ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳಲಾಗುವ ಪ್ರಶ್ನೆಗಳು

ಭಾಗ 2 ಯೆಹೋವನ ನೀತಿಯ ಮಟ್ಟಗಳು

ಭಾಗ 2 ಯೆಹೋವನ ನೀತಿಯ ಮಟ್ಟಗಳು

ನೀವು ಬೈಬಲ್‌ ಅಧ್ಯಯನದಿಂದ ಯೆಹೋವನು ನಿಮ್ಮಿಂದ ಏನು ಬಯಸುತ್ತಾನೆ, ಆತನ ನೀತಿಯ ಮಟ್ಟಗಳ ಪ್ರಕಾರ ಜೀವಿಸುವುದು ಹೇಗೆ ಎಂದು ತಿಳಿದುಕೊಂಡಿದ್ದೀರಿ. ಹಾಗಾಗಿ ನಿಮ್ಮ ನಡತೆ ಮತ್ತು ಮನೋಭಾವದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿರಬಹುದು. ಯೆಹೋವನ ನೀತಿಯ ಮಟ್ಟಗಳ ಪ್ರಕಾರವೇ ಜೀವಿಸಲು ನೀವೀಗ ದೃಢನಿರ್ಧಾರ ಮಾಡಿರುವುದರಿಂದ ಆತನ ಸೇವೆ ಮಾಡಲು ಆಗುತ್ತಿದೆ.

ಮುಂದಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವಾಗ ನಿಮ್ಮ ಮನಸ್ಸಿನಲ್ಲಿ ಯೆಹೋವನ ನೀತಿಯ ಮಟ್ಟಗಳು ಅಚ್ಚೊತ್ತುತ್ತವೆ. ಮಾತ್ರವಲ್ಲ ಯೆಹೋವನು ಮೆಚ್ಚುವಂಥ ಸೇವಕರಾಗಲು ನೀವು ಇನ್ನೇನು ಮಾಡಬೇಕೆಂದು ನೆನಪುಹುಟ್ಟಿಸುತ್ತದೆ. ಎಲ್ಲವನ್ನು ಒಳ್ಳೇ ಮನಸ್ಸಾಕ್ಷಿಯಿಂದ ಹಾಗೂ ಯೆಹೋವನಿಗೆ ಮಹಿಮೆ ತರುವಂಥ ರೀತಿಯಲ್ಲಿ ಮಾಡುವುದು ಎಷ್ಟು ಮಹತ್ವದ್ದು ಎಂದು ಈ ಮಾಹಿತಿಯು ನಿಮಗೆ ಮನಗಾಣಿಸುತ್ತದೆ.—2 ಕೊರಿಂ. 1:12; 1 ತಿಮೊ. 1:19; 1 ಪೇತ್ರ 3:16, 21.

1. ಮದುವೆಯ ಬಗ್ಗೆ ಯೆಹೋವನು ಯಾವ ಮಟ್ಟವನ್ನು ಇಟ್ಟಿದ್ದಾನೆ?

“ಅದಕ್ಕೆ ಉತ್ತರವಾಗಿ ಅವನು, ‘ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, “ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳಿದನು ಎಂಬುದನ್ನು ನೀವು ಓದಲಿಲ್ಲವೊ? ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ’ ಎಂದು ಹೇಳಿದನು.”—ಮತ್ತಾ. 19:4-6.

“ಮೇಲ್ವಿಚಾರಕನು ದೋಷಾರೋಪಣೆಯಿಲ್ಲದವನೂ ಏಕಪತ್ನಿಯುಳ್ಳವನೂ . . . ಶುಶ್ರೂಷಾ ಸೇವಕರು ಏಕಪತ್ನಿಯುಳ್ಳವರೂ . . . ಆಗಿರಲಿ.”—1 ತಿಮೊ. 3:2, 12.

2. ಯಾವ ಒಂದೇ ಒಂದು ಕಾರಣಕ್ಕಾಗಿ ವಿವಾಹಿತನೊಬ್ಬನು ವಿಚ್ಛೇದನ ಕೊಡಬಹುದೆಂದು ಬೈಬಲ್‌ ಹೇಳುತ್ತದೆ?

“ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.”—ಮತ್ತಾ. 19:9.

3. ಗಂಡಹೆಂಡತಿ ಬೇರೆ ಬೇರೆಯಾಗಿ ವಾಸಿಸಬಹುದಾ? ಇದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

“ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮಾರ್ಕ 10:9.

“ವಿವಾಹಿತರಿಗೆ ನಾನು, ವಾಸ್ತವದಲ್ಲಿ ನಾನಲ್ಲ, ಕರ್ತನು ಸಲಹೆ ನೀಡುವುದೇನೆಂದರೆ ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಅಗಲಬಾರದು . . . ಮತ್ತು ಗಂಡನು ತನ್ನ ಹೆಂಡತಿಯನ್ನು ಬಿಡಬಾರದು.”—1 ಕೊರಿಂ. 7:10, 11.

ಇದನ್ನೂ ನೋಡಿ: 1 ಕೊರಿಂ. 7:4, 5, 12-16.

4. ಗಂಡು-ಹೆಣ್ಣು ಒಟ್ಟಿಗೆ ಬಾಳಬೇಕಾದರೆ ಅವರು ಮದುವೆಯಾಗಿರಬೇಕು ಏಕೆ? ನಿಮಗೆ ಮದುವೆಯಾಗಿದ್ದರೆ, ನೀವು ಮದುವೆಯಾದ ವಿಧ ಕಾನೂನು ಮತ್ತು ಸರ್ಕಾರ ಒಪ್ಪುವಂಥ ರೀತಿಯಲ್ಲಿದೆಯಾ?

“ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ ವಿಧೇಯರಾಗಿರಬೇಕೆಂತಲೂ . . . ಅವರಿಗೆ ಜ್ಞಾಪಕಹುಟ್ಟಿಸುತ್ತಾ ಇರು.”—ತೀತ 3:1, 2

“ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ ಮತ್ತು ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ, ಏಕೆಂದರೆ ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು.”—ಇಬ್ರಿ. 13:4.

“ಕರ್ತನ ನಿಮಿತ್ತವಾಗಿ ಪ್ರತಿಯೊಂದು ಮಾನವ ಸೃಷ್ಟಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ: ಅರಸನನ್ನು ಮೇಲಧಿಕಾರಿಯೆಂದು ಅಥವಾ ಅಧಿಪತಿಗಳು ಕೆಡುಕರಿಗೆ ದಂಡನೆ ವಿಧಿಸುವುದಕ್ಕೂ ಒಳ್ಳೇದನ್ನು ಮಾಡುವವರನ್ನು ಹೊಗಳುವುದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂದು ತಿಳಿದು ಅವರಿಗೆ ಅಧೀನರಾಗಿರಿ.”—1 ಪೇತ್ರ 2:13, 14.

5. ದೇವರು ಕೊಟ್ಟಿರುವ ಜೀವವನ್ನು ನಾವು ಏಕೆ ಅಮೂಲ್ಯವಾಗಿ ನೋಡಬೇಕು?

“ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.”—ಕೀರ್ತ. 36:9.

‘ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ದೇವರು ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತನಾಗಿದ್ದಾನೆ. ಆತನಿಂದಾಗಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ.’—ಅ. ಕಾ. 17:24, 25, 28.

“ಕ್ರಿಸ್ತ ಯೇಸು . . . ಎಲ್ಲರಿಗೋಸ್ಕರ ಅನುರೂಪವಾದ ವಿಮೋಚನಾ ಮೌಲ್ಯವಾಗಿ ತನ್ನನ್ನು ಒಪ್ಪಿಸಿಕೊಟ್ಟನು.”—1 ತಿಮೊ. 2:5, 6.

“ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.”—ಧರ್ಮೋ. 22:8.

6. (ಎ) ಕೊಲೆ (ಬಿ) ಗರ್ಭಪಾತ (ಸಿ) ಆತ್ಮಹತ್ಯೆಯನ್ನು ಯೆಹೋವನು ಮೆಚ್ಚುತ್ತಾನಾ?

“[ಕೊಲೆಗಾರರಿಗೆ] ಸಿಗುವ ಪಾಲು ಬೆಂಕಿಗಂಧಕಗಳು ಉರಿಯುವ ಕೆರೆಯೇ ಆಗಿರುವುದು. ಇದು ಎರಡನೆಯ ಮರಣವನ್ನು ಸೂಚಿಸುತ್ತದೆ.”—ಪ್ರಕ. 21:8.

“ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿಯಾದ ಹೆಂಗಸಿಗೆ ಏಟು ತಗಲಿದದರಿಂದ ಅವಳಿಗೆ ಗರ್ಭಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ . . . ಹೊಡೆದವನು [ಗೊತ್ತುಮಾಡಿದ ಹಣವನ್ನು] ಕೊಡಬೇಕು. ಬೇರೆ ಹಾನಿಯಾದ ಪಕ್ಷಕ್ಕೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು.”—ವಿಮೋ. 21:22, 23.

“ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ.”—ಯೆಹೆ. 18:4.

7. ಒಬ್ಬ ವ್ಯಕ್ತಿಗೆ ಪ್ರಾಣಾಪಾಯ ತರುವ ಕಾಯಿಲೆಯಿದ್ದು ಅದು ಬೇರೆಯವರಿಗೆ ಹರಡುವಂಥದ್ದಾಗಿದ್ದರೆ ಅವನು ಏನು ಮಾಡಬೇಕು?

“ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು; ವಾಸ್ತವದಲ್ಲಿ ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.”—ಮತ್ತಾ. 7:12.

“ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿ. 2:4.

8. ಒಬ್ಬ ವ್ಯಕ್ತಿಗೆ ಪ್ರಾಣಾಪಾಯ ತರುವ ಕಾಯಿಲೆಯಿದ್ದು ಅದು ಬೇರೆಯವರಿಗೆ ಹರಡುವಂಥದ್ದಾಗಿದ್ದರೆ ಅವನು (ಎ) ಇತರರನ್ನು ಅಪ್ಪಿಕೊಳ್ಳಬಾರದು, ಮುದ್ದಿಡಬಾರದು ಏಕೆ? (ಬಿ) ಯಾರಾದರೂ ಮನೆಯೊಳಗೆ ಕರೆಯದಿದ್ದರೆ ಬೇಸರ ಮಾಡಿಕೊಳ್ಳಬಾರದು ಏಕೆ? (ಸಿ) ಸತ್ಯಕ್ಕೆ ಬರುವ ಮುಂಚೆ ನಡೆಸುತ್ತಿದ್ದ ಜೀವನಶೈಲಿಯಿಂದಾಗಿ ಅಥವಾ ಇನ್ನಿತರ ಕಾರಣದಿಂದಾಗಿ ಒಬ್ಬ ಕ್ರೈಸ್ತನಿಗೆ ಬೇರೆಯವರಿಗೆ ಹರಡುವ ಕಾಯಿಲೆ ಬಂದಿರುವ ಸಾಧ್ಯತೆಯಿರುವಲ್ಲಿ, ಅವನು ಮದುವೆ ನಿಶ್ಚಯ ಮಾಡಿಕೊಳ್ಳುವ ಮೊದಲು ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು ಏಕೆ? (ಡಿ) ಸೋಂಕು ರೋಗವಿರುವ ವ್ಯಕ್ತಿಯು ದೀಕ್ಷಾಸ್ನಾನ ಪಡೆಯುವ ಮುಂಚೆ ಹಿರಿಯರ ಮಂಡಲಿಯ ಸಂಯೋಜಕನಿಗೆ ತನಗಿರುವ ಕಾಯಿಲೆಯ ಬಗ್ಗೆ ತಿಳಿಸಬೇಕು ಏಕೆ?

“ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು; ತನ್ನ ಜೊತೆಮಾನವನನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ನೆರವೇರಿಸಿದ್ದಾನೆ. ಧರ್ಮಶಾಸ್ತ್ರದಲ್ಲಿ ತಿಳಿಸಿರುವ . . . ಆಜ್ಞೆಗಳು ಮತ್ತು ಇತರ ಯಾವುದೇ ಆಜ್ಞೆಯು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. ಪ್ರೀತಿಯು ಒಬ್ಬನ ನೆರೆಯವನಿಗೆ ಕೆಡುಕನ್ನು ಮಾಡುವುದಿಲ್ಲ, ಆದುದರಿಂದ ಪ್ರೀತಿಯು ಧರ್ಮಶಾಸ್ತ್ರದ ನೆರವೇರಿಕೆಯಾಗಿದೆ.”—ರೋಮ. 13:8-10.

“ಪ್ರೀತಿಯು . . . ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅದು ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.”—1 ಕೊರಿಂ. 13:4, 5.

9. ಕ್ರೈಸ್ತರು ರಕ್ತವನ್ನು ವರ್ಜಿಸಬೇಕು ಏಕೆ? ಮತ್ತು ಅದರ ಅರ್ಥವೇನು?

“ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ.”—ಆದಿ. 9:4.

“ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸಿದ ಮೇರೆಗೆ ಪಶುಗಳನ್ನು ಇಷ್ಟಾನುಸಾರವಾಗಿ ಕೊಯಿದು ಊಟಮಾಡಬಹುದು . . . ರಕ್ತವನ್ನು ಮಾತ್ರ ಭುಜಿಸಬಾರದು. ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.”—ಧರ್ಮೋ. 12:15,16.

“ವಿಗ್ರಹಗಳಿಗೆ ಯಜ್ಞಾರ್ಪಣೆಮಾಡಿದ ವಸ್ತುಗಳನ್ನು, ರಕ್ತವನ್ನು, ಕತ್ತು ಹಿಸುಕಿ ಕೊಂದವುಗಳನ್ನು ಮತ್ತು ಹಾದರವನ್ನು ವರ್ಜಿಸುತ್ತಾ ಹೋಗಿರಿ.”—ಅ. ಕಾ. 15:29.

10. ಕ್ರೈಸ್ತರು ಧರ್ಮಶಾಸ್ತ್ರವನ್ನು ಪಾಲಿಸಬೇಕಾಗಿಲ್ಲ ಏಕೆ? ಅದರಲ್ಲಿ ಹೇಳಿರುವಂತೆ ಯಜ್ಞಗಳನ್ನು ಕೊಡುವ ಮತ್ತು ಸಬ್ಬತ್ತನ್ನು ಆಚರಿಸುವ ಅಗತ್ಯವಿಲ್ಲ ಏಕೆ?

“ನಂಬಿಕೆಯಿಡುವ ಪ್ರತಿಯೊಬ್ಬನಿಗೆ ನೀತಿಯು ದೊರಕುವಂತೆ ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗಾಣಿಸಿದ್ದಾನೆ.”—ರೋಮ. 10:4.

“ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಅಥವಾ ಹಬ್ಬದ ವಿಷಯದಲ್ಲಿ ಅಥವಾ ಅಮಾವಾಸ್ಯೆಯನ್ನಾಗಲಿ ಸಬ್ಬತ್ತನ್ನಾಗಲಿ ಆಚರಿಸುವ ವಿಷಯದಲ್ಲಿ ಯಾವನೂ ನಿಮ್ಮನ್ನು ತೀರ್ಪುಮಾಡದಿರಲಿ. ಅವು ಬರಬೇಕಾಗಿರುವ ಸಂಗತಿಗಳ ಛಾಯೆಯಾಗಿವೆ; ಆದರೆ ನಿಜತ್ವವು ಕ್ರಿಸ್ತನಿಗೆ ಸೇರಿದ್ದಾಗಿದೆ.”—ಕೊಲೊ. 2:16, 17.

ಇದನ್ನೂ ನೋಡಿ: ಗಲಾ. 3:24, 25; ಕೊಲೊ. 2:13, 14.

11. ನಾವು ನಮ್ಮ ಸಹೋದರ ಸಹೋದರಿಯರಿಗೆ ಮುಖ್ಯವಾಗಿ ಯಾವ ಗುಣ ತೋರಿಸಬೇಕು?

“ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.”—ಯೋಹಾ. 13:34, 35.

“ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.”—ಕೊಲೊ. 3:14.

ಇದನ್ನೂ ನೋಡಿ: 1 ಕೊರಿಂ. 13:4-7.

12. ನಮ್ಮ ಸಹೋದರರಲ್ಲಿರುವ ಬಲಹೀನತೆಗಳನ್ನು ನಾವು ಹೇಗೆ ನೋಡಬೇಕು?

“ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊ. 3:13.

“ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8.

ಇದನ್ನೂ ನೋಡಿ: ಜ್ಞಾನೋ. 17:9; 19:11; ಮತ್ತಾ. 7:1-5.

13. ಒಬ್ಬ ಸಹೋದರನು ನಿಮ್ಮ ವಿರುದ್ಧ ಗಂಭೀರ ಪಾಪ ಮಾಡಿರುವಲ್ಲಿ ಉದಾಹರಣೆಗೆ, ನಿಮಗೆ ಮೋಸ ಮಾಡಿರುವಲ್ಲಿ ಅಥವಾ ನಿಮ್ಮ ಹೆಸರು ಹಾಳುಮಾಡುವಂಥ ಸುದ್ದಿ ಹಬ್ಬಿಸಿರುವಲ್ಲಿ ನೀವೇನು ಮಾಡಬೇಕು?

“ನಿನ್ನ ಸಹೋದರನು ಪಾಪಮಾಡಿದರೆ, ನೀನು ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಆದರೆ ಅವನು ನಿನ್ನ ಮಾತಿಗೆ ಕಿವಿಗೊಡದಿದ್ದರೆ, ಇಬ್ಬರು ಅಥವಾ ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ವಿಷಯವು ಸ್ಥಾಪಿಸಲ್ಪಡಲಿಕ್ಕಾಗಿ ನಿನ್ನೊಂದಿಗೆ ಇನ್ನೂ ಒಬ್ಬನನ್ನು ಅಥವಾ ಇಬ್ಬರನ್ನು ಕರೆದುಕೊಂಡು ಹೋಗು. ಅವನು ಅವರ ಮಾತಿಗೆ ಕಿವಿಗೊಡದೆ ಹೋದರೆ ಸಭೆಗೆ ತಿಳಿಸು. ಅವನು ಸಭೆಯ ಮಾತಿಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯಜನಾಂಗದವನಂತೆಯೂ ತೆರಿಗೆ ವಸೂಲಿಮಾಡುವವನಂತೆಯೂ ಇರಲಿ.”—ಮತ್ತಾ. 18:15-17.

14. ಪವಿತ್ರಾತ್ಮದ ಫಲ ಎಂದರೇನು? ಆ ಫಲದ ಗುಣಗಳನ್ನು ಬೆಳೆಸಿಕೊಳ್ಳುವುದು ಬೇರೆಯವರೊಂದಿಗೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ?

“ಪವಿತ್ರಾತ್ಮದಿಂದ ಉಂಟಾಗುವ ಫಲವೇನೆಂದರೆ, ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ.”—ಗಲಾ. 5:22, 23.

15. ನಾವು ಯಾಕೆ ಸುಳ್ಳು ಹೇಳಬಾರದು?

“ಪಿಶಾಚ . . . ಸತ್ಯದಲ್ಲಿ ನೆಲೆನಿಲ್ಲಲಿಲ್ಲ; ಯಾಕೆಂದರೆ ಸತ್ಯವು ಅವನಲ್ಲಿ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಕ್ಕೆ ಅನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.”—ಯೋಹಾ. 8:44.

‘ಸುಳ್ಳುಗಾರರಿಗೆ ಸಿಗುವ ಪಾಲು ಬೆಂಕಿಗಂಧಕಗಳು ಉರಿಯುವ ಕೆರೆಯೇ ಆಗಿರುವುದು.’—ಪ್ರಕ. 21:8.

ಇದನ್ನೂ ನೋಡಿ: ವಿಮೋ. 20:16; 2 ಕೊರಿಂ. 6:4, 7.

16. ನಾವು ಏಕೆ ಕದಿಯಬಾರದು?

“ನಿಮ್ಮಲ್ಲಿ ಯಾವನೂ ಕೊಲೆಗಾರನಾಗಿ, ಕಳ್ಳನಾಗಿ . . . ಕಷ್ಟವನ್ನು ಅನುಭವಿಸದಿರಲಿ.”—1 ಪೇತ್ರ 4:15.

“ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ ತನ್ನ ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು.”—ಎಫೆ. 4:28.

17. ಮದ್ಯಪಾನದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

“ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು; ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ; ದೇವರು ನಿನ್ನ ನಡತೆಗೆ ಈಗ ಮೆಚ್ಚಿದನಷ್ಟೆ.”—ಪ್ರಸಂ. 9:7.

“ಇನ್ನು ಮೇಲೆ ನೀರನ್ನು ಕುಡಿಯಬೇಡ; ಆದರೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ ಉಂಟಾಗುವ ಅಸ್ವಸ್ಥತೆಯ ನಿಮಿತ್ತವಾಗಿಯೂ ಸ್ವಲ್ಪ ದ್ರಾಕ್ಷಾಮದ್ಯವನ್ನು ಉಪಯೋಗಿಸು.”—1 ತಿಮೊ. 5:23.

18. ಕುಡಿಕತನದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

“ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂಬುದು ನಿಮಗೆ ತಿಳಿಯದೊ? ಮೋಸಹೋಗಬೇಡಿರಿ. ಜಾರರಾಗಲಿ ವಿಗ್ರಹಾರಾಧಕರಾಗಲಿ ವ್ಯಭಿಚಾರಿಗಳಾಗಲಿ . . . ಲೋಭಿಗಳಾಗಲಿ ಕುಡುಕರಾಗಲಿ . . . ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.”—1 ಕೊರಿಂ. 6:9, 10.

‘ಮೇಲ್ವಿಚಾರಕನು ದೋಷಾರೋಪಣೆಯಿಲ್ಲದವನೂ ಕುಡಿದು ಜಗಳಮಾಡುವವನೂ ಆಗಿರಬಾರದು.’—1 ತಿಮೊ. 3:2, 3.

ಇದನ್ನೂ ನೋಡಿ: 1 ಕೊರಿಂ. 5:11.

19. ಒಬ್ಬ ಕ್ರೈಸ್ತನು ಮತ್ತೇರುವಷ್ಟು ಅಲ್ಲದಿದ್ದರೂ ತುಂಬ ಕುಡಿಯುವುದು ಸರಿಯಾ?

“ಕುಡುಕರಲ್ಲಿ . . . ಸೇರದಿರು.”—ಜ್ಞಾನೋ. 23:20.

‘ಶುಶ್ರೂಷಾ ಸೇವಕರು ಸಹ ಗಂಭೀರ ವ್ಯಕ್ತಿಗಳಾಗಿರಬೇಕು, ಅತಿಯಾಗಿ ದ್ರಾಕ್ಷಾಮದ್ಯವನ್ನು ಸೇವಿಸಬಾರದು.’—1 ತಿಮೊ. 3:8.

ಇದನ್ನೂ ನೋಡಿ: 1 ಪೇತ್ರ 4:3.

20. ಚಟಹಿಡಿಸುವ ಹಾಗೂ ಮತ್ತೇರಿಸುವ ಯಾವುದೇ ಅಮಲೌಷಧವನ್ನು (ನೈಸರ್ಗಿಕ ಅಥವಾ ಕೃತಕ) ಕ್ರೈಸ್ತರು ಏಕೆ ತೆಗೆದುಕೊಳ್ಳಬಾರದು?

“ಸಹೋದರರೇ, ದೇವರ ಕನಿಕರದ ಮೂಲಕ ನಾನು ನಿಮ್ಮನ್ಮು ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ಸಜೀವವಾಗಿಯೂ ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ ಇರುವ ಯಜ್ಞವಾಗಿ ಅರ್ಪಿಸಿರಿ; ಇದೇ ನೀವು ವಿವೇಚನಾಶಕ್ತಿಯೊಂದಿಗೆ ಅರ್ಪಿಸುವ ಪವಿತ್ರ ಸೇವೆಯಾಗಿದೆ. ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.”—ರೋಮ. 12:1, 2.

“ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.”—2 ಕೊರಿಂ. 7:1.

ಇದನ್ನೂ ನೋಡಿ: 1 ಪೇತ್ರ 4:7; ಪ್ರಕ. 21:8.

21. ವ್ಯಭಿಚಾರ, ಜಾರತ್ವ, ಸಲಿಂಗಕಾಮ, ಮತ್ತು ಇನ್ನಿತರ ರೀತಿಯ ಲೈಂಗಿಕ ಅನೈತಿಕತೆಯ (ಪೋರ್ನಿಯ) ಬಗ್ಗೆ ಬೈಬಲ್‌ ಏನು ಹೇಳುತ್ತದೆ?

‘ಶರೀರಭಾವದ ಕಾರ್ಯಗಳು ವ್ಯಕ್ತವಾಗಿಯೇ ಇವೆ. ಅವು ಯಾವುವೆಂದರೆ, ಜಾರತ್ವ, ಅಶುದ್ಧತೆ, ಸಡಿಲು ನಡತೆ ಇಂಥವುಗಳೇ. ಇಂಥ ವಿಷಯಗಳನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.’—ಗಲಾ. 5:19-21.

“ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂಬುದು ನಿಮಗೆ ತಿಳಿಯದೊ? ಮೋಸಹೋಗಬೇಡಿರಿ. ಜಾರರಾಗಲಿ ವಿಗ್ರಹಾರಾಧಕರಾಗಲಿ ವ್ಯಭಿಚಾರಿಗಳಾಗಲಿ ಅಸ್ವಾಭಾವಿಕ ಲೈಂಗಿಕ ಉದ್ದೇಶಕ್ಕಾಗಿರುವ ಪುರುಷರಾಗಲಿ ಪುರುಷಗಾಮಿಗಳಾಗಲಿ . . . ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.”—1 ಕೊರಿಂ. 6:9, 10.

“ದೇವರು ಅವರನ್ನು ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು; ಹೇಗೆಂದರೆ ಅವರ ಸ್ತ್ರೀಯರು ತಮ್ಮ ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದದ್ದನ್ನೇ ಮಾಡಿದರು; ಅಂತೆಯೇ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ಕಾಮಾತುರದಿಂದ ತಾಪಪಡುತ್ತಾ ಪುರುಷರೊಂದಿಗೆ ಪುರುಷರು ಅಸಹ್ಯಕರವಾದದ್ದನ್ನು ನಡಿಸಿ ತಮ್ಮ ತಪ್ಪಿಗೆ ತಕ್ಕ ಫಲವನ್ನು ಸಂಪೂರ್ಣವಾಗಿ ತಮ್ಮಲ್ಲಿಯೇ ಹೊಂದುವವರಾದರು.”—ರೋಮ. 1:26, 27.

“ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ ಮತ್ತು ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ, ಏಕೆಂದರೆ ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು.”—ಇಬ್ರಿ. 13:4.

ಇದನ್ನೂ ನೋಡಿ: ಮಾರ್ಕ 7:20-23; ಎಫೆ. 5:5; 1 ಪೇತ್ರ 4:3; ಪ್ರಕ. 21:8.

22. ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವ ಆಮಿಷ ಬಂದರೆ ಅದರಿಂದ ದೂರವಿರಲು ಬೈಬಲಿನಲ್ಲಿರುವ ಯಾವ ಸಲಹೆ ನಿಮಗೆ ಸಹಾಯ ಮಾಡುತ್ತದೆ?

“ನೀವು ಭೂಸಂಬಂಧವಾದವುಗಳ ಮೇಲೆ ಅಲ್ಲ, ಮೇಲಿನವುಗಳ ಮೇಲೆ ಮನಸ್ಸಿಡಿರಿ. ಆದುದರಿಂದ ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ ಮತ್ತು ವಿಗ್ರಹಾರಾಧನೆಯಾಗಿರುವ ಲೋಭ ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.”—ಕೊಲೊ. 3:2, 5.

“ಸಹೋದರರೇ, ಯಾವ ವಿಷಯಗಳು ಸತ್ಯವಾಗಿವೆಯೊ, ಯಾವ ವಿಷಯಗಳು ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, ಯಾವ ವಿಷಯಗಳು ನೀತಿಯುತವಾಗಿವೆಯೊ, ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿವೆಯೊ, ಯಾವ ವಿಷಯಗಳು ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.”—ಫಿಲಿ. 4:8.

23. ಯಾವುದೇ ರೀತಿಯ ಜೂಜಾಟದಲ್ಲಿ ಕ್ರೈಸ್ತರು ಭಾಗವಹಿಸಬಾರದು ಏಕೆ?

“ಯೆಹೋವನಾದ ನನ್ನನ್ನು ತೊರೆದು ನನ್ನ ಪವಿತ್ರಪರ್ವತವನ್ನು ಮರೆತು ಶುಭದಾಯಕದೇವತೆಗೆ [ಅದೃಷ್ಟದೇವತೆಗೆ, NW] ಔತಣವನ್ನು ಅಣಿಮಾಡಿ ಗತಿದಾಯಕದೇವತೆಗೆ [ವಿಧಿದೇವತೆಗೆ, NW] ಮದ್ಯವನ್ನು ತುಂಬಾ ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗಮಾಡುವೆನು.”—ಯೆಶಾ. 65:11.

“ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂಬುದು ನಿಮಗೆ ತಿಳಿಯದೊ? ಮೋಸಹೋಗಬೇಡಿರಿ . . . ಕಳ್ಳರಾಗಲಿ ಲೋಭಿಗಳಾಗಲಿ . . . ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.”—1 ಕೊರಿಂ. 6:9, 10.

24. ಯಾವುದಾದರೂ ಗಂಭೀರ ಪಾಪ ಮಾಡಿರುವ ಒಬ್ಬ ವ್ಯಕ್ತಿಯು ಪುನಃ ಯೆಹೋವನ ಮೆಚ್ಚುಗೆಯನ್ನು ಪಡೆಯಲು ಬಯಸುವಲ್ಲಿ ಕೂಡಲೇ ಏನು ಮಾಡಬೇಕು?

“ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು.”—ಕೀರ್ತ. 32:5.

“ನಿಮ್ಮಲ್ಲಿ ಕೇಡನ್ನು ಅನುಭವಿಸುವವನು ಯಾವನಾದರೂ ಇದ್ದಾನೊ? ಅವನು ಪ್ರಾರ್ಥನೆಮಾಡುತ್ತಾ ಇರಲಿ. ನಿಮ್ಮಲ್ಲಿ ಉಲ್ಲಾಸದಿಂದಿರುವವನು ಯಾವನಾದರೂ ಇದ್ದಾನೊ? ಅವನು ಕೀರ್ತನೆಗಳನ್ನು ಹಾಡಲಿ. ನಿಮ್ಮಲ್ಲಿ ಅಸ್ವಸ್ಥನು ಯಾವನಾದರೂ ಇದ್ದಾನೊ? ಅವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಳ್ಳಲಿ ಮತ್ತು ಅವರು ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪಡುವವು.”—ಯಾಕೋ. 5:13-15.

ಇದನ್ನೂ ನೋಡಿ: ಜ್ಞಾನೋ. 28:13; 1 ಯೋಹಾ. 2:1, 2.

25. ಸಭೆಯ ಆಧ್ಯಾತ್ಮಿಕ, ನೈತಿಕ ಶುದ್ಧತೆಯನ್ನು ಹಾಳುಮಾಡುವಂಥ ಗಂಭೀರ ತಪ್ಪನ್ನು ಯಾರಾದರೂ ಮಾಡಿದ್ದಾರೆಂದು ತಿಳಿದುಬಂದರೆ ನಾವೇನು ಮಾಡಬೇಕು?

“ನ್ಯಾಯಾಧಿಕಾರಿಯು ತಿಳಿಸಬೇಕೆಂದು ಆಣೆ ಇಟ್ಟರೂ ಯಾವನಾದರೂ ತಾನು ಕಂಡು ಕೇಳಿದ್ದನ್ನು ತಿಳಿಸದೆಹೋದರೆ ಅವನು ಪಾಪಕ್ಕೆ ಗುರಿಯಾಗುವನು.”—ಯಾಜ. 5:1.

26. ಸಭಾ ಹಿರಿಯರಿಂದ ತಿದ್ದುಪಾಟು ಸಿಕ್ಕಿದಾಗ ನಮ್ಮ ಮನೋಭಾವ ಹೇಗಿರಬೇಕು?

“ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.”—ಜ್ಞಾನೋ. 3:11.

“ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.”—ಜ್ಞಾನೋ. 6:23.

27. ದೇವರ ಆಜ್ಞೆಗೆ ಅವಿಧೇಯನಾದ ಕ್ರೈಸ್ತನು ಪಶ್ಚಾತ್ತಾಪಪಡದಿದ್ದರೆ ಸಭೆಯು ಯಾವ ಕ್ರಮ ತಕ್ಕೊಳ್ಳುತ್ತದೆ?

“ಜಾರತ್ವ ಮಾಡುವವರೊಂದಿಗೆ ಸಹವಾಸಮಾಡುವುದನ್ನು ಬಿಟ್ಟುಬಿಡಿರಿ ಎಂದು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲುಕೊಳ್ಳುವವರು ಅಥವಾ ವಿಗ್ರಹಾರಾಧಕರೊಂದಿಗೆ ಸಹವಾಸವನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಮಾಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾಗುವುದು. ಆದರೆ ಸಹೋದರನೆನಿಸಿಕೊಂಡವನು ಜಾರನಾಗಲಿ ಲೋಭಿಯಾಗಲಿ ವಿಗ್ರಹಾರಾಧಕನಾಗಲಿ ದೂಷಕನಾಗಲಿ ಕುಡುಕನಾಗಲಿ ಸುಲುಕೊಳ್ಳುವವನಾಗಲಿ ಆಗಿರುವಲ್ಲಿ ಅವನ ಸಹವಾಸವನ್ನು ಬಿಟ್ಟುಬಿಡಿರಿ, ಅಂಥವನೊಂದಿಗೆ ಊಟವನ್ನೂ ಮಾಡಬೇಡಿ ಎಂದು ಈಗ ನಾನು ನಿಮಗೆ ಬರೆಯುತ್ತಿದ್ದೇನೆ. ಹೊರಗಿನವರ ವಿಷಯದಲ್ಲಿ ತೀರ್ಪುಮಾಡಲು ನಾನು ಯಾರು? ಒಳಗಿನವರನ್ನು ತೀರ್ಪುಮಾಡುವವರು ನೀವಲ್ಲವೊ? ಹೊರಗಿನವರನ್ನು ದೇವರು ತೀರ್ಪುಮಾಡುತ್ತಾನೆ. ‘ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿರಿ.’”—1 ಕೊರಿಂ. 5:9-13.

28. ವಿಗ್ರಹಾರಾಧನೆ ಎಂದರೇನು? ಯಾವ ವಿಧದ ವಿಗ್ರಹಾರಾಧನೆಗಳಿಂದ ಕ್ರೈಸ್ತರು ದೂರವಿರಬೇಕು?

‘ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂಬಾರದು ಪೂಜೆಮಾಡಲೂಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ.’—ವಿಮೋ. 20:4, 5.

“ವಿಗ್ರಹಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ.”—1 ಯೋಹಾ. 5:21.

ಇದನ್ನೂ ನೋಡಿ: ಯೆಶಾ. 42:8; ಯೆರೆ. 10:14, 15.

29. ದೇವರನ್ನು ತೊರೆದಿರುವ ಈ ಲೋಕದ ಬಗ್ಗೆ ಕ್ರೈಸ್ತರ ದೃಷ್ಟಿಕೋನ ಏನಾಗಿದೆ?

“ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.”—ಯೋಹಾ. 17:16.

“ಲೋಕದೊಂದಿಗೆ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ ಎಂಬುದು ನಿಮಗೆ ತಿಳಿಯದೊ? ಆದುದರಿಂದ ಯಾವನಾದರೂ ಲೋಕಕ್ಕೆ ಸ್ನೇಹಿತನಾಗಲು ಬಯಸುವುದಾದರೆ ಅವನು ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳುತ್ತಾನೆ.”—ಯಾಕೋ. 4:4.

30. ರಾಜಕೀಯದಲ್ಲಿ ಒಳಗೂಡುವುದರ ಬಗ್ಗೆ ಯೇಸುವಿಗೆ ಯಾವ ಮನೋಭಾವವಿತ್ತು?

“ಪಿಶಾಚನು ಅವನನ್ನು ಅಸಾಮಾನ್ಯವಾಗಿ ಎತ್ತರವಾಗಿದ್ದ ಒಂದು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಅವನಿಗೆ ತೋರಿಸುತ್ತಾ, ‘ನೀನು ಅಡ್ಡಬಿದ್ದು ನನಗೆ ಒಂದು ಆರಾಧನಾ ಕ್ರಿಯೆಯನ್ನು ಮಾಡಿದರೆ ನಾನು ಇವೆಲ್ಲವನ್ನೂ ನಿನಗೆ ಕೊಡುವೆನು’ ಎಂದು ಹೇಳಿದನು. ಅದಕ್ಕೆ ಯೇಸು ಅವನಿಗೆ, ‘ಸೈತಾನನೇ ತೊಲಗಿಹೋಗು! “ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು” ಎಂದು ಬರೆದಿದೆ’ ಅಂದನು.”—ಮತ್ತಾ. 4:8-10.

“ಜನರು ಬಂದು ತನ್ನನ್ನು ಹಿಡಿದು ಅರಸನನ್ನಾಗಿ ಮಾಡಬೇಕೆಂದಿದ್ದಾರೆ ಎಂಬುದನ್ನು ತಿಳಿದವನಾಗಿ ಯೇಸು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೊರಟುಹೋದನು.”—ಯೋಹಾ. 6:15.

31. ಒಬ್ಬ ವ್ಯಕ್ತಿ ಈ ಲೋಕದ ವಿಚಾರಗಳನ್ನು ಬಿಟ್ಟು ಕ್ರೈಸ್ತನಾದಾಗ ಲೋಕದ ಜನರು ತನ್ನನ್ನು ಹೇಗೆ ಉಪಚರಿಸುತ್ತಾರೆಂದು ಎದುರುನೋಡಬೇಕು?

“ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದ ಭಾಗವಾಗಿರದ ಕಾರಣ ಮತ್ತು ನಾನು ನಿಮ್ಮನ್ನು ಈ ಲೋಕದಿಂದ ಆರಿಸಿಕೊಂಡಿರುವ ಕಾರಣ ಲೋಕವು ನಿಮ್ಮನ್ನು ದ್ವೇಷಿಸುತ್ತದೆ . . . ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು.”—ಯೋಹಾ. 15:19, 20.

“ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು.”—2 ತಿಮೊ. 3:12.

“ತಮ್ಮ ಕೀಳ್ಮಟ್ಟದ ಪಟಿಂಗತನದಲ್ಲಿ ನೀವು ಅವರೊಂದಿಗೆ ಓಡುವುದನ್ನು ಮುಂದುವರಿಸುವುದಿಲ್ಲವಾದುದರಿಂದ ಅವರು ಆಶ್ಚರ್ಯಪಟ್ಟು ನಿಮ್ಮ ಕುರಿತು ದೂಷಣಾತ್ಮಕ ಮಾತುಗಳನ್ನಾಡುತ್ತಾರೆ.”—1 ಪೇತ್ರ 4:4.

32. ಒಬ್ಬ ಕ್ರೈಸ್ತನು ಈ ಲೋಕದ ವಿಚಾರಗಳನ್ನು ಬಿಟ್ಟುಬಿಟ್ಟಿರುವುದರಿಂದ ಯಾವ ರೀತಿಯ ಉದ್ಯೋಗವನ್ನು ಆರಿಸಿಕೊಳ್ಳುತ್ತಾನೆ?

“ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ ತನ್ನ ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು.”—ಎಫೆ. 4:28.

“[ಪಿಶಾಚನು] ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.”—ಯೋಹಾ. 8:44.

“ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು; ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಮೀಕ 4:3.

“ಸ್ವರ್ಗದಿಂದ ಇನ್ನೊಂದು ಧ್ವನಿಯು ಹೀಗೆ ಹೇಳುವುದನ್ನು ನಾನು ಕೇಳಿಸಿಕೊಂಡೆನು: ‘ನನ್ನ ಜನರೇ, ನೀವು ಅವಳೊಂದಿಗೆ [ಮಹಾ ಬಾಬೆಲಿನೊಂದಿಗೆ] ಅವಳ ಪಾಪಗಳಲ್ಲಿ ಪಾಲುಗಾರರಾಗಲು ಬಯಸದಿರುವಲ್ಲಿ ಮತ್ತು ಅವಳ ಉಪದ್ರವಗಳಲ್ಲಿ ಪಾಲನ್ನು ಪಡೆಯಲು ಬಯಸದಿರುವಲ್ಲಿ ಅವಳನ್ನು ಬಿಟ್ಟು ಹೊರಗೆ ಬನ್ನಿರಿ.’”—ಪ್ರಕ. 18:4.

33. ಒಬ್ಬ ಕ್ರೈಸ್ತನು ಮನರಂಜನೆಯನ್ನು ಆಯ್ಕೆಮಾಡುವಾಗ ಬೈಬಲಿನ ಯಾವ ತತ್ವಗಳನ್ನು ಮನಸ್ಸಿನಲ್ಲಿಡಬೇಕು?

“ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂ. 15:33.

“ಸಹೋದರರೇ, ಯಾವ ವಿಷಯಗಳು ಸತ್ಯವಾಗಿವೆಯೊ, ಯಾವ ವಿಷಯಗಳು ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, ಯಾವ ವಿಷಯಗಳು ನೀತಿಯುತವಾಗಿವೆಯೊ, ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿವೆಯೊ, ಯಾವ ವಿಷಯಗಳು ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.”—ಫಿಲಿ. 4:8.

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ.” —1 ಯೋಹಾ. 2:15.

“ಯೆಹೋವನು . . . ಬಲಾತ್ಕಾರಿಗಳನ್ನು [ಹಿಂಸಾಚಾರ ಇಷ್ಟಪಡುವವರನ್ನು, NW] ದ್ವೇಷಿಸುತ್ತಾನೆ.”—ಕೀರ್ತ. 11:5.

“ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ. ದಿನಗಳು ಕೆಟ್ಟವುಗಳಾಗಿರುವುದರಿಂದ ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ. ಈ ಕಾರಣದಿಂದ ವಿಚಾರಹೀನರಾಗಿರದೆ ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುತ್ತಾ ಇರಿ. ಮಾತ್ರವಲ್ಲದೆ, ದ್ರಾಕ್ಷಾಮದ್ಯವನ್ನು ಕುಡಿದು ಮತ್ತರಾಗಬೇಡಿ; ಅದರಿಂದ ಪಟಿಂಗತನವು ಉಂಟಾಗುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು ದೇವರಿಗೆ ಕೀರ್ತನೆಗಳಿಂದಲೂ ಸ್ತುತಿಗೀತೆಗಳಿಂದಲೂ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಇರಿ ಮತ್ತು ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗೀತೆಗಳೊಂದಿಗೂ ಸಂಗೀತದೊಂದಿಗೂ ಹಾಡಿರಿ. ಯಾವಾಗಲೂ ಎಲ್ಲ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಮ್ಮ ದೇವರೂ ತಂದೆಯೂ ಆಗಿರುವಾತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಇರಿ.”—ಎಫೆ. 5:15-20.

“ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು. ಇವುಗಳಿಂದ ದೂರವಿರುವುದು ಪವಿತ್ರ ಜನರಿಗೆ ಯೋಗ್ಯವಾದದ್ದಾಗಿದೆ.”—ಎಫೆ. 5:3.

34. ನಿಜ ಕ್ರೈಸ್ತರು ಬೇರೆ ಧರ್ಮಗಳ ಆರಾಧನಾವಿಧಿಗಳಲ್ಲಿ ಏಕೆ ಭಾಗವಹಿಸಬಾರದು?

“ಸ್ವರ್ಗದಿಂದ ಇನ್ನೊಂದು ಧ್ವನಿಯು ಹೀಗೆ ಹೇಳುವುದನ್ನು ನಾನು ಕೇಳಿಸಿಕೊಂಡೆನು: ‘ನನ್ನ ಜನರೇ, ನೀವು ಅವಳೊಂದಿಗೆ [ಮಹಾ ಬಾಬೆಲಿನೊಂದಿಗೆ] ಅವಳ ಪಾಪಗಳಲ್ಲಿ ಪಾಲುಗಾರರಾಗಲು ಬಯಸದಿರುವಲ್ಲಿ ಮತ್ತು ಅವಳ ಉಪದ್ರವಗಳಲ್ಲಿ ಪಾಲನ್ನು ಪಡೆಯಲು ಬಯಸದಿರುವಲ್ಲಿ ಅವಳನ್ನು ಬಿಟ್ಟು ಹೊರಗೆ ಬನ್ನಿರಿ. ಏಕೆಂದರೆ ಅವಳ ಪಾಪಗಳು ಒಂದಕ್ಕೊಂದು ಸೇರಿ ಆಕಾಶದ ತನಕವೂ ಬೆಳೆದಿವೆ ಮತ್ತು ದೇವರು ಅವಳ ಅನ್ಯಾಯದ ಕೃತ್ಯಗಳನ್ನು ಗಮನಕ್ಕೆ ತಂದುಕೊಂಡಿದ್ದಾನೆ.’”—ಪ್ರಕ. 18:4, 5.

ಇದನ್ನೂ ನೋಡಿ: ಮತ್ತಾ. 7:13, 14, 21-23; 1 ಕೊರಿಂ. 10:20; 2 ಕೊರಿಂ. 6:14-18.

35. ಯಾವ ಒಂದೇ ಒಂದು ಧಾರ್ಮಿಕ ಆಚರಣೆಯನ್ನು ಮಾಡಬೇಕೆಂಬ ಆಜ್ಞೆ ಕ್ರೈಸ್ತರಿಗಿದೆ?

“ಅವನು ರೊಟ್ಟಿಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಮುರಿದು ಅವರಿಗೆ ನೀಡಿ, ‘ಇದು ನಿಮಗೋಸ್ಕರ ಕೊಡಲ್ಪಡಲಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ’ ಎಂದು ಹೇಳಿದನು.”—ಲೂಕ 22:19.

ಇದನ್ನೂ ನೋಡಿ: 1 ಕೊರಿಂ. 11:23-26.

36. ನೀವಿರುವ ಪ್ರದೇಶದಲ್ಲಿ ಪ್ರಸಿದ್ಧವಾಗಿರುವ ಆಚರಣೆಗಳನ್ನು ಮಾಡಬೇಕಾ ಮಾಡಬಾರದಾ ಎಂದು ನೀವು ಹೇಗೆ ನಿರ್ಣಯಿಸಬಹುದು?

“ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.”—ಯೋಹಾ. 17:16.

“ನೀವು ‘ಯೆಹೋವನ ಮೇಜು’ ಮತ್ತು ದೆವ್ವಗಳ ಮೇಜು ಇವೆರಡರಲ್ಲಿಯೂ ಪಾಲುಗಾರರಾಗಲು ಸಾಧ್ಯವಿಲ್ಲ.”—1 ಕೊರಿಂ. 10:21.

“[ಅನ್ಯಜನಾಂಗದವರೊಡನೆ] ಕೂಡಿಕೊಂಡು ಅವರ ದುರಾಚಾರಗಳನ್ನು ಕಲಿತುಕೊಂಡರು. ಅವರ ವಿಗ್ರಹಗಳನ್ನು ಸೇವಿಸಿದರು; ಅವು [ಇಸ್ರಾಯೇಲ್ಯರಿಗೆ] ಉರುಲಿನಂತಾದವು.”—ಕೀರ್ತ. 106:35, 36.

“ನೀವು ಸಡಿಲು ನಡತೆ, ಕಾಮಾತುರತೆ, ಮಿತಿಮೀರಿದ ದ್ರಾಕ್ಷಾಮದ್ಯ ಸೇವನೆ, ಭಾರೀ ಮೋಜು, ಮದ್ಯಪಾನ ಸ್ಪರ್ಧೆ, ನಿಷಿದ್ಧ ವಿಗ್ರಹಾರಾಧನೆ ಈ ಮುಂತಾದ ಕಾರ್ಯಗಳನ್ನು ಮಾಡುತ್ತಾ ಅನ್ಯಜನಾಂಗಗಳ ಇಚ್ಛೆಗಳನ್ನು ಮಾಡುವುದರಲ್ಲಿ ಕಳೆದುಹೋದ ಕಾಲವೇ ಸಾಕು.”—1 ಪೇತ್ರ 4:3.

“ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.”—ಪ್ರಸಂ. 9:5.

37. ಹುಟ್ಟುಹಬ್ಬದ ಕುರಿತು ಬೈಬಲಿನಲ್ಲಿ ಯಾವ ಚಿತ್ರಣ ಇದೆ? ಇದರಿಂದ ಹುಟ್ಟುಹಬ್ಬದ ಬಗ್ಗೆ ನಿಮಗೇನು ಅನಿಸುತ್ತದೆ?

“ಹೆರೋದನ ಹುಟ್ಟಿದ ದಿನವು ಆಚರಿಸಲ್ಪಡುತ್ತಿದ್ದಾಗ ಹೆರೋದ್ಯಳ ಮಗಳು ನಾಟ್ಯವಾಡಿ ಹೆರೋದನನ್ನು ಎಷ್ಟು ಮೆಚ್ಚಿಸಿದಳೆಂದರೆ, ಅವಳು ಏನೇ ಕೇಳಿದರೂ ಕೊಡುವೆನೆಂದು ಅವನು ಪ್ರಮಾಣಮಾಡಿ ಹೇಳಿದನು. ಬಳಿಕ ಅವಳು ತನ್ನ ತಾಯಿ ಹೇಳಿಕೊಟ್ಟಪ್ರಕಾರ, ‘ನನಗೆ ಸ್ನಾನಿಕನಾದ ಯೋಹಾನನ ತಲೆಯನ್ನು ದೊಡ್ಡ ತಟ್ಟೆಯಲ್ಲಿ ಇಲ್ಲಿಗೆ ತಂದುಕೊಡು’ ಎಂದು ಹೇಳಿದಳು. ಅವನಿಗೆ ದುಃಖವಾಯಿತಾದರೂ, ತನ್ನ ಪ್ರಮಾಣಗಳ ನಿಮಿತ್ತವಾಗಿಯೂ ತನ್ನೊಂದಿಗೆ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವಂತೆ ಆಜ್ಞಾಪಿಸಿದನು; ಮತ್ತು ತನ್ನ ಸೇವಕರನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ತಲೆಯನ್ನು ಕಡಿಸಿದನು. ಅವನ ತಲೆಯನ್ನು ದೊಡ್ಡ ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಟ್ಟಾಗ ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.”—ಮತ್ತಾ. 14:6-11.

ಇದನ್ನೂ ನೋಡಿ: ಆದಿ. 40:20-22; ಪ್ರಸಂ. 7:1, 8.