ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಾನಸ್ಥರ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಸಮಾನಸ್ಥರ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಅಧ್ಯಾಯ 9

ಸಮಾನಸ್ಥರ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಹದಿನಾಲ್ಕು ವರ್ಷ ಪ್ರಾಯದಲ್ಲೇ ಕ್ಯಾರೆನ್‌ ಒಬ್ಬ ಭಾರಿ ಅಮಲೌಷಧ ಉಪಯೋಗಿಯಾಗಿದ್ದಳು ಮತ್ತು ಕ್ರಮವಾಗಿ ಸಂಭೋಗದಲ್ಲಿ ಒಳಗೂಡುತ್ತಿದ್ದಳು. 17 ವರ್ಷ ಪ್ರಾಯದೊಳಗೆ, ಜಿಮ್‌ ಒಬ್ಬ ನಿರ್ಬಂಧಿತ ಮದ್ಯವ್ಯಸನಿಯಾಗಿದ್ದನು ಮತ್ತು ಅನೈತಿಕ ಜೀವನವನ್ನು ನಡೆಸುತ್ತಿದ್ದನು. ತಾವು ನಡೆಸುತ್ತಿದ್ದ ಜೀವನವನ್ನು ಅಥವಾ ಮಾಡುತ್ತಿದ್ದ ಸಂಗತಿಗಳನ್ನು ಅವರು ನಿಜವಾಗಿಯೂ ಇಷ್ಟಪಡುತ್ತಿರಲಿಲ್ಲವೆಂಬುದಾಗಿ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಹಾಗಿರುವಲ್ಲಿ, ಅವರು ಹಾಗೆ ವರ್ತಿಸಿದ್ದು ಏಕೆ? ಸಮಾನಸ್ಥರ ಒತ್ತಡದಿಂದಲೇ!

“ನಾನು ಯಾರೊಂದಿಗೆ ಇದ್ದೆನೊ ಅವರೆಲ್ಲರೂ ಈ ವಿಷಯಗಳಲ್ಲಿ ಒಳಗೂಡಿದ್ದರು, ಮತ್ತು ಅದು ನನ್ನ ಮೇಲೆ ದೊಡ್ಡ ಪರಿಣಾಮವನ್ನು ಬೀರಿತು,” ಎಂದು ಕ್ಯಾರೆನ್‌ ವಿವರಿಸುತ್ತಾಳೆ. “ಭಿನ್ನನಾಗಿರುವ ಮೂಲಕ ನಾನು ನನ್ನ ಸ್ನೇಹಿತರನ್ನು ಕಳೆದುಕೊಳ್ಳಲು ಬಯಸಲಿಲ್ಲ” ಎಂದು ಹೇಳುತ್ತಾ ಜಿಮ್‌ ಸಮ್ಮತಿಸಿದನು.

ಯುವ ಜನರು ತಮ್ಮ ಸಮಾನಸ್ಥರನ್ನು ಅನುಕರಿಸುವ ಕಾರಣ

ಕೆಲವು ಯುವ ಜನರು ದೊಡ್ಡವರಾದಂತೆ, ಅವರ ಮೇಲೆ ಹೆತ್ತವರ ಪ್ರಭಾವವು ಕ್ಷೀಣಿಸುತ್ತದೆ, ಮತ್ತು ಜನಪ್ರಿಯರಾಗುವ ಹಾಗೂ ಸಮಾನಸ್ಥರಿಂದ ಸ್ವೀಕರಿಸಲ್ಪಡುವ ಬಯಕೆಯು ಬಲವಾಗುತ್ತಾ ಹೋಗುತ್ತದೆ. ಇತರರು, ತಮ್ಮನ್ನು “ಅರ್ಥಮಾಡಿಕೊಳ್ಳುವ” ಒಬ್ಬರೊಂದಿಗೆ ಅಥವಾ ತಾವು ಪ್ರೀತಿಸಲ್ಪಟ್ಟಿದ್ದೇವೆ ಮತ್ತು ತಮ್ಮ ಅಗತ್ಯವಿದೆಯೆಂಬ ಅನಿಸಿಕೆಯನ್ನು ಉಂಟುಮಾಡುವವರೊಬ್ಬರೊಂದಿಗೆ ಮಾತಾಡುವ ಒಂದು ಅಗತ್ಯವನ್ನು ಭಾವಿಸುತ್ತಾರಷ್ಟೇ. ಅಧಿಕಾಂಶ ವಿದ್ಯಮಾನದಲ್ಲಿರುವಂತೆ, ಮನೆಯಲ್ಲಿ ಅಂತಹ ಸಂವಾದದ ಕೊರತೆಯಿರುವಾಗ, ಅವರು ಅದನ್ನು ತಮ್ಮ ಸಮಾನಸ್ಥರ ನಡುವೆ ಹುಡುಕುತ್ತಾರೆ. ಅನೇಕ ವೇಳೆ, ಆತ್ಮಸ್ಥೈರ್ಯದ ಕೊರತೆ ಮತ್ತು ಅಸುರಕ್ಷೆಯ ಭಾವನೆಗಳು ಸಹ, ಕೆಲವರನ್ನು ಸಮಾನಸ್ಥರ ಪ್ರಭಾವಕ್ಕೆ ತುತ್ತಾಗುವಂತೆ ಮಾಡುತ್ತವೆ.

ಸಮಾನಸ್ಥರ ಪ್ರಭಾವವು ಕೆಟ್ಟದ್ದೇ ಆಗಿರುತ್ತದೆಂದಲ್ಲ. ಒಂದು ಜ್ಞಾನೋಕ್ತಿಯು ಹೇಳುವುದು: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” (ಜ್ಞಾನೋಕ್ತಿ 27:17) ಒಂದು ಕಬ್ಬಿಣದ ಕತ್ತಿಯು ಇನ್ನೊಂದು ಕತ್ತಿಯ ಮೊಂಡಾದ ಮೊನೆಯನ್ನು ಹರಿತಗೊಳಿಸಸಾಧ್ಯವಿರುವಂತೆ, ಇತರ ಯುವ ಜನರೊಂದಿಗಿನ ಸಾಹಚರ್ಯವು—ಆ ಸಮಾನಸ್ಥರಿಗೆ ಪ್ರೌಢ, ಸ್ವಸ್ಥ ಮನೋಭಾವಗಳಿರುವಲ್ಲಿ—ನಿಮ್ಮ ವ್ಯಕ್ತಿತ್ವವನ್ನು ‘ಹರಿತಗೊಳಿಸಿ,’ ನಿಮ್ಮನ್ನು ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ಮಾಡಬಲ್ಲದು.

ಅನೇಕ ವೇಳೆಯಾದರೊ, ಯುವ ಜನರು ವಿಷಾದಕರವಾಗಿ ಪ್ರೌಢತೆಯಲ್ಲಿ—ಮಾನಸಿಕ ಹಾಗೂ ಆತ್ಮಿಕ ವಿಷಯದಲ್ಲಿ—ಕೊರತೆಯುಳ್ಳವರಾಗಿರುತ್ತಾರೆ. ಅನೇಕ ಯುವ ಜನರಿಗೆ, ಯುಕ್ತವಲ್ಲದ, ವಿಶ್ವಾಸಾರ್ಹವಲ್ಲದ, ಮುಂದಾಲೋಚನೆಯೂ ಇಲ್ಲದ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳು ಇರುತ್ತವೆ. ಆದುದರಿಂದ ಒಬ್ಬ ಯುವ ವ್ಯಕ್ತಿ ನಿರಾಕ್ಷೇಪಣೀಯವಾಗಿ ಸಮಾನಸ್ಥರ ನಿಯಂತ್ರಣದ ಕೆಳಗೆ ಬರುವಾಗ, ಅದು ಕುರುಡನು ಕುರುಡನನ್ನು ನಡೆಸುವುದಕ್ಕಿಂತ ಹೆಚ್ಚೇನೂ ಉತ್ತಮವಾಗಿರದು. (ಮತ್ತಾಯ 15:14ನ್ನು ಹೋಲಿಸಿರಿ.) ಪರಿಣಾಮಗಳು ವಿಪತ್ಕಾರಕವಾಗಿರಬಲ್ಲವು.

ಸಮಾನಸ್ಥರು ನಿಮ್ಮನ್ನು ಹುಚ್ಚುಹುಚ್ಚಾದ ನಡವಳಿಕೆಯ ಕಡೆಗೆ ನೂಕಿಕೊಂಡು ಹೋಗದಿರುವಾಗಲೂ, ಅವರ ಪ್ರಭಾವವು ಇನ್ನೂ ಪೀಡಿಸುವಂತಹದ್ದಾಗಿರಬಲ್ಲದು. “ಇತರ ಮಕ್ಕಳಿಂದ ಅಂಗೀಕರಿಸಲ್ಪಡುವುದರ ಕುರಿತಾಗಿ ನಾವು ತುಂಬ ಕಾಳಜಿವಹಿಸುತ್ತೇವೆ,” ಎನ್ನುತ್ತಾಳೆ ಡೆಬಿ. “ನಾನು ಹದಿನೆಂಟು ವರ್ಷದವಳಾಗಿದ್ದಾಗ ಜನಮೆಚ್ಚಿಕೆಯನ್ನು ಪಡೆಯದಿರುವ ಕುರಿತಾಗಿ ನೆನಸಲೂ ಭಯಪಡುತ್ತಿದ್ದೆ, ಏಕಂದರೆ ನನ್ನನ್ನು ಒಂದು ಸುಸಮಯಕ್ಕಾಗಿ ಆಮಂತ್ರಿಸಲು ಯಾರೂ ಇರುತ್ತಿರಲಿಲ್ಲ. ನಾನು ಪ್ರತ್ಯೇಕಿಸಲ್ಪಡುವೆನೆಂದು ಭಯಪಟ್ಟೆ.” ಹೀಗೆ ಡೆಬಿ ತನ್ನ ಸಮಾನಸ್ಥರ ಮೆಚ್ಚುಗೆಯನ್ನು ಗಳಿಸಲು ಕಠಿನವಾಗಿ ಶ್ರಮಿಸಿದಳು.

ನಾನು ಪ್ರಭಾವಿಸಲ್ಪಡುತ್ತಿದ್ದೇನೊ?

ಅವರೊಂದಿಗೆ ಹೊಂದಿಕೊಳ್ಳಲಿಕ್ಕಾಗಿ ನೀವು ಕೂಡ ಒಂದು ನಿರ್ದಿಷ್ಟ ವಿಧದಲ್ಲಿ ಉಡುಪನ್ನು ಧರಿಸಲು, ಮಾತಾಡಲು ಅಥವಾ ವರ್ತಿಸಲು ಆರಂಭಿಸಿದ್ದೀರೊ? ಹದಿನೇಳು ವರ್ಷ ಪ್ರಾಯದ ಸೂಸಿ ಪ್ರತಿಪಾದಿಸುವುದು, “ನೀವೇನನ್ನು ಮಾಡಲು ಬಯಸುವುದಿಲ್ಲವೊ ಅದನ್ನು ನೀವು ಮಾಡುವಂತೆ ಇನ್ನೊಬ್ಬ ಯುವ ವ್ಯಕ್ತಿಯು ನಿಜವಾಗಿಯೂ ಒತ್ತಾಯಿಸಸಾಧ್ಯವಿಲ್ಲ.” ನಿಜ, ಆದರೆ ಸಮಾನಸ್ಥರ ಒತ್ತಡವು ಎಷ್ಟು ನವಿರಾಗಿರಸಾಧ್ಯವಿದೆಯೆಂದರೆ, ಅದು ನಿಮ್ಮನ್ನು ಎಷ್ಟು ಬಾಧಿಸುತ್ತಿದೆಯೆಂಬುದನ್ನು ನೀವು ಗ್ರಹಿಸದಿರಬಹುದು. ಉದಾಹರಣೆಗಾಗಿ, ಅಪೊಸ್ತಲ ಪೇತ್ರನನ್ನು ಪರಿಗಣಿಸಿರಿ. ಬಲವಾದ ಮನಗಾಣಿಕೆಯ ಒಬ್ಬ ಸಾಹಸಿ ಪುರುಷನಾಗಿದ್ದು, ಪೇತ್ರನು ಕ್ರೈಸ್ತತ್ವದ ಆಧಾರಸ್ತಂಭವಾಗಿದ್ದನು. ಎಲ್ಲಾ ರಾಷ್ಟ್ರಗಳು ಮತ್ತು ಜಾತಿಗಳ ಜನರು ತನ್ನ ಅನುಗ್ರಹವನ್ನು ಪಡೆಯಸಾಧ್ಯವಿದೆಯೆಂದು ದೇವರು ಪೇತ್ರನಿಗೆ ಪ್ರಕಟಪಡಿಸಿದನು. ಹೀಗೆ ಪೇತ್ರನು, ಪ್ರಥಮ ಅನ್ಯ ವಿಶ್ವಾಸಿಗಳಿಗೆ ಕ್ರೈಸ್ತರಾಗಲು ಸಹಾಯಮಾಡಿದನು.—ಅ. ಕೃತ್ಯಗಳು 10:28.

ಆದಾಗಲೂ, ಸಮಯವು ಗತಿಸಿದಂತೆ ಪೇತ್ರನು, ಎಲ್ಲಿ ಅನೇಕ ಯೆಹೂದ್ಯೇತರರು ಕ್ರೈಸ್ತರಾಗಿದ್ದರೊ ಆ ನಗರವಾದ ಅಂತಿಯೋಕ್ಯದಲ್ಲಿ ನೆಲೆಸಿದನು. ಪೇತ್ರನು ಈ ಅನ್ಯಜನಾಂಗದ ವಿಶ್ವಾಸಿಗಳೊಂದಿಗೆ ಮುಕ್ತವಾಗಿ ಜೊತೆಗೂಡಿದನು. ಒಂದು ದಿನ, ಯೆಹೂದ್ಯೇತರರ ವಿರುದ್ಧ ಇನ್ನೂ ಪೂರ್ವಾಗ್ರಹಗಳನ್ನಿರಿಸಿದ್ದ, ಯೆರೂಸಲೇಮಿನ ಕೆಲವು ಯೆಹೂದಿ ಕ್ರೈಸ್ತರು, ಅಂತಿಯೋಕ್ಯವನ್ನು ಸಂದರ್ಶಿಸಿದರು. ಪೇತ್ರನು ಈಗ ತನ್ನ ಯೆಹೂದಿ ಸಮಾನಸ್ಥರ ನಡುವೆ ಹೇಗೆ ನಡೆದುಕೊಳ್ಳುವನು?

ಒಳ್ಳೇದು, ಪೇತ್ರನು ಅನ್ಯ ಕ್ರೈಸ್ತರೊಂದಿಗೆ ಊಟವನ್ನು ಮಾಡಲು ನಿರಾಕರಿಸುತ್ತಾ, ತನ್ನನ್ನು ಅವರಿಂದ ಪ್ರತ್ಯೇಕಿಸಿಕೊಂಡನು! ಯಾಕೆ? ತನ್ನ ಸಮಾನಸ್ಥರನ್ನು ರೇಗಿಸುವುದರ ಕುರಿತಾಗಿ ಅವನು ಭಯಪಟ್ಟನೆಂದು ತೋರುತ್ತದೆ. ‘ಅವರು ಇಲ್ಲಿರುವಾಗ ಸ್ವಲ್ಪ ಮಣಿಯುವೆ, ಅವರು ಹೋದ ನಂತರ ಅನ್ಯರೊಂದಿಗೆ ಊಟಮಾಡುವುದನ್ನು ಮುಂದುವರಿಸುವೆ. ಇಂತಹ ಒಂದು ಚಿಕ್ಕ ವಿಷಯದ ಕುರಿತಾಗಿ ಅವರೊಂದಿಗಿನ ನನ್ನ ಒಳ್ಳೇ ಸಂಬಂಧವನ್ನು ಏಕೆ ಕೆಡಿಸಿಕೊಳ್ಳಲಿ?’ ಎಂದು ಅವನು ತರ್ಕಿಸಿದ್ದಿರಬಹುದು. ಹೀಗೆ ಪೇತ್ರನು, ಅವನು ನಿಜವಾಗಿಯೂ ಯಾವುದನ್ನು ನಂಬಲಿಲ್ಲವೊ ಅದನ್ನು ಮಾಡುವ ಮೂಲಕ, ತನ್ನ ಸ್ವಂತ ಮೂಲತತ್ತ್ವಗಳನ್ನು ತಿರಸ್ಕರಿಸುತ್ತಾ, ನಟನೆಯನ್ನು ಮಾಡುತ್ತಿದ್ದನು. (ಗಲಾತ್ಯ 2:11-14) ಹಾಗಿರುವಾಗ, ಯಾರಿಗೂ ಸಮಾನಸ್ಥರ ಒತ್ತಡವು ತಪ್ಪಿದ್ದಲ್ಲವೆಂಬುದು ವ್ಯಕ್ತ.

ನಾನು ಹೇಗೆ ಪ್ರತಿಕ್ರಿಯಿಸುವೆ?

ಆದುದರಿಂದ ‘ಇತರರು ಏನನ್ನು ನೆನಸುತ್ತಾರೊ ಅದರ ಕುರಿತಾಗಿ ನಾನು ಹೆದರುವುದಿಲ್ಲ!’ ಎಂದು ಹೇಳುವುದು ಸುಲಭವಾಗಿರುವಾಗ, ಆ ನಿರ್ಧಾರವನ್ನು ಸಮಾನಸ್ಥರ ಒತ್ತಡದ ಎದುರಿನಲ್ಲಿ ಕಾಪಾಡಿಕೊಂಡು ಹೋಗುವುದು ಬೇರೊಂದು ಸಂಗತಿಯಾಗಿದೆ. ಉದಾಹರಣೆಗಾಗಿ, ಈ ಮುಂದಿನ ಪರಿಸ್ಥಿತಿಗಳಲ್ಲಿ ನೀವು ಏನು ಮಾಡುವಿರಿ?

ನಿಮ್ಮ ಶಾಲಾಸಂಗಾತಿಗಳಲ್ಲೊಬ್ಬರು ಬೇರೆ ಯುವ ಜನರ ಮುಂದೆ ನಿಮಗೆ ಒಂದು ಸಿಗರೇಟನ್ನು ನೀಡುತ್ತಾರೆ. ಧೂಮಪಾನ ಮಾಡುವುದು ತಪ್ಪೆಂದು ನಿಮಗೆ ತಿಳಿದಿದೆ. ಆದರೆ ನೀವೇನು ಮಾಡುವಿರೆಂಬುದನ್ನು ನೋಡಲು ಅವರೆಲ್ಲರೂ ಕಾಯುತ್ತಿದ್ದಾರೆ . . .

ಶಾಲೆಯಲ್ಲಿನ ಹುಡುಗಿಯರು ತಮ್ಮ ಬಾಯ್‌ಫ್ರೆಂಡ್‌ಗಳೊಂದಿಗೆ ಸಂಭೋಗ ಮಾಡುವ ಕುರಿತಾಗಿ ಮಾತಾಡುತ್ತಿದ್ದಾರೆ. ಹುಡುಗಿಯರಲ್ಲಿ ಒಬ್ಬಳು ನಿಮಗೆ ಹೀಗೆ ಹೇಳುತ್ತಾಳೆ: “ನೀನು ಇನ್ನೂ ಒಬ್ಬ ಕನ್ಯೆಯಾಗಿಯೇ ಉಳಿದಿರುವುದಿಲ್ಲ, ಅಲ್ಲವೊ?”

ಬೇರೆಲ್ಲಾ ಹುಡುಗಿಯರು ಧರಿಸುತ್ತಿರುವಂತಹದ್ದೇ ರೀತಿಯ ಒಂದು ಉಡುಗೆಯನ್ನು ನೀವು ಧರಿಸಲು ಬಯಸುತ್ತೀರಿ, ಆದರೆ ಅದು ತೀರ ಗಿಡ್ಡವೆಂದು ಅಮ್ಮ ಹೇಳುತ್ತಾರೆ. ನೀವು ಧರಿಸಬೇಕೆಂದು ಅವರು ಪಟ್ಟುಹಿಡಿಯುವ ತೊಡುಗೆಯು, ನೀವು ಆರು ವರ್ಷದ ಹುಡುಗಿಯ ಹಾಗೆ ಕಾಣುವಂತೆ ಮಾಡುತ್ತದೆಂದು ನೀವು ಭಾವಿಸುತ್ತೀರಿ. ನಿಮ್ಮ ಸಹಪಾಠಿಗಳು ಕೀಟಲೆಮಾಡುತ್ತಾರೆ. ಒಬ್ಬ ಹುಡುಗಿ ಕೇಳುತ್ತಾಳೆ, “ನಿನ್ನ ಮಧ್ಯಾಹ್ನದೂಟದ ಹಣವನ್ನು ಉಳಿಸಿ, ಸಭ್ಯವಾದ ಉಡುಪನ್ನು ನೀನು ಖರೀದಿಸಲಾರೆಯಾ? ನಿನ್ನ ತಾಯಿಗೆ ಹೇಳುವ ಅಗತ್ಯವಿಲ್ಲ. ನಿನ್ನ ಶಾಲೆಯ ಬಟ್ಟೆಗಳನ್ನು ನಿನ್ನ ಶಾಲೆಯ ಲಾಕರ್‌ನಲ್ಲಿಡು ಅಷ್ಟೇ.”

ಎದುರಿಸಲು ಸುಲಭವಾದ ಸನ್ನಿವೇಶಗಳೊ? ಇಲ್ಲ, ಆದರೆ ನೀವು ನಿಮ್ಮ ಸಮಾನಸ್ಥರಿಗೆ ಇಲ್ಲವೆಂದು ಹೇಳಲು ಹೆದರುತ್ತೀರಾದರೆ, ಕೊನೆಯಲ್ಲಿ ನೀವು ಸ್ವತಃ ನಿಮಗೆ, ನಿಮ್ಮ ಮಟ್ಟಗಳಿಗೆ, ಮತ್ತು ನಿಮ್ಮ ಹೆತ್ತವರಿಗೆ ಇಲ್ಲವೆಂದು ಹೇಳುವಿರಿ. ಸಮಾನಸ್ಥರ ಒತ್ತಡವನ್ನು ಎದುರಿಸಿ ನಿಲ್ಲಲಿಕ್ಕಾಗಿ ನೀವು ಬಲವನ್ನು ಹೇಗೆ ವಿಕಸಿಸಿಕೊಳ್ಳಬಲ್ಲಿರಿ?

“ಯೋಚನಾ ಸಾಮರ್ಥ್ಯ”

ಹದಿನೈದು ವರ್ಷ ಪ್ರಾಯದ ರಾಬಿನ್‌ ಧೂಮಪಾನ ಮಾಡಲಾರಂಭಿಸಿದ್ದು, ಅವಳು ಹಾಗೆ ಮಾಡಲು ಬಯಸಿದ್ದರಿಂದಲ್ಲ, ಬದಲಾಗಿ ಇತರರೆಲ್ಲರೂ ಅದನ್ನು ಮಾಡಿದ ಕಾರಣಕ್ಕಾಗಿಯೇ. ಅವಳು ಜ್ಞಾಪಿಸಿಕೊಳ್ಳುವುದು: “ಅನಂತರ ನಾನು ಯೋಚಿಸಲಾರಂಭಿಸಿದೆ, ‘ನನಗೆ ಇದು ಇಷ್ಟವಿಲ್ಲ. ನಾನಿದನ್ನು ಏಕೆ ಮಾಡುತ್ತಿದ್ದೇನೆ?’ ಆದುದರಿಂದ ನಾನು ಈಗ ಧೂಮಪಾನ ಮಾಡುವುದಿಲ್ಲ.” ಸ್ವತಃ ಆಲೋಚಿಸುವ ಮೂಲಕ, ಅವಳು ತನ್ನ ಸಮಾನಸ್ಥರನ್ನು ಎದುರಿಸಿ ನಿಲ್ಲಲು ಶಕ್ತಳಾದಳು!

ಹಾಗಿರುವಾಗ, “ಜ್ಞಾನ ಮತ್ತು ಯೋಚನಾ ಸಾಮರ್ಥ್ಯ”ವನ್ನು (NW) ವಿಕಸಿಸಿಕೊಳ್ಳುವಂತೆ ಬೈಬಲ್‌ ಸೂಕ್ತವಾಗಿಯೇ ಯುವ ಜನರನ್ನು ಪ್ರೇರಿಸುತ್ತದೆ. (ಜ್ಞಾನೋಕ್ತಿ 1:1-5) ಯೋಚನಾ ಸಾಮರ್ಥ್ಯವಿರುವವನೊಬ್ಬನು, ನಿರ್ದೇಶನಕ್ಕಾಗಿ ಅನನುಭವಿ ಸಮಾನಸ್ಥರ ಮೇಲೆ ಆತುಕೊಳ್ಳಬೇಕಾಗಿಲ್ಲ. ಅದೇ ಸಮಯದಲ್ಲಿ, ಆ ವ್ಯಕ್ತಿಯು ಅಹಂಭಾವವುಳ್ಳವನಾಗಿ, ಇತರರ ಅಭಿಪ್ರಾಯಗಳನ್ನು ಅಲಕ್ಷಿಸುವುದಿಲ್ಲ. (ಜ್ಞಾನೋಕ್ತಿ 14:16) “ಜ್ಞಾನಿಯಾಗು”ವಂತೆ, ಅವನು ಅಥವಾ ಅವಳು ‘ಬುದ್ಧಿವಾದವನ್ನು ಕೇಳಿ, ಉಪದೇಶವನ್ನಾಲಿಸಲು’ ಸಿದ್ಧಮನಸ್ಕರಾಗಿರುತ್ತಾರೆ.—ಜ್ಞಾನೋಕ್ತಿ 19:20.

ಆದರೆ, ನಿಮ್ಮ ಯೋಚನಾ ಸಾಮರ್ಥ್ಯಗಳನ್ನು ಉಪಯೋಗಿಸುತ್ತಿರುವುದಕ್ಕಾಗಿ, ನಿಮ್ಮನ್ನು ಇಷ್ಟಪಡದಿರುವಲ್ಲಿ ಅಥವಾ ನಿಮ್ಮ ಕುಚೋದ್ಯವೂ ಮಾಡಲ್ಪಡುವಲ್ಲಿ ಆಶ್ಚರ್ಯಪಡಬೇಡಿರಿ. “ಯೋಚನಾ ಸಾಮರ್ಥ್ಯಗಳುಳ್ಳ ಪುರುಷನು [ಅಥವಾ ಸ್ತ್ರೀಯು] ದ್ವೇಷಿಸಲ್ಪಡುತ್ತಾನೆ [ಅಥವಾ ದ್ವೇಷಿಸಲ್ಪಡುತ್ತಾಳೆ]” (NW) ಎಂದು ಜ್ಞಾನೋಕ್ತಿ 14:17 ಹೇಳುತ್ತದೆ. ಆದರೆ ನಿಜವಾಗಿ, ಯಾರಿಗೆ ಹೆಚ್ಚು ಬಲವಿದೆ, ತಮ್ಮ ಭಾವೋದ್ರೇಕಗಳು ಮತ್ತು ಉದ್ವೇಗಗಳಿಗೆ ಒಳಪಡುವವರಿಗೊ ಅಥವಾ ಅಯೋಗ್ಯವಾದ ಆಶೆಗಳಿಗೆ ಇಲ್ಲವೆಂದು ಹೇಳುವವರಿಗೊ? (ಜ್ಞಾನೋಕ್ತಿ 16:32ನ್ನು ಹೋಲಿಸಿರಿ.) ನಿಮ್ಮನ್ನು ಕುಚೋದ್ಯ ಮಾಡುವವರು ಜೀವನದಲ್ಲಿ ಯಾವ ದಿಕ್ಕಿಗೆ ಅಭಿಮುಖವಾಗಿದ್ದಾರೆ? ನೀವು ಸಹ ನಿಮ್ಮ ಜೀವನವನ್ನು ಅಲ್ಲಿಯೇ ಕೊನೆಗಾಣಿಸಲು ಬಯಸುತ್ತೀರೊ? ಅಂತಹವರು, ಕೇವಲ ನಿಮ್ಮ ಕುರಿತಾಗಿ ಈರ್ಷ್ಯೆಪಟ್ಟು, ತಮ್ಮ ಸ್ವಂತ ಅಸುರಕ್ಷೆಯನ್ನು ಕುಚೋದ್ಯದ ಮೂಲಕ ಮುಚ್ಚಿಬಿಡುತ್ತಿರಬಹುದೊ?

ಉರುಲಿನಿಂದ ತಪ್ಪಿಸಿಕೊಳ್ಳುವುದು

“ಮನುಷ್ಯನ ಭಯ ಉರುಲು” ಎಂದು ಜ್ಞಾನೋಕ್ತಿ 29:25 ಹೇಳುತ್ತದೆ. ಬೈಬಲ್‌ ಸಮಯಗಳಲ್ಲಿ, ಒಂದು ಉರುಲು, ಗುಮಾನಿಯಿಲ್ಲದೆ ಅದರ ಸೆಳೆವಸ್ತುವನ್ನು ಕಸಿದುಕೊಳ್ಳುವ ಪ್ರಾಣಿಯೊಂದನ್ನು ಶೀಘ್ರವಾಗಿ ಸೆರೆಹಿಡಿಯಸಾಧ್ಯವಿತ್ತು. ಇಂದು, ನಿಮ್ಮ ಸಮಾನಸ್ಥರಿಂದ ಅಂಗೀಕರಿಸಲ್ಪಡುವ ಬಯಕೆಯು, ತದ್ರೀತಿಯಲ್ಲಿ ಒಂದು ಸೆಳೆವಸ್ತುವಿನೋಪಾದಿ ಕೆಲಸಮಾಡಬಲ್ಲದು. ಅದು ನಿಮ್ಮನ್ನು ದೈವಿಕ ಮಟ್ಟಗಳನ್ನು ಉಲ್ಲಂಘಿಸುವ ಪಾಶದೊಳಕ್ಕೆ ಸೆಳೆಯಬಲ್ಲದು. ಹಾಗಾದರೆ, ನೀವು ಮನುಷ್ಯನ ಭಯದ ಉರುಲಿನಿಂದ ಹೇಗೆ ತಪ್ಪಿಸಿಕೊಳ್ಳಬಲ್ಲಿರಿ—ಅಥವಾ ಅದನ್ನು ದೂರಮಾಡಬಲ್ಲಿರಿ?

ಪ್ರಥಮವಾಗಿ, ನಿಮ್ಮ ಸ್ನೇಹಿತರನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿರಿ! (ಜ್ಞಾನೋಕ್ತಿ 13:20) ಕ್ರೈಸ್ತ ಮೌಲ್ಯಗಳು ಮತ್ತು ಮಟ್ಟಗಳಿರುವವರೊಂದಿಗೆ ಸಹವಾಸಿಸಿರಿ. ನಿಜ, ಇದು ನಿಮ್ಮ ಸ್ನೇಹಗಳನ್ನು ಸೀಮಿತಗೊಳಿಸುತ್ತದೆ. ಒಬ್ಬ ಹದಿವಯಸ್ಕನು ಹೇಳುವಂತೆ: “ಶಾಲೆಯಲ್ಲಿರುವ ಇತರರೊಂದಿಗೆ, ಅಮಲೌಷಧಗಳು ಮತ್ತು ಲೈಂಗಿಕತೆಯ ಕುರಿತಾದ ಅವರ ವಿಚಾರಗಳೊಂದಿಗೆ ನಾನು ಹೊಂದಿಕೊಂಡು ಹೋಗದಿದ್ದಾಗ, ಸ್ವಲ್ಪ ಸಮಯದಲ್ಲೇ ಅವರು ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಟ್ಟರು. ಅವರಿಗೆ ಹೊಂದಿಕೊಳ್ಳುವ ತುಂಬ ಒತ್ತಡವನ್ನು ಇದು ತೆಗೆದುಹಾಕಿದರೂ, ಅದು ನನಗೆ ಸ್ವಲ್ಪ ಒಂಟಿಯಾಗಿರುವ ಭಾವನೆಯನ್ನು ಕೊಟ್ಟಿತು.” ಆದರೆ ಸಮಾನಸ್ಥರ ಪ್ರಭಾವವು ನಿಮ್ಮನ್ನು ಆತ್ಮಿಕವಾಗಿ ಮತ್ತು ನೈತಿಕವಾಗಿ ಕೆಳಗೆಳೆಯುವಂತೆ ಅನುಮತಿಸುವುದರ ಬದಲಿಗೆ, ಸ್ವಲ್ಪ ಒಂಟಿತನವನ್ನು ಅನುಭವಿಸುವುದು ಲೇಸು. ಒಬ್ಬನ ಕುಟುಂಬದೊಳಗಿನ ಮತ್ತು ಕ್ರೈಸ್ತ ಸಭೆಯೊಳಗಿನ ಸಹವಾಸವು, ಒಂಟಿತನದ ಶೂನ್ಯಭಾವವನ್ನು ತುಂಬಿಸಲು ಸಹಾಯ ಮಾಡಬಲ್ಲದು.

ನಿಮ್ಮ ಹೆತ್ತವರಿಗೆ ಕಿವಿಗೊಡುವುದು ಸಹ ನಿಮಗೆ ಸಮಾನಸ್ಥರ ಒತ್ತಡವನ್ನು ವಿರೋಧಿಸಲು ಸಹಾಯಮಾಡುತ್ತದೆ. (ಜ್ಞಾನೋಕ್ತಿ 23:22) ನಿಮಗೆ ಸರಿಯಾದ ಮೌಲ್ಯಗಳನ್ನು ಕಲಿಸಲು ಅವರು ಬಹುಶಃ ಕಠಿನವಾಗಿ ಶ್ರಮಿಸುತ್ತಿದ್ದಾರೆ. ಒಬ್ಬ ಯುವ ಹುಡುಗಿ ಹೇಳಿದ್ದು: “ನನ್ನ ಹೆತ್ತವರು ನನ್ನೊಂದಿಗೆ ಕಟ್ಟುನಿಟ್ಟಾಗಿದ್ದರು. ಕೆಲವೊಮ್ಮೆ ಅದು ನನಗೆ ಇಷ್ಟವಾಗುತ್ತಿರಲಿಲ್ಲ, ಆದರೆ ಅವರು ದೃಢರಾಗಿದ್ದು, ನನ್ನ ಸಹವಾಸವನ್ನು ಸೀಮಿತಗೊಳಿಸಿದ್ದಕ್ಕಾಗಿ ನಾನು ಸಂತೋಷಿತಳಾಗಿದ್ದೇನೆ.” ಹೆತ್ತವರ ಆ ಸಹಾಯದ ಕಾರಣದಿಂದ, ಅವಳು ಅಮಲೌಷಧಗಳನ್ನು ಉಪಯೋಗಿಸುವ ಮತ್ತು ಸಂಭೋಗದಲ್ಲಿ ಒಳಗೂಡುವ ಒತ್ತಡಕ್ಕೆ ಮಣಿಯಲಿಲ್ಲ.

ಹದಿವಯಸ್ಕರ ಸಲಹೆಗಾರರಾದ ಬೆತ್‌ ವಿನ್‌ಶಿಪ್‌ ಮತ್ತೂ ಅವಲೋಕಿಸುವುದು: “ತರುಣಾವಸ್ಥೆಯಲ್ಲಿದ್ದು, ಯಾವುದಾದರೂ ವಿಷಯದಲ್ಲಿ ನಿಪುಣರಾಗಿರುವವರಿಗೆ, ತಮ್ಮ ಸ್ವಂತ ಯೋಗ್ಯತೆಗಳ ಕಾರಣ ಪ್ರಾಮುಖ್ಯರೆಂಬ ಅನಿಸಿಕೆಯಾಗುತ್ತದೆ. ಒಳ್ಳೆಯ ಸ್ವಪ್ರತೀಕಕ್ಕಾಗಿ ಅವರು ಸಮಾನಸ್ಥರ ಮೆಚ್ಚಿಕೆಯ ಮೇಲೆ ಅವಲಂಬಿಸಬೇಕಾಗಿಲ್ಲ.” ಹೀಗಿರುವುದರಿಂದ, ಶಾಲೆಯಲ್ಲಿ ಮತ್ತು ಮನೆಯಲ್ಲಿ ನೀವೇನನ್ನು ಮಾಡುತ್ತೀರೊ ಅದರಲ್ಲಿ ಕೌಶಲವುಳ್ಳವರು ಮತ್ತು ಸಮರ್ಥರಾಗಿರಲು ಏಕೆ ಶ್ರಮಿಸಬಾರದು? ವಿಶೇಷವಾಗಿ ಯೆಹೋವನ ಯುವ ಸಾಕ್ಷಿಗಳು ತಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ‘ಅವಮಾನಕ್ಕೆ ಗುರಿಯಾಗದ ಕೆಲಸದವರೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರೂ’ ಆಗಿರಲು ಶ್ರಮಿಸುತ್ತಾರೆ.—2 ತಿಮೊಥೆಯ 2:15.

ಮನುಷ್ಯರಿಗೆ ಭಯಪಡುವುದರ ‘ಉರುಲಿನ’ ಕುರಿತಾಗಿ ಎಚ್ಚರಿಸಿದ ಬಳಿಕ, ಜ್ಞಾನೋಕ್ತಿ 29:25 ಮುಂದುವರಿಸುವುದು: “ಯೆಹೋವನ ಭರವಸ ಉದ್ಧಾರ.” ಪ್ರಾಯಶಃ ಎಲ್ಲಕ್ಕಿಂತ ಹೆಚ್ಚಾಗಿ, ದೇವರೊಂದಿಗಿನ ಒಂದು ಸಂಬಂಧವು ನಿಮ್ಮ ಸಮಾನಸ್ಥರನ್ನು ಎದುರಿಸಿ ನಿಲ್ಲಲು ನಿಮ್ಮನ್ನು ಬಲಪಡಿಸಸಾಧ್ಯವಿದೆ. ಉದಾಹರಣೆಗಾಗಿ, (ಈ ಮುಂಚೆ ತಿಳಿಸಲಾದ) ಡೆಬಿ, ಅತಿಯಾಗಿ ಕುಡಿಯುತ್ತಾ, ಅಮಲೌಷಧದ ದುರುಪಯೋಗ ಮಾಡುತ್ತಾ, ಸ್ವಲ್ಪ ಸಮಯದ ವರೆಗೆ ಗುಂಪಿನ ಬೆನ್ನುಹಿಡಿದಿದ್ದಳು. ಆದರೆ ಅನಂತರ ಅವಳು ಬೈಬಲಿನ ಗಂಭೀರವಾದ ಅಭ್ಯಾಸವನ್ನು ಆರಂಭಿಸಿದಳು ಮತ್ತು ಯೆಹೋವನಲ್ಲಿ ಭರವಸವಿಡತೊಡಗಿದಳು. ಪರಿಣಾಮವೇನು? “ಯುವ ಜನರ ಆ ಚಿಕ್ಕ ಗುಂಪು ಮಾಡುವಂತಹ ವಿಷಯಗಳನ್ನು ನಾನು ಮಾಡದಿರುವೆನೆಂದು ನಿಶ್ಚಯಿಸಿದೆ,” ಅನ್ನುತ್ತಾಳೆ ಡೆಬಿ. ಅವಳು ತನ್ನ ಹಿಂದಿನ ಸ್ನೇಹಿತರಿಗೆ ಹೇಳಿದ್ದು: “ನೀವು ನಿಮ್ಮ ದಾರಿಯಲ್ಲಿ ಹೋಗಿ, ನಾನು ನನ್ನ ದಾರಿಯಲ್ಲಿ ಹೋಗುವೆ. ನೀವು ನನ್ನ ಸ್ನೇಹವನ್ನು ಬಯಸುತ್ತೀರಾದರೆ, ನಾನು ಗೌರವಿಸುವಂತಹ ಮಟ್ಟಗಳನ್ನೇ ನೀವೂ ಗೌರವಿಸಬೇಕು. ನನ್ನನ್ನು ಕ್ಷಮಿಸಿರಿ, ಆದರೆ ನೀವೇನು ನೆನಸುತ್ತೀರೆಂಬುದರ ಕುರಿತಾಗಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಇದನ್ನೇ ಮಾಡಲಿದ್ದೇನೆ.” ಡೆಬಿಯ ಸ್ನೇಹಿತರೆಲ್ಲರೂ ಅವಳ ಹೊಸದಾಗಿ ಕಂಡುಕೊಂಡ ನಂಬಿಕೆಯನ್ನು ಗೌರವಿಸಲಿಲ್ಲ. ಆದರೆ ಡೆಬಿ ಹೇಳುವುದು, “ನನ್ನ ನಿರ್ಣಯವನ್ನು ಮಾಡಿದ ನಂತರ ನಾನು ನಿಶ್ಚಯವಾಗಿಯೂ ನನ್ನಲ್ಲಿ ಹೆಚ್ಚು ಇಷ್ಟಪಟ್ಟೆ.”

ಸಮಾನಸ್ಥರ ಒತ್ತಡದ ಪಾಶವನ್ನು ತಪ್ಪಿಸಿಕೊಂಡರೆ, ನೀವು ಕೂಡ ‘ನಿಮ್ಮಲ್ಲಿ ಹೆಚ್ಚು ಇಷ್ಟಪಟ್ಟುಕೊಂಡು,’ ತುಂಬ ದುಃಖದಿಂದ ನಿಮ್ಮನ್ನು ಪಾರುಮಾಡಿಕೊಳ್ಳುವಿರಿ!

ಚರ್ಚೆಗಾಗಿ ಪ್ರಶ್ನೆಗಳು

◻ ಯುವ ಜನರು ತಮ್ಮ ಸಮಾನಸ್ಥರಿಂದ ಪ್ರಭಾವಿಸಲ್ಪಡುವ ಪ್ರವೃತ್ತಿಯುಳ್ಳವರಾಗಿದ್ದಾರೇಕೆ? ಇದು ಕೆಟ್ಟದ್ದಾಗಿರಬೇಕೆಂದಿದೆಯೊ?

◻ ಅಪೊಸ್ತಲ ಪೇತ್ರನ ಅನುಭವವು ಸಮಾನಸ್ಥರ ಒತ್ತಡದ ಕುರಿತಾಗಿ ಏನನ್ನು ಕಲಿಸುತ್ತದೆ?

◻ ಇಲ್ಲ ಎಂದು ಹೇಳುವ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಬಹುದಾದ ಕೆಲವು ಸನ್ನಿವೇಶಗಳು (ವೈಯಕ್ತಿಕ ಅನುಭವದಿಂದ ಪ್ರಾಯಶಃ ಕೆಲವನ್ನು ಸೇರಿಸಿ) ಯಾವುವು?

◻ ಒಂದು ಸಾಹಸವನ್ನು ಮಾಡುವಂತೆ ಪಂಥಾಹ್ವಾನಿಸಲ್ಪಡುವಲ್ಲಿ ನೀವು ಯಾವ ವಿಷಯಗಳನ್ನು ಪರಿಗಣಿಸಬಹುದು?

◻ ಮನುಷ್ಯನ ಭಯದ ಉರುಲನ್ನು ತಪ್ಪಿಸಿಕೊಳ್ಳಲು ನಿಮಗೆ ಸಹಾಯ ಮಾಡಬಲ್ಲ ಕೆಲವು ವಿಷಯಗಳು ಯಾವುವು?

[ಪುಟ 85 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಇತರ ಮಕ್ಕಳಿಂದ ಅಂಗೀಕರಿಸಲ್ಪಡುವುದರ ಕುರಿತಾಗಿ ನಾವು ತುಂಬ ಕಾಳಜಿವಹಿಸುತ್ತೇವೆ,” ಎನ್ನುತ್ತಾಳೆ ಡೆಬಿ. “ನಾನು . . . ಜನಮೆಚ್ಚಿಕೆಯನ್ನು ಪಡೆಯದಿರುವ ಕುರಿತಾಗಿ ನೆನಸಲೂ ಭಯಪಡುತ್ತಿದ್ದೆ . . . ನಾನು ಪ್ರತ್ಯೇಕಿಸಲ್ಪಡುವೆನೆಂದು ಭಯಪಟ್ಟೆ”

[ಪುಟ 86 ರಲ್ಲಿರುವ ಚೌಕ]

‘ನಾನು ನಿನಗೆ ಪಣವೊಡ್ಡುತ್ತೇನೆ!’

“ನಡೆ,” ಎಂದು ಲೀಸಳ ಸಹಪಾಠಿಗಳು ಪಟ್ಟುಹಿಡಿದರು. “ಟೀಚರಿಗೆ ಅವಳ ಬಾಯಿ ನಾರುತ್ತದೆಂದು ಹೇಳು!” ಇಲ್ಲಿ ಬಾಯಿಯ ನೈರ್ಮಲ್ಯವು ವಿವಾದಾಂಶವಾಗಿರಲಿಲ್ಲ. ಲೀಸ ಒಂದು ಪಣವನ್ನು ತೆಗೆದುಕೊಳ್ಳುವಂತೆ ಸವಾಲು ಹಾಕಲಾಗಿತ್ತು—ಮತ್ತು ಅದೂ ಒಂದು ಅಪಾಯಕರವಾದ ಪಣ! ಹೌದು, ಕೆಲವು ಯುವ ಜನರು, ಸೌಮ್ಯ ಚೇಷ್ಟೆಯದ್ದಾಗಿರುವಂತಹ ವಿಷಯದಿಂದ ಹಿಡಿದು, ಆತ್ಮಘಾತಕದ ವರೆಗಿನ ಕೃತ್ಯಗಳನ್ನು ಮಾಡುವಂತೆ ಇತರರನ್ನು ಪಂಥಾಹ್ವಾನಿಸುವುದರಲ್ಲಿ ವಿಕೃತವಾದ ಆನಂದವನ್ನು ಪಡೆಯುತ್ತಿರುವಂತೆ ತೋರುತ್ತದೆ.

ಆದರೆ ಯಾವುದೊ ಮೂರ್ಖ, ದಯಾರಹಿತ ಅಥವಾ ಖಡಾಖಂಡಿತವಾಗಿ ಅಪಾಯಕಾರಿಯಾಗಿರುವ ವಿಷಯವನ್ನು ಮಾಡುವಂತೆ ನೀವು ಪಂಥಾಹ್ವಾನಿಸಲ್ಪಡುವಾಗ, ಅದು ಎರಡು ಸಾರಿ ಯೋಚಿಸುವ ಸಮಯವಾಗಿರುತ್ತದೆ. ಒಬ್ಬ ವಿವೇಕಿ ಪುರುಷನು ಅಂದದ್ದು: “ಸತ್ತ ನೊಣಗಳಿಂದ ಗಂದಿಗನ ತೈಲವು ಕೊಳೆತು ನಾರುವದು; ಹಾಗೆಯೇ ಹುಚ್ಚುತನ ಸ್ವಲ್ಪವಾದರೂ ಜ್ಞಾನಮಾನಗಳನ್ನು ಮುಚ್ಚಿ ಮೀರುವದು.” (ಪ್ರಸಂಗಿ 10:1) ಪುರಾತನ ಸಮಯಗಳಲ್ಲಿ, ಒಂದು ಅಮೂಲ್ಯ ಮುಲಾಮು ಅಥವಾ ಸುಗಂಧ ತೈಲವು, ಒಂದು ಸತ್ತ ನೊಣದಷ್ಟು ತೀರ ಚಿಕ್ಕ ವಿಷಯದಿಂದಾಗಿ ಕೆಟ್ಟುಹೋಗಸಾಧ್ಯವಿತ್ತು. ತದ್ರೀತಿಯಲ್ಲಿ, ಕಷ್ಟದಿಂದ ಸಂಪಾದಿಸಲ್ಪಟ್ಟ ಒಬ್ಬನ ಖ್ಯಾತಿಯು, ಕೇವಲ ‘ಸ್ವಲ್ಪ ಹುಚ್ಚುತನ’ದಿಂದ ಕೆಡಿಸಲ್ಪಡಸಾಧ್ಯವಿದೆ.

ಬಾಲಿಶ ಕುಚೇಷ್ಟೆಗಳು ಅನೇಕ ವೇಳೆ, ಕಡಿಮೆ ಅಂಕಗಳು, ಶಾಲೆಯಿಂದ ತೆಗೆದುಹಾಕಲ್ಪಡುವುದು, ಮತ್ತು ದಸ್ತಗಿರಿಯಲ್ಲೂ ಫಲಿಸುತ್ತವೆ! ಆದರೆ, ನೀವು ಹಿಡಿಯಲ್ಪಡದಿರುವಿರೆಂದು ನೀವು ನೆನಸುವುದಾದರೆ ಆಗೇನು? ನಿಮ್ಮನ್ನೇ ಕೇಳಿಕೊಳ್ಳಿರಿ, ನನಗೆ ಏನನ್ನು ಮಾಡುವಂತೆ ಕೇಳಲಾಗಿದೆಯೋ ಅದು ಸಮಂಜಸವೊ? ಅದು ಪ್ರೀತಿಪರವೊ? ಅದು ಬೈಬಲಿನ ಅಥವಾ ನನ್ನ ಹೆತ್ತವರಿಂದ ಕಲಿಸಲ್ಪಟ್ಟಿರುವ ಮಟ್ಟಗಳನ್ನು ಉಲ್ಲಂಘಿಸುವುದೊ? ಹಾಗಿರುವಲ್ಲಿ, ವಿನೋದವನ್ನು ಹುಡುಕುವ ಯುವ ಜನರು ನನ್ನ ಜೀವನವನ್ನು ನಿಯಂತ್ರಿಸುವಂತೆ ನಾನು ನಿಜವಾಗಿಯೂ ಬಯಸುತ್ತೇನೊ? ನನ್ನ ಜೀವನ ಮತ್ತು ಖ್ಯಾತಿಯನ್ನು ಗಂಡಾಂತರಕ್ಕೆ ಒಡ್ಡುವಂತೆ ಕೇಳುವಂತಹ ಯುವ ಜನರು ನಿಜವಾಗಿಯೂ ಸ್ನೇಹಿತರಾಗಿದ್ದಾರೊ?—ಜ್ಞಾನೋಕ್ತಿ 18:24.

ಹಾಗಾದರೆ, ಪಣವೊಡ್ಡುತ್ತಿರುವ ಯುವ ವ್ಯಕ್ತಿಯೊಂದಿಗೆ ವಿವೇಚಿಸಲು ಪ್ರಯತ್ನಿಸಿರಿ. ‘ನಾನು ಅದನ್ನು ಏಕೆ ಮಾಡಬೇಕು? ನಾನು ಅದನ್ನು ಮಾಡಿದರೆ ಅದು ಏನನ್ನು ರುಜುಪಡಿಸುವುದು?’ ಎಂದು ಕೇಳುವ ಮೂಲಕ, ಹದಿನೆಂಟು ವರ್ಷ ಪ್ರಾಯದ ಟೆರಿ “ಅದರಿಂದ ವಿನೋದವನ್ನು ತೆಗೆದುಬಿಡಲು” ಇಷ್ಟಪಡುತ್ತಾನೆ. ಮತ್ತು ನೀವು ಯಾವುದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಬಯಸುತ್ತೀರೊ ಅಂತಹ ಖಂಡಿತವಾದ ಮಟ್ಟಗಳು ನಿಮಗಿವೆಯೆಂಬುದು ಎಲ್ಲರಿಗೂ ತಿಳಿದಿರಲಿ. ಹುಡುಗನೊಬ್ಬನಿಗೆ ಅನೈತಿಕತೆಯನ್ನು ನಡೆಸುವಂತೆ ಪಣವೊಡ್ಡಲು ಪ್ರಯತ್ನಿಸುತ್ತಾ ಒಬ್ಬ ಯುವ ಹುಡುಗಿಯು ಹೇಳಿದ್ದು, “ನೀನು ಏನನ್ನು ಕಳೆದುಕೊಳ್ಳುತ್ತಿದ್ದೀಯೆಂಬುದು ನಿನಗೆ ಗೊತ್ತಿಲ್ಲ.” “ಹೌದು, ನನಗೆ ಗೊತ್ತಿದೆ, ಹರ್ಪಿಸ್‌, ಗೊನೊರೀಯ, ಸಿಫಿಲಿಸ್‌ . . . ” ಎಂದು ಉತ್ತರಿಸಿದ ಆ ಹುಡುಗ.

ಹೌದು, ನಿಮ್ಮ ಸಮಾನಸ್ಥರಿಗೆ ಇಲ್ಲವೆಂದು ಹೇಳಲು ಧೈರ್ಯವಿರುವ ಮೂಲಕ, ನೀವು ಅನಂತರ ವಿಷಾದಿಸುವಂತಹ ಯಾವುದೊ ವಿಷಯವನ್ನು ಮಾಡುವುದರಿಂದ ದೂರವಿರಸಾಧ್ಯವಿದೆ!

[ಪುಟ 76 ರಲ್ಲಿರುವ ಚಿತ್ರ]

ಯುವ ಜನರು ಅನೇಕವೇಳೆ ಬೆಂಬಲಕ್ಕಾಗಿ ಒಬ್ಬರನ್ನೊಬ್ಬರು ಅಂಟಿಕೊಳ್ಳುತ್ತಾರೆ

[ಪುಟ 77 ರಲ್ಲಿರುವ ಚಿತ್ರ]

ನಿಮಗೆ ಸರಿಯೆಂದು ತಿಳಿದಿರುವಂತಹ ವಿಷಯದ ವಿರುದ್ಧ ಹೋಗುವಂತೆ ನೀವು ಎಂದಾದರೂ ಸಮಾನಸ್ಥರಿಂದ ಒತ್ತಡಕ್ಕೊಳಗಾಗಿದ್ದೀರೊ?

[ಪುಟ 78 ರಲ್ಲಿರುವ ಚಿತ್ರ]

ಸಮಾನಸ್ಥರ ಒತ್ತಡವನ್ನು ಎದುರಿಸಿ ನಿಲ್ಲಲು ಬಲವನ್ನು ಹೊಂದಿದವರಾಗಿರಿ!