ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 16

ಒಂದೇ ಕುಟುಂಬದಂತೆ ಐಕ್ಯರು

ಒಂದೇ ಕುಟುಂಬದಂತೆ ಐಕ್ಯರು

ಯೆಹೋವ ದೇವರು ಇಸ್ರಾಯೇಲ್ಯರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಸುಮಾರು 1,500 ವರ್ಷಗಳ ವರೆಗೆ ಅವರು ಯೆಹೋವನ ಹೆಸರಿಗಾಗಿರುವ ಜನರಾಗಿದ್ದರು. ಅನಂತರ ಆತನು ‘ಅನ್ಯಜನಾಂಗಗಳಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು ಅವರ ಕಡೆಗೆ ಗಮನಹರಿಸಿದನು.’ (ಅ. ಕಾ. 15:14) ಯೆಹೋವನ ಹೆಸರಿಗಾಗಿರುವ ಈ ಪ್ರಜೆಗಳೇ ಆತನಿಗೆ ಸಾಕ್ಷಿಗಳಾಗಿದ್ದಾರೆ. ಅವರು ಭೂಮಿಯ ಯಾವುದೇ ಸ್ಥಳದಲ್ಲಿದ್ದರೂ ಅವರ ಆಲೋಚನೆ, ಕೆಲಸಗಳು ಒಂದೇ ರೀತಿಯದ್ದಾಗಿವೆ. ಯೇಸು ತನ್ನ ಹಿಂಬಾಲಕರಿಗೆ ಈ ಆಜ್ಞೆ ಕೊಟ್ಟನು: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.” ಈ ಕೆಲಸದ ಪರಿಣಾಮವಾಗಿ ಯೆಹೋವನ ಹೆಸರಿಗಾಗಿರುವ ಐಕ್ಯ ಜನರು ಇಂದು ಭೂಮಿಯಲ್ಲಿದ್ದಾರೆ.—ಮತ್ತಾ. 28:19, 20.

ನಾವು ಬೇರೆ ಬೇರೆ ಸ್ಥಳಗಳಲ್ಲಿ ಜೀವಿಸುತ್ತಿದ್ದರೂ ಒಂದೇ ಕುಟುಂಬದಂತೆ ಐಕ್ಯರಾಗಿದ್ದೇವೆ. ನಮ್ಮಲ್ಲಿ ದೇಶ-ಕುಲ, ಶ್ರೀಮಂತ-ಬಡವ ಎಂಬ ಭೇದವಿಲ್ಲ

2 ನಾವು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದಾಗ ಯೇಸುವಿನ ಶಿಷ್ಯರಾದೆವು. ಭೂಮಿಯ ಬೇರೆಬೇರೆ ಸ್ಥಳಗಳಲ್ಲಿದ್ದರೂ ಒಂದೇ ಕುಟುಂಬದಂತಿರುವ ಸಹೋದರ ಬಳಗದಲ್ಲಿ ನಾವೂ ಒಬ್ಬರಾದೆವು. ನಮ್ಮಲ್ಲಿ ದೇಶ-ಕುಲ, ಶ್ರೀಮಂತ-ಬಡವ ಎಂಬ ಭೇದವಿಲ್ಲ. (ಕೀರ್ತ. 133:1) ಹಾಗಾಗಿ ನಾವು ಎಲ್ಲ ಸಹೋದರ ಸಹೋದರಿಯರನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಅವರಲ್ಲಿ ಕೆಲವರು ನಮ್ಮ ಕುಲ-ದೇಶದವರಾಗಿರಲಿಕ್ಕಿಲ್ಲ. ನಮಗಿಂತ ಹೆಚ್ಚು ಅಥವಾ ಕಡಿಮೆ ವಿದ್ಯಾಭ್ಯಾಸ ಮಾಡಿದವರು ಇಲ್ಲವೆ ಈ ಮೊದಲು ನಾವು ಒಡನಾಟ ಮಾಡಬಾರದೆಂದು ನೆನಸಿದ್ದ ಜನರು ಅವರಾಗಿರಬಹುದು. ಆದರೆ ಈಗ ಅವರ ಮೇಲೆ ನಮಗೆ ಗಾಢ ಪ್ರೀತಿಯಿದೆ. ಈ ಪ್ರೀತಿ ರಕ್ತಸಂಬಂಧಕ್ಕಿಂತ ಸ್ನೇಹಸಂಬಂಧಕ್ಕಿಂತ ಬಲವಾಗಿದೆ.—ಮಾರ್ಕ 10:29, 30; ಕೊಲೊ. 3:14; 1 ಪೇತ್ರ 1:22.

ಆಲೋಚನೆಯನ್ನು ಸರಿಪಡಿಸಿಕೊಳ್ಳಿ

3 ಬೇರೆ ಕುಲ, ದೇಶ, ಜಾತಿಯಿಂದ ಬಂದಿರುವ ಸಹೋದರರೊಂದಿಗೆ ಪ್ರೀತಿಯಿಂದಿರಲು ನಿಮಗೆ ಕಷ್ಟವಾಗುತ್ತಿದೆಯಾ? ಒಂದನೇ ಶತಮಾನದ ಯೆಹೂದಿ ಹಿನ್ನೆಲೆಯ ಕ್ರೈಸ್ತರ ಮಾದರಿಯನ್ನು ನೆನಪಿಸಿಕೊಳ್ಳಿ. ಮುಂಚೆ ಅವರು ಬೇರೆ ಧರ್ಮ, ಜನಾಂಗದ ಜನರೊಟ್ಟಿಗೆ ಒಡನಾಟ ಮಾಡುತ್ತಿರಲಿಲ್ಲ. ಕ್ರೈಸ್ತರಾದ ಮೇಲೆ ಅವರು ಬದಲಾಗಬೇಕಿತ್ತು. ಉದಾಹರಣೆಗೆ, ಯೆಹೋವ ದೇವರು ಒಮ್ಮೆ ಪೇತ್ರನಿಗೆ ರೋಮ್‌ನ ಸೇನಾಧಿಕಾರಿ ಕೊರ್ನೇಲ್ಯನ ಮನೆಗೆ ಹೋಗುವಂತೆ ಹೇಳಿದನು. ಬೇರೆ ಜನಾಂಗದವನಾಗಿದ್ದ ಆ ಅಧಿಕಾರಿಯ ಮನೆಗೆ ಪೇತ್ರನು ಹೋಗಬೇಕಾದರೆ ತನ್ನ ಆಲೋಚನಾರೀತಿಯನ್ನು ಸರಿಪಡಿಸಿಕೊಳ್ಳಬೇಕಿತ್ತು. ಯೆಹೋವನು ಅವನಿಗೆ ಹೇಗೆ ಸಹಾಯ ಮಾಡಿದನೆಂದು ನೋಡೋಣ.—ಅ. ಕಾ., ಅಧ್ಯಾ. 10.

4 ಯೆಹೋವನು ಪೇತ್ರನಿಗೆ ದರ್ಶನದಲ್ಲಿ, ಧರ್ಮಶಾಸ್ತ್ರಕ್ಕನುಸಾರ ಅಶುದ್ಧವಾಗಿದ್ದ ಜೀವಿಗಳನ್ನು ತೋರಿಸಿ ಅವುಗಳನ್ನು ಕಡಿದು ತಿನ್ನುವಂತೆ ಹೇಳಿದನು. ಪೇತ್ರನು ಒಪ್ಪದಿದ್ದಾಗ “ದೇವರು ಶುದ್ಧೀಕರಿಸಿರುವುದನ್ನು ನೀನು ಹೊಲೆಯಾದದ್ದೆಂದು ಹೇಳುವುದನ್ನು ನಿಲ್ಲಿಸು” ಎಂಬ ವಾಣಿ ಕೇಳಿಸಿತು. (ಅ. ಕಾ. 10:15) ಹೀಗೆ ಯೆಹೋವನ ಸಹಾಯದಿಂದ ಪೇತ್ರನು ಬದಲಾದನು ಮತ್ತು ಕೊರ್ನೇಲ್ಯನ ಮನೆಗೆ ಹೋದನು. ಅಲ್ಲಿದ್ದವರಿಗೆ ಪೇತ್ರ ಹೀಗಂದನು: “ಒಬ್ಬ ಯೆಹೂದ್ಯನು ಇನ್ನೊಂದು ಕುಲದ ಮನುಷ್ಯನೊಂದಿಗೆ ಹೊಕ್ಕುಬಳಕೆಮಾಡುವುದು ಅಥವಾ ಸಮೀಪಿಸುವುದು ಎಷ್ಟು ಧರ್ಮನಿಷಿದ್ಧವಾಗಿದೆ ಎಂಬುದು ನಿಮಗೆ ತಿಳಿದೇ ಇದೆ; ಆದರೂ ಯಾವನೇ ಮನುಷ್ಯನನ್ನು ಹೊಲೆಯಾದವನು ಅಥವಾ ಅಶುದ್ಧನು ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. ಆದುದರಿಂದ ನನ್ನನ್ನು ಕರೇಕಳುಹಿಸಿದಾಗ ಯಾವುದೇ ಆಕ್ಷೇಪಣೆಯಿಲ್ಲದೆ ನಾನು ಬಂದೆ.” (ಅ. ಕಾ. 10:28, 29) ಅನಂತರ, ಕೊರ್ನೇಲ್ಯ ಮತ್ತು ಅವನ ಕುಟುಂಬದವರ ಮೇಲೆ ದೇವರ ಅನುಗ್ರಹವಿದೆ ಎನ್ನುವುದಕ್ಕೆ ರುಜುವಾತನ್ನು ಪೇತ್ರನು ಕಣ್ಣಾರೆ ಕಂಡನು.

5 ಉನ್ನತ ಶಿಕ್ಷಣ ಪಡೆದಿದ್ದ ತಾರ್ಸದ ಸೌಲನು ಸಹ ಕ್ರೈಸ್ತನಾದ ಮೇಲೆ ಮುಂಚೆ ಯಾರೊಂದಿಗೆ ಒಡನಾಟ ಮಾಡಲು ಇಷ್ಟವಿರಲಿಲ್ಲವೋ ಅಂಥವರೊಂದಿಗೆ ಸಹವಾಸ ಮಾಡಿದನು. ಅವರಿಂದ ಮಾರ್ಗದರ್ಶನವನ್ನೂ ಪಡೆದನು. ಅಷ್ಟು ದೀನತೆ ತೋರಿಸಿದನು. (ಅ. ಕಾ. 4:13; ಗಲಾ. 1:13-20; ಫಿಲಿ. 3:4-11) ಸೆರ್ಗ್ಯ ಪೌಲ, ದಿಯೊನುಸ್ಯ, ದಾಮರಿ, ಫಿಲೆಮೋನ, ಓನೇಸಿಮ ಹಾಗೂ ಇನ್ನಿತರ ಕ್ರೈಸ್ತರು ಸಹ ಯೇಸು ಕ್ರಿಸ್ತನ ಶಿಷ್ಯರಾದ ಮೇಲೆ ತಮ್ಮ ಆಲೋಚನೆಯಲ್ಲಿ ತುಂಬ ಬದಲಾವಣೆ ಮಾಡಿಕೊಂಡಿರಬೇಕು.—ಅ. ಕಾ. 13:6-12; 17:22, 33, 34; ಫಿಲೆ. 8-20.

ನಮ್ಮ ಐಕ್ಯ ಕಾಪಾಡೋಣ

6 ನಾವು ಹೊಸದಾಗಿ ಸಭೆಗೆ ಬಂದಾಗ ಅಲ್ಲಿ ತೋರಿಸಲಾದ ಪ್ರೀತಿ ನಮ್ಮ ಮನಸ್ಪರ್ಶಿಸಿತು. ಯೆಹೋವನಿಗೆ ಆಪ್ತರಾಗಲು, ಆತನ ಸಂಘಟನೆಯ ಕಡೆಗೆ ಬರಲು ಅದು ಸಹಾಯಮಾಡಿತು. ಪ್ರೀತಿಯು ಯೇಸು ಕ್ರಿಸ್ತನ ನಿಜ ಶಿಷ್ಯರ ಗುರುತಾಗಿದೆಯೆಂದು ಆಗ ನಮಗೆ ಸ್ಪಷ್ಟವಾಗಿ ತಿಳಿಯಿತು. ಯೇಸು ಹೀಗೆ ಹೇಳಿದ್ದನು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾ. 13:34, 35) ಭೂಮಿಯ ಎಲ್ಲ ಕಡೆಗಳಲ್ಲಿರುವ ಸಹೋದರರು ಸಹ ಇದೇ ರೀತಿ ಪ್ರೀತಿ ತೋರಿಸುತ್ತಾರೆಂದು ತಿಳಿದಾಗ ಯೆಹೋವನ ಕಡೆಗೆ ಆತನ ಸಂಘಟನೆ ಕಡೆಗೆ ನಮ್ಮ ಗಣ್ಯತೆ ಹೆಚ್ಚಿತು. ಕಡೇ ದಿವಸಗಳಲ್ಲಿ ಯೆಹೋವನನ್ನು ಶಾಂತಿ, ಐಕ್ಯದಿಂದ ಆರಾಧಿಸಲಿಕ್ಕಾಗಿ ಜನರನ್ನು ಒಟ್ಟುಗೂಡಿಸಲಾಗುತ್ತದೆ ಎಂದು ಬೈಬಲಿನಲ್ಲಿ ಮೊದಲೇ ತಿಳಿಸಲಾಗಿತ್ತು. ನಾವೀಗ ಅನುಭವಿಸುತ್ತಿರುವ ಪ್ರೀತಿ-ಐಕ್ಯ ಆ ಪ್ರವಾದನೆಯ ನೆರವೇರಿಕೆಯಾಗಿದೆ.—ಮೀಕ 4:1-5.

7 ಇಂದು ಎಷ್ಟೋ ವಿಷಯಗಳಿಂದ ಜನರ ಮಧ್ಯೆ ಒಡಕು, ವಿಭಜನೆ ಉಂಟಾಗಿದೆ. ಹೀಗಿರುವಾಗ ‘ಎಲ್ಲ ಜನಾಂಗ, ಕುಲ, ಪ್ರಜೆ, ಭಾಷೆಗಳಿಂದ’ ಬಂದಿರುವ ಜನರು ಐಕ್ಯರಾಗಿರುತ್ತಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. (ಪ್ರಕ. 7:9) ಇಂದು ಆಧುನಿಕ ತಂತ್ರಜ್ಞಾನ ಬಳಸುವ ಜನರ ಜೀವನಕ್ಕೂ ಹಳೇ ಪದ್ಧತಿ ರಿವಾಜುಗಳನ್ನು ಪಾಲಿಸುವ ಜನರ ಜೀವನಕ್ಕೂ ತುಂಬ ವ್ಯತ್ಯಾಸವಿದೆ. ಒಂದೇ ದೇಶ, ಒಂದೇ ಕುಲದ ಜನರೇ ಧರ್ಮದ ಹೆಸರಿನಲ್ಲಿ ಕಿತ್ತಾಡುತ್ತಾರೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಜನರು ತಮ್ಮ ಪಂಗಡಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾರೆ. ಬಡವ-ಶ್ರೀಮಂತ ಎಂಬ ಭೇದ ಬೇರೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲ ಜನಾಂಗ, ಭಾಷೆ, ಜಾತಿಗಳಿಂದ ಬಂದಿರುವ ಜನರ ಮಧ್ಯೆ ಮುರಿಯದ ಪ್ರೀತಿಯ ಬಂಧವನ್ನು ಉಂಟುಮಾಡಿ ಅವರನ್ನು ಒಂದೇ ಕುಟುಂಬದಂತೆ ಐಕ್ಯಗೊಳಿಸಿರುವುದು ಒಂದು ಅದ್ಭುತವೇ! ಇದನ್ನು ಯೆಹೋವನು ಮಾತ್ರ ಮಾಡಲು ಸಾಧ್ಯ.—ಜೆಕ. 4:6.

8 ಈ ಅದ್ಭುತ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ನಾವು ದೀಕ್ಷಾಸ್ನಾನ ಪಡೆದಾಗ ಈ ಐಕ್ಯ ಕುಟುಂಬದ ಭಾಗವಾದೆವು. ಈ ಐಕ್ಯದಲ್ಲಿ ಆನಂದಿಸುತ್ತಿರುವಾಗ ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯೂ ನಮಗಿದೆ. ಇದನ್ನು ಮಾಡುವುದು ಹೇಗೆ? ‘ಅನುಕೂಲಕರವಾದ ಸಮಯವು ಇರುವ ವರೆಗೆ ಎಲ್ಲರಿಗೆ, ಅದರಲ್ಲೂ ವಿಶೇಷವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ ಒಳ್ಳೇದನ್ನು ಮಾಡುವ’ ಮೂಲಕ. (ಗಲಾ. 6:10) ಅಲ್ಲದೆ ‘ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಮಗಿಂತಲೂ ಶ್ರೇಷ್ಠರೆಂದು ಎಣಿಸಬೇಕು. ನಮ್ಮ ಸ್ವಂತ ವಿಷಯಗಳಲ್ಲಿ ಆಸಕ್ತಿ ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಡದೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸಬೇಕು.’ (ಫಿಲಿ. 2:3, 4) ಯೆಹೋವನು ತನ್ನ ಸೇವಕರ ದೇಶ, ಬಣ್ಣಕ್ಕೆ ಪ್ರಮುಖತೆ ಕೊಡುವುದಿಲ್ಲ. ನಾವು ಸಹ ಸಹೋದರರ ಬಣ್ಣ, ದೇಶ ನೋಡಿ ಭೇದಭಾವ ಮಾಡಬಾರದು. ಆಗ ನಾವು ಅವರೊಂದಿಗೆ ಶಾಂತಿ-ಸಂತೋಷದಿಂದ ಇರಲು ಸಾಧ್ಯ.—ಎಫೆ. 4:23, 24.

ಒಬ್ಬರ ಮೇಲೊಬ್ಬರಿಗೆ ಕಾಳಜಿ

9 ಪೌಲನು ದೃಷ್ಟಾಂತ ಕೊಟ್ಟು ವಿವರಿಸಿದಂತೆ ಸಭೆಯಲ್ಲಿ ಐಕ್ಯ ಮತ್ತು ಒಬ್ಬರ ಮೇಲೊಬ್ಬರಿಗೆ ಕಾಳಜಿ ಇದೆ. (1 ಕೊರಿಂ. 12:14-26) ಒಬ್ಬ ಸಹೋದರನಿಗೆ ಏನಾದರೂ ಆದರೆ ಉಳಿದವರು ಸಹ ಚಿಂತಿಸುತ್ತಾರೆ. ಕೆಲವು ಸಹೋದರರು ದೂರದ ದೇಶದಲ್ಲಿದ್ದರೂ ಅವರ ಬಗ್ಗೆ ನಮಗೆ ಚಿಂತೆಯಿದೆ, ಅಪಾರ ಕಾಳಜಿಯಿದೆ. ಯಾರಾದರೂ ಹಿಂಸೆಯನ್ನು ಅನುಭವಿಸುತ್ತಿದ್ದರೆ ಉಳಿದವರಿಗೂ ತುಂಬ ದುಃಖ, ನೋವಾಗುತ್ತದೆ. ಕಷ್ಟದಲ್ಲಿರುವವರಿಗೆ ಇಲ್ಲವೆ ನೈಸರ್ಗಿಕ ವಿಪತ್ತು, ಯುದ್ಧ, ಆಂತರಿಕ ಗಲಭೆಯಿಂದಾಗಿ ತೊಂದರೆಯಲ್ಲಿರುವವರಿಗೆ ಬೇಕಾದ ವಸ್ತುಗಳನ್ನು, ಆಧ್ಯಾತ್ಮಿಕ ಸಹಾಯವನ್ನು ತಕ್ಷಣ ಕೊಡಲು ನಮ್ಮಿಂದಾಗುವುದೆಲ್ಲ ಮಾಡುತ್ತೇವೆ.—2 ಕೊರಿಂ. 1:8-11.

10 ಪ್ರತಿದಿನ ನಾವು ನಮ್ಮ ಸಹೋದರರಿಗಾಗಿ ಪ್ರಾರ್ಥಿಸಬೇಕು. ಏಕೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಷ್ಟಗಳಿರುತ್ತವೆ. ಕೆಲವರ ಕಷ್ಟ, ತೊಂದರೆ ಬೇರೆಯವರಿಗೆ ಗೊತ್ತಿರುತ್ತದೆ, ಇನ್ನು ಕೆಲವರದ್ದು ಗೊತ್ತಿರುವುದಿಲ್ಲ. ಉದಾಹರಣೆಗೆ ಕೆಲಸದ ಸ್ಥಳದಲ್ಲಿ ವಿರೋಧ ಅಥವಾ ಸತ್ಯದಲ್ಲಿಲ್ಲದ ಕುಟುಂಬ ಸದಸ್ಯರಿಂದ ವಿರೋಧ, ಬೇರೆಯವರಿಂದ ಅಥವಾ ತಮ್ಮೊಳಗಿಂದಲೇ ತಪ್ಪು ಮಾಡುವ ಒತ್ತಡ ಇರಬಹುದು. (ಮತ್ತಾ. 10:35, 36; 1 ಥೆಸ. 2:14) ಇಂಥವರಿಗಾಗಿ ನಾವು ಪ್ರಾರ್ಥಿಸಬೇಕು. ಏಕೆಂದರೆ ಅವರೆಲ್ಲರೂ ನಮ್ಮ ಸಹೋದರರು. (1 ಪೇತ್ರ 5:9) ಸಭೆಯಲ್ಲಿ, ಸಾರುವ ಕೆಲಸದಲ್ಲಿ ನೇತೃತ್ವ ವಹಿಸುತ್ತಾ ಯೆಹೋವನ ಸೇವೆಯನ್ನು ಶ್ರಮಪಟ್ಟು ಮಾಡುವ ಸಹೋದರರಿಗಾಗಿಯೂ ಪ್ರಾರ್ಥಿಸಬೇಕು. ಇಡೀ ಭೂಮಿಯಲ್ಲಿ ನಡೆಯುವ ಸಾರುವ ಕೆಲಸದ ಮೇಲ್ವಿಚಾರಣೆ ಮಾಡುವ ಸಹೋದರರಿಗೂ ನಮ್ಮ ಪ್ರಾರ್ಥನೆಗಳು ಅಗತ್ಯ. ಇತರರಿಗಾಗಿ ಪ್ರಾರ್ಥಿಸುವ ಮೂಲಕ ನಮಗೆ ಅವರ ಮೇಲೆ ಪ್ರೀತಿ-ಅಕ್ಕರೆ ಇದೆಯೆಂದು ತೋರಿಸುತ್ತೇವೆ. ಸಂಕಷ್ಟದಲ್ಲಿರುವವರಿಗೆ ಕೆಲವೊಮ್ಮೆ ನಾವು ಯಾವ ಸಹಾಯವನ್ನೂ ಮಾಡಲು ಆಗಲಿಕ್ಕಿಲ್ಲ. ಆದರೆ ಅವರಿಗಾಗಿ ಪ್ರಾರ್ಥಿಸುವುದೇ ಅವರಿಗೆ ನಾವು ಮಾಡಬಹುದಾದ ದೊಡ್ಡ ಸಹಾಯ.—ಎಫೆ. 1:16; 1 ಥೆಸ. 1:2, 3; 5:25.

11 ಈ ಕಡೇ ದಿವಸಗಳಲ್ಲಿ ಯಾವಾಗ ಏನಾಗುತ್ತದೆಂದು ಹೇಳಲಾಗುವುದಿಲ್ಲ. ನೆರೆಹಾವಳಿ, ಭೂಕಂಪ, ಇತರ ವಿಪತ್ತಿನಲ್ಲಿ ಯೆಹೋವನ ಜನರು ಸಹ ಸಿಕ್ಕಿಬೀಳುತ್ತಾರೆ. ಆಗ ಅವರಿಗೆ ಅಗತ್ಯವಿರುವ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳುಹಿಸಬೇಕಾಗುತ್ತದೆ. ಹಾಗಾಗಿ ನೆರವು ನೀಡಲು ನಾವು ಸಿದ್ಧರಿರಬೇಕು. ಒಂದನೇ ಶತಮಾನದಲ್ಲಿ ಯೂದಾಯದಲ್ಲಿ ಕ್ಷಾಮ ಬಂದಾಗ ಬೇರೆ ಸ್ಥಳಗಳಲ್ಲಿದ್ದ ಸಹೋದರರು ಯೇಸು ಕೊಟ್ಟ ಸಲಹೆಯಂತೆ ಅಗತ್ಯ ವಸ್ತುಗಳನ್ನು ಉದಾರವಾಗಿ ಅಲ್ಲಿನ ಸಹೋದರರಿಗೆ ಕಳುಹಿಸಿದರು. (ಅ. ಕಾ. 11:27-30; 20:35) ಈ ಕೆಲಸವು ಸುವ್ಯವಸ್ಥಿತವಾಗಿ ನಡೆಯುವಂತೆ ಪೌಲನು ಎಲ್ಲವನ್ನು ಸಂಘಟಿಸಿದನು. (2 ಕೊರಿಂ. 9:1-15) ನಮ್ಮ ಸಮಯದಲ್ಲೂ ವಿಪತ್ತುಗಳಿಗೆ ತುತ್ತಾದ ಸಹೋದರರಿಗೆ ಸಹಾಯನೀಡಲು ಸಂಘಟನೆ ತಕ್ಷಣ ಏರ್ಪಾಡು ಮಾಡುತ್ತದೆ. ನಾವು ಸಹ ಅವರಿಗೆ ನೆರವು ನೀಡಲು ಮುಂದೆ ಬರಬೇಕು.

ತನ್ನ ಚಿತ್ತವನ್ನು ಮಾಡಲು ಯೆಹೋವನು ಆರಿಸಿರುವ ಜನರು

12 ಯಾವುದೇ ಸ್ಥಳದಲ್ಲಿದ್ದರೂ ಒಂದೇ ಕುಟುಂಬದಂತೆ ಐಕ್ಯರಾಗಿರುವ ನಾವು ಸಂಘಟಿತರಾಗಿದ್ದು ಯೆಹೋವನ ಕೆಲಸವನ್ನು ಮಾಡುತ್ತೇವೆ. ದೇವರ ರಾಜ್ಯದ ಸುವಾರ್ತೆಯನ್ನು ಭೂಮಿಯಲ್ಲೆಲ್ಲ ಸಾರುವುದೇ ಆ ಕೆಲಸ. (ಮತ್ತಾ. 24:14) ಇದರ ಜೊತೆಗೆ ಯೆಹೋವನಿಟ್ಟಿರುವ ಉನ್ನತ ನೈತಿಕ ಮಟ್ಟಗಳಿಗನುಸಾರ ಜೀವಿಸಬೇಕೆಂದು ಆತನು ಬಯಸುತ್ತಾನೆ. (1 ಪೇತ್ರ 1:14-16) ನಾವು ಒಬ್ಬರಿಗೊಬ್ಬರು ಅಧೀನತೆ ತೋರಿಸುತ್ತಾ ಸುವಾರ್ತೆಯನ್ನು ಎಲ್ಲ ಕಡೆ ಸಾರಲು ಶ್ರಮಿಸಬೇಕು. (ಎಫೆ. 5:21) ಹಿಂದೆಂದಿಗಿಂತಲೂ ಇಂದು ನಾವು ದೇವರ ಸೇವೆ ಮಾಡುವುದಕ್ಕೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕು. ನಮ್ಮ ಆಸೆ-ಆಕಾಂಕ್ಷೆಗಳನ್ನೇ ಪೂರೈಸಿಕೊಳ್ಳುವ ಸಮಯ ಇದಲ್ಲ. (ಮತ್ತಾ. 6:33) ಇದನ್ನು ಮನಸ್ಸಿನಲ್ಲಿಟ್ಟು ಹೆಚ್ಚು ಸೇವೆ ಮಾಡೋಣ. ಆಗ ನಮಗೆ ಸಂತೋಷ, ಸಂತೃಪ್ತಿ ಇರುತ್ತದೆ ಮಾತ್ರವಲ್ಲ ಮುಂದೆ ನಿತ್ಯನಿರಂತರಕ್ಕೂ ಆಶೀರ್ವಾದಗಳನ್ನು ಪಡೆಯುತ್ತೇವೆ.

13 ಯೆಹೋವನ ಜನರಂತೆ ಈ ಭೂಮಿಯಲ್ಲಿ ಬೇರೆ ಯಾರೂ ಇಲ್ಲ. ಏಕೆಂದರೆ ನಮ್ಮನ್ನು ಯೆಹೋವನು ತನ್ನ ಶುದ್ಧ ಜನರಾಗಿರಲು ಮತ್ತು ಹುರುಪಿನಿಂದ ತನ್ನ ಸೇವೆಮಾಡಲು ಈ ಲೋಕದಿಂದ ಆರಿಸಿಕೊಂಡಿದ್ದಾನೆ. (ತೀತ 2:14) ನಾವು ಲೋಕದ ಜನರಿಗಿಂತ ಭಿನ್ನರು ಏಕೆಂದರೆ ನಾವು ಯೆಹೋವನನ್ನು ಆರಾಧಿಸುತ್ತೇವೆ, ನಾವು ಭೂಮಿಯಲ್ಲೆಲ್ಲ ಹರಡಿದ್ದರೂ “ಒಂದೇ ಮನಸ್ಸಿನಿಂದ” ಕೆಲಸಮಾಡುತ್ತೇವೆ, ಸತ್ಯವೆಂಬ ಒಂದೇ ಭಾಷೆಯನ್ನು ಮಾತಾಡುತ್ತೇವೆ, ಆ ಸತ್ಯದ ಪ್ರಕಾರ ಜೀವಿಸುತ್ತೇವೆ. ಇದನ್ನು ಯೆಹೋವನು ಹೀಗೆ ಮುಂತಿಳಿಸಿದ್ದನು: “ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರಿಗೆ ಶುದ್ಧ ಭಾಷೆಯನ್ನು ಕೊಡುವೆನು.”—ಚೆಫ. 3:9, NW.

14 ಇಂದು ಐಕ್ಯದಿಂದ ಜೀವಿಸುತ್ತಿರುವ ತನ್ನ ಜನರ ಬಗ್ಗೆ ಯೆಹೋವನು ಹೀಗೆ ಸಹ ಪ್ರವಾದಿಸಿದ್ದನು: “ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ, ಮೋಸದ ನಾಲಿಗೆಯು ಇರದು; ಮಂದೆಯಂತೆ ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.” (ಚೆಫ. 3:13) ನಾವು ಬೈಬಲ್‌ ಸತ್ಯಗಳ ತಿಳಿವಳಿಕೆ ಪಡೆದಿದ್ದೇವೆ, ನಮ್ಮ ಆಲೋಚನಾ ರೀತಿಯನ್ನು ಬದಲಾಯಿಸಿಕೊಂಡಿದ್ದೇವೆ, ಯೆಹೋವನ ನೀತಿಯ ಮಟ್ಟಗಳಿಗನುಸಾರ ಜೀವಿಸುತ್ತಿದ್ದೇವೆ. ಹಾಗಾಗಿಯೇ ಎಲ್ಲರೂ ಒಟ್ಟಾಗಿ ಯೆಹೋವನ ಕೆಲಸವನ್ನು ಮಾಡಲು ಸಾಧ್ಯವಾಗಿದೆ. ಮನುಷ್ಯರ ದೃಷ್ಟಿಯಲ್ಲಿ ಅಸಾಧ್ಯವಾಗಿ ಕಾಣುವ ಐಕ್ಯವನ್ನು ಸಾಧಿಸಿದ್ದೇವೆ. ನಿಜಕ್ಕೂ ನಾವು ವಿಶೇಷ ಜನರು. ದೇವರ ಜನರು. ಭೂಮಿಯಲ್ಲಿ ಇರುವವರೆಲ್ಲರ ಮುಂದೆ ಯೆಹೋವನ ಹೆಸರಿಗೆ ಘನಮಾನ ತರುತ್ತೇವೆ.—ಮೀಕ 2:12.