ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವ್ಯಾವಹಾರಿಕ ವಿವೇಕದಿಂದ ಭವಿಷ್ಯಕ್ಕಾಗಿ ಸಿದ್ಧಮಾಡಿ

ವ್ಯಾವಹಾರಿಕ ವಿವೇಕದಿಂದ ಭವಿಷ್ಯಕ್ಕಾಗಿ ಸಿದ್ಧಮಾಡಿ

ಅಧ್ಯಾಯ 87

ವ್ಯಾವಹಾರಿಕ ವಿವೇಕದಿಂದ ಭವಿಷ್ಯಕ್ಕಾಗಿ ಸಿದ್ಧಮಾಡಿ

ಯೇಸು ಈಗಾಗಲೇ ಪೋಲಿ ಹೋದ ಮಗನ ಕಥೆಯನ್ನು ಅವನ ಶಿಷ್ಯರು, ಅಪ್ರಾಮಾಣಿಕ ಸುಂಕದವರು, ಇತರ ಹೆಸರುಗೊಂಡ ಪಾಪಿಗಳು, ಶಾಸ್ತ್ರಿಗಳು ಮತ್ತು ಫರಿಸಾಯರು ಒಳಗೂಡಿರುವ ಜನಸಮೂಹಕ್ಕೆ ಹೇಳಿ ಮುಗಿಸಿದ್ದನು. ಈಗ, ಅವನ ಶಿಷ್ಯರಿಗೆ ಸಂಬೋಧಿಸುತ್ತಾ, ಒಬ್ಬ ಐಶ್ವರ್ಯವಂತ ಮನುಷ್ಯನು ಅವನ ಮನೆಯ ಮೇಲ್ವಿಚಾರಕ ಇಲ್ಲವೇ ಮನೆವಾರ್ತೆಯವನ ಕುರಿತು ಒಂದು ಅಯೋಗ್ಯವಾದ ವರದಿಯನ್ನು ಪಡೆಯುವದರ ಬಗ್ಗೆ ಒಂದು ಸಾಮ್ಯವನ್ನು ಯೇಸುವು ಹೇಳುತ್ತಾನೆ.

ಯೇಸುವಿಗನುಸಾರ, ಈ ಐಶ್ವರ್ಯವಂತನು ತನ್ನ ಮನೆವಾರ್ತೆಯವನನ್ನು ಕರೆದು, ಅವನನ್ನು ಕೆಲಸದಿಂದ ತಾನು ವಜಾಮಾಡಲಿಕ್ಕಿದ್ದೇನೆಂದು ಹೇಳುತ್ತಾನೆ. “ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಮನೆವಾರ್ತೆಕೆಲಸವನ್ನು ತೆಗೆದುಬಿಡುತ್ತಾನಲ್ಲಾ,” ಎಂದು ಮನೆವಾರ್ತೆಯವನು ಚಿಂತಿಸುತ್ತಾನೆ. “ಅಗಿಯುವದಕ್ಕೆ ನನಗೆ ಬಲವಿಲ್ಲ; ಭಿಕ್ಷಾ ಬೇಡುವದಕ್ಕೆ ನನಗೆ ನಾಚಿಕೆಯಾಗುತ್ತದೆ. ಈ ಮನೆವಾರ್ತೆ ಕೆಲಸದಿಂದ ನನ್ನನ್ನು ತೆಗೆದ ಮೇಲೆ ಜನರು ನನ್ನನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳುವಂತೆ ನಾನು ಮಾಡಬೇಕಾದದ್ದು ಗೊತ್ತಾಯಿತು.”

ಮನೆವಾರ್ತೆಯವನ ಯೋಜನೆಯೇನಾಗಿತ್ತು? ಅವನು ತನ್ನ ಯಜಮಾನನ ಸಾಲವನ್ನು ತೀರಿಸಲಿರುವವರನ್ನೆಲ್ಲಾ ಕರೆಯುತ್ತಾನೆ. “ನೀನು ನನ್ನ ಯಜಮಾನನಿಗೆ ಏನು ಕೊಡಬೇಕು?” ಎಂದವನು ಕೇಳುತ್ತಾನೆ.

ಮೊದಲನೆಯವನು ಉತ್ತರಿಸುವದು, ‘ನೂರು ಬುದ್ದಲಿ ಎಣ್ಣೆ.’

‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಕೂತುಕೊಂಡು ಐವತ್ತು ಬುದ್ದಲಿ ಎಂದು ಬರಿ,’ ಎಂದು ಹೇಳುತ್ತಾನೆ.

ಅವನು ಮತ್ತೊಬ್ಬನನ್ನು ಕೇಳುವದು: ‘ನೀನು ಏನು ಕೊಡಬೇಕು?’

ಅವನು ಉತ್ತರಿಸುವದು, ‘100 ಖಂಡಗ ಗೋದಿ.’

‘ಈ ನಿನ್ನ ಪತ್ರವನ್ನು ತೆಗೆದುಕೊಂಡು 80 ಖಂಡಗ ಅಂತ ಬರಿ.’

ಅವನ ಯಜಮಾನನ ಆರ್ಥಿಕ ವ್ಯವಹಾರಗಳ ಮೇಲೆ ಇವನಿಗೆ ಉಸ್ತುವಾರಿ ಇದ್ದುದರಿಂದ, ಅವನ ಯಜಮಾನನಿಗೆ ಕೊಡಬೇಕಾದ ಸಾಲದ ಪತ್ರವನ್ನು ಕಡಿಮೆಗೊಳಿಸುವ ಹಕ್ಕು ಮನೆವಾರ್ತೆಯವನಿಗೆ ಇತ್ತು. ಮೊತ್ತಗಳನ್ನು ಕಡಿಮೆಗೊಳಿಸುವದರಿಂದ, ಅವನು ತನ್ನ ಕೆಲಸವನ್ನು ಕಳಗೊಳ್ಳುವಾಗ, ಅವನಿಗೆ ಸಹಾಯಮಾಡಲು ಶಕ್ತರಾಗಿರುವವರೊಂದಿಗೆ ಅವನು ಸ್ನೇಹವನ್ನು ಮಾಡುತ್ತಾನೆ.

ಸಂಭವಿಸಿರುವ ಸಂಗತಿಯನ್ನು ಯಜಮಾನನು ಕೇಳಿದಾಗ, ಅವನು ಪ್ರಭಾವಿತನಾದನು. ವಾಸ್ತವದಲ್ಲಿ ಅವನು “ಅನ್ಯಾಯಗಾರನಾದ ಮನೆವಾರ್ತೆಯವನನ್ನು—ಇವನು ಜಾಣತನ ಮಾಡಿದನು[ವ್ಯಾವಹಾರಿಕ ವಿವೇಕದಿಂದ ವರ್ತಿಸಿದನು,  NW] ಎಂದು ಹೊಗಳಿದನು.” ಖಂಡಿತವಾಗಿ ಯೇಸುವು ಕೂಡಿಸುವದು: “ಈ ವಿಷಯಗಳ ವ್ಯವಸ್ಥೆಯ ಪುತ್ರರು ತಮ್ಮಂಥವರ ವಿಷಯದಲ್ಲಿ ಬೆಳಕಿನ ರಾಜ್ಯದ ಪುತ್ರರಿಗಿಂತಲೂ ವ್ಯಾವಹಾರಿಕ ರೀತಿಯಲ್ಲಿ ಹೆಚ್ಚು ವಿವೇಕಿಗಳಾಗಿದ್ದಾರೆ.” (NW)

ಈಗ ಅವನ ಶಿಷ್ಯರಿಗಾಗಿ ಒಂದು ಪಾಠವನ್ನು ಕಲಿಸುತ್ತಾ, ಯೇಸುವು ಪ್ರೋತ್ಸಾಹಿಸುವದು: “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಹೀಗೆ ಮಾಡಿದರೆ ಅದು ನಿಮ್ಮನ್ನು ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನದಲ್ಲಿ ಸೇರಿಸಿಕೊಳ್ಳುವರು.”

ಮನೆವಾರ್ತೆಯವನ ಅನ್ಯಾಯಕ್ಕಾಗಿ ಅಲ್ಲ, ಬದಲಾಗಿ ಅವನ ದೂರದೃಷ್ಟಿಗಾಗಿ, ವ್ಯಾವಹಾರಿಕ ವಿವೇಕಕ್ಕಾಗಿ ಯೇಸುವು ಅವನಿಗೆ ಮೆಚ್ಚಿಕೆ ವ್ಯಕ್ತಪಡಿಸುತ್ತಾನೆ. ಕೆಲವೊಮ್ಮೆ “ಈ ವಿಷಯಗಳ ವ್ಯವಸ್ಥೆಯ ಪುತ್ರರು” ಅವರಲ್ಲಿರುವ ಹಣ ಇಲ್ಲವೇ ಸ್ಥಾನಮಾನವನ್ನು, ಅವರಿಗೆ ಬದಲಿಯಾಗಿ ಸಹಾಯಗಳನ್ನು ಹಿಂತೆರಳಿಸುವವರೊಂದಿಗೆ ಸ್ನೇಹತನ ಮಾಡಿಕೊಳ್ಳಲು ಜಾಣತನದಿಂದ ಬಳಸುತ್ತಾರೆ. ಆದುದರಿಂದ, ದೇವರ ಸೇವಕರು, “ಬೆಳಕಿನ ಪುತ್ರರು” ಕೂಡ ಅವರ ಪ್ರಾಪಂಚಿಕ ಧನಸಂಪತ್ತುಗಳನ್ನು, ಅವರ “ಅನ್ಯಾಯದ ಧನವನ್ನು” ಸ್ವತಃ ಅವರಿಗೆ ಪ್ರಯೋಜನವಾಗುವಂತಹ ರೀತಿಯಲ್ಲಿ ವಿವೇಕದಿಂದ ಬಳಸುವ ಜರೂರಿಯಿದೆ.

ಆದರೆ ಯೇಸುವು ಹೇಳುವಂತೆ, ಅವರನ್ನು “ಶಾಶ್ವತವಾದ ವಾಸಸ್ಥಾನದಲ್ಲಿ” ಸೇರಿಸಿಕೊಳ್ಳುವವರನ್ನು ಅವರು ಈ ಐಶ್ವರ್ಯದ ಮೂಲಕ ತಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳತಕ್ಕದ್ದು. ಚಿಕ್ಕ ಹಿಂಡಿನ ಸದಸ್ಯರುಗಳಿಗೆ ಈ ವಾಸಸ್ಥಾನಗಳು ಸ್ವರ್ಗದಲ್ಲಿರುತ್ತವೆ; “ಬೇರೆ ಕುರಿಗಳಿಗೆ” ಅವು ಪರದೈಸ ಭೂಮಿಯಲ್ಲಿರುತ್ತವೆ. ಈ ಸ್ಥಾನಗಳಿಗೆ ಸೇರಿಸಿಕೊಳ್ಳಲು ಕೇವಲ ಯೆಹೋವ ದೇವರು ಮತ್ತು ಅವನ ಮಗನು ಮಾತ್ರ ಶಕ್ತರಾಗಿರುವದರಿಂದ, ರಾಜ್ಯದ ಹಿತಾಸಕ್ತಿಗಳ ನಮ್ಮ ಬೆಂಬಲವಾಗಿ ಯಾವುದೇ “ಅನ್ಯಾಯದ ಧನ”ವನ್ನು ಉಪಯೋಗಿಸುವದರಿಂದ ಅವರೊಂದಿಗೆ ಗೆಳೆತನವನ್ನು ಬೆಳಸಲು ನಾವು ಶ್ರಮಿಸತಕ್ಕದ್ದು. ಅನಂತರ ಪ್ರಾಪಂಚಿಕ ಐಶ್ವರ್ಯವು ಪ್ರಯೋಜನವಿಲ್ಲದಾಗ ಇಲ್ಲವೇ ನಾಶಗೊಂಡಾಗ,—ಅದು ಆಗುವದು ಖಂಡಿತ—ನಮ್ಮ ಶಾಶ್ವತ ಭವಿಷ್ಯವು ವಾಗ್ದಾನಿಸಲ್ಪಟ್ಟಿರುತ್ತದೆ.

ಈ ಪ್ರಾಪಂಚಿಕ ವಸ್ತುಗಳ, ಇಲ್ಲವೆ ಸ್ವಲ್ಪವಾದವುಗಳ ಜಾಗ್ರತೆ ವಹಿಸುವದರಲ್ಲಿ ನಂಬಿಗಸ್ತರಾಗಿರುವ ವ್ಯಕ್ತಿಗಳು, ಅಧಿಕ ಪ್ರಾಮುಖ್ಯತೆಯ ವಿಷಯಗಳ ಜಾಗ್ರತೆ ವಹಿಸುವದರಲ್ಲಿಯೂ ನಂಬಿಗಸ್ತರಾಗಿರುವರು. “ಹೀಗಿರುವದರಿಂದ” ಅವನು ಮುಂದುವರಿಸುವದು, “ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲವಾದರೆ ನಿಜವಾದ ಧನವನ್ನು [ಅದು, ಆತ್ಮಿಕ, ಇಲ್ಲವೇ ರಾಜ್ಯದ ಅಭಿರುಚಿಗಳು] ನಿಮ್ಮ ವಶಕ್ಕೆ ಯಾರು ಕೊಟ್ಟಾರು? ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ [ದೇವರು ತನ್ನ ಸೇವಕರಿಗೆ ಒಪ್ಪಿಸುವ ರಾಜ್ಯದ ಅಭಿರುಚಿಗಳು] ನೀವು ನಂಬಿಗಸ್ತರಲ್ಲವಾದರೆ ನಿಮ್ಮದನ್ನು [ಶಾಶ್ವತ ವಾಸಸ್ಥಾನಗಳಲ್ಲಿ ಜೀವದ ಬಹುಮಾನ] ನಿಮಗೆ ಯಾರು ಕೊಟ್ಟಾರು?”

ನಾವು ದೇವರ ನಿಜಸೇವಕರೂ, ಮತ್ತು ಅದೇ ಸಮಯದಲ್ಲಿ ಅನ್ಯಾಯದ ಧನದ ಯಾ ಪ್ರಾಪಂಚಿಕ ಐಶ್ವರ್ಯಗಳ ಸೇವಕರೂ ಆಗಿ ಇರಸಾಧ್ಯವಿಲ್ಲ ಎಂಬುದು ಸರಳ. ಯೇಸುವು ಕೊನೆಗೊಳಿಸುವದು: “ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” ಲೂಕ 15:1, 2; 16:1-13; ಯೋಹಾನ 10:16.

▪ ಯೇಸುವಿನ ಸಾಮ್ಯದ ಮನೆವಾರ್ತೆಯವನು, ತದನಂತರ ಅವನಿಗೆ ಸಹಾಯಮಾಡಶಕ್ತರಾಗುವವರನ್ನು ಹೇಗೆ ತನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾನೆ?

▪ “ಅನ್ಯಾಯದ ಧನ,” ಏನಾಗಿರುತ್ತದೆ, ಮತ್ತು ಅವುಗಳ ಮೂಲಕ ನಾವು ಹೇಗೆ ಸ್ನೇಹಿತರನ್ನು ಮಾಡಿಕೊಳ್ಳಬಹುದು?

▪ “ಶಾಶ್ವತವಾದ ವಾಸಸ್ಥಾನಗಳಲ್ಲಿ” ನಮ್ಮನ್ನು ಯಾರು ಸೇರಿಸಿಕೊಳ್ಳಶಕ್ತರು, ಮತ್ತು ಈ ಸ್ಥಾನಗಳು ಯಾವವು?