ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

ಸಭೆಯಲ್ಲಿ ಶಾಂತಿ ಮತ್ತು ಪವಿತ್ರತೆ ಕಾಪಾಡಿ

ಸಭೆಯಲ್ಲಿ ಶಾಂತಿ ಮತ್ತು ಪವಿತ್ರತೆ ಕಾಪಾಡಿ

ಬೈಬಲ್‌ ಮುಂತಿಳಿಸಿದಂತೆ ಇಂದು ಪ್ರತಿವರ್ಷ ಸಾವಿರಾರು ಜನರು ಸತ್ಯವನ್ನು ಸ್ವೀಕರಿಸಿ ಯೆಹೋವನ ಮಂದಿರಕ್ಕೆ ಬರುತ್ತಿದ್ದಾರೆ. (ಮೀಕ 4:1, 2) ಅವರನ್ನು ‘ದೇವರ ಸಭೆಗೆ’ ಸ್ವಾಗತಿಸಲು ನಮಗೆ ಬಹು ಆನಂದವಾಗುತ್ತದೆ. (ಅ. ಕಾ. 20:28) ನಮ್ಮ ಜೊತೆ ಯೆಹೋವನನ್ನು ಆರಾಧಿಸಲು ಅವರೂ ಸಂತೋಷಪಡುತ್ತಾರೆ. ದೇವಜನರಲ್ಲಿ ಮಾತ್ರ ಇರುವ ಪವಿತ್ರತೆ ಮತ್ತು ಶಾಂತಿಯನ್ನು ಅವರು ಸವಿಯುತ್ತಿದ್ದಾರೆ. ಈ ಶಾಂತಿ ಮತ್ತು ಪವಿತ್ರತೆಗೆ ದೇವರ ಪವಿತ್ರಾತ್ಮದ ಬೆಂಬಲ ಮತ್ತು ಬೈಬಲಿನ ವಿವೇಕದ ಸಲಹೆಗಳೇ ಕಾರಣ.—ಕೀರ್ತ. 119:105; ಜೆಕ. 4:6.

2 ನಾವು ಬೈಬಲ್‌ ಸಲಹೆಗಳನ್ನು ಜೀವನದಲ್ಲಿ ಅನ್ವಯಿಸುವ ಮೂಲಕ “ನೂತನ ವ್ಯಕ್ತಿತ್ವವನ್ನು” ಧರಿಸಿಕೊಳ್ಳುತ್ತೇವೆ. (ಕೊಲೊ. 3:10) ಚಿಕ್ಕಪುಟ್ಟ ಜಗಳ, ಮನಸ್ತಾಪಗಳನ್ನು ದೊಡ್ಡದು ಮಾಡದೆ ಬಿಟ್ಟುಬಿಡುತ್ತೇವೆ. ನಾವು ಎಲ್ಲರನ್ನು ಯೆಹೋವನು ನೋಡುವ ರೀತಿಯಲ್ಲಿ ನೋಡುವುದರಿಂದ ಲೋಕದವರಂತೆ ನಮ್ಮಲ್ಲಿ ಒಡಕಿಲ್ಲ. ಪ್ರಪಂಚದ ಬೇರೆಬೇರೆ ಸ್ಥಳಗಳಲ್ಲಿದ್ದರೂ ಒಂದೇ ಕುಟುಂಬದಂತೆ ಐಕ್ಯರಾಗಿದ್ದೇವೆ.—ಅ. ಕಾ. 10:34, 35.

3 ಆದರೆ ಕೆಲವೊಮ್ಮೆ ಸಭೆಯ ಶಾಂತಿ, ಐಕ್ಯಕ್ಕೆ ಬಿರುಕು ಬರಬಹುದು. ಅದಕ್ಕೇನು ಕಾರಣ? ನಾವು ಪಾಪಿಗಳು, ಅಪರಿಪೂರ್ಣರು ಆಗಿರುವುದರಿಂದ ಬೈಬಲಿನ ಸಲಹೆಗಳನ್ನು ಅನುಸರಿಸದೆ ಇರುವುದೇ ಮುಖ್ಯ ಕಾರಣ. (1 ಯೋಹಾ. 1:10) ಕೆಲವೊಮ್ಮೆ ನಾವು ತಪ್ಪು ಹೆಜ್ಜೆ ತಕ್ಕೊಳ್ಳುತ್ತೇವೆ. ಇದರಿಂದ ಸಭೆಯ ನೈತಿಕ ಅಥವಾ ಆಧ್ಯಾತ್ಮಿಕ ಶುದ್ಧತೆಗೆ ಕುಂದು ಬರುತ್ತದೆ. ಕೆಲವೊಮ್ಮೆ ಯೋಚಿಸದೆ ಏನೋ ಹೇಳಿಬಿಡುತ್ತೇವೆ ಅಥವಾ ಮಾಡಿಬಿಡುತ್ತೇವೆ ಇಲ್ಲವೆ ಇತರರ ಮಾತು, ನಡತೆಯಿಂದ ಎಡವುತ್ತೇವೆ. (ರೋಮ. 3:23) ಆಗ ನಾವು ವಿಷಯಗಳನ್ನು ಹೇಗೆ ಸರಿಪಡಿಸಬಹುದು?

4 ಸಭೆಯ ಶಾಂತಿ, ಐಕ್ಯಕ್ಕೆ ಮುಳ್ಳಾಗಬಹುದಾದ ಎಲ್ಲ ವಿಷಯಗಳು ಯೆಹೋವನಿಗೆ ಗೊತ್ತಿರುವುದರಿಂದ ಅವುಗಳನ್ನು ಹೇಗೆ ಬಗೆಹರಿಸಬೇಕೆಂದು ಬೈಬಲಿನಲ್ಲಿ ತಿಳಿಸಿದ್ದಾನೆ. ಜೊತೆಗೆ ಸಭೆಯನ್ನು ಆರೈಕೆಮಾಡುವ ಹಿರಿಯರ ಸಹಾಯವೂ ನಮಗಿದೆ. ಅವರು ಬೈಬಲಿನಿಂದ ಕೊಡುವ ಬುದ್ಧಿಮಾತನ್ನು ನಾವು ಪಾಲಿಸಿದರೆ ಜೊತೆ ಕ್ರೈಸ್ತರೊಂದಿಗೆ ಪುನಃ ಸ್ನೇಹವನ್ನು ಬೆಳೆಸಿಕೊಳ್ಳಬಹುದು. ಹೀಗೆ ಯೆಹೋವನ ಮೆಚ್ಚುಗೆಗೂ ಪಾತ್ರರಾಗಬಹುದು. ಒಂದುವೇಳೆ ನಾವು ಮಾಡಿದ ತಪ್ಪಿಗೆ ಹಿರಿಯರಿಂದ ಶಿಸ್ತು, ತಿದ್ದುಪಾಟು ಸಿಕ್ಕಿದರೆ ಆಗೇನು? ಈ ಮೂಲಕ ನಮ್ಮ ತಂದೆಯಾದ ಯೆಹೋವನು ನಮಗೆ ಪ್ರೀತಿ ತೋರಿಸುತ್ತಿದ್ದಾನೆ ಎನ್ನುವುದನ್ನು ಮರೆಯದಿರೋಣ.—ಜ್ಞಾನೋ. 3:11, 12; ಇಬ್ರಿ. 12:6.

ಚಿಕ್ಕಪುಟ್ಟ ಮನಸ್ತಾಪಗಳನ್ನು ಬಗೆಹರಿಸುವ ವಿಧ

5 ಕೆಲವೊಮ್ಮೆ ಸಹೋದರರ ಮಧ್ಯೆ ಚಿಕ್ಕಪುಟ್ಟ ಮನಸ್ತಾಪ, ಜಗಳ ಆಗಬಹುದು. ಆಗ ಅದನ್ನು ಕೂಡಲೇ ಕ್ರೈಸ್ತ ಪ್ರೀತಿಯಿಂದ ಬಗೆಹರಿಸಬೇಕು. (ಎಫೆ. 4:26; ಫಿಲಿ. 2:2-4; ಕೊಲೊ. 3:12-14) ಏನಾದರೂ ಮನಸ್ತಾಪವಾಗಿರುವಲ್ಲಿ ಅಪೊಸ್ತಲ ಪೇತ್ರನ ಈ ಸಲಹೆ ಪಾಲಿಸಿ: “ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ನಾವೆಲ್ಲರೂ “ಅನೇಕ ಬಾರಿ ಎಡವುತ್ತೇವೆ.” (ಯಾಕೋ. 3:2) ಹಾಗಾಗಿ ಸುವರ್ಣ ನಿಯಮವನ್ನು ಪಾಲಿಸಬೇಕು ಅಂದರೆ ನಾವು ಇತರರ ಮನಸ್ಸು ನೋಯಿಸಿದಾಗ ಅವರು ನಮ್ಮನ್ನು ಮನ್ನಿಸಬೇಕೆಂದು ಹೇಗೆ ಬಯಸುತ್ತೇವೋ ಅದೇರೀತಿ ನಾವು ಅವರನ್ನು ಮನ್ನಿಸಿ ವಿಷಯವನ್ನು ಮರೆತುಬಿಡಬೇಕು.—ಮತ್ತಾ. 6:14, 15; 7:12.

6 ನೀವು ಆಡಿದ ಮಾತಿನಿಂದ ಅಥವಾ ಮಾಡಿದ ವಿಷಯದಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗಿದೆಯೆಂದು ನಿಮಗನಿಸಿದರೆ ನೀವೇ ಮೊದಲ ಹೆಜ್ಜೆ ತಕ್ಕೊಂಡು ಕೂಡಲೆ ಅದನ್ನು ಸರಿಪಡಿಸಿ. ಇಲ್ಲದಿದ್ದರೆ ಯೆಹೋವನೊಟ್ಟಿಗಿರುವ ನಿಮ್ಮ ಸಂಬಂಧ ಹಾಳಾಗುತ್ತದೆ. ಯೇಸು ತನ್ನ ಶಿಷ್ಯರಿಗೆ, “ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು” ಎಂದು ಬುದ್ಧಿಹೇಳಿದನು. (ಮತ್ತಾ. 5:23, 24) ನಿಮ್ಮ ಮತ್ತು ಇನ್ನೊಬ್ಬ ವ್ಯಕ್ತಿಯ ಮಧ್ಯೆ ತಪ್ಪರ್ಥವಾಗಿದ್ದರೆ ಮನಬಿಚ್ಚಿ ಮಾತಾಡಿ. ಸಭೆಯಲ್ಲಿರುವ ಎಲ್ಲರೂ ಹೀಗೆ ಮಾಡಿದರೆ ತಪ್ಪರ್ಥಗಳು ಕಡಿಮೆಯಾಗುತ್ತವೆ ಮತ್ತು ಅಪರಿಪೂರ್ಣತೆಯಿಂದಾಗುವ ಸಮಸ್ಯೆಗಳನ್ನು ನಿಭಾಯಿಸಲು ಸುಲಭವಾಗುತ್ತದೆ.

ಹಿರಿಯರಿಂದ ಬೈಬಲ್‌ ಸಲಹೆ

7 ಕೆಲವೊಮ್ಮೆ ಒಬ್ಬ ವ್ಯಕ್ತಿಯ ಯೋಚನಾರೀತಿಯನ್ನು ಸರಿಮಾಡಲು ಹಿರಿಯರು ಸಲಹೆ ಬುದ್ಧಿವಾದ ಕೊಡಬೇಕಾಗಬಹುದು. ಇದು ಸುಲಭದ ಕೆಲಸವಲ್ಲವಾದರೂ ಅಪೊಸ್ತಲ ಪೌಲನು ಗಲಾತ್ಯದ ಕ್ರೈಸ್ತರಿಗೆ ಬರೆದ ಈ ಮಾತನ್ನು ಹಿರಿಯರು ನೆನಪಿನಲ್ಲಿಡಬೇಕು: “ಸಹೋದರರೇ, ಒಬ್ಬ ಮನುಷ್ಯನು ತನಗೆ ಅರಿವಿಲ್ಲದೆಯೇ ಯಾವುದೋ ತಪ್ಪುಹೆಜ್ಜೆಯನ್ನು ಇಡುವುದಾದರೆ, ಆಧ್ಯಾತ್ಮಿಕ ಅರ್ಹತೆಗಳಿರುವವರಾದ ನೀವು ಅಂಥ ವ್ಯಕ್ತಿಯನ್ನು ಸೌಮ್ಯಭಾವದಿಂದ ಸರಿಹೊಂದಿಸಲು ಪ್ರಯತ್ನಿಸಿರಿ.”—ಗಲಾ. 6:1.

8 ಹಿರಿಯರು ಸಭೆಯನ್ನು ಪ್ರೀತಿಯಿಂದ ಆರೈಕೆ ಮಾಡುವ ಮೂಲಕ ಯಾರೂ ಯೆಹೋವನಿಂದ ದೂರಹೋಗದಂತೆ ನೋಡಿಕೊಳ್ಳುತ್ತಾರೆ. ಮಾತ್ರವಲ್ಲ ಗಂಭೀರ ಸಮಸ್ಯೆಗಳಾಗದಂತೆ ನೋಡಿಕೊಳ್ಳಲೂ ಆಗುತ್ತದೆ. ಯೆಹೋವನು ಹೇಳಿದ ಈ ಮಾತಿನಂತಿರಲು ಹಿರಿಯರು ಶ್ರಮಿಸುತ್ತಾರೆ: “ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.”—ಯೆಶಾ. 32:2.

ಅಕ್ರಮವಾಗಿ ನಡೆಯುವವರನ್ನು ಗುರುತಿಸಿ

9 ಕ್ರೈಸ್ತ ಸಭೆಯ ಮೇಲೆ ಕೆಟ್ಟ ಪ್ರಭಾವ ಬೀರಬಲ್ಲ ವ್ಯಕ್ತಿಗಳ ಬಗ್ಗೆ ಎಚ್ಚರಿಸುತ್ತಾ ಪೌಲನು ಹೀಗಂದನು: ‘ನೀವು ನಮ್ಮಿಂದ ಹೊಂದಿದ ಬೋಧನೆಗಳಿಗೆ ಅನುಸಾರ ನಡೆಯದೆ ಅಕ್ರಮವಾಗಿ ನಡೆಯುತ್ತಿರುವ ಪ್ರತಿಯೊಬ್ಬ ಸಹೋದರನಿಂದ ದೂರವಾಗಿರಬೇಕೆಂದು ನಾವು ಆಜ್ಞಾಪಿಸುತ್ತೇವೆ.’ ಈ ವಿಷಯವನ್ನು ಇನ್ನೂ ಸ್ಪಷ್ಟಗೊಳಿಸುತ್ತಾ ಅವನಂದದ್ದು: “ನಾವು ಈ ಪತ್ರದ ಮೂಲಕ ತಿಳಿಸಿದ ಮಾತಿಗೆ ಯಾವನಾದರೂ ವಿಧೇಯನಾಗದಿರುವುದಾದರೆ ಅವನನ್ನು ಗುರುತಿಸಲ್ಪಟ್ಟವನಾಗಿ ಇಟ್ಟು, ಅವನಿಗೆ ನಾಚಿಕೆಯಾಗುವಂತೆ ಅವನೊಂದಿಗೆ ಸಹವಾಸಮಾಡುವುದನ್ನು ನಿಲ್ಲಿಸಿರಿ. ಆದರೂ ಅವನನ್ನು ಒಬ್ಬ ವೈರಿಯಾಗಿ ಎಣಿಸದೆ, ಒಬ್ಬ ಸಹೋದರನೆಂದು ನೆನಸಿ ಬುದ್ಧಿಹೇಳುತ್ತಾ ಇರಿ.”—2 ಥೆಸ. 3:6, 14, 15.

10 ಒಬ್ಬನು ಸಭೆಯಿಂದ ಬಹಿಷ್ಕಾರವಾಗುವಷ್ಟು ಗಂಭೀರ ತಪ್ಪು ಮಾಡಿರಲಿಕ್ಕಿಲ್ಲವಾದರೂ ಕ್ರೈಸ್ತರು ಪಾಲಿಸಲೇಬೇಕಾದ ನೀತಿಯ ಮಟ್ಟಗಳನ್ನು ಬೇಕುಬೇಕೆಂದು ಅಸಡ್ಡೆ ಮಾಡುತ್ತಿರಬಹುದು. ಉದಾಹರಣೆಗೆ: ತೀರಾ ಸೋಮಾರಿಯಾಗಿರುವುದು, ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವುದು, ತುಂಬ ಕೊಳಕಾಗಿರುವುದು, ‘ತನಗೆ ಸಂಬಂಧಿಸದ ವಿಚಾರಗಳಲ್ಲಿ ತಲೆಹಾಕುವುದು.’ (2 ಥೆಸ. 3:11) ಬೇರೆಯವರಿಂದ ಲಾಭ ಪಡೆಯಲು ಕುತಂತ್ರಗಳನ್ನು ನಡೆಸುವುದು, ಯೋಗ್ಯವಲ್ಲದ ಮನರಂಜನೆ ಆನಂದಿಸುವುದು ಇತ್ಯಾದಿ. ಇಂಥ ‘ಅಕ್ರಮವಾದ’ ನಡತೆ ಸಭೆಗೆ ಕೆಟ್ಟ ಹೆಸರು ತರುವಷ್ಟು ಗಂಭೀರವಾಗಿದೆ. ಅಲ್ಲದೆ ಸಭೆಯಲ್ಲಿರುವ ಇತರರೂ ಹಾಗೇ ಮಾಡಲು ಶುರುಮಾಡಬಹುದು.

11 ಅಕ್ರಮವಾಗಿ ನಡೆಯುವವನಿಗೆ ಹಿರಿಯರು ಹೇಗೆ ಸಹಾಯಮಾಡಬೇಕು? ಮೊದಲು ಅವನಿಗೆ ಬೈಬಲನ್ನು ಉಪಯೋಗಿಸಿ ಬುದ್ಧಿ ಹೇಳಬೇಕು. ನಂತರವೂ ಅವನು ಮಾಡುವುದನ್ನೇ ಮಾಡುತ್ತಿದ್ದರೆ ಪದೇಪದೇ ಬುದ್ಧಿಹೇಳಬೇಕು. ಆಗಲೂ ಅವನು ಬದಲಾಗದಿದ್ದರೆ ಹಿರಿಯರು ಸಭೆಗೆ ಒಂದು ಎಚ್ಚರಿಕೆಯ ಭಾಷಣ ಕೊಡಲು ನಿರ್ಣಯಿಸಬಹುದು. ಆ ಸನ್ನಿವೇಶ ಎಷ್ಟು ಗಂಭೀರ ಮತ್ತು ಅದು ಸಭೆಯಲ್ಲಿರುವ ಇತರರನ್ನು ಎಷ್ಟು ಪ್ರಭಾವಿಸುತ್ತದೆ ಎಂದು ನೋಡಿ ಭಾಷಣ ಕೊಡಬೇಕಾ ಬೇಡವಾ ಎಂದು ವಿವೇಚನೆಯಿಂದ ನಿರ್ಣಯಿಸಬೇಕು. ಭಾಷಣ ಕೊಡುವ ಸಹೋದರನು ಅಕ್ರಮವಾಗಿ ನಡೆಯುವ ವ್ಯಕ್ತಿಯ ಹೆಸರನ್ನು ಹೇಳದೆ ಆ ನಡತೆಯು ಯಾಕೆ ತಪ್ಪೆಂದು ಬೈಬಲಿನಿಂದ ವಿವರಿಸಬೇಕು. ಇದರಿಂದ ಆ ಸನ್ನಿವೇಶದ ಬಗ್ಗೆ ಗೊತ್ತಿರುವವರು ಆ ವ್ಯಕ್ತಿಯೊಟ್ಟಿಗೆ ಬೇರೆ ಚಟುವಟಿಕೆಗಳಲ್ಲಿ ಸಮಯ ಕಳೆಯದೆ ಕೂಟಗಳಲ್ಲಿ ಮಾತ್ರ ಸಹವಾಸ ಮಾಡುತ್ತಾ ‘ಸಹೋದರನೆಂದು ನೆನಸಿ’ ತಿದ್ದಲು ಆಗುತ್ತದೆ.

12 ಸಭೆಯ ನಂಬಿಗಸ್ತ ಸದಸ್ಯರು ಈ ರೀತಿ ದೃಢ ಹೆಜ್ಜೆ ತೆಗೆದುಕೊಂಡಾಗ ಅಕ್ರಮವಾಗಿ ನಡೆಯುವ ವ್ಯಕ್ತಿಗೆ ತಾನು ಮಾಡುತ್ತಿರುವ ತಪ್ಪಿನಿಂದ ನಾಚಿಕೆಯಾಗಬಹುದು ಮತ್ತು ತನ್ನನ್ನು ತಿದ್ದಿಕೊಳ್ಳಬಹುದು. ಅವನು ನಿಜವಾಗಿ ಬದಲಾಗಿದ್ದಾನೆ, ತಪ್ಪು ನಡತೆಯನ್ನು ಬಿಟ್ಟಿದ್ದಾನೆ ಎಂದು ಸ್ಪಷ್ಟವಾದಾಗ ಅವನನ್ನು ಅಕ್ರಮ ವ್ಯಕ್ತಿಯಂತೆ ನೋಡಬೇಕಾಗಿಲ್ಲ.

ಕೆಲವು ಗಂಭೀರ ತಪ್ಪುಗಳನ್ನು ನಾವು ಬಗೆಹರಿಸುವ ವಿಧ

13 ಬೇರೆಯವರ ತಪ್ಪನ್ನು ನಾವು ಕ್ಷಮಿಸಿ ಮರೆತುಬಿಡುತ್ತೇವೆ. ಹಾಗಂತ ಅವರ ತಪ್ಪಿಂದ ನಮಗೇನೂ ನೋವಾಗಿಲ್ಲ, ಅವರು ಮಾಡಿದ್ದು ಸರಿಯೆಂದು ನಾವು ಒಪ್ಪಿಕೊಳ್ಳುತ್ತೇವೆ ಅಂತಲ್ಲ. ಎಲ್ಲ ತಪ್ಪುಗಳಿಗೆ ಯಾವಾಗಲೂ ಅಪರಿಪೂರ್ಣತೆ ಕಾರಣವಾಗಿರುವುದಿಲ್ಲ. ಗಂಭೀರ ತಪ್ಪುಗಳನ್ನು ಹಾಗೇ ಬಿಡುವುದು ಸಹ ಸರಿಯಲ್ಲ. (ಯಾಜ. 19:17; ಕೀರ್ತ. 141:5) ಧರ್ಮಶಾಸ್ತ್ರದಲ್ಲೂ ಕೆಲವು ತಪ್ಪುಗಳನ್ನು ಇತರ ತಪ್ಪುಗಳಿಗಿಂತ ಗಂಭೀರವೆಂದು ಹೇಳಲಾಗಿತ್ತು. ಇಂದು ಕೂಡ ಕೆಲವು ತಪ್ಪುಗಳು ಗಂಭೀರವಾಗಿವೆ.—1 ಯೋಹಾ. 5:16,17.

14 ಇಂಥ ಸಮಸ್ಯೆಗಳನ್ನು ಬಗೆಹರಿಸಲು ಯೇಸು ಒಂದು ವಿಧಾನವನ್ನು ಹಂತಹಂತವಾಗಿ ತಿಳಿಸಿದ್ದಾನೆ. ಅದು ಹೀಗಿದೆ: “ನಿನ್ನ ಸಹೋದರನು ಪಾಪಮಾಡಿದರೆ, [1] ನೀನು ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಆದರೆ ಅವನು ನಿನ್ನ ಮಾತಿಗೆ ಕಿವಿಗೊಡದಿದ್ದರೆ, [2] ಇಬ್ಬರು ಅಥವಾ ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ವಿಷಯವು ಸ್ಥಾಪಿಸಲ್ಪಡಲಿಕ್ಕಾಗಿ ನಿನ್ನೊಂದಿಗೆ ಇನ್ನೂ ಒಬ್ಬನನ್ನು ಅಥವಾ ಇಬ್ಬರನ್ನು ಕರೆದುಕೊಂಡು ಹೋಗು. ಅವನು ಅವರ ಮಾತಿಗೆ ಕಿವಿಗೊಡದೆ ಹೋದರೆ [3] ಸಭೆಗೆ ತಿಳಿಸು. ಅವನು ಸಭೆಯ ಮಾತಿಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯಜನಾಂಗದವನಂತೆಯೂ ತೆರಿಗೆ ವಸೂಲಿಮಾಡುವವನಂತೆಯೂ ಇರಲಿ.”—ಮತ್ತಾ. 18:15-17.

15 ಇದನ್ನು ತಿಳಿಸಿದ ನಂತರ ಯೇಸು ಒಂದು ದೃಷ್ಟಾಂತ ಹೇಳಿದನು. (ಮತ್ತಾ. 18:23-35) ಅದು ಸಾಲವನ್ನು ತೀರಿಸದಿದ್ದ ವ್ಯಕ್ತಿಯ ಕುರಿತಾಗಿದೆ. ಹಾಗಾಗಿ ಮತ್ತಾಯ 18:15-17 ರಲ್ಲಿ ಯೇಸು ಹೇಳಿರುವ ಪಾಪವು ಸಾಲ ತೀರಿಸದಿರುವುದು, ದುಡ್ಡಿನ ಅಥವಾ ಆಸ್ತಿಯ ವಿಷಯದಲ್ಲಿ ಮೋಸಮಾಡುವುದು, ಒಬ್ಬರ ಹೆಸರನ್ನು ಹಾಳುಮಾಡುವಂಥ ರೀತಿಯಲ್ಲಿ ಕೆಟ್ಟದಾಗಿ ಮಾತಾಡುವುದು ಆಗಿರಬಹುದು.

16 ಇಂಥ ಪಾಪವನ್ನು ಸಭೆಯಲ್ಲಿರುವ ಒಬ್ಬರು ನಿಮ್ಮ ವಿರುದ್ಧ ಮಾಡಿದ್ದಾರೆಂದು ನೆನಸಿ. ಅದಕ್ಕೆ ನಿಮ್ಮ ಹತ್ತಿರ ಆಧಾರವೂ ಇದೆ. ಆಗ ನೀವು ಕೂಡಲೇ ಹಿರಿಯರ ಬಳಿ ಹೋಗಿ ವಿಷಯ ಸರಿಪಡಿಸುವಂತೆ ಕೇಳಿಕೊಳ್ಳುತ್ತೀರಾ? ಹಾಗೆ ಮಾಡಲು ಯೇಸು ಹೇಳಲಿಲ್ಲ. ಬದಲಿಗೆ ತಪ್ಪುಮಾಡಿದವನ ಬಳಿ ಮೊದಲು ನೀವು ಮಾತಾಡಬೇಕೆಂದು ಹೇಳಿದನು. ಆದ್ದರಿಂದ ನಿಮ್ಮಿಬ್ಬರಲ್ಲೇ ಅದನ್ನು ಸರಿಪಡಿಸಲು ಪ್ರಯತ್ನಿಸಿ. ಆ ವ್ಯಕ್ತಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಲಿಲ್ಲವಾದರೆ ಏನು ಮಾಡಬೇಕು? ‘ಒಂದೇ ಸಾರಿ ಹೋಗಿ ಅವನ ತಪ್ಪನ್ನು ತಿಳಿಸು’ ಅಂತ ಯೇಸು ಹೇಳಲಿಲ್ಲ. ಹಾಗಾಗಿ ಸ್ವಲ್ಪ ಸಮಯದ ನಂತರ ಮತ್ತೆ ಹೋಗಿ ಮಾತಾಡಿ. ಆಗ ವಿಷಯ ಸರಿಯಾದರೆ, ನೀವು ಅವನ ತಪ್ಪನ್ನು ಇತರರಿಗೆ ಹೇಳದೆ ಸಭೆಯಲ್ಲಿ ಅವನ ಹೆಸರನ್ನು ಕಾಪಾಡಿದ್ದಕ್ಕಾಗಿ ಆ ವ್ಯಕ್ತಿಗೂ ಖುಷಿಯಾಗುತ್ತದೆ. ಹೀಗೆ ‘ನೀವು ನಿಮ್ಮ ಸಹೋದರನನ್ನು ಸಂಪಾದಿಸಿಕೊಳ್ಳುತ್ತೀರಿ.’

17 ತಪ್ಪು ಮಾಡಿದವನು ತನ್ನ ತಪ್ಪನ್ನು ಒಪ್ಪಿ, ಕ್ಷಮೆ ಕೇಳಿ, ತಪ್ಪನ್ನು ಸರಿಪಡಿಸಲು ಹೆಜ್ಜೆ ತಕ್ಕೊಳ್ಳುವಲ್ಲಿ ನೀವದನ್ನು ಅಲ್ಲಿಗೆ ಬಿಟ್ಟುಬಿಡುವುದು ಒಳ್ಳೇದು. ತಪ್ಪು ಗಂಭೀರವಾದರೂ ಅದನ್ನು ನಿಮ್ಮಿಬ್ಬರಲ್ಲೇ ಸರಿಪಡಿಸಬಹುದು.

18 ಆಗಲೂ ವಿಷಯ ಬಗೆಹರಿಯದಿದ್ದರೆ ಯೇಸು ಹೇಳಿದ ಎರಡನೇ ಹೆಜ್ಜೆ ತಕ್ಕೊಳ್ಳಿ. ‘ನಿಮ್ಮೊಂದಿಗೆ ಇನ್ನೂ ಒಬ್ಬನನ್ನು ಅಥವಾ ಇಬ್ಬರನ್ನು ಕರೆದುಕೊಂಡು ಹೋಗಿ’ ಪುನಃ ಆ ಸಹೋದರನ ಹತ್ತಿರ ಮಾತಾಡಿ. ನೀವು ಯಾರನ್ನು ಕರೆದುಕೊಂಡು ಹೋಗುತ್ತೀರೋ ಅವರಿಗೂ ಆ ‘ಸಹೋದರನನ್ನು ಸಂಪಾದಿಸುವ’ ಉದ್ದೇಶವಿರಬೇಕು. ಅವರು ತಪ್ಪನ್ನು ಕಣ್ಣಾರೆ ಕಂಡವರಾಗಿದ್ದರೆ ಒಳ್ಳೇದು. ಅಂಥವರು ಇಲ್ಲದಿದ್ದರೆ ನೀವು ಮಾತಾಡುವಾಗ ಸಾಕ್ಷಿಗಳಾಗಿ ಇರುವಂತೆ ಒಬ್ಬಿಬ್ಬರನ್ನು ಕರೆದುಕೊಂಡು ಹೋಗಬಹುದು. ಅವರು ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರು ಹಾಗೂ ನಡೆದಿರುವುದು ನಿಜಕ್ಕೂ ತಪ್ಪಾ ಅಲ್ಲವಾ ಎಂದು ಗ್ರಹಿಸುವವರು ಆಗಿರಬೇಕು. ಒಂದುವೇಳೆ ನೀವು ಹಿರಿಯರನ್ನು ಕರೆದುಕೊಂಡು ಹೋಗುವಲ್ಲಿ ಅವರು ಸಭೆಯನ್ನು ಪ್ರತಿನಿಧಿಸುವುದಿಲ್ಲ ಎಂದು ನೆನಪಿಡಿ. ಏಕೆಂದರೆ ಅವರು ಹಿರಿಯರ ಮಂಡಲಿಯಿಂದ ಈ ನೇಮಕವನ್ನು ಪಡೆದಿರುವುದಿಲ್ಲ.

19 ಈ ಎರಡೂ ಹೆಜ್ಜೆಗಳನ್ನು ತೆಗೆದುಕೊಂಡ ಮೇಲೂ ಸಮಸ್ಯೆ ಬಗೆಹರಿಯಲಿಲ್ಲ ಮತ್ತು ಅದನ್ನು ಬಿಟ್ಟುಬಿಡಲು ನಿಮಗೂ ಆಗುತ್ತಿಲ್ಲವಾದರೆ ಏನು ಮಾಡಬೇಕು? ಯೇಸು ಹೇಳಿದಂತೆ “ಸಭೆಗೆ” ಅಂದರೆ ಸಭೆಯ ಹಿರಿಯರಿಗೆ ಆ ವಿಷಯ ತಿಳಿಸಿ. ಸಭೆಯ ಶಾಂತಿ, ಪವಿತ್ರತೆಯನ್ನು ಕಾಪಾಡುವುದೇ ಹಿರಿಯರ ಉದ್ದೇಶ ಎನ್ನುವುದನ್ನು ಮರೆಯಬೇಡಿ. ವಿಷಯವನ್ನು ತಿಳಿಸಿದ ಮೇಲೆ ಅದನ್ನು ಸಂಪೂರ್ಣವಾಗಿ ಅವರಿಗೆ ಬಿಟ್ಟುಬಿಡಿ, ಯೆಹೋವನಲ್ಲಿ ಭರವಸೆಯಿಡಿ. ತಪ್ಪುಮಾಡಿದವನ ನಡತೆಯಿಂದಾಗಿ ನೀವು ಯೆಹೋವನಿಂದ ದೂರಹೋಗಬೇಡಿ, ಆತನ ಸೇವೆಯಲ್ಲಿ ಸಂತೋಷ ಕಳಕೊಳ್ಳಬೇಡಿ.—ಕೀರ್ತ. 119:165.

20 ಹಿರಿಯರು ವಿಷಯವನ್ನು ಪೂರ್ಣವಾಗಿ ಪರಿಶೀಲಿಸುತ್ತಾರೆ. ಆ ಸಹೋದರನು ನಿಮ್ಮ ವಿರುದ್ಧ ಗಂಭೀರ ತಪ್ಪು ಮಾಡಿದ್ದು ನಿಜವೆಂದು ತಿಳಿದುಬಂದರೆ ಮತ್ತು ಅವನು ಪಶ್ಚಾತ್ತಾಪಪಡದಿದ್ದರೆ, ತಪ್ಪನ್ನು ಸರಿಪಡಿಸಲು ತಕ್ಕಮಟ್ಟಿಗೆ ಹೆಜ್ಜೆಗಳನ್ನು ತಕ್ಕೊಳ್ಳಲು ಒಪ್ಪದಿದ್ದರೆ ಹಿರಿಯರ ಒಂದು ಸಮಿತಿಯು ಅವನನ್ನು ಸಭೆಯಿಂದ ಬಹಿಷ್ಕರಿಸುವ ನಿರ್ಧಾರ ಮಾಡಬೇಕಾಗಬಹುದು. ಹೀಗೆ ಅವರು ಸಭೆಯನ್ನು ಸಂರಕ್ಷಿಸುತ್ತಾರೆ ಮತ್ತು ಶುದ್ಧವಾಗಿಡುತ್ತಾರೆ.—ಮತ್ತಾ. 18:17.

ಗಂಭೀರ ತಪ್ಪುಗಳನ್ನು ಹಿರಿಯರು ಬಗೆಹರಿಸುವ ವಿಧ

21 ಲೈಂಗಿಕ ಅನೈತಿಕತೆ, ವ್ಯಭಿಚಾರ, ಸಲಿಂಗಕಾಮ, ದೇವದೂಷಣೆ, ಧರ್ಮಭ್ರಷ್ಟತೆ, ವಿಗ್ರಹಾರಾಧನೆ ಇಂಥ ಗಂಭೀರ ಪಾಪಗಳನ್ನು ಕ್ಷಮಿಸಿಬಿಟ್ಟರಷ್ಟೇ ಸಾಲದು. (1 ಕೊರಿಂ. 6:9, 10; ಗಲಾ. 5:19-21) ಅಂಥ ತಪ್ಪುಗಳು ಸಭೆಯ ಪವಿತ್ರತೆಯನ್ನು ಕೆಡಿಸಸಾಧ್ಯವಿದೆ. ಹಾಗಾಗಿ ಅವುಗಳನ್ನು ಹಿರಿಯರ ಗಮನಕ್ಕೆ ತರಬೇಕು ಮತ್ತು ಅವರದನ್ನು ನಿರ್ವಹಿಸಬೇಕು. (1 ಕೊರಿಂ. 5:6; ಯಾಕೋ. 5:14, 15) ಕೆಲವೊಮ್ಮೆ ತಪ್ಪು ಮಾಡಿದವರೇ ಹಿರಿಯರ ಬಳಿ ಹೋಗಿ ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಇಲ್ಲವೆ ತಪ್ಪು ನಡೆದ ಬಗ್ಗೆ ತಿಳಿದವರು ಹಿರಿಯರಿಗೆ ಹೇಳುತ್ತಾರೆ. (ಯಾಜ. 5:1; ಯಾಕೋ. 5:16) ಅದು ಹೇಗೇ ತಿಳಿದುಬರಲಿ ದೀಕ್ಷಾಸ್ನಾನ ಪಡೆದ ವ್ಯಕ್ತಿಯ ಕುರಿತು ಇಂಥ ವರದಿ ಸಿಕ್ಕಿದಾಕ್ಷಣ ಆ ತಪ್ಪು ನಿಜವಾಗಿ ನಡೆದಿದೆಯಾ ಎಂದು ಇಬ್ಬರು ಹಿರಿಯರು ಪರಿಶೀಲಿಸಬೇಕು. ಅದು ನಿಜವಾಗಿದ್ದು ಅದಕ್ಕೆ ಆಧಾರಗಳಿದ್ದರೆ ಅದನ್ನು ನಿರ್ವಹಿಸಲು ಹಿರಿಯರ ಮಂಡಲಿಯು ನ್ಯಾಯನಿರ್ಣಾಯಕ ಸಮಿತಿಯನ್ನು ನೇಮಿಸಬೇಕು. ಈ ಸಮಿತಿಯಲ್ಲಿ ಕಡಿಮೆಪಕ್ಷ ಮೂವರು ಹಿರಿಯರಿರಬೇಕು.

22 ಹಿರಿಯರಿಗೆ ಸಭೆಯ ಬಗ್ಗೆ ತುಂಬ ಕಾಳಜಿಯಿದೆ. ಹಾಗಾಗಿ ಯಾವುದೇ ಗಂಭೀರ ಸಮಸ್ಯೆಯಿಂದಾಗಿ ಸಭೆಯ ಸದಸ್ಯರು ಯೆಹೋವನಿಂದ ದೂರವಾಗದಂತೆ ಅವರು ಕಾಪಾಡುತ್ತಾರೆ. ಬೈಬಲನ್ನು ಕೌಶಲದಿಂದ ಬಳಸಿ ತಪ್ಪು ಮಾಡಿದವನನ್ನು ತಿದ್ದುತ್ತಾರೆ, ಅವನು ಯೆಹೋವನೊಂದಿಗೆ ಪುನಃ ಒಳ್ಳೇ ಸಂಬಂಧಕ್ಕೆ ಬರಲು ನೆರವಾಗುತ್ತಾರೆ. (ಯೂದ 21-23) ಪೌಲನು ತಿಮೊಥೆಯನಿಗೆ ಕೊಟ್ಟ ಈ ಸೂಚನೆಯನ್ನು ಅವರು ಪಾಲಿಸುತ್ತಾರೆ: “ದೇವರ ಮುಂದೆಯೂ ಜೀವಿತರಿಗೂ ಸತ್ತವರಿಗೂ ನ್ಯಾಯತೀರಿಸಲು ನೇಮಿಸಲ್ಪಟ್ಟಿರುವ ಕ್ರಿಸ್ತ ಯೇಸುವಿನ ಮುಂದೆಯೂ . . . ನಾನು ನಿನಗೆ ಗಂಭೀರವಾಗಿ ಆಜ್ಞಾಪಿಸುವುದೇನೆಂದರೆ . . . ಪೂರ್ಣ ದೀರ್ಘ ಸಹನೆಯಿಂದಲೂ ಬೋಧಿಸುವ ಕಲೆಯಿಂದಲೂ ಖಂಡಿಸು, ಗದರಿಸು ಮತ್ತು ಬುದ್ಧಿಹೇಳು.” (2 ತಿಮೊ. 4:1, 2) ಹಿರಿಯರಿಗೆ ಇದು ಸುಲಭದ ಕೆಲಸವಲ್ಲ. ತುಂಬ ಸಮಯ, ಶ್ರಮ ಬೇಕಾಗುತ್ತದೆ. ಅವರ ಪ್ರಯಾಸವನ್ನು ಸಭೆಯು ನಿಜಕ್ಕೂ ಮೆಚ್ಚುತ್ತದೆ ಮತ್ತು ಅವರು “ಇಮ್ಮಡಿಯಾದ ಗೌರವಕ್ಕೆ ಯೋಗ್ಯರಾದವರೆಂದು” ಎಣಿಸುತ್ತದೆ.—1 ತಿಮೊ. 5:17.

23 ಒಬ್ಬ ವ್ಯಕ್ತಿ ಗಂಭೀರ ತಪ್ಪು ಮಾಡಿದ್ದಾನೆಂದು ಸಾಬೀತಾದ ಮೇಲೆ ಅವನು ಯೆಹೋವನೊಂದಿಗೆ ಮತ್ತೆ ಸುಸಂಬಂಧಕ್ಕೆ ಬರಲು ನೆರವಾಗುವುದೇ ಹಿರಿಯರ ಗುರಿ. ಆ ವ್ಯಕ್ತಿ ನಿಜ ಮನಸ್ಸಿನಿಂದ ಪಶ್ಚಾತ್ತಾಪಪಟ್ಟು ಹಿರಿಯರ ಸಹಾಯ ಸ್ವೀಕರಿಸುವಲ್ಲಿ ನ್ಯಾಯನಿರ್ಣಾಯಕ ಸಮಿತಿಯು ಅವನು ಮಾಡಿದ್ದೆಷ್ಟು ದೊಡ್ಡ ತಪ್ಪೆಂದು ಬೈಬಲ್‌ ಮೂಲಕ ಅವನಿಗೆ ವಿವರಿಸಿ ಅದನ್ನು ಮತ್ತೆ ಮಾಡದಿರಲು ಸಹಾಯಮಾಡುತ್ತದೆ. ಇದನ್ನು ಆ ವ್ಯಕ್ತಿ ಒಬ್ಬನೇ ಇರುವಾಗ ಮಾಡಬಹುದು ಇಲ್ಲವೆ ತಪ್ಪಿಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದವರ ಹಾಗೂ ನ್ಯಾಯನಿರ್ಣಾಯಕ ಸಮಿತಿಯು ತಪ್ಪಿತಸ್ಥನೊಂದಿಗೆ ಮಾತಾಡುವಾಗ ಹಾಜರಿದ್ದವರ ಮುಂದೆ ಅವನನ್ನು ತಿದ್ದಬಹುದು. ಈ ರೀತಿಯಲ್ಲಿ ಅವನಿಗೆ ಶಿಸ್ತು ಸಿಗುತ್ತದೆ. ಅಲ್ಲಿದ್ದವರೂ ಅಂಥ ತಪ್ಪನ್ನು ಮಾಡದಂತೆ ಎಚ್ಚರಿಸುತ್ತದೆ. (2 ಸಮು. 12:13; 1 ತಿಮೊ. 5:20) ನ್ಯಾಯನಿರ್ಣಾಯಕ ಸಮಿತಿಯಿಂದ ತಿದ್ದುಪಾಟು ಪಡೆದ ಪ್ರತಿಯೊಬ್ಬನಿಗೂ ನಿರ್ಬಂಧ ಹೇರಲಾಗುತ್ತದೆ. ಇದು ಅವನಿಗೆ “ನೇರವಾದ ದಾರಿ”ಯಲ್ಲಿ ನಡೆಯಲು ಸಹಾಯಮಾಡುತ್ತದೆ. (ಇಬ್ರಿ. 12:13) ಅವನು ಆಧ್ಯಾತ್ಮಿಕವಾಗಿ ಪ್ರಗತಿಯಾಗುತ್ತಿದ್ದಾನೆಂದು ಹಿರಿಯರಿಗೆ ಕಂಡುಬಂದಾಗ ನಿರ್ಬಂಧಗಳನ್ನು ತೆಗೆಯಲಾಗುತ್ತದೆ.

ತಿದ್ದುಪಾಟು ನೀಡಿದ್ದರ ಕುರಿತು ಪ್ರಕಟಣೆ

24 ತಪ್ಪು ಮಾಡಿದವನು ಪಶ್ಚಾತ್ತಾಪಪಟ್ಟಿದ್ದಾನೆಂದು ನ್ಯಾಯನಿರ್ಣಾಯಕ ಸಮಿತಿಗೆ ತಿಳಿದುಬಂದರೆ ಏನು ಮಾಡಬೇಕು? ತಪ್ಪಿನ ಬಗ್ಗೆ ಸಭೆಯಲ್ಲಿರುವವರಿಗೆ ಇಲ್ಲವೆ ಹೊರಗಿನ ಜನರಿಗೆ ತಿಳಿಯುವ ಸಾಧ್ಯತೆಯಿದ್ದರೆ ಅಥವಾ ತಪ್ಪಿತಸ್ಥನ ವಿಷಯದಲ್ಲಿ ಸಭೆಯಲ್ಲಿರುವವರು ಜಾಗ್ರತೆವಹಿಸುವ ಅಗತ್ಯವಿದ್ದರೆ ‘ಜೀವನ ಮತ್ತು ಸೇವೆ ಕೂಟ’ದಲ್ಲಿ ಈ ಚಿಕ್ಕ ಪ್ರಕಟಣೆ ಮಾಡಬೇಕು: “[ವ್ಯಕ್ತಿಯ ಹೆಸರು] ಅವರಿಗೆ ತಿದ್ದುಪಾಟು ನೀಡಲಾಗಿದೆ.” ಹಿರಿಯರ ಮಂಡಲಿಯ ಸಂಯೋಜಕನು ಈ ಪ್ರಕಟಣೆಗೆ ಒಪ್ಪಿಗೆ ಕೊಡಬೇಕು.

ಬಹಿಷ್ಕರಿಸುವ ನಿರ್ಣಯ

25 ಕೆಲವೊಮ್ಮೆ ಹಿರಿಯರು ಎಷ್ಟೇ ನೆರವು ಕೊಟ್ಟರೂ ತಪ್ಪಿತಸ್ಥನು ತಪ್ಪನ್ನು ಬಿಡದೆ ಮಾಡುತ್ತಿರುತ್ತಾನೆ. ನ್ಯಾಯನಿರ್ಣಾಯಕ ವಿಚಾರಣೆಯ ಸಮಯಾವಧಿಯಲ್ಲಿ “ಪಶ್ಚಾತ್ತಾಪಕ್ಕೆ ಯೋಗ್ಯವಾದ ಕಾರ್ಯಗಳು” ಅವನಲ್ಲಿ ಸ್ವಲ್ಪವೂ ಕಂಡುಬರುವುದಿಲ್ಲ. (ಅ. ಕಾ. 26:20) ಆಗ ಹಿರಿಯರು ಅವನನ್ನು ಸಭೆಯಿಂದ ಬಹಿಷ್ಕರಿಸಬೇಕು. ಇದು ಅವನು ಯೆಹೋವನ ಶುದ್ಧ ಜನರೊಂದಿಗೆ ಸಹವಾಸ ಮಾಡದಂತೆ ತಡೆಯುತ್ತದೆ. ಇದರಿಂದ ಅವನ ಕೆಟ್ಟ ನಡತೆಯನ್ನು ಸಭೆಯಲ್ಲಿ ಇತರರು ಅನುಸರಿಸುವ ಅಪಾಯವಿರುವುದಿಲ್ಲ. ಅಷ್ಟೇ ಅಲ್ಲ, ಸಭೆಯ ಒಳ್ಳೇ ಹೆಸರನ್ನು, ನೈತಿಕ-ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಲು ಆಗುತ್ತದೆ. (ಧರ್ಮೋ. 21:20, 21; 22:23, 24) ಕೊರಿಂಥ ಸಭೆಯ ಸದಸ್ಯನೊಬ್ಬನು ನಾಚಿಕೆಗೆಟ್ಟ ಕೃತ್ಯ ಮಾಡುತ್ತಿದ್ದಾನೆಂದು ತಿಳಿದಾಗ ಪೌಲನು ಅಲ್ಲಿನ ಹಿರಿಯರಿಗೆ ಈ ಸಲಹೆ ಕೊಟ್ಟನು: ‘ನೀವು ಅಂಥ ಮನುಷ್ಯನನ್ನು ಸೈತಾನನ ವಶಕ್ಕೆ ಒಪ್ಪಿಸಿಕೊಡಿರಿ. ಇದರಿಂದಾಗಿ ಸಭೆಯ ಆಧ್ಯಾತ್ಮಿಕತೆಯು ಉಳಿಯುವಂತಾಗುವುದು.’ (1 ಕೊರಿಂ. 5:5, 11-13) ಸತ್ಯದ ವಿರುದ್ಧ ದಂಗೆಯೆದ್ದವರನ್ನೂ ಬಹಿಷ್ಕರಿಸಿದ್ದರ ಕುರಿತು ಪೌಲನು ಹೇಳಿದ್ದಾನೆ.—1 ತಿಮೊ. 1:20.

26 ಪಶ್ಚಾತ್ತಾಪಪಡದವನನ್ನು ಬಹಿಷ್ಕರಿಸಬೇಕೆಂದು ನ್ಯಾಯನಿರ್ಣಾಯಕ ಸಮಿತಿಯು ನಿರ್ಧರಿಸಿದ ನಂತರ ಅದನ್ನು ಆ ವ್ಯಕ್ತಿಗೆ ತಿಳಿಸಬೇಕು. ಬಹಿಷ್ಕಾರ ಮಾಡಲು ಕಾರಣವೇನೆಂದು ಬೈಬಲಿನಿಂದ ಸ್ಪಷ್ಟವಾಗಿ ವಿವರಿಸಬೇಕು. ಅಲ್ಲದೆ, ಅವರು ತೆಗೆದುಕೊಂಡಿರುವ ನಿರ್ಣಯ ಒಂದುವೇಳೆ ಅವನಿಗೆ ತಪ್ಪೆನಿಸಿದರೆ ಅವನು ಒಂದು ಪತ್ರ ಬರೆದು ಪುನಃ ವಿಚಾರಣೆ ನಡೆಸಲು ಮನವಿ ಮಾಡಬಹುದೆಂದು ಹೇಳಬೇಕು. ಇದಕ್ಕಾಗಿ ಅವನಿಗೆ ಸಮಿತಿಯು ತೀರ್ಮಾನ ತಿಳಿಸಿದಂದಿನಿಂದ ಏಳು ದಿನಗಳ ಸಮಯ ಕೊಡಬೇಕು. ಮನವಿಗೆ ಕಾರಣವೇನೆಂದು ಅವನು ಪತ್ರದಲ್ಲಿ ಸ್ಪಷ್ಟವಾಗಿ ಬರೆಯಬೇಕು. ಒಂದುವೇಳೆ ಅವನು ಬರೆದುಕೊಡುವಲ್ಲಿ ಹಿರಿಯರ ಮಂಡಲಿ ಅದನ್ನು ಸಂಚರಣ ಮೇಲ್ವಿಚಾರಕನಿಗೆ ತಿಳಿಸಬೇಕು. ಸಂಚರಣ ಮೇಲ್ವಿಚಾರಕನು ಅರ್ಹ ಹಿರಿಯರನ್ನು ಆಯ್ಕೆಮಾಡಿ ಅಪೀಲು ಸಮಿತಿಯನ್ನು ರಚಿಸಬೇಕು. ಪತ್ರಕೊಟ್ಟು ಒಂದು ವಾರದೊಳಗೆ ಈ ಸಮಿತಿಯು ಆ ವ್ಯಕ್ತಿಯೊಟ್ಟಿಗೆ ಮಾತಾಡಬೇಕು. ಆ ವ್ಯಕ್ತಿ ಪತ್ರ ಕೊಟ್ಟಿರುವುದರಿಂದ ಬಹಿಷ್ಕರಿಸುವ ಪ್ರಕಟಣೆಯನ್ನು ಸದ್ಯಕ್ಕೆ ಮಾಡಲಾಗುವುದಿಲ್ಲ. ಆದರೆ ಅವನ ಮೇಲೆ ನಿರ್ಬಂಧವಿರುತ್ತದೆ. ಅವನಿಗೆ ಕೂಟಗಳಲ್ಲಿ ಉತ್ತರಿಸುವ, ಪ್ರಾರ್ಥಿಸುವ ಅವಕಾಶವಿರುವುದಿಲ್ಲ. ವಿಶೇಷ ಸುಯೋಗಗಳೂ ಇರುವುದಿಲ್ಲ.

27 ತಪ್ಪು ಮಾಡಿರುವ ವ್ಯಕ್ತಿಗೆ ಮನವಿ ಮಾಡುವ ಅವಕಾಶ ಕೊಡುವುದು ಅವನ ಮೇಲಿನ ದಯೆಯಿಂದಾಗಿ. ಇದರಿಂದ ಅವನಿಗೆ ತನ್ನ ಭಾವನೆ, ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಆದರೆ ಮನವಿ ಮಾಡಿದ ಆ ವ್ಯಕ್ತಿಯನ್ನು ಮಾತನಾಡಲು ಕರೆದಾಗ ಅವನು ಬೇಕುಬೇಕೆಂದೇ ಬಾರದಿದ್ದರೆ ಅವನನ್ನು ಸಂಪರ್ಕಿಸಲು ಆದಷ್ಟು ಪ್ರಯತ್ನಿಸಲಾಗುತ್ತದೆ. ನಂತರವೂ ಅವನು ಬಾರದಿದ್ದರೆ ಬಹಿಷ್ಕಾರದ ಪ್ರಕಟಣೆ ಮಾಡಲಾಗುತ್ತದೆ.

28 ತಪ್ಪು ಮಾಡಿದವನು ಮನವಿ ಮಾಡಲು ಬಯಸದಿದ್ದರೆ ಅವನು ಪಶ್ಚಾತ್ತಾಪ ತೋರಿಸುವುದು ಎಷ್ಟು ಪ್ರಾಮುಖ್ಯವೆಂದು ನ್ಯಾಯನಿರ್ಣಾಯಕ ಸಮಿತಿಯು ವಿವರಿಸಬೇಕು. ಸಭೆಗೆ ಹಿಂದಿರುಗಲು ಯಾವೆಲ್ಲ ಹೆಜ್ಜೆಗಳನ್ನು ತಕ್ಕೊಳ್ಳಬೇಕೆಂದು ಕೂಡ ಹೇಳಬೇಕು. ಇದು ಪ್ರೀತಿಯ ಏರ್ಪಾಡಾಗಿದೆ. ಇದರಿಂದ ತಪ್ಪಿತಸ್ಥನಿಗೆ ಸಹಾಯವಾಗುತ್ತದೆ. ಹಿರಿಯರು ಇದನ್ನೆಲ್ಲ ಮಾಡುವಾಗ ಅವನು ತನ್ನನ್ನು ಸರಿಪಡಿಸಿಕೊಂಡು ಯೆಹೋವನ ಸಂಘಟನೆಗೆ ವಾಪಸ್ಸು ಬರುತ್ತಾನೆಂಬ ನಿರೀಕ್ಷೆಯೊಂದಿಗೆ ಮಾತಾಡಬೇಕು.—2 ಕೊರಿಂ. 2:6,7.

ಬಹಿಷ್ಕಾರದ ಕುರಿತು ಪ್ರಕಟಣೆ

29 ಪಶ್ಚಾತ್ತಾಪಪಡದ ವ್ಯಕ್ತಿಯನ್ನು ಸಭೆಯಿಂದ ಬಹಿಷ್ಕಾರ ಮಾಡಬೇಕಾದಾಗ ಸಭೆಗೆ ಈ ಚಿಕ್ಕ ಪ್ರಕಟಣೆ ಮಾಡಬೇಕು: “[ವ್ಯಕ್ತಿಯ ಹೆಸರು] ಇನ್ನು ಮುಂದೆ ಯೆಹೋವನ ಸಾಕ್ಷಿಯಲ್ಲ.” ಇದನ್ನು ವಿವರಿಸಬೇಕಾಗಿಲ್ಲ. ಈ ಪ್ರಕಟಣೆಯಿಂದ ಆ ವ್ಯಕ್ತಿಯೊಂದಿಗೆ ಸಹವಾಸ ಮಾಡಬಾರದೆಂದು ಸಭೆಯ ನಂಬಿಗಸ್ತ ಸದಸ್ಯರಿಗೆ ಗೊತ್ತಾಗುತ್ತದೆ. (1 ಕೊರಿಂ. 5:11) ಹಿರಿಯರ ಮಂಡಲಿಯ ಸಂಯೋಜಕನು ಈ ಪ್ರಕಟಣೆಗೆ ಒಪ್ಪಿಗೆ ಕೊಡಬೇಕು.

ಸಭೆಯನ್ನು ಬಿಟ್ಟುಹೋಗುವವರ ಬಗ್ಗೆ

30 ಕೆಲವೊಮ್ಮೆ ದೀಕ್ಷಾಸ್ನಾನಪಡೆದ ವ್ಯಕ್ತಿಯೊಬ್ಬನು ತನಗೆ ಯೆಹೋವನ ಸಾಕ್ಷಿಯಾಗಿರಲು ಇಷ್ಟವಿಲ್ಲವೆಂದು ಹೇಳುತ್ತಾನೆ ಅಥವಾ ಬರೆದುಕೊಡುತ್ತಾನೆ. ಇಲ್ಲವೆ ಬೈಬಲಿಗೆ ವಿರುದ್ಧವಾಗಿ ಕೆಲಸಮಾಡುವ ಲೋಕದ ಸಂಘಟನೆಗೆ ಸೇರಿಕೊಳ್ಳುವ ಮೂಲಕ ಅಥವಾ ಬೇರೆ ವಿಧಗಳಲ್ಲಿ ತಾನು ಕ್ರೈಸ್ತ ಸಭೆಯ ಸದಸ್ಯನಾಗಿರುವುದಿಲ್ಲವೆಂದು ತೋರಿಸಿಕೊಡುತ್ತಾನೆ. ಇಂಥ ವ್ಯಕ್ತಿ ಯೆಹೋವನ ನ್ಯಾಯತೀರ್ಪಿಗೆ ಗುರಿಯಾಗುತ್ತಾನೆ.—ಯೆಶಾ. 2:4; ಪ್ರಕ. 19:17-21.

31 ಅಪೊಸ್ತಲ ಯೋಹಾನನು ತನ್ನ ಸಮಯದಲ್ಲಿ ಕ್ರೈಸ್ತ ನಂಬಿಕೆಯನ್ನು ತೊರೆದವರ ಬಗ್ಗೆ ಹೀಗೆ ಬರೆದನು: “ಅವರು ನಮ್ಮಿಂದ ಹೊರಟುಹೋದರು, ಆದರೆ ಅವರು ನಮಗೆ ಸೇರಿದವರಾಗಿರಲಿಲ್ಲ; ಅವರು ನಮಗೆ ಸೇರಿದವರಾಗಿದ್ದರೆ ನಮ್ಮೊಂದಿಗೇ ಉಳಿಯುತ್ತಿದ್ದರು.”—1 ಯೋಹಾ. 2:19.

32 ಬೇಕುಬೇಕೆಂದು ಕ್ರೈಸ್ತ ಸಭೆಯನ್ನು ಬಿಟ್ಟುಹೋಗುವವನಿಗೂ ನಿಷ್ಕ್ರಿಯ ಪ್ರಚಾರಕನಿಗೂ ತುಂಬ ವ್ಯತ್ಯಾಸವಿದೆ. ಅವರಿಬ್ಬರನ್ನೂ ಯೆಹೋವನು ಒಂದೇರೀತಿ ವೀಕ್ಷಿಸುವುದಿಲ್ಲ. ನಿಷ್ಕ್ರಿಯ ವ್ಯಕ್ತಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದನ್ನು ಬಿಟ್ಟಿರುತ್ತಾನೆ. ಅವನು ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡದ ಕಾರಣ, ಜೀವನದಲ್ಲಿ ಸಮಸ್ಯೆಗಳು ಬಂದದ್ದರಿಂದ ಅಥವಾ ಹಿಂಸೆಯಿಂದಾಗಿ ಯೆಹೋವನ ಸೇವೆಯಲ್ಲಿ ಹುರುಪು ಕಳೆದುಕೊಂಡಿರಬಹುದು. ಇಂಥ ವ್ಯಕ್ತಿ ಪುನಃ ಸಕ್ರಿಯನಾಗಲು ಹಿರಿಯರು ಮತ್ತು ಸಭೆಯಲ್ಲಿರುವ ಇತರರು ಸಹಾಯ ಮಾಡುತ್ತಿರುತ್ತಾರೆ.—ರೋಮ. 15:1; 1 ಥೆಸ. 5:14; ಇಬ್ರಿ. 12:12.

33 ಆದರೆ ಒಬ್ಬ ಕ್ರೈಸ್ತನು ತಾನಾಗಿಯೇ ಸಭೆಯನ್ನು ಬಿಟ್ಟುಹೋಗಿರುವಲ್ಲಿ ಅವನ ಬಗ್ಗೆ ಸಭೆಗೆ ಈ ಚಿಕ್ಕ ಪ್ರಕಟಣೆ ಮಾಡಬೇಕು: “[ವ್ಯಕ್ತಿಯ ಹೆಸರು] ಇನ್ನು ಮುಂದೆ ಯೆಹೋವನ ಸಾಕ್ಷಿಯಲ್ಲ.” ಹಿರಿಯರ ಮಂಡಲಿಯ ಸಂಯೋಜಕನು ಈ ಪ್ರಕಟಣೆಗೆ ಒಪ್ಪಿಗೆ ಕೊಡಬೇಕು. ಬಹಿಷ್ಕಾರವಾದ ವ್ಯಕ್ತಿಯೊಂದಿಗೆ ಹೇಗೋ ಹಾಗೆಯೇ ಇಂಥ ವ್ಯಕ್ತಿಯೊಂದಿಗೂ ನಾವು ಸಹವಾಸ ಮಾಡಬಾರದು.

ಸಭೆಗೆ ಹಿಂದಿರುಗಲು ಬಯಸಿದರೆ . . .

34 ಬಹಿಷ್ಕಾರವಾದ ಅಥವಾ ಸಭೆಯನ್ನು ಬಿಟ್ಟುಹೋದ ವ್ಯಕ್ತಿ ನಿಜವಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಪುನಃ ಸಭೆಗೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ಅವನು ಪಶ್ಚಾತ್ತಾಪಪಟ್ಟು ಪಾಪದ ಮಾರ್ಗ ಬಿಟ್ಟಿದ್ದಾನೆಂದು ಅವನ ಕ್ರಿಯೆಗಳಲ್ಲಿ ಸ್ಪಷ್ಟವಾಗಿ ಕಾಣಬೇಕು. ಇದರಿಂದ ಅವನು ಯೆಹೋವನೊಂದಿಗೆ ಪುನಃ ಸುಸಂಬಂಧಕ್ಕೆ ಬರಲು ತನಗೆ ಮನಸ್ಸಿದೆಯೆಂದು ತೋರಿಸುತ್ತಾನೆ. ಅದಕ್ಕಾಗಿ ಸಭಾ ಹಿರಿಯರು ಅವನಿಗೆ ಸಾಕಷ್ಟು ಸಮಯ ಕೊಡಬೇಕು. ಎಷ್ಟು ಸಮಯ ಅನ್ನೋದು ಸನ್ನಿವೇಶದ ಮೇಲೆ ಹೊಂದಿಕೊಂಡಿದೆ. ಅನೇಕ ತಿಂಗಳು, ಒಂದು ವರ್ಷ ಇಲ್ಲವೆ ಅದಕ್ಕಿಂತ ಹೆಚ್ಚು ಸಮಯ ಕೂಡ ಆಗಿರಬಹುದು. ತನಗೆ ಸಭೆಗೆ ಹಿಂದಿರುಗಲು ಮನಸ್ಸಿದೆಯೆಂದು ಬಹಿಷ್ಕೃತ ವ್ಯಕ್ತಿ ಬರೆದುಕೊಟ್ಟಾಗ ಹಿರಿಯರು ಏನು ಮಾಡಬೇಕು? ಸಾಧ್ಯವಿರುವಲ್ಲಿ ಈ ಹಿಂದೆ ಆ ವ್ಯಕ್ತಿಯ ಬಗ್ಗೆ ನಿರ್ಣಯ ತಕ್ಕೊಂಡ ನ್ಯಾಯನಿರ್ಣಾಯಕ ಸಮಿತಿಯ ಹಿರಿಯರೇ ಅವನೊಂದಿಗೆ ಮಾತಾಡಬೇಕು. ಅವನು “ಪಶ್ಚಾತ್ತಾಪಕ್ಕೆ ಯೋಗ್ಯವಾದ ಕಾರ್ಯಗಳನ್ನು” ನಿಜವಾಗಿಯೂ ಮಾಡಿದ್ದಾನಾ ಎಂದು ಆ ಸಮಿತಿ ಪರೀಕ್ಷಿಸಬೇಕು. ಬಳಿಕ ಅವನನ್ನು ಪುನಃ ಸಭೆಗೆ ಸೇರಿಸಿಕೊಳ್ಳಬೇಕಾ ಬೇಡವಾ ಎಂದು ನಿರ್ಧರಿಸಬೇಕು.—ಅ. ಕಾ. 26:20.

35 ಸಭೆಗೆ ಸೇರಿಸಿಕೊಳ್ಳುವಂತೆ ವಿನಂತಿಸುತ್ತಿರುವ ವ್ಯಕ್ತಿ ಬಹಿಷ್ಕಾರವಾದಾಗ ಬೇರೆ ಸಭೆಯಲ್ಲಿ ಇದ್ದಿದ್ದರೆ ಈಗ ಅವನಿರುವ ಸಭೆಯ ನ್ಯಾಯನಿರ್ಣಾಯಕ ಸಮಿತಿಯು ಅವನೊಂದಿಗೆ ಮಾತಾಡಬೇಕು. ಅನಂತರ ಅವರು ಆ ವ್ಯಕ್ತಿಯನ್ನು ಬಹಿಷ್ಕರಿಸಿದ ಸಭೆಯ ಹಿರಿಯರ ಮಂಡಲಿಯನ್ನು ಸಂಪರ್ಕಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ವ್ಯಕ್ತಿಯನ್ನು ಬಹಿಷ್ಕರಿಸಿದ್ದ ನ್ಯಾಯನಿರ್ಣಾಯಕ ಸಮಿತಿಯ ಒಟ್ಟಿಗೆ ಕೆಲಸಮಾಡಿ ಆ ವ್ಯಕ್ತಿ ಪಶ್ಚಾತ್ತಾಪಪಟ್ಟಿದ್ದಾನೆ ಎಂಬುದಕ್ಕೆ ರುಜುವಾತುಗಳನ್ನು ಕೂಡಿಸಿ ಅವುಗಳನ್ನು ಖಚಿತಪಡಿಸಿಕೊಳ್ಳಬೇಕು. ಆ ವ್ಯಕ್ತಿಯನ್ನು ಪುನಃ ಸಭೆಗೆ ಸೇರಿಸಿಕೊಳ್ಳುವ ವಿಷಯದಲ್ಲಿ ನಿರ್ಣಯ ಮಾಡಬೇಕಿರುವುದು ಅವನನ್ನು ಬಹಿಷ್ಕರಿಸಿದ ಸಭೆಯ ನ್ಯಾಯನಿರ್ಣಾಯಕ ಸಮಿತಿಯೇ. ಒಂದುವೇಳೆ ಆ ಸಮಿತಿಯಲ್ಲಿದ್ದ ಕೆಲವು ಸಹೋದರರು ಈಗ ಆ ಸಭೆಯಲ್ಲಿ ಸೇವೆ ಮಾಡುತ್ತಿಲ್ಲವಾದರೆ ಅವರಿಗೆ ಬದಲಾಗಿ ಅದೇ ಸಭೆಯ ಅರ್ಹ ಹಿರಿಯರನ್ನು ಆಯ್ಕೆಮಾಡಬಹುದು.

ಸಭೆಗೆ ಹಿಂದಿರುಗಿದವರ ಬಗ್ಗೆ ಪ್ರಕಟಣೆ

36 ಬಹಿಷ್ಕಾರವಾದ ವ್ಯಕ್ತಿ ನಿಜವಾಗಿ ಪಶ್ಚಾತ್ತಾಪಪಟ್ಟಿದ್ದಾನೆಂದು ನ್ಯಾಯನಿರ್ಣಾಯಕ ಸಮಿತಿಗೆ ಖಚಿತವಾದರೆ ಮತ್ತು ಅವನನ್ನು ಪುನಃ ಸಭೆಗೆ ಸೇರಿಸಿಕೊಳ್ಳಲು ನಿರ್ಣಯಿಸಿದರೆ ಸಭೆಗೆ ಒಂದು ಪ್ರಕಟಣೆ ಮಾಡಬೇಕು. ಒಂದುವೇಳೆ ಅವನು ಈಗ ಬೇರೆ ಸಭೆಯಲ್ಲಿದ್ದರೆ ಅಲ್ಲಿ ಕೂಡ ಪ್ರಕಟಣೆ ಮಾಡಬೇಕು. ಪ್ರಕಟಣೆ ಹೀಗಿರಬೇಕು: “[ವ್ಯಕ್ತಿಯ ಹೆಸರು] ಈಗ ಪುನಃ ಯೆಹೋವನ ಸಾಕ್ಷಿಯಾಗಿದ್ದಾರೆ.” ಹಿರಿಯರ ಮಂಡಲಿಯ ಸಂಯೋಜಕನು ಈ ಪ್ರಕಟಣೆಗೆ ಒಪ್ಪಿಗೆ ಕೊಡಬೇಕು.

ದೀಕ್ಷಾಸ್ನಾನ ಪಡೆದ ಮಕ್ಕಳು ತಪ್ಪುಮಾಡಿದಾಗ

37 ದೀಕ್ಷಾಸ್ನಾನ ಪಡೆದ ಅಪ್ರಾಪ್ತ ವಯಸ್ಸಿನ ಹುಡುಗ/ಹುಡುಗಿ ಗಂಭೀರ ತಪ್ಪುಮಾಡಿದಾಗ ಅದನ್ನು ಸಭಾ ಹಿರಿಯರಿಗೆ ತಿಳಿಸಬೇಕು. ಹುಡುಗನ ಹೆತ್ತವರು ದೀಕ್ಷಾಸ್ನಾನ ಪಡೆದವರಾಗಿದ್ದರೆ ತಪ್ಪಿನ ಬಗ್ಗೆ ಹಿರಿಯರು ವಿಚಾರಣೆ ಮಾಡುವಾಗ ಹೆತ್ತವರು ಹುಡುಗನೊಟ್ಟಿಗಿದ್ದರೆ ಒಳ್ಳೇದು. ಮಗನ ಪರವಹಿಸಿ ಶಿಸ್ತು ಸಿಗದಂತೆ ಮಾಡಲು ಹೆತ್ತವರು ಪ್ರಯತ್ನಿಸಬಾರದು. ನ್ಯಾಯನಿರ್ಣಾಯಕ ಸಮಿತಿಯೊಂದಿಗೆ ಸಹಕರಿಸಬೇಕು. ಪ್ರಾಪ್ತ ವಯಸ್ಸಿನವರು ತಪ್ಪು ಮಾಡಿದಾಗ ಹೇಗೋ ಹಾಗೆಯೇ ಈ ಹುಡುಗನನ್ನು ಸಹ ತಿದ್ದಲು ಮತ್ತು ಸರಿದಾರಿಗೆ ತರಲು ಸಮಿತಿಯು ಶ್ರಮಿಸುತ್ತದೆ. ಒಂದುವೇಳೆ ಅವನು ಪಶ್ಚಾತ್ತಾಪಪಡದಿದ್ದರೆ ಸಭೆಯಿಂದ ಬಹಿಷ್ಕಾರ ಮಾಡಲಾಗುತ್ತದೆ.

ದೀಕ್ಷಾಸ್ನಾನ ಪಡೆಯದ ಪ್ರಚಾರಕರು ತಪ್ಪುಮಾಡಿದಾಗ

38 ದೀಕ್ಷಾಸ್ನಾನವಾಗಿರದ ಪ್ರಾಪ್ತ ಅಥವಾ ಅಪ್ರಾಪ್ತ ವಯಸ್ಸಿನ ಪ್ರಚಾರಕರು ಗಂಭೀರ ತಪ್ಪು ಮಾಡಿದರೆ ಏನು ಮಾಡಬೇಕು? ಅವರಿಗೆ ದೀಕ್ಷಾಸ್ನಾನವಾಗಿಲ್ಲದ ಕಾರಣ ಬಹಿಷ್ಕರಿಸಲು ಆಗುವುದಿಲ್ಲ. ಬೈಬಲಿನ ನೀತಿಯ ಮಟ್ಟಗಳು ಅವರಿಗೆ ಪೂರ್ತಿಯಾಗಿ ಅರ್ಥವಾಗಿರಲಿಕ್ಕಿಲ್ಲ. ಹಾಗಾಗಿ ಇಬ್ಬರು ಹಿರಿಯರು ಅವರಿಗೆ ಪ್ರೀತಿಯಿಂದ ಬುದ್ಧಿಹೇಳಬೇಕು. ಇದು ‘ನೇರವಾದ ದಾರಿಗೆ’ ಬರಲು ಅವರಿಗೆ ನೆರವಾಗುವುದು.—ಇಬ್ರಿ. 12:13.

39 ಹೀಗೆ ಸಹಾಯಮಾಡಲು ಪ್ರಯತ್ನಿಸಿದ ಮೇಲೂ ಆ ವ್ಯಕ್ತಿ ಪಶ್ಚಾತ್ತಾಪಪಡದಿದ್ದರೆ ಅವನ ಬಗ್ಗೆ ಸಭೆಗೆ ಈ ಚಿಕ್ಕ ಪ್ರಕಟಣೆ ಮಾಡಬೇಕು: “[ವ್ಯಕ್ತಿಯ ಹೆಸರು] ಇನ್ನು ಮುಂದೆ ಪ್ರಚಾರಕನಾಗಿ ಇರುವುದಿಲ್ಲ.” ಬಳಿಕ ಸಭೆಯು ಅವನನ್ನು ಲೋಕದ ವ್ಯಕ್ತಿಯಂತೆ ಕಾಣಬೇಕು. ಅವನಿಗೆ ಬಹಿಷ್ಕಾರವಾಗಿಲ್ಲದಿದ್ದರೂ ಅವನೊಂದಿಗೆ ಸಹವಾಸ ಮಾಡದಂತೆ ಕ್ರೈಸ್ತರು ಜಾಗ್ರತೆ ವಹಿಸಬೇಕು. (1 ಕೊರಿಂ. 15:33) ಅವನಿಂದ ಕ್ಷೇತ್ರ ಸೇವಾ ವರದಿಯನ್ನು ಸ್ವೀಕರಿಸಬಾರದು.

40 ಆದರೆ ಸಮಯಾನಂತರ ಅಂಥ ವ್ಯಕ್ತಿ ಪುನಃ ಪ್ರಚಾರಕನಾಗಲು ಬಯಸಬಹುದು. ಆಗ ಇಬ್ಬರು ಹಿರಿಯರು ಅವನೊಂದಿಗೆ ಮಾತಾಡಿ ಅವನು ಬದಲಾಗಿದ್ದಾನಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಅವನು ಪ್ರಚಾರಕನಾಗಲು ಅರ್ಹನಾಗುವಲ್ಲಿ ಸಭೆಗೆ ಈ ಚಿಕ್ಕ ಪ್ರಕಟಣೆ ಮಾಡಬೇಕು: “[ವ್ಯಕ್ತಿಯ ಹೆಸರು] ಪುನಃ ಪ್ರಚಾರಕರಾಗಿದ್ದಾರೆ.”

ಶುದ್ಧ ಆರಾಧನೆ ಮಾಡುವ ಶಾಂತಿಯ ಜನರಿಗೆ ಆಶೀರ್ವಾದ

41 ಯೆಹೋವನು ತನ್ನ ಜನರಿಗೆ ಆಧ್ಯಾತ್ಮಿಕ ಶ್ರೀಮಂತಿಕೆ ಕೊಟ್ಟಿದ್ದಾನೆ. ದೇವರ ಸಭೆಯೊಂದಿಗೆ ಸಹವಾಸಮಾಡುವ ಎಲ್ಲರಿಗೆ ಇದರಲ್ಲಿ ಆನಂದಿಸುವ ಸೌಭಾಗ್ಯವಿದೆ. ನಮಗೆ ಸಿಗುತ್ತಿರುವ ಆಧ್ಯಾತ್ಮಿಕ ಆಹಾರವು ದಟ್ಟವಾದ ಹುಲ್ಲುಗಾವಲಿನಂತೆ ಸಮೃದ್ಧವಾಗಿದೆ. ಸತ್ಯವೆಂಬ ಚೈತನ್ಯದಾಯಕ ನೀರಿಗೆ ಬರವೇ ಇಲ್ಲ. ಜೊತೆಗೆ ಕ್ರಿಸ್ತನು ನಾಯಕತ್ವ ವಹಿಸುತ್ತಿರುವ ಈ ಸಂಘಟನೆಯ ಮೂಲಕ ಯೆಹೋವನು ನಮಗೆ ಸಂರಕ್ಷಣೆ ನೀಡುತ್ತಿದ್ದಾನೆ. (ಕೀರ್ತ. 23; ಯೆಶಾ. 32:1, 2) ಕಠಿನವಾದ ಕಡೇ ದಿವಸಗಳಲ್ಲಿ ನಾವಿರುವುದಾದರೂ ದೇವಜನರೊಂದಿಗೆ ಪವಿತ್ರವಾದ ಮತ್ತು ಶಾಂತಿಯ ಪರಿಸ್ಥಿತಿಯಲ್ಲಿ ಇರುವುದರಿಂದ ಸುರಕ್ಷಿತ ಭಾವನೆ ನಮ್ಮಲ್ಲಿದೆ.

ಸಭೆಯ ಶಾಂತಿ ಮತ್ತು ಪವಿತ್ರತೆಯನ್ನು ನಾವು ಕಾಪಾಡುವ ಮೂಲಕ ಸತ್ಯದ ಬೆಳಕನ್ನು ಇತರರಿಗೆ ಪ್ರಕಾಶಿಸುತ್ತಾ ಇರುತ್ತೇವೆ

42 ಸಭೆಯ ಶಾಂತಿ ಮತ್ತು ಪವಿತ್ರತೆಯನ್ನು ನಾವು ಕಾಪಾಡುವ ಮೂಲಕ ಸತ್ಯದ ಬೆಳಕನ್ನು ಇತರರಿಗೆ ಪ್ರಕಾಶಿಸುತ್ತಿರುತ್ತೇವೆ. (ಮತ್ತಾ. 5:16; ಯಾಕೋ. 3:18) ಮಾತ್ರವಲ್ಲ ಯೆಹೋವನ ಆಶೀರ್ವಾದದಿಂದ ಇನ್ನೂ ಅನೇಕ ಜನರು ಆತನ ಬಗ್ಗೆ ತಿಳಿದುಕೊಂಡು ನಮ್ಮೊಂದಿಗೆ ಆತನ ಸೇವೆಯನ್ನು ಮಾಡುವುದನ್ನು ನೋಡುವ ಸಂತೋಷವೂ ನಮ್ಮದಾಗುತ್ತದೆ.