ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಶಾಲೆಯನ್ನು ಬಿಡಬೇಕೊ?

ನಾನು ಶಾಲೆಯನ್ನು ಬಿಡಬೇಕೊ?

ಅಧ್ಯಾಯ 17

ನಾನು ಶಾಲೆಯನ್ನು ಬಿಡಬೇಕೊ?

ಜ್ಯಾಕ್‌ 25 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಒಬ್ಬ ಶಾಲಾ ಹಾಜರಾತಿ ಅಧಿಕಾರಿಯಾಗಿದ್ದಾನೆ. ಆದುದರಿಂದ ಶಾಲೆಗಳ್ಳನಾದ ಯೌವನಸ್ಥನೊಬ್ಬನು, ಜ್ಯಾಕ್‌ ಈಗಾಗಲೇ ಕೇಳಿರದ ನೆವದೊಂದಿಗೆ ಅವನನ್ನು ಸಮೀಪಿಸುವುದು ಕಷ್ಟಕ್ಕೆ ಸಿಕ್ಕಿಕೊಂಡಂತೆಯೇ. “‘ನಾನು ಇಂದು ಅಸ್ವಸ್ಥನಾಗಬಹುದೇನೊ ಎಂದು ನಾನು ಭಾವಿಸಿದೆ’ . . . ‘ಅಲಾಸ್ಕಾದಲ್ಲಿರುವ ನನ್ನ ಅಜ್ಜ ತೀರಿಹೋದರು’ ಎಂಬಂತಹ ನೆವಗಳೆಲ್ಲವನ್ನು ಮಕ್ಕಳು ನನಗೆ ಹೇಳಿದ್ದಾರೆ” ಎಂದು ಅವನು ಹೇಳುತ್ತಾನೆ. ಜ್ಯಾಕ್‌ನ “ಅಚ್ಚುಮೆಚ್ಚಿನ” ನೆವವೇನು? “ತುಂಬ ಮಂಜು ಮುಸುಕಿದ್ದುದರಿಂದ ಶಾಲೆಯನ್ನು ಕಂಡುಕೊಳ್ಳಲಾಗಲಿಲ್ಲ” ಎಂದು ಪ್ರತಿಪಾದಿಸಿದಂತಹ ಮೂವರು ಹುಡುಗರ ನೆವವಾಗಿತ್ತು.

ಈ ಪೇಚಾಟವನ್ನುಂಟುಮಾಡುವ ಅಸ್ಥಿರ ನೆಪಗಳು, ಅನೇಕವೇಳೆ ಉದಾಸೀನ (“ಪರವಾಗಿಲ್ಲ ಎಂದು ನನ್ನೆಣಿಕೆ”)ದಿಂದ ಆರಂಭಿಸಿ, ಬಹಿರಂಗವಾದ ಹಗೆತನ (“ಶಾಲೆ ನಾರುತ್ತದೆ! ಅಸಹ್ಯ”)ದಷ್ಟು ಭಿನ್ನವಾಗಿದ್ದು, ಶಾಲೆಯ ಕಡೆಗೆ ಅನೇಕ ಯುವ ಜನರಿಗಿರುವ ಹೇವರಿಕೆಯನ್ನು ದೃಷ್ಟಾಂತಿಸುತ್ತವೆ. ಉದಾಹರಣೆಗೆ, ಗ್ಯಾರಿ ಶಾಲೆಗೆ ಹೋಗಲಿಕ್ಕಾಗಿ ಏಳುತ್ತಿದ್ದನು ಮತ್ತು ಆ ಕೂಡಲೆ ಅವನಿಗೆ ಮಲವಿಸರ್ಜನೆಗೆ ಹೋಗುವ ಅನಿಸಿಕೆಯಾಗುತ್ತಿತ್ತು. ಅವನಂದದ್ದು, “ಶಾಲೆಗೆ ಸಮೀಪವಾಗುವಾಗ ನಾನೆಷ್ಟು ಬೆವತುಹೋಗಿ, ನಿರ್ಬಲನಾಗುತ್ತಿದ್ದೆನೆಂದರೆ . . . ನಾನು ನನ್ನ ಮನೆಗೆ ಹಿಂದಿರುಗಿ ಬರಬೇಕಾಗಿತ್ತು ಅಷ್ಟೆ.” ತದ್ರೀತಿಯಲ್ಲಿ ಅನೇಕ ಯುವ ಜನರಿಗೆ ಶಾಲೆಯ ಕುರಿತು ಪೀಡನಾತ್ಮಕವಾದ ಭಯವಿದೆ—ವೈದ್ಯರು ಶಾಲಾ ಭೀತಿ ಎಂದು ಕರೆಯುವ ಒಂದು ವಿಷಯ. ಅದು ಅನೇಕವೇಳೆ ಶಾಲಾ ಹಿಂಸಾಚಾರ, ಸಮಾನಸ್ಥರ ಕ್ರೂರತೆ, ಮತ್ತು ಒಳ್ಳೆಯ ದರ್ಜೆಗಳನ್ನು ಪಡೆದುಕೊಳ್ಳಲಿಕ್ಕಾಗಿ ಇರುವ ಒತ್ತಡದಂತಹ ವಿಷಯಗಳಿಂದ ಹೊತ್ತಿಸಲ್ಪಡುತ್ತದೆ. ಅಂತಹ ಯುವ ಜನರು (ಸ್ವಲ್ಪಮಟ್ಟಿಗೆ ಹೆತ್ತವರ ಒತ್ತಾಯದಿಂದ) ಶಾಲೆಗೆ ಹೋಗಬಹುದಾದರೂ, ಅವರು ಸತತವಾದ ಸಂಕ್ಷೋಭೆಯನ್ನು, ಶಾರೀರಿಕ ಯಾತನೆಯನ್ನು ಸಹ ಅನುಭವಿಸುತ್ತಾರೆ.

ಗಾಬರಿಹುಟ್ಟಿಸುವಂತಹ ಸಂಖ್ಯೆಯಲ್ಲಿ ಯುವ ಜನರು ಎಂದಿಗೂ ಶಾಲೆಗೆ ಹೋಗದಿರುವ ಆಯ್ಕೆಮಾಡುವುದು ಆಶ್ಚರ್ಯಕರವೇನಲ್ಲ! ಅಮೆರಿಕ ಒಂದರಲ್ಲಿಯೇ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಸುಮಾರು ಇಪ್ಪತ್ತೈದು ಲಕ್ಷ ವಿದ್ಯಾರ್ಥಿಗಳು ಪ್ರತಿ ದಿನ ಗೈರುಹಾಜರಾಗುತ್ತಾರೆ! ದ ನ್ಯೂ ಯಾರ್ಕ್‌ ಟೈಮ್ಸ್‌ನಲ್ಲಿನ ಲೇಖನವೊಂದು ಕೂಡಿಸಿದ್ದೇನಂದರೆ, ನ್ಯೂ ಯಾರ್ಕ್‌ ನಗರದ ಪ್ರೌಢ ಶಾಲೆಗಳಲ್ಲಿ ಅಷ್ಟೊಂದು ಮಂದಿ (ಸುಮಾರು ಮೂರನೇ ಒಂದಂಶ) “ನಿರಂತರವಾಗಿ ಗೈರುಹಾಜ”ರಾಗಿರುವುದರಿಂದ, ಅವರಿಗೆ ಬೋಧಿಸುವುದು ಬಹುಮಟ್ಟಿಗೆ ಅಸಾಧ್ಯ.”

ಬೇರೆ ಯುವ ಜನರು ಇನ್ನೂ ಹೆಚ್ಚು ಪ್ರಚಂಡವಾದ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. “ಶಾಲೆಯು ಬೇಸರಕರವೂ, ತುಂಬಾ ಕಟ್ಟುನಿಟ್ಟಾದದ್ದೂ ಆಗಿತ್ತು” ಎಂದು ವಾಲ್ಟರ್‌ ಎಂಬ ಹೆಸರಿನ ಒಬ್ಬ ಯುವ ಪುರುಷನು ಹೇಳಿದನು. ಅವನು ಪ್ರೌಢ ಶಾಲೆಯಲ್ಲೇ (ಮಾಧ್ಯಮಿಕ ಶಾಲೆ) ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಟ್ಟನು. ಆ್ಯಂಟೊನಿಯ ಎಂಬ ಹೆಸರಿನ ಒಬ್ಬ ಹುಡುಗಿಯೂ ಹಾಗೆ ಮಾಡಿದಳು. ಅವಳಿಗೆ ತನ್ನ ಶಾಲಾಕೆಲಸದೊಂದಿಗೆ ನಿರ್ವಹಿಸುವುದು ಕಷ್ಟಕರವಾಗಿತ್ತು. “ನಾನು ಏನನ್ನು ಓದುತ್ತಿದ್ದೆನೋ ಅದನ್ನು ನಾನು ಅರ್ಥಮಾಡಿಕೊಳ್ಳದಿರುವಲ್ಲಿ ನಾನು ಆ ಕೆಲಸವನ್ನು ಹೇಗೆ ಮಾಡಸಾಧ್ಯವಿತ್ತು?” ಎಂದು ಅವಳು ಕೇಳಿದಳು. “ನಾನಲ್ಲಿ ಸುಮ್ಮನೆ ಕುಳಿತುಕೊಂಡು, ಹೆಚ್ಚೆಚ್ಚು ದಡ್ಡಿಯಾಗುತ್ತಾಹೋಗುತ್ತಿದ್ದೆ, ಆದುದರಿಂದ ನಾನು ಶಾಲೆಯನ್ನು ಬಿಟ್ಟುಬಿಟ್ಟೆ.”

ಲೋಕದಾದ್ಯಂತ ಇರುವ ಶಾಲಾ ವ್ಯವಸ್ಥೆಗಳನ್ನು ಗಂಭೀರವಾದ ಸಮಸ್ಯೆಗಳು ಬಾಧಿಸುತ್ತವೆ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ಶಾಲೆಯ ಬಗ್ಗೆ ಇರುವ ಸರ್ವ ಆಸಕ್ತಿಯನ್ನೂ ಕಳೆದುಕೊಂಡು, ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಡಲು ಇದು ಕಾರಣವಾಗಿದೆಯೊ? ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಡುವುದು, ತದನಂತರ ನಿಮ್ಮ ಜೀವಿತದ ಮೇಲೆ ಯಾವ ಪರಿಣಾಮಗಳನ್ನು ಉಂಟುಮಾಡಬಹುದು? ನೀವು ಪದವಿಪಡೆದುಕೊಳ್ಳುವ ತನಕ ಶಾಲೆಯಲ್ಲಿ ಉಳಿಯುವುದಕ್ಕೆ ಸಕಾರಣಗಳಿವೆಯೊ?

ಶಿಕ್ಷಣದ ಮೌಲ್ಯ

ಪ್ರೌಢ ಶಾಲೆಗೆ ಸಮಾನವಾದ ಡಿಪ್ಲೊಮಾವನ್ನು ಪಡೆದುಕೊಳ್ಳಲಿಕ್ಕಾಗಿ ಮೈಕಲ್‌ ಶಾಲೆಗೆ ಹಿಂದಿರುಗಿದನು. ಯಾಕೆಂದು ಕೇಳಿದಾಗ, “ನನಗೆ ಶಿಕ್ಷಣ ಬೇಕೆಂಬುದನ್ನು ನಾನು ಗ್ರಹಿಸಿದೆ” ಎಂದು ಅವನು ಹೇಳಿದನು. ಆದರೆ ಸರಿಯಾಗಿ, “ಶಿಕ್ಷಣ”ವೆಂದರೆ ಏನು? ಮನತಟ್ಟುವ ವಾಸ್ತವಾಂಶಗಳ ಶ್ರೇಣಿಯನ್ನು ಒಕ್ಕಣಿಸುವ ಒಂದು ಸಾಮರ್ಥ್ಯವೊ? ಇಟ್ಟಿಗೆಯ ರಾಶಿಯು ಹೇಗೆ ಒಂದು ಮನೆಯಾಗುವುದಿಲ್ಲವೊ ಹಾಗೆಯೇ ಇದು ಒಂದು ಶಿಕ್ಷಣವಾಗುವುದಿಲ್ಲ.

ಶಿಕ್ಷಣವು ನಿಮ್ಮನ್ನು ಯಶಸ್ವಿಕರವಾದ ವಯಸ್ಕ ಜೀವಿತಕ್ಕೆ ಸಿದ್ಧಪಡಿಸಬೇಕು. 18 ವರ್ಷಗಳಿಂದ ಶಾಲೆಯ ಒಬ್ಬ ಪ್ರಧಾನಾಧಿಕಾರಿಯಾಗಿರುವ ಆ್ಯಲನ್‌ ಆಸ್ಟಿಲ್‌, “ಹೇಗೆ ಆಲೋಚಿಸುವುದು, ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು, ಯಾವುದು ವಿವೇಕಯುತವಾಗಿದೆ ಮತ್ತು ಯಾವುದು ವಿವೇಕಯುತವಾಗಿಲ್ಲ, ಸ್ಪಷ್ಟವಾಗಿ ಯೋಚಿಸುವ ಮೂಲಭೂತ ಸಾಮರ್ಥ್ಯ, ದತ್ತಾಂಶವೇನೆಂದು ತಿಳಿಯಲು, ಖಂಡಗಳ ಮತ್ತು ಅಖಂಡಗಳ ಮಧ್ಯೆ ಇರುವ ಸಂಬಂಧವನ್ನು ತಿಳಿಯಲು ಕಲಿಸುವ, ಆ ತೀರ್ಮಾನಗಳನ್ನು ಮತ್ತು ವ್ಯತ್ಯಾಸಗಳನ್ನು ಮಾಡಲು, ಕಲಿಯುವುದು ಹೇಗೆಂದು ಕಲಿಯಲು ಕಲಿಸುವ ಶಿಕ್ಷಣದ” ಕುರಿತಾಗಿ ಮಾತಾಡಿದರು.

ಮತ್ತು ಶಾಲೆಯು ಇದಕ್ಕೆ ಹೇಗೆ ಹೊಂದಿಕೆಯಾಗುತ್ತದೆ? ಶತಮಾನಗಳ ಹಿಂದೆ ರಾಜ ಸೊಲೊಮೋನನು “ಮೂಢರಿಗೆ [“ಅನನುಭವಿಗಳಿಗೆ,” NW] ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ” ಕೊಡಲಿಕ್ಕಾಗಿ ಜ್ಞಾನೋಕ್ತಿಗಳನ್ನು ಬರೆದನು. (ಜ್ಞಾನೋಕ್ತಿ 1:1-4) ಹೌದು, ಯುವ ಪ್ರಾಯದಲ್ಲಿ ಅನನುಭವವಿರುತ್ತದೆ. ಆದರೆ ಶಾಲೆಯು, ನಿಮ್ಮ ಯೋಚನಾ ಸಾಮರ್ಥ್ಯವನ್ನು ಪೋಷಿಸಿ, ಬೆಳೆಸಿಕೊಳ್ಳಲಿಕ್ಕಾಗಿ ನಿಮಗೆ ಸಹಾಯ ಮಾಡಬಲ್ಲದು. ಇದು ಕೇವಲ ವಾಸ್ತವಾಂಶಗಳನ್ನು ಒಕ್ಕಣಿಸುವ ಸಾಮರ್ಥ್ಯವಾಗಿರುವುದಿಲ್ಲ, ಬದಲಾಗಿ ಅವುಗಳನ್ನು ವಿಶ್ಲೇಷಿಸಿ, ಅವುಗಳಿಂದ ಪ್ರತಿಫಲದಾಯಕ ಕಲ್ಪನೆಗಳನ್ನು ಉತ್ಪಾದಿಸುವ ಸಾಮರ್ಥ್ಯವೂ ಆಗಿರುತ್ತದೆ. ಕೆಲವು ಶಾಲೆಗಳು ಬೋಧಿಸುವ ವಿಧಾನದ ಕುರಿತಾಗಿ ಅನೇಕರು ಟೀಕೆಮಾಡಿರುವುದಾದರೂ, ಶಾಲೆಯು ನಿಮ್ಮ ಮನಸ್ಸನ್ನು ಉಪಯೋಗಿಸುವಂತೆ ಒತ್ತಾಯಿಸುತ್ತದೆ. ರೇಖಾಗಣಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವುದು ಅಥವಾ ಐತಿಹಾಸಿಕ ತಾರೀಖುಗಳ ಪಟ್ಟಿಯೊಂದನ್ನು ಬಾಯಿಪಾಠಮಾಡುವುದು, ಆ ಸಮಯದಲ್ಲಿ ನಿಮ್ಮ ಜೀವಿತಕ್ಕೆ ಸುಸಂಬದ್ಧವಾದುದೆಂದು ನಿಮಗೆ ತೋರದಿರಬಹುದು ನಿಜ. ಆದರೆ ದ ಹೈ ಸ್ಕೂಲ್‌ ಸರ್ವೈವಲ್‌ ಗೈಡ್‌ನಲ್ಲಿ ಬಾರ್ಬರ ಮೇಯರ್‌ ಬರೆದುದು: “ಅಧ್ಯಾಪಕರು ಕಿರುಪರೀಕ್ಷೆಗಳಲ್ಲಿ ಒಳಗೂಡಿಸಲು ಇಷ್ಟಪಡುವ ಜ್ಞಾನದ ಎಲ್ಲ ವಾಸ್ತವಾಂಶಗಳು ಹಾಗೂ ಸಣ್ಣ ಪ್ರಕರಣಗಳನ್ನು ಪ್ರತಿಯೊಬ್ಬರೂ ಜ್ಞಾಪಕದಲ್ಲಿಟ್ಟುಕೊಳ್ಳುವುದಿಲ್ಲ, ಆದರೆ ಹೇಗೆ ಅಭ್ಯಾಸಿಸಬೇಕು, ಮತ್ತು ಹೇಗೆ ಯೋಜಿಸಬೇಕು ಎಂಬುದನ್ನು ಕಲಿಯುವ ಕೌಶಲಗಳನ್ನು ಎಂದಿಗೂ ಮರೆಯಲಾಗುವುದಿಲ್ಲ.”

ಶಿಕ್ಷಣದ ದೀರ್ಘಾವಧಿಯ ಪರಿಣಾಮಗಳನ್ನು ಅಭ್ಯಾಸಿಸಿದ, ವಿಶ್ವವಿದ್ಯಾನಿಲಯದ ಮೂವರು ಪ್ರೊಫೆಸರರು, ತದ್ರೀತಿಯಲ್ಲಿ ಮುಕ್ತಾಯಗೊಳಿಸಿದ್ದೇನೆಂದರೆ, “ಹೆಚ್ಚು ಉತ್ತಮವಾದ ಶಿಕ್ಷಣವನ್ನು ಹೊಂದಿರುವವರಿಗೆ, ಕೇವಲ ಪುಸ್ತಕಕ್ಕೆ ಸಂಬಂಧಿಸಿದ ವಾಸ್ತವಾಂಶಗಳ ಕುರಿತಾಗಿ ಮಾತ್ರವಲ್ಲ, ಬದಲಾಗಿ ಸಮಕಾಲೀನ ಲೋಕದ ಕುರಿತಾಗಿಯೂ ಹೆಚ್ಚು ವಿಶಾಲವಾದ ಹಾಗೂ ಅಗಾಧವಾದ ಜ್ಞಾನವಿರುತ್ತದೆ ಮತ್ತು ಇದರಿಂದಾಗಿ ಅವರು ಜ್ಞಾನಕ್ಕಾಗಿ ಅನ್ವೇಷಣೆ ನಡೆಸುವುದು ಮತ್ತು ಸಮಾಚಾರದ ಮೂಲಗಳಿಗೆ ಸ್ವರಮೇಳೈಸುವವರಾಗಿರುವುದು ಹೆಚ್ಚು ಸಂಭವನೀಯ. . . . ಈ ಭಿನ್ನತೆಗಳು, ವೃದ್ಧಾಪ್ಯ ಮತ್ತು ಶಾಲೆಯನ್ನು ಬಿಟ್ಟುಬಿಟ್ಟ ಮೇಲೆ ಅನೇಕ ವರ್ಷಗಳು ಕಳೆದರೂ, ಇವು ಉಳಿದಿರುವುದಾಗಿ ಕಂಡುಕೊಳ್ಳಲ್ಪಟ್ಟಿವೆ.”—ಶಿಕ್ಷಣದ ಬಾಳಿಕೆಬರುವ ಪರಿಣಾಮಗಳು (ಇಂಗ್ಲಿಷ್‌).

ಎಲ್ಲದಕ್ಕಿಂತಲೂ ಅತ್ಯಂತ ಪ್ರಮುಖವಾಗಿ, ನಿಮ್ಮ ಕ್ರೈಸ್ತ ಜವಾಬ್ದಾರಿಗಳನ್ನು ಕಾರ್ಯರೂಪಕ್ಕೆ ತರುವಂತೆ ಶಿಕ್ಷಣವು ನಿಮ್ಮನ್ನು ಸನ್ನದ್ಧುಗೊಳಿಸಬಲ್ಲದು. ನೀವು ಒಳ್ಳೆಯ ಅಭ್ಯಾಸ ರೂಢಿಗಳನ್ನು ಹೊಂದಿಸಿಕೊಂಡಿದ್ದು, ವಾಚನ ಕಲೆಯಲ್ಲಿ ಪಾರಂಗತರಾಗಿರುವುದಾದರೆ, ದೇವರ ವಾಕ್ಯವನ್ನು ಹೆಚ್ಚು ಸುಲಭವಾಗಿ ಅಭ್ಯಾಸಿಸಬಲ್ಲಿರಿ. (ಕೀರ್ತನೆ 1:2) ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ವ್ಯಕ್ತಪಡಿಸುವುದನ್ನು ಶಾಲೆಯಲ್ಲಿ ಕಲಿತಿರುವುದರಿಂದ, ನೀವು ಇತರರಿಗೆ ಬೈಬಲ್‌ ಸತ್ಯಗಳನ್ನು ಹೆಚ್ಚು ಸುಲಭವಾಗಿ ಕಲಿಸಬಲ್ಲಿರಿ. ತದ್ರೀತಿಯಲ್ಲಿ ಇತಿಹಾಸ, ವಿಜ್ಞಾನ, ಭೂಗೋಳಶಾಸ್ತ್ರ, ಮತ್ತು ಗಣಿತದ ಜ್ಞಾನವು ಪ್ರಯೋಜನಕರವಾಗಿದೆ ಮತ್ತು ನೀವು ವಿವಿಧ ಹಿನ್ನೆಲೆಗಳು, ಅಭಿರುಚಿಗಳು ಮತ್ತು ನಂಬಿಕೆಗಳಿರುವ ಜನರಿಗೆ ಹಿಡಿಸುವಂತೆ ವಿವರಿಸಲು ನಿಮಗೆ ಸಹಾಯ ಮಾಡುವುದು.

ಶಾಲೆ ಮತ್ತು ಉದ್ಯೋಗ

ಶಾಲೆಯು ನಿಮ್ಮ ಭವಿಷ್ಯತ್ತಿನ ಉದ್ಯೋಗ ಪ್ರತೀಕ್ಷೆಗಳ ಮೇಲೆಯೂ ಮಹತ್ತರವಾದ ಪ್ರಭಾವವನ್ನು ಹೊಂದಿದೆ. ಅದು ಹೇಗೆ?

ಕೌಶಲಭರಿತ ಕೆಲಸಗಾರನ ಕುರಿತಾಗಿ ಜ್ಞಾನಿ ರಾಜ ಸೊಲೊಮೋನನು ಹೇಳಿದ್ದು: “ತನ್ನ ಕೆಲಸದಲ್ಲಿ ಚಟವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ.” (ಜ್ಞಾನೋಕ್ತಿ 22:29) ಇದು ಇಂದಿಗೂ ಸತ್ಯವಾಗಿದೆ. “ಕೌಶಲಗಳಿಲ್ಲದೆ, ಜೀವಿತದಲ್ಲಿನ ಅನೇಕ ವಿಷಯಗಳು ನಿಮ್ಮನ್ನು ಹಿಮ್ಮೆಟ್ಟುತ್ತವೆ” ಎಂದು ಯು.ಎಸ್‌. ಕಾರ್ಮಿಕರ ಇಲಾಖೆಯ ಅರ್ನೆಸ್ಟ್‌ ಗ್ರೀನ್‌ ಹೇಳಿದರು.

ಆದುದರಿಂದ, ಶಾಲೆಯನ್ನು ಬಿಡುವವರಿಗೆ ಕೆಲಸದ ಪ್ರತೀಕ್ಷೆಯು ತುಂಬ ಕಡಿಮೆಯೆಂಬುದು ಗ್ರಾಹ್ಯ. (ಈ ಹಿಂದೆ ಉಲ್ಲೇಖಿಸಲಾಗಿದ್ದ) ವಾಲ್ಟರ್‌, ಇದನ್ನು ಕಟುವಾದ ಅನುಭವದಿಂದ ಕಲಿತುಕೊಂಡನು. “ಅನೇಕ ಸಲ ನಾನು ಕೆಲಸಕ್ಕಾಗಿ ಅರ್ಜಿಹಾಕಿದ್ದೇನೆ, ಮತ್ತು ನನಗೆ ಡಿಪ್ಲೊಮಾ ಇರಲಿಲ್ಲವಾದ ಕಾರಣ ಆ ಕೆಲಸಗಳು ನನಗೆ ಸಿಗಲಿಲ್ಲ.” ಅವನು ಇದನ್ನೂ ಒಪ್ಪಿಕೊಂಡನು: “ಕೆಲವೊಮ್ಮೆ ಜನರು ಉಪಯೋಗಿಸುವ ಶಬ್ದಗಳನ್ನು ನನಗೆ ಅರ್ಥಮಾಡಿಕೊಳ್ಳಲಾಗುವುದಿಲ್ಲ, ನನಗೆ ಮೂರ್ಖನೆಂಬ ಅನಿಸಿಕೆಯಾಗುತ್ತದೆ.”

ಪ್ರೌಢ ಶಾಲೆಯ ಶಿಕ್ಷಣತ್ಯಾಗಿಗಳಾಗಿರುವ 16ರಿಂದ 24 ವರ್ಷ ಪ್ರಾಯದವರ ನಡುವಿನ ನಿರುದ್ಯೋಗವು, “ಪದವಿಪಡೆದ ಅವರ ಸಮಾನಸ್ಥರಿಗೆ ತುಲನೆಯಲ್ಲಿ ಬಹುಮಟ್ಟಿಗೆ ಎರಡು ಪಟ್ಟಾಗಿದೆ ಮತ್ತು ಒಟ್ಟು ನಿರುದ್ಯೋಗ ಪ್ರಮಾಣಕ್ಕೆ ತುಲನೆಯಲ್ಲಿ ಬಹುಮಟ್ಟಿಗೆ ಮೂರುಪಟ್ಟಾಗಿದೆ.” (ದ ನ್ಯೂ ಯಾರ್ಕ್‌ ಟೈಮ್ಸ್‌) “ತಮ್ಮ ಶಿಕ್ಷಣವನ್ನು ಮುಂದುವರಿಸದಿರುವವರು, ಅವಕಾಶಕ್ಕಿರುವ ದ್ವಾರಗಳನ್ನು ಮುಚ್ಚುತ್ತಿದ್ದಾರೆ” ಎಂದು ಬರಹಗಾರರಾದ ಎಫ್‌. ಫಿಲಿಪ್‌ ರೈಸ್‌, ದಿ ಆ್ಯಡೊಲೆಸೆಂಟ್‌ ಎಂಬ ತಮ್ಮ ಪುಸ್ತಕದಲ್ಲಿ ಕೂಡಿಸುತ್ತಾರೆ. ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಟ್ಟಿರುವ ಯಾರಾದರೊಬ್ಬರು, ಅತ್ಯಂತ ಸರಳವಾದ ಕೆಲಸಗಳನ್ನು ನಿರ್ವಹಿಸಲು ಅಗತ್ಯವಾಗಿರುವ ಮೂಲಭೂತ ಕೌಶಲಗಳಲ್ಲಿ ಪಾರಂಗತರಾಗಿರುವುದು ಅಸಂಭವನೀಯ.

ಪಾಲ್‌ ಕಾಪರ್ಮನ್‌, ದ ಲಿಟರಸಿ ಹೋಕ್ಸ್‌ ಎಂಬ ತನ್ನ ಪುಸ್ತಕದಲ್ಲಿ ಬರೆಯುವುದು: “ಇತ್ತೀಚಿನ ಒಂದು ಅಧ್ಯಯನವು ಸೂಚಿಸುವುದೇನಂದರೆ, ಒಬ್ಬ ಅಡಿಗೆಯವನೋಪಾದಿ ಕೆಲಸವನ್ನು ಹಿಡಿಯಲು, ಹೆಚ್ಚುಕಡಿಮೆ ಏಳನೆಯ ತರಗತಿಯ ವಾಚನ ಮಟ್ಟ, ಒಬ್ಬ ಮೆಕಾನಿಕ್‌ (ಯಂತ್ರಿಗ) ಆಗಿ ಕೆಲಸ ಹಿಡಿಯಲು, ಎಂಟನೆಯ ತರಗತಿಯ ಮಟ್ಟ, ಒಬ್ಬ ಗುಮಾಸ್ತನಾಗಿ ಕೆಲಸ ಹಿಡಿಯಲು, ಒಂಬತ್ತನೆಯ ಅಥವಾ ಹತ್ತನೆಯ ತರಗತಿಯ ಮಟ್ಟದ ಅಗತ್ಯವಿದೆ.” ಅವರು ಮುಂದುವರಿಸುವುದು: “ಇದು ಒಂದು ಸಮಂಜಸವಾದ ಅಂದಾಜೆಂದು ನಾನು ನಂಬುತ್ತೇನೆ, ಏಕೆಂದರೆ ಒಬ್ಬ ಅಧ್ಯಾಪಕ, ನರ್ಸ್‌, ಅಕೌಂಟೆಂಟ್‌, ಅಥವಾ ಇಂಜಿನಿಯರನಾಗಿ ಕೆಲಸ ಹಿಡಿಯಲು, ಹೆಚ್ಚು ಉನ್ನತ ಪ್ರಮಾಣದ ವಾಚನ ಸಾಮರ್ಥ್ಯವು ಅಗತ್ಯವಿದೆ.”

ಹಾಗಾದರೆ, ವಾಚನದಂತಹ ಮೂಲಭೂತ ಕೌಶಲಗಳನ್ನು ಕಲಿಯುವುದರಲ್ಲಿ ಯಾವ ವಿದ್ಯಾರ್ಥಿಗಳು ನಿಜವಾಗಿಯೂ ತಮ್ಮನ್ನು ನೀಡಿಕೊಳ್ಳುತ್ತಾರೋ ಅವರಿಗೆ, ತೀರ ಹೆಚ್ಚು ಉತ್ತಮವಾದ ಕೆಲಸದ ಅವಕಾಶಗಳಿರುತ್ತವೆಂಬುದು ಸ್ಪಷ್ಟ. ಆದರೆ ಶಾಲೆಗೆ ಹಾಜರಾಗುವುದರಿಂದ ಪಡೆಯಸಾಧ್ಯವಿರುವ, ಜೀವಮಾನದುದ್ದಕ್ಕೂ ಸಿಗುವ ಇನ್ನೊಂದು ಪ್ರಯೋಜನವೇನು?

ಹೆಚ್ಚು ಉತ್ತಮರಾದ ನೀವು

ಆ ಜೀವಮಾನದುದ್ದಕ್ಕೂ ಸಿಗುವ ಪ್ರಯೋಜನವು, ನೀವು ನಿಮ್ಮ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳನ್ನು ತಿಳಿದುಕೊಳ್ಳುವುದೇ ಆಗಿದೆ. ಕಂಪ್ಯೂಟರ್‌ ಕ್ಷೇತ್ರದಲ್ಲಿ ಇತ್ತೀಚೆಗೆ ಒಂದು ಕೆಲಸವನ್ನು ಪಡೆದುಕೊಂಡ ಮಿಷೆಲ್‌ ಗಮನಿಸಿದ್ದು: “ಶಾಲೆಯಲ್ಲಿ ನಾನು, ಒತ್ತಡದ ಕೆಳಗೆ ಹೇಗೆ ಕೆಲಸ ಮಾಡುವುದು, ಹೇಗೆ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಹಾಗೂ ಹೇಗೆ ನನ್ನನ್ನು ವ್ಯಕ್ತಪಡಿಸಿಕೊಳ್ಳುವುದು ಎಂಬುದನ್ನು ಕಲಿತುಕೊಂಡೆ.”

‘ಅಸಾಫಲ್ಯಗಳನ್ನು ವೀಕ್ಷಿಸುವ ವಿಧವನ್ನು ಶಾಲೆಯು ನನಗೆ ಕಲಿಸಿತು’ ಎಂದು ಇನ್ನೊಬ್ಬ ಯುವತಿ ಹೇಳುತ್ತಾಳೆ. ಸ್ವತಃ ತನ್ನನ್ನಲ್ಲ, ಬದಲಾಗಿ ಇತರರನ್ನು ತನ್ನ ಪರಾಜಯಗಳಿಗೆ ಕಾರಣರೋಪಾದಿ ವೀಕ್ಷಿಸುವಂತಹ ಪ್ರವೃತ್ತಿ ಅವಳಲ್ಲಿತ್ತು. ಇತರರು ಶಿಸ್ತನ್ನೊಳಗೊಂಡಿದ್ದ ಶಾಲಾ ನಿಯತಕ್ರಮದಿಂದಾಗಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಶಾಲೆಯು ಎಳೆಯರ ಮನಸ್ಸುಗಳನ್ನು ನಿಗ್ರಹಿಸಿಬಿಡುತ್ತದೆಂದು ಪ್ರತಿಪಾದಿಸುತ್ತಾ, ಈ ಕಾರಣದಿಂದಾಗಿಯೇ ಅನೇಕರು ಶಾಲೆಗಳನ್ನು ಟೀಕಿಸುತ್ತಾರೆ. ಆದರೂ “ಜ್ಞಾನವನ್ನೂ ಶಿಸ್ತನ್ನೂ ತಿಳಿದುಕೊಳ್ಳುವಂತೆ” ಸೊಲೊಮೋನನು ಯುವ ಜನರನ್ನು ಉತ್ತೇಜಿಸಿದನು. (ಜ್ಞಾನೋಕ್ತಿ 1:2) ಶಿಸ್ತನ್ನು ಬಳಸುವ ಶಾಲೆಗಳು, ವಾಸ್ತವವಾಗಿ ಅನೇಕ ಶಿಸ್ತುಳ್ಳ, ಆದರೂ ಸೃಜನಶೀಲ ಮನಸ್ಸುಗಳನ್ನು ಉತ್ಪಾದಿಸಿವೆ.

ಆದುದರಿಂದ ನಿಮ್ಮ ಶಾಲಾ ವರ್ಷಗಳ ಪೂರ್ಣ ಉಪಯೋಗವನ್ನು ಮಾಡಿಕೊಳ್ಳುವಂತೆ ಇದು ನಿಮಗೆ ಅರ್ಥಸ್ಪಷ್ಟತೆ ನೀಡುತ್ತದೆ. ನೀವು ಅದನ್ನು ಹೇಗೆ ಮಾಡಬಲ್ಲಿರಿ? ನಿಮ್ಮ ಶಾಲಾಕೆಲಸದಿಂದಲೇ ಇದನ್ನು ನಾವು ಆರಂಭಿಸೋಣ.

ಚರ್ಚೆಗಾಗಿ ಪ್ರಶ್ನೆಗಳು

◻ ಅಷ್ಟೊಂದು ಯುವ ಜನರಿಗೆ ಶಾಲೆಯ ಕುರಿತು ನಕಾರಾತ್ಮಕವಾದ ನೋಟ ಏಕಿದೆ? ಆ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆ ಏನು?

◻ ಯೋಚನಾ ಸಾಮರ್ಥ್ಯವನ್ನು ವಿಕಸಿಸಿಕೊಳ್ಳುವಂತೆ ಶಾಲೆಯು ಒಬ್ಬ ವ್ಯಕ್ತಿಗೆ ಹೇಗೆ ಸಹಾಯಮಾಡುತ್ತದೆ?

◻ ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಡುವುದು, ಒಂದು ಕೆಲಸವನ್ನು ಪಡೆದುಕೊಳ್ಳುವ ನಿಮ್ಮ ಭವಿಷ್ಯತ್ತಿನ ಸಾಮರ್ಥ್ಯವನ್ನು ಹೇಗೆ ಬಾಧಿಸಬಹುದು, ಮತ್ತು ಏಕೆ?

◻ ಶಾಲೆಯಲ್ಲಿ ಉಳಿಯುವುದರಿಂದ ಇನ್ನಾವ ವೈಯಕ್ತಿಕ ಪ್ರಯೋಜನಗಳು ಫಲಿಸಬಹುದು?

[ಪುಟ 135 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನಲ್ಲಿ ಸುಮ್ಮನೆ ಕುಳಿತುಕೊಂಡು, ಹೆಚ್ಚೆಚ್ಚು ದಡ್ಡಿಯಾಗುತ್ತಾಹೋಗುತ್ತಿದ್ದೆ, ಆದುದರಿಂದ ನಾನು ಶಾಲೆಯನ್ನು ಬಿಟ್ಟುಬಿಟ್ಟೆ”

[ಪುಟ 138 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಇತ್ತೀಚಿನ ಒಂದು ಅಧ್ಯಯನವು ಸೂಚಿಸುವುದೇನಂದರೆ, ಒಬ್ಬ ಅಡಿಗೆಯವನೋಪಾದಿ ಕೆಲಸವನ್ನು ಹಿಡಿಯಲು, ಹೆಚ್ಚುಕಡಿಮೆ ಏಳನೆಯ ತರಗತಿಯ ವಾಚನ ಮಟ್ಟ, ಒಬ್ಬ ಯಂತ್ರಿಗನಾಗಿ ಕೆಲಸ ಹಿಡಿಯಲು, ಎಂಟನೆಯ ತರಗತಿಯ ಮಟ್ಟ, ಒಬ್ಬ ಗುಮಾಸ್ತನಾಗಿ ಕೆಲಸ ಹಿಡಿಯಲು, ಒಂಬತ್ತನೆಯ ಅಥವಾ ಹತ್ತನೆಯ ತರಗತಿಯ ಮಟ್ಟದ ಅಗತ್ಯವಿದೆ”

[ಪುಟ 136 ರಲ್ಲಿರುವ ಚಿತ್ರಗಳು]

ನೀವು ಶಾಲೆಯಲ್ಲಿ ಕಲಿಯುವ ಶಿಸ್ತು, ನಿಮ್ಮ ಜೀವಿತದ ಉಳಿದ ಸಮಯದಲ್ಲೆಲ್ಲಾ ನಿಮಗೆ ಪ್ರಯೋಜನವನ್ನು ತರಬಲ್ಲದು

[ಪುಟ 137 ರಲ್ಲಿರುವ ಚಿತ್ರಗಳು]

ಶಾಲೆಯಲ್ಲಿ ಕಲಿಸಲ್ಪಡುವ ಮೂಲಭೂತ ಕೌಶಲಗಳಲ್ಲಿ ಪಾರಂಗತರಾಗಿರದವರಿಗೆ, ಕೆಲಸದ ಪ್ರತೀಕ್ಷೆಗಳು ಕಡಿಮೆ