ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಹೆಸರನ್ನು ಬಿಗಿಯಾಗಿ ಹಿಡಿದುಕೊಳ್ಳುವುದು

ಯೇಸುವಿನ ಹೆಸರನ್ನು ಬಿಗಿಯಾಗಿ ಹಿಡಿದುಕೊಳ್ಳುವುದು

ಅಧ್ಯಾಯ 9

ಯೇಸುವಿನ ಹೆಸರನ್ನು ಬಿಗಿಯಾಗಿ ಹಿಡಿದುಕೊಳ್ಳುವುದು

ಪೆರ್ಗಮಮ್‌

1. ಯೇಸುವಿನ ಮುಂದಿನ ಸಂದೇಶವನ್ನು ಯಾವ ಸಭೆಯು ಪಡೆಯಿತು, ಮತ್ತು ಆ ಕ್ರೈಸ್ತರು ಯಾವ ರೀತಿಯ ನಗರದಲ್ಲಿ ಜೀವಿಸುತ್ತಿದ್ದರು?

ಸ್ಮುರ್ನದ ಕರಾವಳಿ ಮಾರ್ಗದಿಂದ 50 ಮೈಲು ಉತ್ತರಕ್ಕೆ ಮತ್ತು ಅನಂತರ ಕೇಕಸ್‌ ನದಿಯ ಕಣಿವೆಯ ಮೂಲಕ 15 ಮೈಲು ಒಳನಾಡಿಗೆ ಪ್ರಯಾಣಿಸಿದರೆ, ಈಗ ಬೆರ್ಗಾಮವೆಂದು ಕರೆಯಲ್ಪಡುವ ಪೆರ್ಗಮಮ್‌ಗೆ ನಾವು ಬರುತ್ತೇವೆ. ಈ ನಗರವು ಅದರ ಸೂಸ್‌ ಯಾ ಜೂಪಿಟರ್‌ನ ದೇವಸ್ಥಾನಕ್ಕಾಗಿ ಪ್ರಖ್ಯಾತವಾಗಿತ್ತು. 1800 ರುಗಳಲ್ಲಿ ಪುರಾತನ ವಸ್ತುಶಾಸ್ತ್ರಜ್ಞರು ಆ ದೇವಸ್ಥಾನದ ಬಲಿಪೀಠವನ್ನು ಜರ್ಮನಿಗೆ ಸ್ಥಳಾಂತರಿಸಿದರು, ಬರ್ಲಿನ್‌ನ ಪೆರ್ಗಮೊನ್‌ ವಸ್ತುಸಂಗ್ರಹಾಲಯದಲ್ಲಿ ವಿಧರ್ಮಿ ದೇವರುಗಳ ಪ್ರತಿಮೆಗಳ ಮತ್ತು ಉಬ್ಬುಚಿತ್ರಗಳ ಒಟ್ಟಿಗೆ ಅದನ್ನು ಈಗ ಕೂಡ ವೀಕ್ಷಿಸಬಹುದು. ಈ ಎಲ್ಲಾ ವಿಗ್ರಹಾರಾಧನೆಯ ಮಧ್ಯೆ ಇದ್ದ ಸಭೆಗೆ ಕರ್ತನಾದ ಯೇಸುವು ಯಾವ ಸಂದೇಶವನ್ನು ಕಳುಹಿಸುವನು?

2. ಯೇಸುವು ತನ್ನ ಪರಿಚಯವನ್ನು ಹೇಗೆ ಸ್ಥಾಪಿಸುತ್ತಾನೆ, ಮತ್ತು ಅವನಲ್ಲಿ ‘ಇಬ್ಬಾಯಿ ಕತ್ತಿ’ ಇರುವ ವೈಶಿಷ್ಟ್ಯವೇನು?

2 ಮೊದಲಾಗಿ, ಯೇಸುವು ತನ್ನ ಪರಿಚಯವನ್ನು ಹೀಗೆ ಹೇಳುತ್ತಾ ಸ್ಥಾಪಿಸುತ್ತಾನೆ: “ಮತ್ತು ಪೆರ್ಗಮಮ್‌ನಲ್ಲಿರುವ ಸಭೆಯ ದೂತನಿಗೆ ಬರೆ: ಹದವಾದ, ಉದ್ದ ಇಬ್ಬಾಯಿ ಕತ್ತಿ ಇರುವಾತನು ಈ ಸಂಗತಿಗಳನ್ನು ತಿಳಿಸುತ್ತಾನೆ.” (ಪ್ರಕಟನೆ 2:12, NW) ಪ್ರಕಟನೆ 1:16 ರಲ್ಲಿ ತನ್ನ ಕುರಿತಾಗಿ ಕೊಟ್ಟಿರುವ ವಿವರವನ್ನು ಯೇಸುವು ಇಲ್ಲಿ ಪುನರುಚ್ಚರಿಸುತ್ತಾನೆ. ನ್ಯಾಯಾಧಿಪತಿ ಮತ್ತು ದಂಡನೆಯ ಕಾರ್ಯನಿರ್ವಾಹಕನೋಪಾದಿ ತನ್ನ ಶಿಷ್ಯರನ್ನು ಹಿಂಸಿಸುವ ಎಲ್ಲರನ್ನೂ ಅವನು ಹತಿಸಲಿದ್ದಾನೆ. ಎಂತಹ ಒಂದು ಸಂತೈಸುವ ಆಶ್ವಾಸನೆ! ಆದಾಗ್ಯೂ, ನ್ಯಾಯತೀರ್ಪಿನ ವಿಷಯವಾಗಿ ಸಭೆಯ ಒಳಗೆ ಇರುವವರು ಸಹಿತ ಎಚ್ಚರಿಸಲ್ಪಡಲಿದ್ದಾರೆ ಏನೆಂದರೆ ಯೆಹೋವನು, “ಒಡಂಬಡಿಕೆಯ ದೂತನಾದ” ಯೇಸು ಕ್ರಿಸ್ತನ ಮೂಲಕ ಕ್ರಿಯೆಗೈಯುತ್ತಾ, ಕ್ರೈಸ್ತರೆಂದು ಹೇಳಿಕೊಳ್ಳುತ್ತಾ ವಿಗ್ರಹಾರಾಧನೆ, ಅನೈತಿಕತೆ, ಸುಳ್ಳು ಹೇಳುವಿಕೆ, ಮತ್ತು ಅಪ್ರಾಮಾಣಿಕತೆಯನ್ನು ನಡಿಸುವವರು ಹಾಗೂ ನಿರ್ಗತಿಕರಿಗೆ ಸಹಾಯ ನೀಡಲು ತಪ್ಪುವ ಎಲ್ಲರ ವಿರುದ್ಧವಾಗಿ “ಶೀಘ್ರ ಸಾಕ್ಷಿಯಾಗಲಿರುವನು.” (ಮಲಾಕಿಯ 3:1, 5; ಇಬ್ರಿಯ 13:1-3) ಯೇಸುವು ನೀಡುವಂತೆ ದೇವರು ಕಾರಣನಾಗುವ ಸಲಹೆ ಮತ್ತು ಗದರಿಕೆ ಆಲಿಸಲ್ಪಡತಕ್ಕದ್ದು!

3. ಪೆರ್ಗಮಮ್‌ನಲ್ಲಿ ಯಾವ ಸುಳ್ಳು ಆರಾಧನೆಯು ನಡೆಯಿತು, ಮತ್ತು ಅಲ್ಲಿ “ಸೈತಾನನ ಸಿಂಹಾಸನವು” ಇತ್ತು ಎಂದು ಹೇಗೆ ಹೇಳಸಾಧ್ಯವಿದೆ?

3 ಯೇಸುವು ಈಗ ಸಭೆಗೆ ಹೇಳುವುದು: “ನೀನು ವಾಸಿಸುವುದೆಲ್ಲಿ ಎಂದು ಅಂದರೆ, ಸೈತಾನನ ಸಿಂಹಾಸನವಿರುವಲ್ಲಿ ಎಂದು ನಾನು ಬಲ್ಲೆನು.” (ಪ್ರಕಟನೆ 2:13ಎ, NW) ನಿಜವಾಗಿಯೂ, ಆ ಕ್ರೈಸ್ತರು ಸೈತಾನ ಸಂಬಂಧಿತ ಆರಾಧನೆಯಿಂದ ಸುತ್ತುವರಿಯಲ್ಪಟ್ಟಿದ್ದರು. ಸೂಸ್‌ ದೇವಸ್ಥಾನವಲ್ಲದೆ, ಈಸ್ಕ್ಯುಲೇಪಿಯಸ್‌ ಎಂಬ ವೈದ್ಯಾಧಿದೇವತೆಯ ಒಂದು ಗುಡಿಯೂ ಅಲ್ಲಿತ್ತು. ಸಮ್ರಾಟನ ಆರಾಧನ ಪದ್ಧತಿಯ ಒಂದು ಕೇಂದ್ರವಾಗಿಯೂ ಪೆರ್ಗಮಮ್‌ ಪ್ರಖ್ಯಾತವಾಗಿತ್ತು. “ಸೈತಾನ” ಎಂದು ತರ್ಜುಮೆ ಮಾಡಿರುವ ಇಬ್ರಿಯ ಶಬ್ದದ ಅರ್ಥವು “ಪ್ರತಿಭಟಕನು” ಎಂದಾಗಿದೆ, ಮತ್ತು ಅವನ “ಸಿಂಹಾಸನವು” ಒಂದು ನಿಯತಕಾಲದ ತನಕ ದೈವಿಕವಾಗಿ ಅನುಮತಿಸಲ್ಪಟ್ಟ ಲೋಕದ ಅವನ ಪ್ರಭುತ್ವವನ್ನು ಪ್ರತಿನಿಧಿಸುತ್ತದೆ. (ಯೋಬ 1:6, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ) ಪೆರ್ಗಮಮ್‌ನಲ್ಲಿ ವಿಗ್ರಹಾರಾಧನೆಯ ವಿಪುಲತೆಯು, ಸೈತಾನನ “ಸಿಂಹಾಸನವು” ಆ ನಗರದಲ್ಲಿ ಸ್ಥಿರವಾಗಿ ತಳವೂರಿರುವುದನ್ನು ತೋರಿಸಿತು. ರಾಷ್ಟ್ರೀಯತೆಯ ಆರಾಧನೆಯಲ್ಲಿ ತನಗೆ ಕ್ರೈಸ್ತರು ಅಡ್ಡಬೀಳದೆ ಇರುವುದರಿಂದ ಸೈತಾನನು ಎಷ್ಟೊಂದು ಕ್ರೋಧತಪ್ತನಾಗಿದ್ದಿರಬಹುದು!

4. (ಎ) ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೆ ಯೇಸುವು ಯಾವ ಪ್ರಶಂಸೆಯನ್ನು ಮಾಡುತ್ತಾನೆ? (ಬಿ) ರೋಮನ್‌ ರಾಯಭಾರಿ ಪ್ಲಿನೀಯು ಕ್ರೈಸ್ತರ ಉಪಚರಿಸುವಿಕೆಯ ಕುರಿತು ಸಮ್ರಾಟ ಟ್ರೇಜನ್‌ನಿಗೆ ಏನು ಬರೆದನು? (ಸಿ) ಅಪಾಯವಿದ್ದಾಗ್ಯೂ, ಪೆರ್ಗಮಮ್‌ನಲ್ಲಿರುವ ಕ್ರೈಸ್ತರು ಯಾವ ಮಾರ್ಗವನ್ನು ಅನುಸರಿಸಿದರು?

4 ಹೌದು, “ಸೈತಾನನ ಸಿಂಹಾಸನವು” ಅಲ್ಲಿ ಪೆರ್ಗಮಮ್‌ನಲ್ಲಿಯೇ ಇದೆ. “ಮತ್ತು ಹೀಗಾದರೂ,” ಯೇಸುವು ಮುಂದರಿಸುವುದು, “ನೀನು ನನ್ನ ಹೆಸರನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾ ಇದ್ದೀ, ಮತ್ತು ಎಲ್ಲಿ ಸೈತಾನನು ವಾಸಿಸುತ್ತಿದ್ದಾನೋ ಆ ನಿನ್ನ ಪಕ್ಕದಲ್ಲಿ ಕೊಲ್ಲಲ್ಪಟ್ಟ ನನ್ನ ಸಾಕ್ಷಿಯೂ ನಂಬಿಗಸ್ತನೂ ಆದ ಅಂತಿಪನ ದಿನಗಳಲ್ಲಿಯೂ ನೀನು ನಿನ್ನ ನಂಬಿಕೆಯನ್ನು ಅಲ್ಲಗಳೆಯಲಿಲ್ಲ.” (ಪ್ರಕಟನೆ 2:13ಬಿ, NW) ಎಂತಹ ಒಂದು ಆತ್ಮ-ಕಲುಕುವ ಪ್ರಶಂಸೆ! ನಿಸ್ಸಂದೇಹವಾಗಿ, ಪೈಶಾಚಿಕ ಆಚರಣೆಗಳೊಂದಿಗೆ ಮತ್ತು ರೋಮನ್‌ ಸಮ್ರಾಟನ ಆರಾಧನೆಯೊಂದಿಗೆ ಹೋಗಲು ನಿರಾಕರಿಸಿದ್ದರಿಂದ ಅಂತಿಪನ ಧರ್ಮಬಲಿಯಾಯಿತು. ಈ ಪ್ರವಾದನೆಯನ್ನು ಯೋಹಾನನು ಪಡೆದ ಸ್ವಲ್ಪವೇ ಸಮಯದ ನಂತರ, ರೋಮನ್‌ ಚಕ್ರವರ್ತಿ ಟ್ರೇಜನ್‌ನ ಆಪ್ತ ಪ್ರತಿನಿಧಿಯಾದ ಪ್ಲಿನೀ ದ ಯಂಗರ್‌, ಕ್ರೈಸ್ತರಾಗಿ ಆಪಾದಿತರಾದ ವ್ಯಕ್ತಿಗಳೊಂದಿಗೆ ವ್ಯವಹರಿಸುವ ತನ್ನ ಕಾರ್ಯವಿಧಾನವನ್ನು ವಿವರಿಸುತ್ತಾ, ಟ್ರೇಜನ್‌ನಿಗೆ ಬರೆದನು—ಈ ಕಾರ್ಯವಿಧಾನಕ್ಕೆ ಚಕ್ರವರ್ತಿಯು ಒಪ್ಪಿಗೆಯನ್ನಿತ್ತನು. ತಾವು ಕ್ರೈಸ್ತರಾಗಿಲ್ಲವೆಂದು ನಿರಾಕರಿಸಿದವರು, ಮತ್ತು ಪ್ಲಿನೀ ಹೇಳಿದಂತೆ, “ದೇವರುಗಳಿಗೆ ಪ್ರಾರ್ಥನೆಗಳನ್ನು ನನ್ನ ನಂತರ ಅವರು ಪುನರುಚ್ಚರಿಸಿದರು, ನಿನ್ನ [ಟ್ರೇಜನ್‌ನ] ಪ್ರತಿಮೆಗೆ ಧೂಪ ಮತ್ತು ದ್ರಾಕ್ಷಾರಸವನ್ನು ಅರ್ಪಿಸಿದರು . . . ಮತ್ತು, ಇದರೊಟ್ಟಿಗೆ, ಕ್ರಿಸ್ತನನ್ನು ಶಪಿಸಿದ” ವರನ್ನು ಬಿಡುಗಡೆಗೊಳಿಸಲಾಯಿತು, ಕ್ರೈಸ್ತರೆಂದು ಕಂಡುಹಿಡಿಯಲ್ಪಟ್ಟ ಪ್ರತಿಯೊಬ್ಬರು ಹತಿಸಲ್ಪಟ್ಟರು. ಅಂತಹ ಅಪಾಯವನ್ನು ಎದುರಿಸುತ್ತಿದ್ದರೂ ಕೂಡ, ಪೆರ್ಗಮಮ್‌ನಲ್ಲಿದ್ದ ಕ್ರೈಸ್ತರು ತಮ್ಮ ನಂಬಿಕೆಯನ್ನು ನಿರಾಕರಿಸಲಿಲ್ಲ. ಅವರು ‘ಯೇಸುವಿನ ಹೆಸರನ್ನು ಬಿಗಿಯಾಗಿ ಹಿಡಿದುಕೊಂಡರು’, ಅಂದರೆ ಯೆಹೋವನ ನಾಮ ಸಮರ್ಥಕನು ಮತ್ತು ನೇಮಿತ ನ್ಯಾಯಾಧಿಪತಿಯೋಪಾದಿ ಅವನ ಉನ್ನತ ಪದವಿಗೆ ಗೌರವ ಕೊಡುವುದನ್ನು ಅವರು ಮುಂದುವರಿಸಿದರು. ರಾಜ್ಯದ ಸಾಕ್ಷಿಗಳೋಪಾದಿ ಅವರು ನಿಷ್ಠರಾಗಿ ಯೇಸುವಿನ ಹೆಜ್ಜೇಜಾಡಿನಲ್ಲಿ ಹಿಂಬಾಲಿಸಿದರು.

5. (ಎ) ಸಮ್ರಾಟನ ಆರಾಧನೆಯ ಯಾವ ಆಧುನಿಕ-ದಿನದ ಪಡಿರೂಪವು ಈ 20-ನೆಯ ಶತಮಾನದಲ್ಲಿ ಕ್ರೈಸ್ತರಿಗೆ ತೀವ್ರತಮ ಪರೀಕ್ಷೆಗಳಿಗೆ ಕಾರಣವಾಗಿದೆ? (ಬಿ) ದ ವಾಚ್‌ಟವರ್‌ ಕ್ರೈಸ್ತರಿಗೆ ಯಾವ ಸಹಾಯವನ್ನು ನೀಡಿದೆ?

5 ಸೈತಾನನು ಈ ಸದ್ಯದ ದುಷ್ಟ ಲೋಕವನ್ನು ಆಳುತ್ತಾನೆ ಎಂದು ವಿವಿಧ ಸಂದರ್ಭಗಳಲ್ಲಿ ಯೇಸುವು ತಿಳಿಯಪಡಿಸಿದ್ದನು, ಆದರೆ ಯೇಸುವಿನ ಸಮಗ್ರತೆಯ ಕಾರಣ, ಸೈತಾನನಿಗೆ ಅವನ ಮೇಲೆ ಯಾವುದೇ ಹಿಡಿತವಿರಲಿಲ್ಲ. (ಮತ್ತಾಯ 4:8-11; ಯೋಹಾನ 14:30) ಈ ಇಪ್ಪತ್ತನೆಯ ಶತಮಾನದಲ್ಲಿ, ಬಲಾಢ್ಯ ರಾಷ್ಟ್ರಗಳು, ಗಮನಾರ್ಹವಾಗಿ “ಉತ್ತರದ ರಾಜನು” ಮತ್ತು “ದಕ್ಷಿಣದ ರಾಜನು” ಲೋಕ ಪ್ರಭುತ್ವಕ್ಕೋಸ್ಕರ ಹೋರಾಡಿದ್ದಾರೆ. (ದಾನಿಯೇಲ 11:40) ದೇಶಭಕ್ತಿಯ ಆವೇಶವನ್ನು ಉದ್ರೇಕಿಸಲಾಗಿದೆ, ಮತ್ತು ಸಮ್ರಾಟನ ಆರಾಧನೆಯ ಪದ್ಧತಿಗೆ ಆಧುನಿಕ ಪಡಿರೂಪವು ಭೂಮಿಯನ್ನೆಲ್ಲಾ ವ್ಯಾಪಿಸಿದ್ದ ರಾಷ್ಟ್ರೀಯತೆಯ ಅಲೆಯಲ್ಲಿರುತ್ತದೆ. ಯೇಸುವು ಧೈರ್ಯದಿಂದ ಮಾಡಿದಂತೆ, ಯೆಹೋವನ ನಾಮದಲ್ಲಿ ನಡೆಯಲು ಮತ್ತು ಲೋಕವನ್ನು ಜಯಿಸಲು ಬಯಸುವ ಕ್ರೈಸ್ತರೆಲ್ಲರಿಗೆ ಮಾರ್ಗದರ್ಶಕಗಳನ್ನು ಒದಗಿಸುತ್ತಾ, ದ ವಾಚ್‌ಟವರ್‌ನ ನವಂಬರ 1, 1939, ಮತ್ತು ಪುನಃ ನವಂಬರ 1, 1979 ಮತ್ತು ಸಪ್ಟಂಬರ 1, 1986ರ ಸಂಚಿಕೆಗಳಲ್ಲಿ ತಾಟಸ್ಥ್ಯದ ಮೇಲಿನ ಲೇಖನಗಳು ಈ ವಿವಾದದ ಮೇಲೆ ಬೈಬಲಿನ ಬೋಧನೆಯನ್ನು ಸ್ಪಷ್ಟವಾಗಿ ತಿಳಿಸಿದವು.—ಮೀಕ 4:1, 3, 5; ಯೋಹಾನ 16:33; 17:4, 6, 26; 18:36, 37; ಅ. ಕೃತ್ಯಗಳು 5:29.

6. ಅಂತಿಪನಂತೆ, ಆಧುನಿಕ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದಾರೆ?

6 ಅಂತಹ ಬುದ್ಧಿವಾದವು ತುರ್ತಾಗಿ ಬೇಕಾಗಿತ್ತು. ವಿವೇಚನೆಯಿಲ್ಲದ ದೇಶಭಕ್ತಿಯ ಆವೇಶದ ಎದುರಿನಲ್ಲಿ, ಅಭಿಷಿಕ್ತರೂ ಮತ್ತು ಅವರ ಸಂಗಾತಿಗಳೂ ಆಗಿರುವ ಯೆಹೋವನ ಸಾಕ್ಷಿಗಳು ನಂಬಿಕೆಯಲ್ಲಿ ದೃಢವಾಗಿ ನಿಲ್ಲಬೇಕಿತ್ತು. ಅಮೆರಿಕದಲ್ಲಿ ನೂರಾರು ಮಕ್ಕಳು ಮತ್ತು ಶಿಕ್ಷಕರು ಶಾಲೆಗಳಿಂದ ವಜಾಗೊಳಿಸಲ್ಪಟ್ಟರು, ಯಾಕಂದರೆ ಅವರು ರಾಷ್ಟ್ರ ಧ್ವಜವನ್ನು ವಂದಿಸಲಿಲ್ಲ, ಜರ್ಮನಿಯಲ್ಲಿ ಸ್ವಸ್ತಿಕವನ್ನು ವಂದಿಸಲು ನಿರಾಕರಿಸಿದ್ದರಿಂದ ಸಾಕ್ಷಿಗಳು ಕ್ರೂರ ರೀತಿಯಲ್ಲಿ ಹಿಂಸಿಸಲ್ಪಟ್ಟರು. ಈಗಾಗಲೇ ಗಮನಿಸಿರುವಂತೆ, ಹಿಟ್ಲರನ ನಾಜಿಗಳು ಯೆಹೋವನ ಸಾವಿರಾರು ನಿಷ್ಠಾವಂತ ಸೇವಕರುಗಳನ್ನು ಕೊಂದಿದ್ದರು, ಯಾಕಂದರೆ ಅಂತಹ ರಾಷ್ಟ್ರೀಯತೆಯ ವಿಗ್ರಹಾರಾಧನೆಯಲ್ಲಿ ಪಾಲಿಗರಾಗಲು ಅವರು ನಿರಾಕರಿಸಿದರು. 1930ರ ದಶಕದಲ್ಲಿ, ಶಿಂಟೋ ಸಮ್ರಾಟನ ಆರಾಧನೆಯು ಜಪಾನಿನಲ್ಲಿ ಉತ್ಕರ್ಷದಲ್ಲಿದ್ದಾಗ, ಜಪಾನೀಯರ ವಶದಲ್ಲಿದ್ದ ಟೈವಾನಿನಲ್ಲಿ ಇಬ್ಬರು ಪಯನೀಯರ್‌ ಶುಶ್ರೂಷಕರು ಬಹಳಷ್ಟು ರಾಜ್ಯದ ಬೀಜಗಳನ್ನು ಬಿತ್ತಿದರು. ಮಿಲಿಟರಿ ಅಧಿಕಾರಿಗಳು ಅವರನ್ನು ಸೆರೆಮನೆಗೆ ದಬ್ಬಿದರು, ಅವರಲ್ಲೋಬ್ಬನು ಕ್ರೂರ ಉಪಚಾರದಿಂದ ಸತ್ತನು. ಇನ್ನೊಬ್ಬನನ್ನು ಅನಂತರ, ಬೆನ್ನ ಹಿಂದಿನಿಂದ ಅವನಿಗೆ ಗುಂಡಿಡಲಿಕ್ಕೋಸ್ಕರವೇ ಬಿಡುಗಡೆಗೊಳಿಸಲಾಯಿತು—ಆಧುನಿಕ ದಿನಗಳ ಒಬ್ಬ ಅಂತಿಪನು. ಈ ದಿನದ ತನಕವೂ, ರಾಷ್ಟ್ರೀಯ ಚಿಹ್ನೆಗಳ ಆರಾಧನೆಯನ್ನು ಮತ್ತು ರಾಷ್ಟ್ರಕ್ಕೆ ಸಂಪೂರ್ಣ ಭಕ್ತಿಯನ್ನು ಕೇಳುವ ದೇಶಗಳು ಇವೆ. ಕ್ರೈಸ್ತ ತಟಸ್ಥರೋಪಾದಿ ಅವರ ಧೈರ್ಯದ ಸ್ಥಾನದ ಕಾರಣದಿಂದ ಅನೇಕ ಯುವ ಸಾಕ್ಷಿಗಳು ಸೆರೆಮನೆಗೆ ಹಾಕಲ್ಪಟ್ಟಿರುತ್ತಾರೆ, ಮತ್ತು ಹತಿಸಲ್ಪಟ್ಟವರೇನೂ ಕೊಂಚ ಮಂದಿಯಲ್ಲ. ಅಂಥ ವಿವಾದಾಂಶಗಳನ್ನು ಎದುರಿಸುವ ಯುವಕರೊಬ್ಬರು ನೀವಾಗಿರುವುದಾದರೆ, ನಿತ್ಯಜೀವದ ಗುರಿಯಿಂದ, “ನಂಬುವವರಾಗಿ ಪ್ರಾಣರಕ್ಷಣೆ” ಹೊಂದಲು ದೇವರ ವಾಕ್ಯವನ್ನು ಪ್ರತಿ ದಿನ ಅಭ್ಯಾಸಿಸಿರಿ.—ಇಬ್ರಿಯ 10:39–11:1; ಮತ್ತಾಯ 10:28-31.

7. ರಾಷ್ಟ್ರೀಯ ಆರಾಧನೆಯ ವಿವಾದವಾಂಶವನ್ನು ಭಾರತದ ಎಳೆಯರು ಹೇಗೆ ಎದುರಿಸಿದ್ದಾರೆ ಮತ್ತು ಯಾವ ಫಲಿತಾಂಶದೊಂದಿಗೆ?

7 ಶಾಲೆಗಳಲ್ಲಿರುವ ಎಳೆಯರು ಅಂತಹ ವಿವಾದಾಂಶಗಳನ್ನು ಎದುರಿಸಿರುತ್ತಾರೆ. 1985 ರಲ್ಲಿ, ಭಾರತದ ಕೇರಳ ರಾಜ್ಯದಲ್ಲಿ ಯೆಹೋವನ ಸಾಕ್ಷಿಗಳ ಮೂವರು ಮಕ್ಕಳು ಅವರ ಬೈಬಲಾಧರಿತ ನಂಬಿಕೆಯಲ್ಲಿ ಒಪ್ಪಂದ ಮಾಡಲು ನಿರಾಕರಿಸುತ್ತಾ, ರಾಷ್ಟ್ರ ಗೀತೆಯನ್ನು ಹಾಡಲು ನಿರಾಕರಿಸಿದರು. ಇತರರು ಹಾಡುವಾಗ ಅವರು ಗೌರವಪೂರ್ವಕವಾಗಿ ನಿಂತರು, ಆದರೂ ಕೂಡ ಅವರನ್ನು ಶಾಲೆಯಿಂದ ಹೊರಗೆ ದಬ್ಬಲಾಯಿತು. ಈ ವಿಷಯದಲ್ಲಿ ಅವರ ತಂದೆಯು ಭಾರತದ ವರಿಷ್ಠ ನ್ಯಾಯಾಲಯದ ತನಕ (ಸುಪ್ರೀಮ್‌ ಕೋರ್ಟ್‌ ಆಫ್‌ ಇಂಡಿಯಾ) ಮೇಲು-ಮನವಿ ಸಲ್ಲಿಸಿದರು, ಅಲ್ಲಿ ಇಬ್ಬರು ನ್ಯಾಯಾಧೀಶರು ಮಕ್ಕಳ ಪರವಾಗಿ ತೀರ್ಮಾನವನ್ನೀಯುತ್ತಾ, ಧೈರ್ಯದಿಂದ ಹೇಳಿದ್ದು: “ನಮ್ಮ ಸಂಪ್ರದಾಯವು ಸಹಿಷ್ಣುತೆಯನ್ನು ಕಲಿಸುತ್ತದೆ; ನಮ್ಮ ತತ್ವಶಾಸ್ತ್ರವು ಸಹಿಷ್ಣುತೆಯನ್ನು ಕಲಿಸುತ್ತದೆ; ನಮ್ಮ ಸಂವಿಧಾನವು ಸಹಿಷ್ಣುತೆಯನ್ನು ಆಚರಿಸುತ್ತದೆ; ನಾವು ಅದನ್ನು ದುರ್ಬಲಗೊಳಿಸದೆ ಇರೋಣ.” ಭೂಮಿಯ ಜನಸಂಖ್ಯೆಯ ಸುಮಾರು ಐದನೆಯ ಒಂದು ಪಾಲಷ್ಟು ಇರುವ ಈ ಇಡೀ ರಾಷ್ಟ್ರಕ್ಕೆ, ಈ ಮೊಕದ್ದಮೆಯ ಫಲಿತಾಂಶವಾಗಿ ವಾರ್ತಾಪತ್ರಗಳ ಪ್ರಚಾರ ಮತ್ತು ಶ್ಲಾಘಿಸುವ ಸಂಪಾದಕೀಯಗಳು ತಿಳಿಯಪಡಿಸಿದ್ದೇನಂದರೆ ಸತ್ಯ ದೇವರಾದ ಯೆಹೋವನನ್ನು ಆರಾಧಿಸುವ ಕ್ರೈಸ್ತರು ಆ ದೇಶದಲ್ಲೂ ಇದ್ದಾರೆ ಮತ್ತು ಬೈಬಲ್‌ ತತ್ವಗಳಿಗನುಸಾರ ಅವರು ನಿಷ್ಠರಾಗಿ ನಿಲ್ಲುತ್ತಾರೆ.

ಭ್ರಷ್ಟಗೊಳಿಸುವ ಪ್ರಭಾವಗಳು

8. ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೆ ಯಾವ ಖಂಡನೆ ಮಾಡುವ ಅಗತ್ಯತೆಯನ್ನು ಯೇಸುವು ಕಾಣುತ್ತಾನೆ?

8 ಹೌದು, ಪೆರ್ಗಮಮ್‌ನಲ್ಲಿದ್ದ ಕ್ರೈಸ್ತರು ಸಮಗ್ರತೆಯ ಪಾಲಕರಾಗಿದ್ದಾರೆ. “ಆದಾಗ್ಯೂ,” ಯೇಸು ಹೇಳುವುದು, “ನಿನ್ನ ವಿರುದ್ಧವಾಗಿ ಕೆಲವು ವಿಷಯಗಳು ನನ್ನ ಹತ್ತಿರ ಇವೆ.” ಇಂತಹ ಖಂಡನೆಗೆ ಅರ್ಹರಾಗಲು ಅವರು ಏನನ್ನು ಮಾಡಿದ್ದರು? ಯೇಸುವು ನಮಗನ್ನುವುದು: “ನಿನ್ನಲ್ಲಿ, ಯಾರು ಇಸ್ರಾಯೇಲ್‌ ಪುತ್ರರ ಮುಂದೆ ಅಡೆತಡೆಯನ್ನು ಹಾಕುವಂತೆ ವಿಗ್ರಹಗಳಿಗೆ ಯಜ್ಞಾರ್ಪಿಸಿದ ವಸ್ತುಗಳನ್ನು ತಿನ್ನುವಂತೆ ಮತ್ತು ಜಾರತ್ವಮಾಡುವಂತೆ ಬಾಲಾಕನಿಗೆ ಕಲಿಸಿದನೋ, ಆ ಬಿಳಾಮನ ಬೋಧನೆಗಳನ್ನು ಬಿಗಿಯಾಗಿ ಹಿಡಿದುಕೊಂಡವರಿದ್ದಾರೆ.”—ಪ್ರಕಟನೆ 2:14, NW.

9. ಬಿಳಾಮನು ಯಾರು, ಮತ್ತು ಅವನ ಸಲಹೆಯು “ಇಸ್ರಾಯೇಲ್‌ ಪುತ್ರರ ಮುಂದೆ ಅಡೆತಡೆಯನ್ನು” ಹಾಕಿದ್ದು ಹೇಗೆ?

9 ಮೋಶೆಯ ದಿನಗಳಲ್ಲಿ, ಮೋವಾಬಿನ ಅರಸನಾದ ಬಾಲಾಕನು ಇಸ್ರಾಯೇಲ್ಯರನ್ನು ಶಪಿಸಲು, ಯೆಹೋವನ ಮಾರ್ಗಗಳ ಕುರಿತು ಸ್ವಲ್ಪ ತಿಳಿದಿರುವ ಇಸ್ರಾಯೇಲ್ಯನಲ್ಲದ ಒಬ್ಬ ಪ್ರವಾದಿ ಬಿಳಾಮನನ್ನು ಬಾಡಿಗೆಗೆ ಹಿಡಿದಿದ್ದನು. ಯೆಹೋವನು ಬಿಳಾಮನನ್ನು ಪ್ರತಿರೋಧಿಸುತ್ತಾ, ಇಸ್ರಾಯೇಲ್ಯರಿಗೆ ಆಶೀರ್ವಾದಗಳನ್ನೂ, ಮತ್ತು ಅವರ ವಿರೋಧಿಗಳಿಗೆ ವಿಪತ್ತನ್ನೂ ಉಚ್ಚರಿಸುವಂತೆ ಅವನನ್ನು ನಿರ್ಬಂಧಗೊಳಿಸಿದನು. ಇದರ ಮೂಲಕ ಉಂಟಾದ ಬಾಲಾಕನ ಕೋಪವನ್ನು ಶಾಂತಗೊಳಿಸಲು ಬಿಳಾಮನು ಒಂದು ಕುಯುಕ್ತಿಯ ಆಕ್ರಮಣವನ್ನು ಸೂಚಿಸಿದನು: ಇಸ್ರಾಯೇಲ್ಯರ ಪುರುಷರನ್ನು ಸ್ವೇಚ್ಛಾಚಾರದ ಲೈಂಗಿಕ ಅನೈತಿಕತೆ ನಡಿಸಲು ಮತ್ತು ಪೆಗೋರದ ಸುಳ್ಳು ದೇವರಾದ ಬಾಳನ ವಿಗ್ರಹಾರಾಧನೆ ಮಾಡಲು ಮೋವಾಬ್‌ ಸ್ತ್ರೀಯರು ದುಷ್ಪ್ರೇರಿಸಲಿ! ಈ ತಂತ್ರೋಪಾಯ ಸಫಲಗೊಂಡಿತು. ಯೆಹೋವನ ನೀತಿಯ ಕ್ರೋಧವು ಉರಿಯಲಾರಂಭಿಸಿತು, ಹೀಗೆ ಅವನು ವ್ಯಾಧಿಯನ್ನು ಕಳುಹಿಸುವ ಮೂಲಕ ಇಸ್ರಾಯೇಲ್ಯ ಜಾರರಾಗಿದ್ದ 24,000 ಮಂದಿಯನ್ನು ಹತಿಸಿದನು—ಇಸ್ರಾಯೇಲ್ಯರಿಂದ ಈ ದುಷ್ಟತನವನ್ನು ತೆಗೆಯಲು ಯಾಜಕನಾದ ಫೀನೆಹಾಸನು ಒಂದು ಸಕಾರಾತ್ಮಕ ಕ್ರಿಯೆಗೈದ ನಂತರವೇ ಈ ವ್ಯಾಧಿಯು ನಿಂತಿತು.—ಅರಣ್ಯಕಾಂಡ 24:10, 11; 25:1-3, 6-9; 31:16.

10. ಪೆರ್ಗಮಮ್‌ನಲ್ಲಿನ ಸಭೆಯಲ್ಲಿ ಯಾವ ಮುಗ್ಗರಿಸುವ ತೊಡಕುಗಳು ತೂರಿಬಂದಿವೆ, ಮತ್ತು ತಮ್ಮ ಅಪರಾಧಗಳನ್ನು ದೇವರು ಅಲಕ್ಷಿಸುವನೆಂದು ಆ ಕ್ರೈಸ್ತರು ಭಾವಿಸಲು ಕಾರಣವೇನಾಗಿದ್ದಿರಬಹುದು?

10 ಈಗ, ಯೋಹಾನನ ದಿನಗಳಲ್ಲಿ, ತದ್ರೀತಿಯ ಮುಗ್ಗರಿಸುವ ತೊಡಕುಗಳು ಪೆರ್ಗಮಮ್‌ನಲ್ಲಿ ಇವೆಯೋ? ಇವೆ! ಸಭೆಯಲ್ಲಿ ಅನೈತಿಕತೆ ಮತ್ತು ವಿಗ್ರಹಾರಾಧನೆಯು ತೂರಿಕೊಂಡು ಬಂದಿತ್ತು. ಅಪೊಸ್ತಲ ಪೌಲನ ಮೂಲಕ ಕೊಡಲ್ಪಟ್ಟ ದೇವರ ಎಚ್ಚರಿಕೆಗಳಿಗೆ ಆ ಕ್ರೈಸ್ತರು ಕಿವಿಗೊಟ್ಟಿರಲಿಲ್ಲ. (1 ಕೊರಿಂಥ 10:6-11) ಅವರು ಹಿಂಸೆಯನ್ನು ತಾಳಿಕೊಂಡಿದ್ದರಿಂದ, ಪ್ರಾಯಶಃ ದೇವರು ಅವರ ಲೈಂಗಿಕ ಅಪರಾಧಗಳನ್ನು ಅಲಕ್ಷಿಸುವನು ಎಂದವರು ಭಾವಿಸಿರಬೇಕು. ಆದುದರಿಂದ ಅಂತಹ ದುಷ್ಟತನವನ್ನು ಅವರು ತ್ಯಜಿಸತಕ್ಕದ್ದು ಎಂದು ಯೇಸು ಸರಳವಾಗಿ ತಿಳಿಸುತ್ತಾನೆ.

11. (ಎ) ಯಾವುದರ ವಿರುದ್ಧ ಕ್ರೈಸ್ತರು ಜಾಗ್ರತರಾಗಿರಬೇಕು, ಮತ್ತು ಯಾವ ರೀತಿಯ ಯೋಚನೆಗಳನ್ನು ಅವರು ಹೋಗಲಾಡಿಸಬೇಕು? (ಬಿ) ಗತಿಸಿದ ವರ್ಷಗಳಲ್ಲಿ ಕ್ರೈಸ್ತ ಸಭೆಯಿಂದ ಎಷ್ಟು ಜನರು ಬಹಿಷ್ಕರಿಸಲ್ಪಟ್ಟಿರುತ್ತಾರೆ, ಮತ್ತು ಅಧಿಕಾಂಶವಾಗಿ ಯಾವ ಕಾರಣಗಳಿಗಾಗಿ?

11 ತದ್ರೀತಿಯಲ್ಲಿ ಇಂದು, “ನಮ್ಮ ದೇವರ ಅಪಾತ್ರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವುದರ” ವಿರುದ್ಧವಾಗಿ ಕ್ರೈಸ್ತರು ಎಚ್ಚರ ಉಳ್ಳವರಾಗಿರತಕ್ಕದ್ದು. (ಯೂದ 4) ನಾವು ಕೆಟ್ಟದ್ದನ್ನು ದ್ವೇಷಿಸುವ ಮತ್ತು ಕ್ರೈಸ್ತ ಸದ್ಗುಣಗಳ ಪಥವನ್ನು ಹಿಂಬಾಲಿಸುವುದರಲ್ಲಿ ‘ನಮ್ಮ ದೇಹಗಳನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುವ’ ಹಂಗುಳ್ಳವರಾಗಿರುತ್ತೇವೆ. (1 ಕೊರಿಂಥ 9:27; ಕೀರ್ತನೆ 97:10; ರೋಮಾಪುರ 8:6) ದೇವರ ಸೇವೆಯಲ್ಲಿ ನಮ್ಮ ಹುರುಪು ಮತ್ತು ಹಿಂಸೆಯಡಿಯಲ್ಲಿ ಸಮಗ್ರತೆಯು, ಲೈಂಗಿಕ ದುರ್ವರ್ತನೆಯಲ್ಲಿ ಸೇರ್ಪಡೆಗೊಳ್ಳಲು ನಮಗೆ ಅನುಮತಿ ಕೊಡುತ್ತದೆ ಎಂದು ನಾವೆಂದೂ ಎಣಿಸಲೇ ಕೂಡದು. ಗತಿಸಿದ ವರುಷಗಳಲ್ಲಿ ಭೂವ್ಯಾಪಕವಾಗಿ ಕ್ರೈಸ್ತ ಸಭೆಗಳಿಂದ ಅಪರಾಧಿಗಳು ಬಹಿಷ್ಕರಿಸಲ್ಪಟ್ಟಿದ್ದಾರೆ, ಹೆಚ್ಚಾಗಿ ಲೈಂಗಿಕ ಅನೈತಿಕತೆಯ ಕಾರಣದಿಂದ ಆದವರ ಸಂಖ್ಯೆ ಹತ್ತಾರು ಸಾವಿರಗಳಾಗಿರುತ್ತದೆ. ಕೆಲವು ವರ್ಷಗಳಲ್ಲಿ ಹಾಗೆ ಆದವರ ಸಂಖ್ಯೆಯು ಪೇಗೊರದ ಬಾಳನ ಕಾರಣದಿಂದ ಇಸ್ರಾಯೇಲ್ಯರಲ್ಲಿ ಹತರಾದವರಿಗಿಂತಲೂ ಅಧಿಕವಾಗಿದೆ. ಆ ಗುಂಪಿನಲ್ಲಿ ನಾವೆಂದೂ ಬೀಳದಂತೆ ನಮ್ಮ ಎಚ್ಚರಿಕೆಯನ್ನು ನಾವು ಕಾಪಾಡಿಕೊಳ್ಳೋಣ!—ರೋಮಾಪುರ 11:20; 1 ಕೊರಿಂಥ 10:12.

12. ಆರಂಭದ ದೇವರ ಸೇವಕರಂತೆ, ಇಂದು ಕೂಡ ಕ್ರೈಸ್ತರಿಗೆ ಯಾವ ಮೂಲಸೂತ್ರಗಳು ಅನ್ವಯಿಸುತ್ತವೆ?

12 ಯೇಸುವು ‘ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವ’ ವಿಷಯದಲ್ಲಿಯೂ ಪೆರ್ಗಮಮ್‌ನಲ್ಲಿರುವ ಕ್ರೈಸ್ತರನ್ನು ಖಂಡಿಸುತ್ತಾನೆ. ಇದರಲ್ಲಿ ಏನು ಒಳಗೂಡಿದ್ದಿರಬಹುದು? ಕೊರಿಂಥದವರಿಗೆ ಪೌಲನು ಹೇಳಿದ ಮಾತುಗಳ ನೋಟದಲ್ಲಿ, ಕೆಲವರು ಅವರ ಕ್ರೈಸ್ತ ಸ್ವಾತಂತ್ರ್ಯವನ್ನು ದುರುಪಯೋಗಿಸುತ್ತಿದ್ದಿರಬಹುದು ಮತ್ತು ಬೇಕುಬೇಕೆಂದೇ ಇತರರ ಮನಸ್ಸಾಕ್ಷಿಗಳನ್ನು ನೋಯಿಸುತ್ತಿದ್ದಿರಬಹುದು. ಆದರೆ, ವಿಗ್ರಹಗಳ ನೈಜ ಸಮಾರಂಭಗಳಲ್ಲಿ ಅವರು ಹೇಗೋ ಪಾಲು ತೆಗೆದುಕೊಳ್ಳುತಿದ್ದಿರಬಹುದಾಗಿದ್ದದ್ದು ಹೆಚ್ಚು ಸಂಭವನೀಯ. (1 ಕೊರಿಂಥ 8:4-13; 10:25-30) ಕ್ರೈಸ್ತ ಸ್ವಾತಂತ್ರ್ಯದ ತಮ್ಮ ಬಳಕೆಯಲ್ಲಿ, ಇತರರಿಗೆ ವಿಘ್ನವಾಗದಂತೆ ಜಾಗ್ರತೆವಹಿಸುತ್ತಾ, ನಂಬಿಗಸ್ತ ಕ್ರೈಸ್ತರು ಇಂದು ನಿಸ್ವಾರ್ಥ ಪ್ರೀತಿಯನ್ನು ತೋರಿಸತಕ್ಕದ್ದು. ಟೀವೀ, ಚಲನ ಚಿತ್ರಗಳ, ಮತ್ತು ಕ್ರೀಡೆಗಳ ತಾರೆಗಳನ್ನು ಆರಾಧಿಸುವ ವಿಗ್ರಹಾರಾಧನೆಯ ಆಧುನಿಕ ರೂಪಗಳನ್ನು, ಯಾ ಹಣವನ್ನೇ, ಅಥವಾ ತಮ್ಮ ಹೊಟ್ಟೆಯನ್ನೇ ಒಂದು ದೇವರನ್ನಾಗಿ ಮಾಡುವುದನ್ನು ಕೂಡ ಅವರು ಖಂಡಿತವಾಗಿಯೂ ಹೋಗಲಾಡಿಸತಕ್ಕದ್ದು!—ಮತ್ತಾಯ 6:24; ಫಿಲಿಪ್ಪಿ 1:9, 10; 3:17-19.

ಪಂಥಾಭಿಮಾನವನ್ನು ಹೋಗಲಾಡಿಸಿರಿ!

13. ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೆ ಯೇಸುವು ಅನಂತರ ಯಾವ ಗದರಿಕೆಯ ಮಾತುಗಳನ್ನು ನೀಡುತ್ತಾನೆ, ಮತ್ತು ಸಭೆಗೆ ಅವುಗಳು ಯಾಕೆ ಬೇಕಾಗಿದ್ದವು?

13 ಯೇಸುವು ಪೆರ್ಗಮಮ್‌ನಲ್ಲಿರುವ ಕ್ರೈಸ್ತರನ್ನು ಇನ್ನಷ್ಟು ಗದರಿಸುತ್ತಾ, ಹೇಳುವುದು: “ಹಾಗೆಯೇ, ನಿಕೊಲೇಅಸನ ಪಂಥದ ಬೋಧನೆಯನ್ನು ಬಿಗಿಯಾಗಿ ಹಿಡಿದುಕೊಂಡಿರುವವರೂ ನಿನ್ನಲ್ಲಿದ್ದಾರೆ.” (ಪ್ರಕಟನೆ 2:15, NW)  ಮೊದಲು ಈ ಪಂಥದ ಕೃತ್ಯಗಳ ದ್ವೇಷಕ್ಕಾಗಿ ಎಫೆಸದವರನ್ನು ಯೇಸುವು ಶ್ಲಾಘಿಸಿದ್ದಾನೆ. ಆದರೆ ಸಭೆಯನ್ನು ಈ ಪಂಥಾಭಿಮಾನದಿಂದ ಸ್ವತಂತ್ರವಾಗಿರಿಸಲು ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೆ ಬುದ್ಧಿವಾದದ ಜರೂರಿಯಿತ್ತು. ಯೋಹಾನ 17:20-23ರಲ್ಲಿ ಯೇಸುವು ಪ್ರಾರ್ಥಿಸಿದ ಐಕ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ ಕ್ರೈಸ್ತ ಮಟ್ಟಗಳನ್ನು ಎತ್ತಿಹಿಡಿಯಲು ಅಧಿಕ ದೃಢತೆಯ ಅಗತ್ಯವಿದೆ. “ಸ್ವಸ್ಥಬೋಧನೆಯ ಮೂಲಕ ಬುದ್ಧಿಹೇಳುವ ಹಾಗೂ ವಿರೋಧಿಸುವವರನ್ನು ಗದರಿಸುವ” ಅಗತ್ಯ ಅಲ್ಲಿತ್ತು.—ತೀತ 1:9, NW.

14. (ಎ) ಆರಂಭದ ದಿನಗಳಿಂದ, ಯಾರೊಂದಿಗೆ ಕ್ರೈಸ್ತ ಸಭೆಯು ಹೆಣಗಾಡಬೇಕಿತ್ತು, ಮತ್ತು ಅವರನ್ನು ಅಪೊಸ್ತಲ ಪೌಲನು ಹೇಗೆ ವರ್ಣಿಸಿದನು? (ಬಿ) ಒಂದು ಬೇರ್ಪಟ್ಟ ಗುಂಪನ್ನು ಹಿಂಬಾಲಿಸುವ ಒಲವು ಇರುವ ಯಾವನೇ ಒಬ್ಬನು, ಯೇಸುವಿನ ಯಾವ ಮಾತುಗಳಿಗೆ ಕಿವಿಗೊಡಬೇಕು?

14 ಆರಂಭದ ದಿನಗಳಿಂದಲೂ, ಕ್ರೈಸ್ತರು ಈ ಅಹಂಕಾರಿ ಧರ್ಮಭ್ರಷ್ಟರೊಂದಿಗೆ ಹೆಣಗಾಡಬೇಕಾಗಿತ್ತು, ಇವರು ನಯವಾದ, ಕಪಟ ಮಾತುಗಳಿಂದ, ಯೆಹೋವನ ಮಾಧ್ಯಮದ ಮೂಲಕ ಒದಗಿಸಲ್ಪಟ್ಟ “ಬೋಧನೆಗಳ ವಿರುದ್ಧವಾಗಿ ವಿಘ್ನಗಳಿಗೆ ಸಂದರ್ಭಗಳನ್ನು ಮತ್ತು ಭೇದಗಳನ್ನು ಹುಟ್ಟಿಸು” ವವರಾಗಿದ್ದರು. (ರೋಮಾಪುರ 16:17, 18, NW) ಅಪೊಸ್ತಲ ಪೌಲನು ಈ ಬೆದರಿಕೆಯ ವಿಷಯದಲ್ಲಿ ಅಧಿಕಾಂಶ ತನ್ನ ಎಲ್ಲಾ ಪತ್ರಗಳಲ್ಲಿ ಎಚ್ಚರಿಕೆಯನ್ನಿತ್ತನು. * ಆಧುನಿಕ ದಿನಗಳಲ್ಲಿ, ಯೇಸುವು ನಿಜ ಸಭೆಯನ್ನು ಅದರ ಕ್ರೈಸ್ತ ಶುದ್ಧತೆಗೆ ಮತ್ತು ಐಕ್ಯಕ್ಕೆ ಪುನಃ ಸ್ಥಾಪಿಸಿರುವಾಗ, ಪಂಥಾಭಿಮಾನದ ಅಪಾಯವು ಇನ್ನೂ ಉಳಿದಿರುತ್ತದೆ. ಆದಕಾರಣ, ಬೇರ್ಪಟ್ಟ ಯಾವುದೇ ಒಂದು ಗುಂಪನ್ನು ಹಿಂಬಾಲಿಸಲು ಯಾವನೇ ಒಬ್ಬನಿಗೆ ಒಲವು ಇದ್ದು, ಹೀಗೆ ಒಂದು ಪಂಥವನ್ನು ರಚಿಸುವುದಾದರೆ, ಯೇಸುವಿನ ಮುಂದಿನ ಈ ಮಾತುಗಳಿಗೆ ಕಿವಿಗೊಡತಕ್ಕದ್ದು: “ಆದಕಾರಣ, ಪಶ್ಚಾತ್ತಾಪ ಪಡು. ನೀನು ಹಾಗೆ ಮಾಡದಿದ್ದರೆ, ನಾನು ಶೀಘ್ರದಲ್ಲಿಯೇ ನಿನ್ನ ಬಳಿಗೆ ಬರುವೆನು, ಮತ್ತು ನನ್ನ ಬಾಯಿಯ ಉದ್ದ ಕತ್ತಿಯಿಂದ ಅವರೊಂದಿಗೆ ಯುದ್ಧಮಾಡುವೆನು.”—ಪ್ರಕಟನೆ 2:16, NW.

15. ಪಂಥಾಭಿಮಾನವು ಹೇಗೆ ಆರಂಭಗೊಳ್ಳುತ್ತದೆ?

15 ಪಂಥಾಭಿಮಾನವು ಆರಂಭಗೊಳ್ಳುವುದಾದರೂ ಹೇಗೆ? ಪ್ರಾಯಶಃ ಒಬ್ಬ ಸ್ವಯಂ-ಆರೋಪಿತ ಬೋಧಕನು ಸಂದೇಹದ ಬೀಜಗಳನ್ನು ಬಿತ್ತಿ, (ನಾವು ಕಡೇ ದಿವಸಗಳಲ್ಲಿ ಇದ್ದೇವೆಯೊ ಎಂಬಂಥ) ಕೆಲವು ಬೈಬಲು ಸತ್ಯತೆಗಳ ಕುರಿತು ವಿವಾದಿಸಬಹುದು, ಮತ್ತು ಒಂದು ಚಕ್ಕೆ ಗುಂಪು ಪ್ರತ್ಯೇಕಿಸಲ್ಪಡುತ್ತದೆ ಮತ್ತು ಅವನನ್ನು ಹಿಂಬಾಲಿಸುತ್ತದೆ. (2 ತಿಮೊಥೆಯ 3:1; 2 ಪೇತ್ರ 3:3, 4) ಇಲ್ಲವೆ, ಯೆಹೋವನು ತನ್ನ ಕೆಲಸವನ್ನು ನಡಿಸುವ ವಿಧದ ಕುರಿತು ಯಾರಾದರೊಬ್ಬರು ಟೀಕಿಸಬಹುದು ಮತ್ತು ರಾಜ್ಯದ ಸಂದೇಶದೊಂದಿಗೆ ಮನೆಯಿಂದ ಮನೆಗೆ ಹೋಗವಂತಹದ್ದು ಶಾಸ್ತ್ರೀಯವೂ ಅಲ್ಲ, ಅಗತ್ಯವೂ ಇಲ್ಲ ಎಂದು ವಾದಿಸುತ್ತಾ, ಸ್ವಾನುಕೂಲದ ಆತ್ಮಕ್ಕೆ ಮನವಿ ಮಾಡಬಹುದು. ಯೇಸುವಿನ ಮತ್ತು ಅವನ ಅಪೊಸ್ತಲರ ಮಾದರಿಯಲ್ಲಿ ಅಂತಹ ಸೇವೆಯಲ್ಲಿ ಭಾಗವಹಿಸುವುದು ಇವರನ್ನು ನಮ್ರರನ್ನಾಗಿ ಇಡುತ್ತದೆ, ಆದರೂ, ಅವರು ವಿಭಾಗವಾಗಲು ಇಷ್ಟಪಡುತ್ತಾರೆ ಮತ್ತು ಪ್ರಾಯಶಃ ಒಂದು ಖಾಸಗಿ ಗುಂಪಾಗಿ ಸಂದರ್ಭ ಒದಗಿದಂತೆ ಬೈಬಲನ್ನು ಮಾತ್ರ ಓದುತ್ತಾ, ಅದನ್ನು ಬಹಳ ಸುಲಭವಾಗಿ ತೆಗೆದುಕೊಳ್ಳುತ್ತಾರೆ. (ಮತ್ತಾಯ 10:7, 11-13; ಅ. ಕೃತ್ಯಗಳು 5:42; 20:20, 21) ಇಂಥವರು ಯೇಸುವಿನ ಮರಣದ ಜ್ಞಾಪಕಚಾರಣೆ, ರಕ್ತವನ್ನು ವರ್ಜಿಸಬೇಕಾದ ಶಾಸ್ತ್ರೀಯ ಆಜ್ಞೆ, ರಜಾದಿನಗಳ ಆಚರಣೆ, ಮತ್ತು ತಂಬಾಕುವಿನ ಸೇವನೆಯ ಕುರಿತು ತಮ್ಮದೇ ಆದ ಕಲ್ಪನೆಗಳನ್ನು ಹೆಣೆಯುತ್ತಾರೆ. ಇನ್ನೂ ಹೆಚ್ಚಾಗಿ, ಯೆಹೋವನ ಹೆಸರನ್ನು ಅವರು ಕೀಳ್ಮಟ್ಟಕ್ಕೆ ತರುತ್ತಾರೆ; ಬಲುಬೇಗನೇ, ಮಹಾ ಬಾಬೆಲಿನ ಸ್ವೇಚ್ಛಾಚಾರದ ಮಾರ್ಗಗಳಿಗೆ ಅವರು ಪುನಃ ಬೀಳುತ್ತಾರೆ. ಇನ್ನು ಕೆಡುಕಾದ ವಿಷಯವೇನಂದರೆ ಕೆಲವರು ಸೈತಾನನಿಂದ ಪ್ರೇರಿಸಲ್ಪಡುತ್ತಾರೆ ಮತ್ತು ಒಂದು ಸಮಯದಲ್ಲಿ ಅವರ ಸಹೋದರರಾಗಿದ್ದ ‘ಅವರ ಜೊತೆ ಆಳುಗಳನ್ನು ಹೊಡೆಯಲು’ ತೊಡಗುತ್ತಾರೆ.—ಮತ್ತಾಯ 24:49; ಅ. ಕೃತ್ಯಗಳು 15:29; ಪ್ರಕಟನೆ 17:5.

16. (ಎ) ಧರ್ಮಭ್ರಷ್ಟತೆಯ ಪ್ರಭಾವದ ಕಾರಣ ಚಂಚಲರಾಗಿರುವವರು ಯಾಕೆ ಕೂಡಲೇ ಪಶ್ಚಾತ್ತಾಪ ಪಡತಕ್ಕದ್ದು? (ಬಿ) ಪಶ್ಚಾತ್ತಾಪ ಪಡಲು ನಿರಾಕರಿಸುವವರಿಗೆ ಏನು ಸಂಭವಿಸಲಿರುವುದು?

16 ಧರ್ಮಭ್ರಷ್ಟತೆಯ ಪ್ರಭಾವದಿಂದ ಯಾರೇ ಒಬ್ಬನು ಚಂಚಲಗೊಳ್ಳುವುದಾದರೆ, ಪಶ್ಚಾತ್ತಾಪ ಪಡುವಂತೆ ಯೇಸುವಿನ ಕರೆಗೆ ಕೂಡಲೇ ಕಿವಿಗೊಡತಕ್ಕದ್ದು! ಧರ್ಮಭ್ರಷ್ಟ ಪ್ರಚಾರವು ವಿಷವೇ ಆಗಿರುವುದರಿಂದ, ಅದನ್ನು ನಿರಾಕರಿಸಲೇ ಬೇಕು! ಯೇಸುವು ತನ್ನ ಸಭೆಗೆ ಉಣ್ಣಿಸುವ ನೀತಿಯ, ಸದ್ಗುಣದ, ಮತ್ತು ಪ್ರೀತಿಯೋಗ್ಯ ಸತ್ಯತೆಗಳ ವ್ಯತಿರಿಕ್ತವಾಗಿ, ಅದರ ತಳಹದಿಯು ಮತ್ಸರ ಮತ್ತು ದ್ವೇಷವಾಗಿರುತ್ತದೆ. (ಲೂಕ 12:42; ಫಿಲಿಪ್ಪಿ 1:15, 16; 4:8, 9) ಪಶ್ಚಾತ್ತಾಪ ಪಡಲು ಯಾರು ನಿರಾಕರಿಸುತ್ತಾರೋ, ಅವರೊಂದಿಗೆ ಕರ್ತನಾದ ಯೇಸುವು ಖಂಡಿತವಾಗಿಯೂ “[ಅವನ] ಬಾಯ ಉದ್ದವಾದ ಕತ್ತಿಯಿಂದ . . . ಯುದ್ಧಮಾಡುವನು.” ಭೂಮಿಯ ಮೇಲೆ ತನ್ನ ಶಿಷ್ಯರೊಂದಿಗೆ ಅವನ ಕೊನೆಯ ಸಾಯಂಕಾಲ ಅವನು ಪ್ರಾರ್ಥನೆ ಮಾಡಿದ ಐಕ್ಯವನ್ನು ಕಾಪಾಡಲಿಕ್ಕಾಗಿ ಅವನು ತನ್ನ ಜನರನ್ನು ವಿಂಗಡಿಸುತ್ತಾ ಇದ್ದಾನೆ. (ಯೋಹಾನ 17:20-23, 26) ಅವನ ಬಲಗೈಯಲ್ಲಿದ್ದ ನಕ್ಷತ್ರಗಳಿಂದ ಕೊಡಲ್ಪಟ್ಟ ಪ್ರೀತಿಮಯ ಬುದ್ಧಿವಾದ ಮತ್ತು ಸಹಾಯವನ್ನು ಧರ್ಮಭ್ರಷ್ಟರು ನಿರಾಕರಿಸುವುದರಿಂದ, ಯೇಸುವು ಅವರಿಗೆ ನ್ಯಾಯತೀರ್ಪನ್ನು ನೀಡುತ್ತಾನೆ ಮತ್ತು “ಮಹಾ ಕಾಠಿಣ್ಯದಿಂದ” ಅವರನ್ನು ಶಿಕ್ಷಿಸುತ್ತಾನೆ ಮತ್ತು ಅವರನ್ನು “ಹೊರಗೆ ಕತ್ತಲೆಗೆ” ಹಾಕುತ್ತಾನೆ. ದೇವರ ಜನರ ನಡುವೆ ಇನ್ನು ಮುಂದೆ ಒಂದು ಹುಳಿಯೋಪಾದಿ ಕಾರ್ಯನಡಿಸಲಿಕ್ಕಿಲ್ಲದವರಾಗಿ ಅವರು ಬಹಿಷ್ಕರಿಸಲ್ಪಡುತ್ತಾರೆ.—ಮತ್ತಾಯ 24:48-51, NW; 25:30; 1 ಕೊರಿಂಥ 5:6, 9, 13; ಪ್ರಕಟನೆ 1:16.

‘ಬಚ್ಚಿಟ್ಟಿರುವ ಮನ್ನ ಮತ್ತು ಒಂದು ಬಿಳೀ ಉರುಟು ಕಲ್ಲು’

17. ‘ಜಯಹೊಂದುವ’ ಅಭಿಷಿಕ್ತ ಕ್ರೈಸ್ತರಿಗೆ ಯಾವ ಬಹುಮಾನವು ಕಾದಿರುತ್ತದೆ, ಮತ್ತು ಪೆರ್ಗಮಮ್‌ನಲ್ಲಿರುವ ಕ್ರೈಸ್ತರು ಯಾವುದರ ಮೇಲೆ ಯಶಸ್ವಿಗಳಾಗುವ ಜರೂರಿಯಿತ್ತು?

17 ಯೆಹೋವನ ಪವಿತ್ರ ಆತ್ಮದ ಮಾರ್ಗದರ್ಶನದ ಮೂಲಕ ಕೊಡಲ್ಪಟ್ಟ ಯೇಸುವಿನ ಬುದ್ಧಿವಾದವನ್ನು ಕೇಳುವವರೆಲ್ಲರಿಗೆ ಒಂದು ಮಹಾ ಬಹುಮಾನವು ಕಾದಿರುತ್ತದೆ. ಆಲಿಸಿರಿ! “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಹೊಂದುವವನಿಗೆ ನಾನು ಬಚ್ಚಿಟ್ಟಿರುವ ಮನ್ನದಲ್ಲಿ ಸ್ವಲ್ಪವನ್ನು ಕೊಡುವೆನು, ಮತ್ತು ನಾನು ಅವನಿಗೆ ಒಂದು ಬಿಳೀ ಉರುಟು ಕಲ್ಲನ್ನೂ, ಅದನ್ನು ಪಡೆಯುವವನೇ ಹೊರತು ಇನ್ನು ಯಾವನೂ ತಿಳಿಯದ ಒಂದು ಹೊಸ ಹೆಸರು ಬರೆಯಲ್ಪಟ್ಟಿರುವ ಉರುಟು ಕಲ್ಲನ್ನು ಕೊಡುವೆನು.” (ಪ್ರಕಟನೆ 2:17, NW)  ಹೀಗೆ, ಸ್ಮುರ್ನದಲ್ಲಿದ್ದ ಕ್ರೈಸ್ತರಂತೆ, ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೂ ‘ಜಯಹೊಂದುವಂತೆ’ ಪ್ರೋತ್ಸಾಹನೆಯನ್ನು ಕೊಡಲಾಗುತ್ತದೆ. ಅವರು ಯಶಸ್ವಿಗೊಳ್ಳಬೇಕಾದರೆ, ಎಲ್ಲಿ ಸೈತಾನನ ಸಿಂಹಾಸನವಿದೆಯೋ ಆ ಪೆರ್ಗಮಮ್‌ನಲ್ಲಿರುವವರು ವಿಗ್ರಹಾರಾಧನೆಯನ್ನು ತೊರೆಯಬೇಕಿತ್ತು. ಅವರು ಅನೈತಿಕತೆ, ಪಂಥಾಭಿಮಾನ, ಮತ್ತು ಬಾಲಾಕ, ಬಿಳಾಮ, ಮತ್ತು ನಿಕೊಲೇಅಸನ ಪಂಥದೊಂದಿಗೆ ಸೇರಿದ್ದ ಧರ್ಮಭ್ರಷ್ಟತೆಯ ಮೇಲೆ ಜಯ ಗಳಿಸಲೇಬೇಕಾಗಿದೆ. ಹಾಗೆ ಮಾಡುವುದರಿಂದ, ಈ “ಬಚ್ಚಿಟ್ಟಿರುವ ಮನ್ನದಲ್ಲಿ” ಸ್ವಲ್ಪವನ್ನು ಆ ಅಭಿಷಿಕ್ತ ಕ್ರೈಸ್ತರು ತಿನ್ನುವಂತೆ ಆಮಂತ್ರಿಸಲ್ಪಡಲಿರುವರು. ಇದರ ಅರ್ಥವೇನು?

18, 19. (ಎ) ಇಸ್ರಾಯೇಲ್ಯರಿಗೆ ಯೆಹೋವನು ಒದಗಿಸಿದ ಮನ್ನವು ಏನಾಗಿತ್ತು? (ಬಿ) ಯಾವ ಮನ್ನವು ಬಚ್ಚಿಡಲ್ಪಟ್ಟಿತ್ತು? (ಸಿ) ಬಚ್ಚಿಟ್ಟಿರುವ ಮನ್ನವನ್ನು ತಿನ್ನುವುದರಿಂದ ಏನು ಸೂಚಿಸಲ್ಪಡುತ್ತದೆ?

18 ಮೋಶೆಯ ದಿನಗಳಲ್ಲಿ, ಅವರ ಅರಣ್ಯ ಸಂಚಾರದ ಸಮಯದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಪೋಷಿಸಲು ಮನ್ನವನ್ನು ಒದಗಿಸಿದ್ದನು. ಆ ಮನ್ನವು ಬಚ್ಚಿಡಲ್ಪಟ್ಟಿರಲಿಲ್ಲ, ಪ್ರತಿದಿನ ಬೆಳಿಗ್ಗೆ—ಸಬ್ಬತ್‌ ದಿನವೊಂದನ್ನು ಬಿಟ್ಟು—ಅದು ಅದ್ಭುತವಾಗಿ, ಭೂಮಿಯನ್ನು ಆವರಿಸುವ ಘನೀಭವಿಸಿದ ಮಂಜಿನ ಪೊರೆಯಂತೆ ಕಾಣಿಸಿಕೊಂಡಿತು. ಇಸ್ರಾಯೇಲ್ಯರು ಜೀವಂತವಾಗಿ ಉಳಿಯುವಂತೆ ಇದೊಂದು ದೈವಿಕ ಒದಗಿಸುವಿಕೆಯಾಗಿತ್ತು. ಜ್ಞಾಪಕಾರ್ಥವಾಗಿ ಈ “ರೊಟ್ಟಿಯ” ಕೆಲವನ್ನು ಒಡಂಬಡಿಕೆಯ ಪವಿತ್ರ ಮಂಜೂಷದ ಒಳಗೆ ಚಿನ್ನದ ಪಾತ್ರೆಯಲ್ಲಿ “[ಇಸ್ರಾಯೇಲ್ಯರ] ಸಂತತಿಯವರು” ನೋಡಲಿಕ್ಕಾಗಿ ಇಡುವಂತೆ ಮೋಶೆಗೆ ಯೆಹೋವನು ಆಜ್ಞಾಪಿಸಿದನು.—ವಿಮೋಚನಕಾಂಡ 16:14, 15, 23, 26, 33; ಇಬ್ರಿಯ 9:3, 4.

19 ಎಂತಹ ತಕ್ಕದ್ದಾದ ಒಂದು ಚಿಹ್ನೆ! ಈ ಮನ್ನವನ್ನು ದೇವದರ್ಶನದ ಗುಡಾರದ ಮಹಾ ಪವಿತ್ರ ಸ್ಥಾನದಲ್ಲಿ ಬಚ್ಚಿಡಲಾಗಿತ್ತು, ಇಲ್ಲಿ ಯೆಹೋವನ ಸಾನ್ನಿಧ್ಯವನ್ನೇ ಸೂಚಿಸುವ ಅದ್ಭುತ ಬೆಳಕು ಮಂಜೂಷದ ಸುತ್ತಲೂ ಪ್ರಕಾಶಿಸುತ್ತಿತ್ತು. (ವಿಮೋಚನಕಾಂಡ 26:34) ಬಚ್ಚಿಡಲ್ಪಟ್ಟ ಮನ್ನವನ್ನು ತಿನ್ನಲಿಕ್ಕಾಗಿ ಆ ಪವಿತ್ರ ಸ್ಥಾನ ಪ್ರವೇಶಿಸಲು ಯಾರಿಗೂ ಅನುಮತಿಯಿರಲಿಲ್ಲ. ಆದಾಗ್ಯೂ, ಜಯಹೊಂದುವ ಅವನ ಅಭಿಷಿಕ್ತ ಹಿಂಬಾಲಕರು “ಬಚ್ಚಿಟ್ಟಿರುವ ಮನ್ನ” ವನ್ನು ತಿನ್ನುವರು ಎಂದು ಯೇಸುವು ಹೇಳುತ್ತಾನೆ. ಅವರಿಗಿಂತ ಮೊದಲು ಯೇಸುವು ಮಾಡಿದಂತೆ, ಅವರು “ನಿಜವಾದ ದೇವಾಲಯಕ್ಕೆ ಅನುರೂಪಮಾತ್ರವಾದದ್ದಾಗಿಯೂ ಕೈಯಿಂದ ಕಟ್ಟಿದ್ದಾಗಿಯೂ ಇರುವ ಆಲಯದಲ್ಲಿ ಪ್ರವೇಶಿಸದೆ, . . . ಪರಲೋಕದಲ್ಲಿಯೇ” ಅವರು ಪ್ರವೇಶವನ್ನು ಪಡೆಯುವರು. (ಇಬ್ರಿಯ 9:12, 24) ತಮ್ಮ ಪುನರುತ್ಥಾನದಲ್ಲಿ ಅವರು ಅವಿನಾಶಿಯಾದ “ಬಚ್ಚಿಟ್ಟಿರುವ ಮನ್ನ” ದಿಂದ ಸೂಚಿತವಾಗಿದ್ದು ಯೆಹೋವ ದೇವರ ಅದ್ಭುತಕರ ಒದಗಿಸುವಿಕೆಯಾದ ನಿರ್ಲಯತ್ವ ಮತ್ತು ಅಮರತ್ವವನ್ನು ಧರಿಸುವರು. ವಿಜಯಿಗಳಾಗಿರುವವರ ಈ ಚಿಕ್ಕ ಗುಂಪು ಎಷ್ಟೊಂದು ಸುಯೋಗವನ್ನು ಪಡೆದಿರುತ್ತದೆ!—1 ಕೊರಿಂಥ 15:53-57.

20, 21. (ಎ) ಅಭಿಷಿಕ್ತ ಕ್ರೈಸ್ತರಿಗೆ ಬಿಳೀ ಉರುಟು ಕಲ್ಲನ್ನು ಕೊಡುವುದರಿಂದ ಏನು ಸೂಚಿಸಲ್ಪಡುತ್ತದೆ? (ಬಿ) ಅಲ್ಲಿ ಕೇವಲ 1,44,000 ಬಿಳೀ ಉರುಟು ಕಲ್ಲುಗಳಿರುವುದರಿಂದ, ಮಹಾ ಸಮೂಹದವರು ಯಾವ ನಿರೀಕ್ಷೆಯನ್ನು ಆದರಿಸುತ್ತಾರೆ?

20 ಇವರು “ಒಂದು ಬಿಳೀ ಉರುಟು ಕಲ್ಲನ್ನು” ಸಹ ಪಡೆಯುತ್ತಾರೆ. ರೋಮನ್‌ ನ್ಯಾಯಾಲಯಗಳಲ್ಲಿ, ತೀರ್ಪುಗಳನ್ನು ನೀಡುವಾಗ ಉರುಟು ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. * ಒಂದು ಬಿಳೀ ಉರುಟು ಕಲ್ಲು ನಿರಪರಾಧಿಯೆಂದು ಬಿಡುಗಡೆಯ ಅರ್ಥದಲ್ಲಿರುವಾಗ, ಒಂದು ಕಪ್ಪು ಉರುಟು ಕಲ್ಲು ಅಂದರೆ ನ್ಯಾಯದಂಡನೆ, ಅನೇಕ ಬಾರಿ ಮರಣವೆಂದಾಗಿತ್ತು. ಪೆರ್ಗಮಮ್‌ನಲ್ಲಿರುವ ಕ್ರೈಸ್ತರಿಗೆ ಯೇಸುವು “ಒಂದು ಬಿಳೀ ಉರುಟು ಕಲ್ಲು” ನೀಡುವುದು ಅವರು ನಿರ್ದೋಷಿಗಳು, ಪವಿತ್ರರು ಮತ್ತು ಶುದ್ಧರು ಎಂದು ಅವನು ತೀರ್ಮಾನಿಸುವುದನ್ನು ಸೂಚಿಸುತ್ತಿತ್ತು. ಆದರೆ ಯೇಸುವಿನ ಮಾತುಗಳಿಗೆ ಇನ್ನಷ್ಟು ಅಧಿಕ ಅರ್ಥ ಇದ್ದಿರಲೂಬಹುದು. ರೋಮನ್‌ ಸಮಯಗಳಲ್ಲಿ, ಉರುಟು ಕಲ್ಲುಗಳನ್ನು, ಪ್ರಾಮುಖ್ಯ ಘಟನೆಗಳಲ್ಲಿ ಪ್ರವೇಶ ದೊರಕಿಸಿಕೊಳ್ಳಲು ಪ್ರವೇಶಪತ್ರಗಳೋಪಾದಿ ಕೂಡ ಬಳಸಲಾಗುತ್ತಿತ್ತು. ಆದುದರಿಂದ ಬಿಳೀ ಉರುಟು ಕಲ್ಲು, ವಿಜಯಿಯಾಗಿದ್ದ ಅಭಿಷಿಕ್ತ ಕ್ರೈಸ್ತನಿಗೆ ಯಾವುದೋ ಒಂದು ವಿಶೇಷತೆಯನ್ನು—ಕುರಿಮರಿಯ ವಿವಾಹದಲ್ಲಿ ಪರಲೋಕದಲ್ಲಿ ಒಂದು ಗೌರವಾನಿತ್ವ ಸ್ಥಾನಕ್ಕೆ ಅವನ ಪ್ರವೇಶಾವಕಾಶವನ್ನು ಸೂಚಿಸಬಹುದು. ಕೇವಲ 1,44,000 ಇಂತಹ ಉರುಟು ಕಲ್ಲುಗಳು ಒದಗಿಸಲ್ಪಡುತ್ತವೆ.—ಪ್ರಕಟನೆ 14:1; 19:7-9.

21 ಜತೆ ಆರಾಧಕರ ಮಹಾ ಸಮೂಹದ ಒಬ್ಬರಾಗಿ ನೀವಿರುವುದಾದರೆ, ನಿಮ್ಮನ್ನು ಅಲಕ್ಷಿಸಲಾಗಿದೆ ಎಂದು ಇದರ ಅರ್ಥವೂ? ಎಂದಿಗೂ ಅಲ್ಲ! ಪರಲೋಕಕ್ಕೆ ಪ್ರವೇಶಿಸುವ ಬಿಳೀ ಉರುಟು ಕಲ್ಲನ್ನು ಪಡೆಯದೆ ಇರುವುದಾದರೂ, ನೀವು ತಾಳಿಕೊಳ್ಳುವುದಾದರೆ, ಭೂಮಿಯ ಮೇಲೆ ಪ್ರಮೋದವನವನ್ನು ಪುನಃ ಸ್ಥಾಪಿಸುವ ಆನಂದಕರ ಕಾರ್ಯದಲ್ಲಿ ಪಾಲಿಗರಾಗಲಿಕ್ಕಾಗಿ, ಮಹಾ ಸಂಕಟದಿಂದ ನೀವು ಪಾರಾಗಬಹುದು. ನಿಮ್ಮೊಂದಿಗೆ ಇದರಲ್ಲಿ ಪಾಲಿಗರಾಗುವವರಲ್ಲಿ ಕ್ರೈಸ್ತ-ಪೂರ್ವ ಸಮಯದ ಪುನರುತಿತ್ಥ ನಂಬಿಗಸ್ತರು ಮತ್ತು ಇತ್ತೀಚೆಗೆ ಮೃತರಾದ ಬೇರೆ ಕುರಿಗಳವರು ಇರಬಹುದು. ಕ್ರಮೇಣ, ಪ್ರಮೋದವನ ಭೂಮಿಯ ಮೇಲೆ ವಿಮೋಚಿಸಲ್ಪಟ್ಟ ಸತ್ತವರು ಜೀವಕ್ಕಾಗಿ ಪುನರುತ್ಥಾನದ ಅನುಗ್ರಹ ಪಡೆಯುವರು.—ಕೀರ್ತನೆ 45:16; ಯೋಹಾನ 10:16; ಪ್ರಕಟನೆ 7:9, 14.

22, 23. ಅಭಿಷಿಕ್ತ ಕ್ರೈಸ್ತರಿಗೆ ಕೊಡಲ್ಪಡುವ ಉರುಟು ಕಲ್ಲಿನ ಮೇಲೆ ಬರೆದಿರುವ ಹೆಸರಿನ ಸೂಚಿತಾರ್ಥವೇನು, ಮತ್ತು ಇದು ಯಾವ ಉತ್ತೇಜನವನ್ನು ಒದಗಿಸತಕ್ಕದ್ದು?

22 ಉರುಟು ಕಲ್ಲಿನ ಮೇಲೆ ಬರೆದ ಹೊಸ ಹೆಸರು ಯಾವುದು? ಒಂದು ಹೆಸರು ಅಂದರೆ ವ್ಯಕ್ತಿಯೊಬ್ಬನನ್ನು ಗುರುತಿಸುವುದು ಮತ್ತು ಒಬ್ಬನನ್ನು ಇನ್ನೊಬ್ಬನಿಂದ ಪ್ರತ್ಯೇಕಿಸುವುದು ಎಂದರ್ಥವಾಗಿದೆ. ಈ ಅಭಿಷಿಕ್ತ ಕ್ರೈಸ್ತರು ವಿಜಯಿಗಳೋಪಾದಿ ಅವರ ಐಹಿಕ ಜೀವನಮಾರ್ಗವನ್ನು ಮುಕ್ತಾಯಗೊಳಿಸಿದ ನಂತರ ಈ ಉರುಟು ಕಲ್ಲನ್ನು ಪಡೆಯುತ್ತಾರೆ. ಸ್ಪಷ್ಟವಾಗಿ ಹಾಗಾದರೆ, ಉರುಟುಕಲ್ಲಿನ ಮೇಲೆ ಅವರ ಹೆಸರು ಇರುವುದು ಪರಲೋಕದಲ್ಲಿ ಯೇಸುವಿನೊಂದಿಗೆ ಐಕ್ಯರಾಗುವ ಅವರ ಸುಯೋಗದೊಂದಿಗೆ ಜೋಡಿಸಲ್ಪಟ್ಟಿದೆ—ಪರಲೋಕ ರಾಜ್ಯವನ್ನು ಬಾಧ್ಯರಾಗಿ ಪಡೆಯುವವರಿಂದ ಮಾತ್ರವೇ ಪೂರ್ಣವಾಗಿ ಗಣ್ಯಮಾಡಲ್ಪಡುವ ಮತ್ತು ಆನಂದಿಸಲ್ಪಡುವ ರಾಜನ ಸೇವೆಯ ಒಂದು ಅತ್ಯಂತ ಆಪ್ತ ಹುದ್ದೆಯಾಗಿರುತ್ತದೆ. ಆದಕಾರಣ, ಅದು “ಅದನ್ನು ಪಡೆದವನೇ ಹೊರತು ಬೇರೆ ಯಾರೂ ತಿಳಿಯದಂತಹ” ಒಂದು ಹೆಸರು, ಯಾ ಹುದ್ದೆಯ ನೇಮಕಾತಿಯಾಗಿರುತ್ತದೆ.—ಪ್ರಕಟನೆ 3:12, NW, ಹೋಲಿಸಿರಿ.

23 ಯೋಹಾನ ವರ್ಗದವರಿಗೆ “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕೇಳಲು” ಮತ್ತು ಅದನ್ನು ಅನ್ವಯಿಸಲು ಎಂತಹ ಒಂದು ಪ್ರೇರಣೆ ಇದಾಗಿರುತ್ತದೆ! ಮತ್ತು ಇಲ್ಲಿ ಭೂಮಿಯ ಮೇಲೆ ಅವರ ಒಡನಾಟದಲ್ಲಿ ಅನುಭವಿಸಿ ಯೆಹೋವನ ರಾಜ್ಯವನ್ನು ತಿಳಿಯಪಡಿಸುವುದರಲ್ಲಿ ಅವರೊಂದಿಗೆ ಭಾಗಿಗಳಾಗುವುದರಲ್ಲಿ ನಂಬಿಗಸ್ತಿಕೆಯಿಂದ ಸೇವೆ ಮಾಡಲು ಇದು ಅವರ ಒಡನಾಡಿಗಳಾದ ಮಹಾ ಸಮೂಹವನ್ನು ಹೇಗೆ ಪ್ರೋತ್ಸಾಹಿಸುತ್ತದೆ!

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 20 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌ಅ. ಕೃತ್ಯಗಳು 26:10 ಮತ್ತು ಪಾದಟಿಪ್ಪಣಿಯನ್ನು ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 54 ರಲ್ಲಿರುವ ಚಿತ್ರಗಳು]

ಅತಿರೇಕದ ವಿಧರ್ಮಿ ಆರಾಧನೆಯ ಈ ರುಜುವಾತುಗಳು ಬರ್ಲಿನ್‌ನ ಪೆರ್ಗಮೊನ್‌ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನದಲ್ಲಿಡಲ್ಪಟ್ಟಿವೆ

[ಪುಟ 56 ರಲ್ಲಿರುವ ಚಿತ್ರಗಳು]

ಒಡಂಬಡಿಕೆಯ ಮಂಜೂಷದಲ್ಲಿ ಸ್ವಲ್ಪ ಮನ್ನವು ಬಚ್ಚಿಡಲ್ಪಟ್ಟಿತ್ತು. ಜಯಹೊಂದುವ ಅಭಿಷಿಕ್ತರಿಗೆ ಬಚ್ಚಿಟ್ಟಿರುವ ಸಾಂಕೇತಿಕ ಮನ್ನವನ್ನು ಕೊಡುವುದು ಅವರು ಅಮರತ್ವವನ್ನು ಪಡೆಯುವರು ಎಂಬ ಅರ್ಥದಲ್ಲಿದೆ

ಬಿಳೀ ಉರುಟು ಕಲ್ಲು ಕುರಿಮರಿಯ ವಿವಾಹದಲ್ಲಿ ಪ್ರವೇಶಪಡೆಯುವವರಿಗಾಗಿ ಇದೆ