ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯೆಹೋವನಿಗಿಂತ ನಿಮಗೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತೀರೋ?

ನೀವು ಯೆಹೋವನಿಗಿಂತ ನಿಮಗೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತೀರೋ?

ನೀವು ಯೆಹೋವನಿಗಿಂತ ನಿಮಗೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತೀರೋ?

‘ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.’—ಕೀರ್ತ. 83:18.

1, 2. ರಕ್ಷಣೆ ಹೊಂದಲು ಯೆಹೋವನ ಹೆಸರನ್ನು ತಿಳಿದುಕೊಳ್ಳುವುದರೊಂದಿಗೆ ಇನ್ನೇನನ್ನು ಸಹ ಮಾಡಲೇಬೇಕು?

ಯೆಹೋವನ ಹೆಸರನ್ನು ಮೊದಲ ಬಾರಿಗೆ ನೋಡಿದ ನೆನಪು ನಿಮಗಿದೆಯೋ? ಬಹುಶಃ ಯಾರಾದರೂ ನಿಮಗದನ್ನು ಕೀರ್ತನೆ 83:18ರಿಂದ ತೋರಿಸಿರಬಹುದು. “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು” ಎಂಬ ಆ ಮಾತುಗಳನ್ನು ಓದುವಾಗ ನಿಮಗೆ ತುಂಬಾನೇ ಆಶ್ಚರ್ಯವಾಗಿರಬೇಕು. ಬಳಿಕ ನಮ್ಮ ಪ್ರೀತಿಪರ ದೇವರಾದ ಯೆಹೋವನ ಕುರಿತು ಇತರರಿಗೆ ತಿಳಿಸಲಿಕ್ಕಾಗಿ ನೀವು ಅದೇ ವಚನವನ್ನು ನಿಸ್ಸಂಶಯವಾಗಿಯೂ ಉಪಯೋಗಿಸಿರುವಿರಿ.—ರೋಮ. 10:12, 13.

2 ಜನರು ಯೆಹೋವನ ನಾಮವನ್ನು ತಿಳಿದುಕೊಳ್ಳುವುದು ಪ್ರಾಮುಖ್ಯವಾದರೂ ಕೇವಲ ಆ ನಾಮವನ್ನು ಅರಿತರಷ್ಟೇ ಸಾಲದು. ‘ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು’ ಎಂದು ಕೀರ್ತನೆಗಾರನು ಹೇಳಿದಾಗ, ನಮ್ಮ ರಕ್ಷಣೆಗೆ ಅತ್ಯಾವಶ್ಯಕವಾದ ಮತ್ತೊಂದು ನಿಜಾಂಶವನ್ನು ಒತ್ತಿಹೇಳಿರುವುದನ್ನು ಗಮನಿಸಿ. ಹೌದು, ಯೆಹೋವನು ಇಡೀ ವಿಶ್ವದಲ್ಲೇ ಅತಿ ಪ್ರಮುಖ ವ್ಯಕ್ತಿ. ಸಕಲವನ್ನೂ ಸೃಷ್ಟಿಮಾಡಿದ ಆತನಿಗೆ ತನ್ನ ಪ್ರತಿಯೊಂದು ಸೃಷ್ಟಿ ಜೀವಿಗಳಿಂದ ಸಂಪೂರ್ಣ ಅಧೀನತೆಯನ್ನು ಅಪೇಕ್ಷಿಸುವ ಪೂರ್ಣ ಹಕ್ಕಿದೆ. (ಪ್ರಕ. 4:11) ಹಾಗಾಗಿ, ನಾವು ಹೀಗೆ ಕೇಳಿಕೊಳ್ಳಬೇಕು: ‘ನನ್ನ ಜೀವನದಲ್ಲಿ ನಾನು ಯಾರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇನೆ?’ ಈ ಪ್ರಶ್ನೆಗೆ ನಮ್ಮ ಉತ್ತರವನ್ನು ಜಾಗ್ರತೆಯಿಂದ ಪರಿಶೀಲಿಸುವುದು ಅತ್ಯಗತ್ಯ!

ಏದೆನ್‌ ತೋಟದಲ್ಲೆದ್ದ ವಿವಾದಾಂಶ

3, 4. ಸೈತಾನನು ಹವ್ವಳನ್ನು ಹೇಗೆ ವಂಚಿಸಿದನು? ಫಲಿತಾಂಶವೇನು?

3 ನಾವು ಆ ಪ್ರಶ್ನೆ ಕೇಳಿಕೊಳ್ಳುವುದರ ಮಹತ್ವವನ್ನು ಏದೆನ್‌ ತೋಟದಲ್ಲಾದ ಸಂಗತಿಗಳು ಸ್ಪಷ್ಟವಾಗಿ ತೋರಿಸುತ್ತವೆ. ತದನಂತರ ಯಾರು ಪಿಶಾಚನಾದ ಸೈತಾನನೆಂದು ಕರೆಯಲ್ಪಟ್ಟನೋ ಆ ದಂಗೆಕೋರ ದೇವದೂತನು ಏದೆನ್‌ ತೋಟದಲ್ಲಿ ಮೊದಲ ಸ್ತ್ರೀಯಾದ ಹವ್ವಳನ್ನು ವಂಚಿಸಿದನು. ನಿರ್ದಿಷ್ಟ ಮರದ ಹಣ್ಣನ್ನು ತಿನ್ನಬಾರದೆಂದು ಯೆಹೋವನು ಕೊಟ್ಟ ಆಜ್ಞೆಗಿಂತ ಹವ್ವಳು ತನ್ನ ಸ್ವಂತ ಇಚ್ಛೆಗಳಿಗೆ ಪ್ರಾಮುಖ್ಯತೆ ಕೊಡುವಂತೆ ಅವನು ಪ್ರಲೋಭಿಸಿದನು. (ಆದಿ. 2:17; 2 ಕೊರಿಂ. 11:3) ಅವಳು ಆ ಪ್ರಲೋಭನೆಗೆ ಮಣಿದಳು. ಹೀಗೆ ಯೆಹೋವನ ಪರಮಾಧಿಕಾರವನ್ನು ಅಗೌರವಿಸಿದಳು. ತನ್ನ ಜೀವನದಲ್ಲಿ ಯೆಹೋವನೇ ಅತಿ ಪ್ರಾಮುಖ್ಯ ವ್ಯಕ್ತಿ ಎಂಬದನ್ನು ಹವ್ವಳು ಅಂಗೀಕರಿಸಲಿಲ್ಲ. ಆದರೆ ಹವ್ವಳನ್ನು ವಂಚಿಸುವುದರಲ್ಲಿ ಸೈತಾನನು ಯಶಸ್ವಿಯಾದದ್ದು ಹೇಗೆ?

4 ಹವ್ವಳೊಂದಿಗೆ ಮಾತಾಡುವಾಗ ಸೈತಾನನು ಅನೇಕ ಕುಶಾಗ್ರ ತಂತ್ರಗಳನ್ನು ಬಳಸಿದನು. (ಆದಿಕಾಂಡ 3:1-5 ಓದಿ.) ಮೊದಲನೆಯದಾಗಿ, ಸೈತಾನನು ಯೆಹೋವನ ಹೆಸರನ್ನು ಉಪಯೋಗಿಸಲಿಲ್ಲ. ಬದಲಾಗಿ ಬರೇ “ದೇವರು” ಎಂದು ಸಂಬೋಧಿಸಿದನು. ಅದಕ್ಕೆ ತದ್ವಿರುದ್ಧವಾಗಿ ಆದಿಕಾಂಡ ಪುಸ್ತಕದ ಬರಹಗಾರನು ಆ ಅಧ್ಯಾಯದ ಮೊದಲ ವಚನದಲ್ಲೇ ಯೆಹೋವನ ಹೆಸರನ್ನು ಉಪಯೋಗಿಸಿದನು. ಎರಡನೆಯದಾಗಿ, ದೇವರು ‘ವಿಧಿಸಿರುವುದು’ ಅಥವಾ ಆಜ್ಞಾಪಿಸಿರುವುದು ನಿಜವೋ ಎಂದು ಸೈತಾನನು ಕೇಳಲಿಲ್ಲ. ಬದಲಾಗಿ ದೇವರು “ಹೇಳಿದ್ದು” (NIBV) ನಿಜವೋ ಎಂದು ಕೇಳಿದನು. (ಆದಿ. 2:17) ಹೀಗೆ ಕುತಂತ್ರದಿಂದ ದೇವರ ಆ ಆಜ್ಞೆಯ ಮಹತ್ವವನ್ನು ತಗ್ಗಿಸಲು ಸೈತಾನನು ಪ್ರಯತ್ನಿಸಿದ್ದಿರಬಹುದು. ಮೂರನೆಯದಾಗಿ, ಅವನು ಹವ್ವಳ ಬಳಿ ಮಾತ್ರ ಮಾತಾಡುತ್ತಿದ್ದರೂ “ನೀವು” ಎಂಬ ಬಹುವಚನವನ್ನು ಬಳಸಿದನು. ಹೀಗೆ ಅವಳಲ್ಲಿ ಗರ್ವವನ್ನು ಅಂದರೆ ತಾನೇ ಪ್ರಮುಖಳು, ತನ್ನ ಹಾಗೂ ತನ್ನ ಗಂಡನ ಪರವಾಗಿ ತಾನೇ ಮಾತಾಡಬಹುದು ಎಂಬ ಮನೋಭಾವವನ್ನು ಹುಟ್ಟಿಸಲು ಸೈತಾನನು ಪ್ರಯತ್ನಿಸಿದ್ದಿರಬಹುದು. ಫಲಿತಾಂಶ? ಹವ್ವಳು ದುರಹಂಕಾರದಿಂದ ತಮ್ಮಿಬ್ಬರ ಪರವಾಗಿ ಮಾತಾಡುತ್ತಾ “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು” ಎಂದು ಸೈತಾನನಿಗೆ ಹೇಳಿದಳು.

5. (ಎ) ಹವ್ವಳು ಯಾವುದರ ಮೇಲೆ ಗಮನಕೇಂದ್ರೀಕರಿಸುವಂತೆ ಸೈತಾನನು ಮಾಡಿದನು? (ಬಿ) ನಿಷೇಧಿತ ಹಣ್ಣನ್ನು ತಿನ್ನುವ ಮೂಲಕ ಹವ್ವಳು ಏನನ್ನು ತೋರಿಸಿಕೊಟ್ಟಳು?

5 ಸೈತಾನನು ನಿಜಾಂಶಗಳನ್ನು ತಿರುಚಿದನು ಸಹ. ದೇವರು “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ . . . ತಿನ್ನಬಾರದೆಂದು” ಹೇಳಿದ್ದಾನೋ ಎಂದು ಸೈತಾನನು ಕೇಳಿದನು. ಹೀಗೆ ಆದಾಮಹವ್ವರಿಗೆ ದೇವರು ಅನ್ಯಾಯ ಮಾಡುತ್ತಿದ್ದಾನೆಂದು ಸೈತಾನನು ಪರೋಕ್ಷವಾಗಿ ಸೂಚಿಸಿದನು. ಅನಂತರ, ಹವ್ವಳು ಸ್ವತಃ ತನ್ನ ಬಗ್ಗೆ ಹಾಗೂ “ದೇವರಂತೆ” ಆಗುವ ಮೂಲಕ ತನ್ನ ಜೀವನವನ್ನು ಉತ್ತಮಗೊಳಿಸುವ ಬಗ್ಗೆ ಯೋಚಿಸುವಂತೆ ಮಾಡಿದನು. ಕೊನೆಗೆ, ಆಕೆ ತನಗೆ ಎಲ್ಲವನ್ನೂ ಒದಗಿಸಿದಾತನೊಂದಿಗಿನ ಸಂಬಂಧದ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲು ಆ ಮರ ಹಾಗೂ ಅದರ ಹಣ್ಣಿನ ಮೇಲೆ ಗಮನಕೇಂದ್ರೀಕರಿಸುವಂತೆ ಮಾಡುವುದರಲ್ಲಿ ಸೈತಾನನು ಸಫಲನಾದನು. (ಆದಿಕಾಂಡ 3:6 ಓದಿ.) ಹವ್ವಳು ಆ ಹಣ್ಣನ್ನು ತಿನ್ನುವ ಮೂಲಕ ತನ್ನ ಜೀವನದಲ್ಲಿ ಯೆಹೋವನು ಪ್ರಮುಖ ವ್ಯಕ್ತಿಯಲ್ಲ ಎಂದು ತೋರಿಸಿದಳು. ಎಂಥ ದುಃಖಕರ ಸಂಗತಿ!

ಯೋಬನ ದಿನಗಳಲ್ಲೆದ್ದ ವಿವಾದಾಂಶ

6. ಯೋಬನ ಸಮಗ್ರತೆಯನ್ನು ಸೈತಾನನು ಹೇಗೆ ಪ್ರಶ್ನಿಸಿದನು? ಯೋಬನಿಗೆ ಯಾವ ಅವಕಾಶ ಕೊಡಲಾಯಿತು?

6 ದಶಕಗಳ ನಂತರ, ನಂಬಿಗಸ್ತ ವ್ಯಕ್ತಿಯಾದ ಯೋಬನಿಗೆ ತನ್ನ ಜೀವನದಲ್ಲಿ ಯಾರು ಅತಿ ಪ್ರಮುಖ ವ್ಯಕ್ತಿ ಎಂಬದನ್ನು ತೋರಿಸಿಕೊಡುವ ಅವಕಾಶ ದೊರಕಿತು. ಯೆಹೋವನು ಯೋಬನ ಸಮಗ್ರತೆಯ ವಿಷಯವಾಗಿ ತಿಳಿಸಿದಾಗ ಸೈತಾನನು ಪ್ರತಿವಾದಿಸುತ್ತಾ “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” ಎಂಬ ಪ್ರಶ್ನೆಯನ್ನು ಎಬ್ಬಿಸಿದನು. (ಯೋಬ 1:7-10 ಓದಿ.) ಯೋಬನು ದೇವರಿಗೆ ವಿಧೇಯನಾಗಿದ್ದಾನೆಂಬ ವಿಷಯವನ್ನು ಸೈತಾನನು ಅಲ್ಲಗಳೆಯಲಿಲ್ಲ. ಬದಲಾಗಿ, ಅವನ ಹೇತುಗಳನ್ನು ಪ್ರಶ್ನಿಸಿದನು. ಯೋಬನು ಪ್ರೀತಿಯಿಂದಲ್ಲ, ಸ್ವಾರ್ಥ ಲಾಭಕ್ಕಾಗಿ ಯೆಹೋವನನ್ನು ಆರಾಧಿಸುತ್ತಿದ್ದಾನೆಂದು ಆಪಾದಿಸಿದನು. ಆದರೆ ಈ ಆಪಾದನೆ ಸುಳ್ಳೆಂದು ಯೋಬನು ಮಾತ್ರವೇ ರುಜುಪಡಿಸಸಾಧ್ಯವಿತ್ತು. ಆದ್ದರಿಂದ ಅದನ್ನು ರುಜುಪಡಿಸಲು ಯೋಬನಿಗೆ ಅವಕಾಶ ಕೊಡಲಾಯಿತು.

7, 8. ಯೋಬನು ಯಾವೆಲ್ಲ ಕಷ್ಟಸಂಕಟಗಳನ್ನು ಅನುಭವಿಸಬೇಕಾಯಿತು? ನಂಬಿಗಸ್ತಿಕೆಯಿಂದ ತಾಳಿಕೊಳ್ಳುವ ಮೂಲಕ ಅವನು ಏನನ್ನು ರುಜುಪಡಿಸಿದನು?

7 ಯೋಬನ ಮೇಲೆ ಒಂದರ ಮೇಲೊಂದರಂತೆ ಅನೇಕ ಕಷ್ಟತೊಂದರೆಗಳನ್ನು ತರಲು ಯೆಹೋವನು ಸೈತಾನನನ್ನು ಅನುಮತಿಸಿದನು. (ಯೋಬ 1:12-19) ತನ್ನ ಪರಿಸ್ಥಿತಿ ಹೀಗೆ ತಲೆಕೆಳಗಾದಾಗ ಯೋಬನು ಹೇಗೆ ಪ್ರತಿಕ್ರಿಯಿಸಿದನು? ಬೈಬಲ್‌ ಅನ್ನುವುದು: “ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.” (ಯೋಬ 1:22) ಸೈತಾನನು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವನು ಮತ್ತೆ ಆಪಾದಿಸಿದ್ದು: “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” * (ಯೋಬ 2:4) ಒಂದುವೇಳೆ ಸ್ವತಃ ಯೋಬನು ಶಾರೀರಿಕ ಕಷ್ಟಗಳನ್ನು ಅನುಭವಿಸುವಲ್ಲಿ, ತನ್ನ ಜೀವನದಲ್ಲಿ ಯೆಹೋವನು ಪ್ರಮುಖ ವ್ಯಕ್ತಿಯಲ್ಲ ಎಂದವನು ತೋರಿಸಿಕೊಡುವನು ಎಂಬುದೇ ಸೈತಾನನ ಆರೋಪ.

8 ಯೋಬನಿಗೆ ಘೋರವಾದ ಕಾಯಿಲೆ ಬಂದು ಅವನ ರೂಪವು ವಿಕಾರಗೊಂಡಿತು. ದೇವರನ್ನು ಶಪಿಸಿ ಸಾಯುವಂತೆ ಅವನ ಹೆಂಡತಿಯೂ ಒತ್ತಾಯಿಸಿದಳು. ತದನಂತರ, ಸಂತೈಸಲೆಂದು ಬಂದ ಮೂವರು ಮಂದಿ ಅವನ ದುರ್ನಡತೆಯಿಂದಾಗಿಯೇ ಅವನಿಗೆ ಈ ಗತಿ ಬಂದಿದೆಯೆಂದು ಹೇಳಿದರು. (ಯೋಬ 2:11-13; 8:2-6; 22:2, 3) ಹೀಗೆ ಸುರಿಮಳೆಯಂತೆ ಕಷ್ಟಗಳು ಬಂದೆರಗಿದರೂ ಯೋಬನು ತನ್ನ ಸಮಗ್ರತೆಯನ್ನು ಬಿಟ್ಟುಕೊಡಲಿಲ್ಲ. (ಯೋಬ 2:9, 10 ಓದಿ.) ಅವನು ಎಲ್ಲವನ್ನೂ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವ ಮೂಲಕ ತನ್ನ ಜೀವನದಲ್ಲಿ ಯೆಹೋವನೇ ಅತಿ ಪ್ರಮುಖ ವ್ಯಕ್ತಿಯೆಂದು ತೋರಿಸಿಕೊಟ್ಟನು. ಅಲ್ಲದೆ ಅಪರಿಪೂರ್ಣ ಮಾನವನು ಸಹ ಸೈತಾನನ ಸುಳ್ಳಾರೋಪಗಳಿಗೆ ತಕ್ಕಮಟ್ಟಿಗೆ ಉತ್ತರ ಕೊಡಲು ಸಾಧ್ಯ ಎಂಬದನ್ನು ಯೋಬನು ರುಜುಪಡಿಸಿದನು.—ಜ್ಞಾನೋಕ್ತಿ 27:11 ಹೋಲಿಸಿ.

ಯೇಸು ಕೊಟ್ಟ ಪರಿಪೂರ್ಣ ಉತ್ತರ

9. (ಎ) ಶಾರೀರಿಕ ಇಚ್ಛೆಗಳನ್ನು ಬಳಸಿ ಸೈತಾನನು ಯೇಸುವನ್ನು ಹೇಗೆ ಪ್ರಲೋಭಿಸಲು ಪ್ರಯತ್ನಿಸಿದನು? (ಬಿ) ಯೇಸು ಹೇಗೆ ಪ್ರತಿಕ್ರಿಯಿಸಿದನು?

9 ಯೇಸು ದೀಕ್ಷಾಸ್ನಾನ ಹೊಂದಿದ ಸ್ವಲ್ಪದರಲ್ಲೇ ಸೈತಾನನು ಅವನನ್ನು ಪ್ರಲೋಭಿಸಲು ಪ್ರಯತ್ನಿಸಿದನು. ತನ್ನ ಜೀವನದಲ್ಲಿ ಯೆಹೋವನಿಗೆ ಪ್ರಥಮ ಸ್ಥಾನ ಕೊಡುವ ಬದಲು ಸ್ವಾರ್ಥಪರ ಇಚ್ಛೆಗಳನ್ನು ಪೂರೈಸಿಕೊಳ್ಳುವಂತೆ ಯೇಸುವಿಗೆ ಪ್ರಲೋಭನೆಯನ್ನೊಡ್ಡಿದನು. ಪಿಶಾಚನು ಯೇಸುವಿಗೆ ಮೂರು ಪ್ರಲೋಭನೆಗಳನ್ನು ತಂದನು. ಮೊದಲನೆಯದಾಗಿ, ಅವನು ಯೇಸುವಿಗೆ ಕಲ್ಲುಗಳನ್ನು ರೊಟ್ಟಿಯನ್ನಾಗಿ ಮಾಡುವಂತೆ ಹೇಳುವ ಮೂಲಕ ಶಾರೀರಿಕ ಇಚ್ಛೆಗಳನ್ನು ಆಕರ್ಷಿಸಲು ಪ್ರಯತ್ನಿಸಿದನು. (ಮತ್ತಾ. 4:2, 3) ಆಗಷ್ಟೇ 40 ದಿನ ಉಪವಾಸವಿದ್ದ ಯೇಸುವಿಗೆ ತುಂಬ ಹಸಿವಾಗಿತ್ತು. ಹಾಗಾಗಿ ಯೇಸು ತನಗಿದ್ದ ಅದ್ಭುತಕರ ಶಕ್ತಿಯನ್ನು ದುರುಪಯೋಗಿಸುವಂತೆ ಪಿಶಾಚನು ಪ್ರೇರೇಪಿಸಿದನು. ಯೇಸು ಹೇಗೆ ಪ್ರತಿಕ್ರಿಯಿಸಿದನು? ಯೇಸು ಯೆಹೋವನ ವಾಕ್ಯದ ಮೇಲೆ ಗಮನಕೇಂದ್ರೀಕರಿಸಿ ತಕ್ಷಣವೇ ಪ್ರಲೋಭನೆಯನ್ನು ತಳ್ಳಿಹಾಕಿದನು. ಯೇಸುವಿಗೂ ಯೆಹೋವನ ಮಾತನ್ನು ತಳ್ಳಿಹಾಕಿದ ಹವ್ವಳಿಗೂ ಎಷ್ಟೊಂದು ಭಿನ್ನತೆ!—ಮತ್ತಾಯ 4:4 ಓದಿ.

10. ಸೈತಾನನು ಯೇಸುವಿಗೆ ದೇವಾಲಯದ ಕೈಪಿಡಿ ಗೋಡೆಯಿಂದ ಕೆಳಗೆ ಧುಮುಕುವಂತೆ ಸವಾಲು ಹಾಕಿದ್ದೇಕೆ?

10 ಸ್ವಾರ್ಥಪರನಾಗಿ ಕ್ರಿಯೆಗೈಯುವಂತೆಯೂ ಸೈತಾನನು ಯೇಸುವನ್ನು ಪ್ರಲೋಭಿಸಿದನು. ದೇವಾಲಯದ ಕೈಪಿಡಿ ಗೋಡೆಯಿಂದ ಕೆಳಗೆ ಧುಮುಕುವಂತೆ ಅವನು ಯೇಸುವಿಗೆ ಸವಾಲು ಹಾಕಿದನು. (ಮತ್ತಾ. 4:5, 6) ಸೈತಾನನು ಸಾಧಿಸಲು ಬಯಸಿದ್ದಾದರೂ ಏನು? ಯೇಸು ಕೆಳಗೆ ಬಿದ್ದರೂ ಅವನಿಗೆ ಯಾವುದೇ ಗಾಯಗಳಾಗದಿರುವಲ್ಲಿ ಅವನು ‘ದೇವರ ಮಗನಾಗಿದ್ದಾನೆ’ ಎಂಬದಕ್ಕೆ ರುಜುವಾತು ಸಿಗುತ್ತದೆ ಎಂದು ಸೈತಾನನು ಹೇಳಿದನು. ಯೇಸು ತನ್ನ ಹೆಸರನ್ನು ಉಳಿಸಿಕೊಳ್ಳಲು ಆಡಂಬರದ ಪ್ರದರ್ಶನ ಮಾಡುವಷ್ಟರ ಮಟ್ಟಿಗೆ ಮುಂದೆ ಸರಿಯಬೇಕು, ಹೀಗೆ ತನ್ನ ಸ್ವಂತ ಪ್ರಖ್ಯಾತಿ ಬಗ್ಗೆ ವಿಪರೀತವಾಗಿ ಚಿಂತಿಸುವಂತೆ ಮಾಡಬೇಕು ಎಂಬುದೇ ಸೈತಾನನ ಗುರಿಯಾಗಿತ್ತು. ಒಬ್ಬ ವ್ಯಕ್ತಿ ಗರ್ವದ ನಿಮಿತ್ತ ಅಥವಾ ಇತರರ ಮುಂದೆ ಮುಖಭಂಗವಾಗಬಾರದೆಂಬ ಕಾರಣಕ್ಕೆ ಯಾವುದೇ ಹುಚ್ಚುಸಾಹಸಕ್ಕೆ ಕೈಹಾಕಲು ಸಿದ್ಧನಿರುವನು ಎನ್ನುವುದು ಸೈತಾನನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಸೈತಾನನು ಶಾಸ್ತ್ರವಚನವನ್ನೂ ತಪ್ಪಾಗಿ ಅನ್ವಯಿಸಿದನು. ಯೇಸುವಾದರೋ ತನಗೆ ಯೆಹೋವನ ವಾಕ್ಯದ ಸಂಪೂರ್ಣ ತಿಳುವಳಿಕೆಯಿದೆ ಎಂಬದನ್ನು ತೋರಿಸಿಕೊಟ್ಟನು. (ಮತ್ತಾಯ 4:7 ಓದಿ.) ಸೈತಾನನ ಸವಾಲನ್ನು ತಿರಸ್ಕರಿಸುವ ಮೂಲಕ ತನ್ನ ಜೀವನದಲ್ಲಿ ಯೆಹೋವನೇ ಅತಿ ಪ್ರಮುಖ ವ್ಯಕ್ತಿ ಎಂಬದನ್ನು ಯೇಸು ಮತ್ತೆ ಸಾಬೀತುಪಡಿಸಿದನು.

11. ಪಿಶಾಚನು ಲೋಕದ ಎಲ್ಲ ರಾಜ್ಯಗಳನ್ನು ತನ್ನ ಮುಂದಿಟ್ಟಾಗ ಯೇಸು ಅವುಗಳನ್ನು ತಿರಸ್ಕರಿಸಿದ್ದೇಕೆ?

11 ಕೊನೆಯದಾಗಿ ಸೈತಾನನು ಇನ್ನೂ ದೊಡ್ಡ ಪ್ರಲೋಭನೆಯನ್ನು ಯೇಸುವಿನ ಮುಂದಿಟ್ಟನು. ಅದೇನು? ಲೋಕದ ಎಲ್ಲ ರಾಜ್ಯಗಳನ್ನು ಕೊಡುವುದಾಗಿ ಆಮಿಷವೊಡ್ಡಿದನು. (ಮತ್ತಾ. 4:8, 9) ಆದರೆ ಯೇಸು ಅರೆಕ್ಷಣವೂ ಯೋಚಿಸದೆ ತಕ್ಷಣ ಅದನ್ನು ತಿರಸ್ಕರಿಸಿದನು. ಏಕೆಂದರೆ ಅದನ್ನು ಸ್ವೀಕರಿಸುವುದು ಯೆಹೋವನ ಪರಮಾಧಿಕಾರವನ್ನು ಅಂದರೆ ಸರ್ವೋನ್ನತ ದೇವರ ಅಧಿಕಾರವನ್ನು ತಿರಸ್ಕರಿಸುವುದಕ್ಕೆ ಸಮ ಎನ್ನುವುದು ಯೇಸುವಿಗೆ ಗೊತ್ತಿತ್ತು. (ಮತ್ತಾಯ 4:10 ಓದಿ.) ಯೇಸು ಪ್ರತಿಬಾರಿಯೂ ಯೆಹೋವನ ಹೆಸರಿದ್ದ ಶಾಸ್ತ್ರವಚನಗಳನ್ನೇ ಉಲ್ಲೇಖಿಸುತ್ತಾ ಸೈತಾನನಿಗೆ ಉತ್ತರ ಕೊಟ್ಟನು.

12. ಯೇಸು ಏಕೆ ತುಂಬ ಚಿಂತಿತನಾಗಿದ್ದನು? ಅವನು ಹೇಗೆ ಪ್ರತಿಕ್ರಿಯಿಸಿದನು? ಅವನ ಪ್ರತಿಕ್ರಿಯೆಯಿಂದ ನಾವೇನನ್ನು ಕಲಿಯುತ್ತೇವೆ?

12 ಯೇಸು ತನ್ನ ಭೂಜೀವಿತದ ಕೊನೆಯಲ್ಲಿ ತುಂಬ ಕಷ್ಟಕರವಾದ ಒಂದು ನಿರ್ಣಯವನ್ನು ಮಾಡಬೇಕಾಯಿತು. ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಲು ಸಿದ್ಧನಿದ್ದೇನೆಂದು ಯೇಸು ತನ್ನ ಶುಶ್ರೂಷೆಯಾದ್ಯಂತ ಹೇಳಿದ್ದನು. (ಮತ್ತಾ. 20:17-19, 28; ಲೂಕ 12:50; ಯೋಹಾ. 16:28) ಯೆಹೂದಿ ಕಾನೂನು ವ್ಯವಸ್ಥೆಯು ತನ್ನ ಮೇಲೆ ದೇವದೂಷಕನೆಂಬ ಸುಳ್ಳಾರೋಪ ಹೊರಿಸುತ್ತಾ ತನಗೆ ಮರಣದಂಡನೆ ವಿಧಿಸುವುದು ಎನ್ನುವುದನ್ನೂ ಅರಿತಿದ್ದನು. ಆದರೆ ಅವನು ಯಾವ ಸನ್ನಿವೇಶಗಳ ಕೆಳಗೆ ಸಾಯಬೇಕಿತ್ತೋ ಆ ಬಗ್ಗೆ ತುಂಬ ಚಿಂತಿತನಾಗಿದ್ದನು. ಹಾಗಾಗಿ ಯೇಸು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ” ಎಂದು ಪ್ರಾರ್ಥಿಸಿದನು. ಹಾಗಿದ್ದರೂ ಅವನು ಕೊನೆಯಲ್ಲಿ ಅಂದದ್ದು: “ಆದರೂ ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ.” (ಮತ್ತಾ. 26:39) ಹೌದು, ಯೇಸು ಮರಣದ ತನಕ ನಂಬಿಗಸ್ತನಾಗಿ ಉಳಿದ ಸಂಗತಿಯು ಅವನು ತನ್ನ ಜೀವನದಲ್ಲಿ ಯಾರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದನು ಎನ್ನುವುದನ್ನು ಸ್ಪಷ್ಟವಾಗಿ ರುಜುಪಡಿಸಿತು.

ನಮ್ಮ ಉತ್ತರ

13. ಹವ್ವ, ಯೋಬ ಹಾಗೂ ಯೇಸು ಕ್ರಿಸ್ತನ ಉದಾಹರಣೆಗಳಿಂದ ನಾವು ಯಾವೆಲ್ಲ ಪಾಠಗಳನ್ನು ಕಲಿತೆವು?

13 ಈವರೆಗೆ ನಾವೇನನ್ನು ಕಲಿತೆವು? ಹವ್ವಳಿಂದ ನಾವು ಕಲಿಯುವುದೇನೆಂದರೆ, ಯಾರು ಸ್ವಾರ್ಥಪರ ಇಚ್ಛೆಗಳಿಗೆ ಬಲಿಬೀಳುತ್ತಾರೋ ಅಥವಾ ಸ್ವಪ್ರತಿಷ್ಠೆಯನ್ನು ಬಯಸುತ್ತಾರೋ ಅವರು ತಮ್ಮ ಜೀವನದಲ್ಲಿ ಯೆಹೋವನು ಪ್ರಮುಖ ವ್ಯಕ್ತಿಯಲ್ಲ ಎಂಬದನ್ನು ತೋರಿಸಿಕೊಡುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ತಮ್ಮ ಮೇಲೆ ಬರುವ ಕಷ್ಟಗಳಿಗೆ ಕಾರಣಗಳು ತಿಳಿಯದಿರುವಾಗಲೂ ಅವನ್ನೆಲ್ಲ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವ ಮೂಲಕ ಅಪರಿಪೂರ್ಣ ಮಾನವರು ಸಹ ತಾವು ಯೆಹೋವನಿಗೆ ಪ್ರಥಮ ಸ್ಥಾನ ಕೊಡುತ್ತೇವೆಂದು ತೋರಿಸಿಕೊಡಬಹುದು. ಯೋಬನು ತೋರಿಸಿದ ಸಮಗ್ರತೆಯಿಂದ ನಾವು ಇದನ್ನೇ ಕಲಿತೆವು. (ಯಾಕೋ. 5:11) ಕೊನೆಯದಾಗಿ, ನಾವು ಅವಮಾನವನ್ನು ಅನುಭವಿಸಿದರೂ ಸರಿಯೇ ವೈಯಕ್ತಿಕ ಪ್ರಖ್ಯಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬಾರದು ಎನ್ನುವುದನ್ನು ಯೇಸುವಿನ ಉದಾಹರಣೆಯಿಂದ ಕಲಿಯುತ್ತೇವೆ. (ಇಬ್ರಿ. 12:2) ಆದರೆ ಈ ಪಾಠಗಳನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?

14, 15. ಪ್ರಲೋಭನೆಗೆ ಹವ್ವಳು ಪ್ರತಿಕ್ರಿಯಿಸಿದ ವಿಧಕ್ಕಿಂತ ಯೇಸು ಪ್ರತಿಕ್ರಿಯಿಸಿದ ವಿಧ ಹೇಗೆ ಭಿನ್ನವಾಗಿತ್ತು? ನಾವು ಯೇಸುವನ್ನು ಹೇಗೆ ಅನುಕರಿಸಬಹುದು? (ಪುಟ 18ರಲ್ಲಿರುವ ಚಿತ್ರವನ್ನೂ ವಿವರಿಸಿ.)

14ಪ್ರಲೋಭನೆಗಳು ಬಂದಾಗ ಯೆಹೋವನನ್ನು ಮರೆತುಬಿಡಬೇಡಿ. ಹವ್ವಳು ಕೇವಲ ತನ್ನ ಮುಂದಿದ್ದ ಪ್ರಲೋಭನೆಯ ಮೇಲೆ ಗಮನಕೇಂದ್ರೀಕರಿಸಿದಳು. ಆ ಮರದ ಹಣ್ಣು “ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ” ಆಕೆಗೆ ಕಂಡಿತು. (ಆದಿ. 3:6) ಇದಕ್ಕೂ ಯೇಸು ಮೂರು ಪ್ರಲೋಭನೆಗಳಿಗೆ ಪ್ರತಿಕ್ರಿಯಿಸಿದ ವಿಧಕ್ಕೂ ಎಷ್ಟೊಂದು ಭಿನ್ನತೆ! ಯೇಸು ತನ್ನ ಮುಂದಿದ್ದ ಪ್ರಲೋಭನೆಯ ಮೇಲೆ ಗಮನ ನೆಡಲಿಲ್ಲ. ಬದಲಾಗಿ ಪ್ರತಿ ಬಾರಿಯೂ ತನ್ನ ಕ್ರಿಯೆಗಳ ಪರಿಣಾಮವನ್ನು ಯೋಚಿಸಿದನು. ಅವನು ದೇವರ ವಾಕ್ಯವನ್ನು ಅವಲಂಬಿಸಿದನು ಹಾಗೂ ಯೆಹೋವನ ಹೆಸರನ್ನೂ ಉಪಯೋಗಿಸಿದನು.

15 ಯೆಹೋವನನ್ನು ಅಸಂತೋಷಪಡಿಸುವ ವಿಷಯಗಳನ್ನು ಮಾಡುವ ಪ್ರಲೋಭನೆ ಬಂದಾಗ ನಾವು ಯಾವುದರ ಮೇಲೆ ನಮ್ಮ ಗಮನಕೇಂದ್ರೀಕರಿಸುವೆವು? ನಾವು ಪ್ರಲೋಭನೆಯ ಮೇಲೆ ಹೆಚ್ಚೆಚ್ಚು ಗಮನಕೇಂದ್ರೀಕರಿಸಿದಂತೆ ಕೆಟ್ಟ ಆಶೆಯೂ ಹೆಚ್ಚೆಚ್ಚು ಬಲಗೊಳ್ಳುವುದು. (ಯಾಕೋ. 1:14, 15) ಆ ಆಶೆಯನ್ನು ಬುಡ ಸಮೇತ ಕಿತ್ತೆಸೆಯಲು ನಾವು ಕೂಡಲೇ ಕ್ರಿಯೆಗೈಯಬೇಕು. ಅದು ನಮ್ಮ ದೇಹದ ಒಂದು ಅಂಗವನ್ನು ಕಿತ್ತೆಸೆಯುವಷ್ಟರ ಮಟ್ಟಿಗೆ ಕಠಿಣವಾಗಿದ್ದರೂ ಸರಿಯೇ ನಾವು ಕ್ರಿಯೆಗೈಯಲೇಬೇಕು. (ಮತ್ತಾ. 5:29, 30) ಯೇಸುವಿನಂತೆ ನಾವೂ ನಮ್ಮ ಕ್ರಿಯೆಗಳ ಪರಿಣಾಮಗಳನ್ನು ಅಂದರೆ ಯೆಹೋವನೊಂದಿಗೆ ನಮಗಿರುವ ಸಂಬಂಧದ ಮೇಲೆ ಅವು ಬೀರುವ ಪರಿಣಾಮಗಳನ್ನು ಯೋಚಿಸಿ ನೋಡಬೇಕು. ಆತನ ವಾಕ್ಯವಾದ ಬೈಬಲ್‌ ಏನು ಹೇಳುತ್ತದೆಂಬದನ್ನು ಮನಸ್ಸಿಗೆ ತಂದುಕೊಳ್ಳಬೇಕು. ಹೀಗೆ ಮಾಡುವುದಾದರೆ ಮಾತ್ರ ನಮ್ಮ ಜೀವನದಲ್ಲಿ ಅತಿ ಪ್ರಮುಖ ವ್ಯಕ್ತಿ ಯೆಹೋವನೇ ಎಂದು ನಾವು ಸಾಬೀತುಪಡಿಸಬಹುದು.

16-18. (ಎ) ಯಾವ ವಿಷಯಗಳಿಂದಾಗಿ ನಾವು ನಿರುತ್ತೇಜಿತರಾಗಬಹುದು? (ಬಿ) ಸಂಕಷ್ಟಗಳನ್ನು ನಿಭಾಯಿಸಲು ನಮಗೆ ಯಾವುದು ಸಹಾಯಮಾಡುವುದು?

16ನಿಮಗೆ ಸಂಕಷ್ಟಗಳು ಬಂದೆರಗುವಾಗ ಯೆಹೋವನ ಮೇಲೆ ರೇಗಬೇಡಿ. (ಜ್ಞಾನೋ. 19:3) ನಾವು ಈ ದುಷ್ಟ ಲೋಕದ ಅಂತ್ಯವನ್ನು ಹೆಚ್ಚೆಚ್ಚು ಸಮೀಪಿಸಿದಂತೆ ಯೆಹೋವನ ಜನರಲ್ಲಿ ಹೆಚ್ಚೆಚ್ಚು ಮಂದಿ ದುರ್ಘಟನೆ ಹಾಗೂ ದುರಂತಗಳಿಂದ ಬಾಧಿಸಲ್ಪಡುತ್ತಾರೆ. ಇಂಥ ಸನ್ನಿವೇಶಗಳಲ್ಲಿ ನಾವು ಅದ್ಭುತಕರ ಸಂರಕ್ಷಣೆಯನ್ನು ಎದುರುನೋಡುವುದಿಲ್ಲ. ಹಾಗಿದ್ದರೂ ಪ್ರಿಯ ವ್ಯಕ್ತಿಗಳನ್ನು ಕಳೆದುಕೊಂಡಾಗ ಅಥವಾ ವೈಯಕ್ತಿಕವಾಗಿ ಸಂಕಷ್ಟಗಳನ್ನು ಅನುಭವಿಸುವಾಗ ಯೋಬನಂತೆ ನಾವೂ ನಿರುತ್ತೇಜಿತರಾಗುತ್ತೇವೆ.

17 ಕೆಲವೊಂದು ವಿಷಯಗಳು ಸಂಭವಿಸುವಂತೆ ಯೆಹೋವನು ಏಕೆ ಅನುಮತಿಸಿದನೆಂಬದು ಯೋಬನಿಗೆ ಅರ್ಥವಾಗಲಿಲ್ಲ. ಕೆಟ್ಟ ವಿಷಯಗಳು ಏಕೆ ಸಂಭವಿಸುತ್ತವೆಂದು ಕೆಲವೊಮ್ಮೆ ನಮಗೂ ಅರ್ಥವಾಗಲಿಕ್ಕಿಲ್ಲ. ಹೇಟೀ ಮತ್ತು ಇನ್ನಿತರ ಕಡೆಗಳಲ್ಲಿ ನಡೆದ ಭೂಕಂಪಗಳಿಂದ ಅಥವಾ ಇತರ ನೈಸರ್ಗಿಕ ವಿಪತ್ತುಗಳಿಂದಾಗಿ ಪ್ರಾಣ ಕಳೆದುಕೊಂಡ ನಂಬಿಗಸ್ತ ಸಹೋದರರ ಬಗ್ಗೆ ನಾವು ಕೇಳಿರಬಹುದು. ಅಥವಾ ನಮಗೆ ಗೊತ್ತಿರುವ ಸಮಗ್ರತಾ ಪಾಲಕನೊಬ್ಬನು ಹಿಂಸಾಚಾರಕ್ಕೆ ಬಲಿಯಾಗಿರಬಹುದು ಇಲ್ಲವೆ ದುರಂತಮಯ ಅಪಘಾತದಲ್ಲಿ ಮರಣ ಹೊಂದಿರಬಹುದು. ಅಥವಾ ಸ್ವತಃ ನಾವು ಕಷ್ಟ, ಅನ್ಯಾಯಗಳನ್ನು ಅನುಭವಿಸಿರಬಹುದು. ಆಗ ನಮ್ಮ ನೊಂದ ಹೃದಯವು, ‘ಯೆಹೋವನೇ, ನನಗೇ ಯಾಕೆ ಇಷ್ಟೆಲ್ಲ ಕಷ್ಟಬರಬೇಕು? ನಾನೇನು ತಪ್ಪು ಮಾಡಿದ್ದೇನೆ?’ ಎಂದು ಚೀರಬಹುದು. (ಹಬ. 1:2, 3) ಇಂಥ ಸನ್ನಿವೇಶಗಳನ್ನು ನಿಭಾಯಿಸಲು ನಮಗೆ ಯಾವುದು ಸಹಾಯಮಾಡುವುದು?

18 ಯೆಹೋವನು ನಮ್ಮನ್ನು ತಿರಸ್ಕರಿಸಿದ್ದಾನೆ, ಹಾಗಾಗಿಯೇ ನಮ್ಮ ಜೀವನದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ ಎಂಬ ತಪ್ಪುಕಲ್ಪನೆಗಳನ್ನು ಬೆಳೆಸಿಕೊಳ್ಳಬಾರದು. ಯೇಸು ತನ್ನ ದಿನಗಳಲ್ಲಿ ನಡೆದ ಎರಡು ದುರ್ಘಟನೆಗಳ ಬಗ್ಗೆ ತಿಳಿಸುವಾಗ ಈ ಅಂಶವನ್ನೇ ಒತ್ತಿಹೇಳಿದನು. (ಲೂಕ 13:1-5 ಓದಿ.) ಅನೇಕ ಕಷ್ಟಸಂಕಟಗಳಿಗೆ ‘ಕಾಲ ಮತ್ತು ಮುಂಗಾಣದ ಘಟನೆಗಳೇ’ ಕಾರಣವಾಗಿರುತ್ತವೆ. (ಪ್ರಸಂ. 9:11, NW) ನಮ್ಮ ಕಷ್ಟಸಂಕಟಗಳಿಗೆ ಕಾರಣ ಏನೇ ಇರಲಿ ‘ಸಕಲ ಸಾಂತ್ವನದ ದೇವರ’ ಮೇಲೆ ನಾವು ಗಮನವನ್ನು ಕೇಂದ್ರೀಕರಿಸುವುದಾದರೆ ಖಂಡಿತ ಅವನ್ನೆಲ್ಲಾ ಎದುರಿಸಬಲ್ಲೆವು. ನಂಬಿಗಸ್ತಿಕೆಯಿಂದ ಮುಂದುವರಿಯಲು ಬೇಕಾದ ಬಲವನ್ನು ಆತನು ನಮಗೆ ಕೊಡುವನು.—2 ಕೊರಿಂ. 1:3-6.

19, 20. ಅವಮಾನಕರ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ಯೇಸುವಿಗೆ ಯಾವುದು ಸಹಾಯಮಾಡಿತು? ನಮಗೆ ಯಾವುದು ಸಹಾಯಮಾಡಬಲ್ಲದು?

19ಗರ್ವವಾಗಲಿ ಅವಮಾನಗೊಳ್ಳುವ ಭಯವಾಗಲಿ ನಿಮಗೆ ಮುಖ್ಯವಾಗದಿರಲಿ. ‘ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಳ್ಳಲು’ ಯೇಸುವಿಗೆ ಸಹಾಯಮಾಡಿದ್ದು ಅವನಲ್ಲಿದ್ದ ದೀನತೆಯೇ. (ಫಿಲಿ. 2:5-8) ಅವನು ಎಲ್ಲ ಅವಮಾನಕರ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ಶಕ್ತನಾದದ್ದು ಯೆಹೋವನ ಮೇಲೆ ಆತುಕೊಂಡಿದ್ದರಿಂದಲೇ. (1 ಪೇತ್ರ 2:23, 24) ಹೀಗೆ ಯೇಸು ತನ್ನ ಜೀವನದಲ್ಲಿ ಯೆಹೋವನ ಚಿತ್ತಮಾಡುವುದಕ್ಕೆ ಪ್ರಥಮ ಸ್ಥಾನ ಕೊಟ್ಟನು. ಫಲಿತಾಂಶವಾಗಿ ಅವನನ್ನು ಉನ್ನತ ಸ್ಥಾನಕ್ಕೆ ಏರಿಸಲಾಯಿತು. (ಫಿಲಿ. 2:9) ಅದೇ ರೀತಿಯ ಜೀವನಕ್ರಮವನ್ನು ಅನುಸರಿಸುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು.—ಮತ್ತಾ. 23:11, 12; ಲೂಕ 9:26.

20 ನಮ್ಮ ನಂಬಿಕೆಗೆ ಎದುರಾಗುವ ಕೆಲವು ಪರೀಕ್ಷೆಗಳು ಕೆಲವೊಮ್ಮೆ ಅವಮಾನಕರವಾಗಿರಬಹುದು. ಹಾಗಿದ್ದರೂ ಅಪೊಸ್ತಲ ಪೌಲನಿಗಿದ್ದಂಥ ಸಂಪೂರ್ಣ ಭರವಸೆ ನಮಗೂ ಇರಬೇಕು. ಅವನು ಹೇಳಿದ್ದು: “ಆದುದರಿಂದಲೇ ನಾನು ಸಹ ಈ ಎಲ್ಲ ಕಷ್ಟಗಳನ್ನು ಅನುಭವಿಸುತ್ತಿದ್ದೇನೆ, ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ಯಾರಲ್ಲಿ ನಂಬಿಕೆಯಿಟ್ಟಿದ್ದೇನೋ ಆತನನ್ನು ಬಲ್ಲೆನು ಮತ್ತು ನಾನು ಆತನ ವಶಕ್ಕೆ ಯಾವುದನ್ನು ಕೊಟ್ಟಿದ್ದೇನೋ ಅದನ್ನು ಆತನು ಆ ದಿನದ ವರೆಗೆ ಕಾಪಾಡಲು ಶಕ್ತನಾಗಿದ್ದಾನೆಂಬ ಭರವಸೆ ನನಗಿದೆ.”—2 ತಿಮೊ. 1:12.

21. ಲೋಕದಲ್ಲಿ ಸ್ವಾರ್ಥ ಮನೋಭಾವ ತುಂಬಿತುಳುಕುತ್ತಿದ್ದರೂ ನೀವು ಯಾವ ದೃಢತೀರ್ಮಾನ ಮಾಡಿದ್ದೀರಿ?

21 ನಮ್ಮೀ ಕಾಲದಲ್ಲಿ ಜನರು ‘ಸ್ವಪ್ರೇಮಿಗಳಾಗಿರುವರೆಂದು’ ಬೈಬಲ್‌ ಮುಂತಿಳಿಸಿತ್ತು. (2 ತಿಮೊ. 3:2) ಹಾಗಾಗಿ ‘ನಾ ಮೊದಲು’ ಎಂಬ ಮನೋಭಾವವನ್ನು ಹೊಂದಿರುವ ಜನರು ಎಲ್ಲೆಲ್ಲೂ ಇರುವುದು ಆಶ್ಚರ್ಯದ ಸಂಗತಿಯೇನಲ್ಲ. ಆದರೆ ಅಂಥ ಸ್ವಾರ್ಥ ಮನೋಭಾವದ ಸೋಂಕು ನಮಗೆಂದೂ ತಗಲದಿರಲಿ! ನಮಗೆ ಪ್ರಲೋಭನೆಗಳೇ ಬರಲಿ, ದುರಂತಗಳ ಬರಸಿಡಿಲೇ ಬಡಿಯಲಿ ಅಥವಾ ನಾವು ಅವಮಾನವನ್ನೇ ಅನುಭವಿಸಲಿ ನಮ್ಮ ಜೀವನದಲ್ಲಿ ಯೆಹೋವನೇ ಅತಿ ಪ್ರಮುಖ ವ್ಯಕ್ತಿಯೆಂದು ಸಾಬೀತುಪಡಿಸುವ ದೃಢತೀರ್ಮಾನ ಮಾಡೋಣ!

[ಪಾದಟಿಪ್ಪಣಿ]

^ ಪ್ಯಾರ. 7 “ಚರ್ಮಕ್ಕೆ ಚರ್ಮ” ಎಂಬ ಅಭಿವ್ಯಕ್ತಿಯು, ಯೋಬನು ಸ್ವಾರ್ಥದಿಂದ ತನ್ನ ಚರ್ಮ ಅಥವಾ ಜೀವ ಉಳಿಸಿಕೊಳ್ಳಲು ತನ್ನ ಮಕ್ಕಳ ಹಾಗೂ ಪ್ರಾಣಿಗಳ ಚರ್ಮ ಅಥವಾ ಜೀವವನ್ನು ಕೊಡಲೂ ಸಿದ್ಧನಿರುತ್ತಾನೆ ಎಂಬದನ್ನು ಸೂಚಿಸುತ್ತದೆಂದು ಕೆಲವು ಬೈಬಲ್‌ ವಿದ್ವಾಂಸರು ನೆನಸುತ್ತಾರೆ. ಇನ್ನೂ ಕೆಲವರು, ಒಬ್ಬ ವ್ಯಕ್ತಿಯು ತನ್ನ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಸ್ವಲ್ಪ ಚರ್ಮವನ್ನು ಕಳೆದುಕೊಳ್ಳಲು ಸಿದ್ಧನಿರುತ್ತಾನೆಂಬದನ್ನು ಆ ಅಭಿವ್ಯಕ್ತಿ ಸೂಚಿಸುತ್ತದೆಂದು ನೆನಸುತ್ತಾರೆ. ಉದಾಹರಣೆಗೆ, ಒಬ್ಬನು ತನ್ನ ತಲೆಗೆ ಏಟು ಬೀಳಲಿರುವಾಗ ತನ್ನ ತಲೆಯನ್ನು ಸಂರಕ್ಷಿಸಲಿಕ್ಕಾಗಿ ತಟ್ಟನೆ ತನ್ನ ಕೈಯನ್ನು ತಲೆಯ ಮೇಲಿಡುತ್ತಾನೆ. ಹೀಗೆ ತನ್ನ ಚರ್ಮವನ್ನು ಕಾಪಾಡಲು ಸ್ವಲ್ಪ ಚರ್ಮವನ್ನು ಕಳೆದುಕೊಳ್ಳಲು ಸಿದ್ಧನಿರುತ್ತಾನೆ ಎನ್ನುತ್ತಾರವರು. ಆ ಅಭಿವ್ಯಕ್ತಿಯ ಅಕ್ಷರಾರ್ಥ ಏನೇ ಆಗಿರಲಿ, ಯೋಬನು ತನ್ನ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಸರ್ವಸ್ವವನ್ನೂ ಬಿಟ್ಟುಕೊಡಲು ಸಿದ್ಧನಿರುವನು ಎಂಬದನ್ನಂತೂ ಅದು ಸೂಚಿಸುತ್ತದೆ.

ಪುನರ್ವಿಮರ್ಶೆ

• ಸೈತಾನನು ಹವ್ವಳನ್ನು ವಂಚಿಸಿದ ವಿಧದಿಂದ ನಾವೇನು ಕಲಿಯುತ್ತೇವೆ?

• ದುರಂತಗಳು ಬಂದೆರಗಿದಾಗ ಯೋಬನು ಪ್ರತಿಕ್ರಿಯಿಸಿದ ವಿಧದಿಂದ ನಾವೇನು ಕಲಿಯುತ್ತೇವೆ?

• ಯೇಸು ಯಾವುದಕ್ಕೆ ಪ್ರಾಮುಖ್ಯತೆ ಕೊಟ್ಟನೋ ಆ ಸಂಗತಿಯಿಂದ ನಾವೇನು ಕಲಿಯುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ಹವ್ವಳು ಯೆಹೋವನೊಂದಿಗಿನ ತನ್ನ ಸಂಬಂಧದ ಮೇಲೆ ಗಮನಕೇಂದ್ರೀಕರಿಸಲಿಲ್ಲ

[ಪುಟ 18ರಲ್ಲಿರುವ ಚಿತ್ರ]

ಯೇಸು ಸೈತಾನನ ಪ್ರಲೋಭನೆಗಳನ್ನು ತಳ್ಳಿಹಾಕಿ ಯೆಹೋವನ ಚಿತ್ತವನ್ನು ಮಾಡುವುದರ ಮೇಲೆ ಗಮನಕೇಂದ್ರೀಕರಿಸಿದನು

[ಪುಟ 20ರಲ್ಲಿರುವ ಚಿತ್ರಗಳು]

ಹೇಟೀಯಲ್ಲಿ ಭೂಕಂಪದ ನಂತರ ಡೇರೆಗಳಲ್ಲಿ ಸಾಕ್ಷಿ ನೀಡುತ್ತಿರುವುದು

ಕಷ್ಟಕರ ಸನ್ನಿವೇಶಗಳಲ್ಲಿ ನಾವು ‘ಸಕಲ ಸಾಂತ್ವನದ ದೇವರ’ ಮೇಲೆ ಗಮನಕೇಂದ್ರೀಕರಿಸಬಲ್ಲೆವು