ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂದೇ ಆರಿಸಿಕೊಳ್ಳಿ

ಇಂದೇ ಆರಿಸಿಕೊಳ್ಳಿ

ಇಂದೇ ಆರಿಸಿಕೊಳ್ಳಿ

“ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.”—ಆದಿಕಾಂಡ 1:27.

ಬೈಬಲಿನ ಆರಂಭದ ಪುಟಗಳ ಈ ಸುಪರಿಚಿತ ಮಾತುಗಳು ದೇವರು ‘ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿರುವ’ ವಸ್ತುಗಳಲ್ಲಿ ಅತಿ ವೈಭವಯುತ ಸೃಷ್ಟಿಯ ಬಗ್ಗೆ ತಿಳಿಸುತ್ತದೆ. ಪರಿಪೂರ್ಣ ಮಾನವ ದಂಪತಿ ಆದಾಮ-ಹವ್ವರೇ ಆ ಸೃಷ್ಟಿ. (ಪ್ರಸಂಗಿ 3:11) ಅವರ ಸೃಷ್ಟಿಕರ್ತ ಯೆಹೋವ ದೇವರು ಅವರಿಗಂದದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”—ಆದಿಕಾಂಡ 1:28.

ದೇವರು ಪ್ರಥಮ ಮಾನವ ಜೋಡಿಗೆ ನುಡಿದ ಈ ಮಾತುಗಳಲ್ಲಿ ಭೂಮಿ ಹಾಗೂ ಮಾನವರ ಕಡೆಗಿನ ತನ್ನ ಉದ್ದೇಶವನ್ನು ಅವರಿಗೆ ತಿಳಿಯಪಡಿಸಿದನು. ಅವರು ಬಹುಸಂತಾನವುಳ್ಳವರಾಗಿ ಹೆಚ್ಚಿ, ಈ ಭೂಮಿಯನ್ನು ತಮಗೂ ತಮ್ಮ ಸಂತತಿಗೂ ಪರದೈಸ ಬೀಡಾಗಿರುವಂತೆ ಮಾಡುವುದೇ ಆ ಉದ್ದೇಶವಾಗಿತ್ತು. ಅವರು ಎಷ್ಟು ಕಾಲ ಬಾಳಬೇಕು ಮತ್ತು ಯಾವಾಗ ಸಾಯಬೇಕು ಎಂದು ದೇವರು ಪೂರ್ವನಿರ್ಧರಿಸಲಿಲ್ಲ. ಬದಲಿಗೆ, ಒಂದು ಅದ್ಭುತಕರ ಪ್ರತೀಕ್ಷೆಯನ್ನು ಅವರ ಮುಂದಿಟ್ಟನು. ಸರಿಯಾದ ಆಯ್ಕೆಮಾಡುವ ಮೂಲಕ ಮತ್ತು ದೇವರಿಗೆ ವಿಧೇಯರಾಗಿರುವ ಮೂಲಕ ಅವರು ಸಂಪೂರ್ಣ ಸಮಾಧಾನ, ಸಂತೋಷದಿಂದ ಶಾಶ್ವತವಾಗಿ ಜೀವಿಸಸಾಧ್ಯವಿತ್ತು.

ಆದರೆ ಅವರು ತಪ್ಪಾದ ಆಯ್ಕೆ ಮಾಡಿದರು. ಫಲಿತಾಂಶ? ವೃದ್ಧಾಪ್ಯ ಮತ್ತು ಮರಣ ಮಾನವರೆಲ್ಲರ ಪಾಲಿಗೆ ಬಂತು. ಪೂರ್ವಜನಾದ ಯೋಬನು ಒಪ್ಪಿಕೊಂಡದ್ದು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.” (ಯೋಬ 14:1) ಹೀಗೇಕೆ?

“ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರು ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ಬೈಬಲ್‌ ವಿವರಿಸುತ್ತದೆ. (ರೋಮನ್ನರು 5:12) ಆ “ಒಬ್ಬ ಮನುಷ್ಯ” ನಿಶ್ಚಯವಾಗಿ ಆದಾಮನೇ. ಅವನು ದೇವರು ಕೊಟ್ಟ ಸ್ಪಷ್ಟವಾದ ಸರಳ ಆಜ್ಞೆಗೆ ಬೇಕುಬೇಕೆಂದೇ ಅವಿಧೇಯನಾದನು. (ಆದಿಕಾಂಡ 2:17) ಆದಾಮನು ತನ್ನ ಆಯ್ಕೆಯ ಮೂಲಕ ಪರದೈಸ ಭೂಮಿಯಲ್ಲಿ ಅನಂತಕಾಲ ಜೀವಿಸುವ ಸದವಕಾಶವನ್ನು ಕಳಕೊಂಡನು. ಮಾತ್ರವಲ್ಲ ಅವನ ಸಂತತಿಯೂ ಆ ಅಮೂಲ್ಯ ಸ್ವಾಸ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡಿ ಪಾಪಮರಣವೆಂಬ ಶಾಪವನ್ನು ಅವರಿಗೆ ದಾಟಿಸಿದನು. ಅದನ್ನು ಸರಿಪಡಿಸಲು ಸಾಧ್ಯವಿಲ್ಲವೆಂಬಂತೆ ತೋರಿತು. ಪರಿಹಾರವೇ ಇರಲಿಲ್ಲವೆ?

ಪರಿಹಾರ ಸಿಗುವ ಸಮಯ

ಸಾವಿರಾರು ವರ್ಷಗಳ ಬಳಿಕ ಕೀರ್ತನೆಗಾರನು ಹೀಗೆ ಬರೆಯುವಂತೆ ದೇವರು ಪ್ರೇರಿಸಿದನು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಏದೆನ್‌ ತೋಟದಲ್ಲಿ ಆದಾಮಹವ್ವರಿಗೆ ಮಾಡಿದ ವಾಗ್ದಾನ ಖಂಡಿತ ನೇರವೇರುವುದೆಂಬುದಕ್ಕೆ ದೇವರು ಆಶ್ವಾಸನೆ ಕೊಟ್ಟನು. ದೇವರ ವಾಕ್ಯವು ಅದನ್ನು ಮನಮುಟ್ಟುವಂತೆ ವರ್ಣಿಸುತ್ತಾ ಹೇಳುವುದು: “ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” ಬಳಿಕ ದೇವರು ತಾನೇ ಹೇಳುವುದು: “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ.”—ಪ್ರಕಟನೆ 21:4, 5.

ಪ್ರತಿಯೊಂದಕ್ಕೂ ಒಂದು ತಕ್ಕ ಸಮಯವಿರುವುದರಿಂದ ಈಗ ಏಳುವ ಪ್ರಶ್ನೆಯೇನೆಂದರೆ, ದೇವರು ಮಾಡಿದ ವಾಗ್ದಾನಗಳು ಸತ್ಯವಾಗುವ ಆ ಪರಿಹಾರದ ಸಮಯ ಬರುವುದು ಯಾವಾಗ? ಈ ಪತ್ರಿಕೆಯ ಪ್ರಕಾಶಕರಾದ ಯೆಹೋವನ ಸಾಕ್ಷಿಗಳು, ಬೈಬಲ್‌ ತಿಳಿಸುವ “ಕಡೇ ದಿವಸಗಳಲ್ಲಿ” ನಾವೀಗ ಜೀವಿಸುತ್ತಿದ್ದೇವೆ ಮತ್ತು ದೇವರು ‘ಎಲ್ಲವನ್ನು ಹೊಸದು ಮಾಡುವ’ ಸಮಯ ಅತೀ ಸಮೀಪದಲ್ಲಿದೆಯೆಂದು ಜನರಿಗೆ ತಿಳಿಸಲು ತುಂಬ ಶ್ರಮಿಸುತ್ತಿದ್ದಾರೆ. (2 ತಿಮೊಥೆಯ 3:1) ನೀವು ಬೈಬಲನ್ನು ಪರಿಶೀಲಿಸಿ ನಿಮ್ಮದಾಗಬಲ್ಲ ಆ ಅದ್ಭುತಕರ ಪ್ರತೀಕ್ಷೆಯ ಕುರಿತು ಕಲಿಯುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಈ ಆಮಂತ್ರಣವನ್ನು ಸಹ ಸ್ವೀಕರಿಸುವಂತೆ ನಾವು ಕೇಳಿಕೊಳ್ಳುತ್ತೇವೆ: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.” (ಯೆಶಾಯ 55:6) ನಿಮ್ಮ ಜೀವರಕ್ಷಣೆ ಮತ್ತು ಅನಂತಕಾಲ ಜೀವಿಸುವ ಪ್ರತೀಕ್ಷೆ ವಿಧಿಲಿಖಿತವಲ್ಲ, ಅವು ನಿಮ್ಮ ಮೇಲೆ ಹೊಂದಿಕೊಂಡಿವೆ! (w09 3/1)

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”