ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 29

ಯೆಹೋವನು ಯೆಹೋಶುವನನ್ನು ಆರಿಸಿದನು

ಯೆಹೋವನು ಯೆಹೋಶುವನನ್ನು ಆರಿಸಿದನು

ಮೋಶೆ ಇಸ್ರಾಯೇಲ್ಯರನ್ನು ಅನೇಕ ವರ್ಷಗಳವರೆಗೆ ಮುನ್ನಡೆಸಿದನು. ಅವನಿಗೆ ತುಂಬ ವಯಸ್ಸಾಗಿತ್ತು. ಆಗ ಯೆಹೋವನು ಮೋಶೆಗೆ ‘ನೀನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸುವುದಿಲ್ಲ. ಆದರೆ ನೀನು ಆ ದೇಶವನ್ನು ನೋಡಬಹುದು’ ಎಂದನು. ಅದಕ್ಕೆ ಮೋಶೆ ಇಸ್ರಾಯೇಲ್ಯರನ್ನು ಮುನ್ನಡೆಸಲು ಒಬ್ಬ ಹೊಸ ನಾಯಕನನ್ನು ಆರಿಸಲು ಯೆಹೋವನನ್ನು ಕೇಳಿಕೊಂಡನು. ಆಗ ಯೆಹೋವನು ‘ಯೆಹೋಶುವನ ಹತ್ತಿರ ಹೋಗು. ನಾನು ಅವನನ್ನು ನಾಯಕನಾಗಿ ಆರಿಸಿದ್ದೇನೆ ಎಂದು ಅವನಿಗೆ ಹೇಳು’ ಅಂದನು.

ಮೋಶೆ ಇಸ್ರಾಯೇಲ್ಯರ ಹತ್ತಿರ ಬಂದು ‘ನನ್ನ ಸಾವು ಹತ್ತಿರವಿದೆ. ಹಾಗಾಗಿ ನಿಮ್ಮನ್ನು ವಾಗ್ದತ್ತ ದೇಶಕ್ಕೆ ನಡೆಸಲು ಯೆಹೋವನು ಯೆಹೋಶುವನನ್ನು ಆರಿಸಿದ್ದಾನೆ’ ಎಂದು ಹೇಳಿದನು. ಆಮೇಲೆ ಮೋಶೆ ಯೆಹೋಶುವನಿಗೆ ‘ಭಯಪಡಬೇಡ. ಯೆಹೋವನು ನಿನಗೆ ಸಹಾಯ ಮಾಡುತ್ತಾನೆ’ ಎಂದನು. ಇದಾದ ನಂತರ ಮೋಶೆ ನೆಬೋ ಬೆಟ್ಟವನ್ನು ಹತ್ತಿದನು. ಅಲ್ಲಿ ಯೆಹೋವನು ಅವನಿಗೆ ಅಬ್ರಹಾಮ, ಇಸಾಕ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ ದೇಶವನ್ನು ತೋರಿಸಿದನು. ಮೋಶೆ ಸಾಯುವಾಗ ಅವನಿಗೆ 120 ವರ್ಷ ವಯಸ್ಸಾಗಿತ್ತು.

ಯೆಹೋವನು ಯೆಹೋಶುವನಿಗೆ ‘ಯೊರ್ದನ್‌ ನದಿಯನ್ನು ದಾಟಿ ಕಾನಾನಿಗೆ ಹೋಗು. ನಾನು ಮೋಶೆಗೆ ಸಹಾಯ ಮಾಡಿದ ಹಾಗೆ ನಿನಗೂ ಸಹಾಯ ಮಾಡುತ್ತೇನೆ. ತಪ್ಪದೇ ಪ್ರತಿದಿನ ಧರ್ಮಶಾಸ್ತ್ರವನ್ನು ಓದು. ಭಯಪಡಬೇಡ, ಧೈರ್ಯವಾಗಿರು. ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡು’ ಅಂದನು.

ಯೆಹೋಶುವ ಯೆರಿಕೋ ಪಟ್ಟಣಕ್ಕೆ ಇಬ್ಬರು ಗೂಢಚಾರರನ್ನು ಕಳುಹಿಸಿದ. ಅಲ್ಲಿ ಏನಾಯಿತು ಎಂದು ಮುಂದಿನ ಕಥೆಯಲ್ಲಿ ಕಲಿಯುತ್ತೇವೆ. ಅವರು ವಾಪಸ್ಸು ಬಂದು ‘ಕಾನಾನಿಗೆ ಹೋಗಲು ಇದೇ ಸರಿಯಾದ ಸಮಯ’ ಎಂದು ಹೇಳಿದರು. ಮಾರನೇ ದಿನ ಯೆಹೋಶುವ ಇಸ್ರಾಯೇಲ್ಯರಿಗೆ ಗುಡಾರಗಳನ್ನು ಬಿಚ್ಚಿ ಸಿದ್ಧರಾಗಲು ಹೇಳಿದನು. ಮೊದಲು ಮಂಜೂಷವನ್ನು ಹೊತ್ತುಕೊಂಡಿರುವ ಯಾಜಕರನ್ನು ಯೊರ್ದನ್‌ ನದಿಯ ಹತ್ತಿರ ಕಳುಹಿಸಿದನು. ನದಿ ತುಂಬಿ ಹರಿಯುತ್ತಿತ್ತು. ಆದರೆ ಯಾಜಕರು ನೀರಿನಲ್ಲಿ ಕಾಲಿಡುತ್ತಿದ್ದ ಹಾಗೆ ನದಿ ಹರಿಯುವುದು ನಿಂತು ಹೋಗಿ ಒಣನೆಲ ಕಾಣಿಸಿತು! ಯಾಜಕರು ನದಿಯ ಮಧ್ಯದ ವರೆಗೆ ನಡೆದುಕೊಂಡು ಹೋಗಿ ಇಸ್ರಾಯೇಲ್ಯರೆಲ್ಲರೂ ಆಚೆ ದಡವನ್ನು ಸೇರುವ ತನಕ ಅಲ್ಲೇ ನಿಂತಿದ್ದರು. ಈ ಅದ್ಭುತವನ್ನು ನೋಡಿದಾಗ ಯೆಹೋವನು ಕೆಂಪು ಸಮುದ್ರವನ್ನು ಎರಡು ಭಾಗ ಮಾಡಿದ್ದು ಇಸ್ರಾಯೇಲ್ಯರಿಗೆ ಜ್ಞಾಪಕ ಬಂದಿರಬಹುದು. ಅಲ್ವಾ?

ಅನೇಕ ವರ್ಷಗಳ ನಂತರ ಕೊನೆಗೂ ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಬಂದರು. ಇಲ್ಲಿ ಅವರು ತಮಗಾಗಿ ಮನೆಯನ್ನು ಹಾಗೂ ಪಟ್ಟಣಗಳನ್ನು ಕಟ್ಟಬಹುದಿತ್ತು. ಹೊಲ ಗದ್ದೆಗಳನ್ನು, ದ್ರಾಕ್ಷೀತೋಟಗಳನ್ನು ಮಾಡಿ ಮರಗಿಡಗಳನ್ನು ನೆಟ್ಟರು. ಕಾನಾನ್‌ ನಿಜಕ್ಕೂ ಹಾಲು ಜೇನು ಹರಿಯುತ್ತಿದ್ದ ದೇಶವಾಗಿತ್ತು. ಅಂದರೆ ಆ ದೇಶ ತುಂಬಾ ಸಮೃದ್ಧವಾಗಿತ್ತು.

‘ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸುವನು.’—ಯೆಶಾಯ 58:11