ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

‘ನಾನು . . . ದೀನಹೃದಯದವನು’

‘ನಾನು . . . ದೀನಹೃದಯದವನು’

“ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ”

1-3. ಯೆರೂಸಲೇಮಿಗೆ ಯೇಸು ಯಾವ ರೀತಿಯಲ್ಲಿ ಆಗಮಿಸಿದನು? ಇದು ಕೆಲವರನ್ನು ಆಶ್ಚರ್ಯಗೊಳಿಸಿರಬಹುದೇಕೆ?

ಯೆರೂಸಲೇಮ್‌ ಸಂಭ್ರಮ ಸಡಗರದ ಭರಾಟೆಯಲ್ಲಿದೆ. ಒಬ್ಬ ಮಹಾನ್‌ ವ್ಯಕ್ತಿ ಬರುತ್ತಿದ್ದಾನೆ! ಅವನನ್ನು ಸ್ವಾಗತಿಸಲು ನಗರದ ಹೊರಗೆ ದಾರಿಯುದ್ದಕ್ಕೂ ಜನರು ಕಾಯುತ್ತ ನಿಂತಿದ್ದಾರೆ. ರಾಜ ದಾವೀದನ ವಂಶದ ಕುಡಿ, ಇಸ್ರಾಯೇಲನ್ನು ಆಳುವ ಹಕ್ಕನ್ನು ಹೊಂದಿರುವವನು ಎಂದೆಲ್ಲ ಅವನ ಬಗ್ಗೆ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಅವನಿಗೆ ಶುಭಾಶಯ ಕೋರಲಿಕ್ಕಾಗಿ ಅನೇಕರು ತಮ್ಮ ಕೈಗಳಲ್ಲಿ ಖರ್ಜೂರ ಮರದ ಗರಿಗಳನ್ನು ಹಿಡಿದುಕೊಂಡಿದ್ದಾರೆ. ಅವನ ಹಾದಿಯನ್ನು ಸುಗಮಗೊಳಿಸಲಿಕ್ಕಾಗಿ ಇನ್ನಿತರರು ವಸ್ತ್ರಗಳನ್ನು ಹಾಗೂ ಮರದ ಕೊಂಬೆಗಳನ್ನು ದಾರಿಯಲ್ಲಿ ಹಾಸುತ್ತಿದ್ದಾರೆ. (ಮತ್ತಾಯ 21:7, 8; ಯೋಹಾನ 12:12, 13) ಅಲ್ಲಿದ್ದ ಅನೇಕರು ಅವನ ಆಗಮನ ಹೇಗಿರುವುದೆಂದು ಯೋಚಿಸುತ್ತಿರಬಹುದು.

2 ಅದ್ಧೂರಿಯ ಆಗಮನವನ್ನು ಕೆಲವರು ಎದುರುನೋಡುತ್ತಿರಬಹುದು. ಏಕೆಂದರೆ, ಗಣ್ಯವ್ಯಕ್ತಿಗಳು ಸಾಧಾರಣವಾಗಿ ಆ ರೀತಿಯಲ್ಲಿ ಬರುತ್ತಾರೆಂದು ಅವರಿಗೆ ಗೊತ್ತಿತ್ತು. ಉದಾಹರಣೆಗೆ, ದಾವೀದನ ಮಗನಾದ ಅಬ್ಷಾಲೋಮನು ತಾನು ಅರಸನೆಂದು ಸ್ವಘೋಷಿಸಿಕೊಂಡಾಗ ತನ್ನ ರಥದ ಮುಂದೆ ಮೈಗಾವಲಾಗಿ ಓಡುವುದಕ್ಕೆ 50 ಮಂದಿಯನ್ನು ನೇಮಿಸಿಕೊಂಡಿದ್ದನು. (2 ಸಮುವೇಲ 15:1, 10) ರೋಮನ್‌ ಅಧಿಪತಿ ಜೂಲಿಯಸ್‌ ಸೀಸರ್‌ ಇದಕ್ಕಿಂತಲೂ ಹೆಚ್ಚು ಆಡಂಬರವನ್ನು ಬಯಸಿದನು. ಒಮ್ಮೆ ರೋಮ್‌ನ ಜ್ಯೂಪಿಟರ್‌ ದೇವಾಲಯಕ್ಕೆ ವಿಜಯೋತ್ಸವದ ಮೆರವಣಿಗೆಯನ್ನು ಕೈಗೊಂಡಿದ್ದಾಗ ಅವನ ಇಕ್ಕೆಲಗಳಲ್ಲಿ ದೀಪಗಳನ್ನು ಹೊತ್ತಿದ್ದ 40 ಆನೆಗಳಿದ್ದವು! ಅವನಿಗಿಂತಲೂ ಎಷ್ಟೋ ಶ್ರೇಷ್ಠನಾದ ವ್ಯಕ್ತಿಯ ಆಗಮನಕ್ಕಾಗಿ ಈಗ ಯೆರೂಸಲೇಮಿನ ಜನತೆ ಕಾಯುತ್ತಿದೆ. ಅವರಿಗೆ ತಿಳಿದಿರಲಿ ಇಲ್ಲದಿರಲಿ ಅವನೇ ಮೆಸ್ಸೀಯನಾಗಿದ್ದನು, ಜೀವಿಸಿರುವವರಲ್ಲಿಯೇ ಅತ್ಯಂತ ಮಹಾನ್‌ ಪುರುಷ. ಈ ಭಾವೀ ಅರಸನು ಆಗಮಿಸಿದಾಗ ಖಂಡಿತವಾಗಿಯೂ ಕೆಲವರು ಆಶ್ಚರ್ಯಗೊಂಡಿರಬೇಕು.

3 ಅವನ ಬಳಿ ರಥವಿಲ್ಲ, ಮೈಗಾವಲ ದೂತರಿಲ್ಲ, ಕುದುರೆಗಳಿಲ್ಲ, ಆನೆಯಂತೂ ಇಲ್ಲವೇ ಇಲ್ಲ. ಹೌದು, ಹೊರೆಹೊರುವ ಒಂದು ಸಾಧಾರಣ ಪ್ರಾಣಿಯಾದ ಕತ್ತೆಯ ಮೇಲೆ ಕುಳಿತು ಯೇಸು ಬರುತ್ತಿದ್ದನು. * ಅವನಿಗಾಗಲಿ ಅವನು ಸವಾರಿ ಮಾಡುತ್ತಿದ್ದ ಪ್ರಾಣಿಗಾಗಲಿ ವೈಭವದ ಯಾವುದೇ ಧಿರಿಸನ್ನು ತೊಡಿಸಲಾಗಿಲ್ಲ. ಯೇಸುವಿನ ಆಪ್ತ ಅನುಯಾಯಿಗಳು ಕತ್ತೆಯ ಬೆನ್ನಿನ ಮೇಲೆ ಬೆಲೆಬಾಳುವ ತಡಿಯ ಬದಲಿಗೆ ಕೆಲವು ಬಟ್ಟೆಗಳನ್ನು ಹಾಸಿದ್ದರಷ್ಟೇ. ಇಂಥ ಸಮಯದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಸಹ ವೈಭವ ಆಡಂಭರದ ಮೆರವಣಿಗೆಯನ್ನು ಬಯಸುತ್ತಿದ್ದನು. ಆದರೆ ಯೇಸು ಸಾಧಾರಣ ರೀತಿಯಲ್ಲಿ ಯೆರೂಸಲೇಮಿಗೆ ಆಗಮಿಸಿದನು. ಏಕೆ?

4. ಮೆಸ್ಸೀಯ ರಾಜನು ಯೆರೂಸಲೇಮಿಗೆ ಆಗಮಿಸುವ ರೀತಿಯ ಕುರಿತು ಬೈಬಲ್‌ ಏನನ್ನು ಮುಂತಿಳಿಸಿತು?

4 ಯೇಸು ಒಂದು ಪ್ರವಾದನೆಯನ್ನು ನೆರವೇರಿಸುತ್ತಿದ್ದನು. ಅದು ಯಾವುದೆಂದರೆ: “ಬಹು ಸಂತೋಷಪಡು; ಯೆರೂಸಲೇಮ್‌ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತ [ದೀನ, NW] ಗುಣವುಳ್ಳವನಾಗಿಯೂ ಕತ್ತೆಯನ್ನು . . . ಹತ್ತಿದವನಾಗಿಯೂ ಬರುತ್ತಾನೆ.” (ಜೆಕರ್ಯ 9:9) ದೇವರಿಂದ ಅಭಿಷಿಕ್ತನಾದ ಮೆಸ್ಸೀಯನು ತಾನು ದೇವರಿಂದ ನೇಮಕಗೊಂಡ ಅರಸನೆಂಬುದನ್ನು ಒಂದು ದಿನ ಯೆರೂಸಲೇಮಿನ ಜನರಿಗೆ ಪ್ರಕಟಿಸುವನೆಂದು ಈ ಪ್ರವಾದನೆಯು ತೋರಿಸಿತು. ಅಷ್ಟೇ ಅಲ್ಲ, ತನ್ನ ಅರಸುತನವನ್ನು ಅವನು ತೋರಿಸಿಕೊಟ್ಟ ವಿಧ, ಅದರಲ್ಲೂ ಸವಾರಿಗಾಗಿ ಕತ್ತೆಯನ್ನು ಆರಿಸಿಕೊಂಡದ್ದು ಅವನಲ್ಲಿದ್ದ ಒಂದು ಶ್ರೇಷ್ಠ ಗುಣವಾದ ದೀನತೆಯನ್ನು ವ್ಯಕ್ತಪಡಿಸಿತು.

5. ಯೇಸುವಿನಲ್ಲಿದ್ದ ದೀನತೆಯ ಕುರಿತು ಆಲೋಚಿಸುವಾಗ ನಮ್ಮ ಮನಸ್ಸು ಸ್ಫೂರ್ತಿಗೊಳ್ಳುವುದೇಕೆ? ಯೇಸುವಿನ ದೀನಗುಣವನ್ನು ಅನುಕರಿಸಲು ಕಲಿಯುವುದು ಪ್ರಾಮುಖ್ಯವೇಕೆ?

5 ದೀನತೆಯು ಯೇಸುವಿನ ಗುಣಗಳಲ್ಲಿಯೇ ತುಂಬ ಆಕರ್ಷಕವಾಗಿದ್ದು ಅದರ ಕುರಿತು ಆಲೋಚಿಸುವಾಗ ನಮ್ಮ ಮನಸ್ಸು ಸ್ಫೂರ್ತಿಗೊಳ್ಳುತ್ತದೆ. ನಾವು ಹಿಂದಿನ ಅಧ್ಯಾಯದಲ್ಲಿ ಕಲಿತಿರುವಂತೆ, ಯೇಸು ಮಾತ್ರವೇ “ಮಾರ್ಗವೂ ಸತ್ಯವೂ ಜೀವವೂ” ಆಗಿದ್ದಾನೆ. (ಯೋಹಾನ 14:6) ನಿಜಹೇಳಬೇಕೆಂದರೆ, ಈ ಭೂಮಿಯಲ್ಲಿ ಜೀವಿಸಿದ್ದ ಕೋಟ್ಯಂತರ ಮಾನವರಲ್ಲಿ ಯಾರೊಬ್ಬರೂ ಈ ದೇವಪುತ್ರನಿಗೆ ಸರಿಸಾಟಿಯಲ್ಲ. ಆದರೂ ಅಸಂಖ್ಯ ಅಪರಿಪೂರ್ಣ ಮಾನವರಲ್ಲಿರುವ ಅಹಂಕಾರ, ಹೆಮ್ಮೆ ಅಥವಾ ಗರ್ವ ಲವಲೇಶವೂ ಯೇಸುವಿನಲ್ಲಿರಲಿಲ್ಲ. ಕ್ರಿಸ್ತನ ಹಿಂಬಾಲಕರಾಗಬೇಕಾದರೆ ನಾವು ಅಹಂಕಾರದ ಪ್ರವೃತ್ತಿಯನ್ನು ಬಿಡಬೇಕು. (ಯಾಕೋಬ 4:6) ಯೆಹೋವನು ಅಹಂಕಾರವನ್ನು ದ್ವೇಷಿಸುತ್ತಾನೆ ಎಂಬುದು ನೆನಪಿರಲಿ. ಆದ್ದರಿಂದ, ಯೇಸುವಿನ ದೀನಗುಣವನ್ನು ನಾವು ಅನುಕರಿಸಲು ಕಲಿಯುವುದು ತುಂಬಾ ಪ್ರಾಮುಖ್ಯ.

ದೀನತೆಯ ಸುದೀರ್ಘ ಇತಿಹಾಸ

6. ದೀನತೆ ಎಂದರೇನು? ಮೆಸ್ಸೀಯನು ದೀನನಾಗಿರುತ್ತಾನೆಂದು ಯೆಹೋವನಿಗೆ ಹೇಗೆ ಗೊತ್ತಿತ್ತು?

6 ದೀನತೆಯ ಅರ್ಥ, ದೀನಮನಸ್ಸನ್ನು ಹೊಂದಿರುವುದೇ. ಅಲ್ಲಿ ಅಹಂಕಾರ ಹೆಮ್ಮೆಗೆ ಸ್ವಲ್ಪವೂ ಜಾಗವಿಲ್ಲ. ದೀನಭಾವವು ಒಬ್ಬನ ಹೃದಯದಿಂದ ಮೂಡಿ ಅವನ ನಡೆ, ನುಡಿ ಮತ್ತು ಇತರರೊಂದಿಗಿನ ವ್ಯವಹಾರದಲ್ಲಿ ತೋರಿಬರುತ್ತದೆ. ಮೆಸ್ಸೀಯನು ದೀನನಾಗಿರುತ್ತಾನೆಂದು ಯೆಹೋವನಿಗೆ ಹೇಗೆ ಗೊತ್ತಿತ್ತು? ತನ್ನ ಪುತ್ರನು ದೀನಭಾವವನ್ನು ತೋರಿಸುವುದರಲ್ಲಿ ತನ್ನ ಪರಿಪೂರ್ಣ ಮಾದರಿಯನ್ನು ಪ್ರತಿಬಿಂಬಿಸಿದ್ದು ಯೆಹೋವನಿಗೆ ತಿಳಿದಿತ್ತು. (ಯೋಹಾನ 10:15) ಮಾತ್ರವಲ್ಲ ತನ್ನ ಮಗನ ದೀನಕಾರ್ಯವನ್ನು ಆತನು ಕಣ್ಣಾರೆಕಂಡಿದ್ದನು. ಅದು ಹೇಗೆ?

7-9. (ಎ) ಸೈತಾನನೊಡನೆ ವಾಗ್ವಾದ ನಡೆದಾಗ ಮೀಕಾಯೇಲನು ಹೇಗೆ ದೀನಭಾವವನ್ನು ತೋರಿಸಿದನು? (ಬಿ) ದೀನಭಾವವನ್ನು ತೋರಿಸುವುದರಲ್ಲಿ ಕ್ರೈಸ್ತರು ಮೀಕಾಯೇಲನನ್ನು ಹೇಗೆ ಅನುಕರಿಸಬಹುದು?

7 ಯೂದ ಪುಸ್ತಕವು ಚಿತ್ತಾಕರ್ಷಕ ಉದಾಹರಣೆಯೊಂದನ್ನು ನೀಡುತ್ತದೆ: “ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಪಿಶಾಚನೊಂದಿಗೆ ಭಿನ್ನಾಭಿಪ್ರಾಯದ ಕಾರಣ ವಾಗ್ವಾದಮಾಡುತ್ತಿದ್ದಾಗ ಅವನು ಪಿಶಾಚನ ವಿರುದ್ಧ ದೂಷಣಾತ್ಮಕ ಮಾತುಗಳಲ್ಲಿ ನ್ಯಾಯತೀರ್ಪನ್ನು ಬರಮಾಡಲು ಧೈರ್ಯಮಾಡದೆ, ‘ಯೆಹೋವನು ನಿನ್ನನ್ನು ಖಂಡಿಸಲಿ’ ಎಂದು ಹೇಳಿದನು.” (ಯೂದ 9) ಮೀಕಾಯೇಲ ಎಂಬ ಹೆಸರು ಯೇಸುವಿಗೆ ಭೂಜೀವನದ ಮೊದಲು ಮತ್ತು ನಂತರ ಅನ್ವಯವಾಗುತ್ತದೆ. ಪ್ರಧಾನ ದೇವದೂತನ ಅಥವಾ ಯೆಹೋವನ ಸ್ವರ್ಗೀಯ ದೇವದೂತ ಸೈನ್ಯದ ಮುಖಂಡನ ಪಾತ್ರದಲ್ಲಿ ಇದು ಅವನಿಗೆ ಅನ್ವಯವಾಗುತ್ತದೆ. * (1 ಥೆಸಲೊನೀಕ 4:16) ಸೈತಾನನೊಡನೆ ನಡೆದ ವಾಗ್ವಾದವನ್ನು ಮೀಕಾಯೇಲನು ಹೇಗೆ ನಿಭಾಯಿಸಿದನು ಎಂಬುದನ್ನು ಗಮನಿಸಿ.

8 ಮೋಶೆಯ ಶವದ ವಿಷಯದಲ್ಲಿ ಸೈತಾನನು ಏನು ಮಾಡಬೇಕೆಂದಿದ್ದನು ಎಂಬುದನ್ನು ಯೂದ ಪುಸ್ತಕವು ನಮಗೆ ತಿಳಿಸುವುದಿಲ್ಲ. ಆದರೆ ಖಂಡಿತವಾಗಿಯೂ ಪಿಶಾಚನ ಮನಸ್ಸಿನಲ್ಲಿ ಯಾವುದೋ ದುರಾಲೋಚನೆ ಇದ್ದಿರಲೇಬೇಕು. ನಂಬಿಗಸ್ತನಾಗಿದ್ದ ಮೋಶೆಯ ಶವವನ್ನು ಉಪಯೋಗಿಸಿ ಸುಳ್ಳಾರಾಧನೆಯನ್ನು ಪ್ರವರ್ಧಿಸುವ ಬಯಕೆ ಅವನಿಗಿದ್ದಿರಬೇಕು. ಮೀಕಾಯೇಲನು ಸೈತಾನನ ಕುಟಿಲೋಪಾಯವನ್ನು ವಿರೋಧಿಸಿದನಾದರೂ ತುಂಬ ಸಂಯಮವನ್ನು ತೋರಿಸಿದನು. ಸೈತಾನನನ್ನು ಖಂಡಿಸುವುದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಸೈತಾನನೊಡನೆ ವಾಗ್ವಾದವಾಗುತ್ತಿದ್ದ ಸಮಯದಲ್ಲಿ “ನ್ಯಾಯತೀರ್ಪಿನ ಕೆಲಸವನ್ನೆಲ್ಲ” ಮೀಕಾಯೇಲನಿಗೆ ಇನ್ನೂ ಒಪ್ಪಿಸಲಾಗಿರಲಿಲ್ಲ. ಆದ್ದರಿಂದ ಯೆಹೋವ ದೇವರೇ ಸೈತಾನನನ್ನು ಖಂಡಿಸಿ ನ್ಯಾಯತೀರ್ಪುಮಾಡಲಿ ಎಂದು ಅವನು ಭಾವಿಸಿದನು. (ಯೋಹಾನ 5:22) ಪ್ರಧಾನ ದೇವದೂತನಾಗಿದ್ದರಿಂದ ಮೀಕಾಯೇಲನಿಗೆ ಬಹಳ ಅಧಿಕಾರವಿತ್ತು. ಆದರೂ ಅವನು ಯೆಹೋವನ ಅಧಿಕಾರಕ್ಕೆ ದೀನತೆಯಿಂದ ತಲೆಬಾಗಿದನು, ಹೆಚ್ಚಿನ ಅಧಿಕಾರವನ್ನು ಕಸಿದುಕೊಳ್ಳಲು ಬಯಸಲಿಲ್ಲ. ಹೀಗೆ, ಅವನು ದೀನನಾಗಿದ್ದನು ಮಾತ್ರವಲ್ಲ ವಿನಮ್ರನೂ ಆಗಿದ್ದನು ಅಂದರೆ ತನ್ನ ಇತಿಮಿತಿಗಳನ್ನು ಅರಿತಿದ್ದನು.

9 ಯೂದನು ಈ ಘಟನೆಯನ್ನು ದೇವರಿಂದ ಪ್ರೇರಣೆಗೊಂಡು ಬರೆಯಲು ಒಂದು ಕಾರಣವಿತ್ತು. ವಿಷಾದಕರವಾಗಿ, ಯೂದನ ಕಾಲದಲ್ಲಿದ್ದ ಕೆಲವು ಕ್ರೈಸ್ತರು ದೀನರಾಗಿರಲಿಲ್ಲ. ಅವರು ದುರಂಹಕಾರದಿಂದ, ‘ತಮಗೆ ನಿಜವಾಗಿಯೂ ಗೊತ್ತಿಲ್ಲದಿರುವಂಥ ಎಲ್ಲ ವಿಷಯಗಳ ಕುರಿತು ದೂಷಣಾತ್ಮಕವಾಗಿ ಮಾತಾಡುತ್ತಿದ್ದರು.’ (ಯೂದ 10) ಅಪರಿಪೂರ್ಣ ಮಾನವರಾದ ನಮ್ಮಲ್ಲಿ ಅಹಂಕಾರವು ತುಂಬ ಸುಲಭವಾಗಿ ನುಸುಳಿಬಿಡಬಹುದು. ಕ್ರೈಸ್ತ ಸಭೆಯಲ್ಲಿ ಹಿರಿಯರ ಮಂಡಲಿಯು ಕೆಲವೊಂದು ನಿರ್ಧಾರಗಳನ್ನು ಏಕೆ ತೆಗೆದುಕೊಂಡಿದೆಯೆಂದು ನಮಗೆ ಸಂಪೂರ್ಣವಾಗಿ ಅರ್ಥವಾಗದಿದ್ದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಆ ನಿರ್ಧಾರದ ಹಿಂದಿರುವ ಎಲ್ಲ ವಿಷಯಗಳು ನಮಗೆ ತಿಳಿದಿರದಿದ್ದರೂ ಅದರಲ್ಲಿ ಹುಳುಕು ಹುಡುಕುತ್ತಾ ನಾವು ನಕಾರಾತ್ಮಕ ಮಾತುಗಳನ್ನಾಡುವುದಾದರೆ ನಮ್ಮಲ್ಲಿ ದೀನಭಾವ ಇಲ್ಲ ಎಂಬುದನ್ನು ಅದು ತೋರಿಸಿಕೊಡುವುದಲ್ಲವೇ? ಅದಕ್ಕೆ ಬದಲಾಗಿ ಮೀಕಾಯೇಲ ಅಥವಾ ಯೇಸುವನ್ನು ಅನುಕರಿಸೋಣ. ಇತರರಿಗೆ ತೀರ್ಪು ಮಾಡುವ ಅಧಿಕಾರವನ್ನು ದೇವರು ನಮಗೆ ಕೊಟ್ಟಿಲ್ಲವಾದ್ದರಿಂದ ಅದರಿಂದ ದೂರವಿರೋಣ.

10, 11. (ಎ) ಭೂಮಿಗೆ ಬರುವ ನೇಮಕವನ್ನು ಒಪ್ಪಿಕೊಂಡ ಯೇಸುವಿನ ಸಿದ್ಧಮನಸ್ಸು ಗಮನಾರ್ಹವೇಕೆ? (ಬಿ) ಯೇಸುವಿನ ದೀನತೆಯನ್ನು ನಾವು ಹೇಗೆ ಅನುಕರಿಸಬಹುದು?

10 ದೇವಪುತ್ರನು ಭೂಮಿಗೆ ಬರುವ ನೇಮಕವನ್ನು ಸ್ವೀಕರಿಸುವ ಮೂಲಕವೂ ದೀನತೆಯನ್ನು ತೋರಿಸಿದನು. ಭೂಮಿಗೆ ಬರಲಿಕ್ಕಾಗಿ ಅವನು ಏನೆಲ್ಲ ಬಿಟ್ಟುಕೊಡಬೇಕಿತ್ತು ಎಂಬುದರ ಕುರಿತು ತುಸು ಯೋಚಿಸಿ. ಅವನು ಪ್ರಧಾನ ದೇವದೂತನಾಗಿದ್ದನು. “ವಾಕ್ಯ” ಅಂದರೆ ಯೆಹೋವನ ವಕ್ತಾರನಾಗಿದ್ದನು. (ಯೋಹಾನ 1:1-3) “ಪರಿಶುದ್ಧವೂ ಘನವೂ ಆದ [ಯೆಹೋವನ] ಉನ್ನತಸ್ಥಾನ” ಅಂದರೆ ಸ್ವರ್ಗದಲ್ಲಿ ಜೀವಿಸಿದ್ದನು. (ಯೆಶಾಯ 63:15) ಆದರೂ, “ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿ ಮನುಷ್ಯರಿಗೆ ಸದೃಶನಾದನು.” (ಫಿಲಿಪ್ಪಿ 2:7) ಭೂಮಿಯಲ್ಲಿ ಅವನ ನೇಮಕ ಹೇಗಿತ್ತೆಂದು ಸ್ವಲ್ಪ ಕಲ್ಪಿಸಿಕೊಳ್ಳಿ. ಅವನ ಜೀವವನ್ನು ಯೆಹೂದಿ ಕನ್ಯೆಯೊಬ್ಬಳ ಗರ್ಭಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಅವನು ಮಾನವ ಹಸುಳೆಯಾಗಿ ಮಾರ್ಪಡಲು ಒಂಬತ್ತು ತಿಂಗಳು ಕಳೆಯಬೇಕಿತ್ತು. ಸಾಧಾರಣ ಬಡಗಿಯೊಬ್ಬನ ಕುಟುಂಬದಲ್ಲಿ ನಿಸ್ಸಹಾಯಕ ಕೂಸಾಗಿ ಹುಟ್ಟಿ, ಅಂಬೆಗಾಲಿಕ್ಕಿ ನಡೆಯಲು ಕಲಿತು ಪುಟ್ಟ ಬಾಲಕನಾಗಿ ನಂತರ ಹದಿಹರೆಯದವನಾಗಿ ಬೆಳೆಯಬೇಕಿತ್ತು. ಪರಿಪೂರ್ಣನಾಗಿದ್ದರೂ ಅಪರಿಪೂರ್ಣರಾದ ಮಾನವ ತಂದೆ ತಾಯಿಗೆ ಅಧೀನನಾಗಿ ಬಾಲ್ಯ ಕಳೆದನು. (ಲೂಕ 2:40, 51, 52) ನಿಜಕ್ಕೂ ಅಸಾಧಾರಣ ದೀನತೆಯೇ ಸರಿ!

11 ನಾವೂ ಯೇಸುವಿನ ದೀನತೆಯನ್ನು ಅನುಕರಿಸುತ್ತೇವೋ? ನಮ್ಮ ನೇಮಕಗಳು ಕೆಲವೊಮ್ಮೆ ಸಾಧಾರಣವೆಂದು ತೋರಿಬರುವಾಗಲೂ ನಾವು ಅವುಗಳನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುತ್ತೇವೋ? ಉದಾಹರಣೆಗೆ, ಜನರು ನಿರಾಸಕ್ತಿ ತೋರಿಸಿದಾಗ, ಅವಹೇಳನ ಮಾಡಿದಾಗ ಅಥವಾ ದ್ವೇಷದ ಕಿಡಿಕಾರಿದಾಗ ದೇವರ ರಾಜ್ಯದ ಕುರಿತು ಸುವಾರ್ತೆ ಸಾರುವ ನಮ್ಮ ನೇಮಕವು ತುಚ್ಛವಾಗಿ ತೋರಬಹುದು. (ಮತ್ತಾಯ 28:19, 20) ಆದರೆ ಈ ಕೆಲಸವನ್ನು ತಾಳ್ಮೆಯಿಂದ ಮುಂದುವರಿಸುವುದಾದರೆ ಜೀವ ಉಳಿಸಿಕೊಳ್ಳಲು ಜನರಿಗೆ ನಾವು ನೆರವಾಗಬಹುದು. ಅಷ್ಟೇ ಅಲ್ಲ, ಆಗ ನಾವು ಹೆಚ್ಚೆಚ್ಚು ದೀನರಾಗಿರಲು ಕಲಿತುಕೊಳ್ಳುತ್ತೇವೆ ಹಾಗೂ ನಮ್ಮ ನಾಯಕನಾದ ಯೇಸು ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸುತ್ತೇವೆ.

ಮಾನವನಾಗಿ ಯೇಸು ತೋರಿಸಿದ ದೀನತೆ

12-14. (ಎ) ಜನರು ತನ್ನನ್ನು ಹೊಗಳಿದಾಗ ಯೇಸು ಹೇಗೆ ದೀನತೆ ತೋರಿಸಿದನು. (ಬಿ) ಯೇಸು ಇತರರೊಂದಿಗೆ ಹೇಗೆ ದೀನತೆಯಿಂದ ವ್ಯವಹರಿಸಿದನು? (ಸಿ) ಯೇಸುವಿನ ದೀನತೆ ಕೇವಲ ಶಿಷ್ಟಾಚಾರವಾಗಿರಲಿಲ್ಲ ಎಂಬುದನ್ನು ಯಾವುದು ತೋರಿಸಿಕೊಡುತ್ತದೆ?

12 ಯೇಸುವಿನ ಭೂ ಶುಶ್ರೂಷೆಯ ಆರಂಭದಿಂದ ಅಂತ್ಯದವರೆಗೂ ದೀನತೆ ಎದ್ದುಕಾಣುತ್ತಿತ್ತು. ಎಲ್ಲ ಸ್ತುತಿ ಮಹಿಮೆಯನ್ನು ದೇವರಿಗೆ ಕೊಡುವ ಮೂಲಕ ಅವನದನ್ನು ತೋರಿಸಿದನು. ಯೇಸುವಿನ ಮಾತಿನಲ್ಲಿದ್ದ ವಿವೇಕ, ಅವನ ಒಳ್ಳೆಯ ಸ್ವಭಾವ ಮತ್ತು ಅದ್ಭುತಗಳನ್ನು ನೋಡಿ ಜನರು ಕೆಲವೊಮ್ಮೆ ಅವನನ್ನು ಹೊಗಳಿದರು. ಆದರೆ ಪ್ರತಿ ಸಂದರ್ಭದಲ್ಲೂ ಯೆಹೋವನಿಗೆ ಮಹಿಮೆ ಸೇರುವಂತೆ ಯೇಸು ನೋಡಿಕೊಂಡನೇ ವಿನಃ ತನ್ನದಾಗಿಸಿಕೊಳ್ಳಲಿಲ್ಲ.—ಮಾರ್ಕ 10:17, 18; ಯೋಹಾನ 7:15, 16.

13 ಜನರನ್ನು ಉಪಚರಿಸುವಾಗಲೂ ಯೇಸು ದೀನಭಾವವನ್ನು ತೋರಿಸಿದನು. ತಾನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಇತರರ ಸೇವೆಮಾಡುವುದಕ್ಕಾಗಿ ಈ ಭೂಮಿಗೆ ಬಂದಿರುವೆನೆಂದು ಅವನು ಸ್ಪಷ್ಟಪಡಿಸಿದನು. (ಮತ್ತಾಯ 20:28) ಜನರ ಭಾವನೆಗಳನ್ನರಿತು ಸೌಮ್ಯಭಾವದಿಂದ ವರ್ತಿಸಿ ದೀನಭಾವ ತೋರಿಸಿದನು. ಶಿಷ್ಯರು ತನ್ನನ್ನು ನಿರಾಶೆಪಡಿಸಿದಾಗ ಅವರನ್ನು ನಿಂದಿಸಲಿಲ್ಲ. ಬದಲಿಗೆ ಅವರಿಗೆ ಮನವರಿಕೆಮಾಡಲು ಪ್ರಯತ್ನಿಸಿದನು. (ಮತ್ತಾಯ 26:39-41) ವಿಶ್ರಾಂತಿಗಾಗಿ ಏಕಾಂತವಾದ ನಿಶ್ಶಬ್ದ ಸ್ಥಳವನ್ನು ಹುಡುಕುತ್ತಿದ್ದಾಗ ಅಡ್ಡಿಪಡಿಸಿದ ಜನರ ಗುಂಪಿನ ಮೇಲೆ ಹರಿಹಾಯ್ದು ಅವರನ್ನು ಕಳುಹಿಸಿಬಿಡಲಿಲ್ಲ. ತನ್ನ ಸುಖವನ್ನು ಬದಿಗಿಟ್ಟು ಅವರಿಗೆ “ಅನೇಕ ವಿಷಯಗಳನ್ನು” ಬೋಧಿಸಿದನು. (ಮಾರ್ಕ 6:30-34) ಯೆಹೂದ್ಯಳಲ್ಲದ ಒಬ್ಬಾಕೆ ತನ್ನ ಮಗಳನ್ನು ಗುಣಪಡಿಸುವಂತೆ ಅವನನ್ನು ಪೀಡಿಸಲಾರಂಭಿಸಿದಾಗ ಮೊದಲು ಒಲ್ಲೆನೆಂದು ಸೂಚಿಸಿದನಾದರೂ ಕೋಪಗೊಳ್ಳಲಿಲ್ಲ. ಅವಳ ಅಸಾಧಾರಣ ನಂಬಿಕೆಯನ್ನು ಕಂಡು ಮನಸೋತು ಗುಣಪಡಿಸಿದನು. ಇದರ ಕುರಿತು ನಾವು 14ನೇ ಅಧ್ಯಾಯದಲ್ಲಿ ಕಲಿಯಲಿದ್ದೇವೆ.—ಮತ್ತಾಯ 15:22-28.

14 ಯೇಸು ಅಸಂಖ್ಯಾತ ವಿಧಗಳಲ್ಲಿ “ನಾನು ಸೌಮ್ಯಭಾವದವನೂ ದೀನಹೃದಯದವನೂ” ಆಗಿದ್ದೇನೆ ಎಂಬ ತನ್ನ ಮಾತಿಗನುಸಾರ ಬದುಕಿದನು. (ಮತ್ತಾಯ 11:29) ಅವನ ದೀನತೆ ಬಾಹ್ಯ ವೇಷವಾಗಲಿ, ಶಿಷ್ಟಾಚಾರವಾಗಲಿ ಆಗಿರಲಿಲ್ಲ. ಅದು ಅವನ ಹೃದಯದಿಂದ, ಅಂತರಾಳದಿಂದ ಹೊರಹೊಮ್ಮಿತು. ಆದ್ದರಿಂದಲೇ, ದೀನರಾಗಿರುವಂತೆ ತನ್ನ ಹಿಂಬಾಲಕರಿಗೆ ಕಲಿಸಲಿಕ್ಕಾಗಿ ಅವನು ಹೆಚ್ಚು ಸಮಯ ತೆಗೆದುಕೊಂಡಿದ್ದು ವಿಶೇಷವೆನಿಸುವುದಿಲ್ಲ!

ಶಿಷ್ಯರಿಗೆ ದೀನತೆಯ ಪಾಠ

15, 16. ಲೋಕದ ಅಧಿಪತಿಗಳ ಮನೋಭಾವಕ್ಕೂ ಮತ್ತು ತನ್ನ ಹಿಂಬಾಲಕರು ಬೆಳೆಸಿಕೊಳ್ಳಬೇಕಿದ್ದ ಮನೋಭಾವಕ್ಕೂ ಇರುವ ಯಾವ ವ್ಯತ್ಯಾಸವನ್ನು ಯೇಸು ತೋರಿಸಿದನು?

15 ಯೇಸುವಿನ ಅಪೊಸ್ತಲರು ದೀನಭಾವವನ್ನು ಬೆಳೆಸಿಕೊಳ್ಳುವುದರಲ್ಲಿ ತುಂಬ ನಿಧಾನಿಗಳಾಗಿದ್ದರು. ಆದ್ದರಿಂದ ಯೇಸು ಅವರಿಗೆ ಮತ್ತೆ ಮತ್ತೆ ಕಲಿಸಬೇಕಾಯಿತು. ಉದಾಹರಣೆಗೆ, ಒಮ್ಮೆ ಯಾಕೋಬ ಮತ್ತು ಯೋಹಾನರು ದೇವರ ರಾಜ್ಯದಲ್ಲಿ ತಮಗೆ ಶ್ರೇಷ್ಠ ಸ್ಥಾನವನ್ನು ಕೊಡುವಂತೆ ತಮ್ಮ ತಾಯಿಯ ಮೂಲಕ ಯೇಸುವಿನಲ್ಲಿ ಕೇಳಿಕೊಂಡರು. ಅದಕ್ಕೆ ಯೇಸು ವಿನಮ್ರನಾಗಿ, “ನನ್ನ ಬಲಗಡೆಯಲ್ಲಿ ಅಥವಾ ಎಡಗಡೆಯಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ; ಅದು ನನ್ನ ತಂದೆಯಿಂದ ಯಾರಿಗಾಗಿ ಸಿದ್ಧಪಡಿಸಲ್ಪಟ್ಟಿದೆಯೋ ಅವರಿಗೇ ಸೇರಿದ್ದಾಗಿದೆ” ಎಂದು ಉತ್ತರಿಸಿದನು. ಉಳಿದ ಹತ್ತು ಮಂದಿ ಅಪೊಸ್ತಲರು ಯಾಕೋಬ ಮತ್ತು ಯೋಹಾನರ ಮೇಲೆ “ಕೋಪಗೊಂಡರು.” (ಮತ್ತಾಯ 20:20-24) ಈ ಸಮಸ್ಯೆಯನ್ನು ಯೇಸು ಹೇಗೆ ಬಗೆಹರಿಸಿದನು?

16 “ಅನ್ಯಜನಾಂಗಗಳನ್ನು ಆಳುವವರು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಮತ್ತು ದೊಡ್ಡವರು ಅವರ ಮೇಲೆ ಅಧಿಕಾರ ಚಲಾಯಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ನಿಮ್ಮಲ್ಲಿ ಹೀಗಿರುವುದಿಲ್ಲ; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು, ಮತ್ತು ನಿಮ್ಮಲ್ಲಿ ಮೊದಲಿನವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು” ಎಂದು ಹೇಳಿ ಅವರನ್ನು ಯೇಸು ಮೆತ್ತಗೆ ಗದರಿಸಿದನು. (ಮತ್ತಾಯ 20:25-27) “ಅನ್ಯಜನಾಂಗಗಳನ್ನು ಆಳುವವರು” ಎಷ್ಟೊಂದು ದುರಂಹಕಾರ, ಹೆಬ್ಬಯಕೆ ಮತ್ತು ಸ್ವಾರ್ಥವನ್ನು ಹೊಂದಿರುತ್ತಾರೆಂಬುದು ಅಪೊಸ್ತಲರಿಗೆ ಗೊತ್ತಿದ್ದಿರಲೇಬೇಕು. ಅಂತಹ ಅಧಿಕಾರ ದಾಹವಿರುವ ನಿರಂಕುಶಾಧಿಕಾರಿಗಳಿಗಿಂತ ತನ್ನ ಹಿಂಬಾಲಕರು ಭಿನ್ನರಾಗಿರಬೇಕೆಂದು ಯೇಸು ತೋರಿಸಿದನು. ಅವರು ನಿಜಕ್ಕೂ ತುಂಬ ದೀನರಾಗಿರಬೇಕಿತ್ತು. ಅದನ್ನು ಆ ಅಪೊಸ್ತಲರು ಅರ್ಥಮಾಡಿಕೊಂಡರೋ?

17-19. (ಎ) ಯೇಸು ತನ್ನ ಮರಣದ ಮುಂಚಿನ ರಾತ್ರಿಯಂದು ದೀನತೆಯ ವಿಷಯದಲ್ಲಿ ಅಚ್ಚುಳಿಯುವಂಥ ಪಾಠ ಕಲಿಸಿದ್ದು ಹೇಗೆ? (ಬಿ) ಭೂಮಿಯಲ್ಲಿದ್ದಾಗ ದೀನತೆಯ ಕುರಿತು ಯೇಸು ಕಲಿಸಿದ ಪಾಠಗಳಲ್ಲಿ ಪ್ರಬಲವಾದದ್ದು ಯಾವುದು?

17 ಅವರಿಗೆ ಅದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ, ಯೇಸು ಇಂಥ ಪಾಠ ಕಲಿಸಿದ್ದು ಇದೇ ಮೊದಲಲ್ಲ ಕೊನೆಯೂ ಅಲ್ಲ. ಹಿಂದೊಮ್ಮೆ ತಮ್ಮಲ್ಲಿ ಯಾರು ದೊಡ್ಡವರು ಎಂದು ಅವರು ವಾಗ್ವಾದ ಮಾಡಿದಾಗ ಯೇಸು ಒಂದು ಚಿಕ್ಕ ಮಗುವನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, ಸಾಮಾನ್ಯವಾಗಿ ಪ್ರೌಢ ವ್ಯಕ್ತಿಗಳಲ್ಲಿರುವ ಅಹಂಕಾರ, ಅಭಿಲಾಷೆ, ಸ್ಥಾನಮಾನದ ದುರಾಶೆ ಇವೆಲ್ಲವೂ ಇಲ್ಲದ ಮುಗ್ಧ ಮಕ್ಕಳಂತಾಗುವಂತೆ ಅವರಿಗೆ ಹೇಳಿದನು. (ಮತ್ತಾಯ 18:1-4) ಆದಾಗ್ಯೂ, ತನ್ನ ಮರಣಕ್ಕೆ ಮುಂಚಿನ ರಾತ್ರಿಯಂದು ಸಹ ತನ್ನ ಅಪೊಸ್ತಲರಲ್ಲಿ ಅಹಂಭಾವವಿದ್ದುದನ್ನು ಯೇಸು ನೋಡಿದನು. ಆಗ ಅವನು ಸದಾ ಅವರ ಮನಸ್ಸಿನಲ್ಲಿ ಅಚ್ಚುಳಿಯುವಂಥ ಒಂದು ಪಾಠವನ್ನು ಕಲಿಸಿದನು. ಅವನು ಒಂದು ಕೈಪಾವುಡವನ್ನು ನಡುವಿಗೆ ಕಟ್ಟಿಕೊಂಡು, ಆ ಕಾಲದಲ್ಲಿ ಸಾಮಾನ್ಯವಾಗಿ ಮನೆಯಾಳುಗಳು ಅತಿಥಿಗಳಿಗೆ ಮಾಡುತ್ತಿದ್ದ ಮತ್ತು ಜನರ ಕಣ್ಣಿಗೆ ಕೀಳಾಗಿದ್ದ ಕೆಲಸವನ್ನು ಮಾಡಿದನು. ಯೇಸು ತನ್ನ ಅಪೊಸ್ತಲರಲ್ಲಿ ಪ್ರತಿಯೊಬ್ಬರ ಪಾದಗಳನ್ನು, ತನ್ನನ್ನು ಹಿಡಿದುಕೊಡಲಿದ್ದ ಯೂದನ ಪಾದಗಳನ್ನು ಸಹ ತೊಳೆದನು!—ಯೋಹಾನ 13:1-11.

18 ದೀನತೆಯ ಪಾಠವನ್ನು ಅರ್ಥಮಾಡಿಕೊಳ್ಳುವಂತೆ ಯೇಸು ಅವರಿಗೆ, “ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ” ಎಂದು ಹೇಳಿದನು. (ಯೋಹಾನ 13:15) ಇಷ್ಟಾದರೂ ಅದು ಅವರ ಹೃದಯವನ್ನು ತಲಪಿತೋ? ಅದೇ ರಾತ್ರಿ ಮತ್ತೆ ಅವರು ತಮ್ಮಲ್ಲಿ ಯಾರು ದೊಡ್ಡವರೆಂದು ವಾಗ್ವಾದಮಾಡಿದರು! (ಲೂಕ 22:24-27) ಆದರೂ ಯೇಸು ತಾಳ್ಮೆಯಿಂದಿದ್ದು ಅವರಿಗೆ ದೀನತೆಯಿಂದ ಕಲಿಸಿದನು. ನಂತರ ಎಲ್ಲಕ್ಕಿಂತಲೂ ಪ್ರಬಲವಾದೊಂದು ಪಾಠ ಕಲಿಸಿದನು. ಅವನು “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು.” (ಫಿಲಿಪ್ಪಿ 2:8) ಅವನ ಮೇಲೆ ದೇವದೂಷಕನೆಂಬ ಸುಳ್ಳಾರೋಪ ಹೊರಿಸಿ, ಅಪರಾಧಿಯೆಂದು ತೀರ್ಪಿತ್ತಾಗ ಯೇಸು ಎರಡು ಮಾತಿಲ್ಲದೆ ಆ ಅವಮಾನಕರ ಮರಣಕ್ಕೆ ತನ್ನನ್ನು ಒಪ್ಪಿಸಿಕೊಟ್ಟನು. ಹೀಗೆ ತಾನು ಅದ್ವಿತೀಯನೆಂದು ಆ ದೇವಪುತ್ರನು ತೋರಿಸಿಕೊಟ್ಟನು. ದೀನತೆ ತೋರಿಸುವ ವಿಷಯದಲ್ಲಿ ಯೆಹೋವನ ಸೃಷ್ಟಿಜೀವಿಗಳಲ್ಲಿ ಯಾರೊಬ್ಬರೂ ಯೇಸುವಿಗೆ ಸಮಾನರಾಗಲಾರರು.

19 ಬಹುಶಃ ಯೇಸು ತನ್ನ ಭೂಜೀವನದ ಕೊನೆಯಲ್ಲಿ ಕಲಿಸಿದ ಈ ಪಾಠವೇ ಅವನ ನಂಬಿಗಸ್ತ ಅಪೊಸ್ತಲರ ಹೃದಯಗಳಲ್ಲಿ ದೀನಭಾವವನ್ನು ಆಳವಾಗಿ ಅಚ್ಚೊತ್ತಿಸಿತು. ಮುಂದೆ ಅವರು ವರ್ಷಾನುಗಟ್ಟಲೆ ದೀನರಾಗಿ ಕಾರ್ಯನಡೆಸಿದರೆಂದು ಬೈಬಲ್‌ ನಮಗೆ ತಿಳಿಸುತ್ತದೆ. ನಮ್ಮ ಕುರಿತೇನು?

ಯೇಸುವಿನ ಮಾದರಿಯನ್ನು ಅನುಸರಿಸುವಿರೋ?

20. ಹೃದಯದಲ್ಲಿ ದೀನರಾಗಿದ್ದೇವೋ ಇಲ್ಲವೋ ಎಂಬುದನ್ನು ನಾವು ಹೇಗೆ ತಿಳಿಯಸಾಧ್ಯವಿದೆ?

20 “ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ” ಎಂದು ಪೌಲನು ನಮ್ಮೆಲ್ಲರಿಗೂ ಬುದ್ಧಿವಾದ ನೀಡುತ್ತಾನೆ. (ಫಿಲಿಪ್ಪಿ 2:5) ಯೇಸುವಿನಂತೆ ನಾವು ಹೃದಯದಲ್ಲಿ ದೀನರಾಗಿರಬೇಕು. ನಾವು ಹೃದಯದಲ್ಲಿ ದೀನರಾಗಿದ್ದೇವೋ ಇಲ್ಲವೋ ಎಂಬುದು ನಮಗೆ ಹೇಗೆ ತಿಳಿಯುತ್ತದೆ? “ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ” ಎಂದು ಪೌಲನು ನೆನಪಿಸಿದ್ದನ್ನು ಗಮನಿಸಿ. (ಫಿಲಿಪ್ಪಿ 2:3) ಹಾಗಾದರೆ, ಇತರರನ್ನು ನಾವು ಹೇಗೆ ವೀಕ್ಷಿಸುತ್ತೇವೆ ಎಂಬುದರಲ್ಲಿ ಉತ್ತರ ಅಡಗಿದೆ. ನಾವು ಇತರರನ್ನು ನಮಗಿಂತಲೂ ಶ್ರೇಷ್ಠರಾಗಿ, ಪ್ರಮುಖರಾಗಿ ಎಣಿಸಬೇಕು. ಈ ಸಲಹೆಯನ್ನು ನೀವು ಪಾಲಿಸುವಿರೋ?

21, 22. (ಎ) ಕ್ರೈಸ್ತ ಮೇಲ್ವಿಚಾರಕರು ಏಕೆ ದೀನರಾಗಿರಬೇಕು? (ಬಿ) ನಾವು ದೀನತೆಯನ್ನು ನಡುವಿಗೆ ಕಟ್ಟಿಕೊಂಡಿದ್ದೇವೆ ಎಂಬುದನ್ನು ಹೇಗೆ ತೋರಿಸಿಕೊಡಬಹುದು?

21 ಯೇಸು ಮರಣಪಟ್ಟ ಅನೇಕ ವರ್ಷಗಳ ನಂತರವೂ ಅಪೊಸ್ತಲ ಪೇತ್ರನು ದೀನತೆಯ ಮಹತ್ವದ ಕುರಿತು ಯೋಚಿಸುತ್ತಿದ್ದನು. ಕ್ರೈಸ್ತ ಮೇಲ್ವಿಚಾರಕರು ತಮ್ಮ ಕರ್ತವ್ಯಗಳನ್ನು ಪೂರೈಸುವಾಗ ದೀನಭಾವ ಉಳ್ಳವರಾಗಿರಬೇಕೆಂದೂ, ಯೆಹೋವನ ಕುರಿಗಳ ಮೇಲೆ ಎಂದಿಗೂ ದೊರೆತನ ಮಾಡಬಾರದೆಂದೂ ಪೇತ್ರನು ಕಲಿಸಿದನು. (1 ಪೇತ್ರ 5:2, 3) ನಮಗೆ ಸಿಗುವ ಜವಾಬ್ದಾರಿ ಅಹಂಭಾವ ತೋರಿಸಲಿಕ್ಕಾಗಿರುವ ಪರವಾನಿಗೆಯಲ್ಲ. ಬದಲಿಗೆ ನಮ್ಮ ಜವಾಬ್ದಾರಿ ಹೆಚ್ಚಿನ ದೀನತೆ ತೋರಿಸುವುದನ್ನು ಕೇಳಿಕೊಳ್ಳುತ್ತದೆ. (ಲೂಕ 12:48) ಈ ಗುಣ ಬರೀ ಮೇಲ್ವಿಚಾರಕರಲ್ಲಿ ಮಾತ್ರವಲ್ಲ ಪ್ರತಿಯೊಬ್ಬ ಕ್ರೈಸ್ತನಲ್ಲೂ ಇರಬೇಕು.

22 ತಾನು ಆಕ್ಷೇಪಿಸಿದರೂ ಯೇಸು ತನ್ನ ಪಾದಗಳನ್ನು ತೊಳೆದ ಆ ರಾತ್ರಿಯನ್ನು ಪೇತ್ರನೆಂದಿಗೂ ಮರೆತಿರಸಾಧ್ಯವಿಲ್ಲ. (ಯೋಹಾನ 13:6-10) “ನೀವೆಲ್ಲರೂ ಒಬ್ಬರ ಕಡೆಗೊಬ್ಬರು ದೀನಮನಸ್ಸಿನಿಂದ ನಡುಕಟ್ಟಲ್ಪಟ್ಟವರಾಗಿರಿ” ಎಂದು ಅವನು ಕ್ರೈಸ್ತರಿಗೆ ಬರೆದನು. (1 ಪೇತ್ರ 5:5) “ನಡುಕಟ್ಟಲ್ಪಟ್ಟವರಾಗಿರಿ” ಎಂಬ ಅಭಿವ್ಯಕ್ತಿಯು ಒಬ್ಬ ಮನೆಗೆಲಸದಾಳು ಕೀಳಾದ ಚಾಕರಿ ಮಾಡಲು ಕೈಪಾವುಡವನ್ನು ನಡುವಿಗೆ ಕಟ್ಟಿಕೊಳ್ಳುವುದನ್ನು ಸೂಚಿಸುತ್ತದೆ. ಈ ಪದವು, ಯೇಸು ಅಪೊಸ್ತಲರ ಪಾದಗಳನ್ನು ತೊಳೆಯಲು ಮೊಣಕಾಲೂರುವ ಮೊದಲು ಕೈಪಾವುಡವನ್ನು ನಡುವಿಗೆ ಕಟ್ಟಿಕೊಂಡ ಸನ್ನಿವೇಶವನ್ನು ನಮಗೆ ನೆನಪಿಸುತ್ತದೆ. ನಾವು ಯೇಸುವನ್ನು ಅನುಸರಿಸುವುದಾದರೆ, ದೇವದತ್ತ ನೇಮಕ ಯಾವುದೇ ಆಗಿರಲಿ ಅದು ನಮ್ಮ ಸ್ಥಾನಮಾನಕ್ಕೆ ತಕ್ಕದ್ದಲ್ಲವೆಂದು ನಾವೆಣಿಸೆವು. ಹೌದು, ನಾವು ನಡುವಿಗೆ ಕಟ್ಟಿಕೊಂಡಿದ್ದೇವೋ ಎಂಬಂತೆ ನಮ್ಮ ಹೃದಯದಾಳದ ದೀನತೆಯು ಇತರರಿಗೆ ಕಾಣಿಸಬೇಕು.

23, 24. (ಎ) ಅಹಂಭಾವದ ಯಾವುದೇ ಪ್ರವೃತ್ತಿಯನ್ನು ನಾವೇಕೆ ಬಿಟ್ಟುಬಿಡಬೇಕು? (ಬಿ) ದೀನತೆಯ ಕುರಿತಾದ ಯಾವ ತಪ್ಪು ಕಲ್ಪನೆಯನ್ನು ಸರಿಪಡಿಸಲು ಮುಂದಿನ ಅಧ್ಯಾಯ ನೆರವಾಗುತ್ತದೆ?

23 ಅಹಂ ಎನ್ನುವುದು ವಿಷವಿದ್ದಂತೆ. ವಿಪರೀತ ಹಾನಿ ಉಂಟುಮಾಡಬಲ್ಲದು. ಈ ಗುಣವು ಪ್ರತಿಭಾಶಾಲಿಯಾದ ವ್ಯಕ್ತಿಯೊಬ್ಬನನ್ನು ದೇವರ ಕಾರ್ಯದಲ್ಲಿ ನಿಷ್ಪ್ರಯೋಜಕನನ್ನಾಗಿ ಮಾಡಬಲ್ಲದು. ಆದರೆ ದೀನಭಾವವು ಕನಿಷ್ಠ ವ್ಯಕ್ತಿಯೊಬ್ಬನನ್ನೂ ದೇವರ ಕಾರ್ಯದಲ್ಲಿ ಪ್ರಯೋಜಕನನ್ನಾಗಿ ಮಾಡುವುದು. ದೀನತೆಯಿಂದ ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯಲು ಶ್ರಮಿಸುತ್ತಾ ಈ ಅಮೂಲ್ಯ ಗುಣವನ್ನು ಪ್ರತಿದಿನವೂ ಬೆಳೆಸಿಕೊಳ್ಳುವುದಾದರೆ ಸಿಗುವ ಆಶೀರ್ವಾದಗಳೋ ಅಪಾರ. “ಆದುದರಿಂದ ದೇವರ ಪ್ರಬಲವಾದ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನು ಮೇಲಕ್ಕೇರಿಸುವನು” ಎಂದು ಪೇತ್ರನು ಬರೆದನು. (1 ಪೇತ್ರ 5:6) ಯೇಸು ದೀನತೆಯಿಂದ ತನ್ನನ್ನು ತಗ್ಗಿಸಿಕೊಂಡ ಕಾರಣ ಯೆಹೋವನು ಅವನನ್ನು ಉನ್ನತ ಸ್ಥಾನಕ್ಕೆ ಏರಿಸಿದನು. ನೀವು ತೋರಿಸುವ ದೀನತೆಗೂ ಇದೇ ರೀತಿಯಲ್ಲಿ ಆಶೀರ್ವದಿಸಲು ದೇವರು ಬಹಳ ಹರ್ಷಿಸುವನು.

24 ದುಃಖಕರವಾಗಿ ಅನೇಕರು, ಈ ದೀನಭಾವವನ್ನು ಮನೋದೌರ್ಬಲ್ಯದ ಲಕ್ಷಣವೆಂದು ಭಾವಿಸುತ್ತಾರೆ. ಹಾಗೆ ಭಾವಿಸುವುದು ಎಷ್ಟು ತಪ್ಪಾಗಿದೆ ಎಂಬುದನ್ನು ತಿಳಿಯಲು ಯೇಸುವಿನ ಉದಾಹರಣೆಯು ನಮಗೆ ಸಹಾಯಮಾಡುತ್ತದೆ. ಏಕೆಂದರೆ, ಅವನೆಷ್ಟು ದೀನನಾಗಿದ್ದನೋ ಅಷ್ಟೇ ಧೈರ್ಯವಂತನೂ ಆಗಿದ್ದನು. ಮುಂದಿನ ಅಧ್ಯಾಯದ ವಿಷಯ ಅದೇ ಆಗಿದೆ.

^ ಪ್ಯಾರ. 3 ಈ ಘಟನೆಯ ಕುರಿತು ಹೇಳುತ್ತಾ ಒಂದು ಗ್ರಂಥವು ಕತ್ತೆಯನ್ನು “ಕೀಳುಜಾತಿಯ ಪ್ರಾಣಿ” ಎಂದು ಹೇಳುತ್ತದೆ. ಮಾತ್ರವಲ್ಲ, “ಅದು ತುಂಬಾ ನಿಧಾನಿಯೂ ಮೊಂಡವೂ ಆಗಿದ್ದು ಕೆಲಸಕ್ಕಾಗಿ ಬಡವರು ಬಳಸುವ ಪ್ರಾಣಿಯಾಗಿದೆ; ನೋಡಲು ಅದು ಅಷ್ಟೇನೂ ಸುಂದರವಾಗಿಲ್ಲ” ಎಂದು ಸಹ ವರ್ಣಿಸುತ್ತದೆ.

^ ಪ್ಯಾರ. 7 ಯೇಸುವೇ ಮೀಕಾಯೇಲನಾಗಿದ್ದಾನೆ ಎಂಬುದಕ್ಕಿರುವ ಹೆಚ್ಚಿನ ರುಜುವಾತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾಗಿರುವ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 218ರಿಂದ 219ನೇ ಪುಟಗಳನ್ನು ನೋಡಿರಿ.