ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇಥಾನ್ಯದ ಸೀಮೋನನ ಮನೆಯಲ್ಲಿ

ಬೇಥಾನ್ಯದ ಸೀಮೋನನ ಮನೆಯಲ್ಲಿ

ಅಧ್ಯಾಯ 101

ಬೇಥಾನ್ಯದ ಸೀಮೋನನ ಮನೆಯಲ್ಲಿ

ಯೇಸುವು ಯೆರಿಕೋವನ್ನು ಬಿಟ್ಟು ಬೇಥಾನ್ಯಕ್ಕೆ ಹೋಗುತ್ತಾನೆ. ಪ್ರಯಾಣವು ದಿನದ ಅಧಿಕ ಭಾಗವನ್ನು ತೆಗೆದು ಕೊಳ್ಳುತ್ತದೆ, ಯಾಕಂದರೆ ಅದೊಂದು ದುರ್ಗಮಕರ ಭೂಪ್ರದೇಶವಾಗಿದ್ದು 19 ಕಿಲೊಮೀಟರುಗಳ ಏರು ಆಗಿತ್ತು. ಸಮುದ್ರ ಮಟ್ಟದಿಂದ ಯೆರಿಕೋ ಸುಮಾರು 250 ಮೀಟರ್‌ಗಳಷ್ಟು ಕೆಳಗೆ ಇದ್ದರೆ, ಬೇಥಾನ್ಯ ಸಮುದ್ರ ಮಟ್ಟದಿಂದ ಸುಮಾರು 760 ಮೀಟರ್‌ ಮೇಲಕ್ಕೆ ಇತ್ತು. ಬೇಥಾನ್ಯದಲ್ಲಿ ಲಾಜರನ ಮತ್ತು ಅವನ ಸಹೋದರಿಯರ ಮನೆ ಇತ್ತು ಎಂಬುದನ್ನು ನೀವು ನೆನಪಿಸಬಹುದು. ಈ ಚಿಕ್ಕ ಹಳ್ಳಿ ಯೆರೂಸಲೇಮಿನಿಂದ ಸುಮಾರು ಮೂರು ಕಿಲೊಮೀಟರ್‌ ದೂರದಲ್ಲಿ, ಎಣ್ಣೇಮರಗಳ ಬೆಟ್ಟದ ಪೂರ್ವ ಇಳಿಜಾರಿನಲ್ಲಿ ಇತ್ತು.

ಪಸ್ಕ ಹಬ್ಬಕ್ಕೆ ಈಗಾಗಲೇ ಅನೇಕರು ಯೆರೂಸಲೇಮಿಗೆ ಆಗಮಿಸಿದ್ದರು. ತಮ್ಮನ್ನು ಕ್ರಮಾಚರಣೆಗನುಸಾರ ಶುದ್ಧಿಮಾಡಿಕೊಳ್ಳುವದಕ್ಕಾಗಿ ಇವರು ಮೊದಲೇ ಬಂದಿದ್ದರು. ಪ್ರಾಯಶಃ ಅವರು ಹೆಣವನ್ನು ಮುಟ್ಟಿರಬಹುದು ಯಾ ಅವರನ್ನು ಅಶುದ್ಧಗೊಳಿಸುವ ಬೇರೆ ಯಾವುದನ್ನಾದರೂ ಮಾಡಿರಬಹುದು. ಆದುದರಿಂದ ಸ್ವೀಕಾರ್ಹವಾದ ರೀತಿಯಲ್ಲಿ ಪಸ್ಕ ಹಬ್ಬವನ್ನು ಆಚರಿಸಲಾಗುವಂತೆ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳಲು ವಿಧಿಕ್ರಮವನ್ನು ಅನುಸರಿಸುತ್ತಿದ್ದರು. ಹೀಗೆ ಮುಂಚಿತವಾಗಿ ಬಂದವರು ದೇವಾಲಯದಲ್ಲಿ ಒಟ್ಟುಗೂಡುತ್ತಿದ್ದಂತೆಯೇ, ಪಸ್ಕ ಹಬ್ಬಕ್ಕೆ ಯೇಸುವು ಬರುವನೋ ಇಲ್ಲವೋ ಎಂಬ ವಿಷಯದಲ್ಲಿ ಊಹಾಪೋಹದಲ್ಲಿ ನಿರತರಾಗಿದ್ದರು.

ಯೇಸುವಿನ ವಿಷಯದಲ್ಲಿ ಯೆರೂಸಲೇಮ್‌ ಶಾಖವೇರಿದ ವಾಗ್ವಾದದ ಒಂದು ಸ್ಥಳವಾಗಿತ್ತು. ಅವನನ್ನು ಹಿಡಿದು, ಕೊಲ್ಲಲು ಧಾರ್ಮಿಕ ಮುಖಂಡರು ಬಯಸಿದ್ದಾರೆ ಎಂಬುದು ಒಂದು ಸರ್ವಸಾಮಾನ್ಯವಾಗಿ ತಿಳಿದ ವಿಷಯವಾಗಿತ್ತು. ವಾಸ್ತವದಲ್ಲಿ, ಯೇಸುವು ಎಲ್ಲಿದ್ದಾನೆಂದು ಯಾರಿಗಾದರೂ ತಿಳಿದರೆ ಅವರು ಬಂದು ತಮಗೆ ತಿಳಿಸಬೇಕೆಂದು ಅವರು ಅಪ್ಪಣೆ ಸಹಿತ ಕೊಟ್ಟಿದ್ದರು. ಇತ್ತೀಚಿಗಿನ ಸಮಯದಲ್ಲಿ ಮೂರು ಬಾರಿ—ಪರ್ಣಶಾಲೆಗಳ ಹಬ್ಬಗಳ ಸಮಯದಲ್ಲಿ, ಪ್ರತಿಷ್ಠೆಯ ಹಬ್ಬದ ಸಮಯದಲ್ಲಿ, ಮತ್ತು ಲಾಜರನ ಪುನರುತ್ಥಾನದ ನಂತರ, ಈ ಮುಖಂಡರುಗಳು ಅವನನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದುದರಿಂದ, ಯೇಸುವು ಇನ್ನೊಮ್ಮೆ ಬಹಿರಂಗವಾಗಿ ಕಾಣಿಸಿಕೊಳ್ಳುವನೇ ಎಂಬ ವಿಷಯದಲ್ಲಿ ಜನರು ಕುತೂಹಲಗೊಂಡಿದ್ದರು. “ನಿಮಗೆ ಹೇಗೆ ಕಾಣುತ್ತದೆ?” ಅವರು ಒಬ್ಬರು ಇನ್ನೊಬ್ಬರೊಂದಿಗೆ ವಿಚಾರಿಸುತ್ತಿದ್ದರು.

ತನ್ಮಧ್ಯೆ, ಯೆಹೂದ್ಯರ ಕ್ಯಾಲೆಂಡರಿಗನುಸಾರ ನೈಸಾನ್‌ 14ನೆಯ ದಿನದಲ್ಲಿ ಬರುವ ಪಸ್ಕ ಹಬ್ಬದ ಆರು ದಿನಗಳ ಮೊದಲು ಯೇಸುವು ಬೇಥಾನ್ಯಕ್ಕೆ ಬರುತ್ತಾನೆ. ಯೇಸುವು ಬೇಥಾನ್ಯಕ್ಕೆ ನೈಸಾನ್‌ 8-ರ ಆರಂಭದಲ್ಲಿ, ಅಂದರೆ ಶುಕ್ರವಾರ ಸಾಯಂಕಾಲ ತಲುಪುತ್ತಾನೆ. ಅವನು ಶನಿವಾರ ಬೇಥಾನ್ಯಕ್ಕೆ ಬರಲು ಸಾಧ್ಯವಿರಲಿಲ್ಲ ಯಾಕಂದರೆ ಸಬ್ಬತ್‌ ದಿನದಲ್ಲಿ—ಶುಕ್ರವಾರ ಸೂರ್ಯಾಸ್ತಮಾನದಿಂದ ಹಿಡಿದು ಶನಿವಾರ ಸೂರ್ಯಾಸ್ತಮಾನದ ತನಕ—ಯೆಹೂದ್ಯರ ನಿಯಮಕ್ಕನುಸಾರ ಪ್ರಯಾಣ ಮಾಡುವದನ್ನು ನಿಷೇಧಿಸಲಾಗಿತ್ತು. ಈ ಮುಂಚೆ ಮಾಡಿದಂತೆ, ಯೇಸುವು ಪ್ರಾಯಶಃ ಲಾಜರನ ಮನೆಗೆ ಹೋಗಿ ಶುಕ್ರವಾರ ರಾತ್ರಿ ಅಲ್ಲಿ ಕಳೆದಿರಬೇಕು.

ಆದಾಗ್ಯೂ, ಬೇಥಾನ್ಯದ ಇನ್ನೊಬ್ಬ ನಿವಾಸಿಯು ಯೇಸು ಮತ್ತು ಆತನ ಸಂಗಡಿಗರನ್ನು ಶನಿವಾರ ಸಾಯಂಕಾಲದ ಒಂದು ಭೋಜನಕ್ಕಾಗಿ ಆಮಂತ್ರಿಸುತ್ತಾನೆ. ಇವನು ಮೊದಲು ಕುಷ್ಠರೋಗಿಯಾಗಿದ್ದು ಯೇಸುವಿನಿಂದ ಪ್ರಾಯಶಃ ಗುಣಮುಖನಾದ ಸೀಮೋನನಾಗಿದ್ದಿರಬಹುದು. ಅವಳ ಶ್ರಮಪೂರ್ವಕ ಗುಣಗಳಿಗನುಸಾರ, ಮಾರ್ಥಳು ಅತಿಥಿಗಳನ್ನು ಉಪಚರಿಸುತ್ತಾಳೆ. ಆದರೆ ಮರಿಯಳು ಸಹಜಗುಣದಿಂದ ಯೇಸುವಿಗೆ ಗಮನ ಕೊಡುತ್ತಾ ಇದ್ದಾಳೆ, ಆದರೆ ಈ ಬಾರಿ ಅದೊಂದು ವಾಗ್ವಾದಕ್ಕೆ ಕಾರಣವಾಗುತ್ತದೆ.

ಮರಿಯಳು ಅರ್ಧ ಕಿಲೋಗ್ರಾಮ್‌ ಸುಗಂಧ ತೈಲ “ಅಚ್ಚ ಜಟಾಮಾಂಸಿ ತೈಲ” ಹಿಡಿಯುವ ಚಂದ್ರಕಾಂತಶಿಲೆಯ ಭರಣಿಯನ್ನು ಯಾ ಚಿಕ್ಕ ಸೀಸೆಯನ್ನು ತೆರೆಯುತ್ತಾಳೆ. ಇದು ಬಹುಬೆಲೆಯದ್ದಾಗಿತ್ತು. ಖಂಡಿತವಾಗಿ ಅದರ ಬೆಲೆಯು ಒಂದು ಇಡೀ ವರ್ಷದ ಸಂಬಳದಷ್ಟಾಗಿತ್ತು! ಮರಿಯಳು ಅದನ್ನು ಯೇಸುವಿನ ತಲೆಯ ಮತ್ತು ಪಾದಗಳ ಮೇಲೆ ಹೊಯ್ಯುತ್ತಾಳೆ ಮತ್ತು ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸುತ್ತಾಳೆ. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು.

ಶಿಷ್ಯರು ಕೋಪಗೊಂಡು, ಕೇಳುತ್ತಾರೆ: “ಈ ನಷ್ಟ ಯಾತಕ್ಕೆ?” ಅನಂತರ ಇಸ್ಕರಿಯೋತ ಯೂದನು ಹೇಳುವದು: “ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ?” ಆದರೆ ಯೂದನು ಬಡವರಿಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ, ಯಾಕಂದರೆ ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಶಿಷ್ಯರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದನು.

ಯೇಸುವು ಮರಿಯಳ ಬೆಂಬಲಕ್ಕೆ ಬರುತ್ತಾನೆ: “ಈಕೆಯನ್ನು ಬಿಡಿರಿ,” ಅವನು ಆಜ್ಞಾಪಿಸುತ್ತಾನೆ. “ಈಕೆಗೆ ಯಾಕೆ ತೊಂದರೆ ಕೊಡುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ, ನಿಮಗೆ ಮನಸ್ಸು ಬಂದಾಗ ಅವರಿಗೆ ಉಪಕಾರ ಮಾಡಬಹುದು; ಆದರೆ ನಾನು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುವದಿಲ್ಲ. ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ; ಈಕೆಯು ಮುಂದಾಗಿ ನನ್ನ ಉತ್ತರಕ್ರಿಯೆಗೋಸ್ಕರ ನನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ. ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”

ಯೇಸುವು ಬೇಥಾನ್ಯದಲ್ಲಿ 24 ತಾಸುಗಳಿಗಿಂತಲೂ ಹೆಚ್ಚು ಸಮಯ ಇದ್ದನು, ಮತ್ತು ಅವನು ಅಲ್ಲಿದ್ದಾನೆಂಬ ಸುದ್ದಿಯು ಹಬ್ಬಲಾರಂಭಿಸಿತು. ಆದಕಾರಣ, ಯೇಸುವನ್ನು ನೋಡಲು ಬಹುಮಂದಿ ಸೀಮೋನನ ಮನೆಗೆ ಬಂದರು, ಅವರು ಆಗ ಅಲ್ಲಿ ಹಾಜರಿದ್ದ ಲಾಜರನನ್ನೂ ನೋಡಲು ಬಂದರು. ಆದುದರಿಂದ ಯೇಸುವನ್ನು ಮಾತ್ರವಲ್ಲ, ಲಾಜರನನ್ನೂ ಕೊಲ್ಲಲು ಮಹಾ ಯಾಜಕರು ಆಲೋಚನೆ ಮಾಡಿದರು. ಯೇಸುವು ಮರಣದಿಂದ ಎಬ್ಬಿಸಿದ ಲಾಜರನು ಜೀವಂತನಾಗಿರುವದನ್ನು ಕಂಡು ಅನೇಕರು ಅವನ ಮೇಲೆ ನಂಬಿಕೆಯನ್ನಿಡುವವರಾದರು! ನಿಜವಾಗಿಯೂ, ಈ ಧಾರ್ಮಿಕ ಮುಖಂಡರುಗಳು ಎಷ್ಟು ದುಷ್ಟರಾಗಿದ್ದರು! ಯೋಹಾನ 11:55–12:11; ಮತ್ತಾಯ 26:6-13; ಮಾರ್ಕ 14:3-9; ಅ.ಕೃತ್ಯಗಳು 1:12.

▪ ಯೆರೂಸಲೇಮಿನ ದೇವಾಲಯದಲ್ಲಿ ಯಾವ ಚರ್ಚೆಯು ನಡೆಯುತ್ತಿತ್ತು, ಮತ್ತು ಯಾಕೆ?

▪ ಶನಿವಾರದ ಬದಲು ಯೇಸುವು ಬೇಥಾನ್ಯಕ್ಕೆ ಶುಕ್ರವಾರ ಯಾಕೆ ಬಂದನು?

▪ ಬೇಥಾನ್ಯಕ್ಕೆ ಬಂದಾಗ, ಅವನು ಸಬ್ಬತ್‌ನ್ನು ಎಲ್ಲಿ ಕಳೆದಿರಬೇಕು?

▪ ಮರಿಯಳ ಯಾವ ಕೃತ್ಯವು ವಾಗ್ವಾದವನ್ನು ಎಬ್ಬಿಸಿತು, ಮತ್ತು ಯೇಸುವು ಅವಳಿಗೆ ಬೆಂಬಲವನ್ನಿತ್ತದ್ದು ಹೇಗೆ?

▪ ಮಹಾ ಯಾಜಕರ ಅತೀ ದುಷ್ಟತನವು ಹೇಗೆ ಉದಾಹರಿಸಲ್ಪಟ್ಟಿದೆ?