ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 11

“ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ”

“ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ”

1, 2. (ಎ) ಯೇಸುವನ್ನು ಹಿಡಿದುತರುವಂತೆ ಕಳುಹಿಸಲಾದ ಅಧಿಕಾರಿಗಳು ಬರಿಗೈಲಿ ಹಿಂದಿರುಗಿದ್ದೇಕೆ? (ಬಿ) ಯೇಸು ಒಬ್ಬ ಪ್ರಭಾವಶಾಲಿ ಬೋಧಕನಾದದ್ದು ಹೇಗೆ?

ಫರಿಸಾಯರು ತುಂಬಾ ಕುಪಿತರಾಗಿದ್ದಾರೆ. ಯೇಸು ದೇವಾಲಯದಲ್ಲಿ ತನ್ನ ತಂದೆಯ ಕುರಿತು ಬೋಧಿಸುತ್ತಿದ್ದಾನೆ. ಅದನ್ನು ಕೇಳುತ್ತಿದ್ದವರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಹೆಚ್ಚಿನ ಜನರು ಯೇಸುವಿನಲ್ಲಿ ನಂಬಿಕೆ ತೋರಿಸಿದರೆ, ಇತರರು ಅವನನ್ನು ದಸ್ತಗಿರಿ ಮಾಡಬೇಕೆಂದು ಬಯಸುತ್ತಾರೆ. ಧಾರ್ಮಿಕ ಮುಖಂಡರು ತಮ್ಮ ಕೋಪವನ್ನು ಅದುಮಿಡಲಾಗದೆ ಯೇಸುವನ್ನು ಹಿಡಿದುತರಲು ಅಧಿಕಾರಿಗಳನ್ನು ಕಳುಹಿಸುತ್ತಾರೆ. ಆದರೆ ಆ ಅಧಿಕಾರಿಗಳು ಬರಿಗೈಲಿ ಹಿಂದೆ ಬರುತ್ತಾರೆ. “ನೀವು ಏಕೆ ಅವನನ್ನು ಹಿಡಿದು ತರಲಿಲ್ಲ?” ಎಂದು ಮುಖ್ಯ ಯಾಜಕರು ಮತ್ತು ಫರಿಸಾಯರು ವಿಚಾರಿಸುತ್ತಾರೆ. ಅದಕ್ಕೆ ಅಧಿಕಾರಿಗಳು, “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದುತ್ತರಿಸುತ್ತಾರೆ. ಅವರ ಮೇಲೆ ಯೇಸುವಿನ ಬೋಧನೆ ಎಂಥ ಗಾಢ ಪ್ರಭಾವಬೀರಿತ್ತೆಂದರೆ, ಯೇಸುವನ್ನು ಕೈದುಮಾಡಲು ಅವರಿಂದಾಗಲಿಲ್ಲ. *ಯೋಹಾನ 7:45, 46.

2 ಯೇಸುವಿನ ಬೋಧನೆಯಿಂದ ಪ್ರಭಾವಿತರಾದದ್ದು ಆ ಅಧಿಕಾರಿಗಳು ಮಾತ್ರವೇ ಅಲ್ಲ. ಅವನ ಬೋಧನೆ ಕೇಳಲೆಂದೇ ಜನರು ಗುಂಪು ಗುಂಪಾಗಿ ಬರುತ್ತಿದ್ದರು. (ಮಾರ್ಕ 3:7, 9; 4:1; ಲೂಕ 5:1-3) ಯೇಸುವಿನ ಬೋಧನೆಯಲ್ಲಿ ಅಂಥದ್ದೇನಿತ್ತು? ನಾವು ಅಧ್ಯಾಯ 8ರಲ್ಲಿ ನೋಡಿದಂತೆ, ಯೇಸು ತಾನು ಸಾರಿದ ಸತ್ಯವನ್ನು ಬಹಳವಾಗಿ ಪ್ರೀತಿಸಿದನು. ಮತ್ತು ಜನರ ಮೇಲೂ ಅವನಿಗೆ ಪ್ರೀತಿಯಿತ್ತು. ಅಷ್ಟೇ ಅಲ್ಲ, ಬೋಧನಾ ವಿಧಾನಗಳನ್ನು ಅವನು ಕರಗತ ಮಾಡಿಕೊಂಡಿದ್ದನು. ಅವನು ಉಪಯೋಗಿಸಿದ ಮೂರು ಪರಿಣಾಮಕಾರಿ ವಿಧಾನಗಳನ್ನು ನಾವೀಗ ಪರಿಗಣಿಸೋಣ ಮತ್ತು ಅವುಗಳನ್ನು ನಾವು ಹೇಗೆ ಅನುಕರಿಸಬಹುದು ಎಂಬುದನ್ನೂ ನೋಡೋಣ.

ಸರಳ ಬೋಧನೆ

3, 4. (ಎ) ಯೇಸು ತನ್ನ ಬೋಧನೆಯಲ್ಲಿ ಸರಳ ಭಾಷೆ ಬಳಸಿದ್ದೇಕೆ? (ಬಿ) ಯೇಸುವಿನ ಬೋಧನೆ ಸರಳವಾಗಿತ್ತು ಎಂಬುದಕ್ಕೆ ಪರ್ವತ ಪ್ರಸಂಗವು ಹೇಗೆ ಒಂದು ಉದಾಹರಣೆಯಾಗಿದೆ?

3 ಯೇಸು ಮನಸ್ಸುಮಾಡಿರುತ್ತಿದ್ದಲ್ಲಿ ಮಾತಿನಲ್ಲಿ ಎಂಥೆಂಥ ಪದಸಂಪತ್ತನ್ನು ಉಪಯೋಗಿಸಬಹುದಿತ್ತು ಎಂಬುದರ ಕುರಿತು ಸ್ವಲ್ಪ ಕಲ್ಪಿಸಿಕೊಳ್ಳಿ. ಆದರೂ, ಜನರ ತಿಳಿವಳಿಕೆಯ ಸಾಮರ್ಥ್ಯಕ್ಕೆ ಮೀರಿ ಅವನೆಂದೂ ಮಾತಾಡಿರಲಿಲ್ಲ. ಏಕೆಂದರೆ, ಅವರಲ್ಲಿ ಅನೇಕರು, “ವಿದ್ಯಾಭ್ಯಾಸವಿಲ್ಲದ ಸಾಧಾರಣ” ಜನರಾಗಿದ್ದರು. (ಅ. ಕಾರ್ಯಗಳು 4:13) ಅವರ ಇತಿಮಿತಿಗಳನ್ನು ಅವನು ಗಣನೆಗೆ ತೆಗೆದುಕೊಂಡನು. ಯಾವತ್ತೂ ಮಿತಿಮೀರಿ ಮಾಹಿತಿಯನ್ನು ದಾಟಿಸಲು ಪ್ರಯತ್ನಿಸಲಿಲ್ಲ. (ಯೋಹಾನ 16:12) ಅವನ ಮಾತುಗಳು ಸರಳವಾಗಿದ್ದವು. ಅವು ತಿಳಿಸಿದ ಸತ್ಯಗಳಾದರೋ ಗಹನವಾಗಿದ್ದವು.

4 ಉದಾಹರಣೆಗೆ ಮತ್ತಾಯ 5:3ರಿಂದ 7:27​ರ ವರೆಗೆ ದಾಖಲಾಗಿರುವ ಪರ್ವತ ಪ್ರಸಂಗವನ್ನೇ ತೆಗೆದುಕೊಳ್ಳಿ. ಆ ಪ್ರಸಂಗದಲ್ಲಿ ಯೇಸು ನೀಡಿದ ಸಲಹೆಗಳು ಗಾಢವಾದ ಪ್ರಭಾವಬೀರಿದವು. ಅವು ಸಮಸ್ಯೆಗಳ ಮೂಲದತ್ತ ಕೈತೋರಿಸಿದವು. ಜಟಿಲವಾದ ವಿಚಾರಗಳನ್ನಾಗಲಿ ವಾಕ್ಯಗಳನ್ನಾಗಲಿ ಅವನು ಬಳಸಿರಲಿಲ್ಲ. ಅಷ್ಟೇಕೆ, ಅದರಲ್ಲಿರುವ ಪ್ರತಿಯೊಂದು ಪದವನ್ನು ಸಣ್ಣ ಮಗು ಸಹ ಅರ್ಥಮಾಡಿಕೊಳ್ಳಬಹುದು! ಆದ್ದರಿಂದಲೇ, ಯೇಸು ಪ್ರಸಂಗವನ್ನು ಮುಗಿಸಿದಾಗ, ರೈತರು, ಕುರುಬರು, ಬೆಸ್ತರು ಮುಂತಾದ ಜನರಿದ್ದ ಗುಂಪುಗಳು “ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟವು.”—ಮತ್ತಾಯ 7:28.

5. ಸರಳವಾಗಿದ್ದರೂ ಅರ್ಥಪೂರ್ಣವಾಗಿದ್ದ ಯೇಸುವಿನ ಮಾತುಗಳ ಕೆಲವು ಉದಾಹರಣೆಗಳನ್ನು ಕೊಡಿ.

5 ಯೇಸು ಬೋಧಿಸುವಾಗ, ಸರಳವಾದ ಚಿಕ್ಕ ಚಿಕ್ಕ ವಾಕ್ಯಗಳನ್ನು ಬಳಸಿದನು. ಅವನ ಮಾತುಗಳು ಬಹಳ ಅರ್ಥಪೂರ್ಣವಾಗಿದ್ದವು. ಮುದ್ರಿತ ಪುಸ್ತಕಗಳನ್ನೇ ಕಂಡಿರದ ಆ ಕಾಲದಲ್ಲಿ ಯೇಸು ಈ ವಿಧಾನ ಬಳಸಿ ಜನರ ಹೃದಮನಗಳಲ್ಲಿ ತನ್ನ ಸಂದೇಶವನ್ನು ಅಚ್ಚೊತ್ತಿಸಿದನು. ಕೆಲವು ಉದಾಹರಣೆಗಳನ್ನು ನೋಡಿ: “ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ.” “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ.” “ಹೃದಯವು ಸಿದ್ಧವಾಗಿದೆ . . . ಆದರೆ ದೇಹಕ್ಕೆ ಬಲ ಸಾಲದು.” “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.” “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” * (ಮತ್ತಾಯ 7:1; 9:12; 26:41; ಮಾರ್ಕ 12:17; ಅ. ಕಾರ್ಯಗಳು 20:35) ಈ ಮಾತುಗಳು ನುಡಿಯಲ್ಪಟ್ಟು ಸುಮಾರು 2,000 ವರ್ಷಗಳು ಕಳೆದಿರುವುದಾದರೂ ಅವುಗಳನ್ನು ಇಂದಿಗೂ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು.

6, 7. (ಎ) ಬೋಧನೆ ಸರಳವಾಗಿರಬೇಕಾದರೆ, ಸರಳ ಭಾಷೆಯನ್ನು ಉಪಯೋಗಿಸುವುದು ಏಕೆ ಪ್ರಾಮುಖ್ಯ? (ಬಿ) ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಒಂದೇ ಸಲಕ್ಕೆ ತುಂಬ ಮಾಹಿತಿಯನ್ನು ಒದಗಿಸುವುದರಿಂದ ನಾವು ಹೇಗೆ ದೂರವಿರಬಲ್ಲೆವು?

6 ನಾವು ಹೇಗೆ ಸರಳವಾಗಿ ಬೋಧಿಸಬಹುದು? ಗಮನದಲ್ಲಿ ಇಟ್ಟುಕೊಳ್ಳಬೇಕಾದ ಒಂದು ಪ್ರಮುಖ ವಿಷಯವೇನೆಂದರೆ, ಹೆಚ್ಚಿನ ಜನರಿಗೆ ಅರ್ಥವಾಗುವ ಸರಳ ಭಾಷೆಯನ್ನು ನಾವು ಉಪಯೋಗಿಸಬೇಕು. ದೇವರ ವಾಕ್ಯದಲ್ಲಿರುವ ಪ್ರಾಥಮಿಕ ಸತ್ಯಗಳು ಜಟಿಲವಾದವುಗಳಲ್ಲ. ಯೆಹೋವನು ತನ್ನ ಉದ್ದೇಶಗಳನ್ನು ಪ್ರಾಮಾಣಿಕರಾದ ಸಾಧಾರಣ ಜನರಿಗೆ ತಿಳಿಯಪಡಿಸಿದನು. (1 ಕೊರಿಂಥ 1:26-28) ಜಾಗರೂಕತೆಯಿಂದ ಆಯ್ದ ಸರಳ ಮಾತುಗಳು ದೇವರ ವಾಕ್ಯದಲ್ಲಿನ ಸತ್ಯಗಳನ್ನು ಪರಿಣಾಮಕಾರಿಯಾಗಿ ತಿಳಿಸಬಲ್ಲವು.

ಸರಳವಾಗಿ ಬೋಧಿಸಿ

7 ಸರಳವಾಗಿ ಬೋಧಿಸಬೇಕಾದರೆ, ನಾವು ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಒಂದೇ ಸಲಕ್ಕೆ ತುಂಬ ಮಾಹಿತಿಯನ್ನು ಒದಗಿಸುವುದರಿಂದ ದೂರವಿರಬೇಕು. ಆದ್ದರಿಂದ, ಬೈಬಲ್‌ ಅಧ್ಯಯನಗಳನ್ನು ನಡೆಸುವಾಗ ಪ್ರತಿಯೊಂದು ಅಂಶವನ್ನು ವಿವರಿಸಬೇಕೆಂದಿಲ್ಲ. ಅಥವಾ ಇಂತಿಷ್ಟು ಪುಟಗಳನ್ನು ಮುಗಿಸುವುದೇ ನಮ್ಮ ಮುಖ್ಯ ಉದ್ದೇಶವೆಂಬಂತೆ ಅಧ್ಯಯನವನ್ನು ರಭಸವಾಗಿ ಓಡಿಸುವುದು ಬೇಕಾಗಿಲ್ಲ. ಬದಲಿಗೆ, ವಿದ್ಯಾರ್ಥಿಯ ಅಗತ್ಯ ಮತ್ತು ಸಾಮರ್ಥ್ಯಗಳಿಗೆ ತಕ್ಕಂತೆ ಅಧ್ಯಯನದ ವೇಗವನ್ನು ಹೊಂದಿಸಿಕೊಳ್ಳುವುದು ವಿವೇಕಯುತ. ಕ್ರಿಸ್ತನ ಹಿಂಬಾಲಕನಾಗಲು ಮತ್ತು ಯೆಹೋವನ ಆರಾಧಕನಾಗಲು ವಿದ್ಯಾರ್ಥಿಗೆ ಸಹಾಯಮಾಡುವುದೇ ನಮ್ಮ ಗುರಿಯಾಗಿದೆ. ಅದನ್ನು ಸಾಧಿಸಬೇಕಾದರೆ, ವಿದ್ಯಾರ್ಥಿಯು ತಾನು ಕಲಿಯುತ್ತಿರುವಂಥ ವಿಷಯವನ್ನು ತಕ್ಕಮಟ್ಟಿಗೆ ಗ್ರಹಿಸಿಕೊಳ್ಳಲು ಸಾಧ್ಯವಾಗುವಂತೆ ನಾವು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಬೈಬಲ್‌ ಸತ್ಯವು ಅವನ ಹೃದಯಕ್ಕೆ ತಲುಪುತ್ತದೆ ಮತ್ತು ಕಲಿಯುತ್ತಿರುವ ವಿಷಯಗಳನ್ನು ಅನ್ವಯಿಸಿಕೊಳ್ಳುವಂತೆ ಅದು ಅವನನ್ನು ಪ್ರಚೋದಿಸುತ್ತದೆ.—ರೋಮನ್ನರಿಗೆ 12:2.

ತಕ್ಕ ಪ್ರಶ್ನೆಗಳು

8, 9. (ಎ) ಯೇಸು ಪ್ರಶ್ನೆಗಳನ್ನು ಕೇಳಿದ್ದು ಏತಕ್ಕೆ? (ಬಿ) ದೇವಾಲಯದ ತೆರಿಗೆ ಪಾವತಿಯ ಕುರಿತು ಪೇತ್ರನು ಸರಿಯಾದ ತೀರ್ಮಾನಕ್ಕೆ ಬರುವಂತೆ ಯೇಸು ಹೇಗೆ ಪ್ರಶ್ನೆಗಳನ್ನು ಬಳಸಿದನು?

8 ಯೇಸು ಅಸಾಧಾರಣ ರೀತಿಯಲ್ಲಿ ಪ್ರಶ್ನೆಗಳನ್ನು ಬಳಸಿದನು. ತನ್ನ ಕೇಳುಗನಿಗೆ ವಿಷಯವೊಂದನ್ನು ಮನದಟ್ಟು ಮಾಡಿಸಲು ಸ್ವಲ್ಪವೇ ಸಮಯ ಸಾಕಾಗಿದ್ದ ಸಂದರ್ಭದಲ್ಲೂ ಯೇಸು ಪ್ರಶ್ನೆಯನ್ನೇ ಉಪಯೋಗಿಸಿದನು. ಅವನು ಪ್ರಶ್ನೆಗಳನ್ನು ಕೇಳಿದ್ದೇಕೆ? ಕೆಲವೊಮ್ಮೆ ತನ್ನ ವಿರೋಧಿಗಳ ಇರಾದೆಗಳನ್ನು ಹೊರಗೆಡಹಿ ಅವರ ಬಾಯಿ ಮುಚ್ಚಿಸಲಿಕ್ಕಾಗಿ ಅವನು ಪ್ರಶ್ನೆಗಳನ್ನು ಕೇಳಿದನು. (ಮತ್ತಾಯ 21:23-27; 22:41-46) ಅನೇಕ ಸಂದರ್ಭಗಳಲ್ಲಿ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಮತ್ತು ಸರಿಯಾಗಿ ಯೋಚಿಸುವಂತೆ ಶಿಷ್ಯರನ್ನು ಪ್ರೇರಿಸಲಿಕ್ಕಾಗಿ ಪ್ರಶ್ನೆಗಳನ್ನು ಹಾಕಿದನು. ಅದಕ್ಕಾಗಿಯೇ ಅವನು, “ನಿಮ್ಮ ಅಭಿಪ್ರಾಯವೇನು?” ಮತ್ತು “ನೀನು ಇದನ್ನು ನಂಬುತ್ತೀಯೊ?” ಎಂದೆಲ್ಲ ಕೇಳಿದನು. (ಮತ್ತಾಯ 18:12; ಯೋಹಾನ 11:26) ಪ್ರಶ್ನೆ ಕೇಳುವ ಮೂಲಕ ಯೇಸು ತನ್ನ ಶಿಷ್ಯರ ಹೃದಯವನ್ನು ತಲಪಿದನು. ಉದಾಹರಣೆಯೊಂದನ್ನು ಪರಿಗಣಿಸಿ.

9 ಒಮ್ಮೆ ತೆರಿಗೆ ವಸೂಲಿಮಾಡುವವರು ಪೇತ್ರನ ಬಳಿ ಬಂದು ಯೇಸು ದೇವಾಲಯದ ತೆರಿಗೆ ಸಲ್ಲಿಸುವುದಿಲ್ಲವೋ ಎಂದು ಕೇಳಿದರು. * ಪೇತ್ರನು ಹಿಂದೆಮುಂದೆ ನೋಡದೆ “ಸಲ್ಲಿಸುತ್ತಾನೆ” ಎಂದನು. ಸ್ವಲ್ಪ ಸಮಯದ ಬಳಿಕ ಯೇಸು ಪೇತ್ರನಿಗೆ, “ಸೀಮೋನನೇ, ನಿನ್ನ ಅಭಿಪ್ರಾಯವೇನು? ಭೂರಾಜರು ಯಾರಿಂದ ತೆರಿಗೆಯನ್ನು ಅಥವಾ ತಲೆಗಂದಾಯವನ್ನು ತೆಗೆದುಕೊಳ್ಳುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಹೊರಗಿನವರಿಂದಲೊ?” ಎಂದು ಕೇಳಿದನು. ಪೇತ್ರನು, “ಹೊರಗಿನವರಿಂದ” ಎಂದು ಉತ್ತರಿಸಿದನು. ಅದಕ್ಕೆ ಯೇಸು, “ಹಾಗಾದರೆ ಪುತ್ರರು ತೆರಿಗೆಯಿಂದ ಮುಕ್ತರಾಗಿದ್ದಾರೆ” ಎಂದು ಹೇಳಿದನು. (ಮತ್ತಾಯ 17:24-27) ಯೇಸು ಪ್ರಶ್ನೆ ಕೇಳಿದ ಉದ್ದೇಶ ಪೇತ್ರನಿಗೆ ಚೆನ್ನಾಗಿ ಅರ್ಥವಾಯಿತು; ರಾಜರುಗಳ ಕುಟುಂಬದವರು ತೆರಿಗೆ ವಿನಾಯಿತಿ ಹೊಂದಿದ್ದರು. ಆದ್ದರಿಂದ, ಯಾರನ್ನು ದೇವಾಲಯದಲ್ಲಿ ಆರಾಧಿಸಲಾಗುತ್ತಿತ್ತೋ ಆ ಸ್ವರ್ಗೀಯ ರಾಜನಾಗಿರುವ ಯೆಹೋವನ ಏಕೈಕಜಾತ ಪುತ್ರನಾದ ಯೇಸು ತೆರಿಗೆಯನ್ನು ಕೊಡಬೇಕಾಗಿರಲಿಲ್ಲ. ಯೇಸು ಪೇತ್ರನಿಗೆ ನೇರವಾಗಿ ಉತ್ತರಕೊಡದೆ ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ ಪೇತ್ರನೇ ಸರಿಯಾದ ತೀರ್ಮಾನಕ್ಕೆ ಬರುವಂತೆ ಸಹಾಯಮಾಡಿದನು ಎಂಬುದನ್ನು ಗಮನಿಸಿ. ಹೀಗೆ, ಉತ್ತರ ನೀಡುವ ಮೊದಲು ಹಿಂದೆ ಮುಂದೆ ಯೋಚಿಸಬೇಕೆಂಬ ಪಾಠವನ್ನೂ ಬಹುಶಃ ಕಲಿಸಿದನು.

ಮನೆಯವರ ಅಭಿರುಚಿಗೆ ತಕ್ಕಂತೆ ಪ್ರಶ್ನೆಗಳನ್ನು ಕೇಳಿ

10. ಮನೆಮನೆ ಸೇವೆಯಲ್ಲಿ ನಾವು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದು?

10 ನಾವು ಶುಶ್ರೂಷೆಯಲ್ಲಿ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದು? ಮನೆಮನೆ ಸೇವೆ ಮಾಡುವಾಗ, ಜನರ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಮತ್ತು ಹೀಗೆ ಸಂಭಾಷಣೆ ಆರಂಭಿಸಿ ಸುವಾರ್ತೆ ತಿಳಿಸಲಿಕ್ಕಾಗಿ ನಾವು ಪ್ರಶ್ನೆಗಳನ್ನು ಉಪಯೋಗಿಸಬಹುದು. ಉದಾಹರಣೆಗೆ, ನಮ್ಮ ಕರೆಗೆ ಒಬ್ಬ ವೃದ್ಧ ವ್ಯಕ್ತಿ ಬಾಗಿಲು ತೆರೆದರು ಎಂದಿಟ್ಟುಕೊಳ್ಳಿ. ಅವರಿಗೆ ನಾವು, “ನಿಮ್ಮ ಜೀವಿತಾವಧಿಯಲ್ಲಿ ಲೋಕ ಹೇಗೆ ಬದಲಾಗಿದೆ?” ಎಂದು ಕೇಳಬಹುದು. ಅವರು ಪ್ರತಿಕ್ರಿಯಿಸಿದ ನಂತರ, “ಎಲ್ಲರೂ ಸಂತೋಷದಿಂದ ಜೀವನ ಮಾಡುವಂಥ ಒಂದು ಒಳ್ಳೆಯ ಲೋಕವನ್ನು ನಮಗೆ ಯಾವುದು ತಂದುಕೊಡುತ್ತದೆ ಎಂದು ನೀವೆಣಿಸುತ್ತೀರಿ?” ಎಂದು ಕೇಳಬಹುದು. (ಮತ್ತಾಯ 6:9, 10) ತಾಯಿಯೊಬ್ಬಳು ತನ್ನ ಚಿಕ್ಕ ಮಕ್ಕಳೊಂದಿಗೆ ಬಾಗಿಲು ತೆರೆಯುವುದಾದರೆ, “ನಿಮ್ಮ ಮಕ್ಕಳು ಬೆಳೆದು ದೊಡ್ಡವರಾಗುವ ಸಮಯದಷ್ಟಕ್ಕೆ ಈ ಲೋಕದ ಪರಿಸ್ಥಿತಿ ಹೇಗಿರಬಹುದೆಂದು ನೀವೆಂದಾದರೂ ಯೋಚಿಸಿದ್ದೀರಾ?” ಎಂದು ನಾವು ಕೇಳಬಹುದು. (ಕೀರ್ತನೆ 37:10, 11) ಒಂದು ಮನೆಯ ಹತ್ತಿರ ಹೋಗುವಾಗ ಗಮನಿಸುವವರಾಗಿರುವ ಮೂಲಕ ಮನೆಯವನ ಆಸಕ್ತಿಗೆ ತಕ್ಕ ಪ್ರಶ್ನೆಯೊಂದನ್ನು ನಾವು ಆರಿಸಿಕೊಳ್ಳಸಾಧ್ಯವಿದೆ.

11. ಒಂದು ಬೈಬಲ್‌ ಅಧ್ಯಯನ ನಡೆಸುವಾಗ ನಾವು ಹೇಗೆ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು?

11 ಒಂದು ಬೈಬಲ್‌ ಅಧ್ಯಯನ ನಡೆಸುವಾಗ ನಾವು ಹೇಗೆ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು? ಚೆನ್ನಾಗಿ ಯೋಚಿಸಿ ಕೇಳುವ ಪ್ರಶ್ನೆಗಳು ವಿದ್ಯಾರ್ಥಿಯ ಹೃದಯದಾಳದಲ್ಲಿ ಅಡಗಿರುವ ಭಾವನೆಗಳನ್ನು ಹೊರಗೆಳೆಯಬಲ್ಲವು. (ಜ್ಞಾನೋಕ್ತಿ 20:5) ಉದಾಹರಣೆಗೆ, ನಾವು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕದಲ್ಲಿನ, “ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು” ಎಂಬ ಅಧ್ಯಾಯವನ್ನು ಚರ್ಚಿಸುತ್ತಿದ್ದೇವೆ ಎಂದಿಟ್ಟುಕೊಳ್ಳಿ. ಆ ಅಧ್ಯಾಯವು, ಲೈಂಗಿಕ ಅನೈತಿಕತೆ, ಕುಡಿಕತನ ಮತ್ತು ಸುಳ್ಳು ಹೇಳುವುದು ಮುಂತಾದ ವಿಷಯಗಳ ಬಗ್ಗೆ ದೇವರ ನೋಟವೇನಾಗಿದೆ ಎಂಬುದನ್ನು ವಿವರಿಸುತ್ತದೆ. ಈ ವಿಷಯಗಳ ಕುರಿತು ಬೈಬಲ್‌ ಏನನ್ನು ಕಲಿಸುತ್ತದೆ ಎಂಬುದು ವಿದ್ಯಾರ್ಥಿಗೆ ಅರ್ಥವಾಗಿದೆಯೆಂದು ಅವನು ನೀಡುವ ಉತ್ತರ ತೋರಿಸಿಕೊಡಬಹುದು. ಆದರೆ ತಾನು ಕಲಿಯುತ್ತಿರುವುದನ್ನು ಅವನು ಒಪ್ಪುತ್ತಾನೋ? ಅದನ್ನು ತಿಳಿದುಕೊಳ್ಳಲಿಕ್ಕಾಗಿ ನಾವು, “ನಿಮ್ಮ ಅಭಿಪ್ರಾಯವೇನು, ಇಂಥ ವಿಷಯಗಳೆಡೆಗೆ ದೇವರ ನೋಟ ಸರಿಯಾಗಿದೆ ಎಂದು ನಿಮಗನಿಸುತ್ತದೋ?” ಎಂದು ಕೇಳಬಹುದು. “ಈ ವಿಷಯಗಳನ್ನು ನೀವು ನಿಮ್ಮ ಜೀವನದಲ್ಲಿ ಹೇಗೆ ಅನ್ವಯಿಸಬಹುದು?” ಎಂಬ ಪ್ರಶ್ನೆಯನ್ನು ಸಹ ನಾವು ಕೇಳಬಹುದು. ಆದರೆ, ಜಾಣ್ಮೆಯಿಂದ ಗೌರವಯುತವಾಗಿ ಪ್ರಶ್ನೆ ಕೇಳಿರಿ. ವಿದ್ಯಾರ್ಥಿಯನ್ನು ಪೇಚಾಟಕ್ಕೀಡು ಮಾಡುವ ಪ್ರಶ್ನೆಗಳನ್ನು ಕೇಳಬೇಡಿ.—ಜ್ಞಾನೋಕ್ತಿ 12:18.

ಪ್ರಬಲವಾದ ತರ್ಕಶಕ್ತಿ

12-14. (ಎ) ಯೇಸು ತರ್ಕಶಕ್ತಿಯನ್ನು ಯಾವುದಕ್ಕಾಗಿ ಬಳಸಿದನು? (ಬಿ) ಯೇಸು ಸೈತಾನನಿಂದ ಶಕ್ತಿ ಪಡೆದಿದ್ದಾನೆಂದು ಫರಿಸಾಯರು ಅಪವಾದ ಹೊರಿಸಿದಾಗ ಯೇಸು ಯಾವ ರೀತಿಯ ತರ್ಕಸರಣಿ ಉಪಯೋಗಿಸಿದನು?

12 ಪರಿಪೂರ್ಣವಾದ ಬುದ್ಧಿಶಕ್ತಿ ಹೊಂದಿದ್ದರಿಂದ, ಯೇಸು ಇತರರೊಂದಿಗೆ ತರ್ಕಬದ್ಧವಾಗಿ ಮಾತಾಡುವುದರಲ್ಲಿ ನಿಸ್ಸೀಮನಾಗಿದ್ದನು. ಕೆಲವೊಮ್ಮೆ ತನ್ನ ವಿರೋಧಿಗಳು ಸುಳ್ಳು ಅಪವಾದ ಹೊರಿಸಿದಾಗ ಅದನ್ನು ಅಲ್ಲಗಳೆಯಲಿಕ್ಕಾಗಿ ಅವನು ಪ್ರಬಲವಾದ ತರ್ಕ ಪ್ರಯೋಗ ಮಾಡಿದನು. ಮತ್ತೆ ಹಲವು ಸಂದರ್ಭಗಳಲ್ಲಿ, ತನ್ನ ಹಿಂಬಾಲಕರಿಗೆ ಅಮೂಲ್ಯ ಪಾಠಗಳನ್ನು ಕಲಿಸಲಿಕ್ಕಾಗಿ ಒಡಂಬಡಿಸುವಂಥ ತರ್ಕಸರಣಿಗಳನ್ನು ಬಳಸಿದನು. ಕೆಲವು ಉದಾಹರಣೆಗಳನ್ನು ನಾವೀಗ ನೋಡೋಣ.

13 ಒಮ್ಮೆ ಯೇಸು, ದೆವ್ವಹಿಡಿದಿದ್ದ ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ವಾಸಿಮಾಡಿದನು. ಆಗ ಫರಿಸಾಯರು, “ಇವನು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನ [ಸೈತಾನನ] ಸಹಾಯದಿಂದಲೇ ಹೊರತು ಬೇರೆ ರೀತಿಯಿಂದ ಅವುಗಳನ್ನು ಬಿಡಿಸುವುದಿಲ್ಲ” ಎಂದು ಅಪವಾದ ಹೊರಿಸಿದರು. ದೆವ್ವಗಳನ್ನು ಬಿಡಿಸಲು ಅತಿಮಾನುಷ ಶಕ್ತಿ ಬೇಕೆಂದು ಅವರೂ ಒಪ್ಪಿಕೊಂಡರು. ಆದರೆ, ಯೇಸು ಆ ಶಕ್ತಿಯನ್ನು ಸೈತಾನನಿಂದ ಹೊಂದಿದ್ದಾನೆಂದು ಹೇಳಿದರು. ಈ ಅಪವಾದ ಸುಳ್ಳು ಮಾತ್ರವಲ್ಲ, ತರ್ಕರಹಿತವಾಗಿಯೂ ಇತ್ತು. ಅವರ ತಪ್ಪಾಲೋಚನೆಯನ್ನು ಹೊರಗೆಡಹುವುದಕ್ಕಾಗಿ ಯೇಸು, “ತನ್ನೊಳಗೆ ಒಡೆದು ವಿಭಾಗವಾಗಿರುವ ಪ್ರತಿಯೊಂದು ರಾಜ್ಯವು ಹಾಳಾಗುವುದು; ತನ್ನಲ್ಲಿ ವಿಭಾಗಗೊಂಡಿರುವ ಪ್ರತಿಯೊಂದು ಪಟ್ಟಣವು ಅಥವಾ ಮನೆಯು ನಿಲ್ಲಲಾರದು. ಅಂತೆಯೇ, ಸೈತಾನನು ಸೈತಾನನನ್ನೇ ಬಿಡಿಸುವಲ್ಲಿ ಅವನು ವಿಭಾಗಿಸಲ್ಪಡುತ್ತಾನೆ; ಹೀಗಿರುವಾಗ ಅವನ ರಾಜ್ಯವು ಹೇಗೆ ನಿಲ್ಲುವುದು?” ಎಂದು ಉತ್ತರಿಸಿದನು. (ಮತ್ತಾಯ 12:22-26) ಇನ್ನೊಂದು ಮಾತಿನಲ್ಲಿ ಯೇಸು, ‘ನಾನು ಸೈತಾನನ ಶಕ್ತಿಯಿಂದಲೇ ಸೈತಾನನ ಕೆಲಸವನ್ನು ಇಲ್ಲವಾಗಿಸುವುದಾದರೆ, ಸೈತಾನನು ತನ್ನ ಕೆಲಸವನ್ನು ತಾನೇ ಹಾಳುಮಾಡಿಕೊಂಡಂತಾಯಿತು ಮತ್ತು ಅವನ ರಾಜ್ಯವು ತುಂಬ ದಿನ ಬಾಳಲಾರದು’ ಎಂದು ಹೇಳಿದಂತಿತ್ತು. ಈ ತರ್ಕವನ್ನು ಫರಿಸಾಯರು ಅಲ್ಲಗಳೆಯಸಾಧ್ಯವಿತ್ತೋ?

14 ಯೇಸು ಅಲ್ಲಿಗೆ ತರ್ಕವನ್ನು ನಿಲ್ಲಿಸಿಬಿಡಲಿಲ್ಲ. ಫರಿಸಾಯರ ಕೆಲವು ಶಿಷ್ಯರು ದೆವ್ವಗಳನ್ನು ಬಿಡಿಸುವ ವಿಷಯ ಅವನಿಗೆ ಗೊತ್ತಿತ್ತು. ಹಾಗಾಗಿ, ಅವರಿಗೆ, “ನಾನು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಅವುಗಳನ್ನು ಬಿಡಿಸುತ್ತಾರೆ?” ಎಂದು ಸರಳವಾದ ಆದರೆ ಅಷ್ಟೇ ಮೊನಚಾದ ಒಂದು ಪ್ರಶ್ನೆಯನ್ನು ಎಸೆದನು. (ಮತ್ತಾಯ 12:27) ಅಂದರೆ, ‘ನಾನು ಸೈತಾನನ ಬಲದಿಂದ ದೆವ್ವಗಳನ್ನು ಬಿಡಿಸುತ್ತಿರುವುದಾದರೆ, ನಿಮ್ಮ ಶಿಷ್ಯರು ಸಹ ಅದೇ ಬಲದಿಂದ ದೆವ್ವಗಳನ್ನು ಬಿಡಿಸುತ್ತಿರಬೇಕು’ ಎಂದು ಯೇಸು ಹೇಳಿದಂತಿತ್ತು. ಇದಕ್ಕೆ ಫರಿಸಾಯರು ಏನಾದರೂ ಉತ್ತರ ನೀಡಸಾಧ್ಯವಿತ್ತೋ? ತಮ್ಮ ಶಿಷ್ಯರು ಸೈತಾನನ ಶಕ್ತಿಯಿಂದ ದೆವ್ವಬಿಡಿಸುತ್ತಾರೆ ಎಂಬದನ್ನು ಅವರೆಂದೂ ಒಪ್ಪಸಾಧ್ಯವಿರಲಿಲ್ಲ. ಹೀಗೆ ಯೇಸು ಅವರ ಆಲೋಚನೆಯಲ್ಲಿದ್ದ ಹುಳುಕನ್ನು ಎತ್ತಿತೋರಿಸಿದನು. ಆದರೆ ಅದರ ಅಂತ್ಯ ಮಾತ್ರ ಅವರಿಗೆ ನುಂಗಲಾರದ ಕಹಿಯಾಗಿತ್ತು. ಯೇಸು ಅವರೊಂದಿಗೆ ತರ್ಕಿಸಿದ ರೀತಿಯನ್ನು ಓದುವಾಗ ನಿಜಕ್ಕೂ ರೋಮಾಂಚನವಾಗುತ್ತದೆ ಅಲ್ಲವೇ? ಯೋಚಿಸಿ, ಯೇಸುವಿನ ತರ್ಕವನ್ನು ನೇರವಾಗಿ ಕೇಳಿದವರಿಗೆ ಹೇಗಾಗಿರಬಹುದು? ಅವನ ಉಪಸ್ಥಿತಿ ಹಾಗೂ ಅವನ ಸ್ವರ ಖಂಡಿತವಾಗಿಯೂ ಅವರ ಮೇಲೆ ಇನ್ನಷ್ಟು ಪ್ರಭಾವ ಬೀರಿರಬೇಕು!

15-17. ತನ್ನ ತಂದೆಯ ಕುರಿತ ಹೃದಯೋಲ್ಲಾಸಗೊಳಿಸುವ ಸತ್ಯವನ್ನು ಕಲಿಸಲಿಕ್ಕಾಗಿ ಯೇಸು “ಎಷ್ಟೋ ಹೆಚ್ಚಾಗಿ” ಎಂಬ ತರ್ಕಸರಣಿಯನ್ನು ಬಳಸಿದ ಉದಾಹರಣೆಯನ್ನು ತಿಳಿಸಿ.

15 ಯೇಸು ತನ್ನ ತಂದೆಯ ಕುರಿತ ಹೃದಯೋಲ್ಲಾಸಗೊಳಿಸುವ ಸತ್ಯಗಳನ್ನು ಕಲಿಸಲು ಸಹ ಒಡಂಬಡಿಸುವಂಥ ತರ್ಕಸರಣಿಯನ್ನು ಬಳಸಿದನು. ಅದಕ್ಕಾಗಿ ಅವನು ಅನೇಕ ಸಲ “ಎಷ್ಟೋ ಹೆಚ್ಚಾಗಿ” ಎಂಬ ಮಾತನ್ನು ಉಪಯೋಗಿಸಿದನು. ತನ್ನ ಕೇಳುಗರು ತಮಗೆ ತಿಳಿದಿರುವ ಸತ್ಯವನ್ನೇ ಇನ್ನಷ್ಟು ಹೆಚ್ಚು ಮನವರಿಕೆ ಮಾಡಿಕೊಳ್ಳುವಂತೆ ನೆರವಾಗಲಿಕ್ಕಾಗಿ ಅವನು ಈ ರೀತಿಯ ತರ್ಕ ಬಳಸಿದನು. ವ್ಯತ್ಯಾಸವನ್ನು ಎತ್ತಿತೋರಿಸುತ್ತಾ ಮಾಡುವ ಈ ತರ್ಕವು ಜನರ ಮನಸ್ಸಿನಲ್ಲಿ ಆಳವಾದ ಛಾಪನ್ನು ಮೂಡಿಸಬಲ್ಲದು. ಇದರ ಎರಡು ಉದಾಹರಣೆಗಳನ್ನು ನಾವೀಗ ನೋಡೋಣ.

16 ಶಿಷ್ಯರು ಯೇಸುವಿನ ಬಳಿಗೆ ಬಂದು ಪ್ರಾರ್ಥಿಸುವುದು ಹೇಗೆಂದು ಕಲಿಸಿಕೊಡುವಂತೆ ಕೇಳಿಕೊಂಡಾಗ ಉತ್ತರವಾಗಿ ಯೇಸು, ಅಪರಿಪೂರ್ಣ ತಂದೆತಾಯಂದಿರು ತಮ್ಮ ಮಕ್ಕಳಿಗೆ ‘ಒಳ್ಳೆಯ ಉಡುಗೊರೆಗಳನ್ನು ಕೊಡಲು’ ಸದಾ ಸಿದ್ಧವಾಗಿರುವ ವಿಷಯ ತಿಳಿಸುತ್ತಾನೆ. ಕೊನೆಗೆ ಅವನು, “ಹಾಗಾದರೆ, ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುವನಲ್ಲವೆ?” ಎಂದು ಹೇಳುತ್ತಾನೆ. (ಲೂಕ 11:1-13) ಇಲ್ಲಿ ಯೇಸು ವ್ಯತ್ಯಾಸವನ್ನು ಎತ್ತಿತೋರಿಸುತ್ತಾ ತರ್ಕಿಸಿದನು. ಅಪರಿಪೂರ್ಣ ತಂದೆತಾಯಂದಿರೇ ತಮ್ಮ ಮಕ್ಕಳ ಅಗತ್ಯವನ್ನು ನೋಡಿಕೊಳ್ಳುವಲ್ಲಿ, ಪರಿಪೂರ್ಣನೂ ಪ್ರತಿಯೊಂದು ರೀತಿಯಲ್ಲಿ ನೀತಿವಂತನೂ ಆಗಿರುವ ನಮ್ಮ ಸ್ವರ್ಗೀಯ ತಂದೆ ತನ್ನ ಬಳಿ ದೀನತೆಯಿಂದ ಬೇಡಿಕೊಳ್ಳುವ ತನ್ನ ನಿಷ್ಠಾವಂತ ಆರಾಧಕರಿಗೆ ಪವಿತ್ರಾತ್ಮವನ್ನು ಎಷ್ಟೋ ಹೆಚ್ಚಾಗಿ ಕೊಡುವನಲ್ಲವೇ!

17 ಚಿಂತೆಯನ್ನು ನಿಭಾಯಿಸುವ ಕುರಿತು ವಿವೇಕಯುತ ಸಲಹೆ ಕೊಡುವಾಗಲೂ ಯೇಸು ಇದೇ ರೀತಿಯ ತರ್ಕಸರಣಿಯನ್ನು ಉಪಯೋಗಿಸಿದನು. “ಕಾಗೆಗಳನ್ನು ಗಮನವಿಟ್ಟು ನೋಡಿ; ಅವು ಬೀಜವನ್ನು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವುಗಳಿಗೆ ಉಗ್ರಾಣವೂ ಇಲ್ಲ ಕಣಜವೂ ಇಲ್ಲ, ಆದರೂ ದೇವರು ಅವುಗಳನ್ನು ಪೋಷಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಹೆಚ್ಚು ಬೆಲೆಬಾಳುವವರಲ್ಲವೆ? ಅಡವಿಯ ಲಿಲಿ ಹೂವುಗಳು ಹೇಗೆ ಬೆಳೆಯುತ್ತವೆ ಎಂಬುದರ ಕುರಿತು ಸರಿಯಾಗಿ ಲಕ್ಷ್ಯ ಕೊಡಿ; ಅವು ದುಡಿಯುವುದಿಲ್ಲ ನೂಲುವುದಿಲ್ಲ; . . . ಇಂದು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಸಸ್ಯಗಳಿಗೆ ದೇವರು ಈ ರೀತಿಯಲ್ಲಿ ಉಡಿಸುತ್ತಾನಾದರೆ ನಿಮಗೆ ಇನ್ನೆಷ್ಟು ಹೆಚ್ಚು ಉಡಿಸಿತೊಡಿಸುವನು!” (ಲೂಕ 12:24, 27, 28) ಪಕ್ಷಿಗಳು ಮತ್ತು ಹೂವುಗಳನ್ನೇ ಯೆಹೋವನು ಇಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಾನಾದರೆ, ತನ್ನನ್ನು ಪ್ರೀತಿಸುವ ಹಾಗೂ ಆರಾಧಿಸುವ ಮಾನವರನ್ನು ಆತನು ಇನ್ನಷ್ಟು ಹೆಚ್ಚಾಗಿ ನೋಡಿಕೊಳ್ಳುವನಲ್ಲವೇ? ಇಂಥ ತರ್ಕಸರಣಿಯ ಮೂಲಕ ಯೇಸು ಜನರ ಮನಃಸ್ಪರ್ಶಿಸಿದ್ದು ಆಶ್ಚರ್ಯದ ವಿಷಯವಲ್ಲ.

18, 19. ಕಣ್ಣಾರೆ ಕಂಡರೆ ಮಾತ್ರ ದೇವರನ್ನು ನಂಬುವುದಾಗಿ ಯಾರಾದರೂ ಹೇಳಿದರೆ ನಾವು ಹೇಗೆ ತರ್ಕಿಸಬಹುದು?

18 ನಮ್ಮ ಶುಶ್ರೂಷೆಯಲ್ಲಿ, ಸುಳ್ಳು ನಂಬಿಕೆಗಳನ್ನು ಅಲ್ಲಗಳೆಯಲು ನಾವು ಸಹ ಬಲವಾದ ತರ್ಕವನ್ನು ಉಪಯೋಗಿಸಬೇಕು. ಅಷ್ಟೇ ಅಲ್ಲ, ಯೆಹೋವ ದೇವರ ಕುರಿತ ಸತ್ಯಗಳನ್ನು ಕಲಿಸಲು ಒಡಂಬಡಿಸುವಂಥ ತರ್ಕಶಕ್ತಿಯನ್ನು ಬಳಸಬೇಕು. (ಅ. ಕಾರ್ಯಗಳು 19:8; 28:23, 24) ಆದರೆ, ಅದಕ್ಕಾಗಿ ನಾವು ತುಂಬಾ ಸಂಕೀರ್ಣವಾದ ರೀತಿಯಲ್ಲಿ ತರ್ಕಿಸುವುದನ್ನು ಕಲಿತುಕೊಳ್ಳಬೇಕೋ? ಖಂಡಿತ ಇಲ್ಲ. ಸರಳವಾದ ತರ್ಕಸರಣಿಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬುದೇ ಯೇಸುವಿನಿಂದ ನಾವು ಕಲಿಯುವ ಪಾಠವಾಗಿದೆ.

19 ಉದಾಹರಣೆಗೆ, ಕಣ್ಣಾರೆ ಕಂಡರೆ ಮಾತ್ರ ದೇವರನ್ನು ನಂಬುವುದಾಗಿ ಯಾರಾದರೂ ಹೇಳಿದರೆ ನಾವು ಹೇಗೆ ಉತ್ತರಿಸಬೇಕು? ‘ಕಾರ್ಯಕಾರಣ ಭಾವ’ ಎಂಬ ನೈಸರ್ಗಿಕ ನಿಯಮವನ್ನು ಉಪಯೋಗಿಸಿ ನಾವು ತರ್ಕಿಸಬಹುದು. ಒಂದು ‘ಕಾರ್ಯ’ವನ್ನು ನಾವು ಗಮನಿಸುವಾಗ ಅದಕ್ಕೆ ಖಂಡಿತ ಒಂದು ‘ಕಾರಣ’ ಇದೆ ಎಂಬುದು ನಮಗೆ ಗೊತ್ತು. ನಾವು ಹೀಗೆ ಹೇಳಬಹುದು: “ಎಲ್ಲೋ ಕಾಡುಮೂಲೆಯಲ್ಲಿರುವ ಅಂದವಾದ ಬಂಗಲೆಗೆ ನೀವು ಬಂದು ತಲಪಿದ್ದೀರಿ ಎಂದೆಣಿಸಿ. ಆ ಮನೆಯಲ್ಲಿ ಆಹಾರ ಸರಂಜಾಮುಗಳನ್ನು ಜೋಡಿಸಿಡಲಾಗಿದೆ (ಕಾರ್ಯ). ಅದನ್ನು ಖಂಡಿತ ಯಾರೋ ಒಬ್ಬರು (ಕಾರಣ) ಜೋಡಿಸಿಟ್ಟಿದ್ದಾರೆಂದು ನೀವು ಒಪ್ಪುವುದಿಲ್ಲವೇ? ಅದೇ ರೀತಿಯಲ್ಲಿ, ಈ ಅಂದವಾದ ಭೂಮಿ ಮತ್ತು ನಿಸರ್ಗದ ಮಡಿಲಲ್ಲಿ ಹೇರಳವಾದ ಆಹಾರ ಪದಾರ್ಥಗಳು ಇಡಲ್ಪಟ್ಟಿರುವುದನ್ನು (ಕಾರ್ಯ) ನೋಡುವಾಗ, ಇದನ್ನು ಕೂಡ ಯಾರೋ ಒಬ್ಬರು (ಕಾರಣ) ಸೃಷ್ಟಿಸಿರಬೇಕೆಂದು ನಿಮಗನಿಸುವುದಿಲ್ಲವೇ? ‘ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ’ ಎಂದು ಬೈಬಲ್‌ ಸಹ ಹೇಳುತ್ತದೆ.” (ಇಬ್ರಿಯ 3:4) ಕೆಲವೊಮ್ಮೆ ನಾವು ಎಷ್ಟೇ ಒಳ್ಳೆಯ ತರ್ಕಸರಣಿ ಉಪಯೋಗಿಸಿದರೂ, ಎಲ್ಲರೂ ಅದನ್ನು ಒಪ್ಪುತ್ತಾರೆಂದು ಹೇಳಲಾಗದು.—2 ಥೆಸಲೊನೀಕ 3:2.

ಮನಮುಟ್ಟುವಂಥ ತರ್ಕವನ್ನು ಬಳಸಿ

20, 21. (ಎ) ಯೆಹೋವನ ಗುಣ ಮತ್ತು ಕಾರ್ಯವೈಖರಿಯನ್ನು ತಿಳಿಸಲಿಕ್ಕಾಗಿ ನಾವು “ಎಷ್ಟೋ ಹೆಚ್ಚಾಗಿ” ಎಂಬ ತರ್ಕಸರಣಿಯನ್ನು ಹೇಗೆ ಬಳಸಸಾಧ್ಯವಿದೆ? (ಬಿ) ಮುಂದಿನ ಅಧ್ಯಾಯದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

20 ಶುಶ್ರೂಷೆಯಲ್ಲಾಗಲಿ ಸಭೆಯಲ್ಲಾಗಲಿ ಬೋಧಿಸುವಾಗ, ಯೆಹೋವನ ಗುಣಗಳನ್ನು ಮತ್ತು ಕಾರ್ಯವೈಖರಿಯನ್ನು ತಿಳಿಸಲಿಕ್ಕಾಗಿ ನಾವು ಸಹ “ಎಷ್ಟೋ ಹೆಚ್ಚಾಗಿ” ಎಂಬ ತರ್ಕಸರಣಿಯನ್ನು ಬಳಸಬಹುದು. ಉದಾಹರಣೆಗೆ, ಜನರು ನರಕಾಗ್ನಿಯಲ್ಲಿ ಸದಾ ಯಾತನೆ ಅನುಭವಿಸುತ್ತಾರೆಂಬ ಬೋಧನೆಯು ಯೆಹೋವ ದೇವರಿಗೆ ಅಗೌರವ ತರುತ್ತದೆಂಬುದನ್ನು ತೋರಿಸಲು ನಾವು ಹೀಗೆ ಹೇಳಬಹುದು: ‘ಪ್ರೀತಿಯಿರುವ ಒಬ್ಬ ತಂದೆ ತನ್ನ ಮಗುವನ್ನು ಶಿಕ್ಷಿಸಲಿಕ್ಕಾಗಿ ಮಗುವಿನ ಕೈಯನ್ನು ಬೆಂಕಿಯಲ್ಲಿ ಹಿಡಿಯುತ್ತಾನೋ? ಇಲ್ಲ ಅಲ್ಲವೇ? ಹಾಗಾದರೆ, ನಮ್ಮ ಪ್ರೀತಿಪರ ಸ್ವರ್ಗೀಯ ತಂದೆ ಹಾಗೆ ಮಾಡುವನೇ? ಅವನು ನರಕಾಗ್ನಿಯ ಕಲ್ಪನೆಯನ್ನೇ ಎಷ್ಟೋ ಹೆಚ್ಚಾಗಿ ದ್ವೇಷಿಸಬಹುದಲ್ಲವೇ?’ (ಯೆರೆಮೀಯ 7:31) ನಿರಾಶನಾಗಿರುವ ಜೊತೆ ಆರಾಧಕನೊಬ್ಬನಿಗೆ ಯೆಹೋವನ ಪ್ರೀತಿಯ ಆಶ್ವಾಸನೆ ನೀಡಲಿಕ್ಕಾಗಿ ನಾವು ಹೀಗೆ ಹೇಳಬಹುದು: ‘ಚಿಕ್ಕ ಗುಬ್ಬಿಗೇ ಯೆಹೋವನು ಕಾಳಜಿ ತೋರಿಸುವುದಾದರೆ ನಿಮ್ಮಂಥ ಪ್ರತಿಯೊಬ್ಬ ಆರಾಧಕರಿಗೆ ಅವನು ಎಷ್ಟೋ ಹೆಚ್ಚು ಪ್ರೀತಿ ಕಾಳಜಿ ತೋರಿಸುವನಲ್ಲವೇ?’ (ಮತ್ತಾಯ 10:29-31) ಈ ರೀತಿಯ ತರ್ಕವನ್ನು ಉಪಯೋಗಿಸುವುದು ಇತರರ ಹೃದಯವನ್ನು ಸ್ಪರ್ಶಿಸುವಂತೆ ನಮಗೆ ಸಹಾಯ ಮಾಡುವುದು.

21 ಯೇಸು ಉಪಯೋಗಿಸಿದ ಬೋಧನಾ ವಿಧಾನಗಳಲ್ಲಿ ಕೇವಲ ಮೂರನ್ನು ಮಾತ್ರ ನಾವು ನೋಡಿದೆವು. “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದು ಯೇಸುವನ್ನು ಬಂಧಿಸಲಾಗದೆ ಹಿಂದಿರುಗಿದ ಅಧಿಕಾರಿಗಳು ಹೇಳಿದ್ದು ಅತಿಶಯೋಕ್ತಿಯಾಗಿರಲಿಲ್ಲ ಎನ್ನಲು ಕೇವಲ ಈ ಮೂರು ಬೋಧನಾ ವಿಧಾನಗಳ ಪರಿಗಣನೆಯೇ ಸಾಕು. ಯೇಸು, ದೃಷ್ಟಾಂತಗಳನ್ನು ಉಪಯೋಗಿಸುವುದಕ್ಕೂ ಹೆಸರುವಾಸಿಯಾಗಿದ್ದನು. ಅವನ ಆ ಬೋಧನಾ ವಿಧಾನವನ್ನು ಮುಂದಿನ ಅಧ್ಯಾಯದಲ್ಲಿ ನಾವು ಪರಿಗಣಿಸಲಿದ್ದೇವೆ.

^ ಪ್ಯಾರ. 1 ಈ ಅಧಿಕಾರಿಗಳು ಸನ್ಹೇದ್ರಿನ್‌ನಲ್ಲಿ ಕೆಲಸಮಾಡುತ್ತಿದ್ದ ಕಾರ್ಯಕರ್ತರಾಗಿದ್ದಿರಬೇಕು ಮತ್ತು ಮುಖ್ಯ ಯಾಜಕರು ಅವರ ಮೇಲೆ ಅಧಿಕಾರ ಹೊಂದಿದ್ದರು.

^ ಪ್ಯಾರ. 5 ಅಪೊಸ್ತಲರ ಕಾರ್ಯಗಳು 20:35​ರಲ್ಲಿ ಕಂಡುಬರುವ ಈ ಕೊನೆಯ ಹೇಳಿಕೆಯನ್ನು ಅಪೊಸ್ತಲ ಪೌಲನೊಬ್ಬನು ಮಾತ್ರ ಉಲ್ಲೇಖಿಸಿದ್ದಾನೆ. ಅವನಿದನ್ನು ಬಾಯಿಮಾತಿನ ಮೂಲಕ (ಯೇಸು ಹೇಳಿದ್ದನ್ನು ಕೇಳಿಸಿಕೊಂಡವರ ಮೂಲಕ ಅಥವಾ ಪುನರುತ್ಥಿತ ಯೇಸುವಿನ ಮೂಲಕ) ಇಲ್ಲವೇ ದೈವಿಕ ಪ್ರಕಟನೆಯ ಮೂಲಕ ಪಡೆದುಕೊಂಡಿರಬೇಕು.

^ ಪ್ಯಾರ. 9 ಯೆಹೂದ್ಯರು ದೇವಾಲಯದ ವಾರ್ಷಿಕ ತೆರಿಗೆಯಾಗಿ ಎರಡು ದ್ರಾಕ್ಮಾ ನಾಣ್ಯಗಳನ್ನು ಕೊಡಬೇಕಿತ್ತು. ಇದು ಸುಮಾರು ಎರಡು ದಿನಗಳ ಸಂಬಳಕ್ಕೆ ಸಮವಾಗಿತ್ತು. ಒಂದು ಗ್ರಂಥವು ತಿಳಿಸಿದ್ದು: “ಮುಖ್ಯವಾಗಿ ಈ ತೆರಿಗೆಯ ಹಣವನ್ನು ಪ್ರತಿದಿನ ಅರ್ಪಿಸಲಾಗುತ್ತಿದ್ದ ಸರ್ವಾಂಗಹೋಮ ಹಾಗೂ ಜನರ ಪರವಾಗಿ ಅರ್ಪಿಸಲಾಗುವ ಇತರ ಎಲ್ಲ ಯಜ್ಞಗಳ ಖರ್ಚುವೆಚ್ಚಗಳಿಗಾಗಿ ವಿನಿಯೋಗಿಸಲಾಗುತ್ತಿತ್ತು.”

^ ಪ್ಯಾರ. 11 ಯೆಹೋವನ ಸಾಕ್ಷಿಗಳ ಪ್ರಕಾಶನ.