ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತ್ಯಕಾಲದಲ್ಲಿ ಸತ್ಯ ಆರಾಧಕರನ್ನು ಗುರುತಿಸುವುದು

ಅಂತ್ಯಕಾಲದಲ್ಲಿ ಸತ್ಯ ಆರಾಧಕರನ್ನು ಗುರುತಿಸುವುದು

ಅಧ್ಯಾಯ ಹದಿನೇಳು

ಅಂತ್ಯಕಾಲದಲ್ಲಿ ಸತ್ಯ ಆರಾಧಕರನ್ನು ಗುರುತಿಸುವುದು

1. ದಾನಿಯೇಲ ಪುಸ್ತಕದ 7ನೆಯ ಅಧ್ಯಾಯಕ್ಕನುಸಾರ, ನಮ್ಮ ದಿನಗಳಲ್ಲಿ ಒಂದು ಚಿಕ್ಕ, ನಿಸ್ಸಹಾಯಕ ಜನರ ಗುಂಪಿಗೆ ಯಾವ ಅಸಾಧಾರಣವಾದ ಸಂಗತಿಗಳು ಸಂಭವಿಸಲಿಕ್ಕಿದ್ದವು?

ಒಂದು ಚಿಕ್ಕ, ನಿಸ್ಸಹಾಯಕ ಜನರ ಗುಂಪಿನ ಮೇಲೆ ಬಲಿಷ್ಠವಾದ ಒಂದು ಲೋಕ ಶಕ್ತಿಯು ಹಿಂಸಾತ್ಮಕವಾಗಿ ಆಕ್ರಮಣಮಾಡುತ್ತದೆ. ಆದರೂ, ಅವರು ಯಾವುದೇ ಹಾನಿಯಿಲ್ಲದೆ ಪಾರಾಗುತ್ತಾರೆ ಮತ್ತು ಪುನಃ ಚೇತರಿಸಿಕೊಳ್ಳುತ್ತಾರೆ. ಇದು ಅವರ ಸ್ವಂತ ಬಲದ ಕಾರಣದಿಂದಲ್ಲ, ಬದಲಾಗಿ ಯೆಹೋವ ದೇವರು ಅವರನ್ನು ಅಮೂಲ್ಯವಾಗಿ ಪರಿಗಣಿಸುವ ಕಾರಣದಿಂದಲೇ. 20ನೆಯ ಶತಮಾನದ ಆರಂಭದಲ್ಲಿ ಸಂಭವಿಸಿದ ಈ ಘಟನೆಗಳನ್ನು, ದಾನಿಯೇಲ 7ನೆಯ ಅಧ್ಯಾಯವು ಮುಂತಿಳಿಸಿತು. ಆದರೆ, ಈ ಜನರು ಯಾರಾಗಿದ್ದರು? ದಾನಿಯೇಲ ಪುಸ್ತಕದ ಅದೇ ಅಧ್ಯಾಯವು ಅವರನ್ನು “ಪರಾತ್ಪರ”ನಾದ ಯೆಹೋವ ದೇವರ “ಪವಿತ್ರ ಜನರು” (NW) ಎಂದು ಸಂಬೋಧಿಸಿತು. ಕಟ್ಟಕಡೆಗೆ ಈ ಜನರು ಮೆಸ್ಸೀಯನ ರಾಜ್ಯದಲ್ಲಿ ಅವನೊಂದಿಗೆ ಜೊತೆ ಅರಸರಾಗುವರು ಎಂದು ಸಹ ಅದು ಪ್ರಕಟಪಡಿಸಿತು.​—⁠ದಾನಿಯೇಲ 7:​13, 14, 18, 21, 22, 25-27.

2. (ಎ) ತನ್ನ ಅಭಿಷಿಕ್ತ ಸೇವಕರ ಕುರಿತು ಯೆಹೋವನಿಗೆ ಯಾವ ಭಾವನೆಯಿದೆ? (ಬಿ) ಈ ಸಮಯಗಳಲ್ಲಿ ಯಾವ ಮಾರ್ಗವನ್ನು ಅನುಸರಿಸುವುದು ವಿವೇಕಪ್ರದವಾಗಿರುವುದು?

2 ನಾವು ದಾನಿಯೇಲ ಪುಸ್ತಕದ 11ನೆಯ ಅಧ್ಯಾಯದಿಂದ ತಿಳಿದುಕೊಂಡಂತೆ, ಈ ನಂಬಿಗಸ್ತ ಜನರ ಭದ್ರವಾದ ಆತ್ಮಿಕ ಕ್ಷೇತ್ರಕ್ಕೆ ಬೆದರಿಕೆಯನ್ನು ಒಡ್ಡಿದ ಬಳಿಕವೇ ಉತ್ತರ ರಾಜನು ಅಂತಿಮವಾಗಿ ಕೊನೆಗಾಣಲಿದ್ದನು. (ದಾನಿಯೇಲ 11:45; ಹೋಲಿಸಿರಿ ಯೆಹೆಜ್ಕೇಲ 38:​18-23.) ಹೌದು, ಯೆಹೋವನು ತನ್ನ ನಂಬಿಗಸ್ತ ಅಭಿಷಿಕ್ತ ಜನರಿಗೆ ತುಂಬ ಸಂರಕ್ಷಣೆ ನೀಡುತ್ತಾನೆ. ಕೀರ್ತನೆ 105:​14, 15 ನಮಗೆ ಹೀಗೆ ಹೇಳುತ್ತದೆ: “ಆತನು [ಯೆಹೋವನು] ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ​—⁠ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನು ಮಾಡಬಾರದು ಎಂದು ಹೇಳಿದನು.” ಹಾಗಾದರೆ, ಈ ಸಂಕಷ್ಟಕರ ಸಮಯಗಳಲ್ಲಿ, ಸಂಖ್ಯೆಯಲ್ಲಿ ​ಹೆಚ್ಚುತ್ತಿರುವ “ಮಹಾ ಸಮೂಹ”ವು ಸಾಧ್ಯವಾದಷ್ಟು ನಿಕಟವಾಗಿ ಈ ಪವಿತ್ರ ಜನರೊಂದಿಗೆ ಸಹವಾಸಮಾಡುವುದು ವಿವೇಕಪ್ರದ ಸಂಗತಿಯಾಗಿದೆಯೆಂದು ನೀವು ಒಪ್ಪುವುದಿಲ್ಲವೋ? (ಪ್ರಕಟನೆ 7:9; ಜೆಕರ್ಯ 8:23) ಕುರಿಗಳಂಥ ಜನರು ಅದನ್ನೇ ಮಾಡುವರು, ಅಂದರೆ ತನ್ನ ಅಭಿಷಿಕ್ತ ಆತ್ಮಿಕ ಸಹೋದರರೊಂದಿಗೆ ಜೊತೆಗೂಡಿ, ಅವರ ಕೆಲಸದಲ್ಲಿ ಅವರಿಗೆ ಬೆಂಬಲ ನೀಡುವರು ಎಂದು ಯೇಸು ಕ್ರಿಸ್ತನು ಹೇಳಿದನು.​—⁠ಮತ್ತಾಯ 25:​31-46; ಗಲಾತ್ಯ 3:⁠29.

3. (ಎ) ಯೇಸುವಿನ ಅಭಿಷಿಕ್ತ ಹಿಂಬಾಲಕರನ್ನು ಕಂಡುಕೊಳ್ಳುವುದು ಹಾಗೂ ಅವರಿಗೆ ನಿಕಟವಾಗಿ ಉಳಿಯುವುದು ಏಕೆ ಅಷ್ಟೊಂದು ಸುಲಭವಾದ ಕೆಲಸವಲ್ಲ? (ಬಿ) ಈ ವಿಷಯದಲ್ಲಿ ದಾನಿಯೇಲ 12ನೆಯ ಅಧ್ಯಾಯವು ಹೇಗೆ ಸಹಾಯ ಮಾಡುವುದು?

3 ಆದರೂ, ದೇವರ ವಿರೋಧಿಯಾದ ಸೈತಾನನು ಈ ಅಭಿಷಿಕ್ತ ಜನರ ವಿರುದ್ಧ ತನ್ನ ಸರ್ವಶಕ್ತಿಯನ್ನೂ ಬಳಸಿ ಹೋರಾಡುತ್ತಿದ್ದಾನೆ. ಅವನು ಸುಳ್ಳು ಧರ್ಮವನ್ನು ಉತ್ತೇಜಿಸಿ, ಈ ಲೋಕವನ್ನು ನಕಲಿ ಕ್ರೈಸ್ತರಿಂದ ತುಂಬಿಸುವುದರಲ್ಲಿ ಸಫಲನಾಗಿದ್ದಾನೆ. ಇದರ ಫಲಿತಾಂಶವಾಗಿ, ಅನೇಕರು ದಾರಿತಪ್ಪಿಹೋಗಿದ್ದಾರೆ. ಇನ್ನಿತರರಾದರೋ ಸತ್ಯ ಧರ್ಮವನ್ನು ಪ್ರತಿನಿಧಿಸುವ ಜನರನ್ನು ಕಂಡುಕೊಳ್ಳುವ ನಿರೀಕ್ಷೆಯನ್ನೇ ತೊರೆದುಬಿಟ್ಟಿದ್ದಾರೆ. (ಮತ್ತಾಯ ​7:15, 21-23; ಪ್ರಕಟನೆ 12:​9, 17) “ಚಿಕ್ಕ ಹಿಂಡ”ನ್ನು ಕಂಡುಕೊಂಡು, ಅವರೊಂದಿಗೆ ಸಹವಾಸ ಮಾಡುವ ಇನ್ನಿತರರು ಸಹ, ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಲು ಹೋರಾಡಬೇಕಾಗಿದೆ. ಏಕೆಂದರೆ ಈ ಲೋಕವು ನಂಬಿಕೆಯನ್ನು ಹಾಳುಮಾಡಲು ಸತತವಾಗಿ ಪ್ರಯತ್ನಿಸುತ್ತಿದೆ. (ಲೂಕ 12:32) ನಿಮ್ಮ ಕುರಿತಾಗಿ ಏನು? ನೀವು “ಪರಾತ್ಪರನ ಪವಿತ್ರ ಜನರನ್ನು” ಕಂಡುಕೊಂಡಿದ್ದೀರೊ, ಹಾಗೂ ಅವರೊಂದಿಗೆ ಸಹವಾಸ ಮಾಡುತ್ತಿದ್ದೀರೊ? ನೀವು ಯಾರನ್ನು ಕಂಡುಕೊಂಡಿದ್ದೀರೋ ಅವರು ನಿಜವಾಗಿಯೂ ದೇವರಾದುಕೊಂಡವರೇ ಆಗಿದ್ದಾರೆ ಎಂಬುದಕ್ಕೆ ಸದೃಢವಾದ ಪುರಾವೆಯು ನಿಮಗಿದೆಯೊ? ಅಂತಹ ಪುರಾವೆಯು ನಿಮ್ಮ ನಂಬಿಕೆಗೆ ಆಧಾರವನ್ನು ಕೊಡಬಲ್ಲದು. ಅಷ್ಟುಮಾತ್ರವಲ್ಲ, ಇಂದಿನ ಲೋಕದ ಧಾರ್ಮಿಕ ಗೊಂದಲದ ನೈಜ ಸ್ಥಿತಿಯನ್ನು ಇತರರು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಲು ಸಹ ಅದು ನಿಮ್ಮನ್ನು ಸಿದ್ಧಗೊಳಿಸುವುದು. ದಾನಿಯೇಲ 12ನೆಯ ಅಧ್ಯಾಯದಲ್ಲಿ ಈ ಜೀವರಕ್ಷಕ ಜ್ಞಾನಸಂಪತ್ತು ಅಡಕವಾಗಿದೆ.

ಮಹಾ ಪ್ರಭುವು ಕ್ರಿಯೆಗೈಯಲು ಆರಂಭಿಸುತ್ತಾನೆ

4. (ಎ) ದಾನಿಯೇಲ 12:1ನೆಯ ವಚನವು ಮೀಕಾಯೇಲನ ಕುರಿತು ಯಾವ ಎರಡು ವೈಶಿಷ್ಟ್ಯಗಳನ್ನು ಮುಂತಿಳಿಸುತ್ತದೆ? (ಬಿ) ದಾನಿಯೇಲ ಪುಸ್ತಕದಲ್ಲಿ, ಒಬ್ಬ ಸಾಮ್ರಾಟನು “ನಿಂತುಕೊಂಡಿರುವುದು” ಅನೇಕವೇಳೆ ಏನನ್ನು ಅರ್ಥೈಸುತ್ತದೆ?

4ದಾನಿಯೇಲ 12:1 (NW) ಹೀಗೆ ಹೇಳುತ್ತದೆ: “ನಿನ್ನ ಜನರ ಪರವಾಗಿ ನಿಂತುಕೊಂಡಿರುವ ಮಹಾ ಪ್ರಭುವಾದ ಮೀಕಾಯೇಲನು ಆ ಕಾಲದಲ್ಲಿ ಎದ್ದುನಿಲ್ಲುವನು.” ಈ ವಚನವು ಮೀಕಾಯೇಲನ ಕುರಿತು ಎರಡು ವೈಶಿಷ್ಯಗಳನ್ನು ಮುಂತಿಳಿಸುತ್ತದೆ: ಒಂದು, ಅವನು “ನಿಂತುಕೊಂಡಿ”ದ್ದಾನೆ ಎಂಬುದು, ಒಂದು ಸಮಯಾವಧಿಯನ್ನು ಒಳಗೊಂಡಿರುವ ಸ್ಥಿತಿಗತಿಯನ್ನು ಸೂಚಿಸುತ್ತದೆ; ಎರಡನೆಯದಾಗಿ, ಅವನು “ಎದ್ದುನಿಲ್ಲುವನು” ಎಂಬುದು, ಆ ಸಮಯಾವಧಿಯಲ್ಲಿ ನಡೆಯುವ ಒಂದು ಘಟನೆಯನ್ನು ಸೂಚಿಸುತ್ತದೆ. ಮೊದಲನೆಯದಾಗಿ, ಮೀಕಾಯೇಲನು “[ದಾನಿಯೇಲನ] ಜನರ ಪರವಾಗಿ ನಿಂತುಕೊಂಡಿರುವ” ಸಮಯಾವಧಿಯ ಕುರಿತು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಮೀಕಾಯೇಲ ಎಂಬುದು, ಒಬ್ಬ ಸ್ವರ್ಗೀಯ ಅಧಿಪತಿಯೋಪಾದಿ ಯೇಸು ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಗ ಅವನಿಗೆ ಕೊಡಲ್ಪಟ್ಟಿದ್ದ ಹೆಸರಾಗಿದೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಅಲ್ಲಿ ತಿಳಿಸಲ್ಪಟ್ಟಿರುವ ‘ನಿಂತುಕೊಂಡಿರುವಿಕೆ’ ಎಂಬ ಶಬ್ದವು, ದಾನಿಯೇಲ ಪುಸ್ತಕದಲ್ಲಿ ಅದೇ ಶಬ್ದವು ಬೇರೆ ಕಡೆಗಳಲ್ಲಿ ಉಪಯೋಗಿಸಲ್ಪಟ್ಟಿರುವ ರೀತಿಯನ್ನು ನಮಗೆ ಜ್ಞಾಪಿಸುತ್ತದೆ. ಇದು ಅನೇಕವೇಳೆ ಒಬ್ಬ ಅರಸನು ರಾಜ್ಯಾಧಿಕಾರವನ್ನು ವಹಿಸುವಂತಹ ರೀತಿಯ ಕ್ರಿಯೆಗೈಯುವಿಕೆಯನ್ನು ಸೂಚಿಸುತ್ತದೆ.​—⁠ದಾನಿಯೇಲ 11:​2-4, 7, 20, 21.

5, 6. (ಎ) ಯಾವ ಸಮಯಾವಧಿಯಲ್ಲಿ ಮೀಕಾಯೇಲನು ನಿಂತುಕೊಳ್ಳುತ್ತಾನೆ? (ಬಿ) ಯಾವಾಗ ಮತ್ತು ಹೇಗೆ ಮೀಕಾಯೇಲನು “ಎದ್ದುನಿಲ್ಲುವನು” ಮತ್ತು ಯಾವ ಫಲಿತಾಂಶ​ಗಳೊಂದಿಗೆ?

5 ಇಲ್ಲಿ ಬೈಬಲ್‌ ಪ್ರವಾದನೆಯಲ್ಲಿ ಬೇರೆ ಕಡೆಗಳಲ್ಲಿಯೂ ನಿರ್ದಿಷ್ಟವಾಗಿ ಸೂಚಿಸಿರುವಂತಹ ಸಮಯಾವಧಿಯ ಕಡೆಗೆ ದೇವದೂತನು ಕೈತೋರಿಸುತ್ತಿದ್ದನೆಂಬುದು ಸ್ಪಷ್ಟ. ಯೇಸು ಅದನ್ನು ತನ್ನ “ಸಾನ್ನಿಧ್ಯ” (ಗ್ರೀಕ್‌ ಭಾಷೆಯಲ್ಲಿ ಪಾರೂಸೀಯ) ಎಂದು ಕರೆಯುತ್ತಾನೆ; ಆಗ ಅವನು ಸ್ವರ್ಗದಲ್ಲಿ ರಾಜನೋಪಾದಿ ಆಳಲಿದ್ದನು. (ಮತ್ತಾಯ 24:​37-39) ಈ ಸಮಯಾವಧಿಯನ್ನು “ಕಡೇ ದಿವಸಗಳು” ಹಾಗೂ “ಅಂತ್ಯಕಾಲ” ಎಂದೂ ಕರೆಯಲಾಗಿದೆ. (2 ತಿಮೊಥೆಯ 3:1; ದಾನಿಯೇಲ 12:​4, 9) 1914ರಲ್ಲಿ ಆ ಸಮಯಾ​ವಧಿಯು ಆರಂಭವಾದಂದಿನಿಂದ, ಮೀಕಾಯೇಲನು ಸ್ವರ್ಗದಲ್ಲಿ ರಾಜನೋಪಾದಿ ನಿಂತುಕೊಂಡಿದ್ದಾನೆ.​—⁠ಹೋಲಿಸಿರಿ ಯೆಶಾಯ 11:10; ಪ್ರಕಟನೆ 12:​7-9.

6 ಹಾಗಾದರೆ, ಮೀಕಾಯೇಲನು ಯಾವಾಗ “ಎದ್ದುನಿಲ್ಲುವನು”? ಅವನು ವಿಶೇಷ ಕ್ರಿಯೆಯನ್ನು ಕೈಕೊಳ್ಳಲು ಆರಂಭಿಸುವಾಗಲೇ. ಆದುದರಿಂದ, ಯೇಸು ಭವಿಷ್ಯತ್ತಿನಲ್ಲಿ ಎದ್ದುನಿಲ್ಲುವನು. ಪ್ರಕಟನೆ 19:​11-16ನೆಯ ವಚನಗಳು, ದೇವದೂತ ಸೇನೆಯ ನಾಯಕನೋಪಾದಿ ಕುದುರೆಯ ಮೇಲೆ ಸವಾರಿಮಾಡುತ್ತಿರುವ ಹಾಗೂ ದೇವರ ವೈರಿಗಳ ಮೇಲೆ ನಾಶನವನ್ನು ತರುತ್ತಿರುವಂತಹ ಪರಾಕ್ರಮಿಯಾದ ಮೆಸ್ಸೀಯ ರಾಜನೋಪಾದಿ ಯೇಸುವನ್ನು ಪ್ರವಾದನೀಯವಾಗಿ ವರ್ಣಿಸುತ್ತವೆ. ದಾನಿಯೇಲ 12:1 ಮುಂದುವರಿಸುವುದು: “ಮೊಟ್ಟಮೊದಲು ಜನಾಂಗವು ಉಂಟಾದಂದಿನಿಂದ ಅಂದಿನ ವರೆಗೆ ಸಂಭವಿಸದಂಥ ಸಂಕಟವು ಸಂಭವಿಸುವದು.” ಯೆಹೋವನ ಪ್ರಮುಖ ವಧಕಾರನೋಪಾದಿ ಕ್ರಿಸ್ತನು, ಮುಂತಿಳಿಸಲ್ಪಟ್ಟ “ಮಹಾ ಸಂಕಟ”ದ ಸಮಯದಲ್ಲಿ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಅಂತ್ಯಗೊಳಿಸುವನು.​—⁠ಮತ್ತಾಯ 24:21; ಯೆರೆಮೀಯ 25:33; 2 ಥೆಸಲೊನೀಕ 1:​6-8; ಪ್ರಕಟನೆ 7:14; 16:​14, 16.

7. (ಎ) ಬರಲಿರುವ “ಸಂಕಟ”ದ ಸಮಯದಲ್ಲಿ ಎಲ್ಲ ನಂಬಿಗಸ್ತ ಜನರಿಗೆ ಯಾವ ನಿರೀಕ್ಷೆಯಿದೆ? (ಬಿ) ಯೆಹೋವನ ಪುಸ್ತಕವು ಏನಾಗಿದೆ, ಮತ್ತು ಆ ಪುಸ್ತಕದಲ್ಲಿ ಹೆಸರುಗಳು ನಮೂದಿಸಲ್ಪಡುವುದು ಏಕೆ ಅತ್ಯಾವಶ್ಯಕವಾಗಿದೆ?

7 ಇಂತಹ ಸಂಕಷ್ಟಕರ ಸಮಯದಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುವ ಜನರಿಗೆ ಏನು ಸಂಭವಿಸುವುದು? ದಾನಿಯೇಲನಿಗೆ ಹೀಗೂ ಹೇಳಲಾಯಿತು: “ಆಗ ನಿನ್ನ ಜನರೊಳಗೆ ಯಾರ ಹೆಸರುಗಳು [ಜೀವಬಾಧ್ಯರ] ಪಟ್ಟಿ [“ಪುಸ್ತಕ,” NW]ಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು.” (ಹೋಲಿಸಿರಿ ಲೂಕ 21:​34-36.) ಈ ಪುಸ್ತಕವು ಏನಾಗಿದೆ? ಮೂಲಭೂತವಾಗಿ, ಅದು ಯಾರು ಯೆಹೋವ ದೇವರ ಚಿತ್ತವನ್ನು ಮಾಡುತ್ತಾರೋ ಅವರನ್ನು ಆತನು ಜ್ಞಾಪಕದಲ್ಲಿಟ್ಟುಕೊಳ್ಳುವುದನ್ನು ಪ್ರತಿನಿಧಿಸುತ್ತದೆ. (ಮಲಾಕಿಯ 3:16; ಇಬ್ರಿಯ 6:10) ಈ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳು ನಮೂದಿಸಲ್ಪಟ್ಟಿವೆಯೋ ಆ ಜನರು ಲೋಕದಲ್ಲೇ ಅತಿ ಸುರಕ್ಷಿತ ಜನರಾಗಿದ್ದಾರೆ, ಏಕೆಂದರೆ ಅವರಿಗೆ ದೇವರಿಂದ ರಕ್ಷಣೆಯು ದೊರಕುತ್ತದೆ. ಅವರ ಮೇಲೆ ಯಾವುದೇ ವಿಪತ್ತು ಬಂದರೂ, ಅದನ್ನು ಇಲ್ಲವಾಗಿಸಸಾಧ್ಯವಿದೆ ಮತ್ತು ಅದು ಇಲ್ಲವಾಗಿಸಲ್ಪಡುವುದು. ಬರಲಿರುವ ಈ “ಸಂಕಟ”ದ ಸಮಯಕ್ಕಿಂತ ಮುಂಚೆ ಅವರ ಮೇಲೆ ಹಠಾತ್ತಾಗಿ ಮರಣವು ಬಂದರೂ, ಯೆಹೋವನ ಅಸೀಮ ಸ್ಮರಣೆಯಲ್ಲಿ ಅವರು ಸುರಕ್ಷಿತರಾಗಿ ಉಳಿಯುವರು. ಯೇಸು ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಆತನು ಅವರನ್ನು ಜ್ಞಾಪಿಸಿಕೊಂಡು, ಪುನರುತ್ಥಾನಗೊಳಿಸುವನು.​—⁠ಅ. ಕೃತ್ಯಗಳು 24:15; ಪ್ರಕಟನೆ 20:​4-6.

ಪವಿತ್ರ ಜನರು “ಎಚ್ಚತ್ತು”ಕೊಳ್ಳುತ್ತಾರೆ

8. ದಾನಿಯೇಲ 12:2ನೆಯ ವಚನವು ಯಾವ ಆನಂದಕರ ಪ್ರತೀಕ್ಷೆಯನ್ನು ನೀಡುತ್ತದೆ?

8 ಪುನರುತ್ಥಾನದ ನಿರೀಕ್ಷೆಯು ಖಂಡಿತವಾಗಿಯೂ ಸಾಂತ್ವನದಾಯಕವಾಗಿದೆ. ದಾನಿಯೇಲ 12:2 ಹೀಗೆ ಹೇಳುವ ಮೂಲಕ ಅದನ್ನು ತಿಳಿಯಪಡಿಸುತ್ತದೆ: “ದೂಳಿನ ನೆಲದೊಳಗೆ ದೀರ್ಘನಿದ್ರೆಮಾಡುವವರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವ​ವನ್ನು, ಕೆಲವರು ನಿಂದನನಿತ್ಯತಿರಸ್ಕಾರಗಳನ್ನು ಅನುಭವಿಸುವರು.” (ಹೋಲಿಸಿರಿ ಯೆಶಾಯ 26:19.) ಈ ಮಾತುಗಳು, ಸಾರ್ವತ್ರಿಕ ಪುನರುತ್ಥಾನದ ಕುರಿತಾದ ಯೇಸು ಕ್ರಿಸ್ತನ ಭಾವಪ್ರಚೋದಕ ವಾಗ್ದಾನವನ್ನು ನಮಗೆ ನೆನಪು ಹುಟ್ಟಿಸುತ್ತವೆ. (ಯೋಹಾನ ​5:28, 29) ಎಂತಹ ರೋಮಾಂಚಕ ಪ್ರತೀಕ್ಷೆ! ಈಗ ಮೃತಪಟ್ಟಿರುವ ನಿಮ್ಮ ಪ್ರಿಯ ಸ್ನೇಹಿತರು ಹಾಗೂ ಕುಟುಂಬದವರಿಗೆ ಭವಿಷ್ಯತ್ತಿನಲ್ಲಿ ಪುನಃ ಜೀವಿಸುವ ಒಂದು ಅವಕಾಶವು ಕೊಡಲ್ಪಡುವುದರ ಕುರಿತು ತುಸು ಆಲೋಚಿಸಿರಿ! ಆದರೆ ದಾನಿಯೇಲ ಪುಸ್ತಕದಲ್ಲಿರುವ ಈ ವಾಗ್ದಾನವು, ಮೂಲತಃ ಇನ್ನೊಂದು ರೀತಿಯ ಪುನರುತ್ಥಾನಕ್ಕೆ ಸೂಚಿತವಾಗಿದೆ. ಈ ಪುನರುತ್ಥಾನವು ಈಗಾಗಲೇ ಸಂಭವಿಸಿದೆ. ಅದು ಹೇಗೆ?

9. (ಎ) ದಾನಿಯೇಲ 12:2ನೆಯ ವಚನವು ಕಡೇ ದಿನಗಳಲ್ಲಿ ನೆರವೇರಿಕೆಯನ್ನು ಪಡೆಯುವುದು ಎಂದು ನಿರೀಕ್ಷಿಸುವುದು ಏಕೆ ಸಮಂಜಸವಾದದ್ದಾಗಿದೆ? (ಬಿ) ಆ ಪ್ರವಾದನೆಯು ಯಾವ ರೀತಿಯ ಪುನರುತ್ಥಾನವನ್ನು ಸೂಚಿಸುತ್ತದೆ, ಮತ್ತು ಇದು ನಮಗೆ ಹೇಗೆ ಗೊತ್ತು?

9 ಪೂರ್ವಾಪರ ವಚನಗಳನ್ನು ಪರಿಗಣಿಸಿರಿ. ಈಗಾಗಲೇ ನಾವು ನೋಡಿರುವಂತೆ, 12ನೆಯ ಅಧ್ಯಾಯದ ಮೊದಲ ವಚನವು ಈ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಮಾತ್ರ ಅನ್ವಯವಾಗುವುದಿಲ್ಲ, ಬದಲಾಗಿ ಕಡೇ ದಿವಸಗಳ ಇಡೀ ಕಾಲಾವಧಿಗೇ ಅನ್ವಯವಾಗುತ್ತದೆ. ವಾಸ್ತವದಲ್ಲಿ, ಈ ಅಧ್ಯಾಯದ ಅಧಿಕಾಂಶ ಭಾಗವು, ಬರಲಿರುವ ಭೂಪ್ರಮೋದವನದಲ್ಲಲ್ಲ ಬದಲಾಗಿ ಅಂತ್ಯಕಾಲದಲ್ಲಿ ನೆರವೇರಿಕೆಯನ್ನು ಪಡೆಯುತ್ತದೆ. ಈ ಸಮಯಾವಧಿಯಲ್ಲಿ ಯಾವುದಾದರೂ ಪುನರುತ್ಥಾನವು ಸಂಭವಿಸಿದೆಯೊ? “ಕ್ರಿಸ್ತನಿಗೆ ಸೇರಿದವರ” (NW) ಪುನರುತ್ಥಾನವು “ಕ್ರಿಸ್ತನ ಪ್ರತ್ಯಕ್ಷತೆಯ [“ಸಾನ್ನಿಧ್ಯದ,” NW] ಸಮಯದಲ್ಲಿ ಸಂಭವಿಸುವುದು ಎಂದು ಅಪೊಸ್ತಲ ಪೌಲನು ಬರೆದನು. (ಓರೆಅಕ್ಷರಗಳು ನಮ್ಮವು.) ಆದರೂ, ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವವರು “ನಿರ್ಲಯರಾಗಿ” ಎಬ್ಬಿಸಲ್ಪಡುವರು. (1 ಕೊರಿಂಥ 15:​23, 52) ಅವರಲ್ಲಿ ಯಾರೂ ದಾನಿಯೇಲ 12:2ರಲ್ಲಿ ಮುಂತಿಳಿಸಲ್ಪಟ್ಟಿರುವ “ನಿಂದನನಿತ್ಯತಿರಸ್ಕಾರಗಳನ್ನು ಅನುಭವಿಸಲು” ಪುನರುತ್ಥಾನಗೊಳಿಸಲ್ಪಡುವುದಿಲ್ಲ. ಹಾಗಾದರೆ ಇನ್ನೊಂದು ರೀತಿಯ ಪುನರುತ್ಥಾನವಿದೆಯೊ? ಬೈಬಲಿನಲ್ಲಿ, ಕೆಲವೊಮ್ಮೆ ಪುನರುತ್ಥಾನಕ್ಕೆ ಆತ್ಮಿಕ ಸೂಚಿತಾರ್ಥವೂ ಇದೆ. ಉದಾಹರಣೆಗಾಗಿ, ಯೆಹೆಜ್ಕೇಲ ಹಾಗೂ ಪ್ರಕಟನೆ ಪುಸ್ತಕಗಳಲ್ಲಿ, ಒಂದು ಆತ್ಮಿಕ ಪುನರುಜ್ಜೀವನ ಅಥವಾ ಪುನರುತ್ಥಾನಕ್ಕೆ ಅನ್ವಯವಾಗುವಂತಹ ಪ್ರವಾದನಾ ಭಾಗಗಳು ಒಳಗೂಡಿಸಲ್ಪಟ್ಟಿವೆ.​—⁠ಯೆಹೆಜ್ಕೇಲ 37:​1-14; ಪ್ರಕಟನೆ 11:​3, 7, 11.

10. (ಎ) ಅಭಿಷಿಕ್ತ ಉಳಿಕೆಯವರು ಯಾವ ಅರ್ಥದಲ್ಲಿ ಅಂತ್ಯಕಾಲದಲ್ಲಿ ಪುನರುತ್ಥಾನಗೊಳಿಸಲ್ಪಟ್ಟರು? (ಬಿ) ಪುನರುಜ್ಜೀವಿತರಾದ ಅಭಿಷಿಕ್ತ ಉಳಿಕೆಯವರಲ್ಲಿ ಕೆಲವರು, ಹೇಗೆ “ನಿಂದನನಿತ್ಯತಿರಸ್ಕಾರಗಳನ್ನು” ಅನುಭವಿಸಲು ಎಚ್ಚತ್ತರು?

10 ಅಂತ್ಯಕಾಲದಲ್ಲಿ ದೇವರ ಅಭಿಷಿಕ್ತ ಸೇವಕರ ಅಂತಹ ಒಂದು ಆತ್ಮಿಕ ಪುನರುಜ್ಜೀವನವು ಸಂಭವಿಸಿದೆಯೊ? ಹೌದು! 1918ರಲ್ಲಿ ನಂಬಿಗಸ್ತ ಕ್ರೈಸ್ತರ ಒಂದು ಚಿಕ್ಕ ಗುಂಪು ಅಸಾಧಾರಣವಾದ ಆಕ್ರಮಣಕ್ಕೆ ತುತ್ತಾಗಿ, ಅವರ ವ್ಯವಸ್ಥಿತ ಸಾರ್ವಜನಿಕ ಶುಶ್ರೂಷೆಗೆ ತಡೆಯುಂಟಾಯಿತು ಎಂಬುದು ಐತಿಹಾಸಿಕ ನಿಜತ್ವವಾಗಿದೆ. ತದನಂತರ, ಯಾರೂ ನೆನಸದಂತಹ ರೀತಿಯಲ್ಲಿ, 1919ರಲ್ಲಿ ಅವರು ಒಂದು ಆತ್ಮಿಕ ಅರ್ಥದಲ್ಲಿ ಪುನಃ ಜೀವಿತರಾದರು. ದಾನಿಯೇಲ 12:2ರಲ್ಲಿ ಮುಂತಿಳಿಸಲ್ಪಟ್ಟಿರುವ ಪುನರುತ್ಥಾನದ ವರ್ಣನೆಗೆ ಈ ಸಂಗತಿಗಳು ಸರಿಯಾಗಿ ಹೊಂದಿಕೊಳ್ಳುತ್ತವೆ. ಆ ಸಮಯದಲ್ಲಿ ಹಾಗೂ ತದನಂತರದ ಸಮಯದಲ್ಲಿ ಕೆಲವರು ಆತ್ಮಿಕವಾಗಿ “ಎಚ್ಚತ್ತು”ಕೊಂಡರು. ಆದರೂ, ಆತ್ಮಿಕವಾಗಿ ಎಲ್ಲರೂ ಸಜೀವ ಸ್ಥಿತಿಯಲ್ಲಿ ಉಳಿಯಲಿಲ್ಲ ಎಂಬುದು ದುಃಖಕರವಾದ ಸಂಗತಿಯಾಗಿದೆ. ಎಚ್ಚತ್ತುಕೊಂಡ ಬಳಿಕ ಮೆಸ್ಸೀಯ ರಾಜನನ್ನು ತಿರಸ್ಕರಿಸುವ ಮನಸ್ಸುಮಾಡಿ, ದೇವರ ಸೇವೆಯನ್ನು ತ್ಯಜಿಸಿದವರು, ದಾನಿಯೇಲ 12:2ರಲ್ಲಿ ವರ್ಣಿಸಲ್ಪಟ್ಟಿರುವ ‘ನಿಂದನನಿತ್ಯತಿರಸ್ಕಾರಗಳನ್ನು’ ಅನುಭವಿಸಿದರು. (ಇಬ್ರಿಯ 6:​4-6) ಆದರೂ, ನಂಬಿಗಸ್ತರಾಗಿ ಉಳಿದ ಅಭಿಷಿಕ್ತ ಜನರು ತಮ್ಮ ಆತ್ಮಿಕ ಪುನರುಜ್ಜೀವಿತ ಸ್ಥಿತಿಯನ್ನು ಸದುಪಯೋಗಿಸಿಕೊಳ್ಳುತ್ತಾ, ನಿಷ್ಠೆಯಿಂದ ಮೆಸ್ಸೀಯ ರಾಜನನ್ನು ಬೆಂಬಲಿಸಿದರು. ಪ್ರವಾದನೆಯು ತಿಳಿಸುವಂತೆ, ಅಂತಿಮವಾಗಿ ಅವರ ನಂಬಿಗಸ್ತಿಕೆಯು ಅವರನ್ನು “ನಿತ್ಯಜೀವ”ದ ಕಡೆಗೆ ಮುನ್ನಡಿಸುತ್ತದೆ. ಇಂದು, ವಿರೋಧದ ಎದುರಿನಲ್ಲೂ ಅವರು ತೋರಿಸುವ ಆತ್ಮಿಕ ಚೈತನ್ಯವು, ನಾವು ಅವರನ್ನು ಸುಲಭವಾಗಿ ಗುರುತಿಸುವಂತೆ ಸಹಾಯ ಮಾಡುತ್ತದೆ.

ಅವರು ‘ನಕ್ಷತ್ರಗಳ ಹಾಗೆ ಹೊಳೆಯುತ್ತಾರೆ’

11. ಇಂದು “ಜ್ಞಾನಿಗಳು” ಯಾರಾಗಿದ್ದಾರೆ, ಮತ್ತು ಅವರು ಯಾವ ಅರ್ಥದಲ್ಲಿ ನಕ್ಷತ್ರಗಳಂತೆ ಹೊಳೆಯುತ್ತಾರೆ?

11 ದಾನಿಯೇಲ 12ನೆಯ ಅಧ್ಯಾಯದ ಮುಂದಿನ ಎರಡು ವಚನಗಳು, “ಪರಾತ್ಪರನ ಪವಿತ್ರ ಜನರನ್ನು” ಗುರುತಿಸಲು ನಮಗೆ ಇನ್ನೂ ಹೆಚ್ಚಿನ ಸಹಾಯವನ್ನು ನೀಡುತ್ತದೆ. 3ನೆಯ ವಚನದಲ್ಲಿ ದೇವದೂತನು ದಾನಿಯೇಲನಿಗೆ ಹೇಳುವುದು: “ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು; ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.” ಇಂದು ಈ “ಜ್ಞಾನಿಗಳು” ಯಾರಾಗಿದ್ದಾರೆ? ಪುರಾವೆಯು ಇನ್ನೊಮ್ಮೆ “ಪರಾತ್ಪರನ ಪವಿತ್ರ ಜನರ” ಕಡೆಗೇ ಕೈತೋರಿಸುತ್ತದೆ. ಏನೇ ಆಗಲಿ, ಮಹಾ ಪ್ರಭುವಾದ ಮೀಕಾಯೇಲನು 1914ರಲ್ಲಿ ರಾಜನೋಪಾದಿ ನಿಂತುಕೊಳ್ಳಲು ಆರಂಭಿಸಿದನು ಎಂಬ ಸಂಗತಿಯನ್ನು ಗ್ರಹಿಸುವಷ್ಟು ಜ್ಞಾನವು, ನಂಬಿಗಸ್ತ ಅಭಿಷಿಕ್ತ ಉಳಿಕೆಯವರಲ್ಲದೆ ಬೇರೆ ಯಾರಿಗಿತ್ತು? ಇಂತಹ ಸತ್ಯತೆಗಳನ್ನು ಸಾರುವ ಮೂಲಕ ಹಾಗೂ ಉತ್ತಮ ಕ್ರೈಸ್ತ ನಡತೆಯನ್ನು ಕಾಪಾಡಿಕೊಳ್ಳುವ ಮೂಲಕ, ಆತ್ಮಿಕ ಅಂಧಕಾರದಲ್ಲಿರುವ ಈ ಲೋಕದಲ್ಲಿ ಅವರು “ನಕ್ಷತ್ರಗಳ ಹಾಗೆ ಹೊಳೆಯು”ತ್ತಿದ್ದಾರೆ. (ಫಿಲಿಪ್ಪಿ 2:15; ಯೋಹಾನ 8:12) ಅವರ ಕುರಿತಾಗಿ ಯೇಸು ಪ್ರವಾದಿಸಿದ್ದು: “ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು.”​—⁠ಮತ್ತಾಯ 13:⁠43.

12. (ಎ) ಅಂತ್ಯಕಾಲದಲ್ಲಿ, “ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡು”ವುದರಲ್ಲಿ ಅಭಿಷಿಕ್ತರು ಹೇಗೆ ಒಳಗೂಡಿದ್ದರು? (ಬಿ) ಅಭಿಷಿಕ್ತರು ಹೇಗೆ ಅನೇಕರನ್ನು ಸದ್ಧರ್ಮಿಗಳನ್ನಾಗಿ ಮಾಡುವರು ಹಾಗೂ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ‘ನಕ್ಷತ್ರಗಳ ಹಾಗೆ ಹೊಳೆ​ಯುವರು’?

12ದಾನಿಯೇಲ 12:3ನೆಯ ವಚನವು, ಅಂತ್ಯಕಾಲದಲ್ಲಿ ಈ ಅಭಿಷಿಕ್ತ ಕ್ರೈಸ್ತರು ಯಾವ ಕೆಲಸದಲ್ಲಿ ಕಾರ್ಯಮಗ್ನರಾಗಿರುವರು ಎಂಬುದನ್ನು ಸಹ ನಮಗೆ ತಿಳಿಯಪಡಿಸುತ್ತದೆ. ಅವರು “ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡು”ವರು. ಅಭಿಷಿಕ್ತ ಉಳಿಕೆಯವರು ಕ್ರಿಸ್ತನ ಜೊತೆ ಬಾಧ್ಯಸ್ಥರಾದ 1,44,000 ಮಂದಿಯಲ್ಲಿ ಉಳಿದವರನ್ನು ಒಟ್ಟುಗೂಡಿಸಲು ಆರಂಭಿಸಿದರು. (ರೋಮಾಪುರ 8:​16, 17; ಪ್ರಕಟನೆ 7:​3, 4) ಆ ಕೆಲಸವು ಬಹುಶಃ 1930ಗಳ ಮಧ್ಯಭಾಗದಲ್ಲಿ ಪೂರ್ಣಗೊಂಡಾಗ, ಅವರು “ಬೇರೆ ಕುರಿ”ಗಳ “ಮಹಾ ಸಮೂಹ”ವನ್ನು ಒಟ್ಟುಗೂಡಿಸಲು ಆರಂಭಿಸಿದರು. (ಪ್ರಕಟನೆ 7:9; ಯೋಹಾನ 10:16) ಇವರು ಸಹ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುತ್ತಾರೆ. ಆದುದರಿಂದ, ಯೆಹೋವನ ಮುಂದೆ ಅವರಿಗೆ ಒಂದು ಶುದ್ಧವಾದ ನಿಲುವಿದೆ. ಇಂದು ಲಕ್ಷಾಂತರ ಸಂಖ್ಯೆಗೇರಿರುವ ಇವರು, ಈ ದುಷ್ಟ ಲೋಕದ ಮೇಲೆ ಬರಲಿರುವ ನಾಶನದಿಂದ ಪಾರಾಗುವ ನಿರೀಕ್ಷೆಯುಳ್ಳವರಾಗಿದ್ದಾರೆ. ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ, ಯೇಸು ಹಾಗೂ 1,44,000 ಜೊತೆ ಅರಸರು ಹಾಗೂ ಯಾಜಕರು, ಭೂಮಿಯಲ್ಲಿರುವ ವಿಧೇಯ ಮಾನವಕುಲಕ್ಕೆ ಪ್ರಾಯಶ್ಚಿತ್ತ ಯಜ್ಞದ ಸಂಪೂರ್ಣ ಪ್ರಯೋಜನಗಳನ್ನು ಅನ್ವಯಿಸುವರು. ಹೀಗೆ, ನಂಬಿಕೆಯನ್ನಿಡುವವರಲ್ಲಿ, ಆದಾಮನಿಂದ ಬಾಧ್ಯತೆಯಾಗಿ ಬಂದ ಪಾಪದ ಕೊನೆಯ ಕುರುಹನ್ನು ತೆಗೆದುಹಾಕಲಿಕ್ಕಾಗಿ ಅವರು ಸಹಾಯ ಮಾಡುವರು. (2 ಪೇತ್ರ 3:13; ಪ್ರಕಟನೆ 7:​13, 14; ​20:​5, 6) ಆಗ ಅಭಿಷಿಕ್ತರು, ಪೂರ್ಣ ಅರ್ಥದಲ್ಲಿ “ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡು”ವುದರಲ್ಲಿ ಪಾಲ್ಗೊಳ್ಳುವರು ಮತ್ತು ಸ್ವರ್ಗದಲ್ಲಿ ‘ನಕ್ಷತ್ರಗಳ ಹಾಗೆ ಹೊಳೆಯುವರು.’ ಕ್ರಿಸ್ತನ ಹಾಗೂ ಅವನ ಜೊತೆ ಅರಸರ ಮಹಿಮಾನ್ವಿತ ಸ್ವರ್ಗೀಯ ಸರಕಾರದ ಕೆಳಗೆ, ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯನ್ನು ನೀವು ಅಮೂಲ್ಯವಾದದ್ದಾಗಿ ಪರಿಗಣಿಸುತ್ತೀರೊ? ರಾಜ್ಯದ ಈ ಸುವಾರ್ತೆಯನ್ನು ಸಾರುವುದರಲ್ಲಿ “ಪವಿತ್ರ ಜನ”ರೊಂದಿಗೆ ಜೊತೆಗೂಡುವುದು ಎಂತಹ ಒಂದು ಸುಯೋಗವಾಗಿದೆ!​—⁠ಮತ್ತಾಯ 24:⁠14.

ಅವರು “ಅತ್ತಿತ್ತ ತಿರುಗುವರು”

13. ದಾನಿಯೇಲ ಪುಸ್ತಕದ ಮಾತುಗಳು ಯಾವ ಅರ್ಥದಲ್ಲಿ ಮುಚ್ಚಲ್ಪಟ್ಟು ಮುದ್ರೆಹಾಕಲ್ಪಟ್ಟವು?

13 ದಾನಿಯೇಲನಿಗೆ ದೇವದೂತನು ಪ್ರಕಟಿಸಿದ ವಿಷಯಗಳು, ದಾನಿಯೇಲ 10:20ನೆಯ ವಚನದಲ್ಲಿ ಆರಂಭಗೊಂಡು, ಈಗ ಈ ಭಾವೋತ್ತೇಜಕ ಮಾತುಗಳಿಂದ ಮುಕ್ತಾಯಗೊಳ್ಳುತ್ತವೆ: “ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.” (ದಾನಿಯೇಲ 12:⁠4) ನಿಜವಾಗಿಯೂ ದಾನಿಯೇಲನು ಏನನ್ನು ಬರೆಯುವಂತೆ ಪ್ರೇರೇಪಿಸಲ್ಪಟ್ಟಿದ್ದನೋ ಅದರಲ್ಲಿ ಅಧಿಕಾಂಶ ಭಾಗವು, ರಹಸ್ಯವಾಗಿ ಇರಿಸಲ್ಪಟ್ಟಿತು ಮತ್ತು ಮಾನವ ತಿಳಿವಳಿಕೆಗೆ ನಿಲುಕದಂತೆ ಮುದ್ರೆಹಾಕಲ್ಪಟ್ಟಿತು. ಅಷ್ಟೇಕೆ, ಸ್ವತಃ ದಾನಿಯೇಲನೇ ತದನಂತರ ಬರೆದುದು: “ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ.” (ದಾನಿಯೇಲ 12:⁠8) ಈ ಅರ್ಥದಲ್ಲಿ ದಾನಿಯೇಲ ಪುಸ್ತಕವು ಅನೇಕ ಶತಮಾನಗಳ ವರೆಗೆ ಮುದ್ರೆಹಾಕಿ ಇಡಲ್ಪಟ್ಟಿತ್ತು. ಇಂದಿನ ಕುರಿತಾಗಿ ಏನು?

14. (ಎ) “ಅಂತ್ಯಕಾಲ”ದಲ್ಲಿ ಯಾರು ‘ಅತ್ತಿತ್ತ ತಿರುಗಿ’ದ್ದಾರೆ, ಮತ್ತು ಎಲ್ಲಿ? (ಬಿ) ಯೆಹೋವನು ಈ ‘ತಿರುಗಾಟ’ವನ್ನು ಆಶೀರ್ವದಿಸಿದ್ದಾನೆ ಎಂಬುದಕ್ಕೆ ಯಾವ ಪುರಾವೆಯಿದೆ?

14 ದಾನಿಯೇಲ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟಿರುವ “ಅಂತ್ಯಕಾಲ”ದಲ್ಲಿ ​ಜೀವಿಸುತ್ತಿರುವುದು, ನಮಗೆ ಒಂದು ಸುಯೋಗದಂತಿದೆ. ಪ್ರವಾದಿಸಲ್ಪಟ್ಟಂತೆ, ಅನೇಕ ನಂಬಿಗಸ್ತ ಜನರು ದೇವರ ವಾಕ್ಯದ ಪುಟಗಳಲ್ಲಿ ‘ಅತ್ತಿತ್ತ ತಿರುಗಿ’ದ್ದಾರೆ. ಫಲಿತಾಂಶವೇನು? ಯೆಹೋವನ ಆಶೀರ್ವಾದದಿಂದ, ಸತ್ಯ ಜ್ಞಾನವು ಅವರಿಗೆ ಸಮೃದ್ಧವಾಗಿ ದೊರಕಿದೆ. ಯೆಹೋವನ ನಂಬಿಗಸ್ತ ಅಭಿಷಿಕ್ತ ಸಾಕ್ಷಿಗಳಿಗೆ, ಅನೇಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಶಕ್ತಗೊಳಿಸುವಂತಹ ಅಂತರ್ದೃಷ್ಟಿಯು ಯೆಹೋವನಿಂದ ಆಶೀರ್ವಾದವಾಗಿ ಕೊಡಲ್ಪಟ್ಟಿದೆ. ಕೆಲವು ಉದಾಹರಣೆಗಳು ಯಾವುವೆಂದರೆ, 1914ರಲ್ಲಿ ಮನುಷ್ಯಕುಮಾರನು ರಾಜನಾದನು ಎಂಬುದನ್ನು ಅರ್ಥಮಾಡಿಕೊಳ್ಳಲು, ದಾನಿಯೇಲನ ಪ್ರವಾದನೆಯ ಕಾಡುಮೃಗಗಳನ್ನು ಗುರುತಿಸಲು, “ಹಾಳುಮಾಡುವ ಅಸಹ್ಯವಸ್ತು”ವಿನ ವಿರುದ್ಧ ಎಚ್ಚರಿಕೆ ನೀಡಲು, ಯೆಹೋವನು ಅವರಿಗೆ ಜ್ಞಾನವನ್ನು ಒದಗಿಸಿದ್ದಾನೆ. (ದಾನಿಯೇಲ 11:31) ಹೀಗಿರುವುದರಿಂದ, ಈ ಅತ್ಯಧಿಕ ಜ್ಞಾನವು, “ಪರಾತ್ಪರನ ಪವಿತ್ರ ಜನರ”ನ್ನು ಗುರುತಿಸಲಿಕ್ಕಾಗಿರುವ ಇನ್ನೊಂದು ಚಿಹ್ನೆಯಾಗಿದೆ. ಆದರೆ ದಾನಿಯೇಲನಿಗೆ ಇನ್ನೂ ಹೆಚ್ಚಿನ ಮಾಹಿತಿಯು ಕೊಡಲ್ಪಟ್ಟಿತು.

ಅವರು ‘ಸಂಪೂರ್ಣವಾಗಿ ಮುರಿಯಲ್ಪಡುತ್ತಾರೆ’

15. ಈಗ ದೇವದೂತನು ಯಾವ ಪ್ರಶ್ನೆಯನ್ನು ಕೇಳುತ್ತಾನೆ, ಮತ್ತು ಈ ಪ್ರಶ್ನೆಯು ನಮಗೆ ಯಾರ ಜ್ಞಾಪಕ ಹುಟ್ಟಿಸಬಹುದು?

15 ಟೈಗ್ರಿಸ್‌ ಎಂದು ಪ್ರಸಿದ್ಧವಾಗಿರುವ ಹಿದ್ದೆಕೆಲ್‌ “ಮಹಾನದಿಯ” ದಡದ ಮೇಲೆ ದಾನಿಯೇಲನು ದೇವದೂತನಿಂದ ಈ ಸಂದೇಶಗಳನ್ನು ಪಡೆದುಕೊಂಡನು ಎಂಬುದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. (ದಾನಿಯೇಲ 10:⁠4) ಇಲ್ಲಿ ಅವನು ಪುನಃ ಮೂವರು ದೇವದೂತರನ್ನು ನೋಡಿ, ಹೀಗೆ ಹೇಳುತ್ತಾನೆ: “ಕೂಡಲೆ ದಾನಿಯೇಲನಾದ ನಾನು ಮತ್ತಿಬ್ಬರನ್ನು ಕಂಡೆನು; ಅವರೊಳಗೆ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು. ಇವರಲ್ಲಿ ಒಬ್ಬನು​—⁠ಈ ಅಪೂರ್ವಕಾರ್ಯಗಳು ಕೊನೆಗಾಣುವದಕ್ಕೆ ಎಷ್ಟು ಕಾಲ ಹಿಡಿಯುವದು ಎಂದು ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದು ನಿಂತಿದ್ದ ಪುರುಷನನ್ನು” ಕೇಳಿದನು. (ದಾನಿಯೇಲ 12:​5, 6) ಇಲ್ಲಿ ದೇವದೂತನು ಕೇಳಿದಂತಹ ಪ್ರಶ್ನೆಯು, ಪುನಃ ನಮಗೆ “ಪರಾತ್ಪರನ ಪವಿತ್ರ ಜನರ” ಕುರಿತು ಜ್ಞಾಪಕ ಹುಟ್ಟಿಸಬಹುದು. “ಅಂತ್ಯಕಾಲ”ದ ಆರಂಭದಲ್ಲಿ, ಅಂದರೆ 1914ರಲ್ಲಿ, ದೇವರ ವಾಗ್ದಾನಗಳು ಸಂಪೂರ್ಣವಾಗಿ ನೆರವೇರುವ ತನಕ ಎಷ್ಟು ಸಮಯ ಕಾಯಬೇಕು ಎಂಬ ಪ್ರಶ್ನೆಯ ಬಗ್ಗೆ ಅವರು ತುಂಬ ಚಿಂತಿತರಾಗಿದ್ದರು. ಈ ಪ್ರಶ್ನೆಯ ಉತ್ತರದಲ್ಲಿ, ಆ ಪವಿತ್ರ ಜನರೇ ಈ ಪ್ರವಾದನೆಯ ಕೇಂದ್ರಬಿಂದುವಾಗಿದ್ದಾರೆ ಎಂಬ ಸಂಗತಿಯು ಸುವ್ಯಕ್ತವಾಗುತ್ತದೆ.

16. ದೇವದೂತನು ಯಾವ ಪ್ರವಾದನೆಯನ್ನು ಮುನ್ನುಡಿದನು, ಮತ್ತು ಅದು ಖಂಡಿತವಾಗಿಯೂ ನೆರವೇರುವುದು ಎಂಬ ವಿಚಾರವನ್ನು ಅವನು ಹೇಗೆ ಒತ್ತಿಹೇಳಿದನು?

16 ದಾನಿಯೇಲನ ಪ್ರವಾದನೆಯು ಹೀಗೆ ಮುಂದುವರಿಯುತ್ತದೆ: “ಆ ಪುರುಷನು ಎಡಬಲಕೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು​—⁠ಶಾಶ್ವತಜೀವಸ್ವರೂಪನಾಣೆ, ಒಂದುಕಾಲ, ಎರಡುಕಾಲ ಅರ್ಧಕಾಲ ಕಳೆಯಬೇಕು; ದೇವರ ಜನರ [“ಪವಿತ್ರ ಜನರ,” NW] ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು.” (ದಾನಿಯೇಲ 12:⁠7) ಇದೊಂದು ಗಂಭೀರವಾದ ವಿಷಯವಾಗಿದೆ. ದೇವದೂತನು ಪ್ರತಿಜ್ಞೆಮಾಡುತ್ತಾ ಎರಡೂ ಕೈಗಳನ್ನು ಮೇಲೆತ್ತುತ್ತಾನೆ. ಅಗಲವಾದ ನದಿಯ ಆಚೆ ಹಾಗೂ ಈಚೆ ದಡಗಳಲ್ಲಿ ನಿಂತಿದ್ದ ಇಬ್ಬರು ದೇವದೂತರಿಗೆ ಈ ಭಾವಾಭಿನಯವು ಚೆನ್ನಾಗಿ ಕಾಣಲಿ ಎಂಬ ಉದ್ದೇಶದಿಂದಲೇ ಅವನು ಹೀಗೆ ಮಾಡುತ್ತಾನೆ. ಹೀಗೆ, ಈ ಪ್ರವಾದನೆಯು ಚಾಚೂತಪ್ಪದೆ ನೆರವೇರುವುದು ಎಂಬುದನ್ನು ಅವನು ಒತ್ತಿಹೇಳುತ್ತಾನೆ. ಹಾಗಾದರೆ, ಈ ನೇಮಿತ ಸಮಯಗಳು ಯಾವಾಗ ಬರಲಿದ್ದವು? ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು, ನೀವು ಯೋಚಿಸುವಷ್ಟು ಕಷ್ಟಕರವಾಗಿಲ್ಲ.

17. (ಎ) ದಾನಿಯೇಲ 7:​25, ದಾನಿಯೇಲ 12:​7, ಮತ್ತು ಪ್ರಕಟನೆ 11:​3, 7, 9ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಗಳಲ್ಲಿ ಯಾವ ಸಮಾಂತರಗಳನ್ನು ಕಂಡುಕೊಳ್ಳಸಾಧ್ಯವಿದೆ? (ಬಿ) ಮೂರೂವರೆ ಕಾಲಗಳು ಎಷ್ಟು ದೀರ್ಘವಾದವುಗಳಾಗಿವೆ?

17 ಈ ಪ್ರವಾದನೆಯು ಇನ್ನಿತರ ಎರಡು ಪ್ರವಾದನೆಗಳಿಗೆ ಸದೃಶವಾಗಿದೆ. ನಾವು ಒಂದು ಪ್ರವಾದನೆಯನ್ನು ಈ ಪ್ರಕಾಶನದ 9ನೆಯ ಅಧ್ಯಾಯದಲ್ಲಿ ಪರಿಗಣಿಸಿದೆವು, ಅದು ದಾನಿಯೇಲ 7:25ರಲ್ಲಿ ಕಂಡುಬರುತ್ತದೆ; ಎರಡನೆಯ ಪ್ರವಾದನೆಯು ಪ್ರಕಟನೆ 11:​3, 7, 9ರಲ್ಲಿ ಕಂಡುಬರುತ್ತದೆ. ಕೆಲವೊಂದು ಸಮಾಂತರಗಳನ್ನು ಗಮನಿಸಿರಿ. ಇವುಗಳಲ್ಲಿ ಪ್ರತಿಯೊಂದೂ ಅಂತ್ಯಕಾಲದಲ್ಲಿ ನೆರವೇರಲಿಕ್ಕಾಗಿ ಗೊತ್ತುಪಡಿಸಲ್ಪಟ್ಟಿದೆ. ದೇವರ ಪವಿತ್ರ ಸೇವಕರು ಹಿಂಸೆಗೊಳಗಾಗುವರು ಮತ್ತು ಸ್ವಲ್ಪ ಕಾಲದ ವರೆಗೆ ಅವರು ತಮ್ಮ ಸಾರ್ವಜನಿಕ ಸಾಕ್ಷಿ ಕಾರ್ಯವನ್ನು ಮುಂದುವರಿಸಲು ಅಸಮರ್ಥರಾಗುವರು ಎಂಬುದನ್ನು ತೋರಿಸುತ್ತಾ, ಈ ಎರಡೂ ಪ್ರವಾದನೆಗಳು ದೇವರ ಪವಿತ್ರ ಸೇವಕರ ಬಗ್ಗೆಯೇ ತಿಳಿಸುತ್ತವೆ. ತಮ್ಮ ಹಿಂಸಕರನ್ನು ಸೋಲಿಸುತ್ತಾ ದೇವರ ಸೇವಕರು ಪುನರುಜ್ಜೀವಿತರಾಗಿ, ತಮ್ಮ ಕೆಲಸವನ್ನು ಪುನಃ ಆರಂಭಿಸುತ್ತಾರೆ ಎಂದು ಪ್ರತಿಯೊಂದು ಪ್ರವಾದನೆಯು ತೋರಿಸುತ್ತದೆ. ಅಷ್ಟುಮಾತ್ರವಲ್ಲ, ಪವಿತ್ರ ಜನರು ಎಷ್ಟು ಕಾಲಾವಧಿಯ ವರೆಗೆ ಈ ಕಷ್ಟಸಂಕಟಗಳನ್ನು ಸಹಿಸಬೇಕು ಎಂಬುದರ ವಿವರವನ್ನೂ ಆ ಪ್ರವಾದನೆಗಳು ಕೊಡುತ್ತವೆ. ದಾನಿಯೇಲ ಪುಸ್ತಕದಲ್ಲಿರುವ ಎರಡೂ ಪ್ರವಾದನೆಗಳು (7:25 ಮತ್ತು 12:⁠7), ‘ಒಂದುಕಾಲ ಎರಡುಕಾಲ ಅರ್ಧಕಾಲ’ಕ್ಕೆ ಕೈತೋರಿಸುತ್ತವೆ. ಇದು ಮೂರೂವರೆ ಕಾಲಗಳನ್ನು ಅರ್ಥೈಸುತ್ತದೆ ಎಂದು ಬೈಬಲ್‌ ವಿದ್ವಾಂಸರು ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ. ಪ್ರಕಟನೆಯು ಸಹ ಅದೇ ಕಾಲಾವಧಿಯನ್ನು 42 ತಿಂಗಳುಗಳು ಅಥವಾ 1,260 ದಿನಗಳು ಎಂದು ಸೂಚಿಸುತ್ತದೆ. (ಪ್ರಕಟನೆ 11:​2, 3) ದಾನಿಯೇಲ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಮೂರೂವರೆ ಕಾಲಗಳು, ಪ್ರತಿಯೊಂದು ವರ್ಷದಲ್ಲಿ 360 ದಿನಗಳಿರುವ ಮೂರೂವರೆ ವರ್ಷಗಳನ್ನು ಸೂಚಿಸುತ್ತವೆ ಎಂಬುದನ್ನು ಇದು ದೃಢಪಡಿಸುತ್ತದೆ. ಆದರೆ ಈ 1,260 ದಿನಗಳು ಯಾವಾಗ ಆರಂಭಗೊಂಡವು?

18. (ಎ) ದಾನಿಯೇಲ 12:7ಕ್ಕನುಸಾರ, 1,260 ದಿನಗಳ ಅಂತ್ಯವನ್ನು ಯಾವುದು ಗುರುತಿಸುವುದು? (ಬಿ) ಕೊನೆಯದಾಗಿ ಈ ‘ಪವಿತ್ರ ಜನರ ಬಲವು ಸಂಪೂರ್ಣವಾಗಿ ಮುರಿದು’ಹಾಕಲ್ಪಟ್ಟದ್ದು ಯಾವಾಗ, ಮತ್ತು ಇದು ಹೇಗೆ ಸಂಭವಿಸಿತು? (ಸಿ) 1,260 ದಿನಗಳು ಯಾವಾಗ ಆರಂಭಗೊಂಡವು, ಮತ್ತು ಆ ಕಾಲಾವಧಿಯಲ್ಲಿ ಅಭಿಷಿಕ್ತರು ಹೇಗೆ ‘ಗೋಣಿತಟ್ಟನ್ನು ಹೊದ್ದುಕೊಂಡು ಪ್ರವಾದಿಸಿದರು’?

18 ಈ 1,260 ದಿನಗಳು ಯಾವಾಗ ಅಂತ್ಯಗೊಳ್ಳುವವು ಎಂಬ ವಿಷಯದಲ್ಲಿ ಪ್ರವಾದನೆಯು ತುಂಬ ಸ್ಪಷ್ಟವಾದ ವಿವರಣೆಯನ್ನು ನೀಡುತ್ತದೆ. “ಪವಿತ್ರ ಜನರ ಬಲವನ್ನು ಸಂಪೂರ್ಣವಾಗಿ ಮುರಿದು”ಬಿಡುವಾಗ ಅವು ಅಂತ್ಯಗೊಳ್ಳುವವು. 1918ರ ಮಧ್ಯಭಾಗದಲ್ಲಿ, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್‌. ರದರ್‌ಫರ್ಡರನ್ನೂ ಸೇರಿಸಿ, ಅದರ ಪ್ರಮುಖ ಸದಸ್ಯರ ಮೇಲೆ ಸುಳ್ಳಾರೋಪ ಹೊರಿಸಿ, ಅವರಿಗೆ ದೀರ್ಘಾವಧಿಯ ಸೆರೆಮನೆ ಶಿಕ್ಷೆಯನ್ನು ವಿಧಿಸಲಾಯಿತು. ನಿಜವಾಗಿಯೂ ದೇವರ ಪವಿತ್ರ ಜನರು, ತಮ್ಮ ಕೆಲಸವು ‘ಸಂಪೂರ್ಣವಾಗಿ ಮುರಿಯಲ್ಪಡು’ವುದನ್ನು, ತಮ್ಮ ಬಲವು ಅಡಗಿಸಲ್ಪಡುವುದನ್ನು ನೋಡಿದರು. 1918ರ ಮಧ್ಯಭಾಗದಿಂದ ಮೂರೂವರೆ ವರ್ಷಗಳನ್ನು ಹಿಂದಕ್ಕೆ ಎಣಿಸುತ್ತಾ ಹೋಗುವಲ್ಲಿ, ನಾವು 1914ರ ಅಂತ್ಯಭಾಗಕ್ಕೆ ಬಂದು ಮುಟ್ಟುತ್ತೇವೆ. ಆ ಸಮಯದಲ್ಲಿ ಅಭಿಷಿಕ್ತ ಜನರ ಚಿಕ್ಕ ಗುಂಪು, ಹಿಂಸೆಯ ಆಕ್ರಮಣಕ್ಕೆ ತನ್ನನ್ನು ಸಿದ್ಧಗೊಳಿಸಿಕೊಳ್ಳುತ್ತಾ ಇತ್ತು. Iನೆಯ ಲೋಕ ಯುದ್ಧವು ಆರಂಭಗೊಂಡಿತ್ತು, ಮತ್ತು ಅವರ ಕೆಲಸಕ್ಕೆ ಅತ್ಯಧಿಕ ವಿರೋಧವು ತೋರಿಸಲ್ಪಟ್ಟಿತು. 1915ನೆಯ ವರ್ಷದಲ್ಲಿ, “ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವುದು ನಿಮ್ಮಿಂದಾದೀತೇ?” ಎಂದು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕೇಳಿದ್ದ ಪ್ರಶ್ನೆಯ ಮೇಲೆ ಅವರ ವಾರ್ಷಿಕ ವಚನವು ಆಧಾರಿತವಾಗಿತ್ತು. (ಮತ್ತಾಯ 20:​22, ಕಿಂಗ್‌ ಜೇಮ್ಸ್‌ ವರ್ಷನ್‌) ಪ್ರಕಟನೆ 11:3ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ, ತದನಂತರ ಬಂದ 1,260 ದಿನಗಳ ಕಾಲಾವಧಿಯು, ಅಭಿಷಿಕ್ತರಿಗೆ ಗೋಳಾಟದ ಸಮಯವಾಗಿತ್ತು. ಅದು ಅವರು ಗೋಣಿತಟ್ಟನ್ನು ಹೊದ್ದುಕೊಂಡು ಪ್ರವಾದಿಸುತ್ತಿದ್ದಾರೋ ಎಂಬಂತಿತ್ತು. ಹಿಂಸೆಯು ತೀವ್ರಗೊಂಡಿತು. ಅವರಲ್ಲಿ ಕೆಲವರು ಸೆರೆಮನೆಗೆ ಹಾಕಲ್ಪಟ್ಟರು, ಇತರರು ಜನರ ಆಕ್ರಮಣಕ್ಕೆ ಮತ್ತು ಇನ್ನಿತರರು ಚಿತ್ರಹಿಂಸೆಗೆ ಗುರಿಯಾದರು. 1916ರಲ್ಲಿ, ಸೊಸೈಟಿಯ ಮೊದಲ ಅಧ್ಯಕ್ಷರಾಗಿದ್ದ ಸಿ. ಟಿ. ರಸ್ಸಲರ ಮರಣಾನಂತರ ಅನೇಕರು ಧೈರ್ಯ ಕಳೆದುಕೊಂಡರು. ಆದರೂ, ಒಂದು ಸಾರುವ ಸಂಸ್ಥೆಯೋಪಾದಿ ಇದ್ದ ಈ ಪವಿತ್ರ ಜನರ ಕೊಲ್ಲುವಿಕೆಯೊಂದಿಗೆ ಕೊನೆಗೊಂಡ ಅಂಧಕಾರದ ಸಮಯಾವಧಿಯ ಬಳಿಕ ಏನು ಸಂಭವಿಸಲಿಕ್ಕಿತ್ತು?

19. ಪ್ರಕಟನೆ 11ನೆಯ ಅಧ್ಯಾಯದಲ್ಲಿರುವ ಪ್ರವಾದನೆಯು, ಅಭಿಷಿಕ್ತ ಜನರು ಬಹಳ ಸಮಯದ ವರೆಗೆ ಮೌನರಾಗಿ ಉಳಿಯುವುದಿಲ್ಲ ಎಂಬುದರ ಬಗ್ಗೆ ನಮಗೆ ಹೇಗೆ ಆಶ್ವಾಸನೆ ನೀಡುತ್ತದೆ?

19 “ಇಬ್ಬರು ಸಾಕ್ಷಿಗಳು” ಕೊಲ್ಲಲ್ಪಟ್ಟ ಬಳಿಕ, ಅವರು ಪುನರುಜ್ಜೀವಿಸಲ್ಪಡುವ ತನಕ ಕೇವಲ ಅಲ್ಪ ಕಾಲಾವಧಿಯ ವರೆಗೆ, ಅಂದರೆ ಮೂರೂವರೆ ದಿನಗಳ ವರೆಗೆ ಮೃತ ಸ್ಥಿತಿಯಲ್ಲಿರುತ್ತಾರೆ ಎಂದು, ಪ್ರಕಟನೆ 11:​3, 9, 11ರಲ್ಲಿ ಕಂಡುಬರುವ ಇನ್ನೊಂದು ಸಮಾಂತರ ಪ್ರವಾದನೆಯು ತೋರಿಸುತ್ತದೆ. ತದ್ರೀತಿಯಲ್ಲಿ, ಪವಿತ್ರ ಜನರು ಬಹಳ ಸಮಯದ ವರೆಗೆ ಮೌನವಾಗಿರಸಾಧ್ಯವಿರಲಿಲ್ಲ, ಏಕೆಂದರೆ ಅವರು ಇನ್ನೂ ಹೆಚ್ಚಿನ ಕೆಲಸಗಳನ್ನು ಪೂರೈಸಲಿಕ್ಕಿತ್ತು ಎಂದು ದಾನಿಯೇಲ 12ನೆಯ ಅಧ್ಯಾಯದಲ್ಲಿರುವ ಪ್ರವಾದನೆಯು ತೋರಿಸುತ್ತದೆ.

ಅವರು ‘ಶುದ್ಧೀಕರಿಸಿ, ಶುಭ್ರಮಾಡಿಕೊಂಡು, ಶೋಧಿತ’ರಾಗುತ್ತಾರೆ

20. ದಾನಿಯೇಲ 12:10ಕ್ಕನುಸಾರ, ಅಭಿಷಿಕ್ತರ ಕಷ್ಟಕರ ಅನುಭವಗಳ ಬಳಿಕ ಅವರ ಮೇಲೆ ಯಾವ ಆಶೀರ್ವಾದಗಳು ಸುರಿಸಲ್ಪಡಲಿಕ್ಕಿದ್ದವು?

20 ಈ ಮುಂಚೆ ಗಮನಿಸಿದಂತೆ, ದಾನಿಯೇಲನು ಈ ಸಂಗತಿಗಳನ್ನು ಬರೆದನಾದರೂ ಅವುಗಳನ್ನು ಅವನು ಅರ್ಥಮಾಡಿಕೊಳ್ಳಲಿಲ್ಲ. ಆದರೂ, ಪವಿತ್ರ ಜನರು ತಮ್ಮ ವೈರಿಗಳ ಕೈಗೆ ಸಿಕ್ಕಿ ಸಂಪೂರ್ಣವಾಗಿ ನಾಶವಾಗುವರೋ ಏನೋ ಎಂದು ಅವನು ಸಂಶಯಪಟ್ಟಿದ್ದಿರಬೇಕು. ಏಕೆಂದರೆ, “ಈ ಕಾರ್ಯಗಳ ಪರಿಣಾಮವೇನು”? ಎಂದು ಅವನು ಕೇಳಿದನು. ಅದಕ್ಕೆ ದೇವದೂತನು ಉತ್ತರಿಸಿದ್ದು: “ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದ ವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು. ಅನೇಕರು ತಮ್ಮನ್ನು ಶುದ್ಧೀಕರಿಸಿ ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವದು.” (ದಾನಿಯೇಲ 12:​8-10) ಪವಿತ್ರ ಜನರಿಗೆ ದೃಢವಾದ ನಿರೀಕ್ಷೆಯಿತ್ತು! ನಾಶಮಾಡಲ್ಪಡುವುದಕ್ಕೆ ಬದಲಾಗಿ, ಅವರು ಶುಭ್ರಗೊಳಿಸಲ್ಪಡಲಿಕ್ಕಿದ್ದರು, ಅಂದರೆ ಯೆಹೋವ ದೇವರ ಮುಂದೆ ಒಂದು ಶುದ್ಧವಾದ ನಿಲುವಿನಿಂದ ಆಶೀರ್ವದಿಸಲ್ಪಡಲಿಕ್ಕಿದ್ದರು. (ಮಲಾಕಿಯ 3:​1-3) ಆತ್ಮಿಕ ವಿಷಯಗಳಲ್ಲಿ ಅವರಿಗಿದ್ದ ಜ್ಞಾನವು, ದೇವರ ದೃಷ್ಟಿಯಲ್ಲಿ ತಮ್ಮನ್ನು ಶುದ್ಧರನ್ನಾಗಿ ಇರಿಸಿಕೊಳ್ಳಲು ಅವರಿಗೆ ಸಹಾಯ ಮಾಡಲಿತ್ತು. ಇದಕ್ಕೆ ವಿರುದ್ಧವಾಗಿ, ದುಷ್ಟರು ಆತ್ಮಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ನಿರಾಕರಿಸಲಿದ್ದರು. ಆದರೆ ಇದೆಲ್ಲಾ ಯಾವಾಗ ಸಂಭವಿಸಲಿಕ್ಕಿತ್ತು?

21. (ಎ) ಯಾವ ಸ್ಥಿತಿಗಳು ಕಾರ್ಯರೂಪಕ್ಕೆ ತರಲ್ಪಟ್ಟಾಗ, ದಾನಿಯೇಲ 12:11ರಲ್ಲಿ ಮುಂತಿಳಿಸಲ್ಪಟ್ಟ ಕಾಲಾವಧಿಯು ಆರಂಭಗೊಳ್ಳುವುದು? (ಬಿ) “ನಿತ್ಯಹೋಮವು” ಏನಾಗಿತ್ತು, ಮತ್ತು ಅದು ಯಾವಾಗ ತೆಗೆದುಹಾಕಲ್ಪಟ್ಟಿತು? (298ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)

21 ದಾನಿಯೇಲನಿಗೆ ಹೀಗೆ ಹೇಳಲಾಯಿತು: “ನಿತ್ಯಹೋಮವು ನೀಗಿಸಲ್ಪಟ್ಟು ಹಾಳುಮಾಡುವ ಅಸಹ್ಯವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರ ತ್ತೊಂಭತ್ತು ದಿನಗಳು ಕಳೆಯಬೇಕು.” ಆದುದರಿಂದ, ಕೆಲವೊಂದು ಸ್ಥಿತಿಗಳು ನೆರವೇರಿದಾಗ ಈ ಕಾಲಾವಧಿಯು ಆರಂಭಗೊಳ್ಳಲಿತ್ತು. ಮೊದಲಾಗಿ “ನಿತ್ಯಹೋಮ” ಅಥವಾ “ನಿತ್ಯ ಯಜ್ಞ”ವು * ತೆಗೆದುಹಾಕಲ್ಪಡಬೇಕಿತ್ತು. (ದಾನಿಯೇಲ 12:​11, NW ಪಾದಟಿಪ್ಪಣಿ) ದೇವದೂತನು ಯಾವ ಯಜ್ಞದ ಬಗ್ಗೆ ಹೇಳಿದನು? ಯಾವುದೇ ಭೂಆಲಯದಲ್ಲಿ ಅರ್ಪಿಸಲ್ಪಡುವ ಯಜ್ಞಗಳ​ ಬಗ್ಗೆ ಹೇಳಲಿಲ್ಲ. ಒಂದು ಕಾಲದಲ್ಲಿ ಯೆರೂಸಲೇಮಿನಲ್ಲಿ ನೆಲೆಸಿದ್ದಂತಹ ದೇವಾಲಯವು ಸಹ ಯೆಹೋವನ ಮಹಾ ಆತ್ಮಿಕ ಆಲಯದ ಕೇವಲ “ಅನುರೂಪ”ವಾಗಿತ್ತು. ಮತ್ತು ಸಾ.ಶ. 29ರಲ್ಲಿ ಕ್ರಿಸ್ತನು ಯೆಹೋವನ ಆತ್ಮಿಕ ಆಲಯದ ಮಹಾ ಯಾಜಕನಾದಾಗ, ಆ ಆತ್ಮಿಕ ಆಲಯವು ಕಾರ್ಯನಡಿಸಲು ಆರಂಭಿಸಿತ್ತು! ಶುದ್ಧ ಆರಾಧನೆಗಾಗಿರುವ ದೇವರ ಏರ್ಪಾಡನ್ನು ಪ್ರತಿನಿಧಿಸುವ ಈ ಆತ್ಮಿಕ ಆಲಯದಲ್ಲಿ, ನಿತ್ಯವಾದ ಪಾಪನಿವಾರಣಾ ಯಜ್ಞಗಳ ಅಗತ್ಯವಿರಲಿಲ್ಲ, ಏಕೆಂದರೆ “ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತನಾದನು.” (ಇಬ್ರಿಯ ​9:24-28) ಆದರೂ, ಸತ್ಯ ಕ್ರೈಸ್ತರೆಲ್ಲರೂ ಈ ದೇವಾಲಯದಲ್ಲಿ ಯಜ್ಞಗಳನ್ನು ಸಮರ್ಪಿಸುತ್ತಾರೆ. ಅಪೊಸ್ತಲ ಪೌಲನು ಬರೆದುದು: “ಆತನ [ಕ್ರಿಸ್ತನ] ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿಯ 13:15) ಹೀಗೆ, ಆ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವ ಮೊದಲ ಸ್ಥಿತಿಯು, ಅಂದರೆ “ನಿತ್ಯಹೋಮ”ವನ್ನು ತೆಗೆದುಹಾಕುವಂತಹ ಕೆಲಸವು, 1918ರ ಮಧ್ಯಭಾಗದಲ್ಲಿ ಸಾರುವ ಕೆಲಸವು ನಿಲ್ಲಿಸಲ್ಪಟ್ಟಾಗ ನೆರವೇರಿತು.

22. (ಎ) ಹಾಳುಮಾಡುವ “ಅಸಹ್ಯವಸ್ತುವು” ಏನಾಗಿದೆ, ಮತ್ತು ಅದು ಯಾವಾಗ ಪ್ರತಿಷ್ಠಿಸಲ್ಪಟ್ಟಿತು? (ಬಿ) ದಾನಿಯೇಲ 12:11ರಲ್ಲಿ ಮುಂತಿಳಿಸಲ್ಪಟ್ಟಿರುವ ಕಾಲಾವಧಿಯು ಯಾವಾಗ ಆರಂಭಗೊಂಡಿತು, ಮತ್ತು ಯಾವಾಗ ಕೊನೆಗೊಂಡಿತು?

22 “ಹಾಳುಮಾಡುವ ಅಸಹ್ಯವಸ್ತು”ವನ್ನು ‘ಪ್ರತಿಷ್ಠಿಸು’ವಂತಹ ಅಥವಾ ಸ್ಥಾಪಿಸುವಂತಹ ಎರಡನೆಯ ಸ್ಥಿತಿಯ ಕುರಿತಾಗಿ ಏನು? ದಾನಿಯೇಲ 11:31ರ ಕುರಿತಾದ ಚರ್ಚೆಯಲ್ಲಿ ನಾವು ನೋಡಿದಂತೆ, ಈ ಅಸಹ್ಯವಸ್ತು ಮೊದಲು ಜನಾಂಗ ಸಂಘವಾಗಿತ್ತು ಮತ್ತು ತದನಂತರ ವಿಶ್ವ ಸಂಸ್ಥೆಯಾಗಿ ಪುನಃ ಅಸ್ತಿತ್ವಕ್ಕೆ ಬಂತು. ಈ ಸಂಘಗಳು ಹೇಗೆ ಅಸಹ್ಯವಸ್ತುಗಳಾಗಿವೆಯೆಂದರೆ, ಭೂಮಿಯ ಮೇಲಿನ ಶಾಂತಿಗಾಗಿರುವ ಏಕಮಾತ್ರ ನಿರೀಕ್ಷೆಯ ಸ್ಥಾನದಲ್ಲಿ ಇವುಗಳನ್ನು ಇರಿಸಲಾಗಿದೆ. ಹೀಗೆ, ಅನೇಕರ ಹೃದಯಗಳಲ್ಲಿ ಈ ಸಂಘಗಳಿಗೆ ನಿಜವಾಗಿಯೂ ದೇವರ ರಾಜ್ಯದ ಸ್ಥಾನವು ದೊರಕಿದೆ! 1919ರ ಜನವರಿ ತಿಂಗಳಿನಲ್ಲಿ ಜನಾಂಗ ಸಂಘವು ಅಧಿಕೃತವಾಗಿ ಪ್ರಸ್ತಾಪಿಸಲ್ಪಟ್ಟಿತು. ಆದುದರಿಂದ, ಆ ಸಮಯದಲ್ಲಿ ದಾನಿಯೇಲ 12:11ರಲ್ಲಿ ತಿಳಿಸಲ್ಪಟ್ಟಿರುವ ಎರಡೂ ಸ್ಥಿತಿಗಳು ನೆರವೇರಿದವು. ಹೀಗೆ 1,290 ದಿನಗಳು, (ಉತ್ತರಾರ್ಧಗೋಳದಲ್ಲಿ) 1919ರ ಆದಿಭಾಗದಲ್ಲಿ ಆರಂಭಗೊಂಡವು ಮತ್ತು 1922ರ ಶರತ್ಕಾಲದ ತನಕ ಮುಂದುವರಿದವು.

23. ದಾನಿಯೇಲ 12ನೆಯ ಅಧ್ಯಾಯದಲ್ಲಿ ಮುಂತಿಳಿಸಲ್ಪಟ್ಟಿರುವ 1,290 ದಿನಗಳ ಕಾಲಾವಧಿಯಲ್ಲಿ, ದೇವರ ಪವಿತ್ರ ಜನರು ಒಂದು ಶುದ್ಧವಾದ ನಿಲುವಿನ ಕಡೆಗೆ ಹೇಗೆ ಪ್ರಗತಿಮಾಡಿದರು?

23 ಆ ಸಮಯದಲ್ಲಿ ಪವಿತ್ರ ಜನರು ದೇವರ ದೃಷ್ಟಿಯಲ್ಲಿ ನಿರ್ಮಲರೂ ಶುದ್ಧರೂ ಆಗಿ ಕಾಣಿಸಿಕೊಳ್ಳಲಿಕ್ಕಾಗಿ ಪ್ರಗತಿಯನ್ನು ಮಾಡಿದರೊ? ಖಂಡಿತವಾಗಿಯೂ! 1919ರ ಮಾರ್ಚ್‌ ತಿಂಗಳಿನಲ್ಲಿ, ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರನ್ನು ಹಾಗೂ ಅವರ ಜೊತೆಯಲ್ಲಿದ್ದವರನ್ನು ಸೆರೆಯಿಂದ ಬಿಡುಗಡೆಮಾಡಲಾಯಿತು. ಸಮಯಾನಂತರ ಅವರ ವಿರುದ್ಧ ಹೊರಿಸಲ್ಪಟ್ಟಿದ್ದ ಸುಳ್ಳಾರೋಪಗಳಿಂದ ಅವರು ಸಂಪೂರ್ಣವಾಗಿ ದೋಷಮುಕ್ತರಾದರು. ತಮ್ಮ ಕೆಲಸವು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಅವರಿಗೆ ಗೊತ್ತಿದ್ದುದರಿಂದ, ಆ ಕೂಡಲೆ ಅವರು ಕಾರ್ಯತತ್ಪರರಾದರು, ಮತ್ತು 1919ರ ಸೆಪ್ಟಂಬರ್‌ ತಿಂಗಳಿನಲ್ಲಿ ಒಂದು ಅಧಿವೇಶನವನ್ನು ಯೋಜಿಸಿದರು. ಅದೇ ವರ್ಷದಲ್ಲಿ ದ ವಾಚ್‌ ಟವರ್‌ ಪತ್ರಿಕೆಯ ಸಂಗಾತಿ ಪತ್ರಿಕೆಯೊಂದು ಪ್ರಪ್ರಥಮ ಬಾರಿಗೆ ಪ್ರಕಾಶಿಸಲ್ಪಟ್ಟಿತು. ಮೊದಮೊದಲು ದ ಗೋಲ್ಡನ್‌ ಏಜ್‌ (ಈಗ ಎಚ್ಚರ!) ಎಂದು ಕರೆಯಲ್ಪಡುತ್ತಿದ್ದ ಈ ಪತ್ರಿಕೆಯು, ಈ ಲೋಕದ ಭ್ರಷ್ಟಾಚಾರವನ್ನು ನಿರ್ಭಯವಾಗಿ ಬಯಲುಪಡಿಸುವುದರಲ್ಲಿ ಹಾಗೂ ಶುದ್ಧರಾಗಿ ಉಳಿಯುವಂತೆ ದೇವರ ಜನರಿಗೆ ಸಹಾಯ ಮಾಡುವುದರಲ್ಲಿ ಯಾವಾಗಲೂ ದ ವಾಚ್‌ಟವರ್‌ ಪತ್ರಿಕೆಗೆ ಬೆಂಬಲ ನೀಡಿದೆ. ಮುಂತಿಳಿಸಲ್ಪಟ್ಟ 1,290 ದಿನಗಳು ಮುಗಿಯುವಷ್ಟರೊಳಗೆ, ಪವಿತ್ರ ಜನರು ಹೆಚ್ಚುಕಡಿಮೆ ಶುದ್ಧವಾದ ಹಾಗೂ ಪುನಸ್ಸ್ಥಾಪಿತ ನಿಲುವನ್ನು ಮುಟ್ಟುವುದರಲ್ಲಿದ್ದರು. 1922ರ ಸೆಪ್ಟಂಬರ್‌ ತಿಂಗಳಿನಲ್ಲಿ, ಅಂದರೆ ಈ ಕಾಲಾವಧಿಯು ಕೊನೆಗೊಂಡ ಸಮಯಕ್ಕೆ ಸರಿಯಾಗಿ, ಅಮೆರಿಕದ ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ಅವರು ಒಂದು ಇತಿಹಾಸ ಪ್ರಸಿದ್ಧ ಅಧಿವೇಶನವನ್ನು ನಡಿಸಿದರು. ಇದು ಸಾರುವ ​ಕೆಲಸಕ್ಕೆ ಪ್ರಚಂಡವಾದ ಪ್ರೋತ್ಸಾಹವನ್ನು ನೀಡಿತು. ಆದರೂ, ಇನ್ನೂ ಹೆಚ್ಚಿನ ಪ್ರಗತಿಯನ್ನು ಮಾಡುವ ಅಗತ್ಯವಿತ್ತು. ಅದು ಮುಂದಿನ ನಿಗದಿತ ಕಾಲಾವಧಿಗಾಗಿ ​ಉಳಿಯಿತು.

ಪವಿತ್ರ ಜನರಿಗೆ ಸಂತೋಷಕರ ಸಮಯ

24, 25. (ಎ) ದಾನಿಯೇಲ 12:12ರಲ್ಲಿ ಯಾವ ಕಾಲಾವಧಿಯ ಕುರಿತು ಮುಂತಿಳಿಸಲಾಗಿದೆ, ಮತ್ತು ಅದು ನಿಜವಾಗಿಯೂ ಯಾವಾಗ ಆರಂಭಗೊಂಡಿತು ಹಾಗೂ ಕೊನೆಗೊಂಡಿತು? (ಬಿ) 1,335 ದಿನಗಳ ಆರಂಭದಲ್ಲಿ, ಅಭಿಷಿಕ್ತ ಉಳಿಕೆಯವರ ಆತ್ಮಿಕ ಸ್ಥಿತಿಗತಿಯು ಹೇಗಿತ್ತು?

24 ಯೆಹೋವನ ದೂತನು ಪವಿತ್ರ ಜನರ ಕುರಿತಾದ ತನ್ನ ಪ್ರವಾದನೆಯನ್ನು ಈ ಮಾತುಗಳಿಂದ ಮುಕ್ತಾಯಗೊಳಿಸುತ್ತಾನೆ: “ಕಾದುಕೊಂಡು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯ ಮಟ್ಟಿಗೆ ತಾಳಿರುವವನು ಧನ್ಯನು [“ಸಂತೋಷಿತನು,” NW].” (ದಾನಿಯೇಲ 12:12) ಈ ಕಾಲಾವಧಿಯು ಯಾವಾಗ ಆರಂಭಗೊಳ್ಳುತ್ತದೆ ಮತ್ತು ಕೊನೆಗೊಳ್ಳುತ್ತದೆ ಎಂಬುದರ ಕುರಿತು ದೇವದೂತನು ಯಾವುದೇ ಸುಳಿವನ್ನು ಕೊಡುವುದಿಲ್ಲ. ಈ ಮೂರನೆಯ ಕಾಲಾವಧಿಯು, ಇದಕ್ಕೆ ಮುಂಚೆ ತಿಳಿಯಪಡಿಸಿದ್ದ ಕಾಲಾವಧಿಯ ಬಳಿಕ ಕೂಡಲೇ ಆರಂಭವಾಯಿತು ಎಂದು ಇತಿಹಾಸವು ಸೂಚಿಸುತ್ತದೆ. ಹೀಗಿರುವಲ್ಲಿ, ಈ ಕಾಲಾವಧಿಯು (ಉತ್ತರಾರ್ಧಗೋಳದಲ್ಲಿ) 1922ರ ಶರತ್ಕಾಲದಿಂದ ಆರಂಭವಾಗಿ 1926ರ ವಸಂತಕಾಲದ ಕೊನೆಯ ಭಾಗದ ತನಕ ಮುಂದುವರಿಯುವುದು. ಆ ಕಾಲಾವಧಿಯ ಅಂತ್ಯದಷ್ಟಕ್ಕೆ ಪವಿತ್ರ ಜನರು ಒಂದು ಸಂತೋಷಕರವಾದ ಸ್ಥಿತಿಯಲ್ಲಿದ್ದರೋ? ಹೌದು, ಪ್ರಮುಖವಾದ ಆತ್ಮಿಕ ವಿಧಗಳಲ್ಲಿ.

25 ಇಸವಿ 1922ರಲ್ಲಿ ನಡೆದ ಅಧಿವೇಶನದ (302ನೆಯ ಪುಟದಲ್ಲಿ ತೋರಿಸಲ್ಪಟ್ಟಿದೆ) ಬಳಿಕವೂ, ದೇವರ ಪವಿತ್ರ ಜನರಲ್ಲಿ ಕೆಲವರು ಗತಕಾಲವನ್ನು ಆಸೆಯಿಂದ ನೋಡುತ್ತಿದ್ದರು. ಅವರ ಕೂಟಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಅಭ್ಯಾಸದ ಮೂಲಭೂತ ಪಠ್ಯಪುಸ್ತಕವು, ಬೈಬಲು ಹಾಗೂ ಸಿ. ಟಿ. ರಸ್ಸಲರು ಬರೆದಿದ್ದ ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಸಂಪುಟವಾಗಿತ್ತು. ಆ ಸಮಯದಲ್ಲಿ, 1925ನೆಯ ವರ್ಷವು, ಪುನರುತ್ಥಾನವು ಆರಂಭಗೊಳ್ಳುವ ಹಾಗೂ ಭೂಮಿಯ ಮೇಲೆ ಪ್ರಮೋದವನವು ಪುನಸ್ಸ್ಥಾಪಿಸಲ್ಪಡುವ ವರ್ಷವಾಗಿದೆ ಎಂಬ ದೃಷ್ಟಿಕೋನವು ವ್ಯಾಪಕವಾಗಿತ್ತು. ಹೀಗೆ, ಒಂದು ನಿರ್ದಿಷ್ಟ ತಾರೀಖನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ಅನೇಕರು ದೇವರ ಸೇವೆಮಾಡುತ್ತಿದ್ದರು. ಕೆಲವರು ದುರಹಂಕಾರದಿಂದ ಸಾರ್ವಜನಿಕರಿಗೆ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ಇದು ಒಂದು ಸಂತೋಷಕರ ವಾತಾವರಣವಾಗಿರಲಿಲ್ಲ.

26. ಸಾವಿರದ ಮುನ್ನೂರ ಮೂವತ್ತೈದು ದಿನಗಳು ಮುಂದುವರಿದಂತೆ ಅಭಿಷಿಕ್ತ ಜನರ ಆತ್ಮಿಕ ಸ್ಥಿತಿಗತಿಯು ಹೇಗೆ ಬದಲಾಯಿತು?

26 ಆದರೂ, 1,335 ದಿನಗಳು ಮುಂದುವರಿದಂತೆ, ಈ ಎಲ್ಲ ಸನ್ನಿವೇಶಗಳು ಬದಲಾಗತೊಡಗಿದವು. ಪ್ರತಿಯೊಬ್ಬರೂ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಕ್ರಮವಾದ ಏರ್ಪಾಡುಗಳು ಮಾಡಲ್ಪಟ್ಟಾಗ, ಸಾರುವ ಕೆಲಸಕ್ಕೆ ಪ್ರಮುಖ ಸ್ಥಾನವು ಕೊಡಲ್ಪಟ್ಟಿತು. ಪ್ರತಿ ವಾರ ದ ವಾಚ್‌ ಟವರ್‌ ಪತ್ರಿಕೆಯನ್ನು ಅಭ್ಯಾಸಿಸಲಿಕ್ಕಾಗಿ ಕೂಟಗಳನ್ನು ಯೋಜಿಸಲಾಯಿತು.​ ಮಾರ್ಚ್‌ 1, 1925ರ ಸಂಚಿಕೆಯಲ್ಲಿ, “ಜನಾಂಗದ ಜನನ” ಎಂಬ ಐತಿಹಾಸಿಕ ಲೇಖನವು ಕೊಡಲ್ಪಟ್ಟಿತು. 1914-19ರ ಸಮಯಾವಧಿಯಲ್ಲಿ ಏನು ಸಂಭವಿಸಿತ್ತು ಎಂಬುದರ ಕುರಿತಾದ ಸಂಪೂರ್ಣವಾದ ತಿಳಿವಳಿಕೆಯನ್ನು ಇದು ದೇವಜನರಿಗೆ ನೀಡಿತು. 1925ನೆಯ ವರ್ಷವು ಕೊನೆಗೊಂಡ ಬಳಿಕ, ಒಂದು ಸನ್ನಿಹಿತವಾದ, ಖಚಿತವಾದ ಗಡುವನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ಪವಿತ್ರ ಜನರು ದೇವರ ಸೇವೆಯನ್ನು ಮಾಡಲಿಲ್ಲ. ಬದಲಾಗಿ, ಯೆಹೋವನ ನಾಮದ ಪವಿತ್ರೀಕರಣವು ಸರ್ವಶ್ರೇಷ್ಠ ಗುರಿಯಾಗಿತ್ತು. ಜನವರಿ 1, 1926ರ ವಾಚ್‌ ಟವರ್‌ ಪತ್ರಿಕೆಯ “ಯೆಹೋವನನ್ನು ಯಾರು ಘನಪಡಿಸುವರು?” ಎಂಬ ಲೇಖನದಲ್ಲಿ, ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಪ್ರಾಮುಖ್ಯ ಸತ್ಯವು ಎತ್ತಿತೋರಿಸಲ್ಪಟ್ಟಿತು. 1926ರ ಮೇ ತಿಂಗಳಿನಲ್ಲಿ ನಡೆದ ಅಧಿವೇಶನದಲ್ಲಿ, ಡಿಲಿವರೆನ್ಸ್‌ ಎಂಬ ಪುಸ್ತಕವು ಬಿಡುಗಡೆಮಾಡಲ್ಪಟ್ಟಿತು. (302ನೆಯ ಪುಟವನ್ನು ನೋಡಿರಿ.) ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ಗೆ ಬದಲಾಗಿ ರಚಿಸಲ್ಪಟ್ಟ ಬೇರೆ ಬೇರೆ ಹೊಸ ಪುಸ್ತಕಗಳಲ್ಲಿ ಇದು ಒಂದಾಗಿತ್ತು. ಪವಿತ್ರ ಜನರು ಇನ್ನೆಂದಿಗೂ ಗತಕಾಲವನ್ನು ಆಸೆಯಿಂದ ನೋಡುತ್ತಿರಲಿಲ್ಲ. ಅವರು ಭವಿಷ್ಯತ್ತಿನ ಕಡೆಗೆ ಹಾಗೂ ತಮ್ಮ ಮುಂದಿದ್ದ ಕೆಲಸದ ಕಡೆಗೆ ದೃಢಭರವಸೆಯಿಂದ ನೋಡುತ್ತಿದ್ದರು. ಆದುದರಿಂದ, ಪ್ರವಾದಿಸಲ್ಪಟ್ಟಂತೆಯೇ, ಪವಿತ್ರ ಜನರು ಸಂತೋಷಭರಿತ ಸ್ಥಿತಿಯಲ್ಲಿರುವಾಗಲೇ 1,335 ದಿನಗಳು ಕೊನೆಗೊಂಡವು.

27. ದಾನಿಯೇಲ ಪುಸ್ತಕದ 12ನೆಯ ಅಧ್ಯಾಯವನ್ನು ಪರಿಶೀಲಿಸುವುದು, ಯೆಹೋವನ ಅಭಿಷಿಕ್ತ ಜನರನ್ನು ನಿರ್ಣಾಯಕವಾಗಿ ಗುರುತಿಸಲು ನಮಗೆ ಹೇಗೆ ಸಹಾಯ ಮಾಡುತ್ತದೆ?

27 ಅತ್ಯಧಿಕ ಗೊಂದಲದಿಂದ ಕೂಡಿದ್ದ ಈ ಸಮಯದಲ್ಲಿ ಎಲ್ಲರೂ ತಾಳ್ಮೆಯನ್ನು ತೋರಿಸಲಿಲ್ಲ ಎಂಬುದಂತೂ ಖಂಡಿತ. ಆದುದರಿಂದಲೇ ದೇವದೂತನು ‘ಕಾದುಕೊಂಡು’ ಇರುವುದರ ಪ್ರಮುಖತೆಯನ್ನು ಒತ್ತಿಹೇಳಿದನು ಎಂಬುದರಲ್ಲಿ ಸಂದೇಹವೇ ಇಲ್ಲ. ಯಾರು ತಾಳ್ಮೆಯನ್ನು ತೋರಿಸಿ ಕಾದುಕೊಂಡಿದ್ದರೋ, ಅವರು ಬಹಳವಾಗಿ ಆಶೀರ್ವದಿಸಲ್ಪಟ್ಟರು. ದಾನಿಯೇಲ ಪುಸ್ತಕದ 12ನೆಯ ಅಧ್ಯಾಯವನ್ನು ಪರಿಶೀಲಿಸುವಲ್ಲಿ, ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಮುಂತಿಳಿಸಲ್ಪಟ್ಟಂತೆಯೇ, ಆತ್ಮಿಕ ಅರ್ಥದಲ್ಲಿ ಅಭಿಷಿಕ್ತರು ಪುನರುಜ್ಜೀವಿತರಾದರು, ಅಥವಾ ಪುನರುತ್ಥಾನಗೊಳಿಸಲ್ಪಟ್ಟರು. ದೇವರ ವಾಕ್ಯದ ಬಗ್ಗೆ ಅವರಿಗೆ ಅಸಾಮಾನ್ಯವಾದ ಅಂತರ್ದೃಷ್ಟಿಯು ಕೊಡಲ್ಪಟ್ಟಿತು, ಮತ್ತು ಅವರು ಅದರಲ್ಲಿ “ಅತ್ತಿತ್ತ ತಿರುಗ”ಲು ಸಮರ್ಥರಾದರು, ಹಾಗೂ ಪವಿತ್ರಾತ್ಮದಿಂದ ಮಾರ್ಗದರ್ಶಿತರಾಗಿ ದೀರ್ಘಕಾಲದಿಂದಲೂ ರಹಸ್ಯವಾಗಿ ಉಳಿದಿದ್ದ ಸಂಗತಿಗಳನ್ನು ಬಹಿರಂಗಪಡಿಸಿದರು. ಯೆಹೋವನು ಅವರನ್ನು ಶುದ್ಧೀಕರಿಸಿದನು ಹಾಗೂ ಅವರು ಆತ್ಮಿಕವಾಗಿ ನಕ್ಷತ್ರಗಳಷ್ಟು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಿದನು. ಇದರ ಪರಿಣಾಮವಾಗಿ, ಅವರು ಅನೇಕರನ್ನು ಯೆಹೋವ ದೇವರ ಮುಂದೆ ಒಂದು ನೀತಿಯ ನಿಲುವಿಗೆ ಬರುವಂತೆ ಮಾಡಿದರು.

28, 29. “ಅಂತ್ಯಕಾಲ”ವು ಸಮಾಪ್ತಿಗೆ ಬರುತ್ತಿರುವಾಗ, ನಮ್ಮ ದೃಢನಿರ್ಧಾರವು ಏನಾಗಿರತಕ್ಕದ್ದು?

28 “ಪರಾತ್ಪರನ ಪವಿತ್ರ ಜನರನ್ನು” ಗುರುತಿಸಲಿಕ್ಕಾಗಿಯೇ ಈ ಎಲ್ಲ ಪ್ರವಾದನಾ ಗುರುತುಗಳು ಕೊಡಲ್ಪಟ್ಟಿರುವುದರಿಂದ, ಅವರನ್ನು ಗುರುತಿಸಿ, ಅವರೊಂದಿಗೆ ಸಹವಾಸ ಮಾಡಲು ತಪ್ಪಿಹೋಗುವುದಕ್ಕೆ ಇನ್ನಾವ ನೆಪವನ್ನು ಕೊಡಸಾಧ್ಯವಿದೆ? ಕಡಿಮೆಯಾಗುತ್ತಾ ಹೋಗುತ್ತಿರುವ ಅಭಿಷಿಕ್ತ ವರ್ಗದೊಂದಿಗೆ ಯೆಹೋವನ ಸೇವೆಮಾಡುವುದರಲ್ಲಿ ಜೊತೆಗೂಡುತ್ತಿರುವ ಮಹಾ ಸಮೂಹಕ್ಕಾಗಿ ಅದ್ಭುತ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ. ನಾವೆಲ್ಲರೂ ದೇವರ ವಾಗ್ದಾನಗಳ ನೆರವೇರಿಕೆಯನ್ನು ನಿರೀಕ್ಷಿಸುತ್ತಾ ಇರಬೇಕು. (ಹಬಕ್ಕೂಕ 2:⁠3) ನಮ್ಮ ದಿನಗಳಲ್ಲಿ, ಮಹಾ ಪ್ರಭುವಾದ ಮೀಕಾಯೇಲನು, ಅನೇಕ ದಶಕಗಳಿಂದಲೂ ದೇವರ ಜನರ ಪರವಾಗಿ ನಿಂತುಕೊಂಡಿದ್ದಾನೆ. ಅತಿ ಬೇಗನೆ ಅವನು ಈ ವಿಷಯಗಳ ವ್ಯವಸ್ಥೆಯ ದೈವಿಕವಾಗಿ ನೇಮಿತನಾದ ವಧಕಾರನೋಪಾದಿ ಕಾರ್ಯನಡಿಸಲು ಪ್ರಾರಂಭಿಸುವನು. ಅವನು ಹಾಗೆ ಮಾಡುವಾಗ ನಮ್ಮ ಸನ್ನಿವೇಶವು ಏನಾಗಿರುವುದು?

29 ಆ ಪ್ರಶ್ನೆಗೆ ಉತ್ತರವು, ನಾವು ಈಗಲೇ ಒಂದು ಯಥಾರ್ಥ ಜೀವನವನ್ನು ನಡೆಸುವ ಆಯ್ಕೆಮಾಡುತ್ತೇವೋ ಇಲ್ಲವೋ ಎಂಬುದರ ಮೇಲೆ ಅವಲಂಬಿಸಿರುವುದು. ಈ “ಅಂತ್ಯಕಾಲ”ವು ಅದರ ಸಮಾಪ್ತಿಯನ್ನು ಸಮೀಪಿಸುತ್ತಿರುವಾಗ, ಅಂತಹ ಜೀವನವನ್ನು ನಡೆಸುವ ನಮ್ಮ ದೃಢನಿರ್ಧಾರವನ್ನು ಬಲಗೊಳಿಸಲಿಕ್ಕಾಗಿ, ನಾವೀಗ ದಾನಿಯೇಲ ಪುಸ್ತಕದ ಕೊನೆಯ ವಚನವನ್ನು ಪರಿಗಣಿಸೋಣ. ಮುಂದಿನ ಅಧ್ಯಾಯದಲ್ಲಿ ಅದರ ಕುರಿತಾದ ನಮ್ಮ ಚರ್ಚೆಯು, ದಾನಿಯೇಲನು ತನ್ನ ದೇವರ ಮುಂದೆ ಹೇಗೆ ನಿಂತನು ಹಾಗೂ ಭವಿಷ್ಯತ್ತಿನಲ್ಲಿ ಅವನು ಆತನ ಮುಂದೆ ಹೇಗೆ ನಿಲ್ಲುವನು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವುದು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 21 ಗ್ರೀಕ್‌ ಸೆಪ್ಟ್ಯುಅಜಿಂಟ್‌ ಬೈಬಲಿನಲ್ಲಿ “ಯಜ್ಞ” ಎಂದಷ್ಟೇ ಭಾಷಾಂತರಿಸಲ್ಪಟ್ಟಿದೆ.

ನೀವೇನನ್ನು ಗ್ರಹಿಸಿದಿರಿ?

ಯಾವ ಕಾಲಾವಧಿಯಲ್ಲಿ ಮೀಕಾಯೇಲನು ‘ನಿಂತುಕೊಂಡಿರುತ್ತಾನೆ,’ ಮತ್ತು ಅವನು ಹೇಗೆ ಹಾಗೂ ಯಾವಾಗ “ಎದ್ದುನಿಲ್ಲು”ವನು?

ದಾನಿಯೇಲ 12:2ನೆಯ ವಚನವು ಯಾವ ರೀತಿಯ ಪುನರುತ್ಥಾನವನ್ನು ಸೂಚಿಸುತ್ತದೆ?

ಈ ಕೆಳಗಿನ ಕಾಲಾವಧಿಗಳ ಆರಂಭ ಹಾಗೂ ಅಂತ್ಯವನ್ನು ಯಾವ ತಾರೀಖುಗಳು ಗುರುತಿಸುತ್ತವೆ

ದಾನಿಯೇಲ 12:7ರಲ್ಲಿ ತಿಳಿಸಲ್ಪಟ್ಟಿರುವ ಮೂರೂವರೆ ಕಾಲಗಳು?

ದಾನಿಯೇಲ 12:11ರಲ್ಲಿ ಮುಂತಿಳಿಸಲ್ಪಟ್ಟಿರುವ 1,290 ದಿನಗಳು?

ದಾನಿಯೇಲ 12:12ರಲ್ಲಿ ಪ್ರವಾದಿಸಲ್ಪಟ್ಟಿರುವ 1,335 ದಿನಗಳು?

ದಾನಿಯೇಲ ಪುಸ್ತಕದ 12ನೆಯ ಅಧ್ಯಾಯಕ್ಕೆ ಗಮನಕೊಡುವುದು, ಯೆಹೋವನ ಸತ್ಯ ಆರಾಧಕರನ್ನು ಗುರುತಿಸಲು ನಮಗೆ ಹೇಗೆ ಸಹಾಯ ಮಾಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 309 ರಲ್ಲಿರುವ ಚೌಕ]

ನಿತ್ಯಹೋಮವನ್ನು ತೆಗೆದುಹಾಕುವುದು

ದಾನಿಯೇಲ ಪುಸ್ತಕದಲ್ಲಿ, “ನಿತ್ಯಹೋಮ” ಎಂಬ ಶಬ್ದವು ಐದು ಬಾರಿ ಕಂಡುಬರುತ್ತದೆ. ಇದು ‘ಬಾಯಿಂದ ಅರಿಕೆಮಾಡುವ’ ಸ್ತುತಿಯಜ್ಞಕ್ಕೆ, ಯೆಹೋವ ದೇವರ ಸೇವಕರು ಆತನಿಗೆ ಕ್ರಮವಾಗಿ ಅರ್ಪಿಸುವ ಸ್ತುತಿಗೆ ಸೂಚಿತವಾಗಿದೆ. (ಇಬ್ರಿಯ 13:15) ಇದನ್ನು ತೆಗೆದುಹಾಕುವುದರ ಕುರಿತಾಗಿ ದಾನಿಯೇಲ 8:​11, 11:​31, ಮತ್ತು 12:11ರಲ್ಲಿ ಮುಂತಿಳಿಸಲ್ಪಟ್ಟಿದೆ.

ಎರಡೂ ಲೋಕ ಯುದ್ಧಗಳ ಸಮಯದಲ್ಲಿ, “ಉತ್ತರರಾಜ” ಹಾಗೂ “ದಕ್ಷಿಣರಾಜ”ರ ಆಧಿಪತ್ಯಗಳಲ್ಲಿ ಯೆಹೋವನ ಜನರು ತೀವ್ರವಾಗಿ ಹಿಂಸಿಸಲ್ಪಟ್ಟರು. (ದಾನಿಯೇಲ ​11:14, 15) Iನೆಯ ಲೋಕ ಯುದ್ಧದ ಅಂತ್ಯಭಾಗದಲ್ಲಿ, ಅಂದರೆ 1918ರ ಮಧ್ಯಭಾಗದಲ್ಲಿ ಸಾರುವ ಕೆಲಸವು ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಾಗ, “ನಿತ್ಯಹೋಮ”ದ ತೆಗೆದುಹಾಕುವಿಕೆಯು ಸಂಭವಿಸಿತು. (ದಾನಿಯೇಲ 12:⁠7) ತದ್ರೀತಿಯಲ್ಲಿ, IIನೆಯ ಲೋಕ ಯುದ್ಧದ ಸಮಯ​ದಲ್ಲಿ, ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿಯಿಂದ 2,300 ದಿನಗಳ ವರೆಗೆ “ನಿತ್ಯಹೋಮ”ವು ನಿಲ್ಲಿಸಲ್ಪಟ್ಟಿತು. (ದಾನಿಯೇಲ 8:​11-14; ಈ ಪುಸ್ತಕದ 10ನೆಯ ಅಧ್ಯಾಯವನ್ನು ನೋಡಿರಿ.) ನಾಸಿ “ಸೈನಿಕ”ರಿಂದ ಸಹ ಇದು ಸ್ವಲ್ಪ ಕಾಲಾವಧಿಯ ವರೆಗೆ ತೆಗೆದುಹಾಕಲ್ಪಟ್ಟಿತು; ಆದರೆ ಇದರ ನಿರ್ದಿಷ್ಟ ಕಾಲಾವಧಿಯನ್ನು ಶಾಸ್ತ್ರವಚನಗಳು ಸೂಚಿಸುವುದಿಲ್ಲ.​—⁠ದಾನಿಯೇಲ 11:31; ಈ ಪುಸ್ತಕದ 15ನೆಯ ಅಧ್ಯಾಯವನ್ನು ನೋಡಿರಿ.

[Chart/Pictures on page 301]

ದಾನಿಯೇಲ ಪುಸ್ತಕದಲ್ಲಿರುವ ಪ್ರವಾದನಾತ್ಮಕ ಕಾಲಾವಧಿಗಳು

ಏಳು ಕಾಲಗಳು (2,520 ವರ್ಷಗಳು): ಸಾ.ಶ.ಪೂ. 607ರ ಅಕ್ಟೋಬರ್‌ನಿಂದ

ದಾನಿಯೇಲ 4:​16, 25 ಸಾ.ಶ. 1914ರ ಅಕ್ಟೋಬರ್‌ ತನಕ

(ಮೆಸ್ಸೀಯನ ರಾಜ್ಯವು ಸ್ಥಾಪಿತವಾದದ್ದು.

ಈ ಪುಸ್ತಕದ 6ನೆಯ ಅಧ್ಯಾಯವನ್ನು ನೋಡಿರಿ.)

ಮೂರೂವರೆ ಕಾಲಗಳು 1914ರ ಡಿಸೆಂಬರ್‌ನಿಂದ 1918ರ ಜೂನ್‌ ತನಕ

(1,260 ದಿನಗಳು): (ಅಭಿಷಿಕ್ತ ಕ್ರೈಸ್ತರು ಪೀಡಿಸಲ್ಪಟ್ಟದ್ದು.

ದಾನಿಯೇಲ 7:​25; 12:7 ಈ ಪುಸ್ತಕದ 9ನೆಯ ಅಧ್ಯಾಯವನ್ನು ನೋಡಿರಿ.)

2,300 ಸಾಯಂಕಾಲಗಳು ಹಾಗೂ 1938ರ ಜೂನ್‌ 1 ಅಥವಾ 15ರಿಂದ

ಬೆಳಗ್ಗೆಗಳು: 1944ರ ಅಕ್ಟೋಬರ್‌ 8 ಅಥವಾ 22ರ ತನಕ

ದಾನಿಯೇಲ 8:14 (“ಮಹಾ ಸಮೂಹ”ವು ಗೋಚರಿಸುತ್ತದೆ,

ವೃದ್ಧಿಯಾಗುತ್ತದೆ. ಈ ಪುಸ್ತಕದ

10ನೆಯ ಅಧ್ಯಾಯವನ್ನು ನೋಡಿರಿ.)

70ವಾರಗಳು (490 ವರ್ಷಗಳು): ಸಾ.ಶ.ಪೂ. 455ರಿಂದ ಸಾ.ಶ. 36ರ ತನಕ

ದಾನಿಯೇಲ 9:​24-27 (ಮೆಸ್ಸೀಯನ ಬರೋಣ ಮತ್ತು ಅವನ

ಭೂಶುಶ್ರೂಷೆ. ಈ ಪುಸ್ತಕದ 11ನೆಯ

ಅಧ್ಯಾಯವನ್ನು ನೋಡಿರಿ.)

1,290 ದಿನಗಳು: 1919ರ ಜನವರಿಯಿಂದ

ದಾನಿಯೇಲ 12:11 1922ರ ಸೆಪ್ಟಂಬರ್‌ ತನಕ

(ಅಭಿಷಿಕ್ತ ಕ್ರೈಸ್ತರು ಎಚ್ಚತ್ತುಕೊಳ್ಳುತ್ತಾರೆ ಮತ್ತು

ಆತ್ಮಿಕವಾಗಿ ಪ್ರಗತಿಮಾಡುತ್ತಾರೆ.)

1,335 ದಿನಗಳು: 1922ರ ಸೆಪ್ಟಂಬರ್‌ನಿಂದ 1926ರ ಮೇ ತನಕ

ದಾನಿಯೇಲ 12:12 (ಅಭಿಷಿಕ್ತ ಕ್ರೈಸ್ತರು ಒಂದು ಸಂತೋಷಕರ

ಸ್ಥಿತಿಗೆ ತಲಪುತ್ತಾರೆ.)

[ಪುಟ 398 ರಲ್ಲಿರುವ ಚಿತ್ರಗಳು]

ಯೆಹೋವನ ಪ್ರಮುಖ ಸೇವಕರನ್ನು ಅನ್ಯಾಯವಾಗಿ, ಅಮೆರಿಕದ ಜಾರ್ಜಿಯದ ಅಟ್ಲಾಂಟದಲ್ಲಿರುವ ಫೆಡರಲ್‌ ಪೆನಿಟೆನ್‌ಶರಿಗೆ ಕಳುಹಿಸಲಾಗಿತ್ತು. ಎಡದಿಂದ ಬಲಕ್ಕೆ: (ಕುಳಿತಿರುವವರು) ಎ. ಏಚ್‌. ಮಕ್ಮಿಲನ್‌, ಜೆ. ಎಫ್‌. ರದರ್‌ಫರ್ಡ್‌, ಡಬ್ಲ್ಯೂ. ಇ. ವ್ಯಾನ್‌ ಆ್ಯಂಬರ್ಗ್‌; (ನಿಂತಿರುವವರು) ಜಿ. ಏಚ್‌. ಫಿಶರ್‌, ಆರ್‌. ಜೆ. ಮಾರ್ಟಿನ್‌, ಜಿ. ಡಿಚೆಕ, ಎಫ್‌. ಏಚ್‌. ರಾಬಿಸನ್‌, ಮತ್ತು ಸಿ. ಜೆ. ವುಡ್‌ವರ್ಥ್‌

[ಪುಟ 300 ರಲ್ಲಿರುವ ಚಿತ್ರಗಳು]

1919ರಲ್ಲಿ (ಮೇಲೆ) ಮತ್ತು 1922ರಲ್ಲಿ (ಕೆಳಗೆ), ಅಮೆರಿಕದ ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ಇತಿಹಾಸ ಪ್ರಸಿದ್ಧ ಅಧಿವೇಶನಗಳು ನಡಿಸಲ್ಪಟ್ಟವು

[ಪುಟ 413 ರಲ್ಲಿ ಇಡೀ ಪುಟದ ಚಿತ್ರ]