ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ರಾಜನ ನಂಬಿಕೆಗೆ ತಕ್ಕ ಪ್ರತಿಫಲ ಸಿಗುತ್ತದೆ

ಒಬ್ಬ ರಾಜನ ನಂಬಿಕೆಗೆ ತಕ್ಕ ಪ್ರತಿಫಲ ಸಿಗುತ್ತದೆ

ಅಧ್ಯಾಯ ಇಪ್ಪತ್ತೊಂಬತ್ತು

ಒಬ್ಬ ರಾಜನ ನಂಬಿಕೆಗೆ ತಕ್ಕ ಪ್ರತಿಫಲ ಸಿಗುತ್ತದೆ

ಯೆಶಾಯ 36:​1-39:8

1, 2. ಯಾವ ರೀತಿಯಲ್ಲಿ ಹಿಜ್ಕೀಯನು ಆಹಾಜನಿಗಿಂತ ಉತ್ತಮವಾದ ರಾಜನಾಗಿದ್ದನು?

ಹಿಜ್ಕೀಯನು 25 ವರ್ಷದವನಾಗಿದ್ದಾಗ ಯೆಹೂದದ ರಾಜನಾದನು. ಅವನು ಯಾವ ರೀತಿಯ ಅರಸನಾಗಿರಲಿದ್ದನು? ತನ್ನ ತಂದೆಯಾದ ರಾಜ ಆಹಾಜನ ಹೆಜ್ಜೆಜಾಡಿನಲ್ಲಿ ನಡೆಯುತ್ತಾ, ಪ್ರಜೆಗಳು ಸುಳ್ಳು ದೇವರುಗಳ ಆರಾಧನೆಯನ್ನು ಮಾಡುವಂತೆ ಅವನು ಪ್ರೇರಿಸಲಿದ್ದನೊ? ಅಥವಾ ತನ್ನ ಪೂರ್ವಜನಾದ ರಾಜ ದಾವೀದನಂತೆ, ಅವನು ಜನರನ್ನು ಯೆಹೋವನ ಆರಾಧನೆಯಲ್ಲಿ ಮುನ್ನಡೆಸಲಿದ್ದನೊ?​—⁠2 ಅರಸುಗಳು 16:⁠2.

2 ಹಿಜ್ಕೀಯನು ರಾಜನಾದ ಕೂಡಲೇ, “ಇವನು . . . ಯೆಹೋವನ ಚಿತ್ತಾನುಸಾರವಾಗಿ ನಡೆ”ಯಲಿಚ್ಛಿಸುವ ವ್ಯಕ್ತಿಯೆಂಬುದು ತೀರ ಸ್ಪಷ್ಟವಾಯಿತು. (2 ಅರಸುಗಳು 18:​2, 3) ತನ್ನ ಆಳ್ವಿಕೆಯ ಪ್ರಥಮ ವರ್ಷದಲ್ಲೇ ಅವನು ಯೆಹೋವನ ಆಲಯವನ್ನು ದುರಸ್ತಿಮಾಡಿಸಿದನು ಮತ್ತು ದೇವಾಲಯದ ಕಾರ್ಯಾಚರಣೆಗಳನ್ನು ಮತ್ತೆ ಆರಂಭಿಸಿದನು. (2 ಪೂರ್ವಕಾಲವೃತ್ತಾಂತ 29:​3, 7, 11) ತರುವಾಯ ಅವನು ಪಸ್ಕದ ಒಂದು ಮಹಾ ಆಚರಣೆಯನ್ನು ಏರ್ಪಡಿಸಿದನು. ಇದಕ್ಕೆ ಇಸ್ರಾಯೇಲಿನ ಹತ್ತು ಗೋತ್ರಗಳ ರಾಜ್ಯವನ್ನೂ ಸೇರಿಸಿ, ಇಡೀ ಜನಾಂಗವನ್ನು ಆಮಂತ್ರಿಸಿದನು. ಅದೆಂತಹ ಸ್ಮರಣೀಯ ಉತ್ಸವವಾಗಿತ್ತು! ಅಂತಹ ಉತ್ಸವವು ಸೊಲೊಮೋನನ ಕಾಲದಿಂದ ಆವರೆಗೆ ನಡೆದೇ ಇರಲಿಲ್ಲ.​—⁠2 ಪೂರ್ವಕಾಲವೃತ್ತಾಂತ 30:​1, 25, 26.

3. (ಎ) ಹಿಜ್ಕೀಯನು ಏರ್ಪಡಿಸಿದ್ದ ಪಸ್ಕಕ್ಕೆ ಹಾಜರಾದ ಇಸ್ರಾಯೇಲ್‌ ಮತ್ತು ಯೆಹೂದದ ನಿವಾಸಿಗಳು ಯಾವ ಹೆಜ್ಜೆಯನ್ನು ತೆಗೆದುಕೊಂಡರು? (ಬಿ) ಪಸ್ಕಕ್ಕೆ ಹಾಜರಾದವರು ತೆಗೆದುಕೊಂಡ ನಿರ್ಣಾಯಕ ಕ್ರಿಯೆಯಿಂದ ಇಂದು ಕ್ರೈಸ್ತರು ಏನನ್ನು ಕಲಿಯಬಲ್ಲರು?

3 ಪಸ್ಕದ ಆಚರಣೆಯು ಇನ್ನೇನು ಮುಗಿಯಲಿದ್ದಾಗ, ಅಲ್ಲಿ ಉಪಸ್ಥಿತರಾಗಿದ್ದವರು ಕಲ್ಲು ಕಂಬಗಳನ್ನು ಒಡೆದು, ಅಶೇರವಿಗ್ರಹಸ್ತಂಭಗಳನ್ನು ಕಡಿದುಹಾಕಿ, ಪೂಜಾಸ್ಥಳಗಳನ್ನು ಮತ್ತು ಯಜ್ಞವೇದಿಗಳನ್ನು ಹಾಳುಮಾಡುವಂತೆ ಪ್ರಚೋದಿಸಲ್ಪಟ್ಟರು. ತದನಂತರ ಸತ್ಯ ದೇವರನ್ನು ಆರಾಧಿಸುವ ದೃಢಸಂಕಲ್ಪದಿಂದ ಅವರು ತಮ್ಮ ತಮ್ಮ ಪಟ್ಟಣಗಳಿಗೆ ಹಿಂದಿರುಗಿದರು. (2 ಪೂರ್ವಕಾಲವೃತ್ತಾಂತ 31:⁠1) ಧರ್ಮದ ಕಡೆಗೆ ಅವರಿಗೆ ಈ ಮೊದಲಿದ್ದ ಮನೋಭಾವಕ್ಕೆ ಇದೆಷ್ಟು ವ್ಯತಿರಿಕ್ತವಾಗಿತ್ತು! ಇದರಿಂದ, ‘ಸಭೆಯಾಗಿ ಕೂಡಿಕೊಳ್ಳುವದನ್ನು ಬಿಟ್ಟುಬಿಡದಿರುವ’ ಮಹತ್ವವನ್ನು ಇಂದಿನ ಸತ್ಯ ಕ್ರೈಸ್ತರು ಕಲಿತುಕೊಳ್ಳಬಲ್ಲರು. ಇಂತಹ ಕೂಟಗಳು, ಸ್ಥಳಿಕ ಸಭೆಗಳಲ್ಲಾಗಿರಲಿ ಇಲ್ಲವೆ ಸಮ್ಮೇಳನ ಹಾಗೂ ಅಧಿವೇಶನಗಳಂತಹ ದೊಡ್ಡ ಸಭೆಗಳಲ್ಲಾಗಿರಲಿ, ಉತ್ತೇಜನವನ್ನು ಪಡೆದುಕೊಳ್ಳುವುದರಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅಲ್ಲಿ ನಾವು ಸಹೋದರತ್ವ ಮತ್ತು ದೇವರಾತ್ಮದಿಂದ ನಡಿಸಲ್ಪಟ್ಟವರಾಗಿ ‘ಪ್ರೀತಿ ಮತ್ತು ಸತ್ಕಾರ್ಯಕ್ಕೆ ಪ್ರೇರಿಸ’ಲ್ಪಡುತ್ತೇವೆ.​—⁠ಇಬ್ರಿಯ 10:​23-25.

ಪರೀಕ್ಷೆಗೊಳಗಾದ ನಂಬಿಕೆ

4, 5. (ಎ) ತಾನು ಅಶ್ಶೂರದಿಂದ ಸ್ವತಂತ್ರನೆಂಬುದನ್ನು ಹಿಜ್ಕೀಯನು ಹೇಗೆ ತೋರಿಸಿದ್ದಾನೆ? (ಬಿ) ಯೆಹೂದದ ವಿರುದ್ಧ ಸನ್ಹೇರೀಬನು ಯಾವ ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾನೆ, ಮತ್ತು ಯೆರೂಸಲೇಮಿನ ಮೇಲೆ ತತ್‌ಕ್ಷಣದ ಆಕ್ರಮಣವನ್ನು ತಪ್ಪಿಸಲು ಹಿಜ್ಕೀಯನು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾನೆ? (ಸಿ) ಅಶ್ಶೂರರಿಂದ ಯೆರೂಸಲೇಮನ್ನು ರಕ್ಷಿಸಲು ಹಿಜ್ಕೀಯನು ಹೇಗೆ ತಯಾರಿ ನಡೆಸುತ್ತಾನೆ?

4 ಯೆರೂಸಲೇಮಿಗೆ ಮುಂದೆ ಗಂಭೀರವಾದ ಸಂಕಷ್ಟಗಳನ್ನು ಎದುರಿಸಲಿದೆ. ಏಕೆಂದರೆ, ತನ್ನ ಅಪನಂಬಿಗಸ್ತ ತಂದೆಯಾದ ಆಹಾಜನು ಅಶ್ಶೂರ್ಯರೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಹಿಜ್ಕೀಯನು ಮುರಿದುಹಾಕಿದ್ದಾನೆ. ಮತ್ತು ಅಶ್ಶೂರ್ಯರ ಮಿತ್ರರಾಗಿರುವ ಫಿಲಿಷ್ಟಿಯರನ್ನೂ ಇವನು ಸೋಲಿಸಿದ್ದಾನೆ. (2 ಅರಸುಗಳು 18:​7, 8) ಇದರಿಂದ ಅಶ್ಶೂರದ ರಾಜನು ಕುಪಿತನಾಗಿದ್ದಾನೆ. ಆದಕಾರಣ, ನಾವು ಓದುವುದು: “ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರುಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತದೊಳಗೆ ಕೋಟೆಕೊತ್ತಲಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.” (ಯೆಶಾಯ 36:1) ಯೆರೂಸಲೇಮನ್ನು ಉಗ್ರ ಅಶ್ಶೂರ ಸೇನೆಯ ಆಕ್ರಮಣದಿಂದ ಸದ್ಯ ರಕ್ಷಿಸಲು, ಹಿಜ್ಕೀಯನು ಸನ್ಹೇರೀಬನಿಗೆ 300 ತಲಾಂತು ಬೆಳ್ಳಿಯನ್ನೂ 30 ತಲಾಂತು ಬಂಗಾರವನ್ನೂ ಕಪ್ಪಕಾಣಿಕೆಯಾಗಿ ಕೊಡಲು ಒಪ್ಪಿಕೊಳ್ಳುತ್ತಾನೆ. *​—⁠2 ಅರಸುಗಳು 18:⁠14.

5 ಒಪ್ಪಿಕೊಂಡಷ್ಟು ಕಪ್ಪವನ್ನು ಕೊಡಲು ಅರಮನೆಯ ಭಂಡಾರದಲ್ಲಿ ಸಾಕಷ್ಟು ಬೆಳ್ಳಿಬಂಗಾರಗಳು ಇಲ್ಲದಿರುವ ಕಾರಣ, ದೇವಾಲಯದಿಂದ ಯಾವೆಲ್ಲ ಅಮೂಲ್ಯ ವಸ್ತುಗಳನ್ನು ಪಡೆಯಸಾಧ್ಯವೊ ಅದನ್ನೆಲ್ಲ ಹಿಜ್ಕೀಯನು ಹುಡುಕಿ ತರುತ್ತಾನೆ. ಅಲ್ಲದೆ, ಆಲಯದ ಕದಗಳಿಗೆ ಹೊದಿಸಿದ್ದ ಬಂಗಾರದ ತಗಡನ್ನೂ ತೆಗೆದು ಸನ್ಹೇರೀಬನಿಗೆ ಕಳುಹಿಸುತ್ತಾನೆ. ಇದರಿಂದ ಆ ಅಶ್ಶೂರನು ತೃಪ್ತನಾದರೂ, ಆ ತೃಪ್ತಿ ಕೊಂಚ ಸಮಯದ ವರೆಗೆ ಮಾತ್ರ ಉಳಿಯುತ್ತದೆ. (2 ಅರಸುಗಳು 18:​15, 16) ಈ ಅಶ್ಶೂರರು ಯೆರೂಸಲೇಮಿನ ತಂಟೆಗೆ ಬಾರದೆ ಇರಲಾರರೆಂಬುದನ್ನು ಹಿಜ್ಕೀಯನು ಬೇಗನೆ ಗ್ರಹಿಸುತ್ತಾನೆ. ಆದುದರಿಂದ ಬೇಕಾದ ಸಿದ್ಧತೆಗಳನ್ನು ಅವನು ಈಗಲೇ ಮಾಡಿಕೊಳ್ಳಬೇಕು. ಮೊದಲಿಗೆ, ಮುತ್ತಿಗೆ ಹಾಕುವ ಅಶ್ಶೂರ್ಯರಿಗೆ ನೀರಿನ ಕೊರತೆಯುಂಟಾಗುವಂತೆ, ಜನರು ನೀರಿನ ಮೂಲಗಳನ್ನು ಮುಚ್ಚಿಬಿಡುತ್ತಾರೆ. ಹಿಜ್ಕೀಯನು ಯೆರೂಸಲೇಮಿನ ಪೌಳಿಗೋಡೆಯನ್ನು ಬಲಪಡಿಸಿ, “ಅನೇಕಾಯುಧಗಳನ್ನೂ ಗುರಾಣಿಗಳನ್ನೂ” ಸೇರಿಸಿ ಯುದ್ಧಾಯುಧ ಇಲಾಖೆಯನ್ನು ನಿರ್ಮಿಸುತ್ತಾನೆ.​—⁠2 ಪೂರ್ವಕಾಲವೃತ್ತಾಂತ 32:​4, 5.

6. ಹಿಜ್ಕೀಯನು ಯಾರಲ್ಲಿ ಭರವಸೆಯಿಡುತ್ತಾನೆ?

6 ಆದರೂ, ಹಿಜ್ಕೀಯನು ಯುದ್ಧ ಕುಯುಕ್ತಿಗಳಲ್ಲಿ ಇಲ್ಲವೆ ರಕ್ಷಣೋಪಾಯಗಳಲ್ಲಿ ನಂಬಿಕೆಯನ್ನಿಡದೆ, ಸೇನಾಧೀಶ್ವರನಾದ ಯೆಹೋವನಲ್ಲಿ ಭರವಸೆಯಿಡುತ್ತಾನೆ. ಅವನು ತನ್ನ ಮಿಲಿಟರಿ ಅಧಿಪತಿಗಳಿಗೆ ಬುದ್ಧಿವಾದ ನೀಡುವುದು: “ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದು. ಅವನಿಗಿರುವ ಸಹಾಯವು ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು.” ಇದಕ್ಕೆ ಪ್ರತ್ಯುತ್ತರವಾಗಿ ಜನರು, “ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು.” (2 ಪೂರ್ವಕಾಲವೃತ್ತಾಂತ 32:7, 8) ಯೆಶಾಯ 36ರಿಂದ 39ನೆಯ ವರೆಗಿನ ಅಧ್ಯಾಯಗಳಲ್ಲಿ ದಾಖಲಾಗಿರುವ ಪ್ರವಾದನೆಯನ್ನು ನಾವು ಪುನರ್ವಿಮರ್ಶಿಸಿದಂತೆ, ಮುಂಬರುವ ಉತ್ತೇಜಕ ಘಟನೆಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ.

ರಬ್ಷಾಕೆ ತನ್ನ ವಾದವನ್ನು ಮಂಡಿಸುತ್ತಾನೆ

7. ರಬ್ಷಾಕೆ ಯಾರು, ಮತ್ತು ಅವನು ಯಾವ ಕಾರಣಕ್ಕಾಗಿ ಯೆರೂಸಲೇಮಿಗೆ ಕಳುಹಿಸಲ್ಪಟ್ಟಿದ್ದಾನೆ?

7 ಸನ್ಹೇರೀಬನು ರಬ್ಷಾಕೆ (ಒಂದು ವೈಯಕ್ತಿಕ ಹೆಸರಲ್ಲ, ಮಿಲಿಟರಿ ಬಿರುದಾಗಿದೆ)ಯೊಂದಿಗೆ ಮತ್ತೆರಡು ಅಧಿಕಾರಿಗಳನ್ನು ಯೆರೂಸಲೇಮಿಗೆ ಕಳುಹಿಸಿ, ಪಟ್ಟಣದ ಶರಣಾಗತಿಗಾಗಿ ಅವರ ಮೂಲಕ ತಗಾದೆಮಾಡುತ್ತಾನೆ. (2 ಅರಸುಗಳು 18:17) ಇವರು ಪಟ್ಟಣದ ಹೊರಗೆ ಹಿಜ್ಕೀಯನ ಮೂವರು ಪ್ರತಿನಿಧಿಗಳನ್ನು ಸಂಧಿಸುತ್ತಾರೆ. ಅವರು ಹಿಜ್ಕೀಯನ ರಾಜಗೃಹಾಧಿಪತಿಯಾದ ಎಲ್ಯಾಕೀಮನು, ಲೇಖಕನಾದ ಶೆಬ್ನನು ಮತ್ತು ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವನಾಗಿದ್ದಾರೆ.​ಯೆಶಾಯ 36:​2, 3.

8. ಯೆರೂಸಲೇಮಿನ ನಿರೋಧಶಕ್ತಿಯನ್ನು ಕುಗ್ಗಿಸಲು ರಬ್ಷಾಕೆ ಏನು ಮಾಡುತ್ತಾನೆ?

8 ರಬ್ಷಾಕೆಯ ಗುರಿ ತೀರ ಸರಳವಾಗಿದೆ. ಅದೇನೆಂದರೆ, ಯುದ್ಧ ಮಾಡದೆ ಶರಣಾಗತವಾಗುವಂತೆ ಯೆರೂಸಲೇಮಿನ ಮನವೊಪ್ಪಿಸುವುದೇ. ಹೀಬ್ರು ಭಾಷೆಯಲ್ಲಿ ಮಾತಾಡುತ್ತಾ, ಅವನು ಹೇಳುವುದು: “ಈ ನಿನ್ನ ಭರವಸಕ್ಕೆ ಯಾವ ಆಧಾರವುಂಟು? . . . ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದೀ?” (ಯೆಶಾಯ 36:4, 5) ಭಯಭೀತರಾದ ಯೆಹೂದ್ಯರನ್ನು ರಬ್ಷಾಕೆಯು ಹಂಗಿಸಿ, ಅವರಿಗೆ ಯಾರ ನೆರವೂ ಇಲ್ಲವೆಂಬುದನ್ನು ಜ್ಞಾಪಿಸುತ್ತಾನೆ. ಅವರು ಯಾರಿಂದ ಬೆಂಬಲವನ್ನು ಅಪೇಕ್ಷಿಸಬಲ್ಲರು? ‘ಜಜ್ಜಿದ ದಂಟು’ ಐಗುಪ್ತದಿಂದಲೊ? (ಯೆಶಾಯ 36:⁠6) ಆ ಸಮಯದಲ್ಲಿ ಐಗುಪ್ತವು ಒಂದು ಜಜ್ಜಿದ ದಂಟನ್ನೇ ಹೋಲುತ್ತದೆ. ವಾಸ್ತವದಲ್ಲಿ ಈ ಮಾಜಿ ಲೋಕ ಶಕ್ತಿಯನ್ನು ಕೂಷ್‌ ದೇಶವು ತಾತ್ಕಾಲಿಕವಾಗಿ ಜಯಿಸಿದೆ, ಮತ್ತು ಐಗುಪ್ತವನ್ನು ಆಳುತ್ತಿರುವ ರಾಜ ತಿರ್ಹಾಕನೆಂಬ ಫರೋಹನು ಐಗುಪ್ತದವನಲ್ಲ, ಕೂಷಿನವನಾಗಿದ್ದಾನೆ. ಅಲ್ಲದೆ ಅವನು ಈಗಾಗಲೇ ಅಶ್ಶೂರರಿಂದ ಸೋಲಿಸಲ್ಪಡಲಿಕ್ಕಿದ್ದಾನೆ. (2 ಅರಸುಗಳು 19:​8, 9) ಐಗುಪ್ತವು ತನ್ನ ರಕ್ಷಣೆಯನ್ನೇ ಮಾಡಿಕೊಳ್ಳಲು ಹೆಣಗಾಡುತ್ತಿರುವಾಗ, ಅದು ಯೆಹೂದಕ್ಕೆ ಸಹಾಯ ನೀಡಲಾರದು ನಿಶ್ಚಯ.

9. ಯೆಹೋವನು ತನ್ನ ಜನರನ್ನು ತೊರೆದುಬಿಡುವನೆಂದು ರಬ್ಷಾಕೆ ನಂಬುವುದು ಏಕೆ, ಆದರೆ ನಿಜತ್ವಗಳೇನಾಗಿವೆ?

9 ಯೆಹೋವನು ತನ್ನ ಜನರ ಮೇಲೆ ಬಹಳ ಕೋಪಗೊಂಡಿರುವುದರಿಂದ ಅವರ ಪರವಾಗಿ ಕಾದಾಡಲಾರನೆಂದು ರಬ್ಷಾಕೆಯು ವಾದಿಸುತ್ತಾನೆ. ಅವನು ಹೇಳುವುದು: “ಒಂದು ವೇಳೆ ನೀನು​—⁠ನಮ್ಮ ದೇವರಾದ ಯೆಹೋವನನ್ನು ನಂಬಿಕೊಂಡಿದ್ದೇವೆಂದು ಹೇಳಬಹುದು. ಹಿಜ್ಕೀಯನು . . . ಯೆಹೋವನ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ!” (ಯೆಶಾಯ 36:7) ನಿಜ ಸಂಗತಿಯೇನೆಂದರೆ, ಆ ದೇಶದಲ್ಲಿದ್ದ ಪೂಜಾಸ್ಥಳಗಳನ್ನು ಮತ್ತು ಯಜ್ಞವೇದಿಗಳನ್ನು ಹಾಳುಮಾಡುವ ಮೂಲಕ ಯೆಹೂದ್ಯರು ಯೆಹೋವನನ್ನು ತಿರಸ್ಕರಿಸಿಲ್ಲ, ಬದಲಿಗೆ ಆತನ ಕಡೆಗೇ ಹಿಂದಿರುಗಿದ್ದಾರೆ.

10. ಯೆಹೂದವನ್ನು ರಕ್ಷಿಸುವವರ ಸಂಖ್ಯೆ ಹೆಚ್ಚಾಗಿರುವುದು ಇಲ್ಲವೆ ಕಡಿಮೆಯಾಗಿರುವುದು ನಿಜವಾಗಿಯೂ ಪ್ರಾಮುಖ್ಯವಾಗಿಲ್ಲ ಏಕೆ?

10 ಮಿಲಿಟರಿ ಸಾಮರ್ಥ್ಯದ ವಿಷಯದಲ್ಲಿ ಯೆಹೂದ್ಯರಿಗೆ ಯಾವ ನಿರೀಕ್ಷೆಯೂ ಇಲ್ಲವೆಂಬುದನ್ನು ರಬ್ಷಾಕೆಯು ಅವರಿಗೆ ಜ್ಞಾಪಕಹುಟ್ಟಿಸುತ್ತಾನೆ. ಅವನು ದುರಭಿಮಾನದಿಂದ ಸವಾಲೊಡ್ಡುವುದು: “ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ; ನೀನು ಅಷ್ಟು ಮಂದಿ ಸವಾರರನ್ನು ಅವುಗಳ ಮೇಲೆ ಕುಳ್ಳಿರಿಸುವಿಯೋ?” (ಯೆಶಾಯ 36:8) ವಾಸ್ತವದಲ್ಲಿ, ಯೆಹೂದದ ಅಶ್ವಸೈನ್ಯವು ಹೆಚ್ಚಾಗಿದ್ದರೇನು ಕಡಿಮೆಯಾಗಿದ್ದರೇನು, ಅದರಿಂದ ಯಾವ ವ್ಯತ್ಯಾಸವಾದರೂ ಆಗುವುದೊ? ಇಲ್ಲ. ಯೆಹೂದದ ರಕ್ಷಣೆಯು ಅದರ ಶ್ರೇಷ್ಠಮಟ್ಟದ ಮಿಲಿಟರಿ ಸಾಮರ್ಥ್ಯದ ಮೇಲೆ ಅವಲಂಬಿಸಿಲ್ಲ. ಜ್ಞಾನೋಕ್ತಿ 21:31 ಇದನ್ನು ಹೀಗೆ ವಿವರಿಸುತ್ತದೆ: “ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನಿಂದಲೇ.” ಯೆಹೋವನ ಆಶೀರ್ವಾದವು ಯೆಹೂದ್ಯರ ಮೇಲಲ್ಲ ಅಶ್ಶೂರರ ಮೇಲೆಯೇ ಇದೆಯೆಂದು ರಬ್ಷಾಕೆಯು ಹೇಳಿಕೊಳ್ಳುತ್ತಾನೆ. ಇಲ್ಲದಿದ್ದರೆ, ಅಶ್ಶೂರರು ಯೆಹೂದ ಕ್ಷೇತ್ರದೊಳಗೆ ಇಷ್ಟು ದೂರ ನುಸುಳಿ ಬರಲು ಸಾಧ್ಯವೇ ಇಲ್ಲವೆಂದು ಅವನು ವಾದಿಸುತ್ತಾನೆ.​ಯೆಶಾಯ 36:​9, 10.

11, 12. (ಎ) ರಬ್ಷಾಕೆ “ಯೂದಾಯ” ಭಾಷೆಯಲ್ಲಿ ಮಾತಾಡಲು ಪಟ್ಟುಹಿಡಿಯುವುದೇಕೆ, ಮತ್ತು ಕಿವಿಗೊಡುತ್ತಿರುವ ಯೆಹೂದ್ಯರನ್ನು ಬಲೆಗೆ ಬೀಳಿಸುವಂತೆ ಅವನು ಪ್ರಯತ್ನಿಸುವುದು ಹೇಗೆ? (ಬಿ) ರಬ್ಷಾಕೆಯ ಮಾತುಗಳು ಯೆಹೂದ್ಯರ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲವು?

11 ಪೌಳಿಗೋಡೆಯ ಮೇಲಿಂದ ರಬ್ಷಾಕೆಯ ಮಾತುಗಳನ್ನು ಕೇಳಿಸಿಕೊಳ್ಳುವ ಪುರುಷರ ಮೇಲೆ ಅದು ಯಾವ ಪರಿಣಾಮವನ್ನು ಬೀರುವುದೆಂಬುದರ ಬಗ್ಗೆ ಹಿಜ್ಕೀಯನ ಪ್ರತಿನಿಧಿಗಳು ಚಿಂತಿಸುತ್ತಾರೆ. ಆದಕಾರಣ ಈ ಯೆಹೂದಿ ಅಧಿಕಾರಿಗಳು ವಿನಂತಿಸಿಕೊಳ್ಳುವುದು: “ದಯವಿಟ್ಟು . . . ಅರಾಮ್ಯ ಭಾಷೆಯಲ್ಲಿ ಮಾತಾಡು; ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ ಮಾತಾಡಬೇಡ.” (ಯೆಶಾಯ 36:11) ಆದರೆ ಅರಾಮ್ಯ ಭಾಷೆಯಲ್ಲಿ ಮಾತಾಡಲು ರಬ್ಷಾಕೆಯು ಬಯಸುವುದಿಲ್ಲ. ಏಕೆಂದರೆ ಯೆಹೂದ್ಯರಲ್ಲಿ ಸಂದೇಹ ಹಾಗೂ ಭಯದ ಬೀಜಗಳನ್ನು ಬಿತ್ತಿ, ಅವರು ಶರಣಾಗತರಾಗುವಂತೆ ಮಾಡುವ ಮೂಲಕ ಯುದ್ಧಮಾಡದೆಯೇ ಯೆರೂಸಲೇಮನ್ನು ಜಯಿಸುವುದು ಅವನ ಉದ್ದೇಶ! (ಯೆಶಾಯ 36:12) ಆದುದರಿಂದ ಅವನು ಪುನಃ ಅವರೊಂದಿಗೆ “ಯೂದಾಯ” ಭಾಷೆಯಲ್ಲಿ ಮಾತಾಡುತ್ತಾನೆ. ಯೆರೂಸಲೇಮ್‌ ನಿವಾಸಿಗಳಿಗೆ ಅವನು ಎಚ್ಚರಿಕೆ ನೀಡುವುದು: “ಹಿಜ್ಕೀಯನಿಂದ ಮೋಸಹೋಗಬೇಡಿರಿ. ಅವನು ನಿಮ್ಮನ್ನು ಬಿಡಿಸಲಾರನು.” ತರುವಾಯ, ಯೆಹೂದ್ಯರು ಅಶ್ಶೂರರ ಆಳ್ವಿಕೆಯಲ್ಲಿ ಯಾವ ರೀತಿಯ ಜೀವನವನ್ನು ನಡೆಸುವರೆಂಬುದನ್ನು ಬಣ್ಣಿಸುವ ಮೂಲಕ, ಅವನು ತನ್ನ ಕೇಳುಗರಿಗೆ ಆಮೀಷವನ್ನೊಡ್ಡಲು ಪ್ರಯತ್ನಿಸುತ್ತಾನೆ: “ನನ್ನೊಡನೆ ಒಡಂಬಡಿಕೆಮಾಡಿಕೊಂಡು ನನ್ನ ಆಶ್ರಯದಲ್ಲಿ ಸೇರಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು. ಸ್ವಲ್ಪ ಕಾಲವಾದನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು.”​—ಯೆಶಾಯ 36:​13-17.

12 ಅಶ್ಶೂರರ ದಾಳಿಯ ಕಾರಣ, ಯೆಹೂದ್ಯರು ಈ ವರ್ಷ ತಮ್ಮ ಹೊಲಗಳಲ್ಲಿ ಬೀಜ ಬಿತ್ತಿಲ್ಲ. ಇದರಿಂದ ಸುಗ್ಗಿಕಾಲವೂ ಇರಲಾರದು. ಇಂತಹ ಸಮಯದಲ್ಲಿ, ಪೌಳಿಗೋಡೆಯ ಮೇಲಿಂದ ರಬ್ಷಾಕೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಪುರುಷರಿಗೆ, ರಸವತ್ತಾದ ದ್ರಾಕ್ಷೆಗಳನ್ನು ಮತ್ತು ತಂಪಾದ ನೀರನ್ನು ಕುಡಿಯುವ ಪ್ರತೀಕ್ಷೆ ತುಂಬ ಆಕರ್ಷಕವಾಗಿದೆ. ಈ ರೀತಿಯ ಮಾತುಗಳಿಂದ ಯೆಹೂದ್ಯರನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ರಬ್ಷಾಕೆಯು ಇನ್ನೂ ಮುಂದುವರಿಸುತ್ತಾನೆ.

13, 14. ರಬ್ಷಾಕೆಯು ವಾದಮಾಡಿದಂತೆ, ಸಮಾರ್ಯಕ್ಕೆ ಸಂಭವಿಸಿದ ವಿಷಯವನ್ನು ಯೆಹೂದದ ಸನ್ನಿವೇಶಕ್ಕೆ ಹೊಂದಿಸಲು ಸಾಧ್ಯವಿಲ್ಲವೇಕೆ?

13 ತನ್ನ ವಾಕ್‌ಯುದ್ಧದ ಅಸ್ತ್ರಗಳಿಂದ, ರಬ್ಷಾಕೆ ಮತ್ತೊಂದು ಮೌಖಿಕ ಅಸ್ತ್ರವನ್ನು ಬಳಸುತ್ತಾನೆ. “ಯೆಹೋವನು ನಮ್ಮನ್ನು ರಕ್ಷಿಸುವನು” ಎಂದು ಹಿಜ್ಕೀಯನು ನಿಮಗೆ ಹೇಳಿದರೆ, ಅವನನ್ನು ನಂಬಬೇಡಿ ಎಂದು ರಬ್ಷಾಕೆ ಯೆಹೂದ್ಯರಿಗೆ ಹೇಳಿಕೊಡುತ್ತಾನೆ. ಅಶ್ಶೂರರು ಹತ್ತು ಗೋತ್ರಗಳ ರಾಜ್ಯವನ್ನು ಜಯಿಸಿದಾಗ, ಸಮಾರ್ಯದ ದೇವತೆಗಳು ಏನೂ ಮಾಡಲಾಗದೆ ಕೈಕಟ್ಟಿ ನಿಂತಿದ್ದವೆಂದು ಅವನು ಯೆಹೂದ್ಯರಿಗೆ ಹೇಳುತ್ತಾನೆ. ಮತ್ತು ಅಶ್ಶೂರವು ಜಯಿಸಿರುವ ಇತರ ರಾಷ್ಟ್ರಗಳ ದೇವರುಗಳ ಬಗ್ಗೆ ಏನು? “ಹಮಾತ್‌, ಅರ್ಪಾದ್‌, ಸೆಫರ್ವಯಿಮ್‌ ಎಂಬ ಪಟ್ಟಣಗಳ ದೇವತೆಗಳೇನಾದವು?” ಎಂದು ಅವನು ಗರ್ವದಿಂದ ಕೇಳುತ್ತಾನೆ. “ಅವು ಸಮಾರ್ಯವನ್ನು ನನ್ನ ಕೈ ತಪ್ಪಿಸಿದವೋ?”​—ಯೆಶಾಯ 36:​18-20.

14 ರಬ್ಷಾಕೆ ಸುಳ್ಳು ದೇವರುಗಳ ಆರಾಧಕನಾಗಿರುವುದರಿಂದ, ಅವನಿಗೆ ಧರ್ಮಭ್ರಷ್ಟ ಸಮಾರ್ಯ ಹಾಗೂ ಹಿಜ್ಕೀಯನ ಕೈಕೆಳಗಿರುವ ಯೆರೂಸಲೇಮಿನ ನಡುವೆ ಇರುವ ದೊಡ್ಡ ವ್ಯತ್ಯಾಸದ ಅರಿವಿಲ್ಲ. ಸಮಾರ್ಯದ ಸುಳ್ಳು ದೇವರುಗಳಿಗೆ, ತಮ್ಮ ಹತ್ತು ಗೋತ್ರಗಳ ರಾಜ್ಯವನ್ನು ಕಾಪಾಡುವ ಶಕ್ತಿಯಿರಲಿಲ್ಲ. (2 ಅರಸುಗಳು 17:​7, 17, 18) ಆದರೆ ಹಿಜ್ಕೀಯನು ಆಳುತ್ತಿರುವ ಯೆರೂಸಲೇಮು, ಸುಳ್ಳು ದೇವರುಗಳನ್ನು ತಿರಸ್ಕರಿಸಿ ಯೆಹೋವನ ಸೇವೆಗೆ ಹಿಂದಿರುಗಿದೆ. ಆದರೆ ಈ ಎಲ್ಲ ವಿಷಯಗಳನ್ನು ಆ ಮೂವರು ಪ್ರತಿನಿಧಿಗಳು ರಬ್ಷಾಕೆಗೆ ವಿವರಿಸಲು ಪ್ರಯತ್ನಿಸುವುದಿಲ್ಲ. “ಆ ಸೇನಾಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು; ಏನೂ ಅನ್ನಲಿಲ್ಲ.” (ಯೆಶಾಯ 36:21) ಎಲ್ಯಾಕೀಮ್‌, ಶೆಬ್ನ ಮತ್ತು ಯೋವ ಹಿಜ್ಕೀಯನ ಬಳಿಗೆ ಹಿಂದಿರುಗಿ, ರಬ್ಷಾಕೆ ಆಡಿದ ಮಾತುಗಳ ವರದಿಯನ್ನು ಒಪ್ಪಿಸುತ್ತಾರೆ.​ಯೆಶಾಯ 36:⁠22.

ಹಿಜ್ಕೀಯನು ಒಂದು ನಿರ್ಣಯವನ್ನು ಮಾಡುತ್ತಾನೆ

15. (ಎ) ಹಿಜ್ಕೀಯನು ಈಗ ಯಾವ ನಿರ್ಣಯವನ್ನು ಮಾಡಬೇಕು? (ಬಿ) ಯೆಹೋವನು ತನ್ನ ಜನರಿಗೆ ಯಾವ ರೀತಿಯ ಪುನರಾಶ್ವಾಸನೆ ನೀಡುತ್ತಾನೆ?

15 ರಾಜ ಹಿಜ್ಕೀಯನು ಈಗ ಒಂದು ನಿರ್ಣಯವನ್ನು ಮಾಡಬೇಕಾಗಿದೆ. ಯೆರೂಸಲೇಮು ಅಶ್ಶೂರರಿಗೆ ಶರಣಾಗತವಾಗುವುದೊ? ಇಲ್ಲವೆ ಐಗುಪ್ತದೊಂದಿಗೆ ಸ್ನೇಹಬೆಳೆಸುವುದೊ? ಅಥವಾ ಅಶ್ಶೂರರನ್ನು ಎದುರಿಸಿ ಹೋರಾಡುವುದೊ? ಹಿಜ್ಕೀಯನು ಬಹಳಷ್ಟು ಒತ್ತಡವನ್ನು ಅನುಭವಿಸುತ್ತಿದ್ದಾನೆ. ಅವನು ಯೆಹೋವನ ಆಲಯಕ್ಕೆ ಹೋಗುವ ಮೊದಲು, ವೃದ್ಧ ಯಾಜಕರೊಂದಿಗೆ ಎಲ್ಯಾಕೀಮ್‌ ಮತ್ತು ಶೆಬ್ನರನ್ನು ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸುತ್ತಾನೆ. ಪ್ರವಾದಿಯು ಯೆಹೋವನಲ್ಲಿ ಪ್ರಾರ್ಥಿಸುವಂತೆ ಅವನು ಕೇಳಿಕೊಳ್ಳುತ್ತಾನೆ. (ಯೆಶಾಯ 37:1, 2) ಗೋಣೀತಟ್ಟುಗಳನ್ನು ಧರಿಸಿಕೊಂಡಿರುವ ರಾಜನ ಗುಪ್ತದೂತರು ಯೆಶಾಯನ ಬಳಿಗೆ ಬಂದು ಹೇಳುವುದು: “ಈ ದಿವಸದಲ್ಲಿ ನಮಗೆ ಮಹಾಕಷ್ಟವೂ ಶಿಕ್ಷೆಯೂ ನಿಂದೆಯೂ ಸಂಭವಿಸಿರುತ್ತವೆ. . . . ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು; ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು.” (ಯೆಶಾಯ 37:​3, 4) ಹೌದು, ಈ ಅಶ್ಶೂರರು ಜೀವಂತ ದೇವರಿಗೆಯೇ ಸವಾಲೊಡ್ಡುತ್ತಿದ್ದಾರೆ! ಅವರ ಕೆಣಕುನುಡಿಗಳನ್ನು ಯೆಹೋವನು ಲಕ್ಷ್ಯಕ್ಕೆ ತಂದುಕೊಳ್ಳುವನೊ? ಯೆಶಾಯನ ಮೂಲಕ, ಯೆಹೋವನು ಯೆಹೂದ್ಯರಿಗೆ ಆಶ್ವಾಸನೆ ನೀಡುವುದು: “ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ಕೇಳಿದ್ದೀ; ಅವುಗಳಿಗೆ ನೀನು ಹೆದರಬೇಡ. ಇಗೋ, ನಾನು ಅವನ ಮೇಲೆ [ಭಯದ] ಆತ್ಮವನ್ನು ಬರಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು.”​—ಯೆಶಾಯ 37:​5-7.

16. ಯಾವ ಪತ್ರಗಳನ್ನು ಸನ್ಹೇರೀಬನು ಕಳುಹಿಸುತ್ತಾನೆ?

16 ಈ ಮಧ್ಯೆ, ಸನ್ಹೇರೀಬನು ಲಿಬ್ನದಲ್ಲಿ ಯುದ್ಧಮಾಡುವಾಗ ತನ್ನಲ್ಲಿಗೆ ರಬ್ಷಾಕೆಯನ್ನು ಕರೆಯಿಸಿಕೊಳ್ಳುತ್ತಾನೆ. ಯೆರೂಸಲೇಮನ್ನು ತದನಂತರ ವಿಚಾರಿಸಿಕೊಳ್ಳಲು ಸನ್ಹೇರೀಬನು ಉದ್ದೇಶಿಸುತ್ತಾನೆ. (ಯೆಶಾಯ 37:⁠8) ರಬ್ಷಾಕೆ ಯೆರೂಸಲೇಮಿನಿಂದ ಹೊರಟುಹೋದರೂ, ಹಿಜ್ಕೀಯನ ಮೇಲಿರುವ ಒತ್ತಡ ಕಡಿಮೆಯಾಗುವುದಿಲ್ಲ. ಏಕೆಂದರೆ ಯೆರೂಸಲೇಮ್‌ ಶರಣಾಗತವಾಗದಿದ್ದಲ್ಲಿ ಆ ಪಟ್ಟಣದ ನಿವಾಸಿಗಳಿಗೆ ಏನಾಗುವುದೆಂಬುದನ್ನು ವಿವರಿಸುವ ಪತ್ರಗಳನ್ನು ಸನ್ಹೇರೀಬನು ಹಿಜ್ಕೀಯನಿಗೆ ಕಳುಹಿಸುತ್ತಾನೆ: “ಅಶ್ಶೂರದ ಅರಸರು ಎಲ್ಲಾ ರಾಜ್ಯಗಳನ್ನು ಪೂರ್ಣವಾಗಿ ನಾಶಮಾಡಿದರೆಂದು ಕೇಳಿದಿಯಲ್ಲಾ; ಹೀಗಿದ್ದ ಮೇಲೆ ನೀನು ಉಳಿಯುವಿಯೋ? ನನ್ನ ತಂದೆತಾತಂದಿರು . . . ಪಟ್ಟಣಗಳ ಜನರನ್ನೂ . . . ನಾಶಮಾಡುವದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ? ಹಮಾತ್‌, ಅರ್ಪಾದ್‌, ಸೆಫರ್ವಯಿಮ್‌, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು”? (ಯೆಶಾಯ 37:9-13) ಈ ಅಶ್ಶೂರನು ಏನು ಹೇಳಬಯಸುತ್ತಾನೆಂದರೆ, ಪ್ರತಿಭಟಿಸುವುದು ಮೂರ್ಖತನವಾಗಿದೆ, ಪ್ರತಿಭಟನೆಯಿಂದ ಹೆಚ್ಚಿನ ಸಂಕಟವಲ್ಲದೆ ಬೇರಾವ ಪ್ರಯೋಜನವೂ ಆಗಲಾರದು!

17, 18. (ಎ) ಸಂರಕ್ಷಣೆಗಾಗಿ ಯೆಹೋವನಿಗೆ ಮೊರೆಯಿಡುವುದರಲ್ಲಿ ಹಿಜ್ಕೀಯನ ಉದ್ದೇಶವು ಏನಾಗಿದೆ? (ಬಿ) ಯೆಹೋವನು ಯೆಶಾಯನ ಮೂಲಕ ಆ ಅಶ್ಶೂರ್ಯನಿಗೆ ಕೊಟ್ಟ ಉತ್ತರವೇನು?

17 ತಾನು ಮಾಡಲಿರುವ ನಿರ್ಣಯದ ಪರಿಣಾಮಗಳ ಬಗ್ಗೆ ಬಹಳವಾಗಿ ಚಿಂತಿಸುವ ಹಿಜ್ಕೀಯನು, ಆಲಯದಲ್ಲಿ ಯೆಹೋವನ ಮುಂದೆ ಸನ್ಹೇರೀಬನ ಪತ್ರಗಳನ್ನು ಇಡುತ್ತಾನೆ. (ಯೆಶಾಯ 37:14) ಆ ಅಶ್ಶೂರನ ಬೆದರಿಕೆಗಳಿಗೆ ಯೆಹೋವನು ಗಮನಹರಿಸುವಂತೆ ಆತನು ಹೃತ್ಪೂರ್ವಕವಾಗಿ ಬೇಡಿಕೊಳ್ಳುತ್ತಾನೆ. ತನ್ನ ಪ್ರಾರ್ಥನೆಯನ್ನು ಈ ಮಾತುಗಳಿಂದ ಕೊನೆಗೊಳಿಸುತ್ತಾನೆ: “ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು.” (ಯೆಶಾಯ 37:​15-20) ಹಿಜ್ಕೀಯನ ಚಿಂತೆ ಅವನ ಸ್ವಂತ ಬಿಡುಗಡೆಯಾಗಿರದೆ, ಯೆರೂಸಲೇಮನ್ನು ಅಶ್ಶೂರವು ಸೋಲಿಸಿಬಿಟ್ಟರೆ ಯೆಹೋವನ ನಾಮದ ಮೇಲೆ ಹೊರಿಸಲ್ಪಡುವ ಕಳಂಕವೇ ಆಗಿದೆಯೆಂಬುದು ಇದರಿಂದ ತೀರ ಸ್ಪಷ್ಟವಾಗಿ ತಿಳಿದುಬರುತ್ತದೆ.

18 ಹಿಜ್ಕೀಯನ ಪ್ರಾರ್ಥನೆಗೆ ಯೆಹೋವನು ಯೆಶಾಯನ ಮೂಲಕ ಉತ್ತರ ನೀಡುತ್ತಾನೆ. ಯೆರೂಸಲೇಮ್‌ ಅಶ್ಶೂರಕ್ಕೆ ಶರಣಾಗತವಾಗುವ ಬದಲು, ಅದನ್ನು ಎದುರಿಸಿ ಹೋರಾಡಬೇಕು. ಸನ್ಹೇರೀಬನನ್ನು ಉದ್ದೇಶಿಸಿ ಮಾತಾಡುವಂತೆ, ಯೆಶಾಯನು ಧೈರ್ಯದಿಂದ ಯೆಹೋವನ ಸಂದೇಶವನ್ನು ಆ ಅಶ್ಶೂರನಿಗೆ ತಿಳಿಯಪಡಿಸುತ್ತಾನೆ: “ಕನ್ನಿಕೆಯಾಗಿರುವ ಚೀಯೋನ್‌ ಕುಮಾರ್ತೆಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ; ಯೆರೂಸಲೇಮ್‌ ಕುಮಾರ್ತೆಯು ನಿನ್ನ ಹಿಂದೆ ತಲೆಯಾಡಿಸುತ್ತಾಳೆ.” (ಯೆಶಾಯ 37:21, 22) ತರುವಾಯ ಯೆಹೋವನು ಹೀಗೆ ಹೇಳುತ್ತಾನೆ: ‘ಇಸ್ರಾಯೇಲಿನ ಸದಮಲಸ್ವಾಮಿಯನ್ನು ನಿಂದಿಸಲು ನೀನು ಯಾರು? ನಿನ್ನ ಕೃತ್ಯಗಳು ನನಗೆ ಗೊತ್ತು. ನಿನ್ನ ಆಕಾಂಕ್ಷೆಗಳು ಅನೇಕ, ನಿನ್ನ ಜಂಬದ ಮಾತುಗಳು ಹಲವು. ನೀನು ನಿನ್ನ ಮಿಲಿಟರಿ ಶಕ್ತಿಯಲ್ಲಿ ಭರವಸೆಯಿಟ್ಟು ಬಹಳ ಕ್ಷೇತ್ರವನ್ನು ಜಯಸಿದ್ದಿ. ಆದರೆ ನೀನು ಅಜೇಯನಲ್ಲ. ನಿನ್ನ ಯೋಜನೆಗಳನ್ನು ಭಂಗಮಾಡುವೆನು. ನಾನು ನಿನ್ನನ್ನು ಜಯಿಸುವೆನು. ನೀನು ಇತರರಿಗೆ ಮಾಡಿದಂತೆ ನಾನು ನಿನಗೆ ಮಾಡುವೆನು. ನಿನಗೆ ಮೂಗುದಾರವನ್ನು ಹಾಕಿ ಅಶ್ಶೂರಕ್ಕೆ ಎಳೆದುಕೊಂಡು ಹೋಗುವೆನು!’​ಯೆಶಾಯ 37:​23-29.

‘ಈ ಮಾತುಗಳು ಗುರುತಾಗಿರುವವು’

19. ಯಾವ ಗುರುತನ್ನು ಯೆಹೋವನು ಹಿಜ್ಕೀಯನಿಗೆ ಕೊಡುತ್ತಾನೆ, ಮತ್ತು ಅದರ ಅರ್ಥ ಏನಾಗಿದೆ?

19 ಯೆಶಾಯನ ಪ್ರವಾದನೆಯು ನೆರವೇರುವುದೆಂಬ ದೃಢವಿಶ್ವಾಸ ಹಿಜ್ಕೀಯನಿಗಿದೆಯೊ? ಯೆಹೋವನು ಉತ್ತರಿಸುವುದು: “ಈ ಮಾತುಗಳು ನೆರವೇರುವವೆಂಬದಕ್ಕೆ ನೀವು ಈ ವರುಷದಲ್ಲಿ ಕೂಳೆಬೆಳೆಯನ್ನೂ ಮುಂದಿನ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಮೂರನೆಯ ವರುಷ ಹೊಲಗಳಲ್ಲಿ ಬಿತ್ತಿ ಕೊಯ್ದದ್ದನ್ನೂ ದ್ರಾಕ್ಷೇತೋಟಗಳಲ್ಲಿ ವ್ಯವಸಾಯಮಾಡಿ ಕೂಡಿಸಿದ್ದನ್ನೂ ಅನುಭವಿಸುವದೇ ಗುರುತಾಗಿರುವದು.” (ಯೆಶಾಯ 37:30) ಅಶ್ಶೂರರ ಕೈಗೆ ಸಿಕ್ಕಿಬಿದ್ದಿರುವ ಯೆಹೂದ್ಯರಿಗೆ ಯೆಹೋವನು ಆಹಾರವನ್ನು ಒದಗಿಸುವನು. ಇವರು ದಾಳಿಗೊಳಗಾದ ಕಾರಣ ಬೀಜ ಬಿತ್ತಲು ಸಾಧ್ಯವಾಗದಿದ್ದರೂ, ಹಿಂದಿನ ವರ್ಷದ ಕೊಯ್ಲಿನಿಂದ ಹಕ್ಕಲಾಯ್ದು ತಿನ್ನಬಹುದು. ಮುಂದಿನ ವರ್ಷವು ಒಂದು ಸಬ್ಬತ್‌ ವರ್ಷವಾಗಿರುವುದರಿಂದ, ಅವರ ಪರಿಸ್ಥಿತಿ ಎಷ್ಟೇ ಶೋಚನೀಯವಾಗಿರಲಿ ಅವರು ಹೊಲವನ್ನು ಉಳಬಾರದು. (ವಿಮೋಚನಕಾಂಡ 23:11) ಜನರು ತನ್ನ ಮಾತಿಗೆ ಕಿವಿಗೊಟ್ಟರೆ, ಅವರನ್ನು ಪೋಷಿಸಲು ಸಾಕಾಗುವಷ್ಟು ಧಾನ್ಯವು ಹೊಲಗಳಲ್ಲಿ ಬೆಳೆಯುವುದೆಂದು ಯೆಹೋವನು ವಾಗ್ದಾನಿಸುತ್ತಾನೆ. ಮುಂದಿನ ವರ್ಷ, ಜನರು ಸಾಮಾನ್ಯ ರೀತಿಯಲ್ಲಿ ಬೀಜ ಬಿತ್ತಿ, ತಮ್ಮ ದುಡಿಮೆಯ ಫಲವನ್ನು ಉಣ್ಣುವರು.

20. ಅಶ್ಶೂರರ ಆಕ್ರಮಣದಿಂದ ತಪ್ಪಿಸಿಕೊಂಡವರು, ಯಾವ ರೀತಿಯಲ್ಲಿ “ನೆಲೆಗೊಂಡು ಅಭಿವೃದ್ಧಿಯಾಗುವರು”?

20 ಅಷ್ಟೇನೂ ಸುಲಭವಾಗಿ ಬೇರುಸಹಿತ ಕಿತ್ತುಹಾಕಲು ಸಾಧ್ಯವಾಗದ ಒಂದು ಗಿಡಕ್ಕೆ ಯೆಹೋವನು ತನ್ನ ಜನರನ್ನು ಹೋಲಿಸುತ್ತಾನೆ: “ತಪ್ಪಿಸಿಕೊಂಡುಳಿದ ಯೆಹೂದ್ಯರು ದೇಶದಲ್ಲಿ ನೆಲೆಗೊಂಡು ಅಭಿವೃದ್ಧಿಯಾಗುವರು. . . . ಹರಡಿಕೊಳ್ಳುವರು; . . . ಅಭಿವೃದ್ಧಿಹೊಂದುವರು.” (ಯೆಶಾಯ 37:31, 32) ಹೌದು, ಯೆಹೋವನಲ್ಲಿ ಭರವಸೆಯುಳ್ಳವರು ಭಯಪಡುವ ಅಗತ್ಯವಿಲ್ಲ. ಅವರು ಮತ್ತು ಅವರ ಮಕ್ಕಳು ದೇಶದಲ್ಲಿ ಸ್ಥಿರವಾಗಿ ಬೇರೂರಿರುವರು.

21, 22. (ಎ) ಸನ್ಹೇರೀಬನ ಕುರಿತು ಯಾವ ಪ್ರವಾದನೆಯನ್ನು ಮಾಡಲಾಗಿದೆ? (ಬಿ) ಸನ್ಹೇರೀಬನ ಕುರಿತು ಯೆಹೋವನಾಡಿದ ಮಾತುಗಳು ಯಾವಾಗ ಮತ್ತು ಹೇಗೆ ನೆರವೇರಿದವು?

21 ಹಾಗಾದರೆ, ಯೆರೂಸಲೇಮು ಎದುರಿಸುತ್ತಿರುವ ಆ ಅಶ್ಶೂರನ ಬೆದರಿಕೆಗಳ ಕುರಿತೇನು? ಯೆಹೋವನು ಉತ್ತರಿಸುವುದು: “ಅವನು ಪಟ್ಟಣವನ್ನು ಸಮೀಪಿಸುವದಿಲ್ಲ, ಅದಕ್ಕೆ ಬಾಣವನ್ನೆಸೆಯುವದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವದಿಲ್ಲ, ಅದನ್ನು ಕೆಡವಿ ಬಿಡುವದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವದಿಲ್ಲ. ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಬರುವದೇ ಇಲ್ಲ.” (ಯೆಶಾಯ 37:33, 34) ಅಶ್ಶೂರ ಮತ್ತು ಯೆರೂಸಲೇಮಿನ ಮಧ್ಯೆ ಯುದ್ಧ ನಡೆಯಲಾರದು. ಯುದ್ಧಮಾಡದೆ ಸೋಲನ್ನಪ್ಪುವವರು ಯೆಹೂದ್ಯರಲ್ಲ ಅಶ್ಶೂರರೇ ಎಂಬುದು ವಿಸ್ಮಯಕರ ಸಂಗತಿಯು.

22 ತನ್ನ ಮಾತಿನಂತೆಯೇ, ಯೆಹೋವನು ಒಬ್ಬ ದೂತನನ್ನು ಕಳುಹಿಸಿ ಸನ್ಹೇರೀಬನ ಸೈನಿಕರಲ್ಲಿ ಅತ್ಯುತ್ತಮರಾದ 1,85,000 ಪುರುಷರನ್ನು ಕೊಲ್ಲಿಸುತ್ತಾನೆ. ಇದು ಲಿಬ್ನದಲ್ಲಿ ಸಂಭವಿಸುತ್ತದೆ. ಸನ್ಹೇರೀಬನು ಬೆಳಗ್ಗೆ ಎದ್ದಾಗ, ತನ್ನ ನಾಯಕರು, ಅಧಿಪತಿಗಳು ಮತ್ತು ಪರಾಕ್ರಮಿಗಳು ಸತ್ತುಬಿದ್ದಿರುವುದನ್ನು ನೋಡುತ್ತಾನೆ. ಲಜ್ಜಿತನಾಗಿ ಅವನು ನಿನೆವೆಗೆ ಹಿಂದಿರುಗುತ್ತಾನೆ. ಆದರೆ ಇಂತಹ ಭಾರೀ ಸೋಲಿನ ಎದುರಿನಲ್ಲೂ ಅವನು ತನ್ನ ಸುಳ್ಳು ದೇವನಾದ ನಿಸ್ರೋಕನಿಗೆ ಭಯಭಕ್ತಿಯಿಂದ ನಡೆದುಕೊಳ್ಳುತ್ತಾನೆ. ಕೆಲವು ವರ್ಷಗಳ ನಂತರ, ನಿಸ್ರೋಕನನ್ನು ಆರಾಧಿಸುತ್ತಿದ್ದಾಗ, ಸನ್ಹೇರೀಬನ ಇಬ್ಬರು ಪುತ್ರರೇ ಅವನನ್ನು ಕೊಲ್ಲುತ್ತಾರೆ. ಆಗಲೂ ಆ ನಿರ್ಜೀವ ನಿಸ್ರೋಕನಿಗೆ ಅವನನ್ನು ಕಾಪಾಡುವ ಶಕ್ತಿಯಿರುವುದಿಲ್ಲ.​ಯೆಶಾಯ 37:​35-38.

ಹಿಜ್ಕೀಯನ ನಂಬಿಕೆ ಮತ್ತಷ್ಟು ಬಲಗೊಳಿಸಲ್ಪಡುತ್ತದೆ

23. ಸನ್ಹೇರೀಬನು ಪ್ರಥಮ ಬಾರಿ ಯೆಹೂದದ ವಿರುದ್ಧ ದಂಡೆತ್ತಿಬಂದಾಗ, ಹಿಜ್ಕೀಯನು ಯಾವ ಸಂಕಷ್ಟವನ್ನು ಎದುರಿಸುತ್ತಾನೆ, ಮತ್ತು ಈ ಸಂಕಷ್ಟದ ಪರಿಣಾಮಗಳು ಏನಾಗಿರಸಾಧ್ಯವಿತ್ತು?

23 ಸನ್ಹೇರೀಬನು ಮೊದಲಾಗಿ ಯೆಹೂದದ ವಿರುದ್ಧ ದಂಡೆತ್ತಿಬಂದಾಗ, ಹಿಜ್ಕೀಯನು ಬಹಳ ರೋಗಗ್ರಸ್ತನಾಗಿರುತ್ತಾನೆ. ಅವನು ಇನ್ನೇನು ಸಾಯಲಿದ್ದಾನೆಂದು ಯೆಶಾಯನು ಅವನಿಗೆ ಹೇಳುತ್ತಾನೆ. (ಯೆಶಾಯ 38:⁠1) ಆ 39 ವರ್ಷ ಪ್ರಾಯದ ರಾಜನ ಮನಸ್ಸು ಕುಗ್ಗಿಹೋಗುತ್ತದೆ. ಅವನು ತನ್ನ ಯೋಗಕ್ಷೇಮದ ಬಗ್ಗೆ ಮಾತ್ರವಲ್ಲ, ತನ್ನ ಜನರ ಭವಿಷ್ಯತ್ತಿನ ಬಗ್ಗೆಯೂ ಚಿಂತಿಸುತ್ತಾನೆ. ಯೆರೂಸಲೇಮ್‌ ಮತ್ತು ಯೆಹೂದವು ಅಶ್ಶೂರರ ಆಕ್ರಮಣಕ್ಕೆ ಒಳಗಾಗುವ ಬೆದರಿಕೆಯನ್ನು ಎದುರಿಸುತ್ತಿವೆ. ಹಿಜ್ಕೀಯನು ಸತ್ತುಹೋದರೆ, ಯುದ್ಧದ ನಾಯಕತ್ವವನ್ನು ಯಾರು ವಹಿಸುವರು? ಆ ಸಮಯದಲ್ಲಿ, ಅರಸುತನವನ್ನು ವಹಿಸಿಕೊಳ್ಳಲು ಹಿಜ್ಕೀಯನಿಗೆ ಮಗನಿಲ್ಲ. ಯೆಹೋವನು ತನಗೆ ಕರುಣೆ ತೋರಿಸಬೇಕೆಂದು ಹಿಜ್ಕೀಯನು ಮೊರೆಯಿಡುತ್ತಾನೆ.​ಯೆಶಾಯ 38:​2, 3.

24, 25. (ಎ) ಯೆಹೋವನು ವಿನಯದಿಂದ ಹಿಜ್ಕೀಯನ ಪ್ರಾರ್ಥನೆಗೆ ಉತ್ತರ ನೀಡುವುದು ಹೇಗೆ? (ಬಿ) ಯೆಶಾಯ 38:​7, 8ರಲ್ಲಿ ವರ್ಣಿಸಲಾದಂತೆ, ಯಾವ ಅದ್ಭುತಕಾರ್ಯವನ್ನು ಯೆಹೋವನು ಕೈಗೊಳ್ಳುತ್ತಾನೆ?

24 ಯೆಶಾಯನು ಅರಮನೆಯ ಅಂಗಳವನ್ನು ದಾಟಿಹೋಗುವ ಮುಂಚೆಯೇ, ಯೆಹೋವನು ಯೆಶಾಯನ ಮೂಲಕ ಮತ್ತೊಂದು ಸಂದೇಶವನ್ನು ಆ ಕಾಯಿಲೆಪೀಡಿತ ರಾಜನಿಗೆ ಕಳುಹಿಸುತ್ತಾನೆ: “ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ನಿನ್ನ ಆಯುಷ್ಯಕ್ಕೆ ಹದಿನೈದು ವರುಷಗಳನ್ನು ಕೂಡಿಸುತ್ತೇನೆ. ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುವೆನು; ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು.” (ಯೆಶಾಯ 38:4-6; 2 ಅರಸುಗಳು 20:​4, 5) ಒಂದು ಅಸಾಮಾನ್ಯವಾದ ಗುರುತಿನೊಂದಿಗೆ ಯೆಹೋವನು ತನ್ನ ವಾಗ್ದಾನವನ್ನು ದೃಢೀಕರಿಸುವನು: “ಇಗೋ, ಸೂರ್ಯನ ಇಳಿತರದಿಂದ ಆಹಾಜನ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಲು ಹಿಂದಕ್ಕೆ ಬರಮಾಡುವೆನು.”​—ಯೆಶಾಯ 38:7, 8ಎ.

25 ಯೆಹೂದಿ ಇತಿಹಾಸಕಾರನಾದ ಜೋಸೀಫಸ್‌ಗನುಸಾರ, ಅರಮನೆಯ ಒಳಗೆ ಒಂದು ಮೆಟ್ಟಲಸಾಲಿತ್ತು; ಮತ್ತು ಅದರ ಪಕ್ಕದಲ್ಲಿ ಒಂದು ಕಂಬವಿದ್ದಿರಬಹುದು. ಸೂರ್ಯನ ಕಿರಣಗಳು ಈ ಕಂಬವನ್ನು ತಾಕಿದಾಗ, ಅವು ಮೆಟ್ಟಲುಗಳ ಮೇಲೆ ನೆರಳನ್ನು ಮೂಡಿಸಿದವು. ಆ ನೆರಳು ಮುಂದುವರಿದಂತೆ ಎಷ್ಟು ಸಮಯವು ಗತಿಸಿರಬೇಕೆಂದು ಒಬ್ಬನು ಲೆಕ್ಕಮಾಡಬಹುದಿತ್ತು. ಈಗ ಯೆಹೋವನು ಒಂದು ಅದ್ಭುತಕಾರ್ಯವನ್ನು ಮಾಡುವನು. ನೆರಳು ಸಾಮಾನ್ಯ ರೀತಿಯಲ್ಲಿ ಕೆಳಗಿಳಿದಂತೆ, ಹತ್ತು ಮೆಟ್ಟಲು ಹಿಂದಕ್ಕೆ ಬರುವುದು. ಇಂತಹ ವಿಷಯದ ಬಗ್ಗೆ ಯಾರಾದರೂ ಕೇಳಿದ್ದುಂಟೊ? ಬೈಬಲ್‌ ಹೇಳುವುದು: “ಅದರಂತೆ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಲು ಹಿಂದಕ್ಕೆ ಬಂತು.” (ಯೆಶಾಯ 38:8ಬಿ) ಇದಾದ ಸ್ವಲ್ಪದರಲ್ಲೇ, ಹಿಜ್ಕೀಯನು ತನ್ನ ಕಾಯಿಲೆಯಿಂದ ಸ್ವಸ್ಥನಾಗುತ್ತಾನೆ. ಈ ಸುದ್ದಿ ಬಾಬೆಲಿನಷ್ಟು ದೂರದೂರದ ಪ್ರದೇಶಗಳಿಗೂ ಹಬ್ಬುತ್ತದೆ. ಬಾಬೆಲಿನ ರಾಜನಿಗೆ ಈ ಸುದ್ದಿ ಮುಟ್ಟಿದಾಗ, ಅವನು ನಿಜಾಂಶಗಳನ್ನು ಕಂಡುಹಿಡಿಯಲು ಯೆರೂಸಲೇಮಿಗೆ ತನ್ನ ದೂತರನ್ನು ಕಳುಹಿಸುತ್ತಾನೆ.

26. ಹಿಜ್ಕೀಯನ ಆಯುಸ್ಸನ್ನು ಹೆಚ್ಚಿಸಿದುದರ ಒಂದು ಪರಿಣಾಮವೇನು?

26 ಹಿಜ್ಕೀಯನು ಅದ್ಭುತಕರವಾಗಿ ಗುಣಹೊಂದಿ, ಮೂರು ವರ್ಷಗಳು ಗತಿಸಿದ ತರುವಾಯ, ಅವನ ಜ್ಯೇಷ್ಠ ಪುತ್ರನಾದ ಮನಸ್ಸೆ ಜನಿಸುತ್ತಾನೆ. ಆದರೆ ಯೆಹೋವನ ದಯೆಯಿಂದಲೇ ಹುಟ್ಟಿದ ಮನಸ್ಸೆಯು, ದೊಡ್ಡವನಾಗುತ್ತಾ ಹೋದಂತೆ ಆ ದಯೆಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವುದೇ ಇಲ್ಲ! ಬದಲಿಗೆ ತನ್ನ ಜೀವಮಾನಕಾಲದ ಹೆಚ್ಚಿನ ಸಮಯ ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನೇ ದೊಡ್ಡ ಪ್ರಮಾಣದಲ್ಲಿ ಮಾಡುತ್ತಾನೆ.​—⁠2 ಪೂರ್ವಕಾಲವೃತ್ತಾಂತ 32:24; 33:​1-6.

ವಿವೇಚಿಸುವುದರಲ್ಲಿ ಒಂದು ದೊಡ್ಡ ತಪ್ಪು

27. ಯಾವ ವಿಧಗಳಲ್ಲಿ ಹಿಜ್ಕೀಯನು ಯೆಹೋವನಿಗೆ ಗಣ್ಯತೆಯನ್ನು ವ್ಯಕ್ತಪಡಿಸುತ್ತಾನೆ?

27 ತನ್ನ ಪೂರ್ವಜನಾದ ದಾವೀದನಂತೆ, ಹಿಜ್ಕೀಯನು ನಂಬಿಕೆಯ ವ್ಯಕ್ತಿಯಾಗಿದ್ದಾನೆ. ದೇವರ ವಾಕ್ಯವನ್ನು ಅಮೂಲ್ಯವೆಂದೆಣಿಸುತ್ತಾನೆ. ಜ್ಞಾನೋಕ್ತಿ 25:1ಕ್ಕನುಸಾರ, ಜ್ಞಾನೋಕ್ತಿ 25ರಿಂದ 29ನೆಯ ಅಧ್ಯಾಯಗಳಲ್ಲಿರುವ ವಿಷಯವನ್ನು ಅವನೇ ಸಂಕಲಿಸಿದನು. ಅವನು 119ನೆಯ ಕೀರ್ತನೆಯನ್ನೂ ಬರೆದನೆಂದು ಕೆಲವರು ನಂಬುತ್ತಾರೆ. ಹಿಜ್ಕೀಯನು ಗುಣಮುಖನಾದ ಮೇಲೆ ರಚಿಸಿದ ಕೃತಜ್ಞತೆಯ ಹಾಡು, ಅವನೊಬ್ಬ ಗಣ್ಯತೆಯುಳ್ಳ ವ್ಯಕ್ತಿಯೆಂಬುದನ್ನು ತೋರಿಸುತ್ತದೆ. ಯೆಹೋವನನ್ನು ಆತನ ಆಲಯದಲ್ಲಿ “ಜೀವಮಾನದಲ್ಲೆಲ್ಲಾ” ಸ್ತುತಿಸಸಾಧ್ಯವಾಗಿರುವುದೇ ಜೀವಿತದ ಅತ್ಯಂತ ಪ್ರಮುಖವಾದ ವಿಷಯವೆಂದು ಅವನು ತೀರ್ಮಾನಿಸುತ್ತಾನೆ. (ಯೆಶಾಯ 38:​9-20) ಶುದ್ಧಾರಾಧನೆಯ ಬಗ್ಗೆ ಅವನಿಗಿದ್ದ ಭಾವನೆಯೇ ನಮಗೆಲ್ಲರಿಗೂ ಇರಲಿ!

28. ಹಿಜ್ಕೀಯನು ಅದ್ಭುತಕರವಾಗಿ ಗುಣಹೊಂದಿದ ಸ್ವಲ್ಪ ಸಮಯದ ನಂತರ, ವಿವೇಚಿಸುವುದರಲ್ಲಿ ಹೇಗೆ ತಪ್ಪಿಹೋಗುತ್ತಾನೆ?

28 ಹಿಜ್ಕೀಯನು ನಂಬಿಗಸ್ತನಾಗಿದ್ದರೂ ಅಪರಿಪೂರ್ಣನಾಗಿದ್ದನು. ಯೆಹೋವನು ಅವನನ್ನು ಗುಣಪಡಿಸಿದ ತರುವಾಯ, ಅವನು ವಿವೇಚಿಸುವುದರಲ್ಲಿ ಒಂದು ದೊಡ್ಡ ತಪ್ಪನ್ನು ಮಾಡುತ್ತಾನೆ. ಯೆಶಾಯನು ವಿವರಿಸುವುದು: “ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕಬಲದಾನನೆಂಬವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರವನ್ನೂ ಬಹುಮಾನವನ್ನೂ ಕಳುಹಿಸಿದನು. ಹಿಜ್ಕೀಯನು ಬಂದ ದೂತರನ್ನು ಸಂತೋಷದಿಂದ ನೋಡಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದಲಾದ ಪದಾರ್ಥಗಳಿರುವ ಮನೆಯನ್ನೂ ಆಯುಧಶಾಲೆಯನ್ನೂ ತನ್ನ ಭಂಡಾರದಲ್ಲಿದ್ದದ್ದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.”​—ಯೆಶಾಯ 39:1, 2. *

29. (ಎ) ಯಾವ ಉದ್ದೇಶದಿಂದ ಹಿಜ್ಕೀಯನು ಬಾಬೆಲಿನ ಪ್ರತಿನಿಧಿ ಮಂಡಲಿಗೆ ತನ್ನ ಸಿರಿಸಂಪತ್ತನ್ನೆಲ್ಲ ತೋರಿಸಿದ್ದಿರಬಹುದು? (ಬಿ) ಹಿಜ್ಕೀಯನು ವಿವೇಚಿಸುವುದರಲ್ಲಿ ಮಾಡಿದ ತಪ್ಪಿನ ಪರಿಣಾಮಗಳು ಏನಾಗಿರುವವು?

29 ಯೆಹೋವನ ದೂತನಿಂದ ಭಾರೀ ಹೊಡೆತವನ್ನು ಅನುಭವಿಸಿದ್ದರೂ, ಅಶ್ಶೂರವು ಬಾಬೆಲನ್ನು ಸೇರಿಸಿ ಅನೇಕ ರಾಷ್ಟ್ರಗಳಿಗೆ ಈಗಲೂ ಬೆದರಿಕೆಯನ್ನು ಒಡ್ಡುತ್ತಿದೆ. ಬಾಬೆಲಿನ ಅರಸನನ್ನು ಮುಂದೆ ಒಬ್ಬ ಸ್ನೇಹಿತನನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಹಿಜ್ಕೀಯನು ಅವನನ್ನು ಪ್ರಭಾವಿಸಲು ಬಯಸಿದ್ದಿರಬಹುದು. ಆದರೆ, ಯೆಹೂದದ ನಿವಾಸಿಗಳು ತಮ್ಮ ವೈರಿಗಳೊಂದಿಗೆ ಒಂದುಗೂಡುವ ಬದಲು ತನ್ನಲ್ಲಿ ಭರವಸೆಯಿಡಬೇಕೆಂದು ಯೆಹೋವನು ಬಯಸುತ್ತಾನೆ! ಪ್ರವಾದಿಯಾದ ಯೆಶಾಯನ ಮೂಲಕ, ಯೆಹೋವನು ಹಿಜ್ಕೀಯನಿಗೆ ಭವಿಷ್ಯತ್ತನ್ನು ತಿಳಿಯಪಡಿಸುತ್ತಾನೆ: “ನಿನ್ನ ಪೂರ್ವಿಕರ ಕಾಲದಿಂದ ಇಂದಿನ ವರೆಗೆ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬೆಲಿಗೆ ಒಯ್ಯಲ್ಪಡುವ ದಿನ ಬರುವದು; ಇಲ್ಲೇನೂ ಉಳಿಯುವದಿಲ್ಲ. . . . ನೀನು ಪಡೆದ ಮಕ್ಕಳನ್ನು ತೆಗೆದುಕೊಂಡು ಹೋಗಿ ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು.” (ಯೆಶಾಯ 39:3-7) ಯಾರ ಸ್ನೇಹವನ್ನು ಹಿಜ್ಕೀಯನು ಗಳಿಸಲು ಪ್ರಯತ್ನಿಸಿದನೊ, ಅದೇ ರಾಷ್ಟ್ರವು ಯೆರೂಸಲೇಮಿನ ಸೊತ್ತನ್ನೆಲ್ಲ ಲೂಟಿಮಾಡಿ, ಅದರ ಪ್ರಜೆಗಳನ್ನು ಗುಲಾಮರನ್ನಾಗಿ ಮಾಡುವುದು. ಬಾಬೆಲಿನವರಿಗೆ ತನ್ನ ಸಿರಿಸಂಪತ್ತನ್ನು ತೋರಿಸುವ ಮೂಲಕ, ಹಿಜ್ಕೀಯನು ಅವರ ಅತ್ಯಾಶೆಯನ್ನು ಕೆರಳಿಸಿದ್ದಾನಷ್ಟೇ.

30. ಹಿಜ್ಕೀಯನು ಒಂದು ಒಳ್ಳೆಯ ಮನೋಭಾವವನ್ನು ತೋರಿಸಿದ್ದು ಹೇಗೆ?

30 ಹಿಜ್ಕೀಯನು ತನ್ನ ಸಿರಿಸಂಪತ್ತನ್ನು ಬಾಬೆಲಿನವರಿಗೆ ತೋರಿಸಿದ ಘಟನೆಯನ್ನೇ ಸೂಚಿಸುತ್ತಾ, 2 ಪೂರ್ವಕಾಲವೃತ್ತಾಂತ 32:26 ಹೇಳುವುದು: “ಹಿಜ್ಕೀಯನು ತನ್ನ ಗರ್ವವನ್ನು ಬಿಟ್ಟು ಯೆರೂಸಲೇಮಿನವರೊಡನೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಜೀವಮಾನದಲ್ಲಿ ಯೆಹೋವನ ಕೋಪವು ಅವರ ಮೇಲೆ ಬರಲಿಲ್ಲ.”

31. ಹಿಜ್ಕೀಯನಿಗೆ ಯಾವ ಪ್ರತಿಫಲ ಸಿಕ್ಕಿತು, ಮತ್ತು ಇದರಿಂದ ನಾವು ಏನು ಕಲಿತುಕೊಳ್ಳಸಾಧ್ಯವಿದೆ?

31 ಅವನ ಅಪರಿಪೂರ್ಣತೆಯ ಹೊರತೂ, ಹಿಜ್ಕೀಯನು ನಂಬಿಕೆಯ ಮನುಷ್ಯನಾಗಿದ್ದನು. ತನ್ನ ದೇವರಾದ ಯೆಹೋವನು, ಭಾವನೆಗಳುಳ್ಳ ನಿಜವಾದ ವ್ಯಕ್ತಿಯೆಂಬುದು ಅವನಿಗೆ ಗೊತ್ತಿತ್ತು. ಒತ್ತಡದ ಕೆಳಗೆ ಹಿಜ್ಕೀಯನು ಯೆಹೋವನಲ್ಲಿ ಹೃತ್ಪೂರ್ವಕವಾಗಿ ಪ್ರಾರ್ಥಿಸಿದನು, ಮತ್ತು ಯೆಹೋವನು ಅವನ ಪ್ರಾರ್ಥನೆಗೆ ಉತ್ತರ ನೀಡಿದನು. ಅವನು ಬದುಕಿಉಳಿದ ದಿನದ ವರೆಗೂ ಯೆಹೋವನು ಅವನಿಗೆ ಶಾಂತಿಯನ್ನು ದಯಪಾಲಿಸಿದನು ಮತ್ತು ಇದಕ್ಕಾಗಿ ಹಿಜ್ಕೀಯನು ಕೃತಜ್ಞನಾಗಿದ್ದನು. (ಯೆಶಾಯ 39:⁠8) ಯೆಹೋವನು ನಮಗೂ ಅಷ್ಟೇ ನೈಜನಾಗಿರಬೇಕು. ಸಮಸ್ಯೆಗಳು ಏಳುವಾಗ, ಹಿಜ್ಕೀಯನಂತೆ ನಾವೂ ವಿವೇಕ ಹಾಗೂ ಪರಿಹಾರಕ್ಕಾಗಿ ಯೆಹೋವನ ಕಡೆಗೆ ನೋಡೋಣ, ಏಕೆಂದರೆ “ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ 1:⁠5) ನಾವು ತಾಳಿಕೊಂಡು ಯೆಹೋವನಲ್ಲಿ ನಂಬಿಕೆಯನ್ನು ಪ್ರದರ್ಶಿಸಿದರೆ, ಆತನು ಈಗಲೂ ಭವಿಷ್ಯತ್ತಿನಲ್ಲೂ “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡು”ವನೆಂಬ ಖಾತ್ರಿ ನಮಗಿರಸಾಧ್ಯವಿದೆ.​—⁠ಇಬ್ರಿಯ 11:⁠6.

[ಪಾದಟಿಪ್ಪಣಿಗಳು]

^ ಪ್ಯಾರ. 4 ಪ್ರಚಲಿತ ಮೌಲ್ಯದಲ್ಲಿ ಇದರ ಬೆಲೆ 90.5 ಲಕ್ಷಕ್ಕಿಂತಲೂ ಅಧಿಕ ಅಮೆರಿಕನ್‌ ಡಾಲರುಗಳಾಗಿವೆ.

^ ಪ್ಯಾರ. 28 ಸನ್ಹೇರೀಬನು ಸೋಲನ್ನನುಭವಿಸಿದ ಬಳಿಕ, ಸುತ್ತಮುತ್ತಲಿನ ರಾಷ್ಟ್ರಗಳು ಹಿಜ್ಕೀಯನಿಗೆ ಬೆಳ್ಳಿಬಂಗಾರ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಕೊಡುಗೆಯಾಗಿ ಕೊಟ್ಟವು. 2 ಪೂರ್ವಕಾಲವೃತ್ತಾಂತ 32:​22, 23, 27ರಲ್ಲಿ ನಾವು ಓದುವುದೇನೆಂದರೆ, “ಹಿಜ್ಕೀಯನಿಗೆ ಅತ್ಯಧಿಕವಾದ ಧನಘನತೆಗಳು ಒದಗಿದವು” ಮತ್ತು “ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಲುದೊಡ್ಡವನೆಂದು ಎಣಿಸುತ್ತಿದ್ದರು.” ಅವನು ಅಶ್ಶೂರರಿಗೆ ಕಪ್ಪಕಾಣಿಕೆಯನ್ನು ಕೊಟ್ಟಾಗ ಬರಿದುಮಾಡಿದ್ದ ಭಂಡಾರವನ್ನು ಈ ಕೊಡುಗೆಗಳಿಂದ ಈಗ ತುಂಬಿಸಿದ್ದಿರಬಹುದು.

[ಅಧ್ಯಯನ ಪ್ರಶ್ನೆಗಳು]

[ಪುಟ 383ರಲ್ಲಿರುವ ಚಿತ್ರ]

ಬಲಶಾಲಿ ಅಶ್ಶೂರವನ್ನು ಎದುರಿಸುವಾಗ ರಾಜ ಹಿಜ್ಕೀಯನು ಯೆಹೋವನಲ್ಲಿ ಭರವಸೆಯಿಡುತ್ತಾನೆ

[ಪುಟ 384ರಲ್ಲಿ ಇಡೀ ಪುಟದ ಚಿತ್ರ]

[ಪುಟ 389ರಲ್ಲಿರುವ ಚಿತ್ರ]

ಯೆಹೋವನ ಸಲಹೆಯನ್ನು ತಿಳಿದುಕೊಳ್ಳಲು ರಾಜನು ತನ್ನ ಗುಪ್ತದೂತರನ್ನು ಯೆಶಾಯನ ಬಳಿಗೆ ಕಳುಹಿಸುತ್ತಾನೆ

[ಪುಟ 390ರಲ್ಲಿರುವ ಚಿತ್ರ]

ಅಶ್ಶೂರರ ಸೋಲಿನಿಂದ ಯೆಹೋವನ ನಾಮವು ಮಹಿಮೆಗೇರಲೆಂದು ಹಿಜ್ಕೀಯನು ಪ್ರಾರ್ಥಿಸುತ್ತಾನೆ

[ಪುಟ 393ರಲ್ಲಿರುವ ಚಿತ್ರ]

ಯೆಹೋವನ ದೂತನು 1,85,000 ಅಶ್ಶೂರ್ಯರನ್ನು ಕೊಂದುಹಾಕುತ್ತಾನೆ