ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಷ್ಠರೋಗಿಯೊಬ್ಬನಿಗೆ ಅನುಕಂಪ

ಕುಷ್ಠರೋಗಿಯೊಬ್ಬನಿಗೆ ಅನುಕಂಪ

ಅಧ್ಯಾಯ 25

ಕುಷ್ಠರೋಗಿಯೊಬ್ಬನಿಗೆ ಅನುಕಂಪ

ಯೇಸು ಮತ್ತು ಅವನ ನಾಲ್ವರು ಶಿಷ್ಯರು ಗಲಿಲಾಯದ ನಗರಗಳನ್ನು ಸಂದರ್ಶಿಸುತ್ತಿರುವಾಗ, ಅವನು ನಡಿಸುವ ಅದ್ಭುತಕರವಾದ ಸಂಗತಿಗಳ ಸುದ್ದಿಯು ಎಲ್ಲಾ ಪ್ರಾಂತ್ಯದಲ್ಲಿ ಹಬ್ಬುತ್ತದೆ. ಒಂದು ನಗರದಲ್ಲಿ ಕುಷ್ಠ ರೋಗಿಯಾಗಿದ್ದ ಒಬ್ಬ ಮನುಷ್ಯನಿಗೆ ಅವನ ಮಹತ್ಕಾರ್ಯಗಳ ವಾರ್ತೆಯು ತಲುಪುತ್ತದೆ. ವೈದ್ಯ ಲೂಕನು ಅವನನ್ನು “ಕುಷ್ಠರೋಗ ಮೈಯೆಲ್ಲಾ ತುಂಬಿದ್ದವನು” ಎಂದು ವರ್ಣಿಸುತ್ತಾನೆ. ಬಹಳಷ್ಟು ಸಮಯವಾಗಿದ್ದುದರಿಂದ, ಈ ಮಾರಕವಾದ ರೋಗವು ಮೆಲ್ಲನೆ ದೇಹದ ವಿವಿಧ ಭಾಗಗಳನ್ನು ಕುರೂಪಗೊಳಿಸುತ್ತದೆ. ಆದ್ದರಿಂದ ಈ ಕುಷ್ಠ ರೋಗಿಯು ಅತ್ಯಂತ ದಾರುಣ ಸ್ಥಿತಿಯಲ್ಲಿದ್ದನು.

ಯೇಸುವು ಈ ನಗರಕ್ಕೆ ಬಂದಾಗ, ಈ ಕುಷ್ಠ ರೋಗಿಯು ಅವನನ್ನು ಸಮೀಪಿಸುತ್ತಾನೆ. ದೇವರ ನಿಯಮದ ಪ್ರಕಾರ, ಕುಷ್ಠ ರೋಗಿಯು, ಇತರರು ತೀರಾ ಹತ್ತಿರಕ್ಕೆ ಬಂದು ರೋಗವಂಟುವ ಹಾನಿಯನ್ನು ತಡೆಯಲು ಎಚ್ಚರಿಕೆಯಾಗಿ “ಅಶುದ್ಧ, ಅಶುದ್ಧ” ಎಂದು ಕೂಗಿ ಹೇಳಬೇಕಿತ್ತು. ಈಗ ಈ ಕುಷ್ಠ ರೋಗಿಯು ಅಡ್ಡ ಬಿದ್ದು, ಯೇಸುವನ್ನು ಬೇಡುತ್ತಾನೆ: “ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲಿ.”

ಈ ಮನುಷ್ಯನಿಗೆ ಯೇಸುವಿನ ಮೇಲೆ ಎಂಥಹ ನಂಬಿಕೆ! ಆದರೂ, ಅವನ ರೋಗವು ಅವನ ತೋರಿಕೆಯನ್ನು ಎಷ್ಟೊಂದು ದಾರುಣ್ಯಮಯವಾಗಿ ಮಾಡಿದ್ದಿರಬೇಕು! ಯೇಸುವು ಏನು ಮಾಡುವನು? ನೀವೇನು ಮಾಡುತ್ತಿದ್ದಿರಿ? ಅನುಕಂಪದಿಂದ ತುಂಬಿದವನಾಗಿ, ಯೇಸುವು ತನ್ನ ಕೈನೀಡಿ, ಅವನನ್ನು ಮುಟ್ಟಿ, ಹೇಳುವದು: “ನನಗೆ ಮನಸ್ಸುಂಟು. ಶುದ್ಧನಾಗು.” ಮತ್ತು ಕೂಡಲೇ ಆವನ ಕುಷ್ಠವು ಮಾಯವಾಗಿ ಹೋಯಿತು.

ಇಂತಹ ಅನುಕಂಪವುಳ್ಳವನೊಬ್ಬನು ನಿಮ್ಮ ರಾಜನಾಗಿರಲು ನೀವು ಬಯಸುವಿರೋ? ಕುಷ್ಠ ರೋಗಿಯನ್ನು ಯೇಸುವು ಸತ್ಕರಿಸಿದ ರೀತಿಯು ಅವನ ರಾಜ್ಯದಾಳಿಕೆಯಲ್ಲಿ ಈ ಬೈಬಲ್‌ ಪ್ರವಾದನೆಯು ನೆರವೇರುವದೆಂಬ ಭರವಸೆಯನ್ನೀಯುತ್ತದೆ: “ಅವನು ದೀನ ದರಿದ್ರರ ಮೇಲೆ ಕರುಣೆಯುಳ್ಳವನಾಗಿರುವನು ಮತ್ತು ಅವರ ಪ್ರಾಣಗಳನ್ನು ರಕ್ಷಿಸುವನು.” ಹೌದು, ಎಲ್ಲಾ ಬಾಧಿತರಿಗೆ ಸಹಾಯ ಮಾಡುವ ತನ್ನ ಹೃದಯದಾಸೆಯನ್ನು ಆಗ ಯೇಸುವು ಪೂರೈಸುವನು.

ಕುಷ್ಠ ರೋಗಿಯನ್ನು ವಾಸಿಮಾಡುವ ಮೊದಲೇ ಯೇಸುವಿನ ಶುಶ್ರೂಪಷೆಯು ಜನರಲ್ಲಿ ಬಹಳಷ್ಟು ಸಡಗರ ಪ್ರೇರಕವಾಗಿತ್ತು. ಯೆಶಾಯನ ಪ್ರವಾದನೆಯ ನೆರವೇರಿಕೆಯಲ್ಲಿ, ಯೇಸುವು ವಾಸಿಯಾದವನಿಗೆ ಆಜ್ಞಾಪಿಸುವದು: “ನೀನು ಯಾರಿಗೂ ಹೇಳಬೇಡ.” ಅನಂತರ ಅವನಿಗೆ ಹೇಳಿದ್ದು: “ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ನೇಮಕ ಮಾಡಿರುವದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು; ಅದು ಜನರಿಗೆ ಸಾಕ್ಷಿಯಾಗಲಿ.”

ಆದರೆ ಈ ಮನುಷ್ಯನು ಎಷ್ಟೊಂದು ಆನಂದಿತನಾಗಿದ್ದನೆಂದರೆ, ಈ ಅದ್ಭುತವನ್ನು ಅವನು ತನ್ನಷ್ಟಕ್ಕೆ ಇಟ್ಟುಕೊಳ್ಳಶಕ್ತನಾಗಿರಲಿಲ್ಲ. ಆತನು ಹೊರಟುಹೋಗಿ, ಆ ಸಂಗತಿಯನ್ನು ಎಲ್ಲೆಡೆಗಳಲ್ಲಿ ಹಬ್ಬಿಸಲಾರಂಭಿಸಿದ್ದರಿಂದ, ಜನರಲ್ಲಿ ಆಸಕ್ತಿ ಮತ್ತು ಕುತೂಹಲವು ಎಷ್ಟು ಕೆರಳಿತೆಂದರೆ ಯೇಸುವು ಊರೊಳಗೆ ಬಹಿರಂಗವಾಗಿ ಹೋಗಶಕ್ತನಾಗಲಿಲ್ಲ. ಆದ್ದರಿಂದ, ಯೇಸುವು ಯಾರೂ ಜೀವಿಸದ, ಏಕಾಂತ ಸ್ಥಳಗಳಲ್ಲಿ ತಂಗುತ್ತಾನೆ. ಮತ್ತು ಜನರು ಎಲ್ಲಾ ಕಡೆಗಳಿಂದ ಅವನನ್ನು ಆಲಿಸಲು ಮತ್ತು ಅವರ ರೋಗಗಳನ್ನು ವಾಸಿಮಾಡಿಕೊಳ್ಳಲು ಬರಲಾರಂಭಿಸುತ್ತಾರೆ.. ಲೂಕ 5:12-16; ಮಾರ್ಕ 1:40-45; ಮತ್ತಾಯ 8:2-4; ಯಾಜಕಕಾಂಡ 13:45; 14:10-13; ಕೀರ್ತನೆ 72:13; ಯೆಶಾಯ 42:1, 2.

▪ ಕುಷ್ಠ ರೋಗದ ಪರಿಣಾಮ ಏನಾಗ ಸಾಧ್ಯವಿದೆ, ಮತ್ತು ಕುಷ್ಠ ರೋಗಿಯು ಯಾವ ಎಚ್ಚರಿಕೆಯನ್ನು ಕೊಡಬೇಕಿತ್ತು?

▪ ಕುಷ್ಠ ರೋಗಿಯು ಯೇಸುವಿಗೆ ಹೇಗೆ ಭಿನ್ನವಿಸಿದನು, ಮತ್ತು ಯೇಸುವಿನ ಪ್ರತಿಕ್ರಿಯೆಯಿಂದ ನಾವೇನು ಕಲಿಯಸಾಧ್ಯವಿದೆ?

▪ ವಾಸಿಯಾದ ವ್ಯಕ್ತಿಯು ಯೇಸುವಿಗೆ ವಿಧೇಯನಾಗಲು ತಪ್ಪಿದ್ದು ಹೇಗೆ, ಮತ್ತು ಅದರ ಫಲಿತಾಂಶಗಳೇನು?