ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹತಿಸಲ್ಪಟ್ಟ ಆತ್ಮಗಳು’ ಬಹುಮಾನಿಸಲ್ಪಡುತ್ತವೆ

‘ಹತಿಸಲ್ಪಟ್ಟ ಆತ್ಮಗಳು’ ಬಹುಮಾನಿಸಲ್ಪಡುತ್ತವೆ

ಅಧ್ಯಾಯ 17

‘ಹತಿಸಲ್ಪಟ್ಟ ಆತ್ಮಗಳು’ ಬಹುಮಾನಿಸಲ್ಪಡುತ್ತವೆ

1. ನಾವು ಯಾವ ಸಮಯಾವಧಿಯಲ್ಲಿ ಜೀವಿಸುತ್ತಿದ್ದೇವೆ, ಮತ್ತು ಇದಕ್ಕೆ ಯಾವ ಪುರಾವೆಗಳು ಇವೆ?

ದೇವರ ರಾಜ್ಯವು ಆಳುತ್ತದೆ! ಬಿಳಿ ಕುದುರೆಯ ರಾಹುತನು ತನ್ನ ವಿಜಯವನ್ನು ಪೂರೈಸುವ ಹಂತಕ್ಕೆ ಬಂದಿರುತ್ತಾನೆ! ಕೆಂಪು ಕುದುರೆ, ಕಪ್ಪು ಕುದುರೆ ಮತ್ತು ನಸುಬಿಳಿಚಾದ ಕುದುರೆಗಳು ಭೂಮಿಯ ಸುತ್ತಲೂ ದೌಡಾಯಿಸುತ್ತಾ ಇವೆ! ತನ್ನ ರಾಜವೈಭವದ ಸಾನ್ನಿಧ್ಯದ ಕುರಿತು ಯೇಸು ತಾನೇ ನುಡಿದ ಪ್ರವಾದನೆಗಳು ನೆರವೇರುತ್ತಿವೆಂಬುದರಲ್ಲಿ ವಿವಾದವಿಲ್ಲ. (ಮತ್ತಾಯ, ಅಧ್ಯಾಯಗಳು 24, 25; ಮಾರ್ಕ, ಅಧ್ಯಾಯ 13; ಲೂಕ, ಅಧ್ಯಾಯ 21) ಹೌದು, ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ನಾವು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1-5) ಹೀಗಿರುವುದರಿಂದ, ಕುರಿಮರಿಯಾದ ಯೇಸು ಕ್ರಿಸ್ತನು, ಆ ಸುರುಳಿಯ ಐದನೆಯ ಮುದ್ರೆಯನ್ನು ಒಡೆಯುವಾಗ, ನಾವೆಲ್ಲರೂ ನಿಕಟವಾದ ಗಮನವನ್ನು ಕೊಡುವವರಾಗಿರೋಣ. ನಾವೀಗ ಯಾವ ಹೆಚ್ಚಿನ ಪ್ರಕಟನೆಯಲ್ಲಿ ಪಾಲು ತೆಗೆದುಕೊಳ್ಳಲಿದ್ದೇವೆ?

2. (ಎ) ಐದನೆಯ ಮುದ್ರೆಯನ್ನು ಬಿಚ್ಚಿದಾಗ ಯೋಹಾನನು ಏನನ್ನು ನೋಡಿದನು? (ಬಿ) ಸ್ವರ್ಗದಲ್ಲಿ ಸಾಂಕೇತಿಕ ಯಜ್ಞವೇದಿಯೊಂದರ ಕುರಿತು ಓದುವುದರಿಂದ ನಾವು ಯಾಕೆ ಆಶ್ಚರ್ಯಗೊಳ್ಳಬಾರದು?

2 ಯೋಹಾನನು ಈಗ ಒಂದು ಮನಕರಗಿಸುವ ದೃಶ್ಯವನ್ನು ವರ್ಣಿಸುತ್ತಾನೆ: “ಮತ್ತು ಐದನೆಯ ಮುದ್ರೆಯನ್ನು ಬಿಚ್ಚಿದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ ಮತ್ತು ಅವರಿಗಿದ್ದ ಸಾಕ್ಷಿ ಕಾರ್ಯದ ನಿಮಿತ್ತವಾಗಿಯೂ ಹತಿಸಲ್ಪಟ್ಟವರ ಆತ್ಮಗಳು ಯಜ್ಞವೇದಿಯ ಕೆಳಗೆ ಇರುವುದನ್ನು ನಾನು ಕಂಡೆನು.” (ಪ್ರಕಟನೆ 6:9, NW) ಅದೇನು? ಪರಲೋಕದಲ್ಲಿ ಒಂದು ಯಜ್ಞವೇದಿಯೇ? ಹೌದು! ಯೋಹಾನನು ಒಂದು ಯಜ್ಞವೇದಿಯನ್ನು ಸೂಚಿಸುವುದು ಇದೇ ಮೊದಲು. ಹೇಗಾದರೂ, ಈಗಾಗಲೇ ಯೆಹೋವನು ಸಿಂಹಾಸನದ ಮೇಲೆ ಆಸೀನನಾಗಿರುವುದನ್ನು, ಸುತ್ತಲಿರುವ ಕೆರೂಬಿಗಳನ್ನು, ಗಾಜಿನ ಸಮುದ್ರವನ್ನು, ದೀಪಸ್ತಂಭಗಳನ್ನು ಮತ್ತು ಧೂಪ ಸುಡುತ್ತಿದ್ದ 24 ಹಿರಿಯರನ್ನು ಅವನು ವಿವರಿಸಿರುತ್ತಾನೆ—ಇವೆಲ್ಲವೂ ಇಸ್ರಾಯೇಲಿನಲ್ಲಿದ್ದ ಯೆಹೋವನ ಪವಿತ್ರಾಲಯದ ಒಂದು ಐಹಿಕ ದೇವಗುಡಾರದ ವೈಶಿಷ್ಟ್ಯಗಳನ್ನು ಹೋಲುತ್ತವೆ. (ವಿಮೋಚನಕಾಂಡ 25:17, 18; 40:24-27, 30-32; 1 ಪೂರ್ವಕಾಲವೃತ್ತಾಂತ 23:4) ಹಾಗಾದರೆ, ಸ್ವರ್ಗದಲ್ಲಿ ಕೂಡ ಒಂದು ಸಾಂಕೇತಿಕ ಯಜ್ಞವೇದಿಯನ್ನು ಕಂಡುಕೊಳ್ಳುವುದು ನಮ್ಮನ್ನು ಆಶ್ಚರ್ಯಪಡಿಸಬೇಕೋ?—ವಿಮೋಚನಕಾಂಡ 40:29.

3. (ಎ) ಪ್ರಾಚೀನ ಯೆಹೂದ್ಯ ದೇವದರ್ಶನದ ಗುಡಾರದಲ್ಲಿ, “ಯಜ್ಞವೇದಿಯ ಬುಡದಲ್ಲಿ” ಆತ್ಮಗಳು ಹೇಗೆ ಸುರಿಸಲ್ಪಡುತ್ತಿದ್ದವು? (ಬಿ) ಸ್ವರ್ಗದಲ್ಲಿ ಒಂದು ಸಾಂಕೇತಿಕ ಯಜ್ಞವೇದಿಯ ಕೆಳಗೆ ಹತಿಸಲ್ಪಟ್ಟ ಸಾಕ್ಷಿಗಳ ಆತ್ಮಗಳನ್ನು ಯೋಹಾನನು ಯಾಕೆ ನೋಡಿದನು?

3 ಈ ಯಜ್ಞವೇದಿಯ ಕೆಳಗೆ, “ದೇವರ ವಾಕ್ಯದ ನಿಮಿತ್ತವಾಗಿಯೂ ಮತ್ತು ಅವರಿಗಿದ್ದ ಸಾಕ್ಷಿ ಕಾರ್ಯದ ನಿಮಿತ್ತವಾಗಿಯೂ ಹತಿಸಲ್ಪಟ್ಟವರ ಆತ್ಮಗಳು” ಇದ್ದವು. ಇದರ ಅರ್ಥವೇನು? ವಿಧರ್ಮಿ ಗ್ರೀಕರಿಂದ ನಂಬಲ್ಪಟ್ಟಂತೆ, ಇವು ಅಶರೀರ ಮಾಡಲಾದ ಆತ್ಮಗಳಾಗಿದ್ದಿರಸಾಧ್ಯವಿಲ್ಲ. (ಆದಿಕಾಂಡ 2:7; ಯೆಹೆಜ್ಕೇಲ 18:4) ಅದರ ಬದಲು, ಆತ್ಮ ಯಾ ಜೀವವು ರಕ್ತದಿಂದ ಸೂಚಿಸಲ್ಪಡುತ್ತಿದೆಯೆಂದು, ಮತ್ತು ಪುರಾತನ ಯೆಹೂದ್ಯ ದೇವದರ್ಶನದ ಗುಡಾರದಲ್ಲಿ ಯಾಜಕರು ಒಂದು ಯಜ್ಞಾರ್ಪಿತ ಪ್ರಾಣಿಯನ್ನು ಹತಿಸಿದಾಗ ಅದರ ರಕ್ತವನ್ನು “ಯಜ್ಞವೇದಿಯ ಸುತ್ತಲೂ” ಎರಚುತ್ತಿದರ್ದೆಂದು ಯೋಹಾನನಿಗೆ ಗೊತ್ತಿದೆ. ಅಥವಾ ಅದನ್ನು “ಸರ್ವಾಂಗ ಹೋಮ ಮಾಡುವ ಯಜ್ಞವೇದಿಯ ಬುಡದಲ್ಲಿ ಸುರಿದು ಬಿಡುತ್ತಿದ್ದರು.” (ಯಾಜಕಕಾಂಡ 3:2, 8, 13; 4:7; 17:6, 11, 12) ಆದುದರಿಂದ ಪ್ರಾಣಿಯ ಆತ್ಮವು ನಿಕಟವಾಗಿ ಯಜ್ಞವೇದಿಯೊಂದಿಗೆ ಜೋಡಿಸಲ್ಪಟ್ಟಿತ್ತು. ಆದರೆ ದೇವರ ಈ ನಿರ್ದಿಷ್ಟ ಸೇವಕರ ಆತ್ಮಗಳು ಯಾ ರಕ್ತವು ಸ್ವರ್ಗದಲ್ಲಿ ಒಂದು ಸಾಂಕೇತಿಕ ಯಜ್ಞವೇದಿಯ ಕೆಳಗೆ ಏಕೆ ಕಂಡುಕೊಳ್ಳಲ್ಪಡುತ್ತದೆ? ಯಾಕಂದರೆ ಅವರ ಮರಣಗಳನ್ನು ಒಂದು ಯಜ್ಞದೋಪಾದಿ ವೀಕ್ಷಿಸಲಾಗುತ್ತದೆ.

4. ಆತ್ಮಾಭಿಷಿಕ್ತ ಕ್ರೈಸ್ತರ ಮರಣವು ಯಜ್ಞಾರ್ಪಿತವಾಗಿರುವುದು ಯಾವ ವಿಧದಲ್ಲಿ?

4 ನಿಜ, ದೇವರ ಆತ್ಮ ಪುತ್ರರಾಗಿ ಹುಟ್ಟಿದವರೆಲ್ಲರೂ ಯಜ್ಞಾರ್ಪಿತ ಮರಣವನ್ನು ಹೊಂದುತ್ತಾರೆ. ಯೆಹೋವನ ಸ್ವರ್ಗೀಯ ರಾಜ್ಯದಲ್ಲಿ ಅವರು ತಮ್ಮ ಪಾತ್ರವನ್ನು ವಹಿಸಲಿರುವದರಿಂದ, ಅವರು ತಮ್ಮನ್ನು ತಾವೇ ನಿರಾಕರಿಸಬೇಕೆಂದು ಮತ್ತು ಭೂಮಿಯ ಮೇಲೆ ಸದಾಕಾಲ ಜೀವಿಸುವ ಯಾವುದೇ ನಿರೀಕ್ಷೆಯನ್ನು ತ್ಯಾಗಮಾಡಬೇಕೆಂದು ದೇವರು ಬಯಸುತ್ತಾನೆ. ಈ ವಿಧದಲ್ಲಿ ಯೆಹೋವನ ಸಾರ್ವಭೌಮತೆಯ ಪರವಾಗಿ ಒಂದು ಯಜ್ಞಾರ್ಪಿತ ಮರಣಕ್ಕೆ ಅವರು ಅಧೀನರಾಗುತ್ತಾರೆ. (ಫಿಲಿಪ್ಪಿ 3:8-11; 2:17ನ್ನು ಹೋಲಿಸಿರಿ.) ಯಜ್ಞವೇದಿಯ ಕೆಳಗೆ ಯೋಹಾನನು ನೋಡಿದವರೆಲ್ಲರ ಕುರಿತಾಗಿ ಒಂದು ನೈಜ ಅರ್ಥದಲ್ಲಿ ಅದು ಸತ್ಯವಾಗಿರುತ್ತದೆ. ಇವರು ಯೆಹೋವನ ವಾಕ್ಯ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯುವುದರಲ್ಲಿ ತಮ್ಮ ಹುರುಪಿನ ಶುಶ್ರೂಷೆಗಾಗಿ ತಮ್ಮ ದಿನಗಳಲ್ಲಿ ಹುತಾತ್ಮರಾಗಿ ಕೊಲ್ಲಲ್ಪಟ್ಟ ಅಭಿಷಿಕ್ತರೇ ಆಗಿರುತ್ತಾರೆ. ಅವರ ‘ಆತ್ಮಗಳು ದೇವರ ವಾಕ್ಯದ ನಿಮಿತ್ತವಾಗಿಯೂ ಮತ್ತು ಅವರು ಹೇಳುತ್ತಿದ್ದ ಸಾಕ್ಷಿ ಕಾರ್ಯದ (ಮಾರ್‌-ಟಿ-ರಿ’ಯನ್‌) ನಿಮಿತ್ತವಾಗಿಯೂ ಹತಿಸಲ್ಪಟ್ಟವು’.

5. ಸತ್ತಿರುವುದಾದರೂ, ಪ್ರತೀಕಾರಕ್ಕಾಗಿ ನಂಬಿಗಸ್ತರ ಆತ್ಮಗಳು ಗಟ್ಟಿಯಾಗಿ ಕೂಗುವುದು ಹೇಗೆ?

5 ದೃಶ್ಯವು ತೆರೆಯುತ್ತದೆ: “ಮತ್ತು ಅವರು ಮಹಾ ಶಬ್ದದಿಂದ ಕೂಗಿ ಹೀಗಂದರು: ‘ಪವಿತ್ರನೂ, ಸತ್ಯವಂತನೂ ಆದ ಸಾರ್ವಭೌಮ ಕರ್ತನೇ, ನೀನು ಎಂದಿನ ತನಕ ಭೂನಿವಾಸಿಗಳ ಮೇಲೆ ನಮ್ಮ ರಕ್ತಕ್ಕೆ ನ್ಯಾಯತೀರಿಸದೆ ಮತ್ತು ಸೇಡು ತೀರಿಸದೆ ಇರುವಿ?’” (ಪ್ರಕಟನೆ 6:10, NW) ಮೃತರು ಪ್ರಜ್ಞಾಹೀನರಾಗಿ ಇರುತ್ತಾರೆಂದು ಬೈಬಲು ತೋರಿಸಿರುವುದರಿಂದ ಅವರ ಆತ್ಮಗಳು ಯಾ ರಕ್ತವು ಪ್ರತೀಕಾರಕ್ಕೆ ಹೇಗೆ ಕೂಗಸಾಧ್ಯವಿದೆ? (ಪ್ರಸಂಗಿ 9:5) ಒಳ್ಳೆಯದು, ಕಾಯಿನನು ಹೇಬೆಲನನ್ನು ಕೊಂದ ನಂತರ, ನೀತಿವಂತನಾದ ಅವನ ರಕ್ತವು ಕೂಗಲಿಲ್ಲವೋ? ಯೆಹೋವನು ಅನಂತರ ಕಾಯಿನನಿಗೆ ಅಂದದ್ದು: “ನೀನು ಏನು ಮಾಡಿದಿ? ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತದೆ, ಕೇಳು.” (ಆದಿಕಾಂಡ 4:10, 11; ಇಬ್ರಿಯ 12:24) ಹೇಬೆಲನ ರಕ್ತವು ಅಕ್ಷರಾರ್ಥವಾಗಿ ಶಬ್ದಗಳನ್ನು ಉಚ್ಚರಿಸುತ್ತದೆಂಬ ಅರ್ಥವನ್ನು ಇದು ಕೊಡುವುದಿಲ್ಲ. ಅದರ ಬದಲು, ಹೇಬೆಲನು ಒಬ್ಬ ನಿರ್ದೋಷಿ ಬಲಿಯಾಗಿ ಕೊಲ್ಲಲ್ಪಟ್ಟನು, ಮತ್ತು ಅವನ ಕೊಲೆಗಾರನು ಶಿಕ್ಷಿಸಲ್ಪಡಬೇಕೆಂದು ನ್ಯಾಯವು ಕೇಳಿಕೊಳ್ಳುತ್ತಿತ್ತು. ತದ್ರೀತಿ ಈ ಕ್ರೈಸ್ತ ಹುತಾತ್ಮರು ನಿರಪರಾಧಿಗಳಾಗಿರುತ್ತಾರೆ ಮತ್ತು ನ್ಯಾಯದ ಪ್ರಕಾರ ಅವರಿಗಾಗಿ ಪ್ರತೀಕಾರ ತೀರಿಸಲ್ಪಡಲೇಬೇಕು. (ಲೂಕ 18:7, 8) ಪ್ರತೀಕಾರಕ್ಕಾಗಿ ಕೂಗು ಗಟ್ಟಿಯಾಗಿದೆ ಯಾಕಂದರೆ ಅನೇಕ ಸಾವಿರಾರು ಮಂದಿ ಈ ರೀತಿಯಲ್ಲಿ ಸತ್ತಿರುತ್ತಾರೆ.—ಯೆರೆಮೀಯ 15:15, 16 ಹೋಲಿಸಿರಿ.

6. ಸಾ. ಶ. ಪೂ. 607 ರಲ್ಲಿ ಯಾವ ನಿರಪರಾಧಿ ರಕ್ತಸುರಿಸುವಿಕೆಗೆ ಪ್ರತಿದಂಡನೆಯನ್ನು ಮಾಡಲಾಯಿತು?

6 ಸಾ. ಶ. ಪೂ. 716 ರಲ್ಲಿ ರಾಜ ಮನಸ್ಸೆಯು ಸಿಂಹಾಸನವನ್ನೇರಿದಾಗ, ಆ ಧರ್ಮಭ್ರಷ್ಟ ಯೆಹೂದದಲ್ಲಿದ್ದ ಪರಿಸ್ಥಿತಿಗೆ ಕೂಡ ಇದನ್ನು ಹೋಲಿಸಬಹುದಾಗಿದೆ. ಅವನು ಅನೇಕ ನಿರ್ದೋಷಿಗಳ ರಕ್ತವನ್ನು ಸುರಿಸಿದನು. ಪ್ರಾಯಶಃ ಯೆಶಾಯ ಪ್ರವಾದಿಯನ್ನು “ಗರಗಸದಿಂದ ಕೊಯ್ಯುವ” ಮೂಲಕ ಸಾಯಿಸಿದನು. (ಇಬ್ರಿಯ 11:37; 2 ಅರಸುಗಳು 21:16) ಮನಸ್ಸೆಯು ಅನಂತರ ಪಶ್ಚಾತ್ತಾಪಪಟ್ಟು ಬದಲಾದರೂ ಕೂಡ ಆ ರಕ್ತಾಪರಾಧವು ಉಳಿಯಿತು. ಸಾ. ಶ. ಪೂ. 607 ರಲ್ಲಿ ಬಾಬೆಲಿನವರು ಯೆಹೂದ ರಾಜ್ಯವನ್ನು ನಿರ್ಜನಗೊಳಿಸಿದಾಗ, “ಯೆರೂಸಲೇಮನ್ನು ನಿರಪರಾಧಿ ರಕ್ತದಿಂದ ತುಂಬಿಸಿದ ಮನಸ್ಸೆಯ ದುಷ್ಕೃತ್ಯಗಳನ್ನು ಯೆಹೋವನು ಕ್ಷಮಿಸದೆ ಹೋದನು. ಅವುಗಳಿಗಾಗಿ ಆತನು ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದು ಹಾಕಬೇಕೆಂದಿದದ್ದರಿಂದ ಆತನ ಅಪ್ಪಣೆ ಪ್ರಕಾರ ಈ ಶಿಕ್ಷೆಯು ಅವರಿಗೆ ಆಯಿತು.”—2 ಅರಸುಗಳು 24:3, 4.

7. “ಪವಿತ್ರ ಜನರ ರಕ್ತವನ್ನು” ಸುರಿಸುವುದರಲ್ಲಿ ಪ್ರಮುಖವಾಗಿ ಯಾರು ಅಪರಾಧಿಗಳಾಗಿರುತ್ತಾರೆ?

7 ಬೈಬಲ್‌ ಸಮಯಗಳಲ್ಲಿದ್ದಂತೆ, ಇಂದು ದೇವರ ಸಾಕ್ಷಿಗಳನ್ನು ಕೊಂದ ಅನೇಕ ವ್ಯಕ್ತಿಗಳು ಬಹಳ ಹಿಂದೆ ಸತ್ತುಹೋಗಿರುತ್ತಾರೆ. ಆದರೆ ಅವರ ಧರ್ಮಬಲಿಗೆ ಕಾರಣವೆನಿಸಿದ ಸಂಸ್ಥೆಯು ಇನ್ನೂ ಜೀವಂತವಾಗಿದೆ ಮತ್ತು ರಕ್ತದೋಷಿಯಾಗಿದೆ. ಅದು ಸೈತಾನನ ಭೂ ಸಂಸ್ಥೆಯು, ಅವನ ಐಹಿಕ ಸಂತಾನವಾಗಿದೆ. ಅದರಲ್ಲಿ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲು ಪ್ರಧಾನವಾಗಿದೆ. * “ಪವಿತ್ರ ಜನರ ರಕ್ತವನ್ನು ಮತ್ತು ಯೇಸುವಿನ ಸಾಕ್ಷಿಗಳ ರಕ್ತವನ್ನು ಕುಡಿದವಳೆಂದು” ಅವಳನ್ನು ವರ್ಣಿಸಲಾಗಿದೆ. ಹೌದು, “ಪ್ರವಾದಿಗಳ ಮತ್ತು ಪವಿತ್ರ ಜನರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ಅವಳಲ್ಲಿ ಸಿಕ್ಕಿತು.” (ಪ್ರಕಟನೆ 17:5, 6; 18:24, NW; ಎಫೆಸ 4:11; 1 ಕೊರಿಂಥ 12:28) ರಕ್ತಾಪರಾಧದ ಎಂತಹ ಒಂದು ದೊಡ್ಡ ಹೊರೆ! ಎಷ್ಟರ ತನಕ ಮಹಾ ಬಾಬೆಲು ಇರುತ್ತದೋ, ಅಷ್ಟರ ತನಕ ಅವಳಿಗೆ ಬಲಿಯಾದವರ ರಕ್ತವು ನ್ಯಾಯಕ್ಕಾಗಿ ಕೂಗುವುದು.—ಪ್ರಕಟನೆ 19:1, 2.

8. (ಎ) ಯೋಹಾನನ ಜೀವಮಾನಕಾಲದಲ್ಲಿ ಧರ್ಮಬಲಿಗಳ ಯಾವ ಘಟನೆಗಳು ಸಂಭವಿಸಿದ್ದವು? (ಬಿ) ರೋಮನ್‌ ಚಕ್ರವರ್ತಿಗಳಿಂದ ಯಾವ ಹಿಂಸೆಗಳು ಪ್ರಚೋದಿಸಲ್ಪಟ್ಟವು?

8 ಕ್ರೂರವಾದ ಸರ್ಪ ಮತ್ತು ಆತನ ಭೂಸಂತಾನವು ಅಭಿಷಿಕ್ತ ಕ್ರೈಸ್ತರ ಅಭಿವೃದ್ಧಿ ಹೊಂದುವ ಸಭೆಯ ಮೇಲೆ ಪ್ರಥಮ ಶತಮಾನದಲ್ಲಿ ಯುದ್ಧವನ್ನು ಹೂಡಿದಾಗ, ಯೋಹಾನನು ಸ್ವತಃ ಈ ಧರ್ಮಬಲಿಯನ್ನು ನೋಡಿದನು. ನಮ್ಮ ಕರ್ತನು ಕಂಭಕ್ಕೆ ಜಡಿಯಲ್ಪಟ್ಟದ್ದನ್ನು ಯೋಹಾನನು ನೋಡಿದ್ದನು ಮತ್ತು ಸೆಫ್ತನನ, ಅವನ ಸ್ವಂತ ಸಹೋದರನಾದ ಯಾಕೋಬನ, ಮತ್ತು ಪೇತ್ರನ, ಪೌಲನ ಮತ್ತು ಇತರ ನಿಕಟ ಸಹವಾಸಿಗಳ ಹತ್ಯಗಳಿಂದ ಅವನು ಪಾರಾಗಿದ್ದನು. (ಯೋಹಾನ 19:26, 27; 21:15, 18, 19; ಅ. ಕೃತ್ಯಗಳು 7:59, 60; 8:2; 12:2; 2 ತಿಮೊಥೆಯ 1:1; 4:6, 7) ಸಾ. ಶ. 64 ರಲ್ಲಿ ನಗರದ ಸುಡುವಿಕೆಗೆ ತಾನೇ ದೋಷಿಯೆಂಬ ಸುದ್ದಿಯನ್ನು ಎದುರಿಸಲು, ರೋಮನ್‌ ಚಕ್ರವರ್ತಿ ನೀರೋ, ಕ್ರೈಸ್ತರು ಆ ನಗರವನ್ನು ಸುಟ್ಟಿದ್ದಾರೆಂಬ ಅಪವಾದವನ್ನು ಹೊರಿಸಿ ಅವರನ್ನು ಪಾಪಬಲಿಯನ್ನಾಗಿ ಮಾಡಿದನು. ಇತಿಹಾಸಗಾರನಾದ ಟ್ಯಾಸಿಟಸ್‌ ವರದಿ ಮಾಡುವುದು: “ಅವರು [ಕ್ರೈಸ್ತರು] ಪರಿಹಾಸ್ಯದ ವಿಧಗಳಿಂದ ಸತ್ತರು; ಕೆಲವರಿಗೆ ಕಾಡುಮೃಗದ ಚರ್ಮವನ್ನು ಹೊದಿಸುತ್ತಿದ್ದರು, ತದನಂತರ ನಾಯಿಗಳಿಂದ ಸೀಳಲ್ಪಟ್ಟರು. ಕೆಲವರು [ಯಾತನಾಕಂಭಕ್ಕೆ ಜಡಿಯಲ್ಪಟ್ಟರು], * ಕೆಲವರನ್ನು ರಾತ್ರಿಯಲ್ಲಿ ಬೆಳಕನ್ನು ಹೊತ್ತಿಸಲು ಪಂಜನ್ನಾಗಿ ಬಳಸಿದರು.” ಚಕ್ರವರ್ತಿ ಡೊಮಿಷನ್‌ನ (ಸಾ. ಶ. 81-96) ಕೈಕೆಳಗೆ ಇನ್ನಷ್ಟು ಹಿಂಸೆಯ ಅಲೆಯು ಎಬ್ಬಿಸಲ್ಪಟ್ಟಿತು, ಇದರಿಂದ ಯೋಹಾನನನ್ನು ಪ್ಯಾಟ್ಮಸ್‌ ದ್ವೀಪಕ್ಕೆ ಗಡೀಪಾರು ಮಾಡಲಾಯಿತು. ಯೇಸುವಂದದ್ದು: “ಅವರು ನನ್ನನ್ನು ಹಿಂಸೆಪಡಿಸಿದರೆ, ನಿಮ್ಮನ್ನು ಸಹ ಹಿಂಸೆಪಡಿಸುವರು.”—ಯೋಹಾನ 15:20; ಮತ್ತಾಯ 10:22.

9. (ಎ) ಸಾ. ಶ. ನಾಲ್ಕನೆಯ ಶತಮಾನದೊಳಗೆ ಸೈತಾನನು ತಂತ್ರೋಪಾಯದ ಯಾವ ನಾಯಕಕೃತಿಯನ್ನು ಮುಂದಕ್ಕೆ ತಂದನು ಮತ್ತು ಅದು ಯಾವುದರ ಪ್ರಧಾನ ಭಾಗವಾಗಿದೆ? (ಬಿ) ಒಂದನೆಯ ಮತ್ತು II ನೆಯ ಲೋಕಯುದ್ಧಗಳ ಸಮಯಾವಧಿಯಲ್ಲಿ ಕ್ರೈಸ್ತರಾಜ್ಯಗಳ ಕೆಲವು ಅಧಿಕಾರಿಗಳು ಯೆಹೋವನ ಸಾಕ್ಷಿಗಳೊಂದಿಗೆ ಹೇಗೆ ವರ್ತಿಸಿದರು?

9 ಸಾ. ಶ. ನಾಲ್ಕನೆಯ ಶತಮಾನದೊಳಗೆ, ಆ ಪುರಾತನ ಸರ್ಪವಾದ ಪಿಶಾಚನಾದ ಸೈತಾನನು ತನ್ನ ಮೋಸದ ತಂತ್ರೋಪಾಯದ ನಾಯಕಕೃತಿಯನ್ನು ಅಂದರೆ ಕ್ರೈಸ್ತ ಪ್ರಪಂಚದ ಧರ್ಮಭ್ರಷ್ಟ ಧರ್ಮವನ್ನು—“ಕ್ರೈಸ್ತ” ರೆಂಬ ವೇಷದ ಕೆಳಗೆ ಬಚ್ಚಿಟ್ಟ ಬಾಬೆಲಿನ ವ್ಯವಸ್ಥೆಯನ್ನು—ಮುಂತಂದನು. ಸರ್ಪದ ಸಂತಾನದ ಪ್ರಾಮುಖ್ಯ ಭಾಗ ಇದಾಗಿದೆ ಮತ್ತು ಇದು ತಿಕ್ಕಾಟವಾಡುವ ಬಹುಸಂಖ್ಯೆಯ ಮತಪಂಥಗಳಾಗಿ ಬೆಳೆದಿದೆ. ಪುರಾತನ ಅಪನಂಬಿಗಸ್ತ ಯೆಹೂದದಂತೆ, I ನೆಯ ಮತ್ತು II ನೆಯ ಲೋಕ ಯುದ್ಧದ ಎರಡು ಪಕ್ಷಗಳಲ್ಲಿ ಕ್ರೈಸ್ತ ಪ್ರಪಂಚವು ಆಳವಾಗಿ ಮುಳುಗಿಹೋಗಿದುದ್ದರಿಂದ ಅದು ದೊಡ್ಡ ರಕ್ತಾಪರಾಧವನ್ನು ಹೊತ್ತಿದೆ. ದೇವರ ಅಭಿಷಿಕ್ತ ಸೇವಕರನ್ನು ಕೊಲ್ಲಲು ಕ್ರೈಸ್ತ ಪ್ರಪಂಚದ ಕೆಲವು ರಾಜಕೀಯ ಮುಖಂಡರು ಈ ಯುದ್ಧಗಳನ್ನು ನೆಪವಾಗಿ ಉಪಯೋಗಿಸಿದರು. ಯೆಹೋವನ ಸಾಕ್ಷಿಗಳ ಮೇಲೆ ಹಿಟ್ಲರನ ಹಿಂಸೆಯ ಕುರಿತು ವರದಿ ಮಾಡುತ್ತಾ ಕಿರ್‌ಶೆನ್‌ಕಾಂಪ್‌ ಇನ್‌ ಡೈಚ್‌ಲಾಂಚ್‌ (ಜರ್ಮನಿಯಲ್ಲಿ ಚರ್ಚುಗಳ ಹೋರಾಟ) ಎಂಬ ಫ್ರೀಡ್ರಿಕ್‌ ಜಿಪ್‌ಫೆಲ್‌ರ ಪುಸ್ತಕದ ಒಂದು ಪರಾಮರ್ಶೆಯು ಹೇಳಿದ್ದು: “[ಸಾಕ್ಷಿಗಳಲ್ಲಿ] ಮೂರನೆಯ ಒಂದು ಭಾಗವು ದಂಡನೆಯಿಂದ, ಇತರ ದುಷ್ಕರ್ಮಗಳಿಂದ, ಹಸಿವೆ, ಅನಾರೋಗ್ಯ ಯಾ ಕೆಲಸದಿಂದ ಸಾಯಿಸಲ್ಪಟ್ಟರು. ಈ ಅಧೀನತೆಯ ತೀಕ್ಷೈತೆಯು ಯಾವುದೇ ಪೂರ್ವ ನಿದರ್ಶನವಿಲ್ಲದಂತಹ ರೀತಿಯಲ್ಲಿ ನಡೆಯಿತು. ಮತ್ತು ರಾಷ್ಟ್ರೀಯ ಸಮಾಜವಾದಿ ಸಿದ್ಧಾಂತದೊಂದಿಗೆ ಹೊಂದಿಕೆ ಇರಸಾಧ್ಯವಿರದ, ರಾಜಿಯಾಗದ ನಂಬಿಕೆಯ ಕಾರಣದಿಂದಲೇ ಇದಾಯಿತು.” ನಿಜವಾಗಿಯೂ, ಅದರ ಪೌರೋಹಿತ್ಯದೊಂದಿಗೆ, ಕ್ರೈಸ್ತ ರಾಜ್ಯಗಳ ಕುರಿತು ಇದನ್ನು ಹೇಳಸಾಧ್ಯವಿದೆ: “ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತವು ನಿನ್ನ ನೆರಿಗೆಯಲ್ಲಿ ಅಂಟಿಕೊಂಡಿದೆ.”—ಯೆರೆಮೀಯ 2:34. *

10. ಅನೇಕ ದೇಶಗಳಲ್ಲಿ ಮಹಾ ಸಮೂಹದ ಯುವಜನರು ಯಾವ ಹಿಂಸೆಯನ್ನು ಅನುಭವಿಸಿದ್ದಾರೆ?

10 ಮಹಾ ಸಮೂಹದ ವಿಶ್ವಾಸಿ ಯುವ ಜನರು 1935 ರಿಂದ ಅನೇಕ ಸ್ಥಳಗಳಲ್ಲಿ ಹಿಂಸೆಯ ಹೊಡೆತವನ್ನು ಪಡೆದಿರುತ್ತಾರೆ. (ಪ್ರಕಟನೆ 7:9) ಯೂರೋಪಿನಲ್ಲಿ ಲೋಕಯುದ್ಧ II ಕೊನೆಯಾದಂತೆ, ಕೇವಲ ಒಂದೇ ಪಟ್ಟಣದಲ್ಲಿ 14 ಯುವ ಸಾಕ್ಷಿಗಳನ್ನು ನೇಣುಹಾಕಿ ಕೊಂದರು. ಅವರ ದುಷ್ಕಾರ್ಯ? “ಇನ್ನು ಮುಂದೆ ಯುದ್ಧಾಭ್ಯಾಸವನ್ನು ಕಲಿಯಲು” ನಿರಾಕರಣೆ. (ಯೆಶಾಯ 2:4) ಇನ್ನೂ ಇತ್ತೀಚೆಗಿನ ವರ್ಷಗಳಲ್ಲಿ ಪೌರ್ವಾತ್ಯ ಮತ್ತು ಆಫ್ರಿಕದಲ್ಲಿ ಯುವ ಜನರು ತದ್ರೀತಿಯ ವಿವಾದಾಂಶದ ಮೇಲೆ ಮರಣದ ತನಕ ಹೊಡೆಯಲ್ಪಟ್ಟರು ಯಾ ಗುಂಡಿಕ್ಕಿ ಕೊಲ್ಲುವ ಸೈನಿಕ ಗುಂಪಿನಿಂದ ಹತಿಸಲ್ಪಟ್ಟರು. ಯೇಸುವಿನ ಅಭಿಷಿಕ್ತ ಸಹೋದರರ ಯೋಗ್ಯ ಬೆಂಬಲಿಗರಾದ ಈ ಯುವ ಧರ್ಮಬಲಿಗಳು ವಾಗ್ದತ್ತ ನೂತನ ಭೂಮಿಯೊಳಗೆ ಪುನರುತ್ಥಾನವನ್ನು ಖಂಡಿತ ಪಡೆಯುವರು.—2 ಪೇತ್ರ 3:13; ಹೋಲಿಸಿರಿ ಕೀರ್ತನೆ 110:3; ಮತ್ತಾಯ 25:34-40; ಲೂಕ 20:37, 38.

ಒಂದು ಬಿಳಿ ನಿಲುವಂಗಿ

11. ಧರ್ಮಬಲಿಯಾದ ಅಭಿಷಿಕ್ತ ಕ್ರೈಸ್ತರು ಯಾವ ಅರ್ಥದಲ್ಲಿ “ಒಂದು ಬಿಳಿ ನಿಲುವಂಗಿ” ಯನ್ನು ಪಡೆಯುತ್ತಾರೆ?

11 ಪುರಾತನ ಸಮಯಗಳಲ್ಲಿನ ಸಮಗ್ರತಾ ಪಾಲಕರ ನಂಬಿಕೆಯನ್ನು ದಾಖಲಾತಿ ಮಾಡಿದ ಅನಂತರ, ಅಪೊಸ್ತಲ ಪೌಲನು ಹೇಳುವುದು: “ಇವರೆಲ್ಲರೂ, ನಂಬಿಕೆಯ ಮೂಲಕ ಒಳ್ಳೇ ಹೆಸರನ್ನು ಸಂಪಾದಿಸಿಕೊಂಡಿದ್ದರೂ ವಾಗ್ದಾನದ ಫಲವನ್ನು ಹೊಂದಲಿಲ್ಲ; ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ಸಂಕಲ್ಪಿಸಿದನು.” (ಇಬ್ರಿಯ 11:39, 40) ಪೌಲ ಮತ್ತು ಇನ್ನಿತರ ಅಭಿಷಿಕ್ತ ಕ್ರೈಸ್ತರು ಯಾವ “ಶ್ರೇಷ್ಠವಾದ ಭಾಗ್ಯವನ್ನು” ಎದುರು ನೋಡುತ್ತಿದ್ದರು? ಯೋಹಾನನು ಅದನ್ನು ಇಲ್ಲಿ ದರ್ಶನದಲ್ಲಿ ನೋಡುತ್ತಾನೆ: “ಮತ್ತು ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳಿ ನಿಲುವಂಗಿಯು ಕೊಡಲ್ಪಟ್ಟಿತು; ಮತ್ತು ತಮಗೆ ಕೂಡ ಹಾಗೆಯೇ ಸ್ವಲ್ಪದರಲ್ಲಿ ಕೊಲ್ಲಲ್ಪಡಲಿದ್ದ ತಮ್ಮ ಜೊತೆದಾಸರ ಮತ್ತು ತಮ್ಮ ಸಹೋದರರ ಸಂಖ್ಯೆಯು ಕೂಡ ಭರ್ತಿಯಾಗುವ ತನಕ ಅವರು ತುಸು ದೀರ್ಘಕಾಲ ವಿಶ್ರಮಿಸಿಕೊಳ್ಳುವಂತೆ ಅವರಿಗೆ ಹೇಳಲಾಯಿತು.” (ಪ್ರಕಟನೆ 6:11, NW) ಅವರು ಒಂದು “ಬಿಳಿ ನಿಲುವಂಗಿ” ಯನ್ನು ಪಡೆಯುವುದು, ಅಮರ ಆತ್ಮ ಜೀವಿಗಳಾಗಿ ಅವರ ಪುನರುತ್ಥಾನಗೊಳ್ಳುವಿಕೆಗೆ ಸಂಬಂಧಿಸಿರುತ್ತದೆ. ಹತಿಸಲ್ಪಟ್ಟವರ ಆತ್ಮಗಳಾಗಿ ಯಜ್ಞವೇದಿಯ ಕೆಳಗೆ ಅವರಿನ್ನೂ ಬಿದ್ದುಕೊಂಡಿರುವುದಿಲ್ಲ, ಆದರೆ ದೇವರ ಸಿಂಹಾಸನದ ಮುಂದೆ ಆರಾಧಿಸುತ್ತಿರುವ 24 ಹಿರಿಯರ ಗುಂಪಿನ ಒಂದು ಭಾಗವಾಗಲು ಅವರು ಎಬ್ಬಿಸಲ್ಪಡುತ್ತಾರೆ. ಅಲ್ಲಿ ಅವರಿಗೆ ಸಿಂಹಾಸನಗಳು ಕೊಡಲ್ಪಟ್ಟಿವೆ, ಅವರು ರಾಜ್ಯವೈಭವದ ಸುಯೋಗದೊಳಗೆ ಪ್ರವೇಶಿಸಿದ್ದಾರೆಂದು ಇದು ತೋರಿಸುತ್ತದೆ. ಮತ್ತು ಅವರು “ಬಿಳಿ ಹೊರಗಣ ವಸ್ತ್ರಗಳನ್ನು ಧರಿಸಿಕೊಂಡಿರುವುದು” ಅವರನ್ನು ನೀತಿವಂತರಾಗಿ ತೀರ್ಮಾನಿಸಲಾಗಿದೆಯೆಂದೂ, ಆ ಸ್ವರ್ಗೀಯ ಆಸ್ಥಾನದಲ್ಲಿ ಯೆಹೋವನ ಮುಂದೆ ಒಂದು ಗೌರವಾನಿತ್ವ ಸ್ಥಾನಕ್ಕೆ ಯೋಗ್ಯರಾಗಿದ್ದಾರೆಂದೂ ಸೂಚಿಸುತ್ತದೆ. ಇದು ಸಾರ್ದಿಸ್‌ ಸಭೆಯ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗೆ ಯೇಸುವಿನ ಆಶ್ವಾಸನೆಯ ನೆರವೇರಿಕೆ ಕೂಡ ಆಗಿರುತ್ತದೆ: “ಜಯಶಾಲಿಯಾಗುವವನಿಗೆ ಹೀಗೆ ಬಿಳಿ ಹೊರಗಣ ವಸ್ತ್ರಗಳನ್ನು ಹೊದಿಸುವರು.”—ಪ್ರಕಟನೆ 3:5; 4:4, NW; 1 ಪೇತ್ರ 1:4.

12. ಯಾವ ವಿಧದಲ್ಲಿ ಪುನರುತಿತ್ಥ ಅಭಿಷಿಕ್ತರು “ತುಸು ದೀರ್ಘಕಾಲ ವಿಶ್ರಮಿಸಿ” ಕೊಳ್ಳುವರು ಮತ್ತು ಎಂದಿನ ತನಕ?

12 ಯೇಸುವು 1914 ರಲ್ಲಿ ಸಿಂಹಾಸನಾಸೀನನಾದ ಮೇಲೆ ಮತ್ತು ಸೈತಾನ ಮತ್ತು ಅವನ ದೆವ್ವಗಳಿಂದ ಸ್ವರ್ಗವನ್ನು ಶುದ್ಧೀಕರಿಸಿ, ತನ್ನ ಅರಸುತನದ ವಿಜಯದ ಸವಾರಿಯ ಹೊರಡೋಣದ ಆರಂಭದ ಅನಂತರ, 1918 ರಲ್ಲಿ ಈ ಸ್ವರ್ಗೀಯ ಪುನರುತ್ಥಾನವು ಆರಂಭಿಸಿತು ಎಂದು ಎಲ್ಲಾ ರುಜುವಾತು ತೋರಿಸುತ್ತದೆ. ಆದರೂ ಆ ಪುನರುತಿತ್ಥ ಅಭಿಷಿಕ್ತರಿಗೆ, “ತಮ್ಮ ಜೊತೆದಾಸರ . . . ಸಂಖ್ಯೆಯು” ಪೂರ್ಣಗೊಳ್ಳುವ ತನಕ “ತುಸು ದೀರ್ಘಕಾಲ ವಿಶ್ರಮಿಸಿಕೊಳ್ಳುವಂತೆ” ಹೇಳಲಾಯಿತು. ಭೂಮಿಯ ಮೇಲೆ ಇನ್ನೂ ಇರುವ ಯೋಹಾನ ವರ್ಗದವರು ಪರಿಶೋಧನೆ ಮತ್ತು ಹಿಂಸೆಯ ಕೆಳಗೆ ತಮ್ಮ ಸಮಗ್ರತೆಯನ್ನು ಸಾಬೀತುಪಡಿಸತಕ್ಕದ್ದು ಮತ್ತು ಅವರಲ್ಲಿ ಕೆಲವರು ಕೊಲ್ಲಲ್ಪಡಲೂ ಬಹುದು. ಆದರೂ, ಕೊನೆಯಲ್ಲಿ ಮಹಾ ಬಾಬೆಲಿನಿಂದ ಮತ್ತು ಅವಳ ರಾಜಕೀಯ ಜಾರರಿಂದ ಸುರಿಸಲ್ಪಟ್ಟ ಎಲ್ಲಾ ನೀತಿಯ ರಕ್ತಕ್ಕೆ ಪ್ರತೀಕಾರ ತೀರಿಸಲ್ಪಡುವುದು. ತನ್ಮಧ್ಯೆ, ಪುನರುತ್ಥಾನಗೊಂಡವರು ಸ್ವರ್ಗೀಯ ಕರ್ತವ್ಯಗಳಲ್ಲಿ ಕಾರ್ಯನಿರತರಾಗಿದ್ದಾರೆಂಬುದು ನಿಸ್ಸಂದೇಹ. ಅವರು ವಿಶ್ರಮಿಸುವುದು, ಪರಮಸುಖದ ನಿಷ್ಕ್ರಿಯತೆಯಲ್ಲಲ್ಲ, ಬದಲು ಯೆಹೋವನ ಮುಯ್ಯಿತೀರಿಸುವ ದಿನಕ್ಕಾಗಿ ಅವರು ತಾಳ್ಮೆಯಿಂದ ಕಾದು ನಿಲ್ಲುವುದರ ಮೂಲಕವೇ. (ಯೆಶಾಯ 34:8; ರೋಮಾಪುರ 12:19) ಸುಳ್ಳು ಧರ್ಮದ ನಾಶನಕ್ಕೆ ಅವರು ಸಾಕ್ಷಿಯಾಗುವಾಗ ಅವರ ವಿಶ್ರಾಂತಿಯು ಕೊನೆಗೊಳ್ಳುವದು ಮತ್ತು “ಕರೆಯಲ್ಪಟ್ಟವರು, ಆಯ್ದುಕೊಳ್ಳಲ್ಪಟ್ಟವರು, ಮತ್ತು ನಂಬಿಗಸ್ತರು” ಆಗಿ, ಭೂಮಿಯ ಮೇಲಿರುವ ಸೈತಾನನ ದುಷ್ಟ ಸಂತಾನದ ಇತರ ಎಲ್ಲ ಭಾಗಗಳ ಮೇಲೆ ತೀರ್ಪನ್ನು ವಿಧಿಸುವಾಗ ಅವರು ಕರ್ತನಾದ ಯೇಸು ಕ್ರಿಸ್ತನನ್ನು ಜೊತೆಗೊಳ್ಳುವರು.—ಪ್ರಕಟನೆ 2:26, 27; 17:14; ರೋಮಾಪುರ 16:20.

‘ಸತ್ತವರು ಮೊದಲು ಎದ್ದು ಬರುವರು’

13, 14. (ಎ) ಅಪೊಸ್ತಲ ಪೌಲನಿಗನುಸಾರ, ಸ್ವರ್ಗೀಯ ಪುನರುತ್ಥಾನವು ಯಾವಾಗ ಆರಂಭಗೊಳ್ಳುತ್ತದೆ, ಮತ್ತು ಯಾರು ಪುನರುತ್ಥಾನಗೊಳಿಸಲ್ಪಡುತ್ತಾರೆ? (ಬಿ) ಕರ್ತನ ದಿನದೊಳಗೆ ಪಾರಾಗುವ ಅಭಿಷಿಕ್ತರು ಪರಲೋಕಕ್ಕೆ ಯಾವಾಗ ಪುನರುತ್ಥಾನಗೊಳಿಸಲ್ಪಡುವರು?

13 ಐದನೆಯ ಮುದ್ರೆಯ ಬಿಚ್ಚುವಿಕೆಯಿಂದ ಕೊಡಲ್ಪಟ್ಟ ಒಳನೋಟವು, ಸ್ವರ್ಗೀಯ ಪುನರುತ್ಥಾನಕ್ಕೆ ಸಂಬಂಧಿಸಿದ ಇನ್ನಿತರ ಎಲ್ಲಾ ಶಾಸ್ತ್ರವಚನಗಳೊಂದಿಗೆ ಪೂರ್ಣವಾಗಿ ಸಹಮತದಲ್ಲಿದೆ. ಉದಾಹರಣೆಗೆ, ಅಪೊಸ್ತಲ ಪೌಲನು ಬರೆದದ್ದು: “ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವುದೇನಂದರೆ ಕರ್ತನು ಪ್ರತ್ಯಕ್ಷನಾಗುವ ವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದವರಿಗಿಂತ ಮುಂದಾಗುವದೇ ಇಲ್ಲ; ಕರ್ತನು ತಾನೇ ಆಜ್ಞಾಘೋಷದೊಡನೆಯೂ, ಪ್ರಧಾನದೂತನ ಶಬ್ದದೊಡನೆಯೂ, ದೇವರ ತುತೂರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದು ಬರುವನು. ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.”—1 ಥೆಸಲೊನೀಕ 4:15-17.

14 ಈ ವಚನಗಳು ಎಂತಹ ಒಂದು ಪ್ರಚೋದಕ ಕಥೆಯನ್ನು ಹೇಳುತ್ತವೆ! ಯೇಸುವಿನ ಸಾನ್ನಿಧ್ಯಕ್ಕೆ ಪಾರಾಗುವ ಯೇಸುವಿನ ಅಭಿಷಿಕ್ತ ಸಹೋದರರಿಗಿಂತ ಅಂದರೆ ಆತನ ಸಾನ್ನಿಧ್ಯದ ಸಮಯದಲ್ಲಿ ಭೂಮಿಯ ಮೇಲೆ ಇನ್ನೂ ಜೀವಂತವಾಗಿ ಇರುವವರಿಗಿಂತ ಮೊದಲು, ಈಗಾಗಲೇ ಮೃತಿಹೊಂದಿದವರು ಸ್ವರ್ಗಕ್ಕೆ ಸೇರುವರು. ಕ್ರಿಸ್ತನೊಂದಿಗೆ ಸಹಮತದಲ್ಲಿ ಸತ್ತ ಅಂತಹವರು, ಮೊದಲು ಏಳುವರು. ಯೇಸುವು ಇಳಿದು ಬರುತ್ತಾನೆ ಅಂದರೆ ಅವನ ಗಮನವನ್ನು ಅವರೆಡೆಗೆ ತಿರುಗಿಸುವನು, ಮತ್ತು ಅವರನ್ನು ಆತ್ಮಜೀವಕ್ಕೆ ಪುನರುತ್ಥಾನಗೊಳಿಸಿ ಅವರಿಗೆ “ಒಂದು ಬಿಳಿ ನಿಲುವಂಗಿ” ಯನ್ನು ಕೊಡುವನು. ಅನಂತರ, ಭೂಮಿಯ ಮೇಲೆ ಇನ್ನೂ ಮಾನವರಾಗಿ ಜೀವಿಸುವವರು, ಅನೇಕರು ವಿರೋಧಿಗಳ ಕೈಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಯುತ್ತಾ ತಮ್ಮ ಐಹಿಕ ಜೀವಿತಕ್ರಮವನ್ನು ಮುಗಿಸುತ್ತಾರೆ. ಆದರೂ, ಅವರ ಹಿಂದಿನವರು ಮಾಡಿದಂತೆ, ಮರಣದಲ್ಲಿ ಅವರು ನಿದ್ರಿಸುವುದಿಲ್ಲ. ಬದಲಾಗಿ, ಅವರು ಸತ್ತಾಗ, ಕ್ಷಣಮಾತ್ರದಲ್ಲಿ—“ಕಣ್ಣುರೆಪ್ಪೆಬಡಿಯುವುದರೊಳಗೆ”—ಬದಲಾಯಿಸಲ್ಪಡುವರು.ಯೇಸುವಿನ ಮತ್ತು ಕ್ರಿಸ್ತನ ದೇಹದ ಜತೆ ಸದಸ್ಯರುಗಳೊಂದಿಗೆ ಇರಲು ಸ್ವರ್ಗಕ್ಕೆ ಒಯ್ಯಲ್ಪಡುವರು. (1 ಕೊರಿಂಥ 15:50-52; ಪ್ರಕಟನೆ 14:13 ಹೋಲಿಸಿರಿ.) ಈ ರೀತಿಯಲ್ಲಿ, ಅಭಿಷಿಕ್ತ ಕ್ರೈಸ್ತರ ಪುನರುತ್ಥಾನವು ಅಪಾಕಲಿಪ್ಸ್‌ನ ನಾಲ್ಕು ಕುದುರೆ ರಾಹುತರು ತಮ್ಮ ಸವಾರಿಯನ್ನು ಆರಂಭಿಸಿದ ಅನಂತರ ತಕ್ಷಣವೇ ಆರಂಭಗೊಳ್ಳುತ್ತದೆ.

15. (ಎ) ಐದನೆಯ ಮುದ್ರೆಯ ಒಡೆಯುವಿಕೆಯು ಯಾವ ಶುಭವಾರ್ತೆಯನ್ನು ಒದಗಿಸಿದೆ? (ಬಿ) ಬಿಳಿ ಕುದುರೆಯ ಮೇಲಿರುವ ವಿಜೇತನ ಸವಾರಿಯು ಹೇಗೆ ಮುಕ್ತಾಯಗೊಳ್ಳುತ್ತದೆ?

15 ಸುರುಳಿಯ ಈ ಐದನೆಯ ಮುದ್ರೆಯ ಒಡೆಯುವಿಕೆಯು, ವಿಜಯಿಗಳಾದ, ಮರಣದ ತನಕ ನಂಬಿಗಸ್ತರಾಗಿದ್ದ ಅಭಿಷಿಕ್ತ ಸಮಗ್ರತಾ ಪಾಲಕರ ಕುರಿತಾಗಿ ಶುಭವಾರ್ತೆಯನ್ನು ಒದಗಿಸಿರುತ್ತದೆ. ಆದರೆ ಇದು ಸೈತಾನನಿಗೆ ಮತ್ತು ಅವನ ಸಂತಾನಕ್ಕೆ ಶುಭವಾರ್ತೆಯನ್ನು ಒದಗಿಸುವುದಿಲ್ಲ. ಬಿಳಿ ಕುದುರೆಯ ಮೇಲೆ ಇರುವ ವಿಜೇತನ ಸವಾರಿಯು ತಡೆಯಲಸಾಧ್ಯವಾದ ರೀತಿಯಲ್ಲಿ ಮುಂದರಿಯುತ್ತದೆ ಮತ್ತು “ಕೆಡುಕನ ವಶದಲ್ಲಿ ಬಿದ್ದಿರುವ” ಲೋಕದಿಂದ ಲೆಕ್ಕವನ್ನು ತೆಗೆದುಕೊಳ್ಳುವ ಸಮಯದ ಮುಕ್ತಾಯಹಂತಕ್ಕೆ ನಡಿಸುತ್ತದೆ. (1 ಯೋಹಾನ 5:19) ಆರನೆಯ ಮುದ್ರೆಯನ್ನು ಕುರಿಮರಿಯು ಬಿಚ್ಚುವಾಗ ಇದನ್ನು ಸ್ಪಷ್ಟಗೊಳಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 ಮಹಾ ಬಾಬೆಲಿನ ಗುರುತನ್ನು ವಿವರವಾಗಿ 33 ನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

^ ಪ್ಯಾರ. 8 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪುಟ 1577, ಅಪೆಂಡಿಕ್ಸ್‌ 5 ಸಿ, “ಯಾತನಾ ಕಂಭ” ವನ್ನು [ಟಾರ್ಚರ್‌ ಸೇಕ್ಟ್‌] ಹೋಲಿಸಿರಿ.

^ ಪ್ಯಾರ. 9 ಧರ್ಮದ ರಕ್ತಾಪರಾಧದ ರುಜುವಾತು 36 ನೆಯ ಅಧ್ಯಾಯದಲ್ಲಿ ಇನ್ನೂ ವಿವರವಾಗಿ ಕೊಡಲ್ಪಟ್ಟಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 213 ರಲ್ಲಿರುವ ಚೌಕ]

‘ಹತಿಸಲ್ಪಟ್ಟ ಆತ್ಮಗಳು’

ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್ಸ್‌ ಸೈಕ್ಲೊಪೀಡಿಯವು, ಫ್ರೆಂಚ್‌ ಹ್ಯೂಗನಾಟ್‌ ಹೆತ್ತವರಿಗೆ ಜನಸಿದ 18 ನೆಯ ಶತಮಾನದ ಇಂಗ್ಲಿಷ್‌ ಪ್ರಾಟೆಸ್ಟಂಟ್‌ನಾದ ಜಾನ್‌ ಜಾರ್ಟಿನ್‌ ಹೀಗಂದನು ಎನ್ನುತ್ತಾ ಉಲ್ಲೇಖಿಸುವುದು: “ಎಲ್ಲಿ ಹಿಂಸೆಯು ಆರಂಭಗೊಳ್ಳುತ್ತದೋ ಅಲ್ಲಿ ಕ್ರೈಸ್ತತ್ವವು ಅಂತ್ಯಗೊಳ್ಳುತ್ತದೆ . . . [ರೋಮನ್‌] ಸಾಮ್ರಾಜ್ಯದ ಧರ್ಮದೋಪಾದಿ ಕ್ರೈಸ್ತತ್ವವು ಸ್ಥಾಪಿಸಲ್ಪಟ್ಟ ಅನಂತರ ಮತ್ತು ಅದರ ವೈದಿಕರಿಗೆ ಐಶ್ವರ್ಯ ಮತ್ತು ಗೌರವವನ್ನು ನೀಡಿದ ಮೇಲೆ, ಹಿಂಸೆಯ ಬೀಭತ್ಸಕರ ಕೇಡು ಬೃಹತ್‌ ಶಕ್ತಿಯನ್ನು ಪಡೆಯಿತು ಮತ್ತು ಸುವಾರ್ತೆಯ ಧರ್ಮದ ಮೇಲೆ ಅದರ ಸ್ಫೋಟಕ ಪ್ರಭಾವವನ್ನು ಎಸೆಯಿತು.”

[ಚಿತ್ರ]

“ಮತ್ತು ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳಿ ನಿಲುವಂಗಿಯು ಕೊಡಲ್ಪಟ್ಟಿತು”