ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷದ ಮೂಲ

ಸಂತೋಷದ ಮೂಲ

ಅಧ್ಯಾಯ 75

ಸಂತೋಷದ ಮೂಲ

ಗಲಿಲಾಯದ ಅವನ ಶುಶ್ರೂಷೆಯ ಸಮಯಾವಧಿಯಲ್ಲಿ, ಯೇಸುವು ಅದ್ಭುತಗಳನ್ನು ನಡಿಸಿದನು ಮತ್ತು ಅದನ್ನವನು ಈಗ ಯೂದಾಯದಲ್ಲಿಯೂ ಪುನರಾವರ್ತಿಸುತ್ತಾನೆ. ಉದಾಹರಣೆಗೆ, ಮನುಷ್ಯನೊಬ್ಬನಿಗೆ ಮಾತಾಡಲು ಅಡ್ಡಿಮಾಡುತ್ತಿದ್ದ ದೆವ್ವವನ್ನು ಅವನಿಂದ ಹೊರಡಿಸಿದನು. ಜನರ ಗುಂಪು ಆಶ್ಚರ್ಯ ಪಟ್ಟಿತ್ತು, ಆದರೆ ಗಲಿಲಾಯದಲ್ಲಿ ಎಬ್ಬಿಸಿದ ಅದೇ ಅಡ್ಡಿಯನ್ನು ಠೀಕಿಸುವವರು ಇಲ್ಲಿಯೂ ಎಬ್ಬಿಸಿದರು. “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದವರು ಆಪಾದಿಸಿದರು. ಅವನ ಪರಿಚಯದ ಕುರಿತಾಗಿ ಇನ್ನಿತರರು ಇನ್ನೂ ಹೆಚ್ಚಿನ ಸಾಕ್ಷ್ಯವನ್ನು ಬಯಸಿದರು, ಮತ್ತು ಆಕಾಶದಿಂದ ಒಂದು ಸೂಚಕಕಾರ್ಯವನ್ನು ಮಾಡಿ ತೋರಿಸಲು ಕೇಳುವದರ ಮೂಲಕ ಅವರು ಅವನನ್ನು ಶೋಧಿಸಲು ಪ್ರಯತ್ನಿಸಿದರು.

ಅವರ ಆಲೋಚನೆಗಳನ್ನು ತಿಳುಕೊಂಡು, ಗಲಿಲಾಯದವರಿಗೆ ಅವನು ಕೊಟ್ಟಂಥ ಅದೇ ಉತ್ತರವನ್ನು ಯೂದಾಯದಲ್ಲಿನ ಠೀಕಾಗಾರರಿಗೆ ಅವನು ನೀಡುತ್ತಾನೆ. ತನ್ನಲ್ಲಿ ಭೇದ ಹುಟ್ಟಿದ ರಾಜ್ಯವು ಸ್ವತಃ ಹಾಳಾಗುತ್ತದೆ. “ಅದರಂತೆ,” ಅವನು ಕೇಳುವದು, “ಸೈತಾನನು ತನ್ನಲ್ಲಿ ಭೇದ ಹುಟ್ಟಿಸಿ ಕೊಂಡರೆ ಅವನ ರಾಜ್ಯವು ಹೇಗೆ ಉಳಿದೀತು?” ಅವನ ಠೀಕಾಕಾರರ ಅಪಾಯಕರ ಸ್ಥಾನವನ್ನು ತೋರಿಸುತ್ತಾ ಅವನನ್ನುವದು: “ನಾನು ದೇವರ ಬಲದಿಂದಲೇ [ಬೆರಳಿನಿಂದ] ದೆವ್ವಗಳನ್ನು ಬಿಡಿಸುವದಾದರೆ ದೇವರ ರಾಜ್ಯವು ನಿಮ್ಮ ಹತ್ತರಕ್ಕೆ ಬಂತಲ್ಲಾ. [ನಿಮ್ಮನ್ನು ದಾಟಿ ಮುಂದೆ ಹೋಗಿದೆ, NW]”

ಯೇಸುವಿನ ಅದ್ಭುತಗಳನ್ನು ಅವಲೋಕಿಸುತಿದ್ದವರು, ಹಲವಾರು ಶತಕಗಳ ಮೊದಲು ಮೋಶೆಯು ನಡಿಸಿದ ಒಂದು ಮಹತ್ಕಾರ್ಯವನ್ನು ನೋಡಿ ಹೇಗೆ ಅಂದಿನವರು ಪ್ರತಿವರ್ತಿಸಿದರೋ, ತದ್ರೀತಿಯಲ್ಲಿ ಪ್ರತಿವರ್ತಿಸಬೇಕಿತ್ತು. ಅವರು ಉದ್ಘೋಷಿಸಿದ್ದು: “ಇದು ದೇವರ ಕೈಕೆಲಸವೇ [ಬೆರಳೇ]!” ಕಲ್ಲಿನ ಹಲಿಗೆಗಳ ಮೇಲೆ ದಶಾಜ್ಞೆಗಳು ಕೆತ್ತಲ್ಪಟ್ಟದ್ದು “ದೇವರ ಬೆರಳಿನಿಂದಲೇ.” ಮತ್ತು “ದೇವರ ಬೆರಳು”—ಅವನ ಪವಿತ್ರಾತ್ಮ ಇಲ್ಲವೇ ಕಾರ್ಯಕಾರಿ ಶಕ್ತಿಯು—ದೆವ್ವಗಳನ್ನು ಬಿಡಿಸಲು ಮತ್ತು ರೋಗಿಗಳನ್ನು ಗುಣಪಡಿಸಲು ಯೇಸುವಿಗೆ ಸಾಮರ್ಥ್ಯವನ್ನು ಕೊಟ್ಟದ್ದಾಗಿದೆ. ಆದುದರಿಂದ ಈ ಠೀಕಾಕಾರರನ್ನು ಖಂಡಿತವಾಗಿಯೂ ದೇವರ ರಾಜ್ಯವು ದಾಟಿ ಮುಂದಕ್ಕೆ ಹೋಗಿದೆ, ಯಾಕಂದರೆ ರಾಜ್ಯದ ರಾಜನಾಗಿ ನೇಮಿತನಾದ ಯೇಸುವು ಅವರ ಮಧ್ಯದಲ್ಲಿ ಅಲ್ಲಿಯೇ ಇದ್ದನು.

ದೆವ್ವಗಳನ್ನು ಬಿಡಿಸಲು ಅವನಿಗಿರುವ ಸಾಮರ್ಥ್ಯವು, ಸೈತಾನನ ಮೇಲೆ ತನಗಿರುವ ಅಧಿಕಾರದ ರುಜುವಾತಾಗಿದೆ ಎಂದು ತೋರಿಸಲು, ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಅರಮನೆಯನ್ನು ಕಾಪಾಡಿಕೊಳ್ಳುವವನನ್ನು ಅವನಿಗಿಂತಲೂ ಬಲಿಷ್ಠನು ಬಂದು ಹೇಗೆ ಸೋಲಿಸುತ್ತಾನೋ ಹಾಗೆಯೇ ಎಂದು ಯೇಸುವು ಉದಾಹರಿಸುತ್ತಾನೆ. ಒಂದು ಅಶುದ್ಧಾತ್ಮದ ಕುರಿತು ಗಲಿಲಾಯದಲ್ಲಿ ಹೇಳಿದ್ದನ್ನು ಇಲ್ಲಿಯೂ ಪುನರಾವರ್ತಿಸುತ್ತಾನೆ. ದೆವ್ವವು ಮನುಷ್ಯನನ್ನು ಬಿಟ್ಟು ಹೋಗುತ್ತದೆ, ಆದರೆ ಆ ಮನುಷ್ಯನು ಶೂನ್ಯತೆಯಾಗಿರುವದನ್ನು ಉತ್ತಮ ವಸ್ತುಗಳಿಂದ ತುಂಬಿಸದೆ ಇರುವದರಿಂದ, ಆ ದೆವ್ವವು ಇತರ ಏಳು ದೆವ್ವಗಳೊಂದಿಗೆ ಹಿಂತಿರುಗಿ ಬರುತ್ತದೆ, ಮತ್ತು ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವದು.

ಈ ಬೋಧನೆಗಳನ್ನು ಕೇಳುತ್ತಿರುವಾಗ, ಗುಂಪಿನಲ್ಲಿದ್ದ ಒಬ್ಬ ಸ್ತ್ರೀ ಗಟ್ಟಿಯಾಗಿ ಹೀಗೆ ಕೂಗುವಂತಾಯಿತು: “ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು!” ಒಬ್ಬ ಪ್ರವಾದಿಯ ಮತ್ತು ವಿಶೇಷವಾಗಿ ಮೆಸ್ಸೀಯನ ತಾಯಿಯಾಗಬೇಕೆಂದು ಪ್ರತಿಯೊಬ್ಬ ಯೆಹೂದಿ ಸ್ತ್ರೀಯ ಆಸೆಯಾಗಿತ್ತಾದರೂ, ಈ ಹೆಂಗಸು ಈ ರೀತಿ ಹೇಳುವದು ಯಾಕೆ ಎಂದು ಅರ್ಥೈಸಬಹುದಾದ ಒಂದು ವಿಷಯವಾಗಿದೆ. ಮರಿಯಳು ಯೇಸುವಿನ ತಾಯಿಯಾಗಿರುವದರಿಂದ ಅವಳು ವಿಶೇಷವಾಗಿ ಸಂತೋಷಿತಳು ಎಂದು ಪ್ರಾಯಶಃ ಈ ಸ್ತ್ರೀಯು ಎಣಿಸಿರಬೇಕು.

ಆದಾಗ್ಯೂ ಯೇಸುವು ಕೂಡಲೇ ನಿಜ ಸಂತೋಷದ ಮೂಲದ ಕುರಿತಾಗಿ ಆ ಸ್ತ್ರೀಯನ್ನು ಸರಿಪಡಿಸುತ್ತಾನೆ. “ಹಾಗನ್ನ ಬೇಡ,” ಅವನು ಉತ್ತರಿಸುತ್ತಾನೆ, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು [ಸಂತೋಷವುಳ್ಳವರು]!” ಅವನ ತಾಯಿಯಾಗಿದ್ದ ಮರಿಯಳಿಗೆ ವಿಶೇಷ ಗೌರವ ತೋರಿಸಬೇಕು ಎಂದು ಯೇಸುವು ಎಂದಿಗೂ ಒಳಾರ್ಥದಲ್ಲಿಯಾದರೂ ಸೂಚಿಸಲಿಲ್ಲ. ಅದಕ್ಕೆ ಬದಲಾಗಿ, ದೇವರ ಒಬ್ಬ ನಂಬಿಗಸ್ತ ಸೇವಕನಾಗಿ ಇರುವದರಿಂದ ನಿಜ ಸಂತೋಷವು ಬರುವದೇ ಹೊರತು ಯಾವುದೇ ಮಾಂಸಿಕ ಸಂಬಂಧವಾಗಲಿ ಯಾ ಪೂರೈಸುವಿಕೆಗಳಾಗಲಿ ಅಲ್ಲ.

ಗಲಿಲಾಯದಲ್ಲಿ ಅವನು ಮಾಡಿದಂತೆ, ಯೇಸುವು ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ಮಾಡಲು ಕೇಳಿದ್ದಕ್ಕಾಗಿ, ಯೂದಾಯದ ಜನರನ್ನು ಗದರಿಸುವದನ್ನು ಮುಂದುವರಿಸುತ್ತಾನೆ. ಯೋನನಲ್ಲಿ ಆದ ಸೂಚಕ ಕಾರ್ಯವೇ ಹೊರತು ಬೇರೆ ಯಾವದೂ ಸಿಕ್ಕುವದಿಲ್ಲ ಎಂದವರಿಗೆ ಅವನು ಹೇಳುತ್ತಾನೆ. ಅವನು ಮೂರು ದಿನ ಮೀನಿನ ಹೊಟ್ಟೆಯಲ್ಲಿದ್ದದ್ದು ಮತ್ತು ಅವನು ಧೈರ್ಯದಿಂದ ಸಾರಿದ್ದರಿಂದ ನಿನೆವೆಯವರು ಪಶ್ಚಾತ್ತಾಪ ಪಡುವಂತೆ ನಡಿಸಿದ್ದು, ಇವೆರಡೂ ಯೋನನಲ್ಲಿ ನಡೆದ ಒಂದು ಸೂಚಕ ಕಾರ್ಯವಾಗಿ ಪರಿಣಮಿಸಿತು. “ಆದರೆ ಇಲ್ಲಿ,” ಯೇಸುವು ಹೇಳುವದು, “ಯೋನನಿಗಿಂತಲೂ ಹೆಚ್ಚಿನವನಿದ್ದಾನೆ.” ತದ್ರೀತಿಯಲ್ಲಿ, ಶೆಬಾದ ರಾಣಿಯು ಸೊಲೊಮೋನನ ವಿವೇಕದಿಂದ ವಿಸ್ಮಿತಳಾದಳು. “ಆದರೆ ಇಲ್ಲಿ,” ಯೇಸುವು ಇದನ್ನೂ ಹೇಳುವದು, “ಸೊಲೊಮೋನನಿಗಿಂತಲೂ ಹೆಚ್ಚಿನವನಿದ್ದಾನೆ.”

ಒಬ್ಬ ಮನುಷ್ಯನು ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವದಿಲ್ಲ, ಬದಲು ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾನೆ ಎಂದು ಯೇಸುವು ವಿವರಿಸುತ್ತಾನೆ. ಅವನ ಸಭಿಕರಲ್ಲಿದ್ದ ಇಂಥಹ ಕಠಿಣಹೃದಯಿ ಜನರ ಮುಂದೆ ಮಹತ್ಕಾರ್ಯಗಳನ್ನು ಮಾಡುವದು ಮತ್ತು ಅವರಿಗೆ ಕಲಿಸುವದು ಒಂದು ದೀಪದ ಬೆಳಕನ್ನು ಅಡಗಿಸುವದಕ್ಕೆ ಸಮಾನವಾಗಿರುತ್ತದೆ ಎಂದವನು ಪ್ರಾಯಶಃ ಸೂಚಿಸುತ್ತಿದ್ದಿರಬಹುದು. ಇಂಥಾ ಅವಲೋಕಿಸುವವರ ಕಣ್ಣುಗಳು ಸರಳವಾಗಿರಲಿಲ್ಲ, ಇಲ್ಲವೇ ಸರಿಯಾದ ವಿಷಯದ ಮೇಲೆ ಕೇಂದ್ರಿತವಾಗಿರಲಿಲ್ಲ, ಆದುದರಿಂದ ಅವನ ಅದ್ಭುತಗಳು ಉದ್ದೇಶಿತ ಧ್ಯೇಯವನ್ನು ಪೂರೈಸಲಿಲ್ಲ.

ಯೇಸುವು ಈಗಾಗಲೇ ಒಂದು ದೆವ್ವವನ್ನು ಬಿಡಿಸಿದ್ದನು ಮತ್ತು ಒಬ್ಬ ಮೂಕನು ಮಾತಾಡುವಂತೆ ಮಾಡಿದ್ದನು. ಇದು ಸರಳ ಇಲ್ಲವೆ ಸರಿಯಾಗಿ ಕೇಂದ್ರಿತವಾಗಿರುವ ಕಣ್ಣುಗಳಿರುವ ಜನರನ್ನು ಈ ಮಹಿಮೆಯ ಅದ್ಭುತವನ್ನು ಸ್ತುತಿಸಲು ಮತ್ತು ಸುವಾರ್ತೆಯನ್ನು ಘೋಷಿಸಲು ಪ್ರೇರಿಸಬೇಕಿತ್ತು! ಆದರೂ, ಇಂಥಾ ಠೀಕಾಕಾರರೊಂದಿಗೆ ಅಂಥಾದ್ದೇನೂ ಸಂಭವಿಸಲಿಲ್ಲ. ಆದುದರಿಂದ ಯೇಸುವು ಕೊನೆಗೊಳಿಸುವದು: “ಆದದರಿಂದ ನಿನ್ನೊಳಗಿರುವ ಬೆಳಕೇ ಕತ್ತಲಾಗಿದೆಯೋ ಏನೋ ನೋಡು. ನಿನ್ನ ದೇಹವೆಲ್ಲಾ ಬೆಳಕಾಗಿದ್ದು ಒಂದು ಭಾಗದಲ್ಲಿಯೂ ಕತ್ತಲಿಲ್ಲದ್ದಾಗಿದ್ದರೆ ದೀಪವು ಹೊಳೆದು ನಿನಗೆ ಬೆಳಕನ್ನು ಕೊಡುವ ಕಾಲದಲ್ಲಿ ಹೇಗೋ ಹಾಗೆಯೇ ಅದು ಪೂರ್ಣವಾಗಿ ಬೆಳಕಾಗಿರುವದು.” ಲೂಕ 11:14-36; ವಿಮೋಚನಕಾಂಡ 8:18, 19; 31:18; ಮತ್ತಾಯ 12:22, 28.

▪ ಒಬ್ಬ ಮನುಷ್ಯನನ್ನು ಯೇಸುವು ವಾಸಿಮಾಡಿರುವದಕ್ಕೆ ಯಾವ ಪ್ರತಿಕ್ರಿಯೆ ಇತ್ತು?

▪ “ದೇವರ ಬೆರಳು” ಅಂದರೆ ಏನು, ಮತ್ತು ದೇವರ ರಾಜ್ಯವು ಯೇಸುವಿನ ಆಲಿಸುವವರನ್ನು ದಾಟಿ ಹೇಗೆ ಮುಂದಕ್ಕೆ ಹೋಗಿತ್ತು?

▪ ನಿಜ ಸಂತೋಷದ ಮೂಲ ಏನು?

▪ ಒಬ್ಬ ಮನುಷ್ಯನಿಗೆ ಸರಳವಾದ ಕಣ್ಣು ಇರಲು ಹೇಗೆ ಸಾಧ್ಯ?