನಾಮವನ್ನು ಆಶ್ರಯಿಸಿದ’ ಕೆಲವರು ಅಲ್ಲಿದ್ದರು. (ಚೆಫನ್ಯ 3:12, 13 ಓದಿ.) ಹೌದು, ಬ್ಯಾಬಿಲೋನ್ಯರು ಯೆಹೂದ ದೇಶವನ್ನು ವಶಪಡಿಸಿಕೊಂಡು ಅದರ ಜನರನ್ನು ಬಂಧಿವಾಸಿಗಳಾಗಿ ಒಯ್ಯುವಂತೆ ಬಿಟ್ಟ ಮೂಲಕ ಯೆಹೋವನು ಅಪನಂಬಿಗಸ್ತ ಯೆಹೂದವನ್ನು ಶಿಕ್ಷಿಸಿದನಾದರೂ ಯೆರೆಮೀಯ, ಬಾರೂಕ, ಎಬೆದ್ಮೆಲಕ ಮುಂತಾದ ಕೆಲವರನ್ನು ರಕ್ಷಿಸಿದನು. ಅವರು ಆ ಧರ್ಮಭ್ರಷ್ಟ ಜನಾಂಗದ ಮಧ್ಯೆ ಜೀವಿಸಿದ್ದರೂ ನಂಬಿಗಸ್ತರಾಗಿದ್ದರು. ಇತರರು ಬಂಧಿವಾಸದಲ್ಲೂ ನಂಬಿಗಸ್ತರಾಗಿ ಉಳಿದರು. ಕ್ರಿ.ಪೂ. 539ರಲ್ಲಿ ರಾಜ ಕೋರೆಷನ ಕೈಕೆಳಗೆ ಮೇದ್ಯ ಮತ್ತು ಪಾರಸಿಯರು ಬ್ಯಾಬಿಲೋನನ್ನು ಸೋಲಿಸಿಬಿಟ್ಟರು. ಸ್ವಲ್ಪದರಲ್ಲೇ ಕೋರೆಷನು ಯೆಹೂದ್ಯ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗುವಂತೆ ಅನುಮತಿಸುವ ರಾಜಾಜ್ಞೆಯನ್ನು ಹೊರಡಿಸಿದನು.

12 ಸತ್ಯಾರಾಧನೆಯ ಆ ಪುನಃಸ್ಥಾಪನೆಯಲ್ಲಿ ಆನಂದಿಸುವವರನ್ನು ಯೆಹೋವನು ರಕ್ಷಿಸುವನೆಂದೂ ಅವರಲ್ಲಿ ಉಲ್ಲಾಸಿಸುವನೆಂದೂ ಚೆಫನ್ಯನು ಮುಂತಿಳಿಸಿದ್ದನು. (ಚೆಫನ್ಯ 3:14-17 ಓದಿ.) ನಮ್ಮ ಸಮಯದಲ್ಲೂ ಇದು ಸತ್ಯವೆಂದು ರುಜುವಾಗಿದೆ. ದೇವರ ರಾಜ್ಯವು ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟ ಬಳಿಕ ಯೆಹೋವನು ನಂಬಿಗಸ್ತ ಅಭಿಷಿಕ್ತ ಉಳಿಕೆಯವರನ್ನು ಮಹಾ ಬಾಬೆಲಿನ ಆಧ್ಯಾತ್ಮಿಕ ಬಂಧಿವಾಸದಿಂದ ಬಿಡುಗಡೆ ಮಾಡಿದನು. ಅಲ್ಲದೆ ಇಂದಿನ ತನಕವೂ ಆತನು ಅವರಲ್ಲಿ ಉಲ್ಲಾಸಿಸುತ್ತಾನೆ.

13. ಎಲ್ಲ ಜನಾಂಗಗಳ ಜನರು ಯಾವ ಬಿಡುಗಡೆಯನ್ನು ಅನುಭವಿಸುತ್ತಿದ್ದಾರೆ?

13 ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯಿರುವ ಜನರು ಸಹ ಮಹಾ ಬಾಬೆಲಿನ ಸುಳ್ಳುಧಾರ್ಮಿಕ ಬೋಧನೆಗಳಿಂದ ಹೊರಗೆ ಬಂದು ಆಧ್ಯಾತ್ಮಿಕ ಬಿಡುಗಡೆಯಲ್ಲಿ ಆನಂದಿಸುತ್ತಿದ್ದಾರೆ. (ಪ್ರಕ. 18:4) ಹೀಗೆ ಚೆಫನ್ಯ 2:3ರಲ್ಲಿರುವ, “ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ” ಎಂಬ ಪ್ರವಾದನೆಯ ಮಹಾ ನೆರವೇರಿಕೆಯು ನಮ್ಮ ದಿನದಲ್ಲಾಗುತ್ತಿದೆ. ಎಲ್ಲಾ ಜನಾಂಗಗಳ ದೀನರು, ಅವರು ಸ್ವರ್ಗೀಯ ನಿರೀಕ್ಷೆ ಅಥವಾ ಭೂನಿರೀಕ್ಷೆಯುಳ್ಳವರೇ ಆಗಿರಲಿ ಯೆಹೋವನ ನಾಮದಲ್ಲಿ ಈಗ ಆಶ್ರಯವನ್ನು ಪಡೆಯುತ್ತಿದ್ದಾರೆ.

ದೇವರ ನಾಮವು ರಕ್ಷಾತಾಯಿತವಲ್ಲ

14, 15. (ಎ) ಕೆಲವರು ಯಾವುದನ್ನು ರಕ್ಷಾತಾಯಿತಗಳನ್ನಾಗಿ ಬಳಸಿದ್ದಾರೆ? (ಬಿ) ಯಾವುದನ್ನು ರಕ್ಷೆಯಾಗಿ ಬಳಸಬಾರದು?

14 ದೇವಾಲಯವು ತಮ್ಮನ್ನು ಶತ್ರುಗಳಿಂದ ರಕ್ಷಿಸುತ್ತದೆಂದು ನಂಬಿ ಕೆಲವು ಇಸ್ರಾಯೇಲ್ಯರು ಅದನ್ನು ಒಂದು ರಕ್ಷಾತಾಯಿತವಾಗಿ ವೀಕ್ಷಿಸಿದರು. (ಯೆರೆ. 7:1-4) ಇದಕ್ಕೆ ಮುಂಚೆಯೂ ಇಸ್ರಾಯೇಲ್ಯರು ಒಡಂಬಡಿಕೆಯ ಮಂಜೂಷವನ್ನು ಯುದ್ಧದಲ್ಲಿ ತಮ್ಮನ್ನು ಕಾಪಾಡುವ ರಕ್ಷೆಯಾಗಿ ವೀಕ್ಷಿಸಿದ್ದರು. (1 ಸಮು. 4:3, 10, 11) ಇನ್ನೊಂದು ಉದಾಹರಣೆ ಮಹಾ ಕಾನ್‌ಸ್ಟೆಂಟೀನ್‌ ರಾಜನದ್ದು. ಅವನು ತನ್ನ ಸೈನಿಕರ ಗುರಾಣಿಗಳ ಮೇಲೆ ಗ್ರೀಕ್‌ನಲ್ಲಿ “ಕ್ರಿಸ್ತ” ಎಂಬ ಪದದ ಮೊದಲ ಎರಡು ಅಕ್ಷರಗಳಾದ ಕ್ಹೀ (khi) ಮತ್ತು ರ್ಹೋ (rho) ಅನ್ನು ಬರೆದಿದ್ದನು. ಇದು ಅವರನ್ನು ಯುದ್ಧದಿಂದ ರಕ್ಷಿಸುತ್ತದೆಂದು ಅವನು ನೆನಸಿದ್ದನು. ಮೂವತ್ತು ವರ್ಷಗಳ ಯುದ್ಧದಲ್ಲಿ ಹೋರಾಡಿದ್ದ ಸ್ವೀಡನ್‌ನ ರಾಜ ಎರಡನೇ ಗುಸ್ಟವ್‌ ಅಡಾಲ್ಫ್‌ನ ನಂಬಿಕೆಯೂ ಹಾಗಿತ್ತು. 7ನೇ ಪುಟದಲ್ಲಿ ತೋರಿಸಲಾಗಿರುವ ಕವಚವನ್ನು ಅವನು ಧರಿಸಿದ್ದನೆಂದು ನೆನಸಲಾಗಿದೆ. ಕೊರಳಪಟ್ಟಿಯ ಮೇಲೆ “ಇಹೋವ” (“Iehova”) ಎಂಬ ಹೆಸರು ಎದ್ದುಕಾಣುವಂತೆ ಬರೆಯಲಾಗಿರುವುದನ್ನು ಗಮನಿಸಿರಿ.

15 ದೆವ್ವಗಳಿಂದ ಪೀಡಿಸಲ್ಪಟ್ಟ ಕೆಲವು ದೇವಜನರು ಯೆಹೋವನ ನಾಮವನ್ನು ಗಟ್ಟಿಯಾಗಿ ಹೇಳಿಕೊಳ್ಳುವ ಮೂಲಕ ಆತನಲ್ಲಿ ಆಶ್ರಯವನ್ನು ಪಡಕೊಂಡಿದ್ದಾರೆ ನಿಜ. ಆದರೂ ದೇವರ ನಾಮವಿರುವ ಯಾವುದೇ ವಸ್ತುವನ್ನು ರಕ್ಷಾತಾಯಿತವನ್ನಾಗಿ ಪರಿಗಣಿಸಬಾರದು ಅಥವಾ ಅದಕ್ಕೆ ಕಾಪಾಡುವ ಯಾವುದೋ ಅದ್ಭುತ ಶಕ್ತಿಯಿದೆಯೋ ಎಂಬಂತೆ ದಿನನಿತ್ಯ ಜೀವನದಲ್ಲಿ ಒಂದು ರಕ್ಷೆಯಾಗಿ ಬಳಸಲೂಬಾರದು. ಯೆಹೋವನ ನಾಮವನ್ನು ಆಶ್ರಯಿಸುವುದೆಂದರೆ ಆ ಅರ್ಥದಲ್ಲಿ ಅಲ್ಲ.

ಇಂದು ಆಶ್ರಯ ಪಡಕೊಳ್ಳುವ ವಿಧ

16. ಆಧ್ಯಾತ್ಮಿಕವಾಗಿ ಇಂದು ನಾವು ಹೇಗೆ ಆಶ್ರಯವನ್ನು ಪಡಕೊಳ್ಳಬಲ್ಲೆವು?

16 ಇಂದು ದೇವಜನರೆಲ್ಲರು ಆನಂದಿಸುವ ಆಧ್ಯಾತ್ಮಿಕ ಸುರಕ್ಷೆಯಲ್ಲಿ ನಾವು ಆಶ್ರಯವನ್ನು ಪಡೆಯುತ್ತೇವೆ. (ಕೀರ್ತ. 91:1) ನಮ್ಮ ಆ ಸುರಕ್ಷೆಯನ್ನು ಅಪಾಯಕ್ಕೊಡ್ಡಬಲ್ಲ ಲೋಕದ ಕೆಟ್ಟ ಪ್ರವೃತ್ತಿಗಳ ಬಗ್ಗೆ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಮತ್ತು ಸಭೆಯ ಹಿರಿಯರು ನಮ್ಮನ್ನು ಎಚ್ಚರಿಸುತ್ತಾ ಇರುತ್ತಾರೆ. (ಮತ್ತಾ. 24:45-47; ಯೆಶಾ. 32:1, 2) ಪ್ರಾಪಂಚಿಕತೆಯ ಕುರಿತು ನಮಗೆಷ್ಟು ಬಾರಿ ಎಚ್ಚರಿಕೆ ಕೊಡಲಾಗಿದೆ ಎಂಬುದನ್ನು ಯೋಚಿಸಿರಿ. ಮತ್ತು ಅಂತಹ ಎಚ್ಚರಿಕೆಗಳು ಆಧ್ಯಾತ್ಮಿಕ ವಿಪತ್ತಿನಿಂದ ನಮ್ಮನ್ನು ಹೇಗೆ ಕಾಪಾಡಿವೆ ಎಂಬುದನ್ನೂ ಪರಿಗಣಿಸಿ. ಅಲ್ಲದೆ ಯೆಹೋವನ ಸೇವೆಯಲ್ಲಿ ನಿಷ್ಕ್ರಿಯರನ್ನಾಗಿ ಮಾಡಬಲ್ಲ ಔದಾಸೀನ್ಯ ಮನೋಭಾವವನ್ನು ಬೆಳೆಸುವ ಅಪಾಯದ ಕುರಿತೇನು? ದೇವರ ವಾಕ್ಯವು ಹೇಳುವುದು: “ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು, . . . ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” (ಜ್ಞಾನೋ. 1:32, 33) ನೈತಿಕವಾಗಿ ಶುದ್ಧವಾಗಿರುವುದು ಕೂಡ ನಮ್ಮ ಆಧ್ಯಾತ್ಮಿಕ ಸುರಕ್ಷೆಯನ್ನು ಕಾಪಾಡಲು ಸಹಾಯಕರ.

17, 18. ಯೆಹೋವನ ನಾಮವನ್ನು ಆಶ್ರಯಿಸಲು ಲಕ್ಷಾಂತರ ಜನರಿಗೆ ಇಂದು ಯಾವುದು ಸಹಾಯಮಾಡುತ್ತಾ ಇದೆ?

17 ಭೂಮಿಯಲ್ಲೆಲ್ಲ ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಯೇಸು ಕೊಟ್ಟಿರುವ ಆಜ್ಞೆಯನ್ನು ಪಾಲಿಸುವಂತೆ ನಂಬಿಗಸ್ತ ಆಳು ನಮಗೆ ಕೊಡುವ ಉತ್ತೇಜನದ ಕುರಿತೂ ಯೋಚಿಸಿರಿ. (ಮತ್ತಾ. 24:14; 28:19, 20) ದೇವರ ನಾಮವನ್ನು ಆಶ್ರಯಿಸಲು ಜನರಿಗೆ ಸಹಾಯಮಾಡುವ ಒಂದು ಬದಲಾವಣೆಯನ್ನು ಚೆಫನ್ಯನು ತಿಳಿಸಿದನು. ನಾವು ಓದುವುದು: “ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].”—ಚೆಫ. 3:9.

18 ಈ ಶುದ್ಧ ಭಾಷೆ ಎಂದರೇನು? ದೇವರ ಪ್ರೇರಿತ ವಾಕ್ಯದಲ್ಲಿ ಕಂಡುಬರುವ ಯೆಹೋವ ದೇವರ ಕುರಿತ ಮತ್ತು ಆತನ ಉದ್ದೇಶಗಳ ಕುರಿತ ಸತ್ಯವೇ ಶುದ್ಧ ಭಾಷೆ. ನೀವು ಇತರರೊಂದಿಗೆ ದೇವರ ರಾಜ್ಯದ ಸರಿಯಾದ ತಿಳಿವಳಿಕೆಯನ್ನು ಹಂಚುವಾಗ ಮತ್ತು ಅದು ಆತನ ನಾಮವನ್ನು ಹೇಗೆ ಪವಿತ್ರೀಕರಿಸುವುದು ಎಂದು ಹೇಳುವಾಗ ಆ ಭಾಷೆಯನ್ನು ಬಳಸುತ್ತೀರಿ. ಅಂತೆಯೇ ದೇವರ ಪರಮಾಧಿಕಾರದ ನಿರ್ದೋಷೀಕರಣವನ್ನು ಒತ್ತಿಹೇಳುವಾಗ ಮತ್ತು ನಂಬಿಗಸ್ತ ಮಾನವರು ಆನಂದಿಸಲಿರುವ ನಿತ್ಯ ಆಶೀರ್ವಾದಗಳ ಕುರಿತು ನೀವು ಸಂತೋಷದಿಂದ ಇತರರೊಂದಿಗೆ ಮಾತಾಡುವಾಗ ಸಹ ನೀವು ಆ ಶುದ್ಧ ಭಾಷೆಯನ್ನು ಬಳಸುತ್ತೀರಿ. ಅಷ್ಟು ಹೆಚ್ಚು ಜನರು ಈ ಸಾಂಕೇತಿಕ ಭಾಷೆಯನ್ನು ಮಾತಾಡುವ ಫಲಿತಾಂಶವಾಗಿ ಯೆಹೋವನ ನಾಮವನ್ನು ಕೋರುತ್ತಿರುವ ಮತ್ತು ‘ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸುತ್ತಾ ಆತನ ಹೆಸರನ್ನೆತ್ತಿ ಪ್ರಾರ್ಥಿಸುವ’ ಜನರ ಸಂಖ್ಯೆಯು ಹೆಚ್ಚುತ್ತಾ ಬರುತ್ತಿದೆ. ಹೌದು, ಭೂಸುತ್ತಲಿರುವ ಲಕ್ಷಾಂತರ ಜನರು ಯೆಹೋವನನ್ನು ಆಶ್ರಯಿಸುತ್ತಿದ್ದಾರೆ.—ಕೀರ್ತ. 1:1, 3.

19, 20. ಬೈಬಲ್‌ ಸಮಯದಲ್ಲಿ ‘ಅಸತ್ಯದ ಆಶ್ರಯದಲ್ಲಿ’ ಭರವಸೆಯಿಟ್ಟವರು ಹೇಗೆ ಆಶಾಭಂಗಪಟ್ಟರು?

19 ಲೋಕದಲ್ಲಿರುವ ಜನರಿಗೆ ನಿಭಾಯಿಸಲು ಅಸಾಧ್ಯವಾಗಿ ಕಾಣುವ ಹಲವಾರು ಸಮಸ್ಯೆಗಳಿವೆ. ತಮ್ಮ ಸಮಸ್ಯೆಗಳನ್ನು ಪರಿಹರಿಸಿಯೇ ತೀರಬೇಕೆಂದು ಅನೇಕರು ಅಪರಿಪೂರ್ಣ ಮನುಷ್ಯರ ಮೇಲೆ ಭರವಸೆಯಿಡುತ್ತಾರೆ ಅಥವಾ ರಾಜಕೀಯ ಸಂಘಟನೆಗಳಿಂದ ಪರಿಹಾರವನ್ನು ನಿರೀಕ್ಷಿಸುತ್ತಾರೆ; ಹೇಗೆ ಪುರಾತನ ಇಸ್ರಾಯೇಲ್‌ ಕೆಲವೊಮ್ಮೆ ತಮ್ಮ ನೆರೆಯ ರಾಷ್ಟ್ರಗಳೊಂದಿಗೆ ಮೈತ್ರಿಯನ್ನು ಮಾಡಿ ಅವರ ಸಹಾಯಕ್ಕಾಗಿ ಕೋರಿತೋ ಹಾಗೆ. ಆದರೂ ಅದರಿಂದಾಗಿ ಇಸ್ರಾಯೇಲಿಗೆ ಏನೂ ಸಹಾಯ ಸಿಗಲಿಲ್ಲ ಎಂದು ನಮಗೆ ಗೊತ್ತಿದೆ. ಅಲ್ಲದೆ ಇಂದು ಯಾವ ರಾಜಕೀಯ ಸರ್ಕಾರವಾಗಲಿ ವಿಶ್ವಸಂಸ್ಥೆಯೇ ಆಗಲಿ ಮಾನವಕುಲದ ಸಮಸ್ಯೆಗಳನ್ನು ಪೂರ್ಣವಾಗಿ ಪರಿಹರಿಸಲಾರದು. ಹೀಗಿರಲಾಗಿ ರಾಜಕೀಯ ಸಂಘಟನೆಗಳನ್ನು ಮತ್ತು ಮೈತ್ರಿಗಳನ್ನು ಆಶ್ರಯವಾಗಿ ಒಬ್ಬನು ವೀಕ್ಷಿಸಬೇಕೇಕೆ? ಬೈಬಲ್‌ ಪ್ರವಾದನಾತ್ಮಕವಾಗಿ ಅವುಗಳನ್ನು “ಅಸತ್ಯದ ಆಶ್ರಯ” ಎಂದು ಕರೆಯುತ್ತದೆ. ನಾವದನ್ನು ಹಾಗೆ ವೀಕ್ಷಿಸುವುದು ಸೂಕ್ತ. ಏಕೆಂದರೆ ಅವುಗಳಲ್ಲಿ ನಿರೀಕ್ಷೆಯನ್ನಿಡುವ ಎಲ್ಲ ಜನರು ಪೂರ್ತಿ ಆಶಾಭಂಗ ಹೊಂದುವರು.—ಯೆಶಾಯ 28:15, 17 ಓದಿ.

20 ಶೀಘ್ರದಲ್ಲೇ ಯೆಹೋವನ ದಿನದ ಕಲ್ಮಳೆಯು ಭೂಮಿಯನ್ನು ಬಡಿಯುವುದು. ಮಾನವ ಯೋಜನೆಗಳಾಗಲಿ ಪರಮಾಣು ಆಶ್ರಯಗಳಾಗಲಿ ಧನೈಶ್ವರ್ಯವಾಗಲಿ ಯಾವುದೇ ಸುರಕ್ಷೆಯನ್ನು ನೀಡಲಾರವು. ಯೆಶಾಯ 28:17 ತಿಳಿಸುವಂತೆ, “ಕಲ್ಮಳೆಯು ಅಸತ್ಯದ ಆಶ್ರಯವನ್ನು ಬಡಿದುಕೊಂಡು ಹೋಗುವದು, ಜಲಪ್ರವಾಹವು [ಮೋಸದ] ಮರೆಯನ್ನು ಮುಣುಗಿಸುವದು.”

21. ಇಸವಿ 2011ರ ವರ್ಷವಚನವನ್ನು ಅನುಸರಿಸುವುದರ ಮೂಲಕ ನಾವು ಯಾವ ಪ್ರಯೋಜನ ಪಡೆಯಬಲ್ಲೆವು?

21 ಈಗಲೂ ಮುಂದಕ್ಕೂ ದೇವಜನರು ತಮ್ಮ ದೇವರಾದ ಯೆಹೋವನಲ್ಲಿ ನಿಜ ಭದ್ರತೆಯನ್ನು ಕಂಡುಕೊಳ್ಳುವರು. “ಯೆಹೋವನು ಮರೆಮಾಡಿದ್ದಾನೆ” ಎಂಬರ್ಥವಿರುವ ಚೆಫನ್ಯನ ಹೆಸರು ಈ ನಿಜ ಸುರಕ್ಷಾಮರೆಯ ಮೂಲಕ್ಕೆ ಕೈತೋರಿಸುತ್ತದೆ. ಆದ್ದರಿಂದ ಸೂಕ್ತವಾಗಿಯೇ “ಯೆಹೋವನ ನಾಮವನ್ನು ಆಶ್ರಯಿಸಿ” ಎಂಬುದು 2011ರ ವರ್ಷವಚನವಾಗಿದೆ. (ಚೆಫ. 3:12) ಈಗಲೂ ನಾವು ಯೆಹೋವನಲ್ಲಿ ದೃಢಭರವಸೆಯಿಡುತ್ತಾ ಆತನ ನಾಮವನ್ನು ಆಶ್ರಯಿಸಬಲ್ಲೆವು ಮತ್ತು ಆಶ್ರಯಿಸಬೇಕು. (ಕೀರ್ತ. 9:10) ಆದ್ದರಿಂದ ಈ ಪ್ರೇರಿತ ಆಶ್ವಾಸನೆಯನ್ನು ನಾವು ಪ್ರತಿದಿನ ಮನಸ್ಸಿನಲ್ಲಿಡೋಣ: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.”—ಜ್ಞಾನೋ. 18:10.

ನಿಮಗೆ ನೆನಪಿದೆಯೋ?

• ಇಂದು ನಾವು ಯೆಹೋವನ ನಾಮವನ್ನು ಹೇಗೆ ಆಶ್ರಯಿಸಬಲ್ಲೆವು?

• ‘ಅಸತ್ಯದ ಆಶ್ರಯದಲ್ಲಿ’ ನಾವೇಕೆ ಭರವಸೆಯಿಡಬಾರದು?

• ಭವಿಷ್ಯತ್ತಿಗಾಗಿ ನಮಗೆ ಯಾವ ಆಶ್ರಯದ ಆಶ್ವಾಸನೆಯಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

2011ರ ವರ್ಷವಚನ: “ಯೆಹೋವನ ನಾಮವನ್ನು ಆಶ್ರಯಿಸಿ.”—ಚೆಫನ್ಯ 3:12.

[ಪುಟ 7ರಲ್ಲಿರುವ ಚಿತ್ರ ಕೃಪೆ]

Thüringer Landesmuseum Heidecksburg Rudolstadt, Waffensammlung “Schwarzburger Zeughaus”