ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನ್ಯಾಯತೀರ್ಪಿನ ಗಳಿಗೆಯು’ ಬಂದಿದೆ

‘ನ್ಯಾಯತೀರ್ಪಿನ ಗಳಿಗೆಯು’ ಬಂದಿದೆ

‘ನ್ಯಾಯತೀರ್ಪಿನ ಗಳಿಗೆಯು’ ಬಂದಿದೆ

ಪ್ರಕಟನೆ ಎಂಬ ಬೈಬಲಿನ ಕೊನೆಯ ಪುಸ್ತಕವು, ಆಕಾಶ ಮಧ್ಯದಲ್ಲಿ ಹಾರಿಹೋಗುತ್ತಿರುವ ದೇವದೂತನೊಬ್ಬನ ಬಳಿ ‘ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವಿದೆ’ ಎಂಬ ವಾಸ್ತವಾಂಶದ ಕುರಿತು ನಮ್ಮನ್ನು ಎಚ್ಚರಿಸುತ್ತದೆ. ಆ ದೇವದೂತನು ಮಹಾ ಶಬ್ದದಿಂದ ಹೇಳುವುದು: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ.” (ಪ್ರಕಟನೆ 14:6, 7) ಆ ‘ನ್ಯಾಯತೀರ್ಪಿನ ಗಳಿಗೆಯಲ್ಲಿ,’ ದೈವಿಕ ನ್ಯಾಯತೀರ್ಪಿನ ಘೋಷಣೆಯೂ ಅದರ ಕಾರ್ಯಗತಗೊಳಿಸುವಿಕೆಯೂ ಒಳಗೂಡಿದೆ. “ಗಳಿಗೆಯು” ಸಾಕಷ್ಟು ಅಲ್ಪ ಕಾಲಾವಧಿಯಾಗಿದೆ. ಇದು “ಕಡೇ ದಿವಸಗಳ” ಪರಮಾವಧಿಯೋಪಾದಿ ಬರುತ್ತದೆ. ನಾವು ಈಗ ಅದೇ ಸಮಯದಲ್ಲಿ ಜೀವಿಸುತ್ತಿದ್ದೇವೆ.​—2 ತಿಮೊಥೆಯ 3:1.

‘ನ್ಯಾಯತೀರ್ಪಿನ ಗಳಿಗೆಯು’ ನೀತಿಪ್ರಿಯರಿಗೆ ಶುಭವಾರ್ತೆಯಾಗಿದೆ. ಇದು, ಈ ಹಿಂಸಾತ್ಮಕ, ಪ್ರೀತಿರಹಿತ ವಿಷಯಗಳ ವ್ಯವಸ್ಥೆಯಲ್ಲಿ ಕಷ್ಟಾನುಭವಕ್ಕೆ ತುತ್ತಾಗಿರುವ ತನ್ನ ಸೇವಕರಿಗೆ ದೇವರು ಬಿಡುಗಡೆಯನ್ನು ತರುವಂಥ ಒಂದು ಸಮಯವಾಗಿದೆ.

ಈಗ, ಅಂದರೆ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ನಾಶನದೊಂದಿಗೆ ‘ನ್ಯಾಯತೀರ್ಪಿನ ಗಳಿಗೆಯು’ ಕೊನೆಗೊಳ್ಳುವುದಕ್ಕೆ ಮುಂಚೆ, ನಮ್ಮನ್ನು ಹೀಗೆ ಉತ್ತೇಜಿಸಲಾಗಿದೆ: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ.” ನೀವು ಇದನ್ನು ಮಾಡುತ್ತಿದ್ದೀರೊ? “ನನಗೆ ದೇವರಲ್ಲಿ ನಂಬಿಕೆಯಿದೆ” ಎಂದಷ್ಟೇ ಹೇಳುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಸೇರಿದೆ. (ಮತ್ತಾಯ 7:21-23; ಯಾಕೋಬ 2:19, 20) ದೇವರ ಕುರಿತಾದ ಯೋಗ್ಯ ಭಯವು, ನಾವು ಆತನಿಗೆ ಪೂಜ್ಯಭಾವವನ್ನು ತೋರಿಸುವಂತೆ ಪ್ರಚೋದಿಸತಕ್ಕದ್ದು. ಇದು ನಾವು ಕೆಟ್ಟತನದಿಂದ ವಿಮುಖರಾಗುವಂತೆ ಮಾಡಬೇಕು. (ಜ್ಞಾನೋಕ್ತಿ 8:13) ಇದು ಒಳ್ಳೇದನ್ನು ಪ್ರೀತಿಸುವಂತೆ ಮತ್ತು ಕೆಟ್ಟದ್ದನ್ನು ದ್ವೇಷಿಸುವಂತೆ ನಮಗೆ ಸಹಾಯಮಾಡತಕ್ಕದ್ದು. (ಆಮೋಸ 5:14, 15) ನಾವು ದೇವರನ್ನು ಘನಪಡಿಸುತ್ತೇವಾದರೆ, ಅತ್ಯಂತ ಗೌರವದಿಂದ ಆತನಿಗೆ ಕಿವಿಗೊಡುವೆವು. ಆತನ ವಾಕ್ಯವಾದ ಬೈಬಲನ್ನು ಓದಲು ಸಮಯವು ಸಿಗದಿರುವಷ್ಟರ ಮಟ್ಟಿಗೆ ಬೇರೆ ವಿಷಯಗಳಲ್ಲಿ ನಾವು ತಲ್ಲೀನರಾಗಿರುವುದಿಲ್ಲ. ಎಲ್ಲಾ ಸಮಯಗಳಲ್ಲಿ ಮತ್ತು ಪೂರ್ಣಮನಸ್ಸಿನಿಂದ ನಾವಾತನಲ್ಲಿ ಭರವಸೆಯಿಡುವೆವು. (ಕೀರ್ತನೆ 62:8; ಜ್ಞಾನೋಕ್ತಿ 3:5, 6) ಯಾರು ನಿಜವಾಗಿಯೂ ಆತನಿಗೆ ಘನತೆಯನ್ನು ಸಲ್ಲಿಸುತ್ತಾರೋ ಅವರು, ಆತನು ಭೂಪರಲೋಕಗಳ ಸೃಷ್ಟಿಕರ್ತನಾಗಿರುವುದರಿಂದ ವಿಶ್ವದ ಪರಮಾಧಿಕಾರಿಯಾಗಿದ್ದಾನೆ ಎಂಬುದನ್ನು ಮನಗಾಣುತ್ತಾರೆ, ಮತ್ತು ತಮ್ಮ ಜೀವಗಳ ಒಡೆಯನಾಗಿರುವ ಆತನಿಗೆ ಅವರು ಪ್ರೀತಿಯಿಂದ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಾರೆ. ಈ ವಿಷಯಗಳಿಗೆ ನಾವು ಹೆಚ್ಚಿನ ಗಮನವನ್ನು ಕೊಡುವ ಆವಶ್ಯಕತೆಯಿದೆ ಎಂಬುದು ನಮ್ಮ ಅರಿವಿಗೆ ಬರುವಲ್ಲಿ, ಸ್ವಲ್ಪವೂ ವಿಳಂಬಿಸದೆ ಅದನ್ನು ಮಾಡೋಣ.

ದೇವದೂತನು ಯಾವುದರ ಕುರಿತು ಮಾತಾಡಿದನೋ ಆ ನ್ಯಾಯತೀರ್ಪಿನ ಸಮಯವು ‘ಯೆಹೋವನ ದಿನ’ವೆಂದೂ ಕರೆಯಲ್ಪಡುತ್ತದೆ. ಸಾ.ಶ.ಪೂ. 607ರಲ್ಲಿ ಅಂಥ ‘ದಿನವು’ ಪುರಾತನ ಯೆರೂಸಲೇಮಿನ ಮೇಲೆ ಬರಮಾಡಲ್ಪಟ್ಟಿತು; ಏಕೆಂದರೆ ಯೆಹೋವನು ತನ್ನ ಪ್ರವಾದಿಗಳ ಮೂಲಕ ಕೊಟ್ಟ ಎಚ್ಚರಿಕೆಗಳಿಗೆ ಅದರ ನಿವಾಸಿಗಳು ಕಿವಿಗೊಡಲಿಲ್ಲ. ಯೆಹೋವನ ದಿನ ಇನ್ನೂ ದೂರವಿದೆ ಎಂದು ಮನಸ್ಸಿನಲ್ಲೇ ಆಲೋಚಿಸುವ ಮೂಲಕ ಅವರು ತಮ್ಮ ಜೀವಿತಗಳನ್ನು ಇನ್ನಷ್ಟು ಅಪಾಯಕ್ಕೆ ಒಡ್ಡಿಕೊಂಡರು. ಯೆಹೋವನು ಅವರಿಗೆ ಹೀಗೆ ಎಚ್ಚರಿಸಿದ್ದನು: ‘ಅದು ಸಮೀಪಿಸಿದೆ, ಬಹು ತ್ವರೆಯಾಗಿ ಬರುತ್ತಿದೆ.’ (ಚೆಫನ್ಯ 1:14) ಸಾ.ಶ.ಪೂ. 539ರಲ್ಲಿ ಇನ್ನೊಂದು “ಯೆಹೋವನ ದಿನವು” ಪುರಾತನ ಬಾಬೆಲಿನ ಮೇಲೆ ಬರಮಾಡಲ್ಪಟ್ಟಿತು. (ಯೆಶಾಯ 13:​1, 6) ತಮ್ಮ ಕೋಟೆಕೊತ್ತಲಗಳು ಮತ್ತು ದೇವದೇವತೆಗಳಲ್ಲಿ ಭರವಸೆಯಿಟ್ಟವರಾಗಿದ್ದ ಬಾಬೆಲಿನ ಜನರು ಯೆಹೋವನ ಪ್ರವಾದಿಗಳಿಂದ ಕೊಡಲ್ಪಟ್ಟ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರು. ಆದರೆ ಒಂದೇ ರಾತ್ರಿಯಲ್ಲಿ ಮಹಾ ಪಟ್ಟಣವಾದ ಬಾಬೆಲು ಮೇದ್ಯ-ಪಾರಸಿಯರ ಕೈವಶವಾಯಿತು.

ಇಂದು ನಾವು ಯಾವುದಕ್ಕೆ ಮುಖಾಮುಖಿಯಾಗಿದ್ದೇವೆ? ಇನ್ನೂ ಹೆಚ್ಚು ವ್ಯಾಪಕವಾದ ಇನ್ನೊಂದು “ಯೆಹೋವನ ದಿನ”ವನ್ನು (NW) ನಾವು ಎದುರಿಸಲಿದ್ದೇವೆ. (2 ಪೇತ್ರ 3:​11-14) ‘ಮಹಾ ಬಾಬೆಲಿನ’ ಮೇಲೆ ದೈವಿಕ ನ್ಯಾಯತೀರ್ಪು ಪ್ರಕಟಿಸಲ್ಪಟ್ಟಿದೆ. ಪ್ರಕಟನೆ 14:8ಕ್ಕನುಸಾರ ಒಬ್ಬ ದೇವದೂತನು ಹೀಗೆ ಘೋಷಿಸಿದನು: ‘ಬಾಬೆಲೆಂಬ ಮಹಾ ನಗರಿಯು ಬಿದ್ದಿದ್ದಾಳೆ.’ ಇದು ಈಗಾಗಲೇ ಸಂಭವಿಸಿರುವ ಘಟನೆಯಾಗಿದೆ. ಇನ್ನೆಂದಿಗೂ ಅವಳು ಯೆಹೋವನ ಆರಾಧಕರನ್ನು ನಿರ್ಬಂಧಿಸಲಾರಳು. ಅವಳ ಸ್ವಂತ ಭ್ರಷ್ಟಾಚಾರ ಮತ್ತು ಯುದ್ಧದಲ್ಲಿನ ಒಳಗೂಡುವಿಕೆಯು ವ್ಯಾಪಕವಾಗಿ ಬಯಲುಗೊಳಿಸಲ್ಪಟ್ಟಿದೆ. ಈಗ ಅವಳ ಅಂತಿಮ ವಿನಾಶವು ಸಮೀಪಿಸಿದೆ. ಈ ಕಾರಣದಿಂದಲೇ ಬೈಬಲು ಎಲ್ಲಾ ಕಡೆಗಳಲ್ಲಿರುವ ಜನರನ್ನು ಹೀಗೆ ಉತ್ತೇಜಿಸುತ್ತದೆ: “ಅವಳನ್ನು [ಮಹಾ ಬಾಬೆಲನ್ನು] ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು.”​—ಪ್ರಕಟನೆ 18:4, 5.

ಮಹಾ ಬಾಬೆಲ್‌ ಏನಾಗಿದೆ? ಇದು ಭೌಗೋಳಿಕ ಧಾರ್ಮಿಕ ವ್ಯವಸ್ಥೆಯಾಗಿದ್ದು, ಪುರಾತನ ಬಾಬೆಲಿನಂಥದ್ದೇ ಗುಣಲಕ್ಷಣಗಳನ್ನು ಹೊಂದಿದೆ. (ಪ್ರಕಟನೆ, ಅಧ್ಯಾಯಗಳು 17, 18) ಈ ಗುಣಲಕ್ಷಣಗಳಲ್ಲಿ ಕೆಲವನ್ನು ಪರಿಗಣಿಸಿರಿ:

• ಪುರಾತನ ಬಾಬೆಲಿನ ಪುರೋಹಿತರು ರಾಷ್ಟ್ರದ ರಾಜಕೀಯ ಆಗುಹೋಗುಗಳಲ್ಲಿ ಬಹಳವಾಗಿ ಒಳಗೂಡುತ್ತಿದ್ದರು. ಇಂದಿನ ಬಹುತೇಕ ಧರ್ಮಗಳ ವಿಷಯದಲ್ಲಿಯೂ ಇದು ಸತ್ಯವಾಗಿದೆ.

• ಬಾಬೆಲಿನ ಪುರೋಹಿತರು ಅನೇಕವೇಳೆ ರಾಷ್ಟ್ರದ ಯುದ್ಧಾಚರಣೆಯನ್ನೂ ಉತ್ತೇಜಿಸಿದರು. ರಾಷ್ಟ್ರಗಳು ಸಮರಕ್ಕಿಳಿದಿರುವಾಗ, ಅವುಗಳ ಸೈನಿಕರನ್ನು ಆಶೀರ್ವದಿಸುವುದರಲ್ಲಿ ಆಧುನಿಕ ದಿನದ ಧರ್ಮಗಳು ಅನೇಕಬಾರಿ ನಾಯಕತ್ವವನ್ನು ವಹಿಸಿವೆ.

• ಪುರಾತನ ಬಾಬೆಲಿನ ಬೋಧನೆಗಳು ಮತ್ತು ಪದ್ಧತಿಗಳು ಆ ಜನಾಂಗವನ್ನು ತೀರ ಕೀಳ್ಮಟ್ಟದ ಅನೈತಿಕತೆಗೆ ಮುನ್ನಡಿಸಿದವು. ಇಂದಿನ ಧಾರ್ಮಿಕ ನಾಯಕರು ಬೈಬಲಿನ ನೈತಿಕತೆಯ ಮಟ್ಟಕ್ಕೆ ನಿರ್ಲಕ್ಷ್ಯವನ್ನು ತೋರಿಸುತ್ತಿರುವುದರಿಂದ, ಪಾದ್ರಿಗಳು ಹಾಗೂ ಜನಸಾಮಾನ್ಯರ ನಡುವೆ ಅನೈತಿಕತೆಯು ವ್ಯಾಪಕವಾಗಿ ಹಬ್ಬಿದೆ. ಮಹಾ ಬಾಬೆಲ್‌, ಲೋಕದೊಂದಿಗೆ ಮತ್ತು ಅದರ ರಾಜಕೀಯ ವ್ಯವಸ್ಥೆಯೊಂದಿಗೆ ವ್ಯಭಿಚಾರ ನಡೆಸುವುದರಿಂದ, ಪ್ರಕಟನೆ ಪುಸ್ತಕವು ಅವಳನ್ನು ಒಬ್ಬ ಜಾರಸ್ತ್ರೀಯಾಗಿ ಚಿತ್ರಿಸುತ್ತದೆ ಎಂಬುದು ಸಹ ಗಮನಾರ್ಹವಾದ ಸಂಗತಿಯಾಗಿದೆ.

• ಮಹಾ ಬಾಬೆಲ್‌ ನಿರ್ಲಜ್ಜೆಯಿಂದ ‘ಭೋಗದಲ್ಲಿ’ ಜೀವಿಸುತ್ತಾಳೆ ಎಂದು ಸಹ ಬೈಬಲ್‌ ತಿಳಿಸುತ್ತದೆ. ಪುರಾತನ ಬಾಬೆಲಿನಲ್ಲಿ, ದೇವಾಲಯದ ವ್ಯವಸ್ಥಾಪನೆಯು ದೊಡ್ಡ ದೊಡ್ಡ ಭೂಪ್ರದೇಶಗಳ ಒಡೆತನವನ್ನು ಪಡೆದಿತ್ತು, ಮತ್ತು ಅಲ್ಲಿನ ಪುರೋಹಿತರು ವಾಣಿಜ್ಯ ಚಟುವಟಿಕೆಗಳಲ್ಲಿ ಅಗ್ರಗಣ್ಯರಾಗಿದ್ದರು. ಇಂದು, ಆರಾಧನೆಯ ಸ್ಥಳಗಳ ಜೊತೆಗೆ ಮಹಾ ಬಾಬೆಲು ವಿಸ್ತಾರವಾದ ವಾಣಿಜ್ಯ ವಹಿವಾಟುಗಳನ್ನು ಹೊಂದಿದೆ. ಅವಳ ಬೋಧನೆಗಳು ಮತ್ತು ರಜಾದಿನಗಳು, ಅವಳಿಗೂ ವ್ಯಾಪಾರ ಜಗತ್ತಿನಲ್ಲಿರುವ ಇತರರಿಗೂ ಅಪಾರ ಧನಸಂಪತ್ತನ್ನು ತರುತ್ತವೆ.

• ಇಂದು ಅನೇಕ ಸ್ಥಳಗಳಲ್ಲಿರುವಂತೆಯೇ ಪುರಾತನ ಬಾಬೆಲಿನಲ್ಲಿಯೂ ವಿಗ್ರಹಗಳು, ಇಂದ್ರಜಾಲ, ಮತ್ತು ಮಂತ್ರವಿದ್ಯೆಯು ಸರ್ವಸಾಮಾನ್ಯವಾಗಿತ್ತು. ಮರಣವನ್ನು ಬೇರೊಂದು ರೀತಿಯ ಜೀವಿತಕ್ಕೆ ನಡೆಸುವ ರೂಪಾಂತರವಾಗಿ ಪರಿಗಣಿಸಲಾಗುತ್ತಿತ್ತು. ದೇವದೇವತೆಗಳ ಗೌರವಾರ್ಥವಾಗಿ ಕಟ್ಟಲ್ಪಟ್ಟಿದ್ದ ದೇವಾಲಯಗಳು ಮತ್ತು ಪ್ರಾರ್ಥನಾಲಯಗಳಿಂದ ಬಾಬೆಲ್‌ ತುಂಬಿತುಳುಕುತ್ತಿತ್ತು, ಆದರೆ ಬಾಬೆಲಿನವರು ಯೆಹೋವನ ಆರಾಧಕರನ್ನು ತುಂಬ ವಿರೋಧಿಸುತ್ತಿದ್ದರು. ಇದೇ ರೀತಿಯ ನಂಬಿಕೆಗಳು ಮತ್ತು ಪದ್ಧತಿಗಳು ಮಹಾ ಬಾಬೆಲನ್ನು ಗುರುತಿಸುತ್ತವೆ.

ಪುರಾತನ ಕಾಲದಲ್ಲಿ ಯೆಹೋವನು, ತನಗೆ ಮತ್ತು ತನ್ನ ಚಿತ್ತಕ್ಕೆ ಸತತವಾಗಿ ಅಗೌರವವನ್ನು ತೋರಿಸಿದಂಥ ಜನರನ್ನು ಶಿಕ್ಷಿಸಲಿಕ್ಕಾಗಿ ಪ್ರಬಲವಾದ ರಾಜಕೀಯ ಹಾಗೂ ಮಿಲಿಟರಿ ಜನಾಂಗಗಳನ್ನು ಉಪಯೋಗಿಸಿದನು. ಹೀಗೆ ಸಾ.ಶ.ಪೂ. 740ರಲ್ಲಿ ಅಶ್ಶೂರ್ಯರು ಸಮಾರ್ಯವನ್ನು ನಾಶಮಾಡಿದರು. ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಮತ್ತು ಸಾ.ಶ. 70ರಲ್ಲಿ ರೋಮನ್ನರು ಯೆರೂಸಲೇಮನ್ನು ಧ್ವಂಸಗೊಳಿಸಿದರು. ಸಾ.ಶ.ಪೂ. 539ರಲ್ಲಿ ಮೇದ್ಯ-ಪಾರಸಿಯರು ಬಾಬೆಲನ್ನು ವಶಪಡಿಸಿಕೊಂಡರು. ನಮ್ಮ ದಿನದಲ್ಲಿ, ಒಂದು ಕಾಡು ಮೃಗದೋಪಾದಿ ರಾಜಕೀಯ ಸರಕಾರಗಳು “ಜಾರಸ್ತ್ರೀಯ” ಮೇಲೆ ಆಕ್ರಮಣ ನಡೆಸಿ, ಅವಳನ್ನು ಬಟ್ಟೆಯಿಲ್ಲದವಳನ್ನಾಗಿ ಮಾಡಿ, ಅವಳ ನಿಜ ವ್ಯಕ್ತಿತ್ವವನ್ನು ಬಯಲುಪಡಿಸುವವು ಎಂದು ಬೈಬಲ್‌ ಮುಂತಿಳಿಸುತ್ತದೆ. ಅವು ಅವಳನ್ನು ಸಂಪೂರ್ಣವಾಗಿ ನಾಶಮಾಡುವವು.​—ಪ್ರಕಟನೆ 17:16.

ಲೋಕದ ಸರಕಾರಗಳು ನಿಜವಾಗಿಯೂ ಹೀಗೆ ಮಾಡುವವೋ? ‘ದೇವರು ಅವರ ಹೃದಯಗಳನ್ನು ಪ್ರೇರಿಸುವನು’ ಎಂದು ಬೈಬಲ್‌ ಹೇಳುತ್ತದೆ. (ಪ್ರಕಟನೆ 17:17) ಇದನ್ನು ಮುಂಗಾಣಲು ಸಾಧ್ಯವಿಲ್ಲ ಅಥವಾ ಇದು ಕ್ರಮೇಣ ಸಂಭವಿಸುವುದಿಲ್ಲ. ಬದಲಾಗಿ ಇದ್ದಕ್ಕಿದ್ದಂತೆ, ಅನಿರೀಕ್ಷಿತವಾಗಿ, ಆಘಾತಕರ ರೀತಿಯಲ್ಲಿ ಸಂಭವಿಸುವುದು.

ನೀವು ಯಾವ ಕ್ರಿಯೆಯನ್ನು ಕೈಗೊಳ್ಳುವ ಅಗತ್ಯವಿದೆ? ಸ್ವತಃ ಹೀಗೆ ಕೇಳಿಕೊಳ್ಳಿ: ‘ಮಹಾ ಬಾಬೆಲಿನ ಭಾಗವಾಗಿ ಗುರುತಿಸಲ್ಪಡುವ ಬೋಧನೆಗಳು ಮತ್ತು ಪದ್ಧತಿಗಳಿಂದ ಕಲುಷಿತಗೊಂಡಿರುವಂಥ ಒಂದು ಧಾರ್ಮಿಕ ಸಂಸ್ಥೆಗೆ ನಾನು ಇನ್ನೂ ಬಲವಾಗಿ ಅಂಟಿಕೊಂಡಿದ್ದೇನೊ?’ ನೀವು ಅದರ ಒಬ್ಬ ಸದಸ್ಯರಾಗಿಲ್ಲದಿರುವುದಾದರೂ, ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ಮಹಾ ಬಾಬೆಲಿನ ಮನೋಭಾವವು ನನ್ನನ್ನು ಪ್ರಭಾವಿಸುವಂತೆ ನಾನು ಬಿಟ್ಟಿದ್ದೇನೊ?’ ಯಾವ ರೀತಿಯ ಮನೋಭಾವ? ಸಡಿಲು ನಡತೆಯನ್ನು ಸಹಿಸಿಕೊಳ್ಳುವುದು, ದೇವರ ಪ್ರೀತಿಗೆ ಬದಲಾಗಿ ಭೌತಿಕ ಸೊತ್ತುಗಳ ಹಾಗೂ ಸುಖಭೋಗಗಳ ಪ್ರೀತಿ, ಅಥವಾ ಯೆಹೋವನ ವಾಕ್ಯಕ್ಕೆ ಉದ್ದೇಶಪೂರ್ವಕ ಅಗೌರವದಂಥ (ಕ್ಷುಲ್ಲಕವಾಗಿ ತೋರುವಂಥ ವಿಷಯಗಳಲ್ಲಿಯೂ) ಮನೋಭಾವವನ್ನೇ. ಇದಕ್ಕೆ ನೀವು ಕೊಡಲಿರುವ ಉತ್ತರದ ಕುರಿತು ಜಾಗರೂಕತೆಯಿಂದ ಆಲೋಚಿಸಿರಿ.

ನಮಗೆ ಯೆಹೋವನ ಅನುಗ್ರಹ ಸಿಗಬೇಕಾದರೆ, ನಮ್ಮ ನಡೆನುಡಿಗಳಲ್ಲಿಯೂ ನಮ್ಮ ಹೃದಯದ ಬಯಕೆಗಳಲ್ಲಿಯೂ ನಾವು ನಿಜವಾಗಿಯೂ ಮಹಾ ಬಾಬೆಲಿನ ಭಾಗವಾಗಿಲ್ಲ ಎಂಬುದರ ಪುರಾವೆಯನ್ನು ನೀಡುವುದು ಅತ್ಯಾವಶ್ಯಕವಾಗಿದೆ. ಹೆಚ್ಚು ಸಮಯವಿಲ್ಲದ ಕಾರಣ ವಿಳಂಬಿಸಸಾಧ್ಯವಿಲ್ಲ. ಅಂತ್ಯವು ಇದ್ದಕ್ಕಿದ್ದಂತೆ ಬರಲಿದೆ ಎಂಬುದರ ಕುರಿತು ನಮ್ಮನ್ನು ಎಚ್ಚರಿಸುತ್ತಾ ಬೈಬಲ್‌ ಹೇಳುವುದು: “ಮಹಾ ಪಟ್ಟಣವಾದ ಬಾಬೆಲು . . . ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ.”​—ಪ್ರಕಟನೆ 18:21.

ಆದರೆ ಇನ್ನೂ ಹೆಚ್ಚಿನ ಘಟನೆಗಳು ಸಂಭವಿಸುವವು. ಆ ‘ನ್ಯಾಯತೀರ್ಪಿನ ಗಳಿಗೆಯ’ ಇನ್ನೊಂದು ಅಂಶದಲ್ಲಿ ಯೆಹೋವ ದೇವರು, ಭೂವ್ಯಾಪಕವಾಗಿರುವ ರಾಜಕೀಯ ವ್ಯವಸ್ಥೆಗೆ, ಅದರ ಪ್ರಭುಗಳಿಗೆ, ಮತ್ತು ತನ್ನ ನ್ಯಾಯವಾದ ಹಕ್ಕುಳ್ಳ ಅಧಿಕಾರವನ್ನು ತಿರಸ್ಕರಿಸುವವರೆಲ್ಲರಿಗೆ, ಯೇಸು ಕ್ರಿಸ್ತನ ವಶದಲ್ಲಿರುವ ತನ್ನ ಸ್ವರ್ಗೀಯ ರಾಜ್ಯದ ಮೂಲಕ ನ್ಯಾಯತೀರಿಸುವನು. (ಪ್ರಕಟನೆ 13:1, 2; 19:19-21) ದಾನಿಯೇಲ 2:​20-45ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನಾತ್ಮಕ ದರ್ಶನವು, ಪುರಾತನ ಬಾಬೆಲಿನ ಕಾಲದಿಂದ ಹಿಡಿದು ಸದ್ಯದ ವರೆಗಿನ ರಾಜಕೀಯ ಆಳ್ವಿಕೆಯನ್ನು, ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಮತ್ತು ಜೇಡಿಮಣ್ಣಿನಿಂದ ಮಾಡಲ್ಪಟ್ಟಿರುವ ದೊಡ್ಡ ಪ್ರತಿಮೆಯೋಪಾದಿ ಚಿತ್ರಿಸುತ್ತದೆ. ನಮ್ಮ ದಿನದ ಕುರಿತಾಗಿ ಈ ಪ್ರವಾದನೆಯು ಮುಂತಿಳಿಸಿದ್ದು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು.” ಮತ್ತು ಯೆಹೋವನ ‘ನ್ಯಾಯತೀರ್ಪಿನ ಗಳಿಗೆಯಲ್ಲಿ’ ಆ ರಾಜ್ಯವು ಇನ್ನೂ ಏನನ್ನು ಮಾಡಲಿದೆ ಎಂಬುದರ ಕುರಿತು ಬೈಬಲ್‌ ಹೀಗೆ ಪ್ರಕಟಿಸುತ್ತದೆ: “ಆ [ಮಾನವನಿರ್ಮಿತ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”​—ದಾನಿಯೇಲ 2:44.

‘ಲೋಕದಲ್ಲಿರುವವುಗಳನ್ನು’ ಪ್ರೀತಿಸುವ, ಅಂದರೆ ಸತ್ಯ ದೇವರಿಂದ ವಿಮುಖವಾಗಿರುವಂಥ ಈ ಲೋಕದಿಂದ ಪ್ರವರ್ಧಿಸಲ್ಪಡುವ ಜೀವನ ಶೈಲಿಯ ವಿರುದ್ಧ ಬೈಬಲು ಸತ್ಯಾರಾಧಕರನ್ನು ಎಚ್ಚರಿಸುತ್ತದೆ. (1 ಯೋಹಾನ 2:​15-17) ನಿಮ್ಮ ನಿರ್ಣಯಗಳು ಮತ್ತು ಕ್ರಿಯೆಗಳು, ಸಂಪೂರ್ಣವಾಗಿ ನೀವು ದೇವರ ರಾಜ್ಯದ ಪಕ್ಷದಲ್ಲಿದ್ದೀರಿ ಎಂಬುದನ್ನು ವ್ಯಕ್ತಪಡಿಸುತ್ತವೋ? ನಿಜವಾಗಿಯೂ ನೀವು ಅದಕ್ಕೆ ನಿಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ಕೊಡುತ್ತೀರೋ?​—ಮತ್ತಾಯ 6:33; ಯೋಹಾನ 17:​16, 17.

[ಪುಟ 14ರಲ್ಲಿರುವ ಚೌಕ]

ಅಂತ್ಯವು ಯಾವಾಗ ಬರುವುದು?

“ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”​—ಮತ್ತಾಯ 24:44.

“ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”​—ಮತ್ತಾಯ 25:13.

‘ಅದು ತಾಮಸವಾಗದು.’​—ಹಬಕ್ಕೂಕ 2:3.

[ಪುಟ 14ರಲ್ಲಿರುವ ಚೌಕ]

ಅದು ನಿಮಗೆ ತಿಳಿದಿರುತ್ತಿದ್ದಲ್ಲಿ ನಿಮ್ಮ ಜೀವನ ರೀತಿಯು ಬದಲಾಗುತ್ತಿತ್ತೊ?

ಬರಲಿರುವ ದೇವರ ನ್ಯಾಯತೀರ್ಪಿನ ಸಮಯಾವಧಿಯು ಇನ್ನೂ ಕೆಲವು ವರ್ಷಗಳ ವರೆಗೆ ವಿಳಂಬಿಸಲ್ಪಡುವುದು ಎಂಬುದು ನಿಮಗೆ ನಿಶ್ಚಯವಾಗಿ ಗೊತ್ತಿರುತ್ತಿದ್ದಲ್ಲಿ, ಅದು ಈಗ ನೀವು ನಿಮ್ಮ ಜೀವನವನ್ನು ಉಪಯೋಗಿಸುತ್ತಿರುವ ರೀತಿಯನ್ನು ಬದಲಾಯಿಸುತ್ತಿತ್ತೊ? ಈ ಹಳೇ ವ್ಯವಸ್ಥೆಯ ಅಂತ್ಯವು ಈಗಾಗಲೇ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ತಡವಾಗಿರುವಲ್ಲಿ, ಇದು ಯೆಹೋವನ ಸೇವೆಯಲ್ಲಿ ನಿಮ್ಮನ್ನು ನಿಧಾನಗೊಳಿಸುವಂತೆ ಬಿಟ್ಟಿದ್ದೀರೊ?​—ಇಬ್ರಿಯ 10:​36-38.

ನಮಗೆ ನಿಗದಿತ ಸಮಯವು ಗೊತ್ತಿಲ್ಲದಿರುವುದರಿಂದ, ನಾವು ಒಳ್ಳೇ ಹೇತುಗಳಿಂದಲೇ ದೇವರ ಸೇವೆಮಾಡುತ್ತೇವೆ ಎಂಬುದನ್ನು ತೋರಿಸಲು ಇದು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಅಂತ್ಯವು ಬರುವ ಸ್ವಲ್ಪ ಮುಂಚೆ ಹುರುಪನ್ನು ತೋರಿಸುವುದು, ಹೃದಯವನ್ನು ಪರೀಕ್ಷಿಸುವಾತನಾಗಿರುವ ದೇವರನ್ನು ಪ್ರಭಾವಿಸಲಾರದು ಎಂಬ ವಾಸ್ತವಾಂಶವು ಯೆಹೋವನ ಬಗ್ಗೆ ತಿಳಿದುಕೊಂಡಿರುವವರಿಗೆ ಚೆನ್ನಾಗಿ ಗೊತ್ತಿದೆ.​—ಯೆರೆಮೀಯ 17:10; ಇಬ್ರಿಯ 4:13.

ಯಾರು ಯೆಹೋವನನ್ನು ಪ್ರೀತಿಸುತ್ತಾರೋ ಅವರು ತಮ್ಮ ಜೀವಿತದಲ್ಲಿ ಯಾವಾಗಲೂ ಆತನಿಗೆ ಆದ್ಯತೆ ನೀಡುತ್ತಾರೆ. ಬೇರೆ ಜನರಂತೆಯೇ ಸತ್ಯ ಕ್ರೈಸ್ತರು ಸಹ ಐಹಿಕ ಕೆಲಸವನ್ನು ಮಾಡಬಹುದು. ಆದರೂ, ಅವರ ಗುರಿ ಐಶ್ವರ್ಯವಂತರಾಗುವುದಲ್ಲ, ಬದಲಾಗಿ ಲೌಕಿಕವಾಗಿ ಎಷ್ಟು ಅಗತ್ಯವೊ ಅಷ್ಟನ್ನು ಮತ್ತು ಕಷ್ಟದಲ್ಲಿರುವವರಿಗೆ ಸಹಾಯಮಾಡಲಿಕ್ಕಾಗಿ ಸ್ವಲ್ಪ ಹೆಚ್ಚನ್ನು ದೊರಕಿಸಿಕೊಳ್ಳುವುದೇ ಆಗಿದೆ. (ಎಫೆಸ 4:28; 1 ತಿಮೊಥೆಯ 6:7-12) ಅವರು ಹಿತಕರವಾದ ಮನೋರಂಜನೆಯಲ್ಲಿ ಮತ್ತು ನಿಯತಕ್ರಮದಲ್ಲಿನ ತಾತ್ಕಾಲಿಕ ಬದಲಾವಣೆಯಲ್ಲಿ ಆನಂದಿಸುತ್ತಾರಾದರೂ, ಇತರರು ಏನು ಮಾಡುತ್ತಾರೋ ಅದನ್ನು ಅನುಕರಿಸುವುದು ಅವರ ಬಯಕೆಯಲ್ಲ, ಬದಲಾಗಿ ಚೈತನ್ಯವನ್ನು ಪಡೆದುಕೊಳ್ಳುವುದೇ ಆಗಿದೆ. (ಮಾರ್ಕ 6:31; ರೋಮಾಪುರ 12:2) ಯೇಸು ಕ್ರಿಸ್ತನಂತೆಯೇ ಅವರು ದೇವರ ಚಿತ್ತವನ್ನು ಮಾಡುವುದರಲ್ಲಿ ಸಂತೋಷಪಡುತ್ತಾರೆ.​—ಕೀರ್ತನೆ 37:4; 40:8.

ಸತ್ಯ ಕ್ರೈಸ್ತರು ನಿತ್ಯಕ್ಕೂ ಜೀವಿಸಲು ಮತ್ತು ಯೆಹೋವನ ಸೇವೆಮಾಡಲು ಬಯಸುತ್ತಾರೆ. ಈ ಪ್ರತೀಕ್ಷೆಯು, ನಿರ್ದಿಷ್ಟ ಆಶೀರ್ವಾದಗಳನ್ನು ಪಡೆದುಕೊಳ್ಳಲಿಕ್ಕಾಗಿ ಕೆಲವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ದೀರ್ಘಕಾಲದ ವರೆಗೆ ಕಾಯಬೇಕಾದ ಕಾರಣ ಕಡಿಮೆ ಅಮೂಲ್ಯವಾದದ್ದಾಗುವುದಿಲ್ಲ.

[ಪುಟ 15ರಲ್ಲಿರುವ ಚೌಕ/ಚಿತ್ರ]

ಪರಮಾಧಿಕಾರದ ವಿವಾದಾಂಶ

ದೇವರು ಇಷ್ಟೊಂದು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ಪರಮಾಧಿಕಾರದ ವಿವಾದಾಂಶವನ್ನು ಗ್ರಹಿಸುವ ಅಗತ್ಯವಿದೆ. ಪರಮಾಧಿಕಾರವೆಂದರೇನು? ಅಧಿಕಾರದ ಪಾರಮ್ಯವೇ.

ಯೆಹೋವನು ಸೃಷ್ಟಿಕರ್ತನಾಗಿರುವುದರಿಂದ, ಭೂಮಿಯ ಮೇಲೆ ಮತ್ತು ಅದರಲ್ಲಿ ಜೀವಿಸುವವರೆಲ್ಲರ ಮೇಲೆ ಆಳ್ವಿಕೆ ನಡಿಸುವ ಹಕ್ಕು ಆತನಿಗಿದೆ. ಆದರೂ, ಮಾನವ ಇತಿಹಾಸದ ಆರಂಭದಲ್ಲಿ ಯೆಹೋವನ ಪರಮಾಧಿಕಾರವು ಪಂಥಾಹ್ವಾನಕ್ಕೊಳಗಾಯಿತು ಎಂದು ಬೈಬಲ್‌ ವಿವರಿಸುತ್ತದೆ. ಯೆಹೋವನು ಅನುಚಿತವಾಗಿ ನಿರ್ಬಂಧಗಳನ್ನು ಒಡ್ಡಿದ್ದಾನೆ, ನಮ್ಮ ಮೊದಲ ಹೆತ್ತವರು ದೇವರ ನಿಯಮವನ್ನು ಅಲಕ್ಷಿಸಿ ತಮಗೆ ಇಷ್ಟವಾದಂಥ ರೀತಿಯಲ್ಲಿ ಕ್ರಿಯೆಗೈಯುವಲ್ಲಿ ಏನಾಗುವುದು ಎಂಬುದರ ಕುರಿತು ಆತನು ಅವರಿಗೆ ಸುಳ್ಳನ್ನು ಹೇಳಿದ್ದಾನೆ, ಮತ್ತು ಅವರು ದೇವರಿಂದ ಸ್ವತಂತ್ರರಾಗಿ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳುವುದು ನಿಜವಾಗಿಯೂ ಒಳಿತನ್ನು ಉಂಟುಮಾಡುತ್ತದೆ ಎಂದು ಪಿಶಾಚನಾದ ಸೈತಾನನು ವಾದಿಸಿದನು.​—ಆದಿಕಾಂಡ, ಅಧ್ಯಾಯಗಳು 2, 3.

ಒಂದುವೇಳೆ ದೇವರು ದಂಗೆಕೋರರನ್ನು ಆ ಕೂಡಲೆ ನಾಶಮಾಡಿರುತ್ತಿದ್ದಲ್ಲಿ, ಇದು ಆತನ ಶಕ್ತಿಯನ್ನು ತೋರ್ಪಡಿಸುತ್ತಿತ್ತಾದರೂ ಎಬ್ಬಿಸಲ್ಪಟ್ಟ ವಿವಾದಾಂಶಗಳನ್ನು ಬಗೆಹರಿಸುತ್ತಿರಲಿಲ್ಲ. ದಂಗೆಕೋರರನ್ನು ಆ ಕೂಡಲೆ ನಾಶಮಾಡುವುದಕ್ಕೆ ಬದಲಾಗಿ, ಎಲ್ಲಾ ಬುದ್ಧಿಜೀವಿಗಳು ದಂಗೆಕೋರತನದ ಪರಿಣಾಮವನ್ನು ನೋಡುವಂತೆ ಯೆಹೋವನು ಅನುಮತಿಸಿದ್ದಾನೆ. ಇದರಲ್ಲಿ ಕಷ್ಟಾನುಭವವು ಒಳಗೂಡಿರುವುದಾದರೂ, ನಾವು ಜನಿಸಲಿಕ್ಕಾಗಿ ಇದು ಒಂದು ಅವಕಾಶವನ್ನೂ ಒದಗಿಸಿದೆ.

ಅಷ್ಟುಮಾತ್ರವಲ್ಲ, ಯೆಹೋವನು ತಾನೇ ಒಂದು ದೊಡ್ಡ ತ್ಯಾಗವನ್ನು ಮಾಡಿ, ತನಗೆ ವಿಧೇಯರಾಗುವ ಮತ್ತು ತನ್ನ ಪುತ್ರನ ಈಡಿನ ಯಜ್ಞದಲ್ಲಿ ನಂಬಿಕೆಯನ್ನಿಡುವ ಮಾನವರು, ಪಾಪ ಹಾಗೂ ಅದರ ಪರಿಣಾಮಗಳಿಂದ ವಿಮುಕ್ತರಾಗಿ ಪರದೈಸಿನಲ್ಲಿ ಜೀವಿಸುವಂತೆ ಪ್ರೀತಿಯಿಂದ ಒದಗಿಸುವಿಕೆಯನ್ನು ಮಾಡಿದನು. ಅಗತ್ಯವಿರುವಲ್ಲಿ, ಮೃತ ವ್ಯಕ್ತಿಗಳನ್ನು ಪುನರುತ್ಥಾನಗೊಳಿಸುವ ಮೂಲಕವೂ ಇದನ್ನು ಮಾಡಬಲ್ಲನು.

ಈ ವಿವಾದಾಂಶವನ್ನು ಬಗೆಹರಿಸಲಿಕ್ಕಾಗಿ ಸಮಯವನ್ನು ಅನುಮತಿಸಿರುವುದು, ತಾವು ದೇವರ ಪ್ರೀತಿಗೆ ಸ್ಪಂದಿಸಲು ಸಮರ್ಥರಾಗಿದ್ದೇವೆ ಎಂಬುದನ್ನು ತೋರ್ಪಡಿಸುವ ಮತ್ತು ಎಲ್ಲಾ ಸನ್ನಿವೇಶಗಳ ಕೆಳಗೆ ಯೆಹೋವನಿಗೆ ತಮ್ಮ ಸಮಗ್ರತೆಯನ್ನು ರುಜುಪಡಿಸುವ ಅವಕಾಶವನ್ನು ದೇವರ ಸೇವಕರಿಗೆ ನೀಡಿದೆ. ಮಾನವ ಸಮಗ್ರತೆಯ ಸಂಬಂಧಿತ ವಿವಾದಾಂಶದೊಂದಿಗೆ ದೈವಿಕ ಪರಮಾಧಿಕಾರದ ವಾದಾಂಶವನ್ನು ಬಗೆಹರಿಸುವುದು, ವಿಶ್ವದಲ್ಲಿರುವ ನಿಯಮಗಳಿಗೆ ಯೋಗ್ಯವಾದ ಗೌರವವಿರುವಂತೆ ನೋಡಿಕೊಳ್ಳಲು ಅತ್ಯಾವಶ್ಯಕವಾದದ್ದಾಗಿದೆ. ಈ ರೀತಿಯ ಯೋಗ್ಯವಾದ ಗೌರವವು ಇಲ್ಲದಿದ್ದರೆ, ನಿಜ ಶಾಂತಿಯು ಎಂದಿಗೂ ಕೈಗೂಡದು. *

[ಪಾದಟಿಪ್ಪಣಿ]

^ ಪ್ಯಾರ. 36 ಈ ವಿವಾದಾಂಶಗಳು ಮತ್ತು ಅವುಗಳ ಸೂಚಿತಾರ್ಥದ ಕುರಿತು, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕದಲ್ಲಿ ಹೆಚ್ಚು ಸವಿಸ್ತಾರವಾಗಿ ಚರ್ಚಿಸಲಾಗಿದೆ.

[ಚಿತ್ರ]

ರಾಜಕೀಯ ಆಳ್ವಿಕೆಯ ಭೂವ್ಯಾಪಕ ವ್ಯವಸ್ಥೆಯು ಅಂತ್ಯಗೊಳ್ಳುವುದು