ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನೇಕೆ ಇಷ್ಟು ಖಿನ್ನನಾಗುತ್ತೇನೆ?

ನಾನೇಕೆ ಇಷ್ಟು ಖಿನ್ನನಾಗುತ್ತೇನೆ?

ಅಧ್ಯಾಯ 13

ನಾನೇಕೆ ಇಷ್ಟು ಖಿನ್ನನಾಗುತ್ತೇನೆ?

ಮೆಲನಿ, ಪರಿಪೂರ್ಣ ಮಗುವಿನ ವಿಷಯದಲ್ಲಿ ತನ್ನ ತಾಯಿಯ ಮನಸ್ಸಿನಲ್ಲಿದ್ದ ಆದರ್ಶಕ್ಕನುಸಾರ ಯಾವಾಗಲೂ ಜೀವಿಸಿದಳು—ಅವಳು 17 ವರ್ಷ ಪ್ರಾಯದವಳಾಗುವ ತನಕ. ತದನಂತರ ಅವಳು ಶಾಲಾ ಚಟುವಟಿಕೆಗಳಿಂದ ಹಿಂದುಳಿದಳು, ಪಾರ್ಟಿಗಳಿಗೆ ಹೋಗುವ ಆಹ್ವಾನಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದಳು, ಮತ್ತು ಅವಳ ದರ್ಜೆಗಳು ಎ ಇಂದ ಸಿಗೆ ಇಳಿದಾಗಲೂ ಅವಳು ಚಿಂತೆಮಾಡುವವಳಂತೆ ತೋರಲಿಲ್ಲ. ಏನಾಯಿತು ಎಂದು ಅವಳ ಹೆತ್ತವರು ನಯವಾಗಿ ವಿಚಾರಿಸಿದಾಗ, “ನನ್ನ ಗೋಜಿಗೆ ಬರಬೇಡಿ! ಏನೂ ಆಗಿಲ್ಲ” ಎಂದು ಹೇಳುತ್ತಾ ಆವೇಶದಿಂದ ರೇಗಾಡಿದಳು.

14ರ ಪ್ರಾಯದಲ್ಲಿ ಮಾರ್ಕ್‌, ಸಿಡಿದೇಳುವ ಕೋಪದೊಂದಿಗೆ ಆವೇಶಪರನೂ ದ್ವೇಷಿಸುವವನೂ ಆಗಿದ್ದನು. ಅವನು ಶಾಲೆಯಲ್ಲಿ ಚಡಪಡಿಸುವವನೂ ಕಲಹಗಾರನೂ ಆಗಿದ್ದನು. ಆಶಾಭಂಗಗೊಂಡಾಗ ಅಥವಾ ಕೋಪಗೊಂಡಾಗ, ಅವನು ಮರಳುಗಾಡಿನಾಚೆ ಒಂದು ಮೋಟಾರ್‌ಸೈಕಲ್‌ನಲ್ಲಿ ರೇಸಿಗೆ ಹೋಗುತ್ತಿದ್ದನು ಅಥವಾ ತನ್ನ ಸ್ಕೇಟ್‌ಬೋರ್ಡ್‌ನ ಮೇಲೆ ಕಡಿದಾದ ಗುಡ್ಡಗಳಿಂದ ಕೆಳಕ್ಕೆ ಹಾರುತ್ತಿದ್ದನು.

ಮೆಲನಿ ಮತ್ತು ಮಾರ್ಕ್‌ ಇಬ್ಬರೂ ಒಂದೇ ರೀತಿಯ ಬೇನೆ—ಖಿನ್ನತೆ—ಯ ರೂಪಗಳಿಂದ ಕಷ್ಟಾನುಭವಿಸಿದರು. ಶಾಲಾ ಮಕ್ಕಳಲ್ಲಿ 10ರಿಂದ 15 ಪ್ರತಿಶತ ಮಂದಿ, ಮನೋಸ್ಥಿತಿಯ ಅವ್ಯವಸ್ಥೆಗಳಿಂದ ಕಷ್ಟಾನುಭವಿಸಬಹುದೆಂದು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ನ, ಡಾ. ಡಾನಲ್ಡ್‌ ಮೆಕ್‌ನ್ಯೂ ಹೇಳುತ್ತಾರೆ. ತೀರ ಸ್ವಲ್ಪ ಮಂದಿ ತೀವ್ರವಾದ ಖಿನ್ನತೆಯಿಂದ ಕಷ್ಟಾನುಭವಿಸುತ್ತಾರೆ.

ಕೆಲವೊಮ್ಮೆ ಈ ಸಮಸ್ಯೆಗೆ ಒಂದು ಜೀವಶಾಸ್ತ್ರೀಯ ಆಧಾರವಿರುತ್ತದೆ. ಕೆಲವು ಸೋಂಕುಗಳು ಅಥವಾ ನಿರ್ನಾಳ ವ್ಯವಸ್ಥೆಯ ರೋಗಗಳು, ಋತುಚಕ್ರದ ಹಾರ್ಮೋನುಗಳ ಬದಲಾವಣೆಗಳು, ರಕ್ತದಲ್ಲಿನ ಸಕ್ಕರೆಯ ಅಸಾಮಾನ್ಯ ಇಳಿತ, ನಿರ್ದಿಷ್ಟ ಔಷಧದ್ರವ್ಯಗಳು, ವಿಷಮಯವಾದ ಲೋಹಗಳು ಅಥವಾ ರಾಸಾಯನಿಕಗಳ ಪರಿಣಾಮಕ್ಕೊಳಗಾಗುವುದು, ಅಲರ್ಜಿ ಪ್ರತಿಕ್ರಿಯೆಗಳು, ಅಸಮತೂಕದ ಆಹಾರಪಥ್ಯ, ರಕ್ತಹೀನತೆ—ಇವೆಲ್ಲವೂ ಖಿನ್ನತೆಯನ್ನು ಉಂಟುಮಾಡಬಲ್ಲವು.

ಖಿನ್ನತೆಯ ಮೂಲದಲ್ಲಿ ಒತ್ತಡಗಳು

ಹಾಗಿದ್ದರೂ, ಹದಿಪ್ರಾಯದ ವರ್ಷಗಳೇ ಅನೇಕವೇಳೆ ಭಾವನಾತ್ಮಕ ಒತ್ತಡದ ಮೂಲವಾಗಿರುತ್ತವೆ. ಒಬ್ಬ ಯುವ ವ್ಯಕ್ತಿಗೆ, ಜೀವಿತದ ಏರುಪೇರುಗಳನ್ನು ನಿರ್ವಹಿಸುವುದರಲ್ಲಿ ವಯಸ್ಕನೊಬ್ಬನಿಗಿರುವಷ್ಟು ಅನುಭವವಿರುವುದಿಲ್ಲವಾದುದರಿಂದ, ಯಾರೊಬ್ಬರೂ ತನ್ನ ಕಾಳಜಿ ವಹಿಸುವುದಿಲ್ಲವೆಂದು ಅವನು ಭಾವಿಸಸಾಧ್ಯವಿದೆ ಮತ್ತು ಸಂಬಂಧಸೂಚಕವಾಗಿ ಸರ್ವಸಾಮಾನ್ಯವಾದ ವಿಷಯಗಳಿಗಾಗಿ ಅವನು ವೇದನಾಭರಿತವಾಗಿ ಖಿನ್ನನಾಗಸಾಧ್ಯವಿದೆ.

ಹೆತ್ತವರು, ಶಿಕ್ಷಕರು, ಅಥವಾ ಸ್ನೇಹಿತರ ನಿರೀಕ್ಷಣೆಗಳನ್ನು ತಲಪುವುದರಲ್ಲಿ ಅಸಫಲರಾಗುವುದು, ವಿಷಣ್ಣತೆಗೆ ಇನ್ನೊಂದು ಕಾರಣವಾಗಿದೆ. ಉದಾಹರಣೆಗಾಗಿ, ತನ್ನ ಸುಶಿಕ್ಷಿತ ಹೆತ್ತವರನ್ನು ಸಂತೋಷಪಡಿಸಲಿಕ್ಕಾಗಿ ತಾನು ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿರಬೇಕಿತ್ತೆಂಬ ಅನಿಸಿಕೆ ಡಾನಲ್ಡ್‌ನಿಗಾಯಿತು. ಅದನ್ನು ಮಾಡುವುದರಲ್ಲಿ ಅಸಫಲನಾದಾಗ, ಅವನು ಖಿನ್ನನಾದನು ಮತ್ತು ಆತ್ಮಹತ್ಯೆಗಾಗಿ ಪ್ರಯತ್ನಿಸುವವನಾದನು. “ನಾನು ಎಂದೂ ಏನೊಂದನ್ನೂ ಸರಿಯಾಗಿ ಮಾಡಿದ್ದಿಲ್ಲ. ನಾನು ಯಾವಾಗಲೂ ಎಲ್ಲರನ್ನೂ ಆಶಾಭಂಗಗೊಳಿಸಿದ್ದೇನೆ” ಎಂಬುದಾಗಿ ಡಾನಲ್ಡ್‌ ಪ್ರಲಾಪಿಸಿದನು.

ಅಸಫಲತೆಯ ಆ ಭಾವನೆಯು ಖಿನ್ನತೆಯನ್ನು ಹೊತ್ತಿಸಬಲ್ಲದು ಎಂಬುದು, ಎಪಫ್ರೊದೀತನೆಂಬ ಹೆಸರಿನ ಮನುಷ್ಯನ ವಿದ್ಯಮಾನದಿಂದ ಸುವ್ಯಕ್ತವಾಗುತ್ತದೆ. ಪ್ರಥಮ ಶತಮಾನದ ಸಮಯದಲ್ಲಿ, ಸೆರೆಯಲ್ಲಿ ಬಂಧಿಸಲ್ಪಟ್ಟಿದ್ದ ಅಪೊಸ್ತಲ ಪೌಲನಿಗೆ ನೆರವು ನೀಡಲಿಕ್ಕಾಗಿ, ವಿಶೇಷವಾದೊಂದು ನಿಯಮಿತ ಕಾರ್ಯದ ಮೇಲೆ ಈ ನಂಬಿಗಸ್ತ ಕ್ರೈಸ್ತನು ಕಳುಹಿಸಲ್ಪಟ್ಟನು. ಆದರೆ ಅವನು ಪೌಲನ ಬಳಿಗೆ ತಲಪಿದಾಗ, ಅವನು ಕೂಡಲೆ ಅಸ್ವಸ್ಥನಾದನು—ಮತ್ತು ಪ್ರತಿಯಾಗಿ ಪೌಲನು ಅವನ ಆರೈಕೆ ಮಾಡಬೇಕಾಗಿತ್ತು! ಆಗ, ಎಪಫ್ರೊದೀತನಿಗೆ ಅಂತಹ ಅಸಫಲತೆಯ ಅನಿಸಿಕೆ ಏಕಾಯಿತೆಂಬುದನ್ನೂ, ಅವನು ಏಕೆ “ಖಿನ್ನ”ನಾಗಿದ್ದಿರಬಹುದು (NW) ಎಂಬುದನ್ನೂ ನೀವು ಕಲ್ಪಿಸಿಕೊಳ್ಳಬಲ್ಲಿರಿ. ಅವನು ತಾನು ಅಸ್ವಸ್ಥನಾಗುವುದಕ್ಕೆ ಮೊದಲು, ಮಾಡಿದ್ದಂತಹ ಎಲ್ಲಾ ಒಳ್ಳೆಯ ವಿಷಯಗಳನ್ನು ಅಲಕ್ಷಿಸಿದನೆಂಬುದು ಸುವ್ಯಕ್ತ.—ಫಿಲಿಪ್ಪಿ 2:25-30.

ನಷ್ಟದ ಭಾವನೆ

ಸಾಯಲು ತೀರ ಎಳೆಯಪ್ರಾಯ—ಯುವ ಜನರು ಮತ್ತು ಆತ್ಮಹತ್ಯೆ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಫ್ರಾನ್ಸೀನ್‌ ಕ್ಲ್ಯಾಗ್ಸ್‌ಬ್ರುನ್‌ ಬರೆದುದು: “ಭಾವನಾತ್ಮಕವಾಗಿ ಉಂಟುಮಾಡಲ್ಪಟ್ಟ ಅನೇಕ ಖಿನ್ನತೆಗಳ ಮೂಲದಲ್ಲಿ, ಗಾಢವಾಗಿ ಪ್ರೀತಿಸಲ್ಪಟ್ಟ ಯಾರಾದರೊಬ್ಬರ ಅಥವಾ ಯಾವುದಾದರೂ ವಸ್ತುವಿನ ವಿಷಯದಲ್ಲಿ ಗಾಢವಾದ ನಷ್ಟದ ಭಾವನೆಯು ಅಡಗಿರುತ್ತದೆ.” ಹೀಗೆ ಮರಣ ಅಥವಾ ವಿವಾಹ ವಿಚ್ಛೇದದಿಂದ ಆಗುವ ಹೆತ್ತವರೊಬ್ಬರ ನಷ್ಟ, ಉದ್ಯೋಗ ಅಥವಾ ಜೀವನೋಪಾಯದ ನಷ್ಟ, ಅಥವಾ ಒಬ್ಬನ ಶಾರೀರಿಕ ಆರೋಗ್ಯದ ನಷ್ಟವು ಸಹ, ಖಿನ್ನತೆಯ ಮೂಲದಲ್ಲಿ ಹುದುಗಿರಸಾಧ್ಯವಿದೆ.

ಆದರೂ, ಯುವ ವ್ಯಕ್ತಿಯೊಬ್ಬನಿಗಾಗುವ ಅತ್ಯಂತ ಧ್ವಂಸಕಾರಕ ನಷ್ಟವು ಯಾವುದೆಂದರೆ, ಪ್ರೀತಿಯ ನಷ್ಟ, ಅನಪೇಕ್ಷಿತವಾದ ಅಥವಾ ಕಾಳಜಿ ವಹಿಸಲ್ಪಡದಿರುವ ಅನಿಸಿಕೆಯೇ. “ನನ್ನ ತಾಯಿಯು ನಮ್ಮನ್ನು ಬಿಟ್ಟುಹೋದಾಗ, ನನಗೆ ವಿಶ್ವಾಸದ್ರೋಹಮಾಡಲ್ಪಟ್ಟ ಮತ್ತು ಒಂಟಿಯಾದ ಅನಿಸಿಕೆಯಾಯಿತು” ಎಂದು, ಮರೀ ಎಂಬ ಹೆಸರಿನ ಯುವತಿಯು ಬಹಿರಂಗಪಡಿಸಿದಳು. “ನನ್ನ ಲೋಕವು ಹಠಾತ್ತನೇ ಬುಡಮೇಲಾದಂತೆ ತೋರಿತು.”

ಹಾಗಾದರೆ, ವಿವಾಹ ವಿಚ್ಛೇದ, ಮದ್ಯಪಾನದ ಚಟ, ಅಗಮ್ಯಗಮನ, ಪತ್ನಿ ಹೊಡೆತ, ಶಿಶು ಅಪಪ್ರಯೋಗ, ಅಥವಾ ಅವನ ಇಲ್ಲವೆ ಅವಳ ಸ್ವಂತ ಸಮಸ್ಯೆಗಳಲ್ಲಿ ತಲ್ಲೀನರಾಗಿರುವ ಹೆತ್ತವರೊಬ್ಬರಿಂದ ಕೇವಲ ತಿರಸ್ಕಾರಗಳಂತಹ ಕೌಟುಂಬಿಕ ಸಮಸ್ಯೆಗಳಿಂದ ಎದುರಿಸಲ್ಪಡುವಾಗ, ಕೆಲವು ಯುವ ಜನರಿಗಾಗುವ ದಿಗ್ಭ್ರಮೆಯನ್ನು ಊಹಿಸಿಕೊಳ್ಳಿರಿ. ಬೈಬಲ್‌ ಜ್ಞಾನೋಕ್ತಿಯು ಎಷ್ಟು ಸತ್ಯವಾಗಿದೆ: “ಇಕ್ಕಟ್ಟಿನ ದಿನದಲ್ಲಿ ನೀನು ನಿನ್ನನ್ನು ನಿರುತ್ಸಾಹಗೊಂಡವನಾಗಿ ತೋರಿಸಿಕೊಂಡಿದ್ದೀಯೊ? ನಿನ್ನ ಬಲವೂ [ಖಿನ್ನತೆಯನ್ನು ಪ್ರತಿರೋಧಿಸುವ ಸಾಮರ್ಥ್ಯವೂ ಒಳಗೊಂಡು] ಅಲ್ಪವೇ”! (ಜ್ಞಾನೋಕ್ತಿ 24:10, NW) ಯುವ ವ್ಯಕ್ತಿಯೊಬ್ಬನು ತನ್ನ ಕೌಟುಂಬಿಕ ಸಮಸ್ಯೆಗಳಿಗಾಗಿ ಸ್ವತಃ ತನ್ನನ್ನೇ ತಪ್ಪಾಗಿ ದೂಷಿಸಿಕೊಳ್ಳಲೂಬಹುದು.

ರೋಗಲಕ್ಷಣಗಳನ್ನು ಗ್ರಹಿಸಿಕೊಳ್ಳುವುದು

ವಿಭಿನ್ನ ಮಟ್ಟಗಳ ಖಿನ್ನತೆಗಳಿವೆ. ಯುವ ವ್ಯಕ್ತಿಯೊಬ್ಬನು ಕ್ಷೋಭೆಗೊಳಿಸುವ ಯಾವುದೋ ಒಂದು ಘಟನೆಯಿಂದ ತಾತ್ಕಾಲಿಕವಾಗಿ ಸ್ಥೈರ್ಯಗೆಡಬಹುದು. ಆದರೆ ಸಾಮಾನ್ಯವಾಗಿ ಅಂತಹ ನಿರಾಶಾಜನಕ ಸ್ಥಿತಿಗಳು ಸಂಬಂಧಸೂಚಕವಾಗಿ ಅಲ್ಪಾವಧಿಯಲ್ಲಿಯೇ ಅದೃಶ್ಯವಾಗುತ್ತವೆ.

ಹಾಗಿದ್ದರೂ, ಖಿನ್ನಗೊಂಡ ಮನೋಸ್ಥಿತಿಯು ಬಹಳ ಸಮಯದ ವರೆಗೆ ಇರುವುದಾದರೆ ಮತ್ತು ಅಪ್ರಯೋಜಕತೆ, ವ್ಯಾಕುಲತೆ, ಮತ್ತು ಕೋಪದ ಅನಿಸಿಕೆಗಳೊಂದಿಗೆ ಸಾಮಾನ್ಯವಾದ ನಕಾರಾತ್ಮಕ ಅನಿಸಿಕೆಯು ಯುವ ವ್ಯಕ್ತಿಗಿರುವುದಾದರೆ, ಇದು ಕೆಳಮಟ್ಟದ ಅಸ್ಥಿಗತ ಖಿನ್ನತೆಯೆಂದು ವೈದ್ಯರು ಕರೆಯುವ ರೋಗವಾಗಿ ವಿಕಸಿಸಿಬಲ್ಲದು. ಮಾರ್ಕ್‌ ಮತ್ತು ಮೆಲನಿಯ (ಆರಂಭದಲ್ಲಿ ಪ್ರಸ್ತಾಪಿಸಲ್ಪಟ್ಟಿರುವವರು) ಅನುಭವಗಳು ತೋರಿಸುವಂತೆ, ಆ ರೋಗಲಕ್ಷಣಗಳು ಗಮನಾರ್ಹವಾಗಿ ಭಿನ್ನವಾಗಿರಬಲ್ಲವು. ಒಬ್ಬ ಯುವ ವ್ಯಕ್ತಿಯು ಆಗಿಂದಾಗ್ಗೆ ವ್ಯಾಕುಲತೆಗೆ ಒಳಗಾಗಬಹುದು. ಇನ್ನೊಬ್ಬನು ಎಲ್ಲಾ ಸಮಯದಲ್ಲಿ ಆಯಾಸಗೊಂಡವನಾಗಿರಬಹುದು, ಹಸಿವೆಯಿಲ್ಲದಿರಬಹುದು, ನಿದ್ರಿಸುವುದರಲ್ಲಿ ತೊಂದರೆಯನ್ನು ಅನುಭವಿಸಬಹುದು, ತೂಕವನ್ನು ಕಳೆದುಕೊಳ್ಳಬಹುದು, ಅಥವಾ ಅಪಘಾತಗಳ ಸರಣಿಯನ್ನು ಅನುಭವಿಸಬಹುದು.

ಕೆಲವು ಯುವ ವ್ಯಕ್ತಿಗಳು ತಮ್ಮನ್ನು ಸುಖಾನುಭವದ ಪಾನಕೇಳಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಖಿನ್ನತೆಯನ್ನು ಮರೆಸಲು ಪ್ರಯತ್ನಿಸುತ್ತಾರೆ: ಪಾರ್ಟಿಗಳ ಅಂತ್ಯರಹಿತ ಪರಿಧಿ, ಲೈಂಗಿಕ ಸ್ವೇಚ್ಛಾಚಾರ, ವಿಧ್ವಂಸಕತೆ, ವಿಪರೀತ ಕುಡಿತ, ಮುಂತಾದವುಗಳು. “ನಾನು ಯಾವಾಗಲೂ ಏಕೆ ಹೊರಗೆಹೋಗಬೇಕಾಗಿದೆ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ” ಎಂಬುದಾಗಿ 14 ವರ್ಷ ಪ್ರಾಯದ ಹುಡುಗನೊಬ್ಬನು ಒಪ್ಪಿಕೊಂಡನು. “ನಾನು ನನ್ನಷ್ಟಕ್ಕೇ ಒಂಟಿಯಾಗಿ ಇರುವುದಾದರೆ, ನನಗೆ ಎಷ್ಟು ಕೆಟ್ಟದೆನಿಸುತ್ತದೆ ಎಂಬುದನ್ನು ನಾನು ಮಾತ್ರ ಗ್ರಹಿಸಿಕೊಳ್ಳಬಲ್ಲೆ.” ಅದು ಬೈಬಲು ವರ್ಣಿಸಿದಂತೆಯೇ ಇದೆ: “ನಗುವವನಿಗೂ ಮನೋವ್ಯಥೆಯುಂಟು.”—ಜ್ಞಾನೋಕ್ತಿ 14:13.

ಅದು ಕೇವಲ ನಿರಾಶಾಜನಕ ಸ್ಥಿತಿಗಳಿಗಿಂತ ಹೆಚ್ಚಿನ ವಿಷಯವಾಗಿರುವಾಗ

ಕೆಳಮಟ್ಟದ ಅಸ್ಥಿಗತ ಖಿನ್ನತೆಗೆ ಚಿಕಿತ್ಸೆ ಮಾಡದಿದ್ದಲ್ಲಿ, ಅದು ಹೆಚ್ಚು ಗಂಭೀರವಾದ ಅವ್ಯವಸ್ಥೆಗೆ, ಗುರುತರವಾದ ಖಿನ್ನತೆಗೆ, ಮುಂದುವರಿಯಬಲ್ಲದು. (107ನೆಯ ಪುಟವನ್ನು ನೋಡಿರಿ.) “ನಾನು ಆಂತರ್ಯದಲ್ಲಿ ‘ಸತ್ತುಹೋಗಿ’ದ್ದೆನೋ ಎಂಬ ಸತತವಾದ ಅನಿಸಿಕೆ ನನಗಾಯಿತು” ಎಂಬುದಾಗಿ, ಗುರುತರವಾದ ಖಿನ್ನತೆಗೆ ಬಲಿಯಾಗಿದ್ದ ಮರೀ ವಿವರಿಸಿದಳು. “ನಾನು ಯಾವುದೇ ಭಾವೋದ್ರೇಕಗಳಿಲ್ಲದೆ ಅಸ್ತಿತ್ವದಲ್ಲಿದ್ದೆ ಅಷ್ಟೇ. ನನ್ನಲ್ಲಿ ಸತತವಾದ ಅಂಜಿಕೆಯ ಅನಿಸಿಕೆಯಿತ್ತು.” ಗುರುತರವಾದ ಖಿನ್ನತೆಯಿಂದ ಉಂಟಾಗುವ ವಿಷಣ್ಣ ಮನೋಸ್ಥಿತಿಯು ಕಠಿನತರದ್ದಾಗಿದ್ದು, ಅನೇಕ ತಿಂಗಳುಗಳ ವರೆಗೆ ಮುಂದುವರಿಯಬಹುದು. ಪರಿಣಾಮವಾಗಿ, ಹದಿಪ್ರಾಯದ ಆತ್ಮಹತ್ಯೆಗಳಲ್ಲಿ ಈ ವಿಧದ ಖಿನ್ನತೆಯು ಅತ್ಯಂತ ಸಾಮಾನ್ಯ ಘಟಕವಾಗಿದ್ದು, ಈಗ ಅನೇಕ ದೇಶಗಳಲ್ಲಿ ಒಂದು “ಗುಪ್ತ ಸಾಂಕ್ರಾಮಿಕ”ವಾಗಿ ಪರಿಗಣಿಸಲ್ಪಟ್ಟಿದೆ.

ಗುರುತರವಾದ ಖಿನ್ನತೆಯೊಂದಿಗೆ ಸಂಬಂಧಿಸಿದ ತೀರ ಪಟ್ಟುಹಿಡಿಯುವ ಹಾಗೂ ಅತ್ಯಂತ ಮಾರಕವಾಗಿರುವ ಭಾವೋದ್ರೇಕವು, ನಿರೀಕ್ಷಾಹೀನತೆಯ ತೀವ್ರವಾದ ಭಾವನೆಯಾಗಿದೆ. ಗುರುತರವಾದ ಖಿನ್ನತೆಯ ಬಲಿಪಶುವಾಗಿದ್ದ, 14 ವರ್ಷ ಪ್ರಾಯದ ವಿವಿಯೆನ್‌ ಎಂಬ ಹೆಸರಿನ ಹುಡುಗಿಯ ಕುರಿತಾಗಿ, ಪ್ರೊಫೆಸರ್‌ ಜಾನ್‌ ಇ. ಮ್ಯಾಕ್‌ ಬರೆಯುತ್ತಾರೆ. ಎಲ್ಲಾ ಬಾಹ್ಯ ತೋರಿಕೆಗಳಿಗೆ ಅವಳು, ಪರಾಮರಿಕೆಮಾಡುವ ಹೆತ್ತವರನ್ನು ಪಡೆದಿದ್ದ ಒಬ್ಬ ಆರೋಗ್ಯವಂತ ಯುವತಿಯಾಗಿದ್ದಳು. ಆದರೂ, ನಿರಾಶೆಯ ಬೇಗುದಿಯಲ್ಲಿ, ಅವಳು ಸ್ವತಃ ನೇಣುಹಾಕಿಕೊಂಡಳು! ಪ್ರೊಫೆಸರ್‌ ಮ್ಯಾಕ್‌ ಬರೆದುದು: “ತನ್ನ ಖಿನ್ನತೆಯು ಎಂದಾದರೂ ಸರಿಪಡಿಸಲ್ಪಡುವುದು, ತನ್ನ ನೋವಿನಿಂದ ಅಂತಿಮವಾಗಿ ಬಿಡುಗಡೆಯನ್ನು ಪಡೆದುಕೊಳ್ಳುವ ಯಾವುದೇ ಆಶಾಕಿರಣ ತನಗಿದೆ ಎಂಬುದನ್ನು ಮುನ್ನರಿತುಕೊಳ್ಳುವ ವಿವಿಯೆನಳ ಅಸಾಮರ್ಥ್ಯವು, ಸ್ವತಃ ತನ್ನನ್ನು ಕೊಂದುಕೊಳ್ಳುವ ಅವಳ ನಿರ್ಧಾರದಲ್ಲಿನ ಪ್ರಮುಖ ಘಟಕವಾಗಿತ್ತು.”

ಹೀಗೆ ಗುರುತರವಾದ ಖಿನ್ನತೆಯಿಂದ ಬಾಧಿತರಾದವರಿಗೆ, ತಮ್ಮ ಸ್ಥಿತಿಯು ಎಂದಿಗೂ ಉತ್ತಮಗೊಳ್ಳುವುದಿಲ್ಲ, ನಾಳೆ ಎಂಬುದಿಲ್ಲ ಎಂಬಂತೆ ಅನಿಸುತ್ತದೆ. ಪರಿಣತರಿಗನುಸಾರ, ಅಂತಹ ಆಶಾಹೀನತೆಯು, ಅನೇಕವೇಳೆ ಆತ್ಮಹತ್ಯೆಯ ನಡವಳಿಕೆಗೆ ನಡಿಸುತ್ತದೆ.

ಹಾಗಿದ್ದರೂ, ಆತ್ಮಹತ್ಯೆಯು ಉತ್ತರವಾಗಿರುವುದಿಲ್ಲ. ಯಾರ ಜೀವಿತವು ಸಜೀವವಾದ ಘೋರಸ್ವಪ್ನವಾಗಿ ಪರಿಣಮಿಸಿತ್ತೋ ಆ ಮರೀ ಒಪ್ಪಿಕೊಂಡದ್ದು: “ಖಂಡಿತವಾಗಿಯೂ ನನ್ನ ಮನಸ್ಸಿನಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬಂದವು. ಆದರೆ ನನ್ನನ್ನು ಕೊಂದುಕೊಳ್ಳದಿರುವಷ್ಟು ಕಾಲದ ವರೆಗೆ ಯಾವಾಗಲೂ ಆಶಾಕಿರಣವಿದೆ ಎಂಬುದನ್ನು ನಾನು ಗ್ರಹಿಸಿದೆ.” ವಾಸ್ತವವಾಗಿ ಎಲ್ಲವನ್ನೂ ಕೊನೆಗೊಳಿಸುವುದು ತಾನೇ ಏನನ್ನೂ ಬಗೆಹರಿಸುವುದಿಲ್ಲ. ಅಸಂತೋಷಕರವಾಗಿ, ನಿರಾಶೆಯಿಂದ ಎದುರಿಸಲ್ಪಟ್ಟಾಗ, ಅನೇಕ ಯುವ ಜನರು ಪರ್ಯಾಯಗಳನ್ನು ಅಥವಾ ಅನುಕೂಲಕರವಾದ ಪರಿಣಾಮದ ಸಾಧ್ಯತೆಯನ್ನು ಕಣ್ಣಮುಂದೆ ಚಿತ್ರಿಸಿಕೊಳ್ಳಲಾರರು ಸಹ. ಹೀಗೆ ತನ್ನೊಳಗೆ ಹೆರೊಯಿನ್‌ ಚುಚ್ಚಿಕೊಳ್ಳುವ ಮೂಲಕ ಮರೀ ತನ್ನ ಸಮಸ್ಯೆಯನ್ನು ಮರೆಸಲು ಪ್ರಯತ್ನಿಸಿದಳು. ಅವಳು ಹೇಳಿದ್ದು: “ನನ್ನಲ್ಲಿ ವಿಪರೀತ ಆತ್ಮವಿಶ್ವಾಸವಿತ್ತು—ಅಮಲೌಷಧವು ಕ್ಷೀಣಿಸುವ ವರೆಗೆ ಮಾತ್ರ.”

ಅಪ್ರಧಾನ ಬೇಗುದಿಯೊಂದಿಗೆ ವ್ಯವಹರಿಸುವುದು

ಖಿನ್ನತೆಯ ಅನಿಸಿಕೆಗಳೊಂದಿಗೆ ವ್ಯವಹರಿಸುವ ವಿವೇಕಪೂರ್ಣ ವಿಧಗಳಿವೆ. “ಕೆಲವು ಜನರು ಹಸಿವಿನ ಕಾರಣದಿಂದ ಖಿನ್ನರಾಗುತ್ತಾರೆ” ಎಂದು, ಖಿನ್ನತೆಯ ಕುರಿತಾದ ನ್ಯೂ ಯಾರ್ಕ್‌ ವಿಶೇಷಜ್ಞರಾದ ಡಾ. ನೇತನ್‌ ಎಸ್‌. ಕ್ಲೈನ್‌ ಗಮನಿಸಿದರು. “ಒಬ್ಬ ವ್ಯಕ್ತಿಯು ಬೆಳಗಿನ ಉಪಾಹಾರವನ್ನು ತಿನ್ನದಿರಬಹುದು ಮತ್ತು ಯಾವುದೋ ಕಾರಣಕ್ಕಾಗಿ ಮಧ್ಯಾಹ್ನದೂಟವನ್ನೂ ತಪ್ಪಿಸಿಕೊಳ್ಳಬಹುದು. ಆಮೇಲೆ ಮೂರು ಗಂಟೆಯಷ್ಟಕ್ಕೆ, ನನಗೇಕೆ ಸ್ವಸ್ಥವಿಲ್ಲ ಎಂದು ಅವನು ಕುತೂಹಲಪಡಲಾರಂಭಿಸುತ್ತಾನೆ.”

ನೀವು ಏನನ್ನು ತಿನ್ನುತ್ತೀರೋ ಅದು ಸಹ ವ್ಯತ್ಯಾಸವನ್ನು ಉಂಟುಮಾಡಬಲ್ಲದು. ನಿರಾಶೆಯ ಅನಿಸಿಕೆಗಳಿಂದ ಬಾಧಿತಳಾದ ಒಬ್ಬ ಯುವತಿ ಡೆಬಿ ಒಪ್ಪಿಕೊಂಡದ್ದು: “ಕಳಪೆ ಆಹಾರವು ನನ್ನ ಮನೋಸ್ಥಿತಿಗೆ ಅಷ್ಟು ಹಾನಿಕರವಾಗಿತ್ತು ಎಂಬುದನ್ನು ನಾನು ಗ್ರಹಿಸಿರಲಿಲ್ಲ. ನಾನು ಅದನ್ನು ತುಂಬಾ ತಿಂದೆ. ನಾನು ಕಡಿಮೆ ಸಿಹಿ ಪದಾರ್ಥಗಳನ್ನು ತಿನ್ನುವಾಗ, ನನಗೆ ಹೆಚ್ಚು ಉತ್ತಮವಾದ ಅನಿಸಿಕೆಯಾಗುತ್ತದೆ ಎಂಬುದನ್ನು ನಾನು ಈಗ ಗಮನಿಸುತ್ತೇನೆ.” ಇನ್ನಿತರ ಸಹಾಯಕರ ಹೆಜ್ಜೆಗಳು: ಯಾವುದಾದರೂ ವ್ಯಾಯಾಮವು ನಿಮ್ಮ ಮನಸ್ಸುಗಳನ್ನು ಚೈತನ್ಯಗೊಳಿಸಬಹುದು. ಖಿನ್ನತೆಯು, ಶಾರೀರಿಕ ಅನಾರೋಗ್ಯದ ಒಂದು ರೋಗಲಕ್ಷಣವಾಗಿರಸಾಧ್ಯವಿರುವುದರಿಂದ, ಕೆಲವು ವಿದ್ಯಮಾನಗಳಲ್ಲಿ, ವೈದ್ಯಕೀಯ ತಪಾಸಣೆಯೊಂದು ಸೂಕ್ತವಾದದ್ದಾಗಿರುವುದು.

ಮನಸ್ಸಿನ ಹೋರಾಟವನ್ನು ಗೆಲ್ಲುವುದು

ಅನೇಕವೇಳೆ ಸ್ವತಃ ನಿಮ್ಮ ಕುರಿತು ನಕಾರಾತ್ಮಕವಾದ ಆಲೋಚನೆಗಳನ್ನು ಹೊಂದಿರುವುದರ ಮೂಲಕ, ಖಿನ್ನತೆಯು ತರಲ್ಪಡುತ್ತದೆ ಅಥವಾ ಇನ್ನೂ ಕೆಡುವಂತೆ ಮಾಡಲ್ಪಡುತ್ತದೆ. “ಅನೇಕ ಜನರ ಚುಚ್ಚುವ ಮಾತುಗಳನ್ನು ಅನುಭವಿಸುವಾಗ, ಅದು ನಿಮ್ಮನ್ನು, ನೀವು ಯಾವುದಕ್ಕೂ ಯೋಗ್ಯರಾಗಿಲ್ಲ ಎಂದು ಆಲೋಚಿಸುವಂತೆ ಮಾಡುತ್ತದೆ” ಎಂಬುದಾಗಿ 18 ವರ್ಷ ಪ್ರಾಯದ ಇವ್ಲಿನ್‌ ಪ್ರಲಾಪಿಸಿದಳು.

ಪರಿಗಣಿಸಿರಿ: ಒಬ್ಬ ವ್ಯಕ್ತಿಯೋಪಾದಿ ನಿಮ್ಮ ಯೋಗ್ಯತೆಯನ್ನು ಅಳೆಯುವುದು ಇತರರಿಗೆ ಸೇರಿದ ವಿಷಯವಾಗಿದೆಯೊ? ಕ್ರೈಸ್ತ ಅಪೊಸ್ತಲ ಪೌಲನ ಮೇಲೆ ತದ್ರೀತಿಯ ಅಪಹಾಸ್ಯವು ಹೊರಿಸಲ್ಪಟ್ಟಿತ್ತು. ಅವನು ದುರ್ಬಲನೂ ನ್ಯೂನ ಭಾಷಣಕಾರನೂ ಆಗಿದ್ದನೆಂದು ಕೆಲವರು ಹೇಳಿದರು. ಇದು ಪೌಲನು ತಾನು ಅಯೋಗ್ಯನೆಂದು ಭಾವಿಸುವಂತೆ ಮಾಡಿತೋ? ಇಲ್ಲವೇ ಇಲ್ಲ! ದೇವರ ಮಟ್ಟಗಳನ್ನು ತಲಪುವುದು ಪ್ರಾಮುಖ್ಯವಾದ ವಿಷಯವಾಗಿತ್ತು ಎಂಬುದನ್ನು ಪೌಲನು ತಿಳಿದಿದ್ದನು. ಬೇರೆಯವರು ಏನನ್ನೇ ಹೇಳುತ್ತಿದ್ದಿರಲಿ, ದೇವರ ಸಹಾಯದಿಂದ ತಾನು ಪೂರೈಸಿದ್ದ ವಿಷಯಗಳ ಕುರಿತು ಅವನು ಹೆಚ್ಚಳಪಡಸಾಧ್ಯವಿತ್ತು. ನೀವು ದೇವರೊಂದಿಗೆ ಒಂದು ನಿಲುವನ್ನು ಪಡೆದುಕೊಂಡಿದ್ದೀರಿ ಎಂಬ ವಾಸ್ತವಾಂಶವನ್ನು ನೀವೂ ಜ್ಞಾಪಿಸಿಕೊಳ್ಳುವುದಾದರೆ, ವಿಷಣ್ಣ ಮನೋಸ್ಥಿತಿಯು ಅನೇಕವೇಳೆ ಇಲ್ಲದೆಹೋಗುವುದು.—2 ಕೊರಿಂಥ 10:7, 10, 17, 18.

ಯಾವುದೋ ಬಲಹೀನತೆಯಿಂದ ಅಥವಾ ಮಾಡಿರುವಂತಹ ಪಾಪದ ಕಾರಣದಿಂದ ನೀವು ಖಿನ್ನರಾಗಿರುವಲ್ಲಿ ಆಗೇನು? “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು” ಎಂದು ದೇವರು ಇಸ್ರಾಯೇಲಿಗೆ ಹೇಳಿದನು. (ಯೆಶಾಯ 1:18) ನಮ್ಮ ಸ್ವರ್ಗೀಯ ಪಿತನ ಸಹಾನುಭೂತಿ ಹಾಗೂ ತಾಳ್ಮೆಯನ್ನು ಎಂದೂ ಅಲಕ್ಷಿಸದಿರಿ. (ಕೀರ್ತನೆ 103:8-14) ಆದರೆ ನಿಮ್ಮ ಸಮಸ್ಯೆಯನ್ನು ಜಯಿಸಲು ನೀವು ಸಹ ಕಷ್ಟಪಟ್ಟು ಶ್ರಮಿಸುತ್ತಿದ್ದೀರೊ? ನಿಮ್ಮ ಮನಸ್ಸಿನಿಂದ ದೋಷಿ ಭಾವನೆಗಳನ್ನು ತೆಗೆದುಹಾಕಬೇಕಾದರೆ, ನೀವು ನಿಮ್ಮ ಪಾಲನ್ನು ಮಾಡಬೇಕು. ಜ್ಞಾನೋಕ್ತಿಯು ಹೇಳುವಂತೆ: “ಅವುಗಳನ್ನು [ತನ್ನ ತಪ್ಪುಗಳನ್ನು] ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.”—ಜ್ಞಾನೋಕ್ತಿ 28:13.

ನಿರಾಶಾಜನಕ ಸ್ಥಿತಿಗಳನ್ನು ಹೊಡೆದೋಡಿಸುವ ಇನ್ನೊಂದು ವಿಧವು, ಸ್ವತಃ ನಿಮಗಾಗಿ ವಾಸ್ತವವಾದ ಗುರಿಗಳನ್ನಿಟ್ಟುಕೊಳ್ಳುವುದಾಗಿದೆ. ಯಶಸ್ವಿಯಾಗಲಿಕ್ಕಾಗಿ ನೀವು ನಿಮ್ಮ ಶಾಲಾ ತರಗತಿಯಲ್ಲಿ ಮೊದಲ ಸ್ಥಾನದಲ್ಲಿರಬೇಕೆಂದಿಲ್ಲ. (ಪ್ರಸಂಗಿ 7:16-18) ಆಶಾಭಂಗಗಳು ಜೀವಿತದ ಒಂದು ಭಾಗವಾಗಿವೆ ಎಂಬ ವಾಸ್ತವಾಂಶವನ್ನು ಅಂಗೀಕರಿಸಿರಿ. ಇವುಗಳು ಸಂಭವಿಸುವಾಗ, ‘ನನಗೆ ಏನೇ ಆದರೂ ಯಾರೂ ನೋಡಿಕೊಳ್ಳುವುದಿಲ್ಲ, ಮತ್ತು ಯಾರೂ ಎಂದೂ ಆರೈಕೆ ಮಾಡುವುದಿಲ್ಲ’ ಎಂದು ಭಾವಿಸಿಕೊಳ್ಳುವ ಬದಲು, ‘ನಾನಿದನ್ನು ಜಯಿಸುವೆ’ ಎಂದು ಸ್ವತಃ ಹೇಳಿಕೊಳ್ಳಿರಿ. ಮತ್ತು ಚೆನ್ನಾಗಿ ಅತ್ತುಬಿಡುವುದರಲ್ಲಿ ಏನೂ ತಪ್ಪಿಲ್ಲ.

ಸಾಧನೆಯ ಮೌಲ್ಯ

ಪದೇ ಪದೇ ಸಂಭವಿಸಿದ ನಿರುತ್ಸಾಹದ ಮೂಲಕ ಯಶಸ್ವಿಕರವಾಗಿ ಬದುಕು ನಡೆಸಿದ ಡ್ಯಾಫ್ನಿ, “ನಿರಾಶೆಯು ತಾನಾಗಿಯೇ ಹೊರಟುಹೋಗುವುದಿಲ್ಲ” ಎಂಬುದಾಗಿ ಸಲಹೆ ನೀಡುತ್ತಾಳೆ. “ನೀವು ಭಿನ್ನವಾದ ಗತಿಯಲ್ಲಿ ಆಲೋಚಿಸಬೇಕು ಅಥವಾ ಶಾರೀರಿಕ ಪ್ರಯತ್ನವನ್ನು ಒಳಗೂಡಿಸಬೇಕು. ನೀವು ಏನನ್ನಾದರೂ ಮಾಡಲು ಆರಂಭಿಸಬೇಕು.” ಅಪ್ರಸನ್ನಕರ ಮನೋಸ್ಥಿತಿಯನ್ನು ಹೊಡೆದೋಡಿಸಲು ಕಷ್ಟಪಟ್ಟು ಕಾರ್ಯನಡಿಸುತ್ತಿರುವಾಗ, ಹೀಗೆ ಹೇಳಿದ ಲಿಂಡಳನ್ನು ಪರಿಗಣಿಸಿರಿ: “ನಾನು ಹೊಲಿಯುವ ಆವೇಶದಲ್ಲಿದ್ದೇನೆ. ನಾನು ಹೆಚ್ಚು ಬಟ್ಟೆಗಳನ್ನು ಹೊಲಿಯುವುದರಲ್ಲಿ ಮನಸ್ಸಿಟ್ಟು, ಸಕಾಲದಲ್ಲಿ, ನನಗೆ ಕ್ಷೋಭೆಯನ್ನುಂಟುಮಾಡುತ್ತಿರುವ ವಿಷಯದ ಕುರಿತು ಮರೆತುಬಿಡುತ್ತೇನೆ. ಇದು ನಿಜವಾಗಿಯೂ ಸಹಾಯ ಮಾಡುತ್ತದೆ.” ನಿಮಗೆ ಕೌಶಲವಿರುವ ಕೆಲಸಗಳನ್ನು ಮಾಡುವುದು, ಸಾಮಾನ್ಯವಾಗಿ ಖಿನ್ನತೆಯ ಸಮಯದಲ್ಲಿ ತೀರ ತಳಮಟ್ಟದಲ್ಲಿರುವ ನಿಮ್ಮ ಆತ್ಮಾಭಿಮಾನವನ್ನು ಸ್ಥಿರಪಡಿಸಬಲ್ಲದು.

ಸುಖಾನುಭವವನ್ನು ತರುವಂತಹ ಚಟುವಟಿಕೆಗಳಲ್ಲಿ ನಿಮ್ಮನ್ನು ಒಳಗೂಡಿಸಿಕೊಳ್ಳುವುದು ಸಹ ಪ್ರಯೋಜನಕರವಾಗಿದೆ. ಸ್ವಲ್ಪ ವೈಯಕ್ತಿಕ ಉಪಯೋಗಕ್ಕಾಗಿ ಖರೀದಿಮಾಡುವುದನ್ನು, ಆಟಗಳನ್ನು ಆಡುವುದನ್ನು, ನಿಮ್ಮ ಅಚ್ಚುಮೆಚ್ಚಿನ ಪಾಕವಿಧಾನವನ್ನು ತಯಾರಿಸುವುದನ್ನು, ಪುಸ್ತಕದಂಗಡಿಯಲ್ಲಿ ಕಣ್ಣು ಹಾಯಿಸುವುದನ್ನು, ಹೋಟೆಲಿನಲ್ಲಿ ಊಟಮಾಡುವುದನ್ನು, ಓದುವುದನ್ನು, ಅವೇಕ್‌! ಪತ್ರಿಕೆಯಲ್ಲಿ ಕಂಡುಬರುವಂತಹ ಪದಬಂಧಗಳನ್ನು ರಚಿಸುವುದನ್ನೂ ಪ್ರಯತ್ನಿಸಿರಿ.

ಕಿರು ಪ್ರವಾಸಗಳನ್ನು ಯೋಜಿಸುವ ಮೂಲಕ ಅಥವಾ ಸ್ವತಃ ತನಗಾಗಿ ಸಣ್ಣಪುಟ್ಟ ಗುರಿಗಳನ್ನು ಇಡುವ ಮೂಲಕ, ತನ್ನ ಖಿನ್ನ ಮನೋಸ್ಥಿತಿಯನ್ನು ತಾನು ನಿಭಾಯಿಸಸಾಧ್ಯವಿದೆ ಎಂದು ಡೆಬಿ ಕಂಡುಕೊಂಡಳು. ಹಾಗಿದ್ದರೂ, ಇತರರಿಗೆ ಸಹಾಯ ಮಾಡಲು ಕಾರ್ಯನಡಿಸುವುದು, ಅವಳ ಅತ್ಯಂತ ದೊಡ್ಡ ಸಹಾಯಗಳಲ್ಲಿ ಒಂದಾಗಿ ಪರಿಣಮಿಸಿತು. “ಬಹಳ ಖಿನ್ನಳಾಗಿದ್ದ ಈ ಯುವತಿಯನ್ನು ನಾನು ಸಂಧಿಸಿ, ಅವಳಿಗೆ ಬೈಬಲನ್ನು ಅಭ್ಯಾಸಿಸಲು ಸಹಾಯ ಮಾಡಲಾರಂಭಿಸಿದೆ” ಎಂದು ಡೆಬಿ ಪ್ರಕಟಿಸಿದಳು. “ಈ ಸಾಪ್ತಾಹಿಕ ಚರ್ಚೆಗಳು, ಅವಳು ತನ್ನ ಖಿನ್ನತೆಯನ್ನು ಹೇಗೆ ಜಯಿಸಸಾಧ್ಯವಿದೆ ಎಂಬುದನ್ನು ಅವಳಿಗೆ ಹೇಳಲು ನನಗೆ ಅವಕಾಶವನ್ನು ಕೊಟ್ಟವು. ಬೈಬಲು ಅವಳಿಗೆ ನಿಜ ನಿರೀಕ್ಷೆಯನ್ನು ಕೊಟ್ಟಿತು. ಅದೇ ಸಮಯದಲ್ಲಿ ಇದು ನನಗೆ ಸಹಾಯ ಮಾಡಿತು.” ಇದು ಯೇಸು ಹೇಳಿದಂತೆಯೇ ಇದೆ: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅ. ಕೃತ್ಯಗಳು 20:35, NW.

ಅದರ ಕುರಿತು ಯಾರೊಂದಿಗಾದರೂ ಮಾತಾಡಿರಿ

“ಒಬ್ಬ ಮನುಷ್ಯನ ಹೃದಯದಲ್ಲಿನ ಚಿಂತೆಯ ಕಾಳಜಿಯು, ಅದನ್ನು ಕುಗ್ಗಿಹೋಗುವಂತೆ ಮಾಡುವುದು, ಆದರೆ ಒಳ್ಳೆಯ ಮಾತು ತಾನೇ ಅದನ್ನು ಸಂತೋಷಪಡಿಸುವುದು.” (ಜ್ಞಾನೋಕ್ತಿ 12:25, NW) ಅರ್ಥಮಾಡಿಕೊಳ್ಳುವಂತಹ ವ್ಯಕ್ತಿಯೊಬ್ಬನಿಂದ ಬರುವ ಒಂದು “ಒಳ್ಳೆಯ ಮಾತು,” ಜಗತ್ತಿನಲ್ಲೇ ಬಹಳ ಮುಖ್ಯವಾದದ್ದಾಗಿರಬಲ್ಲದು. ಯಾವ ಮನುಷ್ಯನಿಗೂ ನಿಮ್ಮ ಹೃದಯವನ್ನು ಓದಲು ಸಾಧ್ಯವಿಲ್ಲ; ಆದುದರಿಂದ ಯಾರು ನಿಮಗೆ ಸಹಾಯ ಮಾಡಬಲ್ಲರೆಂದು ನೀವು ಭಾವಿಸುತ್ತೀರೋ ಅವರ ಬಳಿ, ನಿಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ಹೇಳಿಕೊಳ್ಳಿರಿ. ಜ್ಞಾನೋಕ್ತಿ 17:17ಕ್ಕನುಸಾರ, “ಒಬ್ಬ ಮಿತ್ರನು ಎಲ್ಲಾ ಸಮಯಗಳಲ್ಲಿ ಪ್ರೀತಿಸುವವನಾಗಿದ್ದಾನೆ, ಮತ್ತು ತೊಂದರೆಯ ಸಮಯಗಳಲ್ಲಿ ಒಬ್ಬ ಸಹೋದರನಾಗಿ ಪರಿಣಮಿಸುತ್ತಾನೆ.” (ದ ಬೈಬಲ್‌ ಇನ್‌ ಬೇಸಿಕ್‌ ಇಂಗ್ಲಿಷ್‌) “ನೀವು ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವಾಗ, ಅದು ಭಾರವಾದ ಒಂದು ಹೊರೆಯನ್ನು ಒಬ್ಬಂಟಿಗರಾಗಿಯೇ ಹೊರುತ್ತಿರುವಂತಿರುತ್ತದೆ” ಎಂಬುದಾಗಿ 22 ವರ್ಷ ಪ್ರಾಯದ ಏವನ್‌ ಹೇಳುತ್ತಾನೆ. “ಆದರೆ ಸಹಾಯ ಮಾಡಲು ಅರ್ಹರಾಗಿರುವ ಯಾರೊಂದಿಗಾದರೂ ನೀವು ಅದನ್ನು ಹಂಚಿಕೊಳ್ಳುವಾಗ, ಅದು ಹೆಚ್ಚು ಹಗುರವಾಗುತ್ತದೆ.”

‘ಆದರೆ ಈಗಾಗಲೇ ನಾನದನ್ನು ಪ್ರಯತ್ನಿಸಿದ್ದೇನೆ, ಮತ್ತು ಜೀವನದ ಉಜ್ವಲವಾದ ಪಾರ್ಶ್ವವನ್ನು ನೋಡಬೇಕೆಂಬ ಉಪನ್ಯಾಸವನ್ನೇ ನಾನು ಉತ್ತರವಾಗಿ ಪಡೆಯುತ್ತೇನೆ’ ಎಂದು ನೀವು ಹೇಳಬಹುದು. ಹಾಗಾದರೆ, ನಿಮ್ಮನ್ನು ಅರ್ಥಮಾಡಿಕೊಳ್ಳುವ ಒಬ್ಬ ಕೇಳುಗನಾಗಿರುವುದು ಮಾತ್ರವಲ್ಲ, ಒಬ್ಬ ವಾಸ್ತವಿಕ ಸಲಹೆಗಾರನೂ ಆಗಿರುವ ಯಾರನ್ನಾದರೂ ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?—ಜ್ಞಾನೋಕ್ತಿ 27:5, 6.

ಸಹಾಯವನ್ನು ಕಂಡುಕೊಳ್ಳುವುದು

ನಿಮ್ಮ ಹೆತ್ತವರಿಗೆ ‘ನಿಮ್ಮ ಹೃದಯವನ್ನು ಕೊಟ್ಟುಕೊಳ್ಳುವ’ (NW) ಮೂಲಕ ಆರಂಭಿಸಿರಿ. (ಜ್ಞಾನೋಕ್ತಿ 23:26) ಇತರರಿಗಿಂತಲೂ ಹೆಚ್ಚು ಉತ್ತಮವಾಗಿ ಅವರು ನಿಮ್ಮನ್ನು ತಿಳಿದಿದ್ದಾರೆ, ಮತ್ತು ನೀವು ಅವರಿಗೆ ಅನುಮತಿನೀಡುವಲ್ಲಿ, ಅವರು ಅನೇಕವೇಳೆ ನಿಮಗೆ ಸಹಾಯ ಮಾಡಬಲ್ಲರು. ಸಮಸ್ಯೆಯು ಗಂಭೀರವಾಗಿದೆ ಎಂದು ಅವರು ವಿವೇಚಿಸುವಲ್ಲಿ, ವೃತ್ತಿಪರ ಸಹಾಯವನ್ನು ಪಡೆದುಕೊಳ್ಳುವಂತೆ ನಿಮಗಾಗಿ ಅವರು ಏರ್ಪಾಡನ್ನೂ ಮಾಡಬಹುದು. *

ಕ್ರೈಸ್ತ ಸಭೆಯ ಸದಸ್ಯರು, ಸಹಾಯದ ಇನ್ನೊಂದು ಮೂಲವಾಗಿದ್ದಾರೆ. “ವರ್ಷಗಳಿಂದಲೂ ನಾನು ಎಂತಹ ಒಂದು ನೆಪವನ್ನು ಕೊಟ್ಟೆನೆಂದರೆ, ನಾನು ಎಷ್ಟು ಖಿನ್ನಳಾಗಿದ್ದೆನೆಂಬುದು ಯಾರಿಗೂ ತಿಳಿದಿರಲಿಲ್ಲ” ಎಂದು ಮರೀ ತಿಳಿಯಪಡಿಸಿದಳು. “ಆದರೆ ತದನಂತರ ನಾನು ಸಭೆಯಲ್ಲಿದ್ದ ವೃದ್ಧ ಸ್ತ್ರೀಯರಲ್ಲಿ ಒಬ್ಬರೊಂದಿಗೆ ಪರಿಸ್ಥಿತಿಯ ಕುರಿತಾಗಿ ಅರಿಕೆಮಾಡಿಕೊಂಡೆ. ಅವರು ವಿಷಯವನ್ನು ಅರ್ಥಮಾಡಿಕೊಳ್ಳುವ ಮನೋಭಾವದವರಾಗಿದ್ದರು! ನಾನು ಅನುಭವಿಸಿದಂತಹದ್ದೇ ರೀತಿಯ ಅನುಭವಗಳಲ್ಲಿ ಕೆಲವನ್ನು ಅವರೂ ಅನುಭವಿಸಿದ್ದರು. ಹೀಗೆ ಬೇರೆ ಜನರು ಸಹ ಇಂತಹದ್ದೇ ವಿಷಯಗಳನ್ನು ಅನುಭವಿಸಿದ್ದಾರೆ ಮತ್ತು ಸಫಲರಾಗಿ ಹೊರಬಂದಿದ್ದಾರೆ ಎಂಬುದನ್ನು ಗ್ರಹಿಸುವಂತೆ ನಾನು ಪ್ರೋತ್ಸಾಹಿಸಲ್ಪಟ್ಟೆ.”

ಇಲ್ಲ, ಮರೀಯ ಖಿನ್ನತೆಯು ತತ್‌ಕ್ಷಣವೇ ಸರಿಹೋಗಲಿಲ್ಲ. ಆದರೆ ದೇವರೊಂದಿಗಿನ ತನ್ನ ಸಂಬಂಧವನ್ನು ಅವಳು ಹೆಚ್ಚು ಗಾಢಗೊಳಿಸಿದಂತೆ, ಕ್ರಮೇಣ ಅವಳು ತನ್ನ ಭಾವೋದ್ವೇಗಗಳನ್ನು ನಿಭಾಯಿಸಲಾರಂಭಿಸಿದಳು. ಯೆಹೋವನ ಸತ್ಯ ಆರಾಧಕರ ನಡುವೆಯೂ, ನಿಮ್ಮ ಯೋಗಕ್ಷೇಮದಲ್ಲಿ ನಿಜವಾಗಿಯೂ ಆಸಕ್ತರಾಗಿರುವ ಸ್ನೇಹಿತರನ್ನು ಹಾಗೂ “ಕುಟುಂಬ”ವನ್ನು ನೀವೂ ಕಂಡುಕೊಳ್ಳಬಲ್ಲಿರಿ.—ಮಾರ್ಕ 10:29, 30; ಯೋಹಾನ 13:34, 35.

ಸಾಮಾನ್ಯವಾಗಿರುವುದಕ್ಕಿಂತಲೂ ಅತೀತವಾದ ಬಲ

ಹಾಗಿದ್ದರೂ, ವಿಷಣ್ಣ ಮನೋಸ್ಥಿತಿಯನ್ನು ಹೋಗಲಾಡಿಸುವುದರಲ್ಲಿ ಅತ್ಯಂತ ಪ್ರಬಲವಾದ ಸಹಾಯವು, ಅಪೊಸ್ತಲ ಪೌಲನು ಯಾವುದನ್ನು ದೇವರಿಂದ ಬರುವ, “ಸಾಮಾನ್ಯವಾಗಿರುವುದಕ್ಕಿಂತಲೂ ಅತೀತವಾದ ಬಲ”ವೆಂದು ಕರೆದನೋ ಅದೇ ಆಗಿದೆ. (2 ಕೊರಿಂಥ 4:7, NW) ನೀವು ಆತನ ಮೇಲೆ ಆತುಕೊಳ್ಳುವುದಾದರೆ, ಖಿನ್ನತೆಯನ್ನು ತೊಡೆದುಹಾಕುವಂತೆ ಆತನು ನಿಮಗೆ ಸಹಾಯ ಮಾಡಬಲ್ಲನು. (ಕೀರ್ತನೆ 55:22) ತನ್ನ ಪವಿತ್ರಾತ್ಮದ ಮುಖಾಂತರ ಆತನು ನಿಮ್ಮ ಸಾಮಾನ್ಯವಾದ ಸಾಮರ್ಥ್ಯಗಳಿಗಿಂತಲೂ ಅತೀತವಾದ ಬಲವನ್ನು ಕೊಡುತ್ತಾನೆ.

ದೇವರೊಂದಿಗಿನ ಈ ಸ್ನೇಹವು, ನಿಜವಾಗಿಯೂ ಪುನರಾಶ್ವಾಸನೀಯವಾಗಿದೆ. “ನಾನು ದುಃಖದ ಸಮಯಗಳನ್ನು ಅನುಭವಿಸುವಾಗ, ತುಂಬಾ ಪ್ರಾರ್ಥಿಸುತ್ತೇನೆ. ನನಗಿರುವ ಸಮಸ್ಯೆಯು ಎಷ್ಟೇ ಗಾಢವಾಗಿರಲಿ, ಯೆಹೋವನು ಒಂದು ಮಾರ್ಗವನ್ನು ಒದಗಿಸಲಿರುವನೆಂಬುದು ನನಗೆ ಗೊತ್ತು” ಎಂದು ಜಾರ್ಜಿಯ ಎಂಬ ಹೆಸರಿನ ಯುವತಿಯೊಬ್ಬಳು ಹೇಳಿದಳು. ಡ್ಯಾಫ್ನಿ ಹೀಗೆ ಹೇಳುತ್ತಾ ಒಪ್ಪಿಕೊಳ್ಳುವುದು: “ನೀವು ಯೆಹೋವನಿಗೆ ಪ್ರತಿಯೊಂದು ವಿಷಯವನ್ನೂ ಹೇಳಸಾಧ್ಯವಿದೆ. ನೀವು ಕೇವಲ ನಿಮ್ಮ ಹೃದಯವನ್ನು ತೋಡಿಕೊಳ್ಳಿರಿ ಮತ್ತು ಯಾವನೇ ಮಾನವನು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲವಾದರೂ, ಆತನು ನಿಜವಾಗಿಯೂ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಿಮ್ಮ ಆರೈಕೆ ಮಾಡುತ್ತಾನೆ ಎಂಬುದನ್ನು ನೀವು ತಿಳಿದುಕೊಳ್ಳುವಿರಿ.”

ಆದುದರಿಂದ ನೀವು ಖಿನ್ನರಾಗಿರುವುದಾದರೆ, ದೇವರಿಗೆ ಪ್ರಾರ್ಥಿಸಿರಿ, ಮತ್ತು ನೀವು ನಿಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಸಾಧ್ಯವಿದ್ದು, ಜ್ಞಾನಿಗಳೂ ಅರ್ಥಮಾಡಿಕೊಳ್ಳುವವರೂ ಆಗಿರುವಂತಹ ಯಾರಾದರೊಬ್ಬರನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ಕ್ರೈಸ್ತ ಸಭೆಯಲ್ಲಿ, ಕೌಶಲಭರಿತ ಸಲಹೆಗಾರರಾಗಿರುವ “ಹಿರಿಯ”ರನ್ನು ನೀವು ಕಂಡುಕೊಳ್ಳುವಿರಿ. (ಯಾಕೋಬ 5:14, 15) ದೇವರೊಂದಿಗಿನ ನಿಮ್ಮ ಸ್ನೇಹವನ್ನು ಕಾಪಾಡಿಕೊಳ್ಳುವಂತೆ ನಿಮಗೆ ಸಹಾಯ ಮಾಡಲಿಕ್ಕಾಗಿ ಅವರು ಸಿದ್ಧರಾಗಿರುತ್ತಾರೆ. ದೇವರು ಅರ್ಥಮಾಡಿಕೊಳ್ಳುತ್ತಾನೆ ಮತ್ತು “ಆತನು ನಿಮಗೋಸ್ಕರ ಚಿಂತಿಸು”ವುದರಿಂದ, ನಿಮ್ಮ ಚಿಂತಾಭಾರಗಳನ್ನು ಆತನ ಮೇಲೆ ಹಾಕುವಂತೆ ನಿಮ್ಮನ್ನು ಆಮಂತ್ರಿಸುತ್ತಾನೆ. (1 ಪೇತ್ರ 5:6, 7) ವಾಸ್ತವವಾಗಿ, ಬೈಬಲು ಹೀಗೆ ವಾಗ್ದಾನಿಸುತ್ತದೆ: “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:7.

[ಅಧ್ಯಯನ ಪ್ರಶ್ನೆಗಳು]

^ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಅಪಾಯವಿರುವುದರಿಂದ, ಗುರುತರವಾದ ಖಿನ್ನತೆಯ ಬಲಿಪಶುಗಳು, ವೃತ್ತಿಪರ ಸಹಾಯವನ್ನು ಪಡೆದುಕೊಳ್ಳಬೇಕೆಂದು ಅಧಿಕಾಂಶ ವೈದ್ಯಕೀಯ ಪರಿಣತರು ಸಲಹೆ ನೀಡುತ್ತಾರೆ. ಉದಾಹರಣೆಗಾಗಿ, ವೈದ್ಯಕೀಯ ವೃತ್ತಿಪರರೊಬ್ಬರಿಂದ ಮಾತ್ರವೇ ಬರೆದುಕೊಡಲ್ಪಡಸಾಧ್ಯವಿರುವ ಔಷಧೋಪಚಾರದ ಆವಶ್ಯಕತೆಯಿರಬಹುದು.

ಚರ್ಚೆಗಾಗಿ ಪ್ರಶ್ನೆಗಳು

◻ ಒಬ್ಬ ಯುವ ವ್ಯಕ್ತಿಯನ್ನು ಖಿನ್ನನಾಗುವಂತೆ ಮಾಡಸಾಧ್ಯವಿರುವ ಕೆಲವು ವಿಷಯಗಳು ಯಾವುವು? ನಿಮಗೆಂದಾದರೂ ಆ ರೀತಿಯ ಅನಿಸಿಕೆಯಾಗಿದೆಯೆ?

◻ ಕೆಳಮಟ್ಟದ ಅಸ್ಥಿಗತ ಖಿನ್ನತೆಯ ರೋಗಲಕ್ಷಣಗಳನ್ನು ನೀವು ಗುರುತಿಸಬಲ್ಲಿರೊ?

◻ ಗುರುತರವಾದ ಖಿನ್ನತೆಯನ್ನು ಹೇಗೆ ಗುರುತಿಸಬೇಕೆಂಬುದು ನಿಮಗೆ ತಿಳಿದಿದೆಯೊ? ಇದೇಕೆ ಅಷ್ಟು ಗಂಭೀರವಾದ ಒಂದು ಬೇನೆಯಾಗಿದೆ?

◻ ನಿರಾಶಾಜನಕ ಸ್ಥಿತಿಗಳನ್ನು ಹೊಡೆದೋಡಿಸುವ ಕೆಲವು ವಿಧಗಳನ್ನು ಹೆಸರಿಸಿರಿ. ಈ ಸಲಹೆಗಳಲ್ಲಿ ಯಾವುವಾದರೂ ನಿಮಗೆ ಕಾರ್ಯಗತವಾಗಿವೆಯೊ?

◻ ನೀವು ಗಂಭೀರವಾಗಿ ಖಿನ್ನರಾಗಿರುವಾಗ, ವಿಷಯಗಳನ್ನು ಇತರರೊಂದಿಗೆ ಮಾತಾಡುವುದು ಏಕೆ ಬಹಳ ಪ್ರಾಮುಖ್ಯವಾದದ್ದಾಗಿದೆ?

[ಪುಟ 217 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಹದಿಪ್ರಾಯದ ಆತ್ಮಹತ್ಯೆಗಳಲ್ಲಿ, ತೀವ್ರವಾದ ಖಿನ್ನತೆಯು ಅತ್ಯಂತ ಸಾಮಾನ್ಯವಾದ ಅಂಶವಾಗಿದೆ

[ಪುಟ 223 ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರೊಂದಿಗಿನ ಒಂದು ವೈಯಕ್ತಿಕ ಸಂಬಂಧವು, ಗುರುತರವಾದ ಖಿನ್ನತೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಬಲ್ಲದು

[ಪುಟ 218 ರಲ್ಲಿರುವ ಚೌಕ]

ಅದು ಗುರುತರವಾದ ಖಿನ್ನತೆಯಾಗಿರಸಾಧ್ಯವೊ?

ಗಂಭೀರವಾದ ಒಂದು ಸಮಸ್ಯೆಯು ಇಲ್ಲದಿರುವುದಾದರೂ, ಯಾರೇ ಆಗಲಿ ಈ ಕೆಳಗಿನ ರೋಗಲಕ್ಷಣಗಳಲ್ಲಿ ಒಂದು ಅಥವಾ ಹೆಚ್ಚು ರೋಗಲಕ್ಷಣಗಳಿಂದ ತಾತ್ಕಾಲಿಕವಾಗಿ ಕಷ್ಟಾನುಭವಿಸಬಹುದು. ಆದರೂ, ಅನೇಕ ರೋಗಲಕ್ಷಣಗಳು ಸತತವಾಗಿರುವಲ್ಲಿ, ಅಥವಾ ಯಾವುದೇ ರೋಗಲಕ್ಷಣವು ನಿಮ್ಮ ಸಾಮಾನ್ಯ ಚಟುವಟಿಕೆಗಳೊಂದಿಗೆ ಮಧ್ಯೆಪ್ರವೇಶಮಾಡುವಷ್ಟು ತೀವ್ರವಾಗಿರುವಲ್ಲಿ, ನಿಮಗೆ (1) ಒಂದು ಶಾರೀರಿಕ ಅನಾರೋಗ್ಯವಿದ್ದು, ವೈದ್ಯನೊಬ್ಬನಿಂದ ಸಂಪೂರ್ಣ ತಪಾಸಣೆಯ ಅಗತ್ಯವಿರಬಹುದು ಅಥವಾ (2) ನಿಮಗೆ ಒಂದು ಗಂಭೀರವಾದ ಮಾನಸಿಕ ಅವ್ಯವಸ್ಥೆ, ಗುರುತರವಾದ ಖಿನ್ನತೆಯಿರಬಹುದು.

ಯಾವುದೂ ನಿಮಗೆ ಸುಖಾನುಭವ ಕೊಡುವುದಿಲ್ಲ. ಒಮ್ಮೆ ನೀವು ಆನಂದಿಸಿದಂತಹ ಚಟುವಟಿಕೆಗಳಲ್ಲಿ ನೀವು ಸುಖಾನುಭವವನ್ನು ಕಂಡುಕೊಳ್ಳಲಾರಿರಿ. ದಿಗ್ಭ್ರಮೆ ಹಿಡಿದಿದೆಯೋ ಎಂಬಂತೆ, ಮತ್ತು ಬರಿಯ ಯಾಂತ್ರಿಕ ಜೀವನವನ್ನು ನಡಿಸುತ್ತೀರೋ ಎಂಬಂತೆ, ಅವಾಸ್ತವಿಕತೆಯ ಅನಿಸಿಕೆ ನಿಮಗಾಗುತ್ತದೆ.

ಸಂಪೂರ್ಣ ನಿಷ್ಪ್ರಯೋಜಕ ಅನಿಸಿಕೆ. ನೀಡಲು ಪ್ರಮುಖವಾದ ಯಾವುದೂ ನಿಮ್ಮ ಜೀವಿತದಲ್ಲಿಲ್ಲವೆಂದೂ ನೀವು ಪೂರ್ತಿ ನಿಷ್ಪ್ರಯೋಜಕರೆಂದೂ ನಿಮಗನಿಸುತ್ತದೆ. ದೋಷಿ ಭಾವನೆಯಿಂದ ತುಂಬಿದ ಅನಿಸಿಕೆ ನಿಮಗಾಗಬಹುದು.

ಮನೋಸ್ಥಿತಿಯಲ್ಲಿ ಪ್ರಚಂಡ ಬದಲಾವಣೆ. ಒಮ್ಮೆ ಸ್ನೇಹಪ್ರವೃತ್ತರಾಗಿದ್ದ ನೀವು ಈಗ ಹಿಮ್ಮೆಟ್ಟುವವರಾಗಬಹುದು ಅಥವಾ ಇದಕ್ಕೆ ಪ್ರತಿಕ್ರಮದಲ್ಲಿ ಅದಿರಬಹುದು. ನೀವು ಅನೇಕ ಸಲ ಅಳಲೂಬಹುದು.

ಸಂಪೂರ್ಣ ನಿರೀಕ್ಷಾಹೀನತೆ. ವಿಷಯಗಳು ಕೆಟ್ಟವುಗಳಾಗಿವೆ, ಅವುಗಳ ಕುರಿತು ನೀವು ಏನನ್ನೂ ಮಾಡಸಾಧ್ಯವಿಲ್ಲ, ಮತ್ತು ಈ ಪರಿಸ್ಥಿತಿಗಳು ಎಂದಿಗೂ ಉತ್ತಮಗೊಳ್ಳುವುದಿಲ್ಲ ಎಂಬ ಅನಿಸಿಕೆ ನಿಮಗಾಗುತ್ತದೆ.

ಸಾಯುವುದು ಲೇಸೆಂದು ನೀವು ಹಾರೈಸುತ್ತೀರಿ. ಆ ಸಂಕಟವು ಎಷ್ಟು ಬಲವತ್ತಾಗಿರುತ್ತದೆಂದರೆ, ಆಗಿಂದಾಗ್ಗೆ ನಿಮಗೆ ಸಾಯುವುದು ಲೇಸೆಂಬ ಅನಿಸಿಕೆಯಾಗುತ್ತದೆ.

ಮನಸ್ಸನ್ನು ಕೇಂದ್ರೀಕರಿಸಲು ಆಗುವುದಿಲ್ಲ. ನೀವು ನಿರ್ದಿಷ್ಟ ಆಲೋಚನೆಗಳನ್ನು ಪುನಃ ಪುನಃ ಮೆಲುಕುಹಾಕುತ್ತೀರಿ ಅಥವಾ ಯಾವುದೇ ಗ್ರಹಿಕೆಯಿಲ್ಲದೆ ಓದುತ್ತೀರಿ.

ತಿನ್ನುವ ಅಥವಾ ಮಲವಿಸರ್ಜನೆಯ ಹವ್ಯಾಸಗಳಲ್ಲಿ ಬದಲಾವಣೆ. ಹಸಿವೆಯಿಲ್ಲದಿರುವಿಕೆ ಅಥವಾ ಅತಿಯಾಗಿ ತಿನ್ನುವುದು. ತಡೆತಡೆದು ಉಂಟಾಗುವ ಮಲಬದ್ಧತೆ ಅಥವಾ ಅತಿಬೇಧಿ.

ನಿದ್ರಾ ಹವ್ಯಾಸಗಳು ಬದಲಾಗುತ್ತವೆ. ಕಡಿಮೆ ಅಥವಾ ವಿಪರೀತ ನಿದ್ರೆ. ನಿಮಗೆ ಆಗಿಂದಾಗ್ಗೆ ಘೋರ ಸ್ವಪ್ನಗಳು ಬೀಳಬಹುದು.

ನೋವುಗಳು ಹಾಗೂ ವೇದನೆಗಳು. ತಲೆನೋವು, ಸೆಡೆತ, ಮತ್ತು ಹೊಟ್ಟೆ ಹಾಗೂ ಎದೆಯಲ್ಲಿ ವೇದನೆಗಳು. ಯಾವುದೇ ಸಕಾರಣವಿಲ್ಲದೆ ನಿಮಗೆ ಸತತವಾಗಿ ಆಯಾಸದ ಅನಿಸಿಕೆಯಾಗಬಹುದು.

[ಪುಟ 108 ರಲ್ಲಿರುವ ಚಿತ್ರ]

ಒಬ್ಬನ ಹೆತ್ತವರ ನಿರೀಕ್ಷಣೆಗಳಿಗನುಸಾರ ಜೀವಿಸಲು ತಪ್ಪುವುದು, ಒಬ್ಬ ಯುವ ವ್ಯಕ್ತಿಯನ್ನು ಖಿನ್ನನಾಗುವಂತೆ ಮಾಡಬಲ್ಲದು

[ಪುಟ 109 ರಲ್ಲಿರುವ ಚಿತ್ರ]

ಇತರರೊಂದಿಗೆ ಮಾತಾಡುವುದು ಮತ್ತು ನಿಮ್ಮ ಹೃದಯವನ್ನು ತೋಡಿಕೊಳ್ಳುವುದು, ನಿಭಾಯಿಸಲಿಕ್ಕಿರುವ ಅತ್ಯುತ್ತಮ ವಿಧಗಳಲ್ಲಿ ಒಂದಾಗಿದೆ

[ಪುಟ 110 ರಲ್ಲಿರುವ ಚಿತ್ರ]

ನಿರಾಶಾಜನಕ ಸ್ಥಿತಿಗಳನ್ನು ಸೋಲಿಸಲಿಕ್ಕಾಗಿರುವ ಇನ್ನೊಂದು ಮಾರ್ಗವು, ಇತರರಿಗೆ ಸಹಾಯ ಮಾಡುವುದಾಗಿದೆ