ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಿರಿ

ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಿರಿ

ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಿರಿ

“ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನೀವು ತೋರಿಸುವ ಮನೋಭಾವದೊಂದಿಗಿರಲಿ.”—ಫಿಲಿ. 4:23.

ಸಭೆಯಲ್ಲಿ ಹಿತಕರ ವಾತಾವರಣವನ್ನು ಈ ಕೆಳಗಿನ ಸಂದರ್ಭಗಳಲ್ಲಿ ನಾವು ಹೇಗೆ ಹೆಚ್ಚಿಸಬಲ್ಲೆವು?

ಸಹೋದರರೊಂದಿಗೆ ಸಹವಾಸ ಮಾಡುವಾಗ

ಹುರುಪಿನಿಂದ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವಾಗ

ಗಂಭೀರ ತಪ್ಪನ್ನು ಹಿರಿಯರಿಗೆ ವರದಿಸುವ ಮೂಲಕ

1. ಫಿಲಿಪ್ಪಿ ಮತ್ತು ಥುವತೈರ ಸಭೆಯವರನ್ನು ಏಕೆ ಶ್ಲಾಘಿಸಲಾಯಿತು?

ಫಿಲಿಪ್ಪಿ ಸಭೆಯವರು ಬಡವರಾಗಿದ್ದರೂ ಉದಾರಿಗಳಾಗಿದ್ದರು. ಜೊತೆ ವಿಶ್ವಾಸಿಗಳಿಗೆ ಪ್ರೀತಿ ತೋರಿಸುವುದರಲ್ಲಿ ಹೆಸರುವಾಸಿಯಾಗಿದ್ದರು. (ಫಿಲಿ. 1:3-5, 9; 4:15, 16) ಆದಕಾರಣ ಪೌಲ ಅವರಿಗೆ ಬರೆದ ಪತ್ರದ ಕೊನೆಯಲ್ಲಿ ಹೀಗಂದನು: “ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನೀವು ತೋರಿಸುವ ಮನೋಭಾವದೊಂದಿಗಿರಲಿ.” (ಫಿಲಿ. 4:23) ಇಂಥದ್ದೇ ಗುಣವನ್ನು ಥುವತೈರ ಸಭೆಯ ಕ್ರೈಸ್ತರೂ ತೋರಿಸಿದರು. ಹಾಗಾಗಿ ಯೇಸು, “ನಾನು ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಶುಶ್ರೂಷೆಯನ್ನೂ ತಾಳ್ಮೆಯನ್ನೂ ಬಲ್ಲೆನು; ನಿನ್ನ ಇತ್ತೀಚಿಗಿನ ಕ್ರಿಯೆಗಳು ಹಿಂದಿನ ಕ್ರಿಯೆಗಳಿಗಿಂತ ಹೆಚ್ಚಾದವುಗಳಾಗಿವೆ ಎಂಬುದೂ ನನಗೆ ಗೊತ್ತು” ಎಂದು ಅವರನ್ನು ಶ್ಲಾಘಿಸಿದನು.—ಪ್ರಕ. 2:19.

2. ನಮ್ಮ ಸಭೆಯ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಲು ನಾವೇನು ಮಾಡಬಲ್ಲೆವು?

2 ಇಂದು ಸಹ ಯೆಹೋವನ ಸಾಕ್ಷಿಗಳ ಪ್ರತಿಯೊಂದು ಸಭೆಯಲ್ಲಿ ಯಾವುದಾದರೊಂದು ಗುಣ ಎದ್ದುಕಾಣುತ್ತದೆ. ಉದಾಹರಣೆಗೆ ಕೆಲವು ಸಭೆಗಳವರು ಹೃತ್ಪೂರ್ವಕ ಪ್ರೀತಿ ತೋರಿಸುವುದರಲ್ಲಿ ಖ್ಯಾತರು. ಇನ್ನು ಕೆಲವು ಸಭೆಗಳವರಿಗೆ ಸುವಾರ್ತೆ ಸಾರುವ ಕೆಲಸದಲ್ಲಿ ಅಪಾರ ಹುರುಪು. ಪೂರ್ಣ ಸಮಯದ ಸೇವೆ ಅವರಿಗೆ ಬಹು ಮಹತ್ವ. ನಮ್ಮಲ್ಲಿ ಪ್ರತಿಯೊಬ್ಬರು ಇಂಥ ಸದ್ಗುಣಗಳನ್ನು ಬೆಳೆಸಿಕೊಂಡರೆ ಸಭೆಯ ಐಕ್ಯಕ್ಕೂ ಆಧ್ಯಾತ್ಮಿಕ ಪ್ರಗತಿಗೂ ನೆರವಾಗುತ್ತೇವೆ. (1 ಕೊರಿಂ. 1:10) ಆದರೆ ಕೆಟ್ಟ ಪ್ರವೃತ್ತಿ ಸಭೆಯ ಆಧ್ಯಾತ್ಮಿಕತೆಗೆ ಹಾನಿ ಉಂಟುಮಾಡಬಲ್ಲದು. ಸಭೆಯು ಉಗುರುಬೆಚ್ಚಗಿನ ಸ್ಥಿತಿಗೆ ಬರಬಲ್ಲದು. ಗಂಭೀರ ಪಾಪವನ್ನು ಕಂಡೂ ಕಾಣದಿರುವಷ್ಟರ ಮಟ್ಟಿಗೆ ಔದಾಸೀನ್ಯ ತೋರಿಸಬಹುದು. (1 ಕೊರಿಂ. 5:1; ಪ್ರಕ. 3:15, 16) ನಿಮ್ಮ ಸಭೆಯ ಎದ್ದುಕಾಣುವ ಗುಣ ಯಾವುದು? ನಿಮ್ಮ ಸಭೆಯಲ್ಲಿರುವ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಲು ನೀವೇನು ಮಾಡಬಹುದು?

ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಿ

3, 4. ನಾವು ಹೇಗೆ ‘ಮಹಾಸಭೆಯಲ್ಲಿ ಯೆಹೋವನನ್ನು ಕೊಂಡಾಡಬಹುದು?’

3 “[ಯೆಹೋವನೇ] ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು” ಎಂದು ಕೀರ್ತನೆಗಾರ ಹಾಡಿದನು. (ಕೀರ್ತ. 35:18) ಯೆಹೋವ ದೇವರನ್ನು ಆತನ ಸೇವಕರೊಂದಿಗೆ ಸೇರಿ ಸ್ತುತಿಸಲು ಕೀರ್ತನೆಗಾರನು ಸಂತೋಷಿಸಿದನು. ನಮಗೂ ಹಾಗನಿಸುತ್ತದಾ? ಕಾವಲಿನಬುರುಜು ಅಧ್ಯಯನ ಹಾಗೂ ಇತರ ಕೂಟಗಳಲ್ಲಿ ಹುರುಪಿನಿಂದ ಉತ್ತರ ಕೊಟ್ಟು ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುವ ಅವಕಾಶ ನಮಗಿದೆ. ಹಾಗಾಗಿ ನಾವೆಲ್ಲರೂ ಹೀಗೆ ಕೇಳಿಕೊಳ್ಳೋಣ: ‘ಕೂಟಗಳಲ್ಲಿ ನಾನು ನನ್ನಿಂದಾದಷ್ಟು ಹೆಚ್ಚು ಭಾಗವಹಿಸುತ್ತೇನಾ? ಚೆನ್ನಾಗಿ ತಯಾರಿಮಾಡಿ ಅರ್ಥಭರಿತ ಉತ್ತರಗಳನ್ನು ಹೇಳುತ್ತೇನಾ? ನನ್ನ ಮಕ್ಕಳು ಉತ್ತರಗಳನ್ನು ತಯಾರಿಸುವಂತೆ ಮತ್ತು ಅದನ್ನು ಸ್ವಂತ ಮಾತಿನಲ್ಲಿ ಹೇಳುವಂತೆ ಕುಟುಂಬದ ಶಿರಸ್ಸಾಗಿರುವ ನಾನು ಮನೆಯಲ್ಲೇ ಕಲಿಸಿಕೊಡುತ್ತೇನಾ?’

4 ನಾವು ಸ್ಥಿರಚಿತ್ತರಾಗಿರುವುದಕ್ಕೂ ಯೆಹೋವನಿಗೆ ಸ್ತುತಿ ಹಾಡುವುದಕ್ಕೂ ಸಂಬಂಧವಿದೆ ಎಂದು ಕೀರ್ತನೆಗಾರ ದಾವೀದ ತೋರಿಸಿಕೊಟ್ಟನು. ಅವನು ಹೇಳಿದ್ದು: “ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ಬಾರಿಸುತ್ತಾ ಹಾಡುವೆನು.” (ಕೀರ್ತ. 57:7) ಕೂಟಗಳಲ್ಲಿ ಹಾಡುವ ಗೀತೆಗಳು ಯೆಹೋವ ದೇವರನ್ನು ಸ್ಥಿರಚಿತ್ತ ಹೃದಯದಿಂದ ಸ್ತುತಿಸಲು ನಮಗೆ ಒಳ್ಳೇ ಅವಕಾಶ ನೀಡುತ್ತವೆ. ಕೆಲವು ರಾಜ್ಯಗೀತೆಗಳನ್ನು ಸರಿಯಾಗಿ ಹಾಡಲು ನಮಗೆ ಬರದಿರುವಲ್ಲಿ ಅವನ್ನು ಕುಟುಂಬ ಆರಾಧನೆಯ ಸಂಜೆಯಂದು ಏಕೆ ಅಭ್ಯಾಸ ಮಾಡಬಾರದು? ಹೌದು, ‘ನಾವು ಬದುಕಿರುವ ವರೆಗೂ ಯೆಹೋವನನ್ನು ಕೀರ್ತಿಸುತ್ತಾ ಜೀವಮಾನವೆಲ್ಲಾ ಆತನನ್ನು ಭಜಿಸುತ್ತಾ’ ಇರೋಣ.—ಕೀರ್ತ. 104:33.

5, 6. ನಾವು ಇತರರಿಗೆ ಅತಿಥಿಸತ್ಕಾರ ಹಾಗೂ ಉದಾರತೆಯನ್ನು ಹೇಗೆ ತೋರಿಸಬಹುದು? ಇದು ಸಭೆಯ ಮೇಲೆ ಯಾವ ಪರಿಣಾಮ ಬೀರಬಲ್ಲದು?

5 ಸಹೋದರ ಸಹೋದರಿಯರಿಗೆ ಅತಿಥಿಸತ್ಕಾರ ಮಾಡುವ ಮೂಲಕ ಸಹ ನಾವು ಸಭೆಯಲ್ಲಿ ಪ್ರೀತಿಯನ್ನು ಪ್ರವರ್ಧಿಸಬಹುದು. ಪೌಲನು ಇಬ್ರಿಯರಿಗೆ ಬರೆದ ಪತ್ರದ ಕೊನೆಯ ಅಧ್ಯಾಯದಲ್ಲಿ “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ. ಅತಿಥಿಸತ್ಕಾರಮಾಡುವುದನ್ನು ಮರೆಯಬೇಡಿರಿ” ಎಂದು ಪ್ರೋತ್ಸಾಹಿಸಿದನು. (ಇಬ್ರಿ. 13:1, 2) ನಾವಿದನ್ನು ಹೇಗೆ ಮಾಡಬಹುದು? ಸಂಚರಣ ಮೇಲ್ವಿಚಾರಕ ಮತ್ತು ಅವರ ಪತ್ನಿಯನ್ನು, ಪೂರ್ಣ ಸಮಯದ ಸೇವೆಯಲ್ಲಿರುವ ಇತರ ಸಹೋದರ ಸಹೋದರಿಯರನ್ನು ಊಟಕ್ಕೆ ಕರೆಯಬಹುದು. ವಿಧವೆಯರನ್ನು, ಒಂಟಿ ಹೆತ್ತವರಿರುವ ಕುಟುಂಬಗಳನ್ನು ಅಥವಾ ಇತರರನ್ನು ಸಹ ನಮ್ಮೊಂದಿಗೆ ಊಟಕ್ಕೆ ಅಥವಾ ಕುಟುಂಬ ಆರಾಧನೆಗೆ ಜೊತೆಸೇರುವಂತೆ ಆಮಂತ್ರಿಸಬಹುದು.

6 “ಒಳ್ಳೇದನ್ನು ಮಾಡುವವರಾಗಿರುವಂತೆಯೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವಂತೆಯೂ ಉದಾರಿಗಳಾಗಿರುವಂತೆಯೂ ಹಂಚಿಕೊಳ್ಳಲು ಸಿದ್ಧರಾಗಿರುವಂತೆಯೂ ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯುವಂತಾಗಲು ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು ತಮಗಾಗಿ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳುವವರಾಗಿಯೂ ಇರುವಂತೆ” ಇತರರನ್ನು ಉತ್ತೇಜಿಸಬೇಕೆಂದು ಪೌಲ ತಿಮೊಥೆಯನಿಗೆ ಹೇಳಿದನು. (1 ತಿಮೊ. 6:17-19) ಕ್ರೈಸ್ತರು ಉದಾರತೆಯನ್ನು ಬೆಳೆಸಿಕೊಳ್ಳುವಂತೆ ಪೌಲನು ಉತ್ತೇಜಿಸುತ್ತಿದ್ದನು. ನಾವು ಸಹ ಈ ಗುಣವನ್ನು ಬೆಳೆಸಿಕೊಳ್ಳಬೇಕು. ನಮ್ಮ ಆರ್ಥಿಕ ಪರಿಸ್ಥಿತಿ ಒಳ್ಳೇದಿರದ ಸಮಯದಲ್ಲೂ ಇತರರ ಕಡೆಗೆ ಉದಾರತೆ ತೋರಿಸಬಹುದು. ಯಾರಿಗೆ ಸಹಾಯದ ಅಗತ್ಯವಿದೆಯೋ ಅಂಥವರನ್ನು ಸೇವೆಗೆ, ಕೂಟಗಳಿಗೆ ಹೋಗಿ ಬರುವಾಗ ನಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗಬಹುದು. ಸಹಾಯ ಪಡಕೊಂಡವರು ಸಹ ತಮಗೆ ತೋರಿಸಲಾದ ಪ್ರೀತಿಗಾಗಿ ಗಣ್ಯತೆ ತೋರಿಸುವ ಮೂಲಕ ಮತ್ತು ಹೆಚ್ಚುತ್ತಿರುವ ಇಂಧನದ ದರದ ಭಾರವನ್ನು ಕಡಿಮೆಗೊಳಿಸಲು ತಮ್ಮಿಂದಾದಷ್ಟು ವೆಚ್ಚವನ್ನು ಕೊಡಲು ಪ್ರಯತ್ನ ಮಾಡುವ ಮೂಲಕ ಸಭೆಯಲ್ಲಿ ಒಳ್ಳೇ ಗುಣಗಳನ್ನು ಪ್ರವರ್ಧಿಸಲು ಸಾಧ್ಯ. ನಮ್ಮ ಸಹೋದರ ಸಹೋದರಿಯರೊಂದಿಗೆ ಹೆಚ್ಚು ಸಮಯ ವ್ಯಯಿಸುವುದಾದರೆ ಅವರಿಗೆ ತಾವು ಅಮೂಲ್ಯರು, ತಮ್ಮನ್ನು ಪ್ರೀತಿಸುವವರಿದ್ದಾರೆ ಎಂಬ ಭಾವನೆ ಉಂಟಾಗುವುದು. “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ” ಒಳ್ಳೇದನ್ನು ಮಾಡುವಾಗ ಅವರಿಗಾಗಿ ಸಮಯ ವ್ಯಯಿಸುವಾಗ ಅವರ ಮೇಲೆ ನಮ್ಮ ಪ್ರೀತಿ ಗಾಢವಾಗುತ್ತದೆ. ಮಾತ್ರವಲ್ಲ ಸಭೆಯಲ್ಲೂ ಪ್ರೀತಿಪರ ವಾತಾವರಣ ಹಾಗೂ ಒಳ್ಳೇ ಗುಣಗಳು ಪ್ರವರ್ಧಿಸುತ್ತವೆ.—ಗಲಾ. 6:10.

7. ಇತರರ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸದಿರುವುದು ಸಭೆಯಲ್ಲಿ ಒಳ್ಳೇ ಗುಣಗಳನ್ನು ವರ್ಧಿಸಲು ಹೇಗೆ ಸಹಾಯ ಮಾಡುತ್ತದೆ?

7 ಸಹೋದರ ಸಹೋದರಿಯರ ಮೇಲಿನ ಪ್ರೀತಿಯನ್ನು ಗಾಢಗೊಳಿಸುವ ಇನ್ನೊಂದು ವಿಷಯ ಸ್ನೇಹ ಸಂಬಂಧ ಹಾಗೂ ಗೋಪ್ಯತೆ. (ಜ್ಞಾನೋಕ್ತಿ 18:24 ಓದಿ.) ನಿಜ ಮಿತ್ರರು ಪರಸ್ಪರರ ವೈಯಕ್ತಿಕ ವಿಷಯಗಳನ್ನು ಬಯಲುಪಡಿಸುವುದಿಲ್ಲ. ನಾವು ಇತರರಿಗೆ ತಿಳಿಸೆವು ಎಂಬ ಭರವಸೆಯಿಂದ ಸಹೋದರ ಸಹೋದರಿಯರು ತಮ್ಮ ಖಾಸಗಿ ವಿಷಯಗಳನ್ನು, ಭಾವನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಾಗ ನಮ್ಮ ಮಧ್ಯೆಯಿರುವ ಪ್ರೀತಿ ಇನ್ನಷ್ಟು ಗಾಢವಾಗುತ್ತದೆ. ಹೌದು ನಾವು ಭರವಸಾರ್ಹ ಸ್ನೇಹಿತರಾಗಿರೋಣ. ಇತರರ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸದಿರೋಣ. ಆಗ ಸಭೆಯಲ್ಲಿ ಪ್ರೀತಿತುಂಬಿದ, ಕುಟುಂಬದಂಥ ವಾತಾವರಣವನ್ನು ಸೃಷ್ಟಿಸುವೆವು.—ಜ್ಞಾನೋ. 20:19.

ಶುಶ್ರೂಷೆಯಲ್ಲಿ ಹುರುಪು ತೋರಿಸಿ

8. ಯೇಸು ಲವೊದಿಕೀಯ ಸಭೆಯವರಿಗೆ ಯಾವ ಬುದ್ಧಿವಾದ ಕೊಟ್ಟನು? ಏಕೆ?

8 ಯೇಸು ಲವೊದಿಕೀಯ ಸಭೆಯ ಕ್ರೈಸ್ತರಿಗೆ “ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ. ನೀನು ತಣ್ಣಗೆ ಇಲ್ಲವೆ ಬಿಸಿ ಆಗಿದ್ದರೆ ಒಳ್ಳೇದಿತ್ತು. ನೀನು ಬಿಸಿಯಾಗಿಯೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಾರಲಿದ್ದೇನೆ” ಎಂದು ಹೇಳಿದನು. (ಪ್ರಕ. 3:15, 16) ಇದರಿಂದ ಏನು ತಿಳಿಯುತ್ತದೆ? ಲವೊದಿಕೀಯ ಸಭೆಯವರು ಕ್ರೈಸ್ತ ಶುಶ್ರೂಷೆಯಲ್ಲಿ ಹುರುಪನ್ನು ಕಳೆದುಕೊಂಡಿದ್ದರು. ಇದು ಸಹೋದರರೊಂದಿಗೆ ಅವರಿಗಿದ್ದ ಸಂಬಂಧದ ಮೇಲೂ ನಕಾರಾತ್ಮಕ ಪರಿಣಾಮ ಬೀರಿದ್ದಿರಬೇಕು. ಆದ್ದರಿಂದಲೇ ಯೇಸು ಅವರಿಗೆ “ಯಾರ ಬಗ್ಗೆ ನನಗೆ ಮಮತೆಯಿದೆಯೋ ಅವರೆಲ್ಲರನ್ನು ನಾನು ಗದರಿಸುತ್ತೇನೆ ಮತ್ತು ಶಿಸ್ತುಗೊಳಿಸುತ್ತೇನೆ. ಆದುದರಿಂದ ಹುರುಪುಳ್ಳವನಾಗಿರು ಮತ್ತು ಪಶ್ಚಾತ್ತಾಪಪಡು” ಎಂದು ಪ್ರೀತಿಯಿಂದ ಬುದ್ಧಿಹೇಳಿದನು.—ಪ್ರಕ. 3:19.

9. ಕ್ಷೇತ್ರ ಸೇವೆಯ ಕಡೆಗೆ ನಮಗಿರುವ ಹುರುಪು ಸಭೆಯ ಮೇಲೆ ಹೇಗೆ ಪ್ರಭಾವ ಬೀರುವುದು?

9 ಸೇವೆಯಲ್ಲಿ ನಾವು ಎಷ್ಟು ಹೆಚ್ಚು ಹುರುಪಿನಿಂದ ಭಾಗವಹಿಸುತ್ತೇವೋ ಅಷ್ಟೇ ಹೆಚ್ಚು ಹಿತಕರ ವಾತಾವರಣ, ಒಳ್ಳೇ ಪ್ರವೃತ್ತಿ ಸಭೆಯಲ್ಲಿ ವರ್ಧಿಸುತ್ತದೆ. ಸಭೆಯು ಸ್ಥಾಪಿಸಲ್ಪಟ್ಟ ಉದ್ದೇಶವೇ ಕ್ಷೇತ್ರದಲ್ಲಿರುವ ಕುರಿಗಳಂಥ ಜನರನ್ನು ಹುಡುಕಿ ಅವರನ್ನು ಆಧ್ಯಾತ್ಮಿಕವಾಗಿ ಬಲಪಡಿಸಲಿಕ್ಕಾಗಿ. ಹಾಗಾಗಿ ನಾವು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಯೇಸುವಿನಂತೆ ಅತ್ಯಧಿಕ ಹುರುಪಿನಿಂದ ಭಾಗವಹಿಸಬೇಕು. (ಮತ್ತಾ. 28:19, 20; ಲೂಕ 4:43) ಸೇವೆಯನ್ನು ನಾವೆಷ್ಟು ಹೆಚ್ಚು ಹುರುಪಿನಿಂದ ಮಾಡುತ್ತೇವೋ ‘ದೇವರ ಜೊತೆಕೆಲಸಗಾರರಾದ’ ನಮ್ಮ ಐಕ್ಯ ಅಷ್ಟೇ ಹೆಚ್ಚು ಬಲಗೊಳ್ಳುತ್ತದೆ. (1 ಕೊರಿಂ. 3:9) ನಮ್ಮ ಸಹೋದರ ಸಹೋದರಿಯರು ಕ್ಷೇತ್ರ ಸೇವೆಯಲ್ಲಿ ಜನರ ಮುಂದೆ ತಮ್ಮ ನಂಬಿಕೆಯನ್ನು ಸಮರ್ಥಿಸುವುದನ್ನು, ಆಧ್ಯಾತ್ಮಿಕ ವಿಷಯಗಳಿಗಾಗಿ ಗಣ್ಯತೆ ವ್ಯಕ್ತಪಡಿಸುವುದನ್ನು ನೋಡುವಾಗ ಅವರ ಕಡೆಗಿನ ನಮ್ಮ ಪ್ರೀತಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ನಾವು ಹೆಗಲಿಗೆ ಹೆಗಲುಕೊಟ್ಟು “ಒಂದೇ ಮನಸ್ಸಿನಿಂದ” ಶುಶ್ರೂಷೆಯಲ್ಲಿ ತೊಡಗುವಾಗ ಸಭೆಯಲ್ಲಿ ಐಕ್ಯ ಹೆಚ್ಚಾಗುತ್ತದೆ.ಚೆಫನ್ಯ 3:9 ಓದಿ.

10. ನಾವು ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸುವಾಗ ಅದು ಸಭೆಯಲ್ಲಿರುವ ಇತರರ ಮೇಲೆ ಯಾವ ಪರಿಣಾಮ ಬೀರುತ್ತದೆ?

10 ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸಲು ನಾವು ಮಾಡುವ ಪ್ರಯತ್ನ ನಮ್ಮ ಜೊತೆಕ್ರೈಸ್ತರ ಮೇಲೆ ಒಳ್ಳೇ ಪ್ರಭಾವ ಬೀರಬಲ್ಲದು. ಕ್ಷೇತ್ರದಲ್ಲಿರುವ ಜನರ ಕಡೆಗೆ ಹೆಚ್ಚೆಚ್ಚು ಕಳಕಳಿ ಬೆಳೆಸಿಕೊಳ್ಳುವಾಗ, ಅವರ ಹೃದಯವನ್ನು ತಲಪುವಂಥ ರೀತಿಯಲ್ಲಿ ಮಾತಾಡಲು ಪ್ರಯತ್ನ ಮಾಡುವಾಗ ಸೇವೆಯಲ್ಲಿನ ನಮ್ಮ ಹುರುಪು ಉಕ್ಕೇರುವುದು. (ಮತ್ತಾ. 9:36, 37) ನಾವು ಉತ್ಸಾಹದಿಂದ ಸೇವೆ ಮಾಡುವುದನ್ನು ನೋಡಿ ಇತರರ ಉತ್ಸಾಹವೂ ಹೆಚ್ಚುವುದು. ಆದ್ದರಿಂದಲೇ ಯೇಸು ತನ್ನ ಶಿಷ್ಯರನ್ನು ಸಾರಲು ಕಳುಹಿಸಿದಾಗ ಒಬ್ಬೊಬ್ಬರನ್ನಾಗಿ ಕಳುಹಿಸದೆ ಇಬ್ಬಿಬ್ಬರನ್ನಾಗಿ ಕಳುಹಿಸಿದನು. (ಲೂಕ 10:1) ಇದರಿಂದ ಉತ್ತೇಜನ, ತರಬೇತಿ ಸಿಗುವುದು ಮಾತ್ರವಲ್ಲ ಅವರ ಹುರುಪು ಸಹ ಹೆಚ್ಚಾಗುವುದು ಎಂದು ಯೇಸುವಿಗೆ ತಿಳಿದಿತ್ತು. ನಾವು ಸಹ ಹುರುಪಿನ ಪ್ರಚಾರಕರೊಂದಿಗೆ ಸೇವೆ ಮಾಡಲು ಇಷ್ಟಪಡುತ್ತೇವಲ್ಲವೆ? ಹೌದು. ಇದು ನಮ್ಮ ಹುರುಪಿಗೆ ನೀರೆರೆಯುತ್ತದೆ. ಹೆಚ್ಚು ಆಸಕ್ತಿಯಿಂದ ಸುವಾರ್ತೆ ಸಾರಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.—ರೋಮ. 1:12.

ಗುಣುಗುಟ್ಟಬೇಡಿ, ಪಾಪಗೈಯಬೇಡಿ

11. ಮೋಶೆಯ ಸಮಯದಲ್ಲಿದ್ದ ಇಸ್ರಾಯೇಲ್ಯರಿಗೆ ಯಾವ ಸ್ವಭಾವವಿತ್ತು? ಪರಿಣಾಮ ಅವರಿಗೆ ಏನಾಯಿತು?

11 ದೇವರು ಇಸ್ರಾಯೇಲ್ಯರನ್ನು ಒಂದು ಜನಾಂಗವಾಗಿ ಆರಿಸಿಕೊಂಡ ಕೆಲವೇ ವಾರಗಳಲ್ಲಿ ಅವರು ಗುಣುಗುಟ್ಟುವ ಮನೋಭಾವವನ್ನು ಮೈಗೂಡಿಸಿಕೊಂಡರು. ಇದರಿಂದ ಅವರು ಯೆಹೋವ ದೇವರ ಹಾಗೂ ಆತನ ಪ್ರತಿನಿಧಿಗಳ ವಿರುದ್ಧ ದಂಗೆಯೇಳುವಷ್ಟರ ಮಟ್ಟಿಗೆ ಹೋದರು. (ವಿಮೋ. 16:1, 2) ಫಲಿತಾಂಶ? ಈಜಿಪ್ಟಿನಿಂದ ಬಿಡುಗಡೆಯಾಗಿ ಬಂದವರಲ್ಲಿ ಕೆಲವರು ಮಾತ್ರ ವಾಗ್ದತ್ತ ದೇಶವನ್ನು ಮುಟ್ಟಿದರು. ಅಷ್ಟುಮಾತ್ರವಲ್ಲ ಇಸ್ರಾಯೇಲ್ಯರ ದುರ್ವರ್ತನೆಗೆ ಮೋಶೆ ಪ್ರತಿಕ್ರಿಯಿಸಿದ ರೀತಿಯಿಂದಾಗಿ ಅವನಿಗೂ ವಾಗ್ದತ್ತ ದೇಶಕ್ಕೆ ಹೋಗಲು ಅನುಮತಿ ಸಿಗಲಿಲ್ಲ. (ಧರ್ಮೋ. 32:48-52) ಇಸ್ರಾಯೇಲ್ಯರಲ್ಲಿ ಇದ್ದಂಥ ಕೆಟ್ಟ ಸ್ವಭಾವ ನಮ್ಮಲ್ಲಿ ಬರದಿರಲು ನಾವೇನು ಮಾಡಬೇಕು?

12. ಗುಣುಗುಟ್ಟುವ ಮನೋಭಾವ ನಮ್ಮಲ್ಲಿ ಬರದಂತೆ ಹೇಗೆ ನೋಡಿಕೊಳ್ಳಬಹುದು?

12 ಗುಣುಗುಟ್ಟುವ ಮನೋಭಾವ ನಮ್ಮಲ್ಲಿ ಬರದಂತೆ ಜಾಗ್ರತೆ ವಹಿಸಬೇಕು. ನಮ್ರತೆ, ಅಧಿಕಾರದಲ್ಲಿರುವವರಿಗೆ ಗೌರವ ಈ ನಿಟ್ಟಿನಲ್ಲಿ ಸಹಾಯಕರ. ಅದೇ ಸಮಯದಲ್ಲಿ ಸಹವಾಸದ ಕುರಿತೂ ಜಾಗ್ರತೆಯಿಂದಿರಬೇಕು. ದೇವರ ನೀತಿಯುತ ಮಟ್ಟಗಳ ಪರಿವೆಯೇ ಇಲ್ಲದ ಸಹೋದ್ಯೋಗಿಗಳೊಂದಿಗೆ, ಸಹಪಾಠಿಗಳೊಂದಿಗೆ ಹೆಚ್ಚೆಚ್ಚು ಸಮಯ ಕಳೆದರೆ ಅದರಿಂದ ನಮಗೆ ಹಾನಿಯಾಗಬಲ್ಲದು. ಹಾಗಾಗಿ ಗುಣುಗುಟ್ಟುವ ಹಾಗೂ ಸ್ವತಂತ್ರ ಮನೋಭಾವವನ್ನು ಇಷ್ಟಪಡುವ ಜನರೊಂದಿಗಿನ ಸಹವಾಸಕ್ಕೆ ಕಡಿವಾಣ ಹಾಕಬೇಕು.—ಜ್ಞಾನೋ. 13:20.

13. ಗುಣುಗುಟ್ಟುವ ಮನೋಭಾವ ಆಧ್ಯಾತ್ಮಿಕತೆಗೆ ಹಾನಿಮಾಡುವ ಯಾವ ಗುಣಗಳನ್ನು ಸಭೆಯಲ್ಲಿ ಹುಟ್ಟಿಸಬಲ್ಲದು?

13 ಗುಣುಗುಟ್ಟುವ ಮನೋಭಾವ ಆಧ್ಯಾತ್ಮಿಕತೆಗೆ ಹಾನಿಮಾಡುವ ಗುಣಗಳನ್ನು ಹುಟ್ಟಿಸಬಲ್ಲದು. ಉದಾಹರಣೆಗೆ, ಗುಣುಗುಟ್ಟುವುದು ಸಭೆಯ ಶಾಂತಿ ಮತ್ತು ಐಕ್ಯವನ್ನು ಭಂಗಗೊಳಿಸಬಲ್ಲದು. ಜೊತೆ ಸಹೋದರರ ವಿರುದ್ಧ ದೂರುವುದು ಅವರಿಗೆ ನೋವನ್ನುಂಟುಮಾಡಬಹುದು. ಅಷ್ಟೇ ಅಲ್ಲ, ಅವರ ಹೆಸರು ಕೆಡಿಸುವ ಸುಳ್ಳಾರೋಪ ಮತ್ತು ದೂಷಣೆಯಂಥ ಪಾಪವನ್ನು ಮಾಡುವಷ್ಟು ಕೀಳ್ಮಟ್ಟಕ್ಕೆ ಒಬ್ಬನನ್ನು ಇಳಿಸಬಹುದು. (ಯಾಜ. 19:16; 1 ಕೊರಿಂ. 5:11) ಒಂದನೇ ಶತಮಾನದ ಸಭೆಯಲ್ಲಿ ಗುಣಗುಟ್ಟುತ್ತಿದ್ದ ಕೆಲವರು “ಪ್ರಭುತ್ವವನ್ನು ಅಸಡ್ಡೆಮಾಡುತ್ತಾ ಮಹಿಮಾನ್ವಿತರ ವಿಷಯದಲ್ಲಿ ದೂಷಣಾತ್ಮಕ ಮಾತುಗಳನ್ನು” ಆಡುತ್ತಿದ್ದರು. (ಯೂದ 8, 16) ಹೀಗೆ ಸಭೆಯಲ್ಲಿದ್ದ ಜವಾಬ್ದಾರಿಯುತ ಪುರುಷರ ವಿರುದ್ಧ ಅವರು ಗುಣುಗುಟ್ಟಿದ್ದು ಖಂಡಿತವಾಗಿ ದೇವರನ್ನು ಅಪ್ರಸನ್ನಗೊಳಿಸಿತು.

14, 15. (ಎ) ತಪ್ಪು ನಡತೆಯನ್ನು ಮುಂದುವರಿಯಲು ಬಿಟ್ಟರೆ ಸಭೆಯ ಮೇಲೆ ಯಾವ ಪರಿಣಾಮ ಆಗಬಲ್ಲದು? (ಬಿ) ಯಾರಾದರೂ ಗಂಭೀರ ಪಾಪ ಮಾಡಿದ್ದಾರೆಂದು ನಮಗೆ ತಿಳಿದುಬಂದಲ್ಲಿ ನಾವೇನು ಮಾಡಬೇಕು?

14 ಸಭೆಯಲ್ಲಿರುವ ಯಾರಾದರೂ ಮಿತಿಮೀರಿದ ಮದ್ಯಪಾನ ಸೇವನೆ, ಕಾಮಪ್ರಚೋದಕ ಚಿತ್ರಗಳನ್ನು ನೋಡುವುದು, ಅನೈತಿಕತೆ ಇಂಥ ಯಾವುದೇ ಗಂಭೀರ ಪಾಪವನ್ನು ಗುಟ್ಟಾಗಿ ಮಾಡುತ್ತಿದ್ದಾರೆ ಎಂದು ನಮಗೆ ಗೊತ್ತಾಗುವಲ್ಲಿ ಏನು ಮಾಡಬೇಕು? (ಎಫೆ. 5:11, 12) ಕಂಡೂ ಕಾಣದವರಂತೆ ಸುಮ್ಮನಿದ್ದು ಬಿಡುವೆವೋ? ಹಾಗೆ ಮಾಡಿದರೆ ಯೆಹೋವನು ತನ್ನ ಪವಿತ್ರಾತ್ಮವನ್ನು ಸಭೆಗೆ ನೀಡುವುದಿಲ್ಲ ಮತ್ತು ಇದು ಸಭೆಯ ಶಾಂತಿಯನ್ನು ಕದಡುವುದು. (ಗಲಾ. 5:19-23) ಕೊರಿಂಥ ಸಭೆಯವರು ತಪ್ಪುಗೈಯುತ್ತಿದ್ದವನನ್ನು ಹೊರಗೆ ಹಾಕಬೇಕಿದ್ದಂತೆಯೇ ಇಂದು ಸಹ ಸಭೆಯಲ್ಲಿ ಹಿತಕರ ವಾತಾವರಣ ಹಾಗೂ ಒಳ್ಳೇ ಗುಣಗಳು ಪ್ರವರ್ಧಿಸಬೇಕಾದರೆ ಕೆಟ್ಟ ಪ್ರಭಾವವನ್ನು ಕಿತ್ತೆಸೆಯಬೇಕು. ಹಾಗಾದರೆ ವೈಯಕ್ತಿಕವಾಗಿ ನೀವು ಸಭೆಯ ಶಾಂತಿಯನ್ನು ಕಾಪಾಡಲು ಏನು ಮಾಡಬಹುದು?

15 ನಾವು ಈಗಾಗಲೇ ಚರ್ಚಿಸಿದಂತೆ ಯಾರಾದರೂ ನಮ್ಮ ಮೇಲೆ ನಂಬಿಕೆಯಿಟ್ಟು ತಮ್ಮ ವೈಯಕ್ತಿಕ ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಂಡಾಗ ಅದನ್ನು ಗೋಪ್ಯವಾಗಿಡುವುದು ಪ್ರಾಮುಖ್ಯ. ಅದನ್ನು ಬಹಿರಂಗಪಡಿಸುವುದು ತಪ್ಪು. ಇದರಿಂದ ಆ ವ್ಯಕ್ತಿಗೂ ತುಂಬ ನೋವಾಗುವುದು. ಆದರೆ ಗಂಭೀರ ತಪ್ಪನ್ನು ಯಾರಾದರೂ ಮಾಡಿರುವಲ್ಲಿ ಅದು ಹಿರಿಯರಿಗೆ ಗೊತ್ತಾಗಬೇಕು. ಏಕೆಂದರೆ ಅದನ್ನು ಸರಿಪಡಿಸುವ ಜವಾಬ್ದಾರಿಯನ್ನು ಯೆಹೋವನು ಅವರಿಗೆ ಕೊಟ್ಟಿದ್ದಾನೆ. (ಯಾಜಕಕಾಂಡ 5:1 ಓದಿ.) ಹಾಗಾದರೆ ನಾವೇನು ಮಾಡಬೇಕು? ತಪ್ಪು ಮಾಡಿರುವ ವ್ಯಕ್ತಿ ಅದನ್ನು ಹಿರಿಯರಿಗೆ ತಿಳಿಸಿ ಸಹಾಯ ಪಡೆಯುವಂತೆ ನಾವು ಉತ್ತೇಜಿಸಬೇಕು. (ಯಾಕೋ. 5:13-15) ಒಂದುವೇಳೆ ನಿರ್ದಿಷ್ಟ ಸಮಯದೊಳಗೆ ಆ ವ್ಯಕ್ತಿ ಹಿರಿಯರಿಗೆ ಹೇಳದಿರುವಲ್ಲಿ ನಾವೇ ಅದನ್ನು ಹೇಳಲು ಮುನ್ನೆಜ್ಜೆ ತಕ್ಕೊಳ್ಳಬೇಕು.

16. ಗಂಭೀರ ತಪ್ಪನ್ನು ಹಿರಿಯರಿಗೆ ತಿಳಿಸುವುದು ಸಭೆಯನ್ನು ಹೇಗೆ ಕೆಟ್ಟ ಪ್ರಭಾವದಿಂದ ಮುಕ್ತವಾಗಿರಿಸುವುದು?

16 ಕ್ರೈಸ್ತ ಸಭೆ ನಮಗೆಲ್ಲರಿಗೆ ಆಧ್ಯಾತ್ಮಿಕ ಸುರಕ್ಷೆಯ ತಾಣವಾಗಿದೆ. ಅದು ಹಾಗೆಯೇ ಉಳಿಯಬೇಕಾದರೆ ಗಂಭೀರ ತಪ್ಪುಗಳನ್ನು ಹಿರಿಯರಿಗೆ ತಿಳಿಸಲೇಬೇಕು. ತಪ್ಪಿತಸ್ಥನಿಗೆ ಹಿರಿಯರು ತಪ್ಪನ್ನು ಮನಗಾಣಿಸಿದಾಗ ಅವನು ಪಶ್ಚಾತ್ತಾಪಪಟ್ಟು ಕೊಡಲಾಗುವ ಸಲಹೆ, ತಿದ್ದುಪಾಟನ್ನು ಸ್ವೀಕರಿಸಿದರೆ ನಂತರ ಅವನಿಂದ ಸಭೆಗೆ ಯಾವ ಹಾನಿಯೂ ಇರದು. ಆದರೆ ಅವನು ಪಶ್ಚಾತ್ತಾಪಪಡದೆ ಹಿರಿಯರ ಪ್ರೀತಿಪರ ಸಲಹೆಯನ್ನು ತಿರಸ್ಕರಿಸಿದರೆ? ಅವನನ್ನು ಸಭೆಯಿಂದ ಹೊರಹಾಕಲಾಗುವುದು. ಹೀಗೆ ಸಭೆಯಲ್ಲಿನ ದುಷ್ಪ್ರಭಾವವನ್ನು “ನಾಶ” ಮಾಡಲಾಗುವುದು ಅಥವಾ ತೆಗೆದುಹಾಕಲಾಗುವುದು. ಆಗ ಸಭೆಯು ಕೆಟ್ಟ ಪ್ರಭಾವದಿಂದ ಮುಕ್ತವಾಗಿರುವುದು. (1 ಕೊರಿಂಥ 5:5 ಓದಿ.) ಹೀಗೆ ಸಭೆಗೆ ಹಾನಿಯಾಗದೆ ಅದು ನಮ್ಮೆಲ್ಲರಿಗೆ ಸುರಕ್ಷೆಯ ತಾಣ ಆಗಿರಬೇಕಾದರೆ ನಾವೆಲ್ಲರೂ ತಕ್ಕ ಹೆಜ್ಜೆ ತಕ್ಕೊಳ್ಳಬೇಕು, ಹಿರಿಯರ ಮಂಡಲಿಯೊಂದಿಗೆ ಸಹಕರಿಸಬೇಕು.

“ಏಕತೆಯನ್ನು” ವರ್ಧಿಸಿ

17, 18. ‘ಏಕತೆಯನ್ನು ಹೊಂದಲು’ ನಮಗೆ ಯಾವುದು ಸಹಾಯಮಾಡುತ್ತದೆ?

17 ಯೇಸುವಿನ ಆರಂಭದ ಹಿಂಬಾಲಕರು ತಮ್ಮನ್ನು ‘ಅಪೊಸ್ತಲರ ಬೋಧನೆಗೆ ಮೀಸಲಾಗಿಟ್ಟುಕೊಳ್ಳುವ’ ಮೂಲಕ ಸಭೆಯಲ್ಲಿ ಶಾಂತಿಯನ್ನು ಕಾಪಾಡಲು ಸಹಾಯ ಮಾಡಿದರು. (ಅ. ಕಾ. 2:42) ಹಿರೀಪುರುಷರು ಕೊಡುತ್ತಿದ್ದ ಶಾಸ್ತ್ರಾಧಾರಿತ ಸಲಹೆಗಳನ್ನು ಮಾನ್ಯಮಾಡಿ ಅದಕ್ಕೆ ವಿಧೇಯರಾದರು. ಇಂದು ಸಹ ಹಿರಿಯರು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಕೊಡುವ ನಿರ್ದೇಶನದ ಪ್ರಕಾರ ಕೆಲಸ ಮಾಡುತ್ತಾರೆ. ಹಾಗಾಗಿ ಶಾಂತಿಯಿಂದಿರಲು ಸಭೆಗೆ ಬೇಕಾದ ಪ್ರೋತ್ಸಾಹ ಹಾಗೂ ಸಹಾಯ ದೊರಕುತ್ತದೆ. (1 ಕೊರಿಂ. 1:10) ಯೆಹೋವನ ಸಂಘಟನೆ ಕೊಡುವ ನಿರ್ದೇಶನಗಳಿಗೆ ಹಾಗೂ ಹಿರಿಯರು ಕೊಡುವ ಮಾರ್ಗದರ್ಶನೆಗೆ ನಾವು ಅಧೀನರಾಗಿ ನಡೆಯಬೇಕು. ಹೀಗೆ ನಾವು ‘ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರು’ ಎಂದು ತೋರಿಸಿಕೊಡುತ್ತೇವೆ.—ಎಫೆ. 4:3.

18 ಹಾಗಾಗಿ ನಾವೆಲ್ಲರೂ ಸಭೆಯಲ್ಲಿ ಹಿತಕರ ವಾತಾವರಣ ಹಾಗೂ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಲು ಪ್ರಯಾಸಪಡೋಣ. ಆಗ ‘ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನಾವು ತೋರಿಸುವ ಮನೋಭಾವದೊಂದಿಗಿರುವುದು.’—ಫಿಲಿ. 4:23.

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚಿತ್ರ]

ಅರ್ಥಭರಿತ ಹೇಳಿಕೆ ಕೊಡಲು ತಯಾರಿ ಮಾಡುವ ಮೂಲಕ ನೀವು ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸುವಿರಾ?

[ಪುಟ 20ರಲ್ಲಿರುವ ಚಿತ್ರ]

ರಾಜ್ಯಗೀತೆಗಳನ್ನು ಹಾಡಲು ಅಭ್ಯಾಸ ಮಾಡುವ ಮೂಲಕ ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಿರಿ