ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎರಡನೆಯ ವಿಪತ್ತು—ಕುದುರೆಯ ದಂಡುಗಳು

ಎರಡನೆಯ ವಿಪತ್ತು—ಕುದುರೆಯ ದಂಡುಗಳು

ಅಧ್ಯಾಯ 23

ಎರಡನೆಯ ವಿಪತ್ತು—ಕುದುರೆಯ ದಂಡುಗಳು

1. ಮಿಡಿತೆಗಳನ್ನು ನಿರ್ನಾಮ ಮಾಡುವ ವೈದಿಕರ ಪ್ರಯತ್ನಗಳ ನಡುವೆಯೂ ಏನು ಸಂಭವಿಸಿದೆ, ಮತ್ತು ಇನ್ನೂ ಎರಡು ವಿಪತ್ತುಗಳ ಬರುವಿಕೆಯು ಯಾವುದನ್ನು ಸೂಚಿಸುತ್ತದೆ?

ಕ್ರೈಸ್ತಪ್ರಪಂಚದ ಮೇಲೆ 1919 ರಿಂದ ಹಿಡಿದು, ಸಾಂಕೇತಿಕ ಮಿಡಿತೆಗಳ ಆಕ್ರಮಣವು ವೈದಿಕರಿಗೆ ಹೆಚ್ಚು ಕ್ಲೇಶವನ್ನು ತಂದಿದೆ. ಅವರು ಮಿಡಿತೆಗಳನ್ನು ಅಳಿಸಲು ಪ್ರಯತ್ನಿಸಿದರೂ ಕೂಡ ಇವು ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗುತ್ತಾ ಹೋಗುತ್ತವೆ. (ಪ್ರಕಟನೆ 9:7) ಮತ್ತು ಅದು ಅಷ್ಟೇ ಅಲ್ಲ! ಯೋಹಾನನು ಬರೆಯುವುದು: “ಒಂದು ವಿಪತ್ತು ಗತಿಸಿತು. ಇಗೋ, ಈ ಸಂಗತಿಗಳಾದ ಮೇಲೆ ಇನ್ನೆರಡು ವಿಪತ್ತುಗಳು ಬರುತ್ತಿವೆ.” (ಪ್ರಕಟನೆ 9:12, NW)  ಇನ್ನೂ ಪೀಡಿಸುವ ಬಾಧೆಗಳು ಕ್ರೈಸ್ತಪ್ರಪಂಚಕ್ಕೆ ಕಾದಿರುತ್ತವೆ.

2. (ಎ) ಆರನೆಯ ದೇವದೂತನು ತನ್ನ ತುತೂರಿಯನ್ನು ಊದುವಾಗ ಏನಾಗುತ್ತದೆ? (ಬಿ) “ಚಿನ್ನದ ವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯು” ಯಾವುದನ್ನು ಪ್ರತಿನಿಧಿಸುತ್ತದೆ? (ಸಿ) ನಾಲ್ಕು ದೇವದೂತರನ್ನು ಯಾಕೆ ಉಲ್ಲೇಖಿಸಲಾಗಿದೆ?

2 ಎರಡನೆಯ ವಿಪತ್ತಿನ ಮೂಲವು ಯಾವುದು? ಯೋಹಾನನು ಬರೆಯುವುದು: “ಮತ್ತು ಆರನೆಯ ದೇವದೂತನು ತನ್ನ ತುತೂರಿಯನ್ನೂದಿದನು. ಮತ್ತು ದೇವರ ಸಮ್ಮುಖದಲ್ಲಿರುವ ಚಿನ್ನದ ವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯು ತುತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ ಹೇಳುವುದನ್ನು ನಾನು ಕೇಳಿದೆನು: ‘ಯೂಫ್ರೇಟೀಸ್‌ ಮಹಾ ನದಿಯ ಬಳಿಯಲ್ಲಿ ಕಟ್ಟಲ್ಪಟ್ಟಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು.’” (ಪ್ರಕಟನೆ 9:13, 14, NW)  ಚಿನ್ನದ ವೇದಿಯ ಕೊಂಬುಗಳಿಂದ ಹೊರಟ ಧ್ವನಿಗೆ ಉತ್ತರವಾಗಿ ದೇವದೂತರ ಬಿಡುಗಡೆಯಾಗುತ್ತದೆ. ಇದು ಚಿನ್ನದ ಧೂಪ ವೇದಿಯಾಗಿದೆ, ಮತ್ತು ಈ ವೇದಿಯಿಂದ ಚಿನ್ನದ ಧೂಪಾರತಿಗಳ ಧೂಪವು ಈ ಮುಂಚೆ ಎರಡು ಬಾರಿ ದೇವ ಜನರ ಪ್ರಾರ್ಥನೆಗಳೊಂದಿಗೆ ಜತೆಗೂಡಿಸಲ್ಪಟ್ಟಿದೆ. (ಪ್ರಕಟನೆ 5:8; 8:3, 4) ಆದಕಾರಣ, ಈ ಒಂದು ಧ್ವನಿಯು ಭೂಮಿಯ ಮೇಲಿರುವ ದೇವಜನರ ಒಮ್ಮತದ ಪ್ರಾರ್ಥನೆಗಳನ್ನು ಪ್ರತಿನಿಧಿಸುತ್ತದೆ. “ದೇವದೂತರು” ಎಂದು ಇಲ್ಲಿ ಭಾಷಾಂತರಿಸಲ್ಪಟ್ಟ ಗ್ರೀಕ್‌ ಶಬ್ದದ ಮೂಲಾರ್ಥವು ಯೆಹೋವನ “ಸಂದೇಶವಾಹಕರು” ಎಂದಾಗಿರುವುದರಿಂದ, ಅವರು ಅಧಿಕ ಉತ್ಸಾಹದ ಸೇವೆಗೆ ತಮ್ಮನ್ನು ಬಿಡಿಸಬೇಕೆಂದು ಸ್ವತಃ ವಿನಂತಿಸುತ್ತಾರೆ. ಇಲ್ಲಿ ಯಾಕೆ ನಾಲ್ಕು ದೇವದೂತರು ಇದ್ದಾರೆ? ಭೂಮಿಯ ಪೂರ್ಣಭಾಗವನ್ನು ಆವರಿಸುವಷ್ಟು ವ್ಯವಸ್ಥಾಪಿಸಲ್ಪಡುವುದನ್ನು ಈ ಸಾಂಕೇತಿಕ ಸಂಖ್ಯೆಯು ಸೂಚಿಸುತ್ತದೆಯೆಂದು ಭಾಸವಾಗುತ್ತದೆ.—ಹೋಲಿಸಿರಿ ಪ್ರಕಟನೆ 7:1; 20:8.

3. ನಾಲ್ಕು ದೇವದೂತರು “ಯೂಫ್ರೇಟೀಸ್‌ ಮಹಾ ನದಿಯ ಬಳಿಯಲ್ಲಿ” ಹೇಗೆ “ಕಟ್ಟಲ್ಪಟ್ಟು” ಇದ್ದರು?

3 ಆ ದೇವದೂತರು ಹೇಗೆ “ಯೂಫ್ರೇಟೀಸ್‌ ಮಹಾ ನದಿಯ ಬಳಿಯಲ್ಲಿ ಕಟ್ಟಲ್ಪಟ್ಟಿರುತ್ತಾರೆ”? ಪುರಾತನ ಸಮಯಗಳಲ್ಲಿ ಯೂಫ್ರೇಟೀಸ್‌ ನದಿಯು ಯೆಹೋವನು ಅಬ್ರಹಾಮನಿಗೆ ವಾಗ್ದಾನಿಸಿದ ದೇಶದ ಈಶಾನ್ಯ ದಿಕ್ಕಿನ ಗಡಿ ಆಗಿತ್ತು. (ಆದಿಕಾಂಡ 15:18; ಧರ್ಮೋಪದೇಶಕಾಂಡ 11:24) ದೇವದೂತರನ್ನು ಅವರ ದೇವದತ್ತ ಭೂಮಿ ಯಾ ಚಟುವಟಿಕೆಯ ಭೂಕ್ಷೇತ್ರದ ಗಡಿಯಲ್ಲಿ ಪ್ರಾಯಶಃ ತಡೆಹಿಡಿಯಲಾಗಿತ್ತು, ಅಥವಾ ಯೆಹೋವನು ಅವರಿಗೋಸ್ಕರ ತಯಾರು ಮಾಡಿದ ಸೇವೆಯೊಳಗೆ ಪೂರ್ಣವಾಗಿ ಪ್ರವೇಶಿಸದಂತೆ ತಡೆಹಿಡಿಯಲ್ಪಟ್ಟಿದ್ದರೆಂದು ವ್ಯಕ್ತವಾಗುತ್ತದೆ. ಯೂಫ್ರೇಟೀಸ್‌ ಪ್ರಾಮುಖ್ಯವಾಗಿ ಬಾಬೆಲ್‌ ನಗರದೊಂದಿಗೂ ಜತೆಗೂಡಿಸಲ್ಪಟ್ಟಿತ್ತು. ಮತ್ತು ಸಾ. ಶ. ಪೂ. 607 ರಲ್ಲಿ ಯೆರೂಸಲೇಮಿನ ಪತನದ ಅನಂತರ, ಮಾಂಸಿಕ ಇಸ್ರಾಯೇಲ್ಯರು ಗುಲಾಮಗಿರಿಯಲ್ಲಿ 70 ವರ್ಷಗಳನ್ನು “ಯೂಫ್ರೇಟೀಸ್‌ ಮಹಾ ನದಿಯ ಬಳಿಯಲ್ಲಿ ಕೂತು” ಕಳೆದರು. (ಕೀರ್ತನೆ 137:1) ಆತ್ಮಿಕ ಇಸ್ರಾಯೇಲ್ಯರು ತದ್ರೀತಿಯ ನಿರ್ಬಂಧ, ಖಿನ್ನತೆಯಲ್ಲಿ ಕಟ್ಟಲ್ಪಟ್ಟಿರುವುದನ್ನು ಮತ್ತು ಮಾರ್ಗದರ್ಶನಕ್ಕಾಗಿ ಯೆಹೋವನಿಗೆ ವಿನಂತಿಸುವುದನ್ನು 1919 ನೆಯ ವರ್ಷ ಕಂಡುಕೊಂಡಿತು.

4. ನಾಲ್ಕು ದೇವದೂತರಿಗೆ ಯಾವ ನಿಯೋಗ ಇತ್ತು, ಮತ್ತು ಇದು ಹೇಗೆ ಪೂರೈಸಲ್ಪಡುತ್ತದೆ?

4 ಸಂತೋಷಕರವಾಗಿಯೇ, ಯೋಹಾನನು ವರದಿಸಶಕ್ತನಾದದ್ದು: “ಮತ್ತು ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವದಕ್ಕಾಗಿ ತಾಸು ಮತ್ತು ದಿನ ಮತ್ತು ತಿಂಗಳು ಮತ್ತು ವರುಷಕ್ಕಾಗಿ ಸಿದ್ಧಗೊಳಿಸಲ್ಪಟ್ಟಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಚ್ಚಬಿಡಲಾಯಿತು.” (ಪ್ರಕಟನೆ 9:15, NW)  ಯೆಹೋವನು ನಿಷ್ಕೃಷ್ಟ ಸಮಯಪಾಲಕನಾಗಿದ್ದಾನೆ. ಆತನಿಗೊಂದು ಕಾರ್ಯತಖ್ತೆಯಿದೆ ಮತ್ತು ಅದರ ಹೊಂದಿಕೆಯಲ್ಲಿ ಅವನು ನಡೆಯುತ್ತಾನೆ. ಆದುದರಿಂದ, ಈ ಸಂದೇಶವಾಹಕರು ಅವರಿಗೆ ಪೂರೈಸಲಿರುವುದನ್ನು ಪೂರ್ಣಗೊಳಿಸಲು ನಿಖರವಾದ ಕಾರ್ಯತಖ್ತೆಗನುಸಾರ ತಕ್ಕ ಸಮಯದಲ್ಲಿ ಬಿಡುಗಡೆಗೊಳಿಸಲ್ಪಟ್ಟಿದ್ದಾರೆ. ದಾಸತ್ವದಿಂದ ಹೊರಬಂದು 1919 ರಲ್ಲಿ ಕಾರ್ಯಕ್ಕೆ ತಯಾರಾಗಿ ಮುಂಬರುವುದರಲ್ಲಿ ಅವರ ಆನಂದವನ್ನು ಊಹಿಸಿರಿ! ಅವರಿಗೆ ಕೇವಲ ಪೀಡಿಸುವ ಆದೇಶ ಮಾತ್ರವಲ್ಲ, ಬದಲು ಕೊನೆಯಲ್ಲಿ “ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರ” ಮಾಡುವ ಆದೇಶವೂ ಇದೆ. ಭೂಮಿಯ, ಸಮುದ್ರದ, ಸಮುದ್ರದ ಜೀವಿಗಳ, ಬುಗ್ಗೆಗಳ ಮತ್ತು ನದಿಗಳ ಮತ್ತು ಸ್ವರ್ಗೀಯ ಬೆಳಕಿನ ಮೂಲಗಳ ಮೂರರಲ್ಲಿ ಒಂದು ಭಾಗವನ್ನು ಬಾಧಿಸಿದ ಮೊದಲ ನಾಲ್ಕು ತುತೂರಿಗಳ ಊದುವಿಕೆಯಿಂದ ಘೋಷಿಸಲ್ಪಟ್ಟ ಬಾಧೆಗಳಿಗೆ ಇದು ಸಂಬಂಧಿಸಿದೆ. (ಪ್ರಕಟನೆ 8:7-12) ನಾಲ್ಕು ದೇವದೂತರು ಇನ್ನೂ ಮುಂದೆ ಹೋಗುತ್ತಾರೆ. ಕ್ರೈಸ್ತಪ್ರಪಂಚದ ಆತ್ಮಿಕವಾಗಿ ಸತ್ತ ಪರಿಸ್ಥಿತಿಯನ್ನು ಪೂರ್ಣವಾಗಿ ಬಹಿರಂಗಪಡಿಸುವುದರ ಮೂಲಕ ಅವರು “ಸಂಹಾರ” ಮಾಡುತ್ತಾರೆ. ತುತೂರಿಯ ಘೋಷಣೆಗಳು 1922 ರಿಂದ ಹಿಡಿದು ಸದ್ಯದ ಸಮಯದ ವರೆಗೆ ಧ್ವನಿಸಲ್ಪಟ್ಟು ಇದನ್ನು ಪೂರೈಸಿವೆ.

5. ಕ್ರೈಸ್ತಪ್ರಪಂಚದ ಸಂಬಂಧದಲ್ಲಿ ಆರನೆಯ ತುತೂರಿಯ ಧ್ವನಿಯು 1927 ರಲ್ಲಿ ಹೇಗೆ ಪುನಃ ಧ್ವನಿಸಲ್ಪಟ್ಟಿತು?

5 ನೆನಪಿನಲ್ಲಿಡಿರಿ, ಸ್ವರ್ಗೀಯ ದೇವದೂತನು ಈಗ ತಾನೇ ಆರನೆಯ ತುತೂರಿಯನ್ನು ಧ್ವನಿಸಿದ್ದಾನೆ. ಅದಕ್ಕೆ ಪ್ರತಿಕ್ರಿಯೆಯಲ್ಲಿ, ಬೈಬಲ್‌ ವಿದ್ಯಾರ್ಥಿಗಳ ವಾರ್ಷಿಕ ಅಂತಾರಾಷ್ಟ್ರೀಯ ಅಧಿವೇಶನಗಳ ಸರಣಿಯಲ್ಲಿ ಆರನೆಯದ್ದು, ಕೆನಡದ ಆಂಟಾರಿಯೋವಿನ ಟೊರಾಂಟೊದಲ್ಲಿ ಜರುಗಿತು. ಆದಿತ್ಯವಾರ, ಜುಲೈ 24, 1927 ರಂದು ಜರುಗಿದ ಕಾರ್ಯಕ್ರಮವು 53 ರೇಡಿಯೋ ಸ್ಟೇಶನುಗಳ ಸರಣಿಯ ಮೂಲಕ ಪ್ರಸಾರಗೊಳಿಸಲ್ಪಟ್ಟಿತು, ಆ ಸಮಯದ ಅತಿ ದೊಡ್ಡ ಆಕಾಶವಾಣಿಯ ಪ್ರಸಾರ ಇದಾಗಿತ್ತು. ಆ ಭಾಷಣದ ಸಂದೇಶವು ಪ್ರಾಯಶಃ ಅನೇಕ ಲಕ್ಷಾಂತರಗಳ ದೊಡ್ಡ ಸಭೆಗೆ ತಲುಪಿರಬೇಕು. ಕ್ರೈಸ್ತಪ್ರಪಂಚವು ಆತ್ಮಿಕವಾಗಿ ಸತ್ತಿದೆಯೆಂದು ಮೊದಲು ಒಂದು ಶಕ್ತಿಯುತ ಠರಾವು ಬಯಲುಪಡಿಸಿತು ಮತ್ತು ಈ ಆಮಂತ್ರಣವನ್ನು ನೀಡಿತು: “ತಳಮಳದ ಈ ತಾಸಿನಲ್ಲಿ ‘ಕ್ರೈಸ್ತಪ್ರಪಂಚವನ್ನು’ ಯಾ ‘ವ್ಯವಸ್ಥಾಪಿತ ಕ್ರೈಸ್ತತ್ವವನ್ನು’ ಜನರು ಸದಾಕಾಲಕ್ಕೂ ತ್ಯಜಿಸಲು ಮತ್ತು ನಿರಾಕರಿಸಲು ಮತ್ತು ಅದರಿಂದ ಪೂರ್ಣವಾಗಿ ತಿರುಗಲು ಯೆಹೋವ ದೇವರು ಆಜ್ಞೆಮಾಡುತ್ತಾನೆ. . . . ಜನರು ತಮ್ಮ ಹೃದಯದ ಭಯಭಕ್ತಿ ಮತ್ತು ವಿಧೇಯತೆಯನ್ನು ಪೂರ್ಣವಾಗಿ ಯೆಹೋವ ದೇವರಿಗೆ ಮತ್ತು ಆತನ ರಾಜ ಮತ್ತು ರಾಜ್ಯಕ್ಕೆ ಕೊಡುವವರಾಗಲಿ.” ಅದನ್ನು ಹಿಂಬಾಲಿಸಿದ ಸಾರ್ವಜನಿಕ ಭಾಷಣದ ಮುಖ್ಯ ವಿಷಯವು “ಜನರಿಗಾಗಿ ಸ್ವಾತಂತ್ರ್ಯ” ಎಂದಾಗಿತ್ತು. ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷ, ಜೆ. ಎಫ್‌. ರಥರ್‌ಫರ್ಡ್‌ ಇದನ್ನು ತಮ್ಮ ರೂಢಿಯ ಬಿರುಸಾದ ಶೈಲಿಯಲ್ಲಿ ನೀಡಿದರು, ಇದು ಯೋಹಾನನು ಮುಂದೆ ದರ್ಶನದಲ್ಲಿ ಅವಲೋಕಿಸಿದ “ಬೆಂಕಿ ಹೊಗೆ ಮತ್ತು ಗಂಧಕ”ಕ್ಕೆ ಅನುರೂಪವಾಗಿತ್ತು.

6. ಯೋಹಾನನು ಅನಂತರ ನೋಡಿದ ಕುದುರೆಯ ದಂಡನ್ನು ಅವನು ಹೇಗೆ ವರ್ಣಿಸುತ್ತಾನೆ?

6“ಮತ್ತು ಕುದುರೆಯ ದಂಡಿನವರ ಸಂಖ್ಯೆಯು ಇಪ್ಪತ್ತುಕೋಟಿ: ಅವುಗಳ ಸಂಖ್ಯೆಯನ್ನು ನಾನು ಕೇಳಿದೆನು. ಮತ್ತು ದರ್ಶನದಲ್ಲಿ ಕುದುರೆಗಳನ್ನು ಮತ್ತು ಅವುಗಳ ಮೇಲೆ ಕುಳಿತವರನ್ನು ನಾನು ಹೀಗೆ ಕಂಡೆನು: ಅವರಿಗೆ ಬೆಂಕಿ-ಕೆಂಪು ಮತ್ತು ಧೂಮ್ರ ನೀಲಿ ಮತ್ತು ಗಂಧಕ-ಹಳದಿಯ ಕವಚಗಳಿದ್ದವು; ಮತ್ತು ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು, ಮತ್ತು ಅವುಗಳ ಬಾಯಿಂದ ಬೆಂಕಿ ಮತ್ತು ಹೊಗೆ ಮತ್ತು ಗಂಧಕ ಹೊರಡುತ್ತಿತ್ತು. ಅವುಗಳ ಬಾಯಿಂದ ಹೊರಟ ಈ ಮೂರು ಉಪದ್ರವಗಳಿಂದ, ಬೆಂಕಿ ಮತ್ತು ಹೊಗೆ ಮತ್ತು ಗಂಧಕದಿಂದ ಮನುಷ್ಯರಲ್ಲಿ ಮೂರನೆಯ ಒಂದು ಭಾಗವು ಕೊಲ್ಲಲ್ಪಟ್ಟಿತು.”—ಪ್ರಕಟನೆ 9:16-18, NW.

7, 8. (ಎ) ಯಾರ ಮಾರ್ಗದರ್ಶನದ ಕೆಳಗೆ ಕುದುರೆಯ ದಂಡಿನವರು ಅಬ್ಬರಿಸುತ್ತಾ ಮುಂದೊತ್ತುತ್ತಿದ್ದಾರೆ? (ಬಿ) ಅದಕ್ಕಿಂತ ಮುಂಚೆ ಬಂದಂತಹ ಮಿಡಿತೆಗಳಿಗೆ ಕುದುರೆಯ ದಂಡಿನವರು ಯಾವ ರೀತಿಗಳಲ್ಲಿ ಸರಿಹೋಲುತ್ತಾರೆ?

7 ಕುದುರೆಯ ದಂಡು ನಾಲ್ಕು ದೇವದೂತರುಗಳ ಮಾರ್ಗದರ್ಶಕ ನಿರ್ದೇಶನದ ಕೆಳಗೆ ಅಬ್ಬರಿಸುತ್ತಾ ಹೊರಡುತ್ತವೆಂದು ವ್ಯಕ್ತವಾಗುತ್ತದೆ. ಎಂತಹ ಒಂದು ಭಯಚಕಿತ ದೃಶ್ಯ! ಇಂತಹ ಒಂದು ಕುದುರೆಯ ದಂಡಿನ ಆಕ್ರಮಣದ ಗುರಿಹಲಗೆಯಾಗಿ ನೀವಿರುವುದಾದರೆ, ನಿಮ್ಮ ಪ್ರತಿಕ್ರಿಯೆಯನ್ನು ಊಹಿಸಿರಿ! ಅದರ ತೋರಿಕೆಯು ತಾನೇ ನಿಮ್ಮ ಹೃದಯದಲ್ಲಿ ದಿಗಿಲನ್ನುಂಟುಮಾಡುವುದು. ಆದಾಗ್ಯೂ, ಇದಕ್ಕೆ ಮುಂಚೆ ಬಂದ ಮಿಡಿತೆಗಳ ದಳಕ್ಕೆ ಈ ಕುದುರೆಯ ದಂಡು ಎಷ್ಟು ಹೋಲುತ್ತದೆಂದು ನೀವು ಗಮನಿಸಿದ್ದೀರೋ? ಮಿಡಿತೆಗಳು ಕುದುರೆಗಳ ಹಾಗೆ ಇದ್ದವು; ಕುದುರೆಯ ದಂಡಿನಲ್ಲಿ ಕುದುರೆಗಳು ಇವೆ. ಹಾಗಾದರೆ, ಎರಡೂ ದೇವಪ್ರಭುತ್ವ ಹೋರಾಟದಲ್ಲಿ ಒಳಗೂಡಿವೆ. (ಜ್ಞಾನೋಕ್ತಿ 21:31) ಮಿಡಿತೆಗಳಿಗೆ ಸಿಂಹದಂತೆ ಹಲ್ಲುಗಳು ಇದ್ದವು; ಕುದುರೆಯ ದಂಡಿನ ಕುದುರೆಗಳಿಗೆ ಸಿಂಹಗಳಂತೆ ತಲೆಗಳಿವೆ. ಆದುದರಿಂದ ಎರಡೂ ಯೂದಾ ಕುಲದ ಧೈರ್ಯಶಾಲೀ ಸಿಂಹವಾಗಿರುವ ಅವರ ಮುಂದಾಳು, ದಂಡನಾಯಕ ಮತ್ತು ಮಾದರಿ ಆಗಿರುವ ಯೇಸು ಕ್ರಿಸ್ತನೊಂದಿಗೆ ಒಟ್ಟಿಗೆ ಜೋಡಿಸಲ್ಪಡುತ್ತಾರೆ.—ಪ್ರಕಟನೆ 5:5; ಜ್ಞಾನೋಕ್ತಿ 28:1.

8 ಮಿಡಿತೆಗಳು ಮತ್ತು ಕುದುರೆಯ ದಂಡುಗಳು ಎರಡೂ ಯೆಹೋವನ ನ್ಯಾಯತೀರ್ಪಿನ ಕೆಲಸದಲ್ಲಿ ಭಾಗವಹಿಸುತ್ತವೆ. ಕ್ರೈಸ್ತಪ್ರಪಂಚಕ್ಕೆ ವಿಪತ್ತನ್ನು ಮತ್ತು ನಾಶನಕಾರಿ ಬೆಂಕಿಯನ್ನು ಮುನ್‌ಸೂಚಿಸುವ ಹೊಗೆಯೊಳಗಿಂದ ಮಿಡಿತೆಗಳು ಹೊರಬಂದವು; ಕುದುರೆಗಳ ಬಾಯಿಗಳಿಂದ ಬೆಂಕಿ, ಹೊಗೆ, ಗಂಧಕಗಳು ಹೊರಡುತ್ತಿದ್ದವು. ಮಿಡಿತೆಗಳಿಗೆ ಕಬ್ಬಿಣದ ಕವಚಗಳಿದ್ದವು; ನೀತಿಯ ಕಡೆಗೆ ಅಭೇದ್ಯವಾದ ಭಯಭಕ್ತಿಯಿಂದ ತಮ್ಮ ಹೃದಯಗಳು ರಕ್ಷಿಸಲ್ಪಟ್ಟಿವೆ ಎಂದು ಇದು ಸೂಚಿಸಿತು; ಕೆಂಪು, ನೀಲಿ ಮತ್ತು ಹಳದಿ ಬಣ್ಣದ ಕವಚಗಳನ್ನು ಕುದುರೆಯ ದಂಡು ಧರಿಸಿದ್ದು, ಇವು ಕುದುರೆಗಳ ಬಾಯಿಂದ ಹೊರಚಿಮ್ಮುವ ಬೆಂಕಿ, ಹೊಗೆ, ಮತ್ತು ಗಂಧಕಗಳಂತಹ ಮಾರಕವಾದ ಸಂದೇಶಗಳನ್ನು ಪ್ರತಿಬಿಂಬಿಸುತ್ತಿದ್ದವು. (ಹೋಲಿಸಿರಿ ಆದಿಕಾಂಡ 19:24, 28; ಲೂಕ 17:29, 30.) ಚೇಳುಗಳಂತೆ ಮಿಡಿತೆಗಳಿಗೆ ಪೀಡಿಸಲು ಬಾಲಗಳು ಇದ್ದವು; ಕುದುರೆಗಳಿಗೆ ಕೊಲ್ಲುವುದಕ್ಕೆ ಸರ್ಪಗಳ ಹಾಗೆ ಬಾಲಗಳು ಇವೆ! ಮಿಡಿತೆಗಳಿಂದ ಆರಂಭಿಸಲ್ಪಟ್ಟದ್ದನ್ನು ಕುದುರೆಯ ದಂಡಿನವರು ಅತಿ ತೀವ್ರತೆಯಿಂದ ಪೂರ್ಣಗೊಳಿಸಲು ಬೆಂಬತ್ತಿ ಹೋಗಲಿದ್ದಾರೆಂದು ತೋರುತ್ತದೆ.

9. ಕುದುರೆಯ ದಂಡು ಯಾವುದನ್ನು ಸಂಕೇತಿಸುತ್ತದೆ?

9 ಆದುದರಿಂದ, ಈ ಕುದುರೆಯ ದಂಡು ಏನನ್ನು ಸೂಚಿಸುತ್ತದೆ? ‘ಪೀಡಿಸುವ ಮತ್ತು ನೋಯಿಸುವ’ ಅಧಿಕಾರದೊಂದಿಗೆ ಅಭಿಷಿಕ್ತ ಯೋಹಾನ ವರ್ಗವು ಕ್ರೈಸ್ತಪ್ರಪಂಚದ ವಿರುದ್ಧ ದೈವಿಕ ರೋಷದ ಯೆಹೋವನ ನ್ಯಾಯತೀರ್ಪಿನ ತುತೂರಿಯಂತಿರುವ ಘೋಷಣೆಯನ್ನು ಮಾಡಲು ಪ್ರಾರಂಭಿಸಿದಂತೆಯೇ, ಅದೇ ಜೀವಂತ ಗುಂಪು “ಸಂಹಾರ” ಮಾಡಲು ಅಂದರೆ ಕ್ರೈಸ್ತಪ್ರಪಂಚ ಮತ್ತು ಅದರ ವೈದಿಕರು ಪೂರ್ಣವಾಗಿ ಆತ್ಮಿಕವಾಗಿ ಸತ್ತಿದ್ದಾರೆ, ಯೆಹೋವನಿಂದ ತೊರೆಯಲ್ಪಟ್ಟಿದ್ದಾರೆ ಮತ್ತು ನಿತ್ಯ ನಾಶನದ “ಬೆಂಕೀಕೊಂಡದಲ್ಲಿ” ಹಾಕಲ್ಪಡುವುದಕ್ಕೆ ಸಿದ್ಧವಾಗಿದ್ದಾರೆ ಎಂದು ತಿಳಿಯಪಡಿಸಲು ಉಪಯೋಗಿಸಲ್ಪಡುವುದನ್ನು ನಾವು ನಿರೀಕ್ಷಿಸಸಾಧ್ಯವಿದೆ. ನಿಜವಾಗಿಯೂ, ಮಹಾ ಬಾಬೆಲಿನ ಎಲ್ಲವು ನಾಶವಾಗಲೇ ಬೇಕು. (ಪ್ರಕಟನೆ 9:5, 10; 18:2, 8; ಮತ್ತಾಯ 13:41-43) ಆದಾಗ್ಯೂ, ಅವಳ ನಾಶನದ ಮುಂಚೆ, ಕ್ರೈಸ್ತಪ್ರಪಂಚದ ಮೃತಪ್ರಾಯ ಅವಸ್ಥೆಯನ್ನು ಬಹಿರಂಗಪಡಿಸಲು “ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿ” ಯನ್ನು ಯೋಹಾನ ವರ್ಗವು ಉಪಯೋಗಿಸುತ್ತದೆ. ನಾಲ್ಕು ದೇವದೂತರು ಮತ್ತು ಕುದುರೆಗಳ ಸವಾರರು “ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಮೇಲೆ” ಈ ಸಾಂಕೇತಿಕ ಕೊಲ್ಲುವಿಕೆಗೆ ಮಾರ್ಗದರ್ಶನವನ್ನು ಕೊಡುತ್ತಾರೆ. (ಎಫೆಸ 6:17; ಪ್ರಕಟನೆ 9:15, 18) ಇದು ರಾಜ್ಯ ಘೋಷಕರ ಭಯಗೌರವ ಹುಟ್ಟಿಸುವ ಗುಂಪು ಯುದ್ಧದಲ್ಲಿ ಆಕ್ರಮಣಗೈಯಲು ಮುಂದೆ ಬರುವಾಗ, ಕರ್ತನಾದ ಯೇಸು ಕ್ರಿಸ್ತನ ಮೇಲ್ವಿಚಾರಣೆಯ ಕೆಳಗೆ ಯೋಗ್ಯ ವ್ಯವಸ್ಥಾಪನೆ ಮತ್ತು ದೇವ ಪ್ರಭುತ್ವ ಮಾರ್ಗದರ್ಶನವನ್ನು ಸೂಚಿಸುತ್ತದೆ.

ಇಪ್ಪತ್ತು ಕೋಟಿ

10. ಕುದುರೆಯ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಇದ್ದದ್ದು ಯಾವ ಅರ್ಥದಲ್ಲಿ?

10 ಕುದುರೆಯ ದಂಡಿನವರ ಸಂಖ್ಯೆ ಇಪ್ಪತ್ತು ಕೋಟಿಯಾಗಿ (ಟೂ ಮಿರಿಯಡ್ಸ್‌ ಆಫ್‌ ಮಿರಿಯಡ್ಸ್‌) ಹೇಗಿರಸಾಧ್ಯವಿದೆ? ಒಂದು ಮಿರಿಯಡ್‌ ಅಂದರೆ ಅಕ್ಷರಾರ್ಥವಾಗಿ 10,000. ಆದುದರಿಂದ ಎರಡು ಮಿರಿಯಡ್ಸ್‌ ಆಫ್‌ ಮಿರಿಯಡ್ಸ್‌ ಅಂದರೆ 20 ಕೋಟಿ. * ಸಂತೋಷಕರವಾಗಿ, ಈಗ ರಾಜ್ಯ ಪ್ರಚಾರಕರು ಲಕ್ಷಾಂತರ ಸಂಖ್ಯೆಯಲ್ಲಿರುವುದಾದರೂ ಅವರ ಸಂಖ್ಯೆಯು ಕೋಟಿಗಟ್ಟಲೆ ಸಂಖ್ಯೆಗೆ ಅತಿ ದೂರದಲ್ಲಿದೆ! ಆದರೂ ಅರಣ್ಯಕಾಂಡ 10:36 ರಲ್ಲಿ ಮೋಶೆಯ ಮಾತುಗಳನ್ನು ನೆನಪಿಸಿರಿ: “ಯೆಹೋವನೇ, ಇಸ್ರಾಯೇಲ್ಯರ ಲಕ್ಷಾಂತರ [ಮಿರಿಯಡ್ಸ್‌ ಆಫ್‌ ತೌಸೆಂಡ್ಸ್‌, NW] ಕುಟುಂಬಗಳ ಮಧ್ಯದಲ್ಲಿ ತಿರಿಗಿ ಬರೋಣವಾಗಲಿ.” (ಹೋಲಿಸಿರಿ ಆದಿಕಾಂಡ 24:60.) ಇದು ಅಕ್ಷರಶಃ ‘ಇಸ್ರಾಯೇಲ್ಯರ ಲಕ್ಷಾಂತರ [ಟೆನ್ಸ್‌ ಆಫ್‌ ಮಿಲಿಯನ್ಸ್‌] ಮಂದಿಗಳ ಕಡೆಗೆ ತಿರಿಗಿ ಬರುವುದು’ ಎಂಬರ್ಥವನ್ನು ಕೊಡುತ್ತದೆ. ಆದಾಗ್ಯೂ ಮೋಶೆಯ ದಿನಗಳಲ್ಲಿ ಇಸ್ರಾಯೇಲ್ಯರು ಕೇವಲ ಇಪ್ಪತ್ತು ಯಾ ಮೂವತ್ತು ಲಕ್ಷಗಳಷ್ಟು ಮಂದಿ ಇದ್ದರು. ಹಾಗಾದರೆ, ಮೋಶೆಯು ಹೇಳುವುದಾದರೂ ಏನು? ಇಸ್ರಾಯೇಲ್ಯರು ಲೆಕ್ಕಿಸಲ್ಪಡುವ ಬದಲು “ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಉಸುಬಿನಂತೆಯೂ” ಅಗಣಿತರಾಗಿರಬೇಕೆಂಬುದು ಅವನ ಮನಸ್ಸಿನಲ್ಲಿತ್ತೆಂಬುದಕ್ಕೆ ಯಾವುದೇ ಸಂದೇಹವಿಲ್ಲ. (ಆದಿಕಾಂಡ 22:17; 1 ಪೂರ್ವಕಾಲವೃತ್ತಾಂತ 27:23) ಆದ್ದರಿಂದ ಆತನು “ಲಕ್ಷಾಂತರ” (“ಮಿರಿಯಡ್‌”) ವನ್ನು ಒಂದು ಬಹು ದೊಡ್ಡ ಸಂಖ್ಯೆ, ಆದರೆ ನಮೂದಿಸದ ಸಂಖ್ಯೆಯನ್ನು ಸೂಚಿಸಲು ಈ ಶಬ್ದವನ್ನು ಬಳಸಿದನು. ಹೀಗೆ, ದ ನ್ಯೂ ಇಂಗ್ಲಿಷ್‌ ಬೈಬಲ್‌ ಈ ವಚನವನ್ನು ಈ ರೀತಿಯಲ್ಲಿ ಭಾಷಾಂತರಿಸುತ್ತದೆ: “ಅಗಣಿತ ಸಾವಿರಾರು ಸಂಖ್ಯೆಯ ಇಸ್ರಾಯೇಲ್ಯರ ಕರ್ತನೇ, ವಿಶ್ರಮಿಸು.” ಇದು ಗ್ರೀಕ್‌ ಮತ್ತು ಹೀಬ್ರು ಶಬ್ದಕೋಶಗಳಲ್ಲಿ ಕಂಡುಬರುವಂತಹ “ಮಿರಿಯಡ್‌” ಶಬ್ದದ ಎರಡನೆಯ ವ್ಯಾಖ್ಯಾನದೊಂದಿಗೆ ಒಪ್ಪುತ್ತದೆ: “ಒಂದು ಎಣಿಸಲಾಗದ ದೊಡ್ಡ ಸಮೂಹ” ಮತ್ತು “ಒಂದು ಮಹಾ ಜನಸಮೂಹ.”—ದ ನ್ಯೂ ಥೇಯರ್ಸ್‌ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದ ನ್ಯೂ ಟೆಸ್ಟಮೆಂಟ್‌; ಜಿಸಿ ನಿಯಸ್‌ರ ಎ ಹೀಬ್ರು ಆ್ಯಂಡ್‌ ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌, ಎಡರ್ಡ್ವ್‌ ರಾಬಿನ್ಸನ್‌ರಿಂದ ತರ್ಜುಮೆಗೊಳಿಸಲ್ಪಟ್ಟದ್ದು.

11. ಸಾಂಕೇತಿಕ ಅರ್ಥದಲ್ಲಿ ಕೂಡ ಕೋಟ್ಯನುಕೋಟಿಗಳಾಗಲು ಯೋಹಾನ ವರ್ಗದವರಿಗೆ ಯಾವುದರ ಆವಶ್ಯಕತೆಯಿರುವುದು?

11 ಆದಾಗ್ಯೂ, ಭೂಮಿಯ ಮೇಲೆ ಇನ್ನೂ ಉಳಿದಿರುವ ಯೋಹಾನ ವರ್ಗದವರು 10,000 ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುತ್ತಾರೆ—ಅಕ್ಷರಾರ್ಥವಾಗಿ ಒಂದು ಕೋಟಿಗಿಂತಲೂ ಕಡಿಮೆ. ಇವರು ಕುದುರೆಯ ದಂಡಿನ ಅಗಣಿತ ಸಾವಿರಾರು ಸಂಖ್ಯೆಗೆ ಹೇಗೆ ಹೋಲಿಸಲ್ಪಡಬಹುದು? ಸಾಂಕೇತಿಕ ಅರ್ಥದಲ್ಲೂ ಅವರು ಕೋಟ್ಯನುಕೋಟಿಯಾಗಲು ಅವರಿಗೆ ಬೆಂಬಲದ ಆವಶ್ಯಕತೆಯಿಲ್ಲವೆ? ಅವರಿಗೆ ಬೇಕಾಗಿರುವದೇ ಅದು ಮತ್ತು ಯೆಹೋವನ ಅಪರಿಮಿತ ದಯೆಯಿಂದ ಅವರು ಇದನ್ನು ಪಡೆದಿದ್ದಾರೆ! ಇವರು ಎಲ್ಲಿಂದ ಬಂದಿದ್ದಾರೆ?

12, 13. ಇಸವಿ 1918-1935ರ ವರೆಗೆ ಆದ ಯಾವ ಐತಿಹಾಸಿಕ ಬೆಳವಣಿಗೆಗಳು ಬೆಂಬಲಗಳ ಮೂಲವನ್ನು ಸೂಚಿಸಿದವು?

12 ಯೋಹಾನ ವರ್ಗವು 1918 ರಿಂದ 1922ರ ವರೆಗೆ “ಈಗ ಜೀವಿಸುತ್ತಿರುವ ಲಕ್ಷಾಂತರ ಮಂದಿ ಇನ್ನೆಂದಿಗೂ ಸಾಯರು” ಎನ್ನುವ ಸಂತೋಷದ ಒಂದು ಪ್ರತೀಕ್ಷೆಯನ್ನು ದುಃಖತಪ್ತ ಮಾನವಕುಲಕ್ಕೆ ಎತ್ತಿ ಹಿಡಿಯತೊಡಗಿತು. ಮತ್ತಾಯ 25:31-34ರ ಕುರಿಗಳು ದೇವರ ರಾಜ್ಯದ ಕೆಳಗೆ ಭೂಮಿಯ ಮೇಲೆ ಜೀವವನ್ನು ಬಾಧ್ಯವಾಗಿ ಪಡೆಯುವರೆಂದು ಕೂಡ 1923 ರಲ್ಲಿ ತಿಳಿಸಲಾಯಿತು. ಅಂತಾರಾಷ್ಟ್ರೀಯ ಅಧಿವೇಶನವೊಂದರಲ್ಲಿ ಜನಾಂಗಗಳಿಗಾಗಿ ಸ್ವಾತಂತ್ರ್ಯ (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು 1927 ರಲ್ಲಿ ಬಿಡುಗಡೆಗೊಳಿಸಲಾಯಿತು, ಇದರಲ್ಲಿ ಸಮಾನರೂಪದ ನಿರೀಕ್ಷೆಯನ್ನು ಎತ್ತಿಹಿಡಿಯಲಾಯಿತು. ಯಥಾರ್ಥವಂತರಾದ ಯೆಹೋನಾದಾಬ ವರ್ಗ ಮತ್ತು ಕ್ರೈಸ್ತಪ್ರಪಂಚದ ದುಃಖಕರ ಆತ್ಮಿಕ ಸ್ಥಿತಿಗಾಗಿ “ನರಳಿ ಗೋಳಾಡುತ್ತಿರುವವರು” ಭೂಜೀವನದ ಪ್ರತೀಕ್ಷೆ ಹೊಂದಿದ್ದ ಸಾಂಕೇತಿಕ ಕುರಿಗಳಿಗೆ ಸಮಾನರಾಗಿದ್ದಾರೆಂದು 1930ರ ಆರಂಭದಲ್ಲಿ ತೋರಿಸಲಾಯಿತು. (ಯೆಹೆಜ್ಕೇಲ 9:4; 2 ಅರಸುಗಳು 10:15, 16) ಇಂಥವರನ್ನು ಆಧುನಿಕ ದಿನದ “ಆಶ್ರಯ ನಗರ” ಗಳಿಗೆ ನಡಿಸುತ್ತಾ ಆಗಸ್ಟ್‌ 15, 1934ರ ದ ವಾಚ್‌ಟವರ್‌ ತಿಳಿಸಿದ್ದು: “ಯೆಹೋನಾದಾಬ ವರ್ಗದವರು ದೇವರ ತುತೂರಿಯ ಧ್ವನಿಯನ್ನು ಕೇಳಿದ್ದಾರೆ ಮತ್ತು ಯೆಹೋವನ ಸಂಸ್ಥೆಗೆ ಧಾವಿಸುತ್ತಾ ಮತ್ತು ದೇವ ಜನರೊಂದಿಗೆ ಸಹವಸಿಸುತ್ತಾ ಎಚ್ಚರಿಕೆಯನ್ನು ಪರಿಪಾಲಿಸಿದ್ದಾರೆ ಮತ್ತು ಅವರು ಅಲ್ಲಿ ನೆಲಸಲೇ ಬೇಕು.”—ಅರಣ್ಯಕಾಂಡ 35:6.

13 ಯೆಹೋನಾದಾಬ ವರ್ಗದವರನ್ನು 1935 ರಲ್ಲಿ ಅಮೆರಿಕದ ವಾಷಿಂಗ್ಟನ್‌ ಡಿ.ಸಿ. ಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗಲು ವಿಶೇಷವಾಗಿ ಆಮಂತ್ರಿಸಲಾಯಿತು. ಅಲ್ಲಿ, ಶುಕ್ರವಾರ ಮೇ 31 ರಂದು ಜೆ. ಎಫ್‌. ರಥರ್‌ಫರ್ಡ್‌ ನೀಡಿದ ಪ್ರಖ್ಯಾತ ಭಾಷಣವಾದ “ಮಹಾ ಸಮೂಹ” ದಲ್ಲಿ ಪ್ರಕಟನೆ 7:9 (ಕಿಂಗ್‌ ಜೇಮ್ಸ್‌ ವರ್ಷನ್‌)ರ ಗುಂಪು ಮತ್ತಾಯ 25:33ರ ಕುರಿಗಳೇ—ಭೂನಿರೀಕ್ಷೆಗಳನ್ನು ಹೊಂದಿದ ಸಮರ್ಪಿತ ಗುಂಪು—ಆಗಿವೆಯೆಂದು ಸ್ಪಷ್ಟವಾಗಿ ಅವರು ತೋರಿಸಿಕೊಟ್ಟರು. ಬರಲಿರುವ ವಿಷಯಗಳ ಮುನ್‌-ಸೂಚಕದೋಪಾದಿ, ಆ ಅಧಿವೇಶನದಲ್ಲಿ 840 ಹೊಸ ಸಾಕ್ಷಿಗಳು ದೀಕ್ಷಾಸ್ನಾನ ಪಡೆದರು, ಇವರಲ್ಲಿ ಹೆಚ್ಚಿನವರು ಮಹಾ ಸಮೂಹದವರಾಗಿದ್ದರು. *

14. ಸಾಂಕೇತಿಕ ಕುದುರೆಯ ದಂಡಿನ ಆಕ್ರಮಣದಲ್ಲಿ ಮಹಾ ಸಮೂಹದವರಿಗೆ ಭಾಗವಿರುವುದೋ, ಮತ್ತು 1963 ರಲ್ಲಿ ಯಾವ ನಿರ್ಧಾರವು ವ್ಯಕ್ತಪಡಿಸಲ್ಪಟ್ಟಿತು?

14 ಸಾವಿರದ ಒಂಬೈನೂರ ಇಪ್ಪತ್ತೆರಡರಿಂದ ಕೆಲಸ ಆರಂಭಿಸಿದ ಮತ್ತು 1927 ರಲ್ಲಿನ ಟೊರಾಂಟೊ ಅಧಿವೇಶನದಲ್ಲಿ ವಿಶಿಷ್ಟ ಒತ್ತನ್ನು ಪಡೆದ ಮಹಾ ಸಮೂಹದವರಿಗೆ ಈ ಕುದುರೆಯ ದಂಡಿನ ಆಕ್ರಮಣದಲ್ಲಿ ಏನಾದರೊಂದು ಭಾಗವಿದೆಯೋ? ನಾಲ್ಕು ದೇವದೂತರ, ಅಭಿಷಿಕ್ತ ಯೋಹಾನ ವರ್ಗದವರ ಮಾರ್ಗದರ್ಶನದ ಕೆಳಗೆ ನಿಶ್ಚಯವಾಗಿಯೂ ಭಾಗ ಇದೆ! ಲೋಕದ ಸುತ್ತಲೂ ನಡೆದ 1963ರ “ನಿತ್ಯವಾದ ಶುಭ ವರ್ತಮಾನ” ಸಮ್ಮೇಳನದಲ್ಲಿ ಅದು ಯೋಹಾನ ವರ್ಗದೊಂದಿಗೆ ಒಂದು ಉತ್ತೇಜಿಸುವ ಠರಾವಿನಲ್ಲಿ ಸೇರಿಕೊಂಡಿತು. ಲೋಕವು “ಇಂದಿನ ವರೆಗೆ ತಿಳಿಯಲಾರದೆ ಇರುವ ಲೋಕ ಸಂಕಟದ ಒಂದು ಭೂಕಂಪನವನ್ನು ಎದುರಿಸುತ್ತದೆಂದು ಮತ್ತು ಅದರ ಎಲ್ಲಾ ರಾಜಕೀಯ ಸಂಸ್ಥೆಗಳು ಮತ್ತು ಅದರ ಆಧುನಿಕ ಧಾರ್ಮಿಕ ಬಾಬೆಲ್‌ ಪುಡಿಪುಡಿಯಾಗಲಿರುವುದು” ಎಂದು ಇದು ಪ್ರಕಟಿಸಿತು. “ನಾವು ಪಕ್ಷಪಾತವಿಲ್ಲದೆ ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ನಿತ್ಯ ಶುಭ ವರ್ತಮಾನದ ಕುರಿತು ಮತ್ತು ಆತನ ವೈರಿಗಳಿಗೆ ಬಾಧೆಗಳಂತೆ ಇರುವ ಆದರೆ ಆತ್ಮದಿಂದ ಮತ್ತು ಸತ್ಯದಿಂದ ಸೃಷ್ಟಿಕರ್ತನಾದ ದೇವರನ್ನು ಸ್ವೀಕಾರಾರ್ಹ ರೀತಿಯಲ್ಲಿ ಆರಾಧಿಸಲು ಬಯಸುವ ಎಲ್ಲಾ ವ್ಯಕ್ತಿಗಳ ವಿಮೋಚನೆಗಾಗಿ ಜಾರಿಗೊಳಿಸುವ ಆತನ ನ್ಯಾಯತೀರ್ಪುಗಳ ಕುರಿತು ಎಲ್ಲಾ ಮನುಷ್ಯರಿಗೆ ಪ್ರಚುರಪಡಿಸುವುದನ್ನು ಯಾವಾಗಲೂ ಮುಂದುವರಿಸುವೆವು,” ಎಂಬ ನಿರ್ಧಾರವನ್ನು ವ್ಯಕ್ತಪಡಿಸಲಾಯಿತು. ಈ ಠರಾವು ಲೋಕದಾದ್ಯಂತ ಕೂಡಿಬಂದ 24 ಸಮ್ಮೇಳನಗಳಲ್ಲಿ 95 ಶೇಕಡಕ್ಕಿಂತಲೂ ಅಧಿಕಾಂಶ ಮಹಾ ಸಮೂಹದವರಾಗಿದ್ದ 4,54,977 ಅಧಿವೇಶನಗಾರರಿಂದ ಉತ್ಸುಕತೆಯಿಂದ ಅಂಗೀಕರಿಸಲಾಯಿತು.

15. (ಎ) ಯೆಹೋವನು ಕ್ಷೇತ್ರದಲ್ಲಿ ಉಪಯೋಗಿಸಿದ ಮಹಾ ಸಮೂಹದವರ ಕೆಲಸಗಾರರ ಬಲದ ಪ್ರತಿಶತ 1988 ರಲ್ಲಿ ಎಷ್ಟಾಗಿತ್ತು? (ಬಿ) ಯೋಹಾನ 17:20, 21 ರಲ್ಲಿರುವ ಯೇಸುವಿನ ಪ್ರಾರ್ಥನೆಯು ಯೋಹಾನ ವರ್ಗದೊಂದಿಗೆ ಮಹಾ ಸಮೂಹದವರ ಐಕ್ಯವನ್ನು ಹೇಗೆ ವ್ಯಕ್ತಪಡಿಸಿತು?

15 ಕ್ರೈಸ್ತ ಪ್ರಪಂಚದ ಮೇಲೆ ಬಾಧೆಗಳನ್ನು ಸುರಿಸುವುದರಲ್ಲಿ ಯೋಹಾನ ವರ್ಗದೊಂದಿಗೆ ಮಹಾ ಸಮೂಹದವರು ಅಭ್ಯಂತರವಿಲ್ಲದ ಐಕ್ಯವನ್ನು ಪ್ರಕಟಿಸುವುದನ್ನು ಮುಂದರಿಸಿದ್ದಾರೆ. ಕ್ಷೇತ್ರದಲ್ಲಿ ಯೆಹೋವನು ಉಪಯೋಗಿಸುತ್ತಿದ್ದ ಕಾರ್ಯನಡಿಸುವವರ ಬಲದಲ್ಲಿ 99.7 ಶೇಕಡಕ್ಕಿಂತಲೂ ಹೆಚ್ಚು ಮಂದಿ 1988 ರಲ್ಲಿ ಮಹಾ ಸಮೂಹದವರಾಗಿದ್ದರು. ಅದರ ಸದಸ್ಯರು ಯೋಹಾನ ವರ್ಗದೊಂದಿಗೆ ಪೂರ್ಣಹೃದಯದಿಂದ ಸಹಮತದಲ್ಲಿರುತ್ತಾರೆ, ಇವರ ಕುರಿತು ಯೇಸುವು ಯೋಹಾನ 17:20, 21 ರಲ್ಲಿ ಪ್ರಾರ್ಥಿಸಿದ್ದು: “ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ.” ಯೇಸುವಿನ ಕೆಳಗೆ ಅಭಿಷಿಕ್ತ ಯೋಹಾನ ವರ್ಗವು ಮುಂದಾಳುತನ ವಹಿಸುವಾಗ, ಇಡೀ ಮಾನವ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಕುದುರೆಯ ದಂಡಿನ ಆಕ್ರಮಣದಲ್ಲಿ ಹುರುಪಿನ ಮಹಾ ಸಮೂಹವು ಅವರೊಂದಿಗೆ ಪಾಲಿಗರಾಗುತ್ತದೆ! *

16. (ಎ) ಸಾಂಕೇತಿಕ ಕುದುರೆಗಳ ಬಾಯಿಗಳನ್ನು ಮತ್ತು ಬಾಲಗಳನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) ಯೆಹೋವನ ಜನರ ಬಾಯಿಗಳು ಸೇವೆಗೆ ಹೇಗೆ ಸಿದ್ಧಗೊಳಿಸಲ್ಪಟ್ಟಿವೆ? (ಸಿ) “ಅವುಗಳ ಬಾಲಗಳು ಸರ್ಪಗಳಂತೆ” ಇದ್ದವು ಎಂಬ ನಿಜತ್ವಕ್ಕೆ ಯಾವುದು ಅನುರೂಪವಾಗುತ್ತದೆ?

16 ಆ ಕುದುರೆಯ ದಂಡಿನವರಿಗೆ ಹೋರಾಟಕ್ಕೆ ಆಯುಧಗಳ ಆವಶ್ಯಕತೆಯಿದೆ ಮತ್ತು ಯೆಹೋವನು ಇದನ್ನು ಎಷ್ಟು ಅದ್ಭುತಕರವಾಗಿ ಒದಗಿಸಿದ್ದಾನೆ! ಯೋಹಾನನು ಇದನ್ನು ವರ್ಣಿಸುತ್ತಾನೆ: “ಏಕೆಂದರೆ ಆ ಕುದುರೆಗಳ ಅಧಿಕಾರವು ಅವುಗಳ ಬಾಯಿಗಳಲ್ಲಿ ಮತ್ತು ಬಾಲಗಳಲ್ಲಿದೆ; ಏಕೆಂದರೆ ಅವುಗಳ ಬಾಲಗಳು ಸರ್ಪಗಳಂತೆ ಇದ್ದು ಅವುಗಳಿಗೆ ತಲೆಗಳಿವೆ, ಮತ್ತು ಇವುಗಳಿಂದ ಅವು ಕೇಡು ಮಾಡುತ್ತವೆ.” (ಪ್ರಕಟನೆ 9:19, NW)  ಯೆಹೋವನು ತನ್ನ ಸಮರ್ಪಿತ, ಸ್ನಾನಿತ ಕ್ರೈಸ್ತರನ್ನು ತನ್ನ ಸೇವೆಗೋಸ್ಕರ ನೇಮಿಸಿದ್ದಾನೆ. ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಇತರ ಸಭಾಕೂಟಗಳ ಮತ್ತು ಶಾಲೆಗಳ ಮೂಲಕವಾಗಿ, ಆತನು ಅವರಿಗೆ ವಾಕ್ಯವನ್ನು ಹೇಗೆ ಸಾರಬೇಕೆಂದು ಕಲಿಸಿದ್ದಾನೆ, ಆ ಮೂಲಕ ಅವರು “ಶಿಕ್ಷಿತರ ನಾಲಗೆ” ಯೊಂದಿಗೆ ಅಧಿಕಾರಯುಕ್ತವಾಗಿ ಮಾತಾಡುವಂತೆ ಸಾಧ್ಯವಾಗಿದೆ. ಆತನು ತನ್ನ ಮಾತುಗಳನ್ನು ಅವರ ಬಾಯಲ್ಲಿ ಹಾಕಿದ್ದಾನೆ ಮತ್ತು ಆತನ ನ್ಯಾಯತೀರ್ಪುಗಳನ್ನು “ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ” ತಿಳಿಯಪಡಿಸಲು ಆತನು ಅವರನ್ನು ಕಳುಹಿಸಿದ್ದಾನೆ. (2 ತಿಮೊಥೆಯ 4:2; ಯೆಶಾಯ 50:4; 61:2; ಯೆರೆಮೀಯ 1:9, 10; ಅ. ಕೃತ್ಯಗಳು 20:20, NW) ಹಲವಾರು ವರ್ಷಗಳಿಂದಲೂ ಸಾವಿರಾರು ಲಕ್ಷಾಂತರ ಬೈಬಲುಗಳನ್ನು, ಪುಸ್ತಕಗಳನ್ನು, ಬ್ರೋಷರ್‌ಗಳನ್ನು ಮತ್ತು ಪತ್ರಿಕೆಗಳನ್ನು ಹಂಚುವ ಮೂಲಕ ಯೋಹಾನ ವರ್ಗ ಮತ್ತು ಮಹಾ ಸಮೂಹವು “ಬಾಲಗಳಿಗೆ” ಸದೃಶವಾಗಿರುವ, ಚುಚ್ಚುವ ಸಂದೇಶವನ್ನು ಬಿಟ್ಟುಹೋಗುತ್ತದೆ. ಯಾರಿಗೆ ಯೆಹೋವನಿಂದ ಬರಲಿರುವ “ಕೇಡಿನ” ಕುರಿತು ಸಲಹೆ ನೀಡಲ್ಪಟ್ಟಿತ್ತೋ ಆ ವಿರೋಧಕರಿಗೆ ಈ ಕುದುರೆಯ ದಂಡಿನ ಸೇನೆಯು ನಿಜವಾಗಿ ಇಪ್ಪತ್ತು ಕೋಟಿಯಂತೆ ತೋರುತ್ತದೆ.—ಯೋವೇಲ 2:4-6 ಹೋಲಿಸಿರಿ.

17. ಕೆಲಸವು ನಿಷೇಧ ಮಾಡಲ್ಪಟ್ಟಿರುವ ಕಾರಣದಿಂದ, ಸಾಹಿತ್ಯಗಳನ್ನು ಹಂಚಲು ಸಾಧ್ಯವಾಗದಿರುವ ಸ್ಥಳಗಳಲ್ಲಿ ಕುದುರೆಯ ದಂಡಿನವರ ಆಕ್ರಮಣದಲ್ಲಿ ಯೆಹೋವನ ಸಾಕ್ಷಿಗಳಿಗೆ ಪಾಲಿದೆಯೋ? ವಿವರಿಸಿರಿ.

17 ಯೆಹೋವನ ಸಾಕ್ಷಿಗಳ ಕೆಲಸವು ಎಲ್ಲಿ ನಿಷೇಧಿತವಾಗಿದೆಯೋ ಆ ಸ್ಥಳಗಳಲ್ಲಿ ಇರುವ ಸಹೋದರರು ಕುದುರೆಯ ದಂಡಿನ ಒಂದು ಅತಿ ಹುರುಪುಳ್ಳ ವರ್ಗವನ್ನು ರೂಪಿಸುತ್ತಾರೆ. ತೋಳಗಳ ಮಧ್ಯೆ ಕುರಿಗಳಂತೆ, ಅವರು “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರಲೇಬೇಕು. ಯೆಹೋವನಿಗೆ ವಿಧೇಯತೆಯಲ್ಲಿ, ಅವರು ಕಂಡುಕೇಳಿದ ಸಂಗತಿಗಳ ಕುರಿತು ಮಾತಾಡುವುದನ್ನು ನಿಲ್ಲಿಸಲಾರರು. (ಮತ್ತಾಯ 10:16; ಅ. ಕೃತ್ಯಗಳು 4:19, 20; 5:28, 29, 32) ಬಹಿರಂಗವಾಗಿ ಹಂಚಲು ಅವರಲ್ಲಿ ಸ್ವಲ್ಪ ಅಥವಾ ಯಾವುದೇ ಮುದ್ರಿತ ಪ್ರಕಾಶನಗಳಿಲ್ಲದಿರುವುದರಿಂದ ಕುದುರೆಯ ದಂಡಿನ ಆಕ್ರಮಣದಲ್ಲಿ ಅವರಿಗೆ ಯಾವುದೇ ಭಾಗವಿಲ್ಲವೆಂದು ನಾವು ತೀರ್ಮಾನಿಸತಕ್ಕದ್ದೋ? ಇಲ್ಲವೇ ಇಲ್ಲ! ಅವರಿಗೆ ಬಾಯಿಗಳು ಇವೆ ಮತ್ತು ಬೈಬಲ್‌ ಸತ್ಯವನ್ನು ವ್ಯಕ್ತಪಡಿಸಲು ಅವನ್ನು ಉಪಯೋಗಿಸುವ ಅಧಿಕಾರವು ಯೆಹೋವನಿಂದ ಇದೆ. ಇದನ್ನು ಅವರು ಅನೌಪಚಾರಿಕವಾಗಿಯೂ, ಮನವೊಪ್ಪಿಸುವ ರೀತಿಯಲ್ಲಿಯೂ ಮಾಡುತ್ತಾರೆ. ಅವರು ಬೈಬಲಿನ ಅಭ್ಯಾಸಗಳನ್ನು ಸ್ಥಾಪಿಸುತ್ತಾ “ಬಹುಜನರನ್ನು ಸದ್ಧರ್ಮಿಗಳಾಗಿ” ಮಾಡುತ್ತಾರೆ, (ದಾನಿಯೇಲ 12:3) ತಮ್ಮ ಬಾಲಗಳಿಂದ ಚುಚ್ಚುವಂತಹ ಬಲವಾಗಿ ತಟ್ಟುವ ಸಾಹಿತ್ಯಗಳನ್ನು ಅವರು ಹಿಂದೆ ಬಿಟ್ಟುಬರಲು ಸಾಧ್ಯವಿಲ್ಲದಿದ್ದರೂ, ಅವರು ಜಾಣ್ಮೆಯಿಂದ ಮತ್ತು ವಿವೇಚನೆಯೊಂದಿಗೆ ಯೆಹೋವನ ನಿರ್ದೋಷೀಕರಣದ ದಿನದ ಸಾಮೀಪ್ಯತೆಯ ಕುರಿತು ಸಾಕ್ಷಿ ಕೊಡುವಾಗ, ಅವರ ಬಾಯಿಗಳಿಂದ ಸಾಂಕೇತಿಕ ಬೆಂಕಿ, ಹೊಗೆ ಮತ್ತು ಗಂಧಕ ಹೊರಡುತ್ತದೆ.

18. ಬಾಧಿಸುವ ಸಂದೇಶಗಳನ್ನು ಮುದ್ರಿತ ಪುಟಗಳಲ್ಲಿ ಎಷ್ಟು ಭಾಷೆಗಳಲ್ಲಿ ಮತ್ತು ಎಷ್ಟು ಸಂಖ್ಯೆಯಲ್ಲಿ ಈ ಕುದುರೆಯ ದಂಡಿನವರು ಹಂಚಿದ್ದಾರೆ?

18 ಇತರ ಸ್ಥಳಗಳಲ್ಲಿ, ರಾಜ್ಯ ಸಾಹಿತ್ಯವು ಕ್ರೈಸ್ತಪ್ರಪಂಚದ ಬಾಬೆಲಿನ ತತ್ವಗಳನ್ನು ಮತ್ತು ಮಾರ್ಗಗಳನ್ನು ಬಹಿರಂಗಪಡಿಸುವ, ಅವಳಿಗೆ ಅರ್ಹವಾಗಿರುವ ಕೇಡನ್ನು ಸಾಂಕೇತಿಕ ರೀತಿಯಲ್ಲಿ ತರುವುದನ್ನು ಮುಂದುವರಿಸುತ್ತದೆ. ಸದ್ಯೋಚಿತವಾಗಿರುವ ಮುದ್ರಣ ಕ್ರಮವಿಧಾನಗಳನ್ನು ಉಪಯೋಗಿಸುವುದರ ಮೂಲಕ, ಈ ಅಸಂಖ್ಯಾತ ಕುದುರೆಯ ದಂಡಿನವರಿಗೆ 1987 ಕ್ಕಿಂತ ಮುಂಚಿನ 50 ವರ್ಷಗಳಲ್ಲಿ ಭೂಮಿಯ 200 ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಬೈಬಲುಗಳನ್ನು, ಪುಸ್ತಕಗಳನ್ನು, ಪತ್ರಿಕೆಗಳನ್ನು ಮತ್ತು ಬ್ರೋಷರ್‌ಗಳನ್ನು 7,82,10,78,415 ರಷ್ಟು ಬೃಹತ್‌ ಸಂಖ್ಯೆಯಲ್ಲಿ ಹಂಚಲು ಸಾಧ್ಯವಾಯಿತು—ಅನೇಕ ಸಲ ಅಕ್ಷರಶಃ ಇಪ್ಪತ್ತು ಕೋಟಿಗಳಿಗಿಂತಲೂ ಎಷ್ಟೋ ಹೆಚ್ಚು. ಆ ಬಾಲಗಳು ಎಂತಹ ಚುಚ್ಚನ್ನು ಕೊಟ್ಟಿವೆ!

19, 20. (ಎ) ಬಾಧಿಸುವ ಸಂದೇಶಗಳ ನಿರ್ದಿಷ್ಟ ಗುರಿಹಲಗೆಯು ಕ್ರೈಸ್ತಪ್ರಪಂಚವಾಗಿರುವುದಾದರೂ, ಕ್ರೈಸ್ತಪ್ರಪಂಚದ ಭ್ರಷ್ಟ ಪ್ರಭಾವದಿಂದ ಹೊರಗಿರುವ ದೇಶಗಳಲ್ಲಿ ಕೆಲವರು ಹೇಗೆ ಪ್ರತಿಕ್ರಿಯಿಸಿದ್ದಾರೆ? (ಬಿ) ಜನಸಾಮಾನ್ಯರ ಪ್ರತಿಕ್ರಿಯೆಯನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ?

19 ಈ ಬಾಧಿಸುವ ಸಂದೇಶವು “ಮನುಷ್ಯರಲ್ಲಿ ಮೂರರಲ್ಲಿ ಒಂದು ಭಾಗ” ದವರನ್ನು ಕೊಲ್ಲಬೇಕೆಂದು ಯೆಹೋವನು ಉದ್ದೇಶಿಸಿದನು. ಆದುದರಿಂದ ಅದರ ನಿರ್ದಿಷ್ಟ ಗುರಿಯು ಕ್ರೈಸ್ತಪ್ರಪಂಚವಾಗಿದೆ. ಆದರೆ ಇದು ಕ್ರೈಸ್ತಪ್ರಪಂಚಕ್ಕೂ ಎಷ್ಟೋ ಆಚೆಗಿನ ದೇಶಗಳ ವರೆಗೆ—ಎಲ್ಲಿ ಕ್ರೈಸ್ತಪ್ರಪಂಚದ ಧರ್ಮಗಳ ಕಪಟಾಚರಣೆಯು ಸುಪ್ರಸಿದ್ಧವೋ ಅಂತಹ ದೇಶಗಳೂ ಸೇರಿವೆ—ಮುಟ್ಟಿದೆ. ಈ ಭ್ರಷ್ಟ ಧಾರ್ಮಿಕ ಸಂಸ್ಥೆಯ ಬಾಧೆಯನ್ನು ನೋಡಿದರ್ದ ಪರಿಣಾಮವಾಗಿ ಜನರು ಯೆಹೋವನ ಸಾಮೀಪ್ಯಕ್ಕೆ ಸೆಳೆಯಲ್ಪಟ್ಟಿರುತ್ತಾರೋ? ಅನೇಕರು ಸೆಳೆಯಲ್ಪಟ್ಟಿರುತ್ತಾರೆ! ಕ್ರೈಸ್ತಪ್ರಪಂಚದ ಭ್ರಷ್ಟ ಪ್ರಭಾವರಂಗದಿಂದ ಹೊರಗೆ ಜೀವಿಸುವ ಸ್ಥಳಗಳಲ್ಲಿ ದೀನ ಮತ್ತು ಪ್ರೀತಿಗೆ ಅರ್ಹರಾದ ಜನರ ನಡುವೆ ಸಿದ್ಧ ಪ್ರತಿಕ್ರಿಯೆಯು ತೋರಿಸಲ್ಪಟ್ಟಿದೆ. ಆದರೆ ಸಾಮಾನ್ಯ ಜನರ ಕುರಿತು ಯೋಹಾನನು ಅವರ ಪ್ರತಿಕ್ರಿಯೆಯನ್ನು ವರ್ಣಿಸುವುದು: “ಆದರೆ ಈ ಉಪದ್ರವಗಳಿಂದ ಕೊಲ್ಲಲ್ಪಟ್ಟಿರದ ಮಿಕ್ಕುಳಿದ ಮನುಷ್ಯರು ತಮ್ಮ ಕೈಕೆಲಸಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ; ಇದರಿಂದಾಗಿ ಅವರು ದೆವ್ವಗಳನ್ನು ಮತ್ತು ಬಂಗಾರ, ಬೆಳ್ಳಿ, ತಾಮ್ರ, ಶಿಲೆ ಮತ್ತು ಮರದಿಂದ ಮಾಡಿದ ನೋಡಲಾರದ, ಕೇಳಲಾರದ, ನಡೆಯಲಾರದ ವಿಗ್ರಹಗಳನ್ನು ಆರಾಧಿಸಲಾರದೆ ಇದ್ದರು, ಮತ್ತು ಅವರು ತಮ್ಮ ಕೊಲೆಗಳಿಗಾಗಲಿ, ತಮ್ಮ ಪ್ರೇತವ್ಯವಹಾರಾಚಾರಗಳಿಗಾಗಲಿ, ತಮ್ಮ ಜಾರತ್ವಕ್ಕಾಗಲಿ, ತಮ್ಮ ಕಳ್ಳತನಗಳಿಗಾಗಲಿ ಪಶ್ಚಾತ್ತಾಪ ಪಡಲಿಲ್ಲ.” (ಪ್ರಕಟನೆ 9:20, 21, NW)  ಇಂಥ ಪಶ್ಚಾತ್ತಾಪಪಡದವರ ಲೋಕ ಮತಾಂತರವೊಂದು ಇರುವುದಿಲ್ಲ. ತಮ್ಮ ದುಷ್ಟ ಮಾರ್ಗಗಳಲ್ಲಿ ಮುಂದರಿಯುವ ಎಲ್ಲರೂ ಯೆಹೋವನಿಂದ ಆತನ ನಿರ್ದೋಷೀಕರಣದ ಮಹಾ ದಿನದಲ್ಲಿ ಪ್ರತಿಕೂಲ ನ್ಯಾಯತೀರ್ಪನ್ನು ಎದುರಿಸಲೇಬೇಕು. ಆದರೆ “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು.”—ಯೋವೇಲ 2:32; ಕೀರ್ತನೆ 145:20; ಅ. ಕೃತ್ಯಗಳು 2:20, 21.

20 ನಾವೀಗ ತಾನೇ ಚರ್ಚಿಸಿದವುಗಳು ಎರಡನೆಯ ವಿಪತ್ತಿನ ಭಾಗವಾಗಿದೆ. ಅನುಸರಿಸಿ ಬರುವ ಅಧ್ಯಾಯಗಳಲ್ಲಿ ನಾವು ನೋಡಲಿರುವಂತೆ, ಈ ವಿಪತ್ತು ತನ್ನ ಓಟವನ್ನು ಕೊನೆಗಾಣಿಸುವ ಮುಂಚೆ ಇನ್ನೂ ಹೆಚ್ಚು ವಿಷಯಗಳು ಬರಲಿವೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 10 “ಎರಡು ಮಿರಿಯಡ್ಸ್‌ ಆಫ್‌ ಮಿರಿಯಡ್ಸ್‌” ಸಂಖ್ಯೆಯ ಕುರಿತು ಹೆನ್ರಿ ಬಾರ್‌ಕ್ಲೇ ಸ್ವೀಟ್‌ರವರ ಕಾಮಂಟರಿ ಆನ್‌ ರೆವಲೇಶನ್‌ ಎಂಬ ಪುಸ್ತಕ ಗಮನಿಸವುದು: “ಈ ಮಹಾ ಪ್ರಮಾಣದ ಸಂಖ್ಯೆಯು ಅಕ್ಷರಾರ್ಥವಾದ ನೆರವೇರಿಕೆಯನ್ನು ಅನ್ವೇಷಿಸಲು ನಮ್ಮನ್ನು ನಿಷೇಧಿಸುತ್ತದೆ, ಮತ್ತು ಹಿಂಬಾಲಿಸಿ ಬರುವ ವರ್ಣನೆಯು ಈ ತೀರ್ಮಾನವನ್ನು ಬೆಂಬಲಿಸುತ್ತದೆ.”

^ ಪ್ಯಾರ. 13 ಇದರ ಹಿಂದಿನ 119-26 ಪುಟಗಳನ್ನು ನೋಡಿರಿ; 1932 ರಲ್ಲಿ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತವಾದ ವಿಂಡಿಕೇಶನ್‌, ಪುಸ್ತಕ ಮೂರ, ಇದರ ಪುಟಗಳು 83-4ನ್ನು ಸಹ ನೋಡಿರಿ.

^ ಪ್ಯಾರ. 15 ಮಿಡಿತೆಗಳಿಗೆ ಅಸದೃಶವಾಗಿ, ಯೋಹಾನನಿಂದ ನೋಡಲ್ಪಟ್ಟ ಕುದುರೆಯ ದಂಡಿನ ಸೇನೆಯು “ಚಿನ್ನದಂತಹ ಕಿರೀಟಗಳಂತೆ ತೋರಿಬಂದ” ಏನನ್ನೋ ಧರಿಸಿರಲಿಲ್ಲ. (ಪ್ರಕಟನೆ 9:7) ದೇವರ ಸ್ವರ್ಗೀಯ ರಾಜ್ಯದಲ್ಲಿ ಇಂದು ಕುದುರೆಯ ದಂಡಿನ ಬಹುದೊಡ್ಡ ಭಾಗವಾಗಿರುವ ಮಹಾ ಸಮೂಹಕ್ಕೆ ಆಳುವ ನಿರೀಕ್ಷೆಯಿಲ್ಲವೆಂಬ ನಿಜತ್ವದೊಂದಿಗೆ ಇದು ಹೊಂದಿಕೆಯಲ್ಲಿದೆ.

[ಅಧ್ಯಯನ ಪ್ರಶ್ನೆಗಳು]

[Picture on page 149]

ಆರನೆಯ ತುತೂರಿಯ ಊದುವಿಕೆಯು ಎರಡನೆಯ ವಿಪತ್ತನ್ನು ಪರಿಚಯಿಸುತ್ತದೆ

[Pictures on page 150, 151]

ನಾಲ್ಕು ದೇವದೂತರು ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಕುದುರೆಯ ದಂಡುಗಳ ದಾಳಿಯನ್ನು ನಿರ್ದೇಶಿಸುತ್ತಾರೆ

[ಪುಟ 264 ರಲ್ಲಿರುವ ಚಿತ್ರಗಳು]

ಈ ಅಗಣಿತ ಕುದುರೆಯ ದಂಡು ಅಸಂಖ್ಯಾತ ಲಕ್ಷಾಂತರ ಬೈಬಲಾಧಾರಿತ ಪ್ರಕಾಶನಗಳನ್ನು ಹಂಚಿದೆ

[Picture on page 154]

ಮಿಕ್ಕುಳಿದ ಮನುಷ್ಯರು ಪಶ್ಚಾತ್ತಾಪಪಡಲಿಲ್ಲ