ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

ಯೆಹೋವನ ಕೆಲಸವನ್ನು ಮಾಡಲು ಸಂಘಟಿತರು

ಯೆಹೋವನ ಕೆಲಸವನ್ನು ಮಾಡಲು ಸಂಘಟಿತರು

ಪ್ರಪಂಚದಲ್ಲಿ ಇಂದು ಲೆಕ್ಕವಿಲ್ಲದಷ್ಟು ಸಂಘ-ಸಂಸ್ಥೆಗಳಿವೆ. ಅವು ಧರ್ಮ, ರಾಜಕೀಯ, ವ್ಯಾಪಾರ, ಸಮಾಜ ಸೇವೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿವೆ. ಒಂದೊಂದು ಸಂಘಟನೆಯ ವ್ಯವಹಾರ ರೀತಿ, ಗುರಿ, ಅಭಿಪ್ರಾಯ, ನೀತಿ ನಿಯಮವೆಲ್ಲ ಬೇರೆ ಬೇರೆ. ಆದರೆ ಇವೆಲ್ಲವುಗಳಿಗಿಂತ ಭಿನ್ನವಾದ ಒಂದು ಸಂಘಟನೆಯಿದೆ. ಅದು ಯೆಹೋವನ ಸಾಕ್ಷಿಗಳ ಸಂಘಟನೆ. ಅದು ಭಿನ್ನ ಏಕೆಂದರೆ, ಅದೇನೇ ಮಾಡಿದರೂ ಬೈಬಲ್‌ ತತ್ವಗಳ ಪ್ರಕಾರ ಮಾಡುತ್ತದೆ.

2 ನೀವು ಈಗ ಯೆಹೋವನ ಸಾಕ್ಷಿಗಳ ಜೊತೆ ಸಹವಾಸ ಮಾಡುತ್ತಿರುವುದು ಸಂತೋಷದ ವಿಷಯ. ದೇವರ ಇಷ್ಟ ಏನೆಂದು ತಿಳಿದುಕೊಂಡು ನೀವು ಅದರಂತೆ ನಡೆಯುತ್ತಿದ್ದೀರಿ. (ಕೀರ್ತ. 143:10; ರೋಮ. 12:2) ಅನೇಕ ದೇಶ ದ್ವೀಪಗಳಲ್ಲಿದ್ದರೂ ಪ್ರೀತಿಯ ಬಾಂಧವ್ಯವಿರುವ ಸಹೋದರರ ಜೊತೆ ಕೈಜೋಡಿಸಿ ಯೆಹೋವನ ಸೇವೆ ಮಾಡುತ್ತಿದ್ದೀರಿ. (2 ಕೊರಿಂ. 6:4; 1 ಪೇತ್ರ 2:17; 5:9) ಯೆಹೋವನು ಮಾತುಕೊಟ್ಟಿರುವಂತೆ ಇದರಿಂದ ನಿಮಗೆ ಖಂಡಿತ ಆನಂದ ಸಿಗುತ್ತದೆ ಮತ್ತು ಆತನು ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆಯನ್ನು ಸುರಿಸುತ್ತಾನೆ. (ಜ್ಞಾನೋ. 10:22; ಮಾರ್ಕ 10:30) ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಮುಂದುವರಿಯಿರಿ. ಏಕೆಂದರೆ ಇದು ಭವಿಷ್ಯತ್ತಿನಲ್ಲಿ ಸಿಗಲಿರುವ ಸುಂದರವಾದ ಶಾಶ್ವತ ಜೀವನಕ್ಕಾಗಿ ನಿಮ್ಮನ್ನು ತಯಾರು ಮಾಡುತ್ತದೆ.—1 ತಿಮೊ. 6:18, 19; 1 ಯೋಹಾ. 2:17.

3 ಯೆಹೋವನ ಸಾಕ್ಷಿಗಳ ಸಂಘಟನೆಯ ವಿಶೇಷತೆ ಏನೆಂದರೆ ಅದನ್ನು ನಡೆಸುತ್ತಿರುವವನು ಸೃಷ್ಟಿಕರ್ತನೂ ಎಲ್ಲದರ ಒಡೆಯನೂ ಆದ ಯೆಹೋವ ದೇವರೇ. ಆತನು ನಮಗೆ ಒಳ್ಳೇದನ್ನೇ ಮಾಡುತ್ತಾನೆ ಎಂಬ ಸಂಪೂರ್ಣ ಭರವಸೆ ನಮಗಿದೆ. ಯೆಹೋವನು ನಮ್ಮ ನ್ಯಾಯಾಧಿಪತಿ, ನಿಯಮದಾತ ಮತ್ತು ನಮ್ಮ ರಾಜ. (ಯೆಶಾ. 33:22) ಆತನು ಎಲ್ಲವನ್ನು ಸುವ್ಯವಸ್ಥಿತವಾಗಿ ಮಾಡುವ ದೇವರು. ಆತನು ತನ್ನ ಉದ್ದೇಶವನ್ನು ನೆರವೇರಿಸುವಾಗ ನಾವೂ ಆತನೊಂದಿಗೆ ಕೆಲಸಮಾಡಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಆತನು ಏರ್ಪಾಡುಗಳನ್ನು ಮಾಡಿದ್ದಾನೆ.—2 ಕೊರಿಂ. 6:1, 2.

4 ಯೆಹೋವ ದೇವರು ಕ್ರಿಸ್ತ ಯೇಸುವನ್ನು ರಾಜನಾಗಿ ಮತ್ತು ನಮ್ಮ ನಾಯಕನಾಗಿ ನೇಮಿಸಿದ್ದಾನೆ. (ಯೆಶಾ. 55:4; ಪ್ರಕ. 6:2; 11:15) ಆದುದರಿಂದ ನಾವು ಯೇಸುವಿನ ಮಾರ್ಗದರ್ಶನೆಯ ಪ್ರಕಾರ ನಡೆಯಬೇಕು. ಈ ಲೋಕದ ಅಂತ್ಯ ತುಂಬ ಹತ್ತಿರವಿರುವ ಕಾರಣ ಇನ್ನಷ್ಟು ಹುರುಪಿನಿಂದ ಸೇವೆ ಮಾಡಬೇಕು. ತನಗಿಂತಲೂ ತನ್ನ ಶಿಷ್ಯರು ಹೆಚ್ಚು ಸೇವೆ ಮಾಡಲಿದ್ದಾರೆಂದು ನಮ್ಮ ನಾಯಕನೇ ಹೇಳಿದ್ದಾನೆ. (ಯೋಹಾ. 14:12) ಏಕೆಂದರೆ ಶಿಷ್ಯರ ಸಂಖ್ಯೆ ಹೆಚ್ಚಾಗಲಿತ್ತು ಮತ್ತು ಸೇವೆಮಾಡಲು ಅವರಿಗೆ ಯೇಸುವಿಗಿಂತ ಹೆಚ್ಚು ಸಮಯವಿರಲಿತ್ತು. ಹಾಗಾಗಿ ಅವರು ಸುವಾರ್ತೆಯನ್ನು ಭೂಮಿಯ ಎಲ್ಲ ಕಡೆಗಳಲ್ಲಿ ಸಾರಲಿದ್ದರು.—ಮತ್ತಾ. 24:14; 28:19, 20; ಅ. ಕಾ. 1:8.

5 ಅದು ನಿಜವಾಗಿದೆ. ಇಂದು ಸುವಾರ್ತೆಯನ್ನು ಭೂಮಿಯ ಮೂಲೆಮೂಲೆಗೂ ಸಾರಲಾಗುತ್ತಿದೆ. ಇದನ್ನು ಪ್ರತಿ ವರ್ಷ ಬರುವ ‘ಯೆಹೋವನ ಸಾಕ್ಷಿಗಳ ವರ್ಷಪುಸ್ತಕ’ (ಇಂಗ್ಲಿಷ್‌) ತೋರಿಸುತ್ತದೆ. ಆದರೆ ಈ ಸಾರುವ ಕೆಲಸವನ್ನು ಯೆಹೋವನು ತಾನು ನಿರ್ಧರಿಸಿರುವ ಸಮಯದಲ್ಲಿ ಸಾಕೆನ್ನುತ್ತಾನೆ. ಆ ಸಮಯ ತುಂಬ ದೂರದಲ್ಲಿಲ್ಲವೆಂದು ಬೈಬಲಿನ ಪ್ರವಾದನೆಗಳು ತೋರಿಸುತ್ತವೆ. ಏಕೆಂದರೆ ಯೆಹೋವನ ಭಯಂಕರವಾದ ಮಹಾದಿನ ತುಂಬ ಹತ್ತಿರವಿದೆ.—ಯೋವೇ. 2:31; ಚೆಫ. 1:14-18; 2:2, 3; 1 ಪೇತ್ರ 4:7.

ಯೆಹೋವನು ಹೇಳುವುದನ್ನೆಲ್ಲ ಮಾಡಲು ನಾವು ನಮ್ಮನ್ನೇ ಧಾರೆ ಎರೆಯಬೇಕು. ಇದಕ್ಕಾಗಿ ನಾವು ಆತನ ಸಂಘಟನೆಯು ಹೇಗೆ ಕೆಲಸಮಾಡುತ್ತದೆಂದು ಚೆನ್ನಾಗಿ ತಿಳಿದುಕೊಳ್ಳಬೇಕು

6 ನಾವು ಕಡೇ ದಿವಸಗಳ ಕೊನೇ ಗಳಿಗೆಯಲ್ಲಿ ಜೀವಿಸುತ್ತಿರುವ ಕಾರಣ ಯೆಹೋವನು ಹೇಳುವುದನ್ನೆಲ್ಲ ಮಾಡಲು ನಮ್ಮನ್ನೇ ಧಾರೆ ಎರೆಯಬೇಕು. ಇದಕ್ಕಾಗಿ ನಾವು ಯೆಹೋವನ ಸಂಘಟನೆಯು ಹೇಗೆ ಕೆಲಸಮಾಡುತ್ತದೆ, ನಾವದಕ್ಕೆ ಹೇಗೆ ಸಹಕಾರ ಕೊಡಬೇಕು ಎಂದು ಚೆನ್ನಾಗಿ ತಿಳಿದುಕೊಳ್ಳುವುದು ಅಗತ್ಯ. ಹಾಗೆ ಮಾಡಲು ಬೈಬಲ್‌ ನಮಗೆ ಸಹಾಯಮಾಡುತ್ತದೆ. ಏಕೆಂದರೆ ಈ ಸಂಘಟನೆಯು ಬೈಬಲಿನಲ್ಲಿರುವ ತತ್ವಗಳು, ಆಜ್ಞೆಗಳು, ನಿಯಮಗಳು ಮತ್ತು ಬೋಧನೆಗಳಿಗೆ ಅನುಸಾರವಾಗಿಯೇ ಕೆಲಸಮಾಡುತ್ತದೆ.—ಕೀರ್ತ. 19:7-9.

7 ಸಂಘಟನೆ ಕೊಡುವ ಎಲ್ಲ ನಿರ್ದೇಶನಗಳನ್ನು ನಾವು ಪಾಲಿಸುವುದರಿಂದ ನಮ್ಮಲ್ಲಿ ಒಗ್ಗಟ್ಟು, ಶಾಂತಿ, ಸಮಾಧಾನ ಇದೆ. (ಕೀರ್ತ. 133:1; ಯೆಶಾ. 60:17; ರೋಮ. 14:19) ನಾವು ಲೋಕದ ಬೇರೆ ಬೇರೆ ಕಡೆಗಳಲ್ಲಿ ಇದ್ದರೂ ನಮ್ಮ ಮಧ್ಯೆ ಆಪ್ತ ಬಾಂಧವ್ಯ ಇರಲು ಕಾರಣವೇನು? ಪ್ರೀತಿಯೇ. ನಾವೇನೇ ಮಾಡಿದರೂ ಪ್ರೀತಿಯಿಂದ ಮಾಡುತ್ತೇವೆ. (ಯೋಹಾ. 13:34, 35; ಕೊಲೊ. 3:14) ಹೀಗೆ ನಾವು ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗದ ಜೊತೆಜೊತೆಯಲ್ಲಿ ಸಾಗಲು ಆಗುತ್ತದೆ. ಇದೆಲ್ಲವು ಸಾಧ್ಯವಾಗಿರುವುದು ಯೆಹೋವನ ಅನುಗ್ರಹದಿಂದಲೇ.

ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗ

8 ಪ್ರವಾದಿಗಳಾದ ಯೆಶಾಯ, ಯೆಹೆಜ್ಕೇಲ, ದಾನಿಯೇಲರು ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗದ ದರ್ಶನವನ್ನು ನೋಡಿದರು. (ಯೆಶಾ., ಅಧ್ಯಾ. 6; ಯೆಹೆ., ಅಧ್ಯಾ. 1; ದಾನಿ. 7:9, 10) ಅಪೊಸ್ತಲ ಯೋಹಾನನು ಸಹ ಸಂಘಟನೆಯ ಸ್ವರ್ಗೀಯ ಭಾಗದ ಏರ್ಪಾಡುಗಳನ್ನು ದರ್ಶನದಲ್ಲಿ ನೋಡಿದನು. ಅವನು ಬರೆದ ಪ್ರಕಟನೆ ಪುಸ್ತಕದಲ್ಲಿ ಅದರ ಒಂದು ನಸುನೋಟವಿದೆ. ಆ ದರ್ಶನದಲ್ಲಿ ಯೆಹೋವನು ಭವ್ಯವಾದ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದನು. ಆತನ ಸುತ್ತಲೂ ಆತ್ಮಜೀವಿಗಳು ನಿಂತುಕೊಂಡು, “ಇದ್ದಾತನೂ ಇರುವಾತನೂ ಬರಲಿರುವಾತನೂ ಆಗಿರುವ ಸರ್ವಶಕ್ತ ದೇವರಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು” ಎಂದು ಘೋಷಿಸುತ್ತಿದ್ದರು. (ಪ್ರಕ. 4:8) ‘ಸಿಂಹಾಸನದ ಸಮೀಪದಲ್ಲಿ ಒಂದು ಕುರಿಮರಿ’ ನಿಂತಿತ್ತು. ಆ ಕುರಿಮರಿ ಯೇಸು ಕ್ರಿಸ್ತನು.—ಪ್ರಕ. 5:6, 13, 14; ಯೋಹಾ. 1:29.

9 ಯೆಹೋವನು ಸಿಂಹಾಸನದ ಮೇಲೆ ಕುಳಿತಿರುವುದು ಆತನೇ ಈ ಸಂಘಟನೆಯ ಮುಖ್ಯಸ್ಥ ಎಂದು ತೋರಿಸುತ್ತದೆ. ಆತನ ಬಗ್ಗೆ ಮತ್ತು ಆತನಿಗಿರುವ ಉನ್ನತ ಸ್ಥಾನದ ಬಗ್ಗೆ 1 ಪೂರ್ವಕಾಲವೃತ್ತಾಂತ 29:11, 12 ಹೀಗೆ ಹೇಳುತ್ತದೆ: ‘ಯೆಹೋವಾ! ಮಹಿಮೆ, ಪ್ರತಾಪ, ವೈಭವ, ಪರಾಕ್ರಮ-ಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ. ಪ್ರಭಾವ, ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ; ನೀನು ಸರ್ವಾಧಿಕಾರಿಯು; ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ; ಎಲ್ಲಾ ದೊಡ್ಡಸ್ತಿಕೆಗೂ ಶಕ್ತಿಗೂ ನೀನೇ ಮೂಲನು.’

10 ಯೆಹೋವನು ತನ್ನ ಜೊತೆಯಲ್ಲಿ ಕೆಲಸಮಾಡುವ ಯೇಸುವಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನ ಮತ್ತು ತುಂಬ ಅಧಿಕಾರವನ್ನು ಕೊಟ್ಟಿದ್ದಾನೆ. ದೇವರು “ಎಲ್ಲವನ್ನೂ [ಯೇಸುವಿನ] ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದನು ಮತ್ತು ಸಭೆಯ ಒಳಿತಿಗಾಗಿ ಅವನನ್ನು ಎಲ್ಲವುಗಳ ಮೇಲೆ ಶಿರಸ್ಸಾಗಿ ನೇಮಿಸಿದನು.” (ಎಫೆ. 1:22) ಅಪೊಸ್ತಲ ಪೌಲನು ಹೀಗೂ ಬರೆದಿದ್ದಾನೆ: ದೇವರು “[ಯೇಸುವನ್ನು] ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು. ಆದುದರಿಂದ ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ ನೆಲದ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಬೇಕು ಮತ್ತು ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನೇ ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಬಹಿರಂಗವಾಗಿ ಒಪ್ಪಿಕೊಳ್ಳಬೇಕು.” (ಫಿಲಿ. 2:9-11) ಯೇಸು ಕ್ರಿಸ್ತನಿಗೆ ಅಧಿಕಾರ ಕೊಟ್ಟಿರುವುದು ಯೆಹೋವನೇ ಆಗಿರುವುದರಿಂದ ಯೇಸುವು ನೀತಿಯಿಂದ ಕೆಲಸ ಮಾಡುತ್ತಾನೆ ಎಂಬ ಭರವಸೆ ನಮಗಿದೆ.

11 ಪ್ರವಾದಿ ದಾನಿಯೇಲನು ಒಂದು ದರ್ಶನದಲ್ಲಿ ಯೆಹೋವನು ಸ್ವರ್ಗದಲ್ಲಿ ಸಿಂಹಾಸನದ ಮೇಲೆ ಕೂತಿದ್ದನ್ನು ನೋಡಿದನು. ‘ಲಕ್ಷೋಪಲಕ್ಷ ದೂತರು ಆತನ ಸೇವೆ ಮಾಡುತ್ತಿದ್ದರು, ಕೋಟ್ಯನುಕೋಟಿ ದೂತರು ಆತನ ಮುಂದೆ ನಿಂತುಕೊಂಡಿದ್ದರು.’ (ದಾನಿ. 7:10) ಯಾರು ಈ ದೂತರು? ಇವರು ಪವಿತ್ರ ಸೇವೆ ಮಾಡುವ ಆತ್ಮಜೀವಿಗಳೂ ರಕ್ಷಣೆ ಹೊಂದಲಿರುವವರ ಸೇವೆ ಮಾಡುವವರೂ ಆಗಿದ್ದಾರೆ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 1:14) ಇದು ಏನು ತೋರಿಸುತ್ತದೆಂದರೆ ಯೆಹೋವನ ಸಂಘಟನೆಯಲ್ಲಿ ದೇವದೂತರಿಗೆ ಸಹ ಅವರದ್ದೇ ಆದ ಸ್ಥಾನ ಇದೆ.—ಕೊಲೊ. 1:16.

12 ಯೆಶಾಯನು ಕೂಡ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವನ್ನು ಒಂದು ದರ್ಶನದಲ್ಲಿ ನೋಡಿದನು. ಯೆಹೋವನು ‘ಉನ್ನತೋನ್ನತ ಸಿಂಹಾಸನದಲ್ಲಿ ಕೂತಿರುವುದನ್ನೂ ಆತನ ಸುತ್ತ ಸೆರಾಫಿಯರು ನಿಂತಿರುವುದನ್ನೂ’ ಯೆಶಾಯನು ನೋಡಿದನು. ಅದನ್ನು ನೋಡಿದ ತಕ್ಷಣ ಅವನು “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸುತುಟಿಯವನು, ಹೊಲಸುತುಟಿಯವರ ಮಧ್ಯದಲ್ಲಿ ವಾಸಿಸುವವನು; ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡವು” ಎಂದು ಕೂಗಿಕೊಂಡನು. ಯೆಶಾಯನು ಯಾಕೆ ಈ ರೀತಿ ಪ್ರತಿಕ್ರಿಯಿಸಿದನು? ಏಕೆಂದರೆ ಯೆಹೋವನ ಸಂಘಟನೆ ಎಷ್ಟು ಬೃಹತ್ತಾಗಿದೆ ಎಂದು ನೋಡಿ ಅವನು ಬೆರಗಾದನು. ಅದರ ಮುಂದೆ ತಾನೆಷ್ಟು ಅಲ್ಪನು ಎಂದು ಅವನಿಗೆ ಅರ್ಥವಾಯಿತು. ಈ ದರ್ಶನ ಅವನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ಜನರಿಗೆ ನ್ಯಾಯತೀರ್ಪನ್ನು ಯಾರು ಹೋಗಿ ತಿಳಿಸುವರು ಎಂದು ಯೆಹೋವನು ಕೇಳಿದಾಗ ಕೂಡಲೆ ಯೆಶಾಯನು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದನು.—ಯೆಶಾ. 6:1-5, 8.

13 ಯೆಹೋವನು ತನ್ನ ಸಂಘಟನೆಯನ್ನು ನಡೆಸುವ ವಿಧವನ್ನು ನಾವು ಅರ್ಥಮಾಡಿಕೊಂಡು ಆಳವಾಗಿ ಮಾನ್ಯಮಾಡುವಲ್ಲಿ ನಮಗೂ ಯೆಶಾಯನಂತೆಯೇ ಅನಿಸುವುದು. ಆಗ ನಾವು ವೇಗವಾಗಿ ಸಾಗುತ್ತಿರುವ ಯೆಹೋವನ ಸಂಘಟನೆಯ ಜೊತೆಜೊತೆಯಲ್ಲೇ ಮುಂದೆ ಸಾಗುವೆವು. ಆ ಸಂಘಟನೆಯಲ್ಲಿ ನಮಗೆ ಭರವಸೆಯಿದೆ ಎಂದು ನಮ್ಮ ಕಾರ್ಯಗಳಲ್ಲಿ ತೋರಿಸುವೆವು.

ಯೆಹೋವನ ಸಂಘಟನೆ ಮುಂದೆ ಸಾಗುತ್ತಿದೆ

14 ಪ್ರವಾದಿ ಯೆಹೆಜ್ಕೇಲ ನೋಡಿದ ದರ್ಶನವು ಯೆಹೆಜ್ಕೇಲ ಪುಸ್ತಕದ 1ನೇ ಅಧ್ಯಾಯದಲ್ಲಿದೆ. ಅದರಲ್ಲಿ ಯೆಹೋವನನ್ನು ಒಂದು ಅತಿ ದೊಡ್ಡ ಸ್ವರ್ಗೀಯ ರಥದ ಸವಾರನಾಗಿ ಚಿತ್ರಿಸಲಾಗಿದೆ. ಆ ಭವ್ಯ ರಥವು ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವನ್ನು ಸೂಚಿಸುತ್ತದೆ. ಯೆಹೋವನು ಆ ರಥದ ಸವಾರನಾಗಿ ಇರುವುದರ ಅರ್ಥವೇನೆಂದರೆ ಆತನು ತನ್ನ ಸಂಘಟನೆಯನ್ನು ತನ್ನ ಉದ್ದೇಶಕ್ಕೆ ಅನುಸಾರವಾಗಿ ಪ್ರೀತಿಯಿಂದ ಮಾರ್ಗದರ್ಶಿಸುತ್ತಾನೆ ಎಂದಾಗಿದೆ.—ಕೀರ್ತ. 103:20.

15 ಈ ರಥದ ಪ್ರತಿಯೊಂದು ಚಕ್ರದ ಒಳಗೆ ಇನ್ನೊಂದು ಚಕ್ರವಿತ್ತು. ಒಳಗಿನ ಚಕ್ರದ ಅಳತೆ ಹೊರಗಿನ ಚಕ್ರದಷ್ಟೇ. ಹಾಗಾಗಿ ಒಂದು ಚಕ್ರದ ಮಧ್ಯದಲ್ಲಿ ಇನ್ನೊಂದು ಚಕ್ರವನ್ನು ಅಡ್ಡವಾಗಿ ನುಸುಳಿಸಲು ಸಾಧ್ಯ. ಇದರಿಂದಾಗಿ ಚಕ್ರಗಳು “ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು.” (ಯೆಹೆ. 1:17) ಈ ಚಕ್ರಗಳು ಯಾವುದೇ ಕ್ಷಣದಲ್ಲಿ ತಮ್ಮ ದಿಕ್ಕನ್ನು ಬದಲಾಯಿಸಬಲ್ಲವು. ಅದರರ್ಥ ಅವುಗಳನ್ನು ಯಾರೂ ನಿಯಂತ್ರಿಸುವುದಿಲ್ಲ ಎಂದಾ? ಇಲ್ಲ, ತನ್ನ ಸಂಘಟನೆ ಹೇಗೆ ಬೇಕೋ ಹಾಗೆ ಚಲಿಸುವಂತೆ ಯೆಹೋವನು ಬಿಡುವುದಿಲ್ಲ. ಯೆಹೆಜ್ಕೇಲ 1:20 ಹೇಳುತ್ತದೆ: ಚಕ್ರಗಳು “ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು” ಅಂದರೆ ಯೆಹೋವನು ತನ್ನ ಸಂಘಟನೆಯನ್ನು ಪವಿತ್ರಾತ್ಮ ಶಕ್ತಿಯ ಮೂಲಕ ತಾನು ಬಯಸುವ ದಿಕ್ಕಿಗೆ ನಡೆಸುತ್ತಾನೆ. ಆದರೆ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ‘ನಾನು ಈ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೇನಾ?’

16 ನಾವು ಸಂಘಟನೆಯ ಜೊತೆಜೊತೆಗೆ ಸಾಗಬೇಕಾದರೆ ಕೇವಲ ಕೂಟಗಳಿಗೆ, ಸೇವೆಗೆ ಹೋದರಷ್ಟೇ ಸಾಕಾಗಲ್ಲ. ಯೆಹೋವನು ಕಲಿಸುವ ಎಲ್ಲ ವಿಷಯಗಳಿಗೆ ಅನುಸಾರ ನಡೆಯಬೇಕು. ‘ಹೆಚ್ಚು ಪ್ರಮುಖವಾದ ವಿಷಯಗಳಿಗೆ’ ಮೊದಲ ಸ್ಥಾನ ಕೊಡಬೇಕು. ಸಂಘಟನೆ ಕೊಡುತ್ತಿರುವ ಎಲ್ಲ ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇರಬೇಕು. (ಫಿಲಿ. 1:10; 4:8, 9; ಯೋಹಾ. 17:3) ನಮ್ಮನಮ್ಮಲ್ಲಿ ಸುವ್ಯವಸ್ಥೆ, ಸಹಕಾರ ಇರಬೇಕು. ಯೆಹೋವನು ನಮಗೆ ಕೊಟ್ಟಿರುವ ಸಮಯ, ಶಕ್ತಿ, ಕೌಶಲ, ಸಂಪತ್ತು ಎಲ್ಲವನ್ನೂ ಆತನ ಸೇವೆಯಲ್ಲಿ ಅತ್ಯುತ್ತಮವಾಗಿ ಬಳಸಬೇಕು. ಹೀಗೆ ಮಾಡುತ್ತಾ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗದ ಜೊತೆಜೊತೆಗೆ ಸಾಗುತ್ತಿದ್ದರೆ ನಮ್ಮ ಜೀವನವು ನಾವು ಸಾರುವ ಸಂದೇಶಕ್ಕೆ ತಕ್ಕಂತೆ ಇರುತ್ತದೆ.

17 ಯೆಹೋವನ ಸಂಘಟನೆ ನಮಗೆ ಸಹಾಯ ಮಾಡುತ್ತಿರುವುದರಿಂದ ನಾವು ಆತನ ಇಷ್ಟದ ಪ್ರಕಾರವೇ ನಡೆಯಲು ಆಗುತ್ತಿದೆ. ಸ್ವರ್ಗೀಯ ರಥವನ್ನು ನಡೆಸುತ್ತಿರುವುದು ಯೆಹೋವನು. ಆದ್ದರಿಂದ ಆ ರಥ ಎಷ್ಟು ವೇಗವಾಗಿ ಚಲಿಸುತ್ತಿದೆಯೋ ಅಷ್ಟೇ ವೇಗವಾಗಿ ನಾವು ಸಹ ಸಾಗುವ ಮೂಲಕ ಯೆಹೋವನ ಕಡೆಗೆ ನಮಗೆ ಗೌರವವಿದೆ, ಆತನಲ್ಲಿ ದೃಢ ಭರವಸೆಯಿದೆ ಎಂದು ತೋರಿಸಿಕೊಡುತ್ತೇವೆ. (ಕೀರ್ತ. 18:31) ಯೆಹೋವನು ತನ್ನ ಜನರಿಗೆ ‘ಬಲವನ್ನು, ಸುಕ್ಷೇಮವನ್ನು ಕೊಡುತ್ತೇನೆ’ ಎಂದು ಮಾತುಕೊಟ್ಟಿದ್ದಾನೆ. (ಕೀರ್ತ. 29:11) ಇಂದು ಆ ಮಾತುಗಳು ನಿಜವಾಗಿವೆ. ನಾವು ಆತನ ಸಂಘಟನೆಯ ಭಾಗವಾಗಿರುವುದರಿಂದ ಆತನಿಂದ ಬಲವನ್ನು ಪಡೆದುಕೊಳ್ಳುತ್ತಾ ಇದ್ದೇವೆ ಮತ್ತು ಸುಕ್ಷೇಮ ಅಂದರೆ ಶಾಂತಿಯನ್ನು ಅನುಭವಿಸುತ್ತಿದ್ದೇವೆ. ದೇವರ ಇಷ್ಟದಂತೆ ಮಾಡುತ್ತಾ ಇರುವುದಾದರೆ ಇಂದೂ ಎಂದೆಂದಿಗೂ ನಮಗೆ ಖಂಡಿತ ಅನೇಕಾನೇಕ ಆಶೀರ್ವಾದಗಳು ಸಿಗುತ್ತವೆ.