ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

“ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ”

“ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ”

ಬೆಳೆಯು ತಾನೊಬ್ಬನೇ ಸಂಗ್ರಹಿಸಲಾರದಷ್ಟು ಹೇರಳವಾಗಿರುವಲ್ಲಿ ರೈತನು ಏನು ಮಾಡುತ್ತಾನೆ?

1-3. (ಎ) ಬೆಳೆ ಹೇರಳವಾಗಿದ್ದು ತಾನೊಬ್ಬನೇ ಅದನ್ನು ಸಂಗ್ರಹಿಸುವುದು ಅಸಾಧ್ಯವಾದಾಗ ರೈತನು ಏನು ಮಾಡುತ್ತಾನೆ? (ಬಿ) ಕ್ರಿ.ಶ. 33ರ ವಸಂತಕಾಲದಲ್ಲಿ ಯೇಸು ಯಾವ ಸವಾಲನ್ನು ಎದುರಿಸಿದನು? ಅವನದನ್ನು ಹೇಗೆ ನಿಭಾಯಿಸಿದನು?

ಒಬ್ಬ ರೈತನ ಮುಂದೆ ದೊಡ್ಡ ಸವಾಲೊಂದು ಬಂದು ನಿಂತಿದೆ. ಕೆಲವು ತಿಂಗಳ ಹಿಂದೆಯಷ್ಟೇ ಅವನು ತನ್ನ ಹೊಲ ಉತ್ತು ಬೀಜ ಬಿತ್ತಿದ್ದನು. ಮೈಯೆಲ್ಲಾ ಕಣ್ಣಾಗಿ ಕಾವಲಿದ್ದು ಬೀಜ ಮೊಳಕೆಯೊಡೆದು ಎಸಳು ಹೊರಚಾಚಿದ್ದನ್ನು ನೋಡಿದ್ದನು. ಪೈರು ಬೆಳೆದು ದೊಡ್ಡದಾದಂತೆ ಅವನ ಮನಸ್ಸು ಕೂಡ ಹರ್ಷದಿಂದ ಗರಿಗೆದರಿತು. ಹೌದು, ಅವನ ಶ್ರಮಕ್ಕೆ ಈಗ ತಕ್ಕ ಫಲ ಸಿಕ್ಕಿದೆ, ಪೈರು ಬೆಳೆದು ಕೊಯ್ಲಿಗೆ ಸಿದ್ಧವಾಗಿದೆ. ಆದರೆ ಸವಾಲೇನೆಂದರೆ, ಬೆಳೆ ಹೇರಳವಾಗಿದ್ದು ಕೇವಲ ಅವನೊಬ್ಬನಿಂದ ಅದನ್ನು ಸಂಗ್ರಹಿಸಲು ಅಸಾಧ್ಯವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಅವನು ಉಪಾಯವೊಂದನ್ನು ಮಾಡುತ್ತಾನೆ; ಕೆಲವು ಜನರನ್ನು ಕೆಲಸಕ್ಕೆ ನೇಮಿಸಿ ಹೊಲಕ್ಕೆ ಕಳುಹಿಸುತ್ತಾನೆ. ಎಷ್ಟೆಂದರೂ, ಅವನ ಅತ್ಯಮೂಲ್ಯ ಬೆಳೆಯನ್ನು ಸಂಗ್ರಹಿಸಲು ಸಮಯವಿರುವುದು ಸ್ವಲ್ಪವೇ.

2 ಪುನರುತ್ಥಿತ ಯೇಸು ಸಹ ಕ್ರಿ.ಶ. 33ರ ವಸಂತಕಾಲದಲ್ಲಿ ಇದೇ ರೀತಿಯ ಸವಾಲನ್ನು ಎದುರಿಸಿದನು. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅವನು ಸತ್ಯದ ಬೀಜಗಳನ್ನು ಬಿತ್ತಿದ್ದನು. ಈಗ ಬೆಳೆ ಕೊಯ್ಲಿಗೆ ಸಿದ್ಧವಾಗಿದ್ದು, ಫಸಲು ಹೇರಳವಾಗಿದೆ. ಪ್ರತಿಸ್ಪಂದಿಸುವ ಅನೇಕರನ್ನು ಶಿಷ್ಯರನ್ನಾಗಿ ಒಟ್ಟುಗೂಡಿಸಬೇಕಾಗಿದೆ. (ಯೋಹಾನ 4:35-38) ಈ ಸವಾಲನ್ನು ಯೇಸು ಹೇಗೆ ನಿಭಾಯಿಸಿದನು? ಗಲಿಲಾಯದ ಬೆಟ್ಟದಲ್ಲಿ, ತಾನು ಸ್ವರ್ಗಕ್ಕೆ ಏರಿಹೋಗುವ ತುಸು ಮೊದಲು, ಹೆಚ್ಚಿನ ಕೆಲಸಗಾರರನ್ನು ಒಟ್ಟುಗೂಡಿಸುವಂತೆ ಶಿಷ್ಯರಿಗೆ ಆಜ್ಞೆಕೊಡುತ್ತಾ ಹೀಗೆ ಹೇಳಿದನು: “ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.”—ಮತ್ತಾಯ 28:19, 20.

3 ಕ್ರಿಸ್ತನ ನಿಜ ಹಿಂಬಾಲಕರಾಗುವುದರ ಇಡೀ ಸಾರವೇ ಈ ಆಜ್ಞೆಯಲ್ಲಿ ಅಡಕವಾಗಿದೆ. ಆದ್ದರಿಂದ ನಾವೀಗ ಮೂರು ಪ್ರಶ್ನೆಗಳಿಗೆ ಉತ್ತರಗಳನ್ನು ನೋಡೋಣ. ಹೆಚ್ಚಿನ ಕೆಲಸಗಾರರನ್ನು ಒಟ್ಟುಗೂಡಿಸುವಂತೆ ಯೇಸು ಏಕೆ ಆಜ್ಞೆ ಹೊರಡಿಸಿದನು? ಆ ನೇಮಕವನ್ನು ಪೂರೈಸಲು ಅವನು ಶಿಷ್ಯರಿಗೆ ಯಾವ ರೀತಿಯಲ್ಲಿ ತರಬೇತಿ ಕೊಟ್ಟನು? ಈ ಆಜ್ಞೆ ನಮಗೆ ಹೇಗೆ ಅನ್ವಯವಾಗುತ್ತದೆ?

ಹೆಚ್ಚಿನ ಕೆಲಸಗಾರರ ಅಗತ್ಯ ಯಾಕಿತ್ತು?

4, 5. ತಾನು ಆರಂಭಿಸಿದ ಕೆಲಸವನ್ನು ಯೇಸುವಿಗೆ ಏಕೆ ಮುಗಿಸಲಾಗಲಿಲ್ಲ? ಅವನು ಸ್ವರ್ಗಕ್ಕೆ ಹಿಂದಿರುಗಿದ ನಂತರ ಆ ಕೆಲಸವನ್ನು ಯಾರು ಮುಂದುವರಿಸಬೇಕಿತ್ತು?

4 ಯೇಸು ತನ್ನ ಶುಶ್ರೂಷೆಯನ್ನು ಕ್ರಿ.ಶ. 29ನೇ ಇಸವಿಯಲ್ಲಿ ಆರಂಭಿಸಿದಾಗ, ಈ ಕೆಲಸವನ್ನು ಸ್ವತಃ ತಾನೊಬ್ಬನೇ ಮಾಡಿ ಮುಗಿಸಲಾರೆ ಎಂಬುದು ಅವನಿಗೆ ತಿಳಿದಿತ್ತು. ಅವನಿಗೆ ಭೂಮಿಯಲ್ಲಿ ಸ್ವಲ್ಪವೇ ಸಮಯ ಉಳಿದಿತ್ತು. ಹಾಗಾಗಿ ಹೆಚ್ಚೆಚ್ಚು ಪ್ರದೇಶಗಳಲ್ಲಿ ಸಾರಿ ರಾಜ್ಯ ಸಂದೇಶವನ್ನು ಹೆಚ್ಚು ಜನರಿಗೆ ತಿಳಿಸಲು ಸಾಧ್ಯವಿರಲಿಲ್ಲ. ಯೇಸು ಮುಖ್ಯವಾಗಿ ಸಾರಿದ್ದು, ‘ಇಸ್ರಾಯೇಲ್‌ ಮನೆತನದ ತಪ್ಪಿಹೋದ ಕುರಿಗಳಾಗಿದ್ದ’ ಯೆಹೂದ್ಯರಿಗೆ ಮತ್ತು ಯೆಹೂದ್ಯ ಮತಾವಲಂಬಿಗಳಿಗೆ ಎಂಬುದು ನಿಜ. (ಮತ್ತಾಯ 15:24) ಆದರೆ ಆ “ತಪ್ಪಿಹೋದ ಕುರಿಗಳು,” ಸಾವಿರಾರು ಚದರ ಮೈಲುಗಳ ವಿಸ್ತೀರ್ಣವಿದ್ದ ಇಸ್ರಾಯೇಲಿನ ಉದ್ದಗಲಕ್ಕೂ ಚದುರಿಹೋಗಿದ್ದವು. ಮಾತ್ರವಲ್ಲ, ಕ್ರಮೇಣ ಲೋಕದ ಇತರ ಕಡೆಗಳಿಗೂ ಸುವಾರ್ತೆಯನ್ನು ಕೊಂಡೊಯ್ಯಬೇಕಿತ್ತು.—ಮತ್ತಾಯ 13:38; 24:14.

5 ತನ್ನ ಮರಣದ ನಂತರ ಮಾಡಲು ಬಹಳಷ್ಟು ಕೆಲಸ ಉಳಿದಿರುವುದೆಂದು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ಅವನು ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನಲ್ಲಿ ನಂಬಿಕೆಯಿಡುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು ಮತ್ತು ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು ನಡಿಸುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.” (ಯೋಹಾನ 14:12) ಮಗನು ಸ್ವರ್ಗಕ್ಕೆ ಹಿಂದಿರುಗಿ ಹೋಗಲಿದ್ದುದರಿಂದ, ಸಾರುವ ಮತ್ತು ಬೋಧಿಸುವ ಕೆಲಸವನ್ನು ಅವನ ಹಿಂಬಾಲಕರು—ಅಪೊಸ್ತಲರು ಮಾತ್ರವಲ್ಲ ಅವನ ಎಲ್ಲ ಭಾವೀ ಶಿಷ್ಯರು—ಮಾಡಬೇಕಿತ್ತು. (ಯೋಹಾನ 17:20) ಅವರು ತಾನು ಮಾಡಿದ್ದಕ್ಕಿಂತ “ಮಹತ್ತಾದ ಕ್ರಿಯೆಗಳನ್ನು” ಮಾಡುವರು ಎಂದು ಯೇಸು ವಿನೀತಭಾವದಿಂದ ಒಪ್ಪಿಕೊಂಡನು. ಯಾವ ರೀತಿಯಲ್ಲಿ ಅವರು “ಮಹತ್ತಾದ ಕ್ರಿಯೆಗಳನ್ನು” ಮಾಡಲಿದ್ದರು? ಮೂರು ವಿಧಗಳಲ್ಲಿ.

6, 7. (ಎ) ಯೇಸು ಮಾಡಿದ ಕೆಲಸಕ್ಕಿಂತ ಅವನ ಹಿಂಬಾಲಕರು ಮಾಡುವ ಕೆಲಸವು ಯಾವ ರೀತಿಯಲ್ಲಿ ಮಹತ್ತಾದದ್ದಾಗಿರುವುದು? (ಬಿ) ಯೇಸು ತನ್ನ ಹಿಂಬಾಲಕರ ಮೇಲಿಟ್ಟಿದ್ದ ನಂಬಿಕೆಯು ಹುಸಿಯಲ್ಲ ಎಂದು ನಾವು ಹೇಗೆ ತೋರಿಸಸಾಧ್ಯ?

6 ಮೊದಲನೆಯದಾಗಿ, ಯೇಸುವಿನ ಅನುಯಾಯಿಗಳು ವಿಸ್ತಾರವಾದ ಟೆರಿಟೊರಿಯನ್ನು ಆವರಿಸಲಿದ್ದರು. ಇಂದು ಅವರು ಮಾಡುತ್ತಿರುವ ಸಾಕ್ಷಿಕಾರ್ಯವು ಲೋಕದ ಕಟ್ಟಕಡೆಗೂ ತಲಪಿದೆ; ಸ್ವತಃ ಯೇಸು ಸಾರಿದ ದೇಶದ ಎಲ್ಲೆಗಳನ್ನೂ ದಾಟಿದೆ. ಎರಡನೆಯದಾಗಿ, ಅವರು ಹೆಚ್ಚಿನ ಜನರಿಗೆ ಸಾಕ್ಷಿನೀಡಲಿದ್ದರು. ಯೇಸು ಆರಂಭಿಸಿದ ಶಿಷ್ಯರ ಚಿಕ್ಕ ತಂಡವು ತ್ವರಿತಗತಿಯಲ್ಲಿ ದೊಡ್ಡದಾಗಿ, ಸಾವಿರಾರು ಮಂದಿ ಅದಕ್ಕೆ ಸೇರ್ಪಡೆಯಾದರು. (ಅ. ಕಾರ್ಯಗಳು 2:41; 4:4) ಇಂದು ಅವರ ಸಂಖ್ಯೆಯು ಲಕ್ಷಗಟ್ಟಲೆಯಾಗಿದೆ ಮತ್ತು ಪ್ರತಿವರ್ಷವೂ ಸಹಸ್ರಾರು ಮಂದಿ ಹೊಸಬರು ದೀಕ್ಷಾಸ್ನಾನ ಪಡೆಯುತ್ತಿದ್ದಾರೆ. ಮೂರನೆಯದಾಗಿ, ಅವರು ದೀರ್ಘಕಾಲದ ವರೆಗೆ ಸಾರಲಿದ್ದರು. ಯೇಸುವಿನ ಮೂರೂವರೆ ವರ್ಷಗಳ ಶುಶ್ರೂಷೆಯ ನಂತರ ಆರಂಭಿಸಿ ಇಂದಿನ ವರೆಗೂ ಸುಮಾರು 2,000 ವರ್ಷಗಳಿಂದ ಸಾರುತ್ತಲೇ ಇದ್ದಾರೆ.

7 ತನ್ನ ಶಿಷ್ಯರು “ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು” ನಡಿಸುವರು ಎಂದು ಯೇಸು ಹೇಳಿದಾಗ ಅವನು ಅವರ ಮೇಲೆ ತನಗಿದ್ದ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದನು. “ದೇವರ ರಾಜ್ಯದ ಸುವಾರ್ತೆಯನ್ನು” ಸಾರುವ ಹಾಗೂ ಬೋಧಿಸುವ ಬಹುಮುಖ್ಯ ಕೆಲಸವನ್ನು ಅವನು ಅವರಿಗೆ ಒಪ್ಪಿಸಿಕೊಡುತ್ತಿದ್ದನು. (ಲೂಕ 4:43) ಅವರು ಆ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸುವರು ಎಂಬ ಸಂಪೂರ್ಣ ನಂಬಿಕೆ ಅವನಿಗಿತ್ತು. ಇದು ಇಂದು ನಮಗೆ ಯಾವ ಅರ್ಥದಲ್ಲಿದೆ? ನಾವು ಪೂರ್ಣಹೃದಯದವರಾಗಿ ಹುರುಪಿನಿಂದ ಶುಶ್ರೂಷೆಯನ್ನು ಮಾಡುವುದಾದರೆ, ಯೇಸು ತನ್ನ ಹಿಂಬಾಲಕರ ಮೇಲಿಟ್ಟಿದ್ದ ಆ ನಂಬಿಕೆ ಹುಸಿಯಲ್ಲವೆಂದು ತೋರಿಸಿಕೊಡುತ್ತೇವೆ. ಖಂಡಿತವಾಗಿಯೂ ಇದೊಂದು ಮಹಾನ್‌ ಸುಯೋಗವಲ್ಲವೇ?—ಲೂಕ 13:24.

ಸಾಕ್ಷಿನೀಡಲು ತರಬೇತಿ

ಜನರು ಸಿಗುವಲ್ಲೆಲ್ಲ ಸಾರಲು ಪ್ರೀತಿ ನಮ್ಮನ್ನು ಪ್ರೇರಿಸುತ್ತದೆ

8, 9. ಶುಶ್ರೂಷೆಯ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು? ಆ ನಮೂನೆಯನ್ನು ನಾವು ಹೇಗೆ ನಮ್ಮ ಶುಶ್ರೂಷೆಯಲ್ಲಿ ಅನುಕರಿಸಸಾಧ್ಯವಿದೆ?

8 ಶುಶ್ರೂಷೆಯನ್ನು ಹೇಗೆ ಮಾಡಬೇಕೆಂಬ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಅತ್ಯುತ್ತಮ ತರಬೇತಿ ಕೊಟ್ಟನು. ಮೊದಲಾಗಿ, ಅವನು ಅವರಿಗೆ ಪರಿಪೂರ್ಣ ಮಾದರಿಯನ್ನಿಟ್ಟನು. (ಲೂಕ 6:40) ಹಿಂದಿನ ಅಧ್ಯಾಯದಲ್ಲಿ, ಶುಶ್ರೂಷೆಯ ಕಡೆಗೆ ಅವನಿಗಿದ್ದ ಮನೋಭಾವದ ಕುರಿತು ನಾವು ಕಲಿತೆವು. ಸುವಾರ್ತಾ ಪ್ರಯಾಣದಲ್ಲಿ ಅವನೊಂದಿಗೆ ಜೊತೆಗೂಡಿದ ಶಿಷ್ಯರ ಕುರಿತು ಒಂದು ಕ್ಷಣ ಯೋಚಿಸಿ. ಸರೋವರದ ಬಳಿ, ಬೆಟ್ಟದ ಮೇಲೆ, ಊರು, ಮಾರುಕಟ್ಟೆ ಹಾಗೂ ಮನೆಗಳಲ್ಲಿ ಹೀಗೆ ಜನರು ಸಿಗುವಲ್ಲೆಲ್ಲ ಅವನು ಸಾರಿದ್ದನ್ನು ಆ ಶಿಷ್ಯರು ಗಮನಿಸಿದ್ದರು. (ಮತ್ತಾಯ 5:1, 2; ಲೂಕ 5:1-3; 8:1; 19:5, 6) ಅವನು ಶ್ರಮಜೀವಿಯಾಗಿದ್ದುದನ್ನು ಅವರು ಕಂಡಿದ್ದರು. ಬೆಳಗಾತ ಬೇಗನೆ ಎದ್ದು ತಡರಾತ್ರಿಯ ವರೆಗೂ ಅವನು ಸಾರುತ್ತಿದ್ದನು. ಏನೋ ಸಮಯ ಸಿಕ್ಕಿದಾಗ ಸಾರಿದರಾಯ್ತು ಎಂದೆಣಿಸಲಿಲ್ಲ! (ಲೂಕ 21:37, 38; ಯೋಹಾನ 5:17) ಜನರೆಡೆಗೆ ಅವನಿಗೆ ಒಡಲಾಳದ ಪ್ರೀತಿಯಿರುವುದನ್ನು ಅವರು ಖಂಡಿತ ಗ್ರಹಿಸಿದ್ದರು. ಅವನ ಹೃದಯದಲ್ಲಿದ್ದ ಕರುಣೆಯು ಅವನ ಮುಖದಲ್ಲಿ ಮೂಡಿದ್ದನ್ನು ಅವರು ನೋಡಿದ್ದಿರಬೇಕು. (ಮಾರ್ಕ 6:34) ಯೇಸುವಿನ ಈ ಮಾದರಿಯು ಅವನ ಶಿಷ್ಯರ ಮೇಲೆ ಯಾವ ಪರಿಣಾಮ ಬೀರಿರಬಹುದೆಂದು ನೀವೆಣಿಸುತ್ತೀರಿ? ನೀವು ಅವನೊಂದಿಗೆ ಇದ್ದಿರುತ್ತಿದ್ದಲ್ಲಿ, ಅವನ ಮಾದರಿ ನಿಮ್ಮ ಮೇಲೆ ಯಾವ ಪ್ರಭಾವಬೀರುತ್ತಿತ್ತು?

9 ಯೇಸುವಿನ ಹಿಂಬಾಲಕರಾದ ನಾವು ಅವನ ನಮೂನೆಯನ್ನೇ ನಮ್ಮ ಶುಶ್ರೂಷೆಯಲ್ಲಿ ಅನುಕರಿಸುತ್ತೇವೆ. ಹಾಗಾಗಿ, “ಕೂಲಂಕಷವಾದ ಸಾಕ್ಷಿಯನ್ನು” ನೀಡಲು ಸರ್ವಪ್ರಯತ್ನಗಳನ್ನೂ ಮಾಡುತ್ತೇವೆ. (ಅ. ಕಾರ್ಯಗಳು 10:42) ಯೇಸುವಿನಂತೆ ನಾವು ಸಹ ಜನರನ್ನು ಮನೆಗಳಲ್ಲಿ ಭೇಟಿಮಾಡುತ್ತೇವೆ. (ಅ. ಕಾರ್ಯಗಳು 5:42) ಅದಕ್ಕಾಗಿ ನಮ್ಮ ಕಾರ್ಯತಖ್ತೆಯನ್ನು ಹೊಂದಿಸಿಕೊಂಡು, ಜನರು ಮನೆಯಲ್ಲಿರುವ ಸಮಯದಲ್ಲಿ ಭೇಟಿನೀಡಲು ಪ್ರಯತ್ನಿಸುತ್ತೇವೆ. ಅಷ್ಟುಮಾತ್ರವಲ್ಲ, ಬೀದಿ, ಉದ್ಯಾನವನ, ಅಂಗಡಿ, ಉದ್ಯೋಗ ಸ್ಥಳ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿಯೂ ಜನರನ್ನು ಕಂಡುಕೊಂಡು ಜಾಣ್ಮೆಯಿಂದ ಅವರಿಗೆ ಸಾರುತ್ತೇವೆ. ಸಾರಲಿಕ್ಕಾಗಿ ನಾವು “ಕಠಿಣವಾಗಿ ಕೆಲಸಮಾಡುತ್ತಿದ್ದೇವೆ ಮತ್ತು ಪ್ರಯಾಸಪಡುತ್ತಿದ್ದೇವೆ.” ಏಕೆಂದರೆ, ಆ ಕೆಲಸವನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. (1 ತಿಮೊಥೆಯ 4:10) ಇತರರ ಮೇಲೆ ನಮಗಿರುವ ಆಳವಾದ ಪ್ರೀತಿಯು, ಎಲ್ಲೇ ಆಗಲಿ ಯಾವಾಗಲೇ ಆಗಲಿ ಜನರಿಗೆ ಸಾರುವ ಅವಕಾಶಗಳಿಗಾಗಿ ಹುಡುಕುತ್ತಿರುವಂತೆ ನಮ್ಮನ್ನು ಪ್ರಚೋದಿಸುತ್ತದೆ.—1 ಥೆಸಲೊನೀಕ 2:8.

‘ಆ ಎಪ್ಪತ್ತು ಮಂದಿ ಆನಂದದಿಂದ ಹಿಂದಿರುಗಿದರು’

10-12. ಯೇಸು ತನ್ನ ಶಿಷ್ಯರನ್ನು ಸಾರಲು ಕಳುಹಿಸುವ ಮೊದಲು ಅವರಿಗೆ ಯಾವ ಪ್ರಮುಖ ಪಾಠಗಳನ್ನು ಕಲಿಸಿದನು?

10 ಯೇಸು ಇನ್ನೊಂದು ವಿಧದಲ್ಲೂ ಶಿಷ್ಯರಿಗೆ ತರಬೇತಿ ನೀಡಿದನು. ಶುಶ್ರೂಷೆಯನ್ನು ಹೇಗೆ ಮಾಡಬೇಕೆಂದು ಸವಿವರಗಳನ್ನು ನೀಡುತ್ತಾ ಮಾರ್ಗದರ್ಶಿಸಿದನು. 12 ಮಂದಿ ಅಪೊಸ್ತಲರನ್ನಾಗಲಿ ಅಥವಾ ನಂತರ 70 ಮಂದಿ ಶಿಷ್ಯರನ್ನಾಗಲಿ ಸಾರಲು ಕಳುಹಿಸುವ ಮುಂಚೆ ಅವನು ಅವರಿಗೋಸ್ಕರ ತರಬೇತು ಕೂಟವನ್ನು ಏರ್ಪಡಿಸಿದನು. (ಮತ್ತಾಯ 10:1-15; ಲೂಕ 10:1-12) ಆ ತರಬೇತಿ ಒಳ್ಳೆಯ ಫಲಿತಾಂಶಗಳನ್ನು ಕೊಟ್ಟಿತು. ಲೂಕ 10:17 ಆ ಘಟನೆಯ ಕುರಿತು ವಿವರಿಸುವಾಗ, “ಆ ಎಪ್ಪತ್ತು ಮಂದಿ ಆನಂದದಿಂದ ಹಿಂದಿರುಗಿ” ಬಂದರು ಎಂದು ತಿಳಿಸುತ್ತದೆ. ಯೇಸು ಅವರಿಗೆ ಕಲಿಸಿದ ಪಾಠಗಳಲ್ಲಿ ಪ್ರಮುಖವಾದ ಎರಡನ್ನು ನಾವೀಗ ನೋಡೋಣ. ಅದರ ಬಗ್ಗೆ ಚರ್ಚಿಸುವಾಗ, ಬೈಬಲ್‌ ಸಮಯಗಳಲ್ಲಿದ್ದ ಯೆಹೂದ್ಯರ ಸಂಪ್ರದಾಯದ ಹಿನ್ನೆಲೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಅದಕ್ಕನುಸಾರ ನಾವು ಯೇಸುವಿನ ಮಾತುಗಳನ್ನು ಅರ್ಥಮಾಡಿಕೊಳ್ಳಬೇಕು.

11 ಯೆಹೋವನಲ್ಲಿ ಭರವಸೆಯನ್ನಿಡಬೇಕೆಂದು ಯೇಸು ಶಿಷ್ಯರಿಗೆ ಕಲಿಸಿದನು. “ನಿಮ್ಮ ನಡುಪಟ್ಟಿಯ ಜೇಬುಗಳಲ್ಲಿ ಚಿನ್ನ ಅಥವಾ ಬೆಳ್ಳಿ ಅಥವಾ ತಾಮ್ರವನ್ನಾಗಲಿ ಅಥವಾ ಪ್ರಯಾಣಕ್ಕಾಗಿ ಆಹಾರದ ಚೀಲವನ್ನಾಗಲಿ ಎರಡು ಒಳಉಡುಪುಗಳನ್ನಾಗಲಿ ಕೆರಗಳನ್ನಾಗಲಿ ಕೋಲನ್ನಾಗಲಿ ಕೊಂಡೊಯ್ಯಬೇಡಿರಿ; ಏಕೆಂದರೆ ಕೆಲಸಗಾರನು ತನ್ನ ಕೂಲಿಗೆ ಅರ್ಹನು” ಎಂದವನು ಅವರಿಗೆ ಹೇಳಿದನು. (ಮತ್ತಾಯ 10:9, 10) ಆ ಕಾಲದಲ್ಲಿ ಪ್ರಯಾಣ ಕೈಗೊಳ್ಳುವವರು, ಹಣ ಕೊಂಡೊಯ್ಯಲು ಅಗತ್ಯವಾಗಿರುವ ಜೇಬಿರುವ ನಡುಪಟ್ಟಿಯನ್ನು, ಆಹಾರದ ಚೀಲ ಮತ್ತು ಹೆಚ್ಚುವರಿಯಾಗಿ ಒಂದು ಜೊತೆ ಕೆರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಅಂಥ ವಿಷಯಗಳ ಕುರಿತು ಹೆಚ್ಚು ಚಿಂತಿಸಬೇಡಿ ಎಂದು ಮಾರ್ಗದರ್ಶನ ನೀಡುವ ಮೂಲಕ ಯೇಸು ಅವರಿಗೆ, ‘ಸಂಪೂರ್ಣವಾಗಿ ಯೆಹೋವನಲ್ಲಿ ಭರವಸೆಯಿಡಿ, ಆತನು ನಿಮಗೆ ಬೇಕಾದವುಗಳನ್ನು ಒದಗಿಸುವನು’ ಎಂದು ಹೇಳುತ್ತಿದ್ದನು. ಹೌದು, ಸುವಾರ್ತೆಯನ್ನು ಸ್ವೀಕರಿಸುವವರು ಇಸ್ರಾಯೇಲಿನ ತಮ್ಮ ಪದ್ಧತಿಯಂತೆ ಶಿಷ್ಯರಿಗೆ ಅತಿಥಿಸತ್ಕಾರ ನೀಡಿ ಅವರಿಗೆ ಬೇಕಾದವುಗಳನ್ನು ಒದಗಿಸುವಂತೆ ಯೆಹೋವನು ಮಾಡಲಿದ್ದನು.—ಲೂಕ 22:35.

12 ಅನಾವಶ್ಯಕ ಅಪಕರ್ಷಣೆಗಳಿಗೆ ಒಳಗಾಗದಂತೆಯೂ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. “ದಾರಿಯಲ್ಲಿ ಯಾರಿಗೂ ವಂದನೆಯಲ್ಲಿ ಅಪ್ಪಿಕೊಳ್ಳಬೇಡಿ” ಎಂದು ಅವನು ತಿಳಿಸಿದನು. (ಲೂಕ 10:4) ಸ್ನೇಹಭಾವ ತೋರಿಸದೆ ಜನರನ್ನು ದೂರವಿಡಿ ಎಂದು ಯೇಸು ಅವರಿಗೆ ಹೇಳುತ್ತಿದ್ದನೋ? ಖಂಡಿತ ಇಲ್ಲ. ಬೈಬಲ್‌ ಸಮಯಗಳಲ್ಲಿ, ಪರಸ್ಪರ ವಂದಿಸುವುದರಲ್ಲಿ ಕೇವಲ ನಮಸ್ಕಾರ ಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿತ್ತು. ಸಂಪ್ರದಾಯಬದ್ಧ ವಂದನೆಯು ಬಹಳ ವಿಧಿವಿಧಾನಗಳನ್ನೂ ಸುದೀರ್ಘ ಸಂಭಾಷಣೆಯನ್ನೂ ಒಳಗೊಂಡಿತ್ತು. ಈ ಕುರಿತು ಒಬ್ಬ ಬೈಬಲ್‌ ವಿದ್ವಾಂಸನು ಹೇಳಿದ್ದು: “ಪೂರ್ವದೇಶದವರ ಪರಸ್ಪರ ವಂದನೆಯು ನಮ್ಮಂತೆ ಕೊಂಚ ತಲೆಬಾಗಿಸುವುದಾಗಲಿ ಹಸ್ತಲಾಘವ ಮಾಡುವುದಾಗಲಿ ಆಗಿರಲಿಲ್ಲ. ಬದಲಿಗೆ [ಅವರು] ಅನೇಕ ಸಲ ಆಲಂಗಿಸುತ್ತಿದ್ದರು ಮತ್ತು ತಲೆಬಾಗುತ್ತಿದ್ದರು. ಮಾತ್ರವಲ್ಲ, ಸಂಪೂರ್ಣವಾಗಿ ನೆಲದಲ್ಲಿ ಸಾಷ್ಟಾಂಗವೆರಗುತ್ತಿದ್ದರು. ಹೀಗೆ ಮಾಡಲು ತುಂಬಾ ಸಮಯ ಬೇಕಾಗುತ್ತಿತ್ತು.” ಸಂಪ್ರದಾಯಬದ್ಧ ವಂದನೆ ಮಾಡಬೇಡಿ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ ಅದರರ್ಥ, ‘ನೀವು ಸಾರುವ ಸಂದೇಶವು ತುರ್ತಿನದ್ದಾಗಿದ್ದರಿಂದ ಹೆಚ್ಚು ಸಮಯ ಅದಕ್ಕಾಗಿ ಉಪಯೋಗಿಸಿ’ ಎಂದಾಗಿತ್ತು. *

13. ಯೇಸು ಒಂದನೇ ಶತಮಾನದ ತನ್ನ ಶಿಷ್ಯರಿಗೆ ನೀಡಿದ ನಿರ್ದೇಶನಗಳನ್ನು ನಾವು ಮನಸಾರೆ ಪಾಲಿಸುತ್ತೇವೆಂದು ಹೇಗೆ ತೋರಿಸಿಕೊಡಬಹುದು?

13 ಯೇಸು ಒಂದನೇ ಶತಮಾನದ ತನ್ನ ಶಿಷ್ಯರಿಗೆ ನೀಡಿದ ನಿರ್ದೇಶನಗಳನ್ನು ನಾವು ಮನಸಾರೆ ಪಾಲಿಸುತ್ತೇವೆ. ಶುಶ್ರೂಷೆಯನ್ನು ಮಾಡುವಾಗ ನಾವು ಪೂರ್ಣಮನಸ್ಸಿನಿಂದ ಯೆಹೋವನ ಮೇಲೆ ಭರವಸೆಯಿಡುತ್ತೇವೆ. (ಜ್ಞಾನೋಕ್ತಿ 3:5, 6) ‘ಮೊದಲು ರಾಜ್ಯವನ್ನು ಹುಡುಕುತ್ತಾ’ ಇರುವುದಾದರೆ, ಜೀವನಾವಶ್ಯಕ ವಸ್ತುಗಳ ಕೊರತೆಯೆಂದೂ ಉಂಟಾಗದು ಎಂದು ನಮಗೆ ತಿಳಿದಿದೆ. (ಮತ್ತಾಯ 6:33) ಕಷ್ಟಸಂಕಟಗಳ ಸಮಯದಲ್ಲೂ ಯೆಹೋವನ ಕೈ ಮೋಟುಗೈಯಲ್ಲ ಎಂಬುದನ್ನು ಲೋಕದಾದ್ಯಂತವಿರುವ ಪೂರ್ಣ ಸಮಯದ ರಾಜ್ಯ ಘೋಷಕರು ರುಜುಪಡಿಸಬಲ್ಲರು. (ಕೀರ್ತನೆ 37:25) ಅಪಕರ್ಷಣೆಗಳಿಗೆ ಒಳಗಾಗದಿರುವ ಅಗತ್ಯವನ್ನೂ ನಾವು ಮನಗಂಡಿದ್ದೇವೆ. ಒಂದು ವೇಳೆ ನಾವು ಎಚ್ಚರದಿಂದಿರದಿದ್ದಲ್ಲಿ, ಈ ವಿಷಯಗಳ ವ್ಯವಸ್ಥೆಯು ಸುಲಭವಾಗಿ ನಮ್ಮನ್ನು ದಾರಿತಪ್ಪಿಸಬಲ್ಲದು. (ಲೂಕ 21:34-36) ಖಂಡಿತವಾಗಿಯೂ ಇದು ಅಪಕರ್ಷಣೆಗೆ ಒಳಗಾಗುವ ಸಮಯವಲ್ಲ. ಜನರ ಜೀವಗಳು ಅಪಾಯದಲ್ಲಿರುವುದರಿಂದ ನಮ್ಮ ಸಂದೇಶ ತುರ್ತಿನದ್ದಾಗಿದೆ. (ರೋಮನ್ನರಿಗೆ 10:13-15) ತುರ್ತುಪ್ರಜ್ಞೆಯನ್ನು ನಮ್ಮ ಮನಸ್ಸಿನಲ್ಲಿ ಸದಾ ಹಚ್ಚಹಸುರಾಗಿ ಇಡುವುದಾದರೆ, ಶುಶ್ರೂಷೆಯಲ್ಲಿ ವ್ಯಯಿಸಬಹುದಾದ ಅತ್ಯುತ್ತಮ ಸಮಯ ಮತ್ತು ಶಕ್ತಿಯನ್ನು ಈ ಲೋಕದ ಅಪಕರ್ಷಣೆಗಳು ಕಬಳಿಸಿಬಿಡದಂತೆ ನಾವು ನೋಡಿಕೊಳ್ಳಬಹುದು. ಸಮಯ ಕೊಂಚ; ಕೊಯ್ಲು ಬಹಳ ಎಂಬುದನ್ನು ನೆನಪಿನಲ್ಲಿಡಿರಿ.—ಮತ್ತಾಯ 9:37, 38.

ನಮಗೂ ಅನ್ವಯವಾಗುವ ಆಜ್ಞೆ

14. ಮತ್ತಾಯ 28:18-20 ರಲ್ಲಿ ದಾಖಲಾಗಿರುವ ಆಜ್ಞೆಯು ಕ್ರಿಸ್ತನ ಎಲ್ಲ ಹಿಂಬಾಲಕರಿಗೂ ಅನ್ವಯವಾಗುತ್ತದೆ ಎಂಬುದನ್ನು ಯಾವುದು ತೋರಿಸುತ್ತದೆ? (ಪಾದಟಿಪ್ಪಣಿಯನ್ನೂ ನೋಡಿ)

14 “ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ” ಎಂಬ ಮಾತುಗಳನ್ನು ಹೇಳುವ ಮೂಲಕ ಪುನರುತ್ಥಿತ ಯೇಸು ತನ್ನ ಶಿಷ್ಯರ ಹೆಗಲ ಮೇಲೆ ಒಂದು ಭಾರಿ ಜವಾಬ್ದಾರಿಯನ್ನು ಹೊರಿಸಿದನು. ಗಲಿಲಾಯದ ಬೆಟ್ಟದಲ್ಲಿ ಯೇಸು ಈ ಮಾತುಗಳನ್ನು ಹೇಳಿದಾಗ, ಅಲ್ಲಿ ಉಪಸ್ಥಿತರಿದ್ದ ಶಿಷ್ಯರಷ್ಟೇ ಅವನ ಮನಸ್ಸಿನಲ್ಲಿರಲಿಲ್ಲ. * ಆ ಆಜ್ಞೆಯಲ್ಲಿ, “ಎಲ್ಲ ಜನಾಂಗಗಳ ಜನರನ್ನು” ತಲಪುವುದು ಹಾಗೂ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ” ಆ ಕೆಲಸವನ್ನು ಮುಂದುವರಿಸುವುದು ಸೇರಿತ್ತು. ಹಾಗಾದರೆ, ಆ ಆಜ್ಞೆಯು ಇಂದು ನಮ್ಮನ್ನೂ ಸೇರಿಸಿ ಕ್ರಿಸ್ತನ ಎಲ್ಲ ಹಿಂಬಾಲಕರಿಗೂ ಅನ್ವಯವಾಗುತ್ತದೆ. ಆದ್ದರಿಂದ, ಮತ್ತಾಯ 28:18-20 ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ನೋಡೋಣ.

15. ಶಿಷ್ಯರನ್ನಾಗಿ ಮಾಡುವಂತೆ ಯೇಸು ನೀಡಿರುವ ಆಜ್ಞೆಗೆ ವಿಧೇಯರಾಗುವುದು ಬುದ್ಧಿಶಾಲಿತನವಾಗಿದೆ ಏಕೆ?

15 ಆ ಆಜ್ಞೆಯನ್ನು ಕೊಡುವ ಮೊದಲು ಯೇಸು, “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂದು ಹೇಳಿದನು. (ವಚನ 18) ಅಷ್ಟೊಂದು ಅಧಿಕಾರ ಯೇಸುವಿಗೆ ನಿಜವಾಗಿ ಇದೆಯೋ? ಖಂಡಿತ ಇದೆ! ಅವನು ಪ್ರಧಾನ ದೇವದೂತನಾಗಿದ್ದು, ಕೋಟ್ಯನುಕೋಟಿ ದೇವದೂತರ ಮೇಲೆ ಅಧಿಕಾರವುಳ್ಳವನಾಗಿದ್ದಾನೆ. (1 ಥೆಸಲೊನೀಕ 4:16; ಪ್ರಕಟನೆ 12:7) ‘ಸಭೆಯ ಶಿರಸ್ಸಾಗಿರುವ’ ಅವನಿಗೆ ಭೂಮಿಯಲ್ಲಿರುವ ತನ್ನ ಹಿಂಬಾಲಕರ ಮೇಲೂ ಅಧಿಕಾರವಿದೆ. (ಎಫೆಸ 5:23) ಇಸವಿ 1914ರಿಂದ ಅವನು ಮೆಸ್ಸೀಯ ರಾಜನಾಗಿ ಸ್ವರ್ಗದಿಂದ ರಾಜ್ಯಭಾರ ಮಾಡುತ್ತಿದ್ದಾನೆ. (ಪ್ರಕಟನೆ 11:15) ಅವನಿಗೆ ಎಲ್ಲಿಯ ವರೆಗೆ ಅಧಿಕಾರ ನೀಡಲ್ಪಟ್ಟಿದೆಯೆಂದರೆ, ಸತ್ತವರನ್ನು ಪುನರುತ್ಥಾನಗೊಳಿಸುವ ಶಕ್ತಿಯೂ ಅವನಿಗಿದೆ. (ಯೋಹಾನ 5:26-28) ಮೊದಲು ತನ್ನ ವ್ಯಾಪಕ ಅಧಿಕಾರವನ್ನು ತಿಳಿಸುವ ಮೂಲಕ ಯೇಸು, ತದನಂತರ ತಾನು ಹೇಳಲಿರುವ ಮಾತುಗಳು ಸಲಹೆಗಳಲ್ಲ ಬದಲಾಗಿ ಆಜ್ಞೆ ಎಂಬುದನ್ನು ಸೂಚಿಸುತ್ತಾನೆ. ಈ ಅಧಿಕಾರವನ್ನು ಅವನು ಯಾವುದೇ ತಂತ್ರದಿಂದ ಗಿಟ್ಟಿಸಿಕೊಂಡಿಲ್ಲ. ಬದಲಾಗಿ ದೇವರೇ ಅದನ್ನು ಅವನಿಗೆ ನೀಡಿದ್ದಾನೆ. ಆದ್ದರಿಂದ, ಅದಕ್ಕೆ ವಿಧೇಯರಾಗಿರುವುದು ಬುದ್ಧಿಶಾಲಿತನವಾಗಿದೆ.—1 ಕೊರಿಂಥ 15:27.

16. “ಹೊರಟುಹೋಗಿ” ಎಂದು ಹೇಳುವ ಮೂಲಕ ಯೇಸು ನಮಗೆ ಯಾವ ಆದೇಶ ನೀಡುತ್ತಿದ್ದಾನೆ? ನಾವದನ್ನು ಹೇಗೆ ಪೂರೈಸುತ್ತೇವೆ?

16 ಯೇಸು ಆ ಆಜ್ಞೆಯನ್ನು, “ಹೊರಟುಹೋಗಿ” ಎಂಬ ಪದದಿಂದ ಆರಂಭಿಸುತ್ತಾನೆ. (ವಚನ 19) ಹಾಗಾಗಿ, ಇತರರಿಗೆ ದೇವರ ರಾಜ್ಯದ ಸಂದೇಶವನ್ನು ತಿಳಿಸಲು ನಾವು ಮೊದಲ ಹೆಜ್ಜೆ ತೆಗೆದುಕೊಳ್ಳಬೇಕೆಂದು ಅವನು ಆದೇಶಿಸುತ್ತಿದ್ದಾನೆ. ಈ ಆದೇಶವನ್ನು ನಾವು ಅನೇಕ ವಿಧಗಳಲ್ಲಿ ಪೂರೈಸಬಹುದು. ಮನೆಮನೆಗೆ ಹೋಗಿ ಸಾರುವುದು ಜನರನ್ನು ಖುದ್ದಾಗಿ ಭೇಟಿಮಾಡುವ ಬಹಳ ಪರಿಣಾಮಕಾರಿಯಾದ ಒಂದು ವಿಧವಾಗಿದೆ. (ಅ. ಕಾರ್ಯಗಳು 20:20) ಅನೌಪಚಾರಿಕವಾಗಿಯೂ ಸಾಕ್ಷಿನೀಡಲು ನಾವು ಅವಕಾಶಗಳನ್ನು ಹುಡುಕುತ್ತೇವೆ. ನಮ್ಮ ದಿನನಿತ್ಯದ ಜೀವನದಲ್ಲಿ, ಸಾಧ್ಯವಿರುವಾಗಲೆಲ್ಲ ಸುವಾರ್ತೆಯ ಕುರಿತು ಸಂಭಾಷಣೆ ಆರಂಭಿಸಲು ನಾವು ಕಾತುರದಿಂದ ಎದುರುನೋಡುತ್ತೇವೆ. ಸ್ಥಳೀಯ ಸನ್ನಿವೇಶ ಮತ್ತು ಪರಿಸ್ಥಿತಿಗನುಗುಣವಾಗಿ ಸಾರುವ ನಮ್ಮ ವಿಧಾನಗಳು ಬದಲಾಗಬಹುದು. ಹಾಗಿದ್ದರೂ ಒಂದು ವಿಷಯ ಮಾತ್ರ ಬದಲಾಗದೆ ಹಾಗೆ ಉಳಿಯುತ್ತದೆ: ನಾವು “ಹೊರಟುಹೋಗಿ” ಯೋಗ್ಯ ಜನರನ್ನು ಹುಡುಕುತ್ತೇವೆ.—ಮತ್ತಾಯ 10:11.

17. ನಾವು ಜನರನ್ನು ‘ಶಿಷ್ಯರನ್ನಾಗಿ ಮಾಡುವುದು’ ಹೇಗೆ?

17 ಯೇಸು ನಂತರ ಆ ಆಜ್ಞೆಯ ಉದ್ದೇಶವನ್ನು ತಿಳಿಸುತ್ತಾನೆ. “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಅವನು ಹೇಳುತ್ತಾನೆ. (ವಚನ 19) ನಾವು ಜನರನ್ನು ‘ಶಿಷ್ಯರನ್ನಾಗಿ ಮಾಡುವುದು’ ಹೇಗೆ? ಶಿಷ್ಯ ಅಂದರೆ ವಿದ್ಯಾರ್ಥಿ ಇಲ್ಲವೇ ಕಲಿಯುವವನು ಆಗಿದ್ದಾನೆ. ಆದ್ದರಿಂದ, ಶಿಷ್ಯರನ್ನಾಗಿ ಮಾಡುವುದೆಂದರೆ ಕೇವಲ ಇತರರಿಗೆ ಜ್ಞಾನವನ್ನು ಹಂಚುವುದಲ್ಲ. ಆಸಕ್ತರೊಂದಿಗೆ ಬೈಬಲನ್ನು ಅಧ್ಯಯನ ಮಾಡುವಾಗ, ಕ್ರಿಸ್ತನ ಹಿಂಬಾಲಕರಾಗಲು ಅವರಿಗೆ ಸಹಾಯಮಾಡುವುದೇ ನಮ್ಮ ಗುರಿಯಾಗಿರಬೇಕು. ಸಾಧ್ಯವಿರುವಾಗಲೆಲ್ಲ, ನಾವು ಯೇಸುವಿನ ಮಾದರಿಯ ಕಡೆಗೆ ಅವರ ಗಮನ ತಿರುಗಿಸಬೇಕು. ಹಾಗೆ ಮಾಡುವಲ್ಲಿ, ಅವರು ಯೇಸುವನ್ನು ತಮ್ಮ ಬೋಧಕನಾಗಿಯೂ ಆದರ್ಶಪ್ರಾಯನಾಗಿಯೂ ಸ್ವೀಕರಿಸುತ್ತಾ ಅವನ ಜೀವನಶೈಲಿಯನ್ನು ಅನುಸರಿಸಿ ಅವನು ಮಾಡಿದಂಥ ಕೆಲಸವನ್ನು ಮಾಡುವರು.—ಯೋಹಾನ 13:15.

18. ದೀಕ್ಷಾಸ್ನಾನವು ಶಿಷ್ಯನೊಬ್ಬನ ಜೀವನದಲ್ಲಿ ಅತಿ ಪ್ರಮುಖವಾದ ಮೈಲುಗಲ್ಲಾಗಿದೆ ಏಕೆ?

18 ಆ ಆಜ್ಞೆಯ ಪ್ರಮುಖ ಭಾಗವು, “ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ” ಎಂಬ ಮಾತುಗಳಲ್ಲಿ ಅಡಗಿದೆ. (ವಚನ 19) ದೀಕ್ಷಾಸ್ನಾನ ಎಂಬುದು ಶಿಷ್ಯನೊಬ್ಬನ ಜೀವನದಲ್ಲಿ ಅತಿ ಪ್ರಮುಖವಾದ ಮೈಲುಗಲ್ಲಾಗಿದೆ. ಅದು ದೇವರಿಗೆ ಅವನ ಪೂರ್ಣಹೃದಯದ ಸಮರ್ಪಣೆಯ ಗುರುತಾಗಿದೆ. ಆದ್ದರಿಂದ ಅದು ರಕ್ಷಣೆಗೆ ಅತ್ಯಾವಶ್ಯಕ. (1 ಪೇತ್ರ 3:21) ಹೌದು, ದೀಕ್ಷಾಸ್ನಾನ ಪಡೆದ ಶಿಷ್ಯನೊಬ್ಬನು ತನ್ನಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಯೆಹೋವನ ಸೇವೆಯನ್ನು ಮುಂದುವರಿಸುವುದಾದರೆ, ಬರಲಿರುವ ನೂತನ ಲೋಕದಲ್ಲಿ ಅಪಾರ ಆಶೀರ್ವಾದಗಳನ್ನು ಮುನ್ನೋಡಬಹುದು. ದೀಕ್ಷಾಸ್ನಾನ ಪಡೆದು ಕ್ರಿಸ್ತನ ಶಿಷ್ಯರಾಗುವಂತೆ ನೀವು ಯಾರಿಗಾದರೂ ಸಹಾಯ ಮಾಡಿದ್ದೀರೋ? ಕ್ರೈಸ್ತ ಶುಶ್ರೂಷೆಯಲ್ಲಿ ಇದಕ್ಕಿಂತ ಹೆಚ್ಚಿನ ಸಂತೋಷವನ್ನು ನಿಮಗೆ ಇನ್ಯಾವುದೂ ತರಲಾರದು.—3 ಯೋಹಾನ 4.

19. ಹೊಸಬರಿಗೆ ನಾವು ಏನನ್ನು ಕಲಿಸುತ್ತೇವೆ? ಅವರ ದೀಕ್ಷಾಸ್ನಾನದ ನಂತರವೂ ಅದನ್ನು ಮುಂದುವರಿಸಬೇಕಾಗಬಹುದು ಏಕೆ?

19 ಯೇಸು ಆ ಆಜ್ಞೆಯ ಮುಂದಿನ ಭಾಗವನ್ನು ತಿಳಿಸಿದ್ದು: “ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.” (ವಚನ 20) ಯೇಸುವಿನ ಆಜ್ಞೆಗಳನ್ನು ಪಾಲಿಸುವಂತೆ ನಾವು ಹೊಸಬರಿಗೆ ಕಲಿಸುತ್ತೇವೆ. ಅದರಲ್ಲಿ, ದೇವರನ್ನು ಪ್ರೀತಿಸುವುದು, ನೆರೆಯವರನ್ನು ಪ್ರೀತಿಸುವುದು ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಗಳು ಸೇರಿವೆ. (ಮತ್ತಾಯ 22:37-39) ನಾವು ಕ್ರಮೇಣ ಅವರಿಗೆ, ಬೈಬಲ್‌ ಸತ್ಯಗಳನ್ನು ವಿವರಿಸುವುದು ಹೇಗೆ ಮತ್ತು ಹೆಚ್ಚುತ್ತಿರುವ ತಮ್ಮ ನಂಬಿಕೆಯನ್ನು ಸಮರ್ಥಿಸುವುದು ಹೇಗೆ ಎಂಬದನ್ನು ಕಲಿಸುತ್ತೇವೆ. ಸಾರ್ವಜನಿಕವಾಗಿ ಸಾರುವ ಚಟುವಟಿಕೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಅವರು ಗಳಿಸಿದಾಗ, ನಾವು ಅವರೊಂದಿಗೆ ಸೇವೆಮಾಡಿ, ಈ ಪ್ರಮುಖ ಕೆಲಸದಲ್ಲಿ ಫಲಭರಿತರಾಗುವುದು ಹೇಗೆಂಬುದನ್ನು ನಮ್ಮ ನಡೆನುಡಿಗಳ ಮೂಲಕ ಕಲಿಸುತ್ತೇವೆ. ದೀಕ್ಷಾಸ್ನಾನ ಪಡೆದ ಕೂಡಲೇ ಹೊಸ ಶಿಷ್ಯರಿಗೆ ಕಲಿಸುವುದನ್ನು ನಾವು ನಿಲ್ಲಿಸಿಬಿಡಬೇಕೆಂದಿಲ್ಲ. ಕ್ರಿಸ್ತನನ್ನು ಹಿಂಬಾಲಿಸುವಾಗ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಹೊಸದಾಗಿ ದೀಕ್ಷಾಸ್ನಾನ ಪಡೆದವರಿಗೆ ಹೆಚ್ಚಿನ ನಿರ್ದೇಶನಗಳನ್ನು ನೀಡಬೇಕಾಗಬಹುದು.—ಲೂಕ 9:23, 24.

“ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ”

20, 21. (ಎ) ಯೇಸುವಿನ ಆಜ್ಞೆಯನ್ನು ಪೂರೈಸುವಾಗ ನಾವು ಹೆದರುವ ಆವಶ್ಯಕತೆಯಿಲ್ಲ ಏಕೆ? (ಬಿ) ವಿಳಂಬಿಸುವ ಸಮಯ ಇದಾಗಿಲ್ಲವೇಕೆ? ನಮ್ಮ ದೃಢನಿರ್ಧಾರ ಏನಾಗಿರಬೇಕು?

20 ಯೇಸುವಿನ ಆಜ್ಞೆಯಲ್ಲಿರುವ ಕೊನೆಯ ಮಾತುಗಳು ತುಂಬ ಭರವಸೆಯನ್ನು ನೀಡುತ್ತವೆ. “ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದವನು ಹೇಳಿದನು. (ಮತ್ತಾಯ 28:20) ಈ ನೇಮಕವು ತುಂಬ ಪ್ರಾಮುಖ್ಯವಾದದ್ದು ಎಂಬುದನ್ನು ಯೇಸು ಅರ್ಥಮಾಡಿಕೊಂಡಿದ್ದನು. ಅದನ್ನು ಪೂರೈಸುವಾಗ ವಿರೋಧಿಗಳಿಂದ ಕೆಲವೊಮ್ಮೆ ತೀವ್ರ ಆಕ್ಷೇಪ ಬರುವುದು ಎಂದು ಅವನಿಗೆ ತಿಳಿದಿತ್ತು. (ಲೂಕ 21:12) ಆದರೆ, ಅದಕ್ಕೆಲ್ಲ ನಾವು ಹೆದರಬೇಕಾಗಿಲ್ಲ. ಈ ನೇಮಕವನ್ನು ಯಾವುದೇ ನೆರವಿಲ್ಲದೆ, ನಾವೊಬ್ಬರೇ ಮಾಡಬೇಕೆಂದು ನಮ್ಮ ನಾಯಕನು ಬಯಸುವುದಿಲ್ಲ. ಈ ಆಜ್ಞೆಯನ್ನು ಪೂರೈಸಲು ಸಹಾಯ ಮಾಡಲಿಕ್ಕಾಗಿ “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರ”ವನ್ನು ಹೊಂದಿರುವ ಒಬ್ಬಾತನು ನಮ್ಮೊಂದಿಗಿದ್ದಾನೆ ಎಂಬದನ್ನು ತಿಳಿಯುವುದು ಮನಸ್ಸಿಗೆ ನೆಮ್ಮದಿ ತರುವುದಿಲ್ಲವೋ?

21 ಶತಮಾನಗಳುದ್ದಕ್ಕೂ, “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ” ಶುಶ್ರೂಷೆಯಲ್ಲಿ ತಾನು ಜೊತೆಗಿರುವೆನೆಂದು ಯೇಸು ಶಿಷ್ಯರಿಗೆ ಭರವಸೆ ನೀಡಿದನು. ಅಂತ್ಯದ ವರೆಗೂ ನಾವು ಯೇಸುವಿನ ಆಜ್ಞೆಯನ್ನು ಪಾಲಿಸುತ್ತಾ ಮುಂದುವರಿಯಬೇಕು. ವಿಳಂಬಿಸುವ ಸಮಯ ಇದಾಗಿಲ್ಲ. ಹೇರಳವಾದ ಆಧ್ಯಾತ್ಮಿಕ ಕೊಯ್ಲಿನ ಕೆಲಸ ಪ್ರಗತಿಯಲ್ಲಿದೆ! ಸ್ಪಂದಿಸುತ್ತಿರುವ ಸಹಸ್ರಾರು ಜನರನ್ನು ಒಟ್ಟುಗೂಡಿಸಲಾಗುತ್ತಿದೆ. ಕ್ರಿಸ್ತನ ಹಿಂಬಾಲಕರಾಗಿರುವ ನಾವು ನಮಗೆ ನೀಡಲಾಗಿರುವ ಈ ಪ್ರಮುಖ ಆಜ್ಞೆಯನ್ನು ಪೂರೈಸುವ ದೃಢನಿರ್ಧಾರ ಮಾಡೋಣ. “ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ” ಎಂದು ಯೇಸು ನೀಡಿರುವ ಆಜ್ಞೆಯನ್ನು ಪಾಲಿಸಲಿಕ್ಕಾಗಿ ನಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನು ನೀಡುವ ದೃಢಸಂಕಲ್ಪದಿಂದಿರೋಣ.

^ ಪ್ಯಾರ. 12 ಪ್ರವಾದಿ ಎಲೀಷನು ಒಮ್ಮೆ ಇದೆ ರೀತಿಯ ಮಾರ್ಗದರ್ಶನ ನೀಡಿದನು. ಸ್ತ್ರೀಯೊಬ್ಬಳ ಮಗನು ಮರಣಪಟ್ಟಾಗ, ತನ್ನ ಸೇವಕನಾದ ಗೇಹಜಿಯನ್ನು ಅಲ್ಲಿಗೆ ಕಳುಹಿಸುತ್ತಾ, “ಹೋಗುವಾಗ ದಾರಿಯಲ್ಲಿ ಯಾರನ್ನೂ ವಂದಿಸಬೇಡ” ಎಂದು ಎಲೀಷನು ಅವನಿಗೆ ಹೇಳಿದನು. (2 ಅರಸುಗಳು 4:29) ಹೋಗುವ ಕಾರ್ಯವು ಬಹಳ ತುರ್ತಿನದ್ದಾಗಿದ್ದರಿಂದ ಅನಾವಶ್ಯಕ ವಿಳಂಬಕ್ಕೆ ಸಮಯವಿರಲಿಲ್ಲ.

^ ಪ್ಯಾರ. 14 ಯೇಸುವಿನ ಹೆಚ್ಚಿನ ಹಿಂಬಾಲಕರು ಗಲಿಲಾಯದಲ್ಲಿ ಇದ್ದುದರಿಂದ, ಮತ್ತಾಯ 28:16-20ರಲ್ಲಿ ವಿವರಿಸಲಾಗಿರುವ ಘಟನೆಯ ಸಮಯದಲ್ಲೇ ಪುನರುತ್ಥಿತ ಯೇಸು “ಐನೂರಕ್ಕಿಂತಲೂ ಹೆಚ್ಚು ಮಂದಿ” ಜನರಿಗೆ ಕಾಣಿಸಿಕೊಂಡಿರಬೇಕು. (1 ಕೊರಿಂಥ 15:6) ಅಂದರೆ, ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ಯೇಸು ನೀಡಿದಾಗ ಅಲ್ಲಿ ನೂರಾರು ಜನರು ಉಪಸ್ಥಿತರಿದ್ದಿರಬೇಕು.