ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 52

ಯೆಹೋವನ ಅಗ್ನಿಮಯ ಸೈನ್ಯ

ಯೆಹೋವನ ಅಗ್ನಿಮಯ ಸೈನ್ಯ

ಸಿರಿಯದ ರಾಜನಾದ ಬೆನ್ಹದದನು ಇಸ್ರಾಯೇಲಿನ ಮೇಲೆ ಆಗಾಗ ಯುದ್ಧಕ್ಕೆ ಬರುತ್ತಿದ್ದ. ಆದರೆ ಎಲೀಷ ಅವನ ಒಳಸಂಚಿನ ಬಗ್ಗೆ ಇಸ್ರಾಯೇಲಿನ ರಾಜನಿಗೆ ಮೊದಲೇ ತಿಳಿಸುತ್ತಿದ್ದದ್ದರಿಂದ ಅವನು ಬೆನ್ಹದದನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ. ಆದ್ದರಿಂದ ಬೆನ್ಹದದ ಎಲೀಷನನ್ನು ಹಿಡಿಸಲು ನಿರ್ಧರಿಸಿದ. ಎಲೀಷ ದೋತಾನಿನಲ್ಲಿದ್ದಾನೆ ಎಂದು ಗೊತ್ತಾದಾಗ ಅವನನ್ನು ಹಿಡಿದುಕೊಂಡು ಬರಲು ತನ್ನ ಸೈನ್ಯವನ್ನು ಕಳುಹಿಸಿದ.

ಸಿರಿಯದ ಸೈನ್ಯ ರಾತ್ರಿ ದೋತಾನಿಗೆ ಬಂದು ಮುಟ್ಟಿತು. ಮಾರನೇ ದಿನ ಬೆಳಗ್ಗೆ ಎಲೀಷನ ಸೇವಕ ಹೊರಗೆ ಬಂದಾಗ ಇಡೀ ಪಟ್ಟಣವನ್ನು ಸಿರಿಯದ ಸೈನ್ಯ ಮುತ್ತಿಗೆ ಹಾಕಿತ್ತು. ಅವನು ಭಯದಿಂದ ಕೂಗುತ್ತಾ ‘ಎಲೀಷ, ನಾವೀಗ ಏನು ಮಾಡೋದು?’ ಅಂದ. ಆಗ ಎಲೀಷ ‘ಅವರ ಕಡೆಯವರಿಗಿಂತ ನಮ್ಮ ಕಡೆಯವರು ಹೆಚ್ಚಿದ್ದಾರೆ’ ಎಂದ. ಅದೇ ಕ್ಷಣದಲ್ಲಿ ಬೆಟ್ಟದ ಸುತ್ತ ನಿಂತಿದ್ದ ಅಗ್ನಿಮಯವಾದ ರಥ ಮತ್ತು ಕುದುರೆಗಳು ಸೇವಕನಿಗೆ ಕಾಣುವಂತೆ ಯೆಹೋವನು ಮಾಡಿದನು.

ಸಿರಿಯದ ಸೈನಿಕರು ಎಲೀಷನನ್ನು ಹಿಡಿಯಲು ಬಂದಾಗ ಅವನು ‘ಯೆಹೋವನೇ, ದಯವಿಟ್ಟು ಇವರನ್ನು ಕುರುಡರನ್ನಾಗಿ ಮಾಡು’ ಎಂದು ಪ್ರಾರ್ಥಿಸಿದ. ಆಗ ಅವರಿಗೆ ಕಣ್ಣು ಕಾಣಿಸುತ್ತಿದ್ದರೂ ಸಹ ತಾವು ಎಲ್ಲಿದ್ದೇವೆ ಅಂತ ಗೊತ್ತಾಗಲಿಲ್ಲ. ಎಲೀಷ ಸೈನಿಕರಿಗೆ ‘ನೀವು ದಾರಿ ತಪ್ಪಿ ಬಂದಿದ್ದೀರ. ನನ್ನ ಹಿಂದೆ ಬನ್ನಿ. ನೀವು ಹುಡುಕುತ್ತಿರೋ ವ್ಯಕ್ತಿಯನ್ನ ನಿಮಗೆ ತೋರಿಸುತ್ತೇನೆ’ ಅಂದ. ಅವರು ಎಲೀಷನ ಜೊತೆಗೆ ಇಸ್ರಾಯೇಲಿನ ರಾಜನಿದ್ದ ಸಮಾರ್ಯಕ್ಕೆ ಬಂದರು.

ಅವರಿಗೆ ತಾವು ಎಲ್ಲಿದ್ದೇವೆ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ‘ನಾನು ಇವರನ್ನು ಸಾಯಿಸಬೇಕಾ?’ ಎಂದು ಇಸ್ರಾಯೇಲಿನ ರಾಜ ಎಲೀಷನಿಗೆ ಕೇಳಿದ. ಆಗ ಎಲೀಷ ಇದೇ ಒಳ್ಳೇ ಅವಕಾಶ ಅಂತ ತನ್ನನ್ನು ಹಿಡಿಯೋಕೆ ಬಂದವರ ಮೇಲೆ ಸೇಡು ತೀರಿಸಿಕೊಂಡನಾ? ಇಲ್ಲ. ಅವನು ‘ಇವರನ್ನು ಕೊಲ್ಲಬೇಡ. ಇವರಿಗೆ ಊಟ ಕೊಡು. ಆಮೇಲೆ ಅವರನ್ನು ಕಳುಹಿಸು’ ಎಂದ. ಆದ್ದರಿಂದ ರಾಜ ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ನಂತರ ಮನೆಗೆ ಕಳುಹಿಸಿದ.

“ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.”—1 ಯೋಹಾನ 5:14