ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

ಯೇಸುವಿನ ಶಿಷ್ಯರು ಯಾರು?

ಯೇಸುವಿನ ಶಿಷ್ಯರು ಯಾರು?

ಈ ವ್ಯಕ್ತಿ ಯಾರು ಮತ್ತು ಇವನು ಹೇಗೆ ಯೇಸುವಿನ ಶಿಷ್ಯನಾದನು?

ದೇವರ ಅತ್ಯುತ್ತಮ ಸೇವಕನು ಯಾರು ಗೊತ್ತಾ?— ಯೇಸು ಕ್ರಿಸ್ತನೇ. ಅವನಂಥ ದೇವರ ಸೇವಕ ಮಾನವ ಇತಿಹಾಸದಲ್ಲೇ ಇರಲಿಲ್ಲ. ಯೇಸುವಿನಂತೆ ನಾವು ಸಹ ಉತ್ತಮ ಸೇವಕರಾಗಲು ಸಾಧ್ಯನಾ?— ಖಂಡಿತ. ಯೇಸು ದೇವರ ಸೇವೆಮಾಡಿದ ರೀತಿ ಬೈಬಲ್‌ನಲ್ಲಿ ಇದೆ. ಅವನ ಆ ಮಾದರಿಯನ್ನು ಅನುಸರಿಸಿದರೆ ನಾವು ಸಹ ದೇವರ ಉತ್ತಮ ಸೇವಕರಾಗಬಹುದು. ತನ್ನನ್ನು ಅನುಸರಿಸಿ ತನ್ನ ಶಿಷ್ಯರಾಗುವಂತೆ ಯೇಸುವೇ ನಮ್ಮನ್ನು ಆಮಂತ್ರಿಸುತ್ತಾನೆ.

ಯೇಸುವಿನ ಶಿಷ್ಯರಾಗಬೇಕಾದರೆ ಏನು ಮಾಡಬೇಕು?— ಅನೇಕ ವಿಷಯಗಳನ್ನು ನಾವು ಮಾಡಬೇಕು. ಮೊದಲನೆಯದಾಗಿ, ನಾವು ಯೇಸುವಿನಿಂದ ಕಲಿತುಕೊಳ್ಳಬೇಕು. ಕಲಿತರೆ ಸಾಕಾ? ಇಲ್ಲ. ಅವನು ಏನು ಹೇಳುತ್ತಾನೋ ಅದನ್ನು ನಾವು ಮನಸ್ಸಾರೆ ನಂಬಬೇಕು. ಆಗಲೇ ಅವನು ಹೇಳಿದ್ದನ್ನೆಲ್ಲಾ ಮಾಡಲು ಸುಲಭವಾಗತ್ತೆ.

ಅನೇಕರು ತಾವು ಯೇಸುವನ್ನು ನಂಬುತ್ತೇವೆ ಅಂತ ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿ ಅವರೆಲ್ಲರೂ ಯೇಸುವಿನ ಶಿಷ್ಯರಾ?— ಇಲ್ಲ, ಯೇಸುವನ್ನು ನಂಬುತ್ತೇವೆ ಅಂತ ಹೇಳಿಕೊಳ್ಳುವವರೆಲ್ಲ ಅವನ ಶಿಷ್ಯರಲ್ಲ. ಕೆಲವರು ತಪ್ಪದೆ ಚರ್ಚ್‌ಗೆ ಹೋಗುತ್ತಾರೆ ನಿಜ. ಆದರೆ ಯೇಸು ಏನು ಕಲಿಸಿದನು ಅಂತ ಅವರಲ್ಲಿ ಅನೇಕರಿಗೆ ಗೊತ್ತೇ ಇಲ್ಲ. ಅದನ್ನು ತಿಳಿಯುವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. ಹಾಗಾದರೆ ಅವರು ಯೇಸುವಿನ ಶಿಷ್ಯರಲ್ಲ. ಯಾರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೋ ಅವರೇ ನಿಜವಾದ ಶಿಷ್ಯರು.

ಯೇಸು ಭೂಮಿಯಲ್ಲಿ ಇದ್ದಾಗ ಅವನ ನಿಜ ಶಿಷ್ಯರು ಯಾರಾಗಿದ್ದರು? ಬಾ, ಅವರ ಪರಿಚಯ ಮಾಡಿಕೊಳ್ಳೋಣ. ಮೊದಲು ಫಿಲಿಪ್ಪ ಎಂಬವನ ಪರಿಚಯ ಮಾಡಿಕೊಡುತ್ತೀನಿ. ಯೇಸುವಿನ ಶಿಷ್ಯರಾಗಲು ಮೊದಮೊದಲು ಮುಂದೆ ಬಂದವರಲ್ಲಿ ಇವನು ಒಬ್ಬನು. ಯೇಸುವಿನ ಬಗ್ಗೆ ತನ್ನ ಗೆಳೆಯ ನತಾನಯೇಲನಿಗೆ (ನತಾನಯೇಲನನ್ನು ಬಾರ್ತೊಲೊಮಾಯ ಎಂದೂ ಕರೆಯಲಾಗುತ್ತಿತ್ತು) ತಿಳಿಸಬೇಕೆಂದು ಫಿಲಿಪ್ಪನು ಅವನನ್ನು ಹುಡುಕಿಕೊಂಡು ಹೋಗುತ್ತಾನೆ. ಈ ಚಿತ್ರದಲ್ಲಿ, ಮರದ ಕೆಳಗೆ ಕೂತಿರುವವನೇ ನತಾನಯೇಲ. ಯೇಸುವಿನ ಬಗ್ಗೆ ಕೇಳಿಸಿಕೊಂಡ ನತಾನಯೇಲ ಯೇಸುವಿನ ಬಳಿ ಬರುತ್ತಾನೆ. ಯೇಸು ಅವನನ್ನು ನೋಡಿ, ‘ಇವನು ನಿಜವಾದ ಇಸ್ರಾಯೇಲ್ಯನು. ಇವನಲ್ಲಿ ಯಾವ ವಂಚನೆಯೂ ಇಲ್ಲ’ ಎಂದು ಅಲ್ಲಿದ್ದವರಿಗೆ ಹೇಳುತ್ತಾನೆ. ಇದನ್ನು ಕೇಳಿದ ನತಾನಯೇಲ ಅಚ್ಚರಿಯಿಂದ ಯೇಸುವಿಗೆ, ‘ನನ್ನ ಬಗ್ಗೆ ನಿನಗೆ ಹೇಗೆ ಗೊತ್ತು?’ ಎಂದು ಕೇಳುತ್ತಾನೆ.

ಇಲ್ಲಿ ಯೇಸು ಯಾರನ್ನು ತನ್ನ ಶಿಷ್ಯರಾಗುವಂತೆ ಕರೆಯುತ್ತಿದ್ದಾನೆ?

ಅದಕ್ಕೆ ಯೇಸು, ‘ಅಂಜೂರ ಮರದ ಕೆಳಗೆ ಕೂತ್ತಿದ್ದ ನಿನ್ನನ್ನು ಫಿಲಿಪ್ಪನು ಕರೆಯಲು ಬರುವ ಮುಂಚೆಯೇ ನಾನು ನಿನ್ನನ್ನು ನೋಡಿದ್ದೆ’ ಅಂತ ಹೇಳಿದನು. ತಾನು ಮರದ ಕೆಳಗೆ ಕೂತಿದ್ದ ವಿಷಯ ಯೇಸುವಿಗೆ ಹೇಗಪ್ಪಾ ಗೊತ್ತಾಯಿತು ಅಂತ ನತಾನಯೇಲನು ತುಂಬ ಆಶ್ಚರ್ಯಪಡುತ್ತಾನೆ. ಅವನು ಯೇಸುವಿಗೆ, “ನೀನು ನಿಶ್ಚಯವಾಗಿಯೂ ದೇವರ ಮಗನು, ಇಸ್ರಾಯೇಲ್ಯರ ಅರಸನು” ಎಂದು ಹೇಳುತ್ತಾನೆ.—ಯೋಹಾನ 1:49.

ಇಸ್ಕರಿಯೋತ ಯೂದ, ಯೂದ (ತದ್ದಾಯ), ಸೀಮೋನ

ಫಿಲಿಪ್ಪ ನತಾನಯೇಲರು ಶಿಷ್ಯರಾಗುವ ಹಿಂದಿನ ದಿನ ಬೇರೆ ಕೆಲವರು ಸಹ ಯೇಸುವಿನ ಶಿಷ್ಯರಾದರು. ಅವರು ಯಾರೆಂದರೆ ಅಂದ್ರೆಯ, ಅವನ ಅಣ್ಣ ಪೇತ್ರ ಹಾಗೂ ಯೋಹಾನ. ಯೋಹಾನನ ಅಣ್ಣ ಯಾಕೋಬನು ಸಹ ಅದೇ ದಿನ ಯೇಸುವಿನ ಶಿಷ್ಯನಾಗಿದ್ದಿರಬೇಕು. (ಯೋಹಾನ 1:35-51) ಈ ನಾಲ್ಕು ಶಿಷ್ಯರು ಸ್ವಲ್ಪ ಸಮಯ ಯೇಸುವಿನ ಜೊತೆಯಲ್ಲಿ ಇದ್ದರು. ಆಮೇಲೆ ಮೀನಿನ ವ್ಯಾಪಾರಕ್ಕೆ ವಾಪಸ್‌ ಹೋದರು. ಒಂದು ದಿನ, ಯೇಸು ಗಲಿಲಾಯ ಸಮುದ್ರ ತೀರಕ್ಕೆ ಹೋದಾಗ ಪೇತ್ರ ಅಂದ್ರೆಯರನ್ನು ನೋಡಿದನು. ಅವರು ಬಲೆಯನ್ನು ಸಮುದ್ರದಲ್ಲಿ ಇಳಿಸಲು ತಯಾರಿ ಮಾಡುತ್ತಿದ್ದರು. ಆಗ ಯೇಸು “ನನ್ನನ್ನು ಹಿಂಬಾಲಿಸಿರಿ” ಅಂತ ಅವರನ್ನು ಕೂಗಿ ಕರೆದನು.

ಯಾಕೋಬ (ಅಲ್ಫಾಯನ ಮಗ), ತೋಮ, ಮತ್ತಾಯ

ಹಾಗೆ ಸಮುದ್ರ ತೀರದಲ್ಲಿ ಮುಂದೆ ಹೆಜ್ಜೆ ಹಾಕುತ್ತಿದಂತೆ ಯೇಸುವಿಗೆ ಯಾಕೋಬ ಯೋಹಾನರು ಕಾಣಿಸುತ್ತಾರೆ. ಅವರು ತಮ್ಮ ತಂದೆಯೊಂದಿಗೆ ದೋಣಿಯಲ್ಲಿ ಕುಳಿತು ಮೀನಿನ ಬಲೆಗಳನ್ನು ಹೊಲಿದು ರಿಪೇರಿ ಮಾಡುತ್ತಿದ್ದರು. ನನ್ನನ್ನು ಹಿಂಬಾಲಿಸಿರಿ ಅಂತ ಇವರನ್ನೂ ಯೇಸು ಕರೆದನು. ಯೇಸುವೇನಾದರೂ ನಿನ್ನನ್ನೂ ಹಾಗೆ ಕರೆದಿದ್ದರೆ ಏನು ಮಾಡುತ್ತಿದ್ದೆ? ಕೂಡಲೆ ಎಲ್ಲಾ ಬಿಟ್ಟು ಅವನನ್ನು ಹಿಂಬಾಲಿಸುತ್ತಿದ್ಯಾ?— ಇವರೆಲ್ಲರಿಗೆ ಯೇಸು ಯಾರು ಅಂತ ಗೊತ್ತಿತ್ತು. ಅವನನ್ನು ದೇವರು ಕಳುಹಿಸಿದ್ದಾನೆ ಅಂತನೂ ತಿಳಿದಿತ್ತು. ಹಾಗಾಗಿ ತಕ್ಷಣವೇ ಎಲ್ಲವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.—ಮತ್ತಾಯ 4:18-22.

ನತಾನಯೇಲ, ಫಿಲಿಪ್ಪ, ಮತ್ತು ಯೋಹಾನ

ಯೇಸುವಿನ ಶಿಷ್ಯರಾದ ಮೇಲೆ ಇವರು ಯಾವುದೇ ತಪ್ಪು ಮಾಡಲಿಲ್ವಾ?— ಹಾಗೇನಿಲ್ಲ. ಅವರಿಂದಲೂ ತಪ್ಪುಗಳು ಆಗುತಿತ್ತು. ನಿನಗೆ ನೆನಪಿದೆಯಾ, ತಮ್ಮಲ್ಲಿ ಯಾರು ದೊಡ್ಡವರು ಅಂತ ರಸ್ತೆಯುದ್ದಕ್ಕೂ ವಾಗ್ವಾದ ಮಾಡಿಕೊಂಡವರು ಇವರೇ ಅಲ್ವಾ. ಆದರೆ ಅವರ ತಪ್ಪನ್ನು ಯೇಸು ತಿದ್ದಿದಾಗ ತಮ್ಮ ತಪ್ಪು ಯೋಚನೆಯನ್ನು ಬದಲಾಯಿಸಿಕೊಂಡರು. ಅವರ ಹಾಗೆ ನಾವು ಸಹ ಬೇಕಾದ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿರಬೇಕು. ಆಗಲೇ ನಾವು ಯೇಸುವಿನ ಶಿಷ್ಯರಾಗಸಾಧ್ಯ.

ಯಾಕೋಬ (ಯೋಹಾನನ ಅಣ್ಣ), ಅಂದ್ರೆಯ, ಪೇತ್ರ

ಯೇಸು ಎಲ್ಲಾ ರೀತಿಯ ಜನರನ್ನು ತನ್ನ ಶಿಷ್ಯರಾಗಲು ಆಮಂತ್ರಿಸಿದನು. ಒಂದು ದಿನ ಒಬ್ಬ ಶ್ರೀಮಂತ ಅಧಿಕಾರಿ ಯೇಸುವಿನ ಬಳಿಗೆ ಬಂದು, ನಿತ್ಯಜೀವ ಪಡೆಯಬೇಕಾದರೆ ಏನು ಮಾಡಬೇಕು ಅಂತ ಕೇಳಿದನು. ಅಷ್ಟೇ ಅಲ್ಲ, ತನ್ನ ಬಾಲ್ಯದಿಂದಲೂ ದೇವರ ಆಜ್ಞೆಗಳನ್ನು ಚಾಚೂತಪ್ಪದೆ ಪಾಲಿಸುತ್ತಿರುವುದಾಗಿಯೂ ಆ ಯುವಕ ಹೇಳಿದನು. ಆಗ ಯೇಸು ಅವನಿಗೆ ‘ನನ್ನನ್ನು ಹಿಂಬಾಲಿಸು’ ಎಂದು ಆಹ್ವಾನ ನೀಡಿದನು. ಮುಂದೆ ಏನಾಯಿತು ಗೊತ್ತಾ?—

ಒಬ್ಬ ಶ್ರೀಮಂತನಾಗಿ ಇರುವುದಕ್ಕಿಂತ ಯೇಸುವಿನ ಹಿಂಬಾಲಕನಾಗುವುದು ಬಹಳ ಪ್ರಾಮುಖ್ಯ ಎಂದು ತಿಳಿದುಕೊಂಡಾಗ ಆ ಯುವಕನಿಗೆ ತುಂಬಾ ದುಃಖವಾಯಿತು. ಸಿರಿ-ಸಂಪತ್ತನ್ನು ಬಿಟ್ಟು ಬರಲು ಅವನ ಮನಸ್ಸು ಒಪ್ಪಲಿಲ್ಲ. ಯಾಕೆಂದರೆ ಅವನಿಗೆ ದೇವರಿಗಿಂತ ತನ್ನ ಹಣ ಐಶ್ವರ್ಯದ ಮೇಲೆ ಹೆಚ್ಚು ಪ್ರೀತಿ ಇತ್ತು. ಅದಕ್ಕೆ ಯೇಸುವಿನ ಶಿಷ್ಯನಾಗಲು ಅವನಿಂದ ಆಗಲಿಲ್ಲ.—ಲೂಕ 18:18-25.

ಯೇಸು ಹೆಚ್ಚುಕಡಿಮೆ ಒಂದೂವರೆ ವರ್ಷ ಸುವಾರ್ತೆ ಸಾರಿದ ಮೇಲೆ ತನ್ನ ಶಿಷ್ಯರಲ್ಲಿ 12 ಮಂದಿ ಪುರುಷರನ್ನು ಅಪೊಸ್ತಲರನ್ನಾಗಿ ಆರಿಸಿಕೊಂಡನು. ಇವರನ್ನು ಒಂದು ವಿಶೇಷ ಕೆಲಸ ಮಾಡುವಂತೆ ನೇಮಿಸಿದನು. ಈ 12 ಮಂದಿ ಅಪೊಸ್ತಲರ ಹೆಸರು ನಿನಗೆ ಗೊತ್ತಾ?— ಕಲಿಯೋಣ ಬಾ. ಈ ಚಿತ್ರ ನೋಡಿ ಅವರ ಹೆಸರನ್ನು ಹೇಳು. ಆಮೇಲೆ ನೋಡದೆ ಆ ಹೆಸರುಗಳನ್ನು ಹೇಳು ನೋಡೋಣ.

ಸುವಾರ್ತೆ ಸಾರಲು ಯೇಸುವಿಗೆ ಸಹಾಯಮಾಡಿದ ಈ ಸ್ರೀಯರು ಯಾರು?

ಈ 12 ಮಂದಿ ಅಪೊಸ್ತಲರಲ್ಲಿ ಒಬ್ಬನು ಆ ನಂತರ ಕೆಟ್ಟವನಾದನು. ಅವನ ಹೆಸರು ಇಸ್ಕರಿಯೋತ ಯೂದ. ಅವನಿಗೆ ಬದಲಾಗಿ ಮತ್ತೊಬ್ಬ ಶಿಷ್ಯನನ್ನು ಅಪೊಸ್ತಲನನ್ನಾಗಿ ಆರಿಸಿಕೊಳ್ಳಲಾಯಿತು. ಅವನ ಹೆಸರು ನಿನಗೆ ಗೊತ್ತಾ?— ಮತ್ತೀಯ. ಆ ನಂತರ ಪೌಲ ಮತ್ತು ಬಾರ್ನಬ ಸಹ ಅಪೊಸ್ತಲರಾದರು. ಆದರೆ ಅವರು 12 ಮಂದಿ ಅಪೊಸ್ತಲರ ಗುಂಪಿಗೆ ಸೇರಿದವರಲ್ಲ.— ಅಪೊಸ್ತಲರ ಕಾರ್ಯಗಳು 1:23-26; 14:14.

ನಾವು ಮೊದಲನೇ ಅಧ್ಯಾಯದಲ್ಲಿ ಕಲಿತಂತೆ, ಯೇಸುವಿಗೆ ಚಿಕ್ಕ ಮಕ್ಕಳೆಂದರೆ ಪಂಚ ಪ್ರಾಣ. ಅವರಿಗೂ ಕಲಿಸಿಕೊಡಲು ಯೇಸು ಸಮಯ ಮಾಡಿಕೊಳ್ಳುತ್ತಿದ್ದನು. ಏಕೆ ಗೊತ್ತಾ?— ಏಕೆಂದರೆ ಅವರು ಕೂಡ ತನ್ನ ಶಿಷ್ಯರಾಗಬಲ್ಲರು ಅಂತ ಯೇಸುವಿಗೆ ಗೊತ್ತಿತ್ತು. ಮಕ್ಕಳು ಶಿಷ್ಯರಾಗಿ ಸುವಾರ್ತೆ ಸಾರಲು ಸಾಧ್ಯನಾ? ಹೌದು ಸಾಧ್ಯ. ಮಕ್ಕಳ ಮಾತುಗಳು ಕೆಲವೊಮ್ಮೆ ದೊಡ್ಡವರ ಮನಸ್ಸನ್ನು ಮುಟ್ಟಿ ಮಹಾ ಬೋಧಕನ ಕುರಿತು ಹೆಚ್ಚನ್ನು ಕಲಿಯವಂತೆ ಪ್ರೇರಿಸಬಲ್ಲದು.

ಯೇಸುವಿನ ಶಿಷ್ಯರಲ್ಲಿ ಸ್ತ್ರೀಯರೂ ಇದ್ದರು. ಸುವಾರ್ತೆ ಸಾರಲು ಯೇಸು ಬೇರೆ ಬೇರೆ ಊರುಗಳಿಗೆ ಹೋದಾಗ ಈ ಸ್ತ್ರೀಯರಲ್ಲಿ ಕೆಲವರು ಅವನೊಂದಿಗೆ ಹೋಗುತ್ತಿದ್ದರು. ಮಗ್ದಲದ ಮರಿಯ, ಯೊಹನ್ನ ಮತ್ತು ಸುಸನ್ನರು ಯೇಸುವಿನೊಂದಿಗೆ ಸಾರುತ್ತಿದ್ದರು. ಸುವಾರ್ತೆ ಸಾರುವ ಕೆಲಸ ಅಲ್ಲದೆ ಅಡುಗೆ ಮಾಡಿಕೊಡಲು, ಬಟ್ಟೆ ಒಗೆದುಕೊಡಲು ಅವರು ಸಹಾಯ ಮಾಡಿರಬಹುದು.—ಲೂಕ 8:1-3.

ಯೇಸುವಿನ ಶಿಷ್ಯನಾಗಲು ನಿನಗೆ ಇಷ್ಟ ತಾನೆ?— ಇಷ್ಟ ಪಡುವುದೇನೋ ಒಳ್ಳೇದು. ಆದರೆ ನಾವು ಒಂದು ವಿಷಯ ನೆನಪಿನಲ್ಲಿಡಬೇಕು. ‘ನಾನು ಯೇಸುವಿನ ಶಿಷ್ಯ’ ಅಂತ ಹೇಳಿಕೊಂಡ ಮಾತ್ರಕ್ಕೆ ನಾವು ಶಿಷ್ಯರಾಗಿಬಿಡುವುದಿಲ್ಲ. ಶಿಷ್ಯರಿಗೆ ತಕ್ಕಂಥ ನಡತೆ ನಮ್ಮಲ್ಲಿ ಯಾವಾಗಲೂ ಇರಬೇಕು. ಬರೀ ಕ್ರೈಸ್ತ ಕೂಟಗಳಿಗೆ ಬಂದಾಗ ಮಾತ್ರವಲ್ಲ. ಎಲ್ಲಾ ಸಮಯಗಳಲ್ಲೂ ನಮ್ಮ ನಡತೆ ಚೆನ್ನಾಗಿರಬೇಕು. ಯೋಚಿಸಿ ಹೇಳು, ಯಾವ ಯಾವ ಸ್ಥಳಗಳಲ್ಲಿ ಯೇಸುವಿನ ಶಿಷ್ಯರಿಗೆ ತಕ್ಕಂಥ ನಡತೆ ನಮ್ಮಲ್ಲಿ ಇರಬೇಕು?—

ಮನೆಯಲ್ಲಿದ್ದಾಗಲೂ ಸ್ಕೂಲಿನಲ್ಲಿದ್ದಾಗಲೂ ನೀನು ಯೇಸುವಿನ ಶಿಷ್ಯ ಅಂತ ಮರೆಯಬಾರದು. ಯೇಸುವಿನ ನಿಜ ಶಿಷ್ಯರಾಗಬೇಕಾದರೆ, ನಾವೆಲ್ಲೇ ಇರಲಿ, ಏನೇ ಮಾಡುತ್ತಿರಲಿ ಪ್ರತಿ ಕ್ಷಣವೂ ನಾವು ಯೇಸುವಿನ ಮಾದರಿಯನ್ನು ಅನುಸರಿಸಬೇಕು.

ಯೇಸುವಿನ ಶಿಷ್ಯರಿಗೆ ತಕ್ಕಂಥ ನಡತೆಯನ್ನು ನಾವು ಎಲ್ಲಿ ತೋರಿಸುವುದು ಪ್ರಾಮುಖ್ಯ?

ಯೇಸುವಿನ ಶಿಷ್ಯರ ಕುರಿತು ಬೈಬಲ್‌ ಏನು ಹೇಳುತ್ತದೆ ಎಂದು ನಾವೀಗ ಓದಿ ನೋಡೋಣ: ಮತ್ತಾಯ 28:19, 20; ಲೂಕ 6:13-16; ಯೋಹಾನ 8:31, 32 ಮತ್ತು 1 ಪೇತ್ರ 2:21.