ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯತ್ತು ನನಗಾಗಿ ಏನನ್ನು ಕಾದಿರಿಸಿದೆ?

ಭವಿಷ್ಯತ್ತು ನನಗಾಗಿ ಏನನ್ನು ಕಾದಿರಿಸಿದೆ?

ಅಧ್ಯಾಯ 38

ಭವಿಷ್ಯತ್ತು ನನಗಾಗಿ ಏನನ್ನು ಕಾದಿರಿಸಿದೆ?

“ನಾನು ಭವಿಷ್ಯತ್ತಿನ ಕುರಿತಾಗಿ, ನ್ಯೂಕ್ಲಿಯರ್‌ ಬೆದರಿಕೆಗಳಿಂದ ನಿರೂಪಿಸಲ್ಪಟ್ಟಿರುವ ಲೋಕವೊಂದರಲ್ಲಿನ ಭವಿಷ್ಯತ್ತಿನ ಕುರಿತಾಗಿ ಭಯಭೀತನಾಗಿದ್ದೇನೆ.” ಹಾಗೆಂದು ಒಬ್ಬ ಜರ್ಮನ್‌ ಯುವಕನು, ತನ್ನ ರಾಷ್ಟ್ರದ ಅತ್ಯಂತ ಉನ್ನತಮಟ್ಟದ ರಾಜಕೀಯ ಅಧಿಕಾರಿಗೆ ಒಂದು ಭಾಷಣದಲ್ಲಿ ನುಡಿದನು.

ಬಹುಶಃ ಒಂದು ನ್ಯೂಕ್ಲಿಯರ್‌ ಅಗ್ನಿಗೋಳದಲ್ಲಿ ಅಳಿದುಹೋಗುವ ಘೋರ ಕಲ್ಪನೆಯು, ಭವಿಷ್ಯತ್ತಿನ ಕುರಿತಾದ ನಿಮ್ಮ ನೋಟವನ್ನು ತದ್ರೀತಿಯಲ್ಲಿ ಕಾಡಿಸುತ್ತದೆ. “ಒಳ್ಳೆಯ ದರ್ಜೆಗಳನ್ನು ಪಡೆದುಕೊಳ್ಳಲು ನಾನು ಏಕೆ ತೊಂದರೆ ತೆಗೆದುಕೊಳ್ಳಬೇಕು?” ಎಂಬುದಾಗಿ ಒಬ್ಬ ಯುವ ವ್ಯಕ್ತಿಯು ಕೇಳಿದನು. “ಲೋಕವು ಹೇಗಿದ್ದರೂ ಸ್ಫೋಟನೆಯಿಂದಾಗಿ ನಾಶವಾಗಲಿದೆ.” ವಾಸ್ತವವಾಗಿ, ಶಾಲಾಮಕ್ಕಳ ಒಂದು ಸಮೀಕ್ಷೆಯಲ್ಲಿ, ನ್ಯೂಕ್ಲಿಯರ್‌ ಯುದ್ಧವು ತಮ್ಮ ಅತ್ಯಂತ ದೊಡ್ಡ ಭಯವಾಗಿದೆಯೆಂದು ಎಳೆಯ ಹುಡುಗರು ಹೇಳಿದರು. ಹುಡುಗಿಯರು ಅದನ್ನು ಎರಡನೆಯ ಭಯವಾಗಿ ಪರಿಗಣಿಸಿದರು. ಅದು, “ನನ್ನ ಹೆತ್ತವರು ಸಾಯುವ” ಭಯ, ಎಂಬ ಮೊದಲನೆಯ ಭಯವನ್ನು ಹಿಂಬಾಲಿಸಿಬರುತ್ತದೆ.

ಹಾಗಿದ್ದರೂ, ಒಂದು ನ್ಯೂಕ್ಲಿಯರ್‌ ನಾಯಿಕೊಡೆಯು ತಾನೇ, ಬಾನಂಚಿನಲ್ಲಿರುವ ಏಕೈಕ ಕಪ್ಪು ಮೋಡವಾಗಿರುವುದಿಲ್ಲ. “ಜನಸಂಖ್ಯಾಸ್ಫೋಟ, ಸಂಪನ್ಮೂಲಗಳ ತೀರಿಹೋಗುವಿಕೆ, ಪರಿಸರ ಮಾಲಿನ್ಯ”ದ ಬೆದರಿಕೆ ಮತ್ತು ಆಸನ್ನವಾಗಿರುವ ಇತರ ವಿಪತ್ತುಗಳು, ಪ್ರಸಿದ್ಧ ಮನೋವಿಜ್ಞಾನಿ ಬಿ. ಎಫ್‌. ಸ್ಕಿನ್ನರ್‌ ಅವರನ್ನು ಹೀಗೆ ತೀರ್ಮಾನಿಸುವಂತೆ ನಡೆಸಿದವು: “ನಮ್ಮ ಜಾತಿಯು ಈಗ ಬೆದರಿಸಲ್ಪಟ್ಟಿರುವಂತೆ ತೋರುತ್ತದೆ.” ಅವರು ನಂತರ ಒಪ್ಪಿಕೊಂಡದ್ದು: “ನನಗೆ ತೀರ ನಿರಾಶಾ ಮನೋಭಾವವಿದೆ. ನಾವು ನಿಜವಾಗಿಯೂ ನಮ್ಮ ಸಮಸ್ಯೆಗಳನ್ನು ಬಗೆಹರಿಸಲಾರೆವು.”

ವಿದ್ಯಾವಂತ ವೀಕ್ಷಕರು ಸಹ ಭವಿಷ್ಯತ್ತನ್ನು ಕಳವಳದಿಂದ ದೃಷ್ಟಿಸುವ ಕಾರಣ, ಅನೇಕ ಯುವ ಜನರು “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ಮನೋಭಾವವನ್ನು ಪ್ರದರ್ಶಿಸುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. (1 ಕೊರಿಂಥ 15:32) ನಿಶ್ಚಯವಾಗಿಯೂ, ನಿಮ್ಮ ಭವಿಷ್ಯತ್ತು, ರಾಜಕಾರಣಿಗಳು ಹಾಗೂ ವಿಜ್ಞಾನಿಗಳ ಸಾಮರ್ಥ್ಯದ ಮೇಲೆ ಸವಾರಿ ಮಾಡುವುದಾದರೆ, ಅದು ಖಂಡಿತವಾಗಿಯೂ ಕರಾಳವಾಗಿ ತೋರುತ್ತದೆ. ಏಕೆಂದರೆ ಯೆರೆಮೀಯ 10:23 ಹೇಳುವುದು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”

ಮನುಷ್ಯನಲ್ಲಿ ತನ್ನನ್ನು ಆಳಿಕೊಳ್ಳುವ ಸಾಮರ್ಥ್ಯದ ಕೊರತೆಯಿದೆ ಎಂದಲ್ಲ. ಹಾಗೆ ಮಾಡುವುದು ಮನುಷ್ಯನ “ಸ್ವಾಧೀನದಲ್ಲಿಲ್ಲ” ಎಂಬುದನ್ನು ಗಮನಿಸಿರಿ—ಭೂಮಿಯ ಭವಿಷ್ಯತ್ತನ್ನು ನಿರ್ವಹಿಸುವ ಹಕ್ಕು ಅವನಿಗಿಲ್ಲ. ಹೀಗೆ ಅವನ ಪ್ರಯತ್ನಗಳು ವಿಫಲವಾಗುವುದು ಖಂಡಿತ. ಆ ಕಾರಣಕ್ಕಾಗಿ ಯೆರೆಮೀಯನು ದೈವಿಕ ಹಸ್ತಕ್ಷೇಪಕ್ಕಾಗಿ ಪ್ರಾರ್ಥಿಸಿದನು: “ಯೆಹೋವನೇ ನನ್ನನ್ನು ತಿದ್ದು, ಆದರೆ ನ್ಯಾಯದಿಂದ ಹಾಗೆ ಮಾಡು.” (ಯೆರೆಮೀಯ 10:24, NW) ಇದರ ಅರ್ಥವೇನೆಂದರೆ, ನಮ್ಮ ಸೃಷ್ಟಿಕರ್ತನು ನಮ್ಮ ಭವಿಷ್ಯತ್ತನ್ನು ನಿರ್ಧರಿಸುವನು. ಆದರೆ ಆ ಭವಿಷ್ಯತ್ತು ಏನಾಗಿರುವುದು?

ಭೂಮಿಗಾಗಿ ಮತ್ತು ನಿಮ್ಮ ಭವಿಷ್ಯತ್ತಿಗಾಗಿರುವ ದೇವರ ಉದ್ದೇಶ

ಮಾನವನ ಸೃಷ್ಟಿಯ ನಂತರ ಸ್ವಲ್ಪದರಲ್ಲೇ, ದೇವರು ಪ್ರಥಮ ಮಾನವ ದಂಪತಿಗಳಿಗೆ ಹೀಗೆ ಹೇಳಿದನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಹೀಗೆ ಮನುಷ್ಯನಿಗೆ ಒಂದು ಭೌಗೋಲಿಕ ಪ್ರಮೋದವನದಲ್ಲಿ ಜೀವಿಸುವ ಪ್ರತೀಕ್ಷೆಯು ನೀಡಲ್ಪಟ್ಟಿತು.

ಪ್ರಥಮ ದಂಪತಿಗಳಾದರೊ ದೇವರ ಆಳ್ವಿಕೆಯ ವಿರುದ್ಧ ದಂಗೆಯೆದ್ದರು. ಸೊಲೊಮೋನನು ಅದನ್ನು ತದನಂತರ ಹೇಳಿದಂತೆ, “ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ.” (ಪ್ರಸಂಗಿ 7:29) ಮಾನವ ಯೋಜನೆಗಳು, ಪ್ರಸ್ತುತ ಸಂತತಿಗೆ ಸಂಕಟದ ಒಂದು ಪರಂಪರೆಯನ್ನು ಮತ್ತು ಭವಿಷ್ಯತ್ತಿನ ಕುರಿತಾದ ಅತ್ಯಂತ ವಿಷಾದಕರವಾದ ಪ್ರತೀಕ್ಷೆಗಳನ್ನು ಬಿಟ್ಟುಕೊಡುತ್ತಾ, ವಿಪತ್ಕಾರಕವಾಗಿ ರುಜುವಾಗಿವೆ.

ಇದು, ಒಂದು ಮಲಿನಗೊಂಡ, ವಿದ್ಯುತ್‌ ವಿಕಿರಣೀಕೃತ—ಮತ್ತು ಬಹುಶಃ ಜೀವರಹಿತ—ಭೂಮಂಡಲವಾಗಿ ಪರಿಣಮಿಸಲು ದೇವರು ಈ ಭೂಮಿಯನ್ನು ತ್ಯಜಿಸಿಬಿಟ್ಟಿದ್ದಾನೆಂಬುದನ್ನು ಅರ್ಥೈಸುತ್ತದೊ? ಸಾಧ್ಯವೇ ಇಲ್ಲ! ಆತನು “ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” ಹೀಗೆ ಭೂಮಿಗಾಗಿರುವ ಆತನ ಗೊತ್ತುಪಡಿಸಿದ ಉದ್ದೇಶವು ಖಂಡಿತವಾಗಿಯೂ ನೆರವೇರಲಿದೆ!—ಯೆಶಾಯ 45:18; 55:10, 11.

ಆದರೆ ಯಾವಾಗ ಮತ್ತು ಹೇಗೆ? ಲೂಕ 21ನೆಯ ಅಧ್ಯಾಯವನ್ನು ಸ್ವತಃ ಓದಿರಿ. ಈ ಶತಮಾನದಲ್ಲಿ ಮಾನವಕುಲವನ್ನು ಬಾಧಿಸಿರುವ ಸಮಸ್ಯೆಗಳನ್ನೇ ಯೇಸು ಅಲ್ಲಿ ಮುಂತಿಳಿಸಿದನು: ಅಂತಾರಾಷ್ಟ್ರೀಯ ಯುದ್ಧಗಳು, ಭೂಕಂಪಗಳು, ರೋಗ, ಆಹಾರದ ಅಭಾವಗಳು, ವ್ಯಾಪಕವಾಗಿ ಹರಡಿರುವ ಪಾತಕ. ಈ ಘಟನೆಗಳು ಏನನ್ನು ಸೂಚಿಸುತ್ತವೆ? ಸ್ವತಃ ಯೇಸುವೇ ವಿವರಿಸುತ್ತಾನೆ: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ . . . ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.”—ಲೂಕ 21:10, 11, 28, 31.

ಆ ರಾಜ್ಯವು ನಿಮ್ಮ ಭವಿಷ್ಯತ್ತಿಗಾಗಿರುವ ಕೀಲಿ ಕೈಯಾಗಿದೆ. ಸರಳವಾಗಿ ಹೇಳುವುದಾದರೆ, ಅದೊಂದು ಸರಕಾರ—ಭೂಮಿಯನ್ನು ಆಳಲಿಕ್ಕಾಗಿರುವ ದೇವರ ಸಾಧನ—ಆಗಿದೆ. ಆ ರಾಜ್ಯ ಸರಕಾರವು ಮಾನವ ಕೈಗಳಿಂದ ಭೂಮಿಯ ನಿಯಂತ್ರಣವನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಳ್ಳುವುದು. (ದಾನಿಯೇಲ 2:44) ಮಾನವ ಅಪಪ್ರಯೋಗದ ಆಕ್ರಮಣಗಳಿಂದ ಭೂಮಿಯನ್ನು ಮತ್ತು ಮಾನವಕುಲವನ್ನು ರಕ್ಷಿಸುವ ದೇವರ ಕೈಗಳಿಂದ ‘ಭೂಮಿಯನ್ನು ವಿನಾಶಗೊಳಿಸುತ್ತಿರುವವರು,’ (NW) ಸ್ವತಃ ವಿನಾಶವನ್ನು ಎದುರಿಸುವರು.—ಪ್ರಕಟನೆ 11:18; ಪ್ರಸಂಗಿ 1:4.

ದೇವರ ರಾಜ್ಯದ ನಿರ್ವಹಣೆಯ ಕೆಳಗೆ ಭದ್ರವಾಗಿರುತ್ತಾ, ಭೂಮಿಯು ಕ್ರಮೇಣವಾಗಿ ಒಂದು ಭೌಗೋಲಿಕ ಪ್ರಮೋದವನವಾಗುವುದು. (ಲೂಕ 23:43) ಹೀಗೆ ಒಂದು ಪರಿಪೂರ್ಣ ಜೀವಿಪರಿಸ್ಥಿತಿಯ ಸಮತೂಕವು ಹಿಂದಿರುಗುವುದು. ಅಷ್ಟೇಕೆ, ಮನುಷ್ಯ ಮತ್ತು ಪ್ರಾಣಿಯ ನಡುವೆಯೂ ಸಾಮರಸ್ಯವು ಇರುವುದು. (ಯೆಶಾಯ 11:6-9) ಯುದ್ಧ ಮತ್ತು ಯುದ್ಧದ ಶಸ್ತ್ರಾಸ್ತ್ರಗಳು ಕಾಣದೆ ಹೋಗುವವು. (ಕೀರ್ತನೆ 46:8, 9) ಪಾತಕ, ಹಸಿವು, ವಸತಿಯ ಅಭಾವಗಳು, ಕಾಯಿಲೆ—ಮರಣವು ಕೂಡ—ಎಲ್ಲವೂ ನಿರ್ಮೂಲಗೊಳಿಸಲ್ಪಡುವವು. ಭೂಮಿಯ ನಿವಾಸಿಗಳು “ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:10, 11; 72:16; ಯೆಶಾಯ 65:21, 22; ಪ್ರಕಟನೆ 21:3, 4.

ದೇವರ ವಾಗ್ದಾನಗಳನ್ನು ‘ಪರೀಕ್ಷಿಸುವುದು’

ಒಂದು ಪ್ರಮೋದವನದಲ್ಲಿ ನಿತ್ಯಜೀವ—ಅದು ನಿಮ್ಮ ಭವಿಷ್ಯತ್ತಾಗಿರಬಲ್ಲದು! ಆದರೆ ವಿಚಾರವು ಆಕರ್ಷಕವಾಗಿ ತೋರಬಹುದಾದರೂ, ಎಲ್ಲ ಒಳ್ಳೆಯ ಜನರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯನ್ನು ಬಿಟ್ಟುಕೊಡುವುದು ನಿಮಗೆ ಕಷ್ಟಕರವಾಗಿರಬಹುದು, ಇಲ್ಲವೆ ಸ್ವತಃ ಬೈಬಲಿನ ಕುರಿತಾಗಿಯೇ ನಿಮಗೆ ಸಂದೇಹಗಳಿರಬಹುದು. ಯೆಹೋವನ ಸಾಕ್ಷಿಗಳ ಮಧ್ಯದಲ್ಲಿರುವ ಕೆಲವು ಯುವ ಜನರು ಸಹ, ಕೆಲವೊಮ್ಮೆ ತಮ್ಮ ನಂಬಿಕೆಯು ಗಾಬರಿಪಡಿಸುವಂತಹ ರೀತಿಯಲ್ಲಿ ತತ್ತರಿಸುತ್ತಿರುವುದನ್ನು ಕಂಡುಕೊಂಡಿದ್ದಾರೆ. ಉದಾಹರಣೆಗಾಗಿ ಮಿಶೆಲ್‌, ಸಾಕ್ಷಿ ಹೆತ್ತವರಿಂದ ಬೆಳೆಸಲ್ಪಟ್ಟಿದ್ದಳು. ಬೈಬಲು ಸತ್ಯವಾಗಿದೆ ಎಂಬ ವಿಷಯವನ್ನು ಸ್ವೀಕರಿಸುವುದು, ಹಗಲು ರಾತ್ರಿಯನ್ನು ಅನುಸರಿಸಿ ಬರುತ್ತದೆ ಎಂಬುದನ್ನು ಸ್ವೀಕರಿಸುವಂತಿತ್ತು. ಆದರೆ ಒಂದು ದಿನ, ಆಕೆಗೊಂದು ವಿಷಯವು ಹೊಳೆಯಿತು—ತಾನು ಬೈಬಲನ್ನು ಏಕೆ ನಂಬಿದೆನೆಂದು ಆಕೆಗೆ ಗೊತ್ತಿರಲಿಲ್ಲ. “ನನ್ನ ತಂದೆತಾಯಿಗಳು ಅದನ್ನು ನಂಬಿದ ಕಾರಣ, ಇಷ್ಟರ ತನಕ ನಾನೂ ಅದನ್ನು ನಂಬಿದೆನೆಂದು ನನಗನಿಸುತ್ತದೆ,” ಎಂದಳಾಕೆ.

“ನಂಬಿಕೆಯಿಲ್ಲದೆ [ದೇವರನ್ನು] ಮೆಚ್ಚಿಸುವುದು ಅಸಾಧ್ಯ” ಎಂದು ಬೈಬಲು ಹೇಳುತ್ತದೆ. (ಇಬ್ರಿಯ 11:6) ಆದರೂ, ನಂಬಿಕೆಯು, ನಿಮ್ಮ ತಂದೆತಾಯಿಗಳಲ್ಲಿರುವ ಕಾರಣ, ನೀವು ಪಡೆದುಕೊಳ್ಳುವಂತಹ ವಿಷಯವಾಗಿರುವುದಿಲ್ಲ. ನಿಮ್ಮ ಭವಿಷ್ಯತ್ತು ಭದ್ರವಾಗಿರಬೇಕಾದಲ್ಲಿ, ದೃಢವಾದ ಪ್ರಮಾಣದ—“ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದು”—ಮೇಲೆ ಆಧರಿಸಿದ ಒಂದು ನಂಬಿಕೆಯನ್ನು ನೀವು ನಿರ್ಮಿಸಿಕೊಳ್ಳಬೇಕು. (ಇಬ್ರಿಯ 11:1) ಬೈಬಲು ಅದನ್ನು ಸೂಚಿಸುವಂತೆ, ನೀವು “ಎಲ್ಲವನ್ನೂ ಪರಿಶೋಧಿ”ಸಬೇಕು, ಇಲ್ಲವೆ ದ ಲಿವಿಂಗ್‌ ಬೈಬಲ್‌ನಲ್ಲಿನ ತಾತ್ಪರ್ಯವು ಅದನ್ನು ವ್ಯಕ್ತಪಡಿಸುವಂತೆ, “ಹೇಳಲ್ಪಟ್ಟ ಸಕಲ ವಿಷಯವೂ ಸತ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷಿಸುವುದು.”—1 ಥೆಸಲೊನೀಕ 5:21.

ಬೈಬಲು ಸತ್ಯವಾಗಿದೆ ಎಂಬುದನ್ನು ಸ್ವತಃ ರುಜುಪಡಿಸಿಕೊಳ್ಳುವುದು

ಬೈಬಲು ನಿಜವಾಗಿಯೂ “ದೈವಪ್ರೇರಿತ”ವೊ ಇಲ್ಲವೊ ಎಂಬುದನ್ನು ಪ್ರಥಮವಾಗಿ ಪರೀಕ್ಷಿಸುವ ಅಗತ್ಯ ನಿಮಗಿರಬಹುದು. (2 ತಿಮೊಥೆಯ 3:16) ನೀವು ಅದನ್ನು ಹೇಗೆ ಮಾಡಬಲ್ಲಿರಿ? ಒಳ್ಳೇದು, ಸರ್ವಶಕ್ತ ದೇವರು ಮಾತ್ರ ತಪ್ಪದೆ ‘ಆದಿಯಿಂದ ಅಂತ್ಯದ ವರೆಗೆ ಹೇಳ’ಬಲ್ಲನು. (ಯೆಶಾಯ 43:9; 46:10) ಮತ್ತು ಬೈಬಲಿನಲ್ಲಿ ಆತನು ಸತತವಾಗಿ ಹಾಗೆ ಮಾಡುತ್ತಾನೆ. ಯೆರೂಸಲೇಮಿನ ಪತನದ ಕುರಿತು ಲೂಕ 19:41-44 ಮತ್ತು 21:20, 21ರಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಗಳನ್ನು ಓದಿರಿ. ಇಲ್ಲವೆ ಬಾಬೆಲಿನ ಪತನದ ಕುರಿತು ಯೆಶಾಯ 44:27, 28 ಮತ್ತು 45:1-4ರಲ್ಲಿರುವ ಪ್ರವಾದನೆಗಳನ್ನು ಓದಿರಿ. ಈ ಘಟನೆಗಳನ್ನು ಬೈಬಲು ಹೇಗೆ ತಪ್ಪುಮಾಡದೆ ಮುಂತಿಳಿಸಿತೆಂಬುದನ್ನು ಐಹಿಕ ಇತಿಹಾಸವು ರುಜುಪಡಿಸುತ್ತದೆ! “ಅದರ ಪ್ರವಾದನೆಗಳಲ್ಲಿ ಕೆಲವನ್ನು ಪರಿಶೀಲಿಸಿದ ತರುವಾಯ, ಅದು ಮುಂತಿಳಿಸಿದ ಎಲ್ಲ ವಿಷಯವನ್ನು ಮುಂತಿಳಿಸಲು ಅದು ಹೇಗೆ ಶಕ್ತವಾಗಿತ್ತೆಂಬುದನ್ನು ಅವಲೋಕಿಸಿ, ನಾನು ವಿಸ್ಮಯಗೊಂಡೆ,” ಎಂಬುದಾಗಿ 14 ವರ್ಷ ಪ್ರಾಯದ ಜ್ಯಾನಿನ್‌ ಹೇಳಿದಳು.

ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆ, ಪ್ರಾಮಾಣಿಕತೆ, ಯಥಾರ್ಥತೆ, ಮತ್ತು ವಿರೋಧೋಕ್ತಿಯ ಕೊರತೆ, ಬೈಬಲಿನಲ್ಲಿ ನಂಬಿಕೆಯನ್ನಿಡಲು ಹೆಚ್ಚಿನ ಕಾರಣಗಳಾಗಿವೆ. * ಆದರೆ ಯೆಹೋವನ ಸಾಕ್ಷಿಗಳು ಬೈಬಲನ್ನು ಅರ್ಥಮಾಡಿಕೊಳ್ಳುವ ವಿಧವು ಸರಿಯಾಗಿದೆಯೆಂದು ನಿಮಗೆ ಹೇಗೆ ಗೊತ್ತು? ಪ್ರಾಚೀನ ಬೆರೋಯದ ನಿವಾಸಿಗಳು, ಬೈಬಲಿನ ಕುರಿತಾದ ಅಪೊಸ್ತಲ ಪೌಲನ ವಿವರಣೆಯನ್ನು ಪ್ರತಿಹೇಳದೆ ಸ್ವೀಕರಿಸಲಿಲ್ಲ. ಬದಲಿಗೆ ಅವರು, ‘ಈ ಮಾತುಗಳು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸಿದರು.’—ಅ. ಕೃತ್ಯಗಳು 17:11.

ತದ್ರೀತಿಯಲ್ಲಿ ಬೈಬಲಿನ ಬೋಧನೆಗಳ ಗಾಢವಾದ ಅಧ್ಯಯನವನ್ನು ಮಾಡುವಂತೆ ನಾವು ನಿಮ್ಮನ್ನು ಪ್ರೇರಿಸುತ್ತೇವೆ. ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪ್ರಕಾಶನವು (ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಇವರಿಂದ ಪ್ರಕಾಶಿತ) ಈ ಬೋಧನೆಗಳನ್ನು ಸ್ಪಷ್ಟವಾದ ವಿಧದಲ್ಲಿ ಸಾದರಪಡಿಸುತ್ತದೆ. ನಿಮ್ಮ ಹೆತ್ತವರು ಯೆಹೋವನ ಸಾಕ್ಷಿಗಳಾಗಿರುವಲ್ಲಿ, ನಿಮಗಿರಬಹುದಾದ ಯಾವುದೇ ಪ್ರಶ್ನೆಗಳೊಂದಿಗೆ ನಿಮಗೆ ಸಹಾಯ ಮಾಡಲು ಅವರು ನಿಸ್ಸಂದೇಹವಾಗಿ ಶಕ್ತರಾಗಿರುವರು. “ಈ ಸಂಬಂಧದಲ್ಲಿ ನಿಮಗೆ ಯಾವುದೇ ಸಮಸ್ಯೆಗಳಿರುವಲ್ಲಿ ನಿಮ್ಮ ಹೆತ್ತವರೊಂದಿಗೆ ಪ್ರಾಮಾಣಿಕರಾಗಿರಿ,” ಎಂಬುದಾಗಿ ಜ್ಯಾನೆಲ್‌ ಎಂಬ ಯುವ ಸ್ತ್ರೀಯೊಬ್ಬಳು ಸಲಹೆನೀಡುತ್ತಾಳೆ. “ನಂಬಲು ಕಷ್ಟಕರವಾಗಿರುವಂತೆ ನೀವು ಕಂಡುಕೊಳ್ಳುವ ಯಾವ ವಿಷಯವಾದರೂ ಇರುವಲ್ಲಿ ಪ್ರಶ್ನೆಗಳನ್ನು ಕೇಳಿರಿ.” (ಜ್ಞಾನೋಕ್ತಿ 15:22) ಯೆಹೋವನು ನಿಶ್ಚಯವಾಗಿಯೂ ಬೈಬಲ್‌ ಸತ್ಯಗಳ ಅದ್ಭುತಕರವಾದ ತಿಳಿವಳಿಕೆಯಿಂದ ತನ್ನ ಸಾಕ್ಷಿಗಳನ್ನು ಆಶೀರ್ವದಿಸಿದ್ದಾನೆಂಬುದನ್ನು ಸಕಾಲದಲ್ಲಿ ನೀವು ನಿಸ್ಸಂದೇಹವಾಗಿ ಗಣ್ಯಮಾಡುವಿರಿ!

ಪ್ರೆಂಟಿಸ್‌ ಎಂಬ ಹೆಸರಿನ ಒಬ್ಬ ಯುವ ವ್ಯಕ್ತಿಯು ಹೇಳುವುದು: “ಲೋಕದ ಸ್ಥಿತಿಯನ್ನು ನೋಡಿ, ಕೆಲವೊಮ್ಮೆ ನಾನು ಖಿನ್ನಳಾಗುತ್ತೇನೆ. ಪ್ರಕಟನೆ 21:4ರಂತಹ ಶಾಸ್ತ್ರವಚನಗಳನ್ನು ನಾನು ತೆರೆದುನೋಡುತ್ತೇನೆ, ಮತ್ತು ಅದು ನಿರೀಕ್ಷಿಸಲು ನನಗೆ ಒಂದಿಷ್ಟು ಕಾರಣವನ್ನು ಕೊಡುತ್ತದೆ.” ಹೌದು, ದೇವರ ವಾಗ್ದಾನಗಳಲ್ಲಿ ದೃಢವಾದ ನಂಬಿಕೆಯಿರುವುದು, ನಿಮ್ಮ ಹೊರನೋಟವನ್ನು ಖಂಡಿತವಾಗಿಯೂ ಪ್ರಭಾವಿಸುವುದು. ನೀವು ಭವಿಷ್ಯತ್ತನ್ನು ವಿಷಣ್ಣತೆಯಿಂದಲ್ಲ, ಸಂತೋಷಕರ ಪೂರ್ವ ನಿರೀಕ್ಷಣೆಯಿಂದ ದೃಷ್ಟಿಸುವಿರಿ. ನಿಮ್ಮ ಪ್ರಚಲಿತ ಜೀವಿತವು ಒಂದು ಉದ್ದೇಶರಹಿತ ಹೋರಾಟವಲ್ಲ, ಬದಲಿಗೆ ‘ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ . . . ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ನಿಮಗಾಗಿ ಕೂಡಿಸಿಟ್ಟುಕೊಳ್ಳುವ’ ಒಂದು ಮಾಧ್ಯಮವಾಗುತ್ತದೆ.—1 ತಿಮೊಥೆಯ 6:19.

ಆದರೆ ಬೈಬಲಿನ ಬೋಧನೆಗಳನ್ನು ಕೇವಲ ಕಲಿತು, ನಂಬುವುದಕ್ಕಿಂತ, ಆ “ವಾಸ್ತವವಾದ ಜೀವವನ್ನು” ಗಳಿಸಲಿಕ್ಕಾಗಿ ಹೆಚ್ಚಿನ ವಿಷಯವಿದೆಯೊ?

[ಅಧ್ಯಯನ ಪ್ರಶ್ನೆಗಳು]

^ ಬೈಬಲಿನ ವಿಶ್ವಾಸಾರ್ಹತೆಯ ಕುರಿತಾದ ಹೆಚ್ಚಿನ ವಿಸ್ತೃತ ಮಾಹಿತಿಗಾಗಿ, ರೀಸನಿಂಗ್‌ ಫ್ರಮ್‌ ದ ಸ್ಕ್ರಿಪ್ಚ್‌ರ್ಸ್‌ (ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಇವರಿಂದ ಪ್ರಕಾಶಿತ) ಎಂಬ ಪ್ರಕಾಶನದ 58-68ನೆಯ ಪುಟಗಳನ್ನು ನೋಡಿರಿ.

ಚರ್ಚೆಗಾಗಿ ಪ್ರಶ್ನೆಗಳು

◻ ತಮ್ಮ ಭವಿಷ್ಯತ್ತಿನ ಕುರಿತಾಗಿ ಅನೇಕ ಯುವ ಜನರಿಗೆ ಯಾವ ಭಯಗಳಿವೆ?

◻ ಭೂಮಿಗಾಗಿ ದೇವರ ಮೂಲ ಉದ್ದೇಶವು ಏನಾಗಿತ್ತು? ದೇವರ ಉದ್ದೇಶವು ಬದಲಾಗಿರುವುದಿಲ್ಲ ಎಂಬುದರ ಕುರಿತು ನಾವು ಏಕೆ ಭರವಸೆಯಿಂದಿರಬಲ್ಲೆವು?

◻ ಭೂಮಿಗಾಗಿರುವ ದೇವರ ಉದ್ದೇಶವನ್ನು ನೆರವೇರಿಸುವುದರಲ್ಲಿ ರಾಜ್ಯವು ಯಾವ ಪಾತ್ರವನ್ನು ವಹಿಸುತ್ತದೆ?

◻ ನೀವು ಬೈಬಲಿನ ಬೋಧನೆಗಳ ಸತ್ಯತೆಯನ್ನು ಪರೀಕ್ಷಿಸುವುದು ಏಕೆ ಅಗತ್ಯವಾಗಿದೆ, ಮತ್ತು ನೀವು ಅದನ್ನು ಹೇಗೆ ಮಾಡಬಲ್ಲಿರಿ?

◻ ಬೈಬಲು ದೈವಪ್ರೇರಿತವಾಗಿದೆಯೆಂದು ನೀವು ಸ್ವತಃ ಹೇಗೆ ರುಜುಪಡಿಸಿಕೊಳ್ಳಬಲ್ಲಿರಿ?

[ಪುಟ 306 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನಗೆ ತೀರ ನಿರಾಶಾ ಮನೋಭಾವವಿದೆ. ನಾವು ನಿಜವಾಗಿಯೂ ನಮ್ಮ ಸಮಸ್ಯೆಗಳನ್ನು ಬಗೆಹರಿಸಲಾರೆವು.”—ಮನೋವಿಜ್ಞಾನಿ ಬಿ. ಎಫ್‌. ಸ್ಕಿನ್ನರ್‌

[ಪುಟ 307 ರಲ್ಲಿರುವ ಚಿತ್ರಗಳು]

ಭೂಮಿಯ ಸೃಷ್ಟಿಕರ್ತನು, ನಮ್ಮ ಭೂಗ್ರಹವನ್ನು ವಿನಾಶಗೊಳಿಸುವಂತೆ ಮನುಷ್ಯನನ್ನು ಅನುಮತಿಸಲಾರನು

[ಪುಟ 309 ರಲ್ಲಿರುವ ಚಿತ್ರಗಳು]

ಬೈಬಲಿನ ಸತ್ಯತೆಯ ಕುರಿತಾಗಿ ನೀವು ಸ್ವತಃ ಮನಗಂಡಿದ್ದೀರೊ?