ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 70

ಯೋನ ಮತ್ತು ದೊಡ್ಡ ಮೀನು

ಯೋನ ಮತ್ತು ದೊಡ್ಡ ಮೀನು

ನೀರಿನಲ್ಲಿ ಮುಳುಗುತ್ತಿರುವ ಆ ಮನುಷ್ಯನನ್ನು ನೋಡಿರಿ! ಅವನು ತುಂಬ ಆಪತ್ತಿನಲ್ಲಿದ್ದಾನೆ ಅಲ್ಲವೇ? ಆ ಮೀನು ಅವನನ್ನು ಇನ್ನೇನು ನುಂಗಲಿಕ್ಕಿದೆ! ಈ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆಯೇ? ಅವನ ಹೆಸರು ಯೋನ. ಅವನು ಇಂಥ ಒಂದು ತೊಂದರೆಯೊಳಗೆ ಸಿಕ್ಕಿಬಿದ್ದದ್ದು ಹೇಗೆಂದು ನಾವು ನೋಡೋಣ.

ಯೋನನು ಯೆಹೋವನ ಪ್ರವಾದಿ. ಪ್ರವಾದಿ ಎಲೀಷನು ಮರಣಪಟ್ಟು ಸ್ವಲ್ಪ ಕಾಲವಾದ ನಂತರ ಯೆಹೋವನು ಯೋನನಿಗೆ ಹೇಳುವುದು: ‘ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗು. ಅಲ್ಲಿಯ ಜನರ ಕೆಟ್ಟತನವು ಬಹು ಹೆಚ್ಚಾಗಿದೆ. ಅದರ ಕುರಿತು ನೀನು ಅವರಿಗೆ ಎಚ್ಚರಿಸಬೇಕು.’

ಆದರೆ ಯೋನನಿಗೆ ಅಲ್ಲಿಗೆ ಹೋಗಲು ಮನಸ್ಸಿಲ್ಲ. ಆದುದರಿಂದ ಅವನು ನಿನೆವೆಯಿಂದ ವಿರುದ್ಧ ದಿಕ್ಕಿಗೆ ಹೋಗುವ ಹಡಗನ್ನು ಹತ್ತುತ್ತಾನೆ. ಯೋನನು ಹೀಗೆ ಓಡಿಹೋಗುವುದನ್ನು ಯೆಹೋವನು ಮೆಚ್ಚುವುದಿಲ್ಲ. ಆದುದರಿಂದ ಅವನು ಒಂದು ದೊಡ್ಡ ಬಿರುಗಾಳಿಯು ಬೀಸುವಂತೆ ಮಾಡುತ್ತಾನೆ. ಅದು ಎಷ್ಟು ಭಯಂಕರವಾಗಿದೆಯೆಂದರೆ ಹಡಗು ಮುಳುಗಿಹೋಗುವ ಅಪಾಯದಲ್ಲಿದೆ. ಅದರಲ್ಲಿರುವ ನಾವಿಕರು ಬಹಳವಾಗಿ ಹೆದರುತ್ತಾರೆ. ಅವರು ಸಹಾಯಕ್ಕಾಗಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಡುತ್ತಾರೆ.

ಕೊನೆಗೆ ಯೋನನು ‘ನಾನು ಯೆಹೋವನನ್ನು ಆರಾಧಿಸುತ್ತೇನೆ, ಭೂಪರಲೋಕಗಳನ್ನು ಸೃಷ್ಟಿಸಿದ ದೇವರು ಆತನೇ. ಯೆಹೋವನು ನನಗೆ ಏನು ಹೇಳಿದನೋ ಅದನ್ನು ಮಾಡುವುದನ್ನು ಬಿಟ್ಟು ಓಡಿಹೋಗುತ್ತಿದ್ದೇನೆ’ ಎಂದು ಅವರಿಗೆ ಹೇಳಿಬಿಡುತ್ತಾನೆ. ಆದುದರಿಂದ ನಾವಿಕರು, ‘ಬಿರುಗಾಳಿಯನ್ನು ಶಾಂತಗೊಳಿಸಲು ನಾವು ನಿನಗೇನು ಮಾಡಬೇಕು?’ ಎಂದು ಅವನನ್ನು ಕೇಳುತ್ತಾರೆ.

‘ನನ್ನನ್ನು ಸಮುದ್ರಕ್ಕೆ ಎಸೆಯಿರಿ, ಆಗ ಸಮುದ್ರವು ಶಾಂತವಾಗುವುದು’ ಎಂದು ಹೇಳುತ್ತಾನೆ ಯೋನ. ಇದನ್ನು ಮಾಡಲು ನಾವಿಕರ ಮನಸ್ಸು ಒಪ್ಪುವುದಿಲ್ಲ. ಆದರೆ ಬಿರುಗಾಳಿ ಇನ್ನೂ ಹೆಚ್ಚುತ್ತಾ ಹೆಚ್ಚುತ್ತಾ ಹೋಗುವುದರಿಂದ ಕೊನೆಗೆ ಅವರು ಅವನನ್ನು ಎತ್ತಿ ಸಮುದ್ರಕ್ಕೆ ಎಸೆಯುತ್ತಾರೆ. ಆ ಕೂಡಲೆ ಬಿರುಗಾಳಿ ನಿಂತು ಸಮುದ್ರವು ಶಾಂತವಾಗುತ್ತದೆ.

ಯೋನನು ನೀರಿನೊಳಗೆ ಮುಳುಗುತ್ತಿರುವಾಗ ಆ ದೊಡ್ಡ ಮೀನು ಅವನನ್ನು ನುಂಗಿಬಿಡುತ್ತದೆ. ಆದರೆ ಅವನು ಸಾಯುವುದಿಲ್ಲ. ಮೂರು ದಿನ ಹಗಲೂ ರಾತ್ರಿ ಆ ಮೀನಿನ ಹೊಟ್ಟೆಯೊಳಗೇ ಇರುತ್ತಾನೆ. ಯೆಹೋವನಿಗೆ ವಿಧೇಯನಾಗಿ ನಿನೆವೆಗೆ ಹೋಗದೆ ಇದ್ದುದಕ್ಕಾಗಿ ಯೋನನು ಅತಿ ವ್ಯಸನಪಡುತ್ತಾನೆ. ಆದುದರಿಂದ ಅವನೇನು ಮಾಡುತ್ತಾನೆಂದು ನಿಮಗೆ ತಿಳಿದಿದೆಯೇ?

ಯೋನನು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತಾನೆ. ಆಗ ಮೀನು ಯೋನನನ್ನು ಒಣನೆಲದ ಮೇಲೆ ಕಾರಿಬಿಡುವಂತೆ ಯೆಹೋವನು ಅಪ್ಪಣೆಕೊಡುತ್ತಾನೆ. ಆಮೇಲೆ ಯೋನನು ನಿನೆವೆಗೆ ಹೋಗುತ್ತಾನೆ. ಯೆಹೋವನು ಹೇಳುವ ಯಾವುದೇ ವಿಷಯವನ್ನು ನಾವು ಮಾಡುವುದು ಎಷ್ಟು ಪ್ರಾಮುಖ್ಯವೆಂದು ಇದು ನಮಗೆ ಕಲಿಸುವುದಿಲ್ಲವೇ?

ಬೈಬಲಿನ ಯೋನ ಪುಸ್ತಕ.