ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಉತ್ಸಾಹ ಕಳಕೊಳ್ಳಬೇಡಿ

ನಿಮ್ಮ ಉತ್ಸಾಹ ಕಳಕೊಳ್ಳಬೇಡಿ

ಪ್ರಪಂಚದಲ್ಲೇ ತುಂಬ ಪ್ರಾಮುಖ್ಯವಾದ ಕೆಲಸವೊಂದು ನಡೆಯುತ್ತಿದೆ. ಅದು ಸುವಾರ್ತೆ ಸಾರುವ ಕೆಲಸ. ಯೆಹೋವನ ಬಗ್ಗೆ ಕಲಿಸುವ ಈ ಕೆಲಸವನ್ನು ಆತನ ಸಾಕ್ಷಿಗಳಾದ ನಾವು ಹೆಮ್ಮೆಯಿಂದ ಉತ್ಸಾಹದಿಂದ ಮಾಡುತ್ತೇವೆ. ಆದರೆ ನಮ್ಮ ಈ ಉತ್ಸಾಹ ಕಡಿಮೆಯಾಗಬಹುದು. ಪಯನೀಯರರೇ ಆಗಿರಲಿ ಪ್ರಚಾರಕರೇ ಆಗಿರಲಿ ಕೆಲವೊಮ್ಮೆ ಸೇವೆಯಲ್ಲಿ ಉತ್ಸಾಹ ಕಳಕೊಳ್ಳುತ್ತಾರೆ. ಯಾಕೆ?

ಉತ್ಸಾಹದಿಂದ ಸೇವೆ ಮಾಡುತ್ತಾ ಇರಲು ಯಾವ ವಿಷಯಗಳು ಸಹಾಯ ಮಾಡುತ್ತವೆ?

ಯಾಕೆಂದರೆ ನಮಗೆ ಜನರ ಹತ್ತಿರ ಮಾತಾಡಲು ಇಷ್ಟ ಇರುವುದಾದರೂ ತುಂಬ ಮನೆಗಳಲ್ಲಿ ಜನರು ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕಿದರೂ ಕೋಪದಿಂದ ಬಯ್ಯುತ್ತಾರೆ ಅಥವಾ ಮಾತಾಡಲು ಇಷ್ಟಪಡುವುದಿಲ್ಲ. ಇನ್ನು ಕೆಲವು ಸೇವಾಕ್ಷೇತ್ರದಲ್ಲಿ ಆಸಕ್ತಿ ತೋರಿಸುವ ಜನರು ಇರುತ್ತಾರಾದರೂ ಸೇವಾಕ್ಷೇತ್ರ ತುಂಬ ದೊಡ್ಡದಿರುತ್ತದೆ. ಅದರಲ್ಲಿರುವ ಪ್ರತಿಯೊಬ್ಬರಿಗೂ ಸುವಾರ್ತೆ ಮುಟ್ಟಿಸಲು ಆಗುತ್ತಾ ಎಂದು ಕೆಲವು ಪ್ರಚಾರಕರಿಗೆ ಅನಿಸುತ್ತದೆ. ಸುಮಾರು ವರ್ಷಗಳಿಂದ ಸಾರುತ್ತಾ ಇರುವ ಇನ್ನು ಕೆಲವರು ಲೋಕಕ್ಕೆ ಅಂತ್ಯ ಇನ್ನೂ ಬರಲಿಲ್ಲ ಅಂತ ನಿರಾಶರಾಗುತ್ತಾರೆ.

ಇಂಥ ಸಮಸ್ಯೆಗಳು ಬಂದೇ ಬರುತ್ತವೆ. ಯಾಕೆಂದರೆ ಈ ಲೋಕವು “ಕೆಡುಕನ” ಅಂದರೆ ಸೈತಾನನ ಕೈಯಲ್ಲಿದೆ. ಹಾಗಾಗಿ ಸುವಾರ್ತೆ ಸಾರುವ ಕೆಲಸ ಖಂಡಿತ ಸುಲಭವಲ್ಲ.—1 ಯೋಹಾ. 5:19.

ಸೇವೆ ಮಾಡುವ ವಿಷಯದಲ್ಲಿ ನಮಗೇನೇ ಕಷ್ಟ, ಸಮಸ್ಯೆ ಬಂದರೂ ಅದನ್ನು ಜಯಿಸಲು ಯೆಹೋವನು ಸಹಾಯ ಮಾಡೇ ಮಾಡುತ್ತಾನೆ. ಆದರೆ ಉತ್ಸಾಹದಿಂದ ಸೇವೆ ಮಾಡುತ್ತಾ ಇರಬೇಕೆಂದರೆ ನಾವೇನು ಮಾಡಬೇಕು? ಕೆಲವೊಂದು ಸಲಹೆಗಳು ಇಲ್ಲಿವೆ.

ಹೊಸ ಪ್ರಚಾರಕರಿಗೆ ಸಹಾಯಮಾಡಿ

ಪ್ರತಿ ವರ್ಷ ಸಾವಿರಾರು ಜನರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ನಿಮಗೆ ಇತ್ತೀಚೆಗಷ್ಟೇ ದೀಕ್ಷಾಸ್ನಾನ ಆಗಿದ್ಯಾ? ಹಾಗಿದ್ದರೆ, ತುಂಬ ವರ್ಷಗಳಿಂದ ಸುವಾರ್ತೆ ಸಾರುತ್ತಿರುವವರಿಂದ ಸಹಾಯ ಪಡೆದುಕೊಳ್ಳಿ. ನಿಮಗೆ ದೀಕ್ಷಾಸ್ನಾನ ಆಗಿ ತುಂಬ ವರ್ಷಗಳಾಗಿದ್ಯಾ? ಹಾಗಿದ್ದರೆ, ಹೊಸದಾಗಿ ದೀಕ್ಷಾಸ್ನಾನ ಆದವರಿಗೆ ಸಹಾಯಮಾಡಿ. ಹೀಗೆ ಮಾಡಿದರೆ ನಿಮಗೆ ತುಂಬ ಸಂತೋಷ ಸಿಗುತ್ತದೆ.

ಯೇಸು ತನ್ನ ಶಿಷ್ಯರಿಗೆ ಸುವಾರ್ತೆಯನ್ನು ಹೇಗೆ ಸಾರಬೇಕೆಂದು ಸಲಹೆ-ಸೂಚನೆಗಳನ್ನು ಕೊಟ್ಟನು. ಸಾರುವ ವಿಧವನ್ನು ತೋರಿಸಿಕೊಟ್ಟನು. ಯಾಕೆಂದರೆ ಶಿಷ್ಯರು ಬೇರೆಯವರಿಗೆ ಚೆನ್ನಾಗಿ ಕಲಿಸಬೇಕಾದರೆ ಅವರಿಗೆ ಮಾರ್ಗದರ್ಶನ ಬೇಕು ಅಂತ ಯೇಸುವಿಗೆ ಗೊತ್ತಿತ್ತು. (ಲೂಕ 8:1) ಅದೇ ರೀತಿ ಇವತ್ತು ಕೂಡ ಹೊಸ ಪ್ರಚಾರಕರಿಗೆ ಸಹಾಯ ಬೇಕು.

ಹೊಸ ಪ್ರಚಾರಕರು ಸೇವೆಗೆ ಹೋದ ತಕ್ಷಣ ತನ್ನಿಂತಾನೇ ಎಲ್ಲವನ್ನೂ ಕಲಿಯುತ್ತಾರೆ ಅಂತ ನಾವು ಯಾವತ್ತೂ ನೆನಸಬಾರದು. ಒಳ್ಳೇ ಅನುಭವ ಇರುವ ಪ್ರಚಾರಕರು ಅವರಿಗೆ ಪ್ರೀತಿಯಿಂದ, ಮನಸ್ಸಿಗೆ ನೋವಾಗದ ಹಾಗೆ ಕಲಿಸಬೇಕಾಗುತ್ತದೆ. (1) ಜನರ ಜೊತೆ ಮಾತಾಡುವ ವಿಷಯವನ್ನು ಮೊದಲೇ ಹೇಗೆ ತಯಾರಿಸಬೇಕು, ಹೇಗೆ ಪ್ರ್ಯಾಕ್ಟಿಸ್‌ ಮಾಡಬೇಕು? (2) ಜನರ ಹತ್ತಿರ ಯಾವ ರೀತಿಯಲ್ಲಿ ಮಾತಾಡಬೇಕು? (3) ಪ್ರಕಾಶನಗಳನ್ನು ಕೊಡುವಾಗ ಏನು ಹೇಳಬೇಕು? (4) ಆಸಕ್ತಿ ತೋರಿಸಿದ ಜನರನ್ನು ಪುನಃ ಭೇಟಿಯಾದಾಗ ಹೇಗೆ ಮಾತಾಡಬೇಕು? (5) ಬೈಬಲ್‌ ಅಧ್ಯಯನವನ್ನು ಹೇಗೆ ಶುರುಮಾಡಬೇಕು? ಇದನ್ನೆಲ್ಲ ಕಲಿಸಬೇಕಾಗುತ್ತದೆ. ಹೊಸ ಪ್ರಚಾರಕರು ಒಳ್ಳೇ ಅನುಭವ ಇರುವ ಪ್ರಚಾರಕರನ್ನು ಚೆನ್ನಾಗಿ ಗಮನಿಸಿ, ಅವರಂತೆಯೇ ಮಾತಾಡಲು ಕಲಿತರೆ ಜನರ ಮನಮುಟ್ಟುವ ಹಾಗೆ ಸೇವೆ ಮಾಡಲು ಕಲಿಯುತ್ತಾರೆ. (ಲೂಕ 6:40) ಸಹಾಯ ಬೇಕಾದಾಗ ಸಹಾಯ ಮಾಡುವವರು ತಮ್ಮ ಜೊತೆಯೇ ಇದ್ದಾರೆ ಅಂತ ಗೊತ್ತಿದ್ದರೆ ಅವರ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಹೊಸ ಪ್ರಚಾರಕರನ್ನು ಹೊಗಳುವುದರಿಂದ ಮತ್ತು ಸಮಯಕ್ಕೆ ತಕ್ಕ ಹಾಗೆ ಸಲಹೆಗಳನ್ನು ಕೊಡುವುದರಿಂದ ತುಂಬ ಸಹಾಯ ಆಗುತ್ತದೆ.—ಪ್ರಸಂ. 4:9, 10.

ನಿಮ್ಮೊಂದಿಗೆ ಸೇವೆಮಾಡುವವರ ಹತ್ತಿರ ಮಾತಾಡಿ

ಜನರೊಟ್ಟಿಗೆ ಸತ್ಯದ ಬಗ್ಗೆ ಚೆನ್ನಾಗಿ ಮಾತಾಡಲು ನೀವು ತುಂಬ ಪ್ರಯತ್ನ ಮಾಡುತ್ತೀರಿ. ಆದರೆ ಕೆಲವೊಮ್ಮೆ ಯಾರೂ ಕೇಳಿಸಿಕೊಳ್ಳದೆ ಇರಬಹುದು. ಆಗ ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮೊಟ್ಟಿಗೆ ಸೇವೆ ಮಾಡುತ್ತಿರುವ ಸಹೋದರ ಅಥವಾ ಸಹೋದರಿಯೊಂದಿಗೆ ಮಾತಾಡಿ. ಇದರಿಂದ ನಿಮಗೆ ಖುಷಿಯಾಗುತ್ತದೆ. ಯೇಸು ಶಿಷ್ಯರನ್ನು ಸುವಾರ್ತೆ ಸಾರಲು ಕಳುಹಿಸುವಾಗ “ಇಬ್ಬಿಬ್ಬರನ್ನಾಗಿ” ಕಳುಹಿಸಿದನು. (ಲೂಕ 10:1) ಇದರಿಂದ ಆ ಶಿಷ್ಯರು ಒಬ್ಬರಿಂದ ಒಬ್ಬರು ಪ್ರೋತ್ಸಾಹ ಪಡೆದುಕೊಂಡರು. ನಾವು ಕೂಡ ಸಹೋದರ ಸಹೋದರಿಯರ ಜೊತೆ ಸೇವೆಗೆ ಹೋದಾಗ ಅವರೊಟ್ಟಿಗೆ ಮಾತಾಡುವುದರಿಂದ ‘ಪರಸ್ಪರ ಪ್ರೋತ್ಸಾಹ ವಿನಿಮಯ ಮಾಡಿಕೊಳ್ಳುತ್ತೇವೆ.’—ರೋಮ. 1:12.

ಯಾವ್ಯಾವ ವಿಷಯಗಳ ಬಗ್ಗೆ ಮಾತಾಡಬಹುದು? ಇತ್ತೀಚೆಗೆ ಆದ ಒಳ್ಳೇ ಅನುಭವವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಬಹುದು. ವೈಯಕ್ತಿಕ ಅಧ್ಯಯನ ಅಥವಾ ಕುಟುಂಬ ಆರಾಧನೆಯಲ್ಲಿ ಕಲಿತ ವಿಷಯದ ಬಗ್ಗೆ ಮಾತಾಡಬಹುದು. ಕೂಟದಲ್ಲಿ ನಿಮಗೆ ಪ್ರೋತ್ಸಾಹ ಕೊಟ್ಟಂಥ ವಿಷಯವನ್ನು ಹೇಳಬಹುದು. ಇಲ್ಲಾಂದ್ರೆ, ನಿಮ್ಮೊಟ್ಟಿಗೆ ಸೇವೆ ಮಾಡುತ್ತಿರುವವರ ಬಗ್ಗೆಯೇ ತಿಳಿದುಕೊಳ್ಳಬಹುದು. ಅವರು ಸತ್ಯ ಕಲಿತದ್ದು ಹೇಗೆ? ಈ ಸಂಘಟನೆಯನ್ನು ಯೆಹೋವ ದೇವರೇ ನಡೆಸುತ್ತಿದ್ದಾನೆ ಅಂತ ಅವರಿಗೆ ಹೇಗೆ ಗೊತ್ತಾಯಿತು? ಯಾವ್ಯಾವ ಸೇವೆ ಮಾಡುವ ಅವಕಾಶಗಳು ಸಿಕ್ಕಿದವು? ಯಾವ್ಯಾವ ಅನುಭವಗಳು ಸಿಕ್ಕಿದವು? ಅಂತ ಕೇಳಬಹುದು. ಇನ್ನು ಕೆಲವೊಮ್ಮೆ, ನಿಮ್ಮ ಅನುಭವವನ್ನೇ ಹಂಚಿಕೊಳ್ಳಬಹುದು. ಹೀಗೆ ನೀವು ಸುವಾರ್ತೆ ಸಾರಿದ ಜನರಿಂದ ಒಳ್ಳೇ ಪ್ರತಿಕ್ರಿಯೆ ಸಿಗದೇ ಇದ್ದರೂ ನಿಮ್ಮೊಟ್ಟಿಗೆ ಸೇವೆ ಮಾಡುತ್ತಿರುವವರ ಜೊತೆ ಚೆನ್ನಾಗಿ ಮಾತಾಡಬಹುದು. ಇದರಿಂದ ಒಬ್ಬರು ಇನ್ನೊಬ್ಬರ “ಭಕ್ತಿವೃದ್ಧಿ” ಮಾಡುತ್ತೀರಿ.—1 ಥೆಸ. 5:11.

ಚೆನ್ನಾಗಿ ವೈಯಕ್ತಿಕ ಅಧ್ಯಯನ ಮಾಡಿ

ಸೇವೆಯಲ್ಲಿ ಉತ್ಸಾಹ ಕಳಕೊಳ್ಳದಿರಲು ಚೆನ್ನಾಗಿ ವೈಯಕ್ತಿಕ ಅಧ್ಯಯನ ಮಾಡಬೇಕು. “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ನಮಗೆ ಅಧ್ಯಯನ ಮಾಡಲು ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದೆ. (ಮತ್ತಾ. 24:45) ನೀವು ಒಂದೊಂದು ವಿಷಯವನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ ‘ಸುವಾರ್ತೆ ಸಾರುವ ಕೆಲಸ ಏಕೆ ಪ್ರಾಮುಖ್ಯ?’ ಎಂಬ ವಿಷಯವನ್ನು ಅಧ್ಯಯನ ಮಾಡಬಹುದು. ಇದೇ ಲೇಖನದಲ್ಲಿರುವ “ಉತ್ಸಾಹದಿಂದ ಸೇವೆ ಮಾಡುತ್ತಾ ಇರಬೇಕು ಏಕೆ?” ಎಂಬ ಚೌಕದಲ್ಲಿ ಕೆಲವು ಕಾರಣಗಳನ್ನು ಕೊಡಲಾಗಿದೆ.

ಈ ಕಾರಣಗಳನ್ನು ಓದಿದಾಗ ನಿಮಗೆ ಸೇವೆಯನ್ನು ಉತ್ಸಾಹದಿಂದ ಮಾಡಲು ಪ್ರೇರಣೆ ಸಿಗುತ್ತದೆ. ಇನ್ನು ಉಳಿದಿರುವ ಕಾರಣಗಳನ್ನು ನೀವೇ ವೈಯಕ್ತಿಕ ಅಧ್ಯಯನದಲ್ಲಿ ಕಂಡುಹಿಡಿಯಿರಿ. ಆಮೇಲೆ ಆ ಅಂಶಗಳ ಬಗ್ಗೆ ಯೋಚಿಸಿ. ಹೀಗೆ ಮಾಡಿದರೆ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ.

ಹೊಸ ಹೊಸದಾಗಿ ಏನಾದರೂ ಮಾಡಿ

ನಾವು ಬೇರೆ ಯಾವ್ಯಾವ ರೀತಿಯಲ್ಲಿ ಸುವಾರ್ತೆ ಸಾರಬಹುದು ಅಂತ ಯೆಹೋವನ ಸಂಘಟನೆ ಆಗಾಗ್ಗೆ ಹೇಳುತ್ತಾ ಇರುತ್ತದೆ. ಮನೆಮನೆ ಸೇವೆ ಮಾಡುವುದರ ಜೊತೆಗೆ ಪತ್ರ, ಫೋನ್‌ ಮೂಲಕ ಸುವಾರ್ತೆ ಸಾರಬಹುದು. ರಸ್ತೆಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಜಾಗದಲ್ಲಿ ಸಾರಬಹುದು. ಅನೌಪಚಾರಿಕವಾಗಿ ಸುವಾರ್ತೆ ಸಾರಬಹುದು. ಯೆಹೋವನ ಸಾಕ್ಷಿಗಳು ತುಂಬ ಕಡಿಮೆ ಇರುವ ಅಥವಾ ಸಾಕ್ಷಿಗಳೇ ಇಲ್ಲದಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಬಹುದು. ಇದರಿಂದ ನಾವು ಇನ್ನೂ ಚೆನ್ನಾಗಿ ಸೇವೆಮಾಡಲು ಆಗುತ್ತದೆ.

ಈ ಹೊಸ ಹೊಸ ವಿಧಾನಗಳ ಮೂಲಕ ಸುವಾರ್ತೆ ತಿಳಿಸಲು ನಿಮಗೂ ಮನಸ್ಸಿದೆಯಾ? ನಮ್ಮ ಎಷ್ಟೋ ಸಹೋದರ ಸಹೋದರಿಯರು ಈ ವಿಧಾನಗಳ ಮೂಲಕ ಸುವಾರ್ತೆ ಸಾರಿ ಒಳ್ಳೊಳ್ಳೆ ಫಲಿತಾಂಶಗಳನ್ನು ಪಡೆದುಕೊಂಡಿದ್ದಾರೆ. ನಾವೀಗ ಅಂಥ ಮೂರು ಉದಾಹರಣೆಗಳನ್ನು ನೋಡೋಣ.

ಏಪ್ರಲ್‌ ಎಂಬ ಹೆಸರಿನ ಸಹೋದರಿ ಬೈಬಲ್‌ ಅಧ್ಯಯನವನ್ನು ಹೇಗೆ ಆರಂಭಿಸಬಹುದು ಎನ್ನುವುದರ ಬಗ್ಗೆ ನಮ್ಮ ರಾಜ್ಯ ಸೇವೆಯಲ್ಲಿ ಬಂದ ಸಲಹೆಯನ್ನು ಪಾಲಿಸಿದಳು. ತನ್ನ ಜೊತೆ ಕೆಲಸಮಾಡುವ ಮೂವರ ಹತ್ತಿರ ಬೈಬಲ್‌ ಅಧ್ಯಯನದ ಬಗ್ಗೆ ಮಾತಾಡಿದಳು. ಎಲ್ಲರೂ ಅಧ್ಯಯನ ಮಾಡಲು ಒಪ್ಪಿಕೊಂಡರು. ಸಭೆಯ ಕೂಟಗಳಿಗೂ ಬರಲು ಆರಂಭಿಸಿದರು. ಇಂಥ ಒಳ್ಳೇ ಫಲಿತಾಂಶ ಸಿಗುತ್ತದೆ ಅಂತ ಆ ಸಹೋದರಿ ಅಂದುಕೊಂಡೇ ಇರಲಿಲ್ಲ.

ನಮ್ಮ ಪತ್ರಿಕೆಗಳಲ್ಲಿ ಬರುವ ಲೇಖನಗಳು ಯಾರಿಗೆ ಇಷ್ಟವಾಗಬಹುದು ಅಂತ ಮೊದಲೇ ಯೋಚಿಸಿ ಅಂಥವರನ್ನು ಭೇಟಿಯಾಗಿ ಪತ್ರಿಕೆ ಕೊಡಿ ಎಂಬ ಸಲಹೆಯನ್ನು ನಮ್ಮ ಸಂಘಟನೆ ನೀಡಿತ್ತು. ಅಮೆರಿಕದ ಸರ್ಕಿಟ್‌ ಮೇಲ್ವಿಚಾರಕರೊಬ್ಬರು ಟಯರುಗಳ ಬಗ್ಗೆ ಲೇಖನವಿದ್ದ ಎಚ್ಚರ! ಪತ್ರಿಕೆಯನ್ನು ಒಂದು ಊರಿನ ಎಲ್ಲ ಟಯರ್‌ ಅಂಗಡಿಗಳಿಗೆ ಹೋಗಿ ಕೊಟ್ಟರು. “ನಿಮ್ಮ ಡಾಕ್ಟರನ್ನು ಅರ್ಥಮಾಡಿಕೊಳ್ಳಿ” (ಇಂಗ್ಲಿಷ್‌) ಎಂಬ ಲೇಖನವಿದ್ದ ಪತ್ರಿಕೆಯನ್ನೂ ಆ ಸಹೋದರ ಮತ್ತು ಅವರ ಹೆಂಡತಿ 100ಕ್ಕೂ ಹೆಚ್ಚು ಕ್ಲಿನಿಕ್‍ಗಳಿಗೆ ಹೋಗಿ ಕೊಟ್ಟರು. ಈ ರೀತಿ ಮಾಡಿದ್ದರಿಂದ ಸುವಾರ್ತೆ ಸಾರುವ ಕೆಲಸದ ಬಗ್ಗೆ ಮತ್ತು ನಮ್ಮ ಪತ್ರಿಕೆಗಳ ಬಗ್ಗೆ ಜನರಿಗೆ ಗೊತ್ತಾಯಿತು ಅಂತ ಆ ಸರ್ಕಿಟ್‌ ಮೇಲ್ವಿಚಾರಕ ಹೇಳಿದರು. ಅವರ ಸೇವಾಕ್ಷೇತ್ರದಲ್ಲಿ ಯಾವ್ಯಾವ ರೀತಿಯ ಜನರು ಇದ್ದಾರೆ ಅಂತ ತಿಳಿದುಕೊಂಡು ಅವರಿಗೆ ಸಾರಿದ್ದರಿಂದ ಹಲವಾರು ಪುನರ್ಭೇಟಿಗಳನ್ನು ಮಾಡಲು ಅವರಿಗೆ ಸಾಧ್ಯವಾಗಿದೆ.

ಫೋನ್‌ ಮೂಲಕ ಸುವಾರ್ತೆ ಸಾರುವ ಸಲಹೆ ಕೊಟ್ಟದ್ದಕ್ಕಾಗಿ ಜೂಡಿ ಎಂಬ ಸಹೋದರಿ ಸಂಘಟನೆಗೆ ಪತ್ರ ಬರೆದು ಧನ್ಯವಾದ ಹೇಳಿದರು. 86 ವರ್ಷದ ಅವರ ತಾಯಿಯ ಆರೋಗ್ಯ ತುಂಬ ಕೆಟ್ಟಿರುವುದರಿಂದ ಅವರು ಫೋನ್‌ ಮೂಲಕ ಜನರಿಗೆ ಸುವಾರ್ತೆ ತಿಳಿಸುತ್ತಾರೆ. ಇದರಿಂದ ಒಳ್ಳೇ ಫಲಿತಾಂಶ ಸಿಕ್ಕಿದೆ. 92 ಪ್ರಾಯದ ಸ್ತ್ರೀಯೊಟ್ಟಿಗೆ ಬೈಬಲ್‌ ಅಧ್ಯಯನ ಶುರುಮಾಡಲು ಆಗಿದೆ!

ನಮ್ಮ ಸಂಘಟನೆ ಕೊಡುವ ಸಲಹೆ ಪಾಲಿಸುವುದರಿಂದ ಒಳ್ಳೇ ಫಲಿತಾಂಶ ಸಿಗುತ್ತದೆ. ಅದನ್ನು ಮಾಡಿ ನೋಡಿ! ಸಂತೋಷದಿಂದ ಉತ್ಸಾಹದಿಂದ ಸುವಾರ್ತೆ ಸಾರುತ್ತಾ ಇರಲು ಆಗುತ್ತದೆ.

ಸಾಧಿಸಲು ಆಗುವಂಥ ಗುರಿಗಳನ್ನಿಡಿ

ನಮ್ಮ ಸಾರುವ ಕೆಲಸ ನಿಜವಾಗಿ ಯಶಸ್ವಿಯಾಗಿದೆ ಎಂದು ಯಾವಾಗ ಹೇಳಬಹುದು? ತುಂಬ ಪತ್ರಿಕೆ, ಪುಸ್ತಕಗಳನ್ನು ಜನರಿಗೆ ಕೊಟ್ಟರೆ, ತುಂಬ ಬೈಬಲ್‌ ಅಧ್ಯಯನಗಳಿದ್ದರೆ ಅಥವಾ ತುಂಬ ಜನರು ಸತ್ಯಕ್ಕೆ ಬಂದರೆ ನಮ್ಮ ಸೇವೆ ಯಶಸ್ವಿಯಾಗಿದೆ ಅಂತ ಅರ್ಥನಾ? ಇಲ್ಲ. ನೋಹನು ಮಾಡಿದ ಸೇವೆಯನ್ನು ನೆನಪು ಮಾಡಿಕೊಳ್ಳಿ. ಅವನ ಕುಟುಂಬವೊಂದನ್ನು ಬಿಟ್ಟು ಇನ್ಯಾರ ಜೀವವನ್ನಾದರೂ ಉಳಿಸಲು ನೋಹನಿಂದಾಯಿತಾ? ಇಲ್ಲ. ಆದರೂ ಅವನು ಮಾಡಿದ ಸೇವೆ ಯೆಹೋವನ ದೃಷ್ಟಿಯಲ್ಲಿ ಯಶಸ್ವಿಯಾಗಿತ್ತು. ಇದರರ್ಥ, ನಾವು ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡುವುದೇ ತುಂಬ ಮುಖ್ಯ.—1 ಕೊರಿಂ. 4:2.

ಸೇವೆಯಲ್ಲಿ ಖುಷಿ ಸಿಗಬೇಕಾದರೆ ನಮ್ಮಿಂದ ಸಾಧಿಸಲು ಆಗುವಂಥ ಗುರಿಗಳನ್ನಿಡಬೇಕು. ಇದು ಅನೇಕರ ಅನುಭವ. ಹಾಗಾದರೆ, ಯಾವ ಗುರಿಗಳನ್ನಿಟ್ಟರೆ ಒಳ್ಳೇದು? “ಸಾಧಿಸಲು ಆಗುವ ಗುರಿಗಳನ್ನಿಡಿ” ಎಂಬ ಚೌಕದಲ್ಲಿ ಕೊಟ್ಟಿರುವ ಅಂಶಗಳನ್ನು ನೋಡಿ.

ನಿಮ್ಮ ಸೇವೆಯಿಂದ ಒಳ್ಳೇ ಪ್ರತಿಫಲ ಸಿಗಬೇಕೆಂದು ಯೆಹೋವನಲ್ಲಿ ಬೇಡಿಕೊಳ್ಳಿ. ಸೇವೆ ವಿಷಯದಲ್ಲಿ ಒಂದೊಂದೇ ಗುರಿಗಳನ್ನಿಟ್ಟು ಅದನ್ನು ಮುಟ್ಟಿದಾಗ ನಿಮಗೆ ಸಂತೋಷ ಆಗುತ್ತದೆ. ಸುವಾರ್ತೆ ಸಾರಲು ನಿಮ್ಮಿಂದಾದ ಎಲ್ಲವನ್ನು ನೀವು ಮಾಡುತ್ತಿದ್ದೀರಿ ಎಂಬ ತೃಪ್ತಿ ಇರುತ್ತದೆ.

ಸುವಾರ್ತೆ ಸಾರುವುದು ಸುಲಭದ ಕೆಲಸವಲ್ಲ ನಿಜ. ಅನೇಕ ಅಡ್ಡಿಗಳು ಬರುತ್ತವೆ. ಆದರೂ ನಾವು ಉತ್ಸಾಹದಿಂದ ಸೇವೆ ಮಾಡುತ್ತಾ ಇರಲು ಸಾಧ್ಯವಿದೆ. ಅದಕ್ಕಾಗಿ ನಿಮ್ಮೊಟ್ಟಿಗೆ ಸೇವೆ ಮಾಡುತ್ತಿರುವವರೊಂದಿಗೆ ಪ್ರೋತ್ಸಾಹ ಸಿಗುವ ವಿಷಯಗಳನ್ನು ಮಾತಾಡಿ. ತಪ್ಪದೆ ಚೆನ್ನಾಗಿ ವೈಯಕ್ತಿಕ ಅಧ್ಯಯನ ಮಾಡಿ. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಕೊಡುವ ಸಲಹೆಯಂತೆ ಮಾಡಿ. ಸಾಧಿಸಲು ಸಾಧ್ಯವಿರುವ ಗುರಿಗಳನ್ನಿಡಿ. ಎಲ್ಲಕ್ಕಿಂತ ಮುಖ್ಯವಾಗಿ, ಯೆಹೋವನಿಗೆ ಸಾಕ್ಷಿಗಳಾಗಿ ಸುವಾರ್ತೆ ಸಾರುವುದು ಆತನು ನಮಗೆ ಕೊಟ್ಟಿರುವ ಒಂದು ದೊಡ್ಡ ಸೌಭಾಗ್ಯ ಎನ್ನುವುದನ್ನು ಮರೆಯಬೇಡಿ. (ಯೆಶಾ. 43:10) ನೀವು ಉತ್ಸಾಹದಿಂದ ಸೇವೆ ಮಾಡುತ್ತಾ ಇರುವಾಗ ತುಂಬ ಸಂತೋಷದಿಂದ ಇರುವಿರಿ.