ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದ” ಬಾಲಕ

“ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದ” ಬಾಲಕ

ಅವರ ನಂಬಿಕೆಯನ್ನು ಅನುಕರಿಸಿರಿ

“ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದ” ಬಾಲಕ

ಬೇಸಗೆ ಕಾಲ. ಅದು ಇಂದಿನ ಕ್ಯಾಲೆಂಡರಿಗನುಸಾರ ಮೇ ಅಥವಾ ಜೂನ್‌ ತಿಂಗಳು. ಹೊಲಗಳಲ್ಲಿ ಹೊಂಬಣ್ಣದಿಂದ ಹೊಳೆಯುತ್ತಿರುವ ಗೋದಿಯ ತೆನೆಗಳು ಕೊಯ್ಲಿಗೆ ಸಿದ್ಧವಾಗಿ ನಿಂತಿವೆ. ದಶಕಗಳಿಂದ ಪ್ರವಾದಿಯಾಗಿ ನ್ಯಾಯಸ್ಥಾಪಕನಾಗಿ ದೇವರಿಗೆ ನಂಬಿಗಸ್ತನಾಗಿದ್ದ ಸಮುವೇಲನ ಮಾತಿನ ಮೇರೆಗೆ ಇಸ್ರಾಯೇಲ್‌ ಜನರೆಲ್ಲರೂ ಗಿಲ್ಗಾಲ್‌ ಪಟ್ಟಣದಲ್ಲಿ ಸೇರಿಬಂದಿದ್ದಾರೆ. ಎಲ್ಲರೂ ಮೌನವಾಗಿ ನಿಂತಿದ್ದಾರೆ. ಸಮುವೇಲನು ಜನರನ್ನೇ ದಿಟ್ಟಿಸಿನೋಡುತ್ತಿದ್ದಾನೆ. ಅವನು ಅವರ ಹೃದಯವನ್ನು ಹೇಗೆ ತಲಪುವನು?

ಆ ಜನರಿಗೆ ತಾವೆಷ್ಟು ಗಂಭೀರ ತಪ್ಪುಮಾಡಿದ್ದೇವೆಂಬ ಅರಿವೇ ಇರಲಿಲ್ಲ. ತಮಗೊಬ್ಬ ಅರಸ ಬೇಕೆಂದು ಅವರು ಹಠಹಿಡಿದಿದ್ದರು. ಇದನ್ನು ಕೇಳುವ ಮೂಲಕ ತಮ್ಮ ದೇವರಾದ ಯೆಹೋವನಿಗೂ ಆತನ ಪ್ರವಾದಿ ಸಮುವೇಲನಿಗೂ ಅಗೌರವ ತೋರಿಸುತ್ತಿದ್ದೇವೆಂದು ಅವರು ಗ್ರಹಿಸಿರಲಿಲ್ಲ. ಇನ್ನೊಂದು ಮಾತಿನಲ್ಲಿ, ಯೆಹೋವನು ತಮ್ಮ ರಾಜನಾಗಿರುವುದು ಬೇಡವೆಂದು ಹೇಳುತ್ತಿದ್ದರು! ಇಂಥ ತಪ್ಪಿಗೆ ಅವರು ಪಶ್ಚಾತ್ತಾಪ ಪಡುವಂತೆ ಸಮುವೇಲನು ಹೇಗೆ ಪ್ರೇರಿಸುವನು?

ಸಮುವೇಲನು ಮಾತಾಡಲಾರಂಭಿಸಿದನು. “ನಾನು ಈಗ ತಲೆನರೆತ ಮುದುಕನಾಗಿದ್ದೇನೆ” ಎಂದನು. ಅವನ ಬೆಳ್ಳಗಿನ ಕೂದಲುಗಳು ಅವನ ಮಾತುಗಳ ಬೆಲೆ ಹೆಚ್ಚಿಸಿದವು. ಮಾತು ಮುಂದುವರಿಸುತ್ತಾ, “ನನ್ನ ಬಾಲ್ಯ ಮೊದಲ್ಗೊಂಡು ಈ ದಿನದವರೆಗೂ ನಿಮ್ಮ ಮುಂದೆ ನಾಯಕನಾಗಿ ನಡೆದುಕೊಂಡಿದ್ದೇನೆ” (NIBV) ಎಂದನವನು. (1 ಸಮುವೇಲ 11:14, 15; 12:2) ಅವನೀಗ ವೃದ್ಧನಾಗಿದ್ದರೂ ತನ್ನ ಬಾಲ್ಯದ ದಿನಗಳನ್ನು ಮರೆತಿರಲಿಲ್ಲ. ಆ ದಿನಗಳ ನೆನಪು ಅವನಿಗೆ ಈಗಲೂ ಹಚ್ಚಹಸುರಾಗಿತ್ತು. ಅವನು ಬೆಳೆಯುತ್ತಾ ಹೋದಂತೆ ಮಾಡಿದ್ದ ನಿರ್ಧಾರಗಳು ಅವನ ದೇವರಾದ ಯೆಹೋವನಿಗೆ ನಂಬಿಗಸ್ತಿಕೆ ಹಾಗೂ ಭಕ್ತಿಯನ್ನು ಜೀವನಪರ್ಯಂತ ತೋರಿಸಲು ಅವನಿಗೆ ಸಹಾಯಮಾಡಿದ್ದವು.

ಸಮುವೇಲನ ಸುತ್ತಮುತ್ತಲೂ ನಂಬಿಕೆಯಿಲ್ಲದ, ನಿಷ್ಠೆಯಿಲ್ಲದ ಜನರಿದ್ದರು. ಹಾಗಿದ್ದರೂ ಅವನು ನಂಬಿಕೆಯನ್ನು ಬೆಳೆಸಿಕೊಂಡು ಅದನ್ನು ಕಾಪಾಡಿಕೊಂಡನು. ಇಂದು ಅಪನಂಬಿಗಸ್ತ ಮತ್ತು ಭ್ರಷ್ಟ ಜನರಿಂದ ತುಂಬಿದ ಲೋಕದಲ್ಲಿ ನಾವು ಜೀವಿಸುತ್ತಿರುವುದರಿಂದ ನಂಬಿಗಸ್ತರಾಗಿ ಉಳಿಯುವುದು ನಮಗೂ ಅಷ್ಟೇ ಕಷ್ಟಕರ. ಸಮುವೇಲನ ಮಾದರಿಯಿಂದ ಏನು ಕಲಿಯಬಹುದೆಂದು ನಾವೀಗ ನೋಡೋಣ. ಅವನ ಬಾಲ್ಯದ ದಿನಗಳಿಂದ ಆರಂಭಿಸೋಣ.

ಯೆಹೋವನ ಸಾನ್ನಿಧ್ಯಸೇವೆ ಮಾಡುತ್ತಿದ್ದ ಬಾಲಕ

ಸಮುವೇಲನ ಬಾಲ್ಯ ಎಲ್ಲರಂತಿರಲಿಲ್ಲ. ಮೊಲೆಬಿಟ್ಟ ಕೂಡಲೇ ಅಂದರೆ ಹೆಚ್ಚುಕಡಿಮೆ ನಾಲ್ಕರ ಪ್ರಾಯದಲ್ಲೇ ಯೆಹೋವನ ಗುಡಾರದಲ್ಲಿ ಅವನ ಜೀವನುದ್ದದ ಸೇವೆ ಆರಂಭವಾಯಿತು. ಶಿಲೋವಿನಲ್ಲಿದ್ದ ಈ ಗುಡಾರ ಸಮುವೇಲನ ಹುಟ್ಟೂರಾದ ರಾಮದಿಂದ 30 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿತ್ತು. ಅವನ ತಂದೆ ಎಲ್ಕಾನ, ತಾಯಿ ಹನ್ನ ಅವನನ್ನು ಜೀವನಪರ್ಯಂತ ನಾಜೀರನಾಗಿರುವಂತೆ ಯೆಹೋವನಿಗೆ ಸಮರ್ಪಿಸಿದ್ದರು. * ಇದರರ್ಥ ಸಮುವೇಲನನ್ನು ಅವನ ಹೆತ್ತವರು ತೊರೆದಿದ್ದರು, ಅವನ ಮೇಲೆ ಅವರಿಗೆ ಪ್ರೀತಿಯಿರಲಿಲ್ಲ ಎಂದೋ?

ಖಂಡಿತ ಇಲ್ಲ! ತಮ್ಮ ಮಗನನ್ನು ಶಿಲೋವಿನಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುವುದು ಎಂಬ ಭರವಸೆ ಅವರಿಗಿತ್ತು. ಅದರಂತೆ ಮಹಾ ಯಾಜಕನಾದ ಏಲಿ ಸಮುವೇಲನು ತನ್ನೊಂದಿಗೇ ಕೆಲಸಮಾಡುವಂತೆ ನೋಡಿಕೊಂಡನು. ಅಷ್ಟುಮಾತ್ರವಲ್ಲದೆ ಗುಡಾರಕ್ಕೆ ಸಂಬಂಧಪಟ್ಟ ಕೆಲವೊಂದು ಕೆಲಸಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದ ಹಲವಾರು ಸ್ತ್ರೀಯರೂ ಅಲ್ಲಿದ್ದರು.—ವಿಮೋಚನಕಾಂಡ 38:8.

ಅಷ್ಟೇ ಅಲ್ಲ ಎಲ್ಕಾನ ಮತ್ತು ಹನ್ನ ತಮ್ಮ ಮುದ್ದಿನ ಜ್ಯೇಷ್ಠ ಪುತ್ರನನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಅವನು ಹುಟ್ಟಿದ್ದೇ ಒಂದು ಪ್ರಾರ್ಥನೆಯ ಫಲವಾಗಿ. ತನಗೊಬ್ಬ ಮಗನನ್ನು ಕೊಡುವಂತೆ ಹನ್ನ ದೇವರ ಬಳಿ ಕೇಳಿಕೊಂಡಿದ್ದಳು. ಅವನನ್ನು ಜೀವನಪರ್ಯಂತ ದೇವರ ಸೇವೆಮಾಡಲಿಕ್ಕಾಗಿ ಸಮರ್ಪಿಸುತ್ತೇನೆ ಎಂದು ಹರಕೆಹೊತ್ತಿದ್ದಳು. ಅವಳು ಪ್ರತಿವರ್ಷ ದೇವರ ಗುಡಾರಕ್ಕೆ ಬರುವಾಗೆಲ್ಲ ತೋಳಿಲ್ಲದ ಹೊಸ ಅಂಗಿಯನ್ನು ಸಮುವೇಲನಿಗಾಗಿ ಹೊಲಿದು ತರುತ್ತಿದ್ದಳು. ಅವನದನ್ನು ಗುಡಾರ ಸೇವೆಗಾಗಿ ಹಾಕಿಕೊಳ್ಳುತ್ತಿದ್ದನು. ತನ್ನ ತಂದೆತಾಯಿ ಬರುತ್ತಿದ್ದಾಗಲೆಲ್ಲ ಪುಟ್ಟ ಸಮುವೇಲ ನಿಜವಾಗಿಯೂ ಖುಷಿಪಟ್ಟಿರಬೇಕು. ದೇವರ ಗುಡಾರದಂಥ ಪವಿತ್ರ ಸ್ಥಳದಲ್ಲಿ ಸೇವೆಮಾಡುವುದು ದೊಡ್ಡ ಸದವಕಾಶವಾಗಿದೆ ಎಂದು ಹೆತ್ತವರು ಸಮುವೇಲನಿಗೆ ಹೇಳುತ್ತಿದ್ದರು. ಹೆತ್ತವರ ಇಂಥ ವಾತ್ಸಲ್ಯದಿಂದ ತುಂಬಿದ ಉತ್ತೇಜನ ಹಾಗೂ ಮಾರ್ಗದರ್ಶನವು ಸಮುವೇಲನಿಗೆ ಬೇಕಾದ ಬಲಕೊಟ್ಟಿತು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಎಲ್ಕಾನ ಮತ್ತು ಹನ್ನರಿಂದ ಇಂದು ಹೆತ್ತವರು ಎಷ್ಟೋ ವಿಷಯಗಳನ್ನು ಕಲಿಯಬಹುದು. ತಮ್ಮ ಮಕ್ಕಳ ಪರಿಪಾಲನೆ ಮಾಡುವಾಗ ಗಮನವನ್ನೆಲ್ಲ ಅವರ ಭೌತಿಕ ಅಗತ್ಯಗಳ ಮೇಲೆ ಮಾತ್ರ ಕೇಂದ್ರೀಕರಿಸಿ ಅವರ ಆಧ್ಯಾತ್ಮಿಕ ಅಗತ್ಯಗಳನ್ನು ಹೆತ್ತವರು ಗಾಳಿಗೆ ತೂರುವುದು ಸಾಮಾನ್ಯ. ಆದರೆ ಸಮುವೇಲನ ಹೆತ್ತವರು ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಟ್ಟರು. ಇದು ತಾನೇ ಅವರ ಮಗ ನಂಬಿಗಸ್ತ ವ್ಯಕ್ತಿಯಾಗಿ ಬೆಳೆಯುವುದರಲ್ಲಿ ಮಹತ್ವದ ಪಾತ್ರವಹಿಸಿತು.—ಜ್ಞಾನೋಕ್ತಿ 22:6.

ಆ ಪುಟ್ಟ ಬಾಲಕ ಬೆಳೆಯುತ್ತಿರುವುದನ್ನು ಮತ್ತು ಅವನು ಶಿಲೋವಿನ ಸುತ್ತಲೂ ಇದ್ದ ಬೆಟ್ಟಗುಡ್ಡಗಳನ್ನು ಹತ್ತಿ ಅಲ್ಲೇನಿದೆಯೆಂದು ಸುತ್ತಾಡಿ ನೋಡುತ್ತಿರುವುದನ್ನು ನಾವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಹುದು. ಗುಡ್ಡದ ಮೇಲೆ ನಿಂತು ಕೆಳಗಿರುವ ಪಟ್ಟಣವನ್ನೂ ಹರವಿಕೊಂಡಿರುವ ಕಣಿವೆಯನ್ನೂ ಕಣ್ತುಂಬಿಕೊಳ್ಳುತ್ತಿದ್ದನು. ಹೀಗೆ ನೋಡುತ್ತಿದ್ದಾಗೆಲ್ಲ ಯೆಹೋವನ ಗುಡಾರ ಕಣ್ಣಿಗೆ ಬೀಳುತ್ತಿದ್ದಂತೆ ಅವನು ಸಂತೋಷ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದಿರಬಹುದು. ಆ ಗುಡಾರ ಅಷ್ಟು ಪವಿತ್ರವಾಗಿತ್ತು. * ಅದನ್ನು ಹೆಚ್ಚು ಕಡಿಮೆ 400 ವರ್ಷಗಳ ಹಿಂದೆ ಮೋಶೆಯ ಮೇಲ್ವಿಚಾರಣೆಯಲ್ಲಿ ಕಟ್ಟಲಾಗಿತ್ತು. ಇಡೀ ಜಗತ್ತಿನಲ್ಲೇ ಅದು ಯೆಹೋವನ ಶುದ್ಧಾರಾಧನೆಯ ಏಕೈಕ ಕೇಂದ್ರವಾಗಿತ್ತು.

ಎಳೆಯ ಸಮುವೇಲನು ದೇವರ ಗುಡಾರವನ್ನು ಪ್ರೀತಿಸತೊಡಗಿದನು. ಆದ್ದರಿಂದ “ಬಾಲಕನಾದ ಸಮುವೇಲನು ಏಫೋದೆಂಬ ನಾರುಮಡಿಯಂಗಿಯನ್ನು ತೊಟ್ಟುಕೊಂಡು ಯೆಹೋವನ ಸಾನ್ನಿಧ್ಯಸೇವೆಯನ್ನು ಮಾಡುತ್ತಿದ್ದನು” ಎಂದು ಕಾಲಾನಂತರ ಅವನೇ ಬರೆದ ಮಾತನ್ನು ನಾವು ಬೈಬಲಿನಲ್ಲಿ ಓದಬಹುದು. (1 ಸಮುವೇಲ 2:18) ಅವನು ಧರಿಸುತ್ತಿದ್ದ ಆ ತೋಳಿಲ್ಲದ ಅಂಗಿ ಅವನು ಗುಡಾರದಲ್ಲಿ ಯಾಜಕರಿಗೆ ಸಹಾಯ ಮಾಡುತ್ತಿದ್ದನು ಎಂಬುದನ್ನು ತೋರಿಸಿ ಕೊಡುತ್ತಿತ್ತು. ಸಮುವೇಲ ಯಾಜಕವರ್ಗಕ್ಕೆ ಸೇರಿದವನಲ್ಲದಿದ್ದರೂ ಅವನ ಕೆಲಸಗಳಲ್ಲಿ ಬೆಳಗ್ಗೆ ಗುಡಾರದ ಅಂಗಳದ ಬಾಗಿಲುಗಳನ್ನು ತೆರೆಯುವುದು, ವೃದ್ಧ ಏಲಿಗೆ ಸಹಾಯ ಮಾಡುವುದು ಸೇರಿತ್ತು. ಈ ಎಲ್ಲ ಸುಯೋಗಗಳ ಬಗ್ಗೆ ಅವನಿಗೆ ತುಂಬ ಸಂತೋಷವಿತ್ತು. ಆದರೆ ಯೆಹೋವನ ಆಲಯದಲ್ಲಿ ನಡೆಯುತ್ತಿದ್ದ ಗಂಭೀರ ತಪ್ಪುಗಳು ಅವನ ಮುಗ್ಧ ಮನಸ್ಸನ್ನು ಕದಡಿಸಿದವು.

ನೀತಿಗೆಟ್ಟವರ ಮಧ್ಯದಲ್ಲಿದ್ದರೂ ನಿರ್ಮಲನು

ಸಮುವೇಲ ತನ್ನ ಎಳೆಯ ವಯಸ್ಸಿನಲ್ಲೇ ದುಷ್ಟತನವನ್ನೂ ನೀತಿಭ್ರಷ್ಟತೆಯನ್ನೂ ಕಣ್ಣಾರೆ ಕಂಡನು. ಏಲಿಗೆ ಹೊಫ್ನಿ ಮತ್ತು ಫೀನೆಹಾಸ ಎಂಬಿಬ್ಬರು ಗಂಡುಮಕ್ಕಳಿದ್ದರು. “ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ” ಎನ್ನುತ್ತದೆ ಸಮುವೇಲನ ವೃತ್ತಾಂತ. (1 ಸಮುವೇಲ 2:12) ಈ ವಚನದಲ್ಲಿರುವ ಎರಡು ಅಂಶಗಳಿಗೆ ಪರಸ್ಪರ ಸಂಬಂಧವಿದೆ. ಇಲ್ಲಿ ‘ಬಹುದುಷ್ಟರು’ ಎಂಬುದಕ್ಕಿರುವ ಹೀಬ್ರು ಪದದ ಅಕ್ಷರಾರ್ಥವು “ಕೆಲಸಕ್ಕೆ ಬಾರದ ಪುತ್ರರು” ಎಂದಾಗಿದೆ. ಹೊಫ್ನಿ ಮತ್ತು ಫೀನೆಹಾಸರನ್ನು ವರ್ಣಿಸಲು ಇವು ತಕ್ಕ ಪದಗಳಾಗಿದ್ದವು ಏಕೆಂದರೆ ಯೆಹೋವನ ಬಗ್ಗೆ ಅವರಿಗೆ ಸ್ವಲ್ಪವೂ ಗೌರವವಿರಲಿಲ್ಲ. ಆತನ ನೀತಿನಿಯಮಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಈ ಮನೋಭಾವವೇ ಅವರ ಎಲ್ಲ ಪಾಪಗಳಿಗೆ ಕಾರಣವಾಗಿತ್ತು.

ದೇವರ ಗುಡಾರದಲ್ಲಿ ಯಾಜಕರ ಕೆಲಸಗಳ ಕುರಿತು ಮತ್ತು ಯಜ್ಞಗಳನ್ನು ಹೇಗೆ ಅರ್ಪಿಸಬೇಕೆಂಬದರ ಕುರಿತು ಮೋಶೆಯ ಧರ್ಮಶಾಸ್ತ್ರವು ಸ್ಪಷ್ಟ ನಿರ್ದೇಶನ ಕೊಟ್ಟಿತು. ಅದಕ್ಕೆ ಕಾರಣವೂ ಇತ್ತು: ಜನರ ಪಾಪಗಳನ್ನು ಕ್ಷಮಿಸಲು ದೇವರು ಮಾಡಿದ ಏರ್ಪಾಡನ್ನು ಆ ಯಜ್ಞಾರ್ಪಣೆಗಳು ಪ್ರತಿನಿಧಿಸಿದ್ದವು. ಇವುಗಳ ಮೂಲಕ ಅವರು ದೇವರ ದೃಷ್ಟಿಯಲ್ಲಿ ಶುದ್ಧರಾಗಿ ಆತನ ಆಶೀರ್ವಾದ, ಮಾರ್ಗದರ್ಶನಗಳನ್ನೂ ಪಡೆಯಲು ಅರ್ಹರಾಗುತ್ತಿದ್ದರು. ಆದರೆ ಹೊಫ್ನಿ ಫೀನೆಹಾಸರು ತಮ್ಮ ಜೊತೆ-ಯಾಜಕರು ಈ ಯಜ್ಞಾರ್ಪಣೆಗಳಿಗೆ ಅಗೌರವ ತೋರಿಸುವಂತೆ ಮಾಡಿದ್ದರು. *

ಇಂಥ ಘೋರ ತಪ್ಪುಗಳು ತಡೆಯಿಲ್ಲದೆ ನಡೆಯುತ್ತಿರುವುದನ್ನು ಎಳೆಯ ಸಮುವೇಲನು ಆಶ್ಚರ್ಯದಿಂದ ಕಣ್ಣರಳಿಸಿ ನೋಡುತ್ತಿದ್ದದ್ದನ್ನು ಸ್ವಲ್ಪ ಊಹಿಸಿಕೊಳ್ಳಿ. ಆಧ್ಯಾತ್ಮಿಕ ಬಲ ಮತ್ತು ಸಾಂತ್ವನ ಸಿಗುವುದೆಂಬ ಆಸೆಯಿಂದ ಪವಿತ್ರ ಗುಡಾರಕ್ಕೆ ಬಂದು ಬರೇ ನೋವು, ಅವಮಾನ, ನಿರಾಸೆಯಿಂದ ವಾಪಸ್ಸಾಗುತ್ತಿದ್ದ ಎಷ್ಟೋ ಬಡ ದೀನದಲಿತ ಜನರನ್ನು ಸಮುವೇಲನು ನೋಡಿರಬಹುದಲ್ಲವೇ? ಯೆಹೋವನ ನೈತಿಕ ಮಟ್ಟಗಳಿಗೆ ಕಿಂಚಿತ್ತೂ ಬೆಲೆಕೊಡದೆ ಹೊಫ್ನಿ ಫೀನೆಹಾಸರು ಗುಡಾರದಲ್ಲಿ ಸೇವೆಮಾಡುತ್ತಿದ್ದ ಕೆಲವು ಸ್ತ್ರೀಯರೊಡನೆ ಸಂಗಮಿಸುತ್ತಿದ್ದಾರೆಂದು ತಿಳಿದಾಗ ಸಮುವೇಲನಿಗೆ ಹೇಗನಿಸಿರಬೇಕಲ್ಲವೇ? (1 ಸಮುವೇಲ 2:22) ಏಲಿಯಾದರೂ ಇದನ್ನೆಲ್ಲ ಸರಿಮಾಡುವನೆಂದು ಸಮುವೇಲನು ನಿರೀಕ್ಷಿಸಿದ್ದಿರಬಹುದು.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಈ ಘೋರ ಅನ್ಯಾಯವನ್ನು ಏಲಿ ಸರಿಪಡಿಸುವ ಸ್ಥಾನದಲ್ಲಿದ್ದನು. ಮಹಾ ಯಾಜಕನಾಗಿದ್ದ ಅವನು ಗುಡಾರದಲ್ಲಿ ಏನೆಲ್ಲ ನಡೆಯುತ್ತಿತ್ತೋ ಅದಕ್ಕೆಲ್ಲ ಜವಾಬ್ದಾರನಾಗಿದ್ದನು. ಅಲ್ಲದೆ ಒಬ್ಬ ತಂದೆಯೋಪಾದಿ ತನ್ನ ಪುತ್ರರನ್ನು ಸರಿದಾರಿಗೆ ತರುವುದೂ ಅವನ ಕರ್ತವ್ಯವಾಗಿತ್ತು. ಏಕೆಂದರೆ ಅವರು ತಮಗೂ ಅಸಂಖ್ಯಾತ ಜನರಿಗೂ ಹಾನಿಯನ್ನು ಉಂಟುಮಾಡುತ್ತಿದ್ದರು. ಆದರೆ ಏಲಿ ಒಬ್ಬ ತಂದೆ ಮತ್ತು ಮಹಾ ಯಾಜಕನಾಗಿ ತನ್ನ ಪಾತ್ರವನ್ನು ನಿರ್ವಹಿಸಲು ತಪ್ಪಿಹೋದನು. ತನ್ನ ಪುತ್ರರಿಗೆ ಒಂದೆರಡು ಮಾತು ಹೇಳಿ ಸೌಮ್ಯವಾಗಿ ಗದರಿಸಿದನಷ್ಟೇ. (1 ಸಮುವೇಲ 2:23-25) ನಿಜ ಹೇಳಬೇಕೆಂದರೆ ಅವನು ಅವರನ್ನು ಕಠಿನ ಖಂಡನೆಗೆ ಗುರಿಪಡಿಸಬೇಕಿತ್ತು. ಏಕೆಂದರೆ ಅವರು ಮರಣದಂಡನೆಗೆ ಯೋಗ್ಯವಾದ ಪಾಪಗಳನ್ನು ಮಾಡುತ್ತಿದ್ದರು.

ಈ ಕೆಟ್ಟತನ ಎಷ್ಟು ವಿಪರೀತಕ್ಕೆ ಹೋಯಿತೆಂದರೆ ‘ದೇವರ ಮನುಷ್ಯನೊಬ್ಬನನ್ನು’ ಅಂದರೆ ಒಬ್ಬ ಪ್ರವಾದಿಯನ್ನು (ಬೈಬಲಿನಲ್ಲಿ ಅವನ ಹೆಸರಿಲ್ಲ) ಯೆಹೋವನೇ ಏಲಿಯ ಬಳಿ ಕಳುಹಿಸಿ ಅವನ ಮೂಲಕ ತೀಕ್ಷ್ಣ ನ್ಯಾಯತೀರ್ಪಿನ ಸಂದೇಶವನ್ನು ಕೊಟ್ಟನು. ‘ನೀನು ನನ್ನನ್ನು ಗೌರವಿಸುವದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸಿದಿ’ ಎಂದು ಯೆಹೋವನು ಏಲಿಗೆ ಹೇಳಿದನು. ಹೀಗಿರುವುದರಿಂದ ಏಲಿಯ ದುಷ್ಟ ಪುತ್ರರು ಒಂದೇ ದಿನದಲ್ಲಿ ಸಾಯುವರು, ಅವನ ಕುಟುಂಬ ಭಾರೀ ಸಂಕಷ್ಟಕ್ಕೊಳಗಾಗುವುದು ಮಾತ್ರವಲ್ಲ ಯಾಜಕವರ್ಗದಲ್ಲಿ ಅದಕ್ಕಿದ್ದ ಅಮೂಲ್ಯ ಸ್ಥಾನವನ್ನೂ ಕಳಕೊಳ್ಳುವುದು ಎಂದು ದೇವರು ಮುಂತಿಳಿಸಿದನು. ಈ ಕಟ್ಟೆಚ್ಚರಿಕೆಯನ್ನು ಕೇಳಿದ ನಂತರವಾದರೂ ಏಲಿಯ ಕುಟುಂಬ ತಪ್ಪನ್ನು ತಿದ್ದಿಕೊಂಡಿತೋ? ಅವರು ಅಂಥ ಬದಲಾವಣೆ ಮಾಡಿದ್ದರ ಬಗ್ಗೆ ವೃತ್ತಾಂತವೆಲ್ಲೂ ಸೂಚಿಸುವುದಿಲ್ಲ.—1 ಸಮುವೇಲ 2:27–3:1.

ಎಳೆಯ ಸಮುವೇಲನ ಮೇಲೆ ಇಂಥ ದುರಾಚಾರ ಯಾವ ಪರಿಣಾಮ ಬೀರಿತು? ಅಂಧಕಾರದ ಮಧ್ಯೆ ತೂರಿಬರುವ ಬೆಳಕಿನ ಕಿರಣಗಳಂತೆ, ಸಮುವೇಲನ ಬೆಳವಣಿಗೆ ಮತ್ತು ಅಭಿವೃದ್ಧಿಯ ಕುರಿತ ಒಳ್ಳೇ ಸುದ್ದಿ ಈ ಕರಾಳ ವೃತ್ತಾಂತದಲ್ಲಿ ಆಗಾಗ್ಗೆ ಕಂಡುಬರುತ್ತದೆ. 1 ಸಮುವೇಲ 2:18 ರಲ್ಲಿರುವ ಮಾತನ್ನು ಪುನಃ ನೆನಪಿಗೆ ತರೋಣ. “ಬಾಲಕನಾದ ಸಮುವೇಲನು . . . ಯೆಹೋವನ ಸಾನ್ನಿಧ್ಯಸೇವೆಯನ್ನು” ನಂಬಿಗಸ್ತಿಕೆಯಿಂದ ಮಾಡುತ್ತಿದ್ದನು. ಅತಿ ಸಣ್ಣ ಪ್ರಾಯದಲ್ಲೇ ಸಮುವೇಲನು ದೇವರ ಸೇವೆಯನ್ನು ತನ್ನ ಜೀವನದಲ್ಲಿ ಪ್ರಥಮವಾಗಿಟ್ಟನು. ಅದೇ ಅಧ್ಯಾಯದ 21ನೇ ವಚನದಲ್ಲಿ ಇನ್ನಷ್ಟು ಮನಮುಟ್ಟುವ ವಿಷಯವೊಂದನ್ನು ಓದಬಹುದು: “ಬಾಲಕನಾಗಿದ್ದ ಸಮುವೇಲನು ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದನು.” ಸಮುವೇಲನು ದೊಡ್ಡವನಾಗುತ್ತಾ ಹೋದಂತೆ ಅವನ ಸ್ವರ್ಗೀಯ ತಂದೆಯಾದ ಯೆಹೋವನೊಂದಿಗಿನ ಬಂಧ ಇನ್ನಷ್ಟು ಬಲಗೊಳ್ಳುತ್ತಾ ಹೋಯಿತು. ಯೆಹೋವನೊಂದಿಗಿನ ಇಂಥ ವೈಯಕ್ತಿಕ ಆಪ್ತ ಸಂಬಂಧವು ಎಲ್ಲ ರೀತಿಯ ನೀತಿಗೆಟ್ಟ ವಿಷಯಗಳಿಂದ ಸಂರಕ್ಷಣೆ ಒದಗಿಸುತ್ತದೆ.

ಮಹಾ ಯಾಜಕ ಏಲಿ ಮತ್ತು ಅವನ ಪುತ್ರರೇ ಇಂಥ ಪಾಪಮಾಡುವಾಗ ತಾನೂ ತನಗಿಷ್ಟ ಬಂದದ್ದನ್ನು ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂದು ಸಮುವೇಲನು ನೆನಸಬಹುದಿತ್ತು. ಆದರೆ ಅವನು ಹಾಗೆ ನೆನಸಲಿಲ್ಲ. ಏಕೆಂದರೆ ಅಧಿಕಾರದ ಸ್ಥಾನದಲ್ಲಿರುವವರಾಗಿರಲಿ ಬೇರಾರೇ ಆಗಿರಲಿ ಮಾಡಿದ ತಪ್ಪು ಇತರರು ತಪ್ಪುಮಾಡಲು ನೆಪವಾಗಿರಲಾರದು. ಇಂದು ಅನೇಕ ಕ್ರೈಸ್ತ ಯುವಜನರು ಕೂಡ ಸಮುವೇಲನಂತೆ ಯೆಹೋವನೊಂದಿಗೆ ಒಂದು ಅತ್ಯಾಪ್ತ ಸಂಬಂಧವನ್ನು ಇಟ್ಟುಕೊಳ್ಳುವ ಮೂಲಕ ‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವರಾಗುತ್ತಿದ್ದಾರೆ.’ ಒಳ್ಳೇ ಮಾದರಿ ಇಡಬೇಕಾದವರು ದಾರಿತಪ್ಪಿದಾಗಲೂ ಅವರದನ್ನು ಮಾಡುತ್ತಾರೆ.

ಸಮುವೇಲನ ಈ ರೀತಿಯ ನಂಬಿಗಸ್ತಿಕೆಯ ಪರಿಣಾಮವೇನಾಗಿತ್ತು? “ಬಾಲಕನಾದ ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ” ಇಲ್ಲವೆ ಮೆಚ್ಚುಗೆಗೆ ಪಾತ್ರನಾದನು ಎನ್ನುತ್ತದೆ ಬೈಬಲ್‌. (1 ಸಮುವೇಲ 2:26) ಯಾರ ಅಭಿಪ್ರಾಯಗಳು ಮನ್ನಣೆಗೆ ಯೋಗ್ಯವಾಗಿದ್ದವೋ ಅಂಥವರಿಗೆ ಸಮುವೇಲನು ಪ್ರಿಯನಾದನು. ಅವನ ನಂಬಿಗಸ್ತ ಜೀವನ ರೀತಿಯಿಂದಾಗಿ ಯೆಹೋವ ದೇವರೇ ಅವನನ್ನು ಅಮೂಲ್ಯವಾಗಿ ಪರಿಗಣಿಸಿದನು. ಶಿಲೋವಿನಲ್ಲಿ ನಡೆಯುತ್ತಿದ್ದ ಕೆಟ್ಟತನಕ್ಕೆ ತನ್ನ ದೇವರು ಕೊನೆ ತರುವನೆಂಬ ಭರವಸೆ ಸಮುವೇಲನಿಗಿತ್ತು. ಆದರೆ ಯಾವಾಗ? ಎಂಬ ಪ್ರಶ್ನೆ ಅವನ ಮನಸ್ಸಿನಲ್ಲಿದ್ದಿರಬಹುದು.

“ಮಾತನಾಡು; ನಿನ್ನ ದಾಸನು ಕೇಳುತ್ತಾನೆ”

ಸಮುವೇಲನ ಈ ರೀತಿಯ ಪ್ರಶ್ನೆಗಳಿಗೆ ಒಂದು ರಾತ್ರಿ ಉತ್ತರ ಸಿಕ್ಕಿತು. ಮುಂಜಾನೆಯ ಹೊತ್ತು ಇನ್ನೂ ಕತ್ತಲಿತ್ತು. ದೇವರ ಗುಡಾರದ ದೊಡ್ಡ ದೀಪ ಇನ್ನೂ ಉರಿಯುತ್ತಿತ್ತು. ಆ ನೀರವ ವಾತಾವರಣದಲ್ಲಿ ಸಮುವೇಲನಿಗೆ ತನ್ನನ್ನು ಯಾರೋ ಕರೆದಂತಾಯಿತು. ಏಲಿ ಇರಬಹುದೆಂದು ನೆನಸಿ ಮಲಗಿದ್ದಲ್ಲಿಂದ ಎದ್ದು ಅವನ ಬಳಿ ‘ಓಡಿ ಹೋದನು.’ ಏಲಿ ಆಗ ಹಣ್ಣುಹಣ್ಣು ಮುದುಕನಾಗಿದ್ದು ಕಣ್ಣು ಮೊಬ್ಬಾಗಿ ಹೋಗಿತ್ತು. ಏಲಿಗೆ ಏನು ಬೇಕೆಂದು ನೋಡಲು ಆ ಚಿಕ್ಕ ಹುಡುಗ ಬರಿಗಾಲಿನಲ್ಲಿ ಎದ್ದುಬಿದ್ದು ಓಡುವುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ? ಏಲಿಯ ಮೇಲೆ ಸಮುವೇಲನಿಗಿದ್ದ ಅಂಥ ಪ್ರೀತ್ಯಾದರಗಳು ಹೃದಯಸ್ಪರ್ಶಿಸುತ್ತದಲ್ಲವೇ? ಏಲಿ ಪಾಪಮಾಡಿದ್ದರೂ ಅವನಿನ್ನೂ ಯೆಹೋವನ ನೇಮಿತ ಮಹಾ ಯಾಜಕನೆಂಬುದನ್ನು ಸಮುವೇಲನು ಮರೆಯಲಿಲ್ಲ.—1 ಸಮುವೇಲ 3:2-5, NIBV.

ಸಮುವೇಲನು ಏಲಿಯನ್ನು ಎಬ್ಬಿಸಿ, “ಇಗೋ ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ” ಅಂದನು. ಆದರೆ ಏಲಿ ತಾನು ಕರೆಯಲಿಲ್ಲ, ಹೋಗಿ ಮಲಗಿಕೊಳ್ಳುವಂತೆ ಹೇಳಿದನು. ಪುನಃ ಎರಡು ಬಾರಿ ಹಾಗೆಯೇ ಆಯಿತು! ಆಗ ಏಲಿಗೆ ನಡೆಯುತ್ತಿರುವುದೇನೆಂದು ಗೊತ್ತಾಯಿತು. ಇಸ್ರಾಯೇಲ್‌ ಜನಾಂಗಕ್ಕೆ ಯೆಹೋವನು ಪ್ರವಾದನಾತ್ಮಕ ಸಂದೇಶಗಳನ್ನು ಅಥವಾ ದರ್ಶನಗಳನ್ನು ಕೊಡುವುದು ಇತ್ತೀಚೆಗೆ ಅಪರೂಪವಾಗಿದ್ದವು. ಅದಕ್ಕೆ ಕಾರಣಗಳೇನೆಂಬುದು ಸುವ್ಯಕ್ತ. ಆದರೆ ಯೆಹೋವನು ಈಗ ಪುನಃ ಮಾತಾಡಲಾರಂಭಿಸಿದ್ದಾನೆ, ಅದೂ ಈ ಹುಡುಗನ ಮೂಲಕ ಎಂದು ಏಲಿಗೆ ತಿಳಿಯಿತು. ಅವನು ಸಮುವೇಲನಿಗೆ ಮಲಗಲು ಹೇಳಿ, ಇನ್ನೊಮ್ಮೆ ಆ ಸ್ವರ ಕೇಳಿ ಬಂದರೆ ಏನು ಹೇಳಬೇಕೆಂದೂ ತಿಳಿಸಿದನು. ಸಮುವೇಲನು ಹಾಗೇ ನಡೆದುಕೊಂಡನು. ಸ್ವಲ್ಪ ಸಮಯದಲ್ಲೇ “ಸಮುವೇಲನೇ, ಸಮುವೇಲನೇ” ಎಂಬ ಧ್ವನಿ ಕೇಳಿ ಬಂದಾಗ ಅವನು “ಮಾತನಾಡು; ನಿನ್ನ ದಾಸನು ಕೇಳುತ್ತಾನೆ” ಎಂದನು.—1 ಸಮುವೇಲ 3:1, 5-10.

ಈಗ ಶಿಲೋವಿನಲ್ಲಿ ಯೆಹೋವನ ಮಾತನ್ನು ಕೇಳುವ ಸೇವಕನೊಬ್ಬನಿದ್ದ. ಸಮುವೇಲನು ಜೀವನಪರ್ಯಂತ ಯೆಹೋವನ ಮಾತನ್ನು ಕೇಳಿದನು. ನಿಮ್ಮ ಬಗ್ಗೆ ಏನು? ರಾತ್ರಿ ಹೊತ್ತಿನಲ್ಲಿ ಅಶರೀರವಾಣಿ ಕೇಳಲಿಕ್ಕಾಗಿ ನಾವು ಕಾಯಬೇಕಾಗಿಲ್ಲ. ಏಕೆಂದರೆ ಒಂದರ್ಥದಲ್ಲಿ ದೇವರ ಮಾತು ಇಂದು ನಮಗೆ ಯಾವಾಗಲೂ ಕೇಳಿ ಬರುತ್ತದೆ. ಆ ಮಾತುಗಳೆಲ್ಲ ಆತನ ವಾಕ್ಯವಾದ ಬೈಬಲಿನಲ್ಲಿದೆ. ನಾವು ಎಷ್ಟು ಹೆಚ್ಚಾಗಿ ದೇವರ ಮಾತಿಗೆ ಕಿವಿಗೊಟ್ಟು ಅದರಂತೆ ನಡೆದುಕೊಳ್ಳುತ್ತೇವೋ ನಮ್ಮ ನಂಬಿಕೆ ಅಷ್ಟೇ ಹೆಚ್ಚು ಬಲಗೊಳ್ಳುವುದು. ಸಮುವೇಲನ ವಿಷಯದಲ್ಲೂ ಹೀಗೆಯೇ ಆಯಿತು.

ಸಮುವೇಲನ ಜೀವನದಲ್ಲಿ ಆ ರಾತ್ರಿ ಒಂದು ಮೈಲಿಗಲ್ಲಾಗಿ ಪರಿಣಮಿಸಿತು. ಅಂದಿನಿಂದ ಯೆಹೋವನೊಂದಿಗಿನ ಅವನ ಸಂಬಂಧಕ್ಕೆ ಒಂದು ವಿಶೇಷ ತಿರುವು ಸಿಕ್ಕಿತು. ಅವನು ದೇವರ ಪ್ರವಾದಿಯೂ ವಕ್ತಾರನೂ ಆದನು. ಯೆಹೋವನ ಸಂದೇಶವನ್ನು ಏಲಿಗೆ ತಿಳಿಸಲು ಆ ಬಾಲಕ ಹೆದರಿದನು. ಏಕೆಂದರೆ ಏಲಿಯ ಕುಟುಂಬದ ವಿರುದ್ಧ ದೇವರು ನುಡಿದಿದ್ದ ಪ್ರವಾದನೆ ಬೇಗನೆ ನೆರವೇರಲಿದೆ ಎಂಬ ಅಂತಿಮ ಪ್ರಕಟನೆ ಅದಾಗಿತ್ತು. ಹಾಗಿದ್ದರೂ ಅವನು ಹೇಗೋ ಧೈರ್ಯ ಮಾಡಿ ಅದನ್ನು ಏಲಿಗೆ ತಿಳಿಸಿದನು. ಏಲಿಯೂ ಆ ದೈವಿಕ ನ್ಯಾಯತೀರ್ಪನ್ನು ದೀನತೆಯಿಂದ ಸ್ವೀಕರಿಸಿದನು. ಸ್ವಲ್ಪದರಲ್ಲೇ, ಎಲ್ಲವೂ ಯೆಹೋವನು ಹೇಳಿದಂತೆಯೇ ಆಯಿತು. ಇಸ್ರಾಯೇಲ್ಯರು ಫಿಲಿಷ್ಟಿಯರ ವಿರುದ್ಧ ಯುದ್ಧಕ್ಕಿಳಿದರು. ಅದೇ ದಿನ ಹೊಫ್ನಿ ಫೀನೆಹಾಸರು ಹತರಾದರು. ಮಾತ್ರವಲ್ಲ ಯೆಹೋವನ ಪವಿತ್ರ ಮಂಜೂಷ ಶತ್ರುವಶವಾಗಿದ್ದನ್ನು ಕೇಳಿದೊಡನೆ ಏಲಿಯೂ ಸತ್ತುಹೋದನು.—1 ಸಮುವೇಲ 3:10-18; 4:1-18.

ಸಮುವೇಲನಾದರೋ ನಂಬಿಗಸ್ತ ಪ್ರವಾದಿ ಎಂಬ ಸತ್ಕೀರ್ತಿಯನ್ನು ಕಾಪಾಡಿಕೊಂಡನು. ‘ಯೆಹೋವನು ಅವನೊಡನೆ ಇದ್ದನು’ ಮತ್ತು ಅವನು ನುಡಿದ ಪ್ರವಾದನೆಗಳಲ್ಲಿ ಒಂದೂ ಬಿದ್ದುಹೋಗದಂತೆ ಯೆಹೋವನು ನೋಡಿಕೊಂಡನು ಎನ್ನುತ್ತದೆ ವೃತ್ತಾಂತ.—1 ಸಮುವೇಲ 3:19.

‘ಸಮುವೇಲನು ಯೆಹೋವನಿಗೆ ಮೊರೆಯಿಟ್ಟನು’

ಇದರರ್ಥ ಇಸ್ರಾಯೇಲ್ಯರು ಸಮುವೇಲನ ಮಾದರಿಯನ್ನು ಅನುಸರಿಸುತ್ತಾ ಆಧ್ಯಾತ್ಮಿಕ, ನಂಬಿಗಸ್ತ ಜನರಾದರೆಂದೋ? ಇಲ್ಲ. ನ್ಯಾಯತೀರ್ಪು ಮಾಡಲು ತಮಗೆ ಪ್ರವಾದಿ ಬೇಡ, ಬೇರೆ ದೇಶಗಳ ಜನರಿಗಿರುವಂತೆ ಒಬ್ಬ ರಾಜ ಬೇಕು ಎಂದು ಕೇಳಿದರವರು. ಅವರ ಈ ಬೇಡಿಕೆಯನ್ನು ಯೆಹೋವನ ನಿರ್ದೇಶನದ ಮೇರೆಗೆ ಸಮುವೇಲನು ಈಡೇರಿಸಿದನು. ಆದರೆ ಅವರು ಮಾಡಿದ ಪಾಪ ಎಷ್ಟು ಗಂಭೀರವಾಗಿತ್ತು ಎಂಬುದನ್ನು ಅವನು ಅವರ ಅರಿವಿಗೆ ತರಬೇಕಾಗಿತ್ತು. ಅವರು ತಿರಸ್ಕರಿಸಿದ್ದು ಮನುಷ್ಯನನ್ನಲ್ಲ, ಯೆಹೋವನನ್ನೇ! ಇದನ್ನು ತಿಳಿಸಲಿಕ್ಕೆಂದೇ ಆ ಜನರನ್ನು ಸಮುವೇಲನು ಗಿಲ್ಗಾಲಿನಲ್ಲಿ ಒಟ್ಟುಸೇರಿಸಿದನು.

ಈಗ ನಾವು ಗಿಲ್ಗಾಲಿನಲ್ಲಿ ಸಮುವೇಲನು ಇಸ್ರಾಯೇಲ್ಯರನ್ನು ಉದ್ದೇಶಿಸಿ ಮಾತಾಡುತ್ತಿರುವ ಬಿಗಿ ವಾತಾವರಣಕ್ಕೆ ವಾಪಸ್ಸು ಹೋಗೋಣ. ವೃದ್ಧ ಸಮುವೇಲನು ತಾನು ಜೀವನಪರ್ಯಂತ ನಂಬಿಗಸ್ತಿಕೆಯಿಂದ ನಡೆದದ್ದರ ಬಗ್ಗೆ ಅವರಿಗೆ ನೆನಪಿಸುತ್ತಾನೆ. ಆಮೇಲೆ ಅವನು ‘ಯೆಹೋವನಿಗೆ ಮೊರೆಯಿಟ್ಟನು’ ಎನ್ನುತ್ತದೆ ವೃತ್ತಾಂತ. ಗುಡುಗುಮಳೆ ಸುರಿಸುವಂತೆ ಯೆಹೋವನನ್ನು ಅವನು ಕೇಳಿಕೊಳ್ಳುತ್ತಾನೆ.—1 ಸಮುವೇಲ 12:17, 18.

ಗುಡುಗುಮಳೆ! ಅದೂ ಬೇಸಗೆಯಲ್ಲಿ? ಅದುವರೆಗೆ ಕಂಡುಕೇಳರಿಯದ ವಿಷಯವಾಗಿತ್ತು! ಇದರ ಬಗ್ಗೆ ಜನರಿಗೆ ಎಳ್ಳಷ್ಟು ಸಂದೇಹವಿದ್ದಲ್ಲಿ ಅಥವಾ ಅವರು ಅಪಹಾಸ್ಯ ಮಾಡುತ್ತಿದ್ದಲ್ಲಿ ಸ್ವಲ್ಪದರಲ್ಲೇ ಅದಕ್ಕೆಲ್ಲ ತೆರೆಬಿತ್ತು. ಒಮ್ಮಿಂದೊಮ್ಮೆಲೆ ಆಕಾಶ ಕರಿಮೋಡಗಳಿಂದ ದಟ್ಟವಾಯಿತು. ಬೀಸುತ್ತಿದ್ದ ಗಾಳಿಯ ರಭಸಕ್ಕೆ ಹೊಲದಲ್ಲಿದ್ದ ಗೋದಿಯ ತೆನೆಗಳು ನಲುಗಿಹೋದವು. ಗುಡುಗಿನ ಗರ್ಜನೆ ಆರಂಭವಾಯಿತು. ಕೊನೆಗೆ ಮಳೆ ಸುರಿಯಿತು. ಜನರ ಪ್ರತಿಕ್ರಿಯೆ ಏನಾಗಿತ್ತು? ‘ಜನರೆಲ್ಲರು ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟರು.’ ಅವರು ಎಷ್ಟು ಗಂಭೀರ ಪಾಪ ಮಾಡಿದ್ದಾರೆಂದು ಕೊನೆಗೂ ಅರಿತುಕೊಂಡರು.—1 ಸಮುವೇಲ 12:18, 19.

ಈಗ ಸಮುವೇಲನಲ್ಲ ಅವನ ದೇವರಾದ ಯೆಹೋವನೇ ಆ ದಂಗೆಕೋರ ಜನರಿಗೆ ಅವರ ತಪ್ಪಿನ ಅರಿವುಂಟುಮಾಡಿದನು. ಸಮುವೇಲನು ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ವರೆಗೂ ತನ್ನ ದೇವರಲ್ಲಿ ನಂಬಿಕೆಯನ್ನಿಟ್ಟಿದ್ದನು. ಯೆಹೋವನು ಅವನಿಗೆ ಪ್ರತಿಫಲ ನೀಡಿದನು. ಇವತ್ತಿಗೂ ಯೆಹೋವನು ಬದಲಾಗಿಲ್ಲ. ಸಮುವೇಲನ ನಂಬಿಗಸ್ತ ಜೀವನ ಮಾದರಿಯನ್ನು ಅನುಕರಿಸುವವರೆಲ್ಲರನ್ನು ಆತನು ಈಗಲೂ ಬೆಂಬಲಿಸುತ್ತಿದ್ದಾನೆ. (w10-E 10/01)

[ಪಾದಟಿಪ್ಪಣಿಗಳು]

^ ಪ್ಯಾರ. 8 ನಾಜೀರನಾಗಿರುವುದು ಒಂದು ವಿಶೇಷ ರೀತಿಯ ಸೇವೆ. ನಾಜೀರರು ಮದ್ಯವನ್ನು ಸೇವಿಸಬಾರದಿತ್ತು, ತಮ್ಮ ಕೂದಲನ್ನು ಕತ್ತರಿಸಬಾರದಿತ್ತು. ಹೆಚ್ಚಿನವರು ಸ್ವಲ್ಪ ಸಮಯಕ್ಕಾಗಿ ಮಾತ್ರ ನಾಜೀರರಾಗಿರುವ ಹರಕೆ ಮಾಡುತ್ತಿದ್ದರು. ಇನ್ನು ಕೆಲವರು ಜೀವನವಿಡೀ ನಾಜೀರರಾಗಿದ್ದರು. ಉದಾಹರಣೆಗಾಗಿ ಸಂಸೋನ, ಸಮುವೇಲ, ಸ್ನಾನಿಕನಾದ ಯೋಹಾನ.

^ ಪ್ಯಾರ. 12 ದೇವರ ಗುಡಾರ ಆಯತಾಕಾರದ್ದು. ಅದು ಮರದ ಚೌಕಟ್ಟಿನ ಮೇಲೆ ನಿರ್ಮಿಸಲಾಗಿದ್ದ ಒಂದು ದೊಡ್ಡ ಡೇರೆ. ಆದರೆ ಅದಕ್ಕಾಗಿ ಶ್ರೇಷ್ಠ ಗುಣಮಟ್ಟದ ವಸ್ತುಗಳನ್ನು ಅಂದರೆ ಕಡಲುಹಂದಿಯ ತೊಗಲು, ಕಸೂತಿ ಹಾಕಿದ ಸುಂದರ ಬಟ್ಟೆ, ಬೆಳ್ಳಿ ಮತ್ತು ಚಿನ್ನ ಹೊದಿಸಿರುವ ದುಬಾರಿ ಮರವನ್ನು ಬಳಸಲಾಗಿತ್ತು. ಈ ಗುಡಾರ ಆಯತಾಕಾರದ ಅಂಗಳದ ಮಧ್ಯದಲ್ಲಿತ್ತು. ಆ ಅಂಗಳದಲ್ಲಿ ಅತ್ಯಾಕರ್ಷಕ ಯಜ್ಞವೇದಿಯೂ ಇತ್ತು. ಸಮಯಾನಂತರ ಗುಡಾರದ ಬದಿಯಲ್ಲಿ ಯಾಜಕರಿಗಾಗಿ ಕೋಣೆಗಳನ್ನೂ ಕಟ್ಟಲಾಯಿತು. ಅಂಥದೊಂದು ಕೋಣೆಯಲ್ಲೇ ಸಮುವೇಲನು ಮಲಗುತ್ತಿದ್ದಿರಬಹುದು.

^ ಪ್ಯಾರ. 16 ಅವರ ಅಗೌರವದ ಕೃತ್ಯಗಳ ಎರಡು ಉದಾಹರಣೆಗಳನ್ನು ವೃತ್ತಾಂತ ತಿಳಿಸುತ್ತದೆ. ಒಂದು ಉದಾಹರಣೆ: ಯಾಜಕರು ಯಜ್ಞಾರ್ಪಿತ ಪ್ರಾಣಿಯ ಯಾವ ಭಾಗಗಳನ್ನು ಮಾತ್ರ ತಿನ್ನಬೇಕು ಎಂಬುದನ್ನು ಧರ್ಮಶಾಸ್ತ್ರ ತಿಳಿಸಿತ್ತು. (ಧರ್ಮೋಪದೇಶಕಾಂಡ 18:3) ಆದರೆ ಆ ದುಷ್ಟ ಯಾಜಕರು ದೇವರ ಗುಡಾರದಲ್ಲಿ ಇದಕ್ಕೆ ತದ್ವಿರುದ್ಧವಾದ ರೂಢಿಯನ್ನು ಆರಂಭಿಸಿದ್ದರು. ಅವರು ತಮ್ಮ ಆಳುಗಳನ್ನು ಕಳುಹಿಸಿ ದೊಡ್ಡ ಹಂಡೆಯಲ್ಲಿ ಮಾಂಸ ಬೇಯುತ್ತಿದ್ದಾಗಲೇ ದೊಡ್ಡ ಮುಳ್ಳುಚಮಚವನ್ನು ಹಾಕಿ ಚುಚ್ಚಿ, ಸಿಕ್ಕಿದ ಒಳ್ಳೊಳ್ಳೇ ತುಂಡುಗಳನ್ನು ತೆಗೆದುಕೊಂಡು ಬರುವಂತೆ ಹೇಳುತ್ತಿದ್ದರು. ಇನ್ನೊಂದು: ಒಬ್ಬ ವ್ಯಕ್ತಿ ಯಜ್ಞಗಳನ್ನು ವೇದಿಯ ಬಳಿ ತರುತ್ತಿದ್ದಾಗ ಆ ದುಷ್ಟ ಯಾಜಕರು ಒಬ್ಬ ಆಳನ್ನು ಕಳುಹಿಸುತ್ತಿದ್ದರು. ಪ್ರಾಣಿಯ ಕೊಬ್ಬು ಯೆಹೋವನಿಗೆ ಅರ್ಪಿಸಲ್ಪಡುವ ಮುಂಚೆಯೇ ಆ ಆಳು ಆ ವ್ಯಕ್ತಿಯನ್ನು ದಬಾಯಿಸಿ ಹಸಿಮಾಂಸವನ್ನು ಒತ್ತಾಯದಿಂದ ಪಡೆದು ಯಾಜಕರಿಗೆ ತಂದುಕೊಡುತ್ತಿದ್ದನು.—ಯಾಜಕಕಾಂಡ 3:3-5; 1 ಸಮುವೇಲ 2:13-17.

[ಪುಟ 17ರಲ್ಲಿರುವ ಚಿತ್ರ]

ಸಮುವೇಲನಿಗೆ ಹೆದರಿಕೆಯಾದರೂ ಯೆಹೋವನ ನ್ಯಾಯತೀರ್ಪಿನ ಸಂದೇಶವನ್ನು ಏಲಿಗೆ ತಿಳಿಸಿದನು

[ಪುಟ 18ರಲ್ಲಿರುವ ಚಿತ್ರ]

ಸಮುವೇಲನು ನಂಬಿಕೆಯಿಂದ ಪ್ರಾರ್ಥಿಸಿದನು, ಯೆಹೋವನು ಗುಡುಗುಮಳೆ ಸುರಿಸಿ ಉತ್ತರಕೊಟ್ಟನು