ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವು ಪುನಃ ಯೆರೂಸಲೇಮಿಗೆ ಹೊರಡುತ್ತಾನೆ

ಯೇಸುವು ಪುನಃ ಯೆರೂಸಲೇಮಿಗೆ ಹೊರಡುತ್ತಾನೆ

ಅಧ್ಯಾಯ 82

ಯೇಸುವು ಪುನಃ ಯೆರೂಸಲೇಮಿಗೆ ಹೊರಡುತ್ತಾನೆ

ಯೇಸುವು ಬಲುಬೇಗನೆ ಪುನಃ ರಸ್ತೆಗೆ ಇಳಿಯುತ್ತಾನೆ, ಅಂದರೆ ಊರೂರಿಗೂ ಗ್ರಾಮಗ್ರಾಮಕ್ಕೂ ಹೋಗಿ ಉಪದೇಶಮಾಡುತ್ತಿದ್ದನು. ಅವನು, ಯೂದಾಯದಿಂದ ಯೊರ್ದನ್‌ ನದಿಯ ಆಚೇ ಪಕ್ಕದ ಪೆರಿಯ ಪ್ರಾಂತ್ಯದಲ್ಲಿದ್ದನು ಎಂದು ರುಜುವಾಗುತ್ತದೆ. ಆದರೆ ಅವನ ಪ್ರಯಾಣದ ಕೊನೆಯು ಯೆರೂಸಲೇಮ್‌ ಆಗಿತ್ತು.

ಕೇವಲ ಮಿತ ಸಂಖ್ಯೆಯವರು ಮಾತ್ರ ರಕ್ಷಣೆಗೆ ಬಾಧ್ಯರಾಗುವರು ಎಂಬ ಯೆಹೂದ್ಯರ ತತ್ವಜ್ಞಾನವು ಪ್ರಾಯಶಃ ಈ ಮನುಷ್ಯನನ್ನು ಹೀಗೆ ಕೇಳುವದಕ್ಕೆ ಪ್ರೇರಿಸಿರಬೇಕು: “ಸ್ವಾಮೀ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ತನ್ನ ಉತ್ತರದೊಂದಿಗೆ, ರಕ್ಷಣೆಗಾಗಿ ಏನು ಆವಶ್ಯಕತೆ ಇದೆ ಎಂದು ಜನರು ಯೋಚಿಸುವಂತೆ ಯೇಸುವು ಪ್ರತಿಬಂಧಿಸುತ್ತಾನೆ: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ ಹೆಣಗಾಡಿರಿ. [ಅಂದರೆ ಹೋರಾಡು, ಯಾ ನೋವಿನ ಒದ್ದಾಟಮಾಡು].”

ಅಂಥ ಹೆಣಗಾಟದ ಪ್ರಯತ್ನವು ಜರೂರಿಯದ್ದು, ಏಕಂದರೆ “ಬಹುಜನ,” ಯೇಸುವು ಮುಂದರಿಸಿದ್ದು, “ಒಳಕ್ಕೆ ಹೋಗುವದಕ್ಕೆ ನೋಡುವರು, ಆದರೆ ಅವರಿಂದಾಗುವದಿಲ್ಲ.” ಅವರಿಂದ ಆಗುವದಿಲ್ಲ ಯಾಕೆ? ಅವನು ವಿವರಿಸುವದೇನಂದರೆ “ಒಮ್ಮೆ ಮನೇಯಜಮಾನನು ಎದ್ದು ಕದಾ ಹಾಕಿ ಕೊಂಡಮೇಲೆ ನೀವು ಹೊರಗೆ ನಿಂತುಕೊಂಡು ಕದತಟ್ಟಿ—ಸ್ವಾಮೀ, ನಮಗೆ ತೆರೆಯಿರಿ ಎಂದು ಹೇಳುವದಕ್ಕೆ ತೊಡಗುವಾಗ ಅವನು—ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ; ಅಧರ್ಮ ಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ ಅಂದಾನು.”

ಬಾಗಲಿನ ಹೊರಗೆ ಬೀಗ ಹಾಕಲ್ಪಟ್ಟವರು, ತಮಗೆ ಅನುಕೂಲವಾದ ಸಮಯದಲ್ಲಿ ಮಾತ್ರ ಬಂದವರು ಎಂದು ವ್ಯಕ್ತವಾಗುತ್ತದೆ. ಆದರೆ ಅಷ್ಟರೊಳಗೆ ಆವಕಾಶದ ದ್ವಾರವು ಮುಚ್ಚಲ್ಪಟ್ಟಿತ್ತು ಮತ್ತು ಒಳಗಿನಿಂದ ಕದಾಹಾಕಲಾಗಿತ್ತು. ಒಳಗೆ ಪ್ರವೇಶಿಸಲು, ಅವರು ಮೊದಲು ಬರಬೇಕಿತ್ತು, ಹಾಗೆ ಮಾಡಲು ಅವರಿಗೆ ಅನಾನುಕೂಲವಾದರೂ ಕೂಡ. ಖಂಡಿತವಾಗಿಯೂ, ಜೀವಿತದಲ್ಲಿ ಯೆಹೋವನ ಆರಾಧನೆಯನ್ನು ಅವರ ಮುಖ್ಯ ಉದ್ದೇಶವನ್ನಾಗಿ ಮಾಡುವದನ್ನು ಮುಂದೂಡುತ್ತಿದ್ದವರಿಗೆ ಒಂದು ವಿಷಾದಕರ ಫಲಿತಾಂಶವು ಕಾದಿರುತ್ತದೆ!

ರಕ್ಷಣೆಗಾಗಿ ದೇವರ ಒದಗಿಸುವಿಕೆಗಳನ್ನು ಸ್ವೀಕರಿಸುವ ಅವರ ಅದ್ಭುತಕರ ಅವಕಾಶವನ್ನು ತಮ್ಮದಾಗಿ ಮಾಡಲು, ಯಾರ ಬಳಿಗೆ ಸೇವೆ ಮಾಡಲು ಯೇಸುವು ಕಳುಹಿಸಲ್ಪಟ್ಟನೋ ಆ ಯೆಹೂದ್ಯರಲ್ಲಿ ಅಧಿಕ ಸಂಖ್ಯಾತರು ತಪ್ಪಿಹೋದರು. ಆದುದರಿಂದ, ಅವರು ಹೊರಗೆ ಹಾಕಲ್ಪಟ್ಟಾಗ, ಗೋಳಾಡುವರು ಮತ್ತು ಕಟಕಟನೆ ಹಲ್ಲುಕಡಿಯುವರು ಎಂದು ಯೇಸುವು ಹೇಳುತ್ತಾನೆ. ಇನ್ನೊಂದು ಪಕ್ಕದಲ್ಲಿ “ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ” ಹೌದು, ಎಲ್ಲಾ ಜನಾಂಗಗಳಿಂದ ಜನರು, “ದೇವರ ರಾಜ್ಯದಲ್ಲಿ ಊಟಕ್ಕೆ ಕೂಡ್ರುವರು.”

ಯೇಸುವು ಮುಂದರಿಸುವದು: “ಕಡೆಯವರಾಗಿರುವ [ತುಚ್ಛೀಕರಿಸಲ್ಪಟ್ಟ ಯೆಹೂದ್ಯೇತರರು, ಹಾಗೂ ಕೆಳಗೆ ತುಳಿಯಲ್ಪಟ್ಟ ಯೆಹೂದ್ಯರು ಕೂಡ] ಕೆಲವರು ಮೊದಲಿನವರಾಗುವರು; ಮೊದಲಿನವರಾಗಿರುವ [ಪ್ರಾಪಂಚಿಕವಾಗಿ ಮತ್ತು ಧಾರ್ಮಿಕವಾಗಿ ಉತ್ತಮವಾಗಿರುವ ಯೆಹೂದ್ಯರು] ಕೆಲವರು ಕಡೆಯವರಾಗುವರು.” ಅವರು ಕಡೆಯವರಾಗುವದು ಅಂದರೆ ಅಂಥಾ ಆಲಸಿಗಳಾದ ಮತ್ತು ಕೃತಜ್ಞತೆಯಿಲ್ಲದವರು ದೇವರ ರಾಜ್ಯದಲ್ಲಿ ಎಂದೆಂದಿಗೂ ಇರುವದಿಲ್ಲ ಎಂದರ್ಥವಾಗಿದೆ.

ಫರಿಸಾಯರು ಈಗ ಯೇಸುವಿನ ಹತ್ತರ ಬಂದು, ಹೇಳುವದು: “ನೀನು ಇಲ್ಲಿಂದ ಹೊರಟು ಹೋಗು, ಹೆರೋದನು [ಅಂತಿಫನು] ನಿನ್ನನ್ನು ಕೊಲ್ಲಬೇಕೆಂದಿದ್ದಾನೆ.” ಆ ಕ್ಷೇತ್ರದಿಂದ ಯೇಸುವು ಪಲಾಯನ ಮಾಡುವಂತೆ ಹೆರೋದನು ಸ್ವತಃ ಈ ಗಾಳೀಸುದ್ದಿಯನ್ನು ಹೊರಡಿಸಿರಬಹುದು. ಸ್ನಾನಿಕನಾದ ಯೋಹಾನನ ಕೊಲೆಯಲ್ಲಿ ಆತನು ಈಗಾಗಲೇ ಒಳಗೂಡಿದ್ದಂತೆ, ದೇವರ ಇನ್ನೊಬ್ಬ ಪ್ರವಾದಿಯ ಕೊಲೆಯಲ್ಲಿ ಒಳಗೂಡುವುದಕ್ಕೆ ಹೆರೋದನು ಹೆದರಿರಬಹುದು. ಆದರೆ ಯೇಸುವು ಫರಿಸಾಯರಿಗೆ ಹೇಳುವದು: “ನೀವು ಹೋಗಿ—ಇಗೋ ನಾನು ಈ ಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಗಳನ್ನು ವಾಸಿಮಾಡುತ್ತಾ ಇದ್ದು ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ ಎಂದು ಆ ನರಿಗೆ ಹೇಳಿರಿ.”

ಅವನ ಕೆಲಸವನ್ನು ಅಲ್ಲಿ ಮುಗಿಸಿದ ನಂತರ, ಯೇಸುವು ಯೆರೂಸಲೇಮಿನ ಕಡೆಗಿನ ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ, ಅವನು ವಿವರಿಸುವದು, “ಪ್ರವಾದಿಯಾದವನು ಯೆರೂಸಲೇಮಿನಲ್ಲಿಯೇ ಹೊರತು ಬೇರೆ ಪಟ್ಟಣದಲ್ಲಿ ಕೊಲ್ಲಲ್ಪಡಕೂಡದಷ್ಟೇ.” ಯೆರೂಸಲೇಮಿನಲ್ಲಿ ಯೇಸುವು ಕೊಲ್ಲಲ್ಪಡಲಿದ್ದಾನೆಂದು ಯಾಕೆ ನಿರೀಕ್ಷಿಸತಕ್ಕದ್ದು? ಯಾಕಂದರೆ 71 ಸದಸ್ಯರ ಸನ್ಹೇದ್ರಿನ್‌ ಉಚ್ಛ ನ್ಯಾಯಾಲಯವು ಕೇಂದ್ರ ನಗರವಾದ ಯೆರೂಸಲೇಮಿನಲ್ಲಿ ಇತ್ತು ಮತ್ತು ಅಲ್ಲಿ ಪ್ರಾಣಿ ಯಜ್ಞಗಳು ಅರ್ಪಿಸಲ್ಪಡುತ್ತಿದ್ದವು. ಆದಕಾರಣ, ಯೆರೂಸಲೇಮ್‌ ಬಿಟ್ಟು “ದೇವರ ಕುರಿಮರಿಯು” ಬೇರೆಲ್ಲಿಯೂ ಕೊಲ್ಲಲ್ಪಡುವದು ಅಂಗೀಕಾರವಾಗಿರುವದಿಲ್ಲ.

“ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ,” ಯೇಸುವು ಪ್ರಲಾಪಿಸುವದು, “ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ! ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” ದೇವರ ಮಗನನ್ನು ನಿರಾಕರಿಸಿರುವದಕ್ಕಾಗಿ, ಜನಾಂಗವೇ ನಾಶವಾಗಲಿಕ್ಕಿತ್ತು!

ಯೇಸುವು ಯೆರೂಸಲೇಮಿನ ಕಡೆಗೆ ಮುಂದುವರಿಯುತ್ತಾ ಇರುವಾಗ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಆಮಂತ್ರಿಸಲ್ಪಟ್ಟನು. ಅದು ಸಬ್ಬತ್‌ ದಿನವಾಗಿತ್ತು, ಮತ್ತು ಜನರು ಅವನನ್ನು ಬಹಳ ನಿಕಟವಾಗಿ ನೋಡುತ್ತಾ ಇದ್ದರು, ಯಾಕಂದರೆ ಅಲ್ಲಿ ಜಲೋದರ ರೋಗದಿಂದ, ಪ್ರಾಯಶಃ ಕೈಕಾಲುಗಳಲ್ಲಿ ನೀರು ತುಂಬಿ ಬಾಧೆ ಪಡುತ್ತಿದ್ದ ಒಬ್ಬ ಮನುಷ್ಯನು ಇದ್ದನು. ಯೇಸುವು ಹಾಜರಿದ್ದ ಫರಿಸಾಯರಿಗೂ, ಧರ್ಮೋಪದೇಶಕರಿಗೂ [ಶಾಸ್ತ್ರದ ವಕೀಲರು] ಸಂಬೋಧಿಸುತ್ತಾ, ಕೇಳುವದು: “ಸಬ್ಬತ್‌ ದಿನದಲ್ಲಿ ಸ್ವಸ್ಥಮಾಡುವದು ಸರಿಯೋ? ಸರಿಯಲ್ಲವೋ?”

ಯಾರೇ ಒಬ್ಬರು ಒಂದು ಮಾತನ್ನೂ ಹೇಳುವದಿಲ್ಲ. ಆದುದರಿಂದ ಯೇಸುವು ಆ ಮನುಷ್ಯನನ್ನು ಗುಣಪಡಿಸಿ, ಕಳುಹಿಸುತ್ತಾನೆ. ಅನಂತರ ಅವನು ಕೇಳುವದು: “ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್‌ ದಿನದಲ್ಲಾದರೂ ಮೇಲಕ್ಕೆ ತೆಗೆಯುದಿಲ್ಲವೇ?” ಪುನಃ ಯಾರೊಬ್ಬನೂ ಒಂದು ಮಾತನ್ನೂ ಆಡಲಿಲ್ಲ. ಲೂಕ 13:22–14:6; ಯೋಹಾನ 1:29.

▪ ರಕ್ಷಣೆಗೆ ಏನು ಬೇಕು ಎಂದು ಯೇಸುವು ಹೇಳುತ್ತಾನೆ, ಮತ್ತು ಯಾಕೆ ಬಹುಜನ ಹೊರಗೆ ಇದ್ದು, ಬೀಗ ಹಾಕಲ್ಪಟ್ಟಿತು?

▪ ಮೊದಲಿನವರಾಗುವ “ಕಡೆಯವರು” ಯಾರು, ಮತ್ತು ಕಡೆಯವರಾಗುವ “ಮೊದಲಿನವರು” ಯಾರು?

▪ ಯೇಸುವನ್ನು ಹೆರೋದನು ಕೊಲ್ಲಲಿದ್ದಾನೆ ಎಂದು ಹೇಳಲ್ಪಟ್ಟದ್ದು ಬಹುಶಃ ಯಾಕಾಗಿರಬಹುದು?

▪ ಯೆರೂಸಲೇಮಿನ ಹೊರಗೆ ಪ್ರವಾದಿಯು ಕೊಲ್ಲಲ್ಪಡಕೂಡದು ಯಾಕೆ?