ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 7

ಸತ್ತವರನ್ನು ಮತ್ತೆ ನೋಡಬಹುದಾ?

ಸತ್ತವರನ್ನು ಮತ್ತೆ ನೋಡಬಹುದಾ?

1-3. (ಎ) ನಾವೆಲ್ಲರೂ ಯಾವುದರ ಬಂಧಿಗಳಾಗಿದ್ದೇವೆ? (ಬಿ) ಅದರಿಂದ ನಮ್ಮನ್ನು ಯೆಹೋವನು ಹೇಗೆ ಬಿಡಿಸುತ್ತಾನೆ?

ಯೋಚಿಸಿ, ನೀವು ಮಾಡಿರದ ಒಂದು ತಪ್ಪಿಗೆ ನಿಮ್ಮ ಇಡೀ ಜೀವನವನ್ನು ನೀವು ಜೈಲಿನಲ್ಲೇ ಕಳೆಯಬೇಕಾಗಿದೆ. ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿಮಗೆ ಅವಕಾಶವೇ ಇಲ್ಲ. ‘ಜೀವನವೇ ಮುಗಿದುಹೋಯಿತು, ಬೇರೆ ದಾರಿಯೇ ಇಲ್ಲ’ ಎಂದು ನಿಮಗೆ ಅನಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ, ನಿಮ್ಮನ್ನು ಬಿಡಿಸಲು ಒಬ್ಬ ವ್ಯಕ್ತಿಗೆ ಅಧಿಕಾರವಿದೆ ಅಂತ ನಿಮಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ ನಿಮ್ಮನ್ನು ಜೈಲಿನಿಂದ ಬಿಡಿಸುತ್ತೇನೆಂದು ಅವನು ಮಾತುಕೊಟ್ಟಿದ್ದಾನೆಂದು ಸಹ ನಿಮಗೆ ತಿಳಿಯುತ್ತದೆ. ಆಗ ನಿಮಗೆ ಹೇಗೆ ಅನಿಸುತ್ತದೆ?

2 ನಾವೆಲ್ಲರೂ ಸಾವಿನ ಸೆರೆಯಲ್ಲಿ ಬಂಧಿಗಳಾಗಿದ್ದೇವೆ. ಏನೇ ಮಾಡಿದರೂ ಸಾವಿನಿಂದ ಬಿಡಿಸಿಕೊಳ್ಳಲು ನಮ್ಮಿಂದ ಆಗುವುದಿಲ್ಲ. ಆದರೆ ಯೆಹೋವ ದೇವರಿಗೆ ನಮ್ಮನ್ನು ಸಾವಿನಿಂದ ಬಿಡಿಸುವ ಶಕ್ತಿಯಿದೆ. ಅಷ್ಟೇ ಅಲ್ಲ, ‘ಮರಣವನ್ನು ಕೊನೆಯ ಶತ್ರುವಾಗಿ ನಿರ್ಮೂಲ ಮಾಡುತ್ತೇನೆಂದು’ ಸಹ ಆತನು ಮಾತು ಕೊಟ್ಟಿದ್ದಾನೆ.—1 ಕೊರಿಂಥ 15:26.

3 ದೇವರು ಕೊಟ್ಟ ಈ ಮಾತಿನಿಂದ ನಮಗೆ ಎಷ್ಟು ನೆಮ್ಮದಿ ಅನಿಸುತ್ತದಲ್ವಾ? ಸಾಯುತ್ತೇವೆಂಬ ಭಯವೇ ನಮಗೆ ಇರುವುದಿಲ್ಲ. ಆದರೆ ಈಗಾಗಲೇ ಸತ್ತಿರುವವರ ಬಗ್ಗೆ ಏನು? ಅವರನ್ನು ಸಹ ಯೆಹೋವನು “ಪುನರುತ್ಥಾನ” ಮಾಡುತ್ತಾನೆ ಅಂದರೆ ಅವರನ್ನು ಪುನಃ ಜೀವಂತಗೊಳಿಸುತ್ತಾನೆ. ‘ಮೃತರಾದ ಜನರು ಬದುಕುವರು’ ಎಂದು ಆತನು ಬೈಬಲಿನಲ್ಲಿ ಮಾತು ಸಹ ಕೊಟ್ಟಿದ್ದಾನೆ. (ಯೆಶಾಯ 26:19) ತೀರಿಹೋಗಿರುವ ನಿಮ್ಮ ಆಪ್ತರು, ಸ್ನೇಹಿತರು ಮತ್ತೆ ಜೀವ ಪಡೆದು ಬಂದಾಗ ನಿಮಗೆಷ್ಟು ಖುಷಿಯಾಗಬಹುದು ಎಂದು ಸ್ವಲ್ಪ ಊಹಿಸಿ ನೋಡಿ!

ನೀವು ತುಂಬ ಪ್ರೀತಿಸುವವರು ತೀರಿಕೊಂಡಾಗ

4. (ಎ) ಕುಟುಂಬದವರಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ತೀರಿಕೊಂಡಾಗ ಯಾವುದು ನಮಗೆ ಸಾಂತ್ವನ ಕೊಡುತ್ತದೆ? (ಬಿ) ಯೇಸುವಿನ ಆಪ್ತ ಸ್ನೇಹಿತರಲ್ಲಿ ಕೆಲವರ ಹೆಸರನ್ನು ಹೇಳಿ.

4 ಕುಟುಂಬದವರಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ತೀರಿಕೊಂಡಾಗ ನಮಗಾಗುವ ದುಃಖ ಸಂಕಟವನ್ನು ಮಾತಿನಲ್ಲಿ ಹೇಳಲು ಆಗುವುದಿಲ್ಲ. ಅವರು ನಮ್ಮೊಟ್ಟಿಗೇ ಇರಬೇಕು ಎಂದು ಅನಿಸಿದರೂ ನಾವು ಅವರಿಗೆ ಪುನಃ ಜೀವ ಕೊಡಲು ಆಗುವುದಿಲ್ಲ. ಸಾವಿನ ಮುಂದೆ ನಾವು ಸೋತು ಹೋಗುತ್ತೇವೆ. ಆದರೆ ಬೈಬಲಿನಲ್ಲಿ ಹೇಳಿರುವುದನ್ನು ಓದುವಾಗ ನಮಗೆ ತುಂಬ ಸಾಂತ್ವನ ಸಿಗುತ್ತದೆ. (2 ಕೊರಿಂಥ 1:3, 4 ಓದಿ.) ಅದಕ್ಕೊಂದು ಉದಾಹರಣೆ ನೋಡೋಣ. ತೀರಿಹೋಗಿರುವ ನಮ್ಮ ಪ್ರೀತಿಯ ಜನರಿಗೆ ಪುನಃ ಜೀವ ಕೊಡಲು ಯೆಹೋವ ದೇವರಿಗೂ ಯೇಸುವಿಗೂ ಎಷ್ಟು ಆಸೆಯಿದೆ ಎಂದು ಈ ಉದಾಹರಣೆಯಿಂದ ಗೊತ್ತಾಗುತ್ತದೆ. ಯೇಸು ಭೂಮಿಯಲ್ಲಿದ್ದಾಗ ಲಾಜರನನ್ನು ಮತ್ತು ಅವನ ಸಹೋದರಿಯರನ್ನು ಆಗಾಗ ಭೇಟಿ ಮಾಡುತ್ತಿದ್ದನು. ಅವರು ಯೇಸುವಿನ ಆಪ್ತ ಸ್ನೇಹಿತರಾಗಿದ್ದರು. ‘ಯೇಸುವಿಗೆ ಮಾರ್ಥ, ಮರಿಯ ಮತ್ತು ಲಾಜರನ ಮೇಲೆ ಪ್ರೀತಿ ಇತ್ತು’ ಎಂದು ಬೈಬಲಿನಲ್ಲಿದೆ.—ಯೋಹಾನ 11:3-5.

5, 6. (ಎ) ಲಾಜರನ ಕುಟುಂಬದವರು, ಸ್ನೇಹಿತರು ಅಳುತ್ತಿದ್ದಾಗ ಯೇಸುವಿಗೆ ಹೇಗನಿಸಿತು? (ಬಿ) ಇದರಿಂದ ನಮಗೆ ಹೇಗೆ ಸಾಂತ್ವನ ಸಿಗುತ್ತದೆ?

5 ಒಂದು ದಿನ ಲಾಜರನು ತೀರಿಹೋದನು. ಹಾಗಾಗಿ ಮಾರ್ಥ ಮತ್ತು ಮರಿಯಳನ್ನು ಸಮಾಧಾನ ಮಾಡಲು ಯೇಸು ಅವರ ಊರಿಗೆ ಹೊರಟನು. ಯೇಸು ಇನ್ನೂ ಊರ ಹೊರಗೆ ಇರುವಾಗಲೇ ಆತನು ಬರುತ್ತಿದ್ದಾನೆಂಬ ಸುದ್ದಿ ಮಾರ್ಥಳ ಕಿವಿಗೆ ಬಿತ್ತು. ಆಗ ಅವಳು ಯೇಸುವನ್ನು ನೋಡಲು ಹೋದಳು. ಆತನನ್ನು ನೋಡಿ ಮಾರ್ಥಳಿಗೆ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ, ಯೇಸು ತಡವಾಗಿ ಬಂದದ್ದರಿಂದ ಇನ್ನೇನು ಮಾಡಲು ಆಗುವುದಿಲ್ಲ, ಪರಿಸ್ಥಿತಿ ಕೈಮೀರಿ ಹೋಗಿದೆ ಎಂಬ ದುಃಖ. ಹಾಗಾಗಿ ಅವಳು ಯೇಸುವಿಗೆ “ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಹೇಳಿದಳು. ನಂತರ ಯೇಸುವನ್ನು ನೋಡಲು ಮರಿಯಳು ಬಂದಳು. ಅವಳು ಅಳುತ್ತಿದ್ದಳು. ಎಲ್ಲರೂ ಅಳುವುದನ್ನು ನೋಡಿ ಯೇಸುವಿಗೆ ದುಃಖವಾಯಿತು. ಆತನೂ ಅತ್ತುಬಿಟ್ಟನು. (ಯೋಹಾನ 11:21, 33, 35) ನಾವು ಪ್ರೀತಿಸುವ ಜನರು ತೀರಿಹೋದಾಗ ನಮಗೆ ಆಗುವಂಥ ದುಃಖ-ನೋವು ಯೇಸುವಿಗೂ ಆಯಿತು.

6 ಯೇಸುವಿನಲ್ಲಿ ಯೆಹೋವನಲ್ಲಿದ್ದ ಗುಣಗಳೇ ಇದ್ದವು. (ಯೋಹಾನ 14:9) ಹಾಗಾಗಿ ಯಾರಾದರೂ ತೀರಿಹೋದಾಗ ಯೇಸುವಿನಂತೆಯೇ ಯೆಹೋವ ದೇವರಿಗೂ ಖಂಡಿತ ದುಃಖ ಆಗುತ್ತದೆ. ಮರಣವನ್ನೇ ಇಲ್ಲದಂತೆ ಮಾಡುವ ಶಕ್ತಿ ಯೆಹೋವ ದೇವರಿಗೆ ಇರುವುದರಿಂದ ಆತನು ಮರಣವನ್ನು ಬೇಗನೆ ತೆಗೆದುಹಾಕಲಿದ್ದಾನೆ. ಇದು ನಮಗೆ ತುಂಬ ಸಾಂತ್ವನ ಕೊಡುತ್ತದೆ.

“ಲಾಜರನೇ, ಹೊರಗೆ ಬಾ”

7, 8. (ಎ) ಗವಿಗೆ ಮುಚ್ಚಿದ್ದ ಕಲ್ಲನ್ನು ತೆಗೆಯುವುದು ಬೇಡವೆಂದು ಮಾರ್ಥಳಿಗೆ ಯಾಕೆ ಅನಿಸಿತು? (ಬಿ) ಆಮೇಲೆ ಯೇಸು ಏನು ಮಾಡಿದನು?

7 ಲಾಜರನ ದೇಹವನ್ನಿಟ್ಟಿದ್ದ ಸ್ಥಳಕ್ಕೆ ಯೇಸು ಬಂದನು. ಲಾಜರನನ್ನು ಒಂದು ಗವಿಯಲ್ಲಿಟ್ಟು ಅದರ ಮುಂಭಾಗವನ್ನು ದೊಡ್ಡ ಕಲ್ಲಿನಿಂದ ಮುಚ್ಚಲಾಗಿತ್ತು. “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಹೇಳಿದನು. ಆದರೆ ಲಾಜರನನ್ನು ಸಮಾಧಿ ಮಾಡಿ ಈಗಾಗಲೇ ನಾಲ್ಕು ದಿನಗಳಾಗಿದ್ದರಿಂದ ಕಲ್ಲನ್ನು ತೆಗೆಯುವುದು ಬೇಡವೆಂದು ಮಾರ್ಥಳಿಗೆ ಅನಿಸಿತು. (ಯೋಹಾನ 11:39) ಕಲ್ಲನ್ನು ತೆಗೆದ ಮೇಲೆ ಯೇಸು ಏನು ಮಾಡುತ್ತಾನೆ ಎನ್ನುವುದು ಸಹ ಅವಳಿಗೆ ಗೊತ್ತಿರಲಿಲ್ಲ.

ಲಾಜರನ ಪುನರುತ್ಥಾನವಾದಾಗ ಅವನ ಕುಟುಂಬದವರಿಗೆ, ಸ್ನೇಹಿತರಿಗೆ ಎಷ್ಟು ಸಂತೋಷವಾಗಿರಬೇಕು ಊಹಿಸಿ!—ಯೋಹಾನ 11:38-44

8 ಕಲ್ಲನ್ನು ತೆಗೆದ ಮೇಲೆ ಯೇಸು ಲಾಜರನಿಗೆ “ಹೊರಗೆ ಬಾ” ಎಂದು ಹೇಳಿದನು. ಅದರ ನಂತರ ಆದದ್ದನ್ನು ನೋಡಿದಾಗ ಮಾರ್ಥ ಮತ್ತು ಮರಿಯಳಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಏಕೆಂದರೆ “ಸತ್ತಿದ್ದ ಆ ಮನುಷ್ಯನು ಹೊರಗೆ ಬಂದನು; ಅವನ ಕೈಕಾಲುಗಳನ್ನು ಹೊದಿಕೆಗಳಿಂದ ಕಟ್ಟಲಾಗಿತ್ತು.” (ಯೋಹಾನ 11:43, 44) ಲಾಜರನಿಗೆ ಪುನಃ ಜೀವ ಬಂತು. ಅವನು ಪುನಃ ತನ್ನ ಕುಟುಂಬದ ಮತ್ತು ಸ್ನೇಹಿತರ ಜೊತೆಸೇರಿದನು. ಅವರು ಈಗ ಅವನನ್ನು ಮುಟ್ಟಲು, ಅಪ್ಪಿಕೊಳ್ಳಲು ಆಗುತ್ತಿತ್ತು. ಅವನೊಂದಿಗೆ ಮಾತಾಡಲು ಸಹ ಆಗುತ್ತಿತ್ತು. ಇದೊಂದು ದೊಡ್ಡ ಅದ್ಭುತವಾಗಿತ್ತು!

“ಹುಡುಗಿ, ಎದ್ದೇಳು!”

9, 10. (ಎ) ಸತ್ತವರನ್ನು ಪುನರುತ್ಥಾನ ಮಾಡುವ ಶಕ್ತಿಯನ್ನು ಯೇಸುವಿಗೆ ಯಾರು ಕೊಟ್ಟರು? (ಬಿ) ಪುನರುತ್ಥಾನದ ಘಟನೆಗಳನ್ನು ಓದುವುದರಿಂದ ನಮಗೇನು ಪ್ರಯೋಜನವಿದೆ?

9 ಯೇಸು ತನ್ನ ಸ್ವಂತ ಶಕ್ತಿಯಿಂದ ಪುನರುತ್ಥಾನ ಮಾಡುತ್ತಿದ್ದನಾ? ಇಲ್ಲ. ಅದು ಹೇಗೆ ಗೊತ್ತಾಗುತ್ತದೆ? ಲಾಜರನನ್ನು ಪುನರುತ್ಥಾನ ಮಾಡುವ ಮೊದಲು ಯೇಸು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದನು. ಆಗ ಯೆಹೋವ ದೇವರು ಆತನಿಗೆ ಶಕ್ತಿ ಕೊಟ್ಟನು. (ಯೋಹಾನ 11:41, 42 ಓದಿ.) ಬೈಬಲಿನಲ್ಲಿ ಲಾಜರನ ಪುನರುತ್ಥಾನದ ಬಗ್ಗೆ ಮಾತ್ರವಲ್ಲ, ಬೇರೆ ಅನೇಕರ ಪುನರುತ್ಥಾನದ ಬಗ್ಗೆ ಸಹ ಹೇಳಲಾಗಿದೆ. ಅದರಲ್ಲಿ ಒಂದು, 12 ವರ್ಷದ ಪುಟ್ಟ ಹುಡುಗಿಯನ್ನು ಯೇಸು ಪುನರುತ್ಥಾನ ಮಾಡಿದ್ದು. ಆ ಹುಡುಗಿಗೆ ತುಂಬ ಹುಷಾರಿರಲಿಲ್ಲ. ತಂದೆತಾಯಿಗೆ ಅವಳು ಒಬ್ಬಳೇ ಮಗಳು. ಮಗಳನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಅಪ್ಪ ಯಾಯೀರನು ಯೇಸುವಿನ ಬಳಿ ಬರುತ್ತಾನೆ. ತನ್ನ ಮಗಳನ್ನು ಗುಣ ಮಾಡಬೇಕೆಂದು ಅಂಗಲಾಚುತ್ತಾನೆ. ಅವನು ಯೇಸುವಿನ ಹತ್ತಿರ ಮಾತಾಡುತ್ತಿರುವಾಗಲೇ ಕೆಲವು ಪುರುಷರು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನು ಬೋಧಕನಿಗೆ ತೊಂದರೆ ಕೊಡಬೇಡ” ಎಂದು ಹೇಳುತ್ತಾರೆ. ಆಗ ಯೇಸು ಅವನಿಗೆ, “ಭಯಪಡಬೇಡ, ನಂಬಿಕೆ ಮಾತ್ರ ಇರಲಿ; ಅವಳು ಬದುಕುವಳು” ಎನ್ನುತ್ತಾನೆ. ನಂತರ ಯೇಸು ಯಾಯೀರನ ಜೊತೆ ಅವನ ಮನೆಗೆ ಹೋಗುತ್ತಾನೆ. ಅಲ್ಲಿ ಎಲ್ಲರು ಅಳುತ್ತಿರುವುದನ್ನು ನೋಡಿ ಯೇಸು ಅವರಿಗೆ “ಅಳುವುದನ್ನು ನಿಲ್ಲಿಸಿ. ಅವಳು ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಎಂದು ಹೇಳುತ್ತಾನೆ. ಯೇಸು ಏನು ಹೇಳುತ್ತಿದ್ದಾನೆಂದು ಆ ಹುಡುಗಿಯ ಅಪ್ಪಅಮ್ಮನಿಗೆ ಅರ್ಥವಾಗಿರಲಿಕ್ಕಿಲ್ಲ. ನಂತರ ಯೇಸು ಎಲ್ಲರಿಗೆ ಮನೆಯಿಂದ ಹೊರಗೆ ಹೋಗುವಂತೆ ಹೇಳಿ, ಅಪ್ಪಅಮ್ಮನನ್ನು ಕರೆದುಕೊಂಡು ಹುಡುಗಿಯನ್ನು ಮಲಗಿಸಿದ ಕೋಣೆಗೆ ಹೋಗುತ್ತಾನೆ. ಅವಳ ಕೈಯನ್ನು ಮೃದುವಾಗಿ ಹಿಡಿದು, “ಹುಡುಗಿ, ಎದ್ದೇಳು!” ಎನ್ನುತ್ತಾನೆ. ತಕ್ಷಣ ಅವಳು ಎದ್ದು ಕೂತುಕೊಳ್ಳುತ್ತಾಳೆ, ನಡೆಯಲು ಆರಂಭಿಸುತ್ತಾಳೆ! ಇದನ್ನು ನೋಡಿ ಅವಳ ಅಪ್ಪಅಮ್ಮನಿಗೆ ಹೇಗಾಗಿರಬೇಕು ಯೋಚಿಸಿ! ಸಂತೋಷದಿಂದ ಅತ್ತೇ ಬಿಟ್ಟಿರಬೇಕು! (ಮಾರ್ಕ 5:22-24, 35-42; ಲೂಕ 8:49-56) ಆ ದಿನದಿಂದ ಅವರು ತಮ್ಮ ಪುಟ್ಟ ಮಗಳನ್ನು ನೋಡಿದಾಗೆಲ್ಲ ಯೆಹೋವ ದೇವರು ಯೇಸುವಿನ ಮೂಲಕ ತಮಗೆ ಮಾಡಿದ ಈ ಮಹಾ ಉಪಕಾರವನ್ನು ಖಂಡಿತ ನೆನಸಿಕೊಂಡಿರಬೇಕು. *

10 ಯೇಸು ಯಾರನ್ನು ಪುನರುತ್ಥಾನ ಮಾಡಿದನೋ ಅವರೆಲ್ಲ ಕಾಲಾನಂತರ ತೀರಿಹೋದರು ಎನ್ನುವುದೇನೋ ನಿಜ. ಆದರೆ ಅವರ ಬಗ್ಗೆ ಓದುವುದರಿಂದ ನಮಗೆ ಪ್ರಯೋಜನವಿದೆ. ನಮ್ಮ ಪ್ರಿಯ ಜನರು ಸತ್ತರೂ ದೇವರು ಅವರಿಗೆ ಜೀವ ಕೊಡುತ್ತಾನೆ ಎಂಬ ಭರವಸೆ ಇದರಿಂದ ಸಿಗುತ್ತದೆ. ಸತ್ತವರಿಗೆ ಪುನಃ ಜೀವ ಕೊಡಬೇಕೆಂದು ದೇವರು ಇಷ್ಟಪಡುತ್ತಾನೆ. ಆ ಇಷ್ಟದಂತೆ ಆತನು ಬೇಗನೆ ಮಾಡಲಿದ್ದಾನೆ.

ಪುನರುತ್ಥಾನದ ಘಟನೆಗಳಿಂದ ನಾವು ಕಲಿಯುವ ಪಾಠಗಳು

ಅಪೊಸ್ತಲ ಪೇತ್ರನು ದೊರ್ಕಳನ್ನು ಪುನರುತ್ಥಾನ ಮಾಡಿದನು.—ಅಪೊಸ್ತಲರ ಕಾರ್ಯಗಳು 9:36-42

ಎಲೀಯನು ವಿಧವೆಯ ಮಗನನ್ನು ಪುನರುತ್ಥಾನ ಮಾಡಿದನು.—1 ಅರಸುಗಳು 17:17-24

11. ಪ್ರಸಂಗಿ 9:5⁠ರಲ್ಲಿರುವ ವಿಷಯ ಸತ್ಯವೆಂದು ಲಾಜರನ ಘಟನೆಯಿಂದ ಹೇಗೆ ಗೊತ್ತಾಗುತ್ತದೆ?

11 “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಲಾಜರನ ವಿಷಯದಲ್ಲೂ ಇದು ಸತ್ಯ. (ಪ್ರಸಂಗಿ 9:5) ತೀರಿಹೋಗಿದ್ದ ಲಾಜರನು ಯೇಸು ಹೇಳಿದಂತೆಯೇ ಗಾಢ ನಿದ್ರೆಯಲ್ಲಿದ್ದಂತೆ ಇದ್ದನು. (ಯೋಹಾನ 11:11) ಸಮಾಧಿಯಲ್ಲಿದ್ದಾಗ ಅವನಿಗೆ “ಯಾವ ತಿಳುವಳಿಕೆಯೂ” ಇರಲಿಲ್ಲ.

12. ಲಾಜರನನ್ನು ನಿಜವಾಗಿಯೂ ಪುನರುತ್ಥಾನ ಮಾಡಲಾಗಿತ್ತು ಎಂದು ನಾವು ಹೇಗೆ ಹೇಳಬಹುದು?

12 ಲಾಜರನ ಪುನರುತ್ಥಾನವನ್ನು ಅನೇಕ ಮಂದಿ ನೋಡಿದರು. ಯೇಸುವೇ ಈ ಅದ್ಭುತವನ್ನು ಮಾಡಿದನೆಂದು ಆತನ ವಿರೋಧಿಗಳಿಗೂ ಗೊತ್ತಿತ್ತು. ಲಾಜರನು ಜೀವಂತವಾಗಿ ಇದ್ದದ್ದೇ ಅವನ ಪುನರುತ್ಥಾನವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. (ಯೋಹಾನ 11:47) ಅಷ್ಟೇ ಅಲ್ಲ, ಪುನರುತ್ಥಾನ ಆಗಿದ್ದ ಲಾಜರನನ್ನು ನೋಡಲು ಅನೇಕ ಜನರು ಹೋದರು. ಅವನನ್ನು ನೋಡಿದ ಮೇಲೆ ದೇವರೇ ಯೇಸುವನ್ನು ಕಳುಹಿಸಿದ್ದಾನೆ ಎಂದು ನಂಬಿದರು. ಇದನ್ನು ನೋಡಿ ಯೇಸುವಿನ ವಿರೋಧಿಗಳಿಗೆ ಸಹಿಸಲಾಗಲಿಲ್ಲ. ಹಾಗಾಗಿ ಅವರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಬೇಕೆಂದು ಕಾಯುತ್ತಿದ್ದರು.—ಯೋಹಾನ 11:53; 12:9-11.

13. ಸತ್ತವರನ್ನು ಯೆಹೋವನು ಪುನರುತ್ಥಾನ ಮಾಡುತ್ತಾನೆಂದು ನಾವು ಹೇಗೆ ನಂಬಬಹುದು?

13 “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ” ಪುನರುತ್ಥಾನವಾಗುವರು ಎಂದು ಯೇಸು ಹೇಳಿದ್ದಾನೆ. (ಯೋಹಾನ 5:28) ಇದರರ್ಥ ಯಾರನ್ನೆಲ್ಲಾ ಯೆಹೋವ ದೇವರು ಪುನರುತ್ಥಾನ ಮಾಡಬೇಕೆಂದಿದ್ದಾನೋ ಅವರನ್ನೆಲ್ಲ ತನ್ನ ಸ್ಮರಣೆಯಲ್ಲಿ ಅಂದರೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಒಬ್ಬ ವ್ಯಕ್ತಿಯನ್ನು ಪುನರುತ್ಥಾನ ಮಾಡಬೇಕೆಂದರೆ ಯೆಹೋವನಿಗೆ ಅವನ ಬಗ್ಗೆ ಪ್ರತಿಯೊಂದು ವಿಷಯ ಗೊತ್ತಿರಬೇಕು. ಇದು ಯೆಹೋವನಿಗೆ ಸಾಧ್ಯನಾ? ಆಕಾಶದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳಿವೆ. ಅಂಥ ಒಂದೊಂದು ನಕ್ಷತ್ರವನ್ನು ಸಹ ಯೆಹೋವನು ಹೆಸರಿಡಿದು ಕರೆಯುತ್ತಾನೆಂದು ಬೈಬಲ್‌ ತಿಳಿಸುತ್ತದೆ. (ಯೆಶಾಯ 40:26 ಓದಿ.) ಒಂದೊಂದು ನಕ್ಷತ್ರದ ಹೆಸರನ್ನು ನೆನಪಿಟ್ಟುಕೊಳ್ಳುವ ಯೆಹೋವನಿಗೆ ತಾನು ಪುನರುತ್ಥಾನ ಮಾಡಲು ಬಯಸುವ ಜನರ ಬಗ್ಗೆ ನೆನಪಿಟ್ಟುಕೊಳ್ಳುವುದು ಕಷ್ಟನಾ? ಖಂಡಿತ ಇಲ್ಲ. ಅಷ್ಟೇ ಅಲ್ಲ, ಪ್ರತಿಯೊಂದನ್ನು ಸೃಷ್ಟಿ ಮಾಡಿದವನು ಯೆಹೋವ ದೇವರೇ ಆಗಿರುವುದರಿಂದ ಸತ್ತವರಿಗೆ ಪುನಃ ಜೀವ ಕೊಡುವ ಶಕ್ತಿ ಆತನಿಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

14, 15. ಯೋಬನ ಮಾತುಗಳಿಂದ ಪುನರುತ್ಥಾನದ ಬಗ್ಗೆ ನಾವೇನನ್ನು ಕಲಿಯಬಹುದು?

14 “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂಬ ಪ್ರಶ್ನೆ ನಂಬಿಗಸ್ತ ವ್ಯಕ್ತಿಯಾಗಿದ್ದ ಯೋಬನಿಗೆ ಇತ್ತು. ನಂತರ ಅವನೇ ಯೆಹೋವನಿಗೆ “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು” ಎಂದನು. ಇದರಿಂದ ಯೋಬನಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು ಎಂದು ಗೊತ್ತಾಗುತ್ತದೆ. ಸತ್ತವರನ್ನು ಪುನರುತ್ಥಾನ ಮಾಡಲು ಯೆಹೋವನು ಕಾತರದಿಂದ ಕಾಯುತ್ತಿದ್ದಾನೆಂದು ಯೋಬನಿಗೆ ಚೆನ್ನಾಗಿ ಗೊತ್ತಿತ್ತು.—ಯೋಬ 14:14, 15.

15 ಹಾಗಾದರೆ ನಾವು ಸತ್ತರೆ ನಮಗೂ ಪುನರುತ್ಥಾನ ಆಗುತ್ತದೆ. ಈ ವಿಷಯ ಕೇಳಿ ನಮಗೆ ತುಂಬಾ ಖುಷಿ ಆಗುತ್ತದೆ. ಆದರೆ ‘ಈಗಾಗಲೇ ತೀರಿಹೋಗಿರುವ ನಮ್ಮ ಕುಟುಂಬದವರಿಗೆ ಮತ್ತು ನಮ್ಮ ಸ್ನೇಹಿತರಿಗೆ ಸಹ ಪುನರುತ್ಥಾನ ಆಗುತ್ತದಾ?’ ಎಂದು ನೀವು ಯೋಚಿಸುತ್ತಿರಬಹುದು. ಈಗಾಗಲೇ ತೀರಿಹೋದವರಿಗೂ ಪುನಃ ಜೀವಕೊಡಲು ಯೆಹೋವನು ಇಷ್ಟಪಡುತ್ತಾನೆ. ಇದನ್ನು ತಿಳಿದು ನಮಗೆ ಇನ್ನೂ ಖುಷಿಯಾಗುತ್ತದೆ ಅಲ್ವಾ? ಆದರೆ ಸತ್ತವರಲ್ಲಿ ಯಾರಿಗೆಲ್ಲಾ ಪುನರುತ್ಥಾನ ಆಗುತ್ತದೆ ಮತ್ತು ಪುನರುತ್ಥಾನದ ನಂತರ ಅವರು ಎಲ್ಲಿ ಜೀವಿಸುತ್ತಾರೆ ಎಂದು ತಿಳಿದುಕೊಳ್ಳೋಣ.

‘ಅವರು ಆತನ ಸ್ವರವನ್ನು ಕೇಳಿ ಹೊರಗೆ ಬರುವರು’

16. ಮುಂದೆ ಪುನರುತ್ಥಾನವಾಗಿ ಭೂಮಿಯ ಮೇಲೆ ಜೀವಿಸುವವರಿಗೆ ಎಂಥ ಜೀವನ ಸಿಗಲಿದೆ?

16 ಈಗಾಗಲೇ ನಾವು ನೋಡಿದಂತೆ, ಈ ಹಿಂದೆ ಸತ್ತು ಪುನರುತ್ಥಾನ ಆದಂಥ ಜನರು ಇದೇ ಭೂಮಿಯ ಮೇಲೆ ತಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಪುನಃ ಜೊತೆಸೇರಿದರು. ಮುಂದೆ ಸಹ ಅನೇಕರ ಪುನರುತ್ಥಾನ ಆಗಲಿದೆ. ಅವು ಹಿಂದೆ ನಡೆದ ಪುನರುತ್ಥಾನಗಳಿಗಿಂತ ಉತ್ತಮವಾಗಿರುತ್ತವೆ. ಯಾಕೆಂದರೆ, ಮುಂದೆ ಪುನರುತ್ಥಾನ ಆಗುವವರಿಗೆ ಭೂಮಿಯ ಮೇಲೆ ಸಾವೇ ಇಲ್ಲದೆ ಶಾಶ್ವತವಾಗಿ ಜೀವಿಸುವ ಅವಕಾಶ ಸಿಗಲಿದೆ. ಅಲ್ಲದೇ, ಆಗ ಭೂಮಿಯ ಮೇಲೆ ಇರುವ ಪರಿಸ್ಥಿತಿ ತುಂಬ ಬದಲಾಗಿರುತ್ತದೆ. ಯುದ್ಧಗಳಾಗಲಿ, ಪಾತಕಗಳಾಗಲಿ, ಆರೋಗ್ಯ ಸಮಸ್ಯೆಗಳಾಗಲಿ ಇರುವುದಿಲ್ಲ.

17. ಯಾರಿಗೆಲ್ಲ ಪುನರುತ್ಥಾನ ಆಗುತ್ತದೆ?

17 ಯಾರಿಗೆಲ್ಲಾ ಪುನರುತ್ಥಾನ ಆಗುತ್ತದೆ? ‘ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ತನ್ನ ಸ್ವರವನ್ನು ಕೇಳಿ ಹೊರಗೆ ಬರುವರು’ ಎಂದು ಯೇಸು ಹೇಳಿದನು. (ಯೋಹಾನ 5:28, 29) “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯು ಮತ್ತು ಹೇಡೀಸ್‌ [ಸಮಾಧಿ] ತಮ್ಮೊಳಗಿದ್ದ ಸತ್ತವರನ್ನು ಒಪ್ಪಿಸಿದವು” ಎಂದು ಪ್ರಕಟನೆ 20:13 ತಿಳಿಸುತ್ತದೆ. ಕೋಟ್ಯಂತರ ಜನರು ಪುನಃ ಜೀವಿಸಲಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ. ಅಪೊಸ್ತಲ ಪೌಲನು “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ಹೇಳಿದನು. (ಅಪೊಸ್ತಲರ ಕಾರ್ಯಗಳು 24:15 ಓದಿ.) ಆತನ ಈ ಮಾತಿನ ಅರ್ಥವೇನಾಗಿತ್ತು?

ಸತ್ತವರು ಪುನರುತ್ಥಾನವಾಗಿ ಪರದೈಸಿನಲ್ಲಿ ತಮ್ಮ ಪ್ರೀತಿಯ ಜನರ ಜೊತೆ ಜೀವಿಸುತ್ತಾರೆ

18. ಪುನರುತ್ಥಾನವಾಗುವ “ನೀತಿವಂತರ” ಗುಂಪಿನಲ್ಲಿ ಯಾರೆಲ್ಲ ಸೇರಿದ್ದಾರೆ?

18 ಯೇಸು ಭೂಮಿಗೆ ಬರುವ ಮುಂಚೆ ಜೀವಿಸಿದ್ದ ಯೆಹೋವನ ನಂಬಿಗಸ್ತ ಸೇವಕರು ಈ ‘ನೀತಿವಂತರ’ ಗುಂಪಿನಲ್ಲಿ ಸೇರಿದ್ದಾರೆ. ಉದಾಹರಣೆಗೆ, ನೋಹ, ಅಬ್ರಹಾಮ, ಸಾರ, ಮೋಶೆ, ರೂತಳು ಮತ್ತು ಎಸ್ತೇರಳು. ಇವರೆಲ್ಲರೂ ಪುನರುತ್ಥಾನವಾಗಿ ಇದೇ ಭೂಮಿಯಲ್ಲಿ ಜೀವಿಸಲಿದ್ದಾರೆ. ಇಂಥ ಸ್ತ್ರೀ, ಪುರುಷರಲ್ಲಿ ಕೆಲವರ ಬಗ್ಗೆ ಇಬ್ರಿಯ 11 ನೇ ಅಧ್ಯಾಯದಲ್ಲಿ ನೀವು ಓದಬಹುದು. ಆದರೆ ನಮ್ಮ ದಿನಗಳಲ್ಲಿರುವ ಯೆಹೋವನ ನಂಬಿಗಸ್ತ ಸೇವಕರ ಬಗ್ಗೆ ಏನು? ಅವರು ಸಹ “ನೀತಿವಂತರ” ಗುಂಪಿಗೆ ಸೇರುತ್ತಾರೆ. ಒಂದುವೇಳೆ ಅವರು ತೀರಿಹೋದರೆ ಅವರಿಗೂ ಪುನರುತ್ಥಾನವಾಗುತ್ತದೆ.

19. (ಎ) ‘ಅನೀತಿವಂತರ’ ಗುಂಪಿನಲ್ಲಿ ಯಾರಿದ್ದಾರೆ? (ಬಿ) ಯೆಹೋವ ದೇವರು ಅವರಿಗೆ ಯಾವ ಅವಕಾಶ ಕೊಡುತ್ತಾನೆ?

19 ಯೆಹೋವ ದೇವರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗದ ಕೋಟ್ಯಂತರ ಜನರು ‘ಅನೀತಿವಂತರ’ ಗುಂಪಿನಲ್ಲಿ ಸೇರಿದ್ದಾರೆ. ಅವರಲ್ಲಿ ಎಷ್ಟೋ ಜನರು ತೀರಿಹೋಗಿರುವುದಾದರೂ ಯೆಹೋವ ದೇವರು ಅವರನ್ನು ಮರೆತಿಲ್ಲ. ಹಾಗಾಗಿ, ಅವರನ್ನೂ ಸಹ ಪುನರುತ್ಥಾನ ಮಾಡುತ್ತಾನೆ ಮತ್ತು ಅವರಿಗೆ ಆತನ ಬಗ್ಗೆ ಕಲಿಯುವ, ಆತನ ಆರಾಧಕರಾಗುವ ಅವಕಾಶ ಕೊಡುತ್ತಾನೆ.

20. ಕೆಲವರಿಗೆ ಪುನರುತ್ಥಾನ ಆಗುವುದಿಲ್ಲ ಯಾಕೆ?

20 ಹಾಗಾದರೆ ತೀರಿಹೋಗಿರುವ ಎಲ್ಲರಿಗೂ ಪುನರುತ್ಥಾನ ಆಗುತ್ತದಾ? ಇಲ್ಲ. ಕೆಲವರಿಗೆ ಪುನರುತ್ಥಾನ ಆಗುವುದಿಲ್ಲ ಎಂದು ಯೇಸು ಹೇಳಿದನು. (ಲೂಕ 12:5) ಒಬ್ಬ ವ್ಯಕ್ತಿಯನ್ನು ಪುನರುತ್ಥಾನ ಮಾಡಬೇಕಾ, ಬೇಡವಾ ಎಂದು ಯಾರು ನಿರ್ಣಯ ಮಾಡುತ್ತಾರೆ? ಈ ವಿಷಯದಲ್ಲಿ ಮಹಾ ನ್ಯಾಯಾಧೀಶನಾದ ಯೆಹೋವ ದೇವರದ್ದೇ ಅಂತಿಮ ನಿರ್ಣಯ. ಆದರೆ ‘ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿರುವ’ ಅಧಿಕಾರವನ್ನು ಆತನು ಯೇಸುವಿಗೆ ಕೊಟ್ಟಿದ್ದಾನೆ. (ಅಪೊಸ್ತಲರ ಕಾರ್ಯಗಳು 10:42) ಒಬ್ಬ ದುಷ್ಟ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅವನು ಪುನರುತ್ಥಾನಕ್ಕೆ ಯೋಗ್ಯನಲ್ಲ ಎಂದು ಯೇಸು ತೀರ್ಪು ಮಾಡುತ್ತಾನೆ.—ಟಿಪ್ಪಣಿ 18⁠ನ್ನು ನೋಡಿ.

ಸ್ವರ್ಗಕ್ಕೆ ಹೋಗುವವರು

21, 22. (ಎ) ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುವುದು ಎಂದರೇನು? (ಬಿ) ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದವರಲ್ಲಿ ಮೊದಲನೆಯವನು ಯಾರು?

21 ಕೆಲವು ಜನರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಸಹ ಬೈಬಲ್‌ ಕಲಿಸುತ್ತದೆ. ಹೀಗೆ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುವ ಜನರಿಗೆ ದೇವರು ಮಾನವ ದೇಹವನ್ನು ಕೊಡುವುದಿಲ್ಲ. ಬದಲಿಗೆ ಕಣ್ಣಿಗೆ ಕಾಣದ ಆತ್ಮಿಕ ದೇಹವನ್ನು ಕೊಡುತ್ತಾನೆ.

22 ಈ ರೀತಿಯ ಪುನರುತ್ಥಾನ ಆದವರಲ್ಲಿ ಯೇಸುವೇ ಮೊದಲನೆಯವನು. (ಯೋಹಾನ 3:13) ಆತನು ಸತ್ತು ಮೂರು ದಿನಗಳಾದ ನಂತರ ಯೆಹೋವ ದೇವರು ಆತನಿಗೆ ಪುನಃ ಜೀವಕೊಟ್ಟನು. (ಕೀರ್ತನೆ 16:10; ಅಪೊಸ್ತಲರ ಕಾರ್ಯಗಳು 13:34, 35) ಆಗ ಆತನಿಗೆ ಮಾನವ ದೇಹವನ್ನು ಕೊಡಲಿಲ್ಲ. ಹಾಗಾಗಿಯೇ ಅಪೊಸ್ತಲ ಪೇತ್ರನು, ಯೇಸು “ಶರೀರದಲ್ಲಿ ಕೊಲ್ಲಲ್ಪಟ್ಟನು, ಆದರೆ ಆತ್ಮಜೀವಿಯಾಗಿ ಬದುಕುವಂತೆ ಮಾಡಲ್ಪಟ್ಟನು” ಎಂದು ಬರೆದನು. (1 ಪೇತ್ರ 3:18) ಯೇಸು ಒಬ್ಬ ಬಲಿಷ್ಠ ಆತ್ಮಜೀವಿಯಾಗಿ ಪುನರುತ್ಥಾನವಾದನು! (1 ಕೊರಿಂಥ 15:3-6) ಆದರೆ, ಹೀಗೆ ಆತ್ಮಜೀವಿಯಾಗಿ ಪುನರುತ್ಥಾನ ಆದವನು ಯೇಸು ಒಬ್ಬನೇ ಅಲ್ಲ ಎಂದು ಬೈಬಲ್‌ ಹೇಳುತ್ತದೆ.

23, 24. (ಎ) ಯೇಸು ಯಾರನ್ನು ‘ಚಿಕ್ಕ ಹಿಂಡು’ ಎಂದು ಕರೆದನು? (ಬಿ) ಅವರ ಸಂಖ್ಯೆ ಎಷ್ಟು?

23 ಯೇಸು ಸಾಯುವ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ “ನಾನು ನಿಮಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ” ಎಂದು ಹೇಳಿದನು. (ಯೋಹಾನ 14:2) ಇದರಿಂದ, ಆತನ ಹಿಂಬಾಲಕರಲ್ಲೂ ಕೆಲವರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ನಮಗೆ ಗೊತ್ತಾಗುತ್ತದೆ. ಆದರೆ ಎಷ್ಟು ಜನರು ಹೋಗುತ್ತಾರೆ? ಯೇಸು ಅವರನ್ನು ‘ಚಿಕ್ಕ ಹಿಂಡು’ ಎಂದು ಕರೆದಿರುವುದರಿಂದ ಅವರು ಸ್ವಲ್ಪವೇ ಮಂದಿಯಾಗಿರಬೇಕು. (ಲೂಕ 12:32) ಅಪೊಸ್ತಲ ಯೋಹಾನನು, ಯೇಸು “ಚೀಯೋನ್‌ ಪರ್ವತದ ಮೇಲೆ ನಿಂತಿರುವುದನ್ನು ನಾನು ನೋಡಿದೆನು; ಅವನೊಂದಿಗೆ ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿ ಇದ್ದರು” ಎಂದು ಬರೆದನು. ಅವರ ಸಂಖ್ಯೆ 1,44,000 ಎಂದು ಇದರಿಂದ ಗೊತ್ತಾಗುತ್ತದೆ.—ಪ್ರಕಟನೆ 14:1.

24 ಈ 1,44,000 ಮಂದಿಯನ್ನು ದೇವರು ಯಾವಾಗ ಪುನರುತ್ಥಾನ ಮಾಡುತ್ತಾನೆ? ಯೇಸು ಸ್ವರ್ಗದಲ್ಲಿ ಆಳಲು ಶುರುಮಾಡಿದ ಮೇಲೆ ಇವರ ಪುನರುತ್ಥಾನ ಆರಂಭವಾಗುತ್ತದೆ ಎಂದು ಬೈಬಲ್‌ ತಿಳಿಸುತ್ತದೆ. (1 ಕೊರಿಂಥ 15:23) ಈಗಾಗಲೇ ಯೇಸು ಸ್ವರ್ಗದಲ್ಲಿ ಆಳಲು ಶುರುಮಾಡಿದ್ದಾನೆ. ಹಾಗಾಗಿ 1,44,000 ಮಂದಿಯಲ್ಲಿ ಅನೇಕರು ಈಗಾಗಲೇ ಪುನರುತ್ಥಾನವಾಗಿ ಸ್ವರ್ಗದಲ್ಲಿದ್ದಾರೆ. ಅವರಲ್ಲಿ ಉಳಿದವರು ತೀರಿಹೋದ ತಕ್ಷಣ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಇವರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಪುನರುತ್ಥಾನವಾದ ಮೇಲೆ ಸುಂದರ ತೋಟವಾಗಲಿರುವ ಇದೇ ಭೂಮಿಯ ಮೇಲೆ ಜೀವಿಸಲಿದ್ದಾರೆ.

25. ಮುಂದಿನ ಅಧ್ಯಾಯದಲ್ಲಿ ನಾವೇನನ್ನು ಕಲಿಯಲಿದ್ದೇವೆ?

25 ಸಾವಿನ ಸೆರೆಯಲ್ಲಿರುವ ಅನೇಕರನ್ನು ಯೆಹೋವ ದೇವರು ಬಿಡಿಸಲಿದ್ದಾನೆ. ಸಾವು ಅನ್ನುವುದೇ ಇಲ್ಲದೆ ಹೋಗಲಿದೆ! (ಯೆಶಾಯ 25:8 ಓದಿ.) ಆದರೆ ಯಾರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೋ ಅವರು ಅಲ್ಲಿ ಹೋಗಿ ಏನು ಮಾಡುತ್ತಾರೆ? ಅವರು ಯೇಸುವಿನೊಂದಿಗೆ ದೇವರ ರಾಜ್ಯದ ರಾಜರಾಗಿ ಆಳುತ್ತಾರೆ ಎಂದು ಬೈಬಲ್‌ ವಿವರಿಸುತ್ತದೆ. ದೇವರ ರಾಜ್ಯ ಎಂದರೇನು? ಇದರ ಬಗ್ಗೆ ನಾವು ಮುಂದಿನ ಅಧ್ಯಾಯದಲ್ಲಿ ನೋಡೋಣ.

^ ಪ್ಯಾರ. 9 ಇನ್ನೂ ಅನೇಕ ಪುನರುತ್ಥಾನಗಳ ಬಗ್ಗೆ ಬೈಬಲಿನಲ್ಲಿದೆ. ಅದರಲ್ಲಿ ಚಿಕ್ಕವರು, ದೊಡ್ಡವರು, ಪುರುಷರು, ಸ್ತ್ರೀಯರು, ಇಸ್ರಾಯೇಲ್ಯರು, ವಿದೇಶೀಯರು ಇದ್ದಾರೆ. ಆ ಘಟನೆಗಳ ಬಗ್ಗೆ ಮುಂದೆ ಕೊಟ್ಟಿರುವ ವಚನಗಳಲ್ಲಿ ಓದಿ: 1 ಅರಸುಗಳು 17:17-24; 2 ಅರಸುಗಳು 4:32-37; 13:20, 21; ಮತ್ತಾಯ 28:5-7; ಲೂಕ 7:11-17; 8:40-56; ಅಪೊಸ್ತಲರ ಕಾರ್ಯಗಳು 9:36-42; 20:7-12.