ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 18

‘ನನ್ನನ್ನು ಹಿಂಬಾಲಿಸುತ್ತಾ ಇರಿ’

‘ನನ್ನನ್ನು ಹಿಂಬಾಲಿಸುತ್ತಾ ಇರಿ’

1-3. (ಎ) ಯೇಸು ತನ್ನ ಅಪೊಸ್ತಲರನ್ನು ಬಿಟ್ಟುಹೋದ ಸನ್ನಿವೇಶ ಹೇಗಿತ್ತು? ಅದು ನಿರಾಶಾದಾಯಕ ಸಂಗತಿಯಲ್ಲವೇಕೆ? (ಬಿ) ಭೂಮಿಯನ್ನು ಬಿಟ್ಟುಹೋದ ಮೇಲೆ ಯೇಸು ಏನು ಮಾಡಿದನೆಂದು ಕಲಿಯುವುದು ಪ್ರಾಮುಖ್ಯವೇಕೆ?

ಹನ್ನೊಂದು ಮಂದಿ ಶಿಷ್ಯರು ಗುಡ್ಡದ ಮೇಲೆ ನಿಂತುಕೊಂಡಿದ್ದಾರೆ. ಪ್ರೀತ್ಯಾದರಗಳಿಂದ ಅವರು 12ನೇ ವ್ಯಕ್ತಿಯೆಡೆಗೆ ನೋಡುತ್ತಿದ್ದಾರೆ. ಆ ವ್ಯಕ್ತಿ ಬೇರಾರೂ ಅಲ್ಲ, ಮಾನವ ರೂಪದಲ್ಲಿರುವ ಯೇಸುವೇ. ಯೇಸು ಪುನರುತ್ಥಾನಗೊಂಡು ಪುನಃ ಒಮ್ಮೆ ಯೆಹೋವನ ಬಲಾಢ್ಯ ದೂತನಾಗಿ ಮಾರ್ಪಟ್ಟಿದ್ದಾನೆ. ತನ್ನ ಅಪೊಸ್ತಲರನ್ನು ಕೊನೆಯ ಬಾರಿ ಭೇಟಿಯಾಗಲಿಕ್ಕಾಗಿ ಯೇಸು ಅವರನ್ನು ಆಲೀವ್‌ ಗುಡ್ಡಕ್ಕೆ ಬರುವಂತೆ ಹೇಳಿದ್ದನು.

2 ಯೆರೂಸಲೇಮ್‌ನ ಕಿದ್ರೋನ್‌ ಕಣಿವೆಯ ಆಚೆಯಿರುವ ಈ ಗುಡ್ಡ ಖಂಡಿತ ಯೇಸುವಿನ ಮನಸ್ಸಿನಲ್ಲಿ ಗತ ನೆನಪುಗಳನ್ನು ಮೂಡಿಸಿರಬೇಕು. ಈ ಗುಡ್ಡದ ಇಳಿಜಾರಿನಲ್ಲೇ ಬೇಥಾನ್ಯ ಎಂಬ ಊರು ಇತ್ತು ಮತ್ತು ಅಲ್ಲಿ ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ್ದನು. ಕೆಲವು ವಾರಗಳ ಮುಂಚೆಯಷ್ಟೇ ಯೇಸು ಸಮೀಪದ ಬೇತ್ಫಗೆಯಿಂದ ಯೆರೂಸಲೇಮಿಗೆ ವಿಜಯೋತ್ಸವದೊಂದಿಗೆ ತೆರಳಿದ್ದನು. ಈ ಆಲೀವ್‌ ಗುಡ್ಡದಿಂದ ಗೆತ್ಸೇಮನೆ ತೋಟವೂ ಕಾಣುತ್ತಿತ್ತು. ಯೇಸು ತನ್ನ ಬಂಧನಕ್ಕೂ ಮುಂಚೆ ವೇದನಾಮಯ ಕ್ಷಣಗಳನ್ನು ಆ ತೋಟದಲ್ಲೇ ಕಳೆದಿದ್ದನು. ಈಗ ಈ ಚಿಕ್ಕ ಗುಡ್ಡದ ಮೇಲೆಯೇ ಯೇಸು ತನ್ನ ಆಪ್ತ ಸ್ನೇಹಿತರನ್ನು ಮತ್ತು ಹಿಂಬಾಲಕರನ್ನು ಬಿಟ್ಟುಹೋಗಲು ಸಿದ್ಧತೆ ನಡೆಸುತ್ತಿದ್ದಾನೆ. ಅವನು ಪ್ರೀತಿಯಿಂದ ವಿದಾಯದ ಮಾತುಗಳನ್ನಾಡುತ್ತಾನೆ. ಆಮೇಲೆ ಭೂಮಿಯಿಂದ ಮೇಲಕ್ಕೆ ಏರಲಾರಂಭಿಸುತ್ತಾನೆ. ತಮ್ಮ ನೆಚ್ಚಿನ ನಾಯಕನು ಆಕಾಶಕ್ಕೆ ಏರಿ ಹೋಗುತ್ತಿರುವುದನ್ನು ಅಲ್ಲಿ ನಿಂತ ಅಪೊಸ್ತಲರು ಎವೆಯಿಕ್ಕದೆ ನೋಡುತ್ತಿರುತ್ತಾರೆ. ಕೊನೆಯಲ್ಲಿ ಮೋಡವು ಅವನನ್ನು ಮರೆಮಾಡಿಬಿಡುತ್ತದೆ ಮತ್ತು ತದನಂತರ ಅವನು ಕಾಣಸಿಗುವುದಿಲ್ಲ.—ಅ. ಕಾರ್ಯಗಳು 1:6-12.

3 ಇದೊಂದು ಸಿಹಿಯೂ ಕಹಿಯೂ ಬೆರೆತ ನಿರಾಶಾದಾಯಕ ವಿದಾಯ ಆಗಿತ್ತೆಂದು ನಿಮಗನಿಸಬಹುದು. ಆದರೆ ಹಾಗಿಲ್ಲ. ಯೇಸುವಿನ ಅಧ್ಯಾಯ ಅಲ್ಲಿಗೇ ಕೊನೆಗೊಳ್ಳಲಿಲ್ಲವೆಂದು ಇಬ್ಬರು ದೇವದೂತರು ಅಪೊಸ್ತಲರಿಗೆ ಮರುಜ್ಞಾಪಿಸುತ್ತಾರೆ. (ಅ. ಕಾರ್ಯಗಳು 1:10, 11) ಅವನು ಆಕಾಶಕ್ಕೆ ಏರಿ ಹೋಗಿದ್ದು ಅನೇಕ ರೀತಿಯಲ್ಲಿ ಕೇವಲ ಆರಂಭವಷ್ಟೇ. ಯೇಸುವಿಗೆ ಮುಂದೇನಾಯಿತು ಎಂಬುದರ ವಿಷಯದಲ್ಲಿ ದೇವರ ವಾಕ್ಯ ನಮ್ಮನ್ನು ಕತ್ತಲಲ್ಲಿ ಇಟ್ಟಿಲ್ಲ. ಭೂಮಿಯನ್ನು ಬಿಟ್ಟುಹೋದ ಮೇಲೆ ಯೇಸು ಏನು ಮಾಡಿದನೆಂದು ಕಲಿಯುವುದು ಪ್ರಾಮುಖ್ಯವಾಗಿದೆ. ಏಕೆ? “ನನ್ನನ್ನು ಹಿಂಬಾಲಿಸುತ್ತಾ ಇರು” ಎಂದು ಯೇಸು ಪೇತ್ರನಿಗೆ ಹೇಳಿದ್ದನ್ನು ನೆನಪಿಸಿಕೊಳ್ಳಿ. (ಯೋಹಾನ 21:19, 22) ಈ ಆಜ್ಞೆಗೆ ನಾವೆಲ್ಲರೂ ವಿಧೇಯರಾಗಿರತಕ್ಕದ್ದು. ಕೇವಲ ಕ್ಷಣಮಾತ್ರಕ್ಕಲ್ಲ ಜೀವನಪರ್ಯಂತರ. ಹಾಗೆ ಮಾಡಬೇಕಾದರೆ ನಮ್ಮ ನಾಯಕನು ಈಗ ಏನು ಮಾಡುತ್ತಿದ್ದಾನೆ ಮತ್ತು ಸ್ವರ್ಗದಲ್ಲಿ ಅವನಿಗೆ ಯಾವ ನೇಮಕಗಳು ಸಿಕ್ಕಿವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

ಸ್ವರ್ಗಕ್ಕೆ ಹಿಂದಿರುಗಿದ ಮೇಲೆ ಯೇಸುವಿನ ಜೀವನ

4. ಯೇಸು ಸ್ವರ್ಗಕ್ಕೆ ಹಿಂದಿರುಗಿದ ಕೂಡಲೇ ಏನು ಸಂಭವಿಸುವುದು ಎಂಬದನ್ನು ಬೈಬಲ್‌ ಹೇಗೆ ಮುಂತಿಳಿಸಿತು?

4 ಸ್ವರ್ಗಕ್ಕೆ ಯೇಸುವಿನ ಆಗಮನ, ಅವನಿಗೆ ದೊರೆತ ಸ್ವಾಗತ ಹಾಗೂ ತಂದೆಯೊಂದಿಗೆ ಅವನ ಪುನರ್ಮಿಲನ ಈ ಬಗ್ಗೆ ಬೈಬಲ್‌ ಏನನ್ನೂ ತಿಳಿಸದೇ ಮೌನವಹಿಸುತ್ತದೆ. ಆದರೆ ಯೇಸು ಸ್ವರ್ಗಕ್ಕೆ ಹಿಂದಿರುಗಿದ ಕೂಡಲೇ ಏನು ಸಂಭವಿಸುವುದೆಂದು ಬೈಬಲ್‌ ಮುಂಚೆಯೇ ತಿಳಿಸಿತ್ತು. ಸುಮಾರು 15 ಶತಮಾನಗಳಿಗೂ ಹೆಚ್ಚು ಸಮಯದಿಂದ ಯೆಹೂದ್ಯರು ಕ್ರಮವಾಗಿ ಒಂದು ಪವಿತ್ರ ಆಚರಣೆಯನ್ನು ನಡೆಸುತ್ತಿದ್ದರು. ವರ್ಷ ವರ್ಷವೂ ನಿರ್ದಿಷ್ಟವಾದ ಒಂದು ದಿನದಂದು ಮಹಾ ಯಾಜಕನು ದೇವಾಲಯದ ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಿದ್ದನು. ಅಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ದೋಷಪರಿಹಾರಕ ಯಜ್ಞದ ರಕ್ತವನ್ನು ಚಿಮಿಕಿಸುತ್ತಿದ್ದನು. ಆ ದಿನದಂದು ಮಹಾ ಯಾಜಕನು ಮೆಸ್ಸೀಯನನ್ನು ಮುನ್‌ಚಿತ್ರಿಸುತ್ತಿದ್ದನು. ಸ್ವರ್ಗಕ್ಕೆ ಹಿಂದಿರುಗಿದ ಬಳಿಕ ಯೇಸು ಆ ಆಚರಣೆಯ ಪ್ರವಾದನಾತ್ಮಕ ಅರ್ಥವನ್ನು ಎಲ್ಲ ಕಾಲಕ್ಕಾಗಿ ಒಂದೇ ಸಾರಿ ನೆರವೇರಿಸಿದನು. ಅವನು ಯೆಹೋವನ ಭವ್ಯ ಸಮ್ಮುಖಕ್ಕೆ ಅಂದರೆ ವಿಶ್ವದಲ್ಲೇ ಅತಿ ಪರಿಶುದ್ಧವಾದ ಸ್ಥಳಕ್ಕೆ ಬಂದು ತನ್ನ ವಿಮೋಚನಾ ಯಜ್ಞದ ಮೌಲ್ಯವನ್ನು ತಂದೆಗೆ ಒಪ್ಪಿಸಿದನು. (ಇಬ್ರಿಯ 9:11, 12, 24) ಯೆಹೋವನದನ್ನು ಸ್ವೀಕರಿಸಿದನೋ?

5, 6. (ಎ) ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞವನ್ನು ಯೆಹೋವನು ಸ್ವೀಕರಿಸಿದನೆಂಬುದಕ್ಕೆ ಯಾವ ರುಜುವಾತಿದೆ? (ಬಿ) ವಿಮೋಚನಾ ಮೌಲ್ಯದಿಂದ ಯಾರೆಲ್ಲ ಪ್ರಯೋಜನ ಪಡೆಯುವರು? ಹೇಗೆ?

5 ಯೇಸುವಿನ ಸ್ವರ್ಗಾರೋಹಣದ ಸ್ವಲ್ಪದಿನಗಳ ನಂತರ ಏನಾಯಿತೆಂಬುದನ್ನು ಪರಿಗಣಿಸುವ ಮೂಲಕ ನಾವಿದಕ್ಕೆ ಉತ್ತರ ಪಡೆದುಕೊಳ್ಳಬಹುದು. ಯೆರೂಸಲೇಮ್‌ನಲ್ಲಿ, ಮೇಲಂತಸ್ತಿನ ಕೋಣೆಯೊಂದರಲ್ಲಿ ಸುಮಾರು 120 ಮಂದಿ ಕ್ರೈಸ್ತರ ಚಿಕ್ಕ ಗುಂಪೊಂದು ಕೂಡಿಬಂದಿತ್ತು. ಇದ್ದಕ್ಕಿದ್ದಂತೆ ರಭಸವಾಗಿ ಗಾಳಿಯು ಬೀಸುತ್ತಿದೆಯೋ ಎಂಬಂತೆ ಒಂದು ಶಬ್ದವು ಉಂಟಾಗಿ ಆ ಕೋಣೆಯನ್ನೆಲ್ಲ ತುಂಬಿಕೊಂಡಿತು. ಆಗ ಬೆಂಕಿಯಂತಿದ್ದ ನಾಲಿಗೆಗಳು ಅವರ ತಲೆಯ ಮೇಲೆ ಕಾಣಿಸಿಕೊಂಡವು. ಅವರು ಪವಿತ್ರಾತ್ಮಭರಿತರಾದರು ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲಾರಂಭಿಸಿದರು. (ಅ. ಕಾರ್ಯಗಳು 2:1-4) ಈ ಘಟನೆಯು ಆಧ್ಯಾತ್ಮಿಕ ಇಸ್ರಾಯೇಲೆಂಬ ಹೊಸ ಜನಾಂಗದ ಉದಯಕ್ಕೆ ಕಾರಣವಾಯಿತು. ಇದು, ದೇವರು ಭೂಮಿಯಲ್ಲಿ ತನ್ನ ಚಿತ್ತವನ್ನು ಪೂರೈಸಲು ಹೊಸದಾಗಿ ‘ಆರಿಸಿಕೊಂಡಿರುವ ಕುಲವೂ ರಾಜವಂಶಸ್ಥರಾದ ಯಾಜಕ’ ವರ್ಗವೂ ಆಗಿದೆ. (1 ಪೇತ್ರ 2:9) ಯೆಹೋವ ದೇವರು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞವನ್ನು ಸ್ವೀಕರಿಸಿದನು ಮತ್ತು ಮೆಚ್ಚಿದನು ಎಂಬುದನ್ನು ಇದು ತೋರಿಸಿತು. ವಿಮೋಚನಾ ಮೌಲ್ಯದ ಯಜ್ಞವು ಸಾಧ್ಯಮಾಡಿದ ಆಶೀರ್ವಾದಗಳಲ್ಲಿ ಪವಿತ್ರಾತ್ಮದ ಸುರಿಸಲ್ಪಡುವಿಕೆಯು ಪ್ರಥಮ ಆಶೀರ್ವಾದವಾಗಿದೆ.

6 ಅಂದಿನಿಂದ ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞವು ಲೋಕದಾದ್ಯಂತವಿರುವ ಅವನ ಹಿಂಬಾಲಕರಿಗೆ ಪ್ರಯೋಜನ ತರುತ್ತಿದೆ. ನಾವು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲಿರುವ ಅಭಿಷಿಕ್ತರ ‘ಚಿಕ್ಕ ಹಿಂಡಿನಲ್ಲಿ’ ಒಬ್ಬರಾಗಿರಲಿ, ಇಲ್ಲವೇ ಕ್ರಿಸ್ತನ ಆಳ್ವಿಕೆಯ ಕೆಳಗೆ ಭೂಮಿಯಲ್ಲಿ ಜೀವಿಸುವ ‘ಬೇರೆ ಕುರಿಗಳಲ್ಲಿ’ ಒಬ್ಬರಾಗಿರಲಿ, ಅವನ ಯಜ್ಞದಿಂದ ಪ್ರಯೋಜನವನ್ನು ಖಂಡಿತ ಪಡೆಯುವೆವು. (ಲೂಕ 12:32; ಯೋಹಾನ 10:16) ಅದು ನಮ್ಮ ನಿರೀಕ್ಷೆ ಮತ್ತು ಪಾಪಗಳ ಕ್ಷಮಾಪಣೆಗೆ ಆಧಾರ ಒದಗಿಸುತ್ತದೆ. ಅನುದಿನವೂ ಯೇಸುವನ್ನು ಹಿಂಬಾಲಿಸುತ್ತಾ ನಾವು ಎಷ್ಟರ ತನಕ ವಿಮೋಚನಾ ಮೌಲ್ಯದಲ್ಲಿ ‘ನಂಬಿಕೆ ಇಡುತ್ತೇವೋ’ ಅಷ್ಟರತನಕ ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರಬಲ್ಲೆವು. ಮಾತ್ರವಲ್ಲ ಉಜ್ವಲ ಭವಿಷ್ಯತ್ತಿನ ನಿರೀಕ್ಷೆಯೂ ನಮಗಿರಬಲ್ಲದು.—ಯೋಹಾನ 3:16.

7. ಸ್ವರ್ಗಕ್ಕೆ ಹಿಂದಿರುಗಿದ ನಂತರ ಯೇಸುವಿಗೆ ಯಾವ ಅಧಿಕಾರ ಕೊಡಲಾಯಿತು? ನೀವು ಅವನನ್ನು ಹೇಗೆ ಬೆಂಬಲಿಸಬಲ್ಲಿರಿ?

7 ಯೇಸು ಸ್ವರ್ಗಕ್ಕೆ ಹಿಂತಿರುಗಿದಂದಿನಿಂದ ಅಲ್ಲಿ ಏನು ಮಾಡುತ್ತಿದ್ದಾನೆ? ಅವನಿಗೆ ಪ್ರಚಂಡ ಅಧಿಕಾರವಿದೆ. (ಮತ್ತಾಯ 28:18) ಕ್ರೈಸ್ತ ಸಭೆಯ ಮೇಲಿನ ಪೂರ್ಣ ಅಧಿಕಾರವನ್ನು ಯೆಹೋವನು ಅವನಿಗೆ ಕೊಟ್ಟಿದ್ದಾನೆ. ಆ ನೇಮಕವನ್ನು ಅವನು ಪ್ರೀತಿಪೂರ್ವಕ ಹಾಗೂ ನ್ಯಾಯಯುತ ರೀತಿಯಲ್ಲಿ ಪೂರೈಸುತ್ತಿದ್ದಾನೆ. (ಕೊಲೊಸ್ಸೆ 1:13) ಮುಂತಿಳಿಸಲ್ಪಟ್ಟಂತೆಯೇ ಯೇಸು ಮಂದೆಯ ಅಗತ್ಯಗಳನ್ನು ನೋಡಿಕೊಳ್ಳುವಂತೆ ಅರ್ಹ ಪುರುಷರನ್ನು ನೇಮಿಸಿದ್ದಾನೆ. (ಎಫೆಸ 4:8) ಉದಾಹರಣೆಗೆ ಅವನು ಪೌಲನನ್ನು, “ಅನ್ಯಜನಾಂಗಗಳವರಿಗೆ ಅಪೊಸ್ತಲನಾಗಿ” ಆಯ್ಕೆ ಮಾಡಿ ದೂರ ದೂರದ ಪ್ರದೇಶಗಳಿಗೆ ಸುವಾರ್ತೆಯನ್ನು ಹಬ್ಬಿಸುವಂತೆ ಕಳುಹಿಸಿದನು. (ರೋಮನ್ನರಿಗೆ 11:13; 1 ತಿಮೊಥೆಯ 2:7) ಒಂದನೆಯ ಶತಮಾನದ ಅಂತ್ಯದಷ್ಟಕ್ಕೆ ಏಷ್ಯಾದ ರೋಮನ್‌ ಪ್ರಾಂತದಲ್ಲಿರುವ ಏಳು ಸಭೆಗಳಿಗೆ ಯೇಸು ಶ್ಲಾಘನೆ, ಸಲಹೆ ಮತ್ತು ತಿದ್ದುಪಾಟುಗಳನ್ನು ಒಳಗೊಂಡ ಸಂದೇಶವನ್ನು ಕೊಟ್ಟನು. (ಪ್ರಕಟನೆ 2 ಮತ್ತು 3ನೇ ಅಧ್ಯಾಯ) ಯೇಸುವನ್ನು ಕ್ರೈಸ್ತ ಸಭೆಯ ಶಿರಸ್ಸೆಂದು ನೀವು ಅಂಗೀಕರಿಸುತ್ತೀರೋ? (ಎಫೆಸ 5:23) ಅವನನ್ನು ಹಿಂಬಾಲಿಸುತ್ತಾ ಇರಬೇಕಾದರೆ, ನೀವು ನಿಮ್ಮ ಸಭೆಯಲ್ಲಿ ವಿಧೇಯ ಹಾಗೂ ಸಹಕಾರದ ಮನೋಭಾವವನ್ನು ಪ್ರವರ್ಧಿಸಬೇಕು.

8, 9. ಇಸವಿ 1914ರಲ್ಲಿ ಯೇಸುವಿಗೆ ಯಾವ ಅಧಿಕಾರ ಕೊಡಲಾಯಿತು? ಅದು ನಾವು ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಯಾವ ಪ್ರಭಾವಬೀರಬೇಕು?

8 ಇಸವಿ 1914ರಲ್ಲಿ ಯೇಸುವಿಗೆ ಇನ್ನಷ್ಟು ಅಧಿಕಾರ ಕೊಡಲಾಯಿತು. ಆ ವರ್ಷ ಅವನನ್ನು ಯೆಹೋವನ ಮೆಸ್ಸೀಯ ರಾಜ್ಯದ ರಾಜನಾಗಿ ನೇಮಿಸಲಾಯಿತು. ಯೇಸು ಆಳಲಾರಂಭಿಸಿದಾಗ, “ಸ್ವರ್ಗದಲ್ಲಿ ಯುದ್ಧವು ಆರಂಭವಾಯಿತು.” ಅದರ ಫಲಿತಾಂಶ? ಸೈತಾನನೂ ಅವನ ದೆವ್ವಗಳೂ ಭೂಮಿಗೆ ದೊಬ್ಬಲ್ಪಟ್ಟರು. ಮತ್ತು ಅಂದಿನಿಂದ ಕಡುಸಂಕಷ್ಟದ ಕರಾಳ ಶಕೆಯು ಆರಂಭವಾಯಿತು. ಇಂದು ಮಾನವರನ್ನು ಬಾಧಿಸುತ್ತಿರುವ ಘೋರ ಯುದ್ಧಗಳು, ಅಪರಾಧಗಳು, ಭಯೋತ್ಪಾದನೆ, ರೋಗರುಜಿನಗಳು, ಭೂಕಂಪಗಳು ಮತ್ತು ಕ್ಷಾಮಗಳು ಯೇಸು ಈಗ ಸ್ವರ್ಗದಲ್ಲಿ ಆಳುತ್ತಿದ್ದಾನೆ ಎಂಬುದನ್ನು ನೆನಪುಹುಟ್ಟಿಸುತ್ತವೆ. ಸೈತಾನನು ಈಗಲೂ “ಈ ಲೋಕದ ಅಧಿಪತಿ” ಆಗಿದ್ದಾನೆ. ಆದರೆ ಅವನಿಗಿರುವ ‘ಸಮಯಾವಧಿಯು ಸ್ವಲ್ಪವೇ.’ (ಪ್ರಕಟನೆ 12:7-12; ಯೋಹಾನ 12:31; ಮತ್ತಾಯ 24:3-7; ಲೂಕ 21:11) ಹಾಗಿದ್ದರೂ, ಯೇಸು ತನ್ನ ಆಳ್ವಿಕೆಯನ್ನು ಅಂಗೀಕರಿಸುವಂತೆ ಲೋಕವ್ಯಾಪಕವಾಗಿರುವ ಜನರಿಗೆ ಈಗಲೂ ಅವಕಾಶ ನೀಡುತ್ತಿದ್ದಾನೆ.

9 ಆ ಮೆಸ್ಸೀಯ ರಾಜನ ಪಕ್ಷವನ್ನು ನಾವು ವಹಿಸುವುದು ತುಂಬ ಪ್ರಾಮುಖ್ಯ. ದಿನಾಲೂ ನಾವು ಮಾಡುವ ನಿರ್ಣಯಗಳೆಲ್ಲವೂ ಅವನಿಗೆ ಮೆಚ್ಚಿಕೆಯಾಗಿರುವಂತೆ ಇರಬೇಕೇ ಹೊರತು ಈ ಭ್ರಷ್ಟ ಲೋಕ ಮೆಚ್ಚುವಂತಲ್ಲ. ಮಾನವರನ್ನು, “ರಾಜರ ರಾಜನು ಮತ್ತು ಕರ್ತರ ಕರ್ತನು” ಆಗಿರುವ ಯೇಸು ಕ್ರಿಸ್ತನು ನೋಡುವಾಗ ಅವನ ನೀತಿಯುತ ಹೃದಯ ಒಂದೆಡೆ ಕೋಪದಿಂದ ಕುದಿದರೆ ಇನ್ನೊಂದೆಡೆ ಹರ್ಷದಿಂದ ಹಿಗ್ಗುತ್ತದೆ. (ಪ್ರಕಟನೆ 19:16) ಹಾಗೇಕೆ?

ಮೆಸ್ಸೀಯ ರಾಜನ ಕೋಪ ಮತ್ತು ಹರ್ಷ

10. ಯೇಸು ಸ್ವಭಾವತಃ ಯಾವ ರೀತಿಯ ವ್ಯಕ್ತಿ? ಆದರೂ ನಮ್ಮ ನಾಯಕನಲ್ಲಿ ನೀತಿಯುತ ಕೋಪ ಕೆರಳಲು ಕಾರಣವೇನು?

10 ತನ್ನ ತಂದೆಯಂತೆಯೇ ನಮ್ಮ ನಾಯಕನು ಸಹ ಸದಾ ಸಂತೋಷದಿಂದಿರುವ ವ್ಯಕ್ತಿಯಾಗಿದ್ದಾನೆ. (1 ತಿಮೊಥೆಯ 1:11) ಅವನು ಭೂಮಿಯಲ್ಲಿದ್ದಾಗಲೂ ತಪ್ಪುಹುಡುಕುವ ಸ್ವಭಾವದವನಾಗಿರಲಿಲ್ಲ ಇಲ್ಲವೇ ಒರಟು ಸ್ವಭಾವದವನಾಗಿರಲಿಲ್ಲ. ಆದರೆ ಇಂದು ಭೂಮಿಯಲ್ಲಿ ನಡೆಯುತ್ತಿರುವ ಆತಂಕಕಾರಿ ಘಟನೆಗಳು ಖಂಡಿತ ಅವನಲ್ಲಿ ನೀತಿಯುತ ಕೋಪವನ್ನು ಕೆರಳಿಸುತ್ತವೆ. ಯೇಸುವನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುವ ಎಲ್ಲ ಧಾರ್ಮಿಕ ಸಂಘಟನೆಗಳ ಮೇಲೆ ಖಂಡಿತ ಅವನಿಗೆ ಕೋಪವಿದೆ. ಅದನ್ನೇ ಮುಂತಿಳಿಸುತ್ತಾ ಅವನಂದದ್ದು: “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು. ಆ ದಿನದಲ್ಲಿ ಅನೇಕರು ನನಗೆ, ‘ಕರ್ತನೇ, ಕರ್ತನೇ, ನಾವು . . . ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಹೇಳುವರು. ಆದರೂ ಆಗ ನಾನು ಅವರಿಗೆ, ನನಗೆ ನಿಮ್ಮ ಪರಿಚಯವೇ ಇಲ್ಲ! ಅನ್ಯಾಯದ ಕೆಲಸಗಾರರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”—ಮತ್ತಾಯ 7:21-23.

11-13. ತನ್ನ ಹೆಸರಿನಲ್ಲಿ “ಅನೇಕ ಮಹತ್ಕಾರ್ಯಗಳನ್ನು” ಮಾಡುತ್ತಿದ್ದ ಜನರ ಬಗ್ಗೆ ಯೇಸು ಆಡಿದ ತೀಕ್ಷ್ಣ ಮಾತುಗಳನ್ನು ಕೇಳಿ ಕೆಲವರು ತಬ್ಬಿಬ್ಬಾಗಬಹುದೇಕೆ? ಯೇಸು ಕೋಪಗೊಂಡಿದ್ದೇಕೆ? ದೃಷ್ಟಾಂತಿಸಿ.

11 ಇಂದು ತಮ್ಮನ್ನು ಕ್ರೈಸ್ತರೆಂದು ಕರೆದುಕೊಳ್ಳುವ ಅನೇಕರು ಈ ಮಾತುಗಳನ್ನು ಕೇಳಿ ತಬ್ಬಿಬ್ಬಾಗಬಹುದು. ತನ್ನ ಹೆಸರಿನಲ್ಲಿ “ಅನೇಕ ಮಹತ್ಕಾರ್ಯಗಳನ್ನು” ಮಾಡುತ್ತಿದ್ದ ಜನರ ಬಗ್ಗೆ ಯೇಸು ಅಂಥ ತೀಕ್ಷ್ಣ ಮಾತುಗಳನ್ನಾಡಿದ್ದೇಕೆ? ಕ್ರೈಸ್ತಪ್ರಪಂಚದ ಚರ್ಚುಗಳು ಧರ್ಮಕಾರ್ಯಗಳನ್ನು ನಡೆಸಿವೆ, ಬಡಬಗ್ಗರಿಗೆ ಸಹಾಯ ಮಾಡಿವೆ, ದೊಡ್ಡ ದೊಡ್ಡ ಆಸ್ಪತ್ರೆ, ಶಾಲಾ-ಕಾಲೇಜುಗಳನ್ನು ಕಟ್ಟಿಸಿವೆ. ಇನ್ನೂ ಏನೇನೋ ಕೆಲಸಕಾರ್ಯಗಳನ್ನು ಮಾಡಿವೆ. ಆದರೂ ಅವು ಯೇಸುವಿನ ಕೋಪಕ್ಕೆ ಗುರಿಯಾದದ್ದೇಕೆ? ಅದನ್ನು ತಿಳಿಯಲು ಈ ದೃಷ್ಟಾಂತವನ್ನು ಪರಿಗಣಿಸಿ.

12 ತಂದೆ ಮತ್ತು ತಾಯಿ ಎಲ್ಲಿಗೋ ಹೋಗಬೇಕಾಗಿದೆ. ತಮ್ಮೊಂದಿಗೆ ಮಕ್ಕಳನ್ನು ಕೊಂಡೊಯ್ಯಲು ಅವರಿಗೆ ಅವಕಾಶವಿಲ್ಲ. ಹಾಗಾಗಿ ಕೆಲಸದಾಕೆಯನ್ನು ನೇಮಿಸುತ್ತಾರೆ. ಅವಳಿಗೇನು ಜಾಸ್ತಿ ಕೆಲಸವಿರಲಿಲ್ಲ. “ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೋ. ಸಮಯಕ್ಕೆ ಸರಿಯಾಗಿ ಉಣಿಸು. ಸ್ನಾನಮಾಡಿಸಿ, ಶುಭ್ರವಾಗಿಡು. ಅವರಿಗೆ ಯಾವುದೇ ಅಪಾಯವಾಗದಂತೆ ನೋಡಿಕೋ” ಎಂದಷ್ಟೇ ಆ ಹೆತ್ತವರು ಕೇಳಿಕೊಳ್ಳುತ್ತಾರೆ. ಆದರೆ ಆ ಹೆತ್ತವರು ಹಿಂದೆ ಬಂದಾಗ ತಮ್ಮ ಮಕ್ಕಳ ಅವಸ್ಥೆಯನ್ನು ನೋಡಿ ದಂಗಾಗಿ ನಿಲ್ಲುತ್ತಾರೆ. ಏಕೆಂದರೆ ಮಕ್ಕಳು ಹಸಿವೆಯಿಂದ ಕಂಗಾಲಾಗಿದ್ದಾರೆ, ಮೈಯೆಲ್ಲ ಕೊಳೆಯಾಗಿದೆ. ಶೋಚನೀಯ ಸ್ಥಿತಿಯಲ್ಲಿರುವ ಆ ಮಕ್ಕಳು ರೋಗಿಗಳಂತೆ ಕಾಣುತ್ತಿದ್ದಾರೆ. ಮಕ್ಕಳು ಅಳುತ್ತಾ ಕೆಲಸದಾಕೆಯನ್ನು ಕರೆಯುತ್ತಿದ್ದರೂ ಅವಳದನ್ನು ಕಿವಿಗೆಹಾಕಿಕೊಳ್ಳುತ್ತಿಲ್ಲ. ಏಣಿಯ ಮೇಲೆ ನಿಂತುಕೊಂಡು ಕಿಟಕಿಗಳನ್ನು ಸ್ವಚ್ಛಗೊಳಿಸುತ್ತಿದ್ದಾಳೆ. ಕೋಪಗೊಂಡ ಹೆತ್ತವರು ಮಕ್ಕಳನ್ನು ಕಡೆಗಣಿಸಿದ್ದಕ್ಕೆ ಆಕೆಯ ಬಳಿ ಕಾರಣ ಕೇಳುತ್ತಾರೆ. ಅದಕ್ಕವಳು, “ನಿಮಗಾಗಿ ಎಷ್ಟೆಲ್ಲ ಕೆಲಸ ಮಾಡಿದ್ದೇನೆ ನೋಡಿ! ಕಿಟಕಿಗಳು ಎಷ್ಟು ಸ್ವಚ್ಛವಾಗಿವೆ? ಇಡೀ ಮನೆಯನ್ನೂ ಚೆನ್ನಾಗಿಟ್ಟಿದ್ದೇನೆ” ಎಂದೆಲ್ಲ ವಿವರಿಸುತ್ತಾಳೆ. ಅದನ್ನು ಕೇಳಿ ಆ ಹೆತ್ತವರಿಗೆ ಖುಷಿಯಾಗುವುದೋ? ಖಂಡಿತ ಇಲ್ಲ! ಆ ಕೆಲಸಗಳನ್ನೆಲ್ಲ ಮಾಡುವಂತೆ ಅವರೆಂದೂ ಆಕೆಗೆ ಹೇಳಿರಲಿಲ್ಲ. ಕೇವಲ ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳಿದ್ದರಷ್ಟೇ. ತಮ್ಮ ಮಾತನ್ನು ಕೇಳದಿದ್ದುದಕ್ಕೆ ಖಂಡಿತ ಅವರು ಆಕೆಯ ಮೇಲೆ ಕೋಪಿಸಿಕೊಳ್ಳುವರು.

13 ಆ ಕೆಲಸದಾಕೆಯಂತೆಯೇ ಕ್ರೈಸ್ತಪ್ರಪಂಚವು ನಡೆದುಕೊಂಡಿದೆ. ಜನರಿಗೆ ದೇವರ ವಾಕ್ಯದ ಸತ್ಯವನ್ನು ಬೋಧಿಸುವ ಮೂಲಕ ಆಧ್ಯಾತ್ಮಿಕವಾಗಿ ಉಣಿಸುವಂತೆ ಹಾಗೂ ಆಧ್ಯಾತ್ಮಿಕವಾಗಿ ಶುದ್ಧರಾಗಿರಲು ಸಹಾಯ ಮಾಡುವಂತೆ ಯೇಸು ತನ್ನ ಪ್ರತಿನಿಧಿಗಳಿಗೆ ನಿರ್ದೇಶನಗಳನ್ನು ಕೊಟ್ಟಿದ್ದನು. (ಯೋಹಾನ 21:15-17) ಆದಾಗ್ಯೂ, ಕ್ರೈಸ್ತಪ್ರಪಂಚವು ಅವನು ಕೊಟ್ಟ ಮಾರ್ಗದರ್ಶನಗಳನ್ನು ಪಾಲಿಸದೇ ಅವುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಜನರು ಆಧ್ಯಾತ್ಮಿಕ ಹಸಿವಿನಿಂದ ಬಳಲುವಂತೆ, ಸುಳ್ಳು ಬೋಧನೆಗಳಿಂದ ಗೊಂದಲಕ್ಕೀಡಾಗುವಂತೆ ಮತ್ತು ಬೈಬಲಿನ ಮೂಲಭೂತ ಸತ್ಯಗಳನ್ನೂ ಗ್ರಹಿಸದಿರುವಂತೆ ಮಾಡಿದೆ. (ಯೆಶಾಯ 65:13; ಆಮೋಸ 8:11) ಈ ಲೋಕವನ್ನು ಸುಧಾರಿಸುವ ಕ್ರೈಸ್ತಪ್ರಪಂಚದ ಯಾವುದೇ ಪ್ರಯತ್ನಗಳು ಅದು ತೋರಿಸಿರುವ ಈ ಇಚ್ಛಾಪೂರ್ವಕ ಅವಿಧೇಯತೆಯನ್ನು ಸಮರ್ಥಿಸಲಾರವು. ವಾಸ್ತವದಲ್ಲಿ ಸೈತಾನನ ಈ ಲೋಕ ವ್ಯವಸ್ಥೆಯು ನೆಲಸಮಮಾಡಲು ನಿರ್ಧರಿಸಲಾಗಿರುವ ಒಂದು ಮನೆಯಂತಿದೆ! ಸೈತಾನನ ಲೋಕ ವ್ಯವಸ್ಥೆಯು ಬಲುಬೇಗನೆ ನಾಶವಾಗಲಿದೆ ಎಂಬದಾಗಿ ದೇವರ ವಾಕ್ಯವು ಸ್ಪಷ್ಟವಾಗಿ ತಿಳಿಸುತ್ತದೆ.—1 ಯೋಹಾನ 2:15-17.

14. ಯಾವ ಕೆಲಸವು ಇಂದು ಯೇಸುವನ್ನು ಸಂತೋಷಗೊಳಿಸುತ್ತಿದೆ? ಏಕೆ?

14 ಇನ್ನೊಂದು ಬದಿಯಲ್ಲಿ, ಯೇಸುವಿನ ಮನಸ್ಸಿಗೆ ಮುದನೀಡುತ್ತಿರುವ ಘಟನೆಯೊಂದು ನಡೆಯುತ್ತಿದೆ. ಸ್ವರ್ಗಕ್ಕೆ ಹೋಗುವ ಮುಂಚೆ ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ನೀಡಿದ್ದನು. ಭೂಮಿಯಲ್ಲಿ ಲಕ್ಷಾಂತರ ಮಂದಿ ಅದನ್ನು ಪಾಲಿಸುತ್ತಿರುವುದನ್ನು ಸ್ವರ್ಗದಿಂದ ನೋಡುವಾಗ ಅವನಿಗೆಷ್ಟು ಸಂತೋಷವಾಗುತ್ತಿರಬೇಕು! (ಮತ್ತಾಯ 28:19, 20) ಮೆಸ್ಸೀಯ ರಾಜನನ್ನು ಸಂತೋಷಪಡಿಸುವುದು ಎಂಥ ಒಂದು ಸುಯೋಗ! ಆದ್ದರಿಂದ, ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಬೆಂಬಲ ನೀಡುವುದನ್ನು ಎಂದಿಗೂ ನಿಲ್ಲಿಸದಿರುವ ದೃಢಸಂಕಲ್ಪ ಮಾಡೋಣ. (ಮತ್ತಾಯ 24:45) ಅಭಿಷಿಕ್ತ ಕ್ರೈಸ್ತರಿರುವ ಈ ವರ್ಗವು ಕ್ರೈಸ್ತಪ್ರಪಂಚದ ಪಾದ್ರಿಗಳಂತಿರದೆ, ಸಾರುವ ಕೆಲಸವನ್ನು ವಿಧೇಯತೆಯಿಂದ ಮುಂದುವರಿಸುತ್ತಿದೆ ಮತ್ತು ಕ್ರಿಸ್ತನ ಕುರಿಗಳಿಗೆ ನಂಬಿಗಸ್ತಿಕೆಯಿಂದ ಉಣಿಸುತ್ತಿದೆ.

15, 16. (ಎ) ಇಂದು ಹೆಚ್ಚಿನವರಲ್ಲಿ ಪ್ರೀತಿ ಇಲ್ಲದಿರುವುದನ್ನು ನೋಡುವಾಗ ಯೇಸುವಿಗೆ ಹೇಗನಿಸುತ್ತದೆ? ಅದು ನಮಗೆ ಹೇಗೆ ಗೊತ್ತು? (ಬಿ) ಕ್ರೈಸ್ತಪ್ರಪಂಚವು ಯೇಸುವಿನ ಕೋಪವನ್ನು ತನ್ನ ಮೇಲೆ ಹೇಗೆ ಬರಮಾಡಿಕೊಂಡಿದೆ?

15 ಇಂದು ಭೂಮಿಯಲ್ಲಿರುವ ಹೆಚ್ಚಿನವರಲ್ಲಿ ಪ್ರೀತಿ ಇಲ್ಲದಿರುವುದನ್ನು ನೋಡುವಾಗ ರಾಜನು ಖಂಡಿತ ಕೋಪಿಸಿಕೊಳ್ಳುತ್ತಾನೆಂದು ನಾವು ಹೇಳಬಹುದು. ಸಬ್ಬತ್‌ ದಿನದಲ್ಲಿ ಜನರನ್ನು ವಾಸಿಮಾಡಿದ್ದಕ್ಕಾಗಿ ಯೇಸುವನ್ನು ಟೀಕಿಸಿದ ಫರಿಸಾಯರನ್ನು ನೆನಪಿಗೆ ತನ್ನಿ. ಅವರು ಎಷ್ಟು ಕಠಿನ ಹೃದಯದವರೂ ಹಠಮಾರಿಗಳೂ ಆಗಿದ್ದರೆಂದರೆ, ತಾವೇ ಮಾಡಿದ ಮೌಖಿಕ ನಿಯಮಕ್ಕೆ ಅಂಟಿಕೊಂಡಿದ್ದರು. ಹಾಗೂ ಮೋಶೆಯ ಧರ್ಮಶಾಸ್ತ್ರವನ್ನು ಅವರು ಹೇಗೆ ಅರ್ಥಮಾಡಿಕೊಂಡಿದ್ದರೋ ಅದನ್ನು ಬಿಟ್ಟು ಬೇರೆಯದನ್ನು ಸುತರಾಂ ಒಪ್ಪುತ್ತಿರಲಿಲ್ಲ. ಯೇಸುವಿನ ಅದ್ಭುತಗಳು ಊಹೆಗೂ ಮೀರಿ ಒಳಿತನ್ನು ಮಾಡಿದವು! ಅವು ಜನರಿಗೆ ಆನಂದ, ನೆಮ್ಮದಿಯನ್ನು ಒದಗಿಸಿ ಅವರ ನಂಬಿಕೆಯನ್ನು ಬಲಪಡಿಸಿದವಾದರೂ ಫರಿಸಾಯರು ಅವುಗಳಿಗೆ ಒಂಚೂರೂ ಬೆಲೆಕೊಡಲಿಲ್ಲ. ಯೇಸುವಿಗೆ ಅವರ ಬಗ್ಗೆ ಹೇಗನಿಸಿತು? ‘ಅವನು ತನ್ನ ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ವಿಚಾರಹೀನ ಹೃದಯಗಳ ನಿಮಿತ್ತ ಬಹಳವಾಗಿ ದುಃಖಿಸಿದನು.’—ಮಾರ್ಕ 3:5.

16 ಯೇಸುವಿಗೆ ‘ಬಹಳ ದುಃಖವನ್ನು’ ಉಂಟುಮಾಡುವಂಥ ಅನೇಕ ಸಂಗತಿಗಳು ಇಂದು ನಡೆಯುತ್ತಿವೆ. ಕ್ರೈಸ್ತಪ್ರಪಂಚದ ನಾಯಕರು, ಬೈಬಲಿನೊಂದಿಗೆ ಹೊಂದಿಕೆಯಲ್ಲಿಲ್ಲದ ಪದ್ಧತಿಗಳು ಮತ್ತು ನಂಬಿಕೆಗಳನ್ನು ಪಾಲಿಸುತ್ತಿದ್ದಾರೆ. ಅಲ್ಲದೆ, ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಿರುವುದನ್ನು ನೋಡಿ ಕೆಂಡಾಮಂಡಲವಾಗಿದ್ದಾರೆ. ಲೋಕದ ಅನೇಕ ಭಾಗಗಳಲ್ಲಿ, ಯೇಸು ಸಾರಿದ ಸಂದೇಶವನ್ನು ಮನಸಾರೆ ಸಾರಲು ಪ್ರಯತ್ನಿಸುತ್ತಿರುವ ಕ್ರೈಸ್ತರ ವಿರುದ್ಧ ಪಾದ್ರಿಗಳು ಉಗ್ರ ಹಿಂಸೆಯನ್ನು ಚಿತಾಯಿಸುತ್ತಿದ್ದಾರೆ. (ಯೋಹಾನ 16:2; ಪ್ರಕಟನೆ 18:4, 24) ಮಾತ್ರವಲ್ಲ, ಯುದ್ಧಕ್ಕೆ ಹೋಗಿ ಇತರರನ್ನು ಕೊಲ್ಲುವಂತೆ ಸಹ ತಮ್ಮ ಬೆಂಬಲಿಗರನ್ನು ಪ್ರಚೋದಿಸುತ್ತಿದ್ದಾರೆ. ಹೀಗೆ ಮಾಡಿದರೆ ಯೇಸು ಕ್ರಿಸ್ತನು ಮೆಚ್ಚುತ್ತಾನೆಂದು ಅವರು ಎಣಿಸುತ್ತಾರೇನೊ!

17. ಯೇಸುವಿನ ನಿಜ ಹಿಂಬಾಲಕರು ಅವನ ಹೃದಯವನ್ನು ಹೇಗೆ ಸಂತೋಷಪಡಿಸಬಹುದು?

17 ಇದಕ್ಕೆ ತದ್ವಿರುದ್ಧವಾಗಿ, ಯೇಸುವಿನ ನಿಜ ಹಿಂಬಾಲಕರಾದರೋ ಜೊತೆಮಾನವರ ಕಡೆಗೆ ಪ್ರೀತಿ ತೋರಿಸಲು ಶ್ರಮಿಸುತ್ತಿದ್ದಾರೆ. ಅವರು ಯೇಸುವಿನಂತೆಯೇ, ವಿರೋಧದ ಹೊರತೂ ಸುವಾರ್ತೆಯನ್ನು ‘ಎಲ್ಲ ರೀತಿಯ ಜನರಿಗೆ’ ಸಾರುತ್ತಾರೆ. (1 ತಿಮೊಥೆಯ 2:4) ಅವರು ಪರಸ್ಪರ ತೋರಿಸುವ ಪ್ರೀತಿಯು ಎದ್ದುಕಾಣುವಂತಿದೆ. ಅದೇ ಅವರನ್ನು ಗುರುತಿಸುವ ಚಿಹ್ನೆಯಾಗಿದೆ. (ಯೋಹಾನ 13:34, 35) ಜೊತೆ ಕ್ರೈಸ್ತರೊಂದಿಗೆ ಪ್ರೀತಿ ಮತ್ತು ಗೌರವಾದರದಿಂದ ನಡೆದುಕೊಳ್ಳುವ ಅವರು ನಿಜವಾಗಿಯೂ ಯೇಸುವನ್ನು ಹಿಂಬಾಲಿಸುತ್ತಿದ್ದಾರೆ. ಮತ್ತು ಮೆಸ್ಸೀಯ ರಾಜನ ಹೃದಯವನ್ನು ಸಂತೋಷಪಡಿಸುತ್ತಿದ್ದಾರೆ!

18. ಯಾವ ವಿಷಯವು ಯೇಸುವಿಗೆ ನೋವನ್ನುಂಟುಮಾಡುತ್ತದೆ? ನಾವಾದರೋ ಅವನನ್ನು ಹೇಗೆ ಸಂತೋಷಪಡಿಸಬಹುದು?

18 ಹಾಗಿದ್ದರೂ ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ತನ್ನ ಹಿಂಬಾಲಕರು ತಾಳಿಕೊಳ್ಳಲು ವಿಫಲರಾದಾಗ ಅಂದರೆ, ಯೆಹೋವನ ಕಡೆಗಿನ ತಮ್ಮ ಪ್ರೀತಿಯು ತಣ್ಣಗಾಗಿ ಹೋಗುವಂತೆ ಬಿಟ್ಟಾಗ ಮತ್ತು ಆತನ ಸೇವಕರಾಗಿ ಸೇವೆಸಲ್ಲಿಸುವುದನ್ನು ನಿಲ್ಲಿಸುವಾಗ ನಮ್ಮ ನಾಯಕನಿಗೆ ನೋವಾಗುತ್ತದೆ. (ಪ್ರಕಟನೆ 2:4, 5) ಆದರೆ ಕಡೇ ವರೆಗೆ ತಾಳಿಕೊಳ್ಳುವವರನ್ನು ನೋಡುವಾಗ ಯೇಸುವಿಗೆ ಸಂತೋಷವಾಗುತ್ತದೆ. (ಮತ್ತಾಯ 24:13) ಆದ್ದರಿಂದ ‘ನನ್ನನ್ನು ಹಿಂಬಾಲಿಸುತ್ತಾ ಇರಿ’ ಎಂದು ಕ್ರಿಸ್ತನು ಕೊಟ್ಟ ಆಜ್ಞೆಯನ್ನು ಯಾವಾಗಲೂ ಮನಸ್ಸಿನಲ್ಲಿಡೋಣ. (ಯೋಹಾನ 21:19) ಕಡೇ ವರೆಗೆ ತಾಳಿಕೊಂಡಿರುವವರಿಗೆ ಮೆಸ್ಸೀಯ ರಾಜನು ಕೊಡಲಿರುವ ಆಶೀರ್ವಾದಗಳಲ್ಲಿ ಕೆಲವೊಂದನ್ನು ನಾವೀಗ ಪರಿಗಣಿಸೋಣ.

ರಾಜನ ನಂಬಿಗಸ್ತ ಸೇವಕರಿಗೆ ಸಿಗುವ ನಿರಂತರ ಆಶೀರ್ವಾದಗಳು

19, 20. (ಎ) ಯೇಸುವನ್ನು ಹಿಂಬಾಲಿಸುವಲ್ಲಿ ಈಗಲೂ ನಮಗೆ ಯಾವ ಆಶೀರ್ವಾದಗಳು ಲಭಿಸುತ್ತವೆ? (ಬಿ) ಕ್ರಿಸ್ತನನ್ನು ಹಿಂಬಾಲಿಸುವಾಗ ಅವನು ಹೇಗೆ ನಮಗೆ ನಿತ್ಯನಾದ ತಂದೆಯಾಗುತ್ತಾನೆ?

19 ಯೇಸುವನ್ನು ಹಿಂಬಾಲಿಸುವುದು, ಪ್ರತಿಫಲದಾಯಕ ಜೀವನಕ್ಕೆ ನಡೆಸುವ ಮಾರ್ಗವಾಗಿದೆ. ಅದರಿಂದ ನಮಗೆ ಈಗಲೂ ಆಶೀರ್ವಾದಗಳು ಲಭಿಸುತ್ತವೆ. ನಾವು ಕ್ರಿಸ್ತನನ್ನು ನಾಯಕನಾಗಿ ಅಂಗೀಕರಿಸಿ ಅವನ ನಿರ್ದೇಶನಗಳನ್ನು ಅನುಸರಿಸುತ್ತಾ ಅವನ ಮಾದರಿಯನ್ನು ನಮ್ಮ ಮಾರ್ಗದರ್ಶಿಯಾಗಿ ಬಳಸಬೇಕು. ಹಾಗೆ ಮಾಡುವಲ್ಲಿ, ಯಾವ ನಿಕ್ಷೇಪಗಳನ್ನು ಪಡೆಯಲು ಲೋಕದಾದ್ಯಂತವಿರುವ ಜನರು ವಿಫಲರಾಗಿದ್ದಾರೋ ಅವುಗಳನ್ನು ಪಡೆಯುವುದರಲ್ಲಿ ನಾವು ಯಶಸ್ವಿಗಳಾಗುವೆವು. ನಮ್ಮ ಜೀವನಕ್ಕೆ ಉದ್ದೇಶವನ್ನೂ ಅರ್ಥವನ್ನೂ ಕೊಡುವಂಥ ಕೆಲಸ ನಮಗಿರುವುದು. ಅಲ್ಲದೆ, ಅಪ್ಪಟ ಪ್ರೀತಿಯ ಬಂಧದಲ್ಲಿ ಐಕ್ಯವಾಗಿರುವ ಜೊತೆ ವಿಶ್ವಾಸಿಗಳ ಕುಟುಂಬ, ಶುದ್ಧ ಮನಸ್ಸಾಕ್ಷಿ ಮತ್ತು ಮನಶ್ಶಾಂತಿ ನಮಗೆ ಲಭಿಸುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂತೋಷ ಮತ್ತು ಸಂತೃಪ್ತಿಯ ಜೀವನ ನಮ್ಮದಾಗುವುದು. ಅಷ್ಟೇ ಅಲ್ಲ, ಇನ್ನೂ ಹೆಚ್ಚಿನ ಆಶೀರ್ವಾದಗಳನ್ನು ನಾವು ಆನಂದಿಸುವೆವು.

20 ಭೂಮಿಯಲ್ಲಿ ಸದಾಕಾಲ ಬದುಕುವ ನಿರೀಕ್ಷೆಯುಳ್ಳವರಿಗೆ ಯೆಹೋವನು ಯೇಸುವನ್ನು “ನಿತ್ಯನಾದ ತಂದೆ” ಆಗಿ ಒದಗಿಸಿದ್ದಾನೆ. ಯೇಸು ಮಾನವಕುಲದ ತಂದೆಯಾದ ಆದಾಮನಿಗೆ ಬದಲಿಯಾಗಿದ್ದಾನೆ. ಏಕೆಂದರೆ, ಆದಾಮನು ಮೋಸಮಾಡಿ ತನ್ನ ಇಡೀ ಸಂತತಿಯನ್ನು ಶೋಚನೀಯ ಸ್ಥಿತಿಗೆ ತಳ್ಳಿದನು. (ಯೆಶಾಯ 9:6, 7) ಯೇಸುವನ್ನು ನಮ್ಮ “ನಿತ್ಯನಾದ ತಂದೆ” ಆಗಿ ಅಂಗೀಕರಿಸುವ ಮೂಲಕ ಹಾಗೂ ಅವನಲ್ಲಿ ನಂಬಿಕೆಯಿಡುವ ಮೂಲಕ ನಾವು ನಿತ್ಯಜೀವದ ನಿಶ್ಚಿತ ನಿರೀಕ್ಷೆಯನ್ನು ಹೊಂದಬಲ್ಲೆವು. ಮತ್ತು ಹೀಗೆ ಮಾಡುವಾಗ ನಾವು ಯೆಹೋವ ದೇವರಿಗೆ ಇನ್ನಷ್ಟು ಆಪ್ತರಾಗಬಲ್ಲೆವು. ನಾವೀಗಾಗಲೇ ಕಲಿತಿರುವಂತೆ, ಅನುದಿನವೂ ಯೇಸುವನ್ನು ಹಿಂಬಾಲಿಸಲು ಪ್ರಯತ್ನಿಸುವುದೇ, “ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ” ಎಂಬ ದೈವಿಕ ಆಜ್ಞೆಯನ್ನು ಪಾಲಿಸುವ ಅತ್ಯುತ್ತಮ ಮಾರ್ಗವಾಗಿದೆ.—ಎಫೆಸ 5:1.

21. ಅಂಧಕಾರಮಯ ಲೋಕದಲ್ಲಿ ಕ್ರಿಸ್ತನ ಹಿಂಬಾಲಕರು ಬೆಳಕನ್ನು ಹೇಗೆ ಪ್ರತಿಫಲಿಸುತ್ತಾರೆ?

21 ಯೇಸುವನ್ನು ಮತ್ತು ಅವನ ತಂದೆಯಾದ ಯೆಹೋವನನ್ನು ಅನುಕರಿಸುವ ನಮಗೆ ಅದ್ಭುತಕರವಾದೊಂದು ಸುಯೋಗವಿದೆ. ನಾವು ಪ್ರಕಾಶಮಾನವಾದ ಬೆಳಕನ್ನು ಪ್ರತಿಫಲಿಸುತ್ತೇವೆ. ಅಂಧಕಾರವೇ ಕವಿದಿರುವ ಈ ಲೋಕದಲ್ಲಿ ಕೋಟ್ಯಂತರ ಜನರು ಸೈತಾನನಿಂದ ತಪ್ಪುದಾರಿಗೆಳೆಯಲ್ಪಟ್ಟು ಅವನ ಪ್ರವೃತ್ತಿಗಳನ್ನು ಅನುಕರಿಸುತ್ತಿರುವಾಗ ಕ್ರಿಸ್ತನನ್ನು ಹಿಂಬಾಲಿಸುವ ನಾವಾದರೋ ಬೈಬಲ್‌ ಸತ್ಯಗಳೆಂಬ, ಉತ್ತಮ ಕ್ರೈಸ್ತ ಗುಣಗಳೆಂಬ, ನಿಜ ಸಂತೋಷ, ಶಾಂತಿ ಮತ್ತು ಪ್ರೀತಿಗಳೆಂಬ ಪ್ರಕಾಶಮಾನವಾದ ಬೆಳಕನ್ನು ಎಲ್ಲೆಲ್ಲೂ ಪಸರಿಸುತ್ತೇವೆ. ಅದೇ ಸಮಯದಲ್ಲಿ ನಾವು ಯೆಹೋವನಿಗೆ ಆಪ್ತರಾಗುತ್ತೇವೆ. ಯಾವುದೇ ಬುದ್ಧಿಜೀವಿ ಇಡಬಹುದಾದ ಸರ್ವಶ್ರೇಷ್ಠ, ಪರಮ ಗುರಿ ಇದೇ ಆಗಿದೆ.

22, 23. (ಎ) ಯೇಸುವನ್ನು ನಿಷ್ಠೆಯಿಂದ ಹಿಂಬಾಲಿಸುತ್ತಾ ಇರುವವರಿಗೆ ಭವಿಷ್ಯದಲ್ಲಿ ಯಾವ ಆಶೀರ್ವಾದಗಳು ಲಭಿಸುವವು? (ಬಿ) ನಮ್ಮ ದೃಢಸಂಕಲ್ಪ ಏನಾಗಿರಬೇಕು?

22 ಭವಿಷ್ಯದಲ್ಲಿ ಮೆಸ್ಸೀಯ ರಾಜನ ಮೂಲಕ ಯೆಹೋವನು ನಿಮಗಾಗಿ ಏನನ್ನು ಮಾಡಬಯಸುತ್ತಾನೆ ಎಂಬುದರ ಕುರಿತೂ ಸ್ವಲ್ಪ ಆಲೋಚಿಸಿ ನೋಡಿ. ಶೀಘ್ರದಲ್ಲೇ ಆ ರಾಜನು ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧ ನೀತಿಯುತ ಯುದ್ಧ ನಡೆಸುವನು. ಅದರಲ್ಲಿ ಯೇಸುವಿಗೆ ವಿಜಯ ಖಾತ್ರಿ! (ಪ್ರಕಟನೆ 19:11-15) ಅನಂತರ, ಕ್ರಿಸ್ತನು ಭೂಮಿಯ ಮೇಲೆ ತನ್ನ ಸಾವಿರ ವರ್ಷದ ಆಳ್ವಿಕೆಯನ್ನು ಆರಂಭಿಸುವನು. ಅವನ ಸ್ವರ್ಗೀಯ ಸರಕಾರವು ವಿಮೋಚನಾ ಮೌಲ್ಯದ ಪ್ರಯೋಜನಗಳನ್ನು ಎಲ್ಲ ನಂಬಿಗಸ್ತ ಮಾನವರಿಗೂ ಹಂಚಿ ಅವರನ್ನು ಪರಿಪೂರ್ಣತೆಗೆ ಏರಿಸುವುದು. ಆ ಸನ್ನಿವೇಶದಲ್ಲಿ ಸ್ವಲ್ಪ ನಿಮ್ಮನ್ನೇ ಇಟ್ಟುನೋಡಿ. ಮಿಡಿಯುವ ಆರೋಗ್ಯ, ತುಡಿಯುವ ಯೌವನ ನಿಮಗಿರುವುದು. ಐಕ್ಯ ಮಾನವ ಕುಟುಂಬದೊಟ್ಟಿಗೆ ಈ ಭೂಮಿಯನ್ನು ಪರದೈಸಾಗಿ ಮಾರ್ಪಡಿಸಲು ನೀವು ಸಂತೋಷದಿಂದ ಕೆಲಸಮಾಡುವಿರಿ! ಸಾವಿರ ವರ್ಷಗಳ ಆಳ್ವಿಕೆ ಕೊನೆಗೊಂಡಾಗ ಯೇಸು ಆಡಳಿತವನ್ನು ಪುನಃ ಯೆಹೋವನಿಗೆ ಒಪ್ಪಿಸಿಕೊಡುವನು. (1 ಕೊರಿಂಥ 15:24) ನೀವು ಕ್ರಿಸ್ತನನ್ನು ನಿಷ್ಠೆಯಿಂದ ಹಿಂಬಾಲಿಸುತ್ತಾ ಮುಂದುವರಿಯುವಲ್ಲಿ ನಿಮಗೊಂದು ಆಶೀರ್ವಾದ ಲಭಿಸುವುದು. ಅದೆಷ್ಟು ಅದ್ಭುತಕರವಾಗಿ ಇರುವುದೆಂದರೆ ಅದನ್ನು ಊಹಿಸಿಕೊಳ್ಳುವುದೂ ಕಷ್ಟ. ಅದುವೇ, “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯ”! (ರೋಮನ್ನರಿಗೆ 8:21) ಹೌದು, ಒಂದೊಮ್ಮೆ ಆದಾಮ ಹವ್ವರು ಹೊಂದಿದ್ದ ಎಲ್ಲ ಆಶೀರ್ವಾದಗಳನ್ನು ನಾವು ಹೊಂದಲಿದ್ದೇವೆ. ಯೆಹೋವನ ಭೂ ಪುತ್ರ ಪುತ್ರಿಯರಾದ ನಮ್ಮಲ್ಲಿರುವ ಆದಾಮನ ಪಾಪದ ಕಲೆ ಶಾಶ್ವತವಾಗಿ ಅಳಿಸಲ್ಪಡುವುದು. ಆಗ, “ಮರಣವಿರುವುದಿಲ್ಲ.”—ಪ್ರಕಟನೆ 21:4.

23 ನಾವು ಅಧ್ಯಾಯ 1ರಲ್ಲಿ ಚರ್ಚಿಸಿದ ಆ ಐಶ್ವರ್ಯವಂತ ಯುವ ಅಧಿಕಾರಿಯನ್ನು ಪುನಃ ನೆನಪಿಸಿಕೊಳ್ಳಿ. “ಬಂದು ನನ್ನ ಹಿಂಬಾಲಕನಾಗು” ಎಂದು ಯೇಸು ನೀಡಿದ ಆಮಂತ್ರಣವನ್ನು ಅವನು ನಿರಾಕರಿಸಿದನು. (ಮಾರ್ಕ 10:17-22) ನೀವೆಂದೂ ಆ ತಪ್ಪು ಮಾಡದಿರಿ! ಗೆಲುವು, ಉತ್ಸಾಹದಿಂದ ಯೇಸುವಿನ ಆಮಂತ್ರಣವನ್ನು ಸ್ವೀಕರಿಸಿರಿ. ತಾಳಿಕೊಳ್ಳುತ್ತಾ ಒಳ್ಳೆಯ ಕುರುಬನನ್ನು ಅನುದಿನವೂ ವರ್ಷವರ್ಷವೂ ಹಿಂಬಾಲಿಸುತ್ತಾ ಇರಲು ದೃಢಸಂಕಲ್ಪ ಮಾಡಿ. ಹೀಗೆ ಕೊನೆಯಲ್ಲಿ ಯೆಹೋವನ ಎಲ್ಲ ಉದ್ದೇಶಗಳನ್ನು ಅವನು ಭವ್ಯವಾಗಿ ನೆರವೇರಿಸುವಾಗ ಅದನ್ನು ನೋಡಲು ಜೀವಂತವಾಗಿರಿ!