ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ರಾಜನಾಗಿದ್ದಾನೆ

ಯೆಹೋವನು ರಾಜನಾಗಿದ್ದಾನೆ

ಅಧ್ಯಾಯ ಇಪ್ಪತ್ತು

ಯೆಹೋವನು ರಾಜನಾಗಿದ್ದಾನೆ

ಯೆಶಾಯ 24:​1-23

1, 2. (ಎ) ಯೆಹೋವನ ಕೋಪಕ್ಕೆ ಯಾರು ತುತ್ತಾಗುವರು? (ಬಿ) ಯೆಹೂದವು ದಂಡನೆಗೆ ಒಳಪಡದೆ ಹೋಗುವುದೊ, ಮತ್ತು ಇದು ನಮಗೆ ಹೇಗೆ ಗೊತ್ತು?

ಬಾಬೆಲ್‌, ಫಿಲಿಷ್ಟಿಯ, ಮೋವಾಬ್‌, ಅರಾಮ್ಯ, ಇಥಿಯೋಪಿಯ, ಐಗುಪ್ತ, ಏದೋಮ್‌, ತೂರ್‌, ಅಶ್ಶೂರ ಎಂಬ ರಾಷ್ಟ್ರಗಳೆಲ್ಲವೂ ಯೆಹೋವನ ಕೋಪಕ್ಕೆ ತುತ್ತಾಗುವವು. ಈ ಶತ್ರು ರಾಷ್ಟ್ರಗಳು ಮತ್ತು ಪಟ್ಟಣಗಳ ಮೇಲೆ ಎರಗಲಿರುವ ಕೇಡುಗಳ ಬಗ್ಗೆ ಯೆಶಾಯನು ಮುಂತಿಳಿಸಿದ್ದಾನೆ. ಆದರೆ, ಯೆಹೂದದ ಕುರಿತೇನು? ಯೆಹೂದದ ನಿವಾಸಿಗಳು ತಮ್ಮ ಪಾಪಪೂರ್ಣ ಮಾರ್ಗಗಳಿಗಾಗಿ ದಂಡನೆಗೆ ಒಳಪಡಲಾರರೊ? ಅವರು ಖಂಡಿತವಾಗಿಯೂ ದಂಡಿಸಲ್ಪಡುವರು ಎಂಬುದನ್ನು ಇತಿಹಾಸದ ದಾಖಲೆಯು ಸಾರಿಸಾರಿ ಹೇಳುತ್ತದೆ!

2 ಇಸ್ರಾಯೇಲಿನ ಹತ್ತು ಗೋತ್ರಗಳ ರಾಜಧಾನಿಯಾದ ಸಮಾರ್ಯಕ್ಕೆ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಆ ಜನಾಂಗವು ಯೆಹೋವನ ಒಡಂಬಡಿಕೆಗನುಸಾರ ನಡೆದುಕೊಳ್ಳಲಿಲ್ಲ. ತನ್ನ ಸುತ್ತಲೂ ಇದ್ದ ರಾಷ್ಟ್ರಗಳವರ ಅಯೋಗ್ಯ ಆಚರಣೆಗಳಿಂದ ಅದು ದೂರ ಉಳಿಯಲಿಲ್ಲ. ಬದಲಿಗೆ, ಸಮಾರ್ಯದ ನಿವಾಸಿಗಳು, ‘ತಮ್ಮ ದುಷ್ಕೃತ್ಯಗಳಿಂದ ಯೆಹೋವನನ್ನು ರೇಗಿಸಿದರು . . . ಅವರು ಈ ಪ್ರಕಾರ ನಡೆದದರಿಂದ ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು . . . ಎಲ್ಲಾ ಕುಲಗಳವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟನು.’ ತಮ್ಮ ದೇಶದಿಂದ ತಳ್ಳಲ್ಪಟ್ಟ ನಂತರ, ‘ಇಸ್ರಾಯೇಲ್ಯರು ಅಶ್ಶೂರ್‌ ದೇಶಕ್ಕೆ ಒಯ್ಯಲ್ಪಟ್ಟರು.’ (2 ಅರಸುಗಳು 17:​9-12, 16-18, 23; ಹೋಶೇಯ 4:​12-14) ಇಸ್ರಾಯೇಲಿಗೆ ಸಂಭವಿಸಿದ ವಿಷಯಗಳು, ಅದರ ಒಡಹುಟ್ಟಿದ ಯೆಹೂದ ರಾಜ್ಯಕ್ಕೆ ಶುಭಸೂಚಕವಾಗಿರುವುದಿಲ್ಲ.

ಯೆಹೂದದ ನಾಶನವನ್ನು ಯೆಶಾಯನು ಮುಂತಿಳಿಸುತ್ತಾನೆ

3. (ಎ) ಯೆಹೋವನು ಎರಡು ಗೋತ್ರಗಳ ಯೆಹೂದ ರಾಜ್ಯವನ್ನು ತೊರೆದುಬಿಡುವುದೇಕೆ? (ಬಿ) ಯೆಹೋವನು ಏನನ್ನು ಮಾಡಲು ನಿರ್ಧರಿಸಿದ್ದಾನೆ?

3 ಯೆಹೂದದ ಹೆಚ್ಚಿನ ರಾಜರು ಅಪನಂಬಿಗಸ್ತರಾಗಿದ್ದರೂ, ಕೆಲವರು ನಂಬಿಗಸ್ತಿಕೆಯಿಂದ ನಡೆದುಕೊಂಡರು. ಯೋತಾಮನಂತಹ ನಂಬಿಗಸ್ತ ರಾಜನು ಆಳುತ್ತಿದ್ದಾಗಲೂ, ಯೆಹೂದದ ಜನರು ಸುಳ್ಳಾರಾಧನೆಯನ್ನು ಸಂಪೂರ್ಣವಾಗಿ ತೊರೆದಿರಲಿಲ್ಲ. (2 ಅರಸುಗಳು 15:​32-35) ಯೆಹೂದದ ದುಷ್ಟತನವು ರಕ್ತಪಿಪಾಸು ಮನಸ್ಸೆಯ ಆಳ್ವಿಕೆಯ ಕಾಲದಲ್ಲೇ ತುತ್ತತುದಿಗೆ ಏರುತ್ತದೆ. ಯೆಹೂದಿ ಪುರಾಣಕ್ಕನುಸಾರ, ನಂಬಿಗಸ್ತ ಪ್ರವಾದಿಯಾದ ಯೆಶಾಯನನ್ನು ಗರಗಸದಿಂದ ಕೊಯ್ದು ಕೊಲ್ಲುವಂತೆ ಅಪ್ಪಣೆ ಕೊಟ್ಟವನು ಇವನೇ ಆಗಿದ್ದನು. (ಹೋಲಿಸಿ ಇಬ್ರಿಯ 11:37.) ಈ ದುಷ್ಟ ರಾಜನು, ‘ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ . . . ಪ್ರೇರಿಸಿ ಇಸ್ರಾಯೇಲ್ಯರ ಮುಂದೆಯೇ ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟ’ರಾಗುವಂತೆ ಮಾಡಿದನು. (2 ಪೂರ್ವಕಾಲವೃತ್ತಾಂತ 33:⁠9) ಆದುದರಿಂದ ದೇಶವು, ಕಾನಾನ್ಯರು ಆಳುತ್ತಿದ್ದಾಗ ಎಷ್ಟು ಮಲಿನಗೊಂಡಿತ್ತೊ ಅದಕ್ಕಿಂತಲೂ ಹೆಚ್ಚಾಗಿ ಮನಸ್ಸೆಯ ಸಮಯದಲ್ಲಿ ಮಲಿನಗೊಂಡಿತು. ಆದಕಾರಣ, ಯೆಹೋವನು ಪ್ರಕಟಿಸುವುದು: “ನಾನು ಯೆರೂಸಲೇಮಿನವರ ಮೇಲೆಯೂ ಯೆಹೂದದವರ ಮೇಲೆಯೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವರ ಎರಡು ಕಿವಿಗಳೂ ಮೊರ್ರೆನ್ನುವವು. . . . ಒಬ್ಬನು ಪಾತ್ರೆಯನ್ನು ಒರಸಿ ಡಬ್ಬಹಾಕುವ ಮೇರೆಗೆ ನಾನು ಯೆರೂಸಲೇಮನ್ನು ಒರಸಿ ಡಬ್ಬಹಾಕುವೆನು. ನನ್ನ ಪ್ರಜೆಗಳಲ್ಲಿ ಉಳಿದಿರುವವರನ್ನು ತಳ್ಳಿಬಿಟ್ಟು ಶತ್ರುಗಳ ಕೈಗೆ ಒಪ್ಪಿಸುವೆನು. ಅವರ ಎಲ್ಲಾ ಶತ್ರುಗಳು ಬಂದು ಅವರನ್ನು ಸುಲಿದು ಸೂರೆಮಾಡುವರು. ಅವರು . . . ಇಂದಿನ ವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ.”​—⁠2 ಅರಸುಗಳು 21:11-15.

4. ಯೆಹೋವನು ಯೆಹೂದಕ್ಕೆ ಏನು ಮಾಡುವನು, ಮತ್ತು ಈ ಪ್ರವಾದನೆಯು ಹೇಗೆ ನೆರವೇರುತ್ತದೆ?

4 ಹೇಗೆ ಒಂದು ಪಾತ್ರೆಯನ್ನು ಕವಚಿಹಾಕಿದಾಗ ಅದರಲ್ಲಿರುವ ಎಲ್ಲ ವಿಷಯಗಳು ಹೊರಚೆಲ್ಲುತ್ತವೊ, ಹಾಗೆಯೇ ಯೆಹೂದ ದೇಶದಿಂದ ಅದರ ನಿವಾಸಿಗಳೆಲ್ಲರೂ ಹೊರಚೆಲ್ಲಲ್ಪಡುವರು. ಯೆಹೂದ ಮತ್ತು ಯೆರೂಸಲೇಮಿಗೆ ಸಂಭವಿಸಲಿರುವ ನಾಶನದ ಕುರಿತು ಯೆಶಾಯನು ಮತ್ತೊಮ್ಮೆ ಪ್ರವಾದಿಸುತ್ತಾನೆ. ಅವನು ಆರಂಭಿಸುವುದು: “ಇಗೋ, ಯೆಹೋವನು ಲೋಕವನ್ನು ಬರಿದುಮಾಡಿ ಹಾಳಿಗೆ ತಂದು ವಿರೂಪಪಡಿಸಿ ಅದರ ನಿವಾಸಿಗಳನ್ನು ಚದರಿಸಿಬಿಡುವವನಾಗಿದ್ದಾನೆ.” (ಯೆಶಾಯ 24:1) ಯೆರೂಸಲೇಮು ಮತ್ತು ಅದರ ದೇವಾಲಯವು, ರಾಜ ನೆಬೂಕದ್ನೆಚ್ಚರನ ನೇತೃತ್ವದಲ್ಲಿ ಬಾಬೆಲಿನ ಸೇನೆಗಳಿಂದ ನಾಶವಾದಾಗ, ಮತ್ತು ಯೆಹೂದದ ನಿವಾಸಿಗಳಲ್ಲಿ ಹೆಚ್ಚಿನವರು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕೊಲ್ಲಲ್ಪಟ್ಟಾಗ ಈ ಪ್ರವಾದನೆಯು ನೆರವೇರುತ್ತದೆ. ಬದುಕಿ ಉಳಿದ ಯೆಹೂದ್ಯರಲ್ಲಿ ಹೆಚ್ಚಿನವರು ಸೆರೆವಾಸಿಗಳಾಗಿ ಬಾಬೆಲಿಗೆ ಒಯ್ಯಲ್ಪಡುತ್ತಾರೆ, ಮತ್ತು ಉಳಿದ ಕೆಲವರು ಐಗುಪ್ತಕ್ಕೆ ಓಡಿಹೋಗುತ್ತಾರೆ. ಹೀಗೆ ಯೆಹೂದ ದೇಶವು ನಾಶಗೊಂಡು, ಸಂಪೂರ್ಣವಾಗಿ ಪಾಳುಬೀಳುವುದು. ಅಲ್ಲಿ ಸಾಕು ಪ್ರಾಣಿಗಳು ಸಹ ಉಳಿಯಲಾರವು. ಈ ನಿರ್ಜನವಾದ ದೇಶವು, ಕಾಡು ಮೃಗಗಳ ಹಾಗೂ ಪಕ್ಷಿಗಳ ಬೀಡಾಗಿ ಬೇಗನೆ ಒಂದು ಮರುಭೂಮಿಯ ರೂಪತಾಳುತ್ತದೆ.

5. ಯೆಹೋವನ ನ್ಯಾಯತೀರ್ಪಿನಿಂದ ಯಾರಾದರೂ ವಿನಾಯಿತಿ ಪಡೆಯುವರೊ? ವಿವರಿಸಿರಿ.

5 ಈ ನ್ಯಾಯತೀರ್ಪಿನ ಸಮಯದಲ್ಲಿ, ಯೆಹೂದದಲ್ಲಿರುವ ಯಾರಿಗಾದರೂ ದಾಕ್ಷಿಣ್ಯವು ತೋರಿಸಲ್ಪಡುವುದೊ? ಯೆಶಾಯನು ಉತ್ತರಿಸುವುದು: “ಪ್ರಜೆ ಯಾಜಕ, ದಾಸ ದಣಿ, ತೊತ್ತು ಯಜಮಾನಿ, ಕೊಳ್ಳುವವನು ಮಾರುವವನು, ಸಾಲ ಕೊಡುವವನು ತರುವವನು, ಬಡ್ಡಿ ತೆಗೆಯುವವನು ತೆರುವವನು, ಇವರೆಲ್ಲರಿಗೂ ಒಂದೇ ಗತಿಯಾಗುವದು. ಭೂಮಿಯು ಬಟ್ಟಬರಿದಾಗುವದು. ಲೋಕಕ್ಕೆ ಸಂಪೂರ್ಣ ಸುಲಿಗೆಯಾಗುವದು; ಯೆಹೋವನೇ ಇದನ್ನು ನುಡಿದಿದ್ದಾನೆ.” (ಯೆಶಾಯ 24:2, 3) ಜನರ ಐಶ್ವರ್ಯವಾಗಲಿ ಸೇವಾ ಸುಯೋಗಗಳಾಗಲಿ ಯಾವ ವ್ಯತ್ಯಾಸವನ್ನೂ ಉಂಟುಮಾಡಲಾರವು. ಯಾರೂ ಈ ನಾಶನದಿಂದ ತಪ್ಪಿ ಉಳಿಯಲಾರರು. ದೇಶವು ಎಷ್ಟು ಮಲಿನಗೊಂಡಿದೆಯೆಂದರೆ, ಬದುಕಿ ಉಳಿದಿರುವ ಸಕಲರೂ, ಅಂದರೆ ಯಾಜಕರು, ದಾಸರು ಮತ್ತು ದಣಿಗಳು, ಮಾರುವವರು ಮತ್ತು ಕೊಳ್ಳುವವರು ಪರದೇಶವಾಸಕ್ಕೆ ಹೋಗಲೇಬೇಕು.

6. ಯೆಹೋವನು ದೇಶದಿಂದ ತನ್ನ ಆಶೀರ್ವಾದವನ್ನು ಹಿಂದೆಗೆದುಕೊಳ್ಳುವುದೇಕೆ?

6 ಯಾವ ತಪ್ಪುಗ್ರಹಿಕೆಯೂ ಇಲ್ಲದಿರುವಂತೆ, ಯೆಶಾಯನು ಈ ಮುಂಬರುವ ಕೇಡಿನ ಸಂಪೂರ್ಣತೆಯನ್ನು ವರ್ಣಿಸಿ, ಅದರ ಕಾರಣವನ್ನು ವಿವರಿಸಿ ಹೇಳುತ್ತಾನೆ: “ಭೂಮಿಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿಹೋಗಿದೆ, ಲೋಕೋನ್ನತರು ಕಂಗೆಟ್ಟಿದ್ದಾರೆ. ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ ನಿಯಮವನ್ನು ಅತಿಕ್ರಮಿಸಿ ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು. ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ; ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.” (ಯೆಶಾಯ 24:4-6) ಇಸ್ರಾಯೇಲ್ಯರಿಗೆ ಕಾನಾನ್‌ ದೇಶವು ಕೊಡಲ್ಪಟ್ಟಾಗ, ಅದು “ಹಾಲೂ ಜೇನೂ ಹರಿಯುವ” ದೇಶವಾಗಿತ್ತು. (ಧರ್ಮೋಪದೇಶಕಾಂಡ 27:⁠3) ಆದರೂ, ಅವರು ಯೆಹೋವನ ಆಶೀರ್ವಾದದ ಮೇಲೆ ಆತುಕೊಳ್ಳಬೇಕಿತ್ತು. ಅವರು ದೇವರ ಆಜ್ಞೆವಿಧಿಗಳನುಸಾರ ನಂಬಿಗಸ್ತಿಕೆಯಿಂದ ನಡೆದುಕೊಂಡರೆ, ದೇಶವು ‘ಫಲಕೊಡುವುದು,’ ಆದರೆ ಅವರು ಆತನ ಕಟ್ಟಳೆಗಳನ್ನು ಉಲ್ಲಂಘಿಸಿದರೆ, ಅವರು ‘ದುಡಿದದ್ದೆಲ್ಲಾ ವ್ಯರ್ಥವಾಗುವುದು’ ಮತ್ತು ಭೂಮಿಯು ‘ಫಲಕೊಡದು.’ (ಯಾಜಕಕಾಂಡ 26:⁠3-5, 14, 15, 20) ಯೆಹೋವನ ಶಾಪವು ‘ಭೂಮಿಯನ್ನು ತಿಂದುಹಾಕುವುದು.’ (ಧರ್ಮೋಪದೇಶಕಾಂಡ 28:​15-20, 38-42, 62, 63) ಆ ಶಾಪವನ್ನು ಯೆಹೂದವು ಅನುಭವಿಸಲೇಬೇಕಿತ್ತು.

7. ಯಾವ ರೀತಿಯಲ್ಲಿ ನಿಯಮದ ಒಡಂಬಡಿಕೆಯು ಇಸ್ರಾಯೇಲ್ಯರಿಗೆ ಒಂದು ಆಶೀರ್ವಾದವಾಗಿತ್ತು?

7 ಯೆಶಾಯನ ದಿನದ ಸುಮಾರು 800 ವರ್ಷಗಳ ಮುಂಚೆ, ಇಸ್ರಾಯೇಲ್ಯರು ಸಿದ್ಧಮನಸ್ಸಿನಿಂದ ಯೆಹೋವನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು, ಅದಕ್ಕನುಸಾರ ಜೀವಿಸಲು ಒಪ್ಪಿಕೊಂಡಿದ್ದರು. (ವಿಮೋಚನಕಾಂಡ 24:​3-8) ಅವರು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ಆತನ ಹೇರಳವಾದ ಆಶೀರ್ವಾದಗಳನ್ನು ಅನುಭವಿಸುವರೆಂದು ಮತ್ತು ಒಡಂಬಡಿಕೆಯನ್ನು ಉಲ್ಲಂಘಿಸಿದರೆ ಆತನ ಆಶೀರ್ವಾದವನ್ನು ಕಳೆದುಕೊಂಡು, ವೈರಿಗಳಿಂದ ಸೆರೆವಾಸಕ್ಕೆ ಒಯ್ಯಲ್ಪಡುವರು ಎಂಬುದನ್ನು ಆ ನಿಯಮದ ಒಡಂಬಡಿಕೆಯ ಷರತ್ತುಗಳು ನಿಗದಿಪಡಿಸಿದವು. (ವಿಮೋಚನಕಾಂಡ 19:​5, 6; ಧರ್ಮೋಪದೇಶಕಾಂಡ 28:​1-68) ಮೋಶೆಯ ಮೂಲಕ ನೀಡಲ್ಪಟ್ಟ ಈ ನಿಯಮದ ಒಡಂಬಡಿಕೆಯು, ಅನಿರ್ದಿಷ್ಟ ಕಾಲದ ವರೆಗೂ ಕಾರ್ಯಕಾರಿಯಾಗಿ ಉಳಿಯಲಿತ್ತು. ಮೆಸ್ಸೀಯನು ಬರುವ ತನಕ ಅದು ಇಸ್ರಾಯೇಲ್ಯರನ್ನು ಕಾಪಾಡಲಿತ್ತು.​—⁠ಗಲಾತ್ಯ 3:​19, 24.

8. (ಎ) ಜನರು “ದೈವಾಜ್ಞೆಗಳನ್ನು ಮೀರಿ”ರುವುದು ಮತ್ತು “ನಿಯಮವನ್ನು ಅತಿಕ್ರಮಿಸಿ”ರುವುದು ಹೇಗೆ? (ಬಿ) ಯಾವ ವಿಧಗಳಲ್ಲಿ “ಲೋಕೋನ್ನತರು” ಪ್ರಥಮವಾಗಿ ‘ಕುಗ್ಗಿಹೋಗುತ್ತಾರೆ’?

8 ಆದರೆ ಜನರು, “ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿ”ದ್ದಾರೆ. ದೈವಿಕವಾಗಿ ಕೊಡಲ್ಪಟ್ಟ ನಿಯಮಗಳನ್ನು ಕಡೆಗಣಿಸುತ್ತಾ, ಅವರು ಅದನ್ನು ಉಲ್ಲಂಘಿಸಿದ್ದಾರೆ. ಅವರು “ನಿಯಮವನ್ನು ಅತಿಕ್ರಮಿಸಿ,” ಯೆಹೋವನು ಅವರಿಗೆ ಕೊಡದೇ ಇದ್ದ ವಿಧಿವಿಧಾನಗಳನ್ನು ಅನುಸರಿಸುತ್ತಿದ್ದಾರೆ. (ವಿಮೋಚನಕಾಂಡ 22:25; ಯೆಹೆಜ್ಕೇಲ 22:12) ಆದಕಾರಣ, ಜನರು ಈ ದೇಶದಿಂದ ಕೀಳಲ್ಪಡುವರು. ಮುಂಬರುವ ನ್ಯಾಯತೀರ್ಪಿನಲ್ಲಿ ಅವರಿಗೆ ಕರುಣೆಯು ತೋರಿಸಲ್ಪಡದು. ಯೆಹೋವನು ತನ್ನ ಸಂರಕ್ಷಣೆ ಹಾಗೂ ಅನುಗ್ರಹವನ್ನು ತೆಗೆದುಬಿಟ್ಟಿರುವುದರಿಂದ ‘ಕುಗ್ಗಿಹೋಗು’ವವರಲ್ಲಿ ಪ್ರಥಮರು, “ಲೋಕೋನ್ನತರು” ಅಂದರೆ ಕುಲೀನರಾಗಿರುವರು. ಯೆಹೋವನ ಮಾತನ್ನು ನೆರವೇರಿಸುತ್ತಾ, ಯೆರೂಸಲೇಮಿನ ನಾಶನವು ಸಮೀಪಿಸಿದಂತೆ, ಐಗುಪ್ತ್ಯರು ಮತ್ತು ತದನಂತರ ಬಾಬೆಲಿನವರು ಯೆಹೂದದ ರಾಜರನ್ನು ತಮ್ಮ ಸಾಮಂತ ರಾಜರನ್ನಾಗಿ ಮಾಡಿದರು. ಹೀಗೆ, ಯೆಹೋಯಾಕೀನನು ಮತ್ತು ಅವನ ರಾಜಮನೆತನದ ಇತರ ಸದಸ್ಯರು ಬಾಬೆಲಿನ ದಾಸತ್ವಕ್ಕೆ ಒಯ್ಯಲ್ಪಟ್ಟವರಲ್ಲಿ ಪ್ರಥಮರಾಗಿದ್ದರು.​—⁠2 ಪೂರ್ವಕಾಲವೃತ್ತಾಂತ 36:​4, 9, 10.

ದೇಶದಲ್ಲಿ ಉಲ್ಲಾಸದ ಸುಳಿವೇ ಇಲ್ಲ

9, 10. (ಎ) ಇಸ್ರಾಯೇಲಿನಲ್ಲಿ ವ್ಯವಸಾಯಕ್ಕೆ ಯಾವ ಸ್ಥಾನವಿದೆ? (ಬಿ) ಪ್ರತಿಯೊಬ್ಬನು ‘ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ಕುಳಿತಿರುವುದರ’ ಮಹತ್ವವೇನು?

9 ಇಸ್ರಾಯೇಲ್‌ ಜನಾಂಗದವರು ಮೂಲತಃ ವ್ಯವಸಾಯಗಾರರು. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ಸಮಯದಂದಿನಿಂದ, ಅವರು ತಮ್ಮ ಜೀವನೋಪಾಯಕ್ಕಾಗಿ ಬೆಳೆಗಳನ್ನು ಬೆಳೆಸುತ್ತಾ ಮತ್ತು ಪ್ರಾಣಿಗಳನ್ನು ಸಾಕುತ್ತಾ ಬಂದಿದ್ದಾರೆ. ಹೀಗೆ, ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಶಾಸನದಲ್ಲಿ ವ್ಯವಸಾಯಕ್ಕೆ ಒಂದು ಪ್ರಮುಖ ಸ್ಥಾನವಿದೆ. ಪ್ರತಿ ಏಳನೆಯ ವರ್ಷವು ಒಂದು ಸಬ್ಬತ್‌ಕಾಲವಾಗಿದ್ದು, ಹೊಲದಲ್ಲಿ ಬೀಜಬಿತ್ತುವ ಕೆಲಸವು ನಡೆಯಲೇಬಾರದಿತ್ತು. ಹೀಗೆ ಮಣ್ಣು ತನ್ನ ಫಲಶಕ್ತಿಯನ್ನು ಪುನಃ ಪಡೆದುಕೊಳ್ಳಸಾಧ್ಯವಿತ್ತು. (ವಿಮೋಚನಕಾಂಡ 23:​10, 11; ಯಾಜಕಕಾಂಡ 25:​3-7) ಆ ಜನಾಂಗದವರು ಪ್ರತಿ ವರ್ಷವೂ ಆಚರಿಸಬೇಕಾಗಿದ್ದ ಮೂರೂ ಉತ್ಸವಗಳು ಬೇರೆ ಬೇರೆ ಪೈರುಗಳ ಸುಗ್ಗಿಕಾಲದಲ್ಲೇ ಆಚರಿಸಲ್ಪಟ್ಟವು.​—⁠ವಿಮೋಚನಕಾಂಡ 23:​14-16.

10 ಆ ದೇಶದ ಎಲ್ಲೆಡೆಯೂ ದ್ರಾಕ್ಷೆಯ ತೋಟಗಳನ್ನು ನೋಡಬಹುದು. ದ್ರಾಕ್ಷೆಗಳಿಂದ ತಯಾರಿಸಲ್ಪಡುವ ದ್ರಾಕ್ಷಾರಸವು, ಮನುಷ್ಯನ ‘ಹೃದಯವನ್ನು ಆನಂದಕರವಾಗಿ’ ಮಾಡುವ ದೇವರ ಕೊಡುಗೆಯಾಗಿದೆ. (ಕೀರ್ತನೆ 104:15) ಪ್ರತಿಯೊಬ್ಬರು ‘ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ’ ಕುಳಿತುಕೊಂಡಿರುವುದು, ದೇವರ ನೀತಿಯ ಆಳ್ವಿಕೆಯಲ್ಲಿರುವ ಸಮೃದ್ಧಿ, ಶಾಂತಿ ಮತ್ತು ಭದ್ರತೆಯ ಸಂಕೇತವಾಗಿದೆ. (1 ಅರಸುಗಳು 4:25; ಮೀಕ 4:⁠4) ಒಂದು ಒಳ್ಳೆಯ ಸುಗ್ಗಿಕಾಲವು ದೇವರ ಆಶೀರ್ವಾದವೆಂದು ಪರಿಗಣಿಸಲ್ಪಟ್ಟಿತು, ಮತ್ತು ಅದು ಹಾಡುವ ಹಾಗೂ ಸಂತೋಷಪಡುವ ಸಂದರ್ಭವೂ ಆಗಿತ್ತು. (ನ್ಯಾಯಸ್ಥಾಪಕರು 9:27; ಯೆರೆಮೀಯ 25:30) ಅದೇ ಸಮಯದಲ್ಲಿ, ದ್ರಾಕ್ಷಾಲತೆಗಳು ಬಾಡಿಹೋಗಿ ಇಲ್ಲವೆ ಹಣ್ಣು ಬಿಡದೆ ಹಾಳಾಗಿ ಹೋದರೆ, ಅದು ಯೆಹೋವನ ಕೋಪವನ್ನು ವ್ಯಕ್ತಪಡಿಸುವಂತಹದ್ದಾಗಿತ್ತು ಮಾತ್ರವಲ್ಲ, ಬಹಳಷ್ಟು ದುಃಖದ ಸಮಯವೂ ಆಗಿತ್ತು.

11, 12. (ಎ) ಯೆಹೋವನ ನ್ಯಾಯತೀರ್ಪಿನಿಂದ ಉಂಟಾಗಲಿರುವ ಪರಿಸ್ಥಿತಿಗಳನ್ನು ಯೆಶಾಯನು ಹೇಗೆ ದೃಷ್ಟಾಂತಿಸುತ್ತಾನೆ? (ಬಿ) ಯಾವ ಕರಾಳವಾದ ಪ್ರತೀಕ್ಷೆಗಳನ್ನು ಯೆಶಾಯನು ವರ್ಣಿಸುತ್ತಾನೆ?

11 ಯೆಹೋವನು ಆ ದೇಶವನ್ನು ಆಶೀರ್ವದಿಸದೆ ಹೋದಾಗ ಅದರಿಂದ ಉಂಟಾಗುವ ಪರಿಸ್ಥಿತಿಗಳನ್ನು ದೃಷ್ಟಾಂತಿಸಲು, ಯೆಶಾಯನು ಸೂಕ್ತವಾಗಿಯೇ ದ್ರಾಕ್ಷೆಯ ತೋಟಗಳನ್ನು ಮತ್ತು ಅವುಗಳ ಉತ್ಪನ್ನಗಳನ್ನು ಉಪಯೋಗಿಸುತ್ತಾನೆ: “ದ್ರಾಕ್ಷಾರಸವು ವ್ಯಸನಭರಿತವಾಗಿದೆ, ದ್ರಾಕ್ಷೆಯ ಬಳ್ಳಿಯು ಬಾಡಿದೆ, ಹರ್ಷಹೃದಯರೆಲ್ಲಾ ನರಳುತ್ತಾರೆ. ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ, ಕಿನ್ನರಿಯ ಆನಂದವು ಅಡಗಿದೆ. ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಮದ್ಯವು ಕುಡಿಯುವವರಿಗೆ ಕಹಿಯಾಗುವದು. ಹಾಳುಪಟ್ಟಣವು ಬಿದ್ದುಹೋಗಿದೆ, ಯಾರೂ ಹೋಗದಂತೆ ಪ್ರತಿಯೊಂದು ಮನೆಯೂ ಮುಚ್ಚಿದೆ. ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಅಸ್ತಮಿಸಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ. ಪಟ್ಟಣದಲ್ಲಿ ಹಾಳೇ ಉಳಿದಿದೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.”​—ಯೆಶಾಯ 24:7-12.

12 ಯೆಹೋವನನ್ನು ಸ್ತುತಿಸಲು ಮತ್ತು ಸಂತೋಷವನ್ನು ವ್ಯಕ್ತಪಡಿಸಲು, ದಮ್ಮಡಿ ಮತ್ತು ಕಿನ್ನರಿಯಂತಹ ಇಂಪಾದ ವಾದ್ಯಗಳು ಉಪಯೋಗಿಸಲ್ಪಡುತ್ತವೆ. (2 ಪೂರ್ವಕಾಲವೃತ್ತಾಂತ 29:25; ಕೀರ್ತನೆ 81:⁠2) ಆದರೆ ದೈವಿಕ ಶಿಕ್ಷೆಯನ್ನು ಅನುಭವಿಸುತ್ತಿರುವ ಸಮಯದಲ್ಲಿ ಈ ವಾದ್ಯಗಳನ್ನು ನುಡಿಸಲಾಗುವುದಿಲ್ಲ. ದ್ರಾಕ್ಷೆಯ ಸುಗ್ಗಿಕಾಲದಲ್ಲಿ ಜನರು ಉಲ್ಲಾಸಿಸಲಾರರು. ಹಾಳುಬಿದ್ದ ಯೆರೂಸಲೇಮಿನಿಂದ ಸಂತೋಷದ ಧ್ವನಿಗಳು ಕೇಳಿಸಲಾರವು. ಏಕೆಂದರೆ, ಯಾರೂ ಪ್ರವೇಶಿಸದಂತೆ “ನಾಶನವು ಹೆಬ್ಬಾಗಿಲಿಗೆ ತಟ್ಟಿದೆ” ಮತ್ತು ಅದರ ಮನೆಗಳು ‘ಮುಚ್ಚಿಹೋಗಿವೆ.’ ನೈಸರ್ಗಿಕವಾಗಿಯೇ ಬಹಳಷ್ಟು ಫಲಭರಿತವಾಗಿರುವ ಈ ದೇಶದ ನಿವಾಸಿಗಳಿಗೆ ಎಂತಹ ಕರಾಳವಾದ ಪ್ರತೀಕ್ಷೆಗಳು!

ಜನಶೇಷದವರು ‘ಆನಂದದಿಂದ ಕೂಗುವರು’

13, 14. (ಎ) ಸುಗ್ಗಿಯ ವಿಷಯದಲ್ಲಿ ಯೆಹೋವನು ಯಾವ ನಿಯಮಗಳನ್ನು ಕೊಟ್ಟಿದ್ದಾನೆ? (ಬಿ) ಯೆಹೋವನ ನ್ಯಾಯತೀರ್ಪಿನಿಂದ ಕೆಲವರು ಬದುಕಿ ಉಳಿಯುವರೆಂಬುದನ್ನು ದೃಷ್ಟಾಂತಿಸಲು, ಸುಗ್ಗಿಯ ಕುರಿತಾದ ನಿಯಮಗಳನ್ನು ಯೆಶಾಯನು ಉಪಯೋಗಿಸುವುದು ಹೇಗೆ? (ಸಿ) ತಾವು ಕಷ್ಟತೊಂದರೆಗಳ ಸಮಯವನ್ನು ಅನುಭವಿಸಲಿದ್ದರೂ, ಯೆಹೂದದ ನಂಬಿಗಸ್ತರಿಗೆ ಯಾವುದರ ಭರವಸೆಯಿರಸಾಧ್ಯವಿದೆ?

13 ಆಲಿವ್‌ ಹಣ್ಣುಗಳನ್ನು ಒಟ್ಟುಗೂಡಿಸಲು, ಇಸ್ರಾಯೇಲ್ಯರು ಆ ಮರಗಳನ್ನು ಬಡಿಗೆಯಿಂದ ಹೊಡೆದು ಕಾಯಿಗಳನ್ನು ಉದುರಿಸುತ್ತಿದ್ದರು. ಆದರೆ ಧರ್ಮಶಾಸ್ತ್ರಕ್ಕನುಸಾರ, ಮರದಲ್ಲಿ ಉಳಿದಿರುವ ಕಾಯಿಗಳನ್ನು ಅವರು ಮರದ ಮೇಲೆ ಹತ್ತಿ ಶೇಖರಿಸಬಾರದಿತ್ತು. ಹಾಗೆಯೇ ದ್ರಾಕ್ಷೆಯ ತೋಟಗಳಲ್ಲಿ ಉಳಿದಿರುವ ದ್ರಾಕ್ಷೆಗಳನ್ನೂ ಅವರು ಕೂಡಿಸಬಾರದಿತ್ತು. ಸುಗ್ಗಿಯ ನಂತರ ಹೊಲಗದ್ದೆಗಳಲ್ಲಿ ಉಳಿದ ಬೆಳೆಗಳನ್ನು “ಪರದೇಶಿ, ತಾಯಿತಂದೆಯಿಲ್ಲದವ, ವಿಧವೆ” ಇವರು ಹಕ್ಕಲಾಯ್ದುಕೊಳ್ಳುವಂತೆ ಬಿಡಬೇಕಾಗಿತ್ತು. (ಧರ್ಮೋಪದೇಶಕಾಂಡ 24:​19-21) ಈ ಚಿರಪರಿಚಿತ ನಿಯಮಗಳ ಮೇಲಾಧಾರಿಸಿ, ಬರಲಿರುವ ಯೆಹೋವನ ನ್ಯಾಯತೀರ್ಪಿನಿಂದ ಕೆಲವರು ಬದುಕಿ ಉಳಿಯುವರು ಎಂಬ ಸಮಾಧಾನದ ವಿಷಯವನ್ನು ಯೆಶಾಯನು ದೃಷ್ಟಾಂತಿಸುತ್ತಾನೆ: “ಎಣ್ಣೆಯ ಮರವನ್ನು ಬಡಿದ ಮೇಲೆಯೂ ದ್ರಾಕ್ಷೆಯ ಸುಗ್ಗಿಯು ತೀರಿದನಂತರವೂ ನಿಲ್ಲುವ ಉಳಿಗಾಯ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಶೇಷವಿರುವದು. ಇವರು ಉಚ್ಛಧ್ವನಿಗೈಯುವರು; ಯೆಹೋವನ ಮಹಿಮೆಯನ್ನು ತಿಳಿದುಕೊಂಡವರಾಗಿ ಸಮುದ್ರದ ಕಡೆಯಿಂದ ಆರ್ಬಟಿಸುವರು​—⁠ಮೂಡಣವರೇ, ಯೆಹೋವನನ್ನು ಸನ್ಮಾನಿಸಿರಿ; ಕರಾವಳಿಯವರೇ, ಇಸ್ರಾಯೇಲ್ಯರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ ಎಂದು ಕೂಗುವರು. ಸದ್ಧರ್ಮಿಗಳಿಗೆ ಮಾನವಾಗಲೆಂಬ ಗೀತಗಳು ಭೂಮಂಡಲದ ಕಟ್ಟಕಡೆಯಿಂದ ನಮಗೆ ಕೇಳ ಬಂದಿವೆ.”​—ಯೆಶಾಯ 24:13-16ಎ.

14 ಸುಗ್ಗಿಯ ನಂತರ ಕೆಲವು ಹಣ್ಣುಗಳು ಮರದ ಮೇಲೆ ಇಲ್ಲವೆ ದ್ರಾಕ್ಷಾಲತೆಯ ಮೇಲೆ ಉಳಿಯುವಂತೆಯೇ, ಯೆಹೋವನು ನ್ಯಾಯತೀರಿಸಿದ ನಂತರ ಕೆಲವರು ಉಳಿದಿರುವರು. ಇವರು “ದ್ರಾಕ್ಷೆಯ ಸುಗ್ಗಿಯು ತೀರಿದನಂತರವೂ ನಿಲ್ಲುವ ಉಳಿಗಾಯ ಹಾಗೆ” ಇದ್ದಾರೆ. ಆರನೆಯ ವಚನದಲ್ಲಿ ದಾಖಲಿಸಲ್ಪಟ್ಟಂತೆ, ಪ್ರವಾದಿಯು ಈಗಾಗಲೇ ಇವರ ಬಗ್ಗೆ ಮಾತಾಡುತ್ತಾ, “ಭೂನಿವಾಸಿಗಳು . . . ಕೆಲವರು ಮಾತ್ರ ಉಳಿದಿದ್ದಾರೆ” ಎಂದು ಹೇಳಿದ್ದಾನೆ. ಈ ಚಿಕ್ಕ ಗುಂಪು ಯೆರೂಸಲೇಮ್‌ ಹಾಗೂ ಯೆಹೂದದ ನಾಶನದಿಂದ ತಪ್ಪಿ ಉಳಿಯುತ್ತದೆ. ಮತ್ತು ಇವರಲ್ಲಿ ಒಂದು ಜನಶೇಷವು ದಾಸತ್ವದಿಂದ ತಮ್ಮ ದೇಶಕ್ಕೆ ಹಿಂದಿರುಗಿ, ಅಲ್ಲಿ ಪುನಃ ವಾಸಿಸುವುದು. (ಯೆಶಾಯ 4:​2, 3; 14:​1-5) ಪ್ರಾಮಾಣಿಕ ಜನರು ಕಷ್ಟಸಂಕಟಗಳನ್ನು ಅನುಭವಿಸುವುದಾದರೂ, ಮುಂದೆ ಬಿಡುಗಡೆ ಹಾಗೂ ಉಲ್ಲಾಸದ ಸಮಯಗಳು ಖಂಡಿತವಾಗಿಯೂ ಬರುವವೆಂಬ ಭರವಸೆ ಅವರಿಗಿರಸಾಧ್ಯವಿದೆ. ಪಾರಾಗುವವರು, ಯೆಹೋವನ ಪ್ರವಾದನ ವಾಕ್ಯವು ನೆರವೇರುವುದನ್ನು ನೋಡುವರು ಮತ್ತು ಯೆಶಾಯನು ದೇವರ ಸತ್ಯ ಪ್ರವಾದಿಯಾಗಿ ಕಾರ್ಯಮಾಡಿದ್ದನು ಎಂಬುದನ್ನೂ ಗ್ರಹಿಸುವರು. ಪುನಸ್ಸ್ಥಾಪನೆಯ ಪ್ರವಾದನೆಗಳು ನೆರವೇರುವುದನ್ನು ಕಾಣುವಾಗ ಅವರು ಉಲ್ಲಾಸಗೊಳ್ಳುವರು. ಅವರು ಎಲ್ಲೇ ಇರಲಿ, ಪಶ್ಚಿಮ ಭೂಮಧ್ಯದ ದ್ವೀಪಗಳಲ್ಲಿ, “ಮೂಡಣ” ಬಾಬೆಲಿನಲ್ಲಿ ಇಲ್ಲವೆ ಬೇರೆ ಯಾವುದೇ ದೂರದ ನಾಡಿನಲ್ಲಿ, ದೇವರನ್ನು ಸ್ತುತಿಸುವರು. ಏಕೆಂದರೆ ದೇವರು ಅವರನ್ನು ರಕ್ಷಿಸಿದ್ದಾನೆ ಮತ್ತು ಈ ಕಾರಣ ಅವರು ‘ಸದ್ಧರ್ಮಿಗೆ ಮಾನ’ ಎಂಬ ಗೀತೆಯನ್ನು ಹಾಡುವರು!

ಯೆಹೋವನ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಸಾಧ್ಯವಿಲ್ಲ

15, 16. (ಎ) ತನ್ನ ಜನರಿಗೆ ಸಂಭವಿಸಲಿರುವ ವಿಷಯಗಳ ಕುರಿತು ಯೆಶಾಯನಿಗೆ ಹೇಗನಿಸುತ್ತದೆ? (ಬಿ) ಆ ದೇಶದ ಅಪನಂಬಿಗಸ್ತ ನಿವಾಸಿಗಳಿಗೆ ಏನಾಗುವುದು?

15 ಆದರೆ ಸಂತೋಷಿಸಲು ಇದು ತಕ್ಕ ಸಮಯವಾಗಿಲ್ಲ. ಯೆಶಾಯನು ತನ್ನ ಸಮಕಾಲೀನರನ್ನು ಪ್ರಸ್ತುತ ಸಮಯಕ್ಕೆ ತರುತ್ತಾ ಹೇಳುವುದು: “ನಾನಾದರೋ​—⁠ಕ್ಷಯಿಸೇ ಕ್ಷಯಿಸುತ್ತೇನೆ, ನನ್ನ ಗತಿಯನ್ನು ಏನು ಹೇಳಲಿ! ಬಾಧಕರು ಬಾಧಿಸುತ್ತಾರೆ, ಹೌದು, ಬಾಧಕರು ಬಾಧಿಸೇ ಬಾಧಿಸುತ್ತಾರೆ ಎಂದುಕೊಂಡೆನು. ಭೂನಿವಾಸಿಯೇ, ಭಯವೂ ಗುಂಡಿಯೂ ಬಲೆಯೂ ನಿನಗೆ ಕಾದಿವೆ. ಭಯದ ಸಪ್ಪಳದಿಂದ ಓಡಿಹೋಗುವವನು ಗುಂಡಿಯಲ್ಲಿ ಬೀಳುವನು, ಗುಂಡಿಯನ್ನು ಹತ್ತಿಬರುವವನು ಬಲೆಗೆ ಸಿಕ್ಕುವನು. ನೋಡು, ಆಕಾಶದ ದ್ವಾರಗಳು ತೆರೆದಿವೆ, ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ. ಭೂಮಿಯು ಒಡೆದೇ ಇದೆ, ಬಿರಿದೇ ಬಿರಿದಿದೆ, ಕದಲಿಯೇ ಹೋಗಿದೆ. ಭೂಮಿಯು ಅಮಲೇರಿದವನ ಹಾಗೆ ಓಲಾಡುತ್ತದೆ, ಮಂಚಿಕೆಯಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದುಹೋಗುತ್ತಿದೆ, ತಿರಿಗಿ ಏಳುವದೇ ಇಲ್ಲ.”​—ಯೆಶಾಯ 24:16ಬಿ-20.

16 ತನ್ನ ಜನರಿಗೆ ಸಂಭವಿಸಲಿರುವ ವಿಷಯಗಳ ಕುರಿತು ಯೆಶಾಯನು ದುಃಖಪಡುತ್ತಾನೆ. ತನ್ನ ಸುತ್ತಲೂ ಘಟಿಸುತ್ತಿರುವ ಆಗುಹೋಗುಗಳಿಂದ ಅವನು ತಳಮಳಗೊಳ್ಳುತ್ತಾನೆ. ಆ ದೇಶದಲ್ಲಿ ತುಂಬಿತುಳುಕುವ ಬಾಧಕರು ಅಲ್ಲಿನ ನಿವಾಸಿಗಳನ್ನು ಬೆದರಿಸುತ್ತಾರೆ. ಯೆಹೋವನು ತನ್ನ ರಕ್ಷಣೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ, ಯೆಹೂದದ ಅಪನಂಬಿಗಸ್ತ ನಿವಾಸಿಗಳು ಹಗಲೂರಾತ್ರಿ ದಿಗಿಲುಗೊಳ್ಳುವರು. ತಮ್ಮ ಜೀವಿತಗಳ ಬಗ್ಗೆ ಅವರಿಗೆ ಭರವಸೆಯೇ ಇರಲಾರದು. ಯೆಹೋವನ ಆಜ್ಞೆಗಳನ್ನು ತೊರೆದು, ದೈವಿಕ ವಿವೇಕವನ್ನು ಕಡೆಗಣಿಸಿದ್ದರಿಂದ ಅವರು ವಿಪತ್ತಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. (ಜ್ಞಾನೋಕ್ತಿ 1:⁠24-27) ದೇಶದಲ್ಲಿರುವ ಬಾಧಕರು ಮೋಸವಂಚನೆಯಿಂದ ಜನರನ್ನು ನಾಶಕ್ಕೆ ಹೋಗುವ ಮಾರ್ಗಕ್ರಮದಲ್ಲಿ ನಡೆಸುತ್ತಾ, ಎಲ್ಲವೂ ಸರಿಯಾಗುವುದೆಂದು ಜನರಿಗೆ ಮನಗಾಣಿಸಲು ಪ್ರಯತ್ನಿಸಿದರೂ ಕೇಡು ಅವರ ಮೇಲೆ ಬಂದೆರಗುವುದು. (ಯೆರೆಮೀಯ 27:​9-15) ಹೊರದೇಶದ ವೈರಿಗಳು ಬಂದು ಅವರನ್ನು ಲೂಟಿಮಾಡಿ, ಸೆರೆವಾಸಿಗಳಾಗಿ ಕೊಂಡೊಯ್ಯುವರು. ಇದೆಲ್ಲವನ್ನು ಕೇಳಿಸಿಕೊಂಡ ಯೆಶಾಯನು ಬಹಳ ಸಂಕಟಪಡುತ್ತಾನೆ.

17. (ಎ) ನಾಶನದಿಂದ ತಪ್ಪಿ ಉಳಿಯುವುದು ಏಕೆ ಅಸಾಧ್ಯವಾದದ್ದಾಗಿದೆ? (ಬಿ) ಯೆಹೋವನ ನ್ಯಾಯತೀರ್ಪಿನ ಶಕ್ತಿಯು ಸ್ವರ್ಗದಿಂದ ಬಂದಿಳಿಯುವಾಗ, ಆ ದೇಶಕ್ಕೆ ಏನು ಸಂಭವಿಸುವುದು?

17 ಆದರೂ, ಈ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಪ್ರವಾದಿಯು ತಿಳಿಸಲೇಬೇಕು. ಜನರು ಎಲ್ಲೇ ಓಡಿಹೋಗಲಿ, ಅವರು ಹಿಡಿಯಲ್ಪಡುವರು. ಕೆಲವರು ಒಂದು ಕೇಡಿನಿಂದ ತಪ್ಪಿಸಿಕೊಂಡರೂ, ಮತ್ತೊಂದು ಅವರಿಗಾಗಿ ಕಾಯುತ್ತಿರುವುದು. ಅವರು ಭದ್ರತೆಯನ್ನು ಅಲ್ಪಪ್ರಮಾಣದಲ್ಲೂ ಅನುಭವಿಸಲಾರರು. ಬೆನ್ನಟ್ಟಲ್ಪಟ್ಟ ಪ್ರಾಣಿಯೊಂದು ಗುಂಡಿಯೊಳಗೆ ಬೀಳುವುದರಿಂದ ತಪ್ಪಿಸಿಕೊಂಡರೂ ಒಂದು ಪಾಶಕ್ಕೆ ಸಿಕ್ಕಿಕೊಳ್ಳುವಂತೆ ಇದಿರುವುದು. (ಹೋಲಿಸಿ ಆಮೋಸ 5:​18, 19.) ಯೆಹೋವನು ಸ್ವರ್ಗದಿಂದ ತನ್ನ ನ್ಯಾಯತೀರ್ಪಿನ ಶಕ್ತಿಯನ್ನು ಪ್ರದರ್ಶಿಸುವಾಗ, ಆ ದೇಶದ ತಳಪಾಯವೇ ಅಲುಗಾಡುವುದು. ಕುಡಿದು ಮತ್ತನಾದ ಮನುಷ್ಯನಂತೆ, ಆ ದೇಶವು ತೂಗಾಡುತ್ತಾ, ಬಿದ್ದುಬಿಡುವುದು. ದೋಷದ ಭಾರವನ್ನು ಹೊತ್ತ ದೇಶವು ಮೇಲಕ್ಕೇಳಲು ಪ್ರಯಾಸಪಟ್ಟರೂ ಸಾಧ್ಯವಾಗದೆ ನೆಲಕಚ್ಚುವುದು. (ಆಮೋಸ 5:⁠2) ಯೆಹೋವನು ನುಡಿದ ನ್ಯಾಯತೀರ್ಪು ಎಂದಿಗೂ ಬದಲಾಗುವುದಿಲ್ಲ. ಆ ದೇಶವು ಪೂರ್ಣವಾಗಿ ನಾಶವಾಗುವುದು.

ಯೆಹೋವನು ಮಹಿಮಾಭರಿತನಾಗಿ ಆಳುವನು

18, 19. (ಎ) “ಆಕಾಶಮಂಡಲದ ದೂತಸೈನ್ಯ” ಏನನ್ನು ಸೂಚಿಸಬಹುದು, ಮತ್ತು ಇವರು “ನೆಲಮಾಳಿಗೆಯೊಳಕ್ಕೆ” ಹೇಗೆ ಸೇರಿಸಲ್ಪಡುವರು? (ಬಿ) ಯಾವ ರೀತಿಯಲ್ಲಿ “ಆಕಾಶಮಂಡಲದ ದೂತಸೈನ್ಯ”ದ ಕಡೆಗೆ “ಬಹು ದಿನಗಳ ಮೇಲೆ” ಗಮನ ಹರಿಸಲ್ಪಡುವುದು? (ಸಿ) ಯೆಹೋವನು “ನೆಲದೊಡೆಯ”ರ ಕಡೆಗೆ ಹೇಗೆ ಗಮನ ಹರಿಸುತ್ತಾನೆ?

18 ಯೆಶಾಯನ ಪ್ರವಾದನೆಯು ಈಗ ವ್ಯಾಪಕವಾದ ಅರ್ಥವನ್ನು ಪಡೆದುಕೊಂಡು, ಯೆಹೋವನು ತನ್ನ ಉದ್ದೇಶವನ್ನು ಅಂತಿಮವಾಗಿ ನೆರವೇರಿಸಿದಾಗ ಏನು ಸಂಭವಿಸುವುದು ಎಂಬುದನ್ನು ತಿಳಿಸುತ್ತದೆ: “ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ ಭೂಮಂಡಲದ ನೆಲದೊಡೆಯರನ್ನೂ ದಂಡಿಸುವನು. ಇವರು ಬಂದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಿಸಿಕೊಂಡು ಅದರಲ್ಲಿ ಮುಚ್ಚಲ್ಪಟ್ಟಿದ್ದು ಬಹು ದಿನಗಳ ಮೇಲೆ ದಂಡನೆಗೆ ಗುರಿಯಾಗುವರು. ಮತ್ತು ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು; ಸೇನಾಧೀಶ್ವರನಾದ ಯೆಹೋವನು ಚೀಯೋನ್‌ ಪರ್ವತದಲ್ಲಿ ಯೆರೂಸಲೇಮಿನೊಳಗೆ ಆಳುವನಷ್ಟೆ. ಆತನ [ಪರಿವಾರದ] ಹಿರಿಯರ ಮುಂದೆ ಪ್ರಭಾವವು ಪ್ರತ್ಯಕ್ಷವಾಗುವದು.”​—ಯೆಶಾಯ 24:21-23.

19 “ಆಕಾಶಮಂಡಲದ ದೂತಸೈನ್ಯ” ಎಂಬ ಅಭಿವ್ಯಕ್ತಿಯು ‘ಈ ಅಂಧಕಾರದ ಲೋಕಾಧಿಪತಿಗಳನ್ನು . . . ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯನ್ನು’ ಸೂಚಿಸಬಹುದು. (ಎಫೆಸ 6:12) ಇವು ಲೋಕ ಶಕ್ತಿಗಳ ಮೇಲೆ ಭಾರೀ ಪ್ರಭಾವವನ್ನು ಬೀರಿವೆ. (ದಾನಿಯೇಲ 10:​13, 20; 1 ಯೋಹಾನ 5:19) ಜನರನ್ನು ಯೆಹೋವನಿಂದ ಮತ್ತು ಆತನ ಶುದ್ಧಾರಾಧನೆಯಿಂದ ದೂರ ಸೆಳೆಯುವುದೇ ಅವುಗಳ ಗುರಿಯಾಗಿದೆ. ಇಸ್ರಾಯೇಲು ತನ್ನ ಸುತ್ತಲೂ ಇದ್ದ ರಾಷ್ಟ್ರಗಳವರ ಭ್ರಷ್ಟ ಆಚರಣೆಗಳನ್ನು ಅನುಸರಿಸಿ, ದಿವ್ಯ ದಂಡನೆಗೆ ಗುರಿಯಾಗುವಂತೆ ಮಾಡುವುದರಲ್ಲಿ ಅವು ಎಷ್ಟು ಸಾಫಲ್ಯವನ್ನು ಪಡೆದವು! ಸೈತಾನ ಮತ್ತು ಅವನ ದೆವ್ವಗಳ ಕಡೆಗೆ, ಹಾಗೂ ತನ್ನ ನಿಯಮಗಳನ್ನು ಉಲ್ಲಂಘಿಸುವಂತೆ ಅವು ಮರುಳುಮಾಡಿದ, “ಭೂಮಂಡಲದ ನೆಲದೊಡೆಯರ” ಅಂದರೆ ಭೂಅರಸರ ಕಡೆಗೆ ದೇವರು ತನ್ನ ಗಮನವನ್ನು ಹರಿಸಿದಾಗ, ಅವು ಲೆಕ್ಕವೊಪ್ಪಿಸಲೇಬೇಕು. (ಪ್ರಕಟನೆ 16:​13, 14) ಅವು ಒಟ್ಟುಗೂಡಿಸಲ್ಪಟ್ಟು, ‘ನೆಲಮಾಳಿಗೆಯಲ್ಲಿ ಮುಚ್ಚಲ್ಪಡುವವು’ ಎಂಬುದಾಗಿ ಯೆಶಾಯನು ಸಾಂಕೇತಿಕವಾಗಿ ಹೇಳುತ್ತಾನೆ. “ಬಹು ದಿನಗಳ ಮೇಲೆ,” ಅಂದರೆ ಯೇಸು ಕ್ರಿಸ್ತನ ಸಹಸ್ರ ವರ್ಷಕಾಲದ ಆಳ್ವಿಕೆಯ ಕೊನೆಯಲ್ಲಿ, ಸೈತಾನನೂ ಅವನ ದೂತರೂ (ಆದರೆ “ಭೂಮಂಡಲದ ನೆಲದೊಡೆಯರ”ಲ್ಲ) ಸ್ವಲ್ಪಕಾಲಕ್ಕೆ ಬಿಡುಗಡೆಗೊಳಿಸಲ್ಪಟ್ಟಾಗ, ದೇವರು ಅವುಗಳ ಮೇಲೆ ಅಂತಿಮ ಶಿಕ್ಷೆಯನ್ನು ಬರಮಾಡುವನು.​—⁠ಪ್ರಕಟನೆ 20:​3, 7-10.

20. ಪ್ರಾಚೀನ ಮತ್ತು ಆಧುನಿಕ ಸಮಯದಲ್ಲಿ, ಯೆಹೋವನು ಹೇಗೆ ಮತ್ತು ಯಾವಾಗ ‘ರಾಜ’ನಾಗುತ್ತಾನೆ?

20 ಯೆಶಾಯನ ಪ್ರವಾದನೆಯ ಈ ಭಾಗವು, ಯೆಹೂದ್ಯರಿಗೆ ಅದ್ಭುತಕರವಾದ ಆಶ್ವಾಸನೆಯನ್ನು ನೀಡಿತು. ಯೆಹೋವನು ತನ್ನ ನೇಮಿತ ಸಮಯದಲ್ಲಿ, ಪುರಾತನ ಬಾಬೆಲನ್ನು ಬೀಳಿಸಿ, ಯೆಹೂದ್ಯರನ್ನು ತಮ್ಮ ಸ್ವದೇಶಕ್ಕೆ ಹಿಂದಿರುಗಿಸಲಿದ್ದನು. ಸಾ.ಶ.ಪೂ. 537ರಲ್ಲಿ ಯೆಹೋವನು ತನ್ನ ಜನರ ಪರವಾಗಿ ತನ್ನ ಶಕ್ತಿ ಹಾಗೂ ಪರಮಾಧಿಕಾರವನ್ನು ತೋರಿಸುವಾಗ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ನಿಜವಾಗಿಯೂ ಅವರಿಗೆ ಹೇಳಸಾಧ್ಯವಿರುವುದು. (ಯೆಶಾಯ 52:⁠7) ಆಧುನಿಕ ಸಮಯಗಳಲ್ಲಿ, ಯೆಹೋವನು ತನ್ನ ಸ್ವರ್ಗೀಯ ರಾಜ್ಯದಲ್ಲಿ ಯೇಸು ಕ್ರಿಸ್ತನನ್ನು ರಾಜನಾಗಿ ಸ್ಥಾಪಿಸಿದಾಗ, 1914ರಲ್ಲಿ ‘ರಾಜ’ನಾದನು. (ಕೀರ್ತನೆ 96:10) ಆತನು 1919ರಲ್ಲಿಯೂ ‘ರಾಜ’ನಾದನು. ಆಗ ಆತ್ಮಿಕ ಇಸ್ರಾಯೇಲನ್ನು ಮಹಾ ಬಾಬೆಲಿನ ದಾಸತ್ವದಿಂದ ಬಿಡಿಸುವ ಮೂಲಕ, ಆತನು ತನ್ನ ಅರಸುತನದ ಶಕ್ತಿಯನ್ನು ಪ್ರದರ್ಶಿಸಿದನು.

21. (ಎ) ಯಾವ ಅರ್ಥದಲ್ಲಿ “ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು”? (ಬಿ) ಯಾವ ಕರೆಯು ಸಂಪೂರ್ಣ ರೀತಿಯಲ್ಲಿ ನೆರವೇರುವುದು?

21 ಯೆಹೋವನು ಮಹಾ ಬಾಬೆಲಿಗೆ ಮತ್ತು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವಾಗ, ಪುನಃ ‘ರಾಜ’ನಾಗುವನು. (ಜೆಕರ್ಯ 14:9; ಪ್ರಕಟನೆ 19:​1, 2, 19-21) ತದನಂತರ, ಯೆಹೋವನ ರಾಜ್ಯಾಳಿಕೆಯು ಎಷ್ಟು ಮಹಿಮಾಭರಿತವಾಗಿರುವುದೆಂದರೆ, ರಾತ್ರಿಯಲ್ಲಿ ಹೊಳೆಯುವ ಚಂದ್ರನ ಮಹಿಮೆಯಾಗಲಿ ಮಧ್ಯಾಹ್ನದಲ್ಲಿ ಪ್ರಜ್ವಲಿಸುವ ಸೂರ್ಯನ ಮಹಿಮೆಯಾಗಲಿ ಅದಕ್ಕೆ ಸರಿಸಾಟಿಯಾಗಿರಲಾರದು. (ಹೋಲಿಸಿ ಪ್ರಕಟನೆ 22:⁠5.) ಮಹಿಮಾಭರಿತ ಸೇನಾಧೀಶ್ವರನಾದ ಯೆಹೋವನಿಗೆ ತಮ್ಮನ್ನು ಹೋಲಿಸಿಕೊಳ್ಳಲು ಸೂರ್ಯಚಂದ್ರರು ನಾಚಿಕೆಪಟ್ಟುಕೊಳ್ಳುವಂತೆ ಇದಿರುವುದು. ಯೆಹೋವನು ಸರ್ವಾಧಿಕಾರಿಯಾಗಿ ಆಳುವನು. ಆಗ ಎಲ್ಲರೂ ಆತನ ಸರ್ವಶಕ್ತ ಅಧಿಕಾರ ಹಾಗೂ ಮಹಿಮೆಯನ್ನು ಕಾಣುವರು. (ಪ್ರಕಟನೆ 4:​8-11; 5:​13, 14) ಎಂತಹ ಅದ್ಭುತಕರವಾದ ಪ್ರತೀಕ್ಷೆ! ಆ ಸಮಯದಲ್ಲಿ, ಕೀರ್ತನೆ 97:1ರ ಕರೆಯು ಭೂಮಿಯಾದ್ಯಂತ ಸಂಪೂರ್ಣ ರೀತಿಯಲ್ಲಿ ನೆರವೇರುವುದು: “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಲೋಕವು ಸಂತೋಷಿಸಲಿ; ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ.”

[ಅಧ್ಯಯನ ಪ್ರಶ್ನೆಗಳು]

[ಪುಟ 262ರಲ್ಲಿರುವ ಚಿತ್ರ]

ಆ ದೇಶದಲ್ಲಿ ಇನ್ನುಮುಂದೆ ಸಂಗೀತವಾಗಲಿ ಹರ್ಷೋಲ್ಲಾಸದ ಧ್ವನಿಯಾಗಲಿ ಕೇಳಿಸಲ್ಪಡದು

[ಪುಟ 265ರಲ್ಲಿರುವ ಚಿತ್ರ]

ಸುಗ್ಗಿಯ ನಂತರವೂ ಮರದಲ್ಲಿ ಕೆಲವು ಹಣ್ಣುಗಳು ಉಳಿಯುವಂತೆ, ಯೆಹೋವನ ನ್ಯಾಯತೀರ್ಪಿನಿಂದ ಕೆಲವರು ಬದುಕಿ ಉಳಿಯುವರು

[ಪುಟ 267ರಲ್ಲಿರುವ ಚಿತ್ರ]

ತನ್ನ ಜನರಿಗೆ ಸಂಭವಿಸಲಿರುವ ಸಂಗತಿಗಳಿಂದ ಯೆಶಾಯನು ದುಃಖಪಡುತ್ತಾನೆ

[ಪುಟ 269ರಲ್ಲಿರುವ ಚಿತ್ರ]

ಯೆಹೋವನ ಮಹಿಮೆಗೆ ಸೂರ್ಯಚಂದ್ರರ ಮಹಿಮೆ ಸರಿಸಾಟಿಯಾಗಿರಲಾರದು