ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರೌದ್ರವು ಮುಕ್ತಾಯಕ್ಕೆ ತರಲ್ಪಡುವುದು

ದೇವರ ರೌದ್ರವು ಮುಕ್ತಾಯಕ್ಕೆ ತರಲ್ಪಡುವುದು

ಅಧ್ಯಾಯ 32

ದೇವರ ರೌದ್ರವು ಮುಕ್ತಾಯಕ್ಕೆ ತರಲ್ಪಡುವುದು

1. ಏಳು ಪಾತ್ರೆಗಳು ಅಂತಿಮವಾಗಿ ಹೊಯ್ಯಲ್ಪಟ್ಟಾಗ ಏನು ಸಂಭವಿಸುವುದು, ಮತ್ತು ಪಾತ್ರೆಗಳ ಸಂಬಂಧದಲ್ಲಿ ಈಗ ಯಾವ ಪ್ರಶ್ನೆಗಳು ಏಳುತ್ತವೆ?

ಯೋಹಾನನು ಈಗಾಗಲೇ ಏಳು ಪಾತ್ರೆಗಳನ್ನು ಹೊಯ್ಯಲು ಅಧಿಕಾರ ಪಡೆದ ದೇವದೂತರನ್ನು ಪರಿಚಯಿಸಿದ್ದಾನೆ. “ಇವು ಕಡೇ ಉಪದ್ರವಗಳು; ಇವುಗಳಲ್ಲಿ ದೇವರ ಕೋಪವು ಮುಗಿದಿರುವುದು” ಎಂದು ಆತನು ನಮಗೆ ಹೇಳುತ್ತಾನೆ. (ಪ್ರಕಟನೆ 15:1; 16:1) ಭೂಮಿಯ ಮೇಲಿನ ದುಷ್ಟತ್ವಕ್ಕೆ ಯೆಹೋವನ ದಂಡನೆಗಳನ್ನು ಪ್ರಕಟಿಸುವ ಈ ಉಪದ್ರವಗಳು, ಅವುಗಳನ್ನು ಮುಕ್ತಾಯಘಟ್ಟಕ್ಕೆ ತರುವ ತನಕ ಹೊಯ್ಯಲ್ಪಡಬೇಕು. ಅವುಗಳು ಮುಗಿದಾಗ, ದೇವರ ನ್ಯಾಯತೀರ್ಪು ಜಾರಿಯಾಗಿರುವುದು. ಸೈತಾನನ ಲೋಕವು ಇನ್ನೆಂದೂ ಇಲ್ಲವಾಗುವುದು! ಮಾನವ ಕುಲಕ್ಕೆ ಮತ್ತು ಸದ್ಯದ ದುಷ್ಟ ವ್ಯವಸ್ಥೆಯ ಅಧಿಪತಿಗಳಿಗೆ ಈ ಉಪದ್ರವಗಳು ಯಾವ ಮುನ್‌ಸೂಚನೆಯನ್ನು ಕೊಡುತ್ತವೆ? ನಾಶವಾಗಲಿರುವ ಈ ಲೋಕದೊಂದಿಗೆ ಉಪದ್ರವಕ್ಕೀಡಾಗುವುದನ್ನು ಕ್ರೈಸ್ತರು ಹೇಗೆ ಹೋಗಲಾಡಿಸಬಲ್ಲರು? ಇವು ಅತ್ಯಾವಶ್ಯಕ ಪ್ರಶ್ನೆಗಳು, ಮತ್ತು ಈಗ ಅವುಗಳು ಉತ್ತರಿಸಲ್ಪಡಲಿವೆ. ನೀತಿಯ ವಿಜಯಕ್ಕೋಸ್ಕರ ಆಶಿಸುವವರೆಲ್ಲರೂ ಯೋಹಾನನು ಮುಂದಕ್ಕೇನು ನೋಡಲಿದ್ದಾನೊ ಅದರಲ್ಲಿ ತೀವ್ರಾಸಕ್ತಿಯುಳ್ಳವರಾಗಿರಬೇಕು.

“ಭೂಮಿ”ಯ ವಿರುದ್ಧ ಯೆಹೋವನ ರೋಷ

2. ಮೊದಲನೆಯ ದೇವದೂತನು ಭೂಮಿಗೆ ತನ್ನ ಪಾತ್ರೆಯನ್ನು ಹೊಯಿದಾಗ ಏನು ಪರಿಣಮಿಸುತ್ತದೆ, ಮತ್ತು “ಭೂಮಿ” ಯಿಂದ ಏನು ಸಂಕೇತಿಸಲ್ಪಟ್ಟಿರುತ್ತದೆ?

2 ಮೊದಲನೆಯ ದೇವದೂತನು ಕಾರ್ಯೋನ್ಮುಖನಾಗುತ್ತಾನೆ! “ಮತ್ತು ಮೊದಲನೆಯವನು ಹೊರಟು ಹೋಗಿ ತನ್ನ ಪಾತ್ರೆಯನ್ನು ಭೂಮಿಗೆ ಹೊಯಿದನು. ಮತ್ತು ಕಾಡು ಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಮನುಷ್ಯರ ಮೇಲೆ ನೋಯಿಸುವ ಮತ್ತು ವಿಷಮಯ ಹುಣ್ಣು ಎದ್ದಿತು.” (ಪ್ರಕಟನೆ 16:2, NW) ಮೊದಲನೇ ತುತೂರಿ ಊದುವಿಕೆಯ ವಿಷಯದಲ್ಲಿ ಇದ್ದಂತೆ “ಭೂಮಿ”ಯು ಇಲ್ಲಿ, 4,000 ವರ್ಷಗಳ ಹಿಂದೆ ನಿಮ್ರೋದನ ಸಮಯದಿಂದ ಭೂಮಿಯ ಮೇಲೆ ಸೈತಾನನು ಕಟ್ಟಲು ಪ್ರಾರಂಭಿಸಿದ ಸ್ಥಿರವೆಂದು ತೋರುವ ರಾಜಕೀಯ ವ್ಯವಸ್ಥೆಯನ್ನು ಸೂಚಿಸುತ್ತದೆ.—ಪ್ರಕಟನೆ 8:7.

3. (ಎ) ಅನೇಕ ಸರಕಾರಗಳು ಯಾವುದು ಆರಾಧನೆಗೆ ಸಮಾನವಾಗಿದೆಯೋ ಅದನ್ನು ತಮ್ಮ ಪ್ರಜೆಗಳಿಂದ ಹೇಗೆ ಕೇಳಿದ್ದಾರೆ? (ಬಿ) ದೇವರ ರಾಜ್ಯದ ಬದಲಿಯಾಗಿ ಜನಾಂಗಗಳು ಏನನ್ನು ಉತ್ಪಾದಿಸಿದ್ದಾರೆ, ಮತ್ತು ಅದನ್ನು ಆರಾಧಿಸುವವರ ಮೇಲೆ ಪರಿಣಾಮವೇನು?

3 ಈ ಕಡೇ ದಿವಸಗಳಲ್ಲಿ, ತಮ್ಮ ಪ್ರಜೆಗಳಿಂದ ಯಾವುದು ಆರಾಧನೆಯಾಗಿದೆಯೋ ಅದನ್ನು ಕೇಳಿಕೊಂಡು, ರಾಜ್ಯವನ್ನು ದೇವರಿಗಿಂತಲೂ ಯಾ ಬೇರೆ ಯಾವುದೇ ನಿಷ್ಠೆಗಿಂತಲೂ ಮೇಲೆ ಮಹಿಮೆಗೇರಿಸಲ್ಪಡಬೇಕೆಂದು ಅನೇಕ ಸರಕಾರಗಳು ಆಗ್ರಹ ಮಾಡಿವೆ. (2 ತಿಮೊಥೆಯ 3:1; ಹೋಲಿಸಿರಿ ಲೂಕ 20:25; ಯೋಹಾನ 19:15.) ಜನಾಂಗಗಳು 1914 ರಿಂದ ತಮ್ಮ ಯುವಕರನ್ನು, ಆಧುನಿಕ ಇತಿಹಾಸದ ಪುಟಗಳನ್ನು ರಕ್ತಮಯವನ್ನಾಗಿ ಮಾಡಿರುವ ಪೂರ್ಣ ಯುದ್ಧೋದ್ಯಮಕ್ಕಾಗಿ, ಯುದ್ಧಮಾಡಲು ಯಾ ಯುದ್ಧಕ್ಕೆ ಅಣಿಯಾಗಲು, ಸೇನೆಗೆ ಭರ್ತಿಮಾಡುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಕರ್ತನ ದಿನದಲ್ಲಿ, ಜನಾಂಗಗಳು ದೇವರ ರಾಜ್ಯಕ್ಕೆ ಬದಲಿಯಾಗಿ ಮೃಗದ ವಿಗ್ರಹ—ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿಯಾದ ಸಂಯುಕ್ತ ರಾಷ್ಟ್ರ ಸಂಘ—ವನ್ನು ಕೂಡ ಉತ್ಪಾದಿಸಿದ್ದಾರೆ. ಈ ಮಾನವ ನಿರ್ಮಿತ ಸಂಸ್ಥೆಯು ಜನಾಂಗಗಳ ಶಾಂತಿಗಾಗಿರುವ ಏಕೈಕ ನಿರೀಕ್ಷೆಯೆಂದು ಇತ್ತೀಚೆಗಿನ ಪೋಪರು ಮಾಡಿದಂತೆ ಘೋಷಿಸುವುದು ಎಂತಹ ದೇವದೂಷಣೆಯಾಗಿದೆ! ಅದು ದೇವರ ರಾಜ್ಯವನ್ನು ಖಡಾಖಂಡಿತವಾಗಿ ವಿರೋಧಿಸುತ್ತದೆ. ಅದನ್ನು ಆರಾಧಿಸುವವರಾದರೋ ಆತ್ಮಿಕವಾಗಿ ಅಶುದ್ಧರಾಗುತ್ತಾರೆ, ಮೋಶೆಯ ದಿನಗಳಲ್ಲಿ ಯೆಹೋವನನ್ನು ವಿರೋಧಿಸಿದ ಐಗುಪ್ತ್ಯರು ಹೇಗೆ ಅಕ್ಷರಾರ್ಥಕವಾಗಿ ಬೊಕ್ಕೆ ಮತ್ತು ಹುಣ್ಣುಗಳಿಂದ ಬಾಧಿಸಲ್ಪಟ್ಟರೋ ಹಾಗೆಯೇ ಹುಣ್ಣು ಹಿಡಿದವರಾಗುತ್ತಾರೆ.—ವಿಮೋಚನಕಾಂಡ 9:10, 11.

4. (ಎ) ದೇವರ ಕೋಪದ ಮೊದಲ ಪಾತ್ರೆಯಲ್ಲಿರುವ ವಸ್ತು ಯಾವುದನ್ನು ಬಲವಾಗಿ ಒತ್ತಿಹೇಳುತ್ತದೆ? (ಬಿ) ಕಾಡು ಮೃಗದ ಗುರುತನ್ನು ಸ್ವೀಕರಿಸುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?

4 ಈ ಪಾತ್ರೆಯಲ್ಲಿರುವುದು ಮಾನವರ ಮುಂದೆ ಇರುವ ಆಯ್ಕೆಯನ್ನು ಬಲವಾಗಿ ಒತ್ತಿಹೇಳುತ್ತದೆ. ಅವರು ಒಂದೇ ಲೋಕದ ಅಸಮ್ಮತಿಯನ್ನು ಇಲ್ಲವೆ ಯೆಹೋವನ ತಿರಸ್ಕಾರವನ್ನು ಅನುಭವಿಸಬೇಕು. “ಕಾಡು ಮೃಗದ ಹೆಸರು ಯಾ ಅದರ ಹೆಸರಿನ ಅಂಕೆಯ ಗುರುತು ಇಲ್ಲದಿರುವ ಯಾವನೊಬ್ಬನೂ ಕ್ರಯ ವಿಕ್ರಯಗಳನ್ನು ಮಾಡಕೂಡದು” ಎಂಬ ಹೇತುವಿನೊಂದಿಗೆ, ಕಾಡು ಮೃಗದ ಗುರುತನ್ನು ಪಡೆಯುವ ನಿರ್ಬಂಧಕ್ಕೆ ಮಾನವಕುಲವನ್ನು ಹಾಕಲಾಗಿದೆ. (ಪ್ರಕಟನೆ 13:16, 17) ಆದರೆ ಅದಕ್ಕೆ ಅವರು ತೆರಬೇಕಾದ ಬೆಲೆಯೊಂದಿದೆ! ಗುರುತನ್ನು ಸ್ವೀಕರಿಸುವವರನ್ನು “ನೋಯಿಸುವ ಮತ್ತು ವಿಷಮಯ ಹುಣ್ಣು” ವಿನಿಂದ ಬಾಧಿತರಾಗಿದವ್ದರಾಗಿ ಯೆಹೋವನು ಎಣಿಸುತ್ತಾನೆ. ಅವರು 1922 ರಿಂದ ಜೀವಂತ ದೇವರನ್ನು ತೊರೆದವರೆಂದು ಬಹಿರಂಗವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ರಾಜಕೀಯ ಯೋಜನೆಗಳಿಗೆ ಯಶಸ್ವಿ ಇಲ್ಲ, ಮತ್ತು ಅವರು ಬೇಗುದಿಯಿಂದ ನರಳುತ್ತಿದ್ದಾರೆ. ಆತ್ಮಿಕವಾಗಿ, ಅವರು ಅಶುದ್ಧರಾಗಿದ್ದಾರೆ. ಅವರು ಪಶ್ಚಾತ್ತಾಪಪಡದೆ ಇರುವುದಾದರೆ, ಈ “ನೋಯಿಸುವ” ರೋಗವು ಮಾರಕವಾಗಿರುವುದು, ಯಾಕಂದರೆ ಈಗ ಯೆಹೋವನ ನ್ಯಾಯತೀರ್ಪಿನ ದಿನವಾಗಿದೆ. ಲೋಕದ ವಿಷಯಗಳ ವ್ಯವಸ್ಥೆಯ ಒಂದು ಭಾಗವಾಗಿರುವ ಮತ್ತು ಆತನ ಕ್ರಿಸ್ತನ ಪಕ್ಕದಲ್ಲಿದ್ದು ಯೆಹೋವನನ್ನು ಸೇವಿಸುವ ನಡುವೆ ಒಂದು ತಟಸ್ಥ ನಿಲುವೇ ಇಲ್ಲ.—ಲೂಕ 11:23; ಹೋಲಿಸಿರಿ ಯಾಕೋಬ 4:4.

ಸಮುದ್ರವು ರಕ್ತವಾಗುತ್ತದೆ

5. (ಎ) ದೇವರ ಕೋಪದ ಎರಡನೆಯ ಪಾತ್ರೆಯು ಹೊಯ್ಯಲ್ಪಟ್ಟಾಗ ಏನಾಗುತ್ತದೆ? (ಬಿ) ಸಾಂಕೇತಿಕ ಸಮುದ್ರದ ನಿವಾಸಿಗಳೆಲ್ಲರನ್ನು ಯೆಹೋವನು ಹೇಗೆ ದೃಷ್ಟಿಸುತ್ತಾನೆ?

5 ದೇವರ ಕೋಪದ ಎರಡನೆಯ ಪಾತ್ರೆಯು ಈಗ ಹೊಯ್ಯಲ್ಪಡಬೇಕು. ಅದು ಮಾನವ ಕುಲಕ್ಕೆ ಯಾವ ಅರ್ಥದಲ್ಲಿರುವುದು? ಯೋಹಾನನು ನಮಗನ್ನುವುದು: “ಮತ್ತು ಎರಡನೆಯವನು ತನ್ನ ಪಾತ್ರೆಯನ್ನು ಸಮುದ್ರದ ಮೇಲೆ ಹೊಯಿದನು. ಮತ್ತು ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು, ಮತ್ತು ಜೀವಿಸುವ ಪ್ರತಿಯೊಂದು ಆತ್ಮ, ಹೌದು, ಸಮುದ್ರದಲ್ಲಿರುವ ವಸ್ತುಗಳು ಸತ್ತುಹೋದವು.” (ಪ್ರಕಟನೆ 16:3, NW)  ಎರಡನೆಯ ತುತೂರಿಯ ಊದುವಿಕೆಯಂತೆಯೇ, ಈ ಪಾತ್ರೆಯು “ಸಮುದ್ರ”ದ—ಯೆಹೋವನಿಂದ ದೂರತೊಲಗಿದ, ತಳಮಳದ, ಅಲ್ಲೋಲಕಲ್ಲೋಲದ, ಮನುಷ್ಯಕುಲದ ದಂಗೆಖೋರ ಗುಂಪಿನ—ವಿರುದ್ಧ ನಿರ್ದೇಶಿಸಲ್ಪಟ್ಟಿದೆ. (ಯೆಶಾಯ 57:20, 21; ಪ್ರಕಟನೆ 8:8, 9) ಯೆಹೋವನ ದೃಷ್ಟಿಯಲ್ಲಿ ಈ “ಸಮುದ್ರ”ವು ರಕ್ತದ ಹಾಗೆ, ಜೀವಜಂತುಗಳು ಅದರಲ್ಲಿ ಜೀವಿಸಲು ಅಯೋಗ್ಯವಾದದ್ದಾಗಿ ಇದೆ. ಆದುದರಿಂದ ಕ್ರೈಸ್ತರು ಲೋಕದ ಭಾಗವಾಗಿರಕೂಡದು. (ಯೋಹಾನ 17:14) ಯೆಹೋವನ ದೃಷ್ಟಿಯಲ್ಲಿ ಈ ಸಮುದ್ರದಲ್ಲಿ ನಿವಾಸಿಸುವ ಮಾನವ ಕುಲದವರೆಲ್ಲರೂ ಸತ್ತವರಾಗಿದ್ದಾರೆ ಎಂದು ದೇವರ ಕೋಪದ ಎರಡನೆಯ ಪಾತ್ರೆಯ ಹೊಯ್ಯುವಿಕೆಯು ಪ್ರಕಟಿಸುತ್ತದೆ. ಸಮುದಾಯದ ಜವಾಬ್ದಾರಿಕೆಯ ಕಾರಣದಿಂದ, ಮಾನವ ಕುಲವು ನಿರಪರಾಧಿ ರಕ್ತದ ಮಹಾ ಸುರಿಯುವಿಕೆಯ ದೋಷಿಯಾಗಿದೆ. ಯೆಹೋವನ ಕೋಪದ ದಿನವು ಆಗಮಿಸುವಾಗ, ಅವನ ಹತ್ಯಾಕಾರಿ ಶಕ್ತಿಗಳ ಹಸ್ತಗಳಲ್ಲಿ ಅವರು ಅಕ್ಷರಶಃ ಸಾಯಲಿದ್ದಾರೆ.—ಪ್ರಕಟನೆ 19:17, 18; ಹೋಲಿಸಿರಿ ಎಫೆಸ 2:1; ಕೊಲೊಸ್ಸೆ 2:13.

ಕುಡಿಯಲು ಅವರಿಗೆ ರಕ್ತವನ್ನು ಕೊಡುವುದು

6. ಮೂರನೆಯ ಪಾತ್ರೆಯು ಹೊಯ್ಯಲ್ಪಡುವಾಗ ಏನು ನಡೆಯುತ್ತದೆ, ಮತ್ತು ಒಬ್ಬ ದೇವದೂತನಿಂದ ಮತ್ತು ಯಜ್ಞವೇದಿಯಿಂದ ಯಾವ ಮಾತುಗಳು ಕೇಳಿಬರುತ್ತವೆ?

6 ದೇವರ ಕೋಪದ ಮೂರನೆಯ ಪಾತ್ರೆಯು, ಮೂರನೆಯ ತುತೂರಿ ಊದುವಿಕೆಯಂತೆಯೇ, ಸಿಹಿ ನೀರುಗಳ ಉಗಮಗಳ ಮೇಲೆ ಬಾಧೆಯನ್ನು ತರುತ್ತದೆ. “ಮತ್ತು ಮೂರನೆಯವನು ತನ್ನ ಪಾತ್ರೆಯನ್ನು ನದಿಗಳ ಮೇಲೆ ಮತ್ತು ನೀರುಗಳ ಬುಗ್ಗೆಗಳ ಮೇಲೆ ಹೊಯಿದನು; ಅವು ರಕ್ತವಾದವು. ಮತ್ತು ನೀರುಗಳ ಮೇಲಿನ ದೇವದೂತನು ಹೀಗೆ ಹೇಳುವುದನ್ನು ನಾನು ಕೇಳಿದೆನು: ‘ಸದಾ ಇರುವವನು ಮತ್ತು ಇದ್ದಾತನು, ನಿಷ್ಠಾವಂತನು ಆದ ನೀನು ನೀತಿವಂತನು ಯಾಕಂದರೆ ನೀನು ಈ ತೀರ್ಪುಗಳನ್ನು ಕೊಟ್ಟಿದ್ದೀ, ಯಾಕಂದರೆ ಅವರು ಪವಿತ್ರ ಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು ಮತ್ತು ಕುಡಿಯಲಿಕ್ಕೆ ಅವರಿಗೆ ನೀನು ರಕ್ತವನ್ನು ಕೊಟ್ಟಿದ್ದೀ. ಅವರು ಅದಕ್ಕೆ ಪಾತ್ರರು.’ ಮತ್ತು ಯಜ್ಞವೇದಿಯು ಹೇಳುವುದನ್ನು ನಾನು ಕೇಳಿದೆನು: ‘ಹೌದು, ಯೆಹೋವ ದೇವರೇ, ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ, ನೀತಿಯವುಗಳೂ ಆಗಿವೆ.’”—ಪ್ರಕಟನೆ 16:4-7, NW.

7. “ನದಿಗಳ ಮತ್ತು ನೀರುಗಳ ಬುಗ್ಗೆ” ಗಳು ಏನನ್ನು ಚಿತ್ರಿಸುತ್ತವೆ?

7 ಈ “ನದಿಗಳು ಮತ್ತು ನೀರುಗಳ ಬುಗ್ಗೆಗಳು” ಮಾನವ ವರ್ತನೆಗಳನ್ನೂ, ತೀರ್ಮಾನಗಳನ್ನೂ ಮಾರ್ಗದರ್ಶಿಸುವ ರಾಜಕೀಯ, ಆರ್ಥಿಕ, ವೈಜ್ಞಾನಿಕ, ಶೈಕ್ಷಣಿಕ, ಸಾಮಾಜಿಕ, ಮತ್ತು ಧಾರ್ಮಿಕ ತತ್ವಜ್ಞಾನಗಳಂತಹ ಈ ಲೋಕದಿಂದ ಸ್ವೀಕರಿಸಲ್ಪಟ್ಟ ಮಾರ್ಗದರ್ಶನ ಮತ್ತು ವಿವೇಕದ ಆಹ್ಲಾದಕರ ಉಗಮಗಳೆಂದು ಕರೆಯಲ್ಪಡುವವುಗಳನ್ನು ಚಿತ್ರಿಸುತ್ತವೆ. ಜೀವದ ಬುಗ್ಗೆಯಾದ ಯೆಹೋವನೆಡೆಗೆ ಜೀವದಾಯಕ ಸತ್ಯಕ್ಕಾಗಿ ನೋಡುವ ಬದಲು, ಮನುಷ್ಯರು ‘ತಮಗೋಸ್ಕರ ನೀರು ನಿಲ್ಲದ ಬಿರಿದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ’ ಮತ್ತು “ದೇವರ ಮುಂದೆ ಹುಚ್ಚುತನವಾಗಿರುವ ಇಹಲೋಕ ವಿವೇಕ” ದಿಂದ ಆಳವಾಗಿ ಕುಡಿದಿದ್ದಾರೆ.—ಯೆರೆಮೀಯ 2:13; 1 ಕೊರಿಂಥ 1:19, NW; 2:6; 3:19; ಕೀರ್ತನೆ 36:9.

8. ಮಾನವ ಕುಲವು ಯಾವ ರೀತಿಗಳಲ್ಲಿ ರಕ್ತಾಪರಾಧಿಯಾಗಿದೆ?

8 ಅಂತಹ ಕಳಂಕಿತ “ನೀರುಗಳು” ಉದಾಹರಣೆಗೆ, ಹತ್ತು ಕೋಟಿಗಳಿಗಿಂತಲೂ ಹೆಚ್ಚು ಜೀವಗಳನ್ನು ಈಗ ಬಲಿ ತೆಗೆದುಕೊಂಡ ಈ ಶತಮಾನದ ಯುದ್ಧಗಳಲ್ಲಿ ಚಿರಸ್ಥಾಯಿ ಪ್ರಮಾಣದಲ್ಲಿ ರಕ್ತ ಸುರಿಸಲು ಅವರನ್ನು ಉತ್ತೇಜಿಸುತ್ತಾ, ಜನರು ರಕ್ತಾಪರಾಧಿಗಳಾಗುವುದಕ್ಕೆ ನಡಿಸಿವೆ. ವಿಶೇಷವಾಗಿ, ಎರಡು ಲೋಕ ಯುದ್ಧಗಳು ಸ್ಫೋಟಿಸಿದ ಕ್ರೈಸ್ತಪ್ರಪಂಚದಲ್ಲಿ, ಜನರು “ನಿರಪರಾಧಿಯ ರಕ್ತವನ್ನು ಸುರಿಸಲು ಆತುರಪಡುತ್ತಾರೆ,” ಮತ್ತು ಇದು ದೇವರ ಸ್ವಂತ ಸಾಕ್ಷಿಗಳ ರಕ್ತವನ್ನು ಒಳಗೂಡಿದೆ. (ಯೆಶಾಯ 59:7; ಯೆರೆಮೀಯ 2:34) ಯೆಹೋವನ ನೀತಿಯುಳ್ಳ ನಿಯಮಗಳ ಉಲ್ಲಂಘನೆಯಲ್ಲಿ ರಕ್ತಪೂರಣಗಳಿಂದ ರಕ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗಪಡಿಸಿರುವುದರಿಂದಲೂ ಮಾನವಕುಲವು ರಕ್ತಾಪರಾಧವನ್ನು ಹೊತ್ತುಕೊಂಡಿದೆ. (ಆದಿಕಾಂಡ 9:3-5; ಯಾಜಕಕಾಂಡ 17:14; ಅ. ಕೃತ್ಯಗಳು 15:28, 29) ಈ ವಿವರಣೆಯಲ್ಲಿ, ಅವರು ಈಗಾಗಲೇ, ರಕ್ತಪೂರಣಗಳಿಂದ ಏಯ್ಡ್ಸ್‌, ಯಕೃತ್ತಿನ ಊತ, ಮತ್ತು ಇತರ ರೋಗಗಳ ಫಲದಿಂದ ಕ್ಲೇಶವನ್ನು ಕೊಯ್ದಿದ್ದಾರೆ. ಎಲ್ಲಾ ರಕ್ತಾಪರಾಧಕ್ಕೆ ಪೂರ್ಣ ಪ್ರತೀಕಾರವು ಬೇಗನೆ, ಅತಿಕ್ರಮಿಸುವ ಪಾಪಿಗಳೆಲ್ಲರೂ “ದೇವರ ಕೋಪದ ಮಹಾ ದ್ರಾಕ್ಷೇತೊಟ್ಟಿಯಲ್ಲಿ” ತುಳಿಯಲ್ಪಡುವುದರಿಂದ ಅತಿ ಮಹತ್ತಾದ ದಂಡವನ್ನು ತೆರುವರು.—ಪ್ರಕಟನೆ 14:19, 20.

9. ಮೂರನೆಯ ಪಾತ್ರೆಯ ಹೊಯ್ಯುವಿಕೆಯು ಏನನ್ನು ಒಳಗೂಡಿರುತ್ತದೆ?

9 ಮೋಶೆಯ ದಿನಗಳಲ್ಲಿ, ನೈಲ್‌ ನದಿಯು ರಕ್ತವಾಗಿ ಪರಿಣಮಿಸಿದಾಗ, ಐಗುಪ್ತ್ಯರು ನೀರಿನ ಇತರ ಮೂಲಗಳನ್ನು ಹುಡುಕುವುದರಿಂದ ತಮ್ಮನ್ನು ಜೀವದಿಂದಿರಿಸಿಕೊಳ್ಳಸಾಧ್ಯವಿತ್ತು. (ವಿಮೋಚನಕಾಂಡ 7:24) ಆದರೆ ಇಂದು, ಆತ್ಮಿಕ ಉಪದ್ರವಗಳ ವೇಳೆಯಲ್ಲಿ, ಸೈತಾನನ ಲೋಕದಲ್ಲಿ ಜನರಿಗೆ ಎಲ್ಲಿಯೂ ಜೀವ-ಕೊಡುವ ನೀರುಗಳನ್ನು ಕಂಡುಕೊಳ್ಳಸಾಧ್ಯವಿಲ್ಲ. ಈ ಮೂರನೆಯ ಪಾತ್ರೆಯ ಹೊಯ್ಯುವಿಕೆಯಲ್ಲಿ, ಲೋಕದ “ನದಿಗಳು ಮತ್ತು ನೀರುಗಳ ಬುಗ್ಗೆಗಳು” ರಕ್ತದ ಹಾಗಿವೆ, ಅದನ್ನು ಕುಡಿಯುವವರೆಲ್ಲರಿಗೆ ಆತ್ಮಿಕ ಸಾವನ್ನು ತರುತ್ತವೆ ಎನ್ನುವುದನ್ನು ಪ್ರಚುರಪಡಿಸುವುದು ಸೇರಿರುತ್ತದೆ. ಜನರು ಯೆಹೋವನೆಡೆಗೆ ತಿರುಗದೆ ಹೋದರೆ, ಅವರು ಆತನ ಪ್ರತಿಕೂಲ ನ್ಯಾಯತೀರ್ಪನ್ನು ಕೊಯ್ಯುವರು.—ಹೋಲಿಸಿರಿ ಯೆಹೆಜ್ಕೇಲ 33:11.

10. “ನೀರುಗಳ ಮೇಲಿನ ದೇವದೂತನು” ಯಾವುದನ್ನು ತಿಳಿಯಪಡಿಸುತ್ತಾನೆ, ಮತ್ತು “ಯಜ್ಞವೇದಿಯು” ಯಾವ ಸಾಕ್ಷ್ಯವನ್ನು ಕೂಡಿಸುತ್ತದೆ?

10 “ನೀರುಗಳ ಮೇಲಿನ ದೇವದೂತನು” ಅಂದರೆ, ಈ ಪಾತ್ರೆಯನ್ನು ನೀರಿನ ಮೇಲೆ ಹೊಯ್ಯುವ ದೇವದೂತನು, ಯಾರ ನೀತಿಯುಳ್ಳ ನಿರ್ಣಯಗಳು ಪೂರ್ಣನ್ಯಾಯವಾಗಿವೆಯೋ ಆ ಸಾರ್ವಭೌಮ ನ್ಯಾಯಾಧೀಶನಾದ ಯೆಹೋವನನ್ನು ಹೊಗಳುತ್ತಾನೆ. ಆದುದರಿಂದ, ಆತನು ಈ ನ್ಯಾಯತೀರ್ಪಿನ ಕುರಿತು ಹೀಗನ್ನುತ್ತಾನೆ: “ಅವರು ಅದಕ್ಕೆ ಪಾತ್ರರು.” ನಿಸ್ಸಂದೇಹವಾಗಿ, ದೇವದೂತನು ವೈಯಕ್ತಿಕವಾಗಿ ಸಾವಿರಾರು ವರ್ಷಗಳಿಂದಲೂ ಈ ದುಷ್ಟ ಲೋಕದ ಸುಳ್ಳು ಬೋಧನೆಗಳಿಂದ ಮತ್ತು ತತ್ವಜ್ಞಾನಗಳಿಂದ ಕೆರಳಿಸಿದ ಹೆಚ್ಚಿನ ರಕ್ತಾಪರಾಧ ಮತ್ತು ಕ್ರೂರತನವನ್ನು ಕಣ್ಣಾರೆ ಕಂಡಿದ್ದನು. ಈ ಕಾರಣದಿಂದ, ಯೆಹೋವನ ನೀತಿದಾಯಕ, ನ್ಯಾಯವುಳ್ಳ ತೀರ್ಮಾನವು ಸರಿಯಾಗಿದೆಯೆಂದು ಆತನು ಬಲ್ಲನು. ದೇವರ “ಯಜ್ಞವೇದಿ” ಕೂಡ ಮಾತಾಡುತ್ತದೆ. ಪ್ರಕಟನೆ 6:9, 10 ರಲ್ಲಿ, ಹುತಾತ್ಮರಾಗಿ ಮಡಿದ ಆತ್ಮಗಳು ಯಜ್ಞವೇದಿಯ ಕೆಳಗೆ ಇವೆ ಎಂದು ಹೇಳಲಾಗಿದೆ. ಅದರಂತೆ, “ಯಜ್ಞವೇದಿಯು” ಯೆಹೋವನ ತೀರ್ಮಾನಗಳ ನೀತಿಯುಕ್ತತೆಗೆ ಮತ್ತು ನ್ಯಾಯಪರತೆಗೆ ದೃಢವಾದ ಸಾಕ್ಷ್ಯವನ್ನು ಕೂಡಿಸುತ್ತದೆ. * ನಿಶ್ಚಯವಾಗಿಯೂ, ಇಷ್ಟು ರಕ್ತವನ್ನು ಸುರಿಸಿದ ಮತ್ತು ದುರುಪಯೋಗ ಮಾಡಿದ ಅವರಿಗೆ—ಅವರನ್ನು ಮರಣಕ್ಕೆ ಯೆಹೋವನ ವಿಧಿಸುವಿಕೆಯ ಸಂಕೇತವಾಗಿ—ರಕ್ತವನ್ನು ಬಲವಂತವಾಗಿ ಉಣಿಸುವುದಕ್ಕೆ ಕೊಡುವುದು ತಕ್ಕದಾಗಿದೆ.

ಮನುಷ್ಯರನ್ನು ಬೆಂಕಿಯಿಂದ ಕಮರಿಸುವುದು

11. ದೇವರ ಕೋಪದ ನಾಲ್ಕನೆಯ ಪಾತ್ರೆಯ ಗುರಿಹಲಗೆ ಯಾವುದು, ಮತ್ತು ಅದು ಹೊಯ್ಯಲ್ಪಡುವಾಗ ಏನು ಸಂಭವಿಸುತ್ತದೆ?

11 ದೇವರ ಕೋಪದ ನಾಲ್ಕನೆಯ ಪಾತ್ರೆಯ ಗುರಿಹಲಗೆಯಾಗಿ ಸೂರ್ಯನಿದ್ದಾನೆ. ಯೋಹಾನನು ನಮಗನ್ನುವುದು: “ಮತ್ತು ನಾಲ್ಕನೆಯವನು ತನ್ನ ಪಾತ್ರೆಯನ್ನು ಸೂರ್ಯನ ಮೇಲೆ ಹೊಯಿದನು; ಮತ್ತು ಬೆಂಕಿಯಿಂದ ಮನುಷ್ಯರನ್ನು ಕಮರಿಸುವುದನ್ನು ಸೂರ್ಯನಿಗೆ ಅನುಗ್ರಹಿಸಲಾಯಿತು. ಮತ್ತು ಮನುಷ್ಯರು ಬಲವಾದ ಕಾವಿನಿಂದ ಕಮರಿಹೋದರು, ಆದರೆ ಅವರು ಯಾರಿಗೆ ಈ ಉಪದ್ರವಗಳ ಮೇಲೆ ಅಧಿಕಾರವಿದೆಯೋ ಆ ದೇವರ ನಾಮವನ್ನು ದೂಷಿಸಿದರು. ಮತ್ತು ಅವನಿಗೆ ಮಹಿಮೆಯನ್ನು ಕೊಡಲು ಅವರು ಮಾನಸಾಂತರಪಡಲಿಲ್ಲ.”—ಪ್ರಕಟನೆ 16:8, 9, NW.

12. ಈ ಲೋಕದ “ಸೂರ್ಯ” ಯಾವುದು, ಮತ್ತು ಈ ಸಾಂಕೇತಿಕ ಸೂರ್ಯನಿಗೆ ಏನು ಅನುಗ್ರಹಿಸಲ್ಪಟ್ಟಿದೆ?

12 ಇಂದು, ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ, ಯೇಸುವಿನ ಆತ್ಮಿಕ ಸಹೋದರರು “ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುತ್ತಿದ್ದಾರೆ.” (ಮತ್ತಾಯ 13:40, 43) ಯೇಸುವು ತಾನೇ “ಧರ್ಮವೆಂಬ (ನೀತಿಯ, NW) ಸೂರ್ಯನಾಗಿದ್ದಾನೆ.” (ಮಲಾಕಿಯ 4:2) ಆದರೂ, ದೇವರ ರಾಜ್ಯಕ್ಕೆ ವಿರೋಧದಲ್ಲಿ ಪ್ರಕಾಶಿಸಲು ಪ್ರಯತ್ನಿಸುವ ಅದರ ಸ್ವಂತ ಅಧಿಕಾರಿಗಳಾಗಿರುವ ಸ್ವಂತ “ಸೂರ್ಯ”ನು ಮಾನವ ಕುಲಕ್ಕೆ ಇದ್ದಾನೆ. ಕ್ರೈಸ್ತ ಪ್ರಪಂಚದ ಆಕಾಶದಲ್ಲಿ ‘ಸೂರ್ಯ, ಚಂದ್ರ, ನಕ್ಷತ್ರಗಳು’ ವಾಸ್ತವದಲ್ಲಿ ಕತ್ತಲೆಗಳ ಮೂಲಗಳಾಗಿವೆಯೇ ಹೊರತು ಬೆಳಕಿನವುಗಳಲ್ಲ ಎಂದು ನಾಲ್ಕನೆಯ ತುತೂರಿ ಊದುವಿಕೆಯು ಪ್ರಚುರಪಡಿಸಿದೆ. (ಪ್ರಕಟನೆ 8:12) ದೇವರ ಕೋಪದ ನಾಲ್ಕನೆಯ ತುತೂರಿಯು ಈಗ ತೋರಿಸುತ್ತದೇನಂದರೆ ಲೋಕದ “ಸೂರ್ಯ”ನು ಸಹಿಸಲಸಾಧ್ಯವಾಗಿ ಕಡುಬಿಸಿಯಾಗಿರುವನು. ಸೂರ್ಯನಂತಿರುವ ಮುಖಂಡರಾಗಿ ತೋರುವವರು ಮಾನವಕುಲವನ್ನು “ಕಮರಿಸು” ವರು. ಇದು ಸಾಂಕೇತಿಕ ಸೂರ್ಯನಿಗೆ ಒಪ್ಪುತ್ತದೆ. ಇನ್ನೊಂದು ಮಾತಿನಲ್ಲಿ, ಯೆಹೋವನು ಇದನ್ನು ಮಾನವಕುಲದ ಮೇಲೆ ಆತನ ಉರಿಕಾರುವ ನ್ಯಾಯತೀರ್ಪಿನ ಭಾಗವಾಗಿ ಅನುಮತಿಸುವನು. ಈ ಕಮರಿಸುವಿಕೆಯು ಯಾವ ರೀತಿಯಲ್ಲಿ ಸಂಭವಿಸಿದೆ?

13. ಈ ಲೋಕದ ಸೂರ್ಯನಂತಿರುವ ಮುಖಂಡರು ಯಾವ ರೀತಿಯಲ್ಲಿ ಮಾನವ ಕುಲವನ್ನು “ಕಮರಿಸಿ” ದ್ದಾರೆ?

13 ಮೊದಲನೆಯ ಲೋಕ ಯುದ್ಧಾನಂತರ, ಈ ಲೋಕದ ಪ್ರಭುಗಳು ಲೋಕ ಭದ್ರತೆಯ ಸಮಸ್ಯೆಯನ್ನು ಪರಿಹರಿಸುವ ಸಾಧನೆಯಲ್ಲಿ ಜನಾಂಗ ಸಂಘವನ್ನು ರಚಿಸಿದರು, ಆದರೆ ಇದು ಸೋತಿತು. ಈ ಕಾರಣದಿಂದ ಇತರ ಪ್ರಯೋಗಾತ್ಮಕ ಆಳಿಕ್ವೆಯ ವಿಧಗಳು ಪ್ರಯತ್ನಿಸಲ್ಪಟ್ಟವು. ಉದಾಹರಣೆಗೆ ಫ್ಯಾಜಿಸಂ ಮತ್ತು ನಾಜಿವಾದ. ಸಮತಾವಾದವು ವಿಸ್ತರಿಸುತ್ತಾ ಮುಂದುವರಿಯಿತು. ಮಾನವಕುಲದ ಭಾಗದ ಸಮಸ್ಯೆಯನ್ನು ಸುಧಾರಿಸುವ ಬದಲು, ಈ ವ್ಯವಸ್ಥೆಗಳ ಸೂರ್ಯನಂತಿರುವ ಅಧಿಕಾರಿಗಳು ‘ಬಲವಾದ ಕಾವಿನಿಂದ ಮನುಷ್ಯರನ್ನು ಕಮರಿಸುವುದಕ್ಕೆ’ ಪ್ರಾರಂಭಿಸಿದರು. ಸ್ಪೆಯಿನ್‌, ಇಥಿಯೋಪಿಯ, ಮತ್ತು ಮಂಚೂರಿಯಾದಲ್ಲಿ ಸ್ಥಳಿಕ ಯುದ್ಧಗಳು ಎರಡನೆಯ ಲೋಕ ಯುದ್ಧಕ್ಕೆ ನಡಿಸಿದವು. ಮೂಸಲಿನೀ, ಹಿಟ್ಲರ್‌ ಮತ್ತು ಸ್ಟ್ಯಾಲಿನ್‌ ನಿರಂಕುಶ ಪ್ರಭುಗಳಾಗಿ ತಮ್ಮ ಸ್ವಂತ ರಾಷ್ಟ್ರೀಯರಲ್ಲಿ ಅನೇಕರ ಸಹಿತ, ಕೋಟ್ಯಂತರ ವ್ಯಕ್ತಿಗಳ ಸಾವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾಗಿದ್ದರೆಂದು ಆಧುನಿಕ ಇತಿಹಾಸವು ದಾಖಲಿಸುತ್ತದೆ. ಹೆಚ್ಚು ಇತ್ತೀಚೆಗೆ, ಅಂತಾರಾಷ್ಟ್ರೀಯ ಅಥವಾ ಆಂತರಿಕ ಕಲಹಗಳು ವಿಯೆಟ್ನಾಮ್‌, ಕೆಂಬೋಡಿಯ, ಇರಾನ್‌, ಲೆಬನಾನ್‌ ದೇಶಗಳಲ್ಲಿ ಮತ್ತು ಆಯರ್ಲೇಂಡ್‌ ಹಾಗೂ ಲ್ಯಾಟಿನ್‌ ಅಮೆರಿಕ ಮತ್ತು ಆಫ್ರಿಕದ ದೇಶಗಳಲ್ಲಿನ ಜನರನ್ನು “ಕಮರಿಸಿ”ವೆ. ಎಲ್ಲಾ ಮಾನವ ಕುಲವನ್ನು ದಹಿಸಲು ಸಮರ್ಥವಾಗಿರುವ ಭೀಕರ, ಅಮಾನುಷ ನ್ಯೂಕ್ಲಿಯರ್‌ ಶಸ್ತ್ರಗಳಿರುವ ಬಲಾಢ್ಯ ಶಕ್ತಿಗಳ ಮಧ್ಯೆ ಬೆಳೆದ ಈ ಮುಂದುವರಿಯುತ್ತಿರುವ ಹೋರಾಟವನ್ನು ಇದಕ್ಕೆ ಕೂಡಿಸಿರಿ. ಈ ಕಡೇ ದಿವಸಗಳಲ್ಲಿ, ಮಾನವ ಕುಲವು ನಿಜವಾಗಿ ಕಮರಿಸುವ “ಸೂರ್ಯ” ನಂತಿರುವ, ಅದರ ಅನೀತಿಯ ಮುಖಂಡರಿಗೆ ಒಡ್ಡಲ್ಪಟ್ಟಿರುತ್ತದೆ; ದೇವರ ಕೋಪದ ನಾಲ್ಕನೆಯ ಪಾತ್ರೆಯ ಹೊಯ್ಯುವಿಕೆಯು ಈ ಐತಿಹಾಸಿಕ ನಿಜತ್ವಗಳನ್ನು ತಪ್ಪಿಲ್ಲದೆ ಸೂಚಿಸಿದೆ ಮತ್ತು ದೇವರ ಜನರು ಅವುಗಳನ್ನು ಭೂಮಿಯ ಸುತ್ತಲೂ ಪ್ರಚುರಪಡಿಸಿದ್ದಾರೆ.

14. ಮಾನವ ಕುಲದ ಸಮಸ್ಯೆಗಳಿಗೆ ಏಕೈಕ ಪರಿಹಾರವಾಗಿ ಯೆಹೋವನ ಸಾಕ್ಷಿಗಳು ಯಾವುದನ್ನು ಸುಸಂಗತವಾಗಿ ಕಲಿಸುತ್ತಾ ಬಂದಿದ್ದಾರೆ, ಅಖಂಡವಾಗಿ ಮಾನವ ಕುಲದಿಂದ ಯಾವ ಪ್ರತಿಕ್ರಿಯೆಯೊಂದಿಗೆ?

14 ಯಾವುದರ ಮೂಲಕ ಯೆಹೋವನು ತನ್ನ ನಾಮವನ್ನು ಪವಿತ್ರೀಕರಿಸಲು ಉದ್ದೇಶಿಸಿದ್ದಾನೋ, ಆ ದೇವರ ರಾಜ್ಯವು ಮಾನವ ಕುಲದ ಗಾಬರಿಗೊಳಿಸುವ ಸಮಸ್ಯೆಗಳಿಗೆ ತಾನೇ ಏಕೈಕ ಪರಿಹಾರವಾಗಿದೆಯೆಂದು ಯೆಹೋವನ ಸಾಕ್ಷಿಗಳು ಸುಸಂಗತವಾಗಿ ಕಲಿಸಿದ್ದಾರೆ. (ಕೀರ್ತನೆ 83:4, 17, 18; ಮತ್ತಾಯ 6:9, 10) ಆದಾಗ್ಯೂ, ಮಾನವ ಕುಲವು ಪೂರ್ತಿಯಾಗಿ ಈ ಪರಿಹಾರದೆಡೆಗೆ ಕಿವುಡಾದ ಕಿವಿಯನ್ನು ತಿರುಗಿಸಿದೆ. ರಾಜ್ಯವನ್ನು ತಿರಸ್ಕರಿಸುವ ಅನೇಕರು, ಯೆಹೋವನ ಸಾರ್ವಭೌಮತೆಯನ್ನು ಒಪ್ಪಿಕೊಳ್ಳುವುದಕ್ಕೆ ಫರೋಹನು ತಿರಸ್ಕರಿಸಿದಾಗ ಮಾಡಿದಂತೆಯೇ, ದೇವರ ನಾಮದ ದೂಷಣೆ ಸಹ ಮಾಡುತ್ತಾರೆ. (ವಿಮೋಚನಕಾಂಡ 1:8-10; 5:2) ಮೆಸ್ಸೀಯನ ರಾಜ್ಯದಲ್ಲಿ ಅಭಿರುಚಿಯಿಲ್ಲದವರಾಗಿ, ಈ ವಿರೋಧಕರು ದಬ್ಬಾಳಿಕೆಯ ಮಾನವ ಆಳಿಕ್ವೆಯ ತಮ್ಮ ಸ್ವಂತ ಸುಡುಬಿಸಿಲಿನ “ಸೂರ್ಯ”ನ ಕೆಳಗೆ ಬಾಧೆಯನ್ನು ಅನುಭವಿಸಲು ಆರಿಸಿದ್ದಾರೆ.

ಕಾಡು ಮೃಗದ ಸಿಂಹಾಸನ

15. (ಎ) ಐದನೆಯ ಪಾತ್ರೆಯು ಯಾವುದರ ಮೇಲೆ ಹೊಯ್ಯಲ್ಪಡುತ್ತದೆ? (ಬಿ) “ಕಾಡು ಮೃಗದ ಸಿಂಹಾಸನವು” ಯಾವುದು, ಮತ್ತು ಪಾತ್ರೆಯನ್ನು ಅದರ ಮೇಲೆ ಹೊಯ್ಯುವುದರಲ್ಲಿ ಏನು ಒಳಗೂಡಿದೆ?

15 ಮುಂದಿನ ದೇವದೂತನು ಯಾವುದರ ಮೇಲೆ ತನ್ನ ಪಾತ್ರೆಯನ್ನು ಹೊಯ್ಯುತ್ತಾನೆ? “ಮತ್ತು ಐದನೆಯವನು ತನ್ನ ಪಾತ್ರೆಯನ್ನು ಕಾಡು ಮೃಗದ ಸಿಂಹಾಸನದ ಮೇಲೆ ಹೊಯಿದನು.” (ಪ್ರಕಟನೆ 16:10ಎ, NW) “ಕಾಡು ಮೃಗ”ವು ಸೈತಾನನ ಸರಕಾರಿ ವ್ಯವಸ್ಥೆಯಾಗಿದೆ. ಕಾಡು ಮೃಗವು ಹೇಗೆ ಅಕ್ಷರಾರ್ಥದ್ದಲ್ಲವೋ ಹಾಗೆಯೇ ಅದಕ್ಕೆ ಯಾವುದೇ ಒಂದು ಅಕ್ಷರಾರ್ಥ ಸಿಂಹಾಸನವಿಲ್ಲ. ಆದಾಗ್ಯೂ, ಸಿಂಹಾಸನದ ಪ್ರಸ್ತಾವನೆಯು ತೋರಿಸುತ್ತದೇನಂದರೆ, ಕಾಡು ಮೃಗವು ಮಾನವಕುಲದ ಮೇಲೆ ರಾಜವೈಭವದ ಅಧಿಕಾರವನ್ನು ಚಲಾಯಿಸಿದೆ; ಮೃಗದ ಪ್ರತಿಯೊಂದು ತಲೆಯ ಮೇಲೆ ಒಂದು ರಾಜವೈಭವದ ಮುಕುಟವನ್ನು ಹೊತ್ತಿದುದ್ದರ ನಿಜತ್ವದೊಂದಿಗೆ ಇದು ಹೊಂದಿಕೆಯಲ್ಲಿ ಇದೆ. ವಾಸ್ತವದಲ್ಲಿ, “ಕಾಡುಮೃಗದ ಸಿಂಹಾಸನವು” ಆ ಅಧಿಕಾರದ ಆಧಾರ ಯಾ ಮೂಲವಾಗಿದೆ. * ಕಾಡುಮೃಗದ ರಾಜವೈಭವ ಅಧಿಕಾರದ ನಿಜ ಸ್ಥಿತಿಯನ್ನು ಬೈಬಲು “ಘಟಸರ್ಪನು ಮೃಗಕ್ಕೆ ಅದರ ಬಲ ಮತ್ತು ಅದರ ಸಿಂಹಾಸನ ಮತ್ತು ಮಹಾ ಅಧಿಕಾರವನ್ನು ಕೊಟ್ಟನು” ಎಂದು ಹೇಳುವಾಗ ಪ್ರಕಟಿಸುತ್ತದೆ. (ಪ್ರಕಟನೆ 13:1, 2; 1 ಯೋಹಾನ 5:19) ಹೀಗೆ, ಕಾಡುಮೃಗದ ಸಿಂಹಾಸನದ ಮೇಲೆ ಪಾತ್ರೆಯ ಹೊಯ್ಯುವಿಕೆಯಲ್ಲಿ, ಸೈತಾನನು ಕಾಡು ಮೃಗವನ್ನು ಬೆಂಬಲಿಸುವುದರಲ್ಲಿ ಮತ್ತು ಪ್ರವರ್ಧಿಸುವುದರಲ್ಲಿ ಆಡಿದ ಮತ್ತು ಇನ್ನೂ ಆಡುತ್ತಿರುವ ನಿಜ ಪಾತ್ರವನ್ನು ಪ್ರಕಟಿಸುವ ಒಂದು ಘೋಷಣೆಯು ಒಳಗೂಡಿದೆ.

16. (ಎ) ಅವರಿಗೆ ತಿಳಿದಿರಲಿ ಯಾ ತಿಳಿಯದೆ ಇರಲಿ, ಜನಾಂಗಗಳು ಯಾರನ್ನು ಸೇವಿಸುತ್ತಾರೆ? ವಿವರಿಸಿರಿ. (ಬಿ) ಸೈತಾನನ ವ್ಯಕ್ತಿತ್ವವನ್ನು ಲೋಕವು ಹೇಗೆ ಪ್ರತಿಬಿಂಬಿಸುತ್ತದೆ? (ಸಿ) ಕಾಡು ಮೃಗದ ಸಿಂಹಾಸನವು ಯಾವಾಗ ಕಿತ್ತೆಸೆಯಲ್ಪಡುವುದು?

16 ಸೈತಾನನ ಮತ್ತು ಜನಾಂಗಗಳ ಮಧ್ಯೆ ಈ ಸಂಬಂಧವು ಹೇಗೆ ಕಾಪಾಡಲ್ಪಡುತ್ತದೆ? ಸೈತಾನನು ಯೇಸುವನ್ನು ಶೋಧಿಸಿದಾಗ, ಅವನು ದರ್ಶನವೊಂದರಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿದನು ಮತ್ತು “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ” ನೀಡಿದನು. ಆದರೆ ಒಂದು ಶರ್ತವಿತ್ತು—ಯೇಸುವು ಮೊದಲು ಸೈತಾನನ ಮುಂದೆ ಆರಾಧನೆಯ ಕ್ರಿಯೆಯೊಂದನ್ನು ನಡಿಸಬೇಕಿತ್ತು. (ಲೂಕ 4:5-7) ಲೋಕದ ಸರಕಾರಗಳು ತಮ್ಮ ಅಧಿಕಾರವನ್ನು ಇದಕ್ಕಿಂತ ಕಡಿಮೆ ಬೆಲೆಗೆ ಪಡೆಯುತ್ತವೆಂದು ನಾವು ಊಹಿಸಬಲ್ಲೆವೋ? ಎಂದಿಗೂ ಇಲ್ಲ. ಬೈಬಲಿಗನುಸಾರವಾಗಿ ಸೈತಾನನು ಈ ವಿಷಯಗಳ ವ್ಯವಸ್ಥೆಯ ದೇವರಾಗಿದ್ದಾನೆ, ಆದುದರಿಂದ, ಜನಾಂಗಗಳು ಅದನ್ನು ತಿಳಿದಿರಲಿ ಯಾ ತಿಳಿಯದೆ ಇರಲಿ, ಅವನನ್ನು ಸೇವಿಸುತ್ತಿದ್ದಾರೆ. (2 ಕೊರಿಂಥ 4:3, 4) * ಈ ಪರಿಸ್ಥಿತಿಯು ಸದ್ಯದ ಲೋಕ ವ್ಯವಸ್ಥೆಯ ರಚನೆಯ ರೀತಿಯಲ್ಲಿ ಪ್ರಕಟಿಸಲ್ಪಟ್ಟಿದೆ, ಇದು ಸ್ವತಃ ಸಂಕುಚಿತ ರಾಷ್ಟ್ರೀಯತೆ, ದ್ವೇಷ ಮತ್ತು ಸ್ವ-ಅಭಿರುಚಿಯ ಮೇಲೆ ಕಟ್ಟಲ್ಪಟ್ಟಿದೆ. ಸೈತಾನನು ಬಯಸುವ ರೀತಿಯಲ್ಲಿ—ಮಾನವ ಸಂತತಿಯನ್ನು ತನ್ನ ನಿಯಂತ್ರಣದಲ್ಲಿಡುವುದು—ಇದು ಸಂಘಟಿಸಲ್ಪಡುತ್ತದೆ. ಸರಕಾರದಲ್ಲಿ ಭ್ರಷ್ಟತೆ, ಅಧಿಕಾರದ ಲಾಲಸೆ, ಸುಳ್ಳಾಡುವ ರಾಜ್ಯತಂತ್ರ, ಶಸ್ತಾಸ್ತ ಪೈಪೋಟಿ—ಇವೆಲ್ಲವೂ ಸೈತಾನನ ಕೀಳು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಲೋಕವು ಸೈತಾನನ ಅನೀತಿಯುಳ್ಳ ಮಟ್ಟಗಳಿಗೆ ಸಹಿ ಹಾಕುತ್ತದೆ, ಹೀಗೆ ಅವನನ್ನು ಅದರ ದೇವರಾಗಿ ಮಾಡುತ್ತದೆ. ಆ ಕಾಡು ಮೃಗವು ವಿನಾಶವನ್ನು ಅನುಭವಿಸುವಾಗ ಮತ್ತು ದೇವರ ಸ್ತ್ರೀಯ ಸಂತಾನವು ಕಟ್ಟಕಡೆಗೆ ಸೈತಾನನನ್ನು ತಾನೇ ಅಧೋಲೋಕಕ್ಕೆ ದೊಬ್ಬುವಾಗ, ಕಾಡು ಮೃಗದ ಸಿಂಹಾಸನವು ಉರುಳಿಸಲ್ಪಡುವುದು.—ಆದಿಕಾಂಡ 3:15; ಪ್ರಕಟನೆ 19:20, 21; 20:1-3.

ಕತ್ತಲು ಮತ್ತು ಯಾತನೆ ಕೊಡುವ ನೋವು

17. (ಎ) ಐದನೆಯ ಪಾತ್ರೆಯ ಹೊಯ್ಯುವಿಕೆಯು, ಕಾಡು ಮೃಗದ ರಾಜ್ಯವನ್ನು ಸದಾ ಸುತ್ತುವರಿದಿರುವ ಆತ್ಮಿಕ ಕತ್ತಲೆಗೆ ಹೇಗೆ ಸಂಬಂಧಿಸಿದೆ? (ಬಿ) ದೇವರ ಕೋಪದ ಐದನೆಯ ಪಾತ್ರೆಯ ಹೊಯ್ಯುವಿಕೆಗೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ?

17 ಈ ಕಾಡು ಮೃಗದ ರಾಜ್ಯವು ಅದರ ಆರಂಭದಿಂದಲೂ ಆತ್ಮಿಕ ಕತ್ತಲಿನಲ್ಲಿ ಇದೆ. (ಮತ್ತಾಯ 8:12 ಹೋಲಿಸಿರಿ; ಎಫೆಸ 6:11, 12.) ಐದನೆಯ ಪಾತ್ರೆಯು ಈ ಕತ್ತಲಿನ ತೀಕ್ಷೈವಾದ ಬಹಿರಂಗ ತಿಳಿಸುವಿಕೆಯನ್ನು ತರುತ್ತದೆ. ದೇವರ ಕೋಪದ ಪಾತ್ರೆಯು ಆ ಸಾಂಕೇತಿಕ ಕಾಡು ಮೃಗದ ಸಿಂಹಾಸನದ ಮೇಲೆ ಹೊಯ್ಯಲ್ಪಡುತ್ತದೆಂದು ಹೇಳಿ ಇದು ಅದರ ನಾಟಕೀಕರಣವನ್ನೂ ಮಾಡುತ್ತದೆ. “ಮತ್ತು ಅದರ ರಾಜ್ಯವು ಕತ್ತಲಾಯಿತು, ಮತ್ತು ಅವರು ನೋವಿಗಾಗಿ ತಮ್ಮ ನಾಲಿಗೆಗಳನ್ನು ಕಚ್ಚಿಕೊಳ್ಳಲಾರಂಭಿಸಿದರು, ಆದರೆ ತಮ್ಮ ನೋವುಗಳಿಗಾಗಿ ಮತ್ತು ತಮ್ಮ ಹುಣ್ಣುಗಳಿಗಾಗಿ ಅವರು ಪರಲೋಕದ ದೇವರನ್ನು ದೂಷಿಸಿದರು, ಮತ್ತು ತಮ್ಮ ಕೃತ್ಯಗಳಿಗೆ ಅವರು ಮಾನಸಾಂತರಪಡಲಿಲ್ಲ.”—ಪ್ರಕಟನೆ 16:10ಬಿ, 11, NW.

18. ಐದನೆಯ ತುತೂರಿ ಊದುವಿಕೆಯ ಮತ್ತು ದೇವರ ಕೋಪದ ಐದನೆಯ ಪಾತ್ರೆಯ ನಡುವೆ ಯಾವ ಅನುರೂಪತೆ ಇದೆ?

18 ಐದನೆಯ ತುತೂರಿ ಊದುವಿಕೆಯು ದೇವರ ಕೋಪದ ಐದನೆಯ ಪಾತ್ರೆಗೆ ನಿಷ್ಕೃಷ್ಟವಾಗಿ ಅನುರೂಪತೆಯಲ್ಲಿಲ್ಲ ಯಾಕಂದರೆ ತುತೂರಿ ಊದುವಿಕೆಯು ಮಿಡಿತೆಗಳ ಬಾಧೆಯನ್ನು ಘೋಷಿಸಿತು. ಆದರೆ ಮಿಡಿತೆಗಳ ಆ ಬಾಧೆಯು ಬಿಡುಗಡೆಗೊಳಿಸಲ್ಪಟ್ಟಾಗ, ಸೂರ್ಯನೂ, ಆಕಾಶವೂ ಕತ್ತಲಾಯಿತೆಂಬದನ್ನು ಗಮನಿಸಿರಿ. (ಪ್ರಕಟನೆ 9:2-5) ಮತ್ತು ವಿಮೋಚನಕಾಂಡ 10:14, 15 ರಲ್ಲಿ, ಯೆಹೋವನು ಐಗುಪ್ತವನ್ನು ಮಿಡಿತೆಗಳೊಂದಿಗೆ ಬಾಧಿಸಿದರ್ದ ಕುರಿತು ನಾವು ಹೀಗೆ ಓದುತ್ತೇವೆ: “ಮಿಡಿತೆಗಳು ಐಗುಪ್ತ ದೇಶದಲ್ಲಿಲ್ಲಾ ಬಂದು ಐಗುಪ್ತ ದೇಶದ ಎಲ್ಲಾ ಕಡೆಯಲ್ಲಿಯೂ ಅಪರಿಮಿತವಾಗಿ ಇಳಿದವು. ಅಂಥ ಮಿಡಿತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರಲಿಕ್ಕಿಲ್ಲ. ಅವು ಭೂಮಿಯನ್ನೆಲ್ಲಾ ಮುಚ್ಚಿಕೊಂಡದ್ದರಿಂದ ನೆಲವು ಕಾಣದೆ ಹೋಯಿತು.” ಹೌದು ಕತ್ತಲು! ಇಂದು, ಐದನೆಯ ತುತೂರಿ ಊದುವಿಕೆಯ ಮತ್ತು ದೇವರ ಕೋಪದ ಐದನೆಯ ಪಾತ್ರೆಯ ಹೊಯ್ಯುವಿಕೆಯ ಪರಿಣಾಮವಾಗಿ ಲೋಕದ ಆತ್ಮಿಕ ಕತ್ತಲು ಬಹಳ ಸ್ಪಷ್ಟವಾಗಿ ವ್ಯಕ್ತವಾಗಿದೆ. ಆಧುನಿಕ ದಿನದ ಮಿಡಿತೆಗಳ ಗುಂಪಿನಿಂದ ಪ್ರಕಟಿಸಲಾದ ಚುಚ್ಚುವ ಸಂದೇಶವು “ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸುವ” ದುಷ್ಟರೆಲ್ಲರಿಗೆ ಯಾತನೆಯನ್ನು ಮತ್ತು ನೋವನ್ನು ತರುತ್ತದೆ.—ಯೋಹಾನ 3:19.

19. ಪ್ರಕಟನೆ 16:10, 11 ರೊಂದಿಗೆ ಹೊಂದಿಕೆಯಲ್ಲಿ, ಸೈತಾನನನ್ನು ಈ ವಿಷಯಗಳ ವ್ಯವಸ್ಥೆಯ ದೇವರೆಂಬ ಬಯಲುಗೊಳಿಸುವಿಕೆಯು ಯಾವುದಕ್ಕೆ ಕಾರಣವಾಗುತ್ತದೆ?

19 ಇಹಲೋಕಾಧಿಪತಿಯಾಗಿ, ಸೈತಾನನು ಬಹಳ ಅಸಂತೋಷವನ್ನು ಮತ್ತು ಕಷ್ಟಾನುಭವಗಳನ್ನು ಉಂಟುಮಾಡಿದ್ದಾನೆ. ಕ್ಷಾಮ, ಯುದ್ಧಗಳು, ಬಲಾತ್ಕಾರ, ಪಾತಕ, ಅಮಲೌಷಧದ ದುರುಪಯೋಗ, ಅನೈತಿಕತೆ, ರತಿ ರವಾನಿತ ರೋಗಗಳು, ಅಪ್ರಾಮಾಣಿಕತೆ, ಧಾರ್ಮಿಕ ಕಪಟತನ—ಇವು ಮತ್ತು ಹೆಚ್ಚಿನವು ಸೈತಾನನ ವಿಷಯಗಳ ವ್ಯವಸ್ಥೆಯ ಚೊಕ್ಕ ಮುದ್ರೆಗಳಾಗಿವೆ. (ಗಲಾತ್ಯ 5:19-21 ಹೋಲಿಸಿರಿ.) ಹೀಗಿದ್ದರೂ, ಈ ವಿಷಯಗಳ ವ್ಯವಸ್ಥೆಯ ದೇವರಾಗಿ ಸೈತಾನನ ಬಹಿರಂಗ ಬಯಲುಗೊಳಿಸುವಿಕೆಯು ಅವನ ಮಟ್ಟಗಳಿಗನುಸಾರ ಜೀವಿಸುವವರೆಲ್ಲರಿಗೆ ನೋವು ಮತ್ತು ಪೇಚಾಟಕ್ಕೆ ಕಾರಣವಾಗಿದೆ. “ಅವರು ನೋವಿಗಾಗಿ ತಮ್ಮ ನಾಲಿಗೆಗಳನ್ನು ಕಚ್ಚಿಕೊಳ್ಳಲಾರಂಭಿಸಿದರು”, ವಿಶೇಷವಾಗಿ ಕ್ರೈಸ್ತಪ್ರಪಂಚದಲ್ಲಿ. ಸತ್ಯವು ತಮ್ಮ ಜೀವನ ಶೈಲಿಯನ್ನು ಬಯಲುಗೊಳಿಸುತ್ತದೆಂದು ಅನೇಕರು ಕೋಪಿಸಿಕೊಳ್ಳುತ್ತಾರೆ. ಕೆಲವರಿಗೆ ಅದು ಬೆದರಿಕೆಯೋಪಾದಿ ಕಂಡುಬರುತ್ತದೆ ಮತ್ತು ಅದನ್ನು ಪ್ರಕಾಶಿಸುವವರನ್ನು ಅವರು ಹಿಂಸಿಸುತ್ತಾರೆ. ಅವರು ದೇವರ ರಾಜ್ಯವನ್ನು ತ್ಯಜಿಸುತ್ತಾರೆ ಮತ್ತು ಯೆಹೋವನ ಪರಿಶುದ್ಧ ಹೆಸರನ್ನು ದೂಷಿಸುತ್ತಾರೆ. ಅವರ ಧಾರ್ಮಿಕವಾದ ರೋಗಗ್ರಸ್ತ, ಉರಿಹುಣ್ಣಿನ ಅವಸ್ಥೆಯು ಬಯಲುಗೊಳಿಸಲ್ಪಡುತ್ತದೆ, ಆದುದರಿಂದ ಅವರು ಪರಲೋಕದ ದೇವರನ್ನು ದೂಷಿಸುತ್ತಾರೆ. ಇಲ್ಲ, ಅವರು “ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರಪಡುವುದಿಲ್ಲ.” ಆದುದರಿಂದ ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಮುಂಚೆ ಒಂದು ಬಹುಸಂಖ್ಯಾಕ ಪರಿವರ್ತನೆಯನ್ನು ನಾವು ನಿರೀಕ್ಷಿಸಲಾರೆವು.—ಯೆಶಾಯ 32:6.

ಯೂಫ್ರೇಟೀಸ್‌ ನದಿಯು ಇಂಗಿಹೋಗುವುದು

20. ಆರನೆಯ ತುತೂರಿ ಊದುವಿಕೆ ಮತ್ತು ಆರನೆಯ ಪಾತ್ರೆಯ ಹೊಯ್ಯುವಿಕೆಯು—ಇವೆರಡೂ ಯೂಫ್ರೇಟೀಸ್‌ ನದಿಯನ್ನು ಹೇಗೆ ಒಳಗೂಡಿಸಿವೆ?

20 ಆರನೆಯ ತುತೂರಿಯ ಊದುವಿಕೆಯು “ಮಹಾ ನದಿ ಯೂಫ್ರೇಟೀಸ್‌ನ ಬಳಿಯಲ್ಲಿ ಕಟ್ಟಿರುವ ನಾಲ್ಕು ಮಂದಿ ದೇವದೂತರ” ಬಿಚ್ಚಿಬಿಡುವಿಕೆಯನ್ನು ಘೋಷಿಸಿತು. (ಪ್ರಕಟನೆ 9:14) ಐತಿಹಾಸಿಕವಾಗಿ, ಬಾಬೆಲು ಯೂಫ್ರೇಟೀಸ್‌ ನದಿಯ ಮೇಲೆ ಇದ್ದ ಮಹಾ ನಗರವಾಗಿತ್ತು. ಮತ್ತು 1919 ರಲ್ಲಿ ನಾಲ್ಕು ಮಂದಿ ಸಾಂಕೇತಿಕ ದೇವದೂತರ ಬಿಚ್ಚಿಬಿಡುವಿಕೆಯು ಮಹಾ ಬಾಬೆಲಿನ ಮಹತ್ವದ ಪತನವನ್ನು ಸಹಚರಿಸಿತು. (ಪ್ರಕಟನೆ 14:8) ಹಾಗಾದರೆ, ದೇವರ ಕೋಪದ ಆರನೆಯ ಪಾತ್ರೆಯು ಯೂಫ್ರೇಟೀಸ್‌ ನದಿಯನ್ನು ಕೂಡ ಒಳಗೂಡುವುದು ಗಮನಾರ್ಹವಾಗಿದೆ: “ಮತ್ತು ಆರನೆಯವನು ತನ್ನ ಪಾತ್ರೆಯನ್ನು ಮಹಾ ನದಿ ಯೂಫ್ರೇಟೀಸ್‌ನ ಮೇಲೆ ಹೊಯಿದನು ಮತ್ತು ಸೂರ್ಯೋದಯದಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಇಂಗಿಹೋಯಿತು.” (ಪ್ರಕಟನೆ 16:12, NW) ಇದು ಕೂಡ ಮಹಾ ಬಾಬೆಲಿಗೆ ಕೆಟ್ಟ ವಾರ್ತೆಯಾಗಿದೆ!

21, 22. (ಎ) ಸಾ. ಶ. ಪೂ. 539 ರಲ್ಲಿ ಬಾಬೆಲಿಗೆ ಯೂಫ್ರೇಟೀಸ್‌ ನದಿಯ ಸಂರಕ್ಷಕ ನೀರುಗಳು ಹೇಗೆ ಒಣಗಿಹೋದವು? (ಬಿ) ಮಹಾ ಬಾಬೆಲು ಕುಳಿತಿರುವ “ನೀರುಗಳು” ಯಾವುವು, ಮತ್ತು ಈ ಸಾಂಕೇತಿಕ ನೀರುಗಳು ಈಗಲೂ ಕೂಡ ಹೇಗೆ ಇಂಗಿಹೋಗುತ್ತಾ ಇವೆ?

21 ಪುರಾತನ ಬಾಬೆಲಿನ ಉಚ್ಛಾಯ್ರ ದಿನದಲ್ಲಿ, ಯೂಫ್ರೇಟೀಸ್‌ನ ಧಾರಾಳವಾದ ನೀರುಗಳು ಅವಳ ರಕ್ಷಣಾ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದ್ದವು. ಸಾ. ಶ. ಪೂ. 539 ರಲ್ಲಿ, ಪಾರಸಿಯ ನಾಯಕ ಕೋರೆಷನು ಆ ನೀರುಗಳ ಪಥವನ್ನು ಬೇರೆಡೆಗೆ ತಿರುಗಿಸಿದಾಗ, ಅದು ಇಂಗಿಹೋಯಿತು. ಹೀಗೆ, “ಸೂರ್ಯೋದಯದಿಂದ ಬರುವ” (ಅಂದರೆ ಮೂಡಣದಿಂದ) ರಾಜರು ಪಾರಸಿಯ ಕೋರೆಷ ಮತ್ತು ಮೇದ್ಯಯನಾದ ದಾರ್ಯಾವೆಷರು ಬಾಬೆಲಿನೊಳಗೆ ಪ್ರವೇಶಿಸಲು ಮತ್ತು ಅದನ್ನು ಜಯಿಸಲು ದಾರಿಯು ತೆರೆಯಲ್ಪಟ್ಟಿತು. ಈ ಬಿಕ್ಕಟ್ಟಿನ ಸಮಯದಲ್ಲಿ, ಯೂಫ್ರೇಟೀಸ್‌ ನದಿಯು ಆ ಮಹಾ ನಗರದ ಸುರಕ್ಷೆಯಲ್ಲಿ ಸೋತಿತು. (ಯೆಶಾಯ 44:27–45:7; ಯೆರೆಮೀಯ 51:36) ಸುಳ್ಳು ಧರ್ಮದ ಲೋಕವ್ಯಾಪಕ ವ್ಯವಸ್ಥೆಯಾದ ಆಧುನಿಕ ಬಾಬೆಲಿಗೆ, ತದ್ರೀತಿಯ ವಿಷಯವೊಂದು ಸಂಭವಿಸಲಿದೆ.

22 ಮಹಾ ಬಾಬೆಲು “ಬಹಳ ನೀರುಗಳ ಮೇಲೆ ಕೂತಿದ್ದಾಳೆ.” ಪ್ರಕಟನೆ 17:1, 15 ಕ್ಕನುಸಾರ, ಇವು “ಪ್ರಜೆ ಸಮೂಹ ಜನ ಭಾಷೆಗಳನ್ನು”—ಅವಳು ಒಂದು ಸುರಕ್ಷೆಯಾಗಿ ಪರಿಗಣಿಸಿದ ಅನುಯಾಯಿಗಳ ದೊಡ್ಡ ಗುಂಪನ್ನು—ಸೂಚಿಸುತ್ತವೆ. ಆದರೆ “ನೀರುಗಳು” ಇಂಗಿಹೋಗುತ್ತವೆ! ಎಲ್ಲಿ ಹಿಂದೆ ಅವಳಿಗೆ ಮಹಾ ಪ್ರಭಾವವಿತ್ತೋ ಆ ಪಶ್ಚಿಮ ಯೂರೋಪಿನಲ್ಲಿಯೇ ಹತ್ತಾರು ಕೋಟ್ಯಂತರ ಮಂದಿಗಳು ಪ್ರಕಟವಾಗಿ ಧರ್ಮವನ್ನು ಅಲಕ್ಷಿಸಿದ್ದಾರೆ. ಇತರ ಕೆಲವು ದೇಶಗಳಲ್ಲಿ, ಧರ್ಮದ ಪ್ರಭಾವವನ್ನು ಅಳಿಸಿ ನಿರ್ಮೂಲಮಾಡುವ ಪ್ರಯತ್ನದ ಒಂದು ಘೋಷಿತ ಧೋರಣೆಯೇ ಇದೆ. ಆ ದೇಶಗಳಲ್ಲಿನ ಜನಸಮೂಹಗಳು ಅವಳ ಪರವಾಗಿ ಏಳಲಿಲ್ಲ. ತದ್ರೀತಿಯಲ್ಲಿ, ಮಹಾ ಬಾಬೆಲ್‌ ನಾಶವಾಗುವುದಕ್ಕೆ ಸಮಯವು ಬಂದಾಗ, ಕೃಶವಾಗಿ ಕುಗ್ಗಿಹೋಗುವ ಸಂಖ್ಯೆಯ ಅವಳ ಅನುಯಾಯಿಗಳು ಯಾವ ಸುರಕ್ಷೆಯೂ ಆಗಿ ಪರಿಣಮಿಸರು. (ಪ್ರಕಟನೆ 17:16) ನೂರಾರು ಕೋಟಿಗಳ ಸದಸ್ಯತನವು ಇದೆ ಎಂದು ಅವಳು ವಾದಿಸುವುದಾದರೂ ಕೂಡ, ಮಹಾ ಬಾಬೆಲು “ಸೂರ್ಯೋದಯದಿಂದ ಬರುವ ರಾಜರ” ವಿರುದ್ಧ ತನ್ನನ್ನು ಅರಕ್ಷಿತಳಾಗಿ ಕಂಡುಕೊಳ್ಳುವಳು.

23. (ಎ) ಸಾ. ಶ. ಪೂ. 539 ರಲ್ಲಿ “ಸೂರ್ಯೋದಯದಿಂದ ಬರುವ ರಾಜರು” ಯಾರಾಗಿದ್ದರು? (ಬಿ) ಕರ್ತನ ದಿನದ ವೇಳೆಯಲ್ಲಿ “ಸೂರ್ಯೋದಯದಿಂದ ಬರುವ ರಾಜರು” ಯಾರಾಗಿದ್ದಾರೆ, ಮತ್ತು ಅವರು ಮಹಾ ಬಾಬೆಲನ್ನು ಹೇಗೆ ನಾಶಮಾಡುವರು?

23 ಈ ರಾಜರು ಯಾರು? ಸಾ. ಶ. ಪೂ. 539 ರಲ್ಲಿ, ಇವರು ಮೇದ್ಯಯ ದಾರ್ಯಾವೆಷನು ಮತ್ತು ಪಾರಸಿಯ ಕೋರೆಷನಾಗಿದ್ದರು, ಪ್ರಾಚೀನ ಬಾಬೆಲ್‌ ನಗರವನ್ನು ವಶಪಡಿಸಿಕೊಳ್ಳಲು ಇವರನ್ನು ಯೆಹೋವನು ಉಪಯೋಗಿಸಿದನು. ಇಂದು ಈ ಕರ್ತನ ದಿನದಲ್ಲಿ, ಮಹಾ ಬಾಬೆಲಿನ ಸುಳ್ಳು ಧಾರ್ಮಿಕ ವ್ಯವಸ್ಥೆಯು ಕೂಡ ಮಾನವ ಅಧಿಪತಿಗಳಿಂದ ನಾಶಗೊಳಿಸಲ್ಪಡುವುದು. ಆದರೆ ಮತ್ತೊಮ್ಮೆ, ಇದೊಂದು ದೈವಿಕ ನ್ಯಾಯತೀರ್ಪಾಗಿರುವುದು. ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು “ಸೂರ್ಯೋದಯದಿಂದ ಬರುವ ರಾಜರು” ಆಗಿದ್ದು, ಮಹಾ ಬಾಬೆಲಿನ ಮೇಲೆ ಎದುರುಬಿದ್ದು ಅವಳನ್ನು ಸಂಪೂರ್ಣವಾಗಿ ನಾಶಮಾಡುವ “ಅಭಿಪ್ರಾಯ” ವನ್ನು ಮಾನವ ಪ್ರಭುಗಳ ಹೃದಯದೊಳಗೆ ಹಾಕುವರು. (ಪ್ರಕಟನೆ 17:16, 17) ಆರನೇ ಪಾತ್ರೆಯ ಹೊಯ್ಯುವಿಕೆಯು, ಈ ನ್ಯಾಯತೀರ್ಪು ಈಗಾಗಲೇ ವಿಧಿಸಲ್ಪಡಲಿದೆ ಎಂಬುದನ್ನು ಬಹಿರಂಗವಾಗಿ ಪ್ರಕಟಪಡಿಸುತ್ತದೆ!

24. (ಎ) ಯೆಹೋವನ ಕೋಪದ ಮೊದಲ ಆರು ಪಾತ್ರೆಗಳಲ್ಲಿದ್ದವುಗಳನ್ನು ಹೇಗೆ ಪ್ರಚುರಗೊಳಿಸಲಾಗಿದೆ, ಮತ್ತು ಯಾವ ಪರಿಣಾಮದೊಂದಿಗೆ? (ಬಿ) ದೇವರ ಕೋಪದ ಉಳಿದಿರುವ ಪಾತ್ರೆಯ ಕುರಿತಾಗಿ ಹೇಳುವ ಮುಂಚೆ, ಪ್ರಕಟನೆಯು ಏನನ್ನು ಅರುಹುತ್ತದೆ?

24 ಯೆಹೋವನ ಕೋಪದ ಈ ಮೊದಲ ಆರು ಪಾತ್ರೆಗಳು ಸ್ತಿಮಿತತೆಯ ಸಂದೇಶವನ್ನು ಒಯ್ಯುತ್ತವೆ. ದೇವರ ಭೂ ಸೇವಕರು, ದೇವದೂತರಿಂದ ಬೆಂಬಲಿಸಲ್ಪಟ್ಟವರಾಗಿ, ಅವುಗಳಲ್ಲಿರುವುದನ್ನು ಭೂವ್ಯಾಪಕವಾಗಿ ಬಹಿರಂಗಪಡಿಸುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ಈ ರೀತಿಯಲ್ಲಿ, ಸೈತಾನನ ಲೋಕ ವ್ಯವಸ್ಥೆಯ ಎಲ್ಲಾ ಭಾಗಗಳ ಮೇಲೆ ಸಕಾಲಿಕ ಎಚ್ಚರಿಕೆಯು ನೀಡಲ್ಪಟ್ಟಿದೆ, ಮತ್ತು ನೀತಿಯ ಕಡೆಗೆ ತಿರುಗಿ, ಜೀವಿಸುತ್ತಾ ಇರಲು ಒಂದು ಸಂದರ್ಭವನ್ನು ವ್ಯಕ್ತಿಗಳಿಗೆ ಯೆಹೋವನು ಒದಗಿಸಿದ್ದಾನೆ. (ಯೆಹೆಜ್ಕೇಲ 33:14-16) ಇನ್ನೂ, ದೇವರ ಕೋಪದ ಇನ್ನೊಂದು ಪಾತ್ರೆಯು ಉಳಿದಿದೆ. ಆದರೆ ಅದರ ಕುರಿತು ಹೇಳುವುದರ ಮೊದಲು, ಸೈತಾನನು ಮತ್ತು ಅವನ ಐಹಿಕ ಕಾರ್ಯಭಾರಿಗಳು ಯೆಹೋವನ ನ್ಯಾಯತೀರ್ಪುಗಳ ಬಹಿರಂಗಪಡಿಸುವಿಕೆಗೆ ತಡೆಯೊಡ್ಡಲು ಹೇಗೆ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಪ್ರಕಟನೆಯು ಅರುಹುತ್ತದೆ.

ಅರ್ಮಗೆದೋನಿಗೆ ಕೂಡಿಸುವುದು

25. (ಎ) ಅಶುದ್ಧವಾದ, ಕಪ್ಪೆಯಂತಿರುವ “ಪ್ರೇರಿತ ಅಭಿವ್ಯಕ್ತಿಗಳ” ಕುರಿತು ಯೋಹಾನನು ಏನನ್ನು ನಮಗೆ ಹೇಳುತ್ತಾನೆ? (ಬಿ) ಕರ್ತನ ದಿನದಲ್ಲಿ, ಅಸಹ್ಯಕರ, ಕಪ್ಪೆಯಂತಿರುವ “ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳ” ಪೀಡೆ ಹೇಗೆ ಆಗಿದೆ, ಮತ್ತು ಯಾವ ಪರಿಣಾಮದೊಂದಿಗೆ?

25 ಯೋಹಾನನು ನಮಗನ್ನುವುದು: “ಮತ್ತು ಘಟಸರ್ಪ ಮತ್ತು ಕಾಡು ಮೃಗ ಮತ್ತು ಸುಳ್ಳು ಪ್ರವಾದಿ ಇವರ ಬಾಯಿಗಳಿಂದ ಕಪ್ಪೆಗಳಂತೆ ತೋರುತ್ತಿದ್ದ ಮೂರು ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳು ಬರುವುದನ್ನು ಕಂಡೆನು. ಇವು ವಾಸ್ತವದಲ್ಲಿ ದೆವ್ವಗಳಿಂದ ಪ್ರೇರಿಸಲ್ಪಟ್ಟ ಅಭಿವ್ಯಕ್ತಿಗಳು ಮತ್ತು ಮಹತ್ಕಾರ್ಯಗಳನ್ನು ಮಾಡುತ್ತವೆ, ಮತ್ತು ಇವು ಸರ್ವಶಕ್ತ ದೇವರ ಮಹಾ ದಿನದ ಯುದ್ಧಕ್ಕೆ ಅವರನ್ನು ಒಟ್ಟುಗೂಡಿಸಲು, ಇಡೀ ನಿವಾಸಿತ ಭೂಮಿಯ ರಾಜರ ಬಳಿಗೆ ಹೋಗುತ್ತವೆ.” (ಪ್ರಕಟನೆ 16:13, 14, NW) ಮೋಶೆಯ ದಿನಗಳಲ್ಲಿ, ಯೆಹೋವನು ಫರೋಹನ ಐಗುಪ್ತದ ಮೇಲೆ ಕಪ್ಪೆಗಳ ಅಸಹ್ಯಕರ ಬಾಧೆಯನ್ನು ತಂದನು, ಈ ಮೂಲಕ “ದೇಶದಲ್ಲಿಲ್ಲಾ ದುರ್ವಾಸನೆ ತುಂಬಿತು.” (ವಿಮೋಚನಕಾಂಡ 8:5-15) ಕರ್ತನ ದಿನದಲ್ಲಿ, ಒಂದು ವಿಭಿನ್ನ ಮೂಲದಿಂದ ಆದರೂ ಕೂಡ, ಅಸಹ್ಯಕರ ಕಪ್ಪೆಯಂತಿರುವ ಒಂದು ದೈವ ಪೀಡೆಯು ಇದೆ. ಅದು ಸೈತಾನನ “ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳ”ನ್ನು ಒಳಗೊಂಡಿದೆ, ಎಲ್ಲಾ ಮಾನವ ಅಧಿಪತಿಗಳನ್ನು, “ರಾಜರನ್ನು” ಯೆಹೋವ ದೇವರಿಗೆ ವಿರೋಧವಾಗಿ ಯುಕ್ತಿಯಿಂದ ನಿರ್ವಹಿಸುವ ಬುದ್ಧಿಪೂರ್ವಕವಾದ ಪ್ರಚಾರಕಾರ್ಯವನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಹೀಗೆ, ದೇವರ ಕೋಪದ ಪಾತ್ರೆಗಳನ್ನು ಹೊಯ್ಯುವುದರಿಂದ ಅವರು ತಿರುಗಿಸಲ್ಪಡದೆ, “ಸರ್ವಶಕ್ತ ದೇವರ ಮಹಾ ದಿನವು” ಆರಂಭವಾದಾಗ ಸೈತಾನನ ಪಕ್ಷದಲ್ಲಿ ದೃಢವಾಗಿ ನಿಂತಿದ್ದಾರೆಂದು ಸೈತಾನನು ಖಚಿತಮಾಡಿಕೊಳ್ಳುತ್ತಾನೆ.

26. (ಎ) ಸೈತಾನ ಸಂಬಂಧಿತ ಧಾರ್ಮಿಕ ಪ್ರಚಾರ ಕಾರ್ಯ ಯಾವ ಮೂರು ಮೂಲಗಳಿಂದ ಬರುತ್ತದೆ? (ಬಿ) “ಸುಳ್ಳು ಪ್ರವಾದಿಯು” ಯಾರು, ಮತ್ತು ನಮಗೆ ಅದು ತಿಳಿದಿರುವುದು ಹೇಗೆ?

26 ಈ ಪ್ರಚಾರ ಕಾರ್ಯವು ಪ್ರಕಟನೆಯಲ್ಲಿ ಈಗಾಗಲೇ ನಾವು ಸಂಧಿಸಿದ ಜೀವಿಗಳಾದ “ಘಟಸರ್ಪ” (ಸೈತಾನ) ನಿಂದ ಮತ್ತು “ಕಾಡು ಮೃಗ” ದಿಂದ (ಸೈತಾನನ ಐಹಿಕ ರಾಜಕೀಯ ರಚನೆ) ಬರುತ್ತದೆ. ಹಾಗಾದರೆ “ಸುಳ್ಳು ಪ್ರವಾದಿ” ಏನಾಗಿದೆ? ಇದು ಕೂಡ ಹೆಸರಿನಲ್ಲಿ ಮಾತ್ರವೇ ಹೊಸತಾಗಿದೆ. ಈ ಮುಂಚೆ, ಏಳು ತಲೆಗಳುಳ್ಳ ಕಾಡು ಮೃಗದ ಮುಂದೆ ಮಹತ್ತಾದ ಸೂಚಕ ಕಾರ್ಯಗಳನ್ನು ಮಾಡಿದ ಎರಡು ಕೊಂಬುಗಳ ಕುರಿಮರಿಯಂತಹ ಒಂದು ಕಾಡು ಮೃಗವು ನಮಗೆ ತೋರಿಸಲ್ಪಟ್ಟಿತು. ಈ ಕೃತ್ರಿಮ ಜೀವಿಯು ಆ ಕಾಡು ಮೃಗಕ್ಕೆ ಪ್ರವಾದಿಯಂತೆ ಕಾರ್ಯನಡಿಸಿತು. ಅದು ಕಾಡು ಮೃಗದ ಆರಾಧನೆಯನ್ನು ಪ್ರವರ್ಧಿಸಿತು, ಅದಕ್ಕೆ ಒಂದು ವಿಗ್ರಹ ರಚಿಸುವಂತೆ ಕೂಡ ಕಾರಣವಾಗಿತ್ತು. (ಪ್ರಕಟನೆ 13:11-14) ಕುರಿಮರಿಯಂತೆ ಎರಡು ಕೊಂಬಿನ ಈ ಕಾಡು ಮೃಗವು ಇಲ್ಲಿ ತಿಳಿಸಲಾದ “ಸುಳ್ಳು ಪ್ರವಾದಿ”ಯೇ ಆಗಿರಬೇಕು. ಎರಡು ಕೊಂಬಿನ ಸಾಂಕೇತಿಕ ಕಾಡು ಮೃಗದಂತೆಯೇ ಸುಳ್ಳು ಪ್ರವಾದಿಯು ಇರುವುದನ್ನು ದೃಢೀಕರಿಸುತ್ತಾ, ನಾವು ಅನಂತರ ಹೀಗೆ ಓದುತ್ತೇವೆ: “ಅದರ [ಏಳು ತಲೆಗಳ ಕಾಡು ಮೃಗವು] ಮುಂದೆ ಮಹತ್ಕಾರ್ಯಗಳನ್ನು ಮಾಡಿ ಕಾಡು ಮೃಗದ ಗುರುತು ಪಡೆದವರನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರನ್ನು” ಆ ಸುಳ್ಳು ಪ್ರವಾದಿಯು ತಪ್ಪುದಾರಿಗೆ ನಡಿಸಿತು.—ಪ್ರಕಟನೆ 19:20.

27. (ಎ) ಯೇಸು ಕ್ರಿಸ್ತನು ತಾನೇ ಯಾವ ಸಮಯೋಚಿತ ಎಚ್ಚರಿಕೆಯನ್ನು ಕೊಡುತ್ತಾನೆ? (ಬಿ) ಯೇಸುವು ಭೂಮಿಯ ಮೇಲೆ ಇರುವಾಗಲೆ ಯಾವ ಎಚ್ಚರಿಕೆಯನ್ನು ಕೊಟ್ಟನು? (ಸಿ) ಅಪೊಸ್ತಲ ಪೌಲನು ಯೇಸುವಿನ ಎಚ್ಚರಿಕೆಯನ್ನು ಹೇಗೆ ಮಾರ್ದನಿಸಿದನು?

27 ನಮ್ಮ ಸುತ್ತಲೂ ಇಷ್ಟೊಂದು ಸೈತಾನ ಸಂಬಂಧಿತ ಪ್ರಚಾರಕಾರ್ಯ ಇರುವುದರಿಂದ, ಯೋಹಾನನು ದಾಖಲಿಸುವ ಮುಂದಿನ ಮಾತುಗಳು ನಿಜವಾಗಿಯೂ ಸಮಯೋಚಿತವಾಗಿವೆ: “ಇಗೋ, ನಾನು ಕಳ್ಳನಂತೆ ಬರುತ್ತಿದ್ದೇನೆ, ತಾನು ನಗ್ನನಾಗಿ ನಡೆಯದಂತೆ ಮತ್ತು ಜನರು ತನ್ನ ನಾಚಿಕೆಗೇಡಿತನವನ್ನು ನೋಡದಂತೆ ಎಚ್ಚರವಾಗಿರುವವನು ಮತ್ತು ತನ್ನ ಹೊರ ಉಡುಪುಗಳನ್ನು ಕಾಪಾಡಿಕೊಳ್ಳುವವನು ಧನ್ಯನು.” (ಪ್ರಕಟನೆ 16:15, NW) “ಕಳ್ಳನಂತೆ” ಯಾರು ಬರುತ್ತಾನೆ? ಯೇಸುವು ತಾನೇ, ಯೆಹೋವನ ವಧಕಾರನಾಗಿ ಅಪ್ರಕಟಿತ ಸಮಯದಲ್ಲಿ ಬರುತ್ತಾನೆ. (ಪ್ರಕಟನೆ 3:3; 2 ಪೇತ್ರ 3:10) ಇನ್ನೂ ಭೂಮಿಯ ಮೇಲೆ ಇರುವಾಗ, ಯೇಸುವು ತನ್ನ ಬರುವಿಕೆಯನ್ನು ಕಳ್ಳನಂತೆ ಬರುವುದಕ್ಕೆ ಸರಿಹೋಲಿಸುತ್ತಾ ಹೀಗಂದನು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. ಆದಕಾರಣ ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:42-44; ಲೂಕ 12:37, 40) ಈ ಎಚ್ಚರಿಕೆಯನ್ನು ಮರುಧ್ವನಿಸುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಸಮಾಧಾನವಾಗಿಯೂ ನಿರ್ಭಯವಾಗಿಯೂ (ಶಾಂತಿ ಮತ್ತು ಭದ್ರತೆ, NW) ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು . . . [ಫಕ್ಕನೆ; NW] ಬರುವುದು.” “ಶಾಂತಿ ಮತ್ತು ಭದ್ರತೆ”ಯ ಆ ಸುಳ್ಳು ಘೋಷಣೆಯನ್ನು ಮಾಡುವುದರ ಕಡೆಗೆ ಸೈತಾನನು ಈಗ ಕೂಡ ಜನಾಂಗಗಳನ್ನು ಕುಯುಕ್ತಿಯಿಂದ ನಡಿಸುತ್ತಾನೆ!—1 ಥೆಸಲೊನೀಕ 5:2, 3.

28. ಪ್ರಾಪಂಚಿಕ ಒತ್ತಡಗಳನ್ನು ತ್ಯಜಿಸುವುದರ ಕುರಿತು ಯೇಸುವು ಯಾವ ಎಚ್ಚರಿಕೆಯನ್ನು ಕೊಟ್ಟನು, ಮತ್ತು ತಮ್ಮ ಮೇಲೆ “ಉರ್ಲಿನಂತೆ” ಬರುವುದಕ್ಕೆ ಕ್ರೈಸ್ತರು ಬಯಸದಿರುವ “ಆ ದಿನವು” ಯಾವುದಾಗಿದೆ?

28 ಪ್ರಸಾರ ಕಾರ್ಯದಲ್ಲಿ ನೆನೆದಿರುವ ಈ ಲೋಕವು, ಕ್ರೈಸ್ತರ ಮೇಲೆ ಹಾಕಲಿರುವ ಒತ್ತಡಗಳ ವಿಧದ ಕುರಿತು ಕೂಡ ಯೇಸುವು ಎಚ್ಚರಿಸಿದನು. ಆತನಂದದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. . . . . ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯ ಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.” (ಲೂಕ 21:34-36) “ಆ ದಿನ”ವು “ಸರ್ವಶಕ್ತ ದೇವರ ಮಹಾ ದಿನ” ವಾಗಿದೆ. (ಪ್ರಕಟನೆ 16:14) ಯೆಹೋವನ ಸಾರ್ವಭೌಮತೆಯ ನಿರ್ದೋಷೀಕರಣದ “ಆ ದಿನವು” ಹತ್ತರಿಸುತ್ತಿರುವಂತೆಯೇ, ಜೀವಿತದ ಚಿಂತೆಗಳನ್ನು ನಿಭಾಯಿಸುವುದು ಇನ್ನೂ ಹೆಚ್ಚು ಕಷ್ಟಕರವಾಗುವುದು. ಕ್ರೈಸ್ತರು ಜಾಗರೂಕರಾಗಿರುವ ಮತ್ತು ಸಾವಧಾನವಾಗಿರುವ ಅಗತ್ಯವಿದೆ, ಆ ದಿನವು ಬರುವ ತನಕ ಎಚ್ಚರದಿಂದಿರಬೇಕು.

29, 30. (ಎ) ನಿದ್ರಿಸುವವರಾಗಿ ಕಂಡುಕೊಳ್ಳಲ್ಪಡುವವರು ತಮ್ಮ “ಹೊರ ಉಡುಪುಗಳನ್ನು” ಕಳೆದುಕೊಳ್ಳುವುದರಿಂದ ನಾಚಿಕೆಗೊಳಗಾಗುವರೆನ್ನುವ ಯೇಸುವಿನ ಎಚ್ಚರಿಕೆಯಿಂದ ಏನು ಸೂಚಿಸಲ್ಪಡುತ್ತದೆ? (ಬಿ) ಹೊರ ಉಡುಪುಗಳು ಧರಿಸುವವನನ್ನು ಏನಾಗಿ ಗುರುತಿಸುತ್ತವೆ? (ಸಿ) ಒಬ್ಬ ವ್ಯಕ್ತಿಯು ತನ್ನ ಸಾಂಕೇತಿಕ ಹೊರ ಉಡುಪುಗಳನ್ನು ಹೇಗೆ ಕಳೆದುಕೊಳ್ಳಬಲ್ಲನು, ಮತ್ತು ಯಾವ ಪರಿಣಾಮದೊಂದಿಗೆ?

29 ಹಾಗಾದರೆ, ನಿದ್ರಿಸುವವರಾಗಿ ಕಂಡುಕೊಳ್ಳಲ್ಪಡುವವರು ತಮ್ಮ “ಹೊರ ಉಡುಪುಗಳನ್ನು” ಕಳೆದುಕೊಂಡು ನಾಚಿಕೆಗೊಳಪಡಿಸಲ್ಪಡುವರು ಎನ್ನುವ ಎಚ್ಚರಿಕೆಯಿಂದ ಏನು ಸೂಚಿತವಾಗಿದೆ? ಪ್ರಾಚೀನ ಇಸ್ರಾಯೇಲಿನಲ್ಲಿ, ದೇವಾಲಯದಲ್ಲಿ ಕಾವಲು ಕೆಲಸದ ಮೇಲೆ ನೇಮಿತನಾದ ಯಾವನೇ ಯಾಜಕ ಯಾ ಲೇವಿಯನಿಗೆ ಗುರುತರವಾದ ಜವಾಬ್ದಾರಿಯಿತ್ತು. ಇಂಥ ಕೆಲಸದ ಮೇಲಿರುವಾಗ ನಿದ್ದೆಮಾಡುವವನಾಗಿ ಯಾವನಾದರೂ ಹಿಡಿಯಲ್ಪಟ್ಟರೆ, ಅವನ ವಸ್ತ್ರಗಳನ್ನು ಅವನಿಂದ ಕಸಿದುಕೊಳ್ಳುವ ಮತ್ತು ಸುಟ್ಟುಹಾಕುವ ಸಾಧ್ಯತೆ ಇತ್ತು, ಹೀಗೆ ಅವನು ಬಹಿರಂಗವಾಗಿ ಅವಮಾನಿಸಲ್ಪಡುತ್ತಿದ್ದನು ಎಂದು ಯೆಹೂದಿ ವ್ಯಾಖ್ಯಾನಕಾರರು ನಮಗೆ ಹೇಳುತ್ತಾರೆ.

30 ಇಂದು ತದ್ರೀತಿಯ ವಿಷಯವು ಸಂಭವಿಸಬಲ್ಲದೆಂದು ಯೇಸುವು ಇಲ್ಲಿ ಎಚ್ಚರಿಸುತ್ತಾನೆ. ಯಾಜಕರು ಮತ್ತು ಲೇವಿಯರು ಯೇಸುವಿನ ಅಭಿಷಿಕ್ತ ಸಹೋದರರನ್ನು ಮುನ್‌ಸೂಚಿಸಿದರು. (1 ಪೇತ್ರ 2:9) ಆದರೆ ವಿಸ್ತರಣದಲ್ಲಿ, ಯೇಸುವಿನ ಎಚ್ಚರಿಕೆಯು ವ್ಯಾಪ್ತಿಯಲ್ಲಿ ಮಹಾ ಸಮೂಹಕ್ಕೆ ಕೂಡ ಅನ್ವಯಿಸುತ್ತದೆ. ಇಲ್ಲಿ ಸೂಚಿಸಲಾದ ಹೊರ ಉಡುಪುಗಳು ಉಟ್ಟವನನ್ನು ಯೆಹೋವನ ಒಬ್ಬ ಕ್ರೈಸ್ತ ಸಾಕ್ಷಿಯಾಗಿ ಗುರುತಿಸುತ್ತವೆ. (ಹೋಲಿಸಿರಿ ಪ್ರಕಟನೆ 3:18; 7:14.) ಸೈತಾನನ ಲೋಕದ ಒತ್ತಡಗಳು ನಿದ್ದೆಗೆ ಯಾ ಚಟುವಟಿಕಾಹೀನತೆಗೆ ನಡಿಸಲು ಯಾವನಾದರೂ ಬಿಡುವುದಾದರೆ, ಅವರು ತಮ್ಮ ಈ ಹೊರ ಉಡುಪುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ—ಇನ್ನೊಂದು ಮಾತಿನಲ್ಲಿ, ಕ್ರೈಸ್ತರೋಪಾದಿ ಅವರ ಶುದ್ಧ ಗುರುತನ್ನು ಅವರು ಕಳೆದುಕೊಳ್ಳುತ್ತಾರೆ. ಇಂಥ ಒಂದು ಪರಿಸ್ಥಿತಿಯು ಲಜ್ಚಾಸ್ಪದವಾಗಿರುವುದು. ಪೂರ್ಣವಾಗಿ ಕಳೆದುಕೊಳ್ಳುವ ಅಪಾಯದಲ್ಲಿ ಅದು ಒಬ್ಬನನ್ನು ಹಾಕಬಲ್ಲದು.

31. (ಎ) ಪ್ರಕಟನೆ 16:16 ಕ್ರೈಸ್ತರು ಎಚ್ಚರಿಕೆಯುಳ್ಳವರಾಗಿ ಉಳಿಯಬೇಕೆನ್ನುವ ಅಗತ್ಯತೆಯನ್ನು ಹೇಗೆ ಒತ್ತಿಹೇಳುತ್ತದೆ? (ಬಿ) ಅರ್ಮಗೆದೋನಿನ ಸಂಬಂಧವಾಗಿ ಕೆಲವು ಧಾರ್ಮಿಕ ಮುಖಂಡರು ಯಾವ ತರ್ಕವನ್ನು ಮಾಡುತ್ತಾರೆ?

31 ಪ್ರಕಟನೆಯ ಮುಂದಿನ ವಚನವು ನೆರವೇರಿಕೆಗೆ ಹತ್ತರಿಸುತ್ತಿರುವಂತೆ, ಕ್ರೈಸ್ತರು ಎಚ್ಚರವಾಗಿ ಇರುವ ಅಗತ್ಯ ಇನ್ನೂ ಹೆಚ್ಚು ತುರ್ತಾಗುತ್ತದೆ: “ಮತ್ತು ಅವು [ದೆವ್ವಗಳಿಂದ ಪ್ರೇರಿತ ಅಭಿವ್ಯಕ್ತಿಗಳು] ಅವರನ್ನು [ಭೂರಾಜರು ಯಾ ಮುಖಂಡರು] ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು.” (ಪ್ರಕಟನೆ 16:16, NW) ಹೆಚ್ಚು ರೂಢಿಯಾಗಿ ಅರ್ಮಗೆದೋನ್‌ ಎಂದು ಭಾಷಾಂತರಿಸಲ್ಪಟ್ಟ ಈ ಹೆಸರು ಬೈಬಲಿನಲ್ಲಿ ಕೇವಲ ಒಂದು ಬಾರಿ ಬರುತ್ತದೆ. ಆದರೆ ಅದು ಮಾನವ ಕುಲದ ಕಲ್ಪನಾಪತಾಕೆಯನ್ನು ಹಾರಿಸಿದೆ. ಲೋಕ ಧುರೀಣರು ಸಂಭವನೀಯ ನ್ಯೂಕ್ಲಿಯರ್‌ ಅರ್ಮಗೆದೋನಿನ ಕುರಿತು ಎಚ್ಚರಿಸಿದ್ದಾರೆ. ಅರ್ಮಗೆದೋನ್‌ ಬೈಬಲ್‌ ಸಮಯಗಳಲ್ಲಿ ಅನೇಕ ನಿರ್ಣಾಯಕ ಯುದ್ಧಗಳು ನಡೆದ ಸ್ಥಳವಾದ ಮೆಗಿದ್ದೋವಿನ ಪುರಾತನ ನಗರದೊಂದಿಗೆ ಕೂಡ ಸಂಬಂಧಿಸಿದೆ, ಮತ್ತು ಆದಕಾರಣ, ಕೆಲವು ಧಾರ್ಮಿಕ ಮುಖಂಡರು ಭೂಮಿಯ ಮೇಲೆ ನಡೆಯುವ ಈ ಕೊನೇ ಯುದ್ಧವು ಆ ಸೀಮಿತ ಕ್ಷೇತ್ರದಲ್ಲಿ ನಡೆಯಲಿರುವುದೆಂದು ಊಹೆಕಟ್ಟುತ್ತಾರೆ. ಇದರಲ್ಲಿ, ಅವರು ಸತ್ಯದ ಗುರಿತಪ್ಪಿ ಬಹು ದೂರ ಹೋಗಿದ್ದಾರೆ.

32, 33. (ಎ) ಒಂದು ಅಕ್ಷರಾರ್ಥಕ ಸ್ಥಳವಾಗಿರುವ ಬದಲು, ಅರ್ಮಗೆದೋನ್‌ ಯಾ ಹರ್ಮಗೆದೋನ್‌ ಎನ್ನುವ ಹೆಸರು ಏನನ್ನು ಪ್ರತಿನಿಧಿಸುತ್ತದೆ? (ಬಿ) ಇನ್ನಿತರ ಯಾವ ಬೈಬಲ್‌ ಪದಗಳು “ಅರ್ಮಗೆದೋನ್‌”ಗೆ ಸಮಾನ ಯಾ ಅದಕ್ಕೆ ಸಂಬಂಧಿತವಾಗಿ ಇವೆ? (ಸಿ) ಏಳನೆಯ ದೇವದೂತನಿಗೆ ದೇವರ ಕೋಪದ ಕೊನೆಯ ಪಾತ್ರೆಯನ್ನು ಹೊಯ್ಯಲು ಯಾವಾಗ ಸಮಯವಾಗಿರುವುದು?

32 ಹರ್ಮಗೆದೋನಿನ ಹೆಸರಿನ ಅರ್ಥವು “ಮೆಗಿದ್ದೋವಿನ ಬೆಟ್ಟ”. ಆದರೆ ಒಂದು ಅಕ್ಷರಾರ್ಥ ಸ್ಥಳವಾಗಿರುವ ಬದಲು, ಅದು ಯೆಹೋವ ದೇವರ ವಿರೋಧವಾಗಿ ಎಲ್ಲಾ ಜನಾಂಗಗಳು ಕೂಡಿಸಲ್ಪಡುವ ಮತ್ತು ಎಲ್ಲಿ ಆತನು ಅವರನ್ನು ಕಟ್ಟಕಡೆಗೆ ನಾಶಗೊಳಿಸಲಿರುವನೋ ಆ ಲೋಕ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ. ಇದು ಹರವಿನಲ್ಲಿ ಭೂವ್ಯಾಪಕವಾಗಿರುವುದು. (ಯೆರೆಮೀಯ 25:31-33; ದಾನಿಯೇಲ 2:44) ಅದು, ಎಲ್ಲಿ ಜನಾಂಗಗಳು ಯೆಹೋವನಿಂದ ಮರಣದಂಡನೆಗೆ ಕೂಡಿಸಲ್ಪಡುತ್ತಾರೊ ಆ “ದೇವರ ಕೋಪವೆಂಬ ದೊಡ್ಡ ದ್ರಾಕ್ಷೇತೊಟ್ಟಿಗೆ”, ಮತ್ತು “ತೀರ್ಪಿನ ತಗ್ಗಿಗೆ”, ಅಥವಾ “ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ” ಅನುರೂಪತೆಯಲ್ಲಿದೆ. (ಪ್ರಕಟನೆ 14:19; ಯೋವೇಲ 3:12, 14) ಅದು ಎಲ್ಲಿ ಮಾಗೋಗದ ಗೋಗನ ಸೈತಾನ ಸಂಬಂಧಿತ ಸೈನ್ಯದವರು ನಾಶಗೊಳಿಸಲ್ಪಡುವರೊ ಆ “ಇಸ್ರಾಯೇಲ್‌ ದೇಶಕ್ಕೆ” ಮತ್ತು ಎಲ್ಲಿಂದ ಉತ್ತರದ ರಾಜನು ಬಂದು ಮಹಾ ಪ್ರಭುವಾದ ಮೀಕಾಯೇಲನ ಕೈಗಳಲ್ಲಿ “ಕೊನೆಗಾಣುವನೊ” ಆ “ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ” ಇರುವ ಸ್ಥಳಕ್ಕೆ ಕೂಡ ಸಂಬಂಧಿಸಿದೆ.—ಯೆಹೆಜ್ಕೇಲ 38:16-18, 22, 23; ದಾನಿಯೇಲ 11:45–12:1.

33 ಸೈತಾನ ಮತ್ತು ಅವನ ಐಹಿಕ ಕಾರ್ಯಭಾರಿಗಳಿಂದ ಪ್ರಾರಂಭವಾದ ಕರ್ಕಶ ಪ್ರಸಾರ ಕಾರ್ಯದಿಂದ ಈ ಸನ್ನಿವೇಶದೊಳಗೆ ಎಲ್ಲಾ ಜನಾಂಗಗಳು ಕುಯುಕ್ತಿಯಿಂದ ನಡಿಸಲ್ಪಟ್ಟಾಗ, ಏಳನೆಯ ದೇವದೂತನು ದೇವರ ಕೋಪದ ಕೊನೆಯ ಪಾತ್ರೆಯನ್ನು ಹೊಯ್ಯುವುದಕ್ಕೆ ಸಮಯವು ಬರುವುದು.

“ಅದು ಸಂಭವಿಸಿದೆ!”

34. ಏಳನೆಯ ದೇವದೂತನು ಯಾವುದರ ಮೇಲೆ ತನ್ನ ಪಾತ್ರೆಯನ್ನು ಹೊಯ್ಯುತ್ತಾನೆ, ಮತ್ತು “ಪವಿತ್ರಸ್ಥಾನದಿಂದ ಸಿಂಹಾಸನದ” ಕಡೆಯಿಂದ ಯಾವ ಘೋಷಣೆಯು ಉಂಟಾಗುತ್ತದೆ?

34“ಮತ್ತು ಏಳನೆಯವನು ತನ್ನ ಪಾತ್ರೆಯನ್ನು ವಾಯುವಿನ ಮೇಲೆ ಹೊಯಿದನು. ಆಗ ಪವಿತ್ರಸ್ಥಾನದಿಂದ ಸಿಂಹಾಸನದ ಕಡೆಯಿಂದ ಮಹಾ ಶಬ್ದವು ಹೊರಟು, ಹೀಗಂದಿತು: ‘ಅದು ಸಂಭವಿಸಿದೆ!’”—ಪ್ರಕಟನೆ 16:17, NW.

35. (ಎ) ಪ್ರಕಟನೆ 16:17ರ “ವಾಯುವು” ಏನಾಗಿದೆ? (ಬಿ) ವಾಯುವಿನ ಮೇಲೆ ಆತನ ಪಾತ್ರೆಯನ್ನು ಹೊಯ್ಯುವುದರಲ್ಲಿ ಏಳನೆಯ ದೇವದೂತನು ಏನನ್ನು ತಿಳಿಯಪಡಿಸುತ್ತಾನೆ?

35 “ವಾಯು”ವು ಬಾಧಿಸಲ್ಪಡಲಿರುವ ಕಟ್ಟಕಡೆಯ ಜೀವ-ಸಂರಕ್ಷಕ ಮಾಧ್ಯಮವಾಗಿದೆ. ಆದರೆ ಇದು ಅಕ್ಷರಾರ್ಥಕ ವಾಯುವಲ್ಲ. ಅಕ್ಷರಾರ್ಥಕ ಭೂಮಿ, ಸಮುದ್ರ, ಸಿಹಿನೀರಿನ ಮೂಲಗಳು ಯಾ ಸೂರ್ಯನು ಯೆಹೋವನ ಕೈಯಲ್ಲಿ ನ್ಯಾಯತೀರ್ಪುಗಳನ್ನು ಹೊಂದಲು ಹೇಗೆ ಅರ್ಹರಾಗಿಲ್ಲವೊ, ಅಂತೆಯೇ ಯೆಹೋವನ ಪ್ರತಿಕೂಲ ನ್ಯಾಯತೀರ್ಪುಗಳಿಗೆ ಅರ್ಹವನ್ನಾಗಿ ಮಾಡುವ ಯಾವುದೂ ಅಕ್ಷರಾರ್ಥಕ ವಾಯುವಿನಲ್ಲಿ ಇಲ್ಲ. ಅದರ ಬದಲು, ಸೈತಾನನನ್ನು “ವಾಯುಮಂಡಲದ ಅಧಿಕಾರ ನಡಿಸುವ ಅಧಿಪತಿಯಾಗಿ” ಪೌಲನು ಕರೆದಾಗ, ಇದೇ “ವಾಯು” ವಿನ ಕುರಿತು ಚರ್ಚಿಸುತ್ತಿದ್ದನು. (ಎಫೆಸ 2:2) ಅದು ಇಂದು ಲೋಕದಿಂದ ಉಸಿರಾಡಲ್ಪಡುತ್ತಿರುವ ಸೈತಾನ ಸಂಬಂಧಿತ “ವಾಯು”, ಯಾ ಆತ್ಮ ಅಥವಾ ಅವನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯ ಗುಣಲಕ್ಷಣಗಳನ್ನು ವಿವರಿಸುವ ಸಾಮಾನ್ಯ ಮಾನಸಿಕ ಪ್ರವೃತ್ತಿಯಾಗಿದ್ದು, ಯೆಹೋವನ ಸಂಸ್ಥೆಯ ಹೊರಗಿರುವ ಜೀವಿತದ ಪ್ರತಿಯೊಂದು ವಿಭಾಗದಲ್ಲಿ ವ್ಯಾಪಿಸಿರುವ ಸೈತಾನ ಸಂಬಂಧಿತ ಆಲೋಚನೆ ಆಗಿದೆ. ಆದುದರಿಂದ ವಾಯುವಿನ ಮೇಲೆ ಆತನ ಪಾತ್ರೆಯ ಹೊಯ್ಯುವಿಕೆಯು, ಏಳನೆಯ ದೇವದೂತನು ಸೈತಾನನ, ಅವನ ಸಂಸ್ಥೆಯ, ಮತ್ತು ಯೆಹೋವನ ಸಾರ್ವಭೌಮತೆಯ ಉಲ್ಲಂಘನೆಯಲ್ಲಿ ಸೈತಾನನನ್ನು ಬೆಂಬಲಿಸುವುದಕ್ಕೆ ಮಾನವ ಕುಲವನ್ನು ಪ್ರೇರಿಸುವ ಎಲ್ಲವುಗಳ ವಿರುದ್ಧ ಯೆಹೋವನ ಸಿಟ್ಟನ್ನು ವ್ಯಕ್ತಪಡಿಸುತ್ತದೆ.

36. (ಎ) ಏಳು ಬಾಧೆಗಳು ಏನನ್ನು ಸಂಯೋಜಿಸುತ್ತವೆ? (ಬಿ) “ಅದು ಸಂಭವಿಸಿದೆ!” ಎಂಬ ಯೆಹೋವನ ಘೋಷಣೆಯಿಂದ ಏನು ಸೂಚಿಸಲ್ಪಡುತ್ತದೆ?

36 ಇದು ಮತ್ತು ಹಿಂದಿನ ಆರು ಬಾಧೆಗಳು ಸೈತಾನನ ಮತ್ತು ಅವನ ವ್ಯವಸ್ಥೆಯ ವಿರುದ್ಧ ಯೆಹೋವನ ನ್ಯಾಯತೀರ್ಪುಗಳ ಒಟ್ಟು ಮೊತ್ತವನ್ನು ಕೊಡುತ್ತವೆ. ಇದು ಸೈತಾನ ಮತ್ತು ಅವನ ಸಂತಾನದವರಿಗೆ ದಂಡನೆಯ ಘೋಷಣೆಯಾಗಿದೆ. ಈ ಕೊನೆಯ ಪಾತ್ರೆಯು ಹೊಯ್ಯಲ್ಪಟ್ಟಾಗ ಯೆಹೋವನು ತಾನೇ ಘೋಷಿಸುವುದು: “ಅದು ಸಂಭವಿಸಿದೆ!” ಹೇಳಲು ಇನ್ನೇನೂ ಉಳಿದಿಲ್ಲ. ದೇವರ ಕೋಪದ ಪಾತ್ರೆಗಳಲ್ಲಿರುವುದು ಯೆಹೋವನಿಗೆ ತೃಪ್ತಿಯಾಗುವಂತೆ ಪ್ರಚುರಿಸಲ್ಪಟ್ಟಾಗ ಈ ಸಂದೇಶಗಳಿಂದ ಘೋಷಿಸಲ್ಪಡುವ ನ್ಯಾಯತೀರ್ಪುಗಳನ್ನು ಆತನು ಜಾರಿಗೊಳಿಸುವುದರಲ್ಲಿ ತಾಮಸವಾಗದು.

37. ದೇವರ ಕೋಪದ ಏಳನೆಯ ಪಾತ್ರೆಯ ಹೊಯ್ಯುವಿಕೆಯ ಅನಂತರ ಆಗುವ ವಿಷಯವನ್ನು ಯೋಹಾನನು ಹೇಗೆ ವಿವರಿಸುತ್ತಾನೆ?

37 ಯೋಹಾನನು ಮುಂದುವರಿಸುವುದು: “ಮತ್ತು ಮಿಂಚುಗಳು ಮತ್ತು ವಾಣಿಗಳು ಮತ್ತು ಗುಡುಗುಗಳು ಉಂಟಾದವು, ಮತ್ತು ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಸಂಭವಿಸಿದಿರ್ದದಂತಹ ಒಂದು ಮಹಾ ಭೂಕಂಪ, ಎಷ್ಟೋ ವ್ಯಾಪಕವಾದ, ಎಷ್ಟೋ ದೊಡ್ಡದಾದ ಒಂದು ಭೂಕಂಪವಾಯಿತು. ಮಹಾ ನಗರವು ಮೂರು ಭಾಗಗಳಾಗಿ ಸೀಳಲ್ಪಟ್ಟಿತು, ಮತ್ತು ಜನಾಂಗಗಳ ನಗರಗಳು ಬಿದ್ದವು; ಮತ್ತು ತನ್ನ ಕೋಪದ ದ್ರಾಕ್ಷಾಮದ್ಯದ ಪಾತ್ರೆಯನ್ನು ಅವಳಿಗೆ ಕುಡಿಯುವಂತೆ ಕೊಡಲು ದೇವರ ದೃಷ್ಟಿಯಲ್ಲಿ ಮಹಾ ಬಾಬೆಲ್‌ ಜ್ಞಾಪಿಸಲ್ಪಟ್ಟಳು. ಅಲ್ಲದೆ, ಪ್ರತಿಯೊಂದು ದ್ವೀಪವೂ ಓಡಿಹೋಯಿತು, ಮತ್ತು ಬೆಟ್ಟಗಳು ಕಾಣದೆ ಹೋದವು. ಮತ್ತು ಪ್ರತಿಯೊಂದು ಕಲ್ಲು ಸುಮಾರು ಒಂದು ಟ್ಯಾಲೆಂಟು ತೂಕವಿರುವ ಮಹಾ ಆನೇಕಲ್ಲಿನ ಮಳೆ ಆಕಾಶದಿಂದ ಮನುಷ್ಯರ ಮೇಲೆ ಇಳಿದುಬಂತು, ಆನೇಕಲ್ಲಿನ ಮಳೆಯ ಬಾಧೆಯ ಕಾರಣ ಮನುಷ್ಯರು ದೇವರನ್ನು ದೂಷಿಸಿದರು ಯಾಕಂದರೆ ಅದರ ಬಾಧೆಯು ಅಸಾಮಾನ್ಯವಾಗಿ ಮಹತ್ತಾಗಿತ್ತು.”—ಪ್ರಕಟನೆ 16:18-21, NW.

38. ಇದರಿಂದ ಯಾವುದು ಸೂಚಿತವಾಗಿದೆ—(ಎ) “ಮಹಾ ಭೂಕಂಪ?” (ಬಿ) “ಮಹಾ ನಗರ,” ಮಹಾ ಬಾಬೆಲು “ಮೂರು ಭಾಗಗಳಾಗಿ” ಸೀಳಲ್ಪಡುವ ನಿಜತ್ವ? (ಸಿ) “ಪ್ರತಿಯೊಂದು ದ್ವೀಪ ಓಡಿಹೋಯಿತು, ಬೆಟ್ಟಗಳು ಕಾಣದೆ ಹೋದವು” ಎನ್ನುವ ನಿಜತ್ವ? (ಡಿ) “ಆನೇಕಲ್ಲಿನ ಮಳೆಯ ಬಾಧೆ?”

38 ಪುನಃ ಒಮ್ಮೆ, ಯೆಹೋವನು ಮಾನವ ಕುಲದ ಕಡೆಗೆ ಸುಸ್ಪಷ್ಟವಾಗಿ ಕ್ರಿಯೆಗೈಯುತ್ತಾನೆ, ಇದು ‘ಮಿಂಚುಗಳಿಂದ, ವಾಣಿಗಳಿಂದ, ಗುಡುಗುಗಳಿಂದ’ ಸಂಕೇತಿಸಲ್ಪಡುತ್ತಿದೆ. (ಹೋಲಿಸಿರಿ ಪ್ರಕಟನೆ 4:5; 8:5.) ಹಿಂದೆಂದೂ ಸಂಭವಿಸದಿರುವ ರೀತಿಯಲ್ಲಿ ಮಾನವ ಕುಲವು, ಧ್ವಂಸಕಾರಕ ಭೂಕಂಪದಿಂದಲೋ ಎಂಬಂತೆ ನಡುಗಿಸಲ್ಪಡುವುದು. (ಹೋಲಿಸಿರಿ ಯೆಶಾಯ 13:13; ಯೋವೇಲ 3:16.) ಈ ಭಾರಿ ಧ್ವಂಸಕ ಅಲುಗಾಡುವಿಕೆಯು “ಮಹಾ ನಗರ”, ಮಹಾ ಬಾಬೆಲನ್ನು ಧ್ವಂಸಮಾಡುವುದು, ಹೀಗೆ ಅದು “ಮೂರು ಭಾಗಗಳಾಗಿ”—ಸರಿಪಡಿಸಲಾಗದ ವಿನಾಶದ ಕುಸಿದು ಬೀಳುವಿಕೆಯ ಸಂಕೇತವಾಗಿ—ಒಡೆಯಿತು. “ಜನಾಂಗಗಳ ನಗರಗಳು” ಕೂಡ ಬೀಳುವವು. “ಪ್ರತಿಯೊಂದು ದ್ವೀಪ”ವು ಮತ್ತು “ಬೆಟ್ಟಗಳು”—ಶಾಶ್ವತವೆಂದು ತೋರುವ ಈ ವ್ಯವಸ್ಥೆಯ ಸಂಘಟನೆಗಳು ಮತ್ತು ಸಂಸ್ಥೆಗಳು—ಹೋಗುವವು. ಏಳನೆಯ ವಿಪತ್ತಿನ ವೇಳೆಯಲ್ಲಿ ಐಗುಪ್ತವನ್ನು ಬಾಧಿಸಿದಕ್ಕಿಂತಲೂ ಹೆಚ್ಚು ಮಹತ್ತರವಾದ ಒಂದೊಂದು ಕಲ್ಲು ಸುಮಾರು ಒಂದು ಟ್ಯಾಲೆಂಟು ತೂಕವಾಗಿರುವ “ಮಹಾ ಆನೇಕಲ್ಲಿನ” ಮಳೆಯು, ಮಾನವ ಕುಲವನ್ನು ವೇದನಾಭರಿತವಾಗಿ ಹೊಡೆಯುವುದು. * (ವಿಮೋಚನಕಾಂಡ 9:22-26) ಹೆಪ್ಪುಗಟ್ಟಿದ ನೀರುಗಳ ಈ ಶಿಕ್ಷಿಸುವ ಧಾರೆಯು, ಸಂಭವನೀಯವಾಗಿ ಯೆಹೋವನ ನ್ಯಾಯತೀರ್ಪುಗಳ ಅಸಾಧಾರಣವಾದ ಭಾರೀ ಕಂಠೋಕ್ತಿ ಅಭಿವ್ಯಕ್ತಿಗಳನ್ನು ಚಿತ್ರಿಸುತ್ತದೆ, ಇದು ಕೊನೆಗೂ ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಬಂದು ಮುಟ್ಟಿದೆ ಎನ್ನುವುದನ್ನು ಸಂಕೇತಿಸುತ್ತದೆ! ಯೆಹೋವನು ತನ್ನ ನಾಶನದ ಕಾರ್ಯದಲ್ಲಿ ಅಕ್ಷರಾರ್ಥಕ ಆನೇಕಲ್ಲಿನ ಮಳೆಯನ್ನೂ ಉಪಯೋಗಿಸುವ ಸಾಧ್ಯತೆಯಿದೆ.—ಯೋಬ 38:22, 23.

39. ಏಳು ಬಾಧೆಗಳ ಹೊಯ್ಯುವಿಕೆಯಾದರೂ, ಮಾನವ ಕುಲದಲ್ಲಿ ಅನೇಕರು ಯಾವ ಮಾರ್ಗಕ್ರಮವನ್ನು ತೆಗೆದುಕೊಳ್ಳಲಿರುವರು?

39 ಹೀಗೆ, ಸೈತಾನನ ಲೋಕವು ಯೆಹೋವನ ನೀತಿಯುಳ್ಳ ನ್ಯಾಯತೀರ್ಪನ್ನು ಎದುರಿಸುವುದು. ಕೊನೆಗೆ, ಮನುಷ್ಯರಲ್ಲಿ ಅನೇಕರು ದೇವರನ್ನು ಪ್ರತಿಭಟಿಸುವುದನ್ನು ಹಾಗೂ ದೂಷಿಸುವುದನ್ನು ಮುಂದುವರಿಸುವರು. ಪುರಾತನ ಫರೋಹನೊಂದಿಗೆ ಇದ್ದ ಹಾಗೆಯೇ, ಅವರ ಹೃದಯಗಳು ಪುನರಾವರ್ತಿಸಲ್ಪಟ್ಟ ಬಾಧೆಗಳಿಂದ ಯಾ ಆ ಬಾಧೆಗಳ ಕೊನೆಯ ಮರಣಕ್ಕೆ ನಡಿಸುವ ತುತ್ತ ತುದಿಗೇರುವಿಕೆಯಿಂದ ಮೃದುಗೊಳಿಸಲ್ಪಡಲಾರವು. (ವಿಮೋಚನಕಾಂಡ 11:9, 10) ಯಾವುದೇ ಕೊನೇ ಕ್ಷಣದ, ದೊಡ್ಡ ಪ್ರಮಾಣದ ಹೃದಯದ ಪರಿವರ್ತನೆಯು ಅಲ್ಲಿರದು. ಅವರ ಕೊನೆಯುಸಿರಿನಲ್ಲಿಯೂ, “ನಾನೇ ಯೆಹೋವನೆಂದು ಅವರಿಗೆ ಗೊತ್ತಾಗುವುದು” ಎಂದು ಪ್ರಕಟಿಸುವ ದೇವರ ವಿರುದ್ಧ ಅವರು ದೂಷಣೆ ಮಾಡುವರು. (ಯೆಹೆಜ್ಕೇಲ 38:23) ಆದಾಗ್ಯೂ, ಸರ್ವಶಕ್ತ ಯೆಹೋವ ದೇವರ ಸಾರ್ವಭೌಮತೆಯು ನಿರ್ದೋಷೀಕರಿಸಲ್ಪಟ್ಟಿರುವುದು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 10 ಜಡ ವಸ್ತುಗಳು ಸಾಕ್ಷ್ಯವಾಗಿ ಇರುವುದಕ್ಕೆ ಯಾ ಪುರಾವೆಯನ್ನು ಕೊಡುತ್ತವೆ ಎನ್ನುವುದಕ್ಕೆ ಉದಾಹರಣೆಗಳಾಗಿ, ಹೋಲಿಸಿರಿ ಆದಿಕಾಂಡ 4:10; 31:44-53; ಇಬ್ರಿಯ 12:24.

^ ಪ್ಯಾರ. 15 “ಸಿಂಹಾಸನದ” ತದ್ರೀತಿಯ ಉಪಯೋಗವು ಯೇಸುವಿಗೆ ಪ್ರವಾದನಾರೂಪವಾಗಿ ಸಂಬೋಧಿಸಿದ ಮಾತುಗಳಲ್ಲೂ ತೋರಿಬರುತ್ತದೆ: “ದೇವರು ನಿನ್ನ ಸಿಂಹಾಸನವಾಗಿ ಯುಗಯುಗಾಂತರಗಳಲ್ಲಿಯೂ, ಹೌದು ಸದಾ ಸರ್ವದಾ ಇದ್ದಾನೆ.” (ಕೀರ್ತನೆ 45:6, NW) ಯೆಹೋವನು ಯೇಸುವಿನ ರಾಜವೈಭವ ಅಧಿಕಾರದ ಮೂಲ, ಅಥವಾ ಆಧಾರವಾಗಿದ್ದಾನೆ.

^ ಪ್ಯಾರ. 38 ಗ್ರೀಕ್‌ ಟ್ಯಾಲೆಂಟು ಯೋಹಾನನ ಮನಸ್ಸಿನಲ್ಲಿ ಇದ್ದಿದ್ದರೆ, ಪ್ರತಿಯೊಂದು ಆನೇಕಲ್ಲು ಸುಮಾರು 20 ಕಿಲೋಗಳಷ್ಟು ತೂಕವಿರುವುದು. ಅದು ಧ್ವಂಸಕಾರಕ ಆನೇಕಲ್ಲಿನ ಮಳೆಯಾಗಿರುವುದು.

[ಅಧ್ಯಯನ ಪ್ರಶ್ನೆಗಳು]

[ಪುಟ 332 ರಲ್ಲಿರುವ ಚೌಕ]

“ಭೂಮಿಗೆ”

ಯೋಹಾನ ವರ್ಗವು “ಭೂಮಿಯ” ವಿರುದ್ಧ ಯೆಹೋವನ ರೋಷವನ್ನು ಈ ಮುಂದಿನ ಹೇಳಿಕೆಗಳಿಂದ ಪ್ರಚುರಪಡಿಸಿದೆ:

“ಸಾಧನೆಯ ಶತಮಾನಗಳ ಅನಂತರ ರಾಜಕೀಯ ಪಕ್ಷಗಳು ಸದ್ಯದ ಪರಿಸ್ಥಿತಿಗಳನ್ನು ಎದುರಿಸಲು ಮತ್ತು ಸಂಕಟಮಯ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ನ್ಯೂನತೆಯನ್ನು ರುಜುಪಡಿಸಿದ್ದಾರೆ. ಅರ್ಥಶಾಸ್ತ್ರಜ್ಞರು ಮತ್ತು ರಾಜನೀತಿಜ್ಞರು, ವಾದವನ್ನು ಪರಿಶ್ರಮ ಶೀಲವಾಗಿ ಅಧ್ಯಯನಿಸುತ್ತಾ, ಅವರೇನನ್ನೂ ಮಾಡಲು ಅಶಕ್ತರಾಗಿದ್ದಾರೆಂದು ಕಂಡುಹಿಡಿದಿದ್ದಾರೆ.”—ಮಿಲ್ಯನ್ಸ್‌ ನೌ ಲಿವಿಂಗ್‌ ವಿಲ್‌ ನೆವರ್‌ ಡೈ, 1920, ಪುಟ 61.

“ಭೂಮಿಯ ಯಾವುದೇ ನ್ಯಾಯವುಳ್ಳ ಪ್ರಮಾಣವನ್ನು ತೃಪ್ತಿಪಡಿಸುವ ಯಾವುದೇ ಸರಕಾರವು ಇಂದು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜನಾಂಗಗಳಲ್ಲಿ ಅನೇಕವು ನಿರಂಕುಶಪ್ರಭುಗಳಿಂದ ಆಳಲ್ಪಡುತ್ತವೆ. ಇಡೀ ಲೋಕವು ಕಾರ್ಯತಃ ದಿವಾಳಿಯಾಗಿದೆ.”—ಎ ಡಿಸೈರೆಬಲ್‌ ಗವರ್ನ್‌ಮೆಂಟ್‌, 1924, ಪುಟ 5.

“ಈ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವುದೇ. . . . ಭೂಮಿಯ ದುಷ್ಟತ್ವವನ್ನು ನಿವಾರಿಸುವ ಮತ್ತು ಶಾಂತಿ, ನೀತಿಗಳು ಸಮೃದ್ಧಿಗೊಳ್ಳುವಂತೆ ಸ್ಥಳವನ್ನೊದಗಿಸುವ ಒಂದೇ ಮಾರ್ಗವಾಗಿದೆ.”—“ದಿಸ್‌ ಗುಡ್‌ ನ್ಯೂಸ್‌ ಆಫ್‌ ದ ಕಿಂಗ್‌ಡಮ್‌”, 1954, ಪುಟ 25.

“ಈ ಸದ್ಯದ ಲೋಕ ಏರ್ಪಾಡು ದೇವರ ವಿರುದ್ಧ ಮತ್ತು ಆತನ ಚಿತ್ತದ ವಿರುದ್ಧ ದಂಗೆಯನ್ನು ಮತ್ತು ಅನೀತಿಯನ್ನು ಮಾತ್ರವಲ್ಲ ಪಾಪವನ್ನು ವೃದ್ಧಿಸುವುದರಲ್ಲಿ ತನ್ನನ್ನು ತಾನೇ ಗುರುತಿಸಿಕೊಂಡಿದೆ. . . . ಅದು ಸುಧಾರಣೆಹೊಂದಲಾರದ್ದಾಗಿದೆ. ಆದುದರಿಂದ, ಅದು ಹೋಗಲೇಬೇಕು!”—ದ ವಾಚ್‌ಟವರ್‌, ನವಂಬರ 15, 1981, ಪುಟ 6.

[ಪುಟ 334 ರಲ್ಲಿರುವ ಚೌಕ]

“ಸಮುದ್ರದ ಮೇಲೆ”

ಯೆಹೋವನಿಂದ ದೂರಹೋದ ದೇವಭಕ್ತಿಯಿಲ್ಲದ ಮಾನವ ಕುಲದ ಅವಿಶ್ರಾಂತ ದಂಗೆಯ “ಸಮುದ್ರದ” ವಿರುದ್ಧ ದೇವರ ರೋಷವನ್ನು ಪ್ರಚುರಪಡಿಸುತ್ತಾ, ಯೋಹಾನ ವರ್ಗವು ವರ್ಷಗಳಿಂದಲೂ ಪ್ರಕಟಿಸಿದ ಹೇಳಿಕೆಗಳಲ್ಲಿ ಕೇವಲ ಕೆಲವು ಇಲ್ಲಿ ಕೆಳಗೆ ಕೊಡಲ್ಪಟ್ಟಿವೆ:

“ಪ್ರತಿ ಜನಾಂಗದ ಇತಿಹಾಸವು ತೋರಿಸುತ್ತದೇನಂದರೆ ಜಾತಿವರ್ಗಗಳ ಮಧ್ಯೆ ಹೋರಾಟ ಇದ್ದೇ ಇತ್ತು. ಅದು ಹೆಚ್ಚಿನವರ ವಿರುದ್ಧ ಕೆಲವರದ್ದಾಗಿತ್ತು . . . ಈ ಪೇಚಾಟಗಳು ಅನೇಕ ಕ್ರಾಂತಿಗಳಲ್ಲಿ, ಮಹಾ ಕಷ್ಟಾನುಭವಗಳಲ್ಲಿ ಮತ್ತು ತುಂಬಾ ರಕ್ತಾಪರಾಧಗಳಲ್ಲಿ ಫಲಿಸಿವೆ.”—ಗವರ್ನ್‌ಮೆಂಟ್‌, 1928, ಪುಟ 244.

ನೂತನ ಲೋಕದಲ್ಲಿ “ಪಿಶಾಚನ ಉಪಯೋಗಕ್ಕಾಗಿ ಯಾರಿಂದ ಸಾಂಕೇತಿಕ ಕಾಡು ಮೃಗವು ಬಹಳ ಹಿಂದೆಯೇ ಎದ್ದುಬಂದಿತ್ತೋ ಆ ಅಶಾಂತಿ, ದಂಗೆಕೋರ ದೇವಭಕ್ತಿಯಿಲ್ಲದ ಜನರ ಸಾಂಕೇತಿಕ ‘ಸಮುದ್ರವು’ ಹೋಗಲಿರುವುದು.”—ದ ವಾಚ್‌ಟವರ್‌, ಸಪ್ಟಂಬರ 15, 1967, ಪುಟ 567.

“ಸದ್ಯದ ಮಾನವ ಸಮಾಜವು ಆತ್ಮಿಕವಾಗಿ ರೋಗಗ್ರಸ್ತವಾಗಿದೆ ಮತ್ತು ಕಾಯಿಲೆ ಬಿದಿದ್ದೆ. ನಮ್ಮಲ್ಲಿ ಯಾರೂ ಅದನ್ನು ರಕ್ಷಿಸಸಾಧ್ಯವಿಲ್ಲ ಕಾರಣ ಅದರ ಅನಾರೋಗ್ಯವು ಅದನ್ನು ಮರಣಕ್ಕೆ ನಡಿಸುತ್ತಿದೆ ಎಂದು ದೇವರ ವಾಕ್ಯವು ತೋರಿಸುತ್ತದೆ.”—ಟ್ರೂ ಪೀಸ್‌ ಆ್ಯಂಡ್‌ ಸೆಕ್ಯೂರಿಟಿ—ಫ್ರಾಮ್‌ ವಾಟ್‌ ಸೋರ್ಸ್‌? 1973, ಪುಟ 131.

[ಪುಟ 335 ರಲ್ಲಿರುವ ಚೌಕ]

“ನದಿಗಳ ಮೇಲೆ ಮತ್ತು ನೀರುಗಳ ಬುಗ್ಗೆಗಳ ಮೇಲೆ”

ಮೂರನೆಯ ಉಪದ್ರವವು “ನದಿಗಳನ್ನು ಮತ್ತು ನೀರಿನ ಬುಗ್ಗೆಗಳನ್ನು” ಈ ಮುಂತಾದ ಕೆಳಗಿನ ಹೇಳಿಕೆಗಳಿಂದ ಬಹಿರಂಗಪಡಿಸಿದೆ:

“[ಕ್ರಿಸ್ತನ] ಉಪದೇಶದ ತತ್ವಗಳ ಬೋಧಕರೆಂದು ತಮ್ಮನ್ನು ಹೇಳಿಕೊಳ್ಳುವ ವೈದಿಕರು, ಯುದ್ಧವನ್ನು ಪವಿತ್ರೀಕರಿಸಿದ್ದಾರೆ ಮತ್ತು ಅದನ್ನು ಒಂದು ಪವಿತ್ರ ವಿಷಯವನ್ನಾಗಿ ಮಾಡಿದ್ದಾರೆ. ಅವರು ತಮ್ಮ ಭಾವಚಿತ್ರ ಮತ್ತು ವಿಗ್ರಹಗಳನ್ನು ರಕ್ತಮಯ ಕುಶಲ ಯೋಧರ ಪಕ್ಕದಲ್ಲಿ ಪ್ರದರ್ಶಿಸಲು ಸಂತೋಷಪಡುತ್ತಾರೆ.”—ದ ವಾಚ್‌ಟವರ್‌, ಸಪ್ಟಂಬರ 15, 1924, ಪುಟ 275.

“ಪ್ರೇತವಾದ [ಭೂತಾರಾಧನೆ] ಯು ಒಂದು ಮಹಾ ಅಸತ್ಯದ ಮೇಲೆ, ಮರಣದ ಅನಂತರ ಪಾರಾಗುವಿಕೆ ಮತ್ತು ಮಾನವ ಆತ್ಮದ ಅಮರತ್ವದ ಸುಳ್ಳಿನ ಮೇಲೆ ಆಧಾರಿತವಾಗಿದೆ.”—ವಾಟ್‌ ಡು ದ ಸ್ಕ್ರಿಪ್ಚರ್ಸ್‌ ಸೇ ಎಬೌಟ್‌ “ಸರ್ವೈವಲ್‌ ಆಪರ್ಟ್‌ ಡೆತ್‌?” 1955, ಪುಟ 51.

“ಮಾನವ ತತ್ವಜ್ಞಾನಗಳು, ರಾಜಕೀಯ ಪ್ರಮೇಯ-ಊಹೆಗಳಲ್ಲಿ ಪ್ರವೀಣತೆಯುಳ್ಳವರು, ಸಾಮಾಜಿಕ ವ್ಯವಸ್ಥಾಪಕರು, ಅರ್ಥಶಾಸ್ತ್ರ ಸಲಹೆಗಾರರು, ಮತ್ತು ಧಾರ್ಮಿಕ ಸಂಪ್ರದಾಯಗಳ ಪ್ರತಿಪಾದಕರು ಯಾವುದೇ ನೈಜ ಜೀವಕೊಡುವ ನವ ಚೈತನ್ಯವನ್ನು ಕೊಡದೆ ಇರುವುದರಲ್ಲಿ ಫಲಿಸಿದ್ದಾರೆ. . . . ಇಂಥ ನೀರುಗಳು, ಕುಡಿಯುವವರನ್ನು ರಕ್ತದ ಪವಿತ್ರತೆಯ ಕುರಿತು ಮತ್ತು ಧಾರ್ಮಿಕ ಹಿಂಸೆಗಳಲ್ಲಿ ಒಳಗೂಡಿರುವುದರ ಕುರಿತು ಸೃಷ್ಟಿಕರ್ತನ ನಿಯಮವನ್ನು ಅತಿಕ್ರಮಿಸಲು ಕೂಡ ನಡಿಸಿವೆ.”—“ನಿತ್ಯವಾದ ಶುಭವರ್ತಮಾನ” 1963ರ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಠರಾವು.

“ವೈಜ್ಞಾನಿಕ ರಕ್ಷಣೆಯಲ್ಲ, ಬದಲು ಮಾನವ ವರ್ಗದ ನಾಶನವನ್ನು ಮನುಷ್ಯನಿಂದ ತಾನೇ ನಾವು ನಿರೀಕ್ಷಿಸಸಾಧ್ಯವಿರುವ ವಿಷಯವಾಗಿದೆ. . . . ಮಾನವ ಕುಲದ ಯೋಚನಾವಿಧವನ್ನು ಬದಲಿಸಲು ಲೋಕದ ಮನೋವಿಜ್ಞಾನಿಗಳೆಡೆಗೆ ಮತ್ತು ಮನೋರೋಗ ಚಿಕಿತ್ಸಕರೆಡೆಗೆ ನಾವು ಎದುರುನೋಡಸಾಧ್ಯವಿಲ್ಲ. . . . ಯಾವುದೇ ಅಂತಾರಾಷ್ಟ್ರೀಯ ಪೋಲಿಸ್‌ ದಳದ ರಚನೆಯ ಮೇಲೆ ನಾವು ಜೀವಿಸುವ ಈ ಭೂಮಿಯನ್ನು ಸುರಕ್ಷಿತವಾದ ಸ್ಥಳವನ್ನಾಗಿರಿಸಲು ನಾವು ಹೊಂದಿಕೊಳ್ಳಸಾಧ್ಯವಿಲ್ಲ.”—ಸೇವಿಂಗ್‌ ದ ಹ್ಯೂಮನ್‌ ರೇಸ್‌—ಇನ್‌ ದ ಕಿಂಗ್‌ಡಮ್‌ ವೇ, 1970, ಪುಟ 5.

[ಪುಟ 336 ರಲ್ಲಿರುವ ಚೌಕ]

“ಸೂರ್ಯನ ಮೇಲೆ”

ಮಾನವ ಆಳಿಕೆಯ “ಸೂರ್ಯನು” ಕರ್ತನ ದಿನದ ವೇಳೆಯಲ್ಲಿಲ್ಲಾ ಮಾನವ ಕುಲವನ್ನು “ಕಮರಿಸಿ” ದಂತೆಯೇ, ಯೋಹಾನ ವರ್ಗವು ಏನು ಸಂಭವಿಸುತ್ತಿದೆಯೋ ಅದಕ್ಕೆ ಈ ಕೆಳಗಿನ ಹೇಳಿಕೆಗಳೊಂದಿಗೆ ಗಮನವನ್ನು ಸೆಳೆದಿದೆ:

“ಇಂದು, ಹಿಟ್ಲರ್‌ ಮತ್ತು ಮೂಸಲಿನೀ, ನಿರಂಕುಶ ಸರ್ವಾಧಿಕಾರಿಗಳು, ಇಡೀ ಲೋಕದ ಶಾಂತಿಗೆ ಬೆದರಿಕೆಯೊಡ್ಡುತ್ತಾರೆ ಮತ್ತು ಸ್ವಾತಂತ್ರ್ಯದ ಅವರ ವಿನಾಶದಲ್ಲಿ ಅವರು ರೋಮನ್‌ ಕ್ಯಾತೊಲಿಕ್‌ ಪುರೋಹಿತ ಪ್ರಭುತ್ವದಿಂದ ಪೂರ್ಣವಾಗಿ ಬೆಂಬಲಿಸಲ್ಪಟ್ಟಿದ್ದಾರೆ.”—ಫ್ಯಾಸಿಸಂ ಆರ್‌ ಫ್ರೀಡಮ್‌, 1939, ಪುಟ 12.

“ಇತಿಹಾಸದುದ್ದಕ್ಕೂ ಮಾನವ ನಿರಂಕುಶ ಪ್ರಭುಗಳು ಪಾಲಿಸುತ್ತಿರುವ ರಾಜನೀತಿ ಕುಶಲತೆಯು ಆಳು ಇಲ್ಲವೇ ಅಳಿವು ಆಗಿದೆ! ಆದರೆ ಎಲ್ಲಾ ಭೂಮಿಯ ಮೇಲಿನ ದೇವರ ಸ್ಥಾಪಿತ ರಾಜನಾದ ಯೇಸು ಕ್ರಿಸ್ತನಿಂದ ಈಗ ಅನ್ವಯಿಸಲ್ಪಡುವ ಕಾಯಿದೆಯು ಒಂದೇ ಆಳಲ್ಪಡಿರಿ ಯಾ ಅಳಿದುಹೋಗಿರಿ ಎಂದಾಗಿದೆ.”—ವೆನ್‌ ಆಲ್‌ ನೇಶನ್ಸ್‌ ಯುನೊಯಿಟ್‌ ಅಂಡರ್‌ ಗಾಡ್ಸ್‌ ಕಿಂಗ್‌ಡಮ್‌, 1961, ಪುಟ 23.

“ಭೂಮಿಯ ಸುತ್ತಲೂ 1945 ರಿಂದ ಹೋರಾಡಲ್ಪಟ್ಟ ಸುಮಾರು 150 ಯುದ್ಧಗಳಲ್ಲಿ 2.5 ಕೋಟಿ ಜನರಿಗಿಂತಲೂ ಹೆಚ್ಚಿನವರು ಕೊಲ್ಲಲ್ಪಟ್ಟಿದ್ದಾರೆ.”—ದ ವಾಚ್‌ಟವರ್‌, ಜನವರಿ 15, 1980, ಪುಟ 6.

“ಭೂಮಿಯ ಸುತ್ತಲಿರುವ ಜನಾಂಗಗಳು . . . ಅಂತಾರಾಷ್ಟ್ರೀಯ ಜವಾಬ್ದಾರಿಗಳ ಯಾ ನಡತೆಯ ಕಾಯಿದೆಯ ಕುರಿತು ಕಿಂಚಿತ್ತೂ ಯೋಚಿಸುವುದಿಲ್ಲ. ತಮ್ಮ ಉದ್ದೇಶಗಳ ಗುರಿಯನ್ನು ಮುಟ್ಟುವುದಕ್ಕೆ, ಕೆಲವು ಜನಾಂಗಗಳು ತಾವು ಅವಶ್ಯವೆಂದು ಪರಿಗಣಿಸುವ ಯಾವುದೇ ವಿಧಾನಗಳನ್ನು ಉಪಯೋಗಿಸುವುದರಲ್ಲಿ ಪೂರ್ಣವಾಗಿ ನ್ಯಾಯವೆಂದು ಪ್ರತಿಪಾದಿಸುತ್ತವೆ—ಕಗ್ಗೊಲೆ, ಕೊಲೆ, ದೊಂಬಿ-ಲೂಟಿ, ಬಾಂಬೆಸೆತ ಮತ್ತು ಮುಂತಾದವು. . . . ಇಂಥ ಮೂರ್ಖ ಮತ್ತು ಬೇಜವಾಬ್ದಾರಿಯ ಮಾರ್ಗದಲ್ಲಿ ಜನಾಂಗಗಳು ಒಬ್ಬರಿನ್ನೊಬ್ಬರನ್ನು ಇನ್ನೆಷ್ಟು ಕಾಲದ ವರೆಗೆ ಸಹಿಸುವುವು?”—ದ ವಾಚ್‌ಟವರ್‌, ಫೆಬ್ರವರಿ 15, 1985, ಪುಟ 4.

[ಪುಟ 338 ರಲ್ಲಿರುವ ಚೌಕ]

“ಕಾಡು ಮೃಗದ ಸಿಂಹಾಸನದ ಮೇಲೆ”

ಯೆಹೋವನ ಸಾಕ್ಷಿಗಳು ಕಾಡು ಮೃಗದ ಸಿಂಹಾಸನವನ್ನು ಬಯಲುಪಡಿಸಿದ್ದಾರೆ ಮತ್ತು ಯೆಹೋವನ ಅದರ ಖಂಡನೆಯನ್ನು ಈ ಕೆಳಗಿನ ಹೇಳಿಕೆಗಳೊಂದಿಗೆ ಪ್ರಚುರಿಸಿದ್ದಾರೆ:

“ಜನಾಂಗಗಳ ಧುರೀಣರು ಮತ್ತು ರಾಜಕೀಯ ಮಾರ್ಗದರ್ಶಕರು ಅರ್ಮಗೆದೋನಿನ ನಿರ್ಣಾಯಕ ಘರ್ಷಣೆಗೆ ಆತ್ಮಘಾತಕ ನಡೆಯಲ್ಲಿ ಪ್ರತಿಭಟಿಸಲಾಗದ ವಿಷಮಾವಸ್ಥೆಗೆ ತರುವುದಕ್ಕೆ ಅವರನ್ನು ಮಾರ್ಗದರ್ಶಿಸುವ ದುರುದ್ದೇಶಪೂರಿತ ಅಮಾನುಷ ಬಲಗಳಿಂದ ಪ್ರಭಾವಿಸಲ್ಪಡುತ್ತಾರೆ.”—ಆಫ್ಟರ್‌ ಅರ್ಮಗೆದೋನ್‌—ಗಾಡ್ಸ್‌ ನ್ಯೂ ವರ್ಲ್ಡ್‌, 1953, ಪುಟ 8.

“ದೇವಪ್ರಭುತ್ವವಲ್ಲದ ಮಾನವ ಸರಕಾರಗಳ ‘ಕಾಡು ಮೃಗವು’ ಅದರ ಶಕ್ತಿಯನ್ನು, ಅಧಿಕಾರವನ್ನು ಮತ್ತು ಸಿಂಹಾಸನವನ್ನು ಘಟಸರ್ಪನಿಂದ ಪಡೆದಿದೆ. ಆದುದರಿಂದ ಅದು ಪಾರ್ಟಿಯ ತಂತಿಮಾರ್ಗದಲ್ಲಿ, ಘಟಸರ್ಪನ ತಂತಿಮಾರ್ಗದಲ್ಲಿ ಇರಿಸಿಕೊಳ್ಳಬೇಕು.”—ಆಫ್ಟರ್‌ ಅರ್ಮಗೆದೋನ್‌—ಗಾಡ್ಸ್‌ ನ್ಯೂ ವರ್ಲ್ಡ್‌, 1953, ಪುಟ 15.

“ಅನ್ಯ ಜನಾಂಗಗಳು ತಮ್ಮ ಸ್ವಂತ ಸ್ಥಳವನ್ನು . . . ದೇವರ ಮುಖ್ಯ ವಿರೋಧಿಯಾದ ಪಿಶಾಚನಾದ ಸೈತಾನನ ಕಡೆಯಲ್ಲಿ ಮಾತ್ರವೇ ಗುರುತಿಸಿಕೊಳ್ಳಬಹುದು.”—“ದೈವಿಕ ವಿಜಯ” 1973ರ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಅಂಗೀಕರಿಸಲಾದ ಠರಾವು.

[ಪುಟ 330 ರಲ್ಲಿರುವ ಚೌಕ]

“ಅದರ ನೀರು ಇಂಗಿಹೋಯಿತು”

ಈಗಲೂ, ಬಾಬೆಲಿನ ಧರ್ಮಕ್ಕೆ ಬೆಂಬಲವು ಅನೇಕ ಸ್ಥಳಗಳಲ್ಲಿ ಇಂಗಿಹೋಗುತ್ತಿದೆ, “ಸೂರ್ಯೋದಯದಿಂದ ಬರುವ ರಾಜರು” ತಮ್ಮ ಆಕ್ರಮಣ ಮಾಡುವಾಗ ಏನು ಸಂಭವಿಸುವುದೋ ಅದನ್ನು ಇದು ಸೂಚಿಸುತ್ತದೆ:

“[ಥಾಯ್ಲೆಂಡಿನ] ಪಟ್ಟಣ ಪ್ರದೇಶಗಳಲ್ಲಿ ವಾಸಿಸುವವರಲ್ಲಿ 75 ಪ್ರತಿಶತದಷ್ಟು ಎಂದಿಗೂ ಧರ್ಮಪ್ರವಚನಗಳನ್ನು ಕೇಳಲು ಬೌದ್ಧ ದೇವಾಲಯಗಳಿಗೆ ಹೋಗುವುದಿಲ್ಲವೆಂದು, ಅದೇ ಸಮಯದಲ್ಲಿ ದೇವಾಲಯಗಳನ್ನು ಭೇಟಿಕೊಡುವ ಗ್ರಾಮಾಂತರ ಪ್ರದೇಶದಲ್ಲಿನ ಸಂಖ್ಯೆಯು ಸುಮಾರು ಐವತ್ತು ಪ್ರತಿಶತಕ್ಕೆ ಏಕಪ್ರಕಾರವಾಗಿ ಇಳಿಮುಖವಾಗುತ್ತಿದೆಯೆಂದು ದೇಶದ್ಯಾಂತ ನಡೆದ ಒಂದು ಸಮೀಕ್ಷೆಯು ಕಂಡುಹಿಡಿಯಿತು.”—ಬ್ಯಾಂಗ್‌ಕಾಕ್‌ ಪೋಸ್ಟ್‌, ಸಪ್ಟಂಬರ 7, 1987, ಪುಟ 4.

“ಸುಮಾರು ಎರಡು ಸಾವಿರ ವರ್ಷಗಳ ಹಿಂದೆ [ಚೀನಾ] ದೇಶದಲ್ಲಿ ಕಂಡುಹಿಡಿಯಲಾಗಿದ್ದ ಟೌಇಸಮ್‌ನ ತತ್ವಗಳ ಮಾಟವು ಹೋಗಿಬಿಟ್ಟಿದೆ. . . . ಅತಿ ದೊಡ್ಡ ಅನುಯಾಯಿ ವರ್ಗವನ್ನು ಗಳಿಸಲು ಅವರಿಂದ ಮತ್ತು ಅವರ ಪೂರ್ವಾಧಿಕಾರಿಗಳಿಂದ ಉಪಯೋಗಿಸಲಾಗುತ್ತಿದ್ದ ಮಾಯಾಉಪಕರಣಗಳಿಲ್ಲದವರಾಗಿ, ಪುರೋಹಿತವರ್ಗದ ಸದಸ್ಯರು ತಮಗೆ ಉತ್ತರಾಧಿಕಾರಿಗಳಿಲ್ಲವೆಂದು ಕಂಡುಕೊಳ್ಳುತ್ತಾರೆ. ಹೀಗೆ ಭೂಭಾಗದಲ್ಲಿ ಟೌಇಸಮ್‌ ಸಂಸ್ಥಾಪಿತ ನಂಬಿಕೆಯ ಕಾರ್ಯತಃ ನಾಶವನ್ನು ಎದುರುನೋಡುತ್ತಾರೆ.”—ದ ಅಟ್ಲಾಂಟ ಜರ್ನಲ್‌ ಆ್ಯಂಡ್‌ ಕಾನ್‌ಸಿಟ್ಟ್ಯೂಶನ್‌, ಸಪ್ಟಂಬರ 12, 1982, ಪುಟ 36-ಎ.

“ಜಪಾನ್‌ . . .  ಪ್ರಾಯಶಃ ಪರದೇಶದ 5,200 ಮಂದಿ ಮಿಷನೆರಿಗಳು ಕೇಂದ್ರೀಕೃತವಾಗಿರುವ ವಿಶ್ವದ ಅತಿ ದೊಡ್ಡ ದೇಶಗಳಲ್ಲಿ ಒಂದಾಗಿದೆ, ಆದಾಗ್ಯೂ . . . ಜನಸಂಖ್ಯೆಯ 1%ಕ್ಕೂ ಕಡಿಮೆ ಜನರು ಕ್ರೈಸ್ತರಾಗಿದ್ದಾರೆ. . . . ಇಲ್ಲಿ 1950ರ ದಶಕಗಳಿಂದ ಹಿಡಿದು ಕೆಲಸಮಾಡುತ್ತಿರುವ ಒಬ್ಬ ಫ್ರಾನ್ಸಿಸ್ಕನ್‌ ಪಾದ್ರಿ . . . ನಂಬುತ್ತಾರೇನಂದರೆ ‘ಜಪಾನಿನಲ್ಲಿ ಪರದೇಶದ ಮಿಷನೆರಿಗಳ ಸಮಯವು ಕೊನೆಗೊಂಡಿದೆ’.”—ದ ವಾಲ್‌ ಸ್ಟ್ರೀಟ್‌ ಜರ್ನಲ್‌, ಜುಲೈ 9, 1986, ಪುಟ 1.

ಇಂಗ್ಲೆಂಡಿನಲ್ಲಿ ಕಳೆದ ಮೂರು ದಶಕಗಳಲ್ಲಿ “ಇಂಗ್ಲೆಂಡಿನ 16,000 ಆಂಗ್ಲಿಕನ್‌ ಚರ್ಚುಗಳಲ್ಲಿ ಸುಮಾರು 2,000 ಚರ್ಚುಗಳು ಅಪ್ರಯೋಗದ ಕಾರಣ ಮುಚ್ಚಲ್ಪಟ್ಟಿವೆ. ಹಾಜರಿಯು ಘೋಷಿತ ಕ್ರೈಸ್ತ ದೇಶಗಳಲ್ಲಿ ಅತ್ಯಂತ ಕನಿಷ್ಠಮಟ್ಟಕ್ಕೆ ಬಂದಿದೆ. . . . ‘ಇಂಗ್ಲೆಂಡ್‌ ಒಂದು ಕ್ರೈಸ್ತ ದೇಶವೆಂಬುದು ಈಗ ಒಂದು ಸಂಗತಿಯಲ್ಲ’ ಎಂದು [ಡರಮ್‌ನ ಬಿಷಪ್‌] ಹೇಳಿದರು.”—ದ ನ್ಯೂ ಯಾರ್ಕ್‌ ಟೈಮ್ಸ್‌, ಮೇ 11, 1987, ಪುಟ ಎ4.

“ಬಿಸಿ ವಾಗ್ವಾದದ ಕೆಲವು ಗಂಟೆಗಳ ಅನಂತರ, [ಗ್ರೀಸಿನ] ಸಂವಿಧಾನವು ಇಂದು ಶಾಸನವನ್ನು ಸಮ್ಮತಿಸಿತು, ಹೀಗೆ ಗ್ರೀಕ್‌ ಸಂಪ್ರದಾಯಬದ್ಧ ಚರ್ಚಿನಿಂದ ಬಿಗಿಹಿಡಿಯಲ್ಪಟ್ಟ ಬಹುದೊಡ್ಡ ಸ್ಥಿರಾಸ್ತಿಯನ್ನು ತೆಗೆದುಕೊಳ್ಳಲು ಸಮಾಜವಾದ ಸರಕಾರಕ್ಕೆ ಸಾಧ್ಯಮಾಡಿತು. . . . ಅದೂ ಅಲ್ಲದೆ, ಭೋಜನಶಾಲೆಗಳು, ಹಾಲುಗಲ್ಲು ಗಣಿಗಳು ಮತ್ತು ಆಫೀಸು ಕಟ್ಟಡ ಸಂಕೀರ್ಣಗಳು ಸೇರಿರುವ ಬಹುಮೂಲ್ಯ ಚರ್ಚು ಧನವಿನಿಯೋಗದ ಕಾರುಭಾರಿನ ಜವಾಬ್ದಾರಿಯಿರುವ ಚರ್ಚು ಮಂಡಲದ ಮೇಲೆ ಮತ್ತು ಕಮಿಟಿಗಳ ಮೇಲೆ, ಕ್ರೈಸ್ತ ಪಾದ್ರಿಯಲ್ಲದವರಿಗೆ ಹತೋಟಿಯನ್ನು ಕಾಯಿದೆಯು ಕೊಡುತ್ತದೆ.”—ದ ನ್ಯೂ ಯಾರ್ಕ್‌ ಟೈಮ್ಸ್‌, ಏಪ್ರಿಲ್‌ 4, 1987, ಪುಟ 3.

[Picture on page 222]

ದೇವರ ಕೋಪದ ಮೊದಲ ನಾಲ್ಕು ಪಾತ್ರೆಗಳು ಮೊದಲ ನಾಲ್ಕು ತುತೂರಿಯ ಊದುವಿಕೆಯಿಂದ ಸಂಭವಿಸಿದ ತದ್ರೀತಿಯ ಬಾಧೆಗಳನ್ನು ತರುತ್ತವೆ

[Picture on page 226]

ಮೃಗದ ಸಿಂಹಾಸನವನ್ನು ಸೈತಾನನು ಕಾಡು ಮೃಗಕ್ಕೆ ಕೊಟ್ಟ ಅಧಿಕಾರ ಎಂಬುದಾಗಿ ಐದನೆಯ ಪಾತ್ರೆಯು ಬಯಲುಗೊಳಿಸುತ್ತದೆ

[ಪುಟ 342 ರಲ್ಲಿರುವ ಚಿತ್ರಗಳು]

ಸೈತಾನನ ಮಲಿನಗೊಂಡಿರುವ “ವಾಯು” ವಿನಿಂದ ಪ್ರೇರಿಸಲ್ಪಟ್ಟವರು ಯೆಹೋವನ ನೀತಿಯ ನ್ಯಾಯತೀರ್ಪುಗಳ ಜಾರಿಗೊಳಿಸುವಿಕೆಯನ್ನು ಅನುಭವಿಸಬೇಕು

[Picture on page 233]

ಪೈಶಾಚಿಕ ಪ್ರಚಾರಕಾರ್ಯವು ಭೂ ಪ್ರಭುಗಳನ್ನು ಯೆಹೋವನ ನ್ಯಾಯತೀರ್ಪುಗಳು ಸುರಿಸಲ್ಪಡುವ ಕೇಂದ್ರ ಸನ್ನಿವೇಶವಾದ ಹರ್ಮಗೆದೋನ್‌ಗೆ ಕೂಡಿಸುತ್ತದೆ