ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಳೆದು ಹೋದ ಮಗನ ಕಥನವು

ಕಳೆದು ಹೋದ ಮಗನ ಕಥನವು

ಅಧ್ಯಾಯ 86

ಕಳೆದು ಹೋದ ಮಗನ ಕಥನವು

ಫರಿಸಾಯರಿಗೆ ಕಳೆದುಹೋದ ಕುರಿಯನ್ನು ಮತ್ತು ಪಾವಲಿಯನ್ನು ಪುನಃ ಪಡೆದು ಕೊಳ್ಳುವ ಸಾಮ್ಯಗಳನ್ನು ಈಗಾಗಲೇ ಹೇಳಿ ಮುಗಿಸಿಯಾದ ಮೇಲೆ ಯೇಸುವು ಈಗ ಇನ್ನೊಂದು ಸಾಮ್ಯವನ್ನು ಹೇಳುವದನ್ನು ಮುಂದವರಿಸುತ್ತಾನೆ. ಇದು ಒಬ್ಬ ಪ್ರೀತಿಯ ತಂದೆಯ ಕುರಿತು ಮತ್ತು ಗಂಭೀರವಾದ ನ್ಯೂನತೆಗಳಿದ್ದ ತನ್ನ ಇಬ್ಬರು ಗಂಡು ಮಕ್ಕಳನ್ನು ಅವನು ಉಪಚರಿಸುವ ಕುರಿತು ತಿಳಿಸುತ್ತದೆ.

ಮೊದಲು, ಕಿರೀಮಗನು, ಸಾಮ್ಯದ ಮುಖ್ಯ ಪಾತ್ರದವನಾಗಿದ್ದಾನೆ. ಅವನು ತಂದೆಯಿಂದ ಅನುಮಾನಿಸದೆ ಕೊಡಲ್ಪಟ್ಟ ತನ್ನ ಆಸ್ತಿಯ ಪಾಲನ್ನು ತೆಗೆದುಕೊಂಡು ಹೋಗುತ್ತಾನೆ, ಅನಂತರ ಅವನು ಮನೆಯನ್ನು ತ್ಯಜಿಸಿ, ಒಂದು ಅತಿ ಕೆಡುಕಾದ ಅನೈತಿಕ ಜೀವಿತದ ವಿಧಾನದಲ್ಲಿ ಒಳಗೂಡುತ್ತಾನೆ. ಆದರೆ ಯೇಸುವು ಈ ಕಥನವನ್ನು ಹೇಳುವಾಗ ಕೇಳಿರಿ ಮತ್ತು ಇದರಲ್ಲಿರುವ ಪಾತ್ರಗಳು ಯಾರನ್ನು ಪ್ರತಿನಿಧಿಸುತ್ತವೆ ಎಂದು ನಿಮಗೆ ನಿರ್ಧರಿಸಲು ಸಾಧ್ಯವಿದೆಯೋ ಎಂದು ನೋಡಿರಿ.

“ಒಬ್ಬಾನೊಬ್ಬ ಮನುಷ್ಯನಿಗೆ,” ಯೇಸುವು ಆರಂಭಿಸುವದು, “ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ತಂದೆಗೆ—ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇಳಿಕೊಳ್ಳಲು ತಂದೆಯು ಬದುಕನ್ನು ಅವರಿಗೆ ಹಂಚಿಕೊಟ್ಟನು.” ಈ ಕಿರೀಮಗನು ತನಗೆ ಸಿಕ್ಕಿದ್ದನ್ನು ಏನು ಮಾಡುತ್ತಾನೆ?

“ಸ್ವಲ್ಪ ದಿವಸದ ಮೇಲೆ” ಯೇಸುವು ವಿವರಿಸುವದು, “ಆ ಕಿರೀಮಗನು ಎಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟು ಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಸೂರೆ ಮಾಡಿಬಿಟ್ಟನು.” ವಾಸ್ತವದಲ್ಲಿ ಅವನು ತನ್ನ ಹಣವನ್ನು ಸೂಳೆಯವರೊಂದಿಗೆ ಜೀವಿಸಿ ಖರ್ಚು ಮಾಡುತ್ತಾನೆ. ಅನಂತರ ಕಠಿಣ ಸಮಯಗಳು ಬರುತ್ತವೆ, ಯೇಸುವು ಅದನ್ನು ಹೇಳುತ್ತಾ ಮುಂದರಿಸುವದು:

“ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲಿಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸುವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಶೆಪಟ್ಟನು; ಆದರೂ ಯಾರೂ ಅವನಿಗೆ ಕೊಡಲಿಲ್ಲ.”

ನಿಯಮ ಶಾಸ್ತ್ರಕ್ಕನುಸಾರ ಹಂದಿಗಳು ಅಶುದ್ಧ ಪ್ರಾಣಿಗಳಾಗಿರಲಾಗಿ ಅವನ್ನು ಮೇಯಿಸುವ ಕೆಲಸವನ್ನು ತೆಗೆದುಕೊಳ್ಳುವರೆ ಬಲಾತ್ಕರಿಸಲ್ಪಟ್ಟದ್ದು ಅದೆಷ್ಟು ಅಧೋಗತಿ! ಆದರೆ ಮಗನಿಗೆ ಅತಿ ವೇದನಾಮಯವಾಗಿದ್ದದ್ದು ಯಾವುದೆಂದರೆ ಅವನ ತಡೆಯಲಾಗದ ಹಸಿವು, ಅದು ಅವನನ್ನು ಹಂದಿಗಳಿಗೆ ತಿನ್ನಿಸುತ್ತಿದ್ದ ಆಹಾರವನ್ನಾದರೂ ತಿನ್ನಬಯಸುವಂತೆ ಮಾಡಿತು. ಅವನ ಭಯಂಕರ ವಿಪತ್ತಿನ ಕಾರಣದಿಂದ ಯೇಸುವು ಅಂದದ್ದು, “ಆಗ ಅವನಿಗೆ ಬುದ್ಧಿ ಬಂತು.”

ಅವನ ಕಥೆಯನ್ನು ಮುಂದರಿಸುತ್ತಾ, ಯೇಸುವು ವಿವರಿಸುವದು: “ಅವನು [ತನ್ನೊಳಗೆ] ಅಂದುಕೊಂಡದ್ದು—ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವದೆ; ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತೇನೆ! ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ—ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ಹೇಳುವೆನು ಅಂದುಕೊಂಡು ಎದ್ದು ತನ್ನ ತಂದೆಯ ಕಡೆಗೆ ಬಂದನು.”

ಇಲ್ಲಿ ಪರಿಗಣಿಸಲು ಕೆಲವು ಸಂಗತಿಗಳಿವೆ: ಅವನು ಈ ಮೊದಲು ಮನೆಯನ್ನು ಬಿಟ್ಟು ಹೋಗುವಾಗ, ಅವನ ತಂದೆಯು ಅವನಿಗೆ ಏನನ್ನೂ ಕೊಡದೇ ಕೋಪದಿಂದ ಅವನೆಡೆಗೆ ಅರಚಿದ್ದರೆ, ಈಗ ಅವನೇನು ಮಾಡತಕ್ಕದ್ದು ಎಂಬ ವಿಷಯದಲ್ಲಿ ಮಗನು ಅಷ್ಟೊಂದು ಏಕ-ನಿಷ್ಠೆಯವನಾಗಿರುತ್ತಿರಲಿಲ್ಲ. ಅವನು ತನ್ನ ಸ್ವಂತ ಊರಿಗೆ ಬರಲು ತೀರ್ಮಾನಿಸುತ್ತಿದ್ದಿರಬಹುದು ಮತ್ತು ಬೇರೊಂದು ಕಡೆಯಲ್ಲಿ ಕೆಲಸವನ್ನು ಕಂಡುಕೊಳ್ಳಬಹುದಿತ್ತು, ಆ ಮೂಲಕ ಅವನ ತಂದೆಯನ್ನು ಎದುರಿಸುವ ಆವಶ್ಯಕತೆ ಬರುತ್ತಿರಲಿಲ್ಲ. ಆದಾಗ್ಯೂ, ಅಂಥ ಒಂದು ಯೋಚನೆಯೇ ಅವನ ಮನಸ್ಸಿನಲ್ಲಿ ಇರಲಿಲ್ಲ. ಅವನು ಹೋಗಲು ಬಯಸಿದ್ದು ಅವನ ಮನೆಗೇ!

ಸ್ಪಷ್ಟವಾಗಿ, ಯೇಸುವಿನ ಸಾಮ್ಯದಲ್ಲಿ ತಂದೆಯು ನಮ್ಮ ಪ್ರೀತಿಯ, ಕರುಣಾಮಯಿ ಸ್ವರ್ಗೀಯ ತಂದೆಯಾದ ಯೆಹೋವ ದೇವರನ್ನು ಪ್ರತಿನಿಧಿಸುತ್ತಾನೆ. ಮತ್ತು ಕಳೆದು ಹೋದ, ಇಲ್ಲವೇ ಪೋಲಿ ಹೋದ ಮಗನು ಪಾಪಿಗಳಾಗಿ ಗುರುತಿಸಲ್ಪಡುವವರನ್ನು ಪ್ರತಿನಿಧಿಸುತ್ತಾನೆ ಎಂದು ನೀವು ಕೂಡ ಎಣಿಸಿರಬಹುದು. ಇಂಥವರ ಸಂಗಡವೇ ಯೇಸುವು ಊಟಮಾಡಿದ್ದಕ್ಕಾಗಿ ಯೇಸುವನ್ನು ಈ ಮೊದಲು ಠೀಕಿಸಿದ್ದ ಫರಿಸಾಯರೊಂದಿಗೆ ಯೇಸುವು ಈಗ ಮಾತಾಡುತ್ತಿದ್ದನು. ಆದರೆ ಹಿರೀಮಗನು ಯಾರನ್ನು ಪ್ರತಿನಿಧಿಸುತ್ತಾನೆ?

ಕಳೆದುಹೋದ ಮಗನು ಸಿಕ್ಕಿದಾಗ

ಯೇಸುವಿನ ಸಾಮ್ಯದಲ್ಲಿ ಕಳೆದುಹೋದ, ಇಲ್ಲವೇ ಪೋಲಿಹೋದ ಮಗನು ಅವನ ತಂದೆಯ ಮನೆಗೆ ಹಿಂತೆರಳಿದಾಗ, ಯಾವ ರೀತಿಯ ಸ್ವಾಗತವು ಅವನಿಗಾಗಿ ಕಾದಿರುತ್ತದೆ? ಯೇಸುವು ಅದನ್ನು ವರ್ಣಿಸುವದನ್ನು ಕೇಳಿರಿ:

“ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು.” ಎಂಥಾ ಕರುಣಾಮಯ, ಬೆಚ್ಚಗಿನ ಹೃದಯದ ತಂದೆಯು, ಎಷ್ಟೊಂದು ಚಲೋರೀತಿಯಲ್ಲಿ ನಮ್ಮ ಸ್ವರ್ಗೀಯ ತಂದೆಯಾದ, ಯೆಹೋವನನ್ನು ಪ್ರತಿನಿಧಿಸುತ್ತಾನೆ!

ಪ್ರಾಯಶಃ ತನ್ನ ಮಗನ ವಿಷಯಲಂಪಟತನದ ಜೀವಿತವನ್ನು ತಂದೆಯು ಕೇಳಿರಬಹುದು. ಆದರೂ ಒಂದು ಸವಿಸ್ತಾರವಾದ ವಿವರಣೆಗಾಗಿ ಅವನು ಕಾಯದೇ ಅವನನ್ನು ಸುಸ್ವಾಗತಿಸುತ್ತಾನೆ. ಯೇಸುವಿನಲ್ಲೂ ಅಂಥ ಸುಸ್ವಾಗತಿಸುವ ಆತ್ಮ ಇತ್ತು, ಸಾಮ್ಯದಲ್ಲಿ ಪ್ರತಿನಿಧಿಸಲ್ಪಟ್ಟ ಪೋಲಿಹೋದ ಮಗನಂತಿರುವ ಪಾಪಿಗಳನ್ನು ಮತ್ತು ಸುಂಕದವರನ್ನು ಸಮೀಪಿಸುವದರಲ್ಲಿ ಯೇಸುವೇ ಮೊದಲ ಹೆಜ್ಜೆಗಳನ್ನು ತೆಗೆದುಕೊಂಡನು.

ಮಗನು ಹಿಂತೆರಳಿ ಬರುವಾಗ ಅವನ ದುಃಖತಪ್ತ, ಖಿನ್ನ ಮುಖಚರ್ಯೆಯನ್ನು ಅವಲೋಕಿಸುವದರ ಮೂಲಕ, ತನ್ನ ಮಗನ ಪಶ್ಚಾತ್ತಾಪದ ಕುರಿತು ಯೇಸುವಿನ ಸಾಮ್ಯದ ವಿವೇಚನಾಭರಿತ ತಂದೆಯಲ್ಲಿ ಸ್ವಲ್ಪ ಅಭಿಪ್ರಾಯ ಉಂಟಾಗಿತ್ತು ಎಂಬದರಲ್ಲಿ ಸಂದೇಹವಿಲ್ಲ. ಆದರೆ ತಂದೆಯ ಪ್ರೀತಿಯ ಆರಂಭಿಕ ಹೆಜ್ಜೆಗಳು, ತನ್ನ ಪಾಪಗಳನ್ನು ಒಪ್ಪಿಕೊಳ್ಳುವಂತೆ ಮಗನಿಗೆ ಸುಲಭವನ್ನಾಗಿ ಮಾಡಿತು, ಯೇಸುವು ವರ್ಣಿಸುವದು: “ಆದರೂ ಮಗನು ಅವನಿಗೆ—ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ಮುಂದೆ ನಿನ್ನ ಮಗನೆನಸಿಕೊಳ್ಳುವದಕ್ಕೆ ನಾನು ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು.”

ಆದರೂ, ಮಗನ ತುಟಿಗಳಿಂದ ಮಾತುಗಳು ಹೊರಬಿದ್ದಿವೆಯೋ ಇಲ್ಲವೋ, ಅವನ ತಂದೆಯು ಕಾರ್ಯಕ್ಕೆ ಇಳಿಯುತ್ತಾನೆ, ತನ್ನ ಸೇವಕರಿಗೆ ಅಪ್ಪಣೆಯನ್ನೀಯುತ್ತಾನೆ: “ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನು ಇಡಿರಿ; ಕಾಲಿಗೆ ಜೋಡು ಮೆಡಿಸಿರಿ; ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ; ಉಲ್ಲಾಸ ಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು.” ಅನಂತರ “ಅವರು ಉಲ್ಲಾಸಪಡುವದಕ್ಕೆ” ತೊಡಗಿದರು.

ತನ್ಮಧ್ಯೆ, ತಂದೆಯ “ಹಿರೀಮಗನು ಹೊಲದಲ್ಲಿದ್ದನು.” ಉಳಿದಿರುವ ಕಥೆಯನ್ನು ಕೇಳಿದ ನಂತರ, ಅವನು ಯಾರನ್ನು ಪ್ರತಿನಿಧಿಸುತ್ತಾನೆ ಎಂದು ನೀವು ಗುರುತಿಸಬಲ್ಲಿರೋ ನೋಡಿರಿ. ಹಿರೀಮಗನ ಕುರಿತು ಯೇಸುವು ಹೇಳುವದು: “ಅವನು ಮನೆಯ ಹತ್ತರಹತ್ತರಕ್ಕೆ ಬರುತ್ತಿರುವಾಗ ವಾದ್ಯನರ್ತನಗಳನ್ನು ಕೇಳಿ ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು—ಇದೇನು ಎಂದು ವಿಚಾರಿಸಿದನು. ಆಳು ಅವನಿಗೆ—ನಿನ್ನ ತಮ್ಮ ಬಂದಿದ್ದಾನೆ; ಇವನು ಸುರಕ್ಷಿತವಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿಸಿದ ಕರುವನ್ನು ಕೊಯ್ಸಿದ್ದಾನೆ ಎಂದು ಹೇಳಿದನು. ಇದನ್ನು ಕೇಳಿ ಅವನಿಗೆ ಸಿಟ್ಟುಬಂದು ಒಳಕ್ಕೆ ಹೋಗಲೊಲ್ಲದೆ ಇದ್ದನು. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿ ಕೊಂಡನು. ಆದರೆ ಅವನು ತನ್ನ ತಂದೆಗೆ—ನೋಡು, ಇಷ್ಟು ವರುಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಒಂದಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ; ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸ ಪಡುವದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ ಕೊಬ್ಬಿಸಿದ ಕರುವನ್ನು ಕೊಯ್ಸಿದಿ ಎಂದು ಉತ್ತರ ಕೊಟ್ಟನು.”

ಪಾಪಿಗಳಿಗೆ ಕರುಣೆ ಮತ್ತು ಗಮನವನ್ನು ನೀಡಿದ್ದಕ್ಕಾಗಿ, ಹಿರೀಮಗನಂತೆ ಠೀಕಿಸುವವರು ಯಾರು? ಅವರು ಶಾಸ್ತ್ರಿಗಳೂ, ಫರಿಸಾಯರೂ ಅಲ್ಲವೇ? ಯೇಸುವು ಪಾಪಿಗಳನ್ನು ಸುಸ್ವಾಗತಿಸುವದರ ಕಾರಣ ಅವರು ಅವನನ್ನು ಠೀಕಿಸಿದರ್ದಿಂದ ಈ ಸಾಮ್ಯವನ್ನು ಕೊಡುವಂತೆ ಪ್ರಚೋದಿತನಾದನು. ಆದುದರಿಂದ ಹಿರೀಮಗನನ್ನು ಅವರು ಸ್ಪಷ್ಟವಾಗಿ ಪ್ರತಿನಿಧಿಸತಕ್ಕದ್ದು.

ತನ್ನ ಹಿರೀಮಗನಿಗೆ ತಂದೆಯು ಹೀಗೆ ವಿನಂತಿಸುವದರ ಮೂಲಕ ಯೇಸುವು ಅವನ ಕಥೆಯನ್ನು ಸಮಾಪ್ತಿಗೊಳಿಸುತ್ತಾನೆ: “ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ. ಆದರೆ ಉಲ್ಲಾಸಪಡುವದೂ ಸಂತೋಷಗೊಳ್ಳುವದೂ ನ್ಯಾಯವಾದದ್ದೇ; ಯಾಕಂದರೆ ಈ ನಿನ್ನ ತಮ್ಮನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿ ಹೋಗಿದ್ದನು, ಸಿಕ್ಕಿದನು.”

ಕಟ್ಟಕಡೆಗೆ ಹಿರೀಮಗನು ಏನು ಮಾಡಿದನು ಎಂಬ ವಿಷಯದಲ್ಲಿ ಯೇಸುವು ಯಾವುದೇ ತೀರ್ಮಾನವಿಲ್ಲದೇ ಬಿಡುತ್ತಾನೆ. ಅನಂತರ, ಅಂದರೆ ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರ “ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು” ಎಂಬುದು ದಿಟ, ಪ್ರಾಯಶಃ ಇಲ್ಲಿ ಯೇಸುವು ಮಾತಾಡುತ್ತಿದ್ದ “ಹಿರೀಮಗನ” ವರ್ಗದವರಾಗಿದ್ದವರಲ್ಲಿ ಕೆಲವರಿರಬಹುದು.

ಆದರೆ ಆಧುನಿಕ ದಿನಗಳಲ್ಲಿ ಇಬ್ಬರು ಪುತ್ರರುಗಳನ್ನು ಯಾರು ಪ್ರತಿನಿಧಿಸುತ್ತಾರೆ? ಅವನೊಂದಿಗೆ ಒಂದು ಸಂಬಂಧದೊಳಗೆ ಬರುವಷ್ಟು ಆಧಾರವುಳ್ಳವರಾಗಿರುವಂತೆ ಯೆಹೋವನ ಉದ್ದೇಶಗಳ ಕುರಿತು ಸಾಕಷ್ಟು ತಿಳುವಳಿಕೆಗೆ ಬಂದವರಾಗಿರತಕ್ಕದ್ದು. ಹಿರೀಮಗನು “ಚಿಕ್ಕಹಿಂಡಿನ,” ಇಲ್ಲವೇ, “ಪರಲೋಕದಲ್ಲಿ ಹೆಸರು ಬರಸಿಕೊಂಡಿರುವ ಚೊಚ್ಚಲಮಕ್ಕಳ ಸಭೆಯ” ಕೆಲವು ಸದಸ್ಯರನ್ನು ಪ್ರತಿನಿಧಿಸುತ್ತಾನೆ. ಇವರು ಹಿರೀಮಗನು ತೋರಿಸಿದಂಥ ಮನೋಭಾವವನ್ನು ಹೊಂದಿದರು. ಐಹಿಕ ವರ್ಗದವರಾದ “ಬೇರೆ ಕುರಿಗಳನ್ನು” ಸುಸ್ವಾಗತಿಸುವ ಯಾವುದೇ ಆಶೆ ಅವರಿಗೆ ಇರಲಿಲ್ಲ ಯಾಕಂದರೆ ಅವರು ರಂಗಸ್ಥಳದ ಬೆಳಕನ್ನು ಕಸಿದುಕೊಳ್ಳುತ್ತಾರೆಂದು ಇವರು ಭಾವಿಸಿದರು.

ಪೋಲಿಹೋದ ಮಗನು, ಇನ್ನೊಂದು ಪಕ್ಕದಲ್ಲಿ, ಲೋಕವು ಕೊಡುವ ಸಂತೋಷಗಳಲ್ಲಿ ಆನಂದಿಸುವರೇ ದೇವ ಜನರನ್ನು ಬಿಟ್ಟು ಹೋಗಿರುವವರನ್ನು ಪ್ರತಿನಿಧಿಸುತ್ತಾನೆ. ಆದರೂ, ತಕ್ಕ ಸಮಯದಲ್ಲಿ ಅವರು ಪಶ್ಚಾತ್ತಾಪ ಪಟ್ಟು ಹಿಂತೆರಳುತ್ತಾರೆ ಮತ್ತು ಪುನಃ ದೇವರ ಕ್ರಿಯಾಸಕ್ತ ಸೇವಕರಾಗುತ್ತಾರೆ. ಖಂಡಿತವಾಗಿಯೂ ಕ್ಷಮೆಯ ಆವಶ್ಯಕತೆಯನ್ನು ತಿಳಿದು ಕೊಂಡು ಯೆಹೋವನ ಬಳಿಗೆ ಹಿಂತಿರುಗಿ ಬರುವವರ ಕಡೆಗೆ ಅವನು ಎಷ್ಟೊಂದು ಪ್ರೀತಿಯುಳ್ಳವನೂ, ಕರುಣಾಮಯಿಯೂ ಆಗಿರುತ್ತಾನೆ! ಲೂಕ 15:11-32; ಯಾಜಕಕಾಂಡ 11:7, 8; ಅ.ಕೃತ್ಯಗಳು 6:7; ಲೂಕ 12:32; ಇಬ್ರಿಯ 12:23; ಯೋಹಾನ 10:16.

▪ ಈ ಸಾಮ್ಯವನ್ನು ಯೇಸುವು ಯಾರಿಗೆ ಹೇಳುತ್ತಾನೆ, ಮತ್ತು ಯಾಕೆ?

▪ ಕಥೆಯಲ್ಲಿ ಮುಖ್ಯ ಪಾತ್ರದಾರಿ ಯಾರು, ಮತ್ತು ಅವನಿಗೆ ಏನು ಸಂಭವಿಸುತ್ತದೆ?

▪ ಯೇಸುವಿನ ದಿನಗಳಲ್ಲಿ ತಂದೆ ಮತ್ತು ಕಿರೀಮಗನನ್ನು ಯಾರು ಪ್ರತಿನಿಧಿಸುತ್ತಿದ್ದರು?

▪ ಅವನ ಸಾಮ್ಯದ ಅನುಕಂಪಭರಿತ ತಂದೆಯ ಆದರ್ಶವನ್ನು ಯೇಸುವು ಹೇಗೆ ಅನುಕರಿಸುತ್ತಾನೆ?

▪ ಅವನ ತಮ್ಮನ ಸುಸ್ವಾಗತಿಸುವಿಕೆಯ ಕುರಿತು ಹಿರೀಮಗನ ನೋಟವೇನಾಗಿತ್ತು ಮತ್ತು ಫರಿಸಾಯರು ಹಿರೀಮಗನೋಪಾದಿ ಹೇಗೆ ವರ್ತಿಸಿದರು?

▪ ನಮ್ಮ ದಿನಗಳಲ್ಲಿ ಯೇಸುವಿನ ಸಾಮ್ಯದ ಅನ್ವಯವೇನು?